ರಾಜಕೀಯ
ಡಾ.ರಾಜ್ಕುಮಾರ್ ನೆನಪಾಗುತ್ತಿದ್ದಾರೆ..!
ಡಾ.ರಾಜ್ಕುಮಾರ್ ನೆನಪಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯವನ್ನು ಪ್ರತಿನಿಧಿಸುತ್ತಿರುವ ನಾವು ಅವರು ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಆಕೃತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುವ ಅನಿವಾರ್ಯತೆ ಮನಗಾಣಿಸುವ ಹಾಗೆ ನನ್ನ ಪ್ರಜ್ಞೆಯ ಆವರಣವನ್ನು ಮತ್ತೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಹಿಂದಿನ ಮಾದರಿಗಳು ಹೀಗೆ ನೆನಪಾಗುತ್ತಲೇ ಇರಬೇಕು. ಇಂಥ ನೆನಪುಗಳೊಂದಿಗಿನ ಯಾನ ಅವುಗಳನ್ನು ಸಮಾಜದಲ್ಲಿ ಅಧಿಕೃತವಾಗಿ ನೆಲೆಗೊಳಿಸಬೇಕು. ಮರೆವಿನ ಕೂಪಕ್ಕೆ ಅವು ತಳ್ಳಲ್ಪಡದ ಹಾಗೆ ಎಲ್ಲ ಕಾಲದ ಪೀಳಿಗೆಗಳಿಗೆ ದಾಟಿಕೊಳ್ಳುತ್ತಿರಬೇಕು. ಕೆಟ್ಟದ್ದು ವಿಜೃಂಭಿಸುವಾಗೆಲ್ಲಾ ಮೌಲಿಕ ಮಾದರಿಗಳ ನೆನಪುಗಳು ಧುಮ್ಮಿಕ್ಕಬೇಕು.
ಆ ಮೂಲಕ ಜನಸಮೂಹ ಹೊಸದಾಗಿ ಆಲೋಚಿಸುವುದಕ್ಕೆ ಪ್ರೇರಣೆಯಾಗಬೇಕು.
ನನ್ನೊಳಗೆ ಈಗ ರೂಪುಗೊಳ್ಳುತ್ತಿರುವ ಈ ಬಗೆಯ ಚಿಂತನೆಯ ವ್ಯಕ್ತಿಗತ ಸಾಧ್ಯತೆಯು ಜನಸಮೂಹದ ಸಾಧ್ಯತೆಯೂ ಆಗಿ ಆದ್ಯತೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನ್ನಿಸುತ್ತಿದೆ. ಹಾಗಾಗುತ್ತದಾ? ಉತ್ತರಗಳ ಬದಲು ಸಂಕೀರ್ಣ ಸವಾಲುಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಚಿಂತಿಸುವಿಕೆಯ ವ್ಯಕ್ತಿಗತ ಸಾಮಥ್ರ್ಯ ಜನಸಮೂಹದೊಳಗೂ ಸಮ್ಮಿಳಿತಗೊಂಡು ರೂಪುಗೊಳ್ಳಬಹುದಾದ ವೈಚಾರಿಕ ಸೌಂದರ್ಯವು ದೇಶವನ್ನು ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಇಂಥ ಸಾಧ್ಯತೆಗಳ ಕಡೆಗೆ ಗಮನಹರಿಸದ ಹಾಗೆ ಜನಸಮೂಹದ ಮನಸ್ಥಿತಿಯನ್ನು ಸಂಪೂರ್ಣವಾಗಿ ಜಡಗೊಳಿಸುವ ರೀತಿಯಲ್ಲಿ ನಮ್ಮ ಜನಪ್ರಿಯ ಸಂಸ್ಕøತಿಯ ವಿಕೃತಿಗಳು ದಟ್ಟವಾಗಿವೆ. ಇದರೊಂದಿಗೆ ಅವು ಪ್ರಜಾತಾಂತ್ರಿಕ ವ್ಯವಸ್ಥೆಯ ಜೀವಾಳವೇ ಆಗಿರುವ ಆಯ್ಕೆಯ ಸಂವೈಧಾನಿಕ ಹಕ್ಕಿನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಹಾಗೆ ತಡೆಯೊಡ್ಡುತ್ತಿವೆ.
ತಾರೆಯರ ಅಪಕ್ವ ನಿಲುವು
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಸಂಸ್ಕøತಿಯನ್ನು ಪ್ರತಿನಿಧಿಸುವ ಖ್ಯಾತನಾಮ ತಾರೆಯರ ನಡೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಬೇಕಿದೆ. ಒಂದು ಪಕ್ಷದ ಅಥವಾ ಅಭ್ಯರ್ಥಿಯ ಪರ ನಿಂತುಕೊಳ್ಳುವ ಅಪಕ್ವ ನಿಲುವಿನೊಂದಿಗೆ ಕನ್ನಡದ ಜನಪ್ರಿಯ ಸಿನಿಮಾ ನಾಯಕ ನಟರ ನಿಲುವುಗಳು ಸುದ್ದಿಗೆ ಗ್ರಾಸ ಒದಗಿಸಿರುವಾಗ ಡಾ.ರಾಜ್ಕುಮಾರ್ ಎಂಬ ಹೆಸರಿನೊಂದಿಗಿನ ನೆನಪಿನ ಬಿಂಬಗಳು ಹೊಸ ಪೀಳಿಗೆಯನ್ನು ಆವರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಅಗತ್ಯ ಮಾತ್ರವಲ್ಲ, ಸಾಂದರ್ಭಿಕ ಅನಿವಾರ್ಯತೆಯೂ ಹೌದು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಆಲೋಚನಾಕ್ರಮಗಳನ್ನು ದಾಟಿಸುವುದಕ್ಕೆ ಬೇಕಾದ ಪೂರಕ ವಾತಾವರಣದ ವೇದಿಕೆ ನಿರ್ಮಿಸಿಕೊಳ್ಳುವ ಕಲೆ, ಪ್ರತಿಭೆ ಮತ್ತು ಸಾಮಾಜಿಕ ಅಸ್ಮಿತೆಯ ಅಪೂರ್ವ ಸಂಯೋಜನೆಯ ಪ್ರಯೋಜನ ಜನಸಮೂಹಕ್ಕೆ ದಕ್ಕಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಠವಾದ ಮಾದರಿಗಳನ್ನು ಡಾ.ರಾಜ್ಕುಮಾರ್ ಅವರ ಸಾಂಸ್ಕøತಿಕ ನಾಯಕತ್ವದ ಮೂಲಕವೇ ಕಂಡುಕೊಳ್ಳಬೇಕು.
ಡಾ.ರಾಜ್ ಜನಪರ ಕಲಾತ್ಮಕತೆ
ರಾಜ್ಕುಮಾರ್ ಅವರು ಏಕೆ ಈ ಕ್ಷಣಕ್ಕೆ ನೆನಪಾಗಬೇಕು ಎಂಬ ಜಿಜ್ಞಾಸೆಗೆ ಪ್ರತಿಯಾಗಿ ಅವರ ಮೌಲಿಕ ಸಿನಿಮಾಗಳ ಪಾತ್ರವೈವಿಧ್ಯತೆ, ಭಾಷಿಕ ಚಳುವಳಿಯೊಂದಿಗೆ ಗುರುತಿಸಿಕೊಳ್ಳುವ ಬದ್ಧತೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನಸಮೂಹದ ನೆರವಿಗೆ ಧಾವಿಸಿದ ಅವರ ಕಾಳಜಿಯುತ ಮಾದರಿಗಳು ಕಣ್ಣಮುಂದೆ ಬಂದುನಿಲ್ಲುತ್ತವೆ. ಅವರು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಪರ ನಿಲ್ಲಲಿಲ್ಲ. ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಹಾಕುವಂತೆ ಪ್ರಚಾರಗಳ ರ್ಯಾಲಿಗಳಿಗೆ ಹೋಗಲಿಲ್ಲ. ಸಮಸ್ತ ಕನ್ನಡಿಗರನ್ನು ಅಭಿಮಾನಿ ದೇವರುಗಳನ್ನಾಗಿ ಗ್ರಹಿಸಿದವರು ಅವರು. ಆ ಅಭಿಮಾನವನ್ನು ಅಧಿಕಾರ ರಾಜಕಾರಣಕ್ಕೆ ಗೆಲುವು ತಂದುಕೊಡುವ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ‘ಅವರು ಕರೆದರೆ ಜೊತೆಯಾಗಿ ನಿಲ್ಲುತ್ತೇನೆ’ ಎಂಬ ಆರಾಧನಾ ಭಾವವನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.
ಕನ್ನಡಿಗರ ಹೃದಯದ ಸಾಮ್ರಾಜ್ಯದಲ್ಲಿ ನೆಲೆಸುವ ಅಪ್ಪಟ ಕಲಾತ್ಮಕ ಹಂಬಲ ಅವರನ್ನು ಅಧಿಕಾರ ರಾಜಕಾರಣದ ಹತ್ತಿರ ಹೋಗಲು ಬಿಡಲಿಲ್ಲ. ಅತ್ಯುನ್ನತ ಸ್ಥಾನದ ಆಮಿಷವೊಡ್ಡಿದರೂ ಅದರಿಂದ ಎಚ್ಚರದ ದೂರವನ್ನು ಕಾಯ್ದುಕೊಂಡರು. ಭಾಷಿಕ ಚಳುವಳಿಗಳ ಜೊತಗೆ ಗುರುತಿಸಿಕೊಂಡರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಅವರ ನಡೆಯು ಕನ್ನಡ ಸಿನಿಮಾದ ಪ್ರಭಾವವನ್ನು ವಿಸ್ತರಿಸುವುದಕ್ಕೆ ನೆರವಾಗಿತ್ತು. ಅವರ ಅಭಿನಯದ ಸಿನಿಮಾಗಳು ಜನಪ್ರಿಯ ಸಂಸ್ಕøತಿ ಒಳಗೊಳ್ಳಬಹುದಾದ ಮೌಲಿಕ ಲಕ್ಷಣಗಳನ್ನು ದೃಢೀಕರಿಸಿದವು. ಈ ಹಿನ್ನೆಲೆಯ ಕಾರಣಕ್ಕಾಗಿಯೇ ರಾಜಕಾರಣಕ್ಕಿಂತಲೂ ಕನ್ನಡದ್ದೇ ಆದ ಸಾಮುದಾಯಿಕ ಕಲಾತ್ಮಕ ಪಾತ್ರನಿರ್ವಹಣೆಯ ಕಡೆಗೆ ಅವರು ಹೆಚ್ಚು ಆದ್ಯತೆ ನೀಡಿದರು.
ರಾಜಕಾರಣದ ವಿಚ್ಛಿದ್ರಕಾರಕ ಪ್ರಾಬಲ್ಯ
ಭಾರತದ ಅಧಿಕಾರ ರಾಜಕಾರಣಕ್ಕೆ ವಿಚಿತ್ರ ಬಗೆಯ ವಿಚ್ಛಿದ್ರಕಾರಕ ಪ್ರಾಬಲ್ಯವಿದೆ. ಇದರ ಆಕರ್ಷಣೀಯ ಸ್ವರೂಪವು ಈ ಪ್ರಾಬಲ್ಯದ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇಂಥ ರಾಜಕಾರಣವು ಪ್ರಭಾವೀ ವ್ಯಕ್ತಿತ್ವಗಳಿಂದ ಹಿಡಿದು ಜನಸಾಮಾನ್ಯರನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಅದರ ಆಕರ್ಷಣೀಯ ಗುಣದಲ್ಲಿಯೇ ಇರುವ ಮತ್ತೊಂದು ಅಪಾಯಕಾರಿ ಮುಖ ಗೋಚರಿಸದಂತೆ ಅದು ವಿಜೃಂಭಿಸುತ್ತಿರುತ್ತದೆ. ಅಭಿನಯದ ಮೂಲಕ ಜನಜನಿತರಾಗಿ ವ್ಯಾಪಕ ಪ್ರಭಾವ ದಕ್ಕಿಸಿಕೊಂಡವರನ್ನು ಹುಡುಕಿ ಇದು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತದೆ.
ಈ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಹೊಳೆಸುವ ವೈಚಾರಿಕ ಆಕೃತಿಗಳನ್ನು ಸೃಷ್ಟಿಸುವ ಚಿಂತಕರನ್ನು, ಅವರ ನಿಲುವುಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಅಜೆಂಡಾ ಕಾರ್ಯರೂಪಕ್ಕೆ ತರುವುದರ ಕಡೆಗೇ ಅದರ ಗಮನವಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿರುವ ಯಥಾಸ್ಥಿತಿವಾದಿ ಜನಪ್ರಿಯ ತಾರೆಗಳನ್ನು, ಅವರ ಪ್ರಭಾವವನ್ನೂ ಮತಬೆಳೆಯ ಫಸಲು ತೆಗೆಯುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುತ್ತದೆ. ಬದಲಾವಣೆಯ ಚಾಲಕ ಶಕ್ತಿಯಾಗಿ ಪ್ರಮುಖ ಪಾತ್ರವಹಿಸುವ ಕಲಾತ್ಮಕ ವಲಯದ ಅಗಾಧತೆಯನ್ನು ಒಡೆದು ತನ್ನ ಅಧಿಕಾರ ಲಾಭದ ಹವಣಿಕೆಗಳಿಗಾಗಿ ಬಳಸಿಕೊಳ್ಳುತ್ತದೆ. ಡಾ.ರಾಜ್ಕುಮಾರ್ ಕಲಾತ್ಮಕತೆಯ ಕುರಿತಾದ ಸ್ಪಷ್ಟ ನಿಲುವುಗಳೊಂದಿಗೆ ಇದ್ದುದರಿಂದ ಅಧಿಕಾರ ರಾಜಕಾರಣದ ಆಕರ್ಷಣೆ ಮತ್ತು ಆಮಿಷಗಳಿಗೆ ಒಳಗಾಗಲಿಲ್ಲ.
ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ ನಟ-ನಟಿಯರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಯಶಸ್ಸು ಕಂಡ ಉದಾಹರಣೆಗಳಿದ್ದರೂ ರಾಜ್ಕುಮಾರ್ ಆ ಹಾದಿ ಅನುಸರಿಸಲಿಲ್ಲ. ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳ ಮುಖೇನ ತೆಲುಗು ಸಮುದಾಯವನ್ನು ಬಹುವಾಗಿ ಪ್ರಭಾವಿಸಿದ್ದ ಎನ್.ಟಿ.ರಾಮರಾವ್ ಅಲ್ಲಿ ಮುಖ್ಯಮಂತ್ರಿಯಾದರು. ಎಂ.ಜಿ.ಆರ್, ಜಯಲಲಿತಾ ತಮಿಳುನಾಡಿನಲ್ಲಿ ಅಧಿಕಾರದ ಉನ್ನತ ಹಂತ ತಲುಪಿದವರು. ಇದೀಗ ರಜನೀಕಾಂತ್ ರಾಜಕೀಯದ ಹಾದಿಗೆ ಆದ್ಯತೆ ನೀಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಇಡೀ ಕರ್ನಾಟಕದಾದ್ಯಂತ ಪ್ರಭಾವೀಯಾಗಿದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಹಂಬಲ ರಾಜ್ ಅವರ ಹತ್ತಿರವೂ ಸುಳಿಯಲಿಲ್ಲ ಎಂಬುದು.
ಸಂಯಮಪೂರ್ಣ ಎಚ್ಚರದ ಪ್ರಜ್ಞೆ
ರಾಜ್ ಅವರೊಳಗಿದ್ದ ಅಂಥ ಸಂಯಮಪೂರ್ಣ ಎಚ್ಚರ ಈಗಿನ ನಟರಿಗೆ ಸಾಧ್ಯವಾಗುತ್ತಿಲ್ಲ. ಅಭಿನಯ ಕಲಾತ್ಮಕತೆಯ ಮೂಲಕವೇ ವಿವಿಧ ಬಗೆಗಳಲ್ಲಿ ಜನಸಮೂಹದ ಮೇಲೆ ಪ್ರಭಾವ ಬೀರುವ ಬದ್ಧತೆ ರೂಢಿಸಿಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳುತ್ತಿಲ್ಲ. ‘ನನಗೆ ಇಂತಿಷ್ಟು ವರ್ಷ ಜನಪ್ರಿಯತೆ ಇರುತ್ತದೆ, ಈ ಅವಧಿಯಲ್ಲಿ ಹಣ ದುಡಿದುಕೊಳ್ಳಬೇಕು’ ಎಂಬ ಆಸೆಯೇ ಈಗಿನ ನಟರನ್ನು ನಿಯಂತ್ರಿಸುತ್ತಿದೆ. ಬೆಂಗಳೂರಿನ ಹೊರಗೆ ಜಿಲ್ಲಾಕೇಂದ್ರಗಳಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅತಿಹೆಚ್ಚು ಸಂಭಾವನೆ ಬೇಡುವ ಮನಸ್ಥಿತಿ ಇವರೊಳಗಿನ ಕಲಾತ್ಮಕತೆಯನ್ನು ಕೊಲ್ಲುತ್ತಿದೆ.
ಸದಭಿರುಚಿ ಮೂಡಿಸುವ ನಿಜವಾದ ಕಾಳಜಿ ಇದ್ದಿದ್ದರೆ ಇವರು ‘ಒಳ್ಳೆಯ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ’ ಎಂಬ ಕೊರಗು ವ್ಯಕ್ತಪಡಿಸುವ ಬದಲು ರಾಜ್ಯದಾದ್ಯಂತ ಅರಿವಿನ ಆಂದೋಲನ ಕೈಗೊಳ್ಳುತ್ತಿದ್ದರು. ಕೆಟ್ಟದ್ದರ ಕಡೆಗೆ ವಾಲಿದ ಅಭಿಮಾನಿ ಸಂಸ್ಕøತಿಯ ಊನಗಳನ್ನು ಸರಿಪಡಿಸಿ ಸದಭಿರುಚಿಯ ಸಿನಿಮಾಗಳಿಗೆ ವ್ಯಾಪಕ ಬೆಂಬಲ ತಂದುಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಕನ್ನಡದ ಸಿನಿಮಾ ನಿರ್ಮಾಣದ ಚಟುವಟಿಕೆಗಳು ನಡೆಯುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಹತ್ತಿರವಾಗಿ ಇಲ್ಲಿಯ ಸಿನಿಮಾವನ್ನು ಜನಜನಿತವಾಗಿಸಿದ ರಾಜ್ ಮಾದರಿಯನ್ನು ಮುಂದುವರೆಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.
ರಾಜಕೀಯ ಸಾಮಂಜಸ್ಯದ ಪ್ರಶ್ನೆ
ಹಾಗಾಗುವುದಕ್ಕೆ ಜನಪ್ರಿಯ ಸಂಸ್ಕøತಿಯ ಒಳಗೇ ಇರುವ ವಿಕಾರಗಳು ಅವರನ್ನು ಬಿಡುತ್ತಿಲ್ಲ. ಇದರ ಜೊತೆಗೆ ಅಧಿಕಾರ ರಾಜಕಾರಣದ ಯಥಾಸ್ಥಿತಿವಾದದೊಂದಿಗಿನ ಹುನ್ನಾರದ ಪ್ರಾಬಲ್ಯ ನಟರೊಳಗೂ ಆರಾಧನಾ ಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ನಟರೊಳಗಿನ ಕಲಾತ್ಮಕತೆಯನ್ನು ಸೋಲಿಸುವ ಅದರ ಕಾರ್ಯಸೂಚಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಬಲ ಬಂದಿದೆ. ಈ ಕಾರಣಕ್ಕಾಗಿಯೇ ಜನಪ್ರಿಯ ಸಿನಿಮಾ ನಟರು ರಾಜಕೀಯ ರಂಗವನ್ನು ಪ್ರವೇಶಿಸಿ ಆರ್ಥಿಕವಾಗಿ ಬಲಾಢ್ಯರಾಗುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಂದು ಕ್ಷೇತ್ರ ಪ್ರತಿನಿಧಿಸುವವರೊಬ್ಬರು ರಾಜಕೀಯ ರಂಗವನ್ನು ಪ್ರವೇಶಿಸುವುದರ ಹಿಂದೆ ಪ್ರಾಮಾಣಿಕ ಕಳಕಳಿಗಳ ಆಧಾರವಿರಬೇಕಾಗುತ್ತದೆ. ಅದರ ಬದಲು ಯಥಾಸ್ಥಿತಿವಾದದ ಜೊತೆಗೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಮನುಷ್ಯಸಹಜ ದೌರ್ಬಲ್ಯ ಪ್ರದರ್ಶಿಸುವುದು ರಾಜಕೀಯ ಸಾಮಂಜಸ್ಯದ ( Politically Correct) ನಡೆ ಎನ್ನಿಸಿಕೊಳ್ಳುವುದಿಲ್ಲ.
ರಾಜಕೀಯ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳುವ ಹಂಬಲವೂ ಇಂಥವರೊಂದಿಗೆ ಇರುವುದಿಲ್ಲ.
ರಾಜಕೀಯ ಪ್ರಬುದ್ಧತೆ ಪ್ರದರ್ಶಿಸುವ ಸಾಮಥ್ರ್ಯ ಇದ್ದವರೂ ಸದ್ಯದ ಸುದ್ದಿವಾಹಿನಿಗಳ ಪ್ರಬಲರ ಪರವಾದ ಅಜೆಂಡಾಕ್ಕೆ ಅನುಗುಣವಾದ ವಿಧ್ವಂಸಕ ಪ್ರಯತ್ನಗಳ ಹೊಡೆತಕ್ಕೀಡಾಗಿ ಹಿನ್ನೆಲೆಗೆ ಸರಿದುಬಿಡುತ್ತಾರೆ. ಸುದ್ದಿವಾಹಿನಿಗಳ ಈ ಬಗೆಯ ಪ್ರಹಾರ ಕಲಾವಲಯದವರಲ್ಲಿ ಭಯ ಮೂಡಿಸಿಬಿಡುತ್ತದೆ. ಆಗ ತಮ್ಮ ಜನಪ್ರಿಯತೆಯನ್ನು ಅಧಿಕಾರ ರಾಜಕಾರಣದ ಪಾದಗಳಿಗೆ ಸಮರ್ಪಿಸುವ ಮನೋಧರ್ಮವನ್ನು ಮೂಡಿಸಿಬಿಡುತ್ತದೆ. ಇರುವಷ್ಟು ದಿನ ಚಾಲ್ತಿಯಲ್ಲಿರಬೇಕು ಎಂಬ ಆಸೆ ಚಿಗುರೊಡೆದು ಅವರೊಳಗಿನ ಕಲಾಶಕ್ತಿಯನ್ನು ನಲುಗಿಸಿಬಿಡುತ್ತದೆ.
ಜನಪ್ರಿಯ ಪ್ರತಿಭಾನ್ವಿತರು ಅಧಿಕಾರ ರಾಜಕಾರಣದ ಪ್ರಾಬಲ್ಯವನ್ನು ಅಧಿಕೃತವಾಗಿ ಪ್ರಶ್ನಿಸಬಹುದು ಎಂಬ ಭರವಸೆಯನ್ನು ಕಳೆದ ಸಲ ಲೋಕಸಭೆ ಚುನಾವಣೆಯ ಸಂದರ್ಭ ಮೂಡಿಸಿತ್ತು. ಈ ದೇಶಕ್ಕೆ ಪ್ರಶ್ನಾತೀತ ನಾಯಕ ಇರಬಾರದು, ಪ್ರಶ್ನೆಗಳನ್ನು ಆಲಿಸಿ ಬದಲಾವಣೆಯನ್ನು ನೆಲೆಗೊಳಿಸುವ ಚಿಂತಕ ನಾಯಕ ಬೇಕು ಎಂಬ ಸಂವಾದವನ್ನು ಅಧಿಕೃತವಾಗಿ ದೇಶಾದ್ಯಂತ ಹುಟ್ಟುಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ನಿರ್ವಹಿಸಿದರು. ಆದರೆ, ಸುದ್ದಿವಾಹಿನಿಗಳ ಜನಪ್ರಿಯ ವರಸೆಗಳು ಈ ಸಂವಾದವನ್ನು ವಿಸ್ತರಿಸುವ ಬದಲು ಮೊಟಕುಗೊಳಿಸಿದವು. ಅದರೊಂದಿಗೆ ಅಧಿಕಾರ ರಾಜಕಾರಣದ ಎಲ್ಲ ಬಗೆಯ ವಿಕೃತಿಗಳ ದಾಳಿ ಹೊಸದಾಗಿ ಆಲೋಚಿಸುವ ಶಕ್ತಿಯನ್ನೇ ಕುಂದಿಸಿತು. ಜನಪ್ರಿಯ ಸುದ್ದಿಯ ಕೇಂದ್ರಗಳು ಮತ್ತು ರಾಜಕಾರಣದ ಸಂಕುಚಿತತೆಯ ಮನಸ್ಥಿತಿಗಳು ಒಟ್ಟಾಗಿ ಇಂಥದ್ದೊಂದು ಸಾಧ್ಯತೆಯನ್ನೇ ಇಲ್ಲವಾಗಿಸುವಲ್ಲಿ ಯಶಸ್ಸು ಕಂಡಿವೆ.
ಕಾಡುತ್ತಿರುವ ರಾಜ್ ಆಕೃತಿಗಳು
ಈ ಹಂತದಲ್ಲಿಯೇ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಸಮಸ್ಯೆಗಳಿಂದ ಇಡೀ ದೇಶ ಜರ್ಝರಿತವಾಗುತ್ತಲೇ ಇದೆ. ಎಲ್ಲ ಕಾಲದಲ್ಲೂ ಸುಧಾರಣೆಯ ಹೆಜ್ಜೆಗಳು ಕಂಡರೂ ಅವುಗಳ ವೇಗವನ್ನು ಹೆಚ್ಚಿಸುವ ದಾರ್ಶನಿಕ ನಾಯಕತ್ವವನ್ನು ಕಂಡುಕೊಳ್ಳುವಲ್ಲಿ ಇಲ್ಲಿಯ ಪ್ರಜಾಸತ್ತಾತ್ಮಕ ಪ್ರಯೋಗಶಾಲೆ ಸೋತಿದೆ. ಭಾರೀ ಬದಲಾವಣೆಯಾಗುತ್ತಿದೆ ಎನ್ನುವ ಭಾವ ಬರುವ ಹಾಗೆ ಜನಪ್ರಿಯ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸಿವೆ. ಜನಪ್ರಿಯ ನಟರು ಪಕ್ಷಗಳ ಮತಬೆಳೆ ತೆಗೆಯಲು ಬೇಕಾಗುವ ಸರಕಿನ ಗೊಂಬೆಗಳಾಗಿದ್ದಾರೆ. ಇದನ್ನು ದೃಢಪಡಿಸುವಂತೆ ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ ಅವರ ಗೆಲುವಿಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರು ಬೆಂಬಲವಾಗಿ ನಿಂತಿದ್ದಾರೆ.
ಸ್ಪಷ್ಟವಾಗಿರುವ ಯಾವುದೇ ಬಗೆಯ ರಾಜಕೀಯ ನಿಲುವು ತಳೆಯದೇ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ಮನ್ನಣೆ ನೀಡಿದ ಕನ್ನಡಿಗರಿಗೆ ಪ್ರತಿಯಾಗಿ ಸಾಮಾಜಿಕ ನೆಲೆಯಲ್ಲಿ ಋಣ ತೀರಿಸುವ ಸಮಂಜಸ ರಾಜಕೀಯ ಪ್ರಜ್ಞೆ ನಿರೂಪಿಸುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಡಾ.ರಾಜ್ಕುಮಾರ್ ಸಾಧ್ಯವಾಗಿಸಿಕೊಂಡ ಸಾಂಸ್ಕøತಿಕ ನಾಯಕತ್ವದ ಗುಣಸ್ವಭಾವಗಳೂ ಗೋಚರಿಸುತ್ತಿಲ್ಲ. ಈ ಇಲ್ಲಗಳ ಮಧ್ಯೆಯೇ ‘ರಾಜ್ ಮನೋಧರ್ಮದ’ ಸೃಜನಶೀಲ ಆಕೃತಿಗಳು ಈಗ ಮತ್ತೆ ಮತ್ತೆ ಕಾಡುತ್ತಿವೆ. ಇವು ಕನ್ನಡದ ಜನಪ್ರಿಯ ಸಂಸ್ಕøತಿಯ ಆವರಣದೊಳಗೆ ಮತ್ತೆ ಪ್ರಾಶಸ್ತ್ಯ ಪಡೆಯುತ್ತವೆಯೇ? ಅಂಥದ್ದೊಂದು ಆಶಾವಾದಿ ನಿರೀಕ್ಷೆಯಲ್ಲಿ……
–ಡಾ.ಎನ್.ಕೆ. ಪದ್ಮನಾಭ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ 4215 ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಮತ್ತು ನಕಲಿ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 6 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿನ ಪ್ರಭಾರ ಕಾರ್ಯಪಾಲಕ ಅಭಿಯಂತರರಾದ ಟಿ. ಸೋಮ್ಲನಾಯ್ಕ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 2023-24 ಮತ್ತು 2024-25ನೇ ಸಾಲಿನ ತುರ್ತು ಕುಡಿಯುವ ನೀರಿನ ಯೋಜನೆಗೆ ಸಂಬAಧಿಸಿದ ಕಾಮಗಾರಿಗಳಿಗೆ ಸಂಬAಧಿಸಿದAತೆ ಹೊನ್ನಾಳಿ ಉಪವಿಭಾಗದ ಅಡಿಯಲ್ಲಿ ನಡೆದಿರುವ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳಲ್ಲಿ ನಾಲ್ಕು ಹಂತದ ತುರ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳ ಸಂಪೂರ್ಣ ಕಡತವನ್ನು ಪಡೆದು ಪರಿಶೀಲನೆ ಮಾಡಿದಾಗ, ಇಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಲೋಪಗಳು ಕಂಡುಬAದಿರುತ್ತವೆ. ಅಂತಹ ಪ್ರಮುಖ ಲೋಪಗಳನ್ನು ಉಲ್ಲೇಖಿಸಿ ಸೂಕ್ತ ತನಿಖೆಗೆ ಒಳಪಡಿಸುವಂತೆ ದಿನಾಂಕ: 01-12-2025 ರಂದು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರಿಗೆ ದೂರು ನೀಡಲಾಗಿತ್ತು.
ಈ ದೂರು ಅರ್ಜಿಗೆ ಸಂಬಂಧಿಸಿದಂತೆ ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರು 2 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ದಿನಾಂಕ: 27-01-2026 ರಂದು ಜ್ಞಾಪನವನ್ನು ನೀಡಲಾಗಿರುತ್ತದೆ. ಆದರೆ ಜ್ಞಾಪನ ನೀಡಿ 6 ತಿಂಗಳು ಕಳೆಯುತ್ತ ಬಂದರೂ ಈ ದೂರು ಅರ್ಜಿಗೆ ಸಂಬAಧಿಸಿದAತೆ ಕಾರ್ಯಪಾಲಕ ಅಭಿಯಂತರರು (ಪ್ರಭಾರ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿರುತ್ತಾರೆ.
ಈ ದೂರು ಅರ್ಜಿಯನ್ನು ತನಿಖೆಗೆ ಒಳಪಡಿಸುವಲ್ಲಿ ತೋರಿದ ನಿರ್ಲಕ್ಷö್ಯಕ್ಕೆ ಪ್ರಮುಖ ಕಾರಣವೆಂದರೆ, ಹೊನ್ನಾಳಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿನ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ಕಾರಣಕ್ಕಾಗಿ ತನ್ನ ಮೇಲಿನ ಆರೋಪವನ್ನು ತನಿಖೆಗೆ ಒಳಪಡಿಸುವಲ್ಲಿ ನಿರ್ಲಕ್ಷö್ಯ ತೋರಿ, ಈ ದೂರು ಅರ್ಜಿಯನ್ನು ಮೂಲೆ ಗುಂಪಾಗಿಸಿರುತ್ತಾರೆ. ಆದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಭಾರ ಕಾರ್ಯಪಾಲಕ ಅಭಿಯಂತರರಾದ ಸೋಮ್ಲನಾಯ್ಕ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
- ಜುಲೈ 25ರ ಭರವಸೆ ಜಾರಿಗೆ ವಿಳಂಬ: CJP ತೀವ್ರ ಆಕ್ರೋಶ
- ಇಂಡಿಯಾ ಗೇಟ್ನಿಂದ ಪೊಲೀಸ್ ಕೇಂದ್ರ ಕಚೇರಿವರೆಗೆ ಮೆರವಣಿಗೆ
- NEET ಅಭ್ಯರ್ಥಿಗಳ ಕುಟುಂಬಸ್ಥರು, ಪೊಲೀಸ್ ದೌರ್ಜನ್ಯ ಸಂತ್ರಸ್ತರು ಮುಂಚೂಣಿಯಲ್ಲಿ
- “ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ” ಎಂದ CJP
ಯುವಜನರ ಭರವಸೆ ಈಡೇರಿಲ್ಲವೆ? ಸೆ.5ರಂದು ದೆಹಲಿಯಲ್ಲಿ CJP ಶಾಂತಿಯುತ ಪ್ರತಿಭಟನೆ
ಸುದ್ದಿದಿನ,ನವದೆಹಲಿ: ದೇಶದ ಯುವಜನರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೆಪ್ಟೆಂಬರ್ 5ರಂದು ನವದೆಹಲಿಯಲ್ಲಿ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲು ಕರೆ ನೀಡಿದೆ. ಜುಲೈ 25ರಂದು ಸಾರ್ವಜನಿಕವಾಗಿ ನೀಡಲಾಗಿದ್ದ ಭರವಸೆಗಳಿಗೆ ಒಂದು ತಿಂಗಳು ಕಳೆದರೂ ಅವುಗಳ ಅನುಷ್ಠಾನಕ್ಕೆ ಸ್ಪಷ್ಟ ಕ್ರಮಗಳು ಗೋಚರಿಸುತ್ತಿಲ್ಲ ಎಂಬುದು CJPಯ ಪ್ರಮುಖ ಆರೋಪವಾಗಿದೆ.
CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿದ್ದು, ಸರ್ಕಾರ ಹಾಗೂ ಬಿಜೆಪಿ-ಎನ್ಡಿಎ ಆಡಳಿತದ ರಾಜ್ಯಗಳು ಯುವಜನರಿಗೆ ನೀಡಿದ್ದ ಭರವಸೆಗಳ ಅನುಷ್ಠಾನವನ್ನು ಪರಿಶೀಲಿಸಿದ ಬಳಿಕ ಪ್ರತಿಭಟನೆ ನಡೆಸುವ ನಿರ್ಧಾರವನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.
http://Visit : www.suddidina.com
ಇಂಡಿಯಾ ಗೇಟ್ನಿಂದ ಮೆರವಣಿಗೆ
ಸೆಪ್ಟೆಂಬರ್ 5ರಂದು ಇಂಡಿಯಾ ಗೇಟ್ನಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿ ನವದೆಹಲಿ ಪೊಲೀಸ್ ಕೇಂದ್ರ ಕಚೇರಿಯತ್ತ ಸಾಗಲಿದೆ. ಮೃತ NEET ಅಭ್ಯರ್ಥಿಗಳ ಕುಟುಂಬಸ್ಥರು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರು ಮೆರವಣಿಗೆಯ ಮುಂಚೂಣಿಯಲ್ಲಿ ಸಾಗಲಿದ್ದಾರೆ ಎಂದು CJP ಹೇಳಿದೆ.
ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಯುವ ಸಂಘಟನೆಗಳ ಪ್ರತಿನಿಧಿಗಳು ಮತ್ತು ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸರ್ಕಾರ ನೀಡಿದ್ದ ಭರವಸೆಗಳನ್ನು ಜಾರಿಗೆ ತರಬೇಕು ಎಂಬ ಒಂದೇ ಪ್ರಮುಖ ಬೇಡಿಕೆಯೊಂದಿಗೆ ಯುವಜನರು ಶಾಂತಿಯುತವಾಗಿ ಧ್ವನಿ ಎತ್ತಲಿದ್ದಾರೆ ಎಂದು ಪಕ್ಷ ಹೇಳಿದೆ.
‘ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ’
ಜುಲೈ 25ರಂದು ನೀಡಿದ ಭರವಸೆಗಳನ್ನು ನಂಬಿ ದೇಶಾದ್ಯಂತ ನಡೆದಿದ್ದ ಪ್ರತಿಭಟನೆಗಳನ್ನು ಯುವಜನರು ಉತ್ತಮ ನಂಬಿಕೆಯಿಂದ ಹಿಂಪಡೆದಿದ್ದರು. ಆದರೆ, ಭರವಸೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವುದು ಯುವಜನರಲ್ಲಿ ಮತ್ತೆ ಅಸಮಾಧಾನ ಮೂಡಿಸಿದೆ ಎಂದು CJP ಆರೋಪಿಸಿದೆ.
“ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ. ನಮ್ಮ ಸದುದ್ದೇಶವನ್ನು ಸರ್ಕಾರ ಯುವಜನರಿಗೆ ದ್ರೋಹ ಮಾಡುವ ಅವಕಾಶವಾಗಿ ಬಳಸಿಕೊಳ್ಳಬಾರದು” ಎಂದು CJP ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಎಚ್ಚರಿಕೆ ನೀಡಿದೆ.
“ಭರವಸೆಗಳನ್ನು ಜಾರಿಗೆ ತರುವ ಬದಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ”
|
ಮಾತಿನಿಂದ ಹಿಂದೆ ಸರಿಯಲು ಸಾಧ್ಯವಿಲ್ಲ
ಜುಲೈ 25ರಂದು ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾರ್ವಜನಿಕವಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸಬೇಕು ಎಂಬುದು CJPಯ ಆಗ್ರಹ. ಮಕ್ಕಳನ್ನು ಕಳೆದುಕೊಂಡ ಕುಟುಂಬಗಳು ಹಾಗೂ ಪೊಲೀಸ್ ದೌರ್ಜನ್ಯಕ್ಕೆ ಒಳಗಾದವರ ನೋವಿನ ನಡುವೆ ನಡೆಯಲಿರುವ ಈ ಮೆರವಣಿಗೆ, ಯುವಜನರ ವಿಶ್ವಾಸ ಮತ್ತು ಸರ್ಕಾರದ ಹೊಣೆಗಾರಿಕೆಯ ಪ್ರಶ್ನೆಯನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.
ಕೇಂದ್ರ ಸರ್ಕಾರ ಭರವಸೆಗಳನ್ನು ಜಾರಿಗೆ ತರುವ ಬದಲು ಕ್ರಮ ಕೈಗೊಳ್ಳುವುದನ್ನು ವಿಳಂಬಿಸುತ್ತಿದೆ, ತಾಂತ್ರಿಕ ಕಾರಣಗಳ ಹಿಂದೆ ಅಡಗಿಕೊಳ್ಳುತ್ತಿದೆ ಹಾಗೂ ಸುಪ್ರೀಂ ಕೋರ್ಟ್ನ ಮುಂದೆಯೂ ಸ್ಪಷ್ಟ ಭರವಸೆ ನೀಡುವುದನ್ನು ತಪ್ಪಿಸುತ್ತಿದೆ ಎಂದು CJP ಆರೋಪಿಸಿದೆ.
ಸೆಪ್ಟೆಂಬರ್ 5ರಂದು ಹೆಚ್ಚಿನ ಸಂಖ್ಯೆಯಲ್ಲಿ ಇಂಡಿಯಾ ಗೇಟ್ನಲ್ಲಿ ಸೇರಿ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಯುವಜನರು, ವಿದ್ಯಾರ್ಥಿಗಳು ಹಾಗೂ ಯುವ ಸಂಘಟನೆಗಳಿಗೆ CJP ಮನವಿ ಮಾಡಿದೆ. ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯಲಿದೆ ಎಂದು ಅದು ಪುನರುಚ್ಚರಿಸಿದೆ.

ದಿನದ ಸುದ್ದಿ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
KPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
329 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ವಿಚಾರಣಾ ನೋಟಿಸ್
-
658 OMR ಕಾರ್ಬನ್ ಶೀಟ್ಗಳು FSLಗೆ
-
IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ವಿರುದ್ಧ ED ಗಂಭೀರ ಆರೋಪ
-
₹70–80 ಲಕ್ಷ ಲಂಚದ ಆರೋಪವೂ ತನಿಖೆಯಲ್ಲಿದೆ
-
ಪ್ರಶ್ನೆಪತ್ರ ಸಿದ್ಧತೆ, ಮುದ್ರಣದ CCTV ದೃಶ್ಯಗಳ ಬಗ್ಗೆಯೂ ಅನುಮಾನ
ಸುದ್ದಿದಿನ,ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಈಗಾಗಲೇ ಜಾರಿ ನಿರ್ದೇಶನಾಲಯ (ED) ರಾಜ್ಯದ ವಿವಿಧೆಡೆ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಅದರ ಬೆನ್ನಲ್ಲೇ ಅಪರಾಧ ತನಿಖಾ ಇಲಾಖೆ (CID) ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
http://Visit : www.suddidina.com
329 ಅಭ್ಯರ್ಥಿಗಳಿಗೆ ನೋಟಿಸ್ ಏಕೆ?
ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಈಗಾಗಲೇ 658 OMR ಕಾರ್ಬನ್ ಶೀಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಮೂಲ OMR ಉತ್ತರ ಪತ್ರಿಕೆಗಳೊಂದಿಗೆ ಹೋಲಿಕೆ ಮಾಡಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದೆ. ಅಭ್ಯರ್ಥಿಗಳು ಗುರುತಿಸಿದ್ದ ಉತ್ತರಗಳ ಕಾರ್ಬನ್ ಪ್ರತಿಯಲ್ಲಿ ಮತ್ತು ಮೂಲ OMRನಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಪರಿಶೀಲಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಇದೀಗ 329 ಅಭ್ಯರ್ಥಿಗಳನ್ನೂ ವಿಚಾರಣೆಗೆ ಒಳಪಡಿಸುವ CID ಕ್ರಮ ಪ್ರಕರಣದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ವಿಚಾರಣೆಯ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿದೆಯೇ, ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ಸಿಕ್ಕಿತೇ, OMR ಉತ್ತರ ಪತ್ರಿಕೆಗಳಲ್ಲಿ ತಿದ್ದುಪಡಿ ನಡೆದಿದೆಯೇ ಎಂಬುದರ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
IAS ಅಧಿಕಾರಿಯತ್ತ ತನಿಖೆಯ ಚಿತ್ತ
ಈ ಪ್ರಕರಣದಲ್ಲಿ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಅವರು ಫೆಬ್ರವರಿ 2024ರಿಂದ ಮಾರ್ಚ್ 2026ರವರೆಗೆ KPSCಯ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಅವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ MSME ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಬೆಂಗಳೂರಿನ ನಿವಾಸ ಸೇರಿದಂತೆ ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಿವಾಸದ ಮೇಲೂ ED ಶೋಧ ನಡೆಸಿದೆ.
ED ಆರೋಪದ ಪ್ರಕಾರ, ಗಂಗ್ವಾರ್ ಅವರು ತಮ್ಮ ಇಬ್ಬರು ಪುತ್ರರಿಗೆ KPSC ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ದೊರಕಿಸಿಕೊಡಲು ವ್ಯಕ್ತಿಯೊಬ್ಬರಿಂದ ಸುಮಾರು ₹1.1 ಕೋಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಆರೋಪ ಇನ್ನೂ ತನಿಖೆಯ ಹಂತದಲ್ಲಿದ್ದು, ಆರೋಪ ಸಾಬೀತಾಗಿಲ್ಲ.
ಪ್ರಶ್ನೆಪತ್ರಿಕೆ ಸಿದ್ಧತೆಯಲ್ಲೂ ಅನುಮಾನ
ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಮತ್ತು ಮುದ್ರಿಸುವ ಪ್ರಕ್ರಿಯೆಗೆ ಸಂಬಂಧಿಸಿದ CCTV ದೃಶ್ಯಾವಳಿಗಳ ಅನುಪಸ್ಥಿತಿಯನ್ನೂ ED ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇಂತಹ ಪ್ರಕ್ರಿಯೆಯಲ್ಲಿ CCTV ದಾಖಲೆಗಳು ಪ್ರಮುಖ ಭದ್ರತಾ ಕ್ರಮವಾಗಿರುವುದರಿಂದ, ಅವುಗಳ ಲಭ್ಯತೆ ಮತ್ತು ನಿರ್ವಹಣೆಯೂ ತನಿಖೆಯ ಪ್ರಮುಖ ಅಂಶವಾಗಿದೆ.
ಇದರ ಜೊತೆಗೆ, ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹70–80 ಲಕ್ಷದವರೆಗೆ ಲಂಚ ಕೇಳಲಾಗಿದೆ ಎಂಬ ಆರೋಪಗಳೂ ತನಿಖೆಯಲ್ಲಿವೆ. ಪ್ರಶ್ನೆಪತ್ರಿಕೆ ಸೋರಿಕೆ, OMR ತಿದ್ದುಪಡಿ ಮತ್ತು ನೇಮಕಾತಿ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
KPSCಯಂತಹ ನೇಮಕಾತಿ ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವ ಆರೋಪಗಳಾಗಿರುವುದರಿಂದ, CID ಮತ್ತು ED ತನಿಖೆಯ ಮುಂದಿನ ಹಂತಗಳು ಮಹತ್ವ ಪಡೆದುಕೊಂಡಿವೆ. 329 ಅಭ್ಯರ್ಥಿಗಳ ವಿಚಾರಣೆ, OMR ಕಾರ್ಬನ್ ಶೀಟ್ಗಳ FSL ವರದಿ ಹಾಗೂ ಹಣಕಾಸು ವ್ಯವಹಾರಗಳ ಪರಿಶೀಲನೆಯ ಬಳಿಕ ಪ್ರಕರಣದ ನಿಜವಾದ ಚಿತ್ರಣ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಮೇಲಿನ ಹಣ, ಅಕ್ರಮ ಮತ್ತು ಅಧಿಕಾರಿಯ ವಿರುದ್ಧದ ಆರೋಪಗಳು ತನಿಖಾ ಸಂಸ್ಥೆಗಳು ಮುಂದಿಟ್ಟಿರುವ ಆರೋಪಗಳಾಗಿದ್ದು, ನ್ಯಾಯಾಲಯದಲ್ಲಿ ಸಾಬೀತಾಗುವವರೆಗೆ ಆರೋಪಗಳೆಂದೇ ಪರಿಗಣಿಸಬೇಕೆಂದು ಕೋರ್ಟ್ ತಿಳಿಸಿದೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ5 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ19 hours agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಉದ್ದಿಮೆದಾರರಿಗೆ ನೆರವು ಯೋಜನೆ; ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ






