Connect with us

ದಿನದ ಸುದ್ದಿ

ಕನ್ನಡ ರಾಜ್ಯೋತ್ಸವ ಮತ್ತು ಅಂಬೇಡ್ಕರ್

Published

on

  • ರಘೋತ್ತಮ ಹೊ.ಬ

ರ್ನಾಟಕ 1956 ನವೆಂಬರ್ 1 ರಂದು ಕನ್ನಡ ಮಾತಾಡುವ ಜನರನ್ನೊಳಗೊಂಡ ಪ್ರತ್ಯೇಕ ಭಾಷಾವಾರು ರಾಜ್ಯವಾದದ್ದು ಎಲ್ಲರಿಗೂ ತಿಳಿದದ್ದೆ. ಆ ಕಾರಣಕ್ಕೆ ಪ್ರತಿ ವರ್ಷ ನವೆಂಬರ್ 1 ರಂದು ನಾವು ಕನ್ನಡ ರಾಜ್ಯೋತ್ಸವ ಆಚರಿಸುತ್ತೇವೆ. ಹಾಗಿದ್ದರೆ ಇಲ್ಲಿ ಅಂಬೇಡ್ಕರ್ ಹೇಗೆ ಪ್ರಾಮುಖ್ಯತೆ ಪಡೆಯುತ್ತಾರೆ ಎಂದು ಕೆಲವರಿಗಾದರೂ ಆಶ್ಚರ್ಯವಾಗಬಹುದು. ಆದರೆ ಅಂಬೇಡ್ಕರ್ ಪ್ರಾಮುಖ್ಯತೆ ಪಡೆಯುತ್ತಾರೆ.

ಏಕೆಂದರೆ ರಾಜ್ಯಗಳ ಪುನರ್ರಚನೆಗೆ ಸಂಬಂಧಿಸಿದಂತೆ 1955 ರಲ್ಲಿ ರಚನೆಯಾಗಿದ್ದ ಆಯೋಗದ ಮುಂದೆ ಬಾಬಾಸಾಹೇಬರು ತಮ್ಮ ಚಿಂತನೆಗಳನ್ನು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಭಾಷಾವಾರು ರಾಜ್ಯಗಳ ರಚನೆಗೆ ಅಂಬೇಡ್ಕರರು ತಮ್ಮ ಪ್ರಬಲ ವಾದ ಮಂಡಿಸಿದ್ದಾರೆ.

ಈ ನಿಟ್ಟಿನಲ್ಲಿ ಅಂಬೇಡ್ಕರ್ ರವರ ಮತ್ತು ಅವರ ಹಾಗೆಯೇ ವಾದ ಮಂಡಿಸಿದ ಇತರರ ವಾದದ ಆಧಾರದ ಮೇಲೆ ರಾಜ್ಯ ಪುನರ್ ವಿಂಗಡಣಾ ಆಯೋಗ ಭಾಷಾವಾರು ರಾಜ್ಯಗಳ ರಚನೆಗೆ ಶಿಫಾರಸ್ಸು ಮಾಡುತ್ತದೆ. ಅಂದಹಾಗೆ ಹಾಗೆ ಶಿಫಾರಸ್ಸುಗೊಂಡು ರಚಿತವಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಮತ್ತು ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವದ ಈ ಹಿನ್ನೆಲೆಯಲ್ಲಿ ಅಂಬೇಡ್ಕರರು ಕೂಡ ಪ್ರಾಮುಖ್ಯತೆ ಪಡೆಯುತ್ತಾರೆ ಎಂಬುದು ಗಮನಿಸತಕ್ಕ ಅಂಶ.

ಅಂದಹಾಗೆ ಈ ದಿಸೆಯಲ್ಲಿ, ಕರ್ನಾಟಕ ಮತ್ತು ಆ ತರಹದ ಅನೇಕ ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಅಂಬೇಡ್ಕರರ ವಿಚಾರಗಳೇನು? ನೇರ ದಾಖಲಿಸುವುದಾದರೆ, ಅಂಬೇಡ್ಕರರು ಬರೆಯುತ್ತಾರೆ “ಒಂದು ಭಾಷೆ- ಒಂದು ರಾಜ್ಯ ಎಂಬುದು ಬಹುತೇಕ ಆಡಳಿತ ವ್ಯವಸ್ಥೆಯ ಸರ್ವ ಸಾಮಾನ್ಯ ಲಕ್ಷಣವಾಗಿದೆ.

ಉದಾಹರಣೆಗೆ ಜರ್ಮನಿಯ ಸಂವಿಧಾನವನ್ನು ಗಮನಿಸಿ, ಪ್ರಾನ್ಸ್ ನ ಸಂವಿಧಾನವನ್ನು ಗಮನಿಸಿ, ಇಟಲಿಯ ಸಂವಿಧಾನ, ಇಂಗ್ಲೆಂಡ್ ನ ಸಂವಿಧಾನ ಮತ್ತು ಅಮೆರಿಕದ ಸಂವಿಧಾನ ಹೀಗೆ ಸಂವಿಧಾನಗಳನ್ನು ಗಮನಿಸಿ “ಒಂದು ಭಾಷೆ- ಒಂದು ರಾಜ್ಯ” ಎಂಬುದು ಕಡ್ಡಾಯ ನಿಯಮವಾಗಿದೆ ಮತ್ತು ಈ ನಿಯಮದಿಂದ ಎಲ್ಲೆಲ್ಲಿ ವಿಮುಖತೆಯು ನಡೆದಿದೆಯೋ ಅಲ್ಲೆಲ್ಲ ಆಡಳಿತ ವ್ಯವಸ್ಥೆಗೆ ಅಪಾಯ ಒದಗಿದೆ.

ಅಂದಹಾಗೆ ಹಳೆಯ ಟರ್ಕಿಷ್ ಸಾಮ್ರಾಜ್ಯ ಮತ್ತು ಆಸ್ಟ್ರಿಯನ್ ಸಾಮ್ರಾಜ್ಯಗಳಲ್ಲಿ ನಾವು ಇಂತಹ ಮಿಶ್ರ ಭಾಷಾ ರಾಜ್ಯಗಳನ್ನು ಕಾಣಬಹುದು. ಈ ನಿಟ್ಟಿನಲ್ಲಿ ಬಹುಭಾಷಾ ರಾಜ್ಯಗಳು ಎಂಬುದರ ಅರ್ಥವನ್ನು ನಾವು ಹುಡುಕುವುದಾದರೆ ಸದರಿ ರಾಜ್ಯಗಳು (ಹಳೆಯ ಟರ್ಕಿ ಮತ್ತು ಆಸ್ಟ್ರಿಯಾ ರಾಜ್ಯ ಗಳು) ಬಹುಭಾಷೆಯ ತಮ್ಮ ಕಾರಣಕ್ಕಾಗಿಯೇ ಛಿದ್ರಗೊಂಡು ನಾಶವಾದವು.

ಭಾರತವೂ ಕೂಡ ಹೀಗೆ ಮಿಶ್ರ ಭಾಷೆಗಳ ರಾಜ್ಯಗಳ ಸಮುದಾಯವಾಗಿಯೇ ಮುಂದುವರೆದರೆ ಅದೂ ಕೂಡ (ಆಸ್ಟ್ರಿಯಾ ಮತ್ತು ಟರ್ಕಿ ದೇಶಗಳು ಅನುಭವಿಸಿದ) ಅಂತಹ ದುರಂತ ಪರಿಸ್ಥಿತಿ ತಪ್ಪಿಸಿಕೊಳ್ಳುವುದು ಅಸಾಧ್ಯ.” ಬಾಬಾಸಾಹೇಬರು ಸ್ಪಷ್ಟ ಪಡಿಸುತ್ತಾರೆ. ಅವರು ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್, ಇಟಲಿ ಸಂವಿಧಾನ ಗಳ ಉದಾಹರಣೆ ಕೊಡುತ್ತಾರೆ ಹಾಗೆಯೇ ಬಹುಭಾಷೆಗಳ ರಾಜ್ಯ ವಾಗಿ ಆಸ್ಟ್ರಿಯಾ ಮತ್ತು ಟರ್ಕಿ ನಾಶವಾದದ್ದನ್ನು ಕೂಡ ಉಲ್ಲೇಖಿಸುತ್ತಾರೆ.

ಹಾಗಿದ್ದರೆ ಬಹು ಭಾಷೆಗಳ ರಾಜ್ಯ ಏಕೆ ಅಸ್ಥಿರ ಮತ್ತು ಏಕ ಭಾಷೆಯ ರಾಜ್ಯ ಏಕೆ ಸ್ಥಿರ? ಈ ಪ್ರಶ್ನೆಗೆ ಅಂಬೇಡ್ಕರರು ನೀಡುವ ಉತ್ತರ, “ರಾಜ್ಯ ಎಂಬುದು ನಾವು ಮತ್ತು ನಮ್ಮವರು ಎಂಬ ಸಹ ಭಾವನೆಯ ಆಧಾರದ ಮೇಲೆ ಕಟ್ಟಲ್ಪಟ್ಟಿದೆ” ಎಂದು. ಹಾಗಿದ್ದರೆ “ನಾವು ಮತ್ತು ನಮ್ಮವರು, ಈ ಭಾವನೆ ಹಾಗೆಂದರೇನು?” ಹೀಗೆ ಪ್ರಶ್ನಿಸುತ್ತಾ ಅಂಬೇಡ್ಕರರು ಹೇಳುವುದು “ಸಂಕ್ಷಿಪ್ತವಾಗಿ ಹೇಳುವುದಾದರೆ ಅದೊಂದು ರೀತಿ ನಾವೆಲ್ಲ ಒಂದೇ ಎಂಬ ಸಾಂಸ್ಥಿಕ ಭಾವನೆಯನ್ನು ಅನುಭವಿಸುವುದು ಮತ್ತು ಅಂತಹ ಅನುಭವ ಅಥವಾ ಭಾವ ಅವರಲ್ಲಿ ತಾವು ಪರಸ್ಪರ ಬಂಧುಗಳು ಎಂಬ ಭಾವವನ್ನು ಸೃಜಿಸುತ್ತದೆ.

ಈ ನಿಟ್ಟಿನಲ್ಲಿ ಈ ಭಾವ ಇದೊಂದು ರೀತಿ ಎರಡು ಅಲಗಿನ ಕತ್ತಿಯ ಮಾದರಿಯದು. ಯಾಕೆಂದರೆ ಒಂದೆಡೆ ಇದು ತನ್ನ ಬಂಧು ಬಳಗದವರೆಡೆ ಒಂದು ರೀತಿಯ ತನ್ನವರು ಭಾವ ಎಂಬ ಸೃಜಿಸುತ್ತದೆ ಮತ್ತೊಂದೆಡೆ ತನ್ನ ಬಂಧು ಬಳಗದವರಲ್ಲದವರೆಡೆ ತನ್ನವರಲ್ಲ ಎಂಬ ಭಾವ ಸೃಜಿಸುತ್ತದೆ. ಈ ಕಾರಣಕ್ಕಾಗಿ ಇದೊಂದು ರೀತಿ ನಾವೆಲ್ಲ ಒಂದೇ ಎಂಬ ಭಾವ. ಈ ದಿಸೆಯಲ್ಲಿ ಇಂತಹ ಭಾವ ಹಾಗೆ ಪರಸ್ಪರ ಪ್ರಬಲ ಭಾವನೆಯುಳ್ಳವರನ್ನು ಅದು
ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಪರಸ್ಪರ ಕಟ್ಟುತ್ತದೆ ಮತ್ತು ತಮ್ಮವರಲ್ಲದವರನ್ನು ಅದು ದೂರ ತಳ್ಳುತ್ತದೆ.

ಒಟ್ಟಾರೆ ಅದು ಒಂದು ಜನ ಸಮೂಹ ಬೇರೆ ಯಾವುದೇ ಗುಂಪುಗಳಿಗೆ ಸೇರದೆ
ಪರಸ್ಪರ ಬೆರೆಯಲು ಹಾತೊರೆಯುವುದಾಗಿದೆ”. ಹೀಗೆ ಅಂಬೇಡ್ಕರರು ಭಾಷಾವಾರು ರಾಜ್ಯಗಳು ಮತ್ತು ಅಂತಹ ರಾಜ್ಯ ಗಳಲ್ಲಿ ಒಂದೇ ಭಾಷೆಯವರು ಒಂದೇ ಎಂಬ ಭಾವದಲ್ಲಿ ಬರೆಯುವುದನ್ನು ತಮ್ಮ ಉತ್ಕೃಷ್ಟ ಬರವಣಿಗೆಯಲ್ಲಿ ಉಪಮೆಗಳಲ್ಲಿ‌ ಹಿಡಿದಿರುತ್ತಾರೆ. ಹಾಗಿದ್ದರೆ “ನಾವು ನಮ್ಮ ವರು” ಎಂಬ ಈ ಭಾವ ತಪ್ಪಲ್ಲವೆ? ಯಾಕೆಂದರೆ ಅಂಬೇಡ್ಕರರ ಈ ಮಾತಿನಂತೆ “ನಾವು ಕನ್ನಡಿಗರು, ಅವರು ತಮಿಳಿನವರು” ಎಂದು ನಾವು ಈಗಲೂ ಹೇಳುತ್ತೇವಲ್ಲ ಅದು ತಪ್ಪು ಎಂಬುದಲ್ಲವೆ ಎನ್ನುವುದಾದರೆ ಇದಕ್ಕೆ ಬಾಬಾಸಾಹೇಬರು ಹೇಳುವುದು “ನಾವು ನಮ್ಮವರು ಎಂಬ ಈ ಭಾವದ ಅಸ್ತಿತ್ವವೇ
ಸ್ಥಿರ ಮತ್ತು ಪ್ರಜಾಪ್ರಭುತ್ವ ಮಾದರಿಯ ರಾಜ್ಯದ ಪ್ರಮುಖ ಲಕ್ಷಣ” ಎಂದು. (ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.1, ಪು.143 ಮತ್ತು 144)

ಹೌದು, ಪ್ರಜಾಪ್ರಭುತ್ವದ ಪ್ರಬಲ ಪ್ರತಿಪಾದಕರಾದ ಬಾಬಾಸಾಹೇಬರು ಹೇಳುವುದು ಅಥವಾ ಏಕಭಾಷೆಯ ರಾಜ್ಯಗಳ ಅಸ್ತಿತ್ವಕ್ಕೆ ಅವರು ನೀಡುವ ಎರಡು ಕಾರಣಗಳಲ್ಲಿ ಪ್ರಮುಖವಾದದ್ದು ಅಥವಾ ಮೊದಲನೆಯದು ಪ್ರಜಾಪ್ರಭುತ್ವ. ಅಂದರೆ ಬಾಬಾಸಾಹೇಬರು ಹೇಳುವುದು “ಘರ್ಷಣೆ ಇಲ್ಲದೆ ಪ್ರಜಾಪ್ರಭುತ್ವವಿಲ್ಲ. ಆದ್ದರಿಂದ ನಾವು ನಮ್ಮವರು ಎಂಬ ಭಾವವಿಲ್ಲದೆ ಪ್ರಜಾಪ್ರಭುತ್ವ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ” ಎಂದು. ಇನ್ನು ಎರಡನೆಯ ಕಾರಣ ಅವರು ನೀಡುವುದು “ಜನಾಂಗೀಯ ಮತ್ತು ಸಾಂಸ್ಕೃತಿಕ ಸಿಕ್ಕುಗಳನ್ನು ಪರಿಹರಿಸಲು ಏಕ ಭಾಷೆ ರಾಜ್ಯ ಅಗತ್ಯ” ಎಂದು.

ಯಾಕೆಂದರೆ ಇದಕ್ಕೆ ಬಾಬಾಸಾಹೇಬರೇ ಉದಾಹರಣೆ ನೀಡುತ್ತಾರೆ ಅದೆಂದರೆ “ಆಂಧ್ರ ಮತ್ತು ತಮಿಳಿಗರ ಕಚ್ಚಾಟ, ಆಂಧ್ರ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ, ಗುಜರಾತ್ ಮತ್ತು ಮಹಾರಾಷ್ಟ್ರಿಗರ ಕಚ್ಚಾಟ… ಇತ್ಯಾದಿ” (ಗಮನಿಸಿ, ಅಂಬೇಡ್ಕರರು ತಮಿಳಿಗರು ಮತ್ತು ಕನ್ನಡಿಗರ ಕಚ್ಚಾಟ ಪ್ರಸ್ತಾಪಿಸಿಲ್ಲ! ಯಾಕೆಂದರೆ ಆಗಿನ್ನೂ ಸಮಗ್ರ ಕರ್ನಾಟಕ ಅಸ್ತಿತ್ವಕ್ಕೆ ಬಂದಿರಲಿಲ್ಲವಲ್ಲ!)
ಒಟ್ಟಾರೆ ಬಾಬಾಸಾಹೇಬ್ ಅಂಬೇಡ್ಕರ್ ರವರು “ಒಂದೇ ಭಾಷೆ – ಒಂದೇ ರಾಜ್ಯ” ಹಿನ್ನೆಲೆಯಲ್ಲಿ ಪ್ರತ್ಯೇಕ ಭಾಷಾವಾರು ರಾಜ್ಯಗಳ ರಚನೆಯನ್ನು ಪ್ರತಿಪಾದಿಸಿದ್ದಾರೆ.

ಅಂದಹಾಗೆ ಅಂಬೇಡ್ಕರರು ಅಂದು ಪ್ರಸ್ತಾಪಿಸಿದ ಕರ್ನಾಟಕ ರಾಜ್ಯದಲ್ಲಿ ಅಂದು 1.90 ಕೋಟಿ ಜನರಿದ್ದರು (1951 ರ ಗಣತಿ) ಮತ್ತು ಕರ್ನಾಟಕದ ಪ್ರಸ್ತಾಪಿತ ವಿಸ್ತೀರ್ಣ 72,730 ಚ.ಮೈಲುಗಳು ಇತ್ತು. ಅದರ ಆಧಾರದಲ್ಲಿ ಕರ್ನಾಟಕ ರಾಜ್ಯ 1956 ನವೆಂಬರ್ 1 ರಂದು ಅಸ್ತಿತ್ವಕ್ಕೆ ಬಂತು. ಈ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ಈ ದಿನ ಕನ್ನಡಿಗರು ಬಾಬಾಸಾಹೇಬರನ್ನು ಸ್ಮರಿಸಿಕೊಳ್ಳಬೇಕು‌. ಭಾಷಾ ಆಧಾರದಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಉದಯಕ್ಕೆ “ಭಾಷಾವಾರು ರಾಜ್ಯ ರಚನೆಯ ಉದ್ದೇಶದ ಅವರ ಚಿಂತನೆಗಳು ಕಾರಣ” ಎಂಬುದನ್ನು ಅರಿಯಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.

ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಸತಿ ಯೋಜನೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ವಸತಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಜೂನ್ 12 ಕೊನೆಯ ದಿನವಾಗಿರುತ್ತದೆ.

ಈ ಯೋಜನೆಯಡಿ ಸೌಲಭ್ಯ ಒದಗಿಸಲು ನಿಗಧಿತ ಅರ್ಜಿ ನಮೂನೆಯಲ್ಲಿ ಅವಶ್ಯಕ ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಗ್ರೇಡ್-1ರವರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಚನ್ನಗಿರಿ ಕಚೇರಿಯನ್ನು ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..

Published

on

1. ಸಮತೋಲಿತ ಆಹಾರ (Balanced Diet): ನಿಮ್ಮ ಆಹಾರದಲ್ಲಿ ಹೆಚ್ಚು ನಾರಿನಂಶವಿರುವ (fiber) ತರಕಾರಿ, ಸೊಪ್ಪು, ಮೊಳಕೆ ಬರಿಸಿದ ಕಾಳುಗಳು ಮತ್ತು ಸಿರಿಧಾನ್ಯಗಳನ್ನು ಬಳಸಿ. ಕಾರ್ಬೋಹೈಡ್ರೇಟ್ ಹಾಗೂ ಎಣ್ಣೆಯಂಶವಿರುವ ಆಹಾರವನ್ನು ಕಡಿಮೆ ಮಾಡಿ.

2. ಸಿಹಿ ಪದಾರ್ಥಗಳ ನಿಯಂತ್ರಣ (Avoid Sweets): ಸಕ್ಕರೆ, ಬೆಲ್ಲ, ಬೇಕರಿ ತಿಂಡಿಗಳು, ಐಸ್‌ಕ್ರೀಮ್ ಮತ್ತು ಕೃತಕ ಸಕ್ಕರೆ ಇರುವ ತಂಪು ಪಾನೀಯಗಳ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ ಅಥವಾ ದೂರವಿಡಿ.

3. ದಿನನಿತ್ಯದ ವ್ಯಾಯಾಮ (Regular Exercise): ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ವೇಗದ ನಡಿಗೆ (brisk walking), ಸೈಕ್ಲಿಂಗ್, ಈಜು ಅಥವಾ ಯೋಗ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

4. ದೇಹದ ತೂಕದ ನಿರ್ವಹಣೆ (Weight Management): ಅತಿಯಾದ ದೇಹದ ತೂಕವು ಇನ್ಸುಲಿನ್ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು ಅತ್ಯಗತ್ಯ.

5. ನಿಯಮಿತ ರಕ್ತದ ಪರೀಕ್ಷೆ (Regular Blood Sugar Check): ವೈದ್ಯರ ಸಲಹೆಯಂತೆ ಕಾಲಕಾಲಕ್ಕೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Fasting ಮತ್ತು Post Prandial) ಹಾಗೂ ಮೂರು ತಿಂಗಳ ಸರಾಸರಿ ತಿಳಿಸುವ HbA1c ಪರೀಕ್ಷೆಯನ್ನು ಮಾಡಿಸಿಕೊಳ್ಳಿ.

6. ಸಮಯಕ್ಕೆ ಸರಿಯಾಗಿ ಔಷಧಿ ಸೇವನೆ (Timely Medication): ವೈದ್ಯರು ಸೂಚಿಸಿದ ಮಾತ್ರೆಗಳನ್ನು ಅಥವಾ ಇನ್ಸುಲಿನ್ ಅನ್ನು ನಿಗದಿತ ಸಮಯಕ್ಕೆ ತೆಗೆದುಕೊಳ್ಳಿ. ಸ್ವಂತ ನಿರ್ಧಾರದಿಂದ ಔಷಧಿಯನ್ನು ನಿಲ್ಲಿಸಬೇಡಿ.

7. ಮಾನಸಿಕ ಒತ್ತಡದ ನಿರ್ವಹಣೆ (Stress Management): ಅತಿಯಾದ ಮಾನಸಿಕ ಒತ್ತಡವು ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಧ್ಯಾನ (Meditation) ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳಿ.

8. ಪೂರಕ ನೀರು ಕುಡಿಯುವುದು (Stay Hydrated): ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿರುವ ಹೆಚ್ಚುವರಿ ಗ್ಲೂಕೋಸ್ ಮೂತ್ರದ ಮೂಲಕ ಹೊರಹೋಗಲು ಸಹಾಯ ಮಾಡುತ್ತದೆ.

9. ಉತ್ತಮ ನಿದ್ರೆ (Good Sleep): ಪ್ರತಿದಿನ ರಾತ್ರಿ 7 ರಿಂದ 8 ಗಂಟೆಗಳ ಕಾಲ ಶಾಂತಿಯುತವಾದ ನಿದ್ರೆ ಮಾಡುವುದು ದೇಹದ ಚಯಾಪಚಯ ಕ್ರಿಯೆ (Metabolism) ಮತ್ತು ಹಾರ್ಮೋನ್‌ಗಳ ಸಮತೋಲನಕ್ಕೆ ಬಹಳ ಮುಖ್ಯ.

10. ದುರಭ್ಯಾಸಗಳಿಂದ ದೂರವಿರಿ (Avoid Smoking and Alcohol): ಧೂಮಪಾನ ಮತ್ತು ಮದ್ಯಪಾನವು ಸಕ್ಕರೆ ಕಾಯಿಲೆಯ ತೊಂದರೆಗಳನ್ನು (ಹೃದಯ ಮತ್ತು ನರಗಳ ಸಮಸ್ಯೆ) ಮತ್ತಷ್ಟು ಹೆಚ್ಚು ಮಾಡುವುದರಿಂದ ಇವುಗಳಿಂದ ದೂರವಿರುವುದು ಒಳ್ಳೆಯದು.

ಗಮನಿಸಿ: ಈ ಮೇಲಿನ ಮಾಹಿತಿ ರೋಗದ ನಿರ್ವಹಣೆಗೆ ಸಾಮಾನ್ಯ ಮಾರ್ಗದರ್ಶನವಾಗಿದೆ. ಪ್ರತಿಯೊಬ್ಬರ ದೇಹ ಪ್ರಕೃತಿ ವಿಭಿನ್ನವಾಗಿರುವುದರಿಂದ, ನಿಮ್ಮ ವೈದ್ಯರ ವೈಯಕ್ತಿಕ ಸಲಹೆ ಮತ್ತು ಚಿಕಿತ್ಸೆಯ ಕ್ರಮವೇ ಅಂತಿಮ ಹಾಗೂ ಸುರಕ್ಷಿತ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending