ದಿನದ ಸುದ್ದಿ
ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2019/09/IMG_20190906_193742.jpg&description=ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2019/09/IMG_20190906_193742.jpg&description=ಜಾಗತಿಕ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟು', 'pinterestShare', 'width=750,height=350'); return false;" title="Pin This Post">
- ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ, ಮತ್ತಷ್ಟು ಹದಗೆಡುತ್ತದೆ. ಇಂತಹ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಆಗಾಗ ಅಥವಾ ಚಕ್ರೀಯವಾಗಿ ಬಿಕ್ಕಟ್ಟುಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ, ವ್ಯವಸ್ಥೆಯ ಚೌಕಟ್ಟಿನೊಳಗೆ, ಅಂದರೆ ವ್ಯವಸ್ಥೆಯ ಪ್ರಚಲಿತ ವರ್ಗಗಳ ರೂಪ ರಚನೆ ಇವುಗಳಿಗೆ ಅನುಗುಣವಾಗಿ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗತ್ತದೆ. ಇದರಿಂದ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದಷ್ಟೇ. ಈ ಅರ್ಥದಲ್ಲಿ ನವ ಉದಾರ ಬಂಡವಾಳಶಾಹಿಯು ಈಗ ಆ ಬಿಕ್ಕಟ್ಟುಗಳಿಗಿಂತ ಭಿನ್ನವಾದ ಒಂದು ವ್ಯವಸ್ಥಾಗತ ಬಿಕ್ಕಟ್ಟಿಗೆ ಒಳಗಾಗಿದೆ. ತೇಪೆ ಹಚ್ಚುವ ಕೆಲಸಗಳ ಮೂಲಕ ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿಲ್ಲ; ಈ ತೇಪೆದಾರಿಗಿಂತಲೂ ಹೆಚ್ಚು ಉಪಯುಕ್ತ ಎನ್ನುವ ಕ್ರಮ ಕೈಗೊಂಡರೂ ಬಿಕ್ಕಟ್ಟು ಉಲ್ಬಣಗೊಳ್ಳುತ್ತಲೇ ಹೋಗುತ್ತದೆ. ಈ ಮಾತಿಗೆ ಉದಾಹರಣೆಯಾಗಿ ಅಮೇರಿಕಾದಲ್ಲಿ ಟ್ರಂಪ್, ಚೀನಾ, ಭಾರತ ಮತ್ತು ಇತರ ಕೆಲವು ದೇಶಗಳ ಆಮದುಗಳ ಮೇಲೆ ಅಧಿಕ ಸುಂಕ ಹೇರುವ ಮೂಲಕ ಕೈಗೊಂಡಿರುವ ರಕ್ಷಣಾತ್ಮಕ ಕ್ರಮಗಳನ್ನು ಗಮನಿಸಬಹುದು.
ಆದರೆ, ನವ ಉದಾರವಾದಿ ಜಾಗತೀಕರಣದ ವಿಶಾಲ ಚೌಕಟ್ಟನ್ನು ಮೀರದ ಹೊರತು, ಅಂದರೆ, ಈ ಜಾಗತೀಕರಣದ ಚಾಲಕ ಶಕ್ತಿಯೇ ಆಗಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರದ ಹೊರತು, ಟ್ರಂಪ್ ಎಷ್ಟೇ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡರೂ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ಅದು ಇನ್ನಷ್ಟು ಹದಗೆಡುತ್ತದೆ.
ಈ ಬಿಕ್ಕಟ್ಟಿನ ರೋಗ ಲಕ್ಷಣಗಳು ಸ್ಪಷ್ಟವಾಗಿಯೇ ಪ್ರಕಟಗೊಂಡಿವೆ. 2008ರ ಬಿಕ್ಕಟ್ಟಿನ ನಂತರ, ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸುವ ಅಗ್ಗದ ಬಡ್ಡಿ ನೀತಿಯನ್ನು ಅಮೇರಿಕಾ ಮತ್ತು ಹಲವು ದೇಶಗಳು ಅನುಸರಿಸಿದವು. ಈ ಕ್ರಮದಿಂದಾಗಿ ಜಾಗತಿಕ ಬಂಡವಾಳಶಾಹಿಗೆ ಉಸಿರಾಟ ಸರಾಗವಾಯಿತು. ಅಷ್ಟಾಗಿಯೂ, ವಿಶ್ವವು ಈಗ ಮತ್ತೊಮ್ಮೆ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ಅಮೇರಿಕಾದಲ್ಲಿ ವ್ಯವಹಾರ ಮತ್ತು ಉದ್ದಿಮೆಗಳ ಮೇಲಿನ ಹೂಡಿಕೆ ಇಳಿಯುತ್ತಿದೆ. ಈ ವರ್ಷದ ಜುಲೈನಲ್ಲಿ ಅಮೇರಿಕಾದ ಕೈಗಾರಿಕಾ ಉತ್ಪಾದನೆ ಅದರ ಹಿಂದಿನ ತಿಂಗಳಿಗಿಂತ ಶೇ.0.2 ಕಡಿಮೆ ಇತ್ತು. ಈ ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಬ್ರಿಟನ್ನಿನ ಮತ್ತು ಜರ್ಮನಿಯ ಅರ್ಥವ್ಯವಸ್ಥೆಗಳೂ ಕುಗ್ಗಿದವು. ಇಟಲಿ, ಬ್ರೆಜಿಲ್, ಮೆಕ್ಸಿಕೊ, ಅರ್ಜೆಂಟೈನಾ ಮತ್ತು ಭಾರತದಂತಹ ದೇಶಗಳಲ್ಲೂ ಅದೇ ಪರಿಸ್ಥಿತಿ ಇದೆ. ಈ ಜಾಗತಿಕ ಹಿಂಜರಿತದ ಪರಿಣಾಮವಾಗಿ ಚೀನಾದಲ್ಲೂ ಬೆಳವಣಿಗೆಯ ದರ ಇಳಿಯುತ್ತಿದೆ.
ಈಗ ತಲೆದೋರುತ್ತಿರುವ ಆರ್ಥಿಕ ಹಿಂಜರಿತಕ್ಕೆ ಎಲ್ಲ ದೇಶಗಳ ನೀತಿ-ನಿರೂಪಕರು ಮತ್ತೊಮ್ಮೆ ಬಡ್ಡಿ ದರಗಳ ಮತ್ತಷ್ಟು ಇಳಿಕೆ ಮಾಡುವ ಮೂಲಕವೇ ಸ್ಪಂದಿಸುತ್ತಿದ್ದಾರೆ. ಈಗಾಗಲೇ ಬಡ್ಡಿ ದರಗಳನ್ನು ಹತ್ತಿರ ಹತ್ತಿರ ಋಣಾತ್ಮಕ ಮಟ್ಟಕ್ಕೆ ಇಳಿಸಿರುವ ಯೂರೋಪಿಯನ್ ಕೇಂದ್ರೀಯ ಬ್ಯಾಂಕ್, ಬಡ್ಡಿ ದರಗಳನ್ನು ಇನ್ನೂ ಕೆಳಗಿಳಿಸುವ ಯೋಜನೆಯಲ್ಲಿದೆ. ಭಾರತದಲ್ಲೂ ಸಹ ಈಗಾಗಲೇ ಬಡ್ಡಿ ದರಗಳ ಇಳಿಕೆಯಾಗಿದೆ. ಈ ರೀತಿಯಲ್ಲಿ ಬಡ್ಡಿ ದರಗಳನ್ನು ಇಳಿಕೆ ಮಾಡುತ್ತಿರುವ ಉದ್ದೇಶ ಏನೆಂದರೆ, ಬಡ್ಡಿ ದರ ಕಡಿಮೆ ಇದ್ದರೆ ಬಂಡವಾಳ ಹೂಡಿಕೆ ವೃದ್ಧಿಸುತ್ತದೆ ಎಂಬುದಕ್ಕಿಂತಲೂ ಹೆಚ್ಚಾಗಿ; ಕಡಿಮೆಯ ಬಡ್ಡಿ ದರಗಳಿಂದಾಗಿ ಆಸ್ತಿಗಳ ಬೆಲೆ ಗುಳ್ಳೆಗಳು ಏಳುತ್ತವೆ ಎಂಬುದು. ಇವರ ಪ್ರಕಾರ, ಆಸ್ತಿಗಳ ಬೆಲೆ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುತ್ತವೆ. ಹೇಗೆಂದರೆ, ಆಸ್ತಿಗಳ ಬೆಲೆ ಗುಳ್ಳೆಗಳು ತಮ್ಮ ಸಂಪತ್ತನ್ನು ಹೆಚ್ಚಿಸಿವೆ ಆಸ್ತಿಯ ಒಡೆಯರಿಗೆ ಅನಿಸುತ್ತದೆ. ಅನೇಕ ರೀತಿಯಲ್ಲಿ ಹೆಚ್ಚು ಖರ್ಚುಮಾಡುತ್ತಾರೆ, ಅದರಿಂದಾಗಿ ಬೇಡಿಕೆ ವೃದ್ದಿಸುತ್ತದೆ.
ಎಲ್ಲ ದೇಶಗಳ ನೀತಿ-ನಿರೂಪಕರೂ ಇದೇ ಮಾದರಿಯಲ್ಲೇ ಏಕೆ ಸ್ಪಂದಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಾಗುತ್ತದೆ. ಎರಡನೆಯ ಮಹಾ ಯುದ್ಧದ ನಂತರದ ಅವಧಿಯಲ್ಲಿ-ಅಂದರೆ, ನವ ಉದಾರವಾದಿ ಜಾಗತೀಕರಣವು ಹೆಜ್ಜೆ ಇಡುವ ಮುನ್ನ, ಆರ್ಥಿಕ ಹಿಂಜರಿತದ ಸೂಚನೆ ಇದ್ದಾಗ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಬಹುದಿತ್ತು. ಸರ್ಕಾರಗಳು, ಅಗತ್ಯವಿದ್ದರೆ, ತಮ್ಮ ವಿತ್ತೀಯ ಕೊರತೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದಿತ್ತು. ಏಕೆಂದರೆ, ಆ ಸಮಯದಲ್ಲಿ ಬಂಡವಾಳದ ಹರಿದಾಡುವಿಕೆಯ ಮೇಲೆ ನಿಯಂತ್ರಣವಿತ್ತು. ಹಾಗಾಗಿ, ವಿತ್ತೀಯ ಕೊರತೆಯ ಮಟ್ಟ ಏರಿದ ಕಾರಣದಿಂದಲೇ ಬಂಡವಾಳವು ಪಲಾಯನ ಗೈಯ್ಯುವ ಅಪಾಯವಿರಲಿಲ್ಲ.
ಯುದ್ದಾನಂತರದಲ್ಲಿ ಬಂಡವಾಳಶಾಹಿ ಅರ್ಥವ್ಯವಸ್ಥೆಯ ಶಿಲ್ಪಿಗಳಲ್ಲಿ ಒಬ್ಬರಾದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ ಅವರು ವಿಶ್ವ ಹೀಗಿರಬೇಕು ಎಂದು ಕಲ್ಪಿಸಿಕೊಂಡಿದ್ದ ದೃಶ್ಯ ಇದಾಗಿತ್ತು. ಹಣಕಾಸು ಬಂಡವಾಳದ ಅಂತಾರಾಷ್ಟ್ರೀಕರಣವನ್ನು ಕೀನ್ಸ್ ವಿರೋಧಿಸಿದ್ದರು. (ಹಣಕಾಸು ಬಂಡವಾಳವು ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರೀಯವಾಗಿಯೇ ಇರಬೇಕು ಎಂದು ಅವರು ಹೇಳಿದ್ದರು).
ಉದ್ಯೋಗ ಸೃಷ್ಟಿಯ ಉದ್ದೇಶಕ್ಕಾಗಿ ಸರ್ಕಾರವು ಕೈಗೊಳ್ಳುವ ಹೆಚ್ಚು ಹೆಚ್ಚು ಖರ್ಚಿನ ಕ್ರಮಗಳನ್ನು ಯಾವತ್ತೂ ವಿರೋಧಿಸುವ ಹಣಕಾಸು ಬಂಡವಾಳವು ಪ್ರಭುತ್ವವನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವ ಮೂಲಕ, ರಾಷ್ಟ್ರ-ಪ್ರಭುತ್ವದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವನ್ನು ಒಳಗೊಳಗೇ ನಾಶಪಡಿಸುತ್ತದೆ ಎಂಬ ನೆಲೆಯಲ್ಲಿ ಅವರು ಹಣಕಾಸು ಬಂಡವಾಳವು ಅಂತಾರಾಷ್ಟ್ರೀಕರಣಗೊಳ್ಳುವುದನ್ನು ವಿರೋಧಿಸಿದ್ದರು. ಬಂಡವಾಳಶಾಹಿ ಅರ್ಥವ್ಯವಸ್ಥೆಯ ಸಂರಕ್ಷಕರಾಗಿದ್ದ ಕೀನ್ಸ್, ರಾಷ್ಟ್ರ-ಪ್ರಭುತ್ವವು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದ ಹೊರತು, ಸಮಾಜವಾದವು ಒಡ್ಡಿದ ಬೆದರಿಕೆಯಿಂದ ಬಂಡವಾಳಶಾಹಿಗೆ ಉಳಿಗಾಲವಿಲ್ಲ ಎಂದು ಭಯಪಟ್ಟಿದ್ದರು.
ಆದರೆ, ಯುದ್ದಾನಂತರದ ಕೆಲವು ವರ್ಷಗಳ ಕಾಲಾವಧಿಯಲ್ಲಿ, ಅಮೇರಿಕಾದ ಪಾವತಿ ಶೇಷದ ಚಾಲ್ತಿ ಖಾತೆಯಲ್ಲಿ ಸತತವಾಗಿ ಬಹಳ ಕಾಲ ಭಾರಿ ಮೊತ್ತದ ಕೊರತೆಯ ಹಣ (ಇದು ಬೇರೆ ಬೇರೆ ದೇಶಗಳು ತಮ್ಮ ರಫ್ತುಗಳ ಮೂಲಕ ಗಳಿಸಿದ ಹಣ), ಮತ್ತು, ತದನಂತರದ ಅವಧಿಯಲ್ಲಿ, ಅಂದರೆ 197೦ರ ದಶಕದಲ್ಲಿ, ತೈಲ ಬೆಲೆಗಳ ವಿಪರೀತ ಹೆಚ್ಚಳದಿಂದಾಗಿ ತೈಲ ಉತ್ಪಾದಕ ದೇಶಗಳ ಅಪಾರ ಲಾಭದ ಆದಾಯವು ಅಭಿವೃದ್ಧಿ ಹೊಂದಿದ ದೇಶಗಳ ಮಹಾ ನಗರ ಕೇಂದ್ರಿತ ಬ್ಯಾಂಕ್ಗಳಲ್ಲಿ ಶೇಖರಣೆಯಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಂಡವಾಳದ ಹರಿದಾಡುವಿಕೆಯ ಮೇಲಿದ್ದ ನಿಯಂತ್ರಣವನ್ನು ಕಿತ್ತುಹಾಕುವಂತೆ ಹಣಕಾಸು ಬಂಡವಾಳವು ಒತ್ತಡ ಹೇರಿತು. ತನಗೆ ಎಲ್ಲಿಗೆ ಬೇಕೊ ಅಲ್ಲಿಗೆ ಮುಕ್ತವಾಗಿ ಚಲಿಸಲು ಅನುವಾಗುವಂತೆ ಇಡೀ ವಿಶ್ವವನ್ನೇ ತೆರೆದಿಡಬೇಕು ಎಂದು ಹಣಕಾಸು ಬಂಡವಾಳವು ಬಯಸಿತು ಮತ್ತು ಆ ಪ್ರಯತ್ನದಲ್ಲಿ ಕೊನೆಗೆ ಯಶಸ್ವಿಯೂ ಆಯಿತು. ಈ ರೀತಿಯಲ್ಲಿ ಹಣಕಾಸು ಬಂಡವಾಳವು ಜಾಗತಿಕವಾಗಿ ತನ್ನ ಯಜಮಾನಿಕೆಯನ್ನು ಸ್ಥಾಪಿಸಿಕೊಂಡಿತು.
ಈ ವಿದ್ಯಮಾನವು, ಉದ್ಯೋಗ ಸೃಷ್ಟಿಯ ಮಟ್ಟ ಕಾಯ್ದುಕೊಳ್ಳುತ್ತಿದ್ದ ತನ್ನ ಜವಾಬ್ದಾರಿಕೆಯಿಂದ ರಾಷ್ಟ್ರ-ಪ್ರಭುತ್ವವು ಹಿಂದೆ ಸರಿಯಿತು ಎಂಬುದನ್ನು ಸೂಚಿಸುತ್ತದೆ. ಹಾಗಾಗಿ, ಈ ರೀತಿಯಲ್ಲಿ ಅಸ್ತಿತ್ವಕ್ಕೆ ಬಂದ ನವ ಉದಾರ ಹಣಕಾಸು ಬಂಡವಾಳವು ಒಟ್ಟಾರೆ ಬೇಡಿಕೆಯನ್ನು ಉತ್ತೇಜಿಸಲು ಉಳಿಸಿಕೊಂಡಿರುವ ಏಕೈಕ ಮಾರ್ಗವೇ ಆಸ್ತಿಗಳ ಬೆಲೆ ಗುಳ್ಳೆಗಳ ಉದ್ದೀಪನೆ; ಮತ್ತು ಈ ಉದ್ದೇಶಕ್ಕಾಗಿ ಬಡ್ಡಿದರ ನೀತಿಯ ಬಳಕೆ.
ಆದರೆ, ಯಾವಾಗ ಬೇಕಾದರೂ ನಿಯಂತ್ರಿಸಬಹುದಾದ ಸರ್ಕಾರದ ವೆಚ್ಚಗಳಂತಲ್ಲದೆ, ಬೇಕು ಎಂದ ಕೂಡಲೇ ಗುಳ್ಳೆಗಳು ಪ್ರತ್ಯಕ್ಷವಾಗುವುದಿಲ್ಲ. 1990ರ ದಶಕದಲ್ಲಿ (ಅಮೇರಿಕಾದಲ್ಲಿ ಡಾಟ್-ಕಾಂ ಗುಳ್ಳೆಗಳು), ಮತ್ತು ಈ ಶತಮಾನದ ಆರಂಭದ ವರ್ಷಗಳಲ್ಲಿ (ಅಮೇರಿಕಾದಲ್ಲಿ ವಸತಿ ಗುಳ್ಳೆಗಳು) ಈ ಗುಳ್ಳೆಗಳು ಒಟ್ಟಾರೆ ಬೇಡಿಕೆಯನ್ನು ಸ್ವಲ್ಪ ಸಮಯದ ವರೆಗೆ ಉದ್ದೀಪಿಸಿದಂತೆ ಕಂಡಿತು. ಆದರೆ, ವಸತಿ ಗುಳ್ಳೆಗಳು ಒಡೆದ ಕೂಡಲೇ ಜನ ಜಾಗೃತರಾದರು. ಬಡ್ಡಿದರಗಳನ್ನು ಹತ್ತಿರ ಹತ್ತಿರ ಸೊನ್ನೆಯ ಮಟ್ಟಕ್ಕೆ ಇಳಿಸಿದರೂ ಸಹ, ಅಷ್ಟೇ ಪರಿಣಾಮದ ಹೊಸ ಗುಳ್ಳೆಗಳು ಪ್ರತ್ಯಕ್ಷವಾಗಲಿಲ್ಲ.
ಅದೇ ಸಮಯದಲ್ಲಿ, ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಒಟ್ಟಾರೆ ಬೇಡಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪ್ರಭಾವಪೂರ್ಣವಾಗಿ ಕಾರ್ಯ ಪ್ರವೃತ್ತವಾಗಿರುವ ಇನ್ನೊಂದು ಅಂಶವೂ ಇದೆ. ಒಟ್ಟು ಉತ್ಪತ್ತಿಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತಿರುವ ಅಂಶವೇ ಆ ಇನ್ನೊಂದು ಅಂಶ. ಜಾಗತೀಕರಣವೆಂದರೆ, ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸೂ ಸೇರಿದಂತೆ, ಬಂಡವಾಳವು ದೇಶ ದೇಶಗಳ ಗಡಿಯಾಚೆಗೆ ಮುಕ್ತವಾಗಿ ಚಲಿಸುವ ಅವಕಾಶ. ಬಂಡವಾಳದ ಈ ಚಲನೆಯಿಂದಾಗಿ, ಜಾಗತಿಕ ಬೇಡಿಕೆಯನ್ನು ಪೂರೈಸಲು ಹೆಚ್ಚು-ಕೂಲಿಯ ಬೃಹತ್ ನಗರಗಳಲ್ಲಿ ನೆಲೆಸಿದ್ದ ಅನೇಕಾನೇಕ ಚಟುವಟಿಕೆಗಳು ಕಡಿಮೆ-ಕೂಲಿಯ ಮೂರನೆಯ ಜಗತ್ತಿನ ದೇಶಗಳಲ್ಲಿ ಮರು-ನೆಲೆಗೊಂಡವು. ಈ ವಿದ್ಯಮಾನದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರನ್ನು ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರೊಂದಿಗೆ ಪೈಪೋಟಿಗೆ ತಳ್ಳಿದ ಕಾರಣದಿಂದಾಗಿ ಮುಂದುವರೆದ ದೇಶಗಳ ಕಾರ್ಮಿಕರ ಕೂಲಿಯು ಕೆಳ ಮಟ್ಟದಲ್ಲೇ ಉಳಿಯುವಂತಾಗಿದೆ.
ಅದೇ ಸಮಯದಲ್ಲಿ, ಮೂರನೆಯ ಜಗತ್ತಿನ ದೇಶಗಳ ಕಾರ್ಮಿಕರ ಕೂಲಿಯು ಬದುಕುಳಿಯುವ ಮಟ್ಟದಲ್ಲೇ ಉಳಿದಿದೆ, ಏಕೆಂದರೆ, ಕೈಗಾರಿಕಾ ಚಟುವಟಿಕೆಗಳು ಮರು-ನೆಲೆಗೊಂಡ ಬಳಿಕವೂ ಬರಿದಾಗದಷ್ಟು ದೊಡ್ಡ ಪ್ರಮಾಣದ ಮೀಸಲು ಶ್ರಮಿಕ ಪಡೆ ಮೂರನೆಯ ಜಗತ್ತಿನ ದೇಶಗಳಲ್ಲಿದೆ. ಆದ್ದರಿಂದ, ಜಗತ್ತಿನಾದ್ಯಂತ ಕಾರ್ಮಿಕರ ಉತ್ಪಾದಕತಾ ಪರಿಮಾಣವು ಹೆಚ್ಚಿದರೂ ಸಹ, ಜಗತ್ತಿನಾದ್ಯಂತ ಕಾರ್ಮಿಕರ ಕೂಲಿಯ ದರದ ಏರಿಕೆಯ ಪರಿಮಾಣವು ಹೆಚ್ಚಾಗುವುದಿಲ್ಲ. ಈ ಕಾರಣದಿಂದಾಗಿಯೇ ಪ್ರತಿಯೊಂದು ದೇಶದಲ್ಲೂ ಮತ್ತು ಇಡೀ ವಿಶ್ವದಲ್ಲೇ ಮಿಗುತಾಯದ ಪಾಲು ಹೆಚ್ಚುತ್ತಿದೆ.
ಮಿಗುತಾಯದ ಪಾಲಿನ ಈ ಪರಿಯ ಹೆಚ್ಚಳವು ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ (Overproduction) ಪ್ರವೃತ್ತಿಯನ್ನು ಬೆಳೆಸುತ್ತದೆ, ಏಕೆಂದರೆ, ತಮ್ಮ ವರಮಾನದ ಪ್ರತಿ ಯೂನಿಟ್ನಲ್ಲಿ ಕೂಲಿಗಾರರ ಬಳಕೆಯ ಭಾಗವು, ಮಿಗುತಾಯ ಸಂಪಾದಿಸುವವರ ವರಮಾನದ ಪ್ರತಿ ಯೂನಿಟ್ನ ಬಳಕೆಯ ಭಾಗಕ್ಕಿಂತ ಬಹಳ ದೊಡ್ಡದಿರುತ್ತದೆ. ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಈ ಪ್ರವೃತ್ತಿಯನ್ನು ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವ ಮೂಲಕ ಸರಿದೂಗಿಸಬಹುದಿತ್ತು. ಆದರೆ ಇದು ಸಾಧ್ಯವೇ ಇಲ್ಲದುದರಿಂದ, ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯನ್ನು ತಡೆಯುವ ಏಕ ಮಾತ್ರ ಸಾಧ್ಯತೆ ಎಂದರೆ, ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವುದು. ಇಂತಹ ಗುಳ್ಳೆಗಳು ಏಳದೆ ಇದ್ದಾಗ ಅಗತ್ಯಕ್ಕಿಂತ ಅಧಿಕವಾಗಿ ಉತ್ಪಾದಿಸುವ ಪ್ರವೃತ್ತಿಯು ಪೂರ್ಣ ಬಲದೊಂದಿಗೆ ಕೆಲಸಮಾಡುತ್ತದೆ. ನಾವೀಗ ನೋಡುತ್ತಿರುವುದು ಈ ವಿದ್ಯಮಾನವನ್ನೇ.
ಇಂತಹ ಪರಿಸ್ಥಿತಿಯಲ್ಲಿ ರೂಢಿಗತವಾಗಿ ಬಳಸುವ ಬಡ್ಡಿ ದರ ಇಳಿಸುವ ಉಪಕರಣವು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ, ಒಟ್ಟಾರೆ ಬೇಡಿಕೆಯ ಕೊರತೆಯನ್ನು ಸರಿದೂಗಿಕೊಳ್ಳುವ ಪ್ರಯತ್ನವಾಗಿ, ಸರ್ಕಾರದ ವೆಚ್ಚಗಳನ್ನು ಹೆಚ್ಚಿಸಲಾರದ ಪರಿಸ್ಥಿತಿಯಲ್ಲಿ, ಡೊನಾಲ್ಡ್ ಟ್ರಂಪ್ ತಮ್ಮ ದೇಶ ಎದುರಿಸುತ್ತಿರುವ ಬಿಕ್ಕಟ್ಟಿನಿಂದ ಹೊರಬರಲು ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ಬಿಕ್ಕಟ್ಟನ್ನು ಬೇರೆ ಬೇರೆ ದೇಶಗಳಿಗೆ, ಅದರಲ್ಲೂ ಮುಖ್ಯವಾಗಿ ಚೀನಾ ದೇಶಕ್ಕೆ, ರಫ್ತು ಮಾಡುತ್ತಿದ್ದಾರೆ ಚೀನಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಟ್ರಂಪ್ ಶೇ.25ರಷ್ಟು ಸುಂಕ ಹೇರಿದ್ದಾರೆ. ಮುಯ್ಯಿಗೆ ಮುಯ್ಯಿ ಎಂಬಂತೆ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಅನೇಕ ವಸ್ತುಗಳ ಮೇಲೆ ಚೀನಾ ಶೇ.25ರಷ್ಟು ಸುಂಕ ಹೇರಿದೆ.
ಬಿಕ್ಕಟ್ಟಿನಿಂದ ಹೊರಬರುವ ಸಾಧನವಾಗಿ ಅಮೇರಿಕಾ ಆರಂಭಿಸಿದ ಈ ವ್ಯಾಪಾರ ಸಮರವು ಇಡೀ ವಿಶ್ವದ ಅರ್ಥವ್ಯವಸ್ಥೆಯೇ ಬಿಕ್ಕಟ್ಟಿಗೆ ಒಳಗಾಗುವಂತೆ ಮಾಡಿದೆ, ಹೇಗೆಂದರೆ, ವಿಶ್ವದ ಬಂಡವಾಳಗಾರರಲ್ಲಿ ಕೆಲವರಿಗಾದರೂ ಹೂಡಿಕೆ ಮಾಡಲು ಇದ್ದ ಅಲ್ಪ ಸ್ವಲ್ಪ ಪ್ರೇರಣೆಯನ್ನೂ ಈ ವ್ಯಾಪಾರ ಸಮರವು ಒಳಗೊಳಗೇ ಕುಗ್ಗಿಸಿದೆ. ಆಸ್ತಿಗಳ ಬೆಲೆ ಗುಳ್ಳೆಗಳನ್ನು ಎಬ್ಬಿಸುವ ಉದ್ದೇಶದಿಂದ ಕೈಗೊಂಡ ಬಡ್ಡಿ ದರ ಇಳಿಕೆಯ ಕ್ರಮವು ಅಂದುಕೊಂಡದ್ದಕ್ಕಿಂತ ಭಿನ್ನವಾಗಿ ಪರಿಣಮಿಸಿದೆ – ವಿಶ್ವದ ಷೇರು ಮಾರುಕಟ್ಟೆಗಳು ಕುಸಿದು ಬೀಳುತ್ತಿವೆ. ಉದಾಹರಣೆಗೆ, ನ್ಯೂಯಾರ್ಕ್ನ ವಾಲ್ ಸ್ಟ್ರೀಟ್ ಷೇರು ಮಾರುಕಟ್ಟೆಯು ಆಗಸ್ಟ್ 14ರಂದು ಈ ವರ್ಷದ ಅತಿ ದೊಡ್ಡ ಕುಸಿತ ಕಂಡಿದೆ. ಅದನ್ನು ಹಿಂಬಾಲಿಸಿ ವಿಶ್ವದ ಷೇರು ಮಾರುಕಟ್ಟೆಗಳೂ ಕುಸಿದು ಬಿದ್ದಿವೆ.
ಪ್ರತಿಯೊಂದು ದೇಶದೊಳಗೂ ಸರ್ಕಾರದ ವೆಚ್ಚಗಳನ್ನು ಏರಿಸುವುದು ಸಾಧ್ಯವಾದರೆ, ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯ ಅಗತ್ಯವಿಲ್ಲ. ಸರ್ಕಾರದ ವೆಚ್ಚಗಳಿಂದ ಉಂಟಾದ ಬೇಡಿಕೆ ಹೊರ ದೇಶಗಳಿಗೆ ಸೋರಿಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಒಂದು ವೇಳೆ ರಕ್ಷಣಾತ್ಮಕ ಕ್ರಮಗಳನ್ನು ಅಳವಡಿಸಿಕೊಂಡರೂ ಸಹ, ಅದರಿಂದಾಗಿ ಬೇರೇ ದೇಶಗಳಿಂದ ಮಾಡಿಕೊಳ್ಳುವ ಆಮದುಗಳಲ್ಲಿ ಕಡಿತವಾಗುವುದಿಲ್ಲ, ಏಕೆಂದರೆ, ಮಾರುಕಟ್ಟೆಯು ತನ್ನಷ್ಟಕ್ಕೆ ತಾನೇ ಬೆಳೆಯುತ್ತಿರುತ್ತದೆ. ಆದರೆ. ಸರ್ಕಾರದ ವೆಚ್ಚಗಳು ಏರಿಕೆಯಾಗದ ಸಂರ್ಭದಲ್ಲಿ (ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ಸರ್ಕಾರದ ವೆಚ್ಚಗಳ ಏರಿಕೆಯನ್ನು ವಿರೋಧಿಸುತ್ತದೆ; ಈ ಕಾರಣದಿಂದಾಗಿಯೇ ಬಹುತೇಕ ಎಲ್ಲಾ ದೇಶಗಳೂ ತಮ್ಮ ವಿತ್ತೀಯ ಕೊರತೆಗೆ ಮಿತಿಯನ್ನು ವಿಧಿಸುವ ಕಾನೂನು ತಂದಿವೆ), ಒಂದು ದೇಶವು ಅನುಸರಿಸಬಹುದಾದ ನೀತಿಯನ್ನು ಆಯ್ದುಕೊಳ್ಳಲು ಆ ದೇಶಕ್ಕೆ ನನ್ನ ನೆರೆಯವನು ಹಾಳಾಗಲಿ ಎನ್ನುವ ನೀತಿಯನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎಂಬಂತಾಗಿದೆ. ಇದರಿಂದಾಗಿ ಎಲ್ಲ ದೇಶಗಳ ಬಿಕ್ಕಟ್ಟಿನ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ನಿಖರವಾಗಿ ಹೇಳುವುದಾದರೆ, ಈ ಪರಿಸ್ಥಿತಿಯೇ ನವ ಉದಾರ ಬಂಡವಾಳಶಾಹಿಯ ವ್ಯವಸ್ಥಾಗತ ಬಿಕ್ಕಟ್ಟಿನ ಹೆಗ್ಗುರುತು. ಎಲ್ಲಿಯವರೆಗೆ ಹಣಕಾಸು ಬಂಡವಾಳದ ಯಜಮಾನಿಕೆ ಮುಂದುವರೆಯುತ್ತದೆಯೋ ಮತ್ತು ಜಾಗತಿಕ ಹಣಕಾಸಿನ ಹರಿವಿನ ಸುಳಿಗೆ ಸಿಕ್ಕಿದ ದೇಶ ದೇಶಗಳು ಆ ಸುಳಿಯಲ್ಲಿಯೇ ಉಳಿಯುತ್ತವೆಯೋ ಅಲ್ಲಿಯವರೆಗೆ ಈ ಬಿಕ್ಕಟ್ಟೂ ಮುಂದುವರೆಯುತ್ತದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಸಾಧ್ಯವಿರುವ ಎಷ್ಟು ಪ್ರಯತ್ನಗಳನ್ನು ಮಾಡಿದರೂ ಬಿಕ್ಕಟ್ಟು ಮತ್ತಷ್ಟು ಹದಗೆಡುತ್ತದೆ. ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯಿಂದ ಹೊರ ಬರಲು, ಪ್ರತಿಯೊಂದು ದೇಶದ ಒಳಗೂ, ಒಂದು ಪರ್ಯಾಯ ಅಜೆಂಡಾದೊಂದಿಗೆ ದುಡಿಯುವ ಜನತೆಯನ್ನು ಅಣಿನೆರೆಸಬೇಕಾಗುತ್ತದೆ.
( ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
-ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ
ಸುದ್ದಿದಿನ,ದಾವಣಗೆರೆ:ಈ ವರ್ಷ ಬರಗಾಲದ ಲಕ್ಷಣಗಳಿರುವುದರಿಂದ ಜಲಚರಗಳ ರಕ್ಷಣೆ ಹಾಗೂ ಕುಡಿಯುವ ನೀರಿನ ಲಭ್ಯತೆಗೆ ಮೊದಲ ಆದ್ಯತೆ ನೀಡಬೇಕು. ಜಿಲ್ಲೆಯ ಕೆರೆಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ನಿಖರವಾದ ಅಧ್ಯಯನ ನಡೆಸಿ ವರದಿ ನೀಡುವಂತೆ , ಜಿಲ್ಲೆಯ ಕೆರೆಗಳ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಸೂಚನೆ ನೀಡಿದರು.
ಅವರು (ಏ.15) ಕೆರೆಗಳ ಸಂರಕ್ಷಣೆ, ಒತ್ತುವರಿ ತೆರವು ಹಾಗೂ ಮುಂಬರುವ ಬೇಸಿಗೆಯ ಕುಡಿಯುವ ನೀರಿನ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಒಟ್ಟು 533 ಕೆರೆಗಳ ಪೈಕಿ ಇನ್ನೂ 20 ಕೆರೆಗಳ ಒತ್ತುವರಿ ತೆರವು ಕಾರ್ಯ ಬಾಕಿ ಇದೆ. ಚನ್ನಗಿರಿ ತಾಲ್ಲೂಕಿನ 5 ಕೆರೆಗಳಾದ ಹರೇಗಂಗೂರು, ಸಾಗರಪೇಟೆ, ದಾಗಿನಕಟ್ಟೆ, ತ್ಯಾವಣಿಗ ಮತ್ತು ಸೂಳೆಕೆರೆ; ಹರಿಹರ ತಾಲ್ಲೂಕಿನ 7 ಕೆರೆಗಳಾದ ಹಿಂಡಸಗಟ್ಟ, ಜಿಗಳಿ, ಹಾಲಿವಾಣ, ಕಮಲಾಪುರ, ಗುಡ್ಡದತುಮ್ಮಿನಕಟ್ಟೆ, ಕುಂಬಳೂರು, ಯಲವಟ್ಟಿ; ದಾವಣಗೆರೆ ತಾಲ್ಲೂಕಿನ ಹೊನ್ನೂರು, ಹದಡಿ, ಮಾಳಗೊಂಡನಹಳ್ಳಿಯ 3 ಕೆರೆಗಳು ಹಾಗೂ ಹೊನ್ನಾಳಿ ತಾಲ್ಲೂಕಿನ ನೆಲಹೊನ್ನೆ, ಬನ್ನಿಕೊಡು, ಕುಂಬಳೂರು, ಸಾಸ್ವೆಹಳ್ಳಿ ಮತ್ತು ಬಲಮುರಿ ಕೆರೆಗಳನ್ನು ಶೀಘ್ರವಾಗಿ ಗುರುತಿಸಿ ತೆರವುಗೊಳಿಸಲು ಕ್ರಮವಹಿಸಬೇಕು. ತೆರವು ಕಾರ್ಯಾಚರಣೆಯನ್ನು ಛಾಯಾಚಿತ್ರ ಮತ್ತು ವಿಡಿಯೋ ಚಿತ್ರೀಕರಣದೊಂದಿಗೆ ಪಾರದರ್ಶಕವಾಗಿ ನಡೆಸಿ ಗ್ರಾಮ ಪಂಚಾಯತಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಬೇಕು ಎಂದು ತಿಳಿಸಿದರು.
ಚನ್ನಗಿರಿ ಹಾಗೂ ದಾವಣಗೆರೆ ತಾಲ್ಲೂಕಿನ ಹಲವು ಕೆರೆಗಳಿಗೆ ಕೊಳಚೆ ನೀರು ಸೇರುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಬಳಸುವ ಕೆರೆಗಳ ನೀರಿನ ಮಾದರಿಯನ್ನು ಪ್ರತಿ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ಸಲ್ಲಿಸಬೇಕು. ಯೋಗ್ಯವಾಗಿದ್ದರೆ ಮಾತ್ರ ಕುಡಿಯಲು ಬಳಸಬೇಕು ಎಂದರು.
ಕೆರೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ಕೇವಲ ರೈತರಿಗೆ ಮಾತ್ರ ಸೀಮಿತಗೊಳಿಸಬೇಕು. ಅಕ್ರಮ ಮಣ್ಣು ಸಾಗಾಟಕ್ಕೆ ಆಸ್ಪದ ನೀಡದಂತೆ ಭೂ-ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಮಣ್ಣಿನ ಮೂಲ ಪದರ ಹಾನಿಯಾಗದಂತೆ ಕ್ರಮವಹಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಗಳನ್ನು ಒತ್ತುವರಿಯಿಂದ ಶಾಶ್ವತವಾಗಿ ಮುಕ್ತಗೊಳಿಸಲು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಕೆರೆಗಳ ಬಫರ್ ವಲಯದಲ್ಲಿ ಸಸಿಗಳನ್ನು ನೆಟ್ಟು ಜೈವಿಕ ಬೇಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮುಂಬರುವ ಮಳೆಗಾಲದ ವೇಳೆಗೆ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ಕೆರೆಗಳ ನೀರಿನ ಸಂಗ್ರಹಣಾ ಮಟ್ಟದ ಕುರಿತು ವಿವರ (ಮಾರ್ಚ್ 31 ಅಂತ್ಯಕ್ಕೆ)
ಪೂರ್ಣ ತುಂಬಿದ ಕೆರೆಗಳು: ಜಿಲ್ಲೆಯ ಒಟ್ಟು 08 ಕೆರೆಗಳು ಶೇ. 100 ರಷ್ಟು ಭರ್ತಿಯಾಗಿವೆ.
ಶೇ. 51 ರಿಂದ ಶೇ. 99 ರಷ್ಟು: ಒಟ್ಟು 47 ಕೆರೆಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ.
ಶೇ. 31 ರಿಂದ ಶೇ. 50 ರಷ್ಟು: ಸುಮಾರು 164 ಕೆರೆಗಳು ಅರ್ಧದಷ್ಟು ನೀರಿನ ಮಟ್ಟವನ್ನು ಹೊಂದಿವೆ.
ಶೇ. 1 ರಿಂದ ಶೇ. 30 ರಷ್ಟು: ಜಿಲ್ಲೆಯ ಗರಿಷ್ಠ ಅಂದರೆ 250 ಕೆರೆಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದೆ.
ಶೂನ್ಯ ಮಟ್ಟ (ತುಂಬಿರದ ಕೆರೆಗಳು): ಪ್ರಸ್ತುತ ಜಿಲ್ಲೆಯ 64 ಕೆರೆಗಳಲ್ಲಿ ನೀರಿನ ಸಂಗ್ರಹವಿಲ್ಲದೆ ಖಾಲಿಯಾಗಿವೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರುಗಳು, ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು , ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ವಯೋವೃದ್ಧರ ಕುರಿತು ಬುಧವಾರ ಸಾಮಾಜಿಕ ಸಮೀಕ್ಷೆ ನಡೆಸಿದರು.
ನಗರದ ತರಳಬಾಳು ಬಡಾವಣೆಯ ಆಯೂಷ್ ಚಾರಿಟೇಬಲ್ ಟ್ರಸ್ಟ್ ನ ಆರೈಕೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಸಂದರ್ಶನದ ವೇಳೆ ವೃದ್ಧರ ಸಮಸ್ಯೆಗಳನ್ನು ಆಲಿಸಿದ ಕೆಲ ವಿದ್ಯಾರ್ಥಿಗಳು ಭಾವುಕರಾದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರುಗಳಾದ ಡಾ. ಶಿವಣ್ಣ ಹೆಚ್. ಎಸ್, ಡಾ. ಸುರೇಶ್ ಹೆಚ್. ಎನ್, ಡಾ. ಮಾದನಾಯ್ಕ ಹೆಚ್ ಇವರು ಮಾರ್ಗದರ್ಶನ ನೀಡಿದ್ದು, ಪ್ರಾಂಶುಪಾಲರಾದ ಬಸವರಾಜ್ ಬಿ ತಹಸೀಲ್ದಾರ್ ಮತ್ತು ಆಶ್ರಮದ ಅರ್ಜುನ್, ವಿರೇಶ್ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ
ಸುದ್ದಿದಿನ,ದಾವಣಗೆರೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿರುವ ಮಹಾನ್ ಶಕ್ತಿ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಭಿಪ್ರಾಯಪಟ್ಟರು.
ಅವರು ಇಂದು (ಎ.14) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಪಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
3000 ವರ್ಷಗಳ ಇತಿಹಾಸವಿರುವ ನಮ್ಮ ಸಮಾಜದಲ್ಲಿ, ಬ್ರಿಟಿಷರ ಆಳ್ವಿಕೆಯ ನಂತರವೂ ದೇಶದ ಸಮಗ್ರ ಜನತೆಗೆ ಸಮಾನತೆಯನ್ನು ಕಲಿಸಿಕೊಟ್ಟವರು ಬಾಬಾಸಾಹೇಬ್ ಅಂಬೇಡ್ಕರ್. ಮನುಷ್ಯನಿಗೆ ಮೆದುಳು ಮತ್ತು ಆತ್ಮ ಎಷ್ಟು ಮುಖ್ಯವೋ, ದೇಶಕ್ಕೆ ಸಂವಿಧಾನವು ಅಷ್ಟೇ ಮುಖ್ಯ. ವಿಶೇಷವಾಗಿ 32ನೇ ವಿಧಿಯು ಸಂವಿಧಾನದ ಆತ್ಮವಿದ್ದಂತೆ ,ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದು, ಅವರ ಬೌದ್ಧಿಕ ಸಾಮರ್ಥ್ಯವೇ ಇಂದಿನ ಸಂವಿಧಾನಕ್ಕೆ ಬಲ ತುಂಬಿದೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕಷ್ಟೇ ಶಿಕ್ಷಣ ಪಡೆಯಬಾರದು. ಬದಲಾಗಿ, ಸ್ವತಂತ್ರ ಆಲೋಚನೆ ಮತ್ತು ಸಮಾಜದ ಹಕ್ಕುಗಳನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅವರಂತಹ ಮಹನೀಯರು ನಮಗೆ ಪ್ರೇರಣೆಯಾಗಬೇಕು. ಬದ್ಧತೆ ಮತ್ತು ಪ್ರಯತ್ನವಿದ್ದರೆ ಯಾರೂ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ನಾವೆಲ್ಲರು ಸಂವಿಧಾನವನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಬೇಕು, ಕನಿಷ್ಠ 12 ರಿಂದ 18 ರವರೆಗಿನ ಪರಿಚ್ಛೇದಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಹಿಂದೆ ವಚನಕಾರರು ರಚಿಸಿದ ವಚನೆಗಳೆ ಸಂವಿಧಾನದ ಆಶಯಗಳು ಆಗಿವೆ, ವಿದೇಶಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇಲ್ಲ, ಆದರೆ ಭಾರತದಲ್ಲಿ ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಲಾಗಿದೆ, ಜಿಲ್ಲೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ವೈಚಾರಿಕ ಜಾಗೃತಿ ಮೂಡಿಸಲು ಅಂಬೇಡ್ಕರ್, ಬಸವಣ್ಣ ಮತ್ತು ಗಾಂಧೀಜಿಯವರ ತತ್ವಗಳ ಬಗ್ಗೆ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು “ಶಿಕ್ಷಣವು ಸಮಾಜದ ಪ್ರಗತಿಗೆ ಪ್ರಮುಖ ಅಸ್ತ್ರ”. ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಬದಲಾವಣೆ ತಂದರು. ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಶ್ರಮವನ್ನು ನಾವು ಮರೆಯುವಂತಿಲ್ಲ, ಸಂವಿಧಾನವು ಕೇವಲ ಕಾನೂನಿನ ದಾಖಲೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ಸ್ಫೂರ್ತಿ ಎಂದರು.
ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಬಾಬಾಸಾಹೇಬರು ಪಟ್ಟ ಶ್ರಮ ಹಾಗೂ ಅವರು ಬರೆದ ‘ಜಾತಿ ವಿನಾಶ’ ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಹುಲಿ ಹಾಲಿನ್ನು ಕುಡಿದವನು ಎಷ್ಟು ಬಲಶಾಲಿಯಾಗಿರುತ್ತೇನೋ ಶಿಕ್ಷಣ ಪಡೆದವನು ಅಷ್ಟೇ ಬಲಶಾಲಿಯಾಗುತ್ತಾನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಕರೆ ನೀಡಿದರು.
ಚುನಾವಣೆ ನೀತಿ ಸಂಹಿಗೆ ಜಾರಿಯಲ್ಲಿರುವ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ಬೋದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಬೆಳ್ಳಿ ರಥವು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿವೃತ್ತ ಜಯದೇವ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಉಪಕಾರ್ಯದರ್ಶಿ ಮಮತ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ6 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ5 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ3 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ3 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ5 hours agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ3 days agoಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ

