ಭಾವ ಭೈರಾಗಿ
ಅದೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದಿತ್ತು ಆದರೆ…
ಏನು ಮಾಡ್ಲಿ ಸರ್ ನನಗೆ ಹಣಬಲ ಇಲ್ಲ ಅದೊಂದಿದ್ದಿದ್ದರೆ ಏನು ಬೇಕಾದ್ರು ಮಾಡ್ತಿದ್ದೆ. ನಾನು ಸಾಧನೆ ಮಾಡ್ತಿದ್ದೆ ಸಾರ್ ಆದರೆ ಸರಿಯಾದ ದಾರಿ ತೋರಿಸೋರೆ ಯಾರೂ ಇರಲಿಲ್ಲ. ನಾನು ದುಡಿಬೇಕು ಅಂತ ಏನೇನೋ ಮಾಡ್ತಿನಿ ಸಾರ್ ಸಪೋರ್ಟ್ ಮಾಡೋಕೆ ಮನೇಲಿ ಯಾರೂ ಇಲ್ಲ. ನನ್ ಹೆಂಡತಿಯೊಬ್ಬಳು ಸರಿ ಇದ್ದಿದ್ರೆ ಇಷ್ಟರಲ್ಲಿ ಮನೆ ಕಟ್ಟಿ ಬಹಳ ವರ್ಷ ಆಗಿರ್ತಿತ್ತು. ನಮ್ ಅಪ್ಪ ಅಮ್ಮ ಏನಾದ್ರೂ ಸ್ವಲ್ಪ ಮಾಡಿಟ್ಟಿದ್ರೆ ಇವತ್ತು ನಾನೂ ನಾಲ್ಕು ಜನರ ರೀತಿ ಕೖತುಂಬಾ ದುಡಿತಿದ್ದೆ ಸಾರ್. ಹೀಗೆ ಸಾವಿರ ಸಾವಿರ ಕಾರಣಗಳನ್ನ ನಮಗೆ ನಾವೇ ಹೇಳಿಕೊಂಡು ಸಮಾಧಾನ ಮಾಡಿಕೊಳ್ತೇವೆ. ಆದರೆ ನಮಗೆಲ್ಲರಿಗೂ ಗೊತ್ತು ಇವೆಲ್ಲ ಬರೀ ಕಾರಣಗಳಷ್ಟೇ ಹೊರತು ಸತ್ಯ ಅಲ್ಲ ಅಂತ.
ಸತ್ಯ ಅಂದ್ರೆ ನಾವು ಏನೆಲ್ಲಾ ಮಾಡಬೇಕು ಅಂತ ನಿರ್ಧರಿಸಿರ್ತೇವೋ ಅದೆಲ್ಲವನ್ನೂ ನಾವು ಮಾಡೇ ತೀರ್ತೇವೆ. ಆದರೆ ಮಾಡುವುದಕ್ಕಿಂತ ಮುಂಚೆಯೇ ನಾವು ನಮ್ಮ ಕೖಲಿ ಅದೆಲ್ಲ ಆಗೋ ಮಾತಲ್ಲ ಬಿಡಿ ಅಂತ ತೀರ್ಮಾನಿಸಬಾರದಷ್ಟೇ. ಹೀಗೆ ನಮಗೆ ನಾವೇ ಮೋಸ ಮಾಡಿಕೊಂಡು ತೆಗೆದುಕೊಳ್ಳುವ ಆ ಒಂದು ತೀರ್ಮಾನದಿಂದ ನಮ್ಮ ಎಲ್ಲ ಸಾಧನೆಗಳೂ ಹುಟ್ಟುವ ಮೊದಲೇ ಅಸುನೀಗುತ್ತವೆ, ಅದಕ್ಕೆ ನಾವು ಕೊಟ್ಟುಕೊಳ್ಳುವ ಕಾರಣಗಳೇ ಈ ಮೇಲೆ ಹೇಳಿರುವ ಅದೊಂದಿದ್ದಿದ್ರೆ ಸಾಕಿತ್ತು ಸಾರ್ ಅನ್ನೋದು.
ದೇವರು ನನಗೆ ಅದೊಂದು ಕಿತ್ತುಕೊಂಡುಬಿಟ್ಟ ಇಲ್ಲದಿದ್ರೆ ಮಾಡಿ ತೋರಿಸ್ತಿದ್ದೆ ಅಂತ ಹೇಳ್ತಾರಲ್ಲ ಅವರ ಮಾತನ್ನ ಒಂದು ಮಟ್ಟಕ್ಕೆ ಮನ್ನಿಸಬಹುದು. ಯಾಕಂದ್ರೆ ಅವರು ಬದಲಿಸಲಾಗದ ಅವರಿಂದ ಪಡೆಯಲಾಗದ ಏನನ್ನೋ ದೇವರು ಕಿತ್ತುಕೊಂಡುಬಿಟ್ಟಿರ್ತಾನೆ. ಅದರಲ್ಲಿ ಅವರ ಕಣ್ಣು, ಕಿವಿ, ಕೖ ಕಾಲು ಅಥವಾ ಇವೆಲ್ಲವೂ,,, ಹೀಗೆ ಮೂಲಭೂತವಾಗಿ ಇರಲೇ ಬೇಕಾದ ಏನನ್ನಾದರೂ ಕಿತ್ತುಕೊಂಡಿದ್ರೆ ಆಗ ಕಾಣದ ದೇವರಿಗೆ ಬಯ್ಯುತ್ತಾ ತಿರುಗುವುದರಲ್ಲಿ ಅರ್ಥ ಇರುತ್ತೆ . ಆದರೆ ಗೊತ್ತಿರಲಿ ಗೆಳೆಯರೆ ಹೀಗೆ ಇರಬೇಕಾದ ಅಂಗಗಳಲ್ಲಿ ಕೆಲವನ್ನು ಕಳದುಕೊಂಡ ಬಹುತೇಕರು ಏನಾದರೂ ಸಾಧಿಸಿರ್ತಾರೆ. ಅವರನ್ನ ಕೇಳಿ ನೋಡಿ ಅವರು ಹೇಳೋದು ನನ್ನ ಅಂಗ ವೖಕಲ್ಯ ನನ್ನ ದೌರ್ಬಲ್ಯವಾಗಬಾರದು ಸಾರ್. ಹೀಗಾಗಿ ನಾನು ಯಾರಿಗೂ ಕಡಿಮೆ ಇಲ್ಲ ಅಂತ ತೋರಿಸೋಕೆ ನನ್ನ ಮನಸ್ಸು ತುಡೀತಿತ್ತು. ಅದಕ್ಕೆ ಕಷ್ಟಪಟ್ಟು ಈ ಸಾಧನೆ ಮಾಡಿದೆ ಅಂತಾರೆ. ಅಸಲಿಗೆ ಅವರು ಹೇಳಿದ್ರಲ್ಲ ನಾನು ಎಲ್ಲದೂ ಸರಿಯಿರುವವರಿಗಿಂತ ಕಡಿಮೆ ಇರಬಾರದು ಅಂತ ಆ ಸರಿ ಇರೋರು ಬೇರೆ ಯಾರೂ ಅಲ್ಲ ನಾವೆ. ಈಗ ಹೇಳಿ ಎಲ್ಲದೂ ಸರಿ ಇರೋ ನಾವು ಏನು ಸಾಧಿಸಿದ್ದೇವೆ. ಒಬ್ಬ ಕಣ್ಣಿಲ್ಲದವನೋ ಕಾಲಿಲ್ಲದವನೋ ಹೇಳಬೇಕಾದ ಕಾರಣ ಅದೊಂದಿರಬೇಕಿತ್ತು ಅನ್ನೋದು. ಆದರೆ ಅವರು ಹೇಳಲ್ಲ, ಅದಿಲ್ಲದಿದ್ದರೂ ಸಾಧಿಸ್ತೀನಿ ಅಂತಾರೆ. ಅದನ್ನ ನಾನು ನೀವು ಹೇಳಿದರೆ ಎಷ್ಟು ಸರಿ ಅಲ್ವಾ.
ಉತ್ತಮರನ್ನು ಹುಡುಕುವುದಕ್ಕಿಂತ ನಾವೇ ಉತ್ತಮರಾಗೋದು ಒಳಿತು ಅಂತಾರೆ. ಹೀಗೆ ನಮ್ಮಂಥವರ ಕೖಲಿ ಅದೆಲ್ಲ ಆಗಲ್ಲ ಬಿಡಿ ಅಂತ ತೀರ್ಮಾನಿಸೋಕು ಮುಂಚೆ ನಮ್ಮಂಥವರಲ್ಲದೆ ಮತ್ತಾರು ಮಾಡಬೇಕು . ಅಂಥವರು ಅಂತ ಬೇರೆಯೇ ಹುಟ್ಟಿರ್ತಾರಾ ಅಂತ ನಮ್ಮನ್ನ ನಾವು ಕೇಳಿಕೊಳ್ಳಬೇಕಲ್ವಾ. ಗಾಂಧಿ, ಬುದ್ಧ ಬಸವಣ್ಣ, ಸ್ವಾಮಿ ವಿವೇಕಾನಂದ ಹೀಗೆ ನಾವು ಯಾರನ್ನೇ ಸಾಧಕರು ಅಂದ್ರೂ ಅವರಿಗೆಲ್ಲ ಇರಬಹುದಾದ ದೌರ್ಬಲ್ಯಗಳೇ ತಾನೆ ನಮಗೂ ಇರೋದು. ಅವರಂತೆಯೇ ನಮಗೂ ಎರಡು ಕಣ್ಣ ಎರಡು ಕಾಲು, ಎರಡು ಕೖ, ಒಂದು ಮೆದುಳು ಎಲ್ಲಾ ಇದೆ ಆದರೂ ನಾವು ಅದೊಂದಿಲ್ಲ ಅಂತ ಕಾರಣ ಕೊಡೋದು ಎಷ್ಟು ಸರಿ ಅಲ್ವಾ.
ಏನು ಬೇಕಾದರೂ ಮಾಡ್ತಿದ್ದೆ ಸಾರ್ ಆದ್ರೆ ಈ ಆಫೀಸು ಮನೆ ಇವುಗಳ ಮಧ್ಯೆ ಟೖಮೇ ಸಿಗಲ್ಲ ಅಂತೀವಿ. ಹಾಗಾದ್ರೆ ವಿಶ್ವೇಶ್ವರಯ್ಯನವರಿಗೇನು ದಿನಕ್ಕೆ ನಲವತ್ತೆಂಟು ಗಂಟೆ ಸಿಕ್ಕಿತ್ತಾ.,,, ನಾವೆಲ್ಲ ಇಷ್ಟು ಬದುಕಿದ್ರೂ ನಮಗೆ ಮುಂದೊಂದು ದಿನ ಎಲ್ಲಾ ಸರಿಹೋಗೋ ಕಾಲ ಬರುತ್ತೆ ಅಂತ ಕಾಯ್ತಿದ್ದೀವಿ ಆದರೆ ಕೇವಲ ಇಪ್ಪತ್ಮೂಕ್ಕೆ ಅಸುನೀಗಿದ ಜಾನ್ ಕೀಟ್ಸ್ ಹೀಗೇ ಅಂದುಕೊಂಡಿದ್ರೆ ಏನು ಮಾಡಬೇಕಿತ್ತು ಅಲ್ವಾ, ಕೇವಲ ಹದಿನೇಳು ವರ್ಷಕ್ಕೆ ಕೊನೆಯುಸಿರೆಳೆದ ಥಾಮಸ್ ಛಟ್ಟರ್ ಟನ್ ಏನೆಲ್ಲಾ ಮಾಡಬಿಟ್ಟ ಜಗತ್ತಿನ ರೊಮ್ಯಾಂಟಿಕ್ ಕವಿಗಳಲ್ಲಿ ಅತ್ಯಂತ ಕಿರಿಯವನೇ ಅವನು. ಮೂವತ್ತೆರಡಕ್ಕೆ ಶಂಕರಾಚಾರ್ಯರು ಇಹಲೋಕ ತ್ಯಜಿಸಿದ್ರು , ನಲವತ್ತು ತುಂಬುವುದರೊಳಗೆ ಸ್ವಾಮಿ ವಿವೇಕಾನಂದರು ಹೀಗೆ ಎಷ್ಟು ಜನರ ಉದಾಹರಣೆ ನೋಡಿದರೂ ನಾವು ಮತ್ತೆ ಕೊಡೋ ಕಾರಣ ನನಗೆ ಅದೊಂದಿಲ್ಲ ಸಾರ್ ಅಂತ. ಯಾವುದದು ಸಮಯ, ಊಟ, ಹಣ, ಜನಬಲ, ಶ್ರೀಮಂತಿಕೆ, ಯಾವುದಿಲ್ಲ. ಇವೆಲ್ಲವೂ ನಾವು ಸಂಪಾದಿಸಬಹುದಾದವೆ ತಾನೆ. ಮನುಷ್ಯನಿಂದ ಇವನ್ನು ಸಂಪಾದಿಸಲು ಸಾಧ್ಯವೇ ಇಲ್ಲ ಎನ್ನುವಂಥದ್ದೇನಾದರೂ ಇಲ್ಲ ಎಂಬ ಕಾರಣ ನೀಡಿದರೆ ಒಪ್ಪಹುದಿತ್ತು ಅನ್ನಿಸುತ್ತೆ.
ಏನಾದರಾಗಲಿ ಒಂದು ಸಣ್ಣ ತೀರ್ಮಾನ ಮಾಡೇ ಬಿಡೋಣ. ಇಂದಿನಿಂದ ಇಂಥ ಕುಂಟುನೆಪ ಹೇಳುವುದು ಬಿಟ್ಟು ನನ್ನ ಭವಿಷ್ಯವನ್ನು ನಾನೇ ತೀರ್ಮಾನಿಸ್ತೇನೆ ಅಂತ. ಒಂದು ಸಣ್ಣ ಸಾಧನೆ ನನ್ನಿಂದ ಸಾಧ್ಯ ಅಂತ ಹಠ ಹಿಡಿದುಬಿಡಿ. ವಾರಕ್ಕೊಂದು ಪುಸ್ತಕ ಓದೇ ತೀರ್ತೇನೆ. ತಿಂಗಳಿಗೊಂದಾದರೂ ಲೇಖನ ಬರೀತೇನೆ. ದುಡಿದದ್ದರಲ್ಲಿ ಹತ್ತು ಪರ್ಸೆಂಟ್ ಒಳ್ಳೇ ಕೆಲಸಕ್ಕೆ ಬಳಸ್ತೇನೆ ಅಂತ . ಆರಂಭದಲ್ಲೇ ಇದೆಲ್ಲ ಕಷ್ಟ ಎನಿಸಿದರೆ ನಿಮ್ಮ ವಿಚಾರದಲ್ಲಿ ನೀವು ಯಾವುದು ಅಸಾಧ್ಯ ನನ್ನಿಂದಾಗದ ಕೆಲಸ, ನಮ್ಮಂಥವರ ಕೖಲಿ ಇದೆಲ್ಲ ಆಗುತ್ತಾ ಅಂತ ಯಾವುದನ್ನ ಪೆಂಡಿಂಗ್ ಇಟ್ಟಿರ್ತೀರೋ ಅದನ್ನೇ ಕೖಗೆತ್ತಿಕೊಳ್ಳಿ. ಇದು ನನ್ನಿಂದ ಸಾಧ್ಯ ಯೆಸ್ ಈ ಕ್ಯಾನ್ ಡೂ ಇಟ್ ಅಂತ ತೀರ್ಮಾನಿಸಿಬಿಡಿ. ಒಂದು ದಿನಕ್ಕೆ ಒಂದು ವಾರಕ್ಕೆ ಆಗುವಂತಹಾ ಸಣ್ಣ ಸಣ್ಣ ಗುರಿಗಳನ್ನ ಈಡೇರಿಸ್ತಾ ಹೋಗಿ. ಆರಂಭದಲ್ಲೇ ಬೆಟ್ಟದ ತುದಿಗೆ ಕಾಲಿಡಲು ಸಾಧ್ಯವಿಲ್ಲ ಆದರೆ ಎರಡು ಹೆಜ್ಜೆ ಹತ್ತಿದ ನಂತರ ನಾವು ಎರಡು ಅಡಿಯಾದರೂ ಎತ್ತರದಲ್ಲಿರ್ತೇವೆ. ತಿರುಪತಿಗೆ ಹೋಗಬಏಕೆಂದು ವರ್ಷಗಟ್ಟಲೇ ಜಪಿಸಿದರೂ ಸಾಧ್ಯವಾಗಲ್ಲ. ಆದರೆ ಎದ್ದು ಬಸ್ ಸ್ಟ್ಯಾಂಡಿಗೆ ನಡೆದು ಹೋಗುವುದರಿಂದ ತಿರುಪತಿಗೆ ಹೋದರೂ ಹೋಗಬಹುದು. ಅದಕ್ಕೆ ಮೊದಲು ಬಸ್ ಸ್ಟಾಪ್ ತಲುಪುವ ಸಣ್ಣ ಗುರಿ ಮುಟ್ಟಇ ನಂತರ ಬಸ್ ಹತ್ತುವ ನಾಳೆ ತಿರುಪತಿ ಮುಟ್ಟಉವ ಗುರಿ ಸಾಧಿಸಬಹುದೇನೋ. ಲೆಟ್ಸ್ ಟ್ರೖ ಇಟ್.

ಭಾವ ಭೈರಾಗಿ
ಕವಿತೆ | ಬುದ್ಧ ನಗುತ್ತಾನೆ..!

- ರಶ್ಮಿಪ್ರಸಾದ್ (ರಾಶಿ)
ಬೋಧಿವೃಕ್ಷದಡಿಯಲಿ ಕುಳಿತು
ಬೋಧನೆಯ ನೆಲೆಯಲಿ ನಿಂತರಷ್ಟೇ
ನಿನ್ನಂತಾಗುವೆವೆಂಬ ಮೌಢ್ಯವ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಸಕಲವೈಭೋಗಗಳನೂ ತ್ಯಜಿಸಿ
ಮೋಹದಾ ಸೆಲೆಯನು ತೊರೆದರಷ್ಟೇ
ನಿನ್ನಂತಾಗುವೆವೆಂಬ ಭ್ರಮೆಯ ಕಂಡು
ಬುದ್ಧ ಇನ್ನೂ ನಗುತ್ತಲೇ ಇದ್ದಾನೆ…
ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ಭೋಗ,ರಾಗದ ತತ್ವವಷ್ಟೇ ಅರಿತು
ತ್ಯಾಗ,ವಿರಾಗದ ಮಹತ್ವವನ್ನೇ ಮರೆತು
ನಿನ್ನಂತೆ ನಗುವುದಿಲ್ಲವೆಂಬ ಸತ್ಯವ ಕಂಡು
ಬುದ್ಧ ಇನ್ನೂ ಮುಗುಳ್ನಗುತ್ತಲೇ ಇದ್ದಾನೆ…
ನಿಜಕ್ಕೂ ನಮ್ಮೊಳಗೆಂದೂ ನೀನಿಲ್ಲ ಬುದ್ಧ.!
ನಿನ್ನ ಹೆಸರಷ್ಟೇ ಉಚ್ಛರಿಸುವೆವು ನಾವು
ನಿನ್ನ ತತ್ವಗಳ ಪಾಲಿಸಲೇ ಇಲ್ಲ ನಾವು
ನಿನ್ನ ಉಪದೇಶವ ಪಠಿಸಲಿಲ್ಲ ನಾವು
ನಿನ್ನ ವೇದಾಂತವೆಂದೂ ಅನುಸರಿಸಲಿಲ್ಲ ನಾವು
ನಿನ್ನಂತೆ ಎಂದಿಗೂ ಆಗಲೇ ಇಲ್ಲ ನಾವು.!
ಮತ್ತೇ ನೀನೇ ಹುಟ್ಟಿಬರಬೇಕು ಬುದ್ಧ
ನಮ್ಮೊಳಗೆ ಜ್ಞಾನೋದಯದ ಬೆಳಕು ಚೆಲ್ಲಲು
ನಮ್ಮೊಳಗೆ ಬೌದ್ಧತ್ವದ ಠಾವು ಮೂಡಲು
ನಮ್ಮೊಳಗೆ ಶಾಂತಿ ಮಂತ್ರದ ತಪನೆಯಾಗಲು
ನಮ್ಮೊಳಗೆ ನಮ್ಮನ್ನೇ ಕಂಡುಕೊಳ್ಳಲು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ನಿನ್ನ ಮಗನ ಕೊಂದರು…

- ಮೂಲ : ಬ್ರೆಕ್ಟ್, ಅನುವಾದ : ಸಿದ್ಧಲಿಂಗಯ್ಯ
“ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿ ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.
ಅವನಂಥ ಮೈಕೈಗಳು ಕಟ್ಟಿದಂಥ ಗ್ವಾಡೆ ತಾವು
ಬಿಸಿಲೇರದ ಬೆಳಗಿನಲ್ಲಿ ನಿನ್ನ ಮಗನ ಕೊಂದರು
ಬೆವರ ಬಸಿದ ಅವನ ಎದೆಗೆ ಗುರಿಯಿಟ್ಟರು
ಗುಂಡಿಕ್ಕಿದರು.
ಗುಂಡೊಂದು ಕಾಣಲಿಲ್ಲ ಕೊಲೆಗಡುಕರ ಕೆಲಸವೆಲ್ಲ
ಸತ್ತ ಮಗನ ಕಣ್ಣಿನಲ್ಲಿ ಮಿಂಚಿಮಾಯವಾಯಿತು
ಹೊರಗಿನವರು ಕೊಲ್ಲಲಿಲ್ಲ ಎಲ್ಲ ಇವನ ಬಂಧುಬಳಗ
ನೆರೆಹೊರೆಯವರು
ಸುತ್ತಿದಂಥ ಸರಪಳಿಯಲಿ ಧರಧರಧರ ಎಳೆಯುವಾಗ
ಕ್ರಾಂತಿವೀರರೆಲ್ಲ ಬಂದು ಮುತ್ತಿಕೊಂಡರು.
ಗಿಟುಕಾಸಿದ ಗಿರಣಿಗಳು ಚಿಮಣಿ ಹೊತ್ತು ನಿಂತಿದ್ದೊ
ಅವನ ಕಾಲ ಮಿಂಚಿತ್ತು ಹೊಳೆಯಿತೇನೊ ಮನಸಿಗೆ
ಶೂನ್ಯವಾದ ಗಿರಣಿಗಳಲಿ ದಿನದಿನಕ್ಕೂ ಬೆಳೆಯುವಂಥ
ಬೆಟ್ಟದಂಥ ಶಕ್ತಿಯೊಂದು ಕಂಡಿತವನ ಕಣ್ಣಿಗೆ
ತೊಟ್ಟಿಕ್ಕಿತು ಕಣ್ಣೀರು ಹೋದನವನು ಮಣ್ಣಿಗೆ
ಓ ಗೆಳತಿ ವ್ಲಾಸೋವ ನಿನ್ನ ಮಗನ ಕೊಂದರು
ಹೋರಾಟದ ಜೀವಿಯನ್ನು ಒಡನಾಡಿ ಬಂಧುವನ್ನು
ನಿನ್ನ ಮಗನ ಕೊಂದರು.”
ಸುದ್ದಿದಿನ|ವಾಟ್ಸಾಪ್|9980346243

ಭಾವ ಭೈರಾಗಿ
ಕತೆ | ಮತ್ತೆ ಮಳೆ

- ಜಿ. ಹರೀಶ್ ಬೇದ್ರೆ
ಒಂದು ಊಟ ತಂದುಕೊಡೊಕೆ ಎರಡು ಗುಂಟೆ ಬೇಕಾ?
ಸರ್, ಜೋರಾಗಿ ಮಳೆ ಬರುತ್ತಿದೆ.,. ಹಾಗಾಗಿ…
ಅದಕ್ಕಂತ ಎಕ್ಸ್ಟ್ರಾ ದುಡ್ಡು ತೆಗೆದುಕೊಂಡಿಲ್ವಾ, ತಗೊಂಡ ಮೇಲೆ ಸರಿಯಾದ ಟೈಮಿಗೆ ಬರಬೇಕು.
ಸರಿಯಾಗಿ ಕೆಲಸ ಮಾಡೊ ಯೋಗ್ಯತೆ ಇಲ್ಲದ ಮೇಲೆ ಇಂತ ಕೆಲಸಕ್ಕೆ ಬರಬಾರದು. ಆ ಪಾರ್ಸೆಲ್ ಕೊಡು ಎಂದು ಡೆಲಿವರಿ ಬಾಯ್ ಕೊಡುವ ಮುನ್ನವೇ ಅವನ ಕೈಯಿಂದ ಪಾರ್ಸೆಲ್ ಕಿತ್ತುಕೊಂಡು, ಕೆಟ್ಟದಾಗಿ ಬೈಯುತ್ತಾ ಆ ವ್ಯಕ್ತಿ ಮನೆಯೊಳಗೆ ಹೋದ.
ಗಿರೀಶ್ ಸ್ವಿಗ್ಗಿಯಲ್ಲಿ ಡೆಲಿವರಿ ಬಾಯಾಗಿ ಕೆಲಸಕ್ಕೆ ಸೇರಿಕೊಂಡು ಒಂದು ವರ್ಷದ ಮೇಲಾಗಿದೆ. ಎಲ್ಲೋ ಅಪರೂಪಕ್ಕೆ ಒಮ್ಮೆ ತಡವಾದಾಗ ಯಾಕಪ್ಪಾ ಲೇಟ್ ಎಂದು ಮಾಮೂಲಿಯಂತೆ ಕೇಳಿದ್ದಿದೆ. ಯಾರೂ ಇಂದಿನಂತೆ ಬೈದಿರಲಿಲ್ಲ. ಇದು ಗಿರೀಶನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತಾದರೂ . ಪಾಪ ತುಂಬಾ ಹಸಿದಿದ್ದರೇನೊ ಅದಕ್ಕೆ ಹಾಗೆ ಮಾತನಾಡಿರಬೇಕು ಹೋಗಲಿ ಬಿಡು ಎಂದುಕೊಂಡರೂ ಮನಸ್ಸು ಸಮಾಧಾನವಾಗಲಿಲ್ಲ.
ಶಿವಮೊಗ್ಗದಲ್ಲಿ ಆಷಾಢ ಆರಂಭವಾದ ಮೊದಲನೇ ದಿನದಿಂದಲೇ ಆರಂಭವಾದ ಮಳೆ ಹದಿನೈದು ದಿನಗಳಾದರೂ ಬಿಡದೆ ಸುರಿಯುತ್ತಿತ್ತು. ಈ ದಿನವಂತೂ ವರುಣದೇವ, ಭೂತಾಯಿಯ ಮೇಲೆ ಇನ್ನಿಲ್ಲದಂತೆ ದೌರ್ಜನ್ಯ ನಡೆಸುತ್ತಿರುವ ಮನುಷ್ಯರಿಗೆ ಸರಿಯಾದ ಪಾಠ ಕಲಿಸಲೇಬೇಕೆಂಬ ಹಠಕ್ಕೆ ಬಿದ್ದವನಂತೆ ರುದ್ರರೂಪ ತಾಳಿದ್ದ. ಜೋರಾದ ಮಳೆಯ ಜೊತೆಗೆ ಗುಡುಗು ಸಿಡಿಲಿನ ಆರ್ಭಟವೂ ಜಾಸ್ತಿಯಾಗಿತ್ತು. ಬರಿಯ ಮಳೆಯಾಗಿದ್ದರೆ ಗಿರೀಶನಿಗೆ ನಿಗಧಿತ ವೇಳೆಯಲ್ಲಿ ಆರ್ಡರ್ ತಲುಪಿಸಲು ಯಾವ ತೊಂದರೆಯೂ ಇರಲಿಲ್ಲ.
ಆದರೆ ವಿಚಿತ್ರ ಗುಡುಗು ಸಿಡಿಲುಗಳ ಅಬ್ಬರ ಇದ್ದಿದ್ದರಿಂದ ಎರೆಡೆರಡು ಕಡೆ ನಿಂತು ಬರಬೇಕಾಯಿತು. ಊಟದ ಆರ್ಡರ್ ಕೊಟ್ಟ ವ್ಯಕ್ತಿಯ ಮನೆಗೂ ಹೊಟೇಲಿಗೂ ಆರು ಕಿಲೋಮೀಟರ್ ಅಂತರವಿತ್ತು. ಮನೆ ಇದ್ದದ್ದು ಹೊಸ ಬಡಾವಣೆಯಲ್ಲಿ, ಅಲ್ಲಿ ಮನೆಗಳು ವಿರಳ ಹಾಗೂ ನಿಲ್ಲಲು ಎಲ್ಲೂ ಜಾಗ ಇರದ ಕಾರಣ ಒಂದು ಕಡೆ ಸ್ವಲ್ಪ ಜಾಸ್ತಿ ಹೊತ್ತೆ ನಿಂತು ಮಳೆಯ ಆರ್ಭಟ ಕಡಿಮೆಯಾಗಲಿ ಎಂದು ಕಾದಿದ್ದ. ಅದೇ ತಪ್ಪಾಗಿ ಮುಖಕ್ಕೆ ಮಂಗಳಾರತಿ ಮಾಡಿಸಿಕೊಳ್ಳುವಂತಾಯಿತು.
ಇದೇ ಯೋಚನೆಯಲ್ಲಿ ನಿಧಾನವಾಗಿ ಬೈಕ್ ಚಲಿಸುತ್ತಾ ಬರುವಾಗ ಮಳೆ ಜೋರಾಗಿ ಪಕ್ಕದಲ್ಲೇ ಸಿಡಿಲು ಬಡಿದ ಅನುಭವವಾಗಿ ಇಹಲೋಕಕ್ಕೆ ಬಂದು ಹತ್ತಿರದಲ್ಲಿ ಎಲ್ಲಾದರೂ ನಿಲ್ಲಲು ಜಾಗ ಇದೇಯೆ ಎಂದು ನೋಡುತ್ತಾ ಬರುವಾಗ ಚಿಕ್ಕದೊಂದು ಮನೆಯಲ್ಲೇ ಅಂಗಡಿ ಮಾಡಿಕೊಂಡಿರುವುದು ಕಣ್ಣಿಗೆ ಬಿತ್ತು. ಸೀದಾ ಅಲ್ಲಿಗೆ ಬಂದು ನಿಂತ. ಅಂಗಡಿಯ ಮುಂಭಾಗದಲ್ಲಿ ಮಳೆ ಬಿಸಿಲಿಗೆ ಅಡ್ಡವಾಗಿ ಏನೂ ಹಾಕಿರದ ಕಾರಣ ನೆನೆಯುವುದು ತಪ್ಪಲಿಲ್ಲ. ಆದರೂ ಅಲ್ಲೇ ನಿಂತಿದ್ದ, ಅಂಗಡಿಯೊಳಗೆ ಇರಚಲು ಬಡಿಯುತ್ತಿದ್ದರಿಂದ ಹೇಳೋಣವೆಂದು ಬಗ್ಗಿ ನೋಡಿದರೆ ಒಳಗಡೆ ಹೆಂಗಸೊಬ್ಬಳು ಕಂಡಳು. ಇವನು ಇರಚಲು ಬಡಿಯುತ್ತಿದೆ ಎಂದು ಕೂಗಿದನ್ನು ಕೇಳಿ ಹೆಂಗಸು ಯಾರೋ ಏನೋ ಕೊಳ್ಳಲು ಬಂದಿರಬೇಕೆಂದು ಬಂದು ಏನು ಬೇಕು ಎಂದು ಕೇಳಿದಳು. ಇವನು ನನಗೇನು ಬೇಡ, ಮಳೆ ಅಂಗಡಿ ಒಳಗೂ ಬಿದ್ದು ಸಾಮಾನುಗಳು ಹಾಳಾಗುತ್ತಿವೆ ಎಂದು ಹೇಳಲು ಕರೆದೆ ಎಂದ.
ಆಗ ಗಮನಿಸಿದ ಹೆಂಗಸು ಹೌದಲ್ಲವೆ ಎಂದು ಬಾಗಿಲು ಮುಂದೆ ಎಳೆದಳು. ಇವನು ಅಲ್ಲಿಯೇ ನಿಂತಿದ್ದನ್ನು ನೋಡಿ, ಒಳಗೆ ಬನ್ನಿ ಎಂದು ಪಕ್ಷದ ಬಾಗಿಲು ತೆರೆದಳು. ಇವನು ಪರವಾಗಿಲ್ಲ ಎಂದು ಹೇಳಲು ಹೊರಟ ಕ್ಷಣದಲ್ಲೇ ಮತ್ತೊಂದು ಸಿಡಿಲು ಬಡಿಯಿತು. ಆಗ ಏನನ್ನು ಹೇಳದೆ ಒಳಹೋಗಿ ಬಾಗಿಲ ಬಳಿಯೇ ನಿಂತು ಮಳೆಯ ನೋಡತೊಡಗಿದ. ಕಣ್ಣು ಮಳೆ ನೋಡುತ್ತಿದ್ದರೆ, ಮನಸು ಬೈದ ವ್ಯಕ್ತಿಯ ಬಗ್ಗೆ ಯೋಚಿಸುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ಆ ಅಂಗಡಿಯಾಕೆ ತಿನ್ನಲು ಕಾರಮಂಡಕ್ಕಿ ಕೊಟ್ಟು ಕುಡಿಯಲು ಬಿಸಿಯಾದ ಕಾಫಿ ಕೊಟ್ಟಳು. ಇವನು ಬೇಡ ಎನ್ನದೆ ತಿಂದು, ಕುಡಿದ. ಅಷ್ಟು ಹೊತ್ತಿಗೆ ಮಳೆಯ ರಭಸ ಕಡಿಮೆಯಾದ್ದರಿಂದ ಬರುತ್ತೇನೆ ಎಂದು ಹೇಳಿ ಹೊರಟ.
ಒಂದು ವಾರದ ನಂತರ ಮತ್ತೆ ಅದೇ ಬಡಾವಣೆಗೆ ಹೋಗುವ ಅವಕಾಶ ಸಿಕ್ಕಿತು. ಅಲ್ಲಿಗೆ ಹೋಗುವಾಗ, ತಕ್ಷಣ ಆ ದಿನ ಒಳಕರೆದು ಉಪಚರಿಸಿದ ಹೆಂಗಸಿನ ನೆನಪಾಗಿ, ಬರುವಾಗ ಅವಳನ್ನು ಮಾತನಾಡಿಸಿಯೇ ಬರುವುದೆಂದು ತೀರ್ಮಾನಿಸಿದ. ದಾರಿಯುದ್ದಕ್ಕೂ ಹೋಗುವಾಗ ಅವಳ ಬಗ್ಗೆ ನೆನಪಿಸಿಕೊಂಡರೆ ಏನೂ ನೆನಪಾಗಲಿಲ್ಲ. ಅವಳು ಹೇಗಿದ್ದಾಳೆ, ಮುಖ ಹೇಗಿದೆ, ತಾನು ತಿಂದಿದ್ದು ಏನು ಏನೊಂದೂ ನೆನಪಾಗಲಿಲ್ಲ. ಆಗ ಆ ಕ್ಷಣದಲ್ಲಿ ಅವನ ಮನಸ್ಸು ಪೂರ್ತಿ ಬೈದ ವ್ಯಕ್ತಿಯ ಬಗ್ಗೆಯೆ ಗಿರಕಿ ಹೊಡೆಯುತ್ತಿದ್ದರಿಂರ ಬೇರೆ ಕಡೆ ಗಮನ ಹೋಗಿರಲಿಲ್ಲ.
ಇಂದು ಬಂದಾಗ ನೋಡಿದರೆ ಅದೊಂದು ಪುಟ್ಟ ಅಂಗಡಿ. ಅಲ್ಲಿ ಬೀಡಿ ಸಿಗರೇಟು ತಂಬಾಕು, ಎಲೆ ಅಡಿಕೆ, ಸ್ವಲ್ಪ ಕುರುಕಲು ತಿಂಡಿಗಳ ಜೊತೆಗೆ ಕಾರಮಂಡಕ್ಕಿ, ಮಿರ್ಚಿ ಮಾತ್ರ ಸಿಗುತ್ತಿತ್ತು. ಮೂವತ್ತರ ಆಸುಪಾಸಿನ ಮಹಿಳೆ ಅದನ್ನು ನಡೆಸುತ್ತಿದ್ದಳು. ಇವನನ್ನು ನೋಡಿದ ಆ ಮಹಿಳೆ ಹಿಂದಿನ ಗುರುತು ಹಿಡಿಯದೆ ಏನು ಬೇಕು ಎಂದು ಕೇಳಿದಳು. ಅದಕ್ಕೆ ಗಿರೀಶ್ ಅಂದಿನ ಘಟನೆ ವಿವರಿಸಿ, ನೀವೇ ಅಲ್ಲವೇ ಇದ್ದಿದ್ದು ಎಂದ. ಹೌದು, ಆದರೆ ಅವತ್ತು ನೀವು ರೈನ್ ಕೋಟ್, ಹೆಲ್ಮೆಟ್ ಹಾಕಿದ್ದರಿಂದ ಗೊತ್ತಾಗಲಿಲ್ಲ ಎಂದಳು.
ಅವಳ ಹಾಗೂ ಅಂಗಡಿಯ ಪರಿಸ್ಥಿತಿ ನೋಡಿದಾಗ, ಅಂದು ತಾನು ದುಡ್ಡು ಕೊಡದೆ ಹೋಗಿದ್ದು ತಪ್ಪಾಯಿತು ಎನಿಸಿ, ಅವತ್ತು ಯಾವುದೋ ಮೂಡಲ್ಲಿ ಹಣ ಕೊಡಲಿಲ್ಲ, ಎಷ್ಟಾಗಿತ್ತು ಎಂದ. ಅದಕ್ಕವಳು ಬೇಡ ಎಂದು ಹಣ ಪಡೆಯಲಿಲ್ಲ. ಅಂದಿನಿಂದ ಗಿರೀಶ್ ಆ ಕಡೆ ಹೋದಾಗಲೆಲ್ಲಾ ತಪ್ಪದೇ ಈ ಅಂಗಡಿಗೆ ಬಂದು ಹಣ ಕೊಟ್ಟು ಕಾಫಿ ಕುಡಿದು ನಾಲ್ಕು ಮಾತನಾಡಿ ಹೋಗುತ್ತಿದ್ದ. ಯಾವಾಗ ಬಂದರೂ ಅಲ್ಲಿ ಆ ಹೆಂಗಸು ಮತ್ತು ಎರಡು ಮೂರು ವರ್ಷದ ಮಗು ಮಾತ್ರ ಇರುವುದನ್ನು ಗಮನಿಸಿ, ಕುತೂಹಲ ತಡೆಯಲಾರದೆ, ಮನೆಯಲ್ಲಿ ಮತ್ತೆ ಯಾರಿದ್ದಾರೆ ಎಂದು ಕೇಳಿದ. ಅದಕ್ಕವಳು ನಾನು ನನ್ನ ಮಗಳು ಇಬ್ಬರೇ ಎಂದಳು. ಏಕೆ ಎಂದಾಗ, ವರ್ಷದ ಹಿಂದೆ ನನ್ನ ಯಜಮಾನರು ಕೊವಿಡ್ ನಿಂದ ಹೋದರು ಹಾಗಾಗಿ ಎಂದಳು. ಇವನು ಮತ್ತೆ ಏನನ್ನು ಕೇಳಲಿಲ್ಲ.. ನಂತರ ತಿಳಿದಿದ್ದೆಂದರೆ, ಗಂಡ ಇರುವವರೆಗೂ ಅವನ ಕುಟುಂಬದವರೊಂದಿಗೆ ಬದುಕು ಚೆನ್ನಾಗಿಯೇ ಇತ್ತು. ಆತ ಹೋದನಂತರ ಆಸ್ತಿಯ ಸಲುವಾಗಿ, ಇವಳಿಗೆ ಈ ಪುಟ್ಟ ಮನೆ, ನಾಲ್ಕು ಬಿಡಿಗಾಸು ಕೊಟ್ಟು ಹೊರಹಾಕಿದ್ದಾರೆಂದು.
ಇವಳು ತನ್ನ ಮನೆಯವರಿಗೆ ಹೊರೆಯಾಗಬಾರದೆಂದು ಇಲ್ಲಿಗೆ ಮಗಳೊಂದಿಗೆ ಬಂದು ಬದುಕು ಕಟ್ಟೀಕೊಂಡಿದ್ದಾಳೆ ಎಂದು.
ಅದೊಂದು ದಿನ ಗಿರೀಶನಿಗೆ, ಆತನ ತಂದೆಗೆ ಹುಷಾರಿಲ್ಲ ಎಂದು ಕರೆ ಬಂದು ಊರಿಗೆ ಹೋದ. ಅಲ್ಲಿಗೆ ಹೋದ ಎರಡನೆ ದಿನ ತಾಯಿ, ಗಿರೀಶನನ್ನು ಕೂರಿಸಿಕೊಂಡು, ಆದದ್ದು ಆಗಿ ಹೋಯಿತು. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ನೀನೂ ಕೊರಗುತ್ತಾ ನಮಗೂ ಕೊರಗುವಂತೆ ಏಕೆ ಮಾಡ್ತಿಯಾ? ನಿನ್ನ ತಂದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಹೀಗಾಗಿರುವುದು ಎಂದು ಹೇಳುವಾಗಲೇ ಗಿರೀಶನ ಗೆಳೆಯನು ಬಂದ.
ಅವನು ಗಿರೀಶನನ್ನು ಹೊರಗೆ ಕರೆದುಕೊಂಡು ಹೋಗಿ, ನೋಡು ನಿನಗೇನು ಮಹಾ ವಯಸ್ಸಾಗಿಲ್ಲ, ಮೊದಲನೇ ಸಂಬಂಧ ಅಲ್ಲದಿದ್ದರೂ ಎರಡನೇ ಸಂಬಂಧವಾದರೂ ನೋಡು. ಅವರಿಗೂ ಒಂದು ಬದುಕು ಸಿಗುತ್ತದೆ, ನಿನ್ನ ಬದುಕಿಗೂ ಆಧಾರ ಸಿಕ್ಕಂತೆ ಆಗುತ್ತದೆ. ಜೊತೆಗೆ ನಿನ್ನ ತಂದೆ ತಾಯಿಗೆ ನೆಮ್ಮದಿ ಸಿಗುತ್ತದೆ ಯೋಚಿಸು ಎಂದ.
ಗಿರೀಶನಿಗೆ ಈಗ ಮೂವತ್ತೈದು ವರ್ಷ, ಅವನಿಗೆ ಮದುವೆಯಾಗಿ ಆರು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅದಕ್ಕಾಗಿ ಹರಕೆ ಹೊತ್ತು ತೀರಿಸಲು ತನ್ನ ಊರಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಇರುವ ಮನೆದೇವರಿಗೆ ಬೈಕಿನಲ್ಲಿ ಹೆಂಡತಿಯೊಂದಿಗೆ ಹೋಗುವಾಗ, ಎದುರಿನಿಂದ ವೇಗವಾಗಿ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ, ಬೈಕ್ ಸಮೇತ ಕೆರೆಯಲ್ಲಿ ಬಿದ್ದಿದ್ದರು.
ಅಲ್ಪಸ್ವಲ್ಪ ಈಜು ಬರುತ್ತಿದ್ದ ಗಿರೀಶ್ ಕಷ್ಟಪಟ್ಟು ದಡ ಸೇರಿದ. ಆದರೆ ಆತನ ಹೆಂಡತಿ ಬದುಕಿ ಉಳಿಯಲಿಲ್ಲ. ಊರಲ್ಲೇ ಇದ್ದರೆ ಹೆಂಡತಿಯ ನೆನಪು ಬಹಳ ಕಾಡುತ್ತದೆ, ಅವಳ ಸಾವಿಗೆ ತಾನೇ ಕಾರಣ ಎಂದು ಕೊರಗುವಂತೆ ಆಗುತ್ತದೆ ಎನ್ನುವ ಕಾರಣಕ್ಕೆ ತನ್ನ ಊರು ಬಿಟ್ಟು ಶಿವಮೊಗ್ಗ ಸೇರಿದ್ದ. ಇಷ್ಟು ದಿನ ಯಾರು ಏನೇ ಹೇಳಿದ್ದರೂ ಮರುಮದುವೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ, ತಂದೆಯ ಅನಾರೋಗ್ಯ, ತಾಯಿಯ ಮಾತು, ಜೊತೆಗೆ ಗೆಳೆಯ, ವಿಧವೆ, ವಿಚ್ಜೇದಿತೆ, ಕೈಲಾಗದವರಿಗೆ ಮದುವೆಯಾಗಿ ಹೊಸ ಬದುಕು ಕೊಡಬಾರದೇಕೆ ಎನ್ನುವ ಮಾತು ಮತ್ತೊಂದು ದಿಕ್ಕಿನಲ್ಲಿ ಯೋಚಿಸುವಂತೆ ಮಾಡಿತು.
ಅದಕ್ಕಾಗಿಯೆ ಗಿರೀಶ್, ಅಪ್ಪ ನನಗೆ ಯೋಚಿಸಲು ಸ್ವಲ್ಪ ದಿನ ಅವಕಾಶ ಕೊಡು ಹೇಳುತ್ತೇನೆ ಎಂದು ಶಿವಮೊಗ್ಗಕ್ಕೆ ಬಂದ. ಅದೇ ದಿನ ಹೊಸ ಬಡಾವಣೆಯ ಆರ್ಡರ್ ಸಿಕ್ಕಿತು. ವಾಡಿಕೆಯಂತೆ ಡೆಲಿವರಿ ಕೊಟ್ಟು ಕಾಫಿ ಕುಡಿಯಲು ಬಂದ. ಅದೇನೋ ಗೊತ್ತಿಲ್ಲ, ಆಂದು ಆ ಅಂಗಡಿಯ ಮಹಿಳೆ ಬಹಳ ವಿಶೇಷವಾಗಿ ಕಂಡಳು. ಸಂಜೆ ಮನೆಗೆ ಬಂದವನು ಏನೋ ಯೋಚಸಿ ಗೆಳೆಯನಿಗೆ ಕರೆ ಮಾಡಿ, ಅಂಗಡಿಯ ಮಹಿಳೆಯ ವಿಷಯವನ್ನು ಅವನಿಗೆ ತಿಳಿಸಿ, ಅವಳು ಒಪ್ಪಿದರೆ ಅವಳಿಗೆ ಮದುವೆಯಾಗಿ, ಅವಳ ಮಗುವಿಗೆ ತಂದೆಯಾಗಲು ಬಯಸಿರುವೆ. ಇದಕ್ಕೆ ಅಪ್ಪ ಅಮ್ಮನ ಒಪ್ಪಿಗೆ ಇದೇಯಾ ನೀನೇ ಕೇಳಿ ತಿಳಿಸು. ಆಮೇಲೆ ನಾನು ಅವಳ ಬಳಿ ಮಾತನಾಡುವೆ ಎಂದ ಗಿರೀಶ್. ಸಮಯ ನೋಡಿ ನಿನ್ನ ತಂದೆ ತಾಯಿಯರ ಜೊತೆ ಮಾತನಾಡಿ ತಿಳಿಸುವೆ ಎಂದ ಗೆಳೆಯ. ಗಿರೀಶ್, ಗೆಳೆಯನಿಂದ ಬರುವ ಕರೆಗೆ ಕಾಯುತ್ತಿದ್ದಾನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಲೈಫ್ ಸ್ಟೈಲ್7 days ago
ರಣ ಬೇಟೆಗಾರ ‘ಕೆನ್ನಾಯಿ’ ವಿನಾಶವಾದ ಕತೆ..!
-
ದಿನದ ಸುದ್ದಿ7 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ನಾಳೆ ದಾವಣಗೆರೆಗೆ ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ಜೂನ್ 8 ರಿಂದ ಕೋಳಿ ಸಾಕಾಣಿಕೆ ತರಬೇತಿ ಶಿಬಿರ
-
ದಿನದ ಸುದ್ದಿ7 days ago
ಒಡಿಶಾದಲ್ಲಿ ಸಿಲುಕಿರುವ ಕನ್ನಡಿಗರು ಇಂದು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮನ
-
ದಿನದ ಸುದ್ದಿ5 days ago
ಗೋ ಹತ್ಯೆ ನಿಷೇಧ ಕಾಯ್ದೆ ; ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ7 days ago
ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ಕ್ರೀಡಾಪಟುಗಳ ಆಯ್ಕೆ
-
ದಿನದ ಸುದ್ದಿ4 days ago
ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ