Connect with us

ನೆಲದನಿ

ನುಡಿಯ ಒಡಲು -19 | ನಾಡು-ನುಡಿ: ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರ ‘ಭಾಷಾವಾರು ರಾಜ್ಯಗಳ ಸಮಸ್ಯೆಗಳು’ ಎನ್ನುವ ಬರಹವು ಇಂದಿಗೂ ಹಲವು ನೆಲೆಗಳಿಂದ ಅತ್ಯಂತ ಕುತೂಹಲಕಾರಿ ಮತ್ತು ವಿಶಿಷ್ಟವಾಗಿದೆ. 1956ರ ರಾಜ್ಯಗಳ ಪುನರ್ರಚನೆಯ ಕಾಯ್ದೆಯನ್ನು ಕುರಿತು ವಿಮರ್ಶಿಸುತ್ತ, “ರಾಷ್ಟ್ರೀಯ ಐಕ್ಯತೆಯನ್ನು ಕಾಪಾಡಲು ಏಕಭಾಷಿಕ ರಾಜ್ಯಗಳಕ್ಕಿಂತ ಬಹುಭಾಷಿಕ ರಾಜ್ಯಗಳನ್ನು ಹೊಂದುವುದು ಹೆಚ್ಚು ಪ್ರಯೋಜನಕಾರಿ ಆಗುತ್ತದೆ” ಎಂದು ತಮ್ಮ ಅಭಿಪ್ರಾಯಗಳನ್ನು ಅಂಬೇಡ್ಕರ್ ಹೀಗೆ ದಾಖಲಿಸುತ್ತಾರೆ.

ಸಂಯುಕ್ತ ಭಾರತ ಎನ್ನುವ ಕಲ್ಪನೆಯೇ ಮರಣಗಂಟೆಯ ಸೂಚಕವಾಗಿದೆ ಎಂದು ಅವರು ಬಲವಾಗಿ ನಂಬಿದ್ದರು. ರಾಜ್ಯಗಳ ಮರುರಚನೆಯಲ್ಲಿ ಜನಸಂಖ್ಯೆಯ ಗಾತ್ರ ಮತ್ತು ಪ್ರಮಾಣವನ್ನು ರೂಪಿಸುವಲ್ಲಿ ಸಂವಿಧಾನ ಸೋಲುತ್ತದೆ ಎನ್ನುವ ಬೇಸರವನ್ನೂ ಇವರು ವ್ಯಕ್ತಪಡಿಸಿದ್ದರು. ಪ್ರಜೆಗಳ ಸಮಾನ ಪ್ರತಿನಿಧೀಕರಣವನ್ನು ಕಾಯ್ದುಕೊಳ್ಳುವುದು ಕೂಡ ಅತ್ಯಂತ ದುಸ್ತರವಾಗುತ್ತದೆ ಎಂಬ ನಿಲುವು ಇವರದಾಗಿತ್ತು.

ಅಂಬೇಡ್ಕರ್ ಅವರ ಅಭಿಪ್ರಾಯದಲ್ಲಿ, 1956ರ ರಾಜ್ಯಗಳ ಪುನರ್ರಚನೆಯ ಕಾಯಿದೆಯು ಉತ್ತರದ ರಾಜ್ಯಗಳನ್ನು ಬಲಪಡಿಸುವ ಹಾಗೂ ದಕ್ಷಿಣದ ರಾಜ್ಯಗಳನ್ನು ಬಾಲ್ಕನೈಸ್ ಮಾಡುವ ನಿಲುವುಗಳನ್ನು ಕಾಣುತ್ತಾರೆ. ಪರಿಣಾಮವಾಗಿ ದಕ್ಷಿಣದಲ್ಲಿ ಚಿಕ್ಕ ಚಿಕ್ಕ ರಾಜ್ಯಗಳು ತಲೆಯೆತ್ತಿದರೆ, ಮುಂಬೈ, ಪಂಜಾಬ್, ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಂತಹ ದೊಡ್ಡ ಪ್ರದೇಶಗಳು ಹಾಗೇ ಅಸ್ತಿತ್ವದಲ್ಲಿ ಉಳಿಯುತ್ತವೆ.

ಆದರೆ, ಈ ಎಲ್ಲಾ ರಾಜ್ಯಗಳು ಕೂಡ ಈ ಹೊತ್ತಿಗೆ ಮರುವಿಂಗಡಣೆಯಾಗಿರುತ್ತವೆ ಎಂಬ ಭವಿಷ್ಯವನ್ನೂ ಇವರು ನುಡದಿದ್ದರು. ಅಂಬೇಡ್ಕರ್ ಅವರ ಪ್ರಮುಖ ಆದ್ಯತೆ ಏನಾಗಿತ್ತೆಂದರೆ, ಒಂದೇ ಭಾಷೆಯನ್ನು ಮಾತ್ನಾಡುವ ಜನರು ಅನೇಕ ರಾಜ್ಯಗಳಲ್ಲಿ ವರ್ಗೀಕರಿಸಿರಬಹುದಿತ್ತು. ಏಕೆಂದರೆ, ಪತ್ರಿಯೊಂದು ರಾಜ್ಯವು ಕೂಡ ಒಂದೊಂದು ಭಾಷೆಯನ್ನು ಮಾತ್ನಾಡುವ ಜನರ ಅಧಿಕಾರ ವ್ಯಾಪ್ತಿಯಲ್ಲಿರುತ್ತದೆ.

ಇನ್ನೂ ಮುಂದುವರೆದು ಇವರು ಹೇಳುವುದೇನೆಂದರೆ, ‘ಒಂದು ಭಾಷೆ ಒಂದು ರಾಜ್ಯ’ ಎಂಬ ಸೂತ್ರವಿರಕೂಡದು. ಬದಲಾಗಿ, ‘ಒಂದು ರಾಜ್ಯ ಒಂದು ಭಾಷೆ’ ಎಂಬ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಈ ಸೂತ್ರದ ಜೊತೆಗೆ ಒಂದು ಭಾಷೆ ಒಂದು ರಾಜ್ಯ ಎಂಬ ಸೂತ್ರವನ್ನು ತಳಕುಹಾಕಿ ಗೊಂದಲವನ್ನುಂಟು ಮಾಡಬಾರದು. ಇಲ್ಲಿ ಅಂಬೇಡ್ಕರ್ ಅವರ ಒಟ್ಟು ತಾತ್ವಿಕತೆ ಏನನ್ನು ಪ್ರಸ್ತಾಪ ಮಾಡುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಅಂಬೇಡ್ಕರ್ ಅವರು ಭಾರತದ ಸಂವಿಧಾನವನ್ನು ರೂಪಿಸಿದವರು, ಸಾಮಾಜಿಕ ನ್ಯಾಯದ ಆದ್ಯಪ್ರವರ್ತಕ, ಪ್ರಜಾಪ್ರಭುತ್ವವು ಸಾಕಾರಗೊಳ್ಳಲು, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಎಷ್ಟೊಂದು ಮುಖ್ಯ ಎಂಬುದನ್ನು ಚಿಂತಿಸಿದವರು. ಆದ್ದರಿಂದ ಇವರು ಪ್ರಸ್ತಾಪಿಸುತ್ತಿರುವ ‘ಒಂದು ರಾಜ್ಯ ಒಂದು ಭಾಷೆ’ ಎಂಬೀ ಸೂತ್ರದ ಹಿಂದಿನ ತಾತ್ವಿಕತೆಯು ಕೂಡ ಅತ್ಯಂತ ಪ್ರಜಾಸತ್ತಾತ್ಮಕವಾದ್ದು.

ಅಂದರೆ ಅಂಬೇಡ್ಕರ್ ಅವರು ಚಿಂತಿಸುತ್ತಿದ್ದ ಒಂದು ಬಹುಮುಖ್ಯ ವಿನ್ಯಾಸ ಯಾವುದೆಂದರೆ, ಎಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ, ಭಾಷಿಕ ಹಾಗೂ ಧಾರ್ಮಕ ವಿನ್ಯಾಸಗಳನ್ನೂ ಕೂಡ ಸಂವಿಧಾನದ ಪ್ರಜಾಸತ್ತಾತ್ಮಕ ನೀತಿಗಳನ್ನಾಗಿ ರೂಪಿಸುತ್ತಿದ್ದರು. ಹಾಗಾಗಿ ಇವರು ಪ್ರಸ್ತಾಪಿಸಿದ ಈ ಮೇಲಿನ ಸೂತ್ರವು ಇಂತಹದೇ ಒಂದು ವಿನ್ಯಾಸವಾಗಿದೆ. ಕೇವಲ ರಾಜಕೀಯ ಕಣ್ನೋಟದಿಂದ ಈ ಸೂತ್ರವನ್ನು ವಿಶ್ಲೇಷಣೆ ಮಾಡಿದರೆ ಇದರಲ್ಲಿ ಹಲವು ಬಗೆಯ ಕೊರತೆಗಳು ಕಾಣುತ್ತವೆ.

ಈ ರಾಜಕೀಯ ಕಣ್ನೋಟವೆನ್ನುವುದು ಕೇವಲ ರಾಜಕೀಯ ನಿಲುವುಗಳಿಂದ ಇಲ್ಲವೇ ನೀತಿಗಳಿಂದ ಕೂಡಿರುವ ಅಗತ್ಯವಿಲ್ಲ. ಇದು ಸಾಮಾಜಿಕ ಭಾಷಾಶಾಸ್ತ್ರೀಯ ಕಣ್ನೋಟವು ಆಗಿರಬಹುದು ಅಥವಾ ಯಾವುದೇ ಸಾಮಾಜಿಕ ಮೀಮಾಂಸೆಯ ನಿಲುವುಗಳಿಂದ ಪ್ರೇರಿತವಾದ ಕಣ್ನೋಟವು ಆಗಿರಬಹುದು. ಆದರೆ ಈ ಎಲ್ಲ ನಿಲುವುಗಳು ಬೈನರಿ ಇಲ್ಲವೇ ಡೈಕಾಟಮಿಗಳನ್ನು ಮುಂದಿಟ್ಟುಕೊಂಡು ವಿಶ್ಲೇಷಣೆ ಮಾಡುತ್ತವೆ. ಸಹಜವಾಗಿ, ಅಧಿಕಾರ ಸಂಬಂಧ ಇಲ್ಲವೇ ಯಜಮಾನಿಕೆ ವಿನ್ಯಾಸಗಳು ಇಲ್ಲಿ ಗೋಚರಿಸುತ್ತವೆ.

ಈ ವಿನ್ಯಾಸಗಳನ್ನೇ ಅಂಬೇಡ್ಕರ್ ಅವರ ‘ಒಂದು ರಾಜ್ಯ ಒಂದು ಭಾಷೆ’ಎಂಬೀ ಸೂತ್ರಕ್ಕೂ ಅನ್ವಯಿಸುವ ಅಪಾಯಗಳಿವೆ. ಇದು ಆಗಕೂಡದು ಎಂಬುದು ನನ್ನ ಬಯಕೆ. ಮತ್ತೊಂದು ಮಹತ್ವದ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು, ಅದೇನೆಂದರೆ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತು ತಾತ್ವಿಕ ವಿನ್ಯಾಸಗಳನ್ನು ವಿಶ್ಲೇಷಿಸುವುದಕ್ಕೆ ನಾವು ಹೊಸ ನೋಟಕ್ರಮ ಹಾಗೂ ವಿಶ್ಲೇಷಣಾ ಪರಿಕರಗಳನ್ನು ಕಂಡುಕೊಳ್ಳುವ ಅಗತ್ಯವಿದೆ.

ಅಂಬೇಡ್ಕರ್ ಅವರು ಕೇವಲ ಸಾಮಾಜಿಕ, ಸಾಂಸ್ಕ್ರುತಿಕ, ರಾಜಕೀಯ ಹಾಗೂ ಧಾರ್ಮಿಕ ಸಂಗತಿಗಳಲ್ಲಿ ಹುದುಗಿರುವ ಏರುಪೇರುಗಳನ್ನು ಮಾತ್ರ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಲಿಲ್ಲ. ಬದಲಾಗಿ ‘ಹೊಸ ಪ್ರಜಾಪ್ರಭುತ್ವ’ದ ವಿನ್ಯಾಸಗಳನ್ನು ನೆಲೆಗೊಳಿಸುವ ಚಿಂತನೆಗಳನ್ನು ರೂಪಿಸುತ್ತಿದ್ದರು. ಒಟ್ಟಿನಲ್ಲಿ ‘ವಿಚಾರ ಕ್ರಾಂತಿ ಮತ್ತು ಅರಿವಿನ ಪಲ್ಲಟ’ಗಳನ್ನು ಒಂದೇ ತಾತ್ವಿಕ ಚೌಕಟ್ಟಿನಲ್ಲಿ ರೂಪಿಸುವ ಇರಾದೆಯನ್ನು ಇವರು ಹೊಂದಿದ್ದರು.

ಭಾರತದ ಸಂವಿಧಾನದ ಪೀಠಿಕೆಯಲ್ಲಿ ಭಾರತವನ್ನು ‘ರಾಜ್ಯಗಳ ಒಕ್ಕೂಟ’ (ಸ್ಟೇಟ್ಸ್ ಆಫ್ ಯ್ಯೂನಿಯನ್ಸ್) ಎಂದು ಉಲ್ಲೇಖಿಸಲಾಗಿದೆ. ಅಂಬೇಡ್ಕರ್ ಅವರ ಸಾಮಾಜಿಕ ತತ್ವಶಾಸ್ತ್ರಕ್ಕೂ ಮತ್ತು ರಾಜ್ಯಗಳ ಒಕ್ಕೂಟದ ಕಲ್ಪನೆಯ ನಡುವೆ ಅತರ್ಸಂಬಂಧಗಳಿವೆ. ಭಾರತ ಎನ್ನುವುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕಾದರೆ, ಅದು ಖಂಡಿತವಾಗಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಾಂಧವ್ಯ ಎಂಬ ಈ ಮೂರು ಪರಿಕಲ್ಪನೆಗಳನ್ನು ತನ್ನ ಗುರಿಗಳನ್ನಾಗಿ ರೂಪಿಸಿಕೊಳ್ಳಬೇಕು.

ಹಲವು ರಾಜ್ಯಗಳು ಒಂದು ಒಕ್ಕೂಟವಾಗಿ ನೆಲೆಗೊಳ್ಳಬೇಕೆಂದರೆ ಈ ಗುರಿಗಳು ಅವಶ್ಯವಾಗಿ ಬೇಕಾಗುತ್ತವೆ. ಅಂಬೇಡ್ಕರ್ ಅವರ ಚಿಂತನೆಗಳ ಆಶಯವಿರುವುದು ಭಾರತವನ್ನು ಕೇವಲ ಬಹುಭಾಷಿಕ, ಬಹುಸಾಂಸ್ಕ್ರುತಿಕ, ಬಹುಧರ್ಮೀಯ ಹಾಗೂ ಬಹುಜಾತಿಗಳಿಂದ ಕೂಡಿದ ರಾಷ್ಟ್ರವನ್ನಾಗಿ ನೋಡುವುದಾಗಿರಲಿಲ್ಲ.

ಬದಲಾಗಿ ಈ ಎಲ್ಲ ಭಿನ್ನ-ಅಸ್ಮಿತೆಗಳ ಅಚೆಗೂ ಭಾರತವು ಒಂದು ಒಕ್ಕೂಟವಾಗಿ ರೂಪುಗೊಳ್ಳಬೇಕು ಹಾಗೂ ಈ ಒಕ್ಕೂಟದೊಳಗೆ ನೆಲೆಗೊಳ್ಳುವ ಎಲ್ಲ ಸಮೂಹಗಳು ತಮ್ಮ ವೈಶಿಷ್ಟ್ಯತೆಗಳನ್ನು ಗುರುತಿಸಿಕೊಂಡರೂ, ಅವುಗಳು ಭೇದದ ಬೇರುಗಳಾಗದೇ, ಸಾಮಾಜಿಕ-ರಾಜಕೀಯ ಗಡಿಗಳನ್ನು ನಿರ್ಮಿಸದೇ, ಹೂದೋಟದ (ಫ್ಲಾವರ್ಸ್ ಪಾಟ್) ಸ್ವರೂಪದಲ್ಲಿ ನೆಲೆಗೊಳ್ಳಬೇಕು ಎಂಬುದು ಇವರ ಉದ್ದೇಶವಾಗಿತ್ತು.

ಯಾವತ್ತಿಗೂ ಭಾರತವನ್ನು ಒಂದು ಮೆಲ್ಟಿಂಗ್ ಪಾಟ್‍ನ್ನಾಗಿ ರೂಪಿಸುವ ಕನಸು ಕಂಡವರಲ್ಲ ಇವರು. ಆದರೆ, ಧಾರ್ಮಿಕ ಕುರುಡತನದಿಂದ ರಾಜ್ಯಭಾರವನ್ನು ಮಾಡುವರು ರಾಜ್ಯಗಳ ಒಕ್ಕೂಟವೆಂದರೆ, ಅದೊಂದು ಮೆಲ್ಟಿಂಗ್ ಪಾಟ್‍ನ ಸ್ವರೂಪದಲ್ಲಿ ದೇಶವನ್ನು ಕಟ್ಟುವುದು ಎಂದು ತಿಳಿದುಕೊಂಡಿದ್ದಾರೆ. ಈ ಎಲ್ಲ ಅಪಚಾರಗಳಿಂದ ವಿಮೋಚನೆಗೊಳಿಸಿ, ಒಂದು ಅಪ್ಪಟ ವೈಚಾರಿಕ, ಪ್ರಜಾಸತ್ತಾತ್ಮಕ ಹಾಗೂ ಸಾಮಾಜಿಕ ಐಕ್ಯತೆಯಿಂದ ಕೂಡಿಬಾಳುವ ಒಕ್ಕೂಟವನ್ನಾಗಿ ರೂಪಿಸುವ ಕನಸನ್ನು ಅಂಬೇಡ್ಕರ್ ಅವರು ಕಂಡಿದ್ದರು.

ದೇಶ, ರಾಷ್ಟ್ರ, ಒಕ್ಕೂಟ ಹಾಗೂ ರಾಜ್ಯ ಎಂಬಿತ್ಯಾದಿ ಕಲ್ಪನೆಗಳ ನಡುವಣ ಅತರ್ಸಂಬಂಧ ಹಾಗೂ ತಾತ್ವಿಕತೆಯನ್ನು ಅರಿಯದೇ ಹೋದದ್ದರಿಂದ, ಇವತ್ತು ಹಲವು ಬಗೆಯ ಸವಾಲುಗಳನ್ನು ಎದುರಿಸುವ ಇಕ್ಕಟ್ಟಿಗೆ ನಾವು ಸಿಲುಕಿದ್ದೇವೆ. ಪರಿಣಾಮವಾಗಿ ಭಾರತ (ಇಂಡಿಯಾ) ಹಾಗೂ ಭಾರತೀಯ (ಇಂಡಿಯನ್) ಎಂಬೀ ನಾಮಪದ ಮತ್ತು ನಾಮವಿಶೇಷಣಗಳ ನಡುವಣ ನಂಟು ಕಳಿಚಿಹೋಗಿ, ಇವುಗಳು ಪರಸ್ಪರ ವಿರೋಧಿಗಳಾಗಿ ವರ್ತಿಸುತ್ತವೆ. ಅಂದರೆ, ಭಾರತ ಒಂದು ರಚನಾತ್ಮಕ ನೆಲೆಯಾದರೆ, ಭಾರತೀಯ ಎಂಬುದು ಈ ರಚನೆಯನ್ನು ವಿವರಿಸುವ ಬಗೆಯಾಗಿದೆ.

ಆದರೆ ಇವತ್ತು ಭಾರತದ ರಚನೆಯೊಳಗೆ ಇರುವವನು/ಳು ಭಾರತೀಯನಾಗಿಯೇ ಕಾಣುವುದಿಲ್ಲ. ಏಕೆಂದರೆ, ಭಾರತದ ಪ್ರತಿಯೊಬ್ಬ ಪ್ರಜೆಯೂ ಕೂಡ ಹಿಂದೂ ಧರ್ಮದ ವಕ್ತಾರರು ಮಂಡಿಸುವ ಎಲ್ಲ ಬಗೆಯ ನಿಲುವುಗಳನ್ನು ಒಪ್ಪಿದರೇ ಮಾತ್ರ ಅವನು/ಳು ಭಾರತೀಯನಾಗಿ ಒಪ್ಪಿಗೆಯನ್ನು ಪಡೆಯುತ್ತಾರೆ. ಯಾವುದೇ ಒಂದು ದೇಶದ ರಚನೆ ಅದು ಕೇವಲ ಯಾವುದೇ ಒಂದು ಧರ್ಮದ ವಿನ್ಯಾಸಕ್ಕೆ ಮಾತ್ರ ಸೀಮಿತಗೊಂಡರೆ, ಇಂತಹ ಅಪಾಯಗಳು ಎದುರಾಗುತ್ತವೆ.

ಇಂತಹ ಅಪಾಯಗಳನ್ನು ಗ್ರಹಿಸಿದ ಅಂಬೇಡ್ಕರ್ ಅವರು, ಯಾವುದೇ ಒಂದು ಭಾಷೆಯನ್ನು ಮಾತ್ನಾಡುವ ಜನರು ಒಂದು ನಿರ್ದಿಷ್ಟ ರಾಜ್ಯದೊಳಗೆ ನೆಲೆಗೊಂಡರೆ, ಅದು ಜಾತಿ, ಧರ್ಮದ ಕೋಮು ಸ್ವರೂಪವನ್ನು ಪಡೆದುಕೊಳ್ಳುತ್ತದೆ ಹಾಗೂ ಒಕ್ಕೂಟದ ತಾತ್ವಿಕತೆಗೆ ಎದುರಾಗಿ, ತಮ್ಮದೇ ಆಶೋತ್ತರಗಳನ್ನು ರೂಪಿಸಿಕೊಳ್ಳುತ್ತರೆ. ಪರಿಣಾಮವಾಗಿ ಸಾಮಾಜಿಕ, ರಾಜಕೀಯ ಹಾಗೂ ಭಾಷಿಕ ಅಂತರಗಳು ಮತ್ತಷ್ಟು ಬಿಗಡಾಯಿಸುವುದಕ್ಕೆ ಪೂರಕವಾಗಿ ವರ್ತಿಸುತ್ತಾರೆ ಎಂಬುದನ್ನು ಮನಗಂಡಿದ್ದರು. ಅದಕ್ಕಾಗಿಯೇ ರಾಜ್ಯಗಳ ಒಕ್ಕೂಟ ಮತ್ತು ಒಂದು ರಾಜ್ಯ ಒಂದು ಭಾಷೆ ಎಂಬ ಸೂತ್ರವನ್ನು ಅವರು ಪ್ರಸ್ತಾಪ ಮಾಡಿದ್ದು.

ಈ ಮೇಲಿನ ಚರ್ಚೆಗಳು ಸೂಕ್ಷ್ಮವಾಗಿ ಪ್ರಸ್ತಾಪಿಸುವ ಎಲ್ಲ ಬಗೆಯ ಅಪಾಯಗಳನ್ನು ನಾವು ಇವತ್ತು ಭಾರತದಲ್ಲಿ ನೋಡುತ್ತಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದ ಹಲವು ದಶಕಗಳ ನಂತರವೂ ಕೂಡ ನಮ್ಮ ಭಾರತ ರಾಜ್ಯಗಳ ಒಕ್ಕೂಟದಂತೆ ಕೆಲಸವನ್ನು ಮಾಡದೇ, ಹಲವು ರಾಜ್ಯಗಳು ಹಲವು ಕಾರಣಗಳಿಗಾಗಿ ಶತ್ರು ಪಾಳ್ಯಗಳಂತೆ ವರ್ತಿಸುತ್ತವೆ. ಈ ಎಲ್ಲ ಶತ್ರುಗಳನ್ನು ಗಾಳಗಳನ್ನಾಗಿ ಬಳಸುವ ಕುತಂತ್ರದಂತೆ, ಕೇಂದ್ರ ಸರಕಾರ ಕೆಲಸವನ್ನು ನಿರ್ವಹಿಸುತ್ತಿದೆ.

ಗಡಿ, ನೀರು, ನೈಸರ್ಗಿಕ ಸಂಪತ್ತು, ಭಾಷೆ ಮೊದಲಾದ ಹಲವು ನೆಪಗಳನ್ನು ಮುಂದಿಟ್ಟುಕೊಂಡು ರಾಜ್ಯ ರಾಜ್ಯಗಳ ನಡುವೆ ಜಗಳಗಳು ಏರ್ಪಡುತ್ತವೆ. ಇಂತಹ ಜಗಳಗಳನ್ನು ರಾಜಕೀಯ ಲಾಭಕ್ಕಾಗಿಯೇ ಕೇಂದ್ರ ಸರಕಾರ ತನ್ನ ಪಕ್ಷಪಾತಿ ಗುಣವನ್ನು ನಿರಂತರವಾಗಿ ಪ್ರದರ್ಶಿಸುತ್ತ ಬಂದಿದೆ. ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯದಂತಹ ಮೌಲ್ಯಗಳು ಇವತ್ತು ಕೇವಲ ಘೋಷಣೆಗಳಾಗಿ ಮಾತ್ರ ಅಸ್ತಿತ್ವದಲ್ಲಿವೆ.

ಈ ಎಲ್ಲ ಚರ್ಚೆಗಳು ನಮಗೆ ಖಾತ್ರಿಪಡಿಸುವುದೇನೆಂದರೆ, ರಾಜ್ಯಗಳ ಪುನರ್ರಚನೆಯ ಆಸಕ್ತಿಗಳು ಬಹುತೇಕವಾಗಿ ರಾಜಕೀಯ ಪ್ರೇರಿತವಾಗಿವೆ. ಹಾಗಾಗಿಯೇ, ಇವುಗಳನ್ನು ವಿರೋಧಿಸುವ ಚರ್ಚೆಗಳು ಎಷ್ಟೇ ತೀವ್ರವಾಗಿ ಮುಂಚೂಣೆಗೆ ಬಂದರೂ ಅವುಗಳನ್ನು ಮೌನಗೊಳಿಸುವ ಹುನ್ನಾರವನ್ನು ಮಾಡಲಾಯಿತು. ಸಾಮಾನ್ಯವಾಗಿ, ಪ್ರಿನ್ಸ್ಲಿ ಸ್ಟೇಟ್‍ಗಳನ್ನು ಏಕತ್ರಗೊಳಿಸುವ ಹಾಗೂ ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಿಗೆ ‘ವಿಶೇಷ ಸ್ಥಾನ’ವನ್ನು ಕಲ್ಪಿಸುವುದಕ್ಕೆ ವಿಶೇಷ ಗಮನವನ್ನು ನೀಡಲಾಯಿತು ಎಂದೂ ರಾಜ್ಯಗಳ ಪುನರ್ರಚನೆಯ ಹಿಂದಿನ ಉದ್ದೇಶಗಳನ್ನು ವ್ಯಾಖ್ಯಾನಿಸಲಾಗುತ್ತದೆ.

ಇರಲಿ, 2000ನೇ ಇಸ್ವಿಯಲ್ಲಿ ಛತ್ತೀಸ್ಘಡ್, ಜಾರ್ಖಂಡ್ ಹಾಗೂ ಉತ್ತರಾಂಚಲ್ ಹಾಗೂ ಈಚೆಗೆ ತೆಲಾಂಗಣ ಎಂಬೆಲ್ಲ ರಾಜ್ಯಗಳನ್ನು ಪುನರ್ರಚಿಸಲಾಯಿತು. ಈ ಎಲ್ಲ ರಾಜ್ಯಗಳನ್ನು ಭಾಷೆಯೇತರ ನೆಲೆಯಲ್ಲಿ ವ್ಯಾಖ್ಯಾನ ಮಾಡಲಾಗಿದೆ. ಇಲ್ಲಿ ಅತ್ಯಂತ ಸ್ಪಷ್ಟವಾಗಿರುವ ಅಂಶ ಏನೆಂದರೆ, ರಾಜ್ಯಗಳ ರಚನೆಯ ರಾಜಕಾರಣಕ್ಕೆ ಒತ್ತಾಸೆಯಾಗಿ ಈ ಎಲ್ಲ ಹೊಸ ರಾಜ್ಯಗಳು ಮೈದೆರದವು. ಆದರೆ ಉತ್ತಮ ಆಡಳಿತವನ್ನು ನೀಡುವ ಕಾರಣವನ್ನು ಮುಂದಿಟ್ಟುಕೊಂಡು ಏನೇ ವಾದವನ್ನು ಮಾಡಿದರೂ, ಇದರ ಹಿಂದಿನ ರಾಜಕೀಯ ನಿಲುವುಗಳು ಮಾತ್ರ ಕಣ್ಣಿಗೆ ರಾಚುತ್ತವೆ.

ಜೊತೆಗೆ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರ ನಡುವಣ ನಂಟಸ್ತಿಕೆ, ಕೇಂದ್ರ-ರಾಜ್ಯಗಳ ಸಂಬಂಧ ಹಾಗೂ ಸಾಮಾಜಿಕ ಅಸ್ಮಿತೆಯ ಪ್ರಶ್ನೆಗಳು ನಿರಂತರವಾಗಿ ರಾಜಕೀಯ ಸಂಕಥನದ ಭಾಗಗಳಾಗಿಯೇ ಚರ್ಚೆಗೆ ಒಳಪಡುತ್ತವೆ. ಹೊರತು ಸಮೂಹಗಳ ಏಳ್ಗೆಯ ಪ್ರಶ್ನೆಗಳನ್ನಾಗಿ ಅವುಗಳನ್ನು ಚರ್ಚಿಸುವುದಿಲ್ಲ. ವಿಭಜನೆಯ ನಂತರದ ಭಾರತದಲ್ಲಿ, ರಾಷ್ಟ್ರೀಯ ಐಕ್ಯತೆಯ ಪ್ರಶ್ನೆಗಳು ಒಂದುಕಡೆ ಹಾಗೂ ಸಾಂಸ್ಕ್ರುತಿಕ ಭಿನ್ನತೆಗಳನ್ನು ಗುರುತಿಸುವ ತುಡಿತಗಳು ಮತ್ತೊಂದು ಕಡೆ ತೀವ್ರವಾಗಿ ನಮ್ಮನ್ನು ಕಾಡುತ್ತಿದ್ದರು, ನಾವು ಅವುಗಳನ್ನು ಭಾರತೀಯ-ರಾಷ್ಟ್ರೀಯ ಚೌಕಟ್ಟಿಗೆ ಸೀಮಿತಗೊಳಿಸಿ ನೋಡುವ ಪ್ರಯತ್ನವನ್ನೇ ಮಾಡುತ್ತ ಬಂದಿದ್ದೇವೆ. ರಾಜ್ಯಗಳ ಸ್ವಾಯತ್ತತೆಯ ಪ್ರಶ್ನೆಗಳನ್ನೂ ಕೂಡ ಇದೇ ಚೌಕಟ್ಟಿಗೆ ಒಳಪಡಿಸಿದ್ದು ಮಾತ್ರ ವಿಪರ್ಯಾಸ. ಜನಾಂಗ-ಪ್ರಾದೇಶಿಕ ಅಸ್ಮಿತೆ ಹಾಗೂ ಉತ್ತಮ ಆಡಳಿತದ ನಡುವಣ ಸಂಬಂಧಗಳನ್ನು ಕುರಿತು ಮಾತ್ರ ಚಿಂತಿಸುವ ಕಡೆಗೆ ಇವತ್ತಿನ ಬೆಳವಣಿಗೆಗಳು ನಮ್ಮನ್ನು ಒತ್ತಾಯಿಸುತ್ತವೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕುರಿತ ಅಂಬೇಡ್ಕರ್ ಅವರ ವಿಶ್ಲೇಷಣೆಗಳಿಗೆ ಚಾರಿತ್ರಿಕ ಸನ್ನಿವೇಶವಿದೆ. ಈ ಚಾರಿತ್ರಿಕ ಸನ್ನಿವೇಶದಿಂದ ಹೊರಗಿಟ್ಟು ನೋಡಿದರೂ ಇವತ್ತಿಗೂ ಈ ವಿಶ್ಲೇಷಣೆಗಳು ನಮ್ಮ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳನ್ನು ಅರಿಯಲು ಒತ್ತಾಸೆಯಾಗುತ್ತವೆ. ರಾಜ್ಯಾಡಳಿತವನ್ನು ಪ್ರಾದೇಶೀಕರಣಗೊಳಿಸುವ ಇರಾದೆಯಿಂದ ರಾಜ್ಯಗಳ ಪುನರ್ರಚನೆಯನ್ನು ಕೈಗೊಳ್ಳಲಾಗಿದೆ. ಪ್ರಾದೇಶಿಕ ಅಸ್ಮಿತೆಯನ್ನು ಹೊಂದುವ ತುಡಿತಕ್ಕೆ ಮುಖ್ಯವಾಗಿ ಈ ಮೂರು ಕಾರಣಗಳನ್ನು ಇಲ್ಲಿ ಗುರುತಿಸಬಹುದು.

ಮತದಾರರ ಪ್ರಾತಿನಿದ್ಯದಲ್ಲಿ ಬದಲಾವಣೆಯನ್ನು ತರುವ ಮೂಲಕ ಈಗಾಗಲೇ ರಾಜಕೀಯವಾಗಿ ನಿಶ್ಕ್ರಿಯಗೊಂಡಿದ್ದ ಇಲ್ಲವೇ ಆಯಾ ಪ್ರದೇಶದ ಜನರಲ್ಲಿ ಸುಪ್ತವಾಗಿದ್ದ ಪ್ರಾದೇಶಿಕತೆಯ ಹಪಾಹಪಿತನವನ್ನು ಪುನರುಜ್ಜೀವನಗೊಳಿಸುವುದಾಗಿತ್ತು. ಜಾತಿ, ಜನಾಂಗ, ಭಾಷೆಗಳನ್ನೇ ನೆಲೆಯಾಗಿಸಿಕೊಂಡ ರಾಜಕೀಯ ಪ್ರೇರಿತ ಅಭಿವ್ಯಕ್ತಿಯನ್ನು ಸಜ್ಜುಗೊಳಿಸುವ ಮೂಲಕ ಹೊಸದಾಗಿ ಮೈಪಡೆದ ರಾಜ್ಯಗಳು, ಸಾಮಾಜಿಕ ಒಡಕುಗಳಿಗೆ ನಾಂದಿ ಹಾಡಿದವು. ಪ್ರಾದೇಶಿಕ ಇಲ್ಲವೇ ರಾಷ್ಟ್ರೀಯ ಪಕ್ಷಗಳೆಂಬ ಯಾವುದೇ ಭೇದಗಳನ್ನು ಹೊಂದದೆ ಪ್ರಾದೇಶಿಕ ಕೇಂದ್ರಿತವಾದ ಚುನಾವಣೆಯ ಪ್ರಚಾರ ಮತ್ತು ನೀತಿಗಳನ್ನು ಹುಟ್ಟು ಹಾಕಲಾಗುತ್ತದೆ.

ಆದಾಯ ಮತ್ತು ಬಳಕೆಯ ವಿನ್ಯಾಸದಲ್ಲಿ ಪ್ರಾದೇಶಿಕ ಅಸಮಾನತೆಯ ಪ್ರಮಾಣವು ದಿನದಿಂದ ದಿನಕ್ಕೆ ತಲೆದೊರುತ್ತಿದೆ. ಪರಿಣಾಮವಾಗಿ ಸುಧಾರಣೋತ್ತರ ಕಾಲದಲ್ಲಿ ನಿರ್ಲಕ್ಷ್ಯ ಮತ್ತು ತಾರತಮ್ಯ ಧೋರಣೆಗಳು ಉಲ್ಬಣಿಸುತ್ತಿವೆ ಎಂಬ ಗ್ರಹಿಕೆಗೆ ಇದು ಇಂಬು ನೀಡುತ್ತಿದೆ. ಕರಾವಳಿ ಮತ್ತು ಇತರೆ ಅಭಿವ್ರುದ್ಧಿ ಹೊಂದಿದ ಪ್ರದೇಶಗಳು ನಿಸ್ಸಂಶಯವಾಗಿ, ನಿರಂತರವಾಗಿ ಸಮಗ್ರ ಬೆಳವಣಿಗೆಯನ್ನು ಹೊಂದುತ್ತಿವೆ. ಹಾಗೂ ಇಂತಹ ಅವಕಶಾಗಳಿಂದ ವಂಚಿತವಾಗಿರುವ ಇನ್ನಿತರೆ ಪ್ರಾದೇಶಿಕ ಹೊರ ವಲಯಗಳಿಗೆ ಹೋಲಿಸಿದರೆ ಖಾಸಗಿ ಬಂಡವಾಳದ ಅಪಾರ ಹೂಡುವಿಕೆಯಿಂದಲೂ ಅಭಿವ್ರುದ್ಧಿ ಹೊಂದಿದ ಈ ಪ್ರದೇಶಗಳೇ ಮತ್ತೆ ಮತ್ತೆ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಿವೆ.

ಆದರೆ ಈ ಪ್ರಾದೇಶಿಕ ಅಭಿವ್ರುದ್ಧಿಯಿಂದ ಹೊರಗುಳಿದ ಪ್ರಾದೇಶಿಕ ವಲಯಗಳು ಕಾನೂನು ಮತ್ತು ಸುವ್ಯವಸ್ಥೆಯಿಂದಲೂ ಬಾಧಿಸಲ್ಪಟ್ಟಿವೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಮೂಲಭೂತ ಸೌಕರ್ಯಗಳ ಕೊರತೆಯಿಂದಲೂ ಬಳಲುತ್ತಿವೆ.
ಸಂವಿಧಾನ ರಾಜ್ಯಗಳೊಳಗೆಯೇ ಸಂಪತ್ಭರಿತ ಪ್ರದೇಶಗಳು ಇದ್ದು, ಅಗಾಧ ಪ್ರಮಾಣದಲ್ಲಿ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಿದ್ದು ಮತ್ತು ಪರಿಣಾಮಕಾರಿ ಬೆಳವಣಿಗೆಯನ್ನು ಹೊಂದುತ್ತಿದ್ದಾಗಲೂ, ಈ ಪ್ರದೇಶಗಳ ಮೇಲೆ ನಿರಂತರವಾಗಿ ಅವಲಂಭಿತವಾಗಿದ್ದ ಇತರೆ ಹಿಂದೂಳಿದ ಪ್ರದೇಶಗಳಿಗೆ ಯಾವುದೇ ಬಗೆಯ ಆದಾಯವನ್ನು ವರ್ಗಾಯಿಸುವುದನ್ನು ಈ ಸಂಪತ್ಭರಿತ ಪ್ರದೇಶಗಳು ನಿರಾಕರಿಸುತ್ತವೆ.

ಈ ಧೋರಣೆಗಳನ್ನು ವ್ಯಂಗವಾಗಿ ‘ಶ್ರೀಮಂತಿಕೆಯನ್ನು ಹಿಂಪಡೆಯುವ’ ಬಗೆಯನ್ನಾಗಿ ಇಲ್ಲಿ ನೋಡುತ್ತೇವೆ. ಇಲ್ಲಿಯ ಸ್ಥಳೀಯ ಮೇಲ್ವರ್ಗಗಳ ಆರೋಪ ಏನೆಂದರೆ, ರಾಜಕೀಯವಾಗಿ ಪ್ರಾಬಲ್ಯವನ್ನು ಹೊಂದಿರುವ ಇತರೆ ಪ್ರದೇಶದ ಮೇಲ್ವರ್ಗಗಳು ಆರ್ಥಿಕವಾಗಿ, ಆಡಳಿತಾತ್ಮಕವಾಗಿ ತಾರತಮ್ಯ ಧೋರಣೆಗಳನ್ನು ಹೊಂದುತ್ತವೆ ಎಂಬುದಾಗಿದೆ.

ಈ ಮೇಲಿನ ಪ್ರಕ್ರಿಯೆಯ ಪರಿಣಾಮವಾಗಿ ಭಾರತದ ಫೆಡರಲ್ ತಾತ್ವಿಕತೆಯಲ್ಲಿ ಗಮನಾರ್ಹವಾದ ಪಲ್ಲಟಗಳು ಏರ್ಪಟ್ಟಿರುತ್ತವೆ. ಈ ಪಲ್ಲಟಗಳು ಹಲವು ಸ್ವರೂಪದಲ್ಲಿ ಪ್ರತಿಫಲಿಸಿರುವುದನ್ನು ಈ ಮುಂದಿನ ಬೆಳವಣಿಗೆಗಳ ಮೂಲಕ ನೋಡುತ್ತೇವೆ. ಅಂದರೆ;
ಪ್ರಾದೇಶಿಕ ಅಸ್ಮಿತೆ, ಸಂಸ್ಕ್ರುತಿ ಹಾಗೂ ಭೌಗೋಳಿಕ ಭಿನ್ನತೆಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಆಡಳಿತಾತ್ಮಕ ವಲಯಗಳನ್ನಾಗಿ ರೂಪಿಸುವುದಕ್ಕೆ ಇವುಗಳು ಮಹತ್ವದ ಮಾನದಂಡಗಳಾಗಿರುತ್ತವೆ.

ಪ್ರತ್ಯೇಕ ರಾಜ್ಯಗಳ ಕೋರಿ ನಡೆಸುವ ಚಳವಳಿಗಳು ಇವತ್ತು ಯಾವುದೇ ಬಗೆಯ ಭಾಷಾ ದುರಾಭಿಮಾನ ಇಲ್ಲವೇ ಪ್ರಾಂತೀಯ ಕಳಂಕಗಳನ್ನಾಗಿ ನೋಡುವ ಕಾಲವಲ್ಲವಿದು. ದಿಟ, ಹಿಂದೊಂದು ಕಾಲದಲ್ಲಿ ಇದನ್ನು ರಾಷ್ಟ್ರ ವಿರೋಧಿ ನಿಲುವನ್ನಾಗಿ ನೋಡುವ ಕ್ರಮವೊಂದಿತ್ತು.

ಇವತ್ತು ಹೊಸ ರಾಜ್ಯಗಳ ಪ್ರಸ್ತಾಪವು ಭಾಷಾ ತತ್ವಗಳ ಆಧಾರದ ಮೇಲೆ ಆಗುತ್ತಿಲ್ಲ. ಬದಲಾಗಿ ಅಭಿವ್ರುದ್ಧಿ ಮತ್ತು ಉತ್ತಮ ಆಡಳಿತವನ್ನು ಕೊಡುವ ನೆಪದಲ್ಲಿ ಮುಂಚೂಣೆಗೆ ಬರುತ್ತಿವೆ. ಅದರೆ ಮೊದಲ ಹಂತದ ರಾಜ್ಯಗಳ ಪುನರ್ರಚನೆಯು ಭಾಷೆಗಳನ್ನೇ ಆಧಾರವಾಗಿಟ್ಟುಕೊಂಡು ನಡೆದಿತ್ತು ಎಂಬುದು ಗಮನಾರ್ಹ.

ಆದರೆ ವೈರುಧ್ಯವೇನಂದರೆ, ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರದೇಶಗಳಲ್ಲಿ ನೆಲೆಗೊಂಡಿದ್ದ ಬೇರೆ ಬೇರೆ ಒಳನುಡಿಗಳು ತಮ್ಮದೆಯಾದ ತಾಯ್ನೆಲವನ್ನು ಹೊಂದುವ ಇರಾದೆಯನ್ನೂ ತಾಳಿದ್ದವು. ಬುಂದೆಲ್ಖಂಡ, ರುಹೆಲ್ಖಂಡ ಹಾಗೂ ಮಿಥಿಲಾಂಚಲ್ ಪ್ರದೇಶಗಳು ತಮ್ಮ ಒಳನುಡಿಗಳಲ್ಲಿ ಹುದುಗಿರುವ ಸಂಸ್ಕ್ರುತಿ ಹಾಗೂ ಸಾಹಿತ್ಯದ ವೈಶಿಷ್ಟ್ಯ ಮತ್ತು ಶ್ರೀಮಂತಿಕೆಯನ್ನು ಕಂಡರಿಸುವ ಹಂಬಲವೂ ಇಂತಹ ಇರಾದೆಗಳಲ್ಲಿ ಅಡಕವಾಗಿದ್ದವು. ಕಳೆದ ದಶಕದಲ್ಲಿ ಅಂದರೆ ನವೆಂಬರ್ 2000ನೇ ಇಸ್ವಿಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ಛತ್ತೀಸ್ಘಡ್, ಉತ್ತರಾಂಚಲ್ ಹಾಗೂ ಜಾರ್ಖಂಡ್ ಎಂಬ ಹೊಸ ರಾಜ್ಯಗಳು ಅಸ್ತಿತ್ವಕ್ಕೆ ಬಂದವು.

ಈ ಮೂರು ರಾಜ್ಯಗಳು ಮೈದಾಳಲು ಕಾರಣ, ಫೆಡರಲ್ ಚಿಂತನೆಯಲ್ಲಿ ಏರ್ಪಟ್ಟ ಸಾಂಸ್ಕ್ರುತಿಕ-ರಾಜಕೀಯ ಪಲ್ಲಟಗಳೇ ಎಂದು ಹೇಳಬೇಕು. ಈ ಹೊಸ ರಾಜ್ಯಗಳ ಪುನರ್ರಚನೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲಿಸಿರುವುದನ್ನು ಮುಖ್ಯವಾಗಿ ಇಲ್ಲಿ ನೋಡಬಹುದು. ರಾಷ್ಟ್ರೀಯ ಪಕ್ಷಗಳ ಏಕಮುಖಿ ನಿಲುವುಗಳಿಂದ ಹಾಗೂ ತೀವ್ರವಾಗಿ ಬೆಳೆಯುತ್ತಿರುವ ರಾಜಕೀಯ ಸ್ಪರ್ಧಾತ್ಮಕ ವಾತಾವರಣದಿಂದ ತಪ್ಪಿಸಿಕೊಳ್ಳುವ ತಂತ್ರಗಳನ್ನೂ ಇಲ್ಲಿ ಕಾಣಬಹುದು. ಅಂದರೆ ಯಾವುದೇ ಒಂದು ರಾಷ್ಟ್ರೀಯ ಪಕ್ಷವು ಕೇಂದ್ರದಲ್ಲಿ ಅಧಿಕಾರವನ್ನು ಪಡೆಯುವುದರಿಂದ, ಪ್ರಾದೇಶಿಕ ಕಾಳಜಿಗಳನ್ನು ಈ ರಾಷ್ಟ್ರೀಯ ಪಕ್ಷಗಳು ಹೊಂದಿರಲಾರವು ಎಂಬ ಅನುಮಾನವೂ ಇಲ್ಲಿದೆ.

2009 ಡಿಸೆಂಬರ್‍ನಲ್ಲಿ ಪ್ರತ್ಯೇಕ ತೆಲೆಂಗಾಣ ರಾಜ್ಯದ ಹೊಸ ಬೇಡಿಕೆಯು ತೀವ್ರ ಸ್ವರೂಪವನ್ನು ಪಡೆದುಕೊಂಡಾಗ, ಕೇಂದ್ರ ಸರಕಾರವು ಈ ಬೇಡಿಕೆಯನ್ನು ಪರಿಗಣಿಸುವಾಗ, ಇನ್ನೂ ಹಲವಾರು ಹೊಸ ಮತ್ತು ಹಳೆ ಬೇಡಿಕೆಗಳು ಮುಂಚೂಣೆಗೆ ಬಂದವು. ಉದಾ.ಗೆ ಕರ್ನಾಟಕದಲ್ಲಿ ಕೂರ್ಗ್, ಬಿಹಾರದಲ್ಲಿ ಮಿಥಿಲಾಂಚಲ್, ಗುಜರಾತಿನಲ್ಲಿ ಸೌರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಗೋರ್ಖಲ್ಯಾಂಡ್ ಹಾಗೂ ಕಾಮ್ಟಪೂರ್ ಮತ್ತು ಮಹಾರಾಷ್ಟ್ರದಲ್ಲಿ ವಿದರ್ಭ ಮೊದಲಾದ ಪ್ರದೇಶಗಳು ಪ್ರತ್ಯೇಕ ರಾಜ್ಯಗಳ ಬೇಡಿಕೆಗಳನ್ನು ಮುಂದಿಟ್ಟಿರುವುದು ಈಗ ಇತಿಹಾಸ. ತಮ್ಮ ತಾಯ್ನೆಲದಿಂದ ಪ್ರತ್ಯೇಕತೆಯನ್ನು ಬಯಸುವುದರ ಹಿಂದೆ ಕೇವಲ ಭಾಷಿಕ ಕಟ್ಟಾಭಿಮಾನ ಮಾತ್ರ ಇರಲಾರದು ಎಂಬುದು ಇಲ್ಲಿ ಅತ್ಯಂತ ನಿಚ್ಚಳವಾಗಿದೆ.

ಭಾರತವನ್ನು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವೆಂದು ಈಗಾಗಲೇ ಪರಿಗಣಿಸಿದ್ದರೂ, ಆಳವಾಗಿ ವಿಶ್ಲೇಷಿಸಿ ನೋಡಿದಾಗ ಈ ನೆಲೆ ಇನ್ನೂ ಭ್ರೂಣಾವಸ್ಥೆಯಲ್ಲಿಯೇ ಇರುವುದನ್ನು ನಾವು ಯಾರಾದರೂ ಮನಗಾಣುತ್ತೇವೆ. ಪ್ರಜಾಸತ್ತಾತ್ಮಕ ಅರಿವು ಮತ್ತು ಕ್ರಿಯೆಗಳು ಇನ್ನೂ ಪಕ್ವಗೊಳ್ಳುವ ಜರೂರಿದೆ. ಭಾಷೆಗಳ ಬಗೆಗೆ ಭಾರತವು ತಾಳಿರುವ ನಿಲುವುಗಳೇ ಇದಕ್ಕೆ ಸ್ಪಷ್ಟ ನಿದರ್ಶನ.

ಹಾಗಾಗಿ ಭಾರತದ ಇವತ್ತಿನ ಭಾಷಿಕ ಸನ್ನಿವೇಶವನ್ನು ಅರಿಯಲು, ಅಂಬೇಡ್ಕರ್ ಅವರ ಭಾಷಿಕ ಚಿಂತನೆಗಳನ್ನು ಮರುಪರಿಶೀಲಿಸುವುದು ಅತ್ಯಂತ ಅಗತ್ಯವಾಗಿದೆ. ಭಾರತದ ಭಾಷಾ ನೀತಿಗಳು ಹಲವು ಬಗೆಯ ಬದಲಾವಣೆಗೆ ಒಳಪಟ್ಟಿವೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯೇ ಇದಕ್ಕೆ ಅತ್ಯಂತ ಮಹತ್ವದ ಸಾಕ್ಷಿಯಾಗಿದೆ. ಭಾರತವು ಒಂದು ಅಪ್ಪಟ ಬಹುಭಾಷಿಕ ದೇಶವಾಗಿದೆ. ಈ ದಿಟ ಬಹುಭಾಷಿಕತೆಯನ್ನು ಅರಿಯಲು ಸಾಕಷ್ಟು ಚಿಂತಕರು ತಮ್ಮ ಚಿಂತನೆಗಳನ್ನು ಬೆಳೆಸಿದ್ದಾರೆ.

ಇಂತಹ ಪ್ರಖ್ಯಾತ ಚಿಂತಕರು ಮತ್ತು ನೀತಿ ನಿರೂಪಕರನ್ನು ಬದಿಗಿಟ್ಟು, ಹೊಸ ಬಗೆಯ ಬಹುಭಾಷಿಕತೆಗೆ ಸಂಬಂಧಿಸಿದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಏಕೆಂದರೆ ಭಾಷಾವಾರು ಪ್ರಾಂತಗಳ ಪುನರ್ರಚನೆಯ ಬಗೆಗೆ ಈ ಚಿಂತಕರ ನಿಲುವುಗಳು ಅತ್ಯಂತ ವ್ಯತರಿಕ್ತವಾಗಿದ್ದವು.
ಅಂಬೇಡ್ಕರ್ ಅವರು ಭಾಷಾವಾರು ರಾಜ್ಯಗಳ ರಚನೆಯ ಮುಖ್ಯ ಪ್ರತಿಪಾದಕರು. ಆದರೆ ಈ ಭಾಷಾವಾರು ರಾಜ್ಯಗಳು ತಮ್ಮ ತಮ್ಮ ರಾಜ್ಯ ಭಾಷೆಗಳಿಗೆ (ಉದಾ.ಗೆ ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು ಮತ್ತು ಆಂದ್ರಪ್ರದೇಶ ಹಾಗೂ ತೆಲಾಂಗಣದಲ್ಲಿ ತೆಲುಗು ಇತ್ಯಾದಿ…) ಬದಲಾಗಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಬಳಸಬೇಕು ಎಂಬ ನಿಲುವನ್ನು ಹೊಂದಿದ್ದರು.

ಭಾರತವು ಮಧ್ಯಕಾಲೀನ ಭಾರತದ ಮರುರೂಪವನ್ನು ಪಡೆಯುವ ಅಪಾಯದಿಂದ ತಪ್ಪಿಸಲು, ಅಂಬೇಡ್ಕರ್ ಅವರು ಈ ನಿಲುವನ್ನು ತಾಳುತ್ತಾರೆ. ಏಕೆಂದರೆ, “ನಮ್ಮ ಭಾರತ ಆಧುನಿಕ ಭಾರತವಾಗಿ ಉಳಿಯದೇ ಪರಸ್ಪರ ವೈರತ್ವ ಮತ್ತು ಯುದ್ಧಗಳಲ್ಲಿ ಮುಳುಗಿರುವ ಅನೇಕ ದೇಶಗಳನ್ನೊಳಗೊಂಡ ಮಧ್ಯಕಾಲೀನ ಭಾರತವಾಗಿ ಅದು ಪರಿಣಮಿಸುತ್ತದೆ”. ಎಂಬ ಅಭಿಪ್ರಾಯ ಅವರದಾಗಿತ್ತು. ಮತ್ತು ಈ ಅಭಿಪ್ರಾಯವು ಇವತ್ತು ನಾವು ಭಾಷಿಕವಾಗಿ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ವಿಶ್ಲೇಷಿಸಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತದೆ.

ಹೌದು, ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿಯೇ ರಚನೆಗೊಂಡ ಭಾರತದ ಸಂವಿಧಾನವು, ಅವರೇ ಊಹಿಸಿದ ಆತಂಕವನ್ನೂ ಲೆಕ್ಕಿಸದೇ ಇವತ್ತು ಸಂವಿಧಾನವು ಆಯಾ ರಾಜ್ಯಗಳ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ನಮಗೆ ಒದಗಿಸಿದೆ.

ಭಾಷಾವಾರು ರಾಜ್ಯಗಳನ್ನು ರಚಿಸುವ ಪ್ರಕ್ರಿಯೆಯಲ್ಲಿಯೇ ಅಪಾಯಗಳು ಅಡಗಿರುತ್ತವೆ ಎಂಬ ಈ ವಿಚಾರವು ಎಷ್ಟೊಂದು ಸುಸ್ಪಷ್ಟವಾದುದೋ, ನಾವು ಭಾಷಾವಾರು ರಾಜ್ಯಗಳನ್ನು ರಚಿಸದಿದ್ದರೂ ಅದಕ್ಕಿಂತ ಹೆಚ್ಚಿನ ಅಪಾಯಕ್ಕೆ ಈಡಾಗುತ್ತೇವೆ ಎಂಬುದು ಕೂಡ ಅಷ್ಟೇ ನಿಖರವಾದ ನಿಲುವಾಗಿದೆ. ಈ ವಿಶ್ಲೇಷಣೆಗಳನ್ನು ಅಂಬೇಡ್ಕರ್ ಅವರು ತಮ್ಮ ಭಾಷಾವಾರು ರಾಜ್ಯಗಳನ್ನು ಕುರಿತ ಚಿಂತನೆಗಳು (1955) ಅನ್ನುವ ಬರಹದಲ್ಲಿ ಮಂಡಿಸುತ್ತಾರೆ.

ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಏರ್ಪಡುವ ಪರಿಣಾಮಗಳನ್ನು ಒಂದಿಲ್ಲ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಬಹುದು. ಆದರೆ ಈ ಭಾಷಾವಾರು ಪ್ರಾಂತಗಳನ್ನು ರಚಿಸದ ಕಾರಣ ಎದುರಾಗುವ ಬಿಕ್ಕಟ್ಟುಗಳನ್ನು ನಿರ್ವವಹಿಸುವುದು ಅತ್ಯಂತ ದುಸ್ತರ ಎಂಬ ಅಭಿಪ್ರಾಯವನ್ನೂ ಇವರು ವ್ಯಕ್ತಪಡಿಸುತ್ತಾರೆ. ಇನ್ನೂ ಮುಂದುವರೆದು ಅಂಬೇಡ್ಕರ್ ಅವರು ಹೇಳುವುದೇನೆಂದರೆ, “ವಿವೇಕಶೀಲನೂ ದ್ರುಢ ಮನೋಭಾವದವನೂ ಅದ ಯಾವುದೇ ಮುತ್ಸದ್ದಿ ರಾಜಕಾರಣಿ (ಸ್ಟೇಟ್ಸ್‍ಮನ್)ಯು ಭಾಷಾವಾರು ಪ್ರಾಂತಗಳ ಪುನರ್ರಚನೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಬಲ್ಲನು.

ಆದರೆ ಈ ಭಾಷಾವಾರು ವಿಂಗಡಣೆಗೆ ಒಳಗಾಗದ ಸಂಕೀರ್ಣ ಭಾರತದಲ್ಲಿ ತಲೆದೊರುವ ಅಪಾಯಗಳು, ಎಷ್ಟೇ ಮುತ್ಸದ್ದಿ ರಜಕಾರಣಿಯಾಗಿದ್ದರೂ ಅವನ ನಿಯಂತ್ರಕ್ಕೆ ಈ ಅಪಾಯಗಳು ಸಿಗಲಾರವು” ಎಂಬ ಕಟು ಸತ್ಯವನ್ನು ಅಂಬೇಡ್ಕರ್ ಅವರು ನಮಗೆ ಇಲ್ಲಿ ಮನವರಿಕೆ ಮಾಡುತ್ತಾರೆ. ನಮ್ಮ ಗ್ರಹಿಕೆಗೆ ಹೊರತಾದ ಬಿಕ್ಕಟ್ಟುಗಳು ಸಂಕೀರ್ಣ ಬಹುಭಾಷಿಕ ಸನ್ನಿವೇಶದಲ್ಲಿ (ಮಧ್ಯಕಾಲೀನ ಭಾರತ) ಹುದುಗಿರುತ್ತವೆ ಎಂಬ ಕಟು ವಾಸ್ತವವನ್ನು ಅರಿಯುವುದರ ಜೊತೆಗೆ, ಪ್ರಜಾಪ್ರಭುತ್ವ (ಬಹುಭಾಷಿಕ) ಭಾರತದಲ್ಲಿ ಎದುರಾಗುವ ಭಾಷಿಕ ಬಿಕ್ಕಟ್ಟುಗಳನ್ನು ನಿರ್ವಹಿಸುವ ಕಾರ್ಯಯೋಜನೆಗಳನ್ನು ನೆಲೆಗೊಳಿಸುವ ಅಗತ್ಯವಿದೆ ಎಂಬ ಅನಿವಾರ್ಯತೆಯನ್ನೂ ಮನಗಾಣುತ್ತೇವೆ.

‘ಯಾವುದೇ ಭಾಷಾವಾರು ರಾಜ್ಯ ತನ್ನ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಹೊಂದುವ ಮೂಲಕ ಸ್ವತಂತ್ರ ರಾಷ್ಟ್ರವಾಗಿ ಬೆಳೆಯಬಹುದು. ಸ್ವತಂತ್ರ ರಾಜ್ಯ ಮತ್ತು ಸ್ವತಂತ್ರ ರಾಷ್ಟ್ರಗಳ ನಡುವಣ ದಾರಿ ಅತ್ಯಂತ ಕಿರಿದಾದುದು. ಒಂದು ವೇಳೆ ಹೀಗಾದರೆ, ನಮ್ಮ ಭಾರತವು ಆಧುನಿಕ ಭಾರತವಾಗಿ ಉಳಿಯದೇ, ಹಲವು ದೇಶಗಳನ್ನೊಳಗೊಂಡು ನಿರಂತರವಾಗಿ ಪರಸ್ಪರ ವೈರತ್ವ ಮತ್ತು ಯುದ್ಧದಲ್ಲಿ ಮುಳುಗಿರುವ ಮಧ್ಯಕಾಲೀನ ಭಾರತವಾಗಿ ಮೈದಾಳುತ್ತದೆ’.

ಭಾಷಾವಾರು ಪ್ರಾಂತಗಳ ಪುನರ್ರಚನೆಯ ಸಾಧಕ ಮತ್ತು ಬಾಧಕಗಳನ್ನು ಪರಿಶೀಲಿಸುವ ದಾರಿಗಳನ್ನು ಅಂಬೇಡ್ಕರ್ ಅವರು ಅತ್ಯಂತ ಖಚಿತವಾಗಿ ಇಲ್ಲಿ ತೋರಿಸಿರುತ್ತಾರೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯನ್ನು ಕೇವಲ ಭಾವನಾತ್ಮಕ ವಿದ್ಯಮಾನವನ್ನಾಗಿ ಪರಿಗಣಿಸದೇ ಅದನ್ನೊಂದು ವೈಜ್ಞಾನಿಕ ಮತ್ತು ತಾತ್ವಿಕ ನಿಲುವನ್ನಾಗಿ ನೋಡಿದರೆ, ಅಂಬೇಡ್ಕರ್ ಈ ಕುರಿತು ಏನನ್ನು ಸೂಚಿಸುತ್ತಿದ್ದಾರೆ, ಯಾಕೇ ಇವರ ವಿಶ್ಲೇಷಣೆಗಳು ನಮಗೆ ಇವತ್ತು ವ್ಯತರಿಕ್ತವಾಗಿ ಕಾಣುತ್ತವೆ ಎಂಬುದನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಭಾಷಾವಾರು ಪ್ರಾಂತಗಳ ಪುನರ್ರಚನೆಯ ಪ್ರಕ್ರಿಯೆಯಲ್ಲಿ ಅಪಾಯಗಳು ಇರುವಂತೆ, ಭಾಷಾವಾರು ಪ್ರಾಂತಗಳನ್ನು ಪುನರ್ರಚಿಸದೇ ಹೋದರು ಅಪಾಯಗಳು ಹೇಗೆ ಅಡಕವಾಗಿರುತ್ತವೆ ಎಂಬ ವೈಜ್ಞಾನಿಕ ದಿಟವನ್ನು ಇಲ್ಲಿ ಮನಗಾಣುತ್ತೇವೆ.

ಹಾಗಾದರೆ ಅಂಬೇಡ್ಕರ್ ಅವರು ಏನನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಇವರ ವಿಶ್ಲೇಷಣೆಗಳು ಅತ್ಯಂತ ನಿಚ್ಚಳವಾಗಿರುತ್ತವೆ. ಅಂದರೆ ಬಹುಭಾಷಿಕ ಸನ್ನಿವೇಶವನ್ನು ನಿಭಾಯಿಸುವ ದಾರಿಗಳನ್ನು ತೋರಿಸುವ ಜೊತೆಗೆ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿನ್ಯಾಸಗಳನ್ನು ಮರುರೂಪಿಸಿಕೊಳ್ಳುವ ಬಗೆಗಳನ್ನೂ ಇಲ್ಲಿ ಕಂಡರಿಸುತ್ತಾರೆ. ಹಾಗಾಗಿ ಮಧ್ಯಕಾಲೀನ ಭಾರತದ ಸಂದರ್ಭಕ್ಕೆ ಈಡಾಗುವ ಅಪಾಯವನ್ನು ತಪ್ಪಿಸುವ ತಂತ್ರಗಳನ್ನು ಅಂಬೇಡ್ಕರ್ ಚಿಂತನೆಗಳಲ್ಲಿ ಕಾಣುತ್ತೇವೆ.

ಹಾಗಾಗಿ ಪುನರ್ರಚಿತ ರಾಜ್ಯಗಳಲ್ಲಿ ಎದುರಾಗುವ ಭಾಷಿಕ ಅಪಾಯಗಳಿಂದ ತಪ್ಪಿಸಲು, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಬದಲಾಗಿ ಹಿಂದಿ ಇಲ್ಲವೇ ಇಂಗ್ಲಿಶು ಭಾಷೆಗಳನ್ನು ಬಳಸುವ ಪ್ರಸ್ತಾವನೆಯನ್ನು ಅಂಬೇಡ್ಕರ್ ಮಂಡಿಸುತ್ತಾರೆ. ಅಂದರೆ, “ಈ ಅಪಾಯಗಳನ್ನು ಬಗೆಹರಿಸುವುದು ಹೇಗೆ? ಇಂತಹ ಅಪಾಯಗಳನ್ನು ಬಗೆಹರಿಸಲು ಈ ಸದ್ಯ ನನಗೆ ಅನ್ನಿಸುವ ಏಕೈಕ ಉಪಾಯವೇನೆಂದರೆ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನು ಅಧಿಕ್ರುತ ಆಡಳಿತ ಭಾಷೆಯನ್ನಾಗಿ ಬಳಸುವ ಅವಕಾಶವನ್ನು ಸಂವಿಧಾನದಲ್ಲಿಯೇ ಒದಗಿಸಕೂಡದು.

ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಹಿಂದಿಯನ್ನು ಬಳಸಬೇಕು. ಭಾರತವು ಈ ನಿಲುವಿಗೆ ಹೊಂದಿಕೊಳ್ಳುವರಿಗೆ ಇಂಗ್ಲಿಶನ್ನು ಈ ಉದ್ದೇಶಕ್ಕಾಗಿ ಬಳಸಬೇಕು. ಭಾರತೀಯರು ಈ ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವವರೇ? ಒಂದುಪಕ್ಷ ಇಲ್ಲವಾದಲ್ಲಿ, ಭಾಷಾವಾರು ರಾಜ್ಯಗಳು ಸಹಜವಾಗಿಯೇ ಅಪಾಯಕ್ಕೆ ಈಡಾಗುತ್ತವೆ”. ಹಾಗಾದರೆ ಅಂಬೇಡ್ಕರ್ ಅವರ ಈ ಮಾತುಗಳು ಏನನ್ನು ಸಾಬೀತಪಡಿಸುತ್ತವೆ ಎಂಬ ಅನುಮಾನವು ನಮ್ಮಲ್ಲಿ ಉಂಟಾಗದೇ ಇರಲಾರದು. ಸಮಾನತೆ, ಸ್ವಾತಂತ್ರ ಮತ್ತು ಬಾಂಧವ್ಯ ಎಂಬೀ ತ್ರಿವಳಿ ತತ್ವಗಳನ್ನು ಮಂಡಿಸುವ ಅಂಬೇಡ್ಕರ್ ಹಾಗೂ ಹಿಂದಿಯನ್ನು ರಾಜ್ಯದ ಅಧಿಕ್ರುತ ಭಾಷೆಯನ್ನಾಗಿ ಪ್ರಸ್ತಾಪಿಸುವ ಅಂಬೇಡ್ಕರ್ ಅವರ ನಿಲುವುಗಳ ನಡುವೇ ಯಾವುದೇ ಹೊಂದಾಣಿಕೆ ಕಾಣಿಸುತ್ತಿಲ್ಲ. ಇಲ್ಲಿ ಕೇವಲ ಏರುಪೇರುಗಳು ಇಲ್ಲವೇ ವಿರೋಧಭಾಸಗಳು ಇರುವಂತೆ ಭಾಸವಾಗುತ್ತದೆ.

ಮೂಲಭೂತ ಹಕ್ಕುಗಳು (ಫಂಡಾಮೆಂಟಲ್ ರೈಟ್ಸ್) ಮತ್ತು ರಾಜ್ಯ ನಿರ್ದೇಶಕ ತತ್ವಗಳ (ಸ್ಟೇಟ್ ಡಿರೆಕ್ಟಿವ್ ಪ್ರಿನ್ಸಿಪಲ್ಸ್) ನಡುವೆ ತಾತ್ವಿಕ ಹಾಗೂ ಪ್ರ್ಯಾಗ್ಮಾಟಿಕ್ (ಪ್ರಯೋಜನಕಾರಿ ತತ್ವ) ನಂಟನ್ನು ಕಲ್ಪಿಸಿರುವ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡರೆ ಏನೆಲ್ಲ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಬಿಕ್ಕಟ್ಟುಗಳು ಎದುರಾಗುತ್ತವೆ ಎಂಬ ವಾಸ್ತವ ಗೊತ್ತಿರಲಿಲ್ಲವೇ? ದಿಟ, ಆಯಾ ರಾಜ್ಯದ ಪ್ರಾದೇಶಿಕ ಭಾಷೆಯನ್ನೇ ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಂಡಿದ್ದರಿಂದ, ಯಾವುದೇ ವ್ಯತ್ಯಾಸವನ್ನು ನಾವು ಇವತ್ತು ಕಾಣುತ್ತಿಲ್ಲ. ಅಂದರೆ ಕಲ್ಯಾಣ ರಾಜ್ಯಗಳನ್ನು ಕಟ್ಟುವುದಕ್ಕೆ ಸಾಧ್ಯವಾಗಿದೆ ಎಂದು ಹೇಳಲಾರೆ.

ಹಾಗಾದರೆ, ಅಂಬೇಡ್ಕರ್ ಅವರ ನಿಲುವುಗಳನ್ನು ಹೇಗೆ ವಿಶ್ಲೇಷಿಸಬೇಕು? ಯಾವ ತಾತ್ವಿಕ ವಿನ್ಯಾಸವನ್ನು ನೆಲೆಯಾಗಿಸಿಕೊಂಡು ಇವರ ಈ ನಿಲುವನ್ನು ಬಿಡಿಸಿ ನೋಡಬೇಕು? ಹಿಂದು ಧರ್ಮ ಮತ್ತು ಶಾಸ್ತ್ರಗಳಲ್ಲಿ ಹುದುಗಿರುವ ಜೀವವಿರೋಧಿ ಧೋರಣೆಗಳ ವಿರುದ್ಧ ತಮ್ಮ ಬದುಕಿನ ಉದ್ದಕ್ಕೂ ಹೋರಾಡಿದ ಅಂಬೇಡ್ಕರ್ ಅವರಿಗೆ, ಹಿಂದಿಯನ್ನು ಅಧಿಕ್ರುತ ರಾಜ್ಯ ಭಾಷೆಯನ್ನಾಗಿ ಒಪ್ಪಿಕೊಳ್ಳುವುದರಿಂದ, ಏನೆಲ್ಲ ಸಾಮಾಜಿಕ ಭಾಷಾಶಾಸ್ತ್ರೀಯ ಅಪಾಯಗಳು (ಸೋಶಿಯೋಲಿಂಗ್ವಿಸ್ಟಿಕ್ ಥ್ರೆಟ್ಸ್) ಎದುರಾಗುತ್ತವೆ ಎಂಬ ಕಟು ವಾಸ್ತವ ಅಂಬೇಡ್ಕರ್ ಅವರಿಗೆ ಗೋಚರಿಸಲಿಲ್ಲವೇ? ನಿಶ್ಚಿತವಾಗಿಯೂ ನಾನು ಇಲ್ಲವೆಂದು ಹೇಳಲಾರೆ. ಅಂಬೇಡ್ಕರ್ ಅವರ ಕಣ್ನೋಟದಲ್ಲಿ ಅಧಿಕ್ರುತ ರಾಜ್ಯ ಭಾಷೆಯೆಂಬುದು ಅದೊಂದು ಸಂವಿಧಾನಾತ್ಮಕ ಕಾಯಿದೆ.

ಕಾಯಿದೆಯ ಕಣ್ಣಲ್ಲಿ ಎಲ್ಲರೂ ಸಮಾನರೇ ಹಾಗಾಗಿ ಅಧಿಕ್ರುತ ರಾಜ್ಯ ಭಾಷೆಯನ್ನು ಸಂವಿಧಾನದ ಚೌಕಟ್ಟಿನಲ್ಲಿ ಅಡಕಗೊಳಿಸಿದರೆ ಮಾತ್ರ ಸಾಲದು. ಬದಲಾಗಿ ಅದನ್ನೊಂದು ಸಾಮಾಜಿಕ ತತ್ವಶಾಸ್ತ್ರೀಯ ಚೌಕಟ್ಟನ್ನಾಗಿ ಗ್ರಹಿಸಬೇಕು. ಆದ್ದರಿಂದ ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯವನ್ನು ಸಾಮಾಜಿಕ ತತ್ವಶಾಸ್ತ್ರೀಯ ವಿನ್ಯಾಸಗಳನ್ನಾಗಿ ಮಂಡಿಸಿದರು. ಜೊತೆಗೆ ರಾಜಕೀಯ ಮತ್ತು ಸಾಮಾಜಿಕ ಸ್ವಾತಂತ್ರ್ಯಗಳ ನಡುವಣ ನಂಟಸ್ತಿಕೆ ಹೇಗಿರಬೇಕು ಮತ್ತು ಅಂತಹದೊಂದು ನಂಟಸ್ತಿಕೆಯನ್ನು ತರುವ ಮೂಲಕ ಮಾತ್ರ ಸಮಾನ ಸಮಾಜಗಳನ್ನು ಕಟ್ಟುವುದಕ್ಕೆ ಸಾಧ್ಯವೆಂಬ ತತ್ವವನ್ನು ಅತ್ಯಂತ ಖಚಿತವಾಗಿ ಮಂಡಿಸಿರುವುದಕ್ಕೂ ಇವರ ಈ ನಿಲುವೇ ಕಾರಣವಾಗಿದೆ.

ಹೌದು ಈ ಎಲ್ಲ ಚರ್ಚೆಗಳು ಹಾಗೂ ಅಂಬೇಡ್ಕರ್ ಅವರು ಮಂಡಿಸಿದ ಪ್ರಸ್ತಾವನೆಯನ್ನೂ ಮೀರಿ ಇವತ್ತು ಭಾರತದ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳನ್ನೇ ಅಧಿಕ್ರುತ ಭಾಷೆಗಳನ್ನಾಗಿ ಬಳಸುತ್ತಿವೆ. ಅಂದರೆ ಕರ್ನಾಟಕದಲ್ಲಿ ಕನ್ನಡ, ಆಂದ್ರಪ್ರದೇಶ ಮತ್ತು ತೆಲಾಂಗಣದಲ್ಲಿ ತೆಲುಗು ಹಾಗೂ ತಮಿಳುನಾಡಿನಲ್ಲಿ ತಮಿಳು ಭಾಷೆಗಳನ್ನು ತಮ್ಮ ಅಧಿಕ್ರುತ ರಾಜ್ಯ ಭಾಷೆಗಳನ್ನಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ ಈ ಯಾವ ರಾಜ್ಯಗಳಲ್ಲಿಯೂ ಕೂಡ ಇವತ್ತು ರಾಷ್ಟ್ರೀಯ ಅಪಐಕ್ಯತೆಯನ್ನಾಗಲೀ ಇಲ್ಲವೇ ಮಧ್ಯಕಾಲೀನ ಪರಿಸ್ಥಿತಿಯನ್ನು ಉಂಟು ಮಾಡುವ ಯಾವುದೇ ಅಪಾಯಗಳು ನಮಗೆ ಗೋಚರಿಸುತ್ತಿಲ್ಲ ಎಂಬ ವಾದಗಳೂ ಇವತ್ತು ಮುಂಚೂಣೆಯಲ್ಲಿವೆ.

ಹೌದು ರಾಜಕೀಯವಾಗಿ ಮಾತ್ನಾಡುವಾಗ ಈ ವಾದವು ಸರಿಯಾಗಿಯೇ ಕಾಣುತ್ತದೆ. ಆದರೆ ಸಾಮಾಜಿಕ-ಆರ್ಥಿಕ ಸನ್ನಿವೇಶದಲ್ಲಿ ದಿನದಿಂದ ದಿನಕ್ಕೆ ತಲೆದೊರುತ್ತಿರುವ ಅಸಮಾನತೆಯ ಸವಾಲುಗಳನ್ನು ಪರಿಶೀಲಿಸಿ ನೋಡಿದಾಗ, ಅಪಐಕ್ಯತೆಯ ಸ್ವರೂಪ ಮತ್ತು ಮಧ್ಯಕಾಲೀನ ಸಾಮಾಜಿಕ-ರಾಜಕೀಯ ಸನ್ನಿವೇಶದ ವಿನ್ಯಾಸಗಳು ನಿಚ್ಚಳಗೊಳ್ಳುತ್ತವೆ. ಮಧ್ಯಕಾಲೀನ ಸನ್ನಿವೇಶವನ್ನು ಕೇವಲ ಪರಸ್ಪರ ಯುದ್ಧ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸುವುದಲ್ಲ. ಇವತ್ತು ನಡೆಯುತ್ತಿರುವ ಧಾರ್ಮಿಕ ಸಾಮಾಜಿಕ ಸಂಘರ್ಷ ಹಾಗೂ ಅಸಹನೆಯ ವಿನ್ಯಾಸಗಳನ್ನು ಗಮನಿಸಿದಾಗ ನಮ್ಮ ಪ್ರಸ್ತುತ ಭಾರತವು ದಿಟವಾಗಿಯೂ ಆಧುನಿಕಗೊಂಡದೆಯೇ ಇಲ್ಲವೇ ಮಧ್ಯಕಾಲೀನ ಭಾರತವಾಗಿಯೇ ಇನ್ನೂ ಉಳದಿದೆ ಎನ್ನುವುದನ್ನು ಪತ್ತೆಹಚ್ಚಿ ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending