ಸಿನಿ ಸುದ್ದಿ
EXCLUSIVE INTERVIEW | ‘ಶಬ್ಧ ಗಾರುಡಿಗ ಟಗರು ಮಾಸ್ತಿ’ ಮನದಾಳ
” ಚಿಟ್ಟೆ…ಅಂಕಲ್ ನಾ ಹೊಡಿತೀನಿ…ಹೇ ಬಿಡು ಸುಬ್ಬಿ…ಬೆಳಗ್ಗೆ ಹಾಲು ತುಪ್ಪ ಬಿಡೋದ್ರೊಳಗೆ ಅಂಕಲ್ ನಾ ಹೊಡಿತೀನಿ; ಅಂಕಲ್ ನಾ ಹೊಡಿತೀನಿ”. ” ನಿಂದು ಒಂದ್ ಜನ್ಮ, ನಿಮ್ಗೂ ಒಂದ್ ಜನ್ಮದಿನ ಬೇರೆ ಕೇಡು”. ” ಮೀಸೆ, ಗಡ್ಡ, ಬಿಟ್ಟೋರ್ನೆಲ್ಲ ಗಂಡ್ಸು ಅನ್ನೋದಾದ್ರೆ ಕರಡಿ ಎಲ್ಲಕ್ಕಿಂತ ದೊಡ್ ಗಂಡ್ಸು”. ” ನಾವು ಮ್ಯಾಚ್ನಲ್ಲಿ ಸೋಲಲ್ಲ, ಅಕಸ್ಮಾತ್ ಸೋತ್ರೂ..ಮ್ಯಾನ್ ಆಫ್ ದಿ ಮ್ಯಾಚ್ ನಮ್ದೆ”. ಸುಕ್ಕಾ ಸೂರಿಯವರ ‘ಟಗರು’ ಸಿನೆಮಾದ ಇಂಥ ಸಂಭಾಷಣೆಯ ಜಂಗಮ ಭಾವ, ನೋಡುಗನ ಎದೆಯಲ್ಲಿ ಸ್ಥಾವರಗೊಳ್ಳುವಂತೆ ಮಾಡಿ, ತಮ್ಮ ರೋಚಕ, ರಂಜನೀಯ, ಕಿಲಾಡಿತನದ ಮಾತುಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದಾರೆ ಸಂಭಾಷಣಾಕಾರ ಮಂಜು ಮಾಸ್ತಿ. ಇವರು ಮಾಸ್ತಿ ಎಂತಲೇ ಚಂದನವನದಲ್ಲಿ ಚಿರಪರಿಚಿತ.
‘ಶಬ್ದದೊಳಗೆ ನಿಶ್ಯಬ್ದ ; ನಿಶ್ಯಬ್ದದೊಳಗೆ ಶಬ್ದ’ ಹುಡುಕುತ್ತಾ..ಕತೆಗಾರನಾಗಿ, ಸಂಭಾಷಣಾಕಾರನಾಗಿ, ನಟನಾಗಿ, ಒಬ್ಬ ಒಳ್ಳೆಯ ಓದುಗನಾಗಿ ಎಲ್ಲರ ಚಿತ್ತ ತನ್ನತ್ತ ಹೇಗೆ ಸೆಳೆಯ ಬೇಕು ಎಂಬ ಚಾಲಾಕಿತನದ ಶಬ್ದಮಾಂತ್ರಿಕ ಮಾಸ್ತಿ ಅವರು, ನಿಜಕ್ಕೂ ಒಬ್ಬ ಬರಹಗಾರ ತಮ್ಮ ಬರವಣಿಗೆಯನ್ನ ಪಾಲಿಶ್ ಮಾಡಿಕೊಳ್ಳ ಬೇಕಾದಾಗ, ತಾನು ಬದುಕುತ್ತಿರುವ ಸಮಾಜದೊಟ್ಟಿಗೆ ಹೇಗೆಲ್ಲಾ ಸಂಪರ್ಕವಿಟ್ಟುಕೊಳ್ಳಬೇಕು, ದೈನಂದಿನ ಜೀವನದ ಸಂಗತಿಗಳನ್ನು ತನ್ನ ಕುತೂಹಲದ ಕಣ್ಣಿನ್ನಿಂದ ಹೇಗೆಲ್ಲಾ ನೋಡ ಬಹುದು ಎಂಬುದಕ್ಕೆ ಟಗರು ಸಿನೆಮಾದ ಸಂಭಾಷಣೆಯೇ ಸಾಕ್ಷಿ. ಶಬ್ದಗಾರುಡಿಗ ನಂತೆ ಕಾಣುವ ಈ ಮಾಸ್ತಿ ನಿಜಕ್ಕೂ ಕನ್ನಡದ ಆಸ್ತಿಯೇ. ಏಕೆಂದರೆ ಇವರೊಳಗಿರುವ ಒಬ್ಬ ಸಹೃದಯನೇ ಇವರನ್ನ ಬೆಳೆಸಿದೆ, ಮುಂದೆಯೂ ಬೆಳೆಸುತ್ತದೆ ಎಂಬುದು ನಮ್ಮ ಮನದ ಸೂಕ್ಷ ಗ್ರಹಿಸಿದ್ದು. ಇಂತಹ ಒಬ್ಬ ‘ಸೂಕ್ಷ್ಮಜ್ಞ’ನೊಂದಿಗೆ ಸುದ್ದಿದಿನ ತನ್ನ ಮಾತು-ಕತೆಯಲ್ಲಿ ಮಾತನಾಡಿಸಿದಾಗ ಅವರು ಎದೆ ತುಂಬಿ ಮಾತನಾಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.
ಟಗರು ಮಾಸ್ತಿ ಮನದಾಳ
ಬಾಲ್ಯದಿಂದಲೂ ಸಾಹಿತ್ಯದ ಓದು, ಬರವಣಿಗೆಯಲ್ಲಿ ತೊಡಗಿಸಿಕೊಂಡು,ಬರವಣಿಗೆಯಲ್ಲಿಯೇ ಬದುಕು ಕಾಣಬೇಕು ಎಂಬ ಕನಸಿದ್ದರೂ ಅದು ಅಸಾಧ್ಯವೇನೋ ಎಂಬ ಅಪನಂಬಿಕೆ ನನ್ನನ್ನು ಕಾಡಿದ್ದು ಸತ್ಯ. ಆದರೆ ಸಿನೆಮಾರಂಗಕ್ಕೆ ಬಂದಮೇಲೆ ಬರಹಗಾರನಿಗಿರುವ ಶಕ್ತಿ ಎಂಥದ್ದು ಅನ್ನೋದು ನನಗೆ ಮನವರಿಕೆಯಾಗಿದೆ. ಅದರಲ್ಲೂ ಸೂರಿ ಸರ್ ‘ಟಗರು’ ಸಿನೆಮಾ ನನ್ನನ್ನು ಈ ಮಟ್ಟಿಗೆ ಗುರುತಿಸುವಂತೆ ಮಾಡಿದ ಮೇಲಂತೂ ಬರವಣಿಗೆಯೇ ನನ್ನ ಜೀವಾಳ,ಜೀವನ ಆಗಿಬಿಟ್ಟಿದೆ.
ಅಂದಹಾಗೆ ನಾನು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕೆ.ಉಪ್ಪಾರಹಳ್ಳಿ ಎಂಬ ಗ್ರಾಮದವನು. ನಮ್ಮದು ಮಿಡಲ್ ಕ್ಲಾಸ್ ಫ್ಯಾಮಿಲಿ. ತುಂಬಾ ಕಷ್ಟಗಳ ಜೊತೆಗೆ ಬೆಳೆದವನು. ಆ ಕಷ್ಟಗಳನ್ನೇ ನನ್ನ ಜೀವನೋತ್ಸಾಹವಾಗಿ ಪ್ರೀತಿಯಿಂದ ಬದುಕುತ್ತಾ ಬಂದೆ. ನನ್ನ ಕಡು ಕಷ್ಟಗಳೇ ನನ್ನ ಒಬ್ಬ ಬರಹಗಾರನಾಗಿ ಮಾಡಿದವು ಅಂದ್ರೆ ತಪ್ಪಾಗಲಾರದು. ನನ್ನ ಆ ದಿನಗಳ ‘ನೆನಪಿನ ಬುತ್ತಿ’ ಯನ್ನೇ ಬರವಣಿಯ ಮೂಲವಾಗಿಸಿಕೊಂಡು ಬರೆಯಲು ಹೊರಟೆ. ಪ್ರೈಮರಿ ಶಾಲೆಯಿಂದಲೂ ನಾನು ಬಾಲಮಿತ್ರ, ಚಂದಮಾಮ, ಕಾಮಿಕ್ಸ್ ಬುಕ್, ಜನಪದ ಕತೆಗಳು, ಪಂಚತಂತ್ರ ಕತೆಗಳನ್ನು ನಾನು ಅಚ್ಚುಕಟ್ಟಾಗಿ ಓದಿಕೊಂಡು ಬಂದೆ. ಆ ಕತೆಗಳ ಮೂಲ ಆಶಯ ‘ನೀತಿ’ ಹೇಳುವುದೇ ಆಗಿದ್ದರಿಂದ ಅವು ನನ್ನನ್ನು ಆವಾಹಿಸಿಕೊಂಡು ಬಿಟ್ಟವು. ಹಾಗೇ ಶಾಲೆಯಲ್ಲಿ ಮೇಷ್ಟ್ರುಗಳು ಹೇಳುತ್ತಿದ್ದ ಕತೆಗಳು ನನ್ನನ್ನ ತುಂಬಾ ಕಾಡಿದವು. ನಮ್ಮ ಮೇಷ್ಟುಗಳು ತುಂಬಾ ವಿಶಿಷ್ಟವಾಗಿ ಕತೆಹೇಳುವ ಪರಿಯೇ ನನ್ನ ಕುತೂಹಲವನ್ನು ಕೆರಳಿಸುತ್ತಿದ್ದವು.ನಾನು ಕತೆಗಳನ್ನು ಮಂತ್ರ ಮುಗ್ಧನಾಗಿ ಕೇಳುತ್ತಿದ್ದೆ.
ನಮ್ಮ ಮನೆಯಲ್ಲಿ ಆಗಾಗ ನಮಗೆ ಕಾಸುಕೊಟ್ಟು ಟೆಂಟ್ ಗಳಲ್ಲಿ ಸಿನೆಮಾ ನೋಡಲು ಕಳುಹಿಸುತ್ತಿದ್ದರು. ಟೆಂಟ್ ಒಳಗೆ ಕೂತು ನೋಡುವ ಸಿನೆಮಾಗಳು ನನಗೆ ಮಾಯಾಲೋಕದಂತೆ ಭಾಸವಾಗುತ್ತಿತ್ತು. ಸಿನೆಮಾ ನೋಡಿ ಬಂದಾಗಿನ ಖುಷಿ ಹೇಳಲು ನನಗೆ ಪದಗಳೇ ಸಾಲುತ್ತಿರಲಿಲ್ಲ. ಅಷ್ಟೊಂದು ಆಳವಾಗಿ ಇಳಿದು ಹೋಗಿಬಿಡ್ತಾಇದ್ದೆ ಸಿನೆಮಾಗಳನ್ನ ನೋಡಿ. ಈಗ ವಿದೇಶಕ್ಕೆ ಹೋಗಿಬಂದಾಗ ಆಗುವಂತಹ ಖುಷಿ , ಆಗ ಸಿನೆಮಾ ನೋಡಿದಾಗ ಆಗ್ತಾ ಇತ್ತು. ಸಿನೆಮಾ ಪರದೆಯೊಳಗೆ ಕಾಣುವ ದೃಶ್ಯಗಳು ನನ್ನನ್ನ ಮೈಮರೆಸುತ್ತಿದ್ದವು. ಆಗ ಅಂಥಹ ಸಿನೆಮಾಗಳು ಬರ್ತಾ ಇದ್ವು ಬಿಡಿ (ಈಗಲೂ ಬರ್ತಾ ಇದಾವೆ) . ಹೀಗೆ ಸಿನೆಮಾಗಳು ನನ್ನ ಕಾಡಿದ್ದರಿಂದ ಸಿನೆಮಾವನ್ನ ಆರಾಧಿಸುತ್ತಾ ಬಂದೆ. ಕೆಲವು ನನ್ನ ಸ್ನೇಹಿತರು ಸಿನೆಮಾ ನೋಡಿ ಬಂದು ಅಭಿನಯದ ಮೂಲಕ ರೋಚಕವಾಗಿ ಸಿನೆಮಾ ಕತೆ ಹೇಳ್ತಾ ಇದ್ರು, ಅವರು ಹೇಳೋ ಕತೆಗಳನ್ನ ತದೇಕ ಚಿತ್ತದಿಂದ ಕೇಳ್ತಾ, ನೋಡ್ತಾ ಇದ್ದೆ. ಈ ಸಂಗತಿಗಳೂ ಕೂಡಾ ನನ್ನ ಸಿನೆಮಾ ಮೇಲಿನ ಪ್ರೀತಿಯನ್ನ ಹೆಚ್ಚಿಸ್ತಾ ಬಂದ್ವು. ಜೊತೆಗೆ ಅಪರೂಪಕ್ಕೊಮ್ಮೆ ನನಗೆ ಮನೇಲಿ ಹೊಸ ಪುಸ್ತಕ ಕೊಡಿಸ್ತಾ ಇದ್ರು, ನಾನು ಆ ಪುಸ್ತಕದ ಪುಟಗಳನ್ನ ತಿರುವಿಹಾಕಿ ಹಾಳೆಗಳ ವಾಸನೆಯನ್ನ ಗ್ರಹಿಸ್ತಾ ಇದ್ದೆ. ಬಹುಶಃ ಹಾಳೆಗಳ ಅಕ್ಷರದ ಇಂಕು ಹಾಗೂ ಹಾಳೆಗಳ ಪರಿಮಳವೇ ಕತೆಗಳನ್ನ ಓದಿ ಆಸ್ವಾದಿಸುವ ಹುಚ್ಚು ಬಿಡಿಸಿ ಬಿಟ್ಟವು. ಒಟ್ಟಾರೆ ಕನ್ನಡ ಮೀಡಿಯಂ, ಸರ್ಕಾರಿ ಶಾಲೆಗಳೇ ನನ್ನ ಬರವಣಿಗೆಯ ಶಕ್ತಿ ಎಂದರೆ ಅತಿಶಯೋಕ್ತಿಯಾಗಲಾರದು.
ನಮ್ಮ ಊರಿಗೆ ತೆಲುಗು ಭಾಷೆಯ ಪ್ರಭಾವ ಹೆಚ್ಚು, ನಾನು ಅದರ ಪ್ರಭಾವಕ್ಕೆ ಬಲಿಯಾಗಲಿಲ್ಲ. ತೆಲುಗು ಸಿನೆಮಾಗಳು ತುಂಬಾ ಪ್ರದರ್ಶನ ಕಾಣ್ತಾಇದ್ವು ಆಗ. ತೆಲುಗಿನ ಹಲವು ಸಿನೆಮಾಗಳು ಕ್ರೈಂ ಮತ್ತು ಸೆಕ್ಸ್ ಅನ್ನ ವೈಭವೀಕರಿಸಿ ಸಹಜತೆಯೇ ಕಾಣೆಯಾಗಿದ್ದುದರಿಂದ ನಾನು ಅಂಥಹ ಸಿನೆಮಾಗಳನ್ನು ವಿರೋಧಿಸುತ್ತಾ ಬಂದೆ. ತೆಲುಗಿನ ಅಂತಹ ಸಿನೆಮಾಗಳು ಕನ್ನಡ ಸಿನೆಮಾಗಳ ಮೇಲೂ ಪ್ರಭಾವ ಬೀರಿದವು. ಆದರೆ ಅವ್ಯಾವೂ ಅಷ್ಟು ಹಿಟ್ ಆಗಲಿಲ್ಲ, ಜನರು ಅಂಥಹ ಸಿನೆಮಾಗಳನ್ನ ತಿರಸ್ಕರಿಸಿದ್ರೂ ಕೂಡಾ. ಏಕಂದ್ರೆ ಅವು ನಮ್ಮ ಕನ್ನಡದ ನೆಲಕ್ಕೆ ಒಗ್ಗುವಂತವಲ್ಲ. ನಮ್ಮ ನೆಲದಗುಣವಿರುವ ಕನ್ನಡ ಸಿನೆಮಾಗಳು ಅಮ್ಮ ಮಾಡಿದ ಅಡುಗೆ ತರ, ತುಂಬಾ ರುಚಿ ಹಾಗೂ ದೇಹಕ್ಕೆ ಒಳ್ಳೆಯದು.ಹಾಗಾಗಿ ಕನ್ನಡ ಸಿನೆಮಾರಂಗಕ್ಕೆ ಹೇಗಾದ್ರೂ ಬರಬೇಕು ಅನ್ನೋತುಡಿತ ನನ್ನಲ್ಲಿ ಹೆಚ್ಚಾಗ್ತಾ ಬಂತು. ನನಗೆ ಸಿನೆಮಾದ ಹಿನ್ನೆಲೆಯಿಲ್ಲದಿದ್ದರೂ ನನಗೆ ಸಿನೆಮಾ ಮೇಲಿರುವ ಪ್ರೀತಿಯೇ ನನ್ನ ಸಿನೆಮಾ ಹಿನ್ನೆಲೆ.
ನನ್ನ ಸಿನೆಮಾ ಎಂಟ್ರಿ
ಸಿನೆಮಾದಲ್ಲಿ ಹೇಗಾದರೂ ಕೆಲಸ ಮಾಡ್ಬೇಕು ಅನ್ನೋ ಹಂಬಲದಿಂದ ತುಂಬಾ ಸೈಕಲ್ ಹೊಡೆದೆ. ಆದ್ರೆ ಯಾವ ಅವಕಾಶಗಳೂ ನನಗೆ ದಕ್ಕಲಿಲ್ಲ. ಆದ್ರೆ ಒಮ್ಮೆ ನಮ್ಮ ಮನೆಯ ಹತ್ತಿರದಲ್ಲಿ ತುಷಾರ್ ರಂಗನಾಥ್ (ಗುಲಾಮ, ಕಂಠೀರವ ಸಿನೆಮಾ ನಿರ್ದೇಶಕ) ಸಿನೆಮಾದಲ್ಲಿ ಕೆಲಸ ಮಾಡ್ತಾರೆ ಅಂತ ಗೊತ್ತಿತ್ತು. ಅವರನ್ನ ಹೇಗೋ ಕಷ್ಟಪಟ್ಟು ಪರಿಚಯ ಮಾಡ್ಕೊಂಡೆ. ಈ ಸಮಯದಲ್ಲಿ ಅವರು ಸಾಧುಕೂಕಿಲಾ ನಿರ್ದೇಶನದ, ದರ್ಶನ್ ಅಭಿನಯದ ‘ಸುಂಟರಗಾಳಿ’ ಸಿನೆಮಾಗೆ ಸಹ ನಿರ್ದೇಶಕ ನಾಗಿ ಕೆಲಸ ಮಾಡ್ತಿದ್ರು. ಈ ಸಿನೆಮಾ ‘ಚಿತ್ರಕತೆ’ ಯ ಬಗ್ಗೆ ಚರ್ಚೆ ಮಾಡೋದಿಕ್ಕಾಗಿ ನನ್ನ ಕರ್ಕೊಂಡ್ ಹೋದ್ರು. ಸುಂಟರಗಾಳಿ ಸಿನೆಮಾದಲ್ಲಿ ದರ್ಶನ್ ಅವರು ಹೇಗೆ ಎಂಟ್ರಿ ಆಗ್ಬೇಕು ಅನ್ನೋ ದೃಶ್ಯದ ಬಗ್ಗೆ ಚರ್ಚೆ ನಡೀತಾ ಇತ್ತು, ಆಗ ನನಗೆ ತೋಚಿದ, ಪಕ್ಕಾ ಮಾಸ್ ಆಗಿ ಇರೋ ಒಂದ್ ದೃಶ್ಯಾನ ವಿವರಿಸ್ತಾ ಹೋದೇ, ಆಗ ಎಲ್ರೂ ಖುಷಿಯಿಂದ ಒಪ್ಪೊಂಡ್ರು. ಅವತ್ತೇ ನನ್ನ ಸಿನೆಮಾದ ಎಂಟ್ರಿಯೂ ಆಗೋಯ್ತು. ತುಂಬಾನೆ ಖುಷಿಕೊಡೋ ಸಂಗತಿ ನನಗದು.
ಸೂರಿ – ಭಟ್ಟರ ಸಹವಾಸ
ಸುಂಟರಗಾಳಿ ಸಿನೆಮಾಗೆ ಸೂರಿ ಸರ್ ಕೂಡ ಸಹ ನಿರ್ದೇಶಕರಾಗಿ ಕೆಲಸ ಮಾಡ್ತಿದ್ರು. ತುಷಾರ್ ರಂಗನಾಥ್ ಕಡೆಯಿಂದ ಅವರ ಪರಿಚಯವಾಯ್ತು. ನಂತರ ಅದೇ ಸಮಯದಲ್ಲಿ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್ ಬಿ.ಸುರೇಶ್ ಅವರ ನಿರ್ದೇಶನದ ‘ಸಾಧನೆ’ ಎಂಬ ಧಾರಾವಾಹಿಯಲ್ಲಿ ಕೆಲಸ ಮಾಡ್ತಿದ್ರು. ಸಾಧನೆ ಧಾರಾವಾಹಿಯ ಸೆಟ್ ಗೆ ನನ್ನನ್ನೂ ಕೂಡ ಕರೆದುಕೊಂಡು ಹೋಗ್ತಾದ್ರು ತುಷಾರ್ ರಂಗನಾಥ್. ಆಗ ಅವರ ಜೊತೆ ಸಿನೆಮಾಗೆ ಸಂಭಂದಿಸಿದ ವಿಷಯಗಳನ್ನ ಚರ್ಚೆ ಮಾಡ್ತಾ ಅವರೊಳಗೆ ನನ್ನೊಬ್ಬನನ್ನಾಗಿ ಮಾಡ್ಕೊಂಡ್ರು ಸೂರಿ ಸರ್ ಹಾಗೂ ಭಟ್ ಸರ್. ಹಾಗೇ ಇನ್ನೊಂದ್ ವಿಷಯ ಹೇಳಲೇ ಬೇಕು ನಾನು. ಮುಂಗಾರು ಮಳೆ ಸಿನೆಮಾ ಮಾಡಿ ಭಟ್ ಸರ್ ಒಂದ್ ಟ್ರೆಂಡ್ ಸೆಟ್ ಮಾಡಿದ್ರು,ಹಾಗೆ ಸಿನೆಮಾ ಒಳ್ಳೆಯ ಲಾಭವನ್ನ ನಿರ್ಮಾಪಕರಿಗೆ ತಂದು ಕೊಡ್ತು. ಆಗ ಇನ್ಫೋಸಿಸ್ ನ ನಾರಾಯಾಣ ಮೂರ್ತಿಯವರು ಭಟ್ ಸರ್ ಅವರನ್ನ ಕರೆಸಿ ಹೇಳಿದ್ರಂತೆ, ” ಕನ್ನಡದಲ್ಲಿ ಇಂತಹ ಒಂದು ಒಳ್ಳೆಯ ಸಿನೆಮಾ ಕೋಟಿಗಟ್ಟಲೆ ಹಣ ಮಾಡೋದು ಅಂದ್ರೆ ಸುಮ್ನೆ ಮಾತಲ್ಲ, ನಾವು ಏನೆಲ್ಲಾ ಮಾಡ್ತೀವಿ, ಅದ್ರೆ ಒಂದ್ ಸಿನೆಮಾ ಮಾಡಿ ನೀವು ಎಲ್ಲರೀತಿಯಿಂದಲೂ ಯಶಸ್ಸುಗಳಿಸಿದರ ಬಗ್ಗೆ ತುಂಬಾ ಹೆಮ್ಮೆಯಿಂದ ಹೇಳಿದ್ರಂತೆ, ಅಂತಹ ಭಟ್ ಸರ್ ಗೆ ನಾನು ಕತೆ ಹೇಳಿದ್ದು ತುಂಬಾ ಖುಷಿಕೊಡ್ತು. ಅದೇ ಕನ್ನಡಕ್ಕಿರುವ ತಾಕತ್ತು ಅಂತಾನೂ ನಂಗೆ ಅರಿವಾಯ್ತು.
ಕತೆಗಾರನಾಗಿ
ನಾನು ಒಂದಷ್ಟು ಕತೆಗಳನ್ನ ಬರೆದೆ. ಅದರಲ್ಲಿ ಬಾಲ್ ಪೆನ್ ಅನ್ನೋ ಕತೆಯನ್ನ ಪತ್ರಕರ್ತ ರವಿಬೆಳೆಗೆರೆಯವರು ಕೇಳಿ ತುಂಬಾ ಇಷ್ಟ ಪಟ್ರು. ನಂತರ ಅವರ ಮಗಳು, ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆಯವರು ನಿರ್ಮಾಣ ಮಾಡಿದ್ರು. ಸಿನೆಮಾಗೆ ಒಳ್ಳೆಯ ಹೆಸರೂ ಬಂತು. ಹಾಗೆ ತುಂಬಾ ಕತೆಗಳನ್ನ ಬರೆದೆ. ಸಿನೆಮಾಗೆ ಆಗದೇ ಇರೋ ಕತೆಗಳು ಇವೆ. ಅವನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡುವ ಯೋಚನೆಯೂ ಇದೆ. ಸಿನೆಮಾ ಬರವಣಿಗೆಯಲ್ಲಿ ಸಧ್ಯಕ್ಕೆ ಹೆಚ್ಚು ತೊಡಗಿಸಿಕೊಂಡಿರೋದ್ರಿಂದ ಪುಸ್ತಕ ಬರೋದು ಸ್ವಲ್ಪ ತಡವಾಗಬಹುದು.
ಸಂಭಾಷಣಾಕಾರನಾಗಿ
ಸೂರಿ ಸರ್ ನಿರ್ದೇಶನದ ಜಂಗ್ಲಿ, ಜಾಕಿ, ಕೆಂಡಸಂಪಿಗೆ ಸಿನೆಮಾಗಳ ಕತೆ, ಚಿತ್ರಕತೆ ಸಂಭಾಷಣೆಯ ಚರ್ಚೆಗಳಲ್ಲಿ ನನ್ನನ್ನೂ ತೊಡಗಿಸಿಕೊಂಡರು. ನಂತರ ಕಡ್ಡಿ ಪುಡಿ ಸಿನೆಮಾಗೆ ನಾನು ಮತ್ತು ಸೂರಿ ಸರ್ ಸಂಭಾಷಣೆ ಬರೆದ್ವಿ. ಕಡ್ಡಿಪುಡಿ ಸಿನೆಮಾದಲ್ಲಿನ ಸಂಭಾಷಣೆ ಸೂರಿ ಸರ್ ಕೈಚಳಕವೇ ಹೆಚ್ಚು, ಆದ್ರೂ ನನಗೂ ಕ್ರೆಡಿಟ್ ಕೊಟ್ರು ಸೂರಿ ಸರ್. ನಂತರ, ಕಾಲೇಜ್ ಕುಮಾರ್ ಎಂಬ ಸಿನೆಮಾಗೆ ಸಂಭಾಷಣೆ ಬರೆದೆ. ನಂತರ ‘ಟಗರು’ ಸಿನೆಮಾಗೆ ಸಂಭಾಷಣೆ ಬರೆಯುವ ಜವಾಬ್ದಾರಿಯನ್ನ ಕೊಟ್ರು ಸೂರಿ ಸರ್. ಅವರು ನನ್ನ ಮೇಲಿಟ್ಟು ಹೊರಿಸಿದ ಜವಾಬ್ದಾರಿಯನ್ನ ಸ್ಬಲ್ಪ ಮಟ್ಟಿಗೆ ನಿಭಾಯಿಸಿದ್ದೇನೆ ಅನ್ಸುತ್ತೆ. ಯಾಕಂದ್ರೆ ಸೂರಿ ಸರ್ ನನ್ನಿಂದ ಅಷ್ಟು ಕೆಲಸ ತೆಗೆಸಿದ್ರು ಅಂತ ಹೇಳೋಕೆ ನಂಗೆ ಹೆಮ್ಮೆ ಆಗುತ್ತೆ. ಹಾಗೇ ಸೂರಿ ಸರ್ ಮುಂದಿನ ಸಿನೆಮಾ ,’ಪಾಪ್ ಕಾರ್ನ್ ಮಂಕಿ ಟೈಗರ್’ ಸಿನೆಮಾಗೆ ಸಂಭಾಷಣೆ ಬರೆಯೋಕೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ. ಟಗರು ಸಿನೆಮಾ ನೋಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ತೆಲುಗು ಹಾಗೂ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ‘ಭೈರವ ಗೀತಾ’ ಸಿನೆಮಾಗೆ ಸಂಭಾಷಣೆ (ಕನ್ನಡ ಅವತರಿಣಿಕೆಗೆ) ಬರಯೋದಿಕ್ಕೆ ಅವಕಾಶ ಸಿಕ್ಕಿದೆ. ಅವಕಾಶ ಸಿಕ್ಕಿದ್ದರಲ್ಲಿ ನಟ ಧನಂಜಯ್ ಪಾತ್ರವೂ ದೊಡ್ಡದಿದೆ. ಧನಂಜಯ್ ಗೆ ಒಂದು ಸಲಾಮ್ ಹೇಳಲು ಈ ಸಮಯದಲ್ಲಿ ಇಷ್ಟ ಪಡ್ತೇನೆ. ಇತ್ತೀಚಿಗೆ ಬಿಡುಗಡೆಯಾದ ‘ ಕಟ್ಟುಕತೆ’ ಸಿನೆಮಾಗೂ ಸಂಭಾಷಣೆ ಬರೆದಿದ್ದೇನೆ. ಹಾಗೆ ನೀನಾಸಂ ಸತೀಶ್ ಅಭಿನಯದ ಅಯ್ಯೋಗ್ಯ ಸಿನೆಮಾ, ದುನಿಯಾ ವಿಜಯ್ ಅವರ ಕುಸ್ತಿ, ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ತಂಗಿ ಮಗನ ‘ಅಖಿಲ್’ ಎಂಬ ಸಿನೆಮಾಕ್ಕೆ ಸಂಭಾಷಣೆ ಬರೆದಿದ್ದೇನೆ. ಸಿನೆಮಾ ನಿರ್ದೇಶನ ಮಾಡೋ ಆಸೆ ಇದೆ ಬರವಣಿಗೆಯ ಒತ್ತಡದಲ್ಲಿ ಅದು ಸಾಧ್ಯ ಆಗ್ತಾ ಇಲ್ಲ. ಮುಂದೊಂದು ದಿನ ನಿರ್ದೇಶಕನಾಗಿ ನಿಮ್ಮ ಮುಂದೆ ಬರ್ತೇನೆ.
ನಟನಾಗಿ
ನಾನು ಕೆಲಸ ಮಾಡಿರೋ ಸಿನೆಮಾಗಳಲ್ಲೇ ಚಿಕ್ಕ- ಪುಟ್ಟ ಪಾತ್ರಗಳನ್ನ ಮಾಡ್ತಾ ಬಂದಿದೀನಿ. ಕಡ್ಡಿಪುಡಿ, ಕೆಂಡಸಂಪಿಗೆ, ಹಾಗೇ ಯೋಗರಾಜ್ ಭಟ್ ನಿರ್ದೇಶನ ‘ಪಂಚತಂತ್ರ’ ಸಿನೆಮಾದಲ್ಲೂ ಅಭಿನಯಿಸಿದ್ದೇನೆ.
ನನ್ನಿಷ್ಟದ ಸಿನೆಮಾ-ನಿರ್ದೇಶಕ-ಸಂಭಾಷಣಾಕಾರ
ನನಗೆ ವೈಯಕ್ತಿಕವಾಗಿ ಇಷ್ಟವಾಗುವ ಸಿನೆಮಾಗಳು ತುಂಬಾ ಇದಾವೆ. ಅದ್ರಲ್ಲಿ ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ತೆರೆಕಂಡು ಜನಮಾನಸದಲ್ಲಿ ಉಳಿದ, ಎದ್ದೇಳು ಮಂಜುನಾಥ ಹಾಗೂ ತಿಥಿ ಸಿನೆಮಾ. ನನಗೆ ಕೆಲಸ ಕಲಿಸಿಕೊಟ್ಟ ಸೂರಿ ಸರ್ ಹಾಗೂ ಯೋಗರಾಜ್ ಭಟ್ ಸರ್, ಅವರಿಬ್ಬರೂ ನನ್ನ ಗುರು ಸಮಾನರು. ಸೂರಿ ಸರ್ ಇಂದ ಶಿಸ್ತು, ಭಟ್ ಸರ್ ಇಂದ ಶ್ರದ್ಧೆ ಕಲಿತೆ. ಹಾಗೇ ತೆಲುಗು ಸಿನೆಮಾ ಸಂಭಾಷಣಾಕಾರರಾದ ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಕನ್ನಡದಲ್ಲಿ ಪ್ರಶಾಂತ್ ರಾಜಪ್ಪ ನನಗೆ ತುಂಬಾ ಕಾಡಿರೋ ಸಂಭಾಷಣಾಕಾರರು.
ಕನ್ನಡದಲ್ಲಿ ತುಂಬಾ ಒಳ್ಳೆಯ ಕತೆಗಳು ಇದಾವೆ. ಕತೆಗಾರರೂ ಇದ್ದಾರೆ. ಅವರನ್ನ ಗುರುತಿಸಿ ಒಂದು ಅವಕಾಶಮಾಡಿಕೊಟ್ಟರೆ ನಮ್ಮ ಕನ್ನಡ ಸಿನೆಮಾರಂಗ ಇನ್ನೂ ಎತ್ತರಕ್ಕೆ ಬೆಳೆಯುವುದರಲ್ಲಿ ಸಂಶಯವೇ ಇಲ್ಲ.
ಕನ್ನಡವೇ ಸತ್ಯ ; ಕನ್ನಡವೇ ನಿತ್ಯ
ಇಂತಿ ನಿಮ್ಮ ಮಾಸ್ತಿ

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ5 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ4 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ






