ಬಹಿರಂಗ
ಬೀದರ್ ದೇಶದ್ರೋಹ ಪ್ರಕರಣದ ಸುತ್ತ ಮುತ್ತ

- ಕುಮಾರ ಬುರಡಿಕಟ್ಟಿ
ಬೀದರ್ನ ಶಾಹೀನ್ ಶಾಲೆಯ ಮೇಲೆ ಹಾಗೂ ಮೈಸೂರಿನ ವಿದ್ಯಾರ್ಥಿನಿಯ ಮೇಲೆ ಹಾಕಲಾದ ದೇಶದ್ರೋಹ ಪ್ರಕರಣಗಳು ಸಧ್ಯಕ್ಕೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಹೇಗೆ ದುರ್ಬಳಕೆಯಾಗುತ್ತಿದೆ ಎಂಬುದಕ್ಕೆ ಇತ್ತೀಚಿನ ಜೀವಂತ ಪ್ರತಿಮೆಗಳಾಗಿ ನಿಂತಿವೆ.
ಬೀದರ್ ಪ್ರಕರಣವನ್ನು ತುಸು ಹತ್ತಿರದಿಂದಲೇ ನೋಡುತ್ತಾ ವರದಿ ಮಾಡುತ್ತಿರುವುದರಿಂದ ಹಾಗೂ ನಿನ್ನೆ (ಸೋಮವಾರ) ಬೀದರ್ಗೆ ಹೋಗಿ ಇಡೀ ದಿನ ಆ ಪ್ರಕರಣದ ಬಲಿಪಶುಗಳನ್ನು ಮಾತಾಡಿಸಿದ ನಂತರ ನನಗೆ ಕಂಡ ಒಂದಿಷ್ಟು ಬಿಡಿಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವೆ.
ಕಳೆದ ಜನವರಿ 21ರಂದು ಬೀದರ್ನ ಪ್ರತಿಷ್ಠಿತ ಶಾಹೀನ್ ಸ್ಕೂಲಿನಲ್ಲಿ ವಾರ್ಷಿಕೋತ್ಸವ ಸಮಾರಂಭವಿತ್ತು. ವಿದ್ಯಾರ್ಥಿಗಳು ವಿಭಿನ್ನ ರೀತಿಯ, ಸೃಜನಶೀಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಅಂತಹ ಕಾರ್ಯಕ್ರಮಗಳಲ್ಲಿ ಆರನೇ ತರಗತಿಯ ಮಕ್ಕಳು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕುರಿತು ಪ್ರದರ್ಶಿಸಿದ ಕಿರುನಾಟಕ ಕೂಡ ಒಂದು.
ಈ ನಾಟಕದಲ್ಲಿ ಕೆಲವು ಪಾತ್ರಗಳು ಎನ್ಆರ್ಸಿ ಕುರಿತು ಚರ್ಚೆ ಮಾಡುತ್ತವೆ. “ಸತ್ತು ಗೋರಿಯಲ್ಲಿರುವ ನನ್ನ ಅಜ್ಜ, ಮುತ್ತಜ್ಜನ ದಾಖಲೆಗಳನ್ನು ಕೇಳಿದರೆ ನಾನೆಲ್ಲಿಂದ ತಂದುಕೊಡಲಿ?” “ಏನೇ ಆದ್ರೂ ನಾನಂತೂ ನನ್ನ ಪೌರತ್ವ ಸಾಬೀತು ಪಡಿಸಲು ದಾಖಲೆ ಕೊಡಲ್ಲ”, “ನನ್ನ ದಾಖಲೆಗಳನ್ನು ಕೇಳಲು ಬಂದರೆ ಚಪ್ಪಲಿಯಿಂದ ಹೊಡೆಯುತ್ತೇನೆ” ಎಂಬಿತ್ಯಾದಿ ಮಾತುಗಳನ್ನು ಒಂದೊಂದು ಪಾತ್ರ ಆಡುತ್ತದೆ. ಈ ಕೊನೆಯ ಡೈಲಾಗನ್ನು ಹೇಳಿದ್ದು ಆಯೇಷಾ (ಹೆಸರನ್ನು ಬದಲಾಯಿಸಲಾಗಿದೆ) ಎಂಬ ಹನ್ನೊಂದು ವರ್ಷದ ಹುಡುಗಿ.
ಸೂಕ್ಷ್ಮವಾಗಿ ನೋಡಿದರೆ ಇದೊಂದು ವಿಡಂಬನಾತ್ಮಕ ನಾಟಕ. ಚಪ್ಪಲಿಯಿಂದ ಹೊಡೆಯುತ್ತೇನೆ ಎಂಬುದು ಉರ್ದು/ ಹಿಂದಿ ಭಾಷೆಯಲ್ಲಿ ಜನಸಾಮಾನ್ಯರು ಬಹಳ ಸಲೀಸಾಗಿ, ಮಾಮೂಲಿಯಾಗಿ ಸಣ್ಣಪುಟ್ಟ ವಿಷಯಕ್ಕೆಲ್ಲಾ ಆಡುವ ಮಾತು (ಜ್ಯೂತೆ ಸೆ ಮಾರುಂಗ). ಅದರೆ ಇಲ್ಲಿ ಆ ಡೈಲಾಗೇ ಬಹಳ ಜನರಿಗೆ ಮುಳುವಾಗಿ ಪರಿಣಮಿಸಿದೆ.
ಈ ನಾಟಕದ ವೀಡಿಯೋ ತುಣುಕೊಂದನ್ನು ಮೊಹಮ್ಮದ್ ಯೂಸೂಫ್ ಎಂಬ ಸ್ಥಳೀಯ ಉರ್ದು ಪತ್ರಿಕೆಯ ವರದಿಗಾರನೊಬ್ಬ ಫೇಸ್ಬುಕ್ಕಿನಲ್ಲಿ ಪೋಸ್ಟ್ ಮಾಡುತ್ತಾನೆ. ಇದು ನೀಲೇಶ್ ರಕ್ಷ್ಯಾಳ್ ಎಂಬ ಬಲಪಂಥೀಯ ವ್ಯಕ್ತಿಯೊಬ್ಬನ ಗಮನಕ್ಕೆ ಬರುತ್ತದೆ. ಆತ ಈ ನಾಟಕದಲ್ಲಿರುವ ಸಂಭಾಷಣೆಗಳು, ಅದರಲ್ಲೂ ವಿಶೇಷವಾಗಿ “ಚಪ್ಪಲಿಯಿಂದ ಹೊಡೆಯುತ್ತೇನೆ” ಎನ್ನುವ ಡೈಲಾಗು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಡಿದ ಅವಮಾನ ಎಂಬುದಾಗಿ ಹಾಗೂ ಅದೊಂದು ದೇಶದ್ರೋಹದ ಕೃತ್ಯ ಎಂಬುದಾಗಿ ಆರೋಪಿಸಿ ಈ ನಾಟಕ ಪ್ರದರ್ಶನ ಮಾಡಿದ ಶಾಹೀನ್ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೀದರ್ನ ನ್ಯೂಟೌನ್ ಪೊಲೀಸ್ ಸ್ಟೇಷನ್ನಿನಲ್ಲಿ ಜನವರಿ 26ರಂದು ದೂರು ದಾಖಲಿಸುತ್ತಾನೆ.
ಇದನ್ನು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504 (ಶಾಂತಿಭಂಗ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 124ಎ (ದೇಶದ್ರೋಹ) ಮತ್ತು ಇತರ ಸೆಕ್ಷನ್ನುಗಳ ಅಡಿಯಲ್ಲಿ ಶಾಹಿನ್ ಸಂಸ್ಥೆಯ ಅಧ್ಯಕ್ಷ, ಆಡಳಿತ ಮಂಡಳಿ ಮತ್ತು ಮೊಹಮ್ಮದ್ ಯೂಸೂಫ್ ಮೇಲೆ ಪ್ರಕರಣ ದಾಖಲಿಸುತ್ತಾರೆ.
ಮರುದಿನದಿಂದಲೇ ಪೊಲೀಸರು ಶಾಲೆಗೆ ಬಂದು ಪ್ರಕರಣದ ವಿಚಾರಣೆ ಶುರು ಮಾಡುತ್ತಾರೆ. ಶಾಲೆಯ ಸಿಸಿಟೀವಿ ಕ್ಯಾಮೆರಾದ ದೃಶ್ಯಗಳನ್ನು ವಶಪಡಿಸಿಕೊಳ್ಳುತ್ತಾರೆ. ಶಾಲೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸುತ್ತಾರೆ.
ಮರುದಿನ, ಅಂದರೆ ಜನವರಿ 28ನೇ ತಾರೀಖು ಡಿವೈಎಸ್ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ಸಮವಸ್ತ್ರದಲ್ಲೇ ಬರುವ ಪೊಲೀಸರು ಸುಮಾರು 46 ಮಕ್ಕಳನ್ನು ವಿಚಾರಣೆಗೊಳಪಡಿಸುತ್ತಾರೆ. ಮಕ್ಕಳನ್ನು ವಿಚಾರಣೆಗೆ ಒಳಪಡಿಸುವಾಗ ಪೊಲೀಸರು ಸಮವಸ್ತ್ರದಲ್ಲಿರಬಾರದು ಹಾಗೂ ಮಕ್ಕಳ ಹಿತರಕ್ಷಣಾ ಸಮಿತಿಯ ಸದಸ್ಯರು ಜೊತೆಯಲ್ಲಿರಬೇಕು ಎಂಬ ಕನಿಷ್ಠ ಜ್ಞಾನವನ್ನೂ ಹೊಂದಿರದ ಬೀದರ್ ಪೊಲೀಸರು ಈ ಬಾಲನ್ಯಾಯ ನಿಯಮಗಳನ್ನು ಗಾಳಿಗೆ ತೂರುತ್ತಾರೆ.
ಸಮವಸ್ತ್ರಧಾರಿ ಪೊಲೀಸರು ಪುಟ್ಟ ಪುಟ್ಟ ಮಕ್ಕಳನ್ನು ವಿಚಾರಣೆಗೊಳಪಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬೀದರ್ ಪೊಲೀಸರು ಮರುದಿನ ಶಾಲೆಗೆ ಸಿವಿಲ್ ಡ್ರೆಸ್ಸಿನಲ್ಲಿ ಬರುತ್ತಾರೆ. ಆದರೆ ಆವತ್ತು ಯಾವ ಮಕ್ಕಳನ್ನೂ ವಿಚಾರಣೆಗೆ ಒಡಪಡಿಸದೇ ಕೇವಲ ಸಿಬ್ಬಂದಿಯನ್ನು ವಿಚಾರಣೆ ಮಾಡಿ ಹಿಂತಿರುಗುತ್ತಾರೆ.
ಅದರ ಮರುದಿನ, ಅಂದರೆ, ಜನವರಿ 29ರಂದು ಮತ್ತೆ ಸಿವಿಲ್ ಡ್ರೆಸ್ಸಿನಲ್ಲಿ ಬರುವ ಪೊಲೀಸರು ತಮ್ಮೊಂದಿಗೆ ಮಕ್ಕಳ ಹಿತರಕ್ಷಣಾ ಸಮಿತಿಯ ಇಬ್ಬರು ಮಹಿಳಾ ಸದಸ್ಯರನ್ನು ಕರೆದುಕೊಂಡು ಬಂದಿರುತ್ತಾರೆ. ಈ ಬಾರಿ ಅವರು ಮತ್ತೆ ಮಕ್ಕಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಈ ಬಾರಿ ಅವರು ಸುಮಾರು ಮೂರು ತಾಸು ವಿಚಾರಣೆ ಮಾಡುತ್ತಾರೆ.
ಪ್ರತೀ ವಿಚಾರಣೆಯ ಸಮಯದಲ್ಲೂ ನಾಟಕದಲ್ಲಿ “ಚಪ್ಪಲಿಯಿಂದ ಹೊಡೆಯುತ್ತೇನೆ” ಎಂಬ ಡೈಲಾಗ್ ಹೇಳಿದ ಆರನೆಯ ತರಗತಿಯ ಆಯೇಶಾಳನ್ನೇ ತೀವ್ರವಾಗಿ ವಿಚಾರಣೆ ಮಾಡುತ್ತಾರೆ. ವಿಚಾರಣೆಯ ಸಮಯದಲ್ಲಿ ಆ ಹುಡುಗಿ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಆ ಡೈಲಾಗನ್ನು ತನ್ನ ತಾಯಿ ಹೇಳಿಕೊಟ್ಟಿರುವುದಾಗಿ ಹೇಳುತ್ತಾಳೆ.
ಅದನ್ನೇ ಆಧಾರವಾಗಿಟ್ಟುಕೊಂಡ ಪೊಲೀಸರು ಮಾರನೆಯ ದಿನ, ಅಂದರೆ ಜನವರಿ 30ರಂದು ಮತ್ತೆ ಶಾಲೆಗೆ ಬಂದು ಸಿಬ್ಬಂದಿಯನ್ನು ವಿಚಾರಣೆ ಮಾಡುತ್ತಾರೆ. ಈ ಸಮಯದಲ್ಲಿ ಆ ನಾಟಕ ಪ್ರದರ್ಶನದ ಉಸ್ತುವಾರಿ ವಹಿಸಿದ್ದು ಶಾಲೆಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಎಂಬುದನ್ನು ಕಂಡುಕೊಳ್ಳುತ್ತಾರೆ.
ಆಯೇಶಾಳ ಹೇಳಿಕೆ ಆಧಾರದಲ್ಲಿ ಆಕೆಯ ತಾಯಿ ನಜ್ಬುನ್ನೀಸಾಳನ್ನು ಹಾಗೂ ಶಾಲೆಯ ಸಿಬ್ಬಂದಿಯ ಹೇಳಿಕೆಯ ಆಧಾರದಲ್ಲಿ ನಾಟಕದ ಉಸ್ತುವಾರಿ ನೋಡಿಕೊಂಡಿದ್ದ ಮುಖ್ಯಶಿಕ್ಷಕಿ ಫರಿದಾ ಬೇಗಂ ಅವರನ್ನು ಸುಮಾರು ಮಧ್ಯಾಹ್ನ 4 ಗಂಟೆಯ ಹೊತ್ತಿಗೆ ಬಂಧಿಸಿ ಕರೆದೊಯ್ಯುತ್ತಾರೆ.
ಮಾರನೆಯ ದಿನ, ಅಂದರೆ ಜನವರಿ 31ನೇ ತಾರೀಖಿನಂದು ಮತ್ತೆ ಶಾಲೆಗೆ ಬರುವ ಪೊಲೀಸರು ಕೆಲವು ಮಕ್ಕಳ ಪಟ್ಟಿಯನ್ನು ಕೊಟ್ಟು ಅವರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬರುವಂತೆ ಒತ್ತಾಯಿಸುತ್ತಾರೆ. ಆದರೆ ಅದಕ್ಕೆ ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೌಸೀಫ್ ಮಡಿಕೇರಿ ಖಂಡಿತ ಒಪ್ಪುವುದಿಲ್ಲ. ಅಷ್ಟೊತ್ತಿಗಾಗಲೇ ಬೀದರ್ ದೇಶದ್ರೋಹದ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುತ್ತದೆ.
ಪೊಲೀಸರು ಸಮವಸ್ತ್ರದಲ್ಲೇ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದಕ್ಕೆ ತೀವ್ರ ವೀರೋಧ ವ್ಯಕ್ತವಾಗಿದ್ದು ಮಾತ್ರವಲ್ಲದೇ ರಾಷ್ಟ್ರೀಯ ಮತ್ತು ರಾಜ್ಯ ಮಾನವ/ಮಕ್ಕಳ ಹಕ್ಕುಗಳ ಸಂಸ್ಥೆಗಳು ಶಾಲೆಯನ್ನು, ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಪೊಲೀಸ್ ಠಾಣೆಗೆ ಕಳಿಸಿಕೊಡಲು ಶಾಲೆಯ ಆಡಳಿತ ಮಂಡಳಿ ಸುತಾರಾಂ ಒಪ್ಪುವುದಿಲ್ಲ. ಈ ವಿಷಯದಲ್ಲಿ ಪೊಲೀಸರಿಗೂ ಮತ್ತು ಶಾಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತೌಸಿಫ್ ಮಡಿಕೇರಿ ನಡುವೆ ಸಣ್ಣದೊಂದು ಮಾತಿನ ಚಕಮಕಿಯೂ ನಡೆಯುತ್ತದೆ.
ಬಾಲ ನ್ಯಾಯ ವ್ಯವಸ್ಥೆಯ ಬಗ್ಗೆ ತನಗೆ ಪಾಠ ಮಾಡಬೇಡ ಎಂದು ವಿಚಾರಣಾಧಿಕಾರಿ ಡಿವೈಎಸ್ಪಿ ಬಸವೇಶ್ವರ ಹೀರಾ ಅವರು ತೌಸಿಫ್ ಮಡಿಕೇರಿಗೆ ಧಮಕಿಯನ್ನೂ ಹಾಕುತ್ತಾರೆ. ಇಷ್ಟೆಲ್ಲಾ ಆದರೂ ಮಕ್ಕಳನ್ನು ಪೊಲೀಸ್ ಸ್ಟೇಷನ್ನಿಗೆ ಕಳಿಸಿಕೊಡಲು ಶಾಲೆಯ ಆಡಳಿತ ಮಂಡಳಿ ಒಪ್ಪದಿದ್ದುದರಿಂದ ಅನಿವಾರ್ಯವಾಗಿ ಶಾಲೆಯಲ್ಲೇ ವಿಚಾರಣೆ ಮಾಡುತ್ತಾರೆ.
ನಂತರ ಫೆಬ್ರವರಿ 1, 3 ಮತ್ತು 4ನೇ ತಾರೀಖಿನಂದು ಮತ್ತೆ ಮತ್ತೆ ಶಾಲೆಗೆ ಬಂದು ವಿದ್ಯಾರ್ಥಿಗಳನ್ನು ವಿಚಾರಣೆ ಮಾಡುತ್ತಾರೆ. ಹೀಗೆ, ಪೊಲೀಸರು ಒಟ್ಟು ಐದು ಬಾರಿ ಮಕ್ಕಳನ್ನು ವಿಚಾರಣೆಗೆ ಒಳಪಡಿಸುತ್ತಾರೆ. ವಿಚಾರಣೆಗೆ ಒಳಗಾದ ಒಟ್ಟು ಮಕ್ಕಳ ಸಂಖ್ಯೆ ಸುಮಾರು 80. ನಾಟಕದಲ್ಲಿ ಪಾತ್ರಗಳನ್ನು ಮಾಡಿದ ಮಕ್ಕಳನ್ನಂತೂ ಪೊಲೀಸರು ಪದೇಪದೇ ವಿಚಾರಣೆಗೆ ಒಳಪಡಿಸಿದರೆ ಉಳಿದ ಮಕ್ಕಳನ್ನು ಒಂದೆರಡು ಬಾರಿ ಮಾತ್ರ ವಿಚಾರಣೆ ಮಾಡುತ್ತಾರೆ.
ಈ ನಾಟಕದ ಸ್ಕ್ರಿಪ್ಟ್ ಬರೆದದ್ದು ಯಾರು? ಈ ನಾಟಕದ ಡೈಲಾಗ್ ಯಾರು ಹೇಳಿಕೊಟ್ಟರು? ಪ್ರಧಾನಮಂತ್ರಿ ಮುಸ್ಲೀಂ ಆಗಿದ್ರೆ ಹೀಗೆ ಚಪ್ಪಲಿಯಿಂದ ಹೊಡೆಯುತ್ತೇನೆ ಅಂತಿದ್ತಾ? ನಾಟಕದ ರಿಹರ್ಸಲ್ ಎಲ್ಲಿ ಮಾಡಿದ್ರಿ? ನೋಡೋದಕ್ಕೆ ತಂದೆತಾಯಿ ಬಂದಿದ್ರಾ? ಎಂಬಿತ್ಯಾದಿ ಪ್ರಶ್ನೆಗಳನ್ನೇ ಪ್ರತೀದಿನ ಕೇಳುತ್ತಿದ್ದರು. ಸಿಸಿಟೀವಿ ಕ್ಯಾಮೆರಾದ ಕವರೇಜ್ ಇಲ್ಲದ ಶಾಲಾ ಕಟ್ಟಡದ ಮೂಲೆಯ ಕೋಣೆಯೊಂದನ್ನು ಅವರು ವಿಚಾರಣೆಗಾಗಿ ಆಯ್ಕೆ ಮಾಡಿಕೊಂಡಿದ್ದರು. ಫೆಬ್ರುವರಿ 4ನೇ ತಾರೀಖಿನ ನಂತರ ಪೊಲೀಸರು ಮತ್ತೆ ಶಾಲೆಯ ಕಡೆ ಬಂದಿಲ್ಲವಂತೆ.
ಈ ಇಡೀ ಪ್ರಕರಣದಲ್ಲಿ ಅತಿ ಹೆಚ್ಚು ನೋವು ಅನುಭವಿಸಿದವರು ಮತ್ತು ಈಗಲೂ ಅನುಭವಿಸುತ್ತಿರುವವರು ಎಂದರೆ ನಜ್ಬುನ್ನಿಸಾ ಮತ್ತು ಅವಳ ಮಗಳು ಆಯೇಶಾ. ನಜ್ಬುನ್ನಿಸಾ ಬೀದರಿನಿಂದ ಸುಮಾರು ನಲ್ವತ್ತು ಕಿ.ಮೀ. ದೂರದಲ್ಲಿರುವ ಹಳ್ಳಿಕೇಡ್ ಗ್ರಾಮದವಳು. ಸುಮಾರು 27 ವರ್ಷ ಇರಬಹುದು. ಮಗಳು ಆಯೇಶಾಳಿಗೆ ಸುಮಾರು 11 ವರ್ಷ ಇರಬಹುದು. ಸುಮಾರು ಏಳು ವರ್ಷಗಳ ಹಿಂದೆಯೇ ಅವಳ ಗಂಡ ಕ್ಯಾನ್ಸರಿನಿಂದ ಬಳಲಿ ಅಸುನೀಗಿದ್ದಾನೆ. ಅಂದಿನಿಂದಲೂ ನಜ್ಬುನ್ನೀಸಾಳೇ ತನ್ನ ಮತ್ತು ತನ್ನ ಮಗಳ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿರುವುದು.
ಶಾಹೀನ್ ಸಂಸ್ಥೆಯು ಹಳ್ಳಿಕೇಡದಲ್ಲೂ ಒಂದು ಪ್ರಾಥಮಿಕ ಶಾಲೆಯನ್ನು ನಡೆಸುತ್ತಿದೆ. ಅಲ್ಲಿ ಶಿಕ್ಷಕಿಯೊಬ್ಬಳ ಮಗಳು ಮುಂದೆ ಬೀದರಿಗೆ ಬಂದು ಶಾಹೀನ್ ಸಂಸ್ಥೆಯ ಹೈಸ್ಕೂಲಿನಲ್ಲಿ, ಪಿಯೂಸಿ ಕಾಲೇಜಿನಲ್ಲಿ ಓದಿ ಸರ್ಕಾರಿ ಕೋಟದಡಿಯಲ್ಲಿ ಉಚಿತ ಮೆಡಿಕಲ್ ಸೀಟು ಪಡೆದಿರುತ್ತಾಳೆ. ಇಂತಹ ಒಂದೆರಡು ಉದಾಹರಣೆಗಳು ನಜ್ಬುನ್ನೀಸಾಳಲ್ಲೂ ತನ್ನ ಮಗಳ ಬಗ್ಗೆ ಆಸೆ, ಆಕಾಂಕ್ಷೆಗಳನ್ನು ಹುಟ್ಟಿಸಿರುತ್ತವೆ. ಆಯೇಶಾಳನ್ನೂ ಬೀದರಿನ ಶಾಹೀನ್ ಶಾಲೆಗೆ ಸೇರಿಸಿದರೆ ಅವಳೂ ಡಾಕ್ಟರ್ ಅಥವಾ ಎಂಜಿನೀಯರ್ ಆಗಬಹುದು ಎಂಬ ಕನಸುಗಳು ಆಕೆಯಲ್ಲಿ ಮೊಳೆಯುತ್ತವೆ. ಈ ಕನಸುಗಳೇ ಅವಳನ್ನು ಮಗಳ ಜೊತೆ ಹಳ್ಳಿಕೇಡ್ ತೊರೆದು ಬೀದರಿಗೆ ಬರುವುದಕ್ಕೆ ಪ್ರೇರೇಪಿಸುತ್ತವೆ.
ಈಗ್ಗೆ ನಾಲ್ಕೈದು ತಿಂಗಳ ಹಿಂದಷ್ಟೇ ಕಣ್ಣತುಂಬಾ ಕನಸು ಕಟ್ಟಿಕೊಂಡು ಆಯೇಶಾ ಜೊತೆ ಬೀದರಿಗೆ ಬಂದಿದ್ದ ನಜ್ಬುನ್ನಿಸಾ ಬೀದರಿನ ದುಡಿಯುವ ಜನ ವಾಸಿಸುವ ಏರಿಯಾದಲ್ಲಿ ಒಂದು ಸಣ್ಣ ರೂಮನ್ನು ಬಾಡಿಗೆಗೆ ಪಡೆದು ನೆಲೆಸುತ್ತಾಳೆ. ತಾನು ಅವರಿವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದು ಮಗಳನ್ನು ತನ್ನ ಆಸೆಯಂತೆಯೇ ಶಾಹೀನ್ ಶಾಲೆಗೆ ಸೇರಿಸುತ್ತಾಳೆ.
ಅಸಲಿಗೆ ಶಾಹಿನ್ ಶಾಲೆ ಮುಸ್ಲಿಂ ಸಮುದಾಯದ ಶಾಲೆ ಎಂದೇ ಪರಿಚಿತವಾಗಿದ್ದರೂ ಇಲ್ಲಿ ಶೇಕಡ 50ರಷ್ಟು ಮುಸ್ಲೀಮೇತರ ಮಕ್ಕಳು ಕಲಿಯುತ್ತಿದ್ದಾರೆ. ಹಿಂದೂ, ಸಿಖ್, ಕ್ರಿಶ್ಚಿಯನ್, ಮುಸ್ಲಿಂ – ಎಲ್ಲಾ ಧರ್ಮದ ಬಡ ಮಕ್ಕಳಿಗೆ ಇಲ್ಲಿ ಪ್ರವೇಶ ಸಿಗುತ್ತದೆ. ಇದು ಒಳ್ಳೆಯ ಹೆಸರು ಮಾಡಿರುವ ಸಂಸ್ಥೆ. ದೇಶಾದ್ಯಂತ ಸುಮಾರು 40 ಕಡೆ ಈ ಸಂಸ್ಥೆಯ ಶಾಲೆಗಳಿವೆ. ಬೀದರ್ ಶಾಲೆಯೊಂದರಿಂದಲೇ ಕಳೆದ ವರ್ಷ 327 ವಿದ್ಯಾರ್ಥಿಗಳು ನೀಟ್ ಮೂಲಕ ಸರ್ಕಾರಿ ಕೋಟಾದಲ್ಲಿ ಉಚಿತ ಮೆಡಿಕಲ್ ಸೀಟುಗಳನ್ನು ಪಡೆದಿದ್ದಾರೆ.
ಇಂತಹ ಶಾಲೆಗೆ ಮಗಳನ್ನು ಸೇರಿಸಿ ಇನ್ನೂ ನಾಲ್ಕು ತಿಂಗಳು ತುಂಬುವ ಮೊದಲೇ ನಜ್ಬುನ್ನೀಸಾ ದೇಶದ್ರೋಹದ ಆರೋಪ ಹೊತ್ತು, ಆಯೇಶಾಳನ್ನು ಅನಾಥಳನ್ನಾಗಿ ಮಾಡಿ ಜೈಲು ಸೇರಬೇಕಾಗಿ ಬಂದಿದೆ. ಅತ್ತ ಆಕೆ ಜೈಲು ಸೇರಿದ ನಂತರ ಪಕ್ಕದ ಮನೆಯ ಮೊಹ್ಮದ್ ಹಫೀಜುದ್ದೀನ್ ಕುಟುಂಬ ಆಯೇಶಾಳನ್ನು ತಮ್ಮ ಹತ್ತಿರ ಇಟ್ಟುಕೊಂಡು ಸುಮಾರು 8-10 ದಿನ ಆರೈಕೆ ಮಾಡಿದೆ. ನಂತರ ಮಕ್ಕಳ ಹಿತರಕ್ಷಣಾ ಸಮಿತಿಯ ಸಲಹೆಯ ಮೇರೆಗೆ ಆಕೆಯನ್ನು ಶಾಹೀನ್ ಸಂಸ್ಥೆ ನಡೆಸುವ ಹಾಸ್ಟೆಲ್ ಒಂದಕ್ಕೆ ವರ್ಗಾಯಿಸಿ ಅಲ್ಲಿನ ವಾರ್ಡನ್ ಜೊತೆ ಇರುವುದಕ್ಕೆ ಕಳಿಸಲಾಗಿದೆ.
“ಆಯೇಶಾ ಬಹಳ ಲವಲವಿಕೆಯ ಹುಡುಗಿಯಾಗಿದ್ದಳು. ಪದೇ ಪದೇ ಪೊಲೀಸರ ವಿಚಾರಣೆ, ಅವಳ ಅಮ್ಮಿಯ ಬಂಧನ ಅವಳ ಮನಸ್ಸಿನ ಮೇಲೆ ದೊಡ್ಡ ಆಘಾತ ಉಂಟು ಮಾಡಿದೆ. ತಾಯಿಯ ಬಂಧನದ ನಂತರ ಯಾವಗಲೂ ಬಹಳ ಸಪ್ಪೆಯಾಗಿರುತ್ತಿದ್ದಳು. ಮಧ್ಯರಾತ್ರಿ ದಿಢೀರನ್ ಎದ್ದು ಅಳುತ್ತಿದ್ದಳು. ಕೆಟ್ಟ ಕನಸು ಕಂಡು ಥಟ್ಟನೇ ಚೀರುತ್ತಿದ್ದಳು. ಸಮಾಧಾನಿಸಿ ಮಲಗಿಸುತ್ತಿದ್ದೆವು. ಒಮ್ಮೆ ಮಧ್ಯರಾತ್ರಿ ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದೆವು.
ಅಪ್ಪ ತೀರಿಕೊಂಡಿದ್ದಾರೆ, ಅಮ್ಮ ಜೈಲು ಸೇರಿದ್ದಾರೆ. ನೆರೆಹೊರೆಯವರಾಗಿ ನಾವು ಇಷ್ಟಾದರೂ ಮಾಡಬೇಕಲ್ಲವೆ?” ಎಂದು ಮೊಹ್ಮದ್ ಹಫೀಜುದ್ದೀನ್ ಹೇಳಿದರು. ಬೀದರಿನ ದರ್ಜಿ ಗಲ್ಲಿಯಲ್ಲಿ ಅವರು ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾರೆ. ಆಯೇಶಾ ಮತ್ತು ನಜ್ಬುನ್ನಿಸಾ ವಾಸಿಸುತ್ತಿದ್ದ ಮನೆಯನ್ನು ತೋರಿಸಿ ಎಂದು ಸ್ವಲ್ಪ ಒತ್ತಾಯ ಮಾಡಿದ ಮೇಲೆ ಅವರು ಅಂಗಡಿಯನ್ನು ಬೇರೆಯವರಿಗೆ ಒಪ್ಪಿಸಿ ಬೈಕಿನಲ್ಲಿ ಕರೆದುಕೊಂಡು ಹೋಗಿ ತೋರಿಸಿದರು. ನಾನು ಮನೆಯದೊಂದು ಫೋಟೋ ತೆಗೆದುಕೊಂಡೆ.
“ಆಯೇಶಾ ಬಹಳ ಹಸನ್ಮುಖಿ ಹುಡುಗಿ. ಅಮ್ಮಿ ನಜ್ಬುನ್ನಿಸಾ ಬಂಧನವಾದ ಮೇಲೆ ಅವಳು ಮುಖ ಪೂರ್ಣವಾಗಿ ಬಾಡಿಬಿಟ್ಟಿದೆ. ನಗು ಮುಖದಿಂದ ಮರೆಯಾಗಿಬಿಟ್ಟಿದೆ. ಯಾವಾಗಲೂ ಖಿನ್ನತೆಯಲ್ಲಿ ಇರುತ್ತಾಳೆ. ಅಮ್ಮಿಯ ಬಂಧನವಾದ ಮೇಲೂ ಸ್ವಲ್ಪ ದಿನ ಆಯೇಶಾ ಶಾಲೆಗೆ ಬರುತ್ತಿದ್ದಳು. ಶಾಲೆಯ ಆವರಣದಲ್ಲಿ ದಿನಾಲೂ ನನ್ನನ್ನು ಕಂಡ ತಕ್ಷಣ ಅಳುತ್ತಾ ಓಡಿ ಬಂದು ತಬ್ಬಿಕೊಂಡುಬಿಡುತ್ತಿದ್ದಳು.
ಆಕೆ ದಿನಾಲು ಕೇಳುವ ಮೊದಲ ಪ್ರಶ್ನೆ ಎಂದರೆ ‘ಅಮ್ಮಿ ಯಾವಾಗ ಬರ್ತಾಳೆ’ ಅಂತ. ನಾನು ಆವಾಗ ಬರ್ತಾಳೆ, ಈವಾಗ ಬರ್ತಾಳೆ ಅಂತ ಹೇಳುತ್ತಾ ಹೇಗೋ ಸಮಾಧಾನ ಮಾಡ್ತಿದ್ದೆ. ‘ನಾನು ಮಾಡಿದ ತಪ್ಪಿಗೆ ಅಮ್ಮಿನ ಯಾಕೆ ಕರ್ಕೊಂಡು ಹೋಗಿದ್ದಾರೆ’ ಅಂತ ಮತ್ತೆ ಮತ್ತೆ ಕೇಳುತ್ತಿದ್ದಳು. ಈಗ ಕೆಲವು ದಿನಗಳಿಂದ ಆಕೆ ಶಾಲೆಗೂ ಬಂದಿಲ್ಲ. ಇವತ್ತಿನಿಂದ ಪರೀಕ್ಷೆಗಳು ಶುರುವಾಗಿವೆ. ಆಕೆ ಪರೀಕ್ಷೆಯನ್ನೂ ಬರೆಯುತ್ತಿಲ್ಲ. ದಯವಿಟ್ಟು ಏನಾದ್ರೂ ಮಾಡಿ ನಜ್ಬುನ್ನಿಸಾಳ ಬಿಡುಗಡೆಗೆ ಸಹಾಯ ಮಾಡಿ. ನಮಗೂ ಆಯೇಶಾಳ ಸ್ಥಿತಿಯನ್ನು ನೋಡೋಕೆ ಆಗ್ತಿಲ್ಲ,” ಎಂದು ಆಯೇಶಾಳ ಕ್ಲಾಸ್ ಟೀಚರ್ ಆಸ್ಮಾ ತರನ್ನುಮ್ ಹೇಳಿದ್ರು.
ಸೀದಾ ಜೈಲಿಗೆ ಹೋಗಿ ನಜ್ಬುನ್ನೀಸಾಳನ್ನೂ ಮಾತಾಡಿಸಿದೆ. “ನಾನೇನೂ ಆಯೇಶಾಳಿಗೆ ಇಂತಹ ಡೈಲಾಗನ್ನೇ ಹೇಳು ಅಂತ ಏನೂ ಹೇಳಿಕೊಟ್ಟಿರಲಿಲ್ಲ. ಜ್ಯೂತೆಸೆ ಮಾರುಂಗಿ ಎಂಬುದು ನಾವು ಆಡುಭಾಷೆಯಲ್ಲಿ, ಸಣ್ಣಪುಟ್ಟ ವಿಷಯಗಳಿಗೂ ಬಳಸುತ್ತೇವೆ. ನಾನು ಎಂದಾದರೂ ಆ ರೀತಿ ಬೈದಿದ್ದನ್ನು ನೋಡಿ ಆಯೇಶಾ ಅದನ್ನು ನಾಟಕದಲ್ಲಿ ಬಳಸಿರಬಹುದು ಅನ್ನಿಸುತ್ತದೆ. ಅದನ್ನೇ ಇಷ್ಟೊಂದು ರಾದ್ಧಾಂತ ಮಾಡೋ ಅವಶ್ಯಕತೆ ಇತ್ತಾ? ಆಯೇಶಾಳ ಓದು, ಭವಿಷ್ಯದ ಬಗ್ಗೆ ಏನೇನೋ ಕನಸು ಕಟ್ಟಿಕೊಂಡು ಬಂದಿದ್ದೆವು. ಬಂದ ನಾಲ್ಕೇ ತಿಂಗಳಲ್ಲಿ ಹೀಗೆಲ್ಲಾ ಆಗಿಹೋಯ್ತು. ನಂಗೆ ಆಯೇಶಾಳದ್ದೇ ಚಿಂತೆ. ಹೇಗಿದ್ದಾಳೋ, ಏನು ಮಾಡುತ್ತಿದ್ದಾಳೋ… ಸಬ್ ಅಲ್ಲಾ ಕಿ ಮರ್ಜಿ…” ಅಂತ ಹೇಳಿದಳು.
ಶಾಹಿನ್ ಶಾಲೆಯಲ್ಲಿ ಪದೇ ಪದೇ ಪೊಲೀಸರ ವಿಚಾರಣೆಗೆ ಒಳಗಾದ ಇಬ್ಬರು ವಿದ್ಯಾರ್ಥಿಗಳನ್ನೂ ಮಾತಾಡಿಸಿದೆ. ಅದರಲ್ಲಿ ಉತ್ತರ ಪ್ರದೇಶ ಮೂಲದ, ವಯಸ್ಸಿನಲ್ಲಿ ಸ್ವಲ್ಪ ದೊಡ್ಡವನಾದ ಒಬ್ಬ ವಿದ್ಯಾರ್ಥಿ ಮಾತ್ರ ‘ನನಗೆ ಪೊಲೀಸರ ವಿಚಾರಣೆಯಿಂದ ಹೆದರಿಕೆ ಆಗಲಿಲ್ಲ’ ಎಂದ. ಇನ್ನೊಬ್ಬ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿ, ವಯಸ್ಸಿನಲ್ಲಿ ಸ್ವಲ್ಪ ಸಣ್ಣವನು ಮಾತ್ರ ಬಹಳ ಹೆದರಿದ್ದಾಗಿ ಹೇಳಿದ.
“ಪೊಲೀಸರು ಎದೆಯ ಮೇಲೆಯೇ ನುಗ್ಗಿದಂತೆ ಬರುವ ರೀತಿ, ಅವರು ಪ್ರಶ್ನೆ ಕೇಳುವ ಶೈಲಿ, ನಮ್ಮನ್ನು ದಿಟ್ಟಿಸಿ ನೋಡುವ ರೀತಿ – ಎಲ್ಲವೂ ಭಯ ಹುಟ್ಟಿಸುತ್ತಿದ್ದವು. ಎರಡು ದಿನ ಬಹಳ ಹೆದರಿಕೆಯಾಗಿತ್ತು. ನಂತರ ಮೇಸ್ಟ್ರು ಸ್ವಲ್ಪ ಧೈರ್ಯ ಹೇಳಿದ ಮೇಲೆ ಸ್ವಲ್ಪ ಧೈರ್ಯ ಬಂತು,” ಎಂದು ಹೇಳಿದ ಆ ಪುಟ್ಟ ಬಾಲಕ.
“ಪ್ರಧಾನಮಂತ್ರಿ ನರೇಂದ್ರ ಮೋದಿಗೆ ವಿರೋಧ ಪಕ್ಷದ ನಾಯಕರು ಪಾರ್ಲಿಮೆಂಟಿನಲ್ಲೇ ಚೋರ್ (ಕಳ್ಳ) ಅಂತ ಕರೀತಾರೆ. ಕೆಲವು ಟೀವಿ ಚಾನೆಲ್ಲುಗಳ ಕಾರ್ಯಕ್ರಮಗಳಂತೂ ಮೋದಿಯನ್ನೂ ಒಳಗೊಂಡಂತೆ ಎಲ್ಲಾ ರಾಜಕೀಯ ನಾಯಕರನ್ನು ಎಷ್ಟೊಂದು ಅವಮಾನ, ಅಪಹಾಸ್ಯ ಮಾಡುತ್ತವೆ. ಅವುಗಳಿಗೆಲ್ಲಾ ಹೋಲಿಸಿದರೆ ನಮ್ಮ ಮಕ್ಕಳು ಒಂದು ವಿಡಂಬನಾತ್ಮಕ ನಾಟಕದಲ್ಲಿ ಆಡಿರುವ ಮಾತುಗಳು ಏನೂ ಅಲ್ಲ.
ಆದರೂ ನಮ್ಮ ಸಂಸ್ಥೆಯ ಮೇಲೆ ದೇಶದ್ರೋಹದಂತ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಒಂದು ಮಾನನಷ್ಟ ಮೊಕದ್ದಮೆ ದಾಖಲಿಸಲೂ ಯೋಗ್ಯವಲ್ಲದ ಡೈಲಾಗುಗಳು ಅವು. ಕಾರ್ಯಾಂಗ ವಿಫಲವಾದಾಗ ಇಂತಹ ಅವಘಡಗಳು ನಡೆಯುತ್ತವೆ. ಪೊಲೀಸರಿಗೆ ಮಾಡುವುದಕ್ಕೆ ಬೇರೆ ಕೆಲಸ ಇಲ್ಲ ಅಂತ ಕಾಣುತ್ತೆ. ಅದಕ್ಕೆ ಇಂತಹ ಚಿಕ್ಕಪುಟ್ಟ ವಿಷಯವನ್ನು ಇಷ್ಟೊಂದು ದೊಡ್ಡ ರಾದ್ಧಾಂತ ಮಾಡುತ್ತಿದ್ದಾರೆ,” ಎನ್ನುತ್ತಾರೆ ಶಾಹೀನ್ ಸಂಸ್ಥೆಯ ತೌಸೀಫ್ ಮಡಿಕೇರಿ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಏನು ಹೇಳ್ತಾರೆ ಕೇಳೋಣ ಅಂತ ಎಸ್ಪಿ ಆಫೀಸಿಗೆ ಹೋದೆ. ಈ ಪ್ರಕರಣ ದಾಖಲಾದಾಗ ಎಸ್ಪಿಯಾಗಿ ಇದ್ದವರು ಶ್ರೀಧರ್. ಈಗ ಅವರು ವರ್ಗಾವಣೆಯಾಗಿ ಹೋಗಿ ನಾಗೇಶ್ ಡಿ.ಎಲ್. ಎಂಬುವವರು ಆ ಸ್ಥಾನಕ್ಕೆ ಬಂದಿದ್ದಾರೆ. ಇದು ಎಸ್ಪಿಯಾಗಿ ಅವರಿಗೆ ಮೊದಲ ಪೋಸ್ಟಿಂಗ್ ಅನ್ನಿಸುತ್ತದೆ.
ಅವರನ್ನು ಭೇಟಿಯಾಗಿ ಇಂತಹದ್ದೊಂದು ವಿಡಂಬನಾ ನಾಟಕದಲ್ಲಿ ಮಕ್ಕಳು ಆಡಿರುವ ಡೈಲಾಲ್ ಅನ್ನು ಮುಂದಿಟ್ಟುಕೊಂಡು ದೇಶದ್ರೋಹ ಪ್ರಕರಣ ದಾಖಲಿಸುವ ಅಗತ್ಯವಿತ್ತಾ? ನಾಟಕದಲ್ಲಿನ ಮಕ್ಕಳ ಡೈಲಾಗುಗಳು ನಿಜಕ್ಕೂ ದೇಶದ್ರೋಹಕ್ಕೆ ಸಮ ಅನ್ನಿಸುತ್ತಾ? ಪ್ರಕರಣ ದಾಖಲಾದ ಮೇಲೆ ಶಾಲೆಗೆ ಹೋಗಿ ಐದು ಬಾರಿ ಮಕ್ಕಳನ್ನು ವಿಚಾರಣೆ ಮಾಡುವ ಅಗತ್ಯವಿತ್ತಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ.
ಅದು ನಿಜಕ್ಕೂ ದೇಶದ್ರೋಹವಾಗುತ್ತಾ ಇಲ್ಲವಾ ಎಂಬುದರ ಬಗ್ಗೆ ಅವರೇನೂ ಹೆಚ್ಚು ಮಾತಾಡಲಿಲ್ಲ. ವಿಚಾರಣೆಯಲ್ಲಿ ನೋಡೋಣ ಏನು ಬರುತ್ತೋ ಅಂತ ಅಂದರು. ಆದರೆ, ಶಾಲೆಗೆ ಹೋಗಿ ವಿಚಾರಣೆ ಮಾಡಿದ್ದರ ಬಗ್ಗೆ ಮಾತಾಡಿ ಅಷ್ಟು ಸಲ ಶಾಲೆಗೆ ಹೋಗಿ ವಿಚಾರಣೆ ಮಾಡುವ ಅಗತ್ಯವಿರಲಿಲ್ಲ ಎನ್ನುವ ಮೂಲಕ ಅಷ್ಟರ ಮಟ್ಟಿಗೆ ಪ್ರಾಮಾಣಿಕತೆಯನ್ನು ತೋರಿದರು.
“ವೈಯಕ್ತಿಕವಾಗಿ ನನಗನ್ನಿಸುವುದೇನೆಂದರೆ ಪದೇ ಪದೇ ಶಾಲೆಗೆ ಹೋಗಿ ವಿಚಾರಣೆ ನಡೆಸುವ ಅಗತ್ಯ ಇರಲಿಲ್ಲ. ಪ್ರಾಯಶಃ ವಿಚಾರಣಾಧಿಕಾರಿಗೆ ಒಮ್ಮೆ ಹೋದಾಗಲೇ ಎಲ್ಲಾ ಮಕ್ಕಳು ವಿಚಾರಣೆಗೆ ಸಿಕ್ಕಿರಲಿಕ್ಕಿಲ್ಲ ಅಥವಾ ಎಲ್ಲರನ್ನೂ ಒಂದೇ ದಿನ ವಿಚಾರಣೆ ಮಾಡುವುದಕ್ಕೆ ಆಗಿರಲಿಕ್ಕಿಲ್ಲ. ಹಾಗಾಗಿ ಮತ್ತೆ ಮತ್ತೆ ಹೋಗಬೇಕಾಗಿ ಬಂದಿರಬಹುದು. ಒಂದೇ ಮಗುವನ್ನು ಹಲವು ಬಾರಿ ವಿಚಾರಣೆ ನಡೆಸಿದ್ದು ಬಳಹ ಕಡಿಮೆ ಪ್ರತೀ ದಿನ ಬೇರೆ ಬೇರೆ ಮಕ್ಕಳನ್ನು ವಿಚಾರಣೆ ಮಾಡಲಾಗಿದೆ,” ಎಂದರು.
ಆಯೇಶಾಳನ್ನು ಭೇಟಿಯಾಗುವುದಕ್ಕೆ ಅವಕಾಶ ಇರಲಿಲ್ಲ. ಮಾಧ್ಯಮದವರು, ಇನ್ನಿತರ ಸಂಘಸಂಸ್ಥೆಗಳು ಮತ್ತು ಹೊರಗಿನವರು ಯಾರೂ ಆಕೆಯನ್ನು ಭೇಟಿಯಾಗುವುದಕ್ಕೆ ಅವಕಾಶ ಕೊಡಬಾರಂದೆಂದು ಮಕ್ಕಳ ಹಿತರಕ್ಷಣಾ ಸಮಿತಿ ಶಾಲೆಗೆ ತಿಳಿಸಿದೆ. ಹಾಗಾಗಿ, ಆಯೇಶಾ ಭೇಟಿ ಸಾಧ್ಯವಾಗಲಿಲ್ಲ.
ಆದರೆ, ಫೋನಿನಲ್ಲಿ ಸಿಕ್ಕಳು. ಅವಳ ತಾಯಿಯನ್ನು ನ್ಯಾಯಾಲಯದಲ್ಲಿ ಭೇಟಿಯಾಗಿದ್ದನ್ನು ಮತ್ತೆ ಜೈಲಿಗೆ ಹೋಗಿ ಭೇಟಿಯಾಗಲಿರುವುದನ್ನು ಹೇಳಿದೆ. ನಾನೂ ಭೇಟಿಯಾಗಬೇಕು ಎಂದಳು. ಅಮ್ಮನನ್ನು ನೋಡಬೇಕು ಎಂದಳು. ಏನು ಹೇಳಬೇಕು ಎಂಬುದು ತಿಳಿದಯದೇ ನನಗೆ ತೋಚಿದ ರೀತಿಯಲ್ಲಿ ಒಂದಿಷ್ಟು ಸಮಾಧಾನ ಮಾಡಿ ಫೋನ್ ಕಟ್ ಮಾಡಿದೆ.
ಅಂದಹಾಗೆ, ಬಂಧಿತರಾಗಿರುವ ನಜ್ಬುನ್ನಿಸಾ ಮತ್ತು ಫರೀದಾ ಬೇಗಂ ಅವರಿಗೆ ಮಧ್ಯಂತರ ಜಾಮೀನು ಕೊಡಬೇಕೆಂದು ಸಲ್ಲಿಸಿರುವ ಅರ್ಜಿ ಹಾಗೂ ಶಾಹೀನ್ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖದೀರ್ ಮತ್ತು ಇತರ ಐವರು ಮ್ಯಾನೇಜ್ಮೆಂಟ್ ಸದಸ್ಯರನ್ನು ಬಂಧಿಸಬಾರದು ಎಂದು ಸಲ್ಲಿಸಿರುವ ನಿರೀಕ್ಷಣಾ ಜಾಮೀನಿನ ಅರ್ಜಿ ನ್ಯಾಯಾಲಯದ ಮುಂದೆ ಇಂದು ವಿಚಾರಣೆಗೆ ಬರುತ್ತಿವೆ. ಬೀದರ್ ರಾಜದ್ರೋಹ ಪ್ರಕರಣದ ಬಲಿಪಶುಗಳಿಗೆ ಒಳ್ಳೆಯದಾಗಲಿ ಎಂದು ನೀವೂ ಹಾರೈಸಿ.
(ಈ ಕುರಿತು ದಿ ಹಿಂದೂ ಪತ್ರಿಯಲ್ಲಿ ನನ್ನದೊಂದು ವರದಿ ಇದೆ. ಆಸಕ್ತರು ಓದಿಕೊಳ್ಳಬಹುದು – ಕುಮಾರ ಬುರಡಿಕಟ್ಟಿ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತದ ಜನಸಂಖ್ಯೆ ವರವೋ..? ಶಾಪವೋ..?

- ಅಂಬಿಕಾ. ಕೆ
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಬೆಂಗಳೂರು ವಿಶ್ವವಿದ್ಯಾಲಯ
ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.
ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.
ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.
ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.
ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.
ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

- ವೆನ್ನೆಲಾ ಕೆ.
ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು
ಇತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.
ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.
ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.
ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.
ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.
ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.
ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಬಹಿರಂಗ
ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

- ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ ಚಿಂತಕರು, ಬೆಂಗಳೂರು
ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.
ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.
ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.
ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.
ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.
ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.
ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ4 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ7 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು