Connect with us

ದಿನದ ಸುದ್ದಿ

ಕನ್ನಡ ಭಾಷೆ ಅಳಿದುಹೋಗುವ ಭಾಷೆಗಳಲ್ಲಿ ಒಂದು ಎಂಬ ಮಾತು ಶುದ್ಧ ಸುಳ್ಳು : ಡಾ. ಪ್ರಕಾಶ ಹಲಗೇರಿ

Published

on

ಸುದ್ದಿದಿನ, ದಾವಣಗೆರೆ: “ಕನ್ನಡ” ಎನ್ನುವುದು ಒಂದು ಸಂಸ್ಕೃತಿ, ಬದುಕು, ಅದರಾಚೆಗೆ ಧ್ಯಾನ, ಯೋಗ, ಅನ್ನುವ ವ್ಯಾಖ್ಯಾನ ಗಳು ಕೂಡ ಮೂಡಿಬರುತ್ತಿವೆ. ಅಂದಿನ ಬಹುದೊಡ್ಡ ಚಿಂತಕರಾದ ದಂಢಿ ಹೇಳುವಂತೆ ಭಾಷೆ ಎನ್ನುವುದು ಒಂದು ಬೆಳಕು, ಭಾವ ಸಂಕೇತ, ಸನ್ನೆಗಳ ಮೂರ್ತಾಭಿವ್ಯಕ್ತಿಯೇ ಭಾಷೆ.

ಆದರೆ ಭಾಷಾತಜ್ಞ ಈಸ್ಲರ್ ಹೇಳುವಂತೆ ಆತ್ಮ ಇರುವ ಎಲ್ಲಾ ಪ್ರಾಣಿಗಳ ಅನುಭವದ ಅಭಿವ್ಯಕ್ತಿಯೇ ಭಾಷೆ. ಎಂದು ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಂತರ್ಜಾಲದ ಮೂಲಕ ಏರ್ಪಡಿಸಿರುವ ಕನ್ನಡ ನುಡಿಹಬ್ಬ ಕಾರ್ಯಕ್ರಮದ ಎಂಟನೇ ದಿನದ ಉಪನ್ಯಾಸವನ್ನು ನೀಡುತ್ತಾ ಡಾ. ಪ್ರಕಾಶ ಹಲಗೇರಿ ಯವರು ಮಾತನಾಡಿದರು.

ಗ್ಲೋಬಲೈಸೇಶನ್ ಅಂತಹ ಸಂದರ್ಭದಲ್ಲಿ ಯಾವುದೇ ಒಂದು ದೇಶಿ ಭಾಷೆ ತನ್ನ ಕಸುವನ್ನು ಮೀರಿ ಅದು ವಿಶ್ವ ಭಾಷೆ ಆಗುತ್ತಾ ದಾಪುಗಾಲಿಡ ಬೇಕಾಗಿದೆ. ದೇಶೀ ಭಾಷೆಗಳಿಗೆ ಅಸ್ಮಿತೆ ಇದೆ. ಈ ಭಾಷೆಗಳಿಗೆ ನಿಜವಾದ ಆತ್ಮಾಭಿಮಾನದ, ಸ್ವಾಭಿಮಾನದ ಸಂಕೇತ ಎನ್ನುವ ತಿಳುವಳಿಕೆಗಳು ಜರೂರಾಗಿ ಮೂಡಬೇಕಾಗಿದೆ.

ಸುಮಾರು 2000 ವರ್ಷಗಳ ಇತಿಹಾಸವುಳ್ಳ ನನ್ನ ಕನ್ನಡ ಭಾಷೆ ಅದು ಕೇವಲ ಚಿನ್ನದ ಭಾಷೆಯಲ್ಲ, ಪ್ರೊ. ಬರಗೂರು ರಾಮಚಂದ್ರಪ್ಪ ನವರು ಹೇಳುವಂತೆ ನನ್ನ ಕನ್ನಡ ಭಾಷೆ ಅನ್ನದ ಭಾಷೆಯೂ ಹೌದು ಅದು ಆಗಬೇಕು. ಇದಕ್ಕೆ ಸರ್ಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಇನ್ನೂ ಅನೇಕ ಕನ್ನಡಪರ ಸಂಸ್ಥೆಗಳು ಹೆಚ್ಚು ಹೆಚ್ಚು ಜನಮುಖಿಯಾಗಿ ಸಾಗಬೇಕು.

ಕೆಲವು ಜನರ ಅಭಿಪ್ರಾಯದಂತೆ ಕನ್ನಡ ಭಾಷೆ ಅಳಿದುಹೋಗುವ ಭಾಷೆಗಳಲ್ಲಿ ಒಂದು. ಅದು ಒಪ್ಪತಕ್ಕಂತಹ ಮಾತಲ್ಲ. ಶುದ್ಧ ಸುಳ್ಳು. ಒಂದು ಭಾಷೆ ಅಳಿದು ಹೋಗಬೇಕಾದರೆ ಆ ಭಾಷೆ ಯಾಡುವ ಮನುಷ್ಯ ಅಳಿದು ಹೋಗಬೇಕು. ಅದು ಆಗದ ಮಾತು.

ಡಾಕ್ಟರ್ ಪೂರ್ಣಚಂದ್ರತೇಜಸ್ವಿ, ಡಾಕ್ಟರ್ ಚಂದ್ರಶೇಖರ ಕಂಬಾರರು ಕನ್ನಡದ ತಾಂತ್ರಿಕ ಅಂಶಗಳನ್ನು ಕುರಿತಾದ ಯೂನಿಕೋಡ್ ಬಗ್ಗೆ ಮಾತನಾಡಿದ್ದರು. ಮುಂದುವರೆದು ಎಲ್. ಹನುಮಂತಯ್ಯನವರು ಅಭಿಪ್ರಾಯದಂತೆ ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆ ಅಳವಡಿಸುವ ಕೆಲಸಕ್ಕೆ ಮತ್ತಷ್ಟು ವೇಗ ನೀಡಲಾಗುವುದು. ತಾಂತ್ರಿಕ ಕ್ಷೇತ್ರಗಳಲ್ಲಿ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಇತ್ಯಾದಿ ಕಡೆ ಹೆಚ್ಚು ಕನ್ನಡವನ್ನು ಬಳಸುವ ಹಾಗೆ ಮಾಡಲಾಗುವುದು. ಈ ಮಾತು ಕನ್ನಡ ಭಾಷಾ ಬೆಳವಣಿಗೆ ಮತ್ತು ಅಸ್ಮಿತೆ ವಿಚಾರದಲ್ಲಿ ಒಂದು ಆಶಾವಾದ ಹುಟ್ಟು ಹಾಕುವಂತಿದೆ.

ಕನ್ನಡ ಒಂದು ಕೇವಲ ಭಾಷೆಯಲ್ಲ, ಅದು ನುಡಿ ಬೆಳಕು, ಅದೊಂದು ಸೊಬಗಿನ ಸೋನೆ, ಬೆಡಗಿನ ಬೇನೆ, ಬೆಳಕಿನ ಖಜಾನೆಯಾಗಿದೆ ಎಂದು ಹೇಳುತ್ತಾ, ನಾವು ನಮ್ಮಲ್ಲಿರುವ ಮಡಿವಂತಿಕೆ ಬಿಟ್ಟು ಮತಿವಂತರಾಗಬೇಕು ಹಾಗೂ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ರವರ ಪ್ರಕಾರ ಕನ್ನಡ ಭಾಷೆ ಭಾವೋಪಯೋಗಿ, ಜೀವನೋಪಯೋಗಿ ಲೋಕೋಪಯೋಗಿಯೂ ಹೌದು. ಹಾಗಾಗಿ ಕನ್ನಡ ಭಾಷೆ ಒಂದು ಅಗಾಧತೆಯನ್ನು ಹೊಂದಿದೆ.
ಕಲಿಯೋಕೆ ಕೋಟಿ ಭಾಷೆ, ಹಾಡೋಕೆ ಒಂದೇ ಭಾಷೆ, ಕನ್ನಡ ಕನ್ನಡ ಕನ್ನಡ ಎಂದು ತಮ್ಮ ಕನ್ನಡ ಅಭಿಮಾನದ ಮಾತುಗಳನ್ನು ಉಪನ್ಯಾಸದ ಮೂಲಕ ಡಾ ಪ್ರಕಾಶ ಹಲಗೇರಿಯವರು ನುಡಿದರು.

ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರು ಮಾತನಾಡಿ,ಕನ್ನಡ ನಾಡ ಅಸ್ಮಿತೆ ಪ್ರಶ್ನೆ ಬಂದಾಗ ನಮ್ಮ ನಾಡು ಎಂಬುದು ಬೂಟಾಟಿಕೆಯ ನಾಟಕವಸ್ಟೇ ಅಲ್ಲ, ಇದು ಇಂದು ನಿರ್ಮಿಸಿ ನಾಳೆ ಕಿತ್ತು ಬಿಸಾಡುವಂತಹ ಸರ್ಕಾರ ಗಳಲ್ಲ, ಇದಕ್ಕೆ ಪರಂಪರೆಯಿದೆ ಕನ್ನಡ ಸಾಂಸ್ಕೃತಿಕ ಪರಂಪರೆಯು ತನ್ನದೇ ಆದ ಇತಿಹಾಸ ಹೊಂದಿದೆ.

ಎಂದು ಕುವೆಂಪುರವರ ಮಾತನ್ನು ಸರಿಸುತ್ತಾ ಇಲ್ಲಿ ನೃಪತುಂಗನೇ ಚಕ್ರವರ್ತಿ, ಪಂಪನೇ ಮುಖ್ಯಮಂತ್ರಿ, ರನ್ನ ಜನ್ನ ನಾಗವರ್ಮ, ರಾಘವಾಂಕ, ಹರಿಹರ ಬಸವೇಶ್ವರ, ನಾರಾಯಣಪ್ಪ, ಸರ್ವಜ್ಞ, ಷಡಕ್ಷರಿ ಮೊದಲಾದವರೆಲ್ಲ ಮಂತ್ರಿಮಂಡಲದ ಸದಸ್ಯರಾಗಿದ್ದಾರೆ. ಇದು ನಮ್ಮ ಸರಸ್ವತಿ ರಚಿಸಿದ ಸಚಿವ ಸಂಪುಟದ ಮಂಡಲವೆಂದು ಉದ್ಗರಿಸಿರು ವುದು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದೇ ಭಾವಿಸಿದ್ದೇನೆ ಎಂದರು.

ಕವಿ ಕುವೆಂಪುರವರು ಮುಂದುವರೆದು ಹೇಳಿರುವಂತೆ ಕರ್ನಾಟಕವೆಂಬುದು ಬರೀ ಒಂದು ಭೂಪ್ರದೇಶ ವಲ್ಲ, ಮಣ್ಣಿನ ಹೆಸರಲ್ಲ, ಕನ್ನಡಿಗರಿಗೆ ಕನ್ನಡಿಗರ ಪಾಲಿಗೆ ಅದು ಮಂತ್ರ, ಶಕ್ತಿ, ತಾಯಿ, ದೇವಿ, ಬೆಂಕಿ, ಸಿಡಿಲು, ಎಲ್ಲವೂ ಆಗಿದೆ. ಕನ್ನಡ ಒಲಿದವರಿಗೆ ದೇವಿಯೂ ಕೆಣಕಿದವರಿಗೆ ಕಾಳಿಯೂ ಆಗುತ್ತಾಳೆ.

ಇದನ್ನು ಅರಿಯುವ ಕಣ್ಣು ನಮ್ಮ ಕನ್ನಡಿಗರದ್ದಾಗಿ ಇರಬೇಕು ಎಂಬುದಾಗಿ ಸೊಗಸಾಗಿ ರಾಷ್ಟ್ರಕವಿ ಕುವೆಂಪುರವರು ಹೇಳಿದ ವಾಣಿಯನ್ನು ಸ್ಮರಿಸುತ್ತಾ ನಾವು ಕನ್ನಡಿಗರಾಗಿ ಹುಟ್ಟಿರುವುದೇ ನಮ್ಮೆಲ್ಲರ ಸುದೈವ, ಕನ್ನಡಿಗರ ಅಸ್ಮಿತೆಗೆ ಧಕ್ಕೆ ಬಂದಾಗ ನಾವು-ನೀವೆಲ್ಲರೂ ಸಿಡಿದೇಳಬೇಕು ತಮ್ಮ ಅಧ್ಯಕ್ಷೀಯ ಮಾತುಗಳ ಮೂಲಕ ಎಂದು ಕರೆಕೊಟ್ಟರು.

ಆರಂಭದಲ್ಲಿ ಎಲ್ ಜಿ ಮಧು ಕುಮಾರ್ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕರು ಇವರು ಸರ್ವರನ್ನು ಸ್ವಾಗತಿಸುತ್ತಾ ಉಪನ್ಯಾಸಕರ ಕಿರು ಪರಿಚಯ ಮಾಡಿಕೊಟ್ಟರು.ಕಾರ್ಯಕ್ರಮದಲ್ಲಿ ದಾವಣಗೆರೆ ವಿದ್ಯಾನಗರ ದ ಸುಶ್ರಾವ್ಯ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಯಾದ ಶ್ರೀಮತಿ ಯಶಾ ದಿನೇಶ್ ಮತ್ತು ರಕ್ಷಾ ಸರಳಾಯ ಇವರು ಸುಗಮ ಸಂಗೀತವನ್ನು ನಡೆಸಿಕೊಟ್ಟರು.

ವಿಡಿಯೋ ನೋಡಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

Published

on

ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.

23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.

ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್‍ ಆಹ್ವಾನ

Published

on

ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್‍ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್‍ ಸಂಜೀವ್‍ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್‍ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.

ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್‍, ಸೋಷಿಯಲ್‍ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ಒಂದು ಮೊಬೈಲ್‍ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್‍ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು

Published

on

ಸುದ್ದಿದಿನ,ರಾಯಚೂರು: ಕಟ್ಟಡದ ಮೇಲ್ಛಾವಣಿಯ ಸಜ್ಜಾ ಏಕಾಏಕಿ ಕುಸಿದು ಬಿದ್ದು ಮೂವರು ಯುವಕರು ಮೃತಪಟ್ಟ ದುರ್ಘಟನೆ ಭಾನುವಾರ ಜಿಲ್ಲೆಯ ದೇವದುರ್ಗ ಪಟ್ಟಣದ ಹೊಸ ಬಸ್ ನಿಲ್ದಾಣದ ಸಮೀಪ ಸಂಭವಿಸಿದೆ.

ಮೃತರನ್ನು ದೇವದುರ್ಗ ತಾಲೂಕಿನ ಸಮುದ್ರ ಗ್ರಾಮದ ರವಿಚಂದ್ರ (35), ಕ್ಯಾದಿಗೆರಾ ಗ್ರಾಮದ ನಾಗರಾಜ್ (30) ಹಾಗೂ ಕೊತ್ತಿಗುಡ್ಡದ ಅರ್ಜುನ್ (21) ಎಂದು ಗುರುತಿಸಲಾಗಿದೆ.

ಕಟ್ಟಡದ ಅವಶೇಷಗಳಡಿ ಸಿಲುಕಿ ರವಿಚಂದ್ರ ಹಾಗೂ ನಾಗರಾಜ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅರ್ಜುನ್‌ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಾಹಿತಿಯ ಪ್ರಕಾರ, ಯುವಕರು ತಾವೇ ನಿರ್ಮಿಸಿದ್ದ ‘ಅಂತ್ಯವಾಯ್ತು’ ಎಂಬ ಕಿರುಚಿತ್ರದ ಪೋಸ್ಟರ್ ಅಂಟಿಸಲು ಕಟ್ಟಡದ ಬಳಿ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

ಕಟ್ಟಡದ ಮೇಲ್ಛಾವಣಿಯ ಒಂದು ಭಾಗವು, ಅದಕ್ಕೆ ಜೋಡಣೆಯಾಗಿದ್ದ ಕಬ್ಬಿಣದ ಮೆಟ್ಟಿಲುಗಳ ಸಹಿತ ಕುಸಿದು ಬಿದ್ದಿದೆ. ಘಟನೆಯಲ್ಲಿ ಉಮೇಶ್, ಪ್ರಭು ಹಾಗೂ ಅಭಿಷೇಕ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಘಟನಾ ಸ್ಥಳಕ್ಕೆ ದೇವದುರ್ಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯ ನಂತರ ನಿಖರ ಕಾರಣ ತಿಳಿಯಲಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ ಭೇಟಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending