Connect with us

ರಾಜಕೀಯ

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ..!

Published

on

ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್

ಡಾ.ರಾಜ್‍ಕುಮಾರ್ ನೆನಪಾಗುತ್ತಿದ್ದಾರೆ. ಅಷ್ಟೇ ಅಲ್ಲ, ಸದ್ಯವನ್ನು ಪ್ರತಿನಿಧಿಸುತ್ತಿರುವ ನಾವು ಅವರು ಸಿನಿಮಾಗಳ ಮೂಲಕ ಕಟ್ಟಿಕೊಟ್ಟ ಆಕೃತಿಗಳೊಂದಿಗೆ ಸಂವಾದ ಏರ್ಪಡಿಸಿಕೊಳ್ಳುವ ಅನಿವಾರ್ಯತೆ ಮನಗಾಣಿಸುವ ಹಾಗೆ ನನ್ನ ಪ್ರಜ್ಞೆಯ ಆವರಣವನ್ನು ಮತ್ತೆ ಮತ್ತೆ ಪ್ರವೇಶಿಸುತ್ತಿದ್ದಾರೆ. ಹಿಂದಿನ ಮಾದರಿಗಳು ಹೀಗೆ ನೆನಪಾಗುತ್ತಲೇ ಇರಬೇಕು. ಇಂಥ ನೆನಪುಗಳೊಂದಿಗಿನ ಯಾನ ಅವುಗಳನ್ನು ಸಮಾಜದಲ್ಲಿ ಅಧಿಕೃತವಾಗಿ ನೆಲೆಗೊಳಿಸಬೇಕು. ಮರೆವಿನ ಕೂಪಕ್ಕೆ ಅವು ತಳ್ಳಲ್ಪಡದ ಹಾಗೆ ಎಲ್ಲ ಕಾಲದ ಪೀಳಿಗೆಗಳಿಗೆ ದಾಟಿಕೊಳ್ಳುತ್ತಿರಬೇಕು. ಕೆಟ್ಟದ್ದು ವಿಜೃಂಭಿಸುವಾಗೆಲ್ಲಾ ಮೌಲಿಕ ಮಾದರಿಗಳ ನೆನಪುಗಳು ಧುಮ್ಮಿಕ್ಕಬೇಕು.

ಆ ಮೂಲಕ ಜನಸಮೂಹ ಹೊಸದಾಗಿ ಆಲೋಚಿಸುವುದಕ್ಕೆ ಪ್ರೇರಣೆಯಾಗಬೇಕು.
ನನ್ನೊಳಗೆ ಈಗ ರೂಪುಗೊಳ್ಳುತ್ತಿರುವ ಈ ಬಗೆಯ ಚಿಂತನೆಯ ವ್ಯಕ್ತಿಗತ ಸಾಧ್ಯತೆಯು ಜನಸಮೂಹದ ಸಾಧ್ಯತೆಯೂ ಆಗಿ ಆದ್ಯತೆ ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದೆನ್ನಿಸುತ್ತಿದೆ. ಹಾಗಾಗುತ್ತದಾ? ಉತ್ತರಗಳ ಬದಲು ಸಂಕೀರ್ಣ ಸವಾಲುಗಳೇ ಕಣ್ಣೆದುರು ಬಂದು ನಿಲ್ಲುತ್ತವೆ. ಚಿಂತಿಸುವಿಕೆಯ ವ್ಯಕ್ತಿಗತ ಸಾಮಥ್ರ್ಯ ಜನಸಮೂಹದೊಳಗೂ ಸಮ್ಮಿಳಿತಗೊಂಡು ರೂಪುಗೊಳ್ಳಬಹುದಾದ ವೈಚಾರಿಕ ಸೌಂದರ್ಯವು ದೇಶವನ್ನು ಉನ್ನತಿಯ ಕಡೆಗೆ ಕೊಂಡೊಯ್ಯುತ್ತದೆ. ಆದರೆ, ವಾಸ್ತವ ಹಾಗಿಲ್ಲ. ಇಂಥ ಸಾಧ್ಯತೆಗಳ ಕಡೆಗೆ ಗಮನಹರಿಸದ ಹಾಗೆ ಜನಸಮೂಹದ ಮನಸ್ಥಿತಿಯನ್ನು ಸಂಪೂರ್ಣವಾಗಿ ಜಡಗೊಳಿಸುವ ರೀತಿಯಲ್ಲಿ ನಮ್ಮ ಜನಪ್ರಿಯ ಸಂಸ್ಕøತಿಯ ವಿಕೃತಿಗಳು ದಟ್ಟವಾಗಿವೆ. ಇದರೊಂದಿಗೆ ಅವು ಪ್ರಜಾತಾಂತ್ರಿಕ ವ್ಯವಸ್ಥೆಯ ಜೀವಾಳವೇ ಆಗಿರುವ ಆಯ್ಕೆಯ ಸಂವೈಧಾನಿಕ ಹಕ್ಕಿನ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಹಾಗೆ ತಡೆಯೊಡ್ಡುತ್ತಿವೆ.

ತಾರೆಯರ ಅಪಕ್ವ ನಿಲುವು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಸಂಸ್ಕøತಿಯನ್ನು ಪ್ರತಿನಿಧಿಸುವ ಖ್ಯಾತನಾಮ ತಾರೆಯರ ನಡೆಯನ್ನು ತಾರ್ಕಿಕವಾಗಿ ವಿಶ್ಲೇಷಿಸಬೇಕಿದೆ. ಒಂದು ಪಕ್ಷದ ಅಥವಾ ಅಭ್ಯರ್ಥಿಯ ಪರ ನಿಂತುಕೊಳ್ಳುವ ಅಪಕ್ವ ನಿಲುವಿನೊಂದಿಗೆ ಕನ್ನಡದ ಜನಪ್ರಿಯ ಸಿನಿಮಾ ನಾಯಕ ನಟರ ನಿಲುವುಗಳು ಸುದ್ದಿಗೆ ಗ್ರಾಸ ಒದಗಿಸಿರುವಾಗ ಡಾ.ರಾಜ್‍ಕುಮಾರ್ ಎಂಬ ಹೆಸರಿನೊಂದಿಗಿನ ನೆನಪಿನ ಬಿಂಬಗಳು ಹೊಸ ಪೀಳಿಗೆಯನ್ನು ಆವರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಅಗತ್ಯ ಮಾತ್ರವಲ್ಲ, ಸಾಂದರ್ಭಿಕ ಅನಿವಾರ್ಯತೆಯೂ ಹೌದು. ಸಾರ್ವಕಾಲಿಕವಾಗಿ ನೆಲೆನಿಲ್ಲುವ ಆಲೋಚನಾಕ್ರಮಗಳನ್ನು ದಾಟಿಸುವುದಕ್ಕೆ ಬೇಕಾದ ಪೂರಕ ವಾತಾವರಣದ ವೇದಿಕೆ ನಿರ್ಮಿಸಿಕೊಳ್ಳುವ ಕಲೆ, ಪ್ರತಿಭೆ ಮತ್ತು ಸಾಮಾಜಿಕ ಅಸ್ಮಿತೆಯ ಅಪೂರ್ವ ಸಂಯೋಜನೆಯ ಪ್ರಯೋಜನ ಜನಸಮೂಹಕ್ಕೆ ದಕ್ಕಬೇಕು. ಇದಕ್ಕೆ ಸಂಬಂಧಿಸಿದಂತೆ ವಿಶಿಷ್ಠವಾದ ಮಾದರಿಗಳನ್ನು ಡಾ.ರಾಜ್‍ಕುಮಾರ್ ಅವರ ಸಾಂಸ್ಕøತಿಕ ನಾಯಕತ್ವದ ಮೂಲಕವೇ ಕಂಡುಕೊಳ್ಳಬೇಕು.

ಡಾ.ರಾಜ್ ಜನಪರ ಕಲಾತ್ಮಕತೆ

ರಾಜ್‍ಕುಮಾರ್ ಅವರು ಏಕೆ ಈ ಕ್ಷಣಕ್ಕೆ ನೆನಪಾಗಬೇಕು ಎಂಬ ಜಿಜ್ಞಾಸೆಗೆ ಪ್ರತಿಯಾಗಿ ಅವರ ಮೌಲಿಕ ಸಿನಿಮಾಗಳ ಪಾತ್ರವೈವಿಧ್ಯತೆ, ಭಾಷಿಕ ಚಳುವಳಿಯೊಂದಿಗೆ ಗುರುತಿಸಿಕೊಳ್ಳುವ ಬದ್ಧತೆ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಜನಸಮೂಹದ ನೆರವಿಗೆ ಧಾವಿಸಿದ ಅವರ ಕಾಳಜಿಯುತ ಮಾದರಿಗಳು ಕಣ್ಣಮುಂದೆ ಬಂದುನಿಲ್ಲುತ್ತವೆ. ಅವರು ಚುನಾವಣೆಗಳ ವೇಳೆ ರಾಜಕೀಯ ಪಕ್ಷಗಳ ಪರ ನಿಲ್ಲಲಿಲ್ಲ. ನಿರ್ದಿಷ್ಟ ಅಭ್ಯರ್ಥಿಯ ಪರ ಮತ ಹಾಕುವಂತೆ ಪ್ರಚಾರಗಳ ರ್ಯಾಲಿಗಳಿಗೆ ಹೋಗಲಿಲ್ಲ. ಸಮಸ್ತ ಕನ್ನಡಿಗರನ್ನು ಅಭಿಮಾನಿ ದೇವರುಗಳನ್ನಾಗಿ ಗ್ರಹಿಸಿದವರು ಅವರು. ಆ ಅಭಿಮಾನವನ್ನು ಅಧಿಕಾರ ರಾಜಕಾರಣಕ್ಕೆ ಗೆಲುವು ತಂದುಕೊಡುವ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. ‘ಅವರು ಕರೆದರೆ ಜೊತೆಯಾಗಿ ನಿಲ್ಲುತ್ತೇನೆ’ ಎಂಬ ಆರಾಧನಾ ಭಾವವನ್ನು ಬಹಿರಂಗವಾಗಿ ಪ್ರದರ್ಶಿಸಲಿಲ್ಲ.

ಕನ್ನಡಿಗರ ಹೃದಯದ ಸಾಮ್ರಾಜ್ಯದಲ್ಲಿ ನೆಲೆಸುವ ಅಪ್ಪಟ ಕಲಾತ್ಮಕ ಹಂಬಲ ಅವರನ್ನು ಅಧಿಕಾರ ರಾಜಕಾರಣದ ಹತ್ತಿರ ಹೋಗಲು ಬಿಡಲಿಲ್ಲ. ಅತ್ಯುನ್ನತ ಸ್ಥಾನದ ಆಮಿಷವೊಡ್ಡಿದರೂ ಅದರಿಂದ ಎಚ್ಚರದ ದೂರವನ್ನು ಕಾಯ್ದುಕೊಂಡರು. ಭಾಷಿಕ ಚಳುವಳಿಗಳ ಜೊತಗೆ ಗುರುತಿಸಿಕೊಂಡರು. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸುವ ಅವರ ನಡೆಯು ಕನ್ನಡ ಸಿನಿಮಾದ ಪ್ರಭಾವವನ್ನು ವಿಸ್ತರಿಸುವುದಕ್ಕೆ ನೆರವಾಗಿತ್ತು. ಅವರ ಅಭಿನಯದ ಸಿನಿಮಾಗಳು ಜನಪ್ರಿಯ ಸಂಸ್ಕøತಿ ಒಳಗೊಳ್ಳಬಹುದಾದ ಮೌಲಿಕ ಲಕ್ಷಣಗಳನ್ನು ದೃಢೀಕರಿಸಿದವು. ಈ ಹಿನ್ನೆಲೆಯ ಕಾರಣಕ್ಕಾಗಿಯೇ ರಾಜಕಾರಣಕ್ಕಿಂತಲೂ ಕನ್ನಡದ್ದೇ ಆದ ಸಾಮುದಾಯಿಕ ಕಲಾತ್ಮಕ ಪಾತ್ರನಿರ್ವಹಣೆಯ ಕಡೆಗೆ ಅವರು ಹೆಚ್ಚು ಆದ್ಯತೆ ನೀಡಿದರು.

Rajadharma a column by Dr.N k padmanabh

ರಾಜಕಾರಣದ ವಿಚ್ಛಿದ್ರಕಾರಕ ಪ್ರಾಬಲ್ಯ

ಭಾರತದ ಅಧಿಕಾರ ರಾಜಕಾರಣಕ್ಕೆ ವಿಚಿತ್ರ ಬಗೆಯ ವಿಚ್ಛಿದ್ರಕಾರಕ ಪ್ರಾಬಲ್ಯವಿದೆ. ಇದರ ಆಕರ್ಷಣೀಯ ಸ್ವರೂಪವು ಈ ಪ್ರಾಬಲ್ಯದ ಸುಳಿವನ್ನು ಬಿಟ್ಟುಕೊಡುವುದೇ ಇಲ್ಲ. ಇಂಥ ರಾಜಕಾರಣವು ಪ್ರಭಾವೀ ವ್ಯಕ್ತಿತ್ವಗಳಿಂದ ಹಿಡಿದು ಜನಸಾಮಾನ್ಯರನ್ನು ಸದಾ ಆಕರ್ಷಿಸುತ್ತಲೇ ಇರುತ್ತದೆ. ಅದರ ಆಕರ್ಷಣೀಯ ಗುಣದಲ್ಲಿಯೇ ಇರುವ ಮತ್ತೊಂದು ಅಪಾಯಕಾರಿ ಮುಖ ಗೋಚರಿಸದಂತೆ ಅದು ವಿಜೃಂಭಿಸುತ್ತಿರುತ್ತದೆ. ಅಭಿನಯದ ಮೂಲಕ ಜನಜನಿತರಾಗಿ ವ್ಯಾಪಕ ಪ್ರಭಾವ ದಕ್ಕಿಸಿಕೊಂಡವರನ್ನು ಹುಡುಕಿ ಇದು ತನ್ನ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತದೆ.

ಈ ದೇಶದ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರದ ಮಾರ್ಗ ಹೊಳೆಸುವ ವೈಚಾರಿಕ ಆಕೃತಿಗಳನ್ನು ಸೃಷ್ಟಿಸುವ ಚಿಂತಕರನ್ನು, ಅವರ ನಿಲುವುಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವ ಅಜೆಂಡಾ ಕಾರ್ಯರೂಪಕ್ಕೆ ತರುವುದರ ಕಡೆಗೇ ಅದರ ಗಮನವಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿರುವ ಯಥಾಸ್ಥಿತಿವಾದಿ ಜನಪ್ರಿಯ ತಾರೆಗಳನ್ನು, ಅವರ ಪ್ರಭಾವವನ್ನೂ ಮತಬೆಳೆಯ ಫಸಲು ತೆಗೆಯುವುದಕ್ಕಾಗಿಯೇ ಬಳಸಿಕೊಳ್ಳುತ್ತಿರುತ್ತದೆ. ಬದಲಾವಣೆಯ ಚಾಲಕ ಶಕ್ತಿಯಾಗಿ ಪ್ರಮುಖ ಪಾತ್ರವಹಿಸುವ ಕಲಾತ್ಮಕ ವಲಯದ ಅಗಾಧತೆಯನ್ನು ಒಡೆದು ತನ್ನ ಅಧಿಕಾರ ಲಾಭದ ಹವಣಿಕೆಗಳಿಗಾಗಿ ಬಳಸಿಕೊಳ್ಳುತ್ತದೆ. ಡಾ.ರಾಜ್‍ಕುಮಾರ್ ಕಲಾತ್ಮಕತೆಯ ಕುರಿತಾದ ಸ್ಪಷ್ಟ ನಿಲುವುಗಳೊಂದಿಗೆ ಇದ್ದುದರಿಂದ ಅಧಿಕಾರ ರಾಜಕಾರಣದ ಆಕರ್ಷಣೆ ಮತ್ತು ಆಮಿಷಗಳಿಗೆ ಒಳಗಾಗಲಿಲ್ಲ.

ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಜನಪ್ರಿಯ ನಟ-ನಟಿಯರು ಅಧಿಕಾರ ರಾಜಕಾರಣವನ್ನು ಪ್ರವೇಶಿಸಿ ಯಶಸ್ಸು ಕಂಡ ಉದಾಹರಣೆಗಳಿದ್ದರೂ ರಾಜ್‍ಕುಮಾರ್ ಆ ಹಾದಿ ಅನುಸರಿಸಲಿಲ್ಲ. ಪೌರಾಣಿಕ ಮತ್ತು ಸಾಮಾಜಿಕ ಪಾತ್ರಗಳ ಮುಖೇನ ತೆಲುಗು ಸಮುದಾಯವನ್ನು ಬಹುವಾಗಿ ಪ್ರಭಾವಿಸಿದ್ದ ಎನ್.ಟಿ.ರಾಮರಾವ್ ಅಲ್ಲಿ ಮುಖ್ಯಮಂತ್ರಿಯಾದರು. ಎಂ.ಜಿ.ಆರ್, ಜಯಲಲಿತಾ ತಮಿಳುನಾಡಿನಲ್ಲಿ ಅಧಿಕಾರದ ಉನ್ನತ ಹಂತ ತಲುಪಿದವರು. ಇದೀಗ ರಜನೀಕಾಂತ್ ರಾಜಕೀಯದ ಹಾದಿಗೆ ಆದ್ಯತೆ ನೀಡಿದ್ದಾರೆ. ಕುತೂಹಲದ ಸಂಗತಿ ಎಂದರೆ ಇಡೀ ಕರ್ನಾಟಕದಾದ್ಯಂತ ಪ್ರಭಾವೀಯಾಗಿದ್ದರೂ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವ ಹಂಬಲ ರಾಜ್ ಅವರ ಹತ್ತಿರವೂ ಸುಳಿಯಲಿಲ್ಲ ಎಂಬುದು.

ಸಂಯಮಪೂರ್ಣ ಎಚ್ಚರದ ಪ್ರಜ್ಞೆ

ರಾಜ್ ಅವರೊಳಗಿದ್ದ ಅಂಥ ಸಂಯಮಪೂರ್ಣ ಎಚ್ಚರ ಈಗಿನ ನಟರಿಗೆ ಸಾಧ್ಯವಾಗುತ್ತಿಲ್ಲ. ಅಭಿನಯ ಕಲಾತ್ಮಕತೆಯ ಮೂಲಕವೇ ವಿವಿಧ ಬಗೆಗಳಲ್ಲಿ ಜನಸಮೂಹದ ಮೇಲೆ ಪ್ರಭಾವ ಬೀರುವ ಬದ್ಧತೆ ರೂಢಿಸಿಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳುತ್ತಿಲ್ಲ. ‘ನನಗೆ ಇಂತಿಷ್ಟು ವರ್ಷ ಜನಪ್ರಿಯತೆ ಇರುತ್ತದೆ, ಈ ಅವಧಿಯಲ್ಲಿ ಹಣ ದುಡಿದುಕೊಳ್ಳಬೇಕು’ ಎಂಬ ಆಸೆಯೇ ಈಗಿನ ನಟರನ್ನು ನಿಯಂತ್ರಿಸುತ್ತಿದೆ. ಬೆಂಗಳೂರಿನ ಹೊರಗೆ ಜಿಲ್ಲಾಕೇಂದ್ರಗಳಲ್ಲಿ ಒಳ್ಳೆಯ ಉದ್ದೇಶದೊಂದಿಗೆ ಆಯೋಜಿತವಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಕ್ಕೆ ಅತಿಹೆಚ್ಚು ಸಂಭಾವನೆ ಬೇಡುವ ಮನಸ್ಥಿತಿ ಇವರೊಳಗಿನ ಕಲಾತ್ಮಕತೆಯನ್ನು ಕೊಲ್ಲುತ್ತಿದೆ.

ಸದಭಿರುಚಿ ಮೂಡಿಸುವ ನಿಜವಾದ ಕಾಳಜಿ ಇದ್ದಿದ್ದರೆ ಇವರು ‘ಒಳ್ಳೆಯ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ’ ಎಂಬ ಕೊರಗು ವ್ಯಕ್ತಪಡಿಸುವ ಬದಲು ರಾಜ್ಯದಾದ್ಯಂತ ಅರಿವಿನ ಆಂದೋಲನ ಕೈಗೊಳ್ಳುತ್ತಿದ್ದರು. ಕೆಟ್ಟದ್ದರ ಕಡೆಗೆ ವಾಲಿದ ಅಭಿಮಾನಿ ಸಂಸ್ಕøತಿಯ ಊನಗಳನ್ನು ಸರಿಪಡಿಸಿ ಸದಭಿರುಚಿಯ ಸಿನಿಮಾಗಳಿಗೆ ವ್ಯಾಪಕ ಬೆಂಬಲ ತಂದುಕೊಳ್ಳುವುದರ ಕಡೆಗೆ ಗಮನ ಹರಿಸುತ್ತಿದ್ದರು. ಬೇರೆ ರಾಜ್ಯಗಳಲ್ಲಿ ಕನ್ನಡದ ಸಿನಿಮಾ ನಿರ್ಮಾಣದ ಚಟುವಟಿಕೆಗಳು ನಡೆಯುತ್ತಿದ್ದ ಕಾಲದಲ್ಲಿ ಕನ್ನಡಿಗರಿಗೆ ಹತ್ತಿರವಾಗಿ ಇಲ್ಲಿಯ ಸಿನಿಮಾವನ್ನು ಜನಜನಿತವಾಗಿಸಿದ ರಾಜ್ ಮಾದರಿಯನ್ನು ಮುಂದುವರೆಸುವ ಕಾರ್ಯದಲ್ಲಿ ನಿರತರಾಗುತ್ತಿದ್ದರು.

ರಾಜಕೀಯ ಸಾಮಂಜಸ್ಯದ ಪ್ರಶ್ನೆ

ಹಾಗಾಗುವುದಕ್ಕೆ ಜನಪ್ರಿಯ ಸಂಸ್ಕøತಿಯ ಒಳಗೇ ಇರುವ ವಿಕಾರಗಳು ಅವರನ್ನು ಬಿಡುತ್ತಿಲ್ಲ. ಇದರ ಜೊತೆಗೆ ಅಧಿಕಾರ ರಾಜಕಾರಣದ ಯಥಾಸ್ಥಿತಿವಾದದೊಂದಿಗಿನ ಹುನ್ನಾರದ ಪ್ರಾಬಲ್ಯ ನಟರೊಳಗೂ ಆರಾಧನಾ ಭಾವವನ್ನು ಬಿತ್ತುವಲ್ಲಿ ಯಶಸ್ವಿಯಾಗಿದೆ. ನಟರೊಳಗಿನ ಕಲಾತ್ಮಕತೆಯನ್ನು ಸೋಲಿಸುವ ಅದರ ಕಾರ್ಯಸೂಚಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಬಲ ಬಂದಿದೆ. ಈ ಕಾರಣಕ್ಕಾಗಿಯೇ ಜನಪ್ರಿಯ ಸಿನಿಮಾ ನಟರು ರಾಜಕೀಯ ರಂಗವನ್ನು ಪ್ರವೇಶಿಸಿ ಆರ್ಥಿಕವಾಗಿ ಬಲಾಢ್ಯರಾಗುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಒಂದು ಕ್ಷೇತ್ರ ಪ್ರತಿನಿಧಿಸುವವರೊಬ್ಬರು ರಾಜಕೀಯ ರಂಗವನ್ನು ಪ್ರವೇಶಿಸುವುದರ ಹಿಂದೆ ಪ್ರಾಮಾಣಿಕ ಕಳಕಳಿಗಳ ಆಧಾರವಿರಬೇಕಾಗುತ್ತದೆ. ಅದರ ಬದಲು ಯಥಾಸ್ಥಿತಿವಾದದ ಜೊತೆಗೇ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಮನುಷ್ಯಸಹಜ ದೌರ್ಬಲ್ಯ ಪ್ರದರ್ಶಿಸುವುದು ರಾಜಕೀಯ ಸಾಮಂಜಸ್ಯದ ( Politically Correct) ನಡೆ ಎನ್ನಿಸಿಕೊಳ್ಳುವುದಿಲ್ಲ.

ರಾಜಕೀಯ ಪ್ರಬುದ್ಧತೆಯನ್ನು ಅಳವಡಿಸಿಕೊಳ್ಳುವ ಹಂಬಲವೂ ಇಂಥವರೊಂದಿಗೆ ಇರುವುದಿಲ್ಲ.
ರಾಜಕೀಯ ಪ್ರಬುದ್ಧತೆ ಪ್ರದರ್ಶಿಸುವ ಸಾಮಥ್ರ್ಯ ಇದ್ದವರೂ ಸದ್ಯದ ಸುದ್ದಿವಾಹಿನಿಗಳ ಪ್ರಬಲರ ಪರವಾದ ಅಜೆಂಡಾಕ್ಕೆ ಅನುಗುಣವಾದ ವಿಧ್ವಂಸಕ ಪ್ರಯತ್ನಗಳ ಹೊಡೆತಕ್ಕೀಡಾಗಿ ಹಿನ್ನೆಲೆಗೆ ಸರಿದುಬಿಡುತ್ತಾರೆ. ಸುದ್ದಿವಾಹಿನಿಗಳ ಈ ಬಗೆಯ ಪ್ರಹಾರ ಕಲಾವಲಯದವರಲ್ಲಿ ಭಯ ಮೂಡಿಸಿಬಿಡುತ್ತದೆ. ಆಗ ತಮ್ಮ ಜನಪ್ರಿಯತೆಯನ್ನು ಅಧಿಕಾರ ರಾಜಕಾರಣದ ಪಾದಗಳಿಗೆ ಸಮರ್ಪಿಸುವ ಮನೋಧರ್ಮವನ್ನು ಮೂಡಿಸಿಬಿಡುತ್ತದೆ. ಇರುವಷ್ಟು ದಿನ ಚಾಲ್ತಿಯಲ್ಲಿರಬೇಕು ಎಂಬ ಆಸೆ ಚಿಗುರೊಡೆದು ಅವರೊಳಗಿನ ಕಲಾಶಕ್ತಿಯನ್ನು ನಲುಗಿಸಿಬಿಡುತ್ತದೆ.

ಜನಪ್ರಿಯ ಪ್ರತಿಭಾನ್ವಿತರು ಅಧಿಕಾರ ರಾಜಕಾರಣದ ಪ್ರಾಬಲ್ಯವನ್ನು ಅಧಿಕೃತವಾಗಿ ಪ್ರಶ್ನಿಸಬಹುದು ಎಂಬ ಭರವಸೆಯನ್ನು ಕಳೆದ ಸಲ ಲೋಕಸಭೆ ಚುನಾವಣೆಯ ಸಂದರ್ಭ ಮೂಡಿಸಿತ್ತು. ಈ ದೇಶಕ್ಕೆ ಪ್ರಶ್ನಾತೀತ ನಾಯಕ ಇರಬಾರದು, ಪ್ರಶ್ನೆಗಳನ್ನು ಆಲಿಸಿ ಬದಲಾವಣೆಯನ್ನು ನೆಲೆಗೊಳಿಸುವ ಚಿಂತಕ ನಾಯಕ ಬೇಕು ಎಂಬ ಸಂವಾದವನ್ನು ಅಧಿಕೃತವಾಗಿ ದೇಶಾದ್ಯಂತ ಹುಟ್ಟುಹಾಕುವ ಪ್ರಯತ್ನವನ್ನು ಪ್ರಕಾಶ್ ರೈ ನಿರ್ವಹಿಸಿದರು. ಆದರೆ, ಸುದ್ದಿವಾಹಿನಿಗಳ ಜನಪ್ರಿಯ ವರಸೆಗಳು ಈ ಸಂವಾದವನ್ನು ವಿಸ್ತರಿಸುವ ಬದಲು ಮೊಟಕುಗೊಳಿಸಿದವು. ಅದರೊಂದಿಗೆ ಅಧಿಕಾರ ರಾಜಕಾರಣದ ಎಲ್ಲ ಬಗೆಯ ವಿಕೃತಿಗಳ ದಾಳಿ ಹೊಸದಾಗಿ ಆಲೋಚಿಸುವ ಶಕ್ತಿಯನ್ನೇ ಕುಂದಿಸಿತು. ಜನಪ್ರಿಯ ಸುದ್ದಿಯ ಕೇಂದ್ರಗಳು ಮತ್ತು ರಾಜಕಾರಣದ ಸಂಕುಚಿತತೆಯ ಮನಸ್ಥಿತಿಗಳು ಒಟ್ಟಾಗಿ ಇಂಥದ್ದೊಂದು ಸಾಧ್ಯತೆಯನ್ನೇ ಇಲ್ಲವಾಗಿಸುವಲ್ಲಿ ಯಶಸ್ಸು ಕಂಡಿವೆ.

ಕಾಡುತ್ತಿರುವ ರಾಜ್ ಆಕೃತಿಗಳು

ಈ ಹಂತದಲ್ಲಿಯೇ ಮತ್ತೊಂದು ಲೋಕಸಭೆ ಚುನಾವಣೆ ಎದುರಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಕುಟುಂಬ ರಾಜಕಾರಣ ಪಕ್ಷಾತೀತವಾಗಿ ವಿವಿಧ ಹಂತಗಳಲ್ಲಿ ಚಾಲ್ತಿಯಲ್ಲಿದೆ. ಸಮಸ್ಯೆಗಳಿಂದ ಇಡೀ ದೇಶ ಜರ್ಝರಿತವಾಗುತ್ತಲೇ ಇದೆ. ಎಲ್ಲ ಕಾಲದಲ್ಲೂ ಸುಧಾರಣೆಯ ಹೆಜ್ಜೆಗಳು ಕಂಡರೂ ಅವುಗಳ ವೇಗವನ್ನು ಹೆಚ್ಚಿಸುವ ದಾರ್ಶನಿಕ ನಾಯಕತ್ವವನ್ನು ಕಂಡುಕೊಳ್ಳುವಲ್ಲಿ ಇಲ್ಲಿಯ ಪ್ರಜಾಸತ್ತಾತ್ಮಕ ಪ್ರಯೋಗಶಾಲೆ ಸೋತಿದೆ. ಭಾರೀ ಬದಲಾವಣೆಯಾಗುತ್ತಿದೆ ಎನ್ನುವ ಭಾವ ಬರುವ ಹಾಗೆ ಜನಪ್ರಿಯ ಮಾಧ್ಯಮಗಳು ಭ್ರಮೆಗಳನ್ನು ಹುಟ್ಟಿಸಿವೆ. ಜನಪ್ರಿಯ ನಟರು ಪಕ್ಷಗಳ ಮತಬೆಳೆ ತೆಗೆಯಲು ಬೇಕಾಗುವ ಸರಕಿನ ಗೊಂಬೆಗಳಾಗಿದ್ದಾರೆ. ಇದನ್ನು ದೃಢಪಡಿಸುವಂತೆ ಖ್ಯಾತ ನಟ ಅಂಬರೀಷ್ ಪತ್ನಿ ಸುಮಲತಾ ಅವರ ಗೆಲುವಿಗೆ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟರು ಬೆಂಬಲವಾಗಿ ನಿಂತಿದ್ದಾರೆ.

ಸ್ಪಷ್ಟವಾಗಿರುವ ಯಾವುದೇ ಬಗೆಯ ರಾಜಕೀಯ ನಿಲುವು ತಳೆಯದೇ ಪ್ರಚಾರದ ಅಖಾಡದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ನಟನೆಗೆ ಮನ್ನಣೆ ನೀಡಿದ ಕನ್ನಡಿಗರಿಗೆ ಪ್ರತಿಯಾಗಿ ಸಾಮಾಜಿಕ ನೆಲೆಯಲ್ಲಿ ಋಣ ತೀರಿಸುವ ಸಮಂಜಸ ರಾಜಕೀಯ ಪ್ರಜ್ಞೆ ನಿರೂಪಿಸುವ ಲಕ್ಷಣಗಳೇನೂ ಕಾಣಿಸುತ್ತಿಲ್ಲ. ಡಾ.ರಾಜ್‍ಕುಮಾರ್ ಸಾಧ್ಯವಾಗಿಸಿಕೊಂಡ ಸಾಂಸ್ಕøತಿಕ ನಾಯಕತ್ವದ ಗುಣಸ್ವಭಾವಗಳೂ ಗೋಚರಿಸುತ್ತಿಲ್ಲ. ಈ ಇಲ್ಲಗಳ ಮಧ್ಯೆಯೇ ‘ರಾಜ್ ಮನೋಧರ್ಮದ’ ಸೃಜನಶೀಲ ಆಕೃತಿಗಳು ಈಗ ಮತ್ತೆ ಮತ್ತೆ ಕಾಡುತ್ತಿವೆ. ಇವು ಕನ್ನಡದ ಜನಪ್ರಿಯ ಸಂಸ್ಕøತಿಯ ಆವರಣದೊಳಗೆ ಮತ್ತೆ ಪ್ರಾಶಸ್ತ್ಯ ಪಡೆಯುತ್ತವೆಯೇ? ಅಂಥದ್ದೊಂದು ಆಶಾವಾದಿ ನಿರೀಕ್ಷೆಯಲ್ಲಿ……

ಡಾ.ಎನ್.ಕೆ. ಪದ್ಮನಾಭ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು 

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ನಿರ್ದೇಶನ ನೀಡಿದರು.

ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ  ಮತ ಎಣಿಕೆ ಪ್ರಕ್ರಿಯೆ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಧಾನಸಭಾ ಉಪಚುನಾವಣೆಯ ಮತ ಎಣಿಕೆ ಕಾರ್ಯವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ, ಮತ ಎಣಿಕೆ ಕೇಂದ್ರದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ‘ವಾಹನ ಮುಕ್ತ ವಲಯ’  ಎಂದು ಘೋಷಿಸಲಾಗಿದೆ, ಎಣಿಕೆ ಕೇಂದ್ರದ ಗೇಟ್‌ನಿಂದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅಲ್ಲಿ ಸಿಆರ್‌ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕೇಂದ್ರದ ಸುತ್ತಲೂ  ಮೂರು ಹಂತದ ಸಮನ್ವಯ ಭದ್ರತಾ ವ್ಯವಸ್ಥೆಯನ್ನು (Three-tier coordinating security system) ಅಳವಡಿಸಲಾಗುವುದು.  ಮತ ಎಣಿಕೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದಂತೆ ಮತ್ತು ಭದ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಉಳಿದ ಯಾವುದೇ ಖಾಸಗಿ ವಾಹನಗಳ ಪ್ರವೇಶವನ್ನು ಈ ವಲಯದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸುವಂತೆ ಸೂಚನೆ ನೀಡಿದರು.

ಮತ ಎಣಿಕೆ ಕೇಂದ್ರದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಪರ್ಯಾಯ ಸಂಚಾರ ಮಾರ್ಗಗಳನ್ನು ಗುರುತಿಸಲಾಗಿದೆ. ವಾಹನ ಸವಾರರು ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ನಿಗದಿಪಡಿಸಿದ ಪರ್ಯಾಯ ರಸ್ತೆಗಳನ್ನು ಬಳಸುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಮತ ಎಣಿಕೆ ಸಿಬ್ಬಂದಿ ಮತ್ತು ಅಭ್ಯರ್ಥಿಗಳಿಗೆ ಪ್ರತ್ಯೇಕ ವಾಹನ ಪಾಸ್‌ಗಳನ್ನು ವಿತರಿಸಲಾಗುವುದು. ಎಪಿಎಂಸಿ ಆವರಣ ಹಾಗೂ ಬಿಆರ್‌ಸಿ  ಕಾಲೇಜು ಮೈದಾನದಲ್ಲಿ ವ್ಯವಸ್ಥಿತ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸಿಬ್ಬಂದಿಗಳ ಮೊಬೈಲ್‌ಗಳನ್ನು ಸುರಕ್ಷಿತವಾಗಿ ಇರಿಸಲು ಪ್ರತ್ಯೇಕ ಕೌಂಟರ್ ತೆರೆದು, ಟೋಕನ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಮುಂದಿನ ಕೆಲವು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ, ಮತ ಎಣಿಕೆ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಣಿಕೆ ಕೇಂದ್ರದ ಮೇಲ್ಛಾವಣಿ ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆಯನ್ನು ಕೂಡಲೇ ಮರುಪರಿಶೀಲಿಸುವಂತೆ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಮಳೆಯಿಂದಾಗಿ ಎಣಿಕೆ ಕೇಂದ್ರದ ಒಳಗೆ ನೀರು ಸೋರದಂತೆ ಹಾಗೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಹಾಗೂ ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ವ್ಯವಸ್ಥೆ ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮತ ಎಣಿಕೆಯು ಪಾರದರ್ಶಕತೆ ಮತ್ತು ಭದ್ರತೆಯ ದೃಷ್ಟಿಯಿಂದ ಕೇಂದ್ರದಾದ್ಯಂತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಹಾಗೂ ದೃಶ್ಯೀಕರಣ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸಿಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪ್ರತಿಯೊಂದು ಎಣಿಕೆ ಟೇಬಲ್ ಹಾಗೂ ಮತಯಂತ್ರಗಳನ್ನು ತರುವ ಹಾದಿಯಲ್ಲಿ ಯಾವುದೇ ‘ಬ್ಲೈಂಡ್ ಸ್ಪಾಟ್’ ಇಲ್ಲದಂತೆ ಕ್ಯಾಮೆರಾಗಳ ಕವರೇಜ್ ಇರಬೇಕು. ಸಿಸಿಟಿವಿ ದೃಶ್ಯಾವಳಿಗಳು ಅಡೆತಡೆಯಿಲ್ಲದೆ ಚಿತ್ರೀಕರಣಗೊಳ್ಳುತ್ತಿರುವುದನ್ನು ತಾಂತ್ರಿಕ ತಂಡವು ದೃಢಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಭ್ಯರ್ಥಿಗಳ ಏಜೆಂಟರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಒಬ್ಬ ನುರಿತ ವೈದ್ಯರನ್ನೊಳಗೊಂಡ ವೈದ್ಯಕೀಯ ತಂಡವನ್ನು ನಿಯೋಜಿಸಬೇಕು. ತುರ್ತು ಸಂದರ್ಭ ಎದುರಾದಲ್ಲಿ ತಕ್ಷಣದ ಚಿಕಿತ್ಸೆಗಾಗಿ ಅಗತ್ಯ ಔಷಧೋಪಚಾರಗಳೊಂದಿಗೆ ಸುಸಜ್ಜಿತ ಅಂಬುಲೆನ್ಸ್ ಸೇವೆಯನ್ನು ಸ್ಥಳದಲ್ಲಿ ಸದಾ ಸಿದ್ಧವಾಗಿರಿಸಬೇಕು ಎಂದು ತಿಳಿಸಿದರು.

ಅಗ್ನಿಶಾಮಕ ಇಲಾಖೆಯು ಮತ ಎಣಿಕೆ ಕೇಂದ್ರದ ಒಳಾಂಗಣ ಮತ್ತು ಹೊರಾಂಗಣವನ್ನು ಕೂಲಂಕಷವಾಗಿ ಪರಿಶೀಲಿಸಿ, ಯಾವುದೇ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರದ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು (Fire Engines) ನಿಯೋಜಿಸಬೇಕು ಹಾಗೂ ಅಗ್ನಿಶಾಮಕ ಉಪಕರಣಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಮತ ಎಣಿಕೆ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೇಖರ್ ಹೆಚ್.ಟಿ. ಅವರು ಮಾತನಾಡಿ, ಮತ ಎಣಿಕೆ ಕೇಂದ್ರದ ಒಳಗೆ ಮತ್ತು ಹೊರಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೇಂದ್ರದ ಸುತ್ತಮುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಅನಧಿಕೃತ ಸಾರ್ವಜನಿಕರ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌, ಉಪವಿಭಾಗಾಧಿಕಾರಿ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣಾಧಿಕಾರಿ ಸಂತೋಷ್‌ ಕುಮಾರ್‌, ಮಹಾನಗರ ಪಾಲಿಕೆ ಆಯುಕ್ತೆ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತ ಗೌಡರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಮಹಾನಗರ ಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯ್‌ , ಬೆಸ್ಕಾಂ , ಕೆ.ಎಸ್.ಆರ್.ಟಿ.ಸಿ , ಆಗ್ನಿಶಾಮಕ ದಳ , ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

Published

on

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಸುದ್ದಿಗೋಷ್ಟಿಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು.

ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು.

ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬ್ರಾಂಡ್‌ನ ಸರ್ವೋಚ್ಚ ಸಾಧನೆಯಾಗಿ ಪ್ರಸ್ತುತಪಡಿಸಲಾಯಿತು. ಆದರೆ ಬಿಜೆಪಿ ಒಂದು ಅತ್ಯಂತ ವ್ಯವಸ್ಥಿತ ಮತ್ತು ಚಾಣಾಕ್ಷ ‘ಪಾಲಿಟಿಕಲ್ ಮಾರ್ಕೆಟಿಂಗ್’ ತಂತ್ರವಾಗಿ ಬಳಸಿಕೊಳ್ಳುವುದಕ್ಕೆಯತ್ನಿಸಿ ವಿಫಲವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಗೃಹ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆಗೆ “ಬಲಿಪಶು” ಮಾಡುವುದು ಸರಿಯಲ್ಲ. ೨೦೨೩ರ ಕಾಯಿದೆಯಲ್ಲಿ ಜನಗಣತಿ ನಂತರ ಅನುಷ್ಠಾನ ಎಂದು ತಿಳಿಸಲಾಗಿದೆ. ಆದರೆ ಈಗ ೨೦೧೧ರ ಜನಗಣತಿ ಆಧಾರದಲ್ಲಿ ವೇಗಗೊಳಿಸುವುದು ಏಕೆ? ಜಾತಿ ಜನಗಣತಿಯನ್ನು ಸೇರಿಸದಿದ್ದರೆ ಪುನರ್‌ವಿಂಗಡಣೆಯು ಸಾಮಾಜಿಕ ನ್ಯಾಯಕ್ಕೆ ಹೊಂದುವುದಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಕುಟುಂಬ ನಿಯಂತ್ರಣದ ಯಶಸ್ಸಿಗೆ ಶಿಕ್ಷೆ ನೀಡುವಂತಾಗಬಾರದು. ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಮಸೂದೆ ಜಾರಿಗಿದ್ದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿತ್ತು. ಬಿಜೆಪಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ ಎಂದರು.

ಮಸೂದೆಯನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡು ಮಹಿಳೆಯರ ಭಾವನೆಗಳೊಂದಿಗೆ ಆಟವಾಡಲು ಹೋಯಿತು. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಅದು ನಡೆಯಲಿಲ್ಲ. ನಮ್ಮ ವಿರೋಧವೇನಿದ್ದರು ಪುನರ್ ವಿಂಗಡಣೆ ಮಸೂದೆ ತಿರಸ್ಕರಿಸಿದೆ ಹೊರತು ಮಹಿಳಾ ಮೀಸಲು ಮಸೂದೆ ಅಲ್ಲ ಎಂದರು.

ಪಂಚ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದರೂ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಚುನಾವಣೆಯ ಸಂದರ್ಭದಲ್ಲಿ ದೇಶ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವಿರೋಧ ಪಕ್ಷಗಳನ್ನು ತೆಗಳಿಕೆ ಮಾಡಿದ್ದು ಸರಿಯಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಮಾಡಿದರು.

ಮಸೂದೆ ಕುರಿತು ಸರ್ವ ಪಕ್ಷಗಳ ಸಭೆ ಕರೆಯುವಂತೆ ಮಾಡಿಕೊಂಡ ಮನವಿ ಉಪೇಕ್ಷೆ ಮಾಡಿತು ಕೇಂದ್ರ ಸರ್ಕಾರ. ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಆತಂಕ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರೆದಿದ್ದರೆ ಅನುಕೂಲ ಆಗುತ್ತಿತ್ತು. ೨೦೨೪ರಲ್ಲಿ ಮಹಿಳಾ ಮೀಸಲು ಜಾರಿಗೆ ತರುವ ಅವಕಾಶ ಇತ್ರು. ಇದನ್ನು ಮಾಡಲು ಮುಂದಾಗಲಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂ ದಲ್ಲಿ ತಮ್ಮ ಅನುಕೂಲ, ರಾಜಕೀಯ ಲಾಭಕ್ಕೆ ಅನುಗುಣವಾಗಿ ಮಾಡಿ ತೋರಿಸಿದ್ದಾರೆ. ಈ ಬಗ್ಗೆ ಹೆಚ್ಚು ಆತಂಕ ಇದೆ. ಆಡಳಿತ ಪಕ್ಷಕ್ಕೆ ಈ ಮಸೂದೆ ಜಾರಿಗೆ ತರುವ ಬದ್ದತೆ ಇದ್ದಿದ್ದರೆ ಸರ್ವ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದರು. ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಯಲ್ಲಿ ಶೇ ೫೦ ಜಾರಿಗೆ ತಂದಿದ್ದೇವೆ ಎಂದರು.

ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಜಾರಿಗೆ ತಂದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಜನಗಣತಿಯಲ್ಲಿ ಜಾತಿ ಗಣತಿ ನಡೆಯುತ್ತಿದೆಯೇ ಎಂಹುದು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ನಡುವೆ ಇರುವ ವ್ಯತ್ಯಾಸ ದೊಡ್ಡದು. ಉತ್ತರ ಭಾರತೀಯ ರಾಜ್ಯಗಳು ಹೆಚ್ಚು ಪ್ರಾಬಲ್ಯ ಸಾಧಿಸಿದರೆ ದಕ್ಷಿಣ ಭಾರತಕ್ಕೆ ತೊಂದರೆ ಆಗುತ್ತದೆ. ಮಸೂದೆ ಮಂಡನೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆಯಾವುದು ಒಳಿತು ಎಂಬುದು ಮಹಿಳೆಯರು ಆಲೋಚನೆ ಮಾಡಲಿ ಎಂದರು.

ಸುದ್ದಿಗೋಷ್ಟಿಯಲ್ಲಿ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾಂಗ್ರೆಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ, ಮುಖಂಡರಾದ ಶಿವಕುಮಾರ್, ಅಯೂಬ್ ಪೈಲ್ವಾನ್, ಎ.ನಾಗರಾಜ್ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 days ago

ದಾವಣಗೆರೆ | ದೇಗುಲಗಳಲ್ಲಿ ನಿಧಿ ಶೋಧನೆ ಯತ್ನ ; ಆರು ಜನರ ಬಂಧನ

ಸುದ್ದಿದಿನ,ದಾವಣಗೆರೆ:ತಾಲ್ಲೂಕಿನ ಕಾಡಜ್ಜಿ ಗ್ರಾಮದ ದೇಗುಲಗಳಲ್ಲಿ ನಿಧಿ ಶೋಧಿಸಲು ಯತ್ನಿಸಿದ ಆರು ಜನರ ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕಾಡಜ್ಜಿ ಗ್ರಾಮದ ಬಸವರಾಜ (42), ಮಲೇಬೆನ್ನೂರಿನ ಪ್ರಕಾಶ...

ದಿನದ ಸುದ್ದಿ2 days ago

ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಸುಗಮ ಮತ ಎಣಿಕೆಗೆ ಸಜ್ಜು 

ಸುದ್ದಿದಿನ,ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಸುಗಮ, ಪಾರದರ್ಶಕ ಮತ್ತು ಅತ್ಯಂತ ಸುರಕ್ಷಿತವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯದಿಂದ...

ದಿನದ ಸುದ್ದಿ1 week ago

ಎಸ್‌ಎಸ್‌ಎಲ್‌ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ

ಸುದ್ದಿದಿನ,ದಾವಣಗೆರೆ: 2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಗರದ ಪ್ರತಿಷ್ಠಿತ ಶಾಲೆಗಲ್ಲಿ ಒಂದಾದ ಗುರುಕುಲ ಶಾಲೆ (Gurukul School) ಶೈಕ್ಷಣಿಕ ಕ್ಷೇತ್ರದಲ್ಲಿ ಮತ್ತೊಮ್ಮೆ ತನ್ನ ವರ್ಚಸ್ಸನ್ನು...

ದಿನದ ಸುದ್ದಿ1 week ago

ಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ

ಸುದ್ದಿದಿನ,ದಾವಣಗೆರೆ: ಬಿಜೆಪಿಯು ಪಂಚರಾಜ್ಯಗಳ ಚುನಾವಣೆಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ...

ದಿನದ ಸುದ್ದಿ1 week ago

ಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ

ಸುದ್ದಿದಿನ,ದಾವಣಗೆರೆ:ಇವತ್ತು ನನಗೆ ಬಹಳ ಸಂತೋಷದ ದಿನ. ನನ್ನ ಕ್ಷೇತ್ರದ ಕಬ್ಬಳ ಗ್ರಾಮದ ಒಬ್ಬ ರೈತ ಕುಟುಂಬದಿಂದ ಬಂದ ಜಿ.ಭರತ್ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿರುವುದು...

ದಿನದ ಸುದ್ದಿ1 week ago

ಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ

ಸುದ್ದಿದಿನ,ದಾವಣಗೆರೆ : ನಗರದ ಧವನ್ ಕಾಲೇಜಿನಲ್ಲಿ Viksit47 ಅಕಾಡೆಮಿ ವತಿಯಿಂದ ಉಚಿತ ತರಬೇತಿ ಕಾರ್ಯಗಾರವನ್ನು ಇದೇ 25 ರಂದು ಆಯೋಜಿಸಲಾಗಿದೆ ಎಂದು ಮುಖ್ಯಸ್ಥರಾದ ತೇಜಸ್ ಹೆಚ್.ಎನ್ ಅವರು...

ದಿನದ ಸುದ್ದಿ1 week ago

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 625ಕ್ಕೆ 625 ಅಂಕಗಳನ್ನು...

ದಿನದ ಸುದ್ದಿ2 weeks ago

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

ಸುದ್ದಿದಿನ,ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುತ್ತದೆ. ಫಲಿತಾಂಶವನ್ನು ವೆಬ್‌ಸೈಟ್ (https://karresults.nic.in) ಲಿಂಕ್ ಮೂಲಕ ಹಾಗೂ KarnatakaOne mobile app...

ದಿನದ ಸುದ್ದಿ2 weeks ago

ಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ

ಸುದ್ದಿದಿನ,ದಾವಣಗೆರೆ: ಉತ್ತಮ ಗುಣಮಟ್ಟದ ಜಿ-9 ತಳಿಯ ಅಂಗಾಂಶ ಕೃಷಿ ಬಾಳೆಗಳನ್ನು ಕೃಷಿ ಇಲಾಖೆ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ,...

ದಿನದ ಸುದ್ದಿ2 weeks ago

ಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ...

Trending