Connect with us

ರಾಜಕೀಯ

ಭಾಷೆ, ರಾಜಕಾರಣ ಮತ್ತು ವ್ಯಾಕರಣ

Published

on

ಭಾಷೆಯೊಂದರ ಉಳಿವಿನ ಪ್ರಶ್ನೆ ಚಾಲ್ತಿಗೆ ಬಂದಾಗಲೆಲ್ಲ ಅಧಿಕಾರ ಕೇಂದ್ರವು ಪ್ರತಿಕ್ರಿಯಿಸುವ ಉತ್ಸಾಹವನ್ನೇನೋ ತೋರುತ್ತದೆ. ತಾನು ಈ ವಿಷಯದಲ್ಲಿ ಗಂಭೀರವಾಗಿರುವುದಾಗಿ ಸಂದೇಶ ರವಾನಿಸುತ್ತದೆ. ಭವಿಷ್ಯದಲ್ಲಿ ಭಾಷೆಯ ಬಳಕೆಗಳ ಬಗ್ಗೆ ಎಚ್ಚರ ಇರುವುದಾಗಿಯೂ ಸ್ಪಷ್ಟಪಡಿಸುತ್ತದೆ. ಎಲ್ಲ ಸಮುದಾಯಗಳ ಜನರೂ ಜಾಗತಿಕ ಮನ್ನಣೆ ಪಡೆದ ಪರಭಾಷೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಪ್ರತಿಷ್ಠೆಯನ್ನು ಗಳಿಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದೊಂದಿಗೆ ಹೆಜ್ಜೆಯಿರಿಸುತ್ತಿರುವುದಾಗಿ ಸಮಜಾಯಿಷಿ ನೀಡುತ್ತದೆ. ಆದರೆ, ನಮ್ಮದಲ್ಲದ ಭಾಷೆಯ ಮೇಲೆ ಹಿಡಿತ ಸಾಧಿಸಿ ಪ್ರತಿಷ್ಠೆ ಗಳಿಸಿಕೊಳ್ಳುವ ಉಮೇದು ಅತ್ಯಂತ ಸಂಕುಚಿತವಾದದ್ದು ಎಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಇನ್ನೊಂದು ಭಾಷೆಯ ಮೇಲೆ ಹಿಡಿತ ಸಾಧಿಸುವುದಷ್ಟೇ ಮುಖ್ಯ ಎಂಬ ಸಾರ್ವತ್ರಿಕ ಭಾವನೆಯನ್ನೇ ಆಧರಿಸಿಕೊಂಡು ನಿರ್ಧಾರ ಕೈಗೊಳ್ಳುವುದರಲ್ಲಿಯೇ ಆಸಕ್ತಿ ತೋರುತ್ತದೆ.

ಪ್ರಾಯೋಗಿಕವಾಗಿ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರಿ ಪ್ರಸ್ತಾವವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆಯೋಜಿತವಾದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ತಾರ್ಕಿಕ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ವೇದಿಕೆಯ ಮೂಲಕ ವ್ಯಕ್ತವಾದ ತಾರ್ಕಿಕ ಪ್ರಶ್ನೆಗಳು ಅಧಿಕಾರ ಕೇಂದ್ರದ ಪ್ರತಿನಿಧಿಗಳೊಳಗೆ ನಿಜವಾದ ಭಾಷಾ ಪ್ರಜ್ಞೆಯನ್ನು ಬಿತ್ತುವ ರೀತಿಯಲ್ಲಿಯೇ ಇವೆ. ಆದರೆ, ಇವು ಮುನ್ನೆಲೆಗೆ ತಂದ ಚರ್ಚೆಯು ಸಂವಾದವನ್ನು ಹುಟ್ಟುಹಾಕುವ ಬದಲು ವಿವಾದವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಚರ್ಚೆಯ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ವಿಶಾಲವಾಗಿ ಗ್ರಹಿಸದೇ ಇರುವುದು.

ರಾಜಕೀಯ ಚಾಣಾಕ್ಷತೆ

ಈ ಬಗೆಯ ವಿವಾದ ಇದೇ ಮೊದಲೇನಲ್ಲ. ಭಾಷೆ ಕುರಿತಾದ ಸರ್ಕಾರಿ ನಿರ್ಧಾರ ವ್ಯಕ್ತವಾದಾಗ ಸಹಜವಾಗಿಯೇ ಗೊಂದಲಗಳು ಏರ್ಪಡುತ್ತವೆ. ಅಂಥದ್ದೊಂದು ಗೊಂದಲದ ವಾತಾವರಣ ಸೃಷ್ಟಿಯಾಗುವಂತೆ ಅಧಿಕಾರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ನೋಡಿಕೊಳ್ಳುತ್ತದೆ. ಭಾಷಾ ಸಂಬಂಧಿ ಚರ್ಚೆಯನ್ನು ಸಂವಾದಕ್ಕೆ ತಿರುಗಿಸಿ ಮಹತ್ವಪೂರ್ಣ ಭಾಷಾ ಆಂದೋಲನಕ್ಕೆ ಪ್ರೇರಣೆ ನೀಡುವ ಬದಲು ವಿವಾದದ ಸೀಮಿತ ಚೌಕಟ್ಟಿನೊಳಗೆ ಕಟ್ಟಿಹಾಕುವ ವೈಚಿತ್ರ್ಯವನ್ನು ಸೃಷ್ಟಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಭಾಷೆಯ ಉಳಿವಿನ ಕುರಿತು ಧ್ವನಿಯೆತ್ತುವ ನಾಟಕವಾಡುವ ಸಂಘಟನೆಗಳ ಪ್ರತಿನಿಧಿಗಳು ಮೌನಪ್ರೇಕ್ಷಕರಾಗಿಯೇ ಉಳಿದುಬಿಡುತ್ತಾರೆ. ನಿಜವಾದ ಕಾಳಜಿಯೊಂದಿಗೆ ಧ್ವನಿಯೆತ್ತುವ ಬೆರಳೆಣಿಕೆಯ ಹೋರಾಟಗಾರರು, ಚಿಂತಕರು ಮತ್ತು ರಾಜಕೀಯ ವಲಯದ ಪ್ರತಿನಿಧಿಗಳ ನಡುವೆ ಮಾತಿನ ಸಮರವೇ ನಿರ್ಮಾಣವಾಗಿಬಿಡುತ್ತದೆ. ಇಂಥ ವೇಳೆ ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಗಳು ಜನಸಮೂಹದಲ್ಲಿ ಸರಿಯಾಗಿ ಆಲೋಚಿಸುವ ಒತ್ತಡವನ್ನುಂಟುಮಾಡುತ್ತವೆ. ಈ ವಿಷಯದಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಿದೆ.

ತೀಕ್ಷ್ಣ ಪ್ರತಿಕ್ರಿಯೆ

ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರ ಪ್ರಚುರಪಡಿಸಿ ಸಾರ್ವಜನಿಕ ಶಿಕ್ಷಣ ವಲಯವನ್ನು ಪ್ರತಿಷ್ಠಿತವಾಗಿಸುವ ಯೋಚನೆಗೆ ಪ್ರತಿಯಾಗಿ ಸಮ್ಮೇಳನವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಉದ್ಘಾಟನೆಯ ದಿನದಿಂದಲೇ ಸ್ಪಷ್ಟ ಸಂದೇಶ ರವಾನಿಸಿದ ಸಮ್ಮೇಳನವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಅನುಷ್ಠಾನಗೊಳಿಸಬಾರದು ಎಂಬ ಬಹುಮುಖ್ಯ ಆಗ್ರಹವನ್ನು ನಿರ್ಣಯದ ರೂಪದಲ್ಲಿ ಮುಂದಿಟ್ಟಿತು.

ಉದ್ಘಾಟನೆಯ ದಿನದಂದು ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ ಅವರು ತಮ್ಮ ಎಂದಿನ ವ್ಯಂಗ್ಯದ ಧಾಟಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಪರವಾದ ಪ್ರಸ್ತಾಪವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಗ್ಲಿಷ್ ಪರವಾದ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಉತ್ಸಾಹವು ಕನ್ನಡದ ಮೇಲೆ ಬಹುದೊಡ್ಡ ಪ್ರಹಾರದ ಮುನ್ಸೂಚನೆ ಎಂಬರ್ಥದ ವಿಶ್ಲೇಷಣೆಯನ್ನು ನೀಡಿದ್ದರು. ಆದರೆ, ಅವರ ಮಾತುಗಳಲ್ಲಿನ ತಾರ್ಕಿಕತೆಯು ಹಿನ್ನೆಲೆಗೆ ಸರಿದು ವ್ಯಕ್ತಿಗತ ದೃಷ್ಟಿಕೋನಗಳು ಆದ್ಯತೆ ಪಡೆದು ಚರ್ಚೆಗೊಳಪಟ್ಟವು.

ಭಾಷೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ವ್ಯಕ್ತಿಗತ ಬದ್ಧತೆಯ ಪ್ರಶ್ನೆಗಳು ನುಸುಳಿಕೊಂಡು ಸಂವಾದದ ಸಾಧ್ಯತೆಯನ್ನು ಮೊಟಕುಗೊಳಿಸುತ್ತವೆ. ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿ ಉಳಿದವರ ಮಕ್ಕಳು ಕನ್ನಡವನ್ನು ಕಲಿಯಬೇಕು ಎಂಬ ವಾದವನ್ನು ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ಚಿಂತಕರು, ಬುದ್ಧಿಜೀವಿಗಳ ಜಾಯಮಾನವೇ ಹಾಗೆ ಎಂಬ ಉಡಾಫೆ ದೃಷ್ಟಿಕೋನದಲ್ಲಿ ಮಾತೃಭಾಷೆಯಲ್ಲಿನ ಪ್ರಾಥಮಿಕ ಶಿಕ್ಷಣದ ವ್ಯಾಪಕ ಪ್ರಯೋಜನಗಳ ಸಾಧ್ಯತೆಯನ್ನು ಅವಸರವಸರದಲ್ಲಿ ಅಲ್ಲಗಳೆಯಲಾಗುತ್ತದೆ.

ಗಟ್ಟಿತನದ ಅಡಿಪಾಯ

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ವ್ಯಕ್ತಿತ್ವವೊಂದು ಗಟ್ಟಿತನದ ಬೌದ್ಧಿಕ ಅಡಿಪಾಯ ರೂಪಿಸಿಕೊಳ್ಳುವ ಕ್ರಮ ಎಂದೇ ಪರಿಭಾವಿಸಿಕೊಳ್ಳಬೇಕು. ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಈ ನೆಲೆಯಲ್ಲಿಯೇ ಬಲಪಡಿಸಬೇಕು. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷೆಗಳನ್ನು ಗ್ರಹಿಸಿಕೊಳ್ಳುವ ಶೈಕ್ಷಣಿಕ ಮಾದರಿಗಳನ್ನು ರೂಪಿಸಬೇಕು. ಅದಕ್ಕಾಗಿ ಶಿಕ್ಷಕ ಸಮುದಾಯವನ್ನು ಸಿದ್ಧಗೊಳಿಸಬೇಕು. ನೇಮಕಾತಿಯ ನಂತರ ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಆದ್ಯತೆ ಪಡೆಯುವ ಭಾಷಾ ಶಿಕ್ಷಣದ ಹೊಸ ಆಯಾಮಗಳನ್ನು ಪರಿಚಯಿಸಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಸರಳ ಕ್ರಮಗಳ ಕಲಿಕೆಯ ಕಡೆಗೆ ಗಮನವೀಯುವ ಸಮಗ್ರ ನೀತಿಯನ್ನು ವಿನ್ಯಾಸಗೊಳಿಸಿ ಜಾರಿಗೆ ತರುವ ಬದ್ಧತೆಯನ್ನು ಸರ್ಕಾರದ ಶೈಕ್ಷಣಿಕ ಸಚಿವಾಲಯ ತೋರ್ಪಡಿಸಬೇಕು.

ಬದ್ಧತೆಯ ಕೊರತೆ

ಇಂಥ ಬದ್ಧತೆಯ ಕೊರತೆಯ ಕಾರಣಕ್ಕಾಗಿಯೇ ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಯ ಮಕ್ಕಳು ಭಾಷೆಗೆ ಸಂಬಂಧಿಸಿದಂತೆ ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಗ್ಲಿಷ್ ಕಲಿಯಲೇಬೇಕು, ಕಲಿಯದಿದ್ದರೆ, ಆ ವಿಷಯದಲ್ಲಿ ಅನುತ್ತೀರ್ಣರಾದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಸಾಮಾಜಿಕ ಅಂಜಿಕೆಯು ಅವರೊಳಗೆ ಕೀಳರಿಮೆಯನ್ನು ಮೂಡಿಸುತ್ತದೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ಉದಾಹರಿಸಿ ಅವರೊಂದಿಗೆ ಹೋಲಿಸಿ ‘ಅವರ ಮುಂದೆ ನೀವೇನೂ ಅಲ್ಲ’ ಎಂಬ ತಿವಿತದೊಂದಿಗಿನ ಸಂಬಂಧಿಕರು ಮತ್ತು ಹಿರಿಯರ ಮಾತುಗಳು ಅವರೊಳಗಿನ ಸಕಾರಾತ್ಮಕ ದೃಷ್ಟಿಕೋನಗಳನ್ನೇ ಕೊಂದುಬಿಡುತ್ತವೆ.

ಇಂಗ್ಲಿಷ್ ಭಾಷೆಯ ವ್ಯಾಮೋಹದ ಗುಂಗಿನಲ್ಲಿ ಕನ್ನಡವನ್ನು ತುಚ್ಛವಾಗಿ ನೋಡುವ ಈ ಮನುಷ್ಯಮಿತಿಯು ಕೌಟುಂಬಿಕ ಆದ್ಯತೆಯನ್ನು ಪಡೆಯಬಾರದು. ಅಷ್ಟೇ ಅಲ್ಲ, ಆ ಆದ್ಯತೆಯು ಸರ್ಕಾರಿ ವಲಯದ ಪ್ರಾಶಸ್ತ್ಯವನ್ನೂ ಪಡೆಯಬಾರದು. ಹಾಗಾದರೆ, ಒಂದು ಪೀಳಿಗೆಯ ಭಾಷಿಕ ಸಾಮಥ್ರ್ಯ ಮತ್ತು ವೈಚಾರಿಕ ವಿವೇಚನೆಯ ಬೆಳವಣಿಗೆಯ ತೀವ್ರತೆಗೆ ಕುಂದುಂಟಾಗುತ್ತದೆ.

ಕನ್ನಡ ಶೈಕ್ಷಣಿಕ ಸಂಸ್ಕಾರದ ಶ್ರೇಷ್ಠತೆ

ಪ್ರಾಥಮಿಕ ಶಾಲಾಹಂತದ ಮಕ್ಕಳಿಗೆ ಕನ್ನಡದಿಂದಲೇ ಶಿಕ್ಷಣದ ಸಂಸ್ಕಾರ ಪ್ರಾಪ್ತವಾಗಬೇಕು ಎಂಬ ಪ್ರತಿಪಾದನೆಯು ಕೇವಲ ಭಾವುಕ ಲೇಪವನ್ನಷ್ಟೇ ಹೊಂದಿಲ್ಲ. ಅದು ಮಕ್ಕಳ ಕಲಿಕೆಯ ಸಾಮಥ್ರ್ಯಕ್ಕೆ ಬೇಕಾದ ಆಶಾವಾದವನ್ನು ನೆಲೆಗೊಳಿಸುವ ವೈಜ್ಞಾನಿಕ ಮಾರ್ಗೋಪಾಯದ ಆಧಾರವನ್ನೂ ಹೊಂದಿರುವುದನ್ನು ಗಮನಿಸಲೇಬೇಕು.

ಮಗುವೊಂದು ಮತ್ತೊಂದು ಭಾಷೆಯೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಮುನ್ನ ತಾನಿರುವ ಕೌಟುಂಬಿಕ ಪರಿಸರದ ಭಾಷಿಕ ಸಂವಹನದ ಕ್ರಮಗಳ ಅರಿವು ಹೊಂದಿರಬೇಕಾಗುತ್ತದೆ. ನೇರವಾಗಿ ಅದು ಬೇರೊಂದು ಭಾಷೆಯ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಕನ್ನಡದ ಪರಿಸರದಲ್ಲಿ ಬೆಳೆದ ಮಕ್ಕಳು ಕನ್ನಡದ ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಪದಗಳನ್ನು ಹೇಳಿ ಅದೇ ಭಾಷೆಯ ವಾಕ್ಯಗಳನ್ನು ಉಲ್ಲೇಖಿಸಿ ಆ ಭಾಷೆಯನ್ನು ಕಲಿಸಲಾಗದು. ಮಾತೃಭಾಷೆಯ ನೆರವಿನೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ಗೊತ್ತುಮಾಡಿಕೊಂಡರೆ ಮಕ್ಕಳೊಳಗೆ ಭಾಷಿಕ ಪ್ರಬುದ್ಧತೆ ಭಿನ್ನವಾಗಿ ನೆಲೆಯೂರುತ್ತದೆ. ಮಾತೃಭಾಷೆಯಲ್ಲಿ ಮಾತನಾಡುವ, ಮಾತನಾಡಿದ್ದನ್ನು ಸ್ಪಷ್ಟವಾಗಿ ಗ್ರಹಿಸುವ, ಗ್ರಹಿಸಿಕೊಂಡಿದ್ದನ್ನು ವಿವೇಚಿಸಿ ಅಭಿವ್ಯಕ್ತಿಸುವ ಕ್ರಮಗಳೊಂದಿಗೆ ಗುರುತಿಸಿಕೊಳ್ಳಲು ಅನುವಾಗುತ್ತದೆ. ಇದು ಪರಭಾಷೆಗಳ ಕಲಿಕೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.

ಭಾಷಾ ಸಂಕೀರ್ಣತೆಯ ಸವಾಲು

ಈ ಸೂಕ್ಷ್ಮವನ್ನು ಅರಿಯದೇ ಇದ್ದರೆ ಹೊಸ ಪೀಳಿಗೆಯ ಮಕ್ಕಳು ಭಾಷಾ ಸಂಕೀರ್ಣತೆಯನ್ನು ಎದುರಿಸುತ್ತಾರೆ. ಮುಂದಾಗುವ ಅಪಾಯವನ್ನು ಈಗಲೇ ಗ್ರಹಿಸಿರುವ ಕಾರಣಕ್ಕಾಗಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಉಳಿದೆಲ್ಲ ಪ್ರಚಲಿತ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಭಾಷಿಕ ಸಮಸ್ಯೆಯನ್ನಷ್ಟೇ ಕಾಡಿಸಿಕೊಂಡು ಮಹತ್ವದ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಚನೆಯನ್ನು ಅನುಷ್ಠಾನಗೊಳಿಸಬಾರದು ಎಂಬ ಸಮ್ಮೇಳನದ ಆಗ್ರಹ, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತೆ ಮುಂದಿಟ್ಟಿರುವ ಅದರ ಸಲಹಾತ್ಮಕ ನಿರ್ಣಯ ಮಹತ್ವಪೂರ್ಣ. ಆ ಮೂಲಕ ಸಮ್ಮೇಳನವು ಭಾಷೆಯ ಉಳಿವಿನ ಕುರಿತಾದ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಸಾಬೀತುಪಡಿಸಿದೆ.

ಇಡೀ ಜಗತ್ತು ವಾಣಿಜ್ಯಿಕ ಲಾಭದ ಗುಂಗಿನೊಂದಿಗಿದ್ದಾಗ ಭಾಷೆ, ಸಂಸ್ಕøತಿ ಉಳಿವಿನ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ಹಾಗೆ ಹಿನ್ನೆಲೆಗೆ ಸರಿಸುವ ಉದ್ದೇಶಪೂರ್ವಕ ಹುನ್ನಾರಗಳು ನಡೆದುಬಿಡುತ್ತವೆ. ವಾಣಿಜ್ಯಿಕ ಹಿತಾಸಕ್ತಿ ಮತ್ತು ಸಂಕುಚಿತ ರಾಜಕಾರಣದ ವಿಕಾರಗಳ ವಿಜೃಂಭಣೆಯ ಕಾರಣಕ್ಕಾಗಿಯೇ ಕನ್ನಡವು ಆಡಳಿತಾತ್ಮಕ ಆದ್ಯತೆಯ ಆವರಣದಿಂದ ಕ್ರಮೇಣ ಮರೆಯಾಗುವ ಮುನ್ಸೂಚನೆಗಳು ದೊರಕುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಭಾಷಿಕ ನಿರ್ಣಯಗಳನ್ನು ಸಕಾಲಿಕ ಎಂದೇ ಪರಿಗಣಿಸಬೇಕಾಗುತ್ತದೆ.

ಮಾತೃಭಾಷೆಯೊಂದಿಗಿನ ಕಲಿಕಾನಂಟು

ಕಲಿಕೆಯು ಅತ್ಯಂತ ಸಹಜ ಪ್ರಕ್ರಿಯೆ. ಮಗುವಿನ ಬೆಳವಣಿಗೆಯ ವೇಳೆ ಕ್ರಮಾನಗುತವಾಗಿ ಆಂತರ್ಯದಲ್ಲಿ ಅಂತಸ್ಥಗೊಳ್ಳುವ ಪರಿಕಲ್ಪನೆ. ಇದನ್ನು ಒಳಗೊಳ್ಳುವ ಹಂಬಲದೊಂದಿಗೆ ಹೆಜ್ಜೆಯಿರಿಸುವ ಮಗು ಹಂತಹಂತವಾಗಿ ಪ್ರಬುದ್ಧತೆಯ ಹಾದಿಯನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಹಾದಿಯಲ್ಲಿ ಮಾತೃಭಾಷೆಯದ್ದು ಅತ್ಯಂತ ಪ್ರಭಾವೀ ಪಾತ್ರ. ಆದರೆ, ಇದನ್ನು ನಿರ್ಲಕ್ಷಿಸಿ ಬೇರೊಂದು ಭಾಷೆಯನ್ನು ಮಕ್ಕಳ ಮನೋಲೋಕದಲ್ಲಿ ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸುವ ಪ್ರಯತ್ನವು ಆಘಾತಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸಮಗ್ರ ತಿಳುವಳಿಕೆಯನ್ನು ದಾಟಿಸುವುದಕ್ಕೆ ದಾರಿಮಾಡಿಕೊಡುವ ಕಲಿಕೆಯು ಭಾಷೆಯ ಪ್ರಸ್ತುತಿಯ ನೆರವಿನೊಂದಿಗೇ ಏರ್ಪಡಬೇಕಾಗುತ್ತದೆ.

ಮಗು ತನ್ನದಲ್ಲದ ಬೇರೊಂದು ಭಾಷೆಗೆ ಆರಂಭದಲ್ಲಿಯೇ ಒಗ್ಗಿಕೊಳ್ಳುವುದಿಲ್ಲ. ಅಪರಿಚಿತರನ್ನು ಕಂಡಾಕ್ಷಣ ಆತಂಕಗೊಳ್ಳುವ ಮನಸ್ಥಿತಿಯೇ ಬೇರೊಂದು ಭಾಷೆಯ ಅಭಿವ್ಯಕ್ತಿ ಎದುರುಗೊಂಡಾಗ ಪುನರಾವರ್ತಿತವಾಗುತ್ತದೆ. ಆಗ ಭಯ, ಆತಂಕ, ಅರ್ಥಕ್ಕೆಟುಕ್ಕುತ್ತಿಲ್ಲ ಎಂಬ ಕೊರಗುಗಳೆಲ್ಲವೂ ಒಟ್ಟಿಗೇ ದಾಳಿಗೈದು ಉದ್ದೇಶಿತ ಕಲಿಕೆ ಸಾಧ್ಯವಾಗುವುದೇ ಇಲ್ಲ. ಈ ಸೂಕ್ಷ್ಮತೆ ಅರಿತುಕೊಳ್ಳಲು ಭಾರೀ ಸಂಶೋಧನೆಯನ್ನೇನೋ ಕೈಗೊಳ್ಳಬೇಕಿಲ್ಲ. ಇಂಗ್ಲಿಷ್‍ನಿಂದಲೇ ಮಗುವಿನ ಕಲಿಕೆ ಆರಂಭವಾಗಬೇಕು ಎಂದು ವಾದಿಸುವ ಕನ್ನಡಿಗರು ತಮ್ಮ ತಮ್ಮ ಪ್ರಾಥಮಿಕ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಈ ಸೂಕ್ಷ್ಮ ಗಮನಕ್ಕೆ ಬರುತ್ತದೆ.

ಅಪಾಯದ ಮುನ್ಸೂಚನೆ

ಇಂಥ ಯಾವ ಸೂಕ್ಷ್ಮತೆಗಳನ್ನು ಪರಿಗಣಿಸದೇ ಪ್ರತಿಷ್ಠೆಯನ್ನಷ್ಟೇ ಕಾಡಿಸಿಕೊಂಡು ಮಕ್ಕಳ ಉದ್ಧಾರಕ್ಕೆ ಇಂಗ್ಲಿಷ್ ಮೂಲಕವೇ ಕಲಿಕೆಯ ಯಾನ ಶುರುವಾಗಬೇಕು ಎಂದು ಪ್ರತಿಪಾದಿಸುವುದು ತಾರ್ಕಿಕವೆನ್ನಿಸಿಕೊಳ್ಳುವುದಿಲ್ಲ. ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಯ ಮೂಲಕ ಹೊರಹೊಮ್ಮುವ ಅಮೂಲ್ಯ ಚಿಂತನೆಗಳನ್ನು ಪರಿಗಣಿಸುವ ಆಡಳಿತಾತ್ಮಕ ಬದ್ಧತೆಯ ಕೊರತೆ ಎದ್ದುಕಾಣುತ್ತಿರುವಾಗ ಇಂಥ ವಿತಂಡವಾದಿ ದೃಷ್ಟಿಕೋನಗಳು ಕನ್ನಡದ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಮೊಟಕುಗೊಳಿಸುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ನಾಡಿನ ಕುರಿತಾದ ಹೆಮ್ಮೆಯ ಭಾವ ಮೂಡಿಸುವಂಥ ಗೀತೆಗಳನ್ನು ಶಿಕ್ಷಕರು ರಾಜ್ಯೋತ್ಸವದ ಸಂದರ್ಭದಲ್ಲಿ ಪರಿಚಯಿಸುತ್ತಿದ್ದರು.

ಕನ್ನಡದ ಕಲಿಕೆಯ ಜೊತೆಜೊತೆಗೇ ಇಂಥ ಪರಿಚಯಾತ್ಮಕ ಪ್ರಯತ್ನಗಳು ನಾಡಿನ ಕುರಿತಾದ ಹೆಮ್ಮೆಯನ್ನೂ ಹೆಚ್ಚಿಸುತ್ತಿದ್ದವು. ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕವಿತೆಯು ನಾಡಗೀತೆಯ ಆಡಳಿತಾತ್ಮಕ ಮನ್ನಣೆ ಪಡೆದು ಕಡ್ಡಾಯ ನಿಯಮಾವಳಿಯ ವ್ಯಾಪ್ತಿಗೆ ಬರುವುದಕ್ಕಿಂತ ಮುಂಚೆಯೇ ಕರ್ನಾಟಕದ ಶಾಲೆಗಳಲ್ಲಿ ಕನ್ನಡದ ವೈವಿಧ್ಯಮಯ ಜಗತ್ತು ಅದರ ಭಾಷಿಕ ಸೊಗಡಿನೊಂದಿಗೇ ಪರಿಚಿತವಾಗುತ್ತಿತ್ತು. ಈಗ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಆವರಣದ ಕೂಪಕ್ಕೆ ಮಕ್ಕಳನ್ನು ತಳ್ಳುವ ಪ್ರಯೋಗಾರ್ಥ ಪ್ರಯತ್ನದ ಹೆಜ್ಜೆಗಳು ಅಂಥ ವಾತಾವರಣವನ್ನು ಇಲ್ಲವಾಗಿಸುವ ಆತಂಕವನ್ನು ಮೂಡಿಸಿವೆ. ಮಕ್ಕಳ ಭಾಷಿಕ ಸಾಮಥ್ರ್ಯಕ್ಕೆ ಕೊಡಲಿಪೆಟ್ಟು ನೀಡುವ ಸುಳಿವು ನೀಡಿವೆ.

ಕಂಬಾರರ ಮೌಲಿಕ ಚಿಂತನೆ

ಸಮ್ಮೇಳನದ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರ ನುಡಿಗಳಲ್ಲಿಯೇ ಆಡಳಿತವು ಕನ್ನಡ ಭಾಷೆಯ ಕುರಿತು ಯಾವ ನಿಲುವುಗಳನ್ನು ತಳೆಯಬೇಕು ಎಂಬ ಸ್ಪಷ್ಟ ಮಾರ್ಗದರ್ಶನವಿದೆ.“ಮಾತೃಭಾಷೆಯು ಬದುಕನ್ನು ಅಥಪೂರ್ಣಗೊಳಿಸುತ್ತದೆ. ಸಾಂಸ್ಕøತಿಕ ನಂಬಿಕೆ ಮತ್ತು ಮೌಲ್ಯಗಳು ಮಾತೃಭಾಷೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ. ಕನ್ನಡವನ್ನು ಸರಿಯಾಗಿ ಕಲಿಯುವುದರಿಂದ ಇಂಗ್ಲಿಷ್ ಸೇರಿದಂತೆ ಉಳಿದ ಭಾಷೆಗಳನ್ನು ಕಲಿಯುವುದಕ್ಕೂ ಸಹಾಯಕವಾಗುತ್ತದೆ” ಎಂಬ ಅವರ ನಿಲುವುಗಳು ಕೇವಲ ತಾತ್ವಿಕ ಚೌಕಟ್ಟನ್ನಷ್ಟೇ ಹೊಂದಿಲ್ಲ. ಸಮಸ್ತ ಕನ್ನಡಿಗರ ಅನುಭವಕ್ಕೆ ಬಂದ ಮೌಲಿಕ ಅಂಶಗಳನ್ನಾಗಿಯೂ ನಾವು ಅವುಗಳನ್ನು ಗ್ರಹಿಸಬೇಕು.

ಈ ರೀತಿಯಾಗಿ ಗ್ರಹಿಸುವ ಸಂಯಮ ಆಡಳಿತಾತ್ಮಕ ವಲಯದಿಂದ ವ್ಯಕ್ತವಾದರೆ ಕನ್ನಡ ಭಾಷೆಯು ಭವಿಷ್ಯದಲ್ಲಿ ಆತಂಕ ಎದುರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಣಿಜ್ಯಿಕ ಹಿತಾಸಕ್ತಿಯ ಪ್ರಲೋಭನೆಗೆ ಒಳಗಾಗಿ ಭಾಷೆಗೆ ಸಂಬಂಧಿಸಿದಂತೆ ಅತಾರ್ಕಿಕವಾದ, ಪ್ರಾಯೋಗಿಕವಲ್ಲದ ತೀರ್ಮಾನಗಳು ಪ್ರಕಟವಾಗುವುದಿಲ್ಲ.

ಇಂಗ್ಲಿಷ್ ಗುಂಗಿನ ಕೃತಕತೆ

ಇಂಗ್ಲಿಷ್ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಭಾಷೆಯಾಗಿ ನಮ್ಮೊಳಗೆ ಬೆರೆತುಹೋಗಬೇಕಿಲ್ಲ. ಆ ಭಾಷೆಯನ್ನು ಬಲವಂತವಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳೊಳಗೆ ಬೆರೆಸುವ ಪ್ರಯತ್ನವು ಅವರ ಬೆಳವಣಿಗೆಯ ಸಹಜತೆಗೆ ಕಡಿವಾಣ ಬಿಗಿಯುತ್ತದೆ. ಆ ಸಹಜತೆಯ ಜಾಗವನ್ನು ಕೃತಕತೆ ಆವರಿಸಿಕೊಂಡುಬಿಡುತ್ತದೆ.

ಇಂಗ್ಲಿಷ್ ಗುಂಗಿನ ಕೃತಕ ಚೌಕಟ್ಟಿನೊಳಗೆ ಬಂಧಿಯಾಗಿ ಕನ್ನಡದ ಬಗ್ಗೆ ಕೀಳರಿಮೆ ರೂಪುಗೊಳ್ಳುತ್ತದೆ. ಇಂಗ್ಲಿಷ್ ಶ್ರೇಷ್ಠ ಎಂಬ ತಪ್ಪುಕಲ್ಪನೆಯನ್ನೇ ಮಕ್ಕಳು ಪರಮ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ. ಹಾಗಾದಾಗ ಮಾತೃಭಾಷೆ, ಅದರೊಂದಿಗಿನ ಕರಳುಬಳ್ಳಿಯ ಸಂಬಂಧ, ಸಂಸ್ಕøತಿಯ ವೈವಿಧ್ಯಮಯ ಸ್ವರೂಪ ಅವರಿಂದ ಕ್ರಮೇಣ ದೂರವಾಗುತ್ತಾ ಹೋಗುತ್ತದೆ. ಅವರನ್ನು ಹೀಗೆ ಉದ್ದೇಶಪೂರ್ವಕವಾಗಿ ಕನ್ನಡದ್ದೇ ಪರಂಪರೆಯ ಬೇರುಗಳಿಂದ ಬೇರ್ಪಡಿಸುವಂಥ ಹೆಜ್ಜೆಗಳು ಭಾಷಿಕ ಸಂದಿಗ್ಧತೆಯನ್ನೇ ಸೃಷ್ಟಿಸುತ್ತವೆ.

ಕರುಳುಬಳ್ಳಿಯ ಸಂಬಂಧ

ಮಕ್ಕಳು ಕನ್ನಡದೊಂದಿಗಿನ ಕರುಳುಬಳ್ಳಿಯ ಸಂಬಂಧ ಕಡಿದುಕೊಂಡರೆ ಏನಾಗುತ್ತದೆ? ಬೆಳೆದು ದೊಡ್ಡವರಾದಾಗ ಕನ್ನಡದ ಭಾಷಿಕ ಸೊಗಡನ್ನೇ ವ್ಯಂಗ್ಯಕ್ಕೀಡುಮಾಡುತ್ತಾರೆ. ಕನ್ನಡದ ಉಳಿವಿನ ಕುರಿತು ಜನಪ್ರಿಯ ಶೈಲಿಯಲ್ಲಿ ಸಿನಿಮಾ ಹೀರೋಗಳು ಹೇಳುವ ಡೈಲಾಗ್‍ಗಳನ್ನಷ್ಟೇ ಕೇಳಿ ಚಪ್ಪಾಳೆ ಹೊಡೆದು ಆ ಕ್ಷಣಕ್ಕೇ ಮರೆತುಬಿಡುವ ಮನಃಸ್ಥಿತಿಗೆ ಪಕ್ಕಾಗಿಬಿಡುತ್ತಾರೆ. ಇಂಗ್ಲಿಷ್ ಮಾತನಾಡಿದರಷ್ಟೇ ಮರ್ಯಾದೆ ಎಂದುಕೊಂಡು ಪ್ರತಿಷ್ಠೆ ಮೆರೆಯುವ ಕೃತಕತೆಯನ್ನೇ ಗುಣಸ್ವಭಾವವನ್ನಾಗಿಸಿಕೊಳ್ಳುತ್ತಾರೆ.

ಕನ್ನಡದಲ್ಲೇ ಲಭ್ಯವಾಗುವ ಅದೆಷ್ಟೋ ಜ್ಞಾನ ಮಾದರಿಗಳ ಸಂಪರ್ಕದಿಂದ ದೂರವೇ ಉಳಿದುಬಿಡುತ್ತಾರೆ. ಎಲ್ಲದಕ್ಕೂ ಇಂಗ್ಲಿಷ್‍ನ್ನೇ ನೆಚ್ಚಿಕೊಂಡು ಅದರ ಮೂಲಕ ಹರಿದುಬರುವ ಮಾಹಿತಿಗಳನ್ನು ಮೇಲ್ನೋಟಕ್ಕಷ್ಟೇ ಗ್ರಹಿಸುವ ಅವಸರದ ಮಾದರಿಯನ್ನೇ ಅನುಸರಿಸುತ್ತಾರೆ. ವಿವಿಧ ಭಾಷೆಗಳಲ್ಲಿ ಲಭ್ಯವಾಗುವ ಮಾಹಿತಿಗಳನ್ನುಜ್ಞಾನಸಂಪನ್ಮೂಲವಾಗಿಸಿಕೊಳ್ಳುವ ಸಂಯಮ ರೂಢಿಸಿದ ಕನ್ನಡ ಓದಿನ ಸೊಗಡು ಸವಿಯುವ ಅಪೂರ್ವ ಅವಕಾಶದಿಂದ ಅವರು ವಂಚಿತರಾಗುತ್ತಾರೆ.ಮುಂದೆ ಎದುರಾಗಲಿರುವ ಅಂಥದ್ದೊಂದು ಸನ್ನಿವೇಶದಿಂದ ಕನ್ನಡದ ಮಕ್ಕಳನ್ನು ಪಾರುಮಾಡಬೇಕಿದೆ. ಸಮ್ಮೇಳನದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಕ್ಕಿರುವ ಉಜ್ವಲ ಭವಿಷ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಭಾಷೆಗೆ ಸಂಬಂಧಿಸಿದಂತೆ ಕವಲು ಹಾದಿ ತುಳಿಯುವ ರಾಜಕಾರಣದ ಸಂಕುಚಿತ ವ್ಯಾಕರಣವನ್ನುಭಗ್ನಗೊಳಿಸಬೇಕಿದೆ.

-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

Published

on

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 1860, ಭಾರತೀಯ ಸಾಕ್ಷ್ಯ ಕಾಯ್ದೆ 1872 ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ 1973 ಅನ್ನು ಬದಲಿಸುವ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ಅವರು ಹೇಳಿದ್ದಾರೆ. ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೊಸ ಕ್ರಿಮಿನಲ್ ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

“ಐಪಿಸಿ, ಸಿಆರ್‌ಪಿಸಿ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಬದಲಾಗುತ್ತಿವೆ. ಸೂಕ್ತ ಸಮಾಲೋಚನೆ ಪ್ರಕ್ರಿಯೆ ಅನುಸರಣೆ ಹಾಗೂ ಕಾನೂನು ಆಯೋಗದ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಕಾನೂನುಗಳನ್ನು ಬದಲಾಯಿಸಲಾಗಿದೆ” ಎಂದು ಮೇಘವಾಲ್ ತಿಳಿಸಿದರು.”

ಈ ಮೂರು ಕಾನೂನುಗಳನ್ನು ಜುಲೈ 1 ರಿಂದ ಭಾರತೀಯ ನ್ಯಾಯ್ ಸಂಹಿತಾ, ಭಾರತೀಯ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ ಎಂಬ ಹೆಸರಿನಲ್ಲಿ ಜಾರಿಗೆ ತರಲಾಗುವುದು. ಮೂರು ಹೊಸ ಕಾನೂನುಗಳ ತರಬೇತಿ ಸೌಲಭ್ಯಗಳನ್ನು ಎಲ್ಲಾ ರಾಜ್ಯಗಳಿಗೂ ಒದಗಿಸಲಾಗುತ್ತಿದೆ” ಎಂದು ಮೇಘವಾಲ್ ವಿವರಿಸಿದ್ದಾರೆ.”

ನಮ್ಮ ನ್ಯಾಯಾಂಗ ಅಕಾಡೆಮಿಗಳು, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಸಹ ಈ ಬಗ್ಗೆ ತರಬೇತಿ ನೀಡುತ್ತಿವೆ. ಎಲ್ಲವೂ ಜೊತೆಜೊತೆಯಾಗಿ ಸಾಗುತ್ತಿದೆ ಮತ್ತು ಜುಲೈ 1 ರಿಂದ, ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ನಿರ್ಣಾಯಕವಾದ ಈ ಎಲ್ಲಾ ಮೂರು ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರಲಾಗುವುದು” ಎಂದು ಅವರು ಸ್ಪಷ್ಟಪಡಿಸಿದರು.

ದೇಶದಲ್ಲಿ ಅಪರಾಧ ನ್ಯಾಯ ಸುಧಾರಣೆಯು ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಇದು ಸೂಚಿಸುತ್ತದೆ. ಮಹಿಳೆಯರು, ಮಕ್ಕಳು ಮತ್ತು ರಾಷ್ಟ್ರದ ವಿರುದ್ಧದ ಅಪರಾಧಗಳನ್ನು ಇದು ಮುಂಚೂಣಿಯಲ್ಲಿರಿಸುತ್ತದೆ. ಅಲ್ಲದೆ ಇದು ವಸಾಹತುಶಾಹಿ ಯುಗದ ಕಾನೂನುಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

Published

on

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಮೊನ್ನೆಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿದ ನಂತರ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 3 ರೂಪಾಯಿ ಹಾಗೂ ಡೀಸೆಲ್ 3.5 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಪ್ರತಿ ಕುಟುಂಬದ ಮಹಿಳೆಗೆ ತಿಂಗಳಿಗೆ 8 ಸಾವಿರದ 500 ರೂಪಾಯಿಗಳನ್ನು ವರ್ಗಾವಣೆ ಮಾಡುವ ಭರವಸೆಯನ್ನು ಈಡೇರಿಸುವ ಬದಲು, ಕಾಂಗ್ರೆಸ್ ಆಡಳಿತದ ಕರ್ನಾಟಕ ಸರ್ಕಾರವು, ರಾಜ್ಯದ ಜನರಿಗೆ ಹೊರೆಯಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ. ಇಂತಹ ನಿರ್ಧಾರ ಹಣದುಬ್ಬರದ ಬಗ್ಗೆ ಮಾತನಾಡುವ ಕಾಂಗ್ರೆಸ್‌ನ ಬೂಟಾಟಿಕೆ ಬಹಿರಂಗಪಡಿಸುತ್ತದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರತಿ ಲೀಟರ್‌ಗೆ ಸುಮಾರು 8 ರೂಪಾಯಿಗಳಿಂದ 12 ರೂಪಾಯಿಗಳಷ್ಟು ಹೆಚ್ಚುವರಿ ವ್ಯಾಟ್ ಅನ್ನು ವಿಧಿಸುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಈ ವಿಚಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಶಿ, ರಾಜ್ಯ ಸರ್ಕಾರ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಈಗ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದೆ ಎಂದು ಹುಬ್ಬಳ್ಳಿಯಲ್ಲಿ ಆರೋಪಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಬಸ್ ದರ, ಹಾಲಿನ ದರ, ಅಗತ್ಯ ವಸ್ತುಗಳ ದರ ಹೆಚ್ಚಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಆಡಳಿತದ ವ್ಯವಸ್ಥೆ ಕುಸಿದುಹೋಗಿದೆ ಎಂದು ದೂರಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ವ್ಯಾಟ್ ಹೆಚ್ಚಳ ಬಳಿಕ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲಿಯೇ ದರ ಕಡಿಮೆ ಇದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರಕ್ಕಿಂತಲ್ಲೂ ಹಾಗೂ ಗುಜರಾತ್ ಮತ್ತು ಮಧ್ಯಪ್ರದೇಶಕ್ಕಿಂತಲ್ಲೂ ನಮ್ಮ ರಾಜ್ಯದಲ್ಲಿ ದರ ಕಡಿಮೆ ಇದೆ ಎಂದು ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರ ತೆರಿಗೆ ಕಡಿಮೆ ಮಾಡಿದ್ದರೂ, ಕೇಂದ್ರ ಸರ್ಕಾರ ಪದೇ ಪದೆ ವ್ಯಾಟ್ ಹೆಚ್ಚಳ ಮಾಡಿತ್ತು ಎಂದು ಆರೋಪಿಸಿದ್ದಾರೆ. ರಾಜ್ಯದ ತೆರಿಗೆ ಹೆಚ್ಚಳದಿಂದ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಪರೀಕ್ಷೆಯಲ್ಲಿ ಕೃಪಾಂಕ ನೀಡಿಕೆ ನಿಲ್ಲಬೇಕು : ಸಿಎಂ ಸಿದ್ದರಾಮಯ್ಯ ಒತ್ತಾಯ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನಡೆಸ್ಕ್:ಈ ಬಾರಿ ನಡೆದ ನೀಟ್ ಪರೀಕ್ಷೆಯಲ್ಲಿ ಕೃಪಾಂಕಗಳನ್ನು ನೀಡುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಕೃಪಾಂಕ ನೀಡಿಕೆ ಪದ್ಧತಿಯನ್ನು ನಿಲ್ಲಿಸಿ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದರು. ರಾಜ್ಯದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶ ಶುಲ್ಕ ಕಡಿಮೆಗೊಳಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇದಿಕೆ ಸಜ್ಜಾಗಿದ್ದು, ಸದ್ಯದಲ್ಲೇ ಚುನಾವಣೆ ನಡೆಸಲಾಗುವುದೆಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 hour ago

ವಿಶ್ವ ಮೊಸಳೆಗಳ ದಿನ ; ಮೊಸಳೆ ಬಗ್ಗೆ ನಿಮಗಿಷ್ಟು ತಿಳಿದಿರಲಿ

ಸಂಜಯ್ ಹೊಯ್ಸಳ ಪ್ರತಿ ವರ್ಷದ ಜೂನ್ 17 ನ್ನು ವಿಶ್ವ ಮೊಸಳೆ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದಲ್ಲಿ ಪ್ರಮುಖವಾಗಿ 24 ಜಾತಿಯ ಮೊಸಳೆಗಳಿದ್ದು, ಭಾರತದಲ್ಲಿ ಸದ್ಯಕ್ಕೆ 3 ಪ್ರಬೇಧದ...

ದಿನದ ಸುದ್ದಿ4 hours ago

ಜುಲೈ 1 ರಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ಸುದ್ದಿದಿನಡೆಸ್ಕ್:ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸುತ್ತಿಲ್ಲ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್...

ದಿನದ ಸುದ್ದಿ4 hours ago

ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ; ವ್ಯಾಪಕ ಟೀಕೆ

ಸುದ್ದಿದಿನಡೆಸ್ಕ್: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಟೀಕಿಸಿದ್ದಾರೆ....

ದಿನದ ಸುದ್ದಿ20 hours ago

ವಿಷಹಾರ | ಹೋಟೆಲ್, ರೆಸ್ಟೋರೆಂಟ್ ತಪಾಸಣೆಗೆ ಕ್ರಮ

ಸುದ್ದಿದಿನಡೆಸ್ಕ್: ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಉತ್ತಮ ಗುಣಮಟ್ಟ, ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಹಾರ ಕೇಂದ್ರಗಳಲ್ಲಿ The Food Safety and...

ದಿನದ ಸುದ್ದಿ20 hours ago

ವೆಂಕಟೇಶ್ ಜಿ.ಎಂ. ಅವರಿಗೆ ಪಿಎಚ್‌.ಡಿ ಪದವಿ

ಸುದ್ದಿದಿನ,ಬೆಂಗಳೂರು:ಗುಜ್ಜನಹಳ್ಳಿ ಗ್ರಾಮದ ವೆಂಕಟೇಶ್ ಜಿ.ಎಂ. ಅವರು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎಸ್. ಪುಟ್ಟಸ್ವಾಮಯ್ಯ ರವರ ಮಾರ್ಗದರ್ಶನದಲ್ಲಿ ಮಂಡಿಸಿರುವ “ಆನ್ ಎಕನಾಮಿಕ್ ಅನಾಲಿಸಿಸ್ ಆಫ್ ಆಗ್ರೋ-ಬೇಸ್ಡ್ ಇಂಡಸ್ಟ್ರೀಸ್...

ದಿನದ ಸುದ್ದಿ20 hours ago

ರೇಣುಕಸ್ವಾಮಿ ಕೊಲೆಗೈದ ಆರೋಪಿಗಳಿಗೆ ಶಿಕ್ಷೆಯಾಗಲಿ : ಜಂಗಮ ಸಮಾಜ ಪ್ರತಿಭಟನೆ

ಸುದ್ದಿದಿನ,ಮಸ್ಕಿ:ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಸ್ಕಿ ಜಂಗಮ ಸಮಾಜ ವತಿಯಿಂದ ನಮ್ಮ ಸಮುದಾಯದ ಚಿತ್ರದುರ್ಗದ ರೇಣುಕ ಸ್ವಾಮಿಯನ್ನು ಕೊಲೆಗೈದ ಕೊಲೆಗಡಕರಿಗೆ ಉಗ್ರ ಶಿಕ್ಷೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಗಚ್ಚಿನ...

ದಿನದ ಸುದ್ದಿ1 day ago

ಜಗಳೂರು | ವ್ಯಕ್ತಿ ಮೇಲೆ ನಾಲ್ಕು ಕರಡಿದಾಳಿ

ಸುದ್ದಿದಿನ,ಜಗಳೂರು : ಜಮೀನಿಗೆ ಹೋಗಿದ್ದ ವ್ಯಕ್ತಿ ಮೇಲೆ ನಾಲ್ಕು ಕರಡಿಗಳ ದಾಳಿ‌ ಮಾಡಿ ಹಿಗ್ಗಾಮುಗ್ಗಾ ಕಡಿದು ಗಂಭೀರ ಗಾಯಗೊಳಿಸಿರುವ ಘಟನೆ ಜಗಳೂರು ತಾಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶನಿವಾರ...

ದಿನದ ಸುದ್ದಿ1 day ago

ಶ್ರೀ ಉಚ್ಚಂಗೆಮ್ಮದೇವಿ ಸದ್ಭಕ್ತರಿಗೊಂದು ವಿಸ್ಮಯಕಾರಿ ಸುದ್ದಿ : ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್

ಗಂಗಾಧರ ಬಿ ಎಲ್ ನಿಟ್ಟೂರ್ ಭಾರತ ದೇಶ ಹಲವು ಅಚ್ಚರಿ, ವಿಚಿತ್ರ, ವಿಸ್ಮಯಗಳ ತಾಣ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಹಿಡಿದು, ಸೃಷ್ಟಿಕರ್ತನ ಕೈಚಳಕದ ಕುಲುಮೆಯಲ್ಲಿ ಅರಳಿರುವ ಹಲವು...

ಅಂತರಂಗ1 day ago

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

ರುದ್ರಪ್ಪ ಹನಗವಾಡಿ  ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ...

ದಿನದ ಸುದ್ದಿ1 day ago

ಪಿಎಂ ಕಿಸಾನ್ ನಿಧಿ ಯೋಜನೆ | ರೈತರ ಖಾತೆಗಳಿಗೆ ಬರುವ ಮಂಗಳವಾರ ಹಣ ವರ್ಗಾವಣೆ

ಸುದ್ದಿದಿನಡೆಸ್ಕ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬರುವ ಮಂಗಳವಾರ 18 ರಂದು ’ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ 9 ಕೋಟಿ 3 ಲಕ್ಷ ರೈತರ ಖಾತೆಗೆ 20...

Trending