ಅಂತರಂಗ
ನುಡಿಯ ಒಡಲು -09 | ನುಡಿ ಮತ್ತು ಮೆದುಳು
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು,ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆ ಎಂತಹದು? ನುಡಿಗೂ ಹಾಗೂ ಮೆದುಳಿಗೂ ನೇರವಾದ ನಂಟಸ್ತಿಕೆ ಇರುವುದರಿಂದ, ಈ ಎರಡೂ ಸಂಗತಿಗಳನ್ನು ಇಲ್ಲಿ ಚರ್ಚಿಸುವ ಅಗತ್ಯವಿದೆ. ಮೆದುಳು ಹಾಗೂ ನುಡಿಯ ನಡುವಣ ನಂಟಸ್ತಿಕೆ ಎಂತಹದು? ಯಾವ ಬಗೆಯಲ್ಲಿ ಮೆದುಳು ನುಡಿಯೊಂದಿಗೆ ನಂಟಸ್ತಿಕೆಉನ್ನು ಬೆಳೆಸಿಕೊಂಡಿರುತ್ತದೆ? ಹಾಗೂ ಈಗಾಗಲೇ ಈ ಹಿಂದೆ ಚರ್ಚಿಸಿದಂತೆ, ನುಡಿ ಮಾನವರಿಗೆ ಒದಗಿರುವ ಒಂದು ಅಂತಸ್ಥ ಸಾಮರ್ಥ್ಯ.
ಈ ಸಾಮರ್ಥ್ಯ ಅವರ ಮೆದುಳಿನಲ್ಲಿ ಯಾವ ಜಾಗದಲ್ಲಿ ಅಂತರ್ಗತವಾಗಿರುತ್ತದೆ. ಮಾನವರ ಮೆದುಳಿನ ರಚನೆಯ ಮೂಲಸ್ವರೂಪವನ್ನು ಅರಿಯುವುದರ ಜೊತೆಗೆ ನುಡಿಯ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಬಹುದು. ಮಾನವರಲ್ಲಿ ಜನ್ಮಜಾತವಾಗಿ ನುಡಿಯನ್ನು ಗಳಿಸಿಕೊಳ್ಳುವ ಅಂತಸ್ಥ ಸಾಮರ್ಥ್ಯ ಅವರ ಮೆದುಳಿನಲ್ಲಿ ಅಂತರ್ಗತವಾಗಿರುತ್ತದೆ. ಚಾಮ್ಸ್ಕಿಯ ಈ ನಿಲುವನ್ನು ಎರಿಕ್ ಲೆನ್ಬರ್ಗ್ ಒಪ್ಪಿಕೊಳ್ಳುತ್ತಾನೆ ದಿಟ.
ಆದರೆ ನುಡಿ ಗಳಿಕೆಯ ಪ್ರಕ್ರಿಯೆಯ ಬಗೆಗೆ ಕೆಲವು ಮಹತ್ವದ ಹೊಳವುಗಳನ್ನು ಅವನು ಕೊಡುತ್ತಾನೆ. ನುಡಿ ಗಳಿಕೆಗೆ ಒಂದು ನಿಶ್ಚಿತ ಗಡುವು (ಕ್ರಿಟಿಕಲ್ ಪಿರಿಯೇಡ್) ಇರುತ್ತದೆ. ಆ ನಿಗದಿತ ಗಡುವಿನೊಳಗೆ ಪ್ರತಿ ಮಗು ತನಗೆ ಸಿಗುವ ನುಡಿಯ ಹೂಡುವಳಿಗಳ (ಇನ್ಪುಟ್ಸ್) ಮೂಲಕ, ತನ್ನಲ್ಲಿರುವ ಅಂತಸ್ಥ ಸಾಮರ್ಥ್ಯವನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳದೇ ಹೋದರೆ, ಆ ಮಗುವಿಗೆ ಮುಂದೆಂದೂ ನುಡಿಯನ್ನು ಕಲಿಯಲು/ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ಲೆನ್ಬರ್ಗ್ ತನ್ನ ಈ ಚಿಂತನೆಯನ್ನು ವಿವರಿಸುವುದಕ್ಕೆ ಪ್ರೌಢಿಮೆ (ಮ್ಯಾಚ್ಯುರೇಶನ್) ಎಂಬ ಒಂದು ಅರಿಮೆ ಪದವನ್ನು ಹುಟ್ಟುಹಾಕುತ್ತಾನೆ. ಈ ಪ್ರೌಢಿಮೆಯ ಅವಧಿ ಹದಿನೆಂಟು ತಿಂಗಳಿಂದ ಹನ್ನೆರಡು ಇಲ್ಲವೇ ಹದಿನಾಲ್ಕು (ಪಬರ್ಟಿಯ ಕಾಲದವರಗೆ) ವರುಷಗಳವರೆಗೆ ಗುರುತಿಸುತ್ತಾನೆ. ಈ ಪ್ರೌಢಿಮೆ ಪ್ರಕ್ರಿಯೆಯಲ್ಲಿಯೇ ನುಡಿಗಳಿಕೆಯ ನೆಲೆಗಳು ಅಡಕಗೊಂಡಿರುತ್ತವೆ. ಇವನ ಈ ತರ್ಕಕ್ಕೆ ಮುಖ್ಯ ಕಾರಣವೇ ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್). ಈ ಅರಿಮೆಯ ಪದದ ಕಣ್ನೋಟದಿಂದ ನುಡಿ ಗಳಿಕೆಯ ನೆಲೆಗಳನ್ನು ಇನ್ನಷ್ಟು ವಿವರವಾಗಿ ನೋಡಬಹುದು.
ಪ್ರತಿಯೊಂದು ಸಾಮನ್ಯ ಮಗು ಕೂಡ ಈ ಮಗ್ಗಲಾಗುವಿಕೆಯ ಪ್ರಕ್ರಿಯೆಯಲ್ಲಿಯೆ ತನ್ನ ಎಲ್ಲ ಗ್ರಹಿಕಾ ಸಾಮರ್ಥ್ಯಗಳನ್ನು ಮೆದುಳಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಗೊಳಿಸುವಲ್ಲಿ ನಿರತವಾಗಿರುತ್ತದೆ. ನುಡಿ ಗಳಿಕೆಯ ಪ್ರಕ್ರಿಯೆಯೂ ಈ ಮಗ್ಗಲಾಗುವಿಕೆಯ ಭಾಗವೇ ಆಗಿರುತ್ತದೆ. ಮಕ್ಕಳು ತಮ್ಮ ಮೆದುಳಿನ ನಿಶ್ಚಿತ ಭಾಗಗಳಲ್ಲಿ, ಈ ಮಗ್ಗಲಾಗುವಿಕೆಯ ಕಾಲದಲ್ಲಿಯೇ, ತಮ್ಮಲ್ಲಿರುವ ಅಂತಸ್ಥ ಸಾಮರ್ಥ್ಯದ ಮೂಲಕ ನುಡಿಯ ಬಹುತೇಕ ನೆಲೆಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಈ ಪ್ರಕ್ರಿಯೆ ಮಕ್ಕಳಿಗೆ ಸಿಗುವ ನುಡಿಯ ಹೂಡುವಳಿ (ಇನ್ಪುಟ್ಸ್) ಗಳನ್ನೂ ನಂಬಿಕೊಂಡಿರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.
ಒಂದು ಸಲ ಈ ಮಗ್ಗಲಾಗುವಿಕೆಯ ಕೆಲಸ ಮುಗಿದ ಮೇಲೆ ನುಡಿಯನ್ನು ಗಳಿಸಿಕೊಳ್ಳುವ ಕಸುವು ಸ್ಥಗಿತವಾಗುತ್ತದೆ. ಆದರೆ ಎಂದಿನಂತೆ, ಈ ಮಗ್ಗಲಾಗುವಿಕೆ ಮಗುವಿಗೆ ಆಯಾ ನುಡಿಯ ಸೊಲ್ಲರಿಮೆಯ/ವ್ಯಾಕರಣ ತಿಳಿವನ್ನು ಗಳಿಸಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚು ಅವಕಾಶವನ್ನು ಕೊಡುತ್ತದೆ. ಹೆಚ್ಚಿನ ಮಂದಿಗೆ ಈ ನುಡಿ ಗಳಿಕೆಯ ನೆಲೆ ಅವರ ಎಡಮೆದುಳಿನಲ್ಲಿಯೇ ಕೊನೆಗೊಳ್ಳುತ್ತದೆ.
ನಿರ್ಣಾಯಕ ಕಾಲ (ಕ್ರಿಟಿಕಲ್ ಪಿರಿಯೆಡ್) ಮೀರಿದ ಮೇಲೆ, ನುಡಿ ಬೆಳವಣಿಗೆ/ಗಳಿಕೆಯ ಸಹಜ ಸ್ಥಿತಿ ನಿಂತ ಮೇಲೆ, ಒಂದುವೇಳೆ ಎಡಮೆದುಳಿಗೆ ಏನಾದರೂ ಎರವು [ಡ್ಯಾಮೇಜ್] ಉಂಟಾದರೆ, ಅಂತಹ ಎರವು ಖಾಯಂ ಆಗಿಯೇ ಉಳಿಯುತ್ತದೆ. ಕೇವಲ ಕಿರಿಯ ವಯಸ್ಸಿನ ಮಕ್ಕಳು ಮಾತ್ರ ತಮ್ಮ ಬಲಮೆದುಳನ್ನು ಬಳಸಿಕೊಂಡು ನುಡಿಯನ್ನು ಗಳಸಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತಾರೆ.
ಆದರೆ ಈ ನಿರ್ಣಾಯಕ ಕಾಲದಲ್ಲಿ ಸಾಮನ್ಯ ಮಗು ಅತ್ಯಂತ ಸುಲಭವಾಗಿ ನುಡಿಯನ್ನು ಗಳಿಸಿಕೊಳ್ಳುತ್ತದೆ ಎಂಬುದು ಮಾತ್ರ ದಿಟ. ಈ ನಿರ್ಣಾಯಕ ಕಾಲ ಎಂಬ ನೆಲೆಯೂ ಜೈವಿಕವಾಗಿ ನಿರ್ಧರಿಸಲ್ಪಟ್ಟಿರುತ್ತದೆ. ಹಾಗಾಗಿ ನುಡಿ ಗಳಿಕೆಗೆ ಯಾವ ಕಾಲ ಸುಳುವಾಗಿರುತ್ತೆ ಮತ್ತು ಯಾವುದು ಕಷ್ಟಕರವಾಗಿರುತ್ತೆ ಎಂಬ ಸಂಗತಿಗಳೂ ಮೊದಲೇ ನಿರ್ಧಾರವಾಗಿರುತ್ತವೆ.
ಲೆನ್ಬರ್ಗ್ನ ಪ್ರಕಾರ ನುಡಿ ಗಳಿಕೆಯ ಪ್ರಕ್ರಿಯೆ ಅಂಬೆಗಾಲಿಡುವ ಮಗುವಿಂದ ಶುರುವಾಗಿ ಹದಿಹರೆಯದಲ್ಲಿ ಕೊನೆಗೊಳ್ಳುತ್ತದೆ. ಮತ್ತು ಇದರ ಜೊತೆಗೇನೆ ಮಗ್ಗಲಾಗುವಿಕೆ ಪ್ರಕ್ರಿಯೆಯೂ ಕೊನೆಗೊಳ್ಳುತ್ತದೆ. ಈ ವೇಳೆಯಲ್ಲಿ ಯಾವುದೇ ಔಪಚಾರಿಕ ತರಬೇತಿಯಿಲ್ಲದೇ ಮಗು ತನ್ನ ತಾಯ್ನುಡಿ ಇಲ್ಲವೇ ಮೊದಲ ನುಡಿಯನ್ನು ಅತ್ಯಂತ ಸುಳುವಾಗಿ ಕಲಿಯಬಲ್ಲದು. ಹದಿಹರಯ ಇಲ್ಲವೇ ಪಬರ್ಟಿಯ ನಂತರ ನುಡಿ ಗಳಿಕೆಯ ಕಸುವು ತನ್ನಷ್ಟಕ್ಕೆ ಸ್ಥಗಿತಗೊಳ್ಳುತ್ತದೆ.
ಎಡಮೆದುಳು ಮತ್ತು ಬಲಮೆದುಳು
ಮೆದುಳು ಮೋಟರ್, ಸೆನ್ಸರಿ ಚಟುವಟಿಕೆ ಹಾಗೂ ಚಿಂತನೆಯ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಬೌದ್ಧಿಕ (ಸೆರೆಬ್ರಲ್) ಮೆದುಳನ್ನು ಎಡ ಮತ್ತು ಬಲ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಈ ಎರಡೂ ಭಾಗಗಳು ಕೆಲವು ವಿಶೇಷ ರಚನೆ ಹಾಗೂ ಕ್ರಿಯೆಗಳನ್ನು ನೆರವೇರಿಸುವಂತೆ ಕಾಣುತ್ತವೆ. ಇವುಗಳಲ್ಲಿ ಕೆಲವಷ್ಟು ಕ್ರಿಯೆಗಳು ಎಡಮೆದುಳಿನಲ್ಲಿ ಉಂಟಾದರೆ, ಮತ್ತೆ ಕಲವು ಕ್ರಿಯೆಗಳು ಬಲಮೆದುಳಿನಲ್ಲಿ ಉಂಟಾಗುತ್ತವೆ. ಲೆನ್ಬರ್ಗ್ನ ಪ್ರಕಾರ ಮೆದುಳು ಹೀಗೆ ಇಬ್ಭಾಗವಾಗುವ ಬಗೆಯನ್ನು ಮಗ್ಗಲಾಗುವಿಕೆ (ಲ್ಯಾಟರಲೈಜೇಶನ್) ಎಂದು ಕರೆಯಲಾಗುತ್ತದೆ.
ಇವುಗಳು ಒಂದಕ್ಕೊಂದು ಕನ್ನಡಿ ಬಿಂಬದಂತೆ ಕೆಲಸ ಮಾಡುತ್ತವೆ. ಎಡಮೆದುಳು ದೇಹದ ಬಲಗಡೆಯನ್ನು ನಿಯಂತ್ರಿಸಿದರೆ, ಬಲಮೆದುಳು ದೇಹದ ಎಡಗಡೆಯನ್ನು ನಿಯಂತ್ರಿಸುತ್ತದೆ. ಮತ್ತಿತರ ತಜ್ಞ ಕ್ರಿಯೆಗಳನ್ನು ಮೆದುಳಿನ ಎರಡೂ ಭಾಗಗಳು ನಿಭಾಯಿಸುತ್ತವೆ. ಈ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿವೆಯಾದರೂ, ಈ ನಿಲುವುಗಳನ್ನು ಸಮರ್ಥಿಸುವಷ್ಟು ಆಧಾರಗಳು ಇನ್ನೂ ಸಿಕ್ಕಿಲ್ಲ. ಆದರೆ ಈ ಎರಡೂ ಭಾಗಗಳಲ್ಲಿ ಎಡಮೆದುಳಿನ ಭಾಗವೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ.
ನುಡಿ ಸಂಬಂಧಿ ಚಟುವಟಿಕೆಗಳಿಗೆ ಈ ಭಾಗವೇ ಹೊಣೆಯಾಗಿರುವ ಕಾರಣ ಸಹಜವಾಗಿಯೇ ಎಡಮೆದುಳಿನ ಭಾಗ ಪ್ರಾಬಲ್ಯವನ್ನು ಹೊಂದಿದೆ. ಏಕೆಂದರೆ, ನುಡಿಗೆ ಸಂಬಂಧಿಸಿದ ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳೂ ಎಡಮೆದುಳಿನಲ್ಲಿ ನೆಲೆನಿಂತುರಿವುದು ಕೂಡ ಇಂತಹ ಪ್ರಾಬಲ್ಯಕ್ಕೆ ಒತ್ತಾಸೆಯಾಗಿರಬಹುದು.
ಅಫೇಶಿಯಾ (ಮಾತಿನ ಕಸುವನ್ನು ಕಳೆದುಕೊಳ್ಳುವ ಬಗೆ. ಇದು ಬೇರೆ ಬೇರೆ ನೆಲೆಗಳಲ್ಲಿ ಇಲ್ಲವೇ ಸ್ವರೂಪಗಳಲ್ಲಿ ಉಂಟಾಗುತ್ತದೆ. ಇದು ಕೂಡ ಒಂದು ಕಾಯಿಲೆ?) ಬಗೆಗಿನ ಅಧ್ಯಯನಗಳು ಹೇಳುವಂತೆ ನುಡಿ ಕುರಿತ ಚಟುವಟಿಕೆಗಳು ಮೊದಲಾಗುವುದೇ ಎಡಮೆದುಳಿನಲ್ಲಿ. ಮೆದುಳಿನಲ್ಲಿ ಮಗ್ಗಲಾಗುವಿಕೆ ಕೆಲಸ ನಡೆಯುತ್ತದೆ ಎಂಬ ಸಂಗತಿಯನ್ನು ತಿಳಿಯಲು ಕೂಡ ಈ ಅಧ್ಯಯನಗಳೇ ಆಧಾರವಾಗಿವೆ. ಸ್ಟೇನ್ಬರ್ಗ್ನ ಪ್ರಕಾರ ಸೀಳು ಮೆದುಳಿನ (ಸ್ಪ್ಲಿಟ್ಬ್ರೇನ್) ರೋಗಿಗಳು, ಮೆದುಳು ಮಗ್ಗಲಾಗುವಿಕೆಗೆ ಬೇಕಾಗುವ ಇನ್ನೂ ಹೆಚ್ಚಿನ ಆಧಾರಗಳನ್ನು ಒದಗಿಸುತ್ತಾರೆ.
ಆದರೆ ಈ ಸೀಳು ಮೆದುಳಿನ ರೋಗಿಗಳಲ್ಲಿ ಎಡ ಮತ್ತು ಬಲ ಎರಡೂ ಮೆದುಳುಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತವೆ. ಆರೋಗ್ಯವಂತರ ಮೆದುಳಿನಂತೆ ಇವು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುವುದಿಲ್ಲ. ಹಾಗೂ ಇವುಗಳ ನಡುವೆ ಯಾವ ಬಗೆಯ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ ಒಂದು ಮೆದುಳಿನಲ್ಲಿ ಇರುವ ಮಾಹಿತಿ ಮತ್ತೊಂದಕ್ಕೆ ರವಾನೆಯಾಗುವುದಿಲ್ಲ. ಆದರೆ ಆರೋಗ್ಯವಂತರ ಮೆದುಳಿನ ಈ ಎರಡೂ ಭಾಗಗಳು ಎಷ್ಟೊಂದು ವಿಷಯಗಳಲ್ಲಿ ಒಂದಕ್ಕೊಂದು ನೆರವಾಗುತ್ತವೆ ಎನ್ನುವುದು ವಿಶೇಷ.
ಮೆದುಳಿನ ಯಾವ ಜಾಗದಲ್ಲಿ ಏನಿರುತ್ತದೆ?
ನುಡಿ, ತರ್ಕ, ವಿಶ್ಲೇಷಣಾತ್ಮಕ ಚಟುವಟಿಕೆ, ಗಣಿತಶಾಸ್ತ್ರದಲ್ಲಿ ವಿಶೇಷ ತಜ್ಞತೆ ಇವುಗಳನ್ನೆಲ್ಲ ಒಳಗೊಂಡಿರುವ ಜಾಗವೇ ಎಡಮೆದುಳು. ಹಲವಾರು ಅಧ್ಯಯನಗಳ ಮೂಲಕ ಈ ಸಂಗತಿ ಸಾಬೀತಾಗಿದೆ. ಬ್ರೊಕಾ ಮತ್ತು ವರ್ನಿಕ್ ಏರಿಯಾಗಳು, ಆರ್ಕ್ಯುವೇಟ್ ಫ್ಯಾಸಿಕುಲಸ್, ಆಂಗ್ಯುಲರ್ ಗಯ್ರಸ್ ಈ ಎಲ್ಲ ಜಾಗಗಳು ನುಡಿಯ ತಿಳುವಳಿಕೆ ಮತ್ತು ಉತ್ಪಾದನೆಯನ್ನು ನಿಯಂತ್ರಿಸುವ ಜಾಗಗಳೇ ಆಗಿವೆ ಎಂಬುದು ಗಮನಾರ್ಹ.
ಭಾವನೆಗಳನ್ನು ಹುಟ್ಟಿಸುವ ಹಾಗೂ ಅವುಗಳನ್ನು ಗುರುತಿಸುವ ನೆಲೆಗಳು, ಮುಖ ಚಹರೆಗಳನ್ನು ಗುರುತಿಸುವ, ವಸ್ತುಗಳ ರಾಚನಿಕ ಸ್ವರೂಪವನ್ನು ಸಾರ್ವತ್ರಿಕವಾಗಿ ಗ್ರಹಿಸುವ ನೆಲೆಗಳನ್ನು ಬಲಮೆದುಳೇ ಒಳಗೊಂಡಿರುತ್ತದೆ. ಮತ್ತು ಸಂಗೀತ, ಅತ್ಯಂತ ತೊಡಕಿನ ಕಣ್ನೋಟದ ಬಗೆಗಳು ಕೂಡ ಬಲಮೆದುಳಿನಲ್ಲಯೇ ಕ್ರಿಯಾಶೀಲವಾಗಿರುತ್ತವೆ. ನುಡಿಗೆ ಹೊರತಾದ ಉಲಿಗಳು ಅಂದರೆ, ಸಪ್ಪಳ ಹಾಗೂ ಪ್ರಾಣಿಗಳ ಕೂಗಾಟದ ಉಲಿಗಳನ್ನೂ ಬಲಮೆದುಳು ಒಳಗೊಂಡಿರುತ್ತದೆ. ಎಡಮೆದುಳನ್ನು ಯಾವುದೇ ಅಪಾಯ ಇಲ್ಲವೇ ಕಾಯಿಲೆಯ ಕಾರಣ ತೆಗೆದು ಹಾಕಿದರೆ, ನುಡಿಗೆ ಸಂಬಂಧಿಸಿದ ಕೆಲಸವನ್ನು ಇದು ವಹಿಸಿಕೊಳ್ಳುತ್ತದೆ.
ಪೌಲ್ ಬ್ರೋಕಾ ಮತ್ತು ಕರ್ಲ್ ವರ್ನಿಕ್
ಯಾರಿವರು? ಪೌಲ್ ಬ್ರೋಕಾ ಇವನೊಬ್ಬ ಫ್ರೆಂಚ್ ಸರ್ಜನ್/ನರತಜ್ಞ (ನ್ಯೂರೋಅನಾಟಮಿಸ್ಟ್). ಇವನು ಯುದ್ಧದ ಗಾಯಾಳುಗಳ ಜೀವವನ್ನು ಉಳಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದನು. ಈ ಗಾಯಾಳುಗಳಿಗೆ ಚಿಕಿತ್ಸಿಸುವಾಗ ಅವನು ತೀರಾ ನಿಗಾವಹಿಸಿ ಎಲ್ಲರನ್ನು ಗಮನಿಸುತ್ತಿದ್ದನು. ಹಾಗೂ ಆ ಎಲ್ಲ ಗಾಯಾಳುಗಳನ್ನು ತುಂಬಾ ಕಾಳಜಿಯಿಂದಲೂ ನೋಡಿಕೊಳ್ಳುತ್ತಿದ್ದನು. ಅಸಾಧಾರಣವಾದದ್ದನ್ನು ಕಂಡುಹಿಡಿಯಲು ಕಾರಣವೇ ಅವನ ಈ ಬದ್ಧತೆ ಎಂದು ಹೇಳಬಹುದು.
ಇವನ ಚಿಕಿತ್ಸೆಯಿಂದ ಚೇತರಿಸಿಕೊಂಡ ಒಂದಿಷ್ಟು ಗಾಯಾಳುಗಳು ಎಲ್ಲ ರೀತಿಯಿಂದಲೂ ಸಹಜವಾಗಿಯೇ ಕಾಣುತ್ತಿದ್ದರು. ಆದರೆ ಇವರೆಲ್ಲರೂ ಮಾತಿನ ಕೊರತೆಯಿಂದ ಬಳಲುತ್ತಿದ್ದರು. ಈ ರೋಗಿಗಳ ಎಡಮೆದುಳಿನ ಸೀಮಿತ ಜಾಗದಲ್ಲಿ ಗಾಯವಾಗಿರುವುದೇ ಕಾರಣವಾಗಿರುತ್ತಿತ್ತು. ಮೆದುಳಿನಲ್ಲಿಯ ಈ ಜಾಗವನ್ನು ಇವನು ತನ್ನ ಸಂಶೋಧನೆಯಲ್ಲಿ ಕಂಡುಹಿಡಿದನು. ಇದನ್ನೇ ಬ್ರೋಕಾ ಏರಿಯಾ ಎಂದು ಕರೆಯಲಾಗುತ್ತದೆ.
ಮೆದುಳಿನ ಈ ಜಾಗಕ್ಕೆ ಯಾವುದೇ ಗಾಯ ಇಲ್ಲವೇ ಹೊಡೆತದ ಪರಿಣಾಮದಿಂದ ಮಾತಿನ ಕೊರತೆ ಉಂಟಾದರೆ, ಆ ಜಾಗವನ್ನು ಬ್ರೋಕಾ ಅಫೇಸಿಯಾ ಎಂದು ಗುರುತಿಸಲಾಗಿದೆ. ಅಫೇಸಿಯಾ ಎಂಬುದು ಗ್ರೀಕ್ ಪದ, ಮಾತಿನ ಕಸುವನ್ನು (ಸ್ಪೀಚ್ಲೆಸ್) ಕಳೆದುಕೊಂಡ ನೆಲೆಯನ್ನು ಇದು ಸೂಚಿಸುತ್ತದೆ. ಸಾವಿರದ ಎಂಟನೂರು ಎಂಬತ್ತೊಂದರಲ್ಲಿ ಮಾತಿನ ಬೇನೆಗೆ (ಅಫೇಸಿಯಾ) ಒಳಗಾಗಿದ್ದ ಒಬ್ಬ ವ್ಯಕ್ತಿಗೆ ಬ್ರೋಕಾ ಚಿಕಿತ್ಸೆಯ (ಸಲಹೆಗಳ)ನ್ನು ನೀಡುತ್ತಿದ್ದನು. ಆ ವ್ಯಕ್ತಿಯನ್ನು ಬ್ರೋಕಾ ‘ತಾನ್’ ಎಂದು ಕರೆದನು.
ಈ ತಾನ್ ತೀರಿಕೊಂಡ ಮೇಲೆ ಬ್ರೋಕಾ ಅವನ ಶವಪರೀಕ್ಷೆ ಮಾಡುತ್ತಾನೆ. ಆವಾಗ ಆ ವ್ಯಕ್ತಿಯ ಎಡಮೆದುಳಿನ ಒಂದು ಜಾಗದಲ್ಲಿ ಗಾಯವಿರುವುದು ಕಂಡುಬರುತ್ತದೆ. ಎಡ ಕಿವಿಯ ಹಾಲೆಯ ಮುಂಭಾಗದ (ಫ್ರಂಟಲ್ ಲೋಬ್) ಮೇಲಿನ ಜಾಗವೇ ಈ ಗಾಯವಿರುವ ಜಾಗವಾಗಿತ್ತು. ಅಂದರೆ ಎಡಮೆದುಳು ನೆಲೆಗೊಂಡಿರುವ ಜಾಗವೆಂದೇ ಹೇಳಬೇಕು.
ಈ ಜಾಗದಲ್ಲಿ ಉಂಟಾಗಿರುವ ಗಾಯವನ್ನು ಬ್ರೋಕಾ ಗುರುತಿಸಿದ್ದಕ್ಕಾಗಿ ಆ ಜಾಗವನ್ನೇ ಬ್ರೋಕಾ (ಜಾಗ) ಏರಿಯಾ ಎಂದು ಕರೆಯುತ್ತಾರೆ. ‘ನುಡಿಯ ಸಾಮರ್ಥ್ಯ ಮಾನವರ ದೇಹದ ಯಾವ ಭಾಗದಲ್ಲಿ ನೆಲೆಗೊಂಡಿರುತ್ತೆ?’ ಮೆದುಳಿನಲ್ಲಿಯೋ? ಇಲ್ಲವೇ ಮನಸ್ಸಿನಲ್ಲೋ? ಎಂಬ ಆವತ್ತಿನ ಕಾಲದ ನುಡಿ ಬಗೆಗಿನ ಚರ್ಚೆಗೆ ಬ್ರೋಕಾನ ಈ ನಿಲುವು, ನುಡಿ ಮೆದುಳಿನಲ್ಲಿಯೇ ನೆಲೆ ನಿಂತಿರುತ್ತದೆ ಎಂಬುದಕ್ಕೆ ಇದೊಂದು ಸಮರ್ಥನೆಯೂ ಆಗಿದೆ ಎಂಬುದನ್ನು ಮನಗಾಣುವುದಕ್ಕೆ ಈ ಸಂಗತಿಯು ಒತ್ತಾಸೆಯಾಗಿದೆ.
ಬ್ರೋಕಾ ಜಾಗದಲ್ಲಿ ಉಂಟಾಗುವ ಬೇನೆಯಿಂದ ಬಳಲುವ ವ್ಯಕ್ತಿ, ನುಡಿಗೆ ಸಂಬಂಧಿಸಿದ ಯಾವ ಬಗೆಯ ತೊಡಕುಗಳನ್ನು ಎದುರಿಸುತ್ತಾನೆ ಎಂಬುದನ್ನು ಬ್ರೋಕಾ ಕಂಡುಹಿಡಿದನು. ನುಡಿಗೆ ಸಂಬಂಧಿಸಿದ ಆ ತೊಂದರೆ ಯಾವುದೆಂದರೆ, ಮಾತನ್ನು ಹೊರಡಿಸುವುದೇ ಆಗಿರುತ್ತದೆ. ಏಕೆಂದರೆ, ಮಾತನ್ನು ಹೊರಡಿಸುವ ಜಾಗವಿರುವುದೇ ಬ್ರೋಕಾ ಏರಿಯಾ. ಇಂತವರಿಗೆ ಸರಾಗವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ನೆಲೆಯ ವ್ಯಕ್ತಿಗಳು ಬಹುತೇಕ ಸನ್ನಿವೇಶದಲ್ಲಿ ಮಾತನಾಡುವ ಕಸುವನ್ನೇ ಕಳೆದುಕೊಳ್ಳುತ್ತಾರೆ. ಇದನ್ನು ವರ್ಬಲ್ ಅಪ್ರಾಕ್ಸಿಯಾ [ಮಾತನಾಡದ ನೆಲೆ] ಎಂದು ಕರೆಯುತ್ತಾರೆ.
ಆದರೆ ಬೇರೆಯವರು ಮಾತಾಡುವುದನ್ನು ಇವರು ಅರ್ಥ ಮಾಡಿಕೊಳ್ಳುತ್ತಾರೆ. ಹಾಗೂ ವರ್ಬಲ್ ಅಪ್ರಾಕ್ಸಿಯಾದಿಂದ ಬಳಲುವ ಈ ವ್ಯಕ್ತಿಗಳಿಗೆ ಉಚ್ಚಾರಣೆಯಲ್ಲಿ ತೊಂದರೆಯಾಗುತ್ತದೆ. ಅಂದರೆ ಇವರಿಗೆ ಗಂಟಲು, ಉಲಿಪೆಟ್ಟಿಗೆ, ತುಟಿ, ದವಡೆ ಇವುಗಳ ಮೂಲಕ ಉಚ್ಚರಿಸುವಲ್ಲಿ ಕಷ್ಟವಾಗುತ್ತದೆ. ಸರಿಯಾಗಿ ಪದಗಳನ್ನು ಜೋಡಿಸಿ ಉಚ್ಚರಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಇನ್ನೊಬ್ಬರಿಗೆ ಪ್ರತಿಕ್ರಿಯಿಸುವಾಗ, ಸ್ವಂಪ್ರೇರಿತವಾಗಿ ಏನನ್ನಾದರೂ ಉಚ್ಚರಿಸಬೇಕೆಂದರೆ ಇವರು ತಡಕಾಡುತ್ತಾರೆ.
ಪ್ರತಿಸಲವೂ ಅವರ ಹೊರಡಿಸುವ ಉಲಿಗಳ ವಿಧಾನವೇ ಬೇರೆ ಬೇರೆಯಾಗಿರುತ್ತದೆ. ಇನ್ನೊಬ್ಬರು ಉಚ್ಚರಿಸುವುದನ್ನು ನೋಡಿ ಇವರು ಅನುಕರಿಸಬಹುದಾದರೂ, ಅದು ಯಾವಾಗಲೂ ನಡೆಯುವ ಕೆಲಸವಲ್ಲ. ಇವರಿಗೆ ಗ್ರಹಿಕೆಯಲ್ಲಿ ಸುಮಾರು 50% ರಿಂದ 90% ರಷ್ಟು ನಿಖರತೆ ಇರುತ್ತದೆ. ಆದರೆ ಇದೇ ನಿಖರತೆಯನ್ನು ಪರಸ್ಪರ ಮಾತುಕತೆಗಳಲ್ಲಿ ಎದರು ನೋಡಲು ಸಾಧ್ಯವಿಲ್ಲ. ಇಂತಹ ಸನ್ನಿವೇಶದಲ್ಲಿ ಇವರ ಗ್ರಹಿಕೆಯ ಕಸುವು ಸುಮಾರು 50% ಕ್ಕಿಂತ ಕಡಿಮೆಯಾಗಬಹುದು.
ಹಾಗೂ ಇವರು ಕೇವಲ ನಾಮಪದಗಳನ್ನು ಮಾತ್ರ ಹೊರಡಿಸಬಲ್ಲರು, ಬೇರೆ ಬಗೆಯ ಪದಗಳನ್ನು ಹೊರಡಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ನಾಮಪದಗಳೊಂದಿಗೆ ಬರುವ ಒಟ್ಟು (ಪ್ರತ್ಯಯ)ಗಳನ್ನೂ ಇವರು ಹೊರಡಿಸಲಾರರು. ಹಾಗೂ ಸೊಲ್ಲರಿಮೆ/ವ್ಯಾಕರಣದ ಅಪೂರ್ಣತೆ (ಅಗ್ರಾöಮ್ಯಾಟಿಕ್) ಮತ್ತು ಟೆಲಿಗ್ರಾಫಿಕ್ ಮಾದರಿಯ ಮಾತುಗಳನ್ನು ಮಾತ್ರ ಆಡುತ್ತಾರೆ. (ಉದಾ.ಗೆಗಾಗಿ, ನಾನು ಮನೆಗೆ ಹೋಗಿ ಊಟ ಮಾಡಿಕೊಂಡು ಬರುತ್ತೇನೆ) ಎಂಬುದನ್ನು ನಾ….ಮನೆ…..ಊಟ…. ಮುಂತಾಗಿ ಹೇಳಬಹುದು. ಬರವಣಿಗೆ ಮತ್ತು ಓದುವ ಚಳಕಗಳನ್ನೂ ಈ ಅಪ್ರಾಕ್ಸಿಯಾ ಬಾಧಿಸುತ್ತದೆ.
ನುಡಿಯ ಉತ್ಪಾದಕತೆಯಲ್ಲಿ ಕೊರತೆಯನ್ನು ಅನುಭವಿಸುವುದೇ ಬ್ರೋಕಾ ಅಫೇಸಿಯಾ. ಈ ಕೊರತೆಗಳು ನುಡಿ ಉತ್ಪಾದಕತೆಯ ಬೇರೆ ಬೇರೆ ನೆಲೆಯಲ್ಲಿಯೂ ಎದುರಾಗುತ್ತವೆ. ಬ್ರೋಕಾ ಏರಿಯಾ ಕುರಿತ ಎಲ್ಲ ವಿವರಗಳನ್ನು ಇಲ್ಲಿ ಚರ್ಚಿಸುವುದು ಸಾಧ್ಯವಿಲ್ಲ. ಸದ್ಯಕ್ಕೆ ಆ ಎಲ್ಲ ವಿವರಗಳನ್ನು ಚರ್ಚಿಸುವ ಅಗತ್ಯವೂ ಇಲ್ಲಿ ಎದ್ದು ಕಾಣುವುದಿಲ್ಲ. ಹಾಗಾಗಿ ಈಗ ಇಲ್ಲಿ ನುಡಿ ನೆಲೆಗೊಳ್ಳುವ ಮೆದುಳಿನ ಇನ್ನೊಂದು ಪ್ರಮುಖ ಭಾಗವಾಗಿರುವ ವರ್ನಿಕ್ ಏರಿಯಾ ಕುರಿತು ಚರ್ಚಿಸೋಣ.
ಕಾರ್ಲ್ ವೆರ್ನಿಕೆ
ಕಾರ್ಲ್ ವೆರ್ನಿಕೆ ಜರ್ಮನಿಯ ನರತಜ್ಞ-ನುಡಿಯರಿಗ. ಇವನು ನುಡಿ ಮತ್ತು ಮೆದುಳಿನ ನಂಟಸ್ತಿಕೆಯನ್ನು ಕುರಿತು ಪೌಲ್ ಬ್ರೋಕಾ ನಂತರ ಚಿಂತಿಸಿದವರಲ್ಲಿ ಮತ್ತೊಬ್ಬ ಬಹುದೊಡ್ಡ ಚಿಂತಕ. ಇವನು ಬ್ರೋಕಾ ಏರಿಯಾ ಹಾಗೂ ಮಾತಿನ ಕೊರತೆಯನ್ನು ಕುರಿತು ತನ್ನ ಸಂಶೋಧನಾ ತೀರ್ಮಾನಗಳನ್ನು ಪುಸ್ತಕೆ ರೂಪದಲ್ಲಿ ಪ್ರಕಟಿಸಿದನು. ಇದರಿಂದ ಇವನು ಲೋಕದಾದ್ಯಂತ ಹೆಸರುವಾಸಿಯಾದನು.
ತನ್ನ ಈ ಸಂಶೋಧನೆಯನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿಯೇ ವೆರ್ನಿಕೆ ಒಂದು ಮುಖ್ಯವಾದ ಸಂಗತಿಯನ್ನು ಕಂಡುಕೊಂಡನು. ಅದೇನೆಂದರೆ, ಕೇವಲ ಬ್ರೋಕಾ ಏರಿಯಾಗೆ ಒದಗುವ ತೊಂದರೆಯ ಪರಿಣಾಮದಿಂದ ಮಾತ್ರ ಎಲ್ಲ ಬಗೆಯ ನುಡಿ ಕೊರತೆಗಳು ಉಂಟಾಗುವುದಿಲ್ಲ, ಮೆದುಳಿನ ಮತ್ತೊಂದು ಜಾಗದಲ್ಲಿ ಆಗುವ ತೊಂದರೆಯಿಂದಲೂ, ಮಾನವರು ಮಾತಿನ ಕೊರತೆಯನ್ನು ಎದುರಿಸುತ್ತಾರೆ ಎಂಬ ಸಂಗತಿಯನ್ನು ಕಂಡುಹಿಡಿದನು.
ಹಾಗಾದರೆ ವೆರ್ನಿಕೆ ಕಂಡುಕೊಂಡ ನುಡಿ ಕುರಿತ ಕೊರತೆಗಳು ಎಂತಹವು? ಕಾರ್ಲ್ ವೆರ್ನಿಕೆ ಕಂಡುಹಿಡಿದ ಆ ಜಾಗವು ಬ್ರೋಕಾ ಏರಿಯಾಕ್ಕಿಂತ ಕೊಂಚ ಹಿಂದುಗಡೆ ಇರುತ್ತದೆ. ಅಂದರೆ ಆಡಿಟರಿ ಕರ್ಟೆಕ್ಸ್ಗೆ ಹೊಂದಿಕೊಂಡಿರುತ್ತದೆ. ಇದನ್ನು ಮೆದುಳಿನ ಎಡ ಹಿಂಭಾಗವೆಂದು (ಟೆಂಪರಾಲ್ ಲೋಬ್) ಹೇಳಬಹುದು. ಮಾನಸಿಕ ನ್ಯೂನತೆಯ ಕಾರಣದಿಂದ ಮೆದುಳಿನ ಬೇರೆ ಬೇರೆ ಜಾಗಗಳಲ್ಲಿ ಯಾವ ಬಗೆಯ ಮಾತಿನ ಕೊರತ (ಅಫೇಸಿಯಾ)ಗಳು ಉಂಟಾಗುತ್ತವೆ ಎಂಬುದನ್ನು ತನ್ನ ಶೋಧಗಳಿಂದ ವೆರ್ನಿಕೆ ತೋರ್ಪಡಿಸಿದ್ದಾನೆ.
ಆ ಶೋಧಗಳಿಂದ ಮಾತಿನ ಬೇರೆ ಬಗೆಯ ತೊಂದರೆಗಳು ಯಾವವು ಎಂಬುದನ್ನು ವೆರ್ನಿಕೆ ಗುರುತಿಸಿದ್ದಾನೆ. ಈ ವೆರ್ನಿಕೆ ಅಫೇಸಿಯಾದಿಂದ ಬಳಲುವವರ ಉಚ್ಚಾರಣೆಗಳು ಸರಿಯಾಗಿದ್ದು, ಸೊಲ್ಲರಿಮೆಗೆ ಒಪ್ಪಿತವಾದ ಸೊಲ್ಲುಗಳನ್ನೇ ಉತ್ಪಾದಿಸುತ್ತಿದ್ದರೂ, ಅರ್ಥಗಳನ್ನು ಒದಗಿಸು ನೆಲೆಗಳು ಮಾತ್ರ ಸರಿಯಾಗಿರುವುದಿಲ್ಲ. ಹಾಗೂ ಬೇರೆಯವರು ಮಾತಾಡಿದ್ದನ್ನು ಇವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಾತನ್ನು ಉತ್ಪಾದಿಸುವ ನೆಲೆ ಇವರಿಗೆ ಸರಿಯಾಗಿದ್ದರೂ, ಅರ್ಥಗಳನ್ನು ಒದಗಿಸುವ ಹಾಗೂ ಅರ್ಥಗಳನ್ನು ಪಡೆಯುವ ನೆಲೆಯಲ್ಲಿ ಇವರು ತೊಂದರೆಗಳನ್ನು ಎದುರಿಸುತ್ತಾರೆ.
ನಮ್ಮ ಮೆದುಳಿನಲ್ಲಿ ಉಲಿ ಮತ್ತು ಆರ್ಥಗಳನ್ನು ಕೊಡಿಟ್ಟುಕೊಂಡು ಮತ್ತೆ ಅವುಗಳನ್ನು ನಮ್ಮ ಬಳಕೆಗೆ ಒದಗಿಸುವ ಜಾಗಗಳು ಬೇರೆ ಬೇರೆ ಎಂಬುದನ್ನು ಮೇಲಿನ ಚರ್ಚೆಗಳಿಂದ ನಿಚ್ಚಳವಾಗಿ ಕಾಣುತ್ತದೆ. ಅವುಗಳನ್ನು ಬ್ರಾಕಾ ಜಾಗ (ಏರಿಯಾ) ಮತ್ತು ವೆರ್ನಿಕೆ ಜಾಗವೆಂದು ಗುರುತಿಸಲಾಗಿದೆ. ಈ ಎರಡು ಜಾಗಗಳಲ್ಲಿ ಯಾವುದೇ ಒಂದಕ್ಕೆ ತೊಂದರೆಯಾದರೂ ನುಡಿಯನ್ನು ಸರಾಗವಾಗಿ ಸಂವಹಿಸಲು ಸಾಧ್ಯವಿಲ್ಲ. ಹಾಗಾಗಿ ಈ ಎರಡೂ ಜಾಗಗಳು ನುಡಿ ಗಳಿಕೆ ಹಾಗೂ ಬಳಕೆಯ ನೆಲೆಯಿಂದ ತುಂಬಾ ಮುಖ್ಯವಾಗಿವೆ.
- ಉಲಿ ಪೆಟ್ಟಿಗೆಗೆ (ಪದಗಳನ್ನು ಹೇಳುತ್ತೇವೆ)
- ಮೋಟಾರ್ಕೋರಟೆಕ್ಸ್ (ಕ್ರಿಯೆಗಾಗಿ)
- ಬ್ರೋಕಾನ ಜಾಗಕ್ಕೆ (ಉಲಿಗಳಿಗಾಗಿ)
- ವೆರ್ನಿಕ್ನ ಜಾಗಕ್ಕೆ (ಅರ್ಥಗಳನ್ನು ಒದಗಿಸುವ/ಗಳಿಸುವ)
- ಪ್ರೈಮರಿ ವಿಸ್ಯುಯಲ್ ಕೊರಟೆಕ್ಸ್ ಟು ಪ್ರೈಮರಿ ಆಡಿಟರಿ ಏರಿಯಾ (ನಾವು ನೋಡುವ ಪದ) (ನಾವು ಕೇಳುವ ಪದ)
- ನೋಡುವ ಪಠ್ಯ (ಕಣ್ಣಿನ ನುಡಿ)
- ಕೇಳು ಉಲಿಗಳು (ಕಿವಿಯ ನುಡಿ)
ನಾವು ಜೋರಾಗಿ ಓದುವಾಗ ಕೇಳಿದ ಪದವನ್ನು ಮರುಬಳಿಸುವ
ಚಿತ್ರ – 01 : ವೆರ್ನಿಕೆ-ನರ್ಮನ್ ಗೇಶ್ಚ್ವಿಂಡ್ ಅವರ ಸರಳೀಕರಿಸಿದ ಮಾದರಿ
ಈ ಮೇಲಿನ ಚಿತ್ರ ನುಡಿಯನ್ನು ನಾವು ಹೇಗೆ ಗ್ರಹಿಸುತ್ತೇವೆ, ಓದುತ್ತೇವೆ ಹಾಗೂ ಹೇಳುತ್ತೇವೆ ಹಾಗೂ ಈ ಕೆಲಸ ಮೆದುಳಿನ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಈ ಮಾದರಿ ನುಡಿ ಮತ್ತು ಮೆದುಳುಗಳ ನಡುವಣ ನಂಟಸ್ತಿಕೆಯ ಹೊಸ ಆಯಾಮಗಳನ್ನು ತೋರಿಸುತ್ತದೆ. ನುಡಿ ಮೆದುಳಿನಲ್ಲಿ ಯುಕ್ತತೆಯಿಂದ ನೆಲೆಗೊಂಡಿರುತ್ತದೆ.
ಬ್ರಾಕಾ ಜಾಗವು ಆಡಿಟರಿ ಮತ್ತು ಮೋಟಾರ್ ಕರ್ಟೆಕ್ಸ್ಗಳಗೆ ಹೊಂದಿಕೊಂಡಿರುತ್ತದೆ. ಈ ಆಡಿಟರಿ ಕರ್ಟೆಕ್ಸ್ ಕಿವಿಯ ಮೂಲಕ ಬರುವ ಸಂಕೇತಗಳನ್ನು ಪಡೆಯುತ್ತದೆ. ಹಾಗೂ ಮೋಟಾರ್ ಕರ್ಟೆಕ್ಸ್ನಿಂದ ಸಂಕೇತಗಳು ಮೆದುಳಿನ ಗ್ರಂಥಿಗಳಿಗೆ ಹೋಗುತ್ತವೆ. ಅಲ್ಲಿಂದ ನಮ್ಮ ಎಲ್ಲ ನುಡಿಗೆ ಸಂಬಂಧಿಸಿದ ಚಟುವಟಿಕೆಗಳು ಶುರುವಾಗುತ್ತವೆ. ಉಲಿ ಸಂಕೇತಗಳು ಉಲಿಪೆಟ್ಟಿಗೆಗೆ ಕೂಡ ಇದೇ ಜಾಗದಿಂದ ಹೊರಹೊಮ್ಮುತ್ತವೆ. ಈ ಕೇಳಗಿನ ಎರಡೂ ಚಿತ್ರಗಳು ಇನ್ನಷ್ಟೂ ವಿವರವಾಗಿ ನುಡಿ ಹಾಗೂ ಮೆದುಳಿನ ನಡುವಣ ನಂಟಸ್ತಿಕೆಯನ್ನು ತಿಳಿಸುತ್ತವೆ.
ಈ ಮೇಲಿನ ಎಲ್ಲ ಚರ್ಚೆಗಳು ಕೇವಲ ನುಡಿ ಎಂದರೇನು ಎಂಬ ಕೇಳ್ವಿಗೆ ಬದಲುಗಳನ್ನು ಕೊಡುವುದಕ್ಕೆ ಮಾತ್ರ ಸೀಮಿತಗೊಳ್ಳದೇ, ನುಡಿ ಸ್ವರೂಪದ ಬೇರೆ ಬೇರೆ ನೆಲೆಗಳನ್ನು ತಿಳಿಯುವ ಯತ್ನವನ್ನು ಮಾಡಲಾಗಿದೆ. ಆ ಮೂಲಕ ಇಲ್ಲಿಯ ಚರ್ಚೆಗಳು ನುಡಿಯ ಬೇರೆ ಬೇರೆ ಆಯಾಮಗಳನ್ನು ಚರ್ಚಿಸುವುದಷ್ಟೆ ಅಲ್ಲ, ಬದಲಾಗಿ ನುಡಿ ಕುರಿತ ಭಿನ್ನ ಕಣ್ನೋಟಗಳನ್ನು ತೋರ್ಪಡಿಸುತ್ತವೆ. ನುಡಿಯರಿಮೆಗೆ ನುಡಿಯ ಯಾವ ನೆಲೆಗಳು ಅತ್ಯಂತ ಮಹತ್ವ ಸಂಗತಿಗಳು ಅನ್ನುವ ನಿಲುವುಗಳನ್ನೂ ಈ ಟಿಪ್ಪಣಿಯಲ್ಲಿ ಗಮನಿಸಲು ಸಾಧ್ಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ದಾವಣಗೆರೆ | ವಿನೋಬನಗರದ ಶ್ರೀ ಚೌಡೇಶ್ವರಿ ಜಾತ್ರೆ ಸಂಭ್ರಮ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ6 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ4 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?