Connect with us

ದಿನದ ಸುದ್ದಿ

ಜನಸ್ಪಂದನ ಸಭೆ ದೂರು ನೀಡುವ ವೇದಿಕೆಯಾಗಬಾರದು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸುದ್ದಿದಿನ,ದಾವಣಗೆರೆ : ಸರ್ಕಾರದ ಸೌಲಭ್ಯ ಪಡೆಯಲು ಸಾರ್ವಜನಿಕರು ಎದುರಿಸುವ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವುದು ಸೇರಿದಂತೆ ಜನರ ಸಮಸ್ಯೆಗಳನ್ನು, ಜಿಲ್ಲಾ ಮಟ್ಟದಲ್ಲಿ ನಿವಾರಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಜನಸ್ಪಂದನ ಸಭೆ, ಅಧಿಕಾರಿಗಳ ಹಾಗೂ ವ್ಯವಸ್ಥೆ ವಿರುದ್ಧ ದೂರುಗಳನ್ನು ನೀಡುವ ವೇದಿಕೆಯಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡಿ ನೋವು ಅನುಭವಿಸಿದವರು, ಮೂಲಭೂತ ಸೌರ್ಕಯಗಳ ಕೊರತೆ ಎದುರಿಸುವವರು, ಹೀಗೆ ವಿವಿಧ ಸವಲತ್ತು ಪಡೆಯದೆ ಶೋಷಿತರಾದವರ ಧ್ವನಿಯಾಗಲು ಜನಸ್ಪಂದನ ಸಭೆ ನಡೆಸಲಾಗುತ್ತಿದೆ.

ಈ ಸಭೆಯ ಮೂಲಕ ಹಲವರ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನಸ್ಪಂದನ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ದೂರು ಅರ್ಜಿ, ವೈಯಕ್ತಿಕ ಅಥವಾ ಇನ್ನಿತರೆ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರಿಗಳ ಹಾಗೂ ವ್ಯವಸ್ಥೆಯ ವಿರುದ್ಧ ದೂರು ನೀಡಿಕೆಯ ಅರ್ಜಿಗಳು ಹೆಚ್ಚು ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿಯನ್ನಿಟ್ಟುಕೊಂಡು ನಡೆಸಲಾಗುತ್ತಿರುವ ಜನಸ್ಪಂದನ ಸಭೆಯನ್ನು ದೂರು ನೀಡುವ ವೇದಿಕೆಯನ್ನಾಗಿಸಿಕೊಂಡರೆ ಅದನ್ನು ಸಹಿಸುವುದಿಲ್ಲ ಎಂದರು. ಅಧಿಕಾರಿಗಳೂ ಕೂಡ ಸಾರ್ವಜನಿಕ ಕುಂದುಕೊರತೆಗಳು, ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಂಕುಚಿತ ಮನೋಭಾವದಿಂದ ನೋಡದೆ, ವಿಶಾಲ ಮನಸ್ಸಿನಿಂದ ನೋಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಕುಗ್ರಾಮಗಳಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ತಹಸಿಲ್ದಾರರು ಕೂಡ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೆ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೋವಿಡ್ ಸೋಂಕು ಹರಡುವ ಭೀತಿ ಇದ್ದು, ಸದ್ಯ ದಾವಣಗೆರೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೂ ಸಾರ್ವಜನಿಕರು ಮೈಮರೆಯುವ ಹಾಗಿಲ್ಲ, ತಪ್ಪದೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದರು.

ದಾವಣಗೆರೆಯಲ್ಲಿ ಜಯದೇವ ಹೃದ್ರೋಗ ಉಪಕೇಂದ್ರವನ್ನು ಪ್ರಸಕ್ತ ಬಜೆಟ್‍ನಲ್ಲಿ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಕನಿಷ್ಟ 2 ಎಕರೆ ಭೂಮಿಯ ಅಗತ್ಯವಿದೆ, ನಿವೇಶನ ಗುರುತಿಸಿ, ಮಂಜೂರು ಮಾಡುವಂತೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

ದಾವಣಗೆರೆ ನಗರ ವ್ಯಾಪ್ತಿಯಲ್ಲಿ 2 ಎಕರೆಯಷ್ಟು ವಿಸ್ತಾರದ ಭೂಮಿ ದೊರೆಯುವುದು ಕಷ್ಟ, ಹೀಗಾಗಿ ನಗರಕ್ಕೆ ಸಮೀಪದಲ್ಲಿ ಭೂಮಿ ಗುರುತಿಸಿ, ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಪೊಲೀಸ್ ಇಲಾಖೆಯಲ್ಲಿ ಹೆಡ್‍ಕಾನ್ಸ್‍ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ, ಹೀಗಾಗಿ ತಮ್ಮ ಕುಟುಂಬ ತೀವ್ರ ತೊಂದರೆಗೆ ಸಿಲುಕಿದೆ, ಆರ್ಥಿಕ ಹಾಗೂ ಚಿಕಿತ್ಸಾ ನೆರವು ಒದಗಿಸುವಂತೆ ಮಹಿಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು.

ಬೀದಿಬೀದಿಗಳಲ್ಲಿ ತಿರುಗಾಟ ನಡೆಸಿ ಮಸಾಲೆ ವ್ಯಾಪಾರ ಮಾಡುವ ದಾವಣಗೆರೆಯ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಕೂಡ ವ್ಯಾಪಾರ ಮಾಡಲು ಸಿದ್ಧವಿದ್ದು, ಅಗತ್ಯ ಸಾಲ ಸೌಲಭ್ಯ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ದಂಪತಿಗಳಿಬ್ಬರಿಗೂ ವ್ಯಾಪಾರ ಚಟುವಟಿಕೆ ನಡೆಸಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಒಂದು ವಾರದ ಒಳಗಾಗಿ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಹಾಗೂ ಲೀಡ್‍ಬ್ಯಾಂಕ್ ವ್ಯವಸ್ಥಾಪಕರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

ದಾವಣಗೆರೆ ನಗರದ ವೃದ್ಧ ಬಸಪ್ಪ ಎಂಬುವವರು ತಮಗೆ ವಾಸಿಸಲು ಮನೆಯಿಲ್ಲ, ವಸತಿ ಸೌಲಭ್ಯ ನೀಡುವಂತೆ ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ, ಮನೆ ಮಂಜೂರು ಆಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸದ್ಯ ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುತ್ತಿಲ್ಲ, ಮನೆಗಳನ್ನು ನಿರ್ಮಿಸುವ ಸಲುವಾಗಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದೆ. ಬರುವ ದಿನಗಳಲ್ಲಿ ತಮಗೆ ಆದ್ಯತೆ ಮೇರೆಗೆ ಮನೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಅವರು, ಅರ್ಜಿ ಸಲ್ಲಿಸಿ ಗ್ರಾಮವೊಂದರಲ್ಲಿ ನೀರಿನ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಯಾರೂ ಸ್ಥಳಾವಕಾಶ ನೀಡದಿದ್ದಾಗ ಆ ಗ್ರಾಮದ ಗಂಗೀಬಾಯಿ ಎಂಬುವವರ ಮನವೊಲಿಸಿ, ಅವರಿಗೆ ಬೋರ್‍ವೆಲ್ ಕೊರೆಯಿಸಿಕೊಡುವ ಭರವಸೆ ನೀಡಿ, ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ತಾವು ಶಾಸಕರಾಗಿದ್ದಾಗ ಓವರ್‍ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಆದರೆ ಇದುವರೆಗೂ ಅವರಿಗೆ ಬೋರ್‍ವೆಲ್ ಕೊರೆಯಿಸಿಕೊಟ್ಟಿಲ್ಲ. ಇದಕ್ಕೆ ರಾಜಕೀಯ ಕಾರಣಗಳಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ನಿಗಮದ ಅಧಿಕಾರಿಗಳು ಪ್ರತಿಕ್ರಿಯಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು, ರದ್ದುಪಡಿಸಿ ಆದೇಶ ನೀಡಿದ್ದಾರೆ ಎಂದು ಆದೇಶದ ಪ್ರತಿಯನ್ನು ಸಲ್ಲಿಸಿದರು.

ಗುತ್ತಿಗೆ ಆಧಾರದಲ್ಲಿ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ತಮ್ಮನ್ನು 06 ತಿಂಗಳ ಅವಧಿಗೆ ನೇಮಿಸಲಾಗಿತ್ತು. ಆದರೆ ಕೇವಲ ಎರಡು ತಿಂಗಳ ಒಳಗಾಗಿಯೇ ತಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ, ತಮ್ಮನ್ನು ಸೇವೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಮೂವರು ಮಹಿಳಾ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ

Published

on

  • ರುದ್ರಪ್ಪ ಹನಗವಾಡಿ

ಅಪ್ಪ ಮೊದಲಿನಿಂದಲೂ ಎಲೆ ತೋಟ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಆಗಲೇ ಬರೆದಿದ್ದೇನೆ. ಅದರಿಂದಲೇ ನಮ್ಮೆಲ್ಲರ ಜೀವನ ಕೊರತೆ ಕಾಣದಂತೆ ನಡೆಯುತ್ತಿತ್ತು. ನಮಗೆ ಸ್ವಂತ ತೋಟದ ಜಮೀನು ಇಲ್ಲದ್ದರಿಂದ ಕಪ್ಪಲಿ ಮಾಡಿ ಬೇರೆಯವರ ಜಮೀನನ್ನು ಕೋರಿಗೆ ಮಾಡುತ್ತಿದ್ದರು.

ಕರ್ನಾಟಕದಲ್ಲಿ ಈ ಪದ್ಧತಿ ಬೇರೆ ಬೇರೆ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿರುವುದನ್ನು ನೋಡುತ್ತೇವೆ. ಭೂಮಾಲೀಕನು ಮತ್ತು ಅದರಲ್ಲಿ ದುಡಿಯುವವ, ಬರುವ ಒಟ್ಟು ಆದಾಯದಲ್ಲಿ ಸಮನಾಗಿ ಹಂಚಿಕೊಳ್ಳುವ ವ್ಯವಸ್ಥೆ ಇರುತ್ತಿತ್ತು. ಹೀಗೆ ಕೋರಿಗೆ ಮಾಡಿಕೊಳ್ಳುತ್ತಿದ್ದ ಮಾಲೀಕ ಮತ್ತು ಶ್ರಮಿಕರಿಬ್ಬರಲ್ಲಿ ನನ್ನ ಬಾಲ್ಯದ ದಿನಗಳಲ್ಲಿ ಅನ್ಯೋನ್ಯ ಸಂಬಂಧಗಳಿರುತ್ತಿದ್ದವು. ಹಬ್ಬ ಹರಿದಿನ, ಮದುವೆ ಮುಂಜಿಗಳಲ್ಲಿ, ಸಾವು ನೋವುಗಳಲ್ಲಿ ಬಂಧುಗಳಂತೆ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು.

ಹೀಗೆ ಹೆಚ್ಚಿನ ಜಮೀನುಗಳು ಇದ್ದ ಮನೆತನದವರು ಕೋರಿಗೆ ನೀಡಿದ ಜನರೊಡನೆ ಅನೇಕ ತಲೆಮಾರುಗಳಿಂದ ಕೋರಿನ ವ್ಯವಸ್ಥೆಯಲ್ಲಿ ತೋಟ, ಹೊಲಗಳನ್ನು ಮಾಡಿಕೊಂಡು ಬರುತ್ತಿದ್ದರು. ಕೆಲವು ಭೂಮಾಲೀಕರು, ತೋಟದಲ್ಲಿ ದುಡಿಯುತ್ತಿದ್ದ ಕೋರಿನವರಿಗೆ ಬರುವ ಆದಾಯದಲ್ಲಿ ಸರಿಯಾಗಿ ಹಂಚಿಕೊಡದೆ ಮೋಸ ಕೂಡ ಮಾಡುತ್ತಿರುವ ವಿಚಾರಗಳನ್ನು ಕೂಡ ಊರಲ್ಲಿ ಜನರು ಅಲ್ಲಲ್ಲಿ ಮಾತಾಡಿಕೊಳ್ಳುತ್ತಿದ್ದರು. ಏಕೆಂದರೆ ಬೆಳೆದ ಎಲೆ ಪೆಂಡಿಗಳನ್ನು ಹುಬ್ಬಳ್ಳಿ, ಧಾರವಾಡ, ಹೊಸಪೇಟೆ, ಕಂಪ್ಲಿಗಳಿಗೆ ಭೂಮಾಲೀಕರುಗಳೇ ಮಾರಾಟ ಮಾಡಲು ಹೋಗುತ್ತಿದ್ದರು.

ಅಲ್ಲಿನ ದಲಾಲರು ಹರಾಜು ಹಾಕಿ ನೀಡಿದ ಪಟ್ಟಿಯನ್ನು ಕೋರಿನವರಿಗೆ ಸರಿಯಾಗಿ ತೋರಿಸದೆ ಮತ್ತು ಓದಲು ಬಾರದೆ ಇರುವ ಕೋರಿನವರಿಗೆ ಮೋಸ ಮಾಡುತ್ತಿದ್ದರು. ಆದರೆ ಅಪ್ಪ ಮಾಡಿಕೊಂಡು ಬರುತ್ತಿದ್ದ ಕೋರಿನ ತೋಟದ ಯಜಮಾನರುಗಳು ನಾನು ಚಿಕ್ಕಂದಿನಿಂದಲೂ ನೋಡಿದ ದೊಡ್ಡಮನಿ ಬಸಣ್ಣ, ಸಣ್ಣಮನಿ ರುದ್ರಜ್ಜ, ಬಣಕಾರ್ ನಾಗಪ್ಪ ಎಂಬ ಭೂಮಾಲೀಕರುಗಳು ಎಂದೂ ಆ ರೀತಿ ಮಾಡಿದವರಲ್ಲ.

ದೊಡ್ಡಮನಿ ಬಸಣ್ಣನದು ವರ್ಣರಂಜಿತ ವ್ಯಕ್ತಿತ್ವ. ಇವರ ಹಿಂದಿನ ವಂಶಕ್ಕೆ ಹೋದರೆ ಶಿವಪ್ಪಜ್ಜ ಎಂಬ ಹಿರಿಯ, ಅಪ್ಪನನ್ನು `ಹನುಮಂತು’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನಾನು 13-14ನೇ ವಯಸ್ಸಿನಲ್ಲಿ ಇದ್ದಾಗ ಅಪ್ಪನನ್ನು ಹಾಗೆ ಕರೆಯುತ್ತಿದ್ದವರನ್ನು ನಾನು ಎಲ್ಲೂ ಕೇಳಿರಲಿಲ್ಲ. ಶಿವಪ್ಪಜ್ಜನ ತಂಗಿಯಾಗಿದ್ದ ಸಿದ್ದಜ್ಜಿ ತನ್ನ ಗಂಡನ ಕಾಲಾನಂತರ ತವರು ಮನೆಗೆ ಬಂದು ಅಣ್ಣ ಶಿವಪ್ಪಜ್ಜನ ಮನೆಯಲ್ಲೇ ಇದ್ದು ತೋಟ ಮನೆಗಳಲ್ಲಿ ಎರಡಾಳಿನ ಕೆಲಸ ಮಾಡುತ್ತಿದ್ದರು. ಶಿವಪ್ಪಜ್ಜನ ಅಣ್ಣ ತಮ್ಮಂದಿರು ದೊಡ್ಡ ಮನೆತನ ಮತ್ತು ದೊಡ್ಡ ನಡವಳಿಕೆ ಕೂಡ.

ಊರಲ್ಲಿನ ದೇವರ ಕೆಲಸವಾಗಲೀ, ಮದುವೆ ಮುಂಜಿಗಳಲ್ಲಿ ಅವರಿಲ್ಲದೆ ನಡೆಯುತ್ತಿರಲಿಲ್ಲ. ಅದೇನೋ ಮಕ್ಕಳಾಗಲಿಲ್ಲ ಎಂದು ಒಂದೆರಡು ಮದುವೆಯಾಗಿ ಕೊನೆಯಲ್ಲಿ ಚಿಕ್ಕ ಹೆಂಡತಿಗೆ ಗಂಡು ಮಕ್ಕಳಾಗದೇ ಒಂದು ಹೆಣ್ಣು ಮಗಳಿದ್ದು, ಅವರು ನಮ್ಮ ದೊಡ್ಡಕ್ಕ ಕೊಟ್ರಕ್ಕನ ಸಹಪಾಠಿಯಾಗಿ ಶಾಲೆಗೆ ಹೋಗುತ್ತಿದ್ದುದನ್ನು ಅಕ್ಕ ಈಗಲೂ ನೆನಸಿಕೊಳ್ಳುತ್ತಾಳೆ. ಅಪ್ಪ ಇವರ ತೋಟ ಮಾಡುತ್ತಿದ್ದ ಸಮಯದಲ್ಲಿ ನಾನು ತೋಟಕ್ಕೆ ಬುತ್ತಿ ತೆಗೆದುಕೊಂಡು ಹೋಗುತ್ತಿದ್ದೆ. ಎಲ್ಲಾ ಒಟ್ಟಿಗೆ ಕೂತು ಉಣ್ಣುವಾಗ, ಶಿವಪ್ಪಜ್ಜ, ಸಿದ್ದಜ್ಜಿ ಅಪ್ಪನೊಡನೆ ಆತ್ಮೀಯರಾಗಿ ಮಾತಾಡುತ್ತಿದ್ದು ಅವರ ಮನೆತನದಲ್ಲಿನ ಬಂಗಾರದ ಹಂಚಿಕೆಯಲ್ಲಿ ಆಗಿರುವ ತಾರತಮ್ಯಗಳನ್ನು ಮಾತಾಡುತ್ತಿದ್ದರೆ ನಾನೂ ಕೇಳಿಸಿಕೊಳ್ಳುತ್ತಿದ್ದೆ. ಅಪ್ಪನ ಜೊತೆ ಶಿವಪ್ಪಜ್ಜ, ಸಿದ್ದಜ್ಜಿ ಅವರ ಸಂಬಂಧಗಳು ತುಂಬಾ ಆತ್ಮೀಯವಾಗಿರುತ್ತಿದ್ದವು. ಇಂತಹ ಮನೆತನದ ಕುಡಿಯಾಗಿದ್ದ ಬಸಣ್ಣ ಚಿಕ್ಕ ವಯಸ್ಸಿನವರಾಗಿದ್ದು ಅವರ ಪಾಲಿನ ತೋಟದಲ್ಲಿ ಅಪ್ಪ ಕೋರಿಗೆ ಮಾಡುತ್ತಿದ್ದ.

ಅಪ್ಪನನ್ನು ಆತ ಅಣ್ಣಾ ಎಂದು ಯಾವಾಗಲೂ ಕೂಗಿ ಕರೆಯುತ್ತಿದ್ದ. ಎಂದೂ ಏಕವಚನದಲ್ಲಿ ಮಾತಾಡಿದ್ದು ನಾನು ಕೇಳಿರಲಿಲ್ಲ. ಮತ್ತು ಬೆಳೆದ ಬೆಲೆಯಲ್ಲಿ ಸಮಾನ ಹಂಚಿಕೆಯಲ್ಲೂ ಏನೂ ಮೋಸ ಇರುತ್ತಿರಲಿಲ್ಲ. ಆದರೆ ಆತ ಹೊಸ ತಲೆಮಾರಿನ ಶೋಕಿಗೆ ಮಾರುಹೋಗಿದ್ದ. ಊರಿನಲ್ಲಿ ಮೊದಲು ರ‍್ಯಾಲಿ ಬೈಸಿಕಲ್ ನಂತರ ಸೈಕಲ್ ಮೋಟಾರ್ ತಂದು ಓಡಾಡಿಸಿದ! ಲಿಂಗಾಯತರಲ್ಲಿ ನಿಷಿದ್ಧವಾದ ಕುಡಿತ ಮತ್ತು ಮಾಂಸಾಹಾರವನ್ನು ಯಥೇಚ್ಛವಾಗಿ ಸೇವಿಸುತ್ತಿದ್ದ. ಅದಕ್ಕಾಗಿ ಯಾರಿಗೂ ಕೇರ್ ಮಾಡುತ್ತಿರಲಿಲ್ಲ. ಆದರೂ ಅವರಿವರು ಅವನ ಹಿಂದು ಮುಂದೆ ಮಾತಾಡಿಕೊಳ್ಳುವುದನ್ನು ಬಾಲಕನಾಗಿದ್ದ ನಾನು ಕೇಳಿಸಿಕೊಳ್ಳುತ್ತಿದ್ದೆ. ಯಾವಾಗಲಾದರೂ ನಮ್ಮ ಮನೆ ಕಡೆಗೆ ಬಂದಾಗ ಹೊರಕಟ್ಟೆಯಲ್ಲಿ ಕೂತು ಅವನ ಮೂಗಿಗೆ ಮಾಂಸದ ಸಾರಿನದೋ, ಕೋಳಿ ಸಾರಿನದೋ ಘಂ ವಾಸನೆ ಬಡಿದರೆ, ಎದ್ದು ಹೋಗದೆ ತಡರಾತ್ರಿವರೆಗೆ ಕೂತು ಅಪ್ಪನೊಟ್ಟಿಗೆ ಪಾರ್ಟಿ ಮಾಡಿಕೊಂಡು ಹೋಗುತ್ತಿದ್ದ.

ಹೀಗಿದ್ದ ಬಸಣ್ಣನಿಗೆ ಊರಲ್ಲಿದ್ದ ಸುಂದರಿಯೊಬ್ಬಳ ಸಹವಾಸವಾಗಿ ಆಕೆ ನಾವು ಮಾಡುತ್ತಿದ್ದ ಕೋರಿನ ತೋಟಕ್ಕೆ ಬರುತ್ತಿದ್ದಳು. ಅದ್ಯಾವ ವಿಷಯದಲ್ಲಿ ವಿವಾದವಾಯಿತೋ ಅಪ್ಪ ಬೆಳೆದು ನಿಂತಿದ್ದ ತೋಟವನ್ನು ನಿಂತ ಕಾಲಲ್ಲಿ ಬಿಟ್ಟು ಹೊರ ಬಂದು, ಬಣಕಾರ ನಾಗಪ್ಪ ಎನ್ನುವವರ ಬೇರೊಂದು ಕೋರಿನ ತೋಟವನ್ನು ಹಿಡಿದಿದ್ದ. ಇಲ್ಲಿ ಕಪ್ಪಲಿಯನ್ನು ಹೂಡಿ ನೀರು ಹಾಯಿಸುವುದು, ಅದರಿಂದ ಶ್ರಮ ಜಾಸ್ತಿಯಾಗಿರುತ್ತಿತ್ತೇ ಹೊರತು ಆದಾಯದಲ್ಲಿ ಅಂತಹದೇನೂ ಹೆಚ್ಚುವರಿ ಕಾಣುತ್ತಿರಲಿಲ್ಲ. ಆಗ ನಾನು ನೀರು ಹಾಯಿಸುವ, ಎಲೆ ಕೊಯ್ಯುವ, ಬಳ್ಳಿಯನ್ನು ಬೆಳೆದ ಮುಂಡಗಳಿಗೆ ಕಟ್ಟುವ ಕೆಲಸವನ್ನು ಅಪ್ಪ, ಅಣ್ಣನ ಜೊತೆ ಸೇರಿ ಮಾಡುತ್ತಿದ್ದೆ. ಆಗ ಏಳನೆ ತರಗತಿ ಪಾಸುಮಾಡಿ ಸಾಗರದಲ್ಲಿ ಹೈಸ್ಕೂಲಿಗೆ ಸೇರಿದ್ದೆ. ಕೋರಿನ ತೋಟದ ಮಾಲೀಕರಾಗಿದ್ದ ಬಣಕಾರ್ ನಾಗಪ್ಪ ಅವರ ಮಗ ಜಯಣ್ಣ ನನ್ನ ಕಿರಿಯ ಸಹಪಾಠಿಯಾಗಿ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ.

ನಾಗಪ್ಪಜ್ಜನೂ ದೊಡ್ಡ ಮನುಷ್ಯ. ಆಸೆಯವನಾಗಿರಲಿಲ್ಲ. ಬಂದ ಹಣವನ್ನು ಸರಿಯಾಗಿ ಹಂಚಿ ಕೊಡುತ್ತಿದ್ದ. ಅವರ ಮನೆಯವರೆಲ್ಲ ಇಂದಿಗೂ ಅದೇ ಆತ್ಮೀಯತೆಯನ್ನು ತೋರುವ ಬಂಧುಗಳಾಗಿದ್ದಾರೆ. ನಾಗಜ್ಜನ ಹೆಂಡತಿ ಗಿರಿಜಕ್ಕ, ತಾಯಿ ಹೃದಯದವರು. ನಾನು ಯಾವುದೇ ಕೆಲಸಕ್ಕೆ ಅವರ ಮನೆಗೆ ಹೋದಾಗ ರೊಟ್ಟಿ ಉಣ್ಣೆಂದು ಜುಲುಮೆ ಮಾಡಿ ಉಣಿಸುತ್ತಿದ್ದರು. ಅದೇಕೋ ಕಪ್ಪಲಿಯಿಂದ ದುಡಿಮೆ ಉಚಾಯಿಸದ ಕಾರಣ ಅಪ್ಪ ಬೇರೊಬ್ಬ ಭೂಮಾಲೀಕರಾದ ಸಣ್ಣಮನಿ ರುದ್ರಜ್ಜ, ಹಾಲಸಿದ್ದಪ್ಪ ಎಂಬುವರು ಹರಾಜಿನಲ್ಲಿ ಎಂಟು ವರ್ಷಗಳಿಗೆ ಹಣ ಗುತ್ತಿಗೆ ಪಡೆದ ಊರ ದೇವರ ಜಮೀನನ್ನು, ಕೋರಿಗೆ ಮಾಡಲು ಅಪ್ಪ ತೀರ್ಮಾನಿಸಿದ್ದರು.

ಅದೇನು ಅದೃಷ್ಟವೋ ಎಂಬಂತೆ ತೋಟವೊಂದು ನಂದನವನದಂತೆ ಬೆಳೆದು ಸಾಕಷ್ಟು ಆದಾಯ ಬರುತ್ತಿತ್ತು. ಈ ಸಂದರ್ಭದಲ್ಲಿಯೇ ಅಪ್ಪ ಇಡೀ ಉತ್ಪನ್ನವನ್ನು ನಾಲ್ಕು ಸಾವಿರ ರೂಪಾಯಿಗಳಿಗೆ ಗುತ್ತಿಗೆಗೆ ಒಪ್ಪಿಕೊಂಡು 100 ರೂಗಳಿಗೆ ಏಳೂವರೆ ಪೆಂಡಿಯಂತೆ ಎಲೆ ಪೆಂಡಿ ನೀಡಬೇಕಾಗಿದ್ದ ಕರಾರಿಗೆ ಒಪ್ಪಿ ಕೊಟ್ಟಿದ್ದರು.

ಈ ರೀತಿ ಎಲೆ ಕೊಯ್ದುಕೊಂಡು ಹೋಗುತ್ತಿದ್ದ ಕೇಣಿದಾರರು ಉಳಿಯುತ್ತಿದ್ದ ಅರ್ಧ ಅಥವಾ ಕಾಲು ಪೆಂಡಿಯ ಎಲೆಯನ್ನು ತೆಗೆದುಕೊಳ್ಳದೆ ತೋಟದವರಿಗೆ ಬಿಟ್ಟುಬಿಡುತ್ತಿದ್ದರು. ಅದನ್ನು ಸಾಮಾನ್ಯವಾಗಿ ಕೋರಿಗೆ ಮಾಡಿದವರೇ ಕೊಯ್ದುಕೊಂಡು ಮಾರಿ ಕೊಳ್ಳುತ್ತಿದ್ದರು. ಅದು ತೋಟದ ಮಾಲೀಕನಿಗೆ ಗೊತ್ತಿದ್ದರೂ ಸಾಮಾನ್ಯವಾಗಿ ಕೇಳುತ್ತಿರಲಿಲ್ಲ.ಇಂತಹದೊಂದು ಎಲೆ ಕೊಯ್ಯುವ ಸಮಯದಲ್ಲಿ ಕರಾರುದಾರನಿಗೆ ಕೊಟ್ಟು ಉಳಿದ ಸುಮಾರು ಕಾಲು ಪೆಂಡಿಯಷ್ಟು ಎಲೆ ಉಳಿದಿತ್ತು. ನಾನೇ ಕೊಯ್ದೆನೋ ನಮ್ಮ ಅಣ್ಣ ಹೇಳಿದನೋ ಅಪ್ಪನಿಗೆ ಗೊತ್ತಿಲ್ಲದಂತೆ ನಾನು ಬಂದು ಬೆಳಿಗ್ಗೇನೆ ಎಲೆ ಕೊಯ್ಯುತ್ತಿದ್ದೆ. ಆಗ ಒಳ್ಳೆಯ ರೇಟು ಬೇರೆ ಇದ್ದುದರಿಂದ ಮಾರಿದ ನಂತರ ಖರ್ಚಿಗೆ ದುಡ್ಡು ಸಿಗುವುದೆಂಬ ಯೋಚನೆಯಲ್ಲಿದ್ದೆ. ಆಗ ಬಹುಶಃ ನಾನು ಆಗಷ್ಟೇ ಹೈಸ್ಕೂಲಿಗೆ ಸೇರಿ ರಜೆಯಲ್ಲಿ ಊರಿಗೆ ಬಂದಿದ್ದೆ.

ನನ್ನ ಪಾಡಿಗೆ ನಾನು ಎಲೆ ಕೊಯ್ಯುವ ಸಮಯಕ್ಕೆ ಮಾಲೀಕ ರುದ್ರಪ್ಪಜ್ಜನ ತಮ್ಮ ಹಾಲಸಿದ್ದಪ್ಪ ಬಂದವನೇ ನಾನು ಎಲೆ ಕೊಯ್ಯುತ್ತಿರುವುದನ್ನ ನೋಡಿ, ಇದೇನು ಕಳ್ಳತನದಿಂದ ಎಲೆ ಕೊಯ್ಯುತ್ತಿಯಲ್ಲ ಎಂದು ಪ್ರಾರಂಭಿಸಿದವ ನಾನೊಂದು ಮಹಾಪರಾಧ ಮಾಡಿರುವುದಾಗಿ ಬೈಯುತ್ತಾ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಎಲೆ ಕೊಯ್ಯು ವುದನ್ನ ನಿಲ್ಲಿಸಿದ. ಆಗ ಅದೇನೇನೊ ಮಾತಾಡಿದವನೋ ನನಗಂತೂ ಸಹಿಸಿಕೊಳ್ಳಲಾಗದೆ ಅವಮಾನದಲ್ಲಿ ಕುಸಿದು ಹೋಗಿದ್ದೆ. ಬಡತನದ ಕ್ರೌರ್ಯವೆಂದರೆ ಏನೆಂಬುದನ್ನ ಅವನ ಬೈಗುಳಗಳಲ್ಲಿ ದಾಖಲಿಸುತ್ತಾ, ಕೊಯ್ದಿದ್ದ ಎಲೆ ಬುಟ್ಟಿಯನ್ನು ನನ್ನ ಮೇಲೆ ಹೊರಿಸಿಕೊಂಡು ಊರಲ್ಲಿ ಪಂಚಾಯ್ತಿ ಮಾಡಬೇಕೆಂದು ಉದ್ದಕ್ಕೂ ಬೈಯುತ್ತಾ ಊರ ವೀರಭದ್ರ ದೇವರ ಗುಡಿಗೆ ತಂದಿರಿಸಿದ್ದ.

ನಾನು ಅವಮಾನದಲ್ಲಿ ಕುಸಿದು ಹೋಗಿದ್ದೆ. ಅದ್ಯರ‍್ಯಾರು ಪಂಚಾಯ್ತಿ ಸೇರಿದ್ದಾರೋ ವಿವರ ಮರೆತು ಹೋಗಿದೆ. ನನ್ನ ಹೆಸರಿನವರೇ ಆಗಿದ್ದ ಬಣಕಾರ್ ರುದ್ರಜ್ಜ `ಇದೇನು ದೊಡ್ಡ ವಿಷ್ಯಾ ಅಂತ ಇಲ್ಲಿಗೆ ತಂದಿದಿಯಾ’ ಕೋರಿನ ತೋಟ ಮಾಡೋ ಹುಡುಗ, ಉಳಿದ ಎಲೆ ಕೊಯ್ಯತಾನ, ಅದೇನು ಅಪರಾಧನಾ ಎಂದು ಅವನಿಗೆ ಗದರಿಸಿದರು. ಕಡೆಗೆ `ಉಳಿದ ಎಲೆಯಲ್ಲೂ ಪಾಲು ಬೇಕಂತೆ ಕೊಡಪ್ಪ’ ಅವನಿಗೆ ಎಂದು ತೀರ್ಮಾನ ಹೇಳಿ ಮುಗಿಸಿದ್ದರು. ಅಲ್ಲಿ ಅಪ್ಪ ಮತ್ತು ಅಣ್ಣ ಇದ್ದರೋ ಇಲ್ಲವೋ ಗೊತ್ತಿಲ್ಲ. ಕೋರಿನ ತೋಟದಲ್ಲಿ ಬೆಳೆದ ಎಲ್ಲದರಲ್ಲೂ ನಮ್ಮ ದುಡಿಮೆಯ ಅರ್ಧ ಭಾಗ ಇರುತ್ತದೆ. ಇನ್ನರ್ಧಕ್ಕೆ ಯಾಕೆ ನಾವು ಬೇಡುವ ಕೆಲಸ ಮಾಡಬೇಕು.

ಇನ್ನು ಮೇಲೆ ಏನೇ ಉಳಿದರೂ ನಮ್ಮದೆಂದು ಆಸೆ ಪಡಬಾರದೆಂದು ಅಪ್ಪ ಹೇಳಿದ ಮಾತು ಇಂದಿಗೂ ಮರೆತಿಲ್ಲ. ತೋಟದಿಂದ ಗುಡಿವರೆಗೆ ಎಲೆಪುಟ್ಟಿಯ ಹೊತ್ತು ತಂದು ಪಂಚಾಯ್ತಿ ನಡೆಸಿದ ದಿನವನ್ನು ನನಗೆ ಈಗಲೂ ಮರೆಯಲಾಗುತ್ತಿಲ್ಲ. ಸದ್ಯ ಪಂಚಾಯಿತಿಯವರ ದೃಷ್ಟಿಯಲ್ಲಾದರೂ ಅದೊಂದು ದೊಡ್ಡ ಅಪರಾಧವಲ್ಲವೆಂಬಂತೆ ಮಾತಾಡಿದ್ದು ನನಗೆ ಸಮಾಧಾನ ತಂದಿತ್ತು. ನಂತರ ರಜೆ ಮುಗಿದ ಮೇಲೆ ಸಾಗರಕ್ಕೆ ಹೋಗಿ, ನನ್ನ ಅಭ್ಯಾಸ ಮುಂದುವರಿಸಿದೆ.

ಅಕ್ಕ ಭಾವ ನನ್ನ ಓದು ಬರಹಕ್ಕೆ ಸಹಕಾರಿಯಾಗಿದ್ದರು. ಸರಿಯಾದ ಕುಟುಂಬ ಯೋಜನೆಯ ಅರಿವು ಇರದೆ, ನಾನು ಸಾಗರಕ್ಕೆ ಬಂದಾಗ ಇದ್ದ ಒಬ್ಬಳೇ ಮಗಳ ಜೊತೆ ಮತ್ತೆ ಮೂರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಜನಿಸಿ ಅವರ ಕುಟುಂಬ ಹಿಗ್ಗುತ್ತಾ ಹೋಯಿತು. ನಾನು ಮನೆಯವನಾಗಿ ಸಾಮಾನ್ಯ ಕೆಲಸಗಳಾದ ನೀರು ತರುವುದು, ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ಒಗೆಯುವುದು, ಅಂಗಡಿಯಿAದ ಮನೆಗೆ ಬೇಕಾದ ದಿನಸಿ ತರುವುದು ಎಲ್ಲ ಕೆಲಸ ಮಾಡುತ್ತಿದ್ದೆ. ಅದಕ್ಕಾಗಿ ಒಮ್ಮೊಮ್ಮೆ ಅಕ್ಕ ನನಗೆ ಬಕ್ಷೀಸು ಸಹ ನೀಡುತ್ತಿದ್ದಳು.

ಹೈಸ್ಕೂಲು ಅಭ್ಯಾಸ ಮಾಡುತ್ತಾ ಎಸ್.ಎಸ್.ಎಲ್.ಸಿ.ಗೆ ಬಂದಾಗ ಮನೆಯಲ್ಲಿ ಮಕ್ಕಳ ಗಲಾಟೆಯಿಂದ ಓದಲು ಕಷ್ಟ ಎನ್ನೋ ಕಾರಣದಿಂದ ಸಾಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸುತ್ತಿದ್ದ ಹಾಸ್ಟೆಲ್‌ಗೆ ಸೇರಿಕೊಂಡೆ. ಆಗಿನ ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ರ‍್ಮ ಶೇಖರ್ ಮತ್ತು ಅವರ ಅಣ್ಣ ಹನುಮಂತಪ್ಪ ಹಾಗೂ ಯಶವಂತಪ್ಪ ಒಟ್ಟು ನಾಲ್ಕು ಜನ ಎಸ್‌ಎಸ್‌ಎಲ್‌ಸಿ ತರಗತಿಗೆ ಹೋಗುತ್ತಿದ್ದೆವು. ಪರೀಕ್ಷೆ ಮುಗಿದು ರಿಸಲ್ಟ್ ಬಂದಾಗ ಸಾರ್ವಜನಿಕ ಹಾಸ್ಟೆಲ್‌ನಿಂದ ಪರೀಕ್ಷೆ ಬರೆದವರಲ್ಲಿ ನಾನೊಬ್ಬ ಮಾತ್ರ ಪಾಸಾಗಿದ್ದೆ. ಉಳಿದವರು ಒಂದೊಂದು ವಿಷಯದಲ್ಲಿ ಫೇಲಾಗಿದ್ದರು. ಮುನಿಸಿಪಲ್ ಹೈಸ್ಕೂಲಿನಲ್ಲಿ ಹಾಸ್ಟೆಲ್‌ನಿಂದ ಬರುತ್ತಿದ್ದ ಹುಡುಗರಲ್ಲಿ ನಾನೊಬ್ಬ ಪಾಸಾಗಿರುವ ಬಗ್ಗೆ ತಿಳಿದು ಸಂಸ್ಕೃತ ಅಧ್ಯಾಪಕರು ನನಗೆ ಕರೆದು ಪ್ರೋತ್ಸಾಹದ ಮಾತಾಡಿದ್ದನ್ನು ನಾನಿನ್ನೂ ಕೂಡ ಮರೆತಿಲ್ಲ.

ನಾನು ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಬಂದಾಗ ಊರಿನಲ್ಲಿದ್ದೆ. ನನ್ನ ರಿಜಿಸ್ಟ್ರೇಷನ್ ನಂ. 64960. ಆಗ ಫಲಿತಾಂಶಗಳು ದಿನಪತ್ರಿಕೆಗಳಲ್ಲಿ ಬರುತ್ತಿದ್ದವು. ಅಣ್ಣ ತಿಪ್ಪಣ್ಣ ಬೆಳಗಿನ ಜಾವ ಹೊಸಪೇಟೆಗೆ ವೀಳ್ಯದೆಲೆ ಮಾರಾಟ ಮಾಡಲು ಹೋಗುತ್ತಿದ್ದವನು ಹರಿಹರದಲ್ಲಿ ಪ್ರಜಾವಾಣಿ ಪೇಪರ್‌ನಲ್ಲಿ ನನ್ನ ಫಲಿತಾಂಶವನ್ನು ನೋಡಿ, ನನ್ನ ನಂಬರನ್ನು ಗುರ್ತು ಮಾಡಿ ನನ್ನೂರಿಗೆ ದಿನವೂ ಬರುತ್ತಿದ್ದ ಕ್ಷೌರಿಕ ನರಸಿಂಹಣ್ಣನ ಮುಖಾಂತರ ಪೇಪರ್ ಕಳಿಸಿದ್ದ. ನಾನು ಪೇಪರ್ ನೋಡಲು ಹರಿಹರಕ್ಕೆ ಹೋಗೋ ದಾರಿಯಲ್ಲಿ ನರಸಿಂಹಣ್ಣ ಸಿಕ್ಕು ನಾನು ಪಾಸಾಗಿರುವ ಬಗ್ಗೆ ನನ್ನ ಅಣ್ಣ ತಿಪ್ಪಣ್ಣ ನಂಬರ್ ಗುರ್ತು ಮಾಡಿ ಕೊಟ್ಟದ್ದನ್ನು ನನಗೆ ತೋರಿಸಿ ಸಂತೋಷಪಟ್ಟಿದ್ದ.

ಹನಗವಾಡಿಯಲ್ಲೇ ಹಲವು ವರ್ಷಗಳಿಂದ ಎಸ್.ಎಸ್.ಎಲ್.ಸಿಯಲ್ಲಿ ಸಂಶೋಧನೆ ಮಾಡುತ್ತಾ ಉಳಿದಿದ್ದ ಸ್ನೇಹಿತರೊಡನೆ ನಾನು ಎಸ್.ಎಸ್.ಎಲ್.ಸಿ. ಪರೀಕ್ಷೆ ಪಾಸಾದ ವಿಷಯ ಹೇಳಿದೆ. ಅರ‍್ಯಾರಿಗೂ ನಾನು ಪಾಸಾದ ಬಗ್ಗೆ ನಂಬಿಕೆ ಬರಲಿಲ್ಲ. ಅದರಲ್ಲಿ ಈಗಾಗಲೇ ನಾಲ್ಕು ವರ್ಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲೇ ಉಳಿದಿದ್ದ ಹಿರಿಯ ಮಿತ್ರರಲ್ಲೊಬ್ಬ `ಇಲ್ಲಪ್ಪಾ, ಪೇರ‍್ನಲ್ಲಿ ಬಂದಿರೋದು ನಂಬಕ್ಕಾಗಲ್ಲ, ಫಲಿತಾಂಶ ಸ್ಕೂಲಿಗೆ ಬರೋ ತನಕ ಏನು ಹೇಳುವುದಕ್ಕಾಗಲ್ಲ’ ಎಂದು ಬಾಣ ಬಿಟ್ಟು – ಪಾಸಾಗಿದ್ದೇನೆ ಎಂಬ ಅಸಾಧ್ಯ ಸಂತೋಷದ ಮೂಡಿನಲ್ಲಿದ್ದ ನನಗೆ ಅನುಮಾನದ ಕಿಚ್ಚು ಹಚ್ಚಿದ್ದ. ಆದರೂ ಇದ್ದ ಐದು ಮನೆಯ ಚಲುವಾದಿಗರ ಜೊತೆ ಊರ ಅನೇಕ ಜನರಿಗೆ ನಾನು ಎಸ್.ಎಸ್.ಎಲ್.ಸಿ. ಪಾಸಾದ ಸುದ್ದಿ ಸಂತೋಷ ನೀಡಿತ್ತು.

ನಮ್ಮೂರ ಹಿರಿಯ ರಾಜಕಾರಣಿ ಹೆಚ್. ಸಿದ್ದವೀರಪ್ಪ ನವರ ನಂತರ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲನೇ ಅಟೆಂಪ್ಟ್ನಲ್ಲಿ ಪಾಸಾದವನು ನಾನೇ ಎಂದು ಮಾತಾಡಿ ಕೊಳ್ಳುತ್ತಿದ್ದರು. ನಮ್ಮ ಚಿಕ್ಕಪ್ಪ ಮಹದೇವಪ್ಪನಂತೂ ತಮ್ಮ ಎರಡೂ ಕೈಮುಗಿದುಕೊಂಡು ‘ವಾಲಗದ ಸಮೇತ ವೀರಭದ್ರ ದೇವರಿಗೆ ಹಣ್ಣುಕಾಯಿ ಮಾಡಿಸೋಣ’ ಎಂದು ಸಂತೋಷದಲ್ಲಿ ಹೇಳಿದನಾದರೂ ಹಾಗೇನು ನಾನು ಮಾಡಲಿಲ್ಲ. ನನ್ನ ಎಸ್.ಎಸ್.ಎಲ್.ಸಿ. ವರೆಗಿನ ಓದಿನ ಜೊತೆ ಊರಲ್ಲಿ ರಜಾ ದಿನಗಳಲ್ಲಿ ಹಲವು ಕೆಲಸ ಮಾಡುತ್ತಿದ್ದೆ. ಚಲುವಾದಿಗಳಿಗೆ ವಿಶೇಷವಾದ ಬ್ಯಾಂಡ್‌ಸೆಟ್‌ವೊಂದನ್ನು ರೂಪಿಸಿಕೊಂಡಿದ್ದರು. ಊರ ದೇವರ ಚಾಕರಿಗೆಂದು ಅಪ್ಪ ಚಿಕ್ಕಪ್ಪಂದಿರು ಹಳೆಯ ಮೇಳ ಹೊಂದಿದ್ದರು. ಮೇಳದಲ್ಲಿ ಸುತಿ, (ಶ್ರುತಿ) ಸೊನಾಯಿ, (ಶಹನಾಯಿ) ಸಮಾಳ ಹಾಗೂ ಚೌಗಡ (ಚರ್ಮದ ವಾದ್ಯ) ಊರ ದೇವರ ಚಾಕರಿ ಜೊತೆಗೆ ಊರಲ್ಲಿನ ಮದುವೆ ಮತ್ತು ಸಾವುಗಳ ಸಮಯದಲ್ಲಿ ವಾದ್ಯಮಾಡಿ ಹಣ ಸಂಪಾದಿಸುತ್ತಿದ್ದರು. ಈ ಮ್ಯಾಳದಲ್ಲಿ ಹೋಗುವ ಸಂದರ್ಭದಲ್ಲಿ ಸಾಮೂಹಿಕವಾಗಿ ಎಲ್ಲರೂ ಶುಭ್ರವಾದ ಅಂಗಿ ಪಂಚೆ ಮತ್ತೊಂದು ಟವಲ್ ಜೊತೆಗೆ ತಮ್ಮ ಮ್ಯಾಳದ ಸಾಮಾನು ಮುಚ್ಚಲು ಬೇಕಾದ ಚೀಲಗಳನ್ನು ಅಚ್ಚುಕಟ್ಟಾಗಿ ಶುಚಿಗೊಳಿಸಿಕೊಂಡು ಹೋಗುತ್ತಿದ್ದರು. ಮದುವೆ ಸಮಯಗಳಲ್ಲಿ ಸಂಪಾದನೆ ಜೊತೆಗೆ ಖುಷಿಗಾಗಿ ಕೆಲವರು ನೀಡುವ ಹಣದ ರೂಪದ ಶಭಾಷ್‌ಗಿರಿಯಿಂದಾಗಿ ಸಾಮಾನ್ಯವಾಗಿ ಬಿರುಸಿನ ಹೊಲಮನಿ ಕೆಲಸಗಳು ರುಚಿಸುತ್ತಿರಲಿಲ್ಲ. ಆದರೆ ನಮ್ಮ ಊರಿನವರು ಇದಕ್ಕೆ ಅಪವಾದವೆಂಬಂತೆ ಹೊಲ ಮತ್ತು ತೋಟಗಳಲ್ಲಿ ಮುತುವರ್ಜಿಯಿಂದ ದುಡಿಯುತ್ತಿದ್ದರು. ಆದರೂ ನಮ್ಮ ಅಪ್ಪ ಅಗಾಗ `ಅರಿಶಿಣ ಕೂಳಿಗೋಗಿ ವರ್ಷದ ಕೂಳು ಕಳೆದು ಕೊಳ್ಳಬೇಡಿರೆಂದು’ ಎಚ್ಚರಿಸುತ್ತಿದ್ದರು.

ಊರಿನಲ್ಲಿ ಅಪ್ಪ ಚಿಕ್ಕಪ್ಪಂದಿರ ಮ್ಯಾಳ ಹಳೆಯದಾಯಿತೆಂದು ನಮ್ಮಣ್ಣನೂ ಸೇರಿದಂತೆ ಹೊಸಬರನ್ನು ಸೇರಿಸಿಕೊಂಡು ಹೊಸ ಬ್ಯಾಂಡ್ ಸೆಟ್ ತರಿಸಿ, ಅದಕ್ಕೊಬ್ಬ ಬ್ಯಾಂಡ್ ಮಾಸ್ತರರನ್ನು ನೇಮಿಸಿಕೊಂಡಿದ್ದರು. ಬರಿ ಐದಾರು ಜನರಿದ್ದ ಮ್ಯಾಳವು ಹೊಸ ಹುಡುಗರನ್ನೆಲ್ಲಾ ಸೇರಿಸಿ ಹತ್ತು ಜನರ ಗುಂಪೇ ಆಯಿತು. ನಾನು ಕೂಡ ತರಬೇತಿ ನೀಡುವ ಸಮಯದಲ್ಲಿ ಡೋಲು ಬಾರಿಸಲು ಪ್ರಯತ್ನಪಟ್ಟೆ. ಆದರೆ ಅದು ಯಾಕೋ ನನಗೆ ಕರಗತವಾಗಲಿಲ್ಲ. ಅದೇ ಸಮಯದಲ್ಲಿ ಅಪ್ಪ `ಏನು ಕಲಿತು ಏನು ಬಾರಿಸಿದರೂ ಕೆರ ಬಿಡುವಲ್ಲಿ ಕೂಳು ತಿನ್ನೋ ವಿದ್ಯೆ ಇದು. ನಿನಗೆ ಯಾಕೆ ಬೇಕು ಮಗನೇ’ ಎಂದು ನನ್ನ ಉತ್ಸಾಹಕ್ಕೆ ನೀರೆರಚಿದ್ದರು.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್‌ ನಟನೆ

Published

on

ಸುದ್ದಿದಿನ ಡೆಸ್ಕ್ : ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ರಭಾಸ್.

ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ಕುಮಾರ್‌ ಮುಂತಾದವರು ‘ಕಣ್ಣಪ್ಪ’ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ ಅವರ ಎಂಟ್ರಿಯೂ ಆಗಿದೆ.

ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಖೇಶ‍್‍ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇದೇ 12 ರಂದು ದಾವಣಗೆರೆಯಲ್ಲಿ ಪಾರಂಪರಿಕ ಬೀಜೋತ್ಸವ; ಒಂದು ಸಾವಿರಕ್ಕೂ ಹೆಚ್ಚು ದೇಸಿ ಧಾನ್ಯಗಳ ಪ್ರದರ್ಶನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ದಾವಣಗೆರೆ : ದೇಸಿಯ ಬಿತ್ತನೆ ಬೀಜಗಳ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದೇ 12ರಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಪಾರಂಪರಿಕ ಬೀಜೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್ ಹೇಳಿದ್ದಾರೆ.

ಒಂದು ದಿನದ ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ತಂಡಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಗೊಳ್ಳಲಿವೆ.

ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ’ಸಿದ್ಧ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ ಮತ್ತು ಮೈಸೂರಿನ ಬೀಜಮಾತೆ ಪದ್ಮಾವತಮ್ಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending