Connect with us

ದಿನದ ಸುದ್ದಿ

ಕೋವಿಡ್ 19 : ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು

Published

on

  • ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು.

ಕೆ.ಕೆ.ಶೈಲಜ (ಕೇರಳ ಆರೋಗ್ಯ ಮಂತ್ರಿ)
ಅನು: ಎಂ.ಜಿ.ವೆಂಕಟೇಶ

ಪ್ರತಿವರ್ಷ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದಾಗ ಪತ್ರಿಕೆಗಳು ಆರೋಗ್ಯ ಕ್ಷೇತ್ರಕ್ಕೆ ಮೀಸಲಾಗಿಡುವ ಅತ್ಯಲ್ಪ ಹಣದ ಕುರಿತು ಟೀಕೆ ಮಾಡುವ ಲೇಖನಗಳನ್ನು ಪ್ರಕಟ್ರಿಸುತ್ತವೆ. ಕೋವಿಡ್ – 19 ರ ಬೆದರಿಕೆ ವ್ಯಾಪಕವಾಗಿ ಆವರಿಸುತ್ತಿರುವಾಗ, ವೈದ್ಯರು, ಆರೋಗ್ಯ ಕ್ಷೇತ್ರದ ಕಾರ್ಯಕರ್ತರು, ರಾಜ್ಯ ಸರ್ಕಾರದ ಸಂಸ್ಥೆಗಳು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ಕೊಡಲಾರಂಭಿಸಿದ್ದರು. ಆದರೆ ನಾವು ಎಲ್ಲ ಕಡೆಗಳಲ್ಲೂ ಈ ಪಿಡುಗನ್ನು ಎದುರಿಸಲಾರಂಭಿಸಿದಾಗ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿನ ನ್ಯೂನತೆಗಳು ಢಾಳಾಗಿ ಗೋಚರಿಸಲಾರಂಭಿಸಿದವು.

ಪಿ.ಸಾಯಿನಾಥ್ ತಮ್ಮ `ಎಲ್ಲರಿಗೂ ಬರ ಅಂದರೆ ಇಷ್ಟ’ ಪುಸ್ತಕದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ನಂಬಿರುವ ಬಡವರ ಸ್ಥಿತಿಯನ್ನು ಮನಮುಟ್ಟುವ ವಿವರಗಳೊಂದಿಗೆ ಹೇಳುತ್ತಾರೆ. ಅವರು 1994 ರಲ್ಲಿ ಕಾಣಿಸಿಕೊಂಡಿದ್ದ ಪ್ಲೇಗ್ ಪಿಡುಗಿಗೆ ಹಿಂದೆಂದು ಕಾಣದ ರೀತಿಯಲ್ಲಿ ಮಾಧ್ಯಮದ ಗಮನ ಸೆಳೆದಿದ್ದಕ್ಕೆ ಕಾರಣವನ್ನು ವಿವರಿಸುತ್ತಾರೆ. ಏಕೆಂದರೆ ಬೇರೆ ಕೆಲವು ರೋಗಗಳಂತೆ ಅದು ಗ್ರಾಮೀಣ ಪ್ರದೇಶ ಅಥವ ನಗರದ ಕೊಳಚೆ ಪ್ರದೇಶಕ್ಕೆ ಸೀಮಿತವಾಗಿರಲಿಲ್ಲ. ಪ್ಲೇಗಿನ ಬ್ಯಾಕ್ಟಿರೀಯಾ ನಗರದ ಪ್ರತಿಷ್ಠಿತರ ಜಾಗಗಳಿಗೂ ನುಗ್ಗುವ ಗಾಂಚಾಲಿತನ ತೋರಿತ್ತು. ಸಾಯಿನಾಥ್ರ ಮಾತುಗಳಲ್ಲಿ ಹೇಳುವುದಾದರೆ “ಅವು (ಬ್ಯಾಕ್ಟೀರಿಯಾ) ಕ್ಲಬ್ ಕ್ಲಾಸ್ನಲ್ಲಿ ಸಂಚರಿಸಿ ನ್ಯೂಯಾರ್ಕ್ ತಲುಪಬಹುದಿತ್ತು. ಆದ್ದರಿಂದ ಬಹಳಷ್ಟು ಸುಂದರ ವ್ಯಕ್ತಿಗಳು ಆತಂಕಕ್ಕೆ ಒಳಗಾಗಿದ್ದರು.” ಕೋವಿಡ್-19 ಪ್ಲೇಗ್ಗಿಂತ ಕಡಿಮೆ ಅಪಾಯಕಾರಿಯಾದರೂ, ಅದು ಭಾರತಕ್ಕೆ ಬಂದಿದ್ದು ಸೋಂಕು ಪೀಡಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರಿಂದಾಗಿತ್ತು.

ಈ ವಾದ ಒಡ್ಡುತ್ತಿರುವುದು ಈ ಎರಡೂ ಪಿಡುಗುಗಳನ್ನು ಹಗುರವಾಗಿ ತೆಗೆದುಕೊಳ್ಳುವ ಉದ್ದೇಶದಿಂದಲ್ಲ. ಬದಲಿಗೆ, ಆರೋಗ್ಯದ ವಿಷಯದಲ್ಲಿ ಭಾರತದ ಪ್ರತಿಸ್ಪಂದನೆ, ಅದರಿಂದ ಪೀಡಿತರಾದವರ ಸಾಮಾಜಿಕ ಮತ್ತು ವರ್ಗ ವಾಸಸ್ಥಾನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲುವುದು ಮಾತ್ರ ಇದರ ಉದ್ದೇಶ.

ಕೋವಿಡ್-19ರ ಆಗಮನದಿಂದ ಖಾಸಗಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದ್ದ ವರ್ಗಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಗಳ ಮೇಲೆ ತಪಾಸಣೆ ಮತ್ತು ಪ್ರತ್ಯೇಕೀಕರಣಕ್ಕಾಗಿ (ಕ್ವಾರಂಟೈನ್ಗಾಗಿ) ಅವಲಂಬಿತರಾಗುತ್ತಿರುವ ವಿಚಿತ್ರ ಪರಿಸ್ಥಿತಿ ಉಂಟಾಗಿದೆ. ದಶಕಗಳಿಂದ ಭಾರತದ ಬಹುಸಂಖ್ಯಾತರು ಇಂತಹ ಸರಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಅವಲಂಬಿಸಿದ್ದರು ಎಂದು ಕೆಲವು ಅನುಕೂಲಸ್ತರಿಗೆ ಗೋಚರವಾಗುವುದಕ್ಕೆ ಕೋವಿಡ್-19 ರಂತಹ ಪಿಡುಗೇ ಬರಬೇಕಾಯಿತು. ಆಗ್ರಾ ಮಹಿಳೆಯೊಬ್ಬರು ಕ್ವಾರಂಟೈನ್ನಿಂದ ತಪ್ಪಿಸಿಕೊಂಡ ವಿಷಯ ತಪ್ಪಾಗಿ ವರದಿಯಾಗಿದೆ.

ವಾಸ್ತವವಾಗಿ “ಅನಾರೋಗ್ಯಕರ ಶೌಚಾಲಯ ವ್ಯವಸ್ಥೆ ಆಕೆಗೆ ವಾಕರಿಕೆ” ತರುವಂತೆ ಇದ್ದಿದ್ದರಿಂದ ಆಕೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕ್ವಾರಂಟೈನ್ ಗೆ ಪ್ರತಿರೋಧ ತೋರಿದ್ದಳು. ಇದು ಸಾರ್ವಜನಿಕ ಆರೋಗ್ಯ ರಕ್ಷಣೆಗಾಗಿ ಮತ್ತು ಮೂಲ ಸೌಕರ್ಯಗಳಿಗಾಗಿ ಮೀಸಲಿಡುವ ಅತ್ಯಲ್ಪ ಅನುದಾನದ ಫಲ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯಕರ ಶೌಚಾಲಯಗಳನ್ನು ನಿರ್ವಹಿಸಲಾಗದ ಸಾರ್ವಜನಿಕ ಆರೋಗ್ಯ ಆಡಳಿತಕ್ಕೆ, ಕೋವಿಡ್-19 ನಿಜವಾಗಿಯೂ ಎದುರಿಸಲಾಗದ ಸವಾಲಾಗಿದೆ.

ಸಾಂಕ್ರಾಮಿಕ ಎದುರಿಸಲು ತಯಾರಿ

ಭಾರತದ ಸಾರ್ವಜನಿಕ ಆರೋಗ್ಯದ ದಾಖಲೆಯ ಹಿನ್ನೆಲೆಯಲ್ಲಿ, ಕೊವಿದ್-19ರ ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಿರುವ ರೀತಿಯ ಬಗ್ಗೆ ಕೇರಳವನ್ನು ಶ್ಲಾಘಿಸಲಾಗುತ್ತಿದೆ. ಇದಕ್ಕೆ ಬೇಕಾದ ಪೂರ್ವಭಾವಿ ಮೂಲಭೂತ ಸೌಕರ್ಯಗಳನ್ನು ಹಿಂದೆಯೇ ಒದಗಿಸಿದ್ದರಿಂದಾಗಿ ಮತ್ತು ನಿಫಾ ವೈರಸ್ನ ಸವಾಲನ್ನು ನಿಭಾಯಿಸಿದ ಅನುಭವದಿಂದಾಗಿ, ಕೇರಳ ಸರ್ಕಾರ ಉಳಿದ ರಾಜ್ಯ ಸರ್ಕಾರಗಳಿಗಿಂತ ಕೊವಿದ್-19ರ ಸವಾಲು ಎದುರಿಸುವ ಪೂರ್ವತಯಾರಿಯಲ್ಲಿ ಸಾಪೇಕ್ಷವಾಗಿ ಮುಂದಿತ್ತು. ಜನವರಿ ಮಧ್ಯ ಭಾಗದಿಂದಲೇ ಇದನ್ನು ಎದುರಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆ ಚರ್ಚೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿತ್ತು. ನಮ್ಮ ರಾಜ್ಯ ಕೊವಿದ್-19 ಪಿಡುಗು ಹರಡದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಪಟ್ಟಿ ತಯಾರಿಸಿದ ಮೊದಲ ರಾಜ್ಯವಾಗಿತ್ತು.

ಜನವರಿ 30 ರಂದು ಕೊವಿದ್-19 ಪಾಸಿಟಿವ್ ಆದ ಮೊದಲ ಪ್ರಕರಣ ಗಮನಕ್ಕೆ ಬಂದ ನಂತರ ಕ್ರಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿಸಿ ಪಾಲಿಸಲಾಯಿತು. ಆ ನಂತರ ಸರಕಾರ ಇನ್ನಷ್ಟು ನಿಗಾ ವಹಿಸಿ ಸೋಂಕು ಖಚಿತವಾದವರ ಜತೆ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕ ಇರುವ ಎಲ್ಲರನ್ನು ಗುರುತಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತು. ಇಟಲಿಯಿಂದ ಹಿಂತಿರುಗಿದ ಒಂದು ಕುಟುಂಬ ತಪಾಸಣೆಗೆ ಒಳಗಾದಾಗ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಗಂಭೀರ ಸ್ಥಿತಿ ನಿರ್ಮಾಣವಾಯಿತು. ತೀವ್ರವಾದ ಹುಡುಕುವಿಕೆಯ ನಂತರ ಈ ಕುಟುಂಬದ ಸಂಪರ್ಕಕ್ಕೆ 719 ಜನ ಒಳಗಾಗಿದ್ದರು ಎಂಬುದು ಪತ್ತೆಯಾಯಿತು.

ಆ ನಂತರ ವಿದೇಶಗಳಿಂದ ಹಿಂತಿರುಗುವ ಪ್ರಯಾಣಿಕರ ಬಗ್ಗೆ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿತು. ಈ ಪ್ರಯಾಣಿಕರು ತಮ್ಮ ಪ್ರಯಾಣದ ಪೂರ್ಣ ವಿವರಗಳನ್ನು ನೀಡದಿದ್ದರೆ ತೀವ್ರ ಕ್ರಮಗಳಿಗೆ ಒಳಗಾಗಬೇಕಾಯಿತು. ಅವರ ಪ್ರಾಥಮಿಕ ಮತ್ತು ಸ್ವಲ್ಪ ದೂರದ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕಿಸಲಾಯಿತು ಅಥವಾ ಗೃಹದಲ್ಲಿ ಒಂಟಿಯಾಗಿ ಇರಿಸಲಾಯಿತು.

ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಯಿತು. ನಿಗಾ ವಹಿಸಲಾದವರ ಪಟ್ಟಿಯನ್ನು ಸರ್ಕಾರ ನೀಡಿತು. ಇತ್ತೀಚಿಗೆ ರಾಜ್ಯವನ್ನು ವಿವಿಧ ಕಡೆಯಿಂದ ವಿವಿಧ ರೀತಿಯಲ್ಲಿ ಪ್ರವೇಶಿಸುವ ಕಡೆಯಲ್ಲಿ ಜನರನ್ನು ತಪಾಸಣೆಗೆ ಒಳಪಡಿಸಲಾಯಿತು. ಆರೋಗ್ಯ ರಕ್ಷಣಾ ಕಾರ್ಯಕರ್ತರು ನಗರ ಪ್ರವೇಶದ ಚೆಕ್ ಪೋಸ್ಟ್ಗಳಲ್ಲಿ ನಿಂತು ತಪಾಸಣೆ ನಡೆಸಿದರು. ಹಾಗೆ ರೈಲ್ವೆ ನಿಲ್ದಾಣಗಳಲ್ಲಿ ಈ ಕ್ರಮ ಕೈಗೊಳ್ಳಲಾಯಿತು.

ಈ ಪರಿಸ್ಥಿತಿಯನ್ನು ಅತ್ಯಂತ ಸೂಕ್ತವಾಗಿ ನಿಭಾಯಿಸುವುದರ ಕುರಿತು ನಾವು ಚೀನಾ ಮತ್ತು ದಕ್ಷಿಣ ಕೊರಿಯಾದಿಂದ ಕಲಿಯಬೇಕಿರುವುದು ಎಂದರೆ, ವ್ಯಾಪಕವಾಗಿ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು ಮತ್ತು ತಪಾಸಣೆ ಮಾಡುವುದು. ದ. ಕೋರಿಯಾದಲ್ಲಿ ವ್ಯಾಪಕ ತಪಾಸಣೆಯಿಂದಾಗಿ ಮಾತ್ರ ಲಾಕ್ಡೌನ್ ಮಾಡದೇ ಬಿಕ್ಕಟ್ಟನ್ನು ನಿಭಾಯಿಸುವುದು ಸಾಧ್ಯವಾಯಿತು. ಆದರೆ ಕೇರಳದಲ್ಲಿ ಆರೋಗ್ಯಸೇವೆಯ ಉತ್ತಮ ಸೌಲಭ್ಯಗಳಿದ್ದರೂ ಇಂತಹ ಉತ್ತಮ ಆದರ್ಶ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ ಸೀಮಿತ ಸಂಪನ್ಮೂಲ ಮತ್ತು ತಪಾಸಣಾ ಪ್ರಯೋಗಶಾಲೆಗಳು.

ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿ ನಾವು ಬಹಳ ಜಾಣತನದಿಂದ ನಮ್ಮ ಸೌಲಭ್ಯವನ್ನು ಉಪಯೋಗಿಸಬೇಕಾಗಿದೆ ಮತ್ತು ಸ್ಥಳೀಯ ಪ್ಯಯತ್ನಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಸಾಧಿಸಬೇಕಾದರೆ ಬಲವಾದ ರಾಜಕೀಯ ಬದ್ಧತೆ, ಬಲವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಜನರ ಬದ್ಧತೆ ಬೇಕಾಗಿರುತ್ತದೆ. ಸರ್ಕಾರ ಸೂಚಿಸುವ ಕ್ರಮಗಳನ್ನು ಪ್ರಜೆಗಳು ಅನುಸರಿಸುವುದು ಮುಖ್ಯ. ಇದರಲ್ಲಿ ಮುಖ್ಯವಾದ ವಿಷಯವೆಂದರೆ ಸಾರ್ವಜನಿಕರು ಕಾರಣವಿಲ್ಲದೇ ತಪಾಸಣಾ ಕೇಂದ್ರಗಳಿಗೆ ಹೊಗದಿರುವುದು, ಹೀಗೆ ಹೋಗುವುದರಿಂದ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಸ್ವಯಂ-ಪ್ರತ್ಯೇಕತೆ ಅನುಸರಿಸುವಾಗ ಕೈಗೊಳ್ಳುವ ಕ್ರಮಗಳ ಬಗ್ಗೆ, ರೋಗಲಕ್ಷಣಗಳನ್ನು ಗುರುತಿಸಲು ಮತ್ತು ವರದಿ ಮಾಡುವುದಕ್ಕೆ ಕೇರಳ ಸರ್ಕಾರ ‘ಜಿಓಕೆ ಡೈರೆಕ್ಟ್’ ಎಂಬ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. `ದಿಶಾ’ ಹೆಲ್ಪಲೈನ್ ಜನಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರ ಮುಖಾಂತರ ಕೊವಿದ್ 19 ಪಿಡುಗಿನ ಹರಡುವಿಕೆಯ `ಸರಣಿ ಕತ್ತರಿಸುವ’ (ಬ್ರೇಕ್ ದಿ ಚೈನ್) ಪ್ರಚಾರದಲ್ಲಿ ಶುಚಿ ಮತ್ತು ನೈರ್ಮಲ್ಯದ ಬಗ್ಗೆ ತಿಳಿಸಲಾಗುತ್ತಿದೆ. ಈ ಕ್ರಮಗಳಿಂದ ಸ್ವಭಾವದ ಬದಲಾವಣೆ ತರುತ್ತಿರುವುದು ರಾಜ್ಯದ ಮತ್ತು ರಾಷ್ಟ್ರದ ಮಾಧ್ಯಮದಲ್ಲೂ ಪ್ರಕಟವಾಗುತ್ತಿದೆ.

ಈ ರೀತಿಯ ಮುಂಜಾಗರೂಕತಾ ಕ್ರಮ ಮತ್ತು ಸಾಮಾಜಿಕ ಅಂತರ ಕಾಪಿಟ್ಟುಕೊಂಡರೆ ಸಾರ್ವಜನಿಕ ಮತ್ತು ಸರಕಾರದ ಸಂಪನ್ಮೂಲಗಳ ಮೇಲೆ ಉಂಟಾಗುವ ಒತ್ತಡವನ್ನು ಮುಂದೂಡಬಹುದು. ಹೀಗೆ ಗಳಿಸಿದ ಅವಧಿಯಲ್ಲಿ ಮುಂದೆ ಸೋಂಕು ಹರಡಿ ಅಗತ್ಯ ಬಿದ್ದರೆ ಹೆಚ್ಚು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುವಂತೆ ತಪಾಸಣಾ ಸೌಲಭ್ಯಗಳನ್ನು ನಿರ್ಮಿಸಬಹುದು. ಸರ್ಕಾರದ ವಿನಂತಿಯ ಮೇರೆಗೆ ಐ.ಸಿ.ಎಂ.ಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರೀಸರ್ಚ್) ಕೇರಳಕ್ಕೆ 10 ಪರೀಕ್ಷಾ ಕೇಂದ್ರಗಳನ್ನು ಮಂಜೂರು ಮಾಡಿದೆ. ಸರ್ಕಾರಕ್ಕೆ ಖಾಸಗಿ ಭಾಗಿತ್ವದೊಡನೆ ಇನ್ನು ಹೆಚ್ಚಿನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆಯಿದೆ.

ಕೇರಳಕ್ಕೆ ಮತ್ತು ಕೇರಳದಿಂದ ಪಾಠಗಳು

ಕೇರಳದಲ್ಲಿ ಚಾರಿತ್ರಿಕವಾಗಿ ಸಶಕ್ತ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಸರ್ಕಾರ ನೀಡಿರುವ ಧೃಡವಾದ ಬೆಂಬಲದಿಂದಾಗಿ, ಕೊವಿಡ್ 19 ಹರಡುವ ಮೊದಲು ಕ್ರಮಗಳ ಬಗ್ಗೆ ನಿರ್ಣಯಿಸುವುದಕ್ಕೆ ಸಾಧ್ಯವಾಯಿತು. ಆಡಳಿತ ಒಳ್ಳೆಯ ಆರೋಗ್ಯ ವ್ಯವಸ್ಥೆ ಕಾಪಾಡಿ ಬೆಳೆಸಲು ವೇಗವರ್ಧಕವಾಗಿ ಕೆಲಸ ಮಾಡಿದೆ. ಇದು ಆರೋಗ್ಯ ಮೂಲ ಸೌಲಭ್ಯದ ವಿಸ್ತರಣೆಯಲ್ಲಿ ಕಂಡು ಬರುತ್ತದೆ. ಉದಾಹರಣೆಗೆ ನ್ಯಾಷನಲ್ ಇನ್ಸಿ÷್ಟಟ್ಯೂಟ್ ಆಫ್ ವೈರೋಲಜಿ ಘಟಕವನ್ನು ಅಲೆಪ್ಟಿಯಲ್ಲಿ ನಿಫಾ ವೈರಸ್ ಕಂಡು ಬಂದ ನಂತರ ಸ್ಥಾಪಿಸಿರುವುದು.

ಇತ್ತೀಚಿನ ದಿನಗಳಲ್ಲಿ ಉಂಟಾಗಿರುವ ಸಾಂಕ್ರಾಮಿಕ ಮತ್ತು ಅಸಾಂಕ್ರಮಿಕ ರೋಗಗಳಿಂದ ಉಂಟಾದ ಒತ್ತಡವನ್ನು ನಿರ್ವಹಿಸಿರುವ ರೀತಿಯಿಂದ ರಾಜ್ಯದ ಸೋಂಕಿನ ಪರಿಸ್ಥಿತಿಯನ್ನು ಗುರುತಿಸಲಾಗುತ್ತಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ಇಡಲು ಸರಕಾರ ಸ್ಥಾಪಿಸಿರುವ ಉಸ್ತುವಾರಿ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಇದರಿಂದ ಆರೋಗ್ಯ ಅಧಿಕಾರಿಗಳು ವೇಗವಾಗಿ ರೋಗ ಗುರುತಿಸುವುದಕ್ಕೂ ತಡೆಯುವುದಕ್ಕೂ ಸಾಧ್ಯವಾಗಿದೆ. ಸೇವೆಯನ್ನು ಕ್ಷಿಪ್ರವಾಗಿ ಮತ್ತು ವ್ಯಾಪಕವಾಗಿ ಹೆಚ್ಚಿನ ಜನರನ್ನು ತಲುಪುವ ಗುರಿ ಸಾಧಿಸಲು ಆರೋಗ್ಯಸೇವಾ ವ್ಯವಸ್ಥೆಯನ್ನು ವಿಕೇಂದ್ರಿಕರಿಸಲಾಗಿದೆ. ಇದರ ಫಲಿತವಾಗಿಯೇ ಕೋವಿಡ್-19 ರ ಸಂದರ್ಭದಲ್ಲಿ ವೈಯುಕ್ತಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ಅದರ ಜಾಡು ಹಿಡಿಯುವುದರಲ್ಲಿ ಮತ್ತು ‘ಸರಣಿ ತುಂಡರಿಸುವ’ ಪ್ರಚಾರ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿವೆ.

ಆರೋಗ್ಯ ಸೇವೆಯ ಗುಣಮಟ್ಟ ಮತ್ತು ಮೂಲಭೂತ ಸೌಕರ್ಯ ಹೆಚ್ಚಿಸಲು ‘ಆರ್ದ್ರ ಮಿಶನ್’ ಮುಖಾಂತರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸುವತ್ತ ಹೆಜ್ಜೆ ಹಾಕುತ್ತಿದ್ದೇವೆ. ಸರ್ಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತೆ ಇನ್ನಷ್ಟು ಉತ್ತಮ ಹಾದಿಯಲ್ಲಿ ಒಯ್ಯಲು ಯಶಸ್ವಿಯಾಗಿದೆ.

  • ಮೂಲ ಲೇಖನ ಕೃಪೆ : ದಿ ಹಿಂದು ಪತ್ರಿಕೆ, ಮಾ.23, 2020

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್‌ಕಿಟ್‌ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.

ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.

ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.

ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.

ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.

ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.

ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ

Published

on

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.

ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.

ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.

ಇಂಗ್ಲೀಷ್ ಮೇಜರ್ ನಲ್ಲಿ ರ‌್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending