ದಿನದ ಸುದ್ದಿ
ಪ್ರಸಕ್ತ ಸಂದರ್ಭದಲ್ಲಿ ಬಡವಿಭಾಗಗಳಿಗೆ ಹಣ ವರ್ಗಾವಣೆ ಯೋಜನೆಗಳು
ಈಗ ಪ್ರಸ್ತಾಪಿಸಲಾಗುತ್ತಿರುವ ನಗದು ವರ್ಗಾವಣೆಯು, ಮೋದಿ ಸರಕಾರದ ಪಿಎಂ-ಕಿಸಾನ್ ಆಗಲಿ,ಅಥವ ಕಾಂಗ್ರೆಸಿನ “ನ್ಯಾಯ್” ಅಗಲಿ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನವ-ಉದಾರವಾದಿಬಂಡವಾಳಶಾಹಿಯ ಆಚೆಗೆ ನೋಡಲಾರದ ರಾಜಕೀಯ ಪಡೆಗಳಲ್ಲಿ ಒಂದು ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದ್ದರೆ, ಇನ್ನೊಂದು, ಜಾತ್ಯಾತೀತ ಮನೋಭಾವ ಹೊಂದಿರುವ ರಾಜಕೀಯ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು “ಮಾನವೀಯ ಮುಖ” ತೊಡಿಸುವ ಆಶ್ವಾಸನೆ ಕೊಡುತ್ತಿದೆ.
ಇಂತಹನೆರವೇರಲಾರದಆಶ್ವಾಸನೆಗಳನ್ನುಎಡಪಂಥಿಯರುಬೆಂಬಲಿಸಬೇಕೇ? ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳಿಗೆ ಈ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕುಎನ್ನುತ್ತಾರೆಪ್ರೊ. ಪ್ರಭಾತ್ಪಟ್ನಾಯಕ್. . ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನೇ ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.
ಮೊದಲು ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್ನಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ ಒಂದು ಯೋಜನೆಯ ಘೋಷಣೆ ಮಾಡಿತು. ಈ ಯೋಜನೆಯ ಪ್ರಕಾರ, ಅತಿ ಸಣ್ಣ ರೈತ ಕುಟುಂಬವೊಂದಕ್ಕೆ ವಾರ್ಷಿಕ 12,000 ರೂಗಳನ್ನು ಅವರ ಬ್ಯಾಂಕ್ ಖಾತೆಗೆ ಸರ್ಕಾರವೇ ನೇರವಾಗಿ ವರ್ಗಾಯಿಸುತ್ತದೆ. ಈ ಯೋಜನೆಯು ಸುಮಾರು 12 ಕೋಟಿ ಮಂದಿಗೆ ಅನುಕೂಲ ಕಲ್ಪಿಸುತ್ತದೆ ಎಂದು ಅವರು ಹೇಳುವಾಗ ಚುನಾವಣೆಗಳಲ್ಲಿ ವೋಟು ಬಾಚಿಕೊಳ್ಳುವುದಷ್ಟೇ ಅವರ ಉದ್ದೇಶ. ಆದರೆ, ಅವರು ಘೋಷಣೆ ಮಾಡಿರುವ ಹಣದ ಮೊತ್ತವು ಅದೆಷ್ಟು ಜುಜುಬಿ ಎಂದರೆ, ಅದರ ಬಗ್ಗೆ ಮೋದಿ ಕೂಡ ತಮ್ಮ ಚುನಾವಣಾ ಭಾಷಣಗಳಲ್ಲಿ ತುತ್ತೂರಿ ಊದುವುದನ್ನೇ ನಿಲ್ಲಿಸಿದ್ದಾರೆ. ಬದಲಿಗೆ, ಬಿಜೆಪಿಯು ಪ್ರಜ್ಞಾ ಠಾಕುರ್ ಅಂತಹ ಭಯೋತ್ಪಾದನೆ ಆರೋಪಿಯನ್ನು ಕಣಕ್ಕಿಳಿಸಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ತನ್ನ ಹಳೆಯ ಚಾಳಿಗೆ ಮರಳಿದೆ.
ಈಗ ಕಾಂಗ್ರೆಸ್ನ ಸರದಿ. ಅದು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ “ನ್ಯಾಯ್” ಎಂಬ ಹೆಸರಿನ ಒಂದು ಹೆಚ್ಚು ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಿಸಿದೆ. ಅದರ ಪ್ರಕಾರ, ಸುಮಾರು ಐದು ಕೋಟಿ ಅತ್ಯಂತ ಬಡ ಕುಟುಂಬಗಳಿಗೆ ತಿಂಗಳಿಗೆ 6000 ರೂಗಳನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು.
ಈ ಯೋಜನೆಗೆ ವಾರ್ಷಿಕ 3.6 ಲಕ್ಷ ಕೋಟಿ ರೂ ವೆಚ್ಚ ತಗಲುತ್ತದೆ. (ಮೋದಿ ಸರ್ಕಾರದ ಯೋಜನೆಗೆ ತಗಲುವ ವೆಚ್ಚ ವಾರ್ಷಿಕ 72,000 ಕೋಟಿ ರೂಗಳು). ಕಾಂಗ್ರೆಸ್ನ ಈ ಯೋಜನೆಗೆ ಹಣ ಒದಗಿಸಿಕೊಳ್ಳುವ ಬಗ್ಗೆ ವಿವರಗಳು ಇನ್ನೂ ಲಭ್ಯವಿಲ್ಲವಾದರೂ ಈ ಯೋಜನೆ ಗಂಭೀರತೆಯಿಂದ ಕೂಡಿದೆ ಎಂಬ ಭಾವನೆ ಇದೆ.
ಬಡವರಿಗೆನೆರವಿನ “ಔದಾರ್ಯ”
ಬಡವರಿಗೆ ಈ ದೇಶದಲ್ಲಿ ದೊರೆಯುವ ಯಾವುದೇ ರೀತಿಯ ನೆರವು ಸ್ವಾಗತಾರ್ಹವೇ. “ನ್ಯಾಯ್”ಯೋಜನೆಯಲ್ಲಿ ಎರಡು ಸಮಸ್ಯೆಗಳು ಎದ್ದು ಕಾಣುತ್ತವೆ. ಮೊದಲನೆಯ ಸಮಸ್ಯೆ ಎಂದರೆ, ಇದೊಂದು ನಗದು ಹಣ ವರ್ಗಾವಣೆಯ ಯೋಜನೆ. ಹಾಲಿ ಇರುವ ಕಲ್ಯಾಣ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಅಧಿಕವಾಗಿ ಈ ಯೋಜನೆ ಸೇರಿಕೊಳ್ಳುತ್ತದೆ ಎಂದು ಭಾವಿಸಿಕೊಂಡರೂ ಸಹ, ಬಡವರಿಗೆ ಒಂದಿಷ್ಟು ಹಣ ಕೊಟ್ಟು ಸರ್ಕಾರ ಕೈ ತೊಳೆದುಕೊಳ್ಳುತ್ತದೆ, ಅಷ್ಟೆ. ಶಿಕ್ಷಣ ಮತ್ತು ಆರೋಗ್ಯ ಇಂತಹ ಸಾರ್ವತ್ರಿಕ ಅಗತ್ಯ ಸೇವೆಗಳನ್ನು ಒದಗಿಸುವ ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳುತ್ತದೆ. ಹಾಗಾಗಿ, ಇಂತಹ ಅಗತ್ಯ ಸೇವೆಗಳನ್ನು ಖಾಸಗಿಯಾಗಿ ಒದಗಿಸುವವರು ತಮ್ಮ ಸೇವೆಗಳ ಬೆಲೆ ಏರಿಸಿ ಬಡವರಿಗೆ ವರ್ಗಾವಣೆಯಾದ ಈ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ.
ಎರಡನೆಯ ಸಮಸ್ಯೆ ಎಂದರೆ, ಈ ಯೋಜನೆಯು ಕೆಲವೇ ಮಂದಿಗೆ ಮಾತ್ರ ಫಲ ದೊರಕಿಸುವ ಗುರಿ ಹೊಂದಿದೆ. ಹಾಗಾಗಿ, ಅನೇಕ ಮಂದಿ ಈ ಯೋಜನೆಯಿಂದ ಹೊರಗುಳಿಯುತ್ತಾರೆ. ಮೇಲಾಗಿ, ಫಲಾನುಭವಿಗಳ ಆಯ್ಕೆ ಮನಸೋ ಇಚ್ಛೆಯಾಗಿರುತ್ತದೆ. ಉದಾಹರಣೆಗೆ, ಒಂದು ನಿಗದಿಪಡಿಸಿದ ವರಮಾನ ಮಿತಿಯೊಳಗಿರುವ ಒಂದು ಕುಟುಂಬಕ್ಕೆ ತಿಂಗಳಿಗೆ 6000 ರೂ ದೊರೆಯುವಾಗ, ಆ ಮಿತಿಗಿಂತ ಒಂದು ರೂ ಹೆಚ್ಚಿನ ವರಮಾನವಿರುವ ಕುಟುಂಬಕ್ಕೆ ಏನೂ ಸಿಗುವುದಿಲ್ಲ. ಇದು ಬಡ ಜನತೆಯ ನಡುವೆ ವಿರಸ ಸೃಷ್ಠಿಸುತ್ತದೆ.
ಯಾವುದೇ ಸೀಮಿತ ಫಲಾನುಭವಿ ಯೋಜನೆಯು ಸರ್ಕಾರದ ಔದಾರ್ಯಪೂರ್ಣ ಬಕ್ಷೀಸು ಎನಿಸುತ್ತದೆ. ಇದನ್ನು ಪಡೆಯಲು ಒಬ್ಬ ವ್ಯಕ್ತಿಯು ದೈನ್ಯತೆಯಿಂದ ಕೋರಿಕೆ ಸಲ್ಲಿಸಬೇಕಾಗುತ್ತದೆ. ಇದು, ಮೂಲಭೂತವಾಗಿ ಪ್ರಜಾಪ್ರಭುತ್ವ-ವಿರೋಧಿ ನಡೆಯಾಗುತ್ತದೆ.ಕೆಲವು ವಸ್ತುಗಳು ಮತ್ತು ಸೇವೆಗಳನ್ನುಒಂದು ಸಾರ್ವತ್ರಿಕವಾಗಿ ಹಕ್ಕು ಆಗಿ ಪ್ರತಿ ಪ್ರಜೆಗೂ ಒದಗಿಸಬೇಕಾದ ಸರ್ಕಾರವು, ಅದರ ಬದಲಿಗೆ ಅವನ್ನು ದಾನವೋ ಭಿಕ್ಷೆಯೋ ಎಂಬಂತೆ ಕೊಡುವಂತಾಗುತ್ತದೆ. ಆದ್ದರಿಂದ, ಕೆಲವು ಆರ್ಥಿಕ ಹಕ್ಕುಗಳು ಸಾರ್ವತ್ರಿಕವಾಗಿ ಜಾರಿಯಾದಾಗ ಮಾತ್ರ ಇಂತಹ ಸೀಮಿತ ಫಲಾನುಭವಿ ಯೋಜನೆಗಳು ಬಡ ಜನತೆಯ ನಡುವೆ ಸೃಷ್ಠಿಸುವ ವಿರಸ ನಿವಾರಣೆಯಾಗುತ್ತದೆ.
ವರ್ಗಾವಣೆಯ ವಿಷಯವನ್ನು ಈಗಏಕೆ ಎತ್ತಲಾಗಿದೆ?
ಇಂತಹ ಯೋಜನೆಗಳ ಬಗ್ಗೆ ಅನಿಸಿಕೆಗಳನ್ನು ಬದಿಗೆ ಸರಿಸಿ, ಒಂದು ಪ್ರಶ್ನೆ ಕೇಳಬೇಕಿದೆ: ಇದ್ದಕ್ಕಿದ್ದಂತೆಯೇ ಇಂತಹ ವರ್ಗಾವಣೆಯ ವಿಷಯವನ್ನು ಏಕೆ ಎತ್ತಲಾಗಿದೆ? ಅಭಿವೃದ್ಧಿಯ ಬಗ್ಗೆ ಮಾತನಾಡಿಯೇ ಮೋದಿ 2014ರ ಚುನಾವಣೆ ಗೆದ್ದರು. ಅದಕ್ಕೂ ಹಿಂದೆ, ಜಿಡಿಪಿಯ ಬೆಳವಣಿಗೆ ದರ, ಭಾರತ ಒಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಬಗ್ಗೆ, ಪ್ರಕಾಶಮಾನ ಭಾರತ ಮುಂತಾದ ವಿಷಯಗಳ ಬಗ್ಗೆ ಚರ್ಚೆಯಾಗುತ್ತಿತ್ತೇ ವಿನಃ, ಯಾವತ್ತೂ ಬಡವರಿಗೆ ಹಣ ವರ್ಗಾಯಿಸುವ ಚರ್ಚೆ ಇರಲೇ ಇಲ್ಲ. ಯುಪಿಎ-1 ಸರ್ಕಾರ ಜಾರಿಗೆ ತಂದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ 2014 ರ ಚುನಾವಣೆಯ ಸಂದರ್ಭದಲ್ಲಿಯೂ ಸಹ ಚರ್ಚೆಯಾಗಲಿಲ್ಲ. ಈ ಎಲ್ಲ ಅಂಶಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ ಮತ್ತು ಅದರಿಂದಾಗಿಯೇ ಎಲ್ಲರ ಏಳಿಗೆಯಾಗುತ್ತದೆ ಎಂಬುದಾಗಿ ಎಲ್ಲರೂ ನಂಬಿದ್ದರು. ಆದರೆ, ಈಗ ಇಂತಹ ಬೊಗಳೆಯ ಮಾತುಗಳಿಗೆ ಮತದಾರರು ಮರುಳಾಗುತ್ತಿಲ್ಲ.
ಈಗ ಪ್ರಸ್ತಾಪಿಸಲಾಗುತ್ತಿರುವ ನೇರ ವರ್ಗಾವಣೆಯು, ಸಂಕ್ಷಿಪ್ತವಾಗಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಬಿಕ್ಕಟ್ಟಿಗೆ ಒಳಗಾಗಿರುವ ಅಂಶವನ್ನು ಸೂಚಿಸುತ್ತದೆ. ನವ ಉದಾರ ಬಂಡವಾಳಶಾಹಿಯು ಉತ್ಪಾದಕ ಶಕ್ತಿಗಳನ್ನು ವೇಗವಾಗಿ ಬೆಳೆಸುವುದರಿಂದ ಜಿಡಿಪಿ ಉನ್ನತವಾಗಿ ಬೆಳೆಯುತ್ತದೆ. ಅದರಿಂದ ಎಲ್ಲರೂ ಪ್ರಯೋಜನ ಪಡೆಯುತ್ತಾರೆ ಎಂದು ಪ್ರಚುರಪಡಿಸುತ್ತಿದ್ದ ಅದರ ಸಿದ್ದಾಂತವು ಈಗ ವಿಶ್ವಾಸಾರ್ಹತೆ ಕಳೆದುಕೊಂಡಿದೆ.
ಈ ಸಂಗತಿ ಬಿಜೆಪಿಯು ಹುಚ್ಚು ಹಿಡಿದ ರೀತಿಯಲ್ಲಿ ಪ್ರಚೋದನಾಕಾರಿ ಕೋಮು ಪ್ರಚಾರಕ್ಕೆ ಮರಳಿರುವ ಅಂಶದಲ್ಲಿಯೂ ಕಾಣ ಬರುತ್ತದೆ. ಹಿಂದೆ ಅಭಿವೃದ್ಧಿಯ ಬಗ್ಗೆ ಅವರು ಕೊಟ್ಟ ಭರವಸೆಗಳು ಈಗ ಟೊಳ್ಳು ಶಬ್ದಗಳಾಗಿ ಕೇಳಿಸುತ್ತಿವೆ, ಅವುಗಳನ್ನು ಈಗ ಪುನರಾವರ್ತಿಸುವಂತಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ, ಅಂದರೆ, ಬಂಡವಾಳಶಾಹಿಯ ಬಿಕ್ಕಟ್ಟಿನ ಸಂರ್ಭದಲ್ಲಿ, “ಅಭಿವೃದ್ಧಿ” ಘೋಷಣೆಯ ಮೂಲಕ ಎಳ್ಳಷ್ಟೂ ಪರಿಹಾರ ಸಿಗುವುದಿಲ್ಲ ಎಂಬುದು ಜನತೆಗೆ ಅನುಭವದ ಮೂಲಕವೇ ತಿಳಿದಿದೆ.
ಈ ವಿದ್ಯಮಾನಗಳನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನವ ಉದಾರ ಬಂಡವಾಳಶಾಹಿಯು ಇಂದು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಅದಕ್ಕೆ ಬದ್ಧವಾಗಿರುವ ಒಂದು ರಾಜಕೀಯ ಪಡೆ ಸನ್ನಿಗೆ ಒಳಗಾದ ರೀತಿಯಲ್ಲಿ ಕೋಮು ಭಾವನೆಗಳನ್ನು ಕೆಣಕಿ ವೋಟು ಬಾಚಿಕೊಳ್ಳುವ ಸನ್ನಾಹದಲ್ಲಿ ತೊಡಗಿದೆ. ಅದೇ ಸಮಯದಲ್ಲಿ, ಇನ್ನೊಂದು ರಾಜಕೀಯ ಪಡೆ ಇನ್ನೊಂದು ರೀತಿಯಲ್ಲಿ ಕಾರ್ಯಮಗ್ನವಾಗಿದೆ. ವಿಶಾಲ ಜಾತ್ಯಾತೀತ ಮನೋಭಾವ ಹೊಂದಿರುವ ಈ ಪಡೆಯು ನವ ಉದಾರ ಬಂಡವಾಳಶಾಹಿಗೆ ಒಂದು ಮಾನವೀಯ ಮುಖ ತೊಡಿಸಿ, ಸಮಾಜದ ತಳಸ್ತರದದಲ್ಲಿವ ಒಟ್ಟು ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಮಂದಿಗೆ ನೇರ ಹಣ ವರ್ಗಾವಣೆಯ ಮೂಲಕ ನವ ಉದಾರ ಬಂಡವಾಳಶಾಹಿಯ ದಿಕ್ಪಥವನ್ನು ಪರಿಷ್ಕರಿಸುವ ಆಶ್ವಾಸನೆ ಕೊಡುತ್ತಿದೆ.
ನಿಜ, ಇಂತಹ ನೇರ ಹಣ ವರ್ಗಾವಣೆ ಯೋಜನೆ ಕಾರ್ಯಸಾಧ್ಯ, ಅವಕ್ಕೆ ಹಣ ಹೊಂದಿಸಿಕೊಳ್ಳುವುದು ಸಾಧ್ಯವಿದೆ. ಅದಕ್ಕೆ ತಗಲುವ ವೆಚ್ಚವು ಜಿಡಿಪಿಯ ಸುಮಾರು ಶೇ.2 ರಷ್ಟಾಗುತ್ತದೆ. ಆದರೆ, ನವ ಉದಾರ ಬಂಡವಾಳಶಾಹಿಯ ಅಂತರ್ಗತ ತರ್ಕವೇ ಇಂತಹ ವರ್ಗಾವಣೆಗೆ ಅಡ್ಡಿಯಾಗುತ್ತದೆ. ಜಿಡಿಪಿಯ ಸುಮಾರು ಶೇ.2 ರಷ್ಟಾಗುವ ಈ ಮೊತ್ತವನ್ನು ಬಂಡವಾಳದಾರರ ಮೇಲೆ ತೆರಿಗೆ ಹಾಕಿಯೋ ಅಥವಾ ಸಮಾಜದ ಶ್ರೀಮಂತ ವಿಭಾಗಗಳ ಮೇಲೆ ತೆರಿಗೆ ಹಾಕುವ ಮೂಲಕವೋ ಹೊಂದಿಸಿಕೊಳ್ಳಬಹುದು. ಅಥವಾ, ವಿತ್ತೀಯ ಕೊರತೆಯ ಗಾತ್ರವನ್ನು ಹೆಚ್ಚಿಸಿಕೊಳ್ಳುವ ಮೂಲಕ, ಅಥವಾ ಈ ಎರಡೂ ವಿಧಾನಗಳ ಸಂಯೋಜನೆಯ ಮೂಲಕವೂ ಹೊಂದಿಸಿಕೊಳ್ಳಬಹುದು.
ಆದರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವ ಈ ಎರಡೂ ವಿಧಾನಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅನಿಷ್ಟವೆಂದೇ ಬಗೆಯುತ್ತದೆ. ಈ ಕಾರಣದಿಂದಾಗಿ, ನೇರ ಹಣ ವರ್ಗಾವಣೆಯ ಯೋಜನೆಯನ್ನು ಜಾರಿಗೊಳಿಸ ಬಯಸುವ ಯಾವುದೇ ಸರ್ಕಾರವು ನವ ಉದಾರವಾದದ ಏರ್ಪಾಡಿನಲ್ಲಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ (ಆಗ, ಈ ಬದಲಾವಣೆಯ ಕ್ರಿಯೆಯು ತನ್ನದೇ ಒಂದು ಗತಿ ತಾರ್ಕಿಕ ಚಲನೆಯನ್ನು ಹೊಮ್ಮಿಸುತ್ತದೆ). ಇದು ಸಾಧ್ಯವಾಗದಿದ್ದಲ್ಲಿ, ಹಾಲಿ ಕಲ್ಯಾಣ ಕಾರ್ಯಕ್ರಮಗಳನ್ನು ನಿಲ್ಲಿಸುವ ಮೂಲಕ ವರ್ಗಾವಣೆ ಯೋಜನೆಗೆ ಹಣ ಹೊಂದಿಸಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ವರ್ಗಾವಣೆಯ ಉದ್ದೇಶವೇ ವಿಫಲವಾಗುತ್ತದೆ.
ಕಲ್ಯಾಣವೆಚ್ಚಗಳನ್ನುಸ್ವಾಗತಿಸುವುದುಪರಿಷ್ಕರಣವಾದವೇ?
ಬಂಡವಾಳಶಾಹಿ ವ್ಯವಸ್ಥೆಯು ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಲುವಾಗಿಯೇ ಸ್ವಲ್ಪ ಮಟ್ಟಿನ ನೆರವನ್ನು ಬಡವರಿಗೆ ಒದಗಿಸಬಲ್ಲದು, ಮತ್ತು ಒದಗಿಸುತ್ತದೆ, ಇಂತಹ ವರ್ಗಾವಣೆ ಯೋಜನೆಗಳನ್ನು, ಅಥವ ಒಟ್ಟಾರೆಯಾಗಿ ಕಲ್ಯಾಣ ವೆಚ್ಚಗಳನ್ನು ಸ್ವಾಗತಿಸುವುದು ಪರಿಷ್ಕರಣವಾದ ಆಗುತ್ತದಷ್ಟೇ ಎಂಬುದಾಗಿ ವಾದಿಸುವ ಪ್ರವೃತ್ತಿ ಕೆಲವು ಎಡ ಪಂಥೀಯ ವಲಯಗಳಲ್ಲಿದೆ. ನೇರ ಹಣ ವರ್ಗಾವಣೆ ಅಥವಾ ಕಲ್ಯಾಣ ಕಾರ್ಯಕ್ರಮಗಳು ವ್ಯವಸ್ಥೆಯಲ್ಲಿ ಕಾರ್ಯಸಾಧ್ಯವಾದ ಕೇವಲ ಸುಧಾರಣಾ ಕ್ರಮಗಳು. ಅದಕ್ಕೆ ಪ್ರಶಂಸೆಯ ಅಗತ್ಯವಿಲ್ಲ ಎನ್ನುತ್ತಾರೆ ಅವರು.
ವ್ಯಂಗ್ಯದ ಸಂಗತಿಯೆಂದರೆ ಬಡವರಿಗೆ ನೆರವು ಒದಗಿಸುವ ಬಗ್ಗೆ ನವ ಉದಾರ ಬಂಡವಾಳಶಾಹಿಯ ಸಮರ್ಥಕರು ಹೊಂದಿರುವ ಅಭಿಪ್ರಾಯವೂ ಇದೇ ರೀತಿಯಲ್ಲಿದೆ. ಬಡವರಿಗೆ ನೆರವು ಒದಗಿಸಬಹುದಾದಷ್ಟು ಹೊಂದಿಕೆಯನ್ನು ಅದು ಮಾಡಿಕೊಳ್ಳಬಲ್ಲದು, ಅದರ ಅಂತರ್ಗತ ತರ್ಕವು ಇಂತಹ ನೆರವಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ವಾದಿಸುತ್ತಾರೆ.
ಶ್ರೀಮಂತರಿಗೆ ಮತ್ತು ಕಾರ್ಪೊರೇಟ್ಗಳಿಗೆ ತೆರಿಗೆ ಕಡಿತ ಮಾಡಿದರೆ ಅದರ ಫಲವು ಕೆಳಕ್ಕೆ ಜಿನುಗಿ ತಳಸ್ತರಗಳಿಗೂ ಪ್ರಯೋಜನ ಸಿಗುತ್ತದೆ ಎಂಬ ಜಿನುಗು ಸಿದ್ಧಾಂತವು ಅಪಹಾಸ್ಯಗೊಳಗಾಗಿದ್ದ ಸಂದರ್ಭದಲ್ಲಿ ನವ ಉದಾರ ಬಂಡವಾಳಶಾಹಿಯ ಹೊಸ ಸಮರ್ಥನೆಯಾಗಿ, ಹನ್ನೊಂದನೇ ಪಂಚವಾರ್ಷಿಕ ಯೋಜನೆಯ ದಸ್ತಾವೇಜಿನಲ್ಲಿ, ಜಿಡಿಪಿ ಉನ್ನತವಾಗಿ ಬೆಳೆದಾಗ ಮಾತ್ರ ಸರ್ಕಾರದ ಆದಾಯವೂ ವೇಗವಾಗಿ ಬೆಳೆದು ಬಡತನ ತೊಡೆದು ಹಾಕುವ ಕಲ್ಯಾಣ ಕಾರ್ಯಕ್ರಮಗಳಿಗೆ ಹೆಚ್ಚು ಹಣ ದೊರೆಯುತ್ತದೆ ಎಂಬುದಾಗಿ ಹೇಳಲಾಗಿತ್ತು. ಇದೊಂದು ಸೋಗು. ಬಡತನ ನಿವಾರಿಸುವ ಸಲುವಾಗಿ ಅಗತ್ಯ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ನವ ಉದಾರ ಆಳ್ವಿಕೆಯು ಅಡ್ಡಿಪಡಿಸುವುದಿಲ್ಲ ಎಂದು ತೋರಿಸಲು ಈ ರೀತಿಯ ಸೋಗು ಹಾಕಲಾಗಿತ್ತು.
ಸರ್ಕಾರದ ಈ ಅಭಿಪ್ರಾಯ ಸರಿಯೇ ಇದ್ದರೆ, ನವ ಉದಾರ ಆಳ್ವಿಕೆಯಲ್ಲಿ ಉನ್ನತವಾಗಿ ಜಿಡಿಪಿ ಬೆಳೆದದ್ದರ ಜೊತೆಯಲ್ಲೇ ಬಡತನವೂ ಅಗಾಧವಾಗಿ ಬೆಳೆಯುತ್ತಿರಲಿಲ್ಲ. ಹಸಿವೆಯ ಹಾಹಾಕಾರ ತೀವ್ರಗೊಳ್ಳುತ್ತಿರಲಿಲ್ಲ. ನಿರುದ್ಯೋಗ ಬೃಹದಾಕಾರವಾಗಿ ಬೆಳೆಯುತ್ತಿರಲಿಲ್ಲ. ದುಡಿಯುವ ಜನತೆಯ ತಲಾ ವರಮಾನವು ಉದಾರೀಕರಣ ಪೂರ್ವದಲ್ಲಿ ಇದ್ದುದಕ್ಕಿಂತಲೂ ಕೆಳಗೆ ಇಳಿಯುವ ಮಟ್ಟಿಗೆ ಅವರನ್ನು ಹಿಂಡುತ್ತಿರಲಿಲ್ಲ. ಇವೆಲ್ಲವೂ ಅಲ್ಲಗಳೆಯಲಾಗದ ವಾಸ್ತವ ಸಂಗತಿಗಳು.
ಸ್ವಲ್ಪವೂ ಜಗ್ಗದ ನವ ಉದಾರ ಬಂಡವಾಳಶಾಹಿಯ ವರ್ತನೆಯಿಂದಾಗಿಯೇ ಇವೆಲ್ಲವೂ ಘಟಿಸಿವೆ. ಜೊತೆಯಲ್ಲಿ, ಅದರ ಅಂತರ್ಗತ ತರ್ಕದ ಅಗತ್ಯವಾಗಿ ಒಂದು ಧೃವದಲ್ಲಿ ಬೆಳೆಯುತ್ತಲೇ ಹೋಗುವ ಐಶ್ವರ್ಯವನ್ನೂ, ಇನ್ನೊಂದು ಧೃವದಲ್ಲಿ ಹೆಚ್ಚುತ್ತಲೇ ಹೋಗುವ ಬಡತನವನ್ನೂ ಹುಟ್ಟಿಸಿದೆ. ಇಂತಹ ಒಂದು ವ್ಯವಸ್ಥೆಯೊಳಗೆ ಬಡತನ ನಿವಾರಣೆ ಸಾಧ್ಯವೇ ಇಲ್ಲ. ಬಡತನ ನಿವಾರಣೆ ಸಾಧ್ಯವಾಗಬೇಕು ಎಂದಾದರೆ ನವ ಉದಾರ ಆಳ್ವಿಕೆಯ ಏರ್ಪಾಡನ್ನು ಮೀರಲೇಬೇಕಾಗುತ್ತದೆ.
ಕರಾರುವಾಕ್ಕಾಗಿ ಇದೇ ಕಾರಣದಿಂದಾಗಿ, ಬಡವರಿಗೆ ಪರಿಹಾರ ದೊರಕಿಸುವ ಆಶ್ವಾಸನೆಯಿಂದ ಕೂಡಿದ ಕ್ರಮಗಳನ್ನು ಕೈಗೊಳ್ಳಲು ನವ ಉದಾರವಾದದಿಂದ ಆಚೆ ನೋಡಲಾಗದ ರಾಜಕೀಯ ಪಡೆಗಳು ಮುಂದಾದಾಗ ಎಡ ಪಂಥೀಯರು ಅದನ್ನು ಸ್ವಾಗತಿಸಬೇಕು. ಏಕೆಂದರೆ, ನವ ಉದಾರವಾದದ ತರ್ಕ ಮತ್ತು ಚಾಳಿಯಿಂದಾಗಿ ಒಂದೋ ಈ ಆಶ್ವಾಸನೆ ಕೊಟ್ಟವರು ಅದನ್ನು ಮುರಿಯುತ್ತಾರೆ, ಆಗ ಎಡ ಶಕ್ತಿಗಳು ಅದನ್ನು ಎತ್ತಿ ತೋರಿಸಿ ಅದರ ವಿರುದ್ಧ ಹೋರಾಡಬೇಕಾಗುತ್ತದೆ, ಇಲ್ಲವೇ ನವ ಉದಾರ ವ್ಯವಸ್ಥೆಯನ್ನು ಮೀರಲು ಆರಂಭಗೊಳ್ಳುವ ಒಂದು ಗತಿತಾರ್ಕಿಕ ಪ್ರಕ್ರಿಯೆಯನ್ನು ಎಡ ಶಕ್ತಿಗಳು ಉದ್ದೀಪಿಸಬಹುದು.
ನವ ಉದಾರವಾದಿ ಬಂಡವಾಳಶಾಹಿಯ ಬಿಕ್ಕಟ್ಟಿನ ಸಮಯದಲ್ಲಿ ಮತ್ತು ಅದರ ಪರಿಣಾಮವಾಗಿ ಜನತೆ ಜರ್ಜರಿತರಾಗಿದ್ದಾರೆ. ಅವರ ಆಕ್ರೋಶವನ್ನು ಬೇರೆಡೆಗೆ ತಿರುಗಿಸುವ ಉದ್ದೇಶದಿಂದ ಕಾರ್ಪೊರೇಟ್-ಹಣಕಾಸು ಕುಳಗಳು ಕೋಮುವಾದಿ ಮತ್ತು ಛಿದ್ರಕಾರಿ ಅಜೆಂಡಾ ಹೊಂದಿರುವ ಶಕ್ತಿಗಳನ್ನು ಪ್ರೋತ್ಸಾಹಿಸುವ ಪ್ರವೃತ್ತಿ ಬೆಳೆಸಿಕೊಂಡಿರುವ ಸನ್ನಿವೇಶದಲ್ಲಿ, ಜನ ಜೀವನದ ದೈಹಿಕ ಸ್ಥಿತಿ-ಗತಿಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸಿ ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಯಾವುದೇ ಕಾರ್ಯಕ್ರಮವು ಆ ಕಾರಣದಿಂದಾಗಿಯೇ ಕಾರ್ಪೊರೇಟ್-ಕೋಮುವಾದಿ ಮೈತ್ರಿಗೆ ಎದುರಾಗುವ ಒಂದು ಪ್ರಗತಿಪರ ಪ್ರತಿ-ಶಕ್ತಿಯಾಗುತ್ತದೆ. ಜನರ ಜೀವನ, ಅವರ ಸ್ಥಿತಿ-ಗತಿಗಳನ್ನು ಸುಧಾರಿಸುವ ಕಾರ್ಯಕ್ರಮ ಮತ್ತು ನವ ಉದಾರವಾದಿ ಬಂಡವಾಳಶಾಹಿಯ ತರ್ಕ ಇವುಗಳ ನಡುವೆ ಇರುವ ವೈರುಧ್ಯದ ಅರಿವಿಲ್ಲದ ಬೂರ್ಜ್ವಾ ರಾಜಕೀಯ ಪಡೆಗಳು ಜನರ ಸ್ಥಿತಿ-ಗತಿಗಳು ಸುಧಾರಿಸಬೇಕೆಂದು ಸಮರ್ಥಿಸುವುದು ಅಷ್ಟರಮಟ್ಟಿಗೆ ಒಳ್ಳೆಯದೇ.
-ಪ್ರೊ. ಪ್ರಭಾತ್ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
( ಈ ವಾರದ ಜನಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
~ ಯೋಗೇಶ್ ಮಾಸ್ಟರ್
ಮೆಟ್ಟಿಲುಗಳ ಮೇಲೆ ನಿಂತು ದಿಟ್ಟಿಸುತ್ತಿರುವವನ ನೋಡುಗರು ಏನೆಂದು ತಿಳಿದಾರು? ಹತ್ತುತ್ತಿರುವನೆಂದೋ, ಇಳಿಯುತ್ತಿರುವನೆಂದೋ? ಯಾರೇನಾದರೂ ಅಂದುಕೊಳ್ಳಲಿ ಹೊರಗೆ ಹತ್ತುತ್ತಿರುವವನು ಇಳಿಯುತ್ತಿರಬಹುದು. ಇಳಿಯುತ್ತಿರುವವನು ಹತ್ತುತ್ತಿರಬಹುದು.
ಈಗ ಯಾರೂ ನೋಡುತ್ತಿಲ್ಲ. ನಾನು ಹತ್ತುತ್ತಿರುವೆನೋ ಇಳಿಯುತ್ತಿರುವೆನೋ ಯಾರೂ ನೋಡುತ್ತಿಲ್ಲ. ಯಾರೊಬ್ಬರೂ ಇಲ್ಲದಿರುವಾಗಲೂ ನಾನು ನನಗೆ ಪ್ರಾಮಾಣಿಕವಾಗಿ ಇರದಿದ್ದರೆ? ‘ಆತ್ಮಾರಾಮ್, ಈಗೇನು ನೀನು ಏರುತ್ತೀಯೋ, ಇಳಿಯುತ್ತೀಯೋ?’ ಬೇರೊಬ್ಬರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿಬಿಡಬಹುದು. ನಾನೇ ಹಾಕಿಕೊಳ್ಳುವ ಪ್ರಶ್ನೆಗೆ ನಾನೇ ಉತ್ತರಿಸುವ ಧೈರ್ಯ ಅಷ್ಟು ಸುಲಭದಲ್ಲಿ ಬರುವುದಿಲ್ಲ.
ನೂರಾರು ಆಪ್ತ ಸಮಾಲೋಚನೆಗಳಲ್ಲಿ ಸಾವಿರಾರು ಪ್ರೊಜೆಕ್ಟಿವ್ ಪ್ರಶ್ನೆಗಳನ್ನು ಕೇಳಿದ್ದೇನೆ. ನನಗೆ ನಾನೇ ಪ್ರೊಜೆಕ್ಟ್ ಮಾಡುವ ಪ್ರಶ್ನೆಯನ್ನು ನಾನು ಹಾಕಿಕೊಳ್ಳಲು ಇದುವರೆಗೂ ಆಗಿಲ್ಲ.
ಇವತ್ತು ಹಾಕಿಕೊಂಡೆ. ಅದ್ಯಾಕೋ ಮೆಟ್ಟಿಲುಗಳು ನನ್ನ ಪ್ರಶ್ನಿಸಿದವು. ಹೇ ಆತ್ಮಾರಾಮ್, ಈಗೇನು? ನೀನು ಏರುತ್ತೀಯೋ? ಇಳಿಯುತ್ತೀಯೋ?’ ಏರಿದ್ದೇನೆಂದುಕೊAಡು ಇಳಿದಿರುವ ನಾನು ಹೇಗೆ ಉತ್ತರಿಸಲಿ? ಮೆಲ್ಲನೆ ಕುಳಿತುಬಿಟ್ಟೆ.
ಹೌದು, ಈ ಮೆಟ್ಟಿಲುಗಳು ಬರೀ ಏರಲಲ್ಲ, ಇಳಿಯಲೂ ಅಲ್ಲ. ಕುಳಿತುಕೊಳ್ಳಲೂ ಹೌದು.
ಒಳಗಿರುವ ಮಾತುಗಳು ಹೊರಗೆಡವಲೂ ಅಲ್ಲ, ಒಳಗೆ ನುಂಗಿಕೊಳ್ಳಲೂ ಅಲ್ಲ. ಆದರೆ ಅವು ಬಹುಕಾಲದಿಂದ ಕಾಯುತ್ತಲೇ ಇವೆ. ಕಾದು ಕಾದು ಬಿಸಿಯೇರಿದೆ. ಈಗ ಹೊರಗೆಡಬೇಕು ಅಥವಾ ನುಂಗಬೇಕು. ಹಾಗೆಯೇ ತಣ್ಣಗಾಗುವ ಬಗೆಯೇನಾದರೂ ಇದೆಯಾ?
ನೋಡುಗರ ಕಣ್ಣಲ್ಲಿ ನಾನೊಂದು ಪರಮ ಶಾಂತಿ. ಆದರೆ ಅದು ನನ್ನೊಳಗೆ ಬರೀ ಭ್ರಾಂತಿ. ಒಳಗೆ ಪದೇ ಪದೇ ಪ್ರತಿಧ್ವನಿಸುತ್ತಿರುವ ಸದ್ದುಗಳ ಸೊಲ್ಲಡಗಿಸಿ ಸುಮ್ಮನಿರಿಸಲು ಹೇಗಾದೀತು? ಆಪ್ತ ಸಮಾಲೋಚನೆಗೆ ಬಂದವರು ಇದನ್ನು ಹೇಳಿದರೆ, “ಪದೇ ಪದೇ ಆಲೋಚನೆಗಳು ಬರುತ್ತಿದ್ದರೆ ಅದನ್ನು ಚಿಂತಾಚಕ್ರ ಅಥವಾ ಡಿumiಟಿಚಿಣioಟಿ ಎನ್ನುತ್ತೇವೆ. ಅದರಿಂದ ನೀವು ಹೊರಗೆ ಬರಬೇಕು” ಎಂದು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ನನಗೆ ನಾನು ಎಂತದ್ದೋ ಒಂದಷ್ಟು ಸಲಹೆ ಸೂಚನೆಗಳನ್ನು ಕೊಟ್ಟುಕೊಳ್ಳಲು ಆಗದು.
ಸದ್ದಿಲ್ಲದ ಹಗಲಲ್ಲಿ, ಸದ್ದಡಗಿದಾಗ ರಾತ್ರಿಯಲ್ಲಿ ಹಳೆಯ ಮಾತುಕತೆಗಳು, ತಪುö್ಪಗಳು, ಬೇಸರಗಳು, ಪಶ್ಚಾತ್ತಾಪಗಳು ಮತ್ತು ವೈಫಲ್ಯಗಳು ಹಿಂದೆ ಹಿಂದೆಯೇ ಕಡಲ ತಡಿಗೆ ಬಂದಪ್ಪಳಿಸುವ ತಡೆಯಲಾಗದ ಅಲೆಗಳಾಗಿರುತ್ತವೆ. ಬೆಳಗಾದಾಗ ಗತ್ಯಂತರವಿಲ್ಲದೇ ಮಾಡುವ ಗದ್ದಲದಲ್ಲಿ ರಾತ್ರಿಗಾಗಿ ಕಾಯುತ್ತಾ ಒಳಗವಿತಿರುವ ಹೆಗ್ಗಣಗಳಂತೆ, ಜಿರಳೆಗಳಂತೆ ಅದೆಲ್ಲೋ ಬಿದ್ದಿರುತ್ತವೆ. ರಾತ್ರಿಯಾದರೆ ಸಾಕು ಮೆದುಳೆಂಬ ಒಡಕಲು ಪ್ರೊಜೆಕ್ಟರ್ ತನ್ನ ಮಾಸಲು ಸಿನಿಮಾವನ್ನು ತಂತಾನೆ ತೋರಿಸಲಾರಂಭಿಸುತ್ತವೆ.
ಅವರಿಗೆ ಇವರಿಗೆ ನಾನು ಹೇಳುವುದು ಅದೆಷ್ಟು ಕಪಟತನದ್ದು!
‘ಇದು trap of overthinking. ನೀವು ಹೊರಗೆ ಬರಬೇಕು.’
ನನಗೇ ಅವನ್ನು ನೋಡಿಕೊಳ್ಳಲು ಆಗಿಲ್ಲ. ನೋಡಿಕೊಳ್ಳಲು ಆಗಿಲ್ಲ ಎನ್ನುವುದಕ್ಕಿಂತ ನೋಡಿಕೊಳ್ಳಲು ಭಯ. ನನಗೆ ನನ್ನ ಮೇಲೆಯೇ ಜಿಗುಪ್ಸೆ ಬಂದುಬಿಟ್ಟೀತೆAಬ ಭಯ. ಆದರೆ ನೋಡಿಕೊಂಡರೆ ಬಾಧೆ ನಿವಾರಣೆಯಾಗಬಹುದು. ಚಿಂತಾಚಕ್ರ ತಿರುಗುತ್ತಿದ್ದಂತೆ, ಬಹುಕಾಲ ತಿರುಗುತ್ತಲೇ ಇದ್ದಂತೆ ಸವೆಯುವುದು. ಆ ಸವಕಳಿ ಚಿಂತಾಚಕ್ರವನ್ನು ಇಲ್ಲವಾಗಿಸದು. ಆದರೆ ಅದು ಸುತ್ತಲು ಮಧ್ಯದ ಕೀಲಾಗಿರುವ ನನ್ನ ಬಳಲಿಸುವುದು.
ಆ ಬಳಲಿಕೆಯೇ ನನ್ನ ವಯಸ್ಸಿಗಿಂತ ಹೆಚ್ಚು ಆಯಸ್ಸಾದಂತೆ ಕಾಣಿಸುವುದು. ಇರುವುದಕ್ಕಿಂತ ದೇಹ ಭಾರವಾಗಿರುವುದು.
ಹೌದಲ್ಲಾ, ಏರುತ್ತಲೋ, ಇಳಿಯುತ್ತಲೋ ಹೆಣಗಾಡುವ ಬದಲು ಕುಳಿತಾದ ಅಂದೆತದ್ದೋ ಪ್ರಶಾಂತತೆ ಒದಗಿದೆ ಇಂದು! ನನಗೆ ನಾನೇ ಹಳೆಯ ಸ್ನೇಹಿತನಾಗಿ ಕುಳಿತುಕೊಂಡು ನನ್ನದೇ ಮಾತುಗಳಿಗೆ ನಾನೇ ಕಿವಿಯಾಗುವ ಸರತಿ ಇಂದು ಒದಗಿತೇ?
ನನಗೆ ನಾನೇ ಹೇಳಿಕೊಳ್ಳುವುದು ಪರಕೀಯವೆನ್ನಿಸಿದರೂ ಒಂದಿಷ್ಟು ಉಸಿರಾಡಲು ಸರಾಗವೆನಿಸಿದೆ. ಕೈ ಮುಷ್ಟಿಗಟ್ಟಿದರೂ ಒಳಗೇ ಸಡಿಲವಾಯಿತು. ಮಡಿಸಿದ ಮೊಣಕೈ ತೊಡೆಯ ಮೇಲೆ ಒತ್ತುವುದನ್ನು ನಿಲ್ಲಿಸಿ ಹಗುರವಾಗಿ ಹತ್ತಿಯಂತೆ ಊರಿತು. ಮಧ್ಯಾಹ್ನದಲ್ಲೂ ತಂಗಾಳಿಯು ಮುಖಕ್ಕೆ ಮುತ್ತಿಡತೊಡಗಿತು.
ನಾಳೆ ಈ ಚಿಂತಾಚಕ್ರ ಮತ್ತೆ ತಿರುಗಣಿಯಾಗಬಹುದೇನೋ. ಆದರೆ ಚಿಂತೆಗಳ ನಡುನಡುವೆ ಒಂದಿಷ್ಟು ಉಸಿರುತೆಗೆದುಕೊಳ್ಳಲು ಸಾಧ್ಯವಾಗಿದ್ದು, ಏರುವುದನ್ನು, ಇಳಿಯುವುದನ್ನು ಬಿಟ್ಟು ಈ ಮೆಟ್ಟಿಲುಗಳ ಮೇಲೆ ಕೂತಿದ್ದಕ್ಕೆ.
‘ಹೌದು ಕಣೋ ಆತ್ಮಾ, ಹೌದು!’

ದಿನದ ಸುದ್ದಿ
ವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
ಸುದ್ದಿದಿನ,ಬೆಂಗಳೂರು:ಕೋಡಿಪಾಳ್ಯದಲ್ಲಿರುವ ವಿಶ್ವ ವೆಂಕಟೇಶ್ವರ ವಿದ್ಯಾಧಾನ ಕೇಂದ್ರದ ವಿರುದ್ಧ ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದಿಂದ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುವ ಹುನ್ನಾರ ಕಳೆದ 3 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಗಂಭೀರ ಆರೋಪ ಮಾಡಿದೆ.
ಕೇವಲ 20 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯು ಇಂದು ವಿವಿಐಎಸ್ ಶಾಲೆ, ಕೆಬಿಸಿ ಪಿಯು ಕಾಲೇಜು ಮತ್ತು ವಿವಿ ಪದವಿ ಕಾಲೇಜುಗಳನ್ನು ಹೊಂದಿದೆ. ಬಡ ಕೂಲಿ ಕಾರ್ಮಿಕರು ಮತ್ತು ವಲಸೆ ಕುಟುಂಬಗಳ 600ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಪದವಿ ಕಾಲೇಜು ಆರಂಭಿಸಲು ಪಕ್ಕದಲ್ಲಿರುವ ವಿಠಲ ರುಕ್ಮಿಣಿ ಮಠದ ಖಾಲಿ ಕಟ್ಟಡವನ್ನು 5 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲಾಗಿತ್ತು. ವಿಠಲಗಿರಿಧಾಮದ ಮಠಾಧೀಶರಾದ ಶ್ರೀ ನಿರ್ಮಲಾನಂದ ಪುರಿ ಅವರು ಪ್ರತಿ ವರ್ಷ 5% ಬಾಡಿಗೆ ಹೆಚ್ಚಳದ ಷರತ್ತಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು.
ಸಂಸ್ಥೆಯ ಅಧ್ಯಕ್ಷರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ಖಾಲಿ ಇದ್ದ ದೊಡ್ಡ ಕೊಠಡಿಗಳಿಗೆ ವಿಭಜನೆ, ಬಾಗಿಲುಗಳನ್ನು ಅಳವಡಿಸಿ, ಫರ್ನಿಚರ್ ತುಂಬಿ ತರಗತಿಗಳನ್ನು ಆರಂಭಿಸಿದರು. ಕಳೆದ 7 ವರ್ಷಗಳಿಂದ ಈ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿದ್ದು, ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ಮಠದ ಮತ್ತೊಂದು ಭಾಗವನ್ನು “ಟಾಮ್ ಅಂಡ್ ಜೆರ್ರಿ” ವಿಶೇಷ ಮಕ್ಕಳ ಶಾಲೆಗೆ ಬಾಡಿಗೆಗೆ ನೀಡಲಾಗಿದೆ.
ಆದರೆ ಕಳೆದ 3 ವರ್ಷಗಳಿಂದ ಶ್ರೀ ನಿರ್ಮಲಾನಂದ ಪುರಿ ಮತ್ತು ಅವರ ಹಿಂಬಾಲಕರು ಶೈಕ್ಷಣಿಕ ವಾತಾವರಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಾಲೇಜಿನ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳ ಪ್ರಯೋಗ, ಪರೀಕ್ಷಾ ಸಮಯದಲ್ಲಿ ಸ್ವಾಮೀಜಿಯ ಹಿಂಬಾಲಕರು ಕಾಲೇಜಿನ ಒಳಗೆ ನುಗ್ಗಿ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಂಡು ತಪ್ಪು ಮಾಹಿತಿ ಹರಡುವ ಮೂಲಕ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.
ಇದರ ಜೊತೆಗೆ ಇನ್ನೊಂದು ಗಂಭೀರ ಆರೋಪ ಕೇಳಿಬಂದಿದೆ. ವಿಠಲ ರುಕ್ಮಿಣಿ ಮಠದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು *”ಗೋಶಾಲೆ ಮತ್ತು ವೃದ್ಧಾಶ್ರಮ”*ಕ್ಕಾಗಿ ಮಂಜೂರು ಮಾಡಲಾಗಿದೆ. ಆದರೆ ಮಂಜೂರಾದ ಉದ್ದೇಶವನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಈ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಂತಹಂತವಾಗಿ ಬಾಡಿಗೆಗೆ ನೀಡಲಾಗುತ್ತಿದೆ.
ಸಭಾಂಗಣದಲ್ಲಿದ್ದ ದೇವರ ಮೂರ್ತಿಯನ್ನು ಸಹ ಹಣಕ್ಕಾಗಿ ಬೇರೆ ಕಡೆಗೆ ವರ್ಗಾಯಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ. ಸರ್ಕಾರವು ಈ ಜಾಗವನ್ನು ಗೋಶಾಲೆ ಮತ್ತು ವೃದ್ಧಾಶ್ರಮ ನಡೆಸುವುದಕ್ಕೆ ಮಂಜೂರು ಮಾಡಿದ್ದರೂ, ಇಲ್ಲಿ ಯಾವುದೇ ಗೋಶಾಲೆ ಅಥವಾ ವೃದ್ಧಾಶ್ರಮ ನಡೆಯುತ್ತಿಲ್ಲ. ಮಠದ ಆಸ್ತಿಯನ್ನು ಸ್ವಾಮೀಜಿ ಮತ್ತು ಅವರ ಹಿಂಬಾಲಕರು ಕಮರ್ಷಿಯಲ್ ಉದ್ದೇಶಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಆಡಳಿತ ಮಂಡಳಿಯ ಆರೋಪ.
ಈ ಬೆಳವಣಿಗೆಯಿಂದಾಗಿ ಕಾಲೇಜಿನಲ್ಲಿ ಓದುತ್ತಿರುವ ನೂರಾರು ಬಡ ವಿದ್ಯಾರ್ಥಿಗಳ ಭವಿಷ್ಯ ಪ್ರಶ್ನಾರ್ಥಕವಾಗಿದೆ. ಕಂದಾಯ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ತನಿಖೆ ನಡೆಸಿ ಮಠದ ಸ್ವಾಮೀಜಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಆಡಳಿತ ಮಂಡಳಿ ಮತ್ತಷ್ಟು ಆರೋಪಿಸಿರುವ ಪ್ರಕಾರ, ಮಠದ ಸ್ವಾಮೀಜಿ ಸಾರ್ವಜನಿಕವಾಗಿ “ಮಠದ ಆಸ್ತಿಯನ್ನು ಸರ್ಕಾರದಿಂದ 54 ಲಕ್ಷ ರೂ.ಗೆ ಖರೀದಿ ಮಾಡಿದ್ದೇನೆ” ಎಂದು ಹೇಳಿಕೊಂಡಿದ್ದಾರೆ. ಅವರ ಮೇಲೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಒಬ್ಬ ವೃದ್ಧ ಮಹಿಳೆಯನ್ನು ಮೋಸ ಮಾಡಿ ಸೈಟ್ ಕಬಳಿಕೆ ಮಾಡಿ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ. ಅಲ್ಲದೆ ಒಬ್ಬ ವೈದ್ಯರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಜಾಗ ನೀಡುವುದಾಗಿ ಹೇಳಿ 10 ಲಕ್ಷ ರೂ. ಟೋಕನ್ ಹಣ ಪಡೆದು, ಹಣ ಹಿಂತಿರುಗಿಸದೆ ಸಮಸ್ಯೆ ಮಾಡಿದ ಪ್ರಕರಣವೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. “ಹಣಕ್ಕಾಗಿ ಕಾವಿ ಧರಿಸಿ ಸಮಾಜಕ್ಕೆ ನಾಚಿಕೆ ತರುವ ಕೆಲಸ ಮಾಡುತ್ತಿದ್ದಾರೆ” ಎಂದು ಆಡಳಿತ ಮಂಡಳಿ ಆರೋಪಿಸಿದೆ.
~ವರದಿ: ಪವನ್ ಕಲ್ಯಾಣ್ ಡಿ.ಜಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ಸುದ್ದಿದಿನ,ದಾವಣಗೆರೆ: ಅಪರೂಪದ ಲಿವರ್ (ಯಕೃತ್ತಿನ) ಟ್ಯೂಮರ್ನಿಂದ ಬಳಲುತ್ತಿದ್ದ 56 ವರ್ಷದ ಮಹಿಳೆಗೆ ಇಲ್ಲಿನ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ, ವೈದ್ಯರು ಟ್ಯೂಮರ್ (ಗಡ್ಡೆ) ಯನ್ನುಸಂಪೂರ್ಣವಾಗಿ ತೆಗೆದುಹಾಕುವುದರ ಜೊತೆಗೆ ಲಿವರ್ನ ಆರೋಗ್ಯಕರ ಭಾಗಗಳಿಗೆ ಯಾವುದೇ ಹಾನಿಯಾಗದಂತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗ ಮೂಲದ ಈ ಮಹಿಳೆ, ಬೊಜ್ಜಿನ ಸಮಸ್ಯೆಯ ಜೊತೆಗೆ ಟೈಪ್-2 ಮಧುಮೇಹ ಮತ್ತು ಹೈಪೋಥೈರಾಯ್ಡಿಸಮ್ (ಥೈರಾಯ್ಡ್ ಸಮಸ್ಯೆ) ದಂತಹ ಕಾಯಿಲೆಗಳಿಂದಲೂ ಬಳಲುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ನಿರಂತರ ಹೊಟ್ಟೆನೋವು ಹಾಗೂ ಹಸಿವಾಗದಿರುವ ಸಮಸ್ಯೆಯಿಂದ ಅವರು ಒದ್ದಾಡುತ್ತಿದ್ದರು. ಇದಕ್ಕಾಗಿ ಸ್ಥಳೀಯ ಕ್ಲಿನಿಕ್ಗಳು ಮತ್ತು ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿನ ತಪಾಸಣೆಯಲ್ಲಿ ಅವರಿಗೆ ಲಿವರ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು.
ಸರಿಯಾದ ಚಿಕಿತ್ಸೆ ಸಿಗದೆ ಕಾಯಿಲೆ ಉಲ್ಬಣಗೊಂಡಿದ್ದಾಗ, ಅವರ ಪರಿಚಿತರೊಬ್ಬರು ದಾವಣಗೆರೆಯ ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ಗೆ ಭೇಟಿ ನೀಡಿ, ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಆರ್.ಕೆ. ಹನುಮಂತ ನಾಯ್ಕ್ ಅವರನ್ನು ಸಂಪರ್ಕಿಸಲು ಸಲಹೆ ನೀಡಿದರು. ಮೊದಲ ತಪಾಸಣೆಯ ನಂತರ, ಮಹಿಳೆಯನ್ನು ಸ್ಕ್ಯಾನಿಂಗ್ ಮತ್ತು ಇತರ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಈ ವೇಳೆ ಅವರ ಲಿವರ್ನ ಎಡಭಾಗದ (ಲೆಫ್ಟ್ ಲೋಬ್) ಆಳದಲ್ಲಿ ಗಡ್ಡೆಯೊಂದು ಬೆಳೆದಿರುವುದು ಕಂಡುಬಂತು. ಹೆಚ್ಚಿನ ಪರೀಕ್ಷೆಗಳ ನಂತರ ಇದು ‘ಇಂಟ್ರಾಹೆಪಾಟಿಕ್ ಚೋಲಾಂಜಿಯೋಕಾರ್ಸಿನೋಮ’ (intrahepatic cholangiocarcinoma) ಎಂಬ ಕಾಯಿಲೆ ಎಂದು ದೃಢಪಟ್ಟಿತು. ಈ ಹಿಂದೆಯೇ ಅವರಿಗೆ ಈ ಕಾಯಿಲೆ ಇರುವುದು ಪತ್ತೆಯಾಗಿದ್ದರೂ, ಶಸ್ತ್ರಚಿಕಿತ್ಸೆಯಲ್ಲಿನ ಸಂಕೀರ್ಣತೆಯ ಕಾರಣದಿಂದಾಗಿ ಹಿಂದಿನ ವೈದ್ಯರು ಅದನ್ನು ತೆಗೆದುಹಾಕಲು ಹಿಂದೇಟು ಹಾಕಿದ್ದರು.
ಸುಮಾರು 95 ಕೆ.ಜಿ ತೂಕವಿದ್ದ ಆ ಮಹಿಳೆ ಬೊಜ್ಜು ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರಿಂದ, ಇಂತಹ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಪಡಿಸುವುದು ಅತ್ಯಂತ ಅಪಾಯಕಾರಿಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ, ಈ ರೋಗಿಯು ಶಸ್ತ್ರಚಿಕಿತ್ಸೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈದ್ಯರು ಹೃದಯ ಮತ್ತು ಶ್ವಾಸಕೋಶದ ವಿವರವಾದ ಪರೀಕ್ಷೆಗಳನ್ನು ನಡೆಸಿದರು.
ಈ ಸವಾಲಿನ ಪ್ರಕರಣವನ್ನು ಕೈಗೆತ್ತಿಕೊಂಡ ಡಾ. ಹನುಮಂತ ನಾಯ್ಕ್ ಮತ್ತು ಅವರ ತಂಡ, ಕ್ಯಾನ್ಸರ್ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸುಮಾರು ಆರು ಗಂಟೆಗಳ ಕಾಲ ಶ್ರಮಿಸಿತು. ಇದರ ಜೊತೆಗೆ ಸಾಕಷ್ಟು ಆರೋಗ್ಯಕರ ಲಿವರ್ ಸರಿಯಾಗಿ ಕಾರ್ಯನಿರ್ವಹಿಸುವಂತೆಯೂ ನೋಡಿಕೊಂಡಿತು. ಈ ಶಸ್ತ್ರಚಿಕಿತ್ಸೆಯು ಪಿತ್ತಕೋಶದ (ಗಾಲ್ ಬ್ಲಾಡರ್) ಜೊತೆಗೆ ಲಿವರ್ನ II, III, IVa ಮತ್ತು IVb ಭಾಗಗಳನ್ನು ತೆಗೆದುಹಾಕುವ ದೊಡ್ಡ ಶಸ್ತ್ರಚಿಕಿತ್ಸೆಯನ್ನು (ಮೇಜರ್ ಲೆಫ್ಟ್ ಹೆಪಟೆಕ್ಟಮಿ) ಒಳಗೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಮಧ್ಯದ ಹೆಪಾಟಿಕ್ ರಕ್ತನಾಳವನ್ನು ಅತ್ಯಂತ ಎಚ್ಚರಿಕೆಯಿಂದ ರಕ್ಷಿಸಲಾಯಿತು.
ಶಸ್ತ್ರಚಿಕಿತ್ಸೆಯ ನಂತರ ಮಹಿಳೆಯು ಅತ್ಯಂತ ತ್ವರಿತವಾಗಿ ಚೇತರಿಸಿಕೊಂಡರು. ಶಸ್ತ್ರಚಿಕಿತ್ಸೆ ಮುಗಿದ ಆರು ಗಂಟೆಗಳಲ್ಲೇ ದ್ರವಾಹಾರ ಸೇವಿಸಲು ಆರಂಭಿಸಿದ ಅವರು, ಕ್ರಮೇಣ ಮೃದುವಾದ ಆಹಾರವನ್ನು ಸೇವಿಸುವ ಹಂತಕ್ಕೆ ತಲುಪಿದರು. ಅವರ ಆರೋಗ್ಯ ಸ್ಥಿರವಾಗಿದ್ದರಿಂದ ಕೇವಲ ಐದು ದಿನಗಳಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಆರ್. ಕೆ. ಹನುಮಂತ ನಾಯ್ಕ್, “ಟ್ಯೂಮರ್ನ ಗಾತ್ರ ಮತ್ತು ಅದು ಇದ್ದ ಜಾಗ, ಅದರ ಜೊತೆಗೆ ರೋಗಿಯ ಬೊಜ್ಜು ಮತ್ತು ಇತರ ವೈದ್ಯಕೀಯ ಸಮಸ್ಯೆಗಳಿಂದಾಗಿ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯಾಗಿತ್ತು. ಆರೋಗ್ಯಕರ ಲಿವರ್ ಅನ್ನು ಉಳಿಸಿಕೊಂಡು ಕ್ಯಾನ್ಸರ್ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದು ನಮ್ಮ ಮೊದಲ ಆದ್ಯತೆಯಾಗಿತ್ತು. ಶಸ್ತ್ರಚಿಕಿತ್ಸೆಗೂ ಮುನ್ನ ಎಚ್ಚರಿಕೆಯ ಮೌಲ್ಯಮಾಪನ, ಶಸ್ತ್ರಚಿಕಿತ್ಸೆಯ ನಿಖರವಾದ ಯೋಜನೆ ಮತ್ತು ಶಸ್ತ್ರಚಿಕಿತ್ಸೆಯ ನಂತರದ ವ್ಯವಸ್ಥಿತ ಆರೈಕೆಯು ಈ ಯಶಸ್ಸಿಗೆ ಕಾರಣವಾಯಿತು” ಎಂದು ತಿಳಿಸಿದರು.
ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಕೇಂದ್ರದ ಫೆಸಿಲಿಟಿ ಡೈರೆಕ್ಟರ್ ಶ್ರೀ ಸುನಿಲ್ ಭಂಡಾರಿಗಲ್ ಮಾತನಾಡಿ, “ಹೆಚ್ಚಿನ ಅಪಾಯದಲ್ಲಿದ್ದ ರೋಗಿಗೆ ಇಂತಹ ಸಂಕೀರ್ಣವಾದ ಲಿವರ್ ಟ್ಯೂಮರ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದು ನಮ್ಮ ಶಸ್ತ್ರಚಿಕಿತ್ಸಾ ತಂಡದ ಪರಿಣತಿ ಮತ್ತು ವಿವಿಧ ವಿಭಾಗಗಳ ವೈದ್ಯರ ಸಂಯೊಜನೆ ಆರೈಕೆಯ (multidisciplinary care) ಮಹತ್ವವನ್ನು ತೋರಿಸುತ್ತದೆ. ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಸುಧಾರಿತ, ಸಕಾಲಿಕ ಮತ್ತು ರೋಗಿ-ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ” ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಡಾ. ಆತ್ಮಾರಾಮನ ಆತ್ಮನಿವೇದನೆ ; ಒಳಗನ್ನಡಿಯಲ್ಲಿ ಮೌನದ ಮುಖ
-
ದಿನದ ಸುದ್ದಿ5 days agoಅಪರೂಪದ ಲಿವರ್ ಗಡ್ಡೆ | ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಾಲಿಟಿ ಸೆಂಟರ್ನಲ್ಲಿ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
-
ದಿನದ ಸುದ್ದಿ3 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ಅಂತರಂಗ1 day agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು

