ದಿನದ ಸುದ್ದಿ
ಲೈಸೆನ್ಸ್ ಶುಲ್ಕ ಬಾಕಿ: ಖಾಸಗಿ ಟೆಲಿಕಾಂ ಕಂಪನಿಗಳ ದಕ್ಷತೆ ಮತ್ತು ಸರಕಾರಕ್ಕೆ ನ್ಯಾಯಾಲಯದ ತರಾಟೆ

- “ಸಂಚಾರ್ ಭವನ”ದಲ್ಲಿರುವ ಕೆಲವು ಕಿರಿಯ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬಬಹುದೇ?. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ. ಇದಲ್ಲದೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬ ಪ್ರಶ್ನೆಯೂ ಏಳುತ್ತದೆ. 2007ರಿಂದ 2012 ರ ನಡುವೆ ತನ್ನ ಒಡೆತನದ ಬಿಎಸ್ಎನ್ಎಲ್ನ್ನು ದುರ್ಬಲಗೊಳಿಸಿ, ಈ ಖಾಸಗಿ ಕಂಪನಿಗಳು ಅಪಾರ ಲಾಭಗಳನ್ನು ಪೇರಿಸಲು ಅವಕಾಶ ಕಲ್ಪಿಸಿದ ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.
ಪಿ. ಅಭಿಮನ್ಯು
ಫೆಬ್ರುವರಿ 14, 2020 ರಂದು ಸುಪ್ರಿಂ ಕೋರ್ಟ್, ಲೈಸೆನ್ಸ್ ಶುಲ್ಕ ಬಾಕಿಯನ್ನು ತೆರದೆ ತಪ್ಪಿಸಿಕೊಳ್ಳುತ್ತಿರುವ ಖಾಸಗಿ ಟೆಲಿಕಾಂ ಕಂಪನಿಗಳನ್ನು ಕಾಪಾಡುವ ಪ್ರಯತ್ನ ನಡೆಸುತ್ತಿದೆ ಎಂದು ಸರಕಾರವನ್ನು ತರಾಟೆಗೆ ತಗೊಂಡಿತು. ವೊಡಾಫೋನ್ ಇಂಡಿಯ, ಏರ್ಟೆಲ್ ಮತ್ತು ಟಾಟಾ ಟೆಲಿಸರ್ವಿಸಸ್ ಇವು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇರುವುದಕ್ಕೆ ತೀವ್ರ ಟೀಕೆಗೆ ಒಳಗಾಗಿರುವ ಖಾಸಗಿ ಟೆಲಿಕಾಂ ಕಂಪನಿಗಳು.
ಅಕ್ಟೋಬರ್ 24, 2019ರಂದು ನ್ಯಾಯ ಮೂರ್ತಿಗಳಾದ ಅರುಣ್ ಮಿಶ್ರ, ಎಸ್.ಅಬ್ದುಲ್ ನಝೀರ್ ಮತ್ತು ಎಂ.ಆರ್.ಷಾ ಇದ್ದ ಸುಪ್ರಿಂ ಕೋರ್ಟ್ ಪೀಠ ಈ ಮೂರು ಕಂಪನಿಗಳು ಲೈಸೆನ್ಸ್ ಶುಲ್ಕ ಬಾಕಿ ರೂ.1.47 ಲಕ್ಷ ಕೋಟಿ ರೂ.ಗಳನ್ನು ಮೂರು ವಾರದೊಳಗೆ ಪಾವತಿ ಮಾಡಬೇಕು ಎಂದು ಆದೇಶಿಸಿತು. ಈ ಆದೇಶದ ಪ್ರಕಾರ ವೊಡಾಫೋನ್ 53,038 ಕೋಟಿ ರೂ., ಏರ್ಟೆಲ್ 35,586 ಕೊಟಿ ರೂ. ಮತ್ತು ಟಾಟಾ ಟೆಲಿಸರ್ವಿಸಸ್ 13,823 ಕೋಟಿ ರೂ.ಗಳನ್ನು ಪಾವತಿ ಮಾಡಬೇಕಾಗಿದೆ. ಆದರೆ ಈ ಆದೇಶದ ನಂತರ ನಾಲ್ಕು ತಿಂಗಳು ಕಳೆದರೂ ಈ ಖಾಸಗಿ ಕಂಪನಿಗಳು ಒಂದು ರೂಪಾಯಿಯನ್ನೂ ತೆರಲಿಲ್ಲ.
ಸುಪ್ರಿಂ ಕೋರ್ಟ್ ಅತ್ಯಂತ ಕೋಪೋದ್ರಿಕ್ರ ಗೊಂಡದ್ದು, ಇದಕ್ಕಿಂತ ಹೆಚ್ಚಾಗಿ, ಈ ಖಾಸಗಿ ಕಂಪನಿಗಳಿಂದ ಈ ಬಾಕಿಗಳನ್ನು ವಸೂಲಿ ಮಾಡಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದ ದೂರಸಂಪರ್ಕ ಇಲಾಖೆ ತನ್ನ ಕರ್ತವ್ಯ ನಿರ್ವಹಿಸುವ ಬದಲಿಗೆ, ಈ ಪಾವತಿಯನ್ನು ತಪ್ಪಿಸಿಕೊಳ್ಳಲು ಅದೇ ಅನುಕೂಲ ಕಲ್ಪಿಸಿಕೊಟ್ಟದ್ದು. ಜನವರಿ 23, 2020ರಂದು ಇಲಾಖೆ, ಸುಪ್ರಿಂ ಕೋರ್ಟ್ ಆದೇಶದಂತೆ ಈ ಟೆಲಿಕಾಂ ಕಂಪನಿಗಳಿಂದ ಯಾವುದೇ ಬಾಕಿ ಪಾವತಿಗೆ ಒತ್ತಾಯ ಹಾಕಬಾರದು ಎಂದು ಅಕೌಂಟೆಂಟ್ ಜನರಲ್ಗೆ ನಿರ್ದೇಶನ ನೀಡಿತು, ಮತ್ತು ಮುಂದಿನ ಆದೇಶದ ವರೆಗೆ, ಯಾವುದೇ ಕಠಿಣ ಕ್ರಮಗಳನ್ನು ಕೈಗೊಳ್ಳಬಾರದು ಎಂದೂ ಹೇಳಿತು.
ಈ ನಿರ್ದೇಶನವನ್ನು ಪ್ರಸ್ತಾಪಿಸುತ್ತ ನ್ಯಾಯಮೂರ್ತಿ ಅರುಣ್ ಮಿಶ್ರ ಇಲ್ಲಿ ಎಷ್ಟೊಂದು ಹಣಬಲ ಇದೆ, ನನಗೆ ಬಹಳ ಯಾತನೆಯಾಗುತ್ತಿದೆ, ಈ ವ್ಯವಸ್ಥೆಯಲ್ಲಿ ಈ ನ್ಯಾಯಾಲಯದಲ್ಲಿ ಕೆಲಸ ಮಾಡಬಾರದು ಎಂದು ನನಗನಿಸುತ್ತಿದೆ ಎಂದು ಟಿಪ್ಪಣಿ ಮಾಡಿದರು.
ಈ ಮೊಕದ್ದಮೇ ಆರಂಭವಾದದ್ದು, 1999ರಲ್ಲಿ. 1995ರಲ್ಲಿ ಖಾಸಗಿ ಕಂಪನಿಗಳಿಗೆ ಟೆಲಿಕಾಂ ಸೇವೆಗಳನ್ನು ಒದಗಿಸಲು ಲೈಸೆನ್ಸ್ಗಳನ್ನು ಕೊಡಲಾಯಿತು. ಲೈಸೆನ್ಸ್ ಶರತ್ತುಗಳ ಪ್ರಕಾರ ಈ ಕಂಪನಿಗಳು ಒಂದು ನಿಗದಿತ ಲೈಸೆನ್ಸ್ ಶುಲ್ಕವನ್ನು ತೆರಬೇಕಾಗಿತ್ತು. ಆದರೆ 1995ರಿಂದ 1999ರ ವರೆಗೂ ಈ ಕಂಪನಿಗಳು ಯಾವುದೇ ಲೈಸೆನ್ಸ್ ಶುಲ್ಕವನ್ನು ತೆರಲಿಲ್ಲ. ಹೀಗೆ ಬಾಕಿಯಾದ ಶುಲ್ಕಗಳ ಮೊತ್ತ ಹಲವು ಸಾವಿರ ಕೋಟಿ ರೂ.ಗಳಿಗೇರಿತು. 1999ರಲ್ಲಿ ಆಗಿನ ಪ್ರಧಾನ ಮಂತ್ರಿ ವಾಜಪೇಯಿರುವರು ಉದಾರ ಮನಸ್ಸಿನಿಂದ ಸಂಪೂರ್ಣ ಲೈಸೆನ್ಸ್ ಶುಲ್ಕಗಳಿಗೆ ವಿನಾಯ್ತಿ ನೀಡಿದರು. ಅಲ್ಲದೆ, ನಿಗದಿತ ಲೈಸೆನ್ಸ್ ಶುಲ್ಕದ ಮಾದರಿಯ ಬದಲಿಗೆ, ರೆವಿನ್ಯೂ ಪಾಲುದಾರಿಕೆಯ ಮಾದರಿಯನ್ನು ತಂದರು.
ಇದರ ಪ್ರಕಾರ ಖಾಸಗಿ ಟೆಲಿಕಾಂ ಕಂಪನಿಗಳು, ತಮ್ಮ ರೆವಿನ್ಯೂ ಗಳಿಕೆಯ ಒಂದು ಭಾಗವನ್ನು ಲೈಸೆನ್ಸ್ ಶುಲ್ಕವಾಗಿ ತೆರಬೇಕು. ಆರಂಭದಲ್ಲಿ ಇದನ್ನು 15ಶೇ. ಎಂದು ನಿಗದಿ ಮಾಡಲಾಯಿತು, ನಂತರ ಇದನ್ನು 13ಶೇ.ಕ್ಕೆ ಇಳಿಸಲಾಯಿತು, ಅಂತಿಮವಾಗಿ 8ಶೇ. ಎಂದು ನಿಗದಿ ಮಾಡಲಾಯಿತು.
ಈ ರೆವಿನ್ನೂ ಪಾಲುದಾರಿಕೆ ಮಾದರಿಯನ್ನು ಬಳಸಿಕೊಂಡು ಈ ಟೆಲಿಕಾಂ ಕಂಪನಿಗಳು ತಮ್ಮ ರೆವಿನ್ಯೂ ಸಂಗ್ರಹವನ್ನು ಸತತವಾಗಿ ಕಡಿಮೆಗೊಳಿಸಿ ತೋರಿಸಲಾರಂಭಿಸಿ, ಸರಕಾರಕ್ಕೆ ಲೈಸೆನ್ಸ್ ಶುಲ್ಕವನ್ನು ವಂಚಿಸಿದರು. ದೂರಸಂಪರ್ಕ ಇಲಾಖೆ ಹೊರಗಣ ಆಡಿಟರ್ಗಳಿಂದ ನಡೆಸಿದ ತಪಾಸಣೆಗಳು ಈ ವಂಚನೆಯನ್ನು ತೋರಿಸಿಕೊಟ್ಟವು. ಇದರಿಂದಾಗಿ, ಅವು ಲೈಸೆನ್ಸ್ ಶುಲ್ಕ ತೆರುವಂತೆ ಮಾಡಲಾಯಿತು.
ಇದಲ್ಲದೆ, ಆರಂಭದಿಂದಲೇ, ಈ ಖಾಸಗಿ ಕಂಪನಿಗಳು ಎಜಿಆರ್(ಸರಿಹೊಂದಿಸಿದ ಒಟ್ಟು ರೆವಿನೂ ಆದಾಯ)ದ ಲೆಕ್ಕಾಚಾರದಲ್ಲಿ ಕೈಚಳಕ ನಡೆಸಿಕೊಂಡು ಬಂದವು. ಈ ಎಜಿಆರ್ನಲ್ಲಿ ಟೆಲಿಕಾಂ ಸೇವೆಯಿಂದ ಬರುವ ಆದಾಯವನ್ನು ಮಾತ್ರ ತೆಗೆದುಕೊಳ್ಳಬೇಕು, ಹ್ಯಾಂಡ್ಸೆಟ್ಗಳ ಮಾರಾಟ, ರದ್ದಿಗಳು ಇತ್ಯಾದಿಗಳಿಂದ ಬರುವ ಆದಾಯಗಳು ಇದರ ವ್ಯಾಪ್ತಿಗೆ ಬರುವುದಿಲ್ಲ ಎಂಬ ನಿಲುವು ತಳೆದವು. ಆದರೆ ಸರಕಾರ ಎಜಿಆರ್ನಲ್ಲಿ ಇವೆಲ್ಲ ಆದಾಯಗಳೂ ಸೇರುತ್ತವೆ ಎಂಬ ನಿಲುವು ತಳೆಯಿತು (ಆದರೆ ಈಗಿನ ಸರಕಾರ ಅಂತಹ ನಿಲುವು ತಳೆಯಬಾರದಿತ್ತು ಎಂದು ಖೇದಗೊಳ್ಳುತ್ತಿರಬಹುದು). ಈ ವಿವಾದ ಬಹಳ ವರ್ಷಗಳ ಕಾಲ ನೆನೆಗುದಿಗೆ ಬಿದ್ದಿತ್ತು. ಕಳೆದ ಅಕ್ಟೋಬರ್ ೨೪ರಂದು ಸುಪ್ರಿಂ ಕೋರ್ಟ್ ಆದೇಶದೊಂದಿಗೆ ಅದು ಇತ್ಯರ್ಥಗೊಂಡಿತು.
ನ್ಯಾಯಮೂರ್ತಿ ಅರುಣ್ ಮಿಶ್ರರವರ ಫೆಬ್ರುವರಿ 14, 2020ರ ಟಿಪ್ಪಣಿಯಿಂದ ಖಂಡಿತವಾಗಿಯೂ ಎರಡು ಪ್ರಶ್ನೆಗಳು ಏಳುತ್ತವೆ. ಮೊದಲನೆಯದ್ದು, ಜನವರಿ 23ರಂದು ದೂರಸಂಪರ್ಕ ಇಲಾಖೆ ಅಕೌಂಟೆಂಟ್ ಜನರಲ್ರಿಗೆ ಕೊಟ್ಟ ನಿರ್ದೇಶನಕ್ಕೆ ಸಂಬಂಧಪಟ್ಟಿದೆ. ದೂರಸಂಪರ್ಕ ಇಲಾಖೆಯ ಇಬ್ಬರು ಡೆಸ್ಕ್ ಅಧಿಕಾರಿಗಳು ಇಂತಹ ನಿರ್ದೇಶನಕ್ಕೆ ಹೊಣೆಗಾರರು ಎಂದು ಅಕೌಂಟೆಂಟ್ ಜನರಲ್ ತುಷಾರ್ ಮೆಹ್ತ ನ್ಯಾಯಾಲಯಕ್ಕೆ ತಿಳಿಸಿದರು. ಈ ಬಗ್ಗೆ ದೂರಸಂಪರ್ಕ ಮಂತ್ರಿಗಳಿಗಾಲೀ, ಇಲಾಖೆಯ ಕಾರ್ಯದರ್ಶಿಗಳಿಗಾಗಲಿ ತಿಳಿದೇ ಇರಲಿಲ್ಲ ಎಂದು ಹೇಳಲಾಗಿದೆ. ಆದರೆ ಸಂಚಾರ್ ಭವನದಲ್ಲಿರುವ ಕೆಲವು ಡೆಸ್ಕ್ ಅಧಿಕಾರಿಗಳು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಇಂತಹ ನಿರ್ದೇಶನವನ್ನು ಕೊಟ್ಟಿದ್ದಾರೆ ಎಂದರೆ ನಂಬುವುದು ಕಷ್ಟವೇ. ಇಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರ ಹೇಳಿದ ವಿಪುಲ ಹಣಬಲದ ಟಿಪ್ಪಣಿಯನ್ನು ನೆನಪಿಸಿಕೊಳ್ಳದಿರಲು ಸಾಧ್ಯವಿಲ್ಲ.
ಎರಡನೆಯ ಪ್ರಶ್ನೆಯೆಂದರೆ, ಗಂಭೀರ ಹಣಕಾಸು ಕೊರತೆಯನ್ನು ಎದುರಿಸುತ್ತಿರುವ ಸರಕಾರ 1.47 ಲಕ್ಷ ಕೋಟಿ ರೂ.ಗಳ ಒಂದು ಭಾರೀ ಮೊತ್ತವನ್ನು ಪಡೆಯಲು ಅನುವು ಮಾಡಿಕೊಟ್ಟ ಸುಪ್ರಿಂ ಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಉತ್ಸುಕವಾಗಿಲ್ಲ ಏಕೆ ಎಂಬುದು.
ಈ ಖಾಸಗಿ ಟೆಲಿಕಾಂ ಕಂಪನಿಗಳ, ಅದರಲ್ಲೂ ವೊಡಾಫೋನ್ನ ಆರ್ಥಿಕ ಪರಿಸ್ಥಿತಿ ಎಷ್ಟು ನಾಜೂಕಾಗಿದೆಯೆಂದರೆ, ಇಷ್ಟೊಂದು ದೊಡ್ಡ ಮೊತ್ತವನ್ನು ಅವು ಎಲ್ಲಿಂದ ತಾನೇ ಹೊಂದಿಸ ಬಲ್ಲವು ಎಂದು ಮಾಧ್ಯಮಗಳು ಕಣ್ಣೀರು ಹಾಕುತ್ತಿವೆ. ಆದರೆ ಈ ಕಂಪನಿಗಳು ಭಾರತೀಯ ಟೆಲಿಕಾಂ ಉದ್ಯಮದಲ್ಲಿ ಗಳಿಸಿದ ಅಪಾರ ಸಂಪತ್ತು, ಅದರಲ್ಲೂ, 2007ರಿಂದ 2012 ರ ನಡುವೆ ಸರಕಾರವೇ ತನ್ನ ಒಡೆತನದ ಬಿಎಸ್ಎನ್ಎಲ್ನ್ನು ದುರ್ಬಲಗೊಳಿಸುತ್ತಿದ್ದ ಅವಧಿಯಲ್ಲಿ ಪೇರಿಸಿಟ್ಟ ದೈತ್ಯಪ್ರಮಾಣದ ಲಾಭಗಳು ಎಲ್ಲ ಎಲ್ಲಿಗೆ ಹೋದವು? ಸರಕಾರ ಮಾತ್ರವೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬೇಕು.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.
ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.
ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.
ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.
ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

- ಪುರಂದರ್ ಲೋಕಿಕೆರೆ
ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.
ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.
100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.
ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.
ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.
ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.
ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ6 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ2 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ4 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ1 day ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ