Connect with us

ನೆಲದನಿ

ನುಡಿಯ ಒಡಲು -19 | ನಾಡು-ನುಡಿ: ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರ ‘ಭಾಷಾವಾರು ರಾಜ್ಯಗಳ ಸಮಸ್ಯೆಗಳು’ ಎನ್ನುವ ಬರಹವು ಇಂದಿಗೂ ಹಲವು ನೆಲೆಗಳಿಂದ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟವಾಗಿದೆ. 1956ರ ರಾಜ್ಯಗಳ ಪುನರ್ರಚನೆಯ ಕಾಯ್ದೆಯನ್ನು ಕುರಿತು ವಿಮರ್ಶಿಸುತ್ತ, “ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಲು ಏಕಭಾಷಿಕ ರಾಜ್ಯಗಳಕ್ಕಿಂತ ಬಹುಭಾಷಿಕ ರಾಜ್ಯಗಳನ್ನು ಹೊಂದುವುದು ಹೆಚ್ಚು ಪ್ರಯೋಜನಕಾರಿ ಆಗುತ್ತದೆ” ಎಂದು ತಮ್ಮ ಅಭಿಪ್ರಾಯಗಳನ್ನು ಅಂಬೇಡ್ಕರ್ ಹೀಗೆ ದಾಖಲಿಸುತ್ತಾರೆ.

ಸಂಯುಕ್ತ ಭಾರತ ಎನ್ನುವ ಕಲ್ಪನೆಯೇ ಮರಣಗಂಟೆಯ ಸೂಚಕವಾಗಿದೆ ಎಂದು ಅವರು ಬಲವಾಗಿ ನಂಬಿದ್ದರು. ರಾಜ್ಯಗಳ ಮರುರಚನೆಯಲ್ಲಿ ಜನಸಂಖ್ಯೆಯ ಗಾತ್ರ ಮತ್ತು ಪ್ರಮಾಣವನ್ನು ರೂಪಿಸುವಲ್ಲಿ ಸಂವಿಧಾನ ಸೋಲುತ್ತದೆ ಎನ್ನುವ ಬೇಸರವನ್ನೂ ಇವರು ವ್ಯಕ್ತಪಡಿಸಿದ್ದರು. ಪ್ರಜೆಗಳ ಸಮಾನ ಪ್ರತಿನಿಧೀಕರಣವನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಂತ ದುಸ್ತರವಾಗುತ್ತದೆ ಎಂಬ ನಿಲುವು ಇವರದಾಗಿತ್ತು.

ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, 1956ರ ರಾಜ್ಯಗಳ ಪುನರ್ರಚನೆಯ ಕಾಯಿದೆಯು ಉತ್ತರದ ರಾಜ್ಯಗಳನ್ನು ಬಲಪಡಿಸುವ ಹಾಗೂ ದಕ್ಷಿಣದ ರಾಜ್ಯಗಳನ್ನು ಬಾಲ್ಕನೈಸ್ ಮಾಡುವ ನಿಲುವುಗಳನ್ನು ಕಾಣುತ್ತಾರೆ. ಪರಿಣಾಮವಾಗಿ ದಕ್ಷಿಣದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳು ತಲೆಯೆತ್ತಿದರೆ, ಮುಂಬೈ, ಪಂಜಾಬ್, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಂತಹ ದೊಡ್ಡ ಪ್ರದೇಶಗಳು ಹಾಗೇ ಅಸ್ತಿತ್ವದಲ್ಲಿ ಉಳಿಯುತ್ತವೆ.

ಆದರೆ, ಈ ಎಲ್ಲಾ ರಾಜ್ಯಗಳು ಕೂಡ ಈ ಹೊತ್ತಿಗೆ ಮರುವಿಂಗಡಣೆಯಾಗಿರುತ್ತವೆ ಎಂಬ ಭವಿಷ್ಯವನ್ನೂ ಇವರು ನುಡದಿದ್ದರು. ಅಂಬೇಡ್ಕರ್ ಅವರ ಪ್ರಮುಖ ಆದ್ಯತೆ ಏನಾಗಿತ್ತೆಂದರೆ, ಒಂದೇ ಭಾಷೆಯನ್ನು ಮಾತ್ನಾಡುವ ಜನರು ಅನೇಕ ರಾಜ್ಯಗಳಲ್ಲಿ ವರ್ಗೀಕರಿಸಿರಬಹುದಿತ್ತು. ಏಕೆಂದರೆ, ಪತ್ರಿಯೊಂದು ರಾಜ್ಯವು ಕೂಡ ಒಂದೊಂದು ಭಾಷೆಯನ್ನು ಮಾತ್ನಾಡುವ ಜನರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.

ಇನ್ನೂ ಮುಂದುವರೆದು ಇವರು ಹೇಳುವುದೇನೆಂದರೆ, ‘ಒಂದು ಭಾಷೆ ಒಂದು ರಾಜ್ಯ’ ಎಂಬ ಸೂತ್ರವಿರಕೂಡದು. ಬದಲಾಗಿ, ‘ಒಂದು ರಾಜ್ಯ ಒಂದು ಭಾಷೆ’ ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಈ ಸೂತ್ರದ ಜೊತೆಗೆ ಒಂದು ಭಾಷೆ ಒಂದು ರಾಜ್ಯ ಎಂಬ ಸೂತ್ರವನ್ನು ತಳಕುಹಾಕಿ ಗೊಂದಲವನ್ನುಂಟು ಮಾಡಬಾರದು. ಇಲ್ಲಿ ಅಂಬೇಡ್ಕರ್ ಅವರ ಒಟ್ಟು ತಾತ್ವಿಕತೆ ಏನನ್ನು ಪ್ರಸ್ತಾಪ ಮಾಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸಿದವರು, ಸಾಮಾಜಿಕ ನ್ಯಾಯದ ಆದ್ಯಪ್ರವರ್ತಕ, ಪ್ರಜಾಪ್ರಭುತ್ವವು ಸಾಕಾರಗೊಳ್ಳಲು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಎಂಬುದನ್ನು ಚಿಂತಿಸಿದವರು. ಆದ್ದರಿಂದ ಇವರು ಪ್ರಸ್ತಾಪಿಸುತ್ತಿರುವ ‘ಒಂದು ರಾಜ್ಯ ಒಂದು ಭಾಷೆ’ ಎಂಬೀ ಸೂತ್ರದ ಹಿಂದಿನ ತಾತ್ವಿಕತೆಯು ಕೂಡ ಅತ್ಯಂತ ಪ್ರಜಾಸತ್ತಾತ್ಮಕವಾದ್ದು.

ಅಂದರೆ ಅಂಬೇಡ್ಕರ್ ಅವರು ಚಿಂತಿಸುತ್ತಿದ್ದ ಒಂದು ಬಹುಮುಖ್ಯ ವಿನ್ಯಾಸ ಯಾವುದೆಂದರೆ, ಎಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ, ಭಾಷಿಕ ಹಾಗೂ ಧಾರ್ಮಕ ವಿನ್ಯಾಸಗಳನ್ನೂ ಕೂಡ ಸಂವಿಧಾನದ ಪ್ರಜಾಸತ್ತಾತ್ಮಕ ನೀತಿಗಳನ್ನಾಗಿ ರೂಪಿಸುತ್ತಿದ್ದರು. ಹಾಗಾಗಿ ಇವರು ಪ್ರಸ್ತಾಪಿಸಿದ ಈ ಮೇಲಿನ ಸೂತ್ರವು ಇಂತಹದೇ ಒಂದು ವಿನ್ಯಾಸವಾಗಿದೆ. ಕೇವಲ ರಾಜಕೀಯ ಕಣ್ನೋಟದಿಂದ ಈ ಸೂತ್ರವನ್ನು ವಿಶ್ಲೇಷಣೆ ಮಾಡಿದರೆ ಇದರಲ್ಲಿ ಹಲವು ಬಗೆಯ ಕೊರತೆಗಳು ಕಾಣುತ್ತವೆ.

ಈ ರಾಜಕೀಯ ಕಣ್ನೋಟವೆನ್ನುವುದು ಕೇವಲ ರಾಜಕೀಯ ನಿಲುವುಗಳಿಂದ ಇಲ್ಲವೇ ನೀತಿಗಳಿಂದ ಕೂಡಿರುವ ಅಗತ್ಯವಿಲ್ಲ. ಇದು ಸಾಮಾಜಿಕ ಭಾಷಾಶಾಸ್ತ್ರೀಯ ಕಣ್ನೋಟವು ಆಗಿರಬಹುದು ಅಥವಾ ಯಾವುದೇ ಸಾಮಾಜಿಕ ಮೀಮಾಂಸೆಯ ನಿಲುವುಗಳಿಂದ ಪ್ರೇರಿತವಾದ ಕಣ್ನೋಟವು ಆಗಿರಬಹುದು. ಆದರೆ ಈ ಎಲ್ಲ ನಿಲುವುಗಳು ಬೈನರಿ ಇಲ್ಲವೇ ಡೈಕಾಟಮಿಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡುತ್ತವೆ. ಸಹಜವಾಗಿ, ಅಧಿಕಾರ ಸಂಬಂಧ ಇಲ್ಲವೇ ಯಜಮಾನಿಕೆ ವಿನ್ಯಾಸಗಳು ಇಲ್ಲಿ ಗೋಚರಿಸುತ್ತವೆ.

ಈ ವಿನ್ಯಾಸಗಳನ್ನೇ ಅಂಬೇಡ್ಕರ್ ಅವರ ‘ಒಂದು ರಾಜ್ಯ ಒಂದು ಭಾಷೆ’ಎಂಬೀ ಸೂತ್ರಕ್ಕೂ ಅನ್ವಯಿಸುವ ಅಪಾಯಗಳಿವೆ. ಇದು ಆಗಕೂಡದು ಎಂಬುದು ನನ್ನ ಬಯಕೆ. ಮತ್ತೊಂದು ಮಹತ್ವದ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು, ಅದೇನೆಂದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ತಾತ್ವಿಕ ವಿನ್ಯಾಸಗಳನ್ನು ವಿಶ್ಲೇಷಿಸುವುದಕ್ಕೆ ನಾವು ಹೊಸ ನೋಟಕ್ರಮ ಹಾಗೂ ವಿಶ್ಲೇಷಣಾ ಪರಿಕರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್ ಅವರು ಕೇವಲ ಸಾಮಾಜಿಕ, ಸಾಂಸ್ಕ್ರುತಿಕ, ರಾಜಕೀಯ ಹಾಗೂ ಧಾರ್ಮಿಕ ಸಂಗತಿಗಳಲ್ಲಿ ಹುದುಗಿರುವ ಏರುಪೇರುಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಿಲ್ಲ. ಬದಲಾಗಿ ‘ಹೊಸ ಪ್ರಜಾಪ್ರಭುತ್ವ’ದ ವಿನ್ಯಾಸಗಳನ್ನು ನೆಲೆಗೊಳಿಸುವ ಚಿಂತನೆಗಳನ್ನು ರೂಪಿಸುತ್ತಿದ್ದರು. ಒಟ್ಟಿನಲ್ಲಿ ‘ವಿಚಾರ ಕ್ರಾಂತಿ ಮತ್ತು ಅರಿವಿನ ಪಲ್ಲಟ’ಗಳನ್ನು ಒಂದೇ ತಾತ್ವಿಕ ಚೌಕಟ್ಟಿನಲ್ಲಿ ರೂಪಿಸುವ ಇರಾದೆಯನ್ನು ಇವರು ಹೊಂದಿದ್ದರು.

ಭಾರತದ ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ‘ರಾಜ್ಯಗಳ ಒಕ್ಕೂಟ’ (ಸ್ಟೇಟ್ಸ್ ಆಫ್ ಯ್ಯೂನಿಯನ್ಸ್) ಎಂದು ಉಲ್ಲೇಖಿಸಲಾಗಿದೆ. ಅಂಬೇಡ್ಕರ್ ಅವರ ಸಾಮಾಜಿಕ ತತ್ವಶಾಸ್ತ್ರಕ್ಕೂ ಮತ್ತು ರಾಜ್ಯಗಳ ಒಕ್ಕೂಟದ ಕಲ್ಪನೆಯ ನಡುವೆ ಅತರ್ಸಂಬಂಧಗಳಿವೆ. ಭಾರತ ಎನ್ನುವುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ, ಅದು ಖಂಡಿತವಾಗಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ ಎಂಬ ಈ ಮೂರು ಪರಿಕಲ್ಪನೆಗಳನ್ನು ತನ್ನ ಗುರಿಗಳನ್ನಾಗಿ ರೂಪಿಸಿಕೊಳ್ಳಬೇಕು.

ಹಲವು ರಾಜ್ಯಗಳು ಒಂದು ಒಕ್ಕೂಟವಾಗಿ ನೆಲೆಗೊಳ್ಳಬೇಕೆಂದರೆ ಈ ಗುರಿಗಳು ಅವಶ್ಯವಾಗಿ ಬೇಕಾಗುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳ ಆಶಯವಿರುವುದು ಭಾರತವನ್ನು ಕೇವಲ ಬಹುಭಾಷಿಕ, ಬಹುಸಾಂಸ್ಕ್ರುತಿಕ, ಬಹುಧರ್ಮೀಯ ಹಾಗೂ ಬಹುಜಾತಿಗಳಿಂದ ಕೂಡಿದ ರಾಷ್ಟ್ರವನ್ನಾಗಿ ನೋಡುವುದಾಗಿರಲಿಲ್ಲ.

ಬದಲಾಗಿ ಈ ಎಲ್ಲ ಭಿನ್ನ-ಅಸ್ಮಿತೆಗಳ ಅಚೆಗೂ ಭಾರತವು ಒಂದು ಒಕ್ಕೂಟವಾಗಿ ರೂಪುಗೊಳ್ಳಬೇಕು ಹಾಗೂ ಈ ಒಕ್ಕೂಟದೊಳಗೆ ನೆಲೆಗೊಳ್ಳುವ ಎಲ್ಲ ಸಮೂಹಗಳು ತಮ್ಮ ವೈಶಿಷ್ಟ್ಯತೆಗಳನ್ನು ಗುರುತಿಸಿಕೊಂಡರೂ, ಅವುಗಳು ಭೇದದ ಬೇರುಗಳಾಗದೇ, ಸಾಮಾಜಿಕ-ರಾಜಕೀಯ ಗಡಿಗಳನ್ನು ನಿರ್ಮಿಸದೇ, ಹೂದೋಟದ (ಫ್ಲಾವರ್ಸ್ ಪಾಟ್) ಸ್ವರೂಪದಲ್ಲಿ ನೆಲೆಗೊಳ್ಳಬೇಕು ಎಂಬುದು ಇವರ ಉದ್ದೇಶವಾಗಿತ್ತು.

ಯಾವತ್ತಿಗೂ ಭಾರತವನ್ನು ಒಂದು ಮೆಲ್ಟಿಂಗ್ ಪಾಟ್‍ನ್ನಾಗಿ ರೂಪಿಸುವ ಕನಸು ಕಂಡವರಲ್ಲ ಇವರು. ಆದರೆ, ಧಾರ್ಮಿಕ ಕುರುಡತನದಿಂದ ರಾಜ್ಯಭಾರವನ್ನು ಮಾಡುವರು ರಾಜ್ಯಗಳ ಒಕ್ಕೂಟವೆಂದರೆ, ಅದೊಂದು ಮೆಲ್ಟಿಂಗ್ ಪಾಟ್‍ನ ಸ್ವರೂಪದಲ್ಲಿ ದೇಶವನ್ನು ಕಟ್ಟುವುದು ಎಂದು ತಿಳಿದುಕೊಂಡಿದ್ದಾರೆ. ಈ ಎಲ್ಲ ಅಪಚಾರಗಳಿಂದ ವಿಮೋಚನೆಗೊಳಿಸಿ, ಒಂದು ಅಪ್ಪಟ ವೈಚಾರಿಕ, ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ಐಕ್ಯತೆಯಿಂದ ಕೂಡಿಬಾಳುವ ಒಕ್ಕೂಟವನ್ನಾಗಿ ರೂಪಿಸುವ ಕನಸನ್ನು ಅಂಬೇಡ್ಕರ್ ಅವರು ಕಂಡಿದ್ದರು.

ದೇಶ, ರಾಷ್ಟ್ರ, ಒಕ್ಕೂಟ ಹಾಗೂ ರಾಜ್ಯ ಎಂಬಿತ್ಯಾದಿ ಕಲ್ಪನೆಗಳ ನಡುವಣ ಅತರ್ಸಂಬಂಧ ಹಾಗೂ ತಾತ್ವಿಕತೆಯನ್ನು ಅರಿಯದೇ ಹೋದದ್ದರಿಂದ, ಇವತ್ತು ಹಲವು ಬಗೆಯ ಸವಾಲುಗಳನ್ನು ಎದುರಿಸುವ ಇಕ್ಕಟ್ಟಿಗೆ ನಾವು ಸಿಲುಕಿದ್ದೇವೆ. ಪರಿಣಾಮವಾಗಿ ಭಾರತ (ಇಂಡಿಯಾ) ಹಾಗೂ ಭಾರತೀಯ (ಇಂಡಿಯನ್) ಎಂಬೀ ನಾಮಪದ ಮತ್ತು ನಾಮವಿಶೇಷಣಗಳ ನಡುವಣ ನಂಟು ಕಳಿಚಿಹೋಗಿ, ಇವುಗಳು ಪರಸ್ಪರ ವಿರೋಧಿಗಳಾಗಿ ವರ್ತಿಸುತ್ತವೆ. ಅಂದರೆ, ಭಾರತ ಒಂದು ರಚನಾತ್ಮಕ ನೆಲೆಯಾದರೆ, ಭಾರತೀಯ ಎಂಬುದು ಈ ರಚನೆಯನ್ನು ವಿವರಿಸುವ ಬಗೆಯಾಗಿದೆ.

ಆದರೆ ಇವತ್ತು ಭಾರತದ ರಚನೆಯೊಳಗೆ ಇರುವವನು/ಳು ಭಾರತೀಯನಾಗಿಯೇ ಕಾಣುವುದಿಲ್ಲ. ಏಕೆಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಹಿಂದೂ ಧರ್ಮದ ವಕ್ತಾರರು ಮಂಡಿಸುವ ಎಲ್ಲ ಬಗೆಯ ನಿಲುವುಗಳನ್ನು ಒಪ್ಪಿದರೇ ಮಾತ್ರ ಅವನು/ಳು ಭಾರತೀಯನಾಗಿ ಒಪ್ಪಿಗೆಯನ್ನು ಪಡೆಯುತ್ತಾರೆ. ಯಾವುದೇ ಒಂದು ದೇಶದ ರಚನೆ ಅದು ಕೇವಲ ಯಾವುದೇ ಒಂದು ಧರ್ಮದ ವಿನ್ಯಾಸಕ್ಕೆ ಮಾತ್ರ ಸೀಮಿತಗೊಂಡರೆ, ಇಂತಹ ಅಪಾಯಗಳು ಎದುರಾಗುತ್ತವೆ.

ಇಂತಹ ಅಪಾಯಗಳನ್ನು ಗ್ರಹಿಸಿದ ಅಂಬೇಡ್ಕರ್ ಅವರು, ಯಾವುದೇ ಒಂದು ಭಾಷೆಯನ್ನು ಮಾತ್ನಾಡುವ ಜನರು ಒಂದು ನಿರ್ದಿಷ್ಟ ರಾಜ್ಯದೊಳಗೆ ನೆಲೆಗೊಂಡರೆ, ಅದು ಜಾತಿ, ಧರ್ಮದ ಕೋಮು ಸ್ವರೂಪವನ್ನು ಪಡೆದುಕೊಳ್ಳುತ್ತದೆ ಹಾಗೂ ಒಕ್ಕೂಟದ ತಾತ್ವಿಕತೆಗೆ ಎದುರಾಗಿ, ತಮ್ಮದೇ ಆಶೋತ್ತರಗಳನ್ನು ರೂಪಿಸಿಕೊಳ್ಳುತ್ತರೆ. ಪರಿಣಾಮವಾಗಿ ಸಾಮಾಜಿಕ, ರಾಜಕೀಯ ಹಾಗೂ ಭಾಷಿಕ ಅಂತರಗಳು ಮತ್ತಷ್ಟು ಬಿಗಡಾಯಿಸುವುದಕ್ಕೆ ಪೂರಕವಾಗಿ ವರ್ತಿಸುತ್ತಾರೆ ಎಂಬುದನ್ನು ಮನಗಂಡಿದ್ದರು. ಅದಕ್ಕಾಗಿಯೇ ರಾಜ್ಯಗಳ ಒಕ್ಕೂಟ ಮತ್ತು ಒಂದು ರಾಜ್ಯ ಒಂದು ಭಾಷೆ ಎಂಬ ಸೂತ್ರವನ್ನು ಅವರು ಪ್ರಸ್ತಾಪ ಮಾಡಿದ್ದು.

ಈ ಮೇಲಿನ ಚರ್ಚೆಗಳು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಎಲ್ಲ ಬಗೆಯ ಅಪಾಯಗಳನ್ನು ನಾವು ಇವತ್ತು ಭಾರತದಲ್ಲಿ ನೋಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹಲವು ದಶಕಗಳ ನಂತರವೂ ಕೂಡ ನಮ್ಮ ಭಾರತ ರಾಜ್ಯಗಳ ಒಕ್ಕೂಟದಂತೆ ಕೆಲಸವನ್ನು ಮಾಡದೇ, ಹಲವು ರಾಜ್ಯಗಳು ಹಲವು ಕಾರಣಗಳಿಗಾಗಿ ಶತ್ರು ಪಾಳ್ಯಗಳಂತೆ ವರ್ತಿಸುತ್ತವೆ. ಈ ಎಲ್ಲ ಶತ್ರುಗಳನ್ನು ಗಾಳಗಳನ್ನಾಗಿ ಬಳಸುವ ಕುತಂತ್ರದಂತೆ, ಕೇಂದ್ರ ಸರಕಾರ ಕೆಲಸವನ್ನು ನಿರ್ವಹಿಸುತ್ತಿದೆ.

ಗಡಿ, ನೀರು, ನೈಸರ್ಗಿಕ ಸಂಪತ್ತು, ಭಾಷೆ ಮೊದಲಾದ ಹಲವು ನೆಪಗಳನ್ನು ಮುಂದಿಟ್ಟುಕೊಂಡು ರಾಜ್ಯ ರಾಜ್ಯಗಳ ನಡುವೆ ಜಗಳಗಳು ಏರ್ಪಡುತ್ತವೆ. ಇಂತಹ ಜಗಳಗಳನ್ನು ರಾಜಕೀಯ ಲಾಭಕ್ಕಾಗಿಯೇ ಕೇಂದ್ರ ಸರಕಾರ ತನ್ನ ಪಕ್ಷಪಾತಿ ಗುಣವನ್ನು ನಿರಂತರವಾಗಿ ಪ್ರದರ್ಶಿಸುತ್ತ ಬಂದಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದಂತಹ ಮೌಲ್ಯಗಳು ಇವತ್ತು ಕೇವಲ ಘೋಷಣೆಗಳಾಗಿ ಮಾತ್ರ ಅಸ್ತಿತ್ವದಲ್ಲಿವೆ.

ಈ ಎಲ್ಲ ಚರ್ಚೆಗಳು ನಮಗೆ ಖಾತ್ರಿಪಡಿಸುವುದೇನೆಂದರೆ, ರಾಜ್ಯಗಳ ಪುನರ್ರಚನೆಯ ಆಸಕ್ತಿಗಳು ಬಹುತೇಕವಾಗಿ ರಾಜಕೀಯ ಪ್ರೇರಿತವಾಗಿವೆ. ಹಾಗಾಗಿಯೇ, ಇವುಗಳನ್ನು ವಿರೋಧಿಸುವ ಚರ್ಚೆಗಳು ಎಷ್ಟೇ ತೀವ್ರವಾಗಿ ಮುಂಚೂಣೆಗೆ ಬಂದರೂ ಅವುಗಳನ್ನು ಮೌನಗೊಳಿಸುವ ಹುನ್ನಾರವನ್ನು ಮಾಡಲಾಯಿತು. ಸಾಮಾನ್ಯವಾಗಿ, ಪ್ರಿನ್ಸ್ಲಿ ಸ್ಟೇಟ್‍ಗಳನ್ನು ಏಕತ್ರಗೊಳಿಸುವ ಹಾಗೂ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ‘ವಿಶೇಷ ಸ್ಥಾನ’ವನ್ನು ಕಲ್ಪಿಸುವುದಕ್ಕೆ ವಿಶೇಷ ಗಮನವನ್ನು ನೀಡಲಾಯಿತು ಎಂದೂ ರಾಜ್ಯಗಳ ಪುನರ್ರಚನೆಯ ಹಿಂದಿನ ಉದ್ದೇಶಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಇರಲಿ, 2000ನೇ ಇಸ್ವಿಯಲ್ಲಿ ಛತ್ತೀಸ್ಘಡ್, ಜಾರ್ಖಂಡ್ ಹಾಗೂ ಉತ್ತರಾಂಚಲ್ ಹಾಗೂ ಈಚೆಗೆ ತೆಲಾಂಗಣ ಎಂಬೆಲ್ಲ ರಾಜ್ಯಗಳನ್ನು ಪುನರ್ರಚಿಸಲಾಯಿತು. ಈ ಎಲ್ಲ ರಾಜ್ಯಗಳನ್ನು ಭಾಷೆಯೇತರ ನೆಲೆಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಇಲ್ಲಿ ಅತ್ಯಂತ ಸ್ಪಷ್ಟವಾಗಿರುವ ಅಂಶ ಏನೆಂದರೆ, ರಾಜ್ಯಗಳ ರಚನೆಯ ರಾಜಕಾರಣಕ್ಕೆ ಒತ್ತಾಸೆಯಾಗಿ ಈ ಎಲ್ಲ ಹೊಸ ರಾಜ್ಯಗಳು ಮೈದೆರದವು. ಆದರೆ ಉತ್ತಮ ಆಡಳಿತವನ್ನು ನೀಡುವ ಕಾರಣವನ್ನು ಮುಂದಿಟ್ಟುಕೊಂಡು ಏನೇ ವಾದವನ್ನು ಮಾಡಿದರೂ, ಇದರ ಹಿಂದಿನ ರಾಜಕೀಯ ನಿಲುವುಗಳು ಮಾತ್ರ ಕಣ್ಣಿಗೆ ರಾಚುತ್ತವೆ.

ಜೊತೆಗೆ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಣ ನಂಟಸ್ತಿಕೆ, ಕೇಂದ್ರ-ರಾಜ್ಯಗಳ ಸಂಬಂಧ ಹಾಗೂ ಸಾಮಾಜಿಕ ಅಸ್ಮಿತೆಯ ಪ್ರಶ್ನೆಗಳು ನಿರಂತರವಾಗಿ ರಾಜಕೀಯ ಸಂಕಥನದ ಭಾಗಗಳಾಗಿಯೇ ಚರ್ಚೆಗೆ ಒಳಪಡುತ್ತವೆ. ಹೊರತು ಸಮೂಹಗಳ ಏಳ್ಗೆಯ ಪ್ರಶ್ನೆಗಳನ್ನಾಗಿ ಅವುಗಳನ್ನು ಚರ್ಚಿಸುವುದಿಲ್ಲ. ವಿಭಜನೆಯ ನಂತರದ ಭಾರತದಲ್ಲಿ, ರಾಷ್ಟ್ರೀಯ ಐಕ್ಯತೆಯ ಪ್ರಶ್ನೆಗಳು ಒಂದುಕಡೆ ಹಾಗೂ ಸಾಂಸ್ಕ್ರುತಿಕ ಭಿನ್ನತೆಗಳನ್ನು ಗುರುತಿಸುವ ತುಡಿತಗಳು ಮತ್ತೊಂದು ಕಡೆ ತೀವ್ರವಾಗಿ ನಮ್ಮನ್ನು ಕಾಡುತ್ತಿದ್ದರು, ನಾವು ಅವುಗಳನ್ನು ಭಾರತೀಯ-ರಾಷ್ಟ್ರೀಯ ಚೌಕಟ್ಟಿಗೆ ಸೀಮಿತಗೊಳಿಸಿ ನೋಡುವ ಪ್ರಯತ್ನವನ್ನೇ ಮಾಡುತ್ತ ಬಂದಿದ್ದೇವೆ. ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಗಳನ್ನೂ ಕೂಡ ಇದೇ ಚೌಕಟ್ಟಿಗೆ ಒಳಪಡಿಸಿದ್ದು ಮಾತ್ರ ವಿಪರ್ಯಾಸ. ಜನಾಂಗ-ಪ್ರಾದೇಶಿಕ ಅಸ್ಮಿತೆ ಹಾಗೂ ಉತ್ತಮ ಆಡಳಿತದ ನಡುವಣ ಸಂಬಂಧಗಳನ್ನು ಕುರಿತು ಮಾತ್ರ ಚಿಂತಿಸುವ ಕಡೆಗೆ ಇವತ್ತಿನ ಬೆಳವಣಿಗೆಗಳು ನಮ್ಮನ್ನು ಒತ್ತಾಯಿಸುತ್ತವೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕುರಿತ ಅಂಬೇಡ್ಕರ್ ಅವರ ವಿಶ್ಲೇಷಣೆಗಳಿಗೆ ಚಾರಿತ್ರಿಕ ಸನ್ನಿವೇಶವಿದೆ. ಈ ಚಾರಿತ್ರಿಕ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೂ ಇವತ್ತಿಗೂ ಈ ವಿಶ್ಲೇಷಣೆಗಳು ನಮ್ಮ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳನ್ನು ಅರಿಯಲು ಒತ್ತಾಸೆಯಾಗುತ್ತವೆ. ರಾಜ್ಯಾಡಳಿತವನ್ನು ಪ್ರಾದೇಶೀಕರಣಗೊಳಿಸುವ ಇರಾದೆಯಿಂದ ರಾಜ್ಯಗಳ ಪುನರ್ರಚನೆಯನ್ನು ಕೈಗೊಳ್ಳಲಾಗಿದೆ. ಪ್ರಾದೇಶಿಕ ಅಸ್ಮಿತೆಯನ್ನು ಹೊಂದುವ ತುಡಿತಕ್ಕೆ ಮುಖ್ಯವಾಗಿ ಈ ಮೂರು ಕಾರಣಗಳನ್ನು ಇಲ್ಲಿ ಗುರುತಿಸಬಹುದು.

ಮತದಾರರ ಪ್ರಾತಿನಿದ್ಯದಲ್ಲಿ ಬದಲಾವಣೆಯನ್ನು ತರುವ ಮೂಲಕ ಈಗಾಗಲೇ ರಾಜಕೀಯವಾಗಿ ನಿಶ್ಕ್ರಿಯಗೊಂಡಿದ್ದ ಇಲ್ಲವೇ ಆಯಾ ಪ್ರದೇಶದ ಜನರಲ್ಲಿ ಸುಪ್ತವಾಗಿದ್ದ ಪ್ರಾದೇಶಿಕತೆಯ ಹಪಾಹಪಿತನವನ್ನು ಪುನರುಜ್ಜೀವನಗೊಳಿಸುವುದಾಗಿತ್ತು. ಜಾತಿ, ಜನಾಂಗ, ಭಾಷೆಗಳನ್ನೇ ನೆಲೆಯಾಗಿಸಿಕೊಂಡ ರಾಜಕೀಯ ಪ್ರೇರಿತ ಅಭಿವ್ಯಕ್ತಿಯನ್ನು ಸಜ್ಜುಗೊಳಿಸುವ ಮೂಲಕ ಹೊಸದಾಗಿ ಮೈಪಡೆದ ರಾಜ್ಯಗಳು, ಸಾಮಾಜಿಕ ಒಡಕುಗಳಿಗೆ ನಾಂದಿ ಹಾಡಿದವು. ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಪಕ್ಷಗಳೆಂಬ ಯಾವುದೇ ಭೇದಗಳನ್ನು ಹೊಂದದೆ ಪ್ರಾದೇಶಿಕ ಕೇಂದ್ರಿತವಾದ ಚುನಾವಣೆಯ ಪ್ರಚಾರ ಮತ್ತು ನೀತಿಗಳನ್ನು ಹುಟ್ಟು ಹಾಕಲಾಗುತ್ತದೆ.

ಆದಾಯ ಮತ್ತು ಬಳಕೆಯ ವಿನ್ಯಾಸದಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವು ದಿನದಿಂದ ದಿನಕ್ಕೆ ತಲೆದೊರುತ್ತಿದೆ. ಪರಿಣಾಮವಾಗಿ ಸುಧಾರಣೋತ್ತರ ಕಾಲದಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆಗಳು ಉಲ್ಬಣಿಸುತ್ತಿವೆ ಎಂಬ ಗ್ರಹಿಕೆಗೆ ಇದು ಇಂಬು ನೀಡುತ್ತಿದೆ. ಕರಾವಳಿ ಮತ್ತು ಇತರೆ ಅಭಿವ್ರುದ್ಧಿ ಹೊಂದಿದ ಪ್ರದೇಶಗಳು ನಿಸ್ಸಂಶಯವಾಗಿ, ನಿರಂತರವಾಗಿ ಸಮಗ್ರ ಬೆಳವಣಿಗೆಯನ್ನು ಹೊಂದುತ್ತಿವೆ. ಹಾಗೂ ಇಂತಹ ಅವಕಶಾಗಳಿಂದ ವಂಚಿತವಾಗಿರುವ ಇನ್ನಿತರೆ ಪ್ರಾದೇಶಿಕ ಹೊರ ವಲಯಗಳಿಗೆ ಹೋಲಿಸಿದರೆ ಖಾಸಗಿ ಬಂಡವಾಳದ ಅಪಾರ ಹೂಡುವಿಕೆಯಿಂದಲೂ ಅಭಿವ್ರುದ್ಧಿ ಹೊಂದಿದ ಈ ಪ್ರದೇಶಗಳೇ ಮತ್ತೆ ಮತ್ತೆ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿವೆ.

ಆದರೆ ಈ ಪ್ರಾದೇಶಿಕ ಅಭಿವ್ರುದ್ಧಿಯಿಂದ ಹೊರಗುಳಿದ ಪ್ರಾದೇಶಿಕ ವಲಯಗಳು ಕಾನೂನು ಮತ್ತು ಸುವ್ಯವಸ್ಥೆಯಿಂದಲೂ ಬಾಧಿಸಲ್ಪಟ್ಟಿವೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳ ಕೊರತೆಯಿಂದಲೂ ಬಳಲುತ್ತಿವೆ.
ಸಂವಿಧಾನ ರಾಜ್ಯಗಳೊಳಗೆಯೇ ಸಂಪತ್ಭರಿತ ಪ್ರದೇಶಗಳು ಇದ್ದು, ಅಗಾಧ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು ಮತ್ತು ಪರಿಣಾಮಕಾರಿ ಬೆಳವಣಿಗೆಯನ್ನು ಹೊಂದುತ್ತಿದ್ದಾಗಲೂ, ಈ ಪ್ರದೇಶಗಳ ಮೇಲೆ ನಿರಂತರವಾಗಿ ಅವಲಂಭಿತವಾಗಿದ್ದ ಇತರೆ ಹಿಂದೂಳಿದ ಪ್ರದೇಶಗಳಿಗೆ ಯಾವುದೇ ಬಗೆಯ ಆದಾಯವನ್ನು ವರ್ಗಾಯಿಸುವುದನ್ನು ಈ ಸಂಪತ್ಭರಿತ ಪ್ರದೇಶಗಳು ನಿರಾಕರಿಸುತ್ತವೆ.

ಈ ಧೋರಣೆಗಳನ್ನು ವ್ಯಂಗವಾಗಿ ‘ಶ್ರೀಮಂತಿಕೆಯನ್ನು ಹಿಂಪಡೆಯುವ’ ಬಗೆಯನ್ನಾಗಿ ಇಲ್ಲಿ ನೋಡುತ್ತೇವೆ. ಇಲ್ಲಿಯ ಸ್ಥಳೀಯ ಮೇಲ್ವರ್ಗಗಳ ಆರೋಪ ಏನೆಂದರೆ, ರಾಜಕೀಯವಾಗಿ ಪ್ರಾಬಲ್ಯವನ್ನು ಹೊಂದಿರುವ ಇತರೆ ಪ್ರದೇಶದ ಮೇಲ್ವರ್ಗಗಳು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ತಾರತಮ್ಯ ಧೋರಣೆಗಳನ್ನು ಹೊಂದುತ್ತವೆ ಎಂಬುದಾಗಿದೆ.

ಈ ಮೇಲಿನ ಪ್ರಕ್ರಿಯೆಯ ಪರಿಣಾಮವಾಗಿ ಭಾರತದ ಫೆಡರಲ್ ತಾತ್ವಿಕತೆಯಲ್ಲಿ ಗಮನಾರ್ಹವಾದ ಪಲ್ಲಟಗಳು ಏರ್ಪಟ್ಟಿರುತ್ತವೆ. ಈ ಪಲ್ಲಟಗಳು ಹಲವು ಸ್ವರೂಪದಲ್ಲಿ ಪ್ರತಿಫಲಿಸಿರುವುದನ್ನು ಈ ಮುಂದಿನ ಬೆಳವಣಿಗೆಗಳ ಮೂಲಕ ನೋಡುತ್ತೇವೆ. ಅಂದರೆ;
ಪ್ರಾದೇಶಿಕ ಅಸ್ಮಿತೆ, ಸಂಸ್ಕ್ರುತಿ ಹಾಗೂ ಭೌಗೋಳಿಕ ಭಿನ್ನತೆಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಆಡಳಿತಾತ್ಮಕ ವಲಯಗಳನ್ನಾಗಿ ರೂಪಿಸುವುದಕ್ಕೆ ಇವುಗಳು ಮಹತ್ವದ ಮಾನದಂಡಗಳಾಗಿರುತ್ತವೆ.

ಪ್ರತ್ಯೇಕ ರಾಜ್ಯಗಳ ಕೋರಿ ನಡೆಸುವ ಚಳವಳಿಗಳು ಇವತ್ತು ಯಾವುದೇ ಬಗೆಯ ಭಾಷಾ ದುರಾಭಿಮಾನ ಇಲ್ಲವೇ ಪ್ರಾಂತೀಯ ಕಳಂಕಗಳನ್ನಾಗಿ ನೋಡುವ ಕಾಲವಲ್ಲವಿದು. ದಿಟ, ಹಿಂದೊಂದು ಕಾಲದಲ್ಲಿ ಇದನ್ನು ರಾಷ್ಟ್ರ ವಿರೋಧಿ ನಿಲುವನ್ನಾಗಿ ನೋಡುವ ಕ್ರಮವೊಂದಿತ್ತು.

ಇವತ್ತು ಹೊಸ ರಾಜ್ಯಗಳ ಪ್ರಸ್ತಾಪವು ಭಾಷಾ ತತ್ವಗಳ ಆಧಾರದ ಮೇಲೆ ಆಗುತ್ತಿಲ್ಲ. ಬದಲಾಗಿ ಅಭಿವ್ರುದ್ಧಿ ಮತ್ತು ಉತ್ತಮ ಆಡಳಿತವನ್ನು ಕೊಡುವ ನೆಪದಲ್ಲಿ ಮುಂಚೂಣೆಗೆ ಬರುತ್ತಿವೆ. ಅದರೆ ಮೊದಲ ಹಂತದ ರಾಜ್ಯಗಳ ಪುನರ್ರಚನೆಯು ಭಾಷೆಗಳನ್ನೇ ಆಧಾರವಾಗಿಟ್ಟುಕೊಂಡು ನಡೆದಿತ್ತು ಎಂಬುದು ಗಮನಾರ್ಹ.

ಆದರೆ ವೈರುಧ್ಯವೇನಂದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರದೇಶಗಳಲ್ಲಿ ನೆಲೆಗೊಂಡಿದ್ದ ಬೇರೆ ಬೇರೆ ಒಳನುಡಿಗಳು ತಮ್ಮದೆಯಾದ ತಾಯ್ನೆಲವನ್ನು ಹೊಂದುವ ಇರಾದೆಯನ್ನೂ ತಾಳಿದ್ದವು. ಬುಂದೆಲ್ಖಂಡ, ರುಹೆಲ್ಖಂಡ ಹಾಗೂ ಮಿಥಿಲಾಂಚಲ್ ಪ್ರದೇಶಗಳು ತಮ್ಮ ಒಳನುಡಿಗಳಲ್ಲಿ ಹುದುಗಿರುವ ಸಂಸ್ಕ್ರುತಿ ಹಾಗೂ ಸಾಹಿತ್ಯದ ವೈಶಿಷ್ಟ್ಯ ಮತ್ತು ಶ್ರೀಮಂತಿಕೆಯನ್ನು ಕಂಡರಿಸುವ ಹಂಬಲವೂ ಇಂತಹ ಇರಾದೆಗಳಲ್ಲಿ ಅಡಕವಾಗಿದ್ದವು. ಕಳೆದ ದಶಕದಲ್ಲಿ ಅಂದರೆ ನವೆಂಬರ್ 2000ನೇ ಇಸ್ವಿಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ಛತ್ತೀಸ್ಘಡ್, ಉತ್ತರಾಂಚಲ್ ಹಾಗೂ ಜಾರ್ಖಂಡ್ ಎಂಬ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.

ಈ ಮೂರು ರಾಜ್ಯಗಳು ಮೈದಾಳಲು ಕಾರಣ, ಫೆಡರಲ್ ಚಿಂತನೆಯಲ್ಲಿ ಏರ್ಪಟ್ಟ ಸಾಂಸ್ಕ್ರುತಿಕ-ರಾಜಕೀಯ ಪಲ್ಲಟಗಳೇ ಎಂದು ಹೇಳಬೇಕು. ಈ ಹೊಸ ರಾಜ್ಯಗಳ ಪುನರ್ರಚನೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿರುವುದನ್ನು ಮುಖ್ಯವಾಗಿ ಇಲ್ಲಿ ನೋಡಬಹುದು. ರಾಷ್ಟ್ರೀಯ ಪಕ್ಷಗಳ ಏಕಮುಖಿ ನಿಲುವುಗಳಿಂದ ಹಾಗೂ ತೀವ್ರವಾಗಿ ಬೆಳೆಯುತ್ತಿರುವ ರಾಜಕೀಯ ಸ್ಪರ್ಧಾತ್ಮಕ ವಾತಾವರಣದಿಂದ ತಪ್ಪಿಸಿಕೊಳ್ಳುವ ತಂತ್ರಗಳನ್ನೂ ಇಲ್ಲಿ ಕಾಣಬಹುದು. ಅಂದರೆ ಯಾವುದೇ ಒಂದು ರಾಷ್ಟ್ರೀಯ ಪಕ್ಷವು ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವುದರಿಂದ, ಪ್ರಾದೇಶಿಕ ಕಾಳಜಿಗಳನ್ನು ಈ ರಾಷ್ಟ್ರೀಯ ಪಕ್ಷಗಳು ಹೊಂದಿರಲಾರವು ಎಂಬ ಅನುಮಾನವೂ ಇಲ್ಲಿದೆ.

2009 ಡಿಸೆಂಬರ್‍ನಲ್ಲಿ ಪ್ರತ್ಯೇಕ ತೆಲೆಂಗಾಣ ರಾಜ್ಯದ ಹೊಸ ಬೇಡಿಕೆಯು ತೀವ್ರ ಸ್ವರೂಪವನ್ನು ಪಡೆದುಕೊಂಡಾಗ, ಕೇಂದ್ರ ಸರಕಾರವು ಈ ಬೇಡಿಕೆಯನ್ನು ಪರಿಗಣಿಸುವಾಗ, ಇನ್ನೂ ಹಲವಾರು ಹೊಸ ಮತ್ತು ಹಳೆ ಬೇಡಿಕೆಗಳು ಮುಂಚೂಣೆಗೆ ಬಂದವು. ಉದಾ.ಗೆ ಕರ್ನಾಟಕದಲ್ಲಿ ಕೂರ್ಗ್, ಬಿಹಾರದಲ್ಲಿ ಮಿಥಿಲಾಂಚಲ್, ಗುಜರಾತಿನಲ್ಲಿ ಸೌರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಗೋರ್ಖಲ್ಯಾಂಡ್ ಹಾಗೂ ಕಾಮ್ಟಪೂರ್ ಮತ್ತು ಮಹಾರಾಷ್ಟ್ರದಲ್ಲಿ ವಿದರ್ಭ ಮೊದಲಾದ ಪ್ರದೇಶಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನು ಮುಂದಿಟ್ಟಿರುವುದು ಈಗ ಇತಿಹಾಸ. ತಮ್ಮ ತಾಯ್ನೆಲದಿಂದ ಪ್ರತ್ಯೇಕತೆಯನ್ನು ಬಯಸುವುದರ ಹಿಂದೆ ಕೇವಲ ಭಾಷಿಕ ಕಟ್ಟಾಭಿಮಾನ ಮಾತ್ರ ಇರಲಾರದು ಎಂಬುದು ಇಲ್ಲಿ ಅತ್ಯಂತ ನಿಚ್ಚಳವಾಗಿದೆ.

ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಈಗಾಗಲೇ ಪರಿಗಣಿಸಿದ್ದರೂ, ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ನೆಲೆ ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇರುವುದನ್ನು ನಾವು ಯಾರಾದರೂ ಮನಗಾಣುತ್ತೇವೆ. ಪ್ರಜಾಸತ್ತಾತ್ಮಕ ಅರಿವು ಮತ್ತು ಕ್ರಿಯೆಗಳು ಇನ್ನೂ ಪಕ್ವಗೊಳ್ಳುವ ಜರೂರಿದೆ. ಭಾಷೆಗಳ ಬಗೆಗೆ ಭಾರತವು ತಾಳಿರುವ ನಿಲುವುಗಳೇ ಇದಕ್ಕೆ ಸ್ಪಷ್ಟ ನಿದರ್ಶನ.

ಹಾಗಾಗಿ ಭಾರತದ ಇವತ್ತಿನ ಭಾಷಿಕ ಸನ್ನಿವೇಶವನ್ನು ಅರಿಯಲು, ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಮರುಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಭಾಷಾ ನೀತಿಗಳು ಹಲವು ಬಗೆಯ ಬದಲಾವಣೆಗೆ ಒಳಪಟ್ಟಿವೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯೇ ಇದಕ್ಕೆ ಅತ್ಯಂತ ಮಹತ್ವದ ಸಾಕ್ಷಿಯಾಗಿದೆ. ಭಾರತವು ಒಂದು ಅಪ್ಪಟ ಬಹುಭಾಷಿಕ ದೇಶವಾಗಿದೆ. ಈ ದಿಟ ಬಹುಭಾಷಿಕತೆಯನ್ನು ಅರಿಯಲು ಸಾಕಷ್ಟು ಚಿಂತಕರು ತಮ್ಮ ಚಿಂತನೆಗಳನ್ನು ಬೆಳೆಸಿದ್ದಾರೆ.

ಇಂತಹ ಪ್ರಖ್ಯಾತ ಚಿಂತಕರು ಮತ್ತು ನೀತಿ ನಿರೂಪಕರನ್ನು ಬದಿಗಿಟ್ಟು, ಹೊಸ ಬಗೆಯ ಬಹುಭಾಷಿಕತೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಭಾಷಾವಾರು ಪ್ರಾಂತಗಳ ಪುನರ್ರಚನೆಯ ಬಗೆಗೆ ಈ ಚಿಂತಕರ ನಿಲುವುಗಳು ಅತ್ಯಂತ ವ್ಯತರಿಕ್ತವಾಗಿದ್ದವು.
ಅಂಬೇಡ್ಕರ್ ಅವರು ಭಾಷಾವಾರು ರಾಜ್ಯಗಳ ರಚನೆಯ ಮುಖ್ಯ ಪ್ರತಿಪಾದಕರು. ಆದರೆ ಈ ಭಾಷಾವಾರು ರಾಜ್ಯಗಳು ತಮ್ಮ ತಮ್ಮ ರಾಜ್ಯ ಭಾಷೆಗಳಿಗೆ (ಉದಾ.ಗೆ ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು ಮತ್ತು ಆಂದ್ರಪ್ರದೇಶ ಹಾಗೂ ತೆಲಾಂಗಣದಲ್ಲಿ ತೆಲುಗು ಇತ್ಯಾದಿ…) ಬದಲಾಗಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂಬ ನಿಲುವನ್ನು ಹೊಂದಿದ್ದರು.

ಭಾರತವು ಮಧ್ಯಕಾಲೀನ ಭಾರತದ ಮರುರೂಪವನ್ನು ಪಡೆಯುವ ಅಪಾಯದಿಂದ ತಪ್ಪಿಸಲು, ಅಂಬೇಡ್ಕರ್ ಅವರು ಈ ನಿಲುವನ್ನು ತಾಳುತ್ತಾರೆ. ಏಕೆಂದರೆ, “ನಮ್ಮ ಭಾರತ ಆಧುನಿಕ ಭಾರತವಾಗಿ ಉಳಿಯದೇ ಪರಸ್ಪರ ವೈರತ್ವ ಮತ್ತು ಯುದ್ಧಗಳಲ್ಲಿ ಮುಳುಗಿರುವ ಅನೇಕ ದೇಶಗಳನ್ನೊಳಗೊಂಡ ಮಧ್ಯಕಾಲೀನ ಭಾರತವಾಗಿ ಅದು ಪರಿಣಮಿಸುತ್ತದೆ”. ಎಂಬ ಅಭಿಪ್ರಾಯ ಅವರದಾಗಿತ್ತು. ಮತ್ತು ಈ ಅಭಿಪ್ರಾಯವು ಇವತ್ತು ನಾವು ಭಾಷಿಕವಾಗಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ವಿಶ್ಲೇಷಿಸಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.

ಹೌದು, ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿಯೇ ರಚನೆಗೊಂಡ ಭಾರತದ ಸಂವಿಧಾನವು, ಅವರೇ ಊಹಿಸಿದ ಆತಂಕವನ್ನೂ ಲೆಕ್ಕಿಸದೇ ಇವತ್ತು ಸಂವಿಧಾನವು ಆಯಾ ರಾಜ್ಯಗಳ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ನಮಗೆ ಒದಗಿಸಿದೆ.

ಭಾಷಾವಾರು ರಾಜ್ಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿಯೇ ಅಪಾಯಗಳು ಅಡಗಿರುತ್ತವೆ ಎಂಬ ಈ ವಿಚಾರವು ಎಷ್ಟೊಂದು ಸುಸ್ಪಷ್ಟವಾದುದೋ, ನಾವು ಭಾಷಾವಾರು ರಾಜ್ಯಗಳನ್ನು ರಚಿಸದಿದ್ದರೂ ಅದಕ್ಕಿಂತ ಹೆಚ್ಚಿನ ಅಪಾಯಕ್ಕೆ ಈಡಾಗುತ್ತೇವೆ ಎಂಬುದು ಕೂಡ ಅಷ್ಟೇ ನಿಖರವಾದ ನಿಲುವಾಗಿದೆ. ಈ ವಿಶ್ಲೇಷಣೆಗಳನ್ನು ಅಂಬೇಡ್ಕರ್ ಅವರು ತಮ್ಮ ಭಾಷಾವಾರು ರಾಜ್ಯಗಳನ್ನು ಕುರಿತ ಚಿಂತನೆಗಳು (1955) ಅನ್ನುವ ಬರಹದಲ್ಲಿ ಮಂಡಿಸುತ್ತಾರೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಏರ್ಪಡುವ ಪರಿಣಾಮಗಳನ್ನು ಒಂದಿಲ್ಲ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಬಹುದು. ಆದರೆ ಈ ಭಾಷಾವಾರು ಪ್ರಾಂತಗಳನ್ನು ರಚಿಸದ ಕಾರಣ ಎದುರಾಗುವ ಬಿಕ್ಕಟ್ಟುಗಳನ್ನು ನಿರ್ವವಹಿಸುವುದು ಅತ್ಯಂತ ದುಸ್ತರ ಎಂಬ ಅಭಿಪ್ರಾಯವನ್ನೂ ಇವರು ವ್ಯಕ್ತಪಡಿಸುತ್ತಾರೆ. ಇನ್ನೂ ಮುಂದುವರೆದು ಅಂಬೇಡ್ಕರ್ ಅವರು ಹೇಳುವುದೇನೆಂದರೆ, “ವಿವೇಕಶೀಲನೂ ದ್ರುಢ ಮನೋಭಾವದವನೂ ಅದ ಯಾವುದೇ ಮುತ್ಸದ್ದಿ ರಾಜಕಾರಣಿ (ಸ್ಟೇಟ್ಸ್‍ಮನ್)ಯು ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಲ್ಲನು.

ಆದರೆ ಈ ಭಾಷಾವಾರು ವಿಂಗಡಣೆಗೆ ಒಳಗಾಗದ ಸಂಕೀರ್ಣ ಭಾರತದಲ್ಲಿ ತಲೆದೊರುವ ಅಪಾಯಗಳು, ಎಷ್ಟೇ ಮುತ್ಸದ್ದಿ ರಜಕಾರಣಿಯಾಗಿದ್ದರೂ ಅವನ ನಿಯಂತ್ರಕ್ಕೆ ಈ ಅಪಾಯಗಳು ಸಿಗಲಾರವು” ಎಂಬ ಕಟು ಸತ್ಯವನ್ನು ಅಂಬೇಡ್ಕರ್ ಅವರು ನಮಗೆ ಇಲ್ಲಿ ಮನವರಿಕೆ ಮಾಡುತ್ತಾರೆ. ನಮ್ಮ ಗ್ರಹಿಕೆಗೆ ಹೊರತಾದ ಬಿಕ್ಕಟ್ಟುಗಳು ಸಂಕೀರ್ಣ ಬಹುಭಾಷಿಕ ಸನ್ನಿವೇಶದಲ್ಲಿ (ಮಧ್ಯಕಾಲೀನ ಭಾರತ) ಹುದುಗಿರುತ್ತವೆ ಎಂಬ ಕಟು ವಾಸ್ತವವನ್ನು ಅರಿಯುವುದರ ಜೊತೆಗೆ, ಪ್ರಜಾಪ್ರಭುತ್ವ (ಬಹುಭಾಷಿಕ) ಭಾರತದಲ್ಲಿ ಎದುರಾಗುವ ಭಾಷಿಕ ಬಿಕ್ಕಟ್ಟುಗಳನ್ನು ನಿರ್ವಹಿಸುವ ಕಾರ್ಯಯೋಜನೆಗಳನ್ನು ನೆಲೆಗೊಳಿಸುವ ಅಗತ್ಯವಿದೆ ಎಂಬ ಅನಿವಾರ್ಯತೆಯನ್ನೂ ಮನಗಾಣುತ್ತೇವೆ.

‘ಯಾವುದೇ ಭಾಷಾವಾರು ರಾಜ್ಯ ತನ್ನ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಹೊಂದುವ ಮೂಲಕ ಸ್ವತಂತ್ರ ರಾಷ್ಟ್ರವಾಗಿ ಬೆಳೆಯಬಹುದು. ಸ್ವತಂತ್ರ ರಾಜ್ಯ ಮತ್ತು ಸ್ವತಂತ್ರ ರಾಷ್ಟ್ರಗಳ ನಡುವಣ ದಾರಿ ಅತ್ಯಂತ ಕಿರಿದಾದುದು. ಒಂದು ವೇಳೆ ಹೀಗಾದರೆ, ನಮ್ಮ ಭಾರತವು ಆಧುನಿಕ ಭಾರತವಾಗಿ ಉಳಿಯದೇ, ಹಲವು ದೇಶಗಳನ್ನೊಳಗೊಂಡು ನಿರಂತರವಾಗಿ ಪರಸ್ಪರ ವೈರತ್ವ ಮತ್ತು ಯುದ್ಧದಲ್ಲಿ ಮುಳುಗಿರುವ ಮಧ್ಯಕಾಲೀನ ಭಾರತವಾಗಿ ಮೈದಾಳುತ್ತದೆ’.

ಭಾಷಾವಾರು ಪ್ರಾಂತಗಳ ಪುನರ್ರಚನೆಯ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸುವ ದಾರಿಗಳನ್ನು ಅಂಬೇಡ್ಕರ್ ಅವರು ಅತ್ಯಂತ ಖಚಿತವಾಗಿ ಇಲ್ಲಿ ತೋರಿಸಿರುತ್ತಾರೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕೇವಲ ಭಾವನಾತ್ಮಕ ವಿದ್ಯಮಾನವನ್ನಾಗಿ ಪರಿಗಣಿಸದೇ ಅದನ್ನೊಂದು ವೈಜ್ಞಾನಿಕ ಮತ್ತು ತಾತ್ವಿಕ ನಿಲುವನ್ನಾಗಿ ನೋಡಿದರೆ, ಅಂಬೇಡ್ಕರ್ ಈ ಕುರಿತು ಏನನ್ನು ಸೂಚಿಸುತ್ತಿದ್ದಾರೆ, ಯಾಕೇ ಇವರ ವಿಶ್ಲೇಷಣೆಗಳು ನಮಗೆ ಇವತ್ತು ವ್ಯತರಿಕ್ತವಾಗಿ ಕಾಣುತ್ತವೆ ಎಂಬುದನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯ ಪ್ರಕ್ರಿಯೆಯಲ್ಲಿ ಅಪಾಯಗಳು ಇರುವಂತೆ, ಭಾಷಾವಾರು ಪ್ರಾಂತಗಳನ್ನು ಪುನರ್ರಚಿಸದೇ ಹೋದರು ಅಪಾಯಗಳು ಹೇಗೆ ಅಡಕವಾಗಿರುತ್ತವೆ ಎಂಬ ವೈಜ್ಞಾನಿಕ ದಿಟವನ್ನು ಇಲ್ಲಿ ಮನಗಾಣುತ್ತೇವೆ.

ಹಾಗಾದರೆ ಅಂಬೇಡ್ಕರ್ ಅವರು ಏನನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇವರ ವಿಶ್ಲೇಷಣೆಗಳು ಅತ್ಯಂತ ನಿಚ್ಚಳವಾಗಿರುತ್ತವೆ. ಅಂದರೆ ಬಹುಭಾಷಿಕ ಸನ್ನಿವೇಶವನ್ನು ನಿಭಾಯಿಸುವ ದಾರಿಗಳನ್ನು ತೋರಿಸುವ ಜೊತೆಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿನ್ಯಾಸಗಳನ್ನು ಮರುರೂಪಿಸಿಕೊಳ್ಳುವ ಬಗೆಗಳನ್ನೂ ಇಲ್ಲಿ ಕಂಡರಿಸುತ್ತಾರೆ. ಹಾಗಾಗಿ ಮಧ್ಯಕಾಲೀನ ಭಾರತದ ಸಂದರ್ಭಕ್ಕೆ ಈಡಾಗುವ ಅಪಾಯವನ್ನು ತಪ್ಪಿಸುವ ತಂತ್ರಗಳನ್ನು ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣುತ್ತೇವೆ.

ಹಾಗಾಗಿ ಪುನರ್ರಚಿತ ರಾಜ್ಯಗಳಲ್ಲಿ ಎದುರಾಗುವ ಭಾಷಿಕ ಅಪಾಯಗಳಿಂದ ತಪ್ಪಿಸಲು, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಬದಲಾಗಿ ಹಿಂದಿ ಇಲ್ಲವೇ ಇಂಗ್ಲಿಶು ಭಾಷೆಗಳನ್ನು ಬಳಸುವ ಪ್ರಸ್ತಾವನೆಯನ್ನು ಅಂಬೇಡ್ಕರ್ ಮಂಡಿಸುತ್ತಾರೆ. ಅಂದರೆ, “ಈ ಅಪಾಯಗಳನ್ನು ಬಗೆಹರಿಸುವುದು ಹೇಗೆ? ಇಂತಹ ಅಪಾಯಗಳನ್ನು ಬಗೆಹರಿಸಲು ಈ ಸದ್ಯ ನನಗೆ ಅನ್ನಿಸುವ ಏಕೈಕ ಉಪಾಯವೇನೆಂದರೆ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ಸಂವಿಧಾನದಲ್ಲಿಯೇ ಒದಗಿಸಕೂಡದು.

ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಹಿಂದಿಯನ್ನು ಬಳಸಬೇಕು. ಭಾರತವು ಈ ನಿಲುವಿಗೆ ಹೊಂದಿಕೊಳ್ಳುವರಿಗೆ ಇಂಗ್ಲಿಶನ್ನು ಈ ಉದ್ದೇಶಕ್ಕಾಗಿ ಬಳಸಬೇಕು. ಭಾರತೀಯರು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವವರೇ? ಒಂದುಪಕ್ಷ ಇಲ್ಲವಾದಲ್ಲಿ, ಭಾಷಾವಾರು ರಾಜ್ಯಗಳು ಸಹಜವಾಗಿಯೇ ಅಪಾಯಕ್ಕೆ ಈಡಾಗುತ್ತವೆ”. ಹಾಗಾದರೆ ಅಂಬೇಡ್ಕರ್ ಅವರ ಈ ಮಾತುಗಳು ಏನನ್ನು ಸಾಬೀತಪಡಿಸುತ್ತವೆ ಎಂಬ ಅನುಮಾನವು ನಮ್ಮಲ್ಲಿ ಉಂಟಾಗದೇ ಇರಲಾರದು. ಸಮಾನತೆ, ಸ್ವಾತಂತ್ರ ಮತ್ತು ಬಾಂಧವ್ಯ ಎಂಬೀ ತ್ರಿವಳಿ ತತ್ವಗಳನ್ನು ಮಂಡಿಸುವ ಅಂಬೇಡ್ಕರ್ ಹಾಗೂ ಹಿಂದಿಯನ್ನು ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಪ್ರಸ್ತಾಪಿಸುವ ಅಂಬೇಡ್ಕರ್ ಅವರ ನಿಲುವುಗಳ ನಡುವೇ ಯಾವುದೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಇಲ್ಲಿ ಕೇವಲ ಏರುಪೇರುಗಳು ಇಲ್ಲವೇ ವಿರೋಧಭಾಸಗಳು ಇರುವಂತೆ ಭಾಸವಾಗುತ್ತದೆ.

ಮೂಲಭೂತ ಹಕ್ಕುಗಳು (ಫಂಡಾಮೆಂಟಲ್ ರೈಟ್ಸ್) ಮತ್ತು ರಾಜ್ಯ ನಿರ್ದೇಶಕ ತತ್ವಗಳ (ಸ್ಟೇಟ್ ಡಿರೆಕ್ಟಿವ್ ಪ್ರಿನ್ಸಿಪಲ್ಸ್) ನಡುವೆ ತಾತ್ವಿಕ ಹಾಗೂ ಪ್ರ್ಯಾಗ್ಮಾಟಿಕ್ (ಪ್ರಯೋಜನಕಾರಿ ತತ್ವ) ನಂಟನ್ನು ಕಲ್ಪಿಸಿರುವ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡರೆ ಏನೆಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಬಿಕ್ಕಟ್ಟುಗಳು ಎದುರಾಗುತ್ತವೆ ಎಂಬ ವಾಸ್ತವ ಗೊತ್ತಿರಲಿಲ್ಲವೇ? ದಿಟ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡಿದ್ದರಿಂದ, ಯಾವುದೇ ವ್ಯತ್ಯಾಸವನ್ನು ನಾವು ಇವತ್ತು ಕಾಣುತ್ತಿಲ್ಲ. ಅಂದರೆ ಕಲ್ಯಾಣ ರಾಜ್ಯಗಳನ್ನು ಕಟ್ಟುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಲಾರೆ.

ಹಾಗಾದರೆ, ಅಂಬೇಡ್ಕರ್ ಅವರ ನಿಲುವುಗಳನ್ನು ಹೇಗೆ ವಿಶ್ಲೇಷಿಸಬೇಕು? ಯಾವ ತಾತ್ವಿಕ ವಿನ್ಯಾಸವನ್ನು ನೆಲೆಯಾಗಿಸಿಕೊಂಡು ಇವರ ಈ ನಿಲುವನ್ನು ಬಿಡಿಸಿ ನೋಡಬೇಕು? ಹಿಂದು ಧರ್ಮ ಮತ್ತು ಶಾಸ್ತ್ರಗಳಲ್ಲಿ ಹುದುಗಿರುವ ಜೀವವಿರೋಧಿ ಧೋರಣೆಗಳ ವಿರುದ್ಧ ತಮ್ಮ ಬದುಕಿನ ಉದ್ದಕ್ಕೂ ಹೋರಾಡಿದ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಳ್ಳುವುದರಿಂದ, ಏನೆಲ್ಲ ಸಾಮಾಜಿಕ ಭಾಷಾಶಾಸ್ತ್ರೀಯ ಅಪಾಯಗಳು (ಸೋಶಿಯೋಲಿಂಗ್ವಿಸ್ಟಿಕ್ ಥ್ರೆಟ್ಸ್) ಎದುರಾಗುತ್ತವೆ ಎಂಬ ಕಟು ವಾಸ್ತವ ಅಂಬೇಡ್ಕರ್ ಅವರಿಗೆ ಗೋಚರಿಸಲಿಲ್ಲವೇ? ನಿಶ್ಚಿತವಾಗಿಯೂ ನಾನು ಇಲ್ಲವೆಂದು ಹೇಳಲಾರೆ. ಅಂಬೇಡ್ಕರ್ ಅವರ ಕಣ್ನೋಟದಲ್ಲಿ ಅಧಿಕ್ರುತ ರಾಜ್ಯ ಭಾಷೆಯೆಂಬುದು ಅದೊಂದು ಸಂವಿಧಾನಾತ್ಮಕ ಕಾಯಿದೆ.

ಕಾಯಿದೆಯ ಕಣ್ಣಲ್ಲಿ ಎಲ್ಲರೂ ಸಮಾನರೇ ಹಾಗಾಗಿ ಅಧಿಕ್ರುತ ರಾಜ್ಯ ಭಾಷೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಅಡಕಗೊಳಿಸಿದರೆ ಮಾತ್ರ ಸಾಲದು. ಬದಲಾಗಿ ಅದನ್ನೊಂದು ಸಾಮಾಜಿಕ ತತ್ವಶಾಸ್ತ್ರೀಯ ಚೌಕಟ್ಟನ್ನಾಗಿ ಗ್ರಹಿಸಬೇಕು. ಆದ್ದರಿಂದ ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯವನ್ನು ಸಾಮಾಜಿಕ ತತ್ವಶಾಸ್ತ್ರೀಯ ವಿನ್ಯಾಸಗಳನ್ನಾಗಿ ಮಂಡಿಸಿದರು. ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳ ನಡುವಣ ನಂಟಸ್ತಿಕೆ ಹೇಗಿರಬೇಕು ಮತ್ತು ಅಂತಹದೊಂದು ನಂಟಸ್ತಿಕೆಯನ್ನು ತರುವ ಮೂಲಕ ಮಾತ್ರ ಸಮಾನ ಸಮಾಜಗಳನ್ನು ಕಟ್ಟುವುದಕ್ಕೆ ಸಾಧ್ಯವೆಂಬ ತತ್ವವನ್ನು ಅತ್ಯಂತ ಖಚಿತವಾಗಿ ಮಂಡಿಸಿರುವುದಕ್ಕೂ ಇವರ ಈ ನಿಲುವೇ ಕಾರಣವಾಗಿದೆ.

ಹೌದು ಈ ಎಲ್ಲ ಚರ್ಚೆಗಳು ಹಾಗೂ ಅಂಬೇಡ್ಕರ್ ಅವರು ಮಂಡಿಸಿದ ಪ್ರಸ್ತಾವನೆಯನ್ನೂ ಮೀರಿ ಇವತ್ತು ಭಾರತದ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳನ್ನೇ ಅಧಿಕ್ರುತ ಭಾಷೆಗಳನ್ನಾಗಿ ಬಳಸುತ್ತಿವೆ. ಅಂದರೆ ಕರ್ನಾಟಕದಲ್ಲಿ ಕನ್ನಡ, ಆಂದ್ರಪ್ರದೇಶ ಮತ್ತು ತೆಲಾಂಗಣದಲ್ಲಿ ತೆಲುಗು ಹಾಗೂ ತಮಿಳುನಾಡಿನಲ್ಲಿ ತಮಿಳು ಭಾಷೆಗಳನ್ನು ತಮ್ಮ ಅಧಿಕ್ರುತ ರಾಜ್ಯ ಭಾಷೆಗಳನ್ನಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯಾವ ರಾಜ್ಯಗಳಲ್ಲಿಯೂ ಕೂಡ ಇವತ್ತು ರಾಷ್ಟ್ರೀಯ ಅಪಐಕ್ಯತೆಯನ್ನಾಗಲೀ ಇಲ್ಲವೇ ಮಧ್ಯಕಾಲೀನ ಪರಿಸ್ಥಿತಿಯನ್ನು ಉಂಟು ಮಾಡುವ ಯಾವುದೇ ಅಪಾಯಗಳು ನಮಗೆ ಗೋಚರಿಸುತ್ತಿಲ್ಲ ಎಂಬ ವಾದಗಳೂ ಇವತ್ತು ಮುಂಚೂಣೆಯಲ್ಲಿವೆ.

ಹೌದು ರಾಜಕೀಯವಾಗಿ ಮಾತ್ನಾಡುವಾಗ ಈ ವಾದವು ಸರಿಯಾಗಿಯೇ ಕಾಣುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ದಿನದಿಂದ ದಿನಕ್ಕೆ ತಲೆದೊರುತ್ತಿರುವ ಅಸಮಾನತೆಯ ಸವಾಲುಗಳನ್ನು ಪರಿಶೀಲಿಸಿ ನೋಡಿದಾಗ, ಅಪಐಕ್ಯತೆಯ ಸ್ವರೂಪ ಮತ್ತು ಮಧ್ಯಕಾಲೀನ ಸಾಮಾಜಿಕ-ರಾಜಕೀಯ ಸನ್ನಿವೇಶದ ವಿನ್ಯಾಸಗಳು ನಿಚ್ಚಳಗೊಳ್ಳುತ್ತವೆ. ಮಧ್ಯಕಾಲೀನ ಸನ್ನಿವೇಶವನ್ನು ಕೇವಲ ಪರಸ್ಪರ ಯುದ್ಧ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವುದಲ್ಲ. ಇವತ್ತು ನಡೆಯುತ್ತಿರುವ ಧಾರ್ಮಿಕ ಸಾಮಾಜಿಕ ಸಂಘರ್ಷ ಹಾಗೂ ಅಸಹನೆಯ ವಿನ್ಯಾಸಗಳನ್ನು ಗಮನಿಸಿದಾಗ ನಮ್ಮ ಪ್ರಸ್ತುತ ಭಾರತವು ದಿಟವಾಗಿಯೂ ಆಧುನಿಕಗೊಂಡದೆಯೇ ಇಲ್ಲವೇ ಮಧ್ಯಕಾಲೀನ ಭಾರತವಾಗಿಯೇ ಇನ್ನೂ ಉಳದಿದೆ ಎನ್ನುವುದನ್ನು ಪತ್ತೆಹಚ್ಚಿ ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು

Published

on

  • ರುದ್ರಪ್ಪ ಹನಗವಾಡಿ

ದೆಲ್ಲ ಹೊರಗಿನದಾದರೆ ನಮ್ಮ ವಿಭಾಗದಲ್ಲಿ ಸ್ವಲ್ಪ ಬದಲಾವಣೆಗಳಾಗಿದ್ದವು. ನಮ್ಮ ಜೊತೆಗಿದ್ದ ಡಾ. ಕೆ.ಎಂ. ನಾಯ್ಡು ಅವರು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದ ಹೊಸ ಸ್ನಾತಕೋತ್ತರ ಕೇಂದ್ರಕ್ಕೆ ಮುಖ್ಯಸ್ಥರಾಗಿ ಆಯ್ಕೆಯಾಗಿ ಹೋಗಿದ್ದರು.

ನಾನು ಎಂ.ಎ. ಓದುವಾಗ ನನಗೆ ಪ್ರಾಧ್ಯಾಪಕರಾಗಿದ್ದ ಡಾ. ಬಿ.ಎಸ್. ಶ್ರೀಕಂಠಾರಾಧ್ಯರು ಇಲಾಖೆಗೆ ಮುಖ್ಯಸ್ಥರಾಗಿ ಬಂದಿದ್ದರು. ನನ್ನ ಬಗ್ಗೆ ನಮ್ಮ ವಿಭಾಗದಲ್ಲಿ ಮತ್ತು ಮೈಸೂರಿನ ಗಂಗೋತ್ರಿ ವಿಭಾಗದಲ್ಲಿ ನಾನು ಮದುವೆಯಾಗಿರುವ ಬಗ್ಗೆ ಅಸಮಾಧಾನವಿತ್ತು. ಅದನ್ನೆಲ್ಲ ತಲೆಯಲ್ಲಿ ತುಂಬಿಕೊಂಡು ಬಂದಿದ್ದ ಬಿಎಸ್‌ಎಸ್ ಗುರುಗಳು ಕೂಡ ನನ್ನ ಬಗ್ಗೆ ಅಸಮಾಧಾನಗೊಂಡವರಂತೆ ತೋರುತ್ತಿದ್ದರು.

ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶ್ರೀಕಂಠಾರಾಧ್ಯರು ಅಧ್ಯಾಪಕರೆಲ್ಲರಿಗೂ ತೆಗೆದುಕೊಳ್ಳುವ ತರಗತಿಗಳ ವೇಳಾಪಟ್ಟಿ ತಯಾರಿಸಿಕೊಟ್ಟಿದ್ದರು. ನನಗೆ ಆಶ್ಚರ್ಯವಾಗುವಂತೆ ನನಗೆ ಯಾವುದೇ ಸಾಮಾನ್ಯ ತರಗತಿಗೆ ಪಾಠ ಮಾಡುವ ಅವಕಾಶವಿರದಂತೆ ತರಗತಿಗಳನ್ನು ಹಂಚಿಕೆ ಮಾಡಿದ್ದರು. ಐಚ್ಛಿಕವಾಗಿದ್ದ ಎರಡು ವಿಷಯಗಳಾದ ಪ್ರಾದೇಶಿಕ ಅರ್ಥಶಾಸ್ತ್ರ ಮತ್ತು ಕೃಷಿ ಅರ್ಥಶಾಸ್ತ್ರಗಳನ್ನು ಹಂಚಿಕೆ ಮಾಡಿ ಮುಗಿಸಿದ್ದರು. ನನಗೆ ವಿದ್ಯಾ ಗುರುಗಳು ಹೆಚ್ಚು ಸಲಿಗೆ ಇಲ್ಲದೆ ಇದ್ದ ಅವರೊಡನೆ ಇದು ಸರಿ ಇಲ್ಲ. ಇದನ್ನು ಸರಿಯಾಗಿ ಹಂಚಿಕೆಯಾಗಬೇಕೆಂದು ನನ್ನ ಅಸಮಾಧಾನ ತೋರಿ ಅವರ ಟೇಬಲ್ ಮೇಲೆ ತಾತ್ಸಾರದಿಂದಲೇ ಆದೇಶದ ಪ್ರತಿಯನ್ನು ಬಿಟ್ಟು ಬಂದಿದ್ದೆ. ಅತ್ಯಂತ ಮಿತಭಾಷಿ, ಸರಳ ಮತ್ತು ಆಳ ಅಧ್ಯಯನದಿಂದ ಗಳಿಸಿದ ಗಂಭೀರತೆಯಲ್ಲಿದ್ದ ಅವರಿಗೆೆ ನನ್ನ ಬಗ್ಗೆ, ನಾನು ಮದುವೆಯಾದ ಬಗ್ಗೆ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಿ ಅವರಿಗೆ ಹೇಳಿ ನನಗೆ ಈ ರೀತಿಯ ಅನಾದರಣೆ ತೋರಿಸುವಂತೆ ನಮ್ಮವರೇ ಆಗಿದ್ದ ಕೆಲವು ಅಧ್ಯಾಪಕರು ಹೊಸಬರಾಗಿ ಬಂದಿದ್ದ ಇವರಿಗೆ ಹೇಳಿದ್ದರು.

ಆರಾಧ್ಯರೂ ಕೂಡ ಮೈಸೂರಿನ ಗಂಗೋತ್ರಿಯಲ್ಲಿ ಪಾಠ ಮಾಡುತ್ತಿದ್ದವರು, ಅಲ್ಲಿಯೇ ಪ್ರಾಧ್ಯಾಪಕರಾಗಬೇಕಾಗಿದ್ದವರನ್ನು ಬಿಆರ್‌ಪಿಗೆ ಒಬ್ಬ ಹಿರಿಯ ಪ್ರಾಧ್ಯಾಪಕರು ಬೇಕೆಂಬ ನೆಪವೊಡ್ಡಿ ಅವರನ್ನು ವರ್ಗಾವಣೆ ಮಾಡಿ ಇಲ್ಲಿಗೆ ಕಳಿಸಿದ್ದರು. ಇಲ್ಲಿಗೆ ಬರುವ ಬಗ್ಗೆ ಮನಸ್ಸಿಲ್ಲದ ಕಾರಣ ಅಸಮಾಧಾನವೂ ಅವರಲ್ಲಿ ಮನೆಮಾಡಿತ್ತು. ಬಂದಾಕ್ಷಣ ಇಲ್ಲಿನವರ ಚಾಡಿ ಮಾತು ಕೇಳಿ ನನ್ನ ಬಗ್ಗೆ ಈ ರೀತಿ ನಡೆದುಕೊಂಡಿದ್ದರು. ಆ ನಂತರ ಎಲ್ಲರೂ ಚರ್ಚಿಸಿ ಸಮಾನ ವಿಷಯಗಳ ಮತ್ತು ತರಗತಿಗಳನ್ನು ಹಂಚಿಕೆ ಮಾಡಿಕೊಂಡು ಎಂದಿನಂತೆ ತರಗತಿಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ಆಗಿದ್ದ ನನ್ನ ಮತ್ತು ನನ್ನ ಗುರುಗಳಾಗಿದ್ದ ಶ್ರೀಕಂಠಾರಾಧ್ಯರ ನಡುವೆ ನಡೆದ ಸಣ್ಣ ಅಸಮಾಧಾನ ಕರಗಿ ಎಂದಿನ ಲವಲವಿಕೆಯಿಂದ ವಿಭಾಗದಲ್ಲಿ ಚಟುವಟಿಕೆಗಳು ಪ್ರಾರಂಭವಾದವು. ( ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

ಅಂತರಂಗ

ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ

Published

on

  • ರುದ್ರಪ್ಪ ಹನಗವಾಡಿ

ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.

ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.

ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.

ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.

ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.

ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.

ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.

ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.

ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.

ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.

ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.

ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.

ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.

ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243

ಮುಂದುವರಿಯುವುದು

Continue Reading

ದಿನದ ಸುದ್ದಿ

ಮೊಹರಂ : ಜನತೆಯ ಧರ್ಮ

Published

on

ಚರ್ಚೆಯಲ್ಲಿ ರಹಮತ್ ತರೀಕೆರೆ
  • ಡಾ.ರಹಮತ್ ತರೀಕೆರೆ

ಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು.

ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು ‘ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ ಕಣ್ಣೀರಾ ಮಕ್ಕಳು ಹುಡುಗರು ಹೆಂಗಸರಾ’ ಎಂದು ಹಾಡಿರುವುದುಂಟು. ಇಂತಹ ದುಗುಡದ ನೆನಪಿನಲ್ಲಿ ಹುಟ್ಟಿದ ಧಾರ್ಮಿಕ ಆಚರಣೆಯೊಂದು ಕರ್ನಾಟಕದಲ್ಲಿ ಸಾಂಸ್ಕೃತಿಕ ಆಚರಣೆಯಾಗಿ ರೂಪಾಂತರ ಪಡೆಯಿತು. ಉತ್ತರ ಕರ್ನಾಟದಲ್ಲಿ ಎಲ್ಲ ಧರ್ಮದ ಜಾತಿಯ ಜನರು ಒಟ್ಟಾಗಿ ಆಚರಿಸುವ ಊರಹಬ್ಬವಾಯಿತು. ಹೀಗಾಗಿ ಮುಸ್ಲಿಮರೇ ಇಲ್ಲದ ನೂರಾರು ಊರುಗಳಲ್ಲೂ ಮೊಹರಂ ನಡೆಯುತ್ತದೆ.

ಮೊಹರಂನಲ್ಲಿ ಶೋಕಗೀತೆಯ ರಚನೆ, ಹಾಡಿಕೆ, ಕುಣಿತ, ವೇಷಗಾರಿಕೆ,ಮೆರವಣಿಗೆ, ವಿಶೇಷ ಆಹಾರಗಳ ಆಯಾಮಗಳಿವೆ. ಇದರ ಫಲವಾಗಿ ಕರ್ನಾಟಕದಲ್ಲಿ ಹಾಡು ಕಟ್ಟುವ ಸಾವಿರಾರು ಶಾಹಿರರೂ ಗಾಯಕರೂ ಇದ್ದಾರೆ. ಹೆಜ್ಜೆಕುಣಿತ, ಕೋಡಂಗಿ ಕುಣಿತ, ಡಬಗಳ್ಳಿ ಕುಣಿತ ಮಾಡುವ, ಹುಲಿವೇಷ, ಅಚೊಳ್ಳಿಸೋಗು, ಭಡಂಗ್‍ವೇಷ ಹಾಕುವ ಹರಕೆ ಕಲಾವಿದರಿದ್ದಾರೆ. ನಾನು ಕಂಡಂತೆ,
ಬೀಳಗಿ, ಕೆರೂರ ಕುದುರೆಮೋತಿ ಅಗಸನೂರ , ಆಯನೂರು ಯರಗುಪ್ಪಿ ಗೋಕಾಕಫಾಲ್ಸ ಮುದಗಲ್ ಮೊಹರಂ ವಿಶಿಷ್ಟವಾದವು. ಪ್ರತಿಯೊಂದೂ ಊರು ತನ್ನದೇ ಆಚರಣೆಯನ್ನು ರೂಢಿಸಿಕೊಂಡಿದೆ.

ಅಗಸನೂರಿನಲ್ಲಿ ಹತ್ತು ದಿನಗಳ ಕಾಲ ಚಪ್ಪಲಿ ತೊಡುವುದಿಲ್ಲ. ಮಂಚದಲ್ಲಿ ಮಲಗುವುದಿಲ್ಲ. ಬೀಳಗಿಯಲ್ಲಿ ತೇರಿನಂಥ ರಚನೆಗೆ ಹಿಲಾಲುಗಳನ್ನು ಸಿಕ್ಕಿಸಿ ಉರಿವವೃಕ್ಷವನ್ನೇ ಸೃಷ್ಟಿಸುತ್ತಾರೆ. ಆಯನೂರಲ್ಲಿ ಯಜೀದನ ಸಂಕೇತವಾಗಿ ರಾವಣನ ಪ್ರತಿಕೃತಿ ಸುಡುತ್ತಾರೆ; ಅಗಸನೂರಿ ನಲ್ಲಿ ಅಲಾವಿಯ ಸುತ್ತ ಮಾಡುವ ಹೆಜ್ಜೆ ನೃತ್ಯವು ಅಪೂರ್ವವಾಗಿದೆ. ಕುದುರೆಮೋತಿ, ಹೊಸಪೇಟೆ, ಗಜೇಂದ್ರಗಡಗಳು ಹುಲಿವೇಷಕ್ಕೆ ಹೆಸರಾಗಿವೆ; ಮುದಗಲ್ಲಿನಲ್ಲಿ ಅಗಲಿದ ಹಸನ- ಹುಸೇನರ ಮಿಲನವಾ ಗುವ ಆಚರಣೆ ಕಣ್ತುಂಬಿಕೊಳ್ಳಲು ಕೋಟೆಯ ಹೊರಗೆ ಸಾವಿರಾರು ಜನ ಸೇರುತ್ತಾರೆ. ಇಂಡಿ ಕಡೆ ಭಡಂಗ್ ಎನ್ನುವ ಹರಕೆವೇಷ ಹಾಕುತ್ತಾರೆ; ಬಾಗಲಕೋಟೆ-ವಿಜಯಪುರ ಸೀಮೆಯಲ್ಲಿ ಆಫ್ರಿಕನ್ ಸಿದ್ದಿಗಳನ್ನು ನೆನಪಿಸುವ ಅಚೊಳ್ಳಿ- ಬಿಚೊಳ್ಳಿ ಸೋಗುಗಳಿವೆ.

ಈ ಸೋಗಿಗೆ ಮುಖಕ್ಕೆ ಕಪ್ಪುಮಸಿ ಬಳಿದು, ಸೊಂಟಕ್ಕೆ ಗಂಟೆ ಕಟ್ಟಿ, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸುತ್ತಾರೆ. ಮೊಹರಂ ಆಚರಣೆಯ ದಿನಗಳಲ್ಲಿ ಮುಸ್ಲಿಮೇತರರು ಲಾಡಿ ಧರಿಸಿ ಫಕೀರರಾಗುವ ಪದ್ಧತಿಯೂ ಇದೆ. ಮುಸ್ಲಿಮೇತರ ಕುಟುಂಬಗಳು ಐದು ಜನ ಫಕೀರರಿಗೆ ಕರೆದು ಬಿನ್ನಹ ಮಾಡಿಸಿದಲ್ಲದೆ ತಾವು ಉಣ್ಣುವುದಿಲ್ಲ. ಚೋಂಗೆ, ಮಾಲ್ದಿ ಎಂಬ ಸಿಹಿ ಅಡುಗೆ, ಶರಬತ್ತು ಹಾಗೂ ಮೊಸರನ್ನ ಮೊಹರಂ ಮುಖ್ಯ ಅಡುಗೆಗಳು. ಕರ್ಬಲಾ ವೀರರು ಊಟ ನೀರಿಲ್ಲದೆ ಮಡಿದವರಾದ್ದರಿಂದ, ಹಸಿದವರಿಗೆ ಉಣಿಸುವ ಮತ್ತು ಬಾಯಾರಿದವರಿಗೆ ಶರಬತ್ತು ಕುಡಿಸುವ ಪದ್ಧತಿ ರೂಢಿಯಲ್ಲಿದೆ. ಇಂಡಿ ಮತ್ತು ಸೇಡಂ ಭಾಗದಲ್ಲಿ ಕುರಿಬ್ಯಾಟೆ ಕೊಡುವ ಪದ್ಧತಿಯಿದೆ. ಹೀಗೆ ಉತ್ತರ ಕರ್ನಾಟಕದ ಮೊಹರಂ ಬಹುರೂಪಿಯಾಗಿದೆ.

ದೂರದ ಇರಾಕಿನಲ್ಲಿ ಸಾವಿರಾರು ವರ್ಷದ ಹಿಂದೆ ನಡೆದ ಒಂದು ಮಾನವ ದುರಂತವನ್ನು, ತಮ್ಮ ಬೀದಿಯಲ್ಲಿ ನಿನ್ನೆ ಮೊನ್ನೆ ಸಂಭವಿಸಿದ್ದು ಎಂದು ಇನ್ನೊಂದು ದೇಶಕ್ಕೆ, ಕಾಲಕ್ಕೆ ಸಂಸ್ಕೃತಿ ಮತ್ತು ಧರ್ಮಕ್ಕೆ ಸೇರಿದ ಜನಸಮುದಾಯ ಭಾವಿಸಿ ಮಿಡಿಯುವುದೇ ಸೋಜಿಗ. ಇದು ಜನಪದ ಮನಸ್ಸಿನ ಮಾನವೀಯ ಗುಣ. ಇಲ್ಲಿ ಚರಿತ್ರೆಯನ್ನು ಸಮಕಾಲೀನಗೊಳಿಸುವ ಗುಣವೂ ಇದೆ. ವಿಶೇಷವೆಂದರೆ, ಕರ್ಬಲಾ ಹಾಡುಗಳಿಗೆ ದುರಂತದ ವಸ್ತುವಿಗೆ ಸ್ಥಳೀಯ ದುರಂತ ಘಟನೆಗಳೂ ಸೇರಿಕೊಳ್ಳುವುದು. ಬಸ್ಸು ಕಾಲುವೆಗೆ ಉರುಳಿ ಜನ ಸತ್ತದ್ದು, ಎತ್ತುಗಳನ್ನು ರಕ್ಷಣೆ ಮಾಡುತ್ತ ರೈತ ಕಳ್ಳರ ಕೈಲಿ ಕೊಲೆಯಾಗಿದ್ದು, ದುಷ್ಟನಿಂದ ತನ್ನನ್ನು ಕಾಪಾಡಿಕೊಳ್ಳುವ ಅವಸರದಲ್ಲಿ ತಾಯೊಬ್ಬಳು ಕೂಸನ್ನು ಕಳೆದುಕೊಂಡಿದ್ದು, ಗೆಳೆಯನ ಮಡದಿಯನ್ನು ಪ್ರೇಮಿಸಿ ಸ್ವಹತ್ಯೆ ಮಾಡಿಕೊಂಡಿದ್ದು – ಇವೂ ಮೊಹರಂ ಹಾಡುಗಳ ವಸ್ತುಗಳಾಗಿವೆ. ಬೀಳಗಿ ತಾಲ್ಲೂಕಿನ ರೊಳ್ಳಿಯಲ್ಲಿ ಆಲಮಟ್ಟಿ ಡ್ಯಾಂನ ನೀರಿನಲ್ಲಿ ಊರು ಮನೆ ಜಮೀನು ಮುಳುಗಡೆಯಾದ ದುಃಖವನ್ನು ಕೇಳುವವರ ಎದೆಕಲಕುವಂತೆ ಹಾಡಾಗಿ ಹಾಡಿದ್ದರು.

ಮೊಹರಂ ಹಾಡುಪರಂಪರೆ, ಭಾರತೀಯ ಗುರುಪರಂಪರೆಯ ಭಾಗವಾಗಿದೆ. ಶಾಸ್ತ್ರೀಯ ಸಂಗೀತದಲ್ಲಿ ಇರುವಂತೆ, ಇಲ್ಲೂ ಹಾಡಿಕೆ ಕಲಿಯುವ ಶಿಷ್ಯರು ಗುರುವಿನಿಂದ ದೀಕ್ಷೆ ಪಡೆದು ಜತೆಯಲ್ಲಿ ಹಾಡುತ್ತ, ಒಂದು ದಿನ ಗುರುವಿನ ಅನುಮತಿಯಿಂದ ಸ್ವತಂತ್ರವಾಗಿ ಹಾಡುತ್ತಾರೆ; ಹಾಡಿನಲ್ಲಿ ಗುರುವಿನ ಹೆಸರನ್ನು ಸ್ಮರಿಸುತ್ತಾರೆ; ಬೇರೆ ಬೇರೆ ತಂಡಗಳು ಪರಸ್ಪರ ಎದುರಾಗಿ, ಜಿದ್ದಾಜಿದ್ದಿ ಸವಾಲ್- ಜವಾಬ್ ನಡೆಸುತ್ತಾರೆ.

ನರಗುಂದ ತಾಲ್ಲೂಕಿನ ಕೊಣ್ಣೂರಿನಲ್ಲಿ ಸವಾಲ್ ಜವಾಬ್ ಹಾಡಿಕೆಯ ಸ್ಪರ್ಧೆ ನಡೆಯುತ್ತದೆ. ಅದೊಂದು ಬೌದ್ಧಿಕ ಕದನ. ಇದರಲ್ಲಿ ಸೋತವರು ಸಾಯುವ ತನಕ ಹಾಡಿಕೆಗೆ ವಿದಾಯ ಹೇಳಿದ್ದುಂಟು; ಗೆದ್ದವರು ಪದಕ ಧರಿಸಿ, ಜನರಿಂದ ಆಹೇರಿ ಪಡೆದು, ಹೊಲವನ್ನು ಭಕ್ಷೀಸಾಗಿ ಪಡೆದದ್ದುಂಟು. ವೆಂಕಟಬೇನೂರಿನ (ಕಲಬುರ್ಗಿ) ಕಾಕಿಪೀರಾ, ಕದರಮಂಡಲಗಿಯ (ಬ್ಯಾಡಗಿ) ಅಲ್ಲಾಭಕ್ಷ್, ಹುಲಕುಂದದ (ರಾಮದುರ್ಗ) ಭೀಮಕವಿ, ನಿಡಗುಂದದ (ಚಿಂಚೋಳಿ) ಕೆರೂರ ನದಾಫಸಾಬ್ (ಬದಾಮಿ)ಬಸವಂತರಾವ್, ಗೋಕಾಕದ ಭರಮಣ್ಣ ಬೂಶಿ, ಸತ್ತೂರಿನ ಇಮಾಂಸಾಬ್ ಪ್ರಸಿದ್ಧ ಶಾಹಿರರು. ಇಂಡಿ, ಸೇಡಂ, ಬೀಳಗಿ ಭಾಗದಲ್ಲಿ ಮಹಿಳೆಯರು ಗುಂಪಾಗಿ ಕುಳಿತು ಶೋಕಗೀತೆಗಳನ್ನು ಹಾಡುತ್ತಾರೆ. ಈ ಗೀತೆಗಳ ವಸ್ತು, ಅಸಘರನೆಂಬ ಕೂಸಿನ ಸಾವು, ಅಭಿಮನ್ಯುವಿನ ಹಾಗೆ ಚಿಕ್ಕ ಹುಡುಗನಾದ ಕಾಸೀಮ್‌ನನ್ನು ರಣರಂಗಕ್ಕೆ ಕಳಿಸಿಕೊಡುವುದು, ಕಾಸೀಮನ ಮರಣ, ಅವನ ಎಳೆಹೆಂಡತಿ ಸಕೀನಾಳನ್ನು ವಿಧವೆಯಾಗಿಸುವುದು, ಅವಳ ಪ್ರಲಾಪ ಇತ್ಯಾದಿ.

ಮೊಹರಂ ಹಾಡುಗಾರರು ಇಸ್ಲಾಮಿನ ಚರಿತ್ರೆ ಪುರಾಣಗಳಂತೆ, ಮಹಾಭಾರತ, ರಾಮಾಯಣ, ಶಿವಪುರಾಣಗಳಲ್ಲಿಯೂ ಪರಿಣತಿ ಪಡೆದಿದ್ದಾರೆ. ಅವರ ಹಾಡುಗಳಲ್ಲಿ ಯಜೀದ್- ಹುಸೇನರ ಕದನದ ಚರಿತ್ರೆಯು ದೇಸಿ ಪುರಾಣಗಳ ಜತೆ ಬೆರೆತುಬಿಡುತ್ತದೆ. ಬಾಗೇವಾಡಿ ತಾಲ್ಲೂಕಿನಲ್ಲಿ ಪೈಗಂಬರನ್ನು ರಾಮನನ್ನಾಗಿ, ಬೀಬೀ ಫಾತಿಮಾರನ್ನು ಸೀತೆಯನ್ನಾಗಿ, ಹಸನ-ಹುಸೇನರನ್ನು ಲವ-ಕುಶರನ್ನಾಗಿ ಸಮೀಕರಿಸಿ ಹಾಡುತ್ತಾರೆ. ಈ ಹಾಡುಗಳಲ್ಲಿ ಪೈಗಂಬರರನ್ನು ಶರಣ ಎಂದೇ ಕರೆಯಲಾಗಿದೆ. ಬಸವಣ್ಣ, ಮಹದೇವ ಹಾಗೂ ಪೈಗಂಬರ್ ಒಟ್ಟಿಗೇ ಇರುವ ಮಂತ್ರವನ್ನು ಅನೇಕ ಮೊಹರಂ ಮಸೀದಿಯ ತಲೆಬಾಗಿಲಲ್ಲಿ ಕೆತ್ತಲಾಗಿದೆ. ಇಲ್ಲಿರುವ ತತ್ವವೆಂದರೆ, ಲೋಕಹಿತ ಬಯಸುವ ಲೋಕದ ಸಮಸ್ತ ದಾರ್ಶನಿಕರೂ ದೈವಗಳೂ ಮೂಲತಃ ಒಂದೇ ಎಂಬುದು.

ಕರ್ನಾಟಕ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಬಹುತ್ವ ಪ್ರಜ್ಞೆ. ಈ ಪ್ರಜ್ಞೆಯು ಪುರಾಣ ಮತ್ತು ಇತಿಹಾಸವನ್ನು ಬೆರೆಸುತ್ತದೆ; ಬೇರೆ ಬೇರೆ ಮತಧರ್ಮದ ಕಥನಗಳಲ್ಲಿರುವ ಸಮಾನ ಅಂಶಗಳನ್ನು ಒಂದೆಡೆ ಜೋಡಿಸುತ್ತದೆ. ಇದು ಭಾರತದ ನಿಜವಾದ ಸಾಂಸ್ಕೃತಿಕ ಪ್ರತಿಭೆ. ಮಧ್ಯಕಾಲೀನ ದೊರೆಗಳು ರಾಜ್ಯವಿಸ್ತರಣೆಗಾಗಿ ಮಾಡಿದ ರಾಜಕೀಯ ಯುದ್ಧಗಳನ್ನೇ ಇರಿಸಿಕೊಂಡು ಚರಿತ್ರೆ ಮತ್ತು ವರ್ತ ಮಾನವನ್ನು ನೋಡುವವರಿಗೆ, ಜನ ಕಟ್ಟುವ ಈ ಸೃಜನಶೀಲ ಪರಂಪರೆ ತಿಳಿಯುವುದಿಲ್ಲ. ಮೊಹರಂ ತಾಳಿರುವ ಬಹುರೂಪವು ಸಂಪ್ರದಾಯವಾದಿಗಳನ್ನು ಕಂಗೆಡಿಸುತ್ತದೆ. ‘ಇದೆಂತಹ ಧರ್ಮ; ಎಲ್ಲ ಕಲಬೆರಕೆಯಾಗಿದೆ’ ಎಂದವರು ಗೊಣಗುವರು. ಆದರೆ ಸಾಮಾನ್ಯ ಜನ ಧರ್ಮ, ಜಾತಿಗಳನ್ನು ಮೀರಿ ಸೃಷ್ಟಿಸಿಕೊಂಡಿರುವ ಅಸ್ಮಿತೆಯಾಗಿ ಮೊಹರಂ ರೂಪುಗೊಂಡಿದೆ. ‘ಪ್ರಧಾನ’ ಧರ್ಮಗಳು ಸಂಘರ್ಷಕ್ಕೆ ಕಾಲು ಕೆರೆಯುತ್ತಿವೆ; ಪರಸ್ಪರ ಸಂವಾದ ಮಾಡುವ ಬಾಗಿಲು ಕಿಟಕಿಗಳನ್ನು ಮುಚ್ಚಿಕೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ, ಧರ್ಮಗಳ ನಡುವೆ, ಸಂಸ್ಕೃತಿಗಳ ನಡುವೆ ಸಂವಾದ ಸಾಧ್ಯವಿದೆ ಎಂದು ಮೊಹರಂ ತೋರಿಸಿಕೊಡುತ್ತದೆ.

ಪಟ: ಕವಿ ಕೆರೂರ ನದಾಫ ಸಾಹೇಬರೊಡನೆ; ಅಚೊಳ್ಳಿ ಬಿಚೊಳ್ಳಿ ಸೋಗುಗಾರ; ಹುಲಿವೇಷದ ಹರಕೆ ಹುಬ್ಬಳ್ಳಿ; ಕರ್ಬಲಾ‌ ಕದನದಲ್ಲಿ ಕಾಸಿಮಲಿ ಸಾವು ಚಿತ್ರ; ಅಬ್ಬಾಸ ಅಲಿ ಸಮಾಧಿಯೆದುರು (ಕರ್ಬಲಾ, ಇರಾಕ್); ಹುಲಿವೇಷಕ್ಕೆ ಬಣ್ಣಗಾರಿಕೆ; ಹೆಜ್ಜಕುಣಿತ ಕುಷ್ಟಗಿ; ಕರ್ಬಲಾ ನಗರದಲ್ಲಿ ಶೋಕಾಚರಣೆ ( ಬರಹಕೃಪೆ:ನಿವೃತ್ತ ಪ್ರೊಫೆಸರ್ ರಹಮತ್ ತರೀಕೆರೆ, ಫೇಸ್ಬುಕ್ ನಿಂದ)ಸುದ್ದಿದಿನ.ಕಾಂ|ವಾಟ್ಸಾಪ್|9980346243)

Continue Reading

Trending