ದಿನದ ಸುದ್ದಿ
ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು

- ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ, ಮತ್ತಷ್ಟು ಹದಗೆಡುತ್ತದೆ. ಇಂತಹ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆಗಾಗ ಅಥವಾ ಚಕ್ರೀಯವಾಗಿ ಬಿಕ್ಕಟ್ಟುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ, ವ್ಯವಸ್ಥೆಯ ಚೌಕಟ್ಟಿನೊಳಗೆ, ಅಂದರೆ ವ್ಯವಸ್ಥೆಯ ಪ್ರಚಲಿತ ವರ್ಗಗಳ ರೂಪ ರಚನೆ ಇವುಗಳಿಗೆ ಅನುಗುಣವಾಗಿ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗತ್ತದೆ. ಇದರಿಂದ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದಷ್ಟೇ. ಈ ಅರ್ಥದಲ್ಲಿ ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಈ ತೇಪೆದಾರಿಗಿಂತಲೂ ಹೆಚ್ಚು ಉಪಯುಕ್ತ ಎನ್ನುವ ಕ್ರಮ ಕೈಗೊಂಡರೂ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಹೋಗುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಅಮೇರಿಕಾದಲ್ಲಿ ಟ್ರಂಪ್, ಚೀನಾ, ಭಾರತ ಮತ್ತು ಇತರ ಕೆಲವು ದೇಶಗಳ ಆಮದುಗಳ ಮೇಲೆ ಅಧಿಕ ಸುಂಕ ಹೇರುವ ಮೂಲಕ ಕೈಗೊಂಡಿರುವ ರಕ್ಷಣಾತ್ಮಕ ಕ್ರಮಗಳನ್ನು ಗಮನಿಸಬಹುದು.
ಆದರೆ, ನವ ಉದಾರವಾದಿ ಜಾಗತೀಕರಣದ ವಿಶಾಲ ಚೌಕಟ್ಟನ್ನು ಮೀರದ ಹೊರತು, ಅಂದರೆ, ಈ ಜಾಗತೀಕರಣದ ಚಾಲಕ ಶಕ್ತಿಯೇ ಆಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರದ ಹೊರತು, ಟ್ರಂಪ್ ಎಷ್ಟೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡರೂ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ಅದು ಇನ್ನಷ್ಟು ಹದಗೆಡುತ್ತದೆ.
ಈ ಬಿಕ್ಕಟ್ಟಿನ ರೋಗ ಲಕ್ಷಣಗಳು ಸ್ಪಷ್ಟವಾಗಿಯೇ ಪ್ರಕಟಗೊಂಡಿವೆ. 2008ರ ಬಿಕ್ಕಟ್ಟಿನ ನಂತರ, ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸುವ ಅಗ್ಗದ ಬಡ್ಡಿ ನೀತಿಯನ್ನು ಅಮೇರಿಕಾ ಮತ್ತು ಹಲವು ದೇಶಗಳು ಅನುಸರಿಸಿದವು. ಈ ಕ್ರಮದಿಂದಾಗಿ ಜಾಗತಿಕ ಬಂಡವಾಳಶಾಹಿಗೆ ಉಸಿರಾಟ ಸರಾಗವಾಯಿತು. ಅಷ್ಟಾಗಿಯೂ, ವಿಶ್ವವು ಈಗ ಮತ್ತೊಮ್ಮೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಅಮೇರಿಕಾದಲ್ಲಿ ವ್ಯವಹಾರ ಮತ್ತು ಉದ್ದಿಮೆಗಳ ಮೇಲಿನ ಹೂಡಿಕೆ ಇಳಿಯುತ್ತಿದೆ. ಈ ವರ್ಷದ ಜುಲೈನಲ್ಲಿ ಅಮೇರಿಕಾದ ಕೈಗಾರಿಕಾ ಉತ್ಪಾದನೆ ಅದರ ಹಿಂದಿನ ತಿಂಗಳಿಗಿಂತ ಶೇ.0.2 ಕಡಿಮೆ ಇತ್ತು. ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಬ್ರಿಟನ್ನಿನ ಮತ್ತು ಜರ್ಮನಿಯ ಅರ್ಥವ್ಯವಸ್ಥೆಗಳೂ ಕುಗ್ಗಿದವು. ಇಟಲಿ, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೈನಾ ಮತ್ತು ಭಾರತದಂತಹ ದೇಶಗಳಲ್ಲೂ ಅದೇ ಪರಿಸ್ಥಿತಿ ಇದೆ. ಈ ಜಾಗತಿಕ ಹಿಂಜರಿತದ ಪರಿಣಾಮವಾಗಿ ಚೀನಾದಲ್ಲೂ ಬೆಳವಣಿಗೆಯ ದರ ಇಳಿಯುತ್ತಿದೆ.
ಈಗ ತಲೆದೋರುತ್ತಿರುವ ಆರ್ಥಿಕ ಹಿಂಜರಿತಕ್ಕೆ ಎಲ್ಲ ದೇಶಗಳ ನೀತಿ-ನಿರೂಪಕರು ಮತ್ತೊಮ್ಮೆ ಬಡ್ಡಿ ದರಗಳ ಮತ್ತಷ್ಟು ಇಳಿಕೆ ಮಾಡುವ ಮೂಲಕವೇ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಬಡ್ಡಿ ದರಗಳನ್ನು ಹತ್ತಿರ ಹತ್ತಿರ ಋಣಾತ್ಮಕ ಮಟ್ಟಕ್ಕೆ ಇಳಿಸಿರುವ ಯೂರೋಪಿಯನ್ ಕೇಂದ್ರೀಯ ಬ್ಯಾಂಕ್, ಬಡ್ಡಿ ದರಗಳನ್ನು ಇನ್ನೂ ಕೆಳಗಿಳಿಸುವ ಯೋಜನೆಯಲ್ಲಿದೆ. ಭಾರತದಲ್ಲೂ ಸಹ ಈಗಾಗಲೇ ಬಡ್ಡಿ ದರಗಳ ಇಳಿಕೆಯಾಗಿದೆ. ಈ ರೀತಿಯಲ್ಲಿ ಬಡ್ಡಿ ದರಗಳನ್ನು ಇಳಿಕೆ ಮಾಡುತ್ತಿರುವ ಉದ್ದೇಶ ಏನೆಂದರೆ, ಬಡ್ಡಿ ದರ ಕಡಿಮೆ ಇದ್ದರೆ ಬಂಡವಾಳ ಹೂಡಿಕೆ ವೃದ್ಧಿಸುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ; ಕಡಿಮೆಯ ಬಡ್ಡಿ ದರಗಳಿಂದಾಗಿ ಆಸ್ತಿಗಳ ಬೆಲೆ ಗುಳ್ಳೆಗಳು ಏಳುತ್ತವೆ ಎಂಬುದು. ಇವರ ಪ್ರಕಾರ, ಆಸ್ತಿಗಳ ಬೆಲೆ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ಹೇಗೆಂದರೆ, ಆಸ್ತಿಗಳ ಬೆಲೆ ಗುಳ್ಳೆಗಳು ತಮ್ಮ ಸಂಪತ್ತನ್ನು ಹೆಚ್ಚಿಸಿವೆ ಆಸ್ತಿಯ ಒಡೆಯರಿಗೆ ಅನಿಸುತ್ತದೆ. ಅನೇಕ ರೀತಿಯಲ್ಲಿ ಹೆಚ್ಚು ಖರ್ಚುಮಾಡುತ್ತಾರೆ, ಅದರಿಂದಾಗಿ ಬೇಡಿಕೆ ವೃದ್ದಿಸುತ್ತದೆ.
ಎಲ್ಲ ದೇಶಗಳ ನೀತಿ-ನಿರೂಪಕರೂ ಇದೇ ಮಾದರಿಯಲ್ಲೇ ಏಕೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಎರಡನೆಯ ಮಹಾ ಯುದ್ಧದ ನಂತರದ ಅವಧಿಯಲ್ಲಿ-ಅಂದರೆ, ನವ ಉದಾರವಾದಿ ಜಾಗತೀಕರಣವು ಹೆಜ್ಜೆ ಇಡುವ ಮುನ್ನ, ಆರ್ಥಿಕ ಹಿಂಜರಿತದ ಸೂಚನೆ ಇದ್ದಾಗ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಬಹುದಿತ್ತು. ಸರ್ಕಾರಗಳು, ಅಗತ್ಯವಿದ್ದರೆ, ತಮ್ಮ ವಿತ್ತೀಯ ಕೊರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಏಕೆಂದರೆ, ಆ ಸಮಯದಲ್ಲಿ ಬಂಡವಾಳದ ಹರಿದಾಡುವಿಕೆಯ ಮೇಲೆ ನಿಯಂತ್ರಣವಿತ್ತು. ಹಾಗಾಗಿ, ವಿತ್ತೀಯ ಕೊರತೆಯ ಮಟ್ಟ ಏರಿದ ಕಾರಣದಿಂದಲೇ ಬಂಡವಾಳವು ಪಲಾಯನ ಗೈಯ್ಯುವ ಅಪಾಯವಿರಲಿಲ್ಲ.
ಯುದ್ದಾನಂತರದಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಶಿಲ್ಪಿಗಳಲ್ಲಿ ಒಬ್ಬರಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ವಿಶ್ವ ಹೀಗಿರಬೇಕು ಎಂದು ಕಲ್ಪಿಸಿಕೊಂಡಿದ್ದ ದೃಶ್ಯ ಇದಾಗಿತ್ತು. ಹಣಕಾಸು ಬಂಡವಾಳದ ಅಂತಾರಾಷ್ಟ್ರೀಕರಣವನ್ನು ಕೀನ್ಸ್ ವಿರೋಧಿಸಿದ್ದರು. (ಹಣಕಾಸು ಬಂಡವಾಳವು ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಯೇ ಇರಬೇಕು ಎಂದು ಅವರು ಹೇಳಿದ್ದರು).
ಉದ್ಯೋಗ ಸೃಷ್ಟಿಯ ಉದ್ದೇಶಕ್ಕಾಗಿ ಸರ್ಕಾರವು ಕೈಗೊಳ್ಳುವ ಹೆಚ್ಚು ಹೆಚ್ಚು ಖರ್ಚಿನ ಕ್ರಮಗಳನ್ನು ಯಾವತ್ತೂ ವಿರೋಧಿಸುವ ಹಣಕಾಸು ಬಂಡವಾಳವು ಪ್ರಭುತ್ವವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವ ಮೂಲಕ, ರಾಷ್ಟ್ರ-ಪ್ರಭುತ್ವದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಒಳಗೊಳಗೇ ನಾಶಪಡಿಸುತ್ತದೆ ಎಂಬ ನೆಲೆಯಲ್ಲಿ ಅವರು ಹಣಕಾಸು ಬಂಡವಾಳವು ಅಂತಾರಾಷ್ಟ್ರೀಕರಣಗೊಳ್ಳುವುದನ್ನು ವಿರೋಧಿಸಿದ್ದರು. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂರಕ್ಷಕರಾಗಿದ್ದ ಕೀನ್ಸ್, ರಾಷ್ಟ್ರ-ಪ್ರಭುತ್ವವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ಹೊರತು, ಸಮಾಜವಾದವು ಒಡ್ಡಿದ ಬೆದರಿಕೆಯಿಂದ ಬಂಡವಾಳಶಾಹಿಗೆ ಉಳಿಗಾಲವಿಲ್ಲ ಎಂದು ಭಯಪಟ್ಟಿದ್ದರು.
ಆದರೆ, ಯುದ್ದಾನಂತರದ ಕೆಲವು ವರ್ಷಗಳ ಕಾಲಾವಧಿಯಲ್ಲಿ, ಅಮೇರಿಕಾದ ಪಾವತಿ ಶೇಷದ ಚಾಲ್ತಿ ಖಾತೆಯಲ್ಲಿ ಸತತವಾಗಿ ಬಹಳ ಕಾಲ ಭಾರಿ ಮೊತ್ತದ ಕೊರತೆಯ ಹಣ (ಇದು ಬೇರೆ ಬೇರೆ ದೇಶಗಳು ತಮ್ಮ ರಫ್ತುಗಳ ಮೂಲಕ ಗಳಿಸಿದ ಹಣ), ಮತ್ತು, ತದನಂತರದ ಅವಧಿಯಲ್ಲಿ, ಅಂದರೆ 197೦ರ ದಶಕದಲ್ಲಿ, ತೈಲ ಬೆಲೆಗಳ ವಿಪರೀತ ಹೆಚ್ಚಳದಿಂದಾಗಿ ತೈಲ ಉತ್ಪಾದಕ ದೇಶಗಳ ಅಪಾರ ಲಾಭದ ಆದಾಯವು ಅಭಿವೃದ್ಧಿ ಹೊಂದಿದ ದೇಶಗಳ ಮಹಾ ನಗರ ಕೇಂದ್ರಿತ ಬ್ಯಾಂಕ್ಗಳಲ್ಲಿ ಶೇಖರಣೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳದ ಹರಿದಾಡುವಿಕೆಯ ಮೇಲಿದ್ದ ನಿಯಂತ್ರಣವನ್ನು ಕಿತ್ತುಹಾಕುವಂತೆ ಹಣಕಾಸು ಬಂಡವಾಳವು ಒತ್ತಡ ಹೇರಿತು. ತನಗೆ ಎಲ್ಲಿಗೆ ಬೇಕೊ ಅಲ್ಲಿಗೆ ಮುಕ್ತವಾಗಿ ಚಲಿಸಲು ಅನುವಾಗುವಂತೆ ಇಡೀ ವಿಶ್ವವನ್ನೇ ತೆರೆದಿಡಬೇಕು ಎಂದು ಹಣಕಾಸು ಬಂಡವಾಳವು ಬಯಸಿತು ಮತ್ತು ಆ ಪ್ರಯತ್ನದಲ್ಲಿ ಕೊನೆಗೆ ಯಶಸ್ವಿಯೂ ಆಯಿತು. ಈ ರೀತಿಯಲ್ಲಿ ಹಣಕಾಸು ಬಂಡವಾಳವು ಜಾಗತಿಕವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿತು.
ಈ ವಿದ್ಯಮಾನವು, ಉದ್ಯೋಗ ಸೃಷ್ಟಿಯ ಮಟ್ಟ ಕಾಯ್ದುಕೊಳ್ಳುತ್ತಿದ್ದ ತನ್ನ ಜವಾಬ್ದಾರಿಕೆಯಿಂದ ರಾಷ್ಟ್ರ-ಪ್ರಭುತ್ವವು ಹಿಂದೆ ಸರಿಯಿತು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದ ನವ ಉದಾರ ಹಣಕಾಸು ಬಂಡವಾಳವು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಲು ಉಳಿಸಿಕೊಂಡಿರುವ ಏಕೈಕ ಮಾರ್ಗವೇ ಆಸ್ತಿಗಳ ಬೆಲೆ ಗುಳ್ಳೆಗಳ ಉದ್ದೀಪನೆ; ಮತ್ತು ಈ ಉದ್ದೇಶಕ್ಕಾಗಿ ಬಡ್ಡಿದರ ನೀತಿಯ ಬಳಕೆ.
ಆದರೆ, ಯಾವಾಗ ಬೇಕಾದರೂ ನಿಯಂತ್ರಿಸಬಹುದಾದ ಸರ್ಕಾರದ ವೆಚ್ಚಗಳಂತಲ್ಲದೆ, ಬೇಕು ಎಂದ ಕೂಡಲೇ ಗುಳ್ಳೆಗಳು ಪ್ರತ್ಯಕ್ಷವಾಗುವುದಿಲ್ಲ. 1990ರ ದಶಕದಲ್ಲಿ (ಅಮೇರಿಕಾದಲ್ಲಿ ಡಾಟ್-ಕಾಂ ಗುಳ್ಳೆಗಳು), ಮತ್ತು ಈ ಶತಮಾನದ ಆರಂಭದ ವರ್ಷಗಳಲ್ಲಿ (ಅಮೇರಿಕಾದಲ್ಲಿ ವಸತಿ ಗುಳ್ಳೆಗಳು) ಈ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಸ್ವಲ್ಪ ಸಮಯದ ವರೆಗೆ ಉದ್ದೀಪಿಸಿದಂತೆ ಕಂಡಿತು. ಆದರೆ, ವಸತಿ ಗುಳ್ಳೆಗಳು ಒಡೆದ ಕೂಡಲೇ ಜನ ಜಾಗೃತರಾದರು. ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸಿದರೂ ಸಹ, ಅಷ್ಟೇ ಪರಿಣಾಮದ ಹೊಸ ಗುಳ್ಳೆಗಳು ಪ್ರತ್ಯಕ್ಷವಾಗಲಿಲ್ಲ.
ಅದೇ ಸಮಯದಲ್ಲಿ, ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಒಟ್ಟಾರೆ ಬೇಡಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಭಾವಪೂರ್ಣವಾಗಿ ಕಾರ್ಯ ಪ್ರವೃತ್ತವಾಗಿರುವ ಇನ್ನೊಂದು ಅಂಶವೂ ಇದೆ. ಒಟ್ಟು ಉತ್ಪತ್ತಿಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಿರುವ ಅಂಶವೇ ಆ ಇನ್ನೊಂದು ಅಂಶ. ಜಾಗತೀಕರಣವೆಂದರೆ, ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸೂ ಸೇರಿದಂತೆ, ಬಂಡವಾಳವು ದೇಶ ದೇಶಗಳ ಗಡಿಯಾಚೆಗೆ ಮುಕ್ತವಾಗಿ ಚಲಿಸುವ ಅವಕಾಶ. ಬಂಡವಾಳದ ಈ ಚಲನೆಯಿಂದಾಗಿ, ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚು-ಕೂಲಿಯ ಬೃಹತ್ ನಗರಗಳಲ್ಲಿ ನೆಲೆಸಿದ್ದ ಅನೇಕಾನೇಕ ಚಟುವಟಿಕೆಗಳು ಕಡಿಮೆ-ಕೂಲಿಯ ಮೂರನೆಯ ಜಗತ್ತಿನ ದೇಶಗಳಲ್ಲಿ ಮರು-ನೆಲೆಗೊಂಡವು. ಈ ವಿದ್ಯಮಾನದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರನ್ನು ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರೊಂದಿಗೆ ಪೈಪೋಟಿಗೆ ತಳ್ಳಿದ ಕಾರಣದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರ ಕೂಲಿಯು ಕೆಳ ಮಟ್ಟದಲ್ಲೇ ಉಳಿಯುವಂತಾಗಿದೆ.
ಅದೇ ಸಮಯದಲ್ಲಿ, ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರ ಕೂಲಿಯು ಬದುಕುಳಿಯುವ ಮಟ್ಟದಲ್ಲೇ ಉಳಿದಿದೆ, ಏಕೆಂದರೆ, ಕೈಗಾರಿಕಾ ಚಟುವಟಿಕೆಗಳು ಮರು-ನೆಲೆಗೊಂಡ ಬಳಿಕವೂ ಬರಿದಾಗದಷ್ಟು ದೊಡ್ಡ ಪ್ರಮಾಣದ ಮೀಸಲು ಶ್ರಮಿಕ ಪಡೆ ಮೂರನೆಯ ಜಗತ್ತಿನ ದೇಶಗಳಲ್ಲಿದೆ. ಆದ್ದರಿಂದ, ಜಗತ್ತಿನಾದ್ಯಂತ ಕಾರ್ಮಿಕರ ಉತ್ಪಾದಕತಾ ಪರಿಮಾಣವು ಹೆಚ್ಚಿದರೂ ಸಹ, ಜಗತ್ತಿನಾದ್ಯಂತ ಕಾರ್ಮಿಕರ ಕೂಲಿಯ ದರದ ಏರಿಕೆಯ ಪರಿಮಾಣವು ಹೆಚ್ಚಾಗುವುದಿಲ್ಲ. ಈ ಕಾರಣದಿಂದಾಗಿಯೇ ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಮಿಗುತಾಯದ ಪಾಲು ಹೆಚ್ಚುತ್ತಿದೆ.
ಮಿಗುತಾಯದ ಪಾಲಿನ ಈ ಪರಿಯ ಹೆಚ್ಚಳವು ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ (Overproduction) ಪ್ರವೃತ್ತಿಯನ್ನು ಬೆಳೆಸುತ್ತದೆ, ಏಕೆಂದರೆ, ತಮ್ಮ ವರಮಾನದ ಪ್ರತಿ ಯೂನಿಟ್ನಲ್ಲಿ ಕೂಲಿಗಾರರ ಬಳಕೆಯ ಭಾಗವು, ಮಿಗುತಾಯ ಸಂಪಾದಿಸುವವರ ವರಮಾನದ ಪ್ರತಿ ಯೂನಿಟ್ನ ಬಳಕೆಯ ಭಾಗಕ್ಕಿಂತ ಬಹಳ ದೊಡ್ಡದಿರುತ್ತದೆ. ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಈ ಪ್ರವೃತ್ತಿಯನ್ನು ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವ ಮೂಲಕ ಸರಿದೂಗಿಸಬಹುದಿತ್ತು. ಆದರೆ ಇದು ಸಾಧ್ಯವೇ ಇಲ್ಲದುದರಿಂದ, ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯನ್ನು ತಡೆಯುವ ಏಕ ಮಾತ್ರ ಸಾಧ್ಯತೆ ಎಂದರೆ, ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವುದು. ಇಂತಹ ಗುಳ್ಳೆಗಳು ಏಳದೆ ಇದ್ದಾಗ ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯು ಪೂರ್ಣ ಬಲದೊಂದಿಗೆ ಕೆಲಸಮಾಡುತ್ತದೆ. ನಾವೀಗ ನೋಡುತ್ತಿರುವುದು ಈ ವಿದ್ಯಮಾನವನ್ನೇ.
ಇಂತಹ ಪರಿಸ್ಥಿತಿಯಲ್ಲಿ ರೂಢಿಗತವಾಗಿ ಬಳಸುವ ಬಡ್ಡಿ ದರ ಇಳಿಸುವ ಉಪಕರಣವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಒಟ್ಟಾರೆ ಬೇಡಿಕೆಯ ಕೊರತೆಯನ್ನು ಸರಿದೂಗಿಕೊಳ್ಳುವ ಪ್ರಯತ್ನವಾಗಿ, ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಲಾರದ ಪರಿಸ್ಥಿತಿಯಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ದೇಶ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಲು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬಿಕ್ಕಟ್ಟನ್ನು ಬೇರೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಚೀನಾ ದೇಶಕ್ಕೆ, ರಫ್ತು ಮಾಡುತ್ತಿದ್ದಾರೆ ಚೀನಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಟ್ರಂಪ್ ಶೇ.25ರಷ್ಟು ಸುಂಕ ಹೇರಿದ್ದಾರೆ. ಮುಯ್ಯಿಗೆ ಮುಯ್ಯಿ ಎಂಬಂತೆ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಚೀನಾ ಶೇ.25ರಷ್ಟು ಸುಂಕ ಹೇರಿದೆ.
ಬಿಕ್ಕಟ್ಟಿನಿಂದ ಹೊರಬರುವ ಸಾಧನವಾಗಿ ಅಮೇರಿಕಾ ಆರಂಭಿಸಿದ ಈ ವ್ಯಾಪಾರ ಸಮರವು ಇಡೀ ವಿಶ್ವದ ಅರ್ಥವ್ಯವಸ್ಥೆಯೇ ಬಿಕ್ಕಟ್ಟಿಗೆ ಒಳಗಾಗುವಂತೆ ಮಾಡಿದೆ, ಹೇಗೆಂದರೆ, ವಿಶ್ವದ ಬಂಡವಾಳಗಾರರಲ್ಲಿ ಕೆಲವರಿಗಾದರೂ ಹೂಡಿಕೆ ಮಾಡಲು ಇದ್ದ ಅಲ್ಪ ಸ್ವಲ್ಪ ಪ್ರೇರಣೆಯನ್ನೂ ಈ ವ್ಯಾಪಾರ ಸಮರವು ಒಳಗೊಳಗೇ ಕುಗ್ಗಿಸಿದೆ. ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವ ಉದ್ದೇಶದಿಂದ ಕೈಗೊಂಡ ಬಡ್ಡಿ ದರ ಇಳಿಕೆಯ ಕ್ರಮವು ಅಂದುಕೊಂಡದ್ದಕ್ಕಿಂತ ಭಿನ್ನವಾಗಿ ಪರಿಣಮಿಸಿದೆ – ವಿಶ್ವದ ಷೇರು ಮಾರುಕಟ್ಟೆಗಳು ಕುಸಿದು ಬೀಳುತ್ತಿವೆ. ಉದಾಹರಣೆಗೆ, ನ್ಯೂಯಾರ್ಕ್ನ ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯು ಆಗಸ್ಟ್ 14ರಂದು ಈ ವರ್ಷದ ಅತಿ ದೊಡ್ಡ ಕುಸಿತ ಕಂಡಿದೆ. ಅದನ್ನು ಹಿಂಬಾಲಿಸಿ ವಿಶ್ವದ ಷೇರು ಮಾರುಕಟ್ಟೆಗಳೂ ಕುಸಿದು ಬಿದ್ದಿವೆ.
ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವುದು ಸಾಧ್ಯವಾದರೆ, ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯ ಅಗತ್ಯವಿಲ್ಲ. ಸರ್ಕಾರದ ವೆಚ್ಚಗಳಿಂದ ಉಂಟಾದ ಬೇಡಿಕೆ ಹೊರ ದೇಶಗಳಿಗೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಒಂದು ವೇಳೆ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡರೂ ಸಹ, ಅದರಿಂದಾಗಿ ಬೇರೇ ದೇಶಗಳಿಂದ ಮಾಡಿಕೊಳ್ಳುವ ಆಮದುಗಳಲ್ಲಿ ಕಡಿತವಾಗುವುದಿಲ್ಲ, ಏಕೆಂದರೆ, ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ. ಆದರೆ. ಸರ್ಕಾರದ ವೆಚ್ಚಗಳು ಏರಿಕೆಯಾಗದ ಸಂರ್ಭದಲ್ಲಿ (ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಸರ್ಕಾರದ ವೆಚ್ಚಗಳ ಏರಿಕೆಯನ್ನು ವಿರೋಧಿಸುತ್ತದೆ; ಈ ಕಾರಣದಿಂದಾಗಿಯೇ ಬಹುತೇಕ ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಗೆ ಮಿತಿಯನ್ನು ವಿಧಿಸುವ ಕಾನೂನು ತಂದಿವೆ), ಒಂದು ದೇಶವು ಅನುಸರಿಸಬಹುದಾದ ನೀತಿಯನ್ನು ಆಯ್ದುಕೊಳ್ಳಲು ಆ ದೇಶಕ್ಕೆ ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಎಲ್ಲ ದೇಶಗಳ ಬಿಕ್ಕಟ್ಟಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ನಿಖರವಾಗಿ ಹೇಳುವುದಾದರೆ, ಈ ಪರಿಸ್ಥಿತಿಯೇ ನವ ಉದಾರ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟಿನ ಹೆಗ್ಗುರುತು. ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಷ್ಟು ಪ್ರಯತ್ನಗಳನ್ನು ಮಾಡಿದರೂ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
( ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ5 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ2 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ