ರಾಜಕೀಯ
ಭಾಷೆ, ರಾಜಕಾರಣ ಮತ್ತು ವ್ಯಾಕರಣ
ಭಾಷೆಯೊಂದರ ಉಳಿವಿನ ಪ್ರಶ್ನೆ ಚಾಲ್ತಿಗೆ ಬಂದಾಗಲೆಲ್ಲ ಅಧಿಕಾರ ಕೇಂದ್ರವು ಪ್ರತಿಕ್ರಿಯಿಸುವ ಉತ್ಸಾಹವನ್ನೇನೋ ತೋರುತ್ತದೆ. ತಾನು ಈ ವಿಷಯದಲ್ಲಿ ಗಂಭೀರವಾಗಿರುವುದಾಗಿ ಸಂದೇಶ ರವಾನಿಸುತ್ತದೆ. ಭವಿಷ್ಯದಲ್ಲಿ ಭಾಷೆಯ ಬಳಕೆಗಳ ಬಗ್ಗೆ ಎಚ್ಚರ ಇರುವುದಾಗಿಯೂ ಸ್ಪಷ್ಟಪಡಿಸುತ್ತದೆ. ಎಲ್ಲ ಸಮುದಾಯಗಳ ಜನರೂ ಜಾಗತಿಕ ಮನ್ನಣೆ ಪಡೆದ ಪರಭಾಷೆಯ ಮೇಲೆ ಹಿಡಿತ ಸಾಧಿಸಿ ಸಾಮಾಜಿಕ ಪ್ರತಿಷ್ಠೆಯನ್ನು ಗಳಿಸಿಕೊಳ್ಳುವಂತಾಗಲಿ ಎಂಬ ಸದುದ್ದೇಶದೊಂದಿಗೆ ಹೆಜ್ಜೆಯಿರಿಸುತ್ತಿರುವುದಾಗಿ ಸಮಜಾಯಿಷಿ ನೀಡುತ್ತದೆ. ಆದರೆ, ನಮ್ಮದಲ್ಲದ ಭಾಷೆಯ ಮೇಲೆ ಹಿಡಿತ ಸಾಧಿಸಿ ಪ್ರತಿಷ್ಠೆ ಗಳಿಸಿಕೊಳ್ಳುವ ಉಮೇದು ಅತ್ಯಂತ ಸಂಕುಚಿತವಾದದ್ದು ಎಂಬುದು ಅದಕ್ಕೆ ಅರ್ಥವಾಗುವುದಿಲ್ಲ. ಇನ್ನೊಂದು ಭಾಷೆಯ ಮೇಲೆ ಹಿಡಿತ ಸಾಧಿಸುವುದಷ್ಟೇ ಮುಖ್ಯ ಎಂಬ ಸಾರ್ವತ್ರಿಕ ಭಾವನೆಯನ್ನೇ ಆಧರಿಸಿಕೊಂಡು ನಿರ್ಧಾರ ಕೈಗೊಳ್ಳುವುದರಲ್ಲಿಯೇ ಆಸಕ್ತಿ ತೋರುತ್ತದೆ.
ಪ್ರಾಯೋಗಿಕವಾಗಿ 1000 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸುವ ಸರ್ಕಾರಿ ಪ್ರಸ್ತಾವವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಆಯೋಜಿತವಾದ 84ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ತಾರ್ಕಿಕ ಚರ್ಚೆಯನ್ನೂ ಹುಟ್ಟುಹಾಕಿದೆ. ಈ ವೇದಿಕೆಯ ಮೂಲಕ ವ್ಯಕ್ತವಾದ ತಾರ್ಕಿಕ ಪ್ರಶ್ನೆಗಳು ಅಧಿಕಾರ ಕೇಂದ್ರದ ಪ್ರತಿನಿಧಿಗಳೊಳಗೆ ನಿಜವಾದ ಭಾಷಾ ಪ್ರಜ್ಞೆಯನ್ನು ಬಿತ್ತುವ ರೀತಿಯಲ್ಲಿಯೇ ಇವೆ. ಆದರೆ, ಇವು ಮುನ್ನೆಲೆಗೆ ತಂದ ಚರ್ಚೆಯು ಸಂವಾದವನ್ನು ಹುಟ್ಟುಹಾಕುವ ಬದಲು ವಿವಾದವನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ ಚರ್ಚೆಯ ವೇಳೆ ವ್ಯಕ್ತವಾದ ಅಭಿಪ್ರಾಯಗಳನ್ನು ವಿಶಾಲವಾಗಿ ಗ್ರಹಿಸದೇ ಇರುವುದು.
ರಾಜಕೀಯ ಚಾಣಾಕ್ಷತೆ
ಈ ಬಗೆಯ ವಿವಾದ ಇದೇ ಮೊದಲೇನಲ್ಲ. ಭಾಷೆ ಕುರಿತಾದ ಸರ್ಕಾರಿ ನಿರ್ಧಾರ ವ್ಯಕ್ತವಾದಾಗ ಸಹಜವಾಗಿಯೇ ಗೊಂದಲಗಳು ಏರ್ಪಡುತ್ತವೆ. ಅಂಥದ್ದೊಂದು ಗೊಂದಲದ ವಾತಾವರಣ ಸೃಷ್ಟಿಯಾಗುವಂತೆ ಅಧಿಕಾರ ರಾಜಕಾರಣ ಅತ್ಯಂತ ಚಾಣಾಕ್ಷಯುತವಾಗಿ ನೋಡಿಕೊಳ್ಳುತ್ತದೆ. ಭಾಷಾ ಸಂಬಂಧಿ ಚರ್ಚೆಯನ್ನು ಸಂವಾದಕ್ಕೆ ತಿರುಗಿಸಿ ಮಹತ್ವಪೂರ್ಣ ಭಾಷಾ ಆಂದೋಲನಕ್ಕೆ ಪ್ರೇರಣೆ ನೀಡುವ ಬದಲು ವಿವಾದದ ಸೀಮಿತ ಚೌಕಟ್ಟಿನೊಳಗೆ ಕಟ್ಟಿಹಾಕುವ ವೈಚಿತ್ರ್ಯವನ್ನು ಸೃಷ್ಟಿಸುತ್ತದೆ. ಇಂಥ ಸಂದರ್ಭದಲ್ಲೆಲ್ಲಾ ಭಾಷೆಯ ಉಳಿವಿನ ಕುರಿತು ಧ್ವನಿಯೆತ್ತುವ ನಾಟಕವಾಡುವ ಸಂಘಟನೆಗಳ ಪ್ರತಿನಿಧಿಗಳು ಮೌನಪ್ರೇಕ್ಷಕರಾಗಿಯೇ ಉಳಿದುಬಿಡುತ್ತಾರೆ. ನಿಜವಾದ ಕಾಳಜಿಯೊಂದಿಗೆ ಧ್ವನಿಯೆತ್ತುವ ಬೆರಳೆಣಿಕೆಯ ಹೋರಾಟಗಾರರು, ಚಿಂತಕರು ಮತ್ತು ರಾಜಕೀಯ ವಲಯದ ಪ್ರತಿನಿಧಿಗಳ ನಡುವೆ ಮಾತಿನ ಸಮರವೇ ನಿರ್ಮಾಣವಾಗಿಬಿಡುತ್ತದೆ. ಇಂಥ ವೇಳೆ ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಗಳು ಜನಸಮೂಹದಲ್ಲಿ ಸರಿಯಾಗಿ ಆಲೋಚಿಸುವ ಒತ್ತಡವನ್ನುಂಟುಮಾಡುತ್ತವೆ. ಈ ವಿಷಯದಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ನಿಜವಾದ ಕಾಳಜಿಯನ್ನು ವ್ಯಕ್ತಪಡಿಸಿದೆ.
ತೀಕ್ಷ್ಣ ಪ್ರತಿಕ್ರಿಯೆ
ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರ ಪ್ರಚುರಪಡಿಸಿ ಸಾರ್ವಜನಿಕ ಶಿಕ್ಷಣ ವಲಯವನ್ನು ಪ್ರತಿಷ್ಠಿತವಾಗಿಸುವ ಯೋಚನೆಗೆ ಪ್ರತಿಯಾಗಿ ಸಮ್ಮೇಳನವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಉದ್ಘಾಟನೆಯ ದಿನದಿಂದಲೇ ಸ್ಪಷ್ಟ ಸಂದೇಶ ರವಾನಿಸಿದ ಸಮ್ಮೇಳನವು ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಅನುಷ್ಠಾನಗೊಳಿಸಬಾರದು ಎಂಬ ಬಹುಮುಖ್ಯ ಆಗ್ರಹವನ್ನು ನಿರ್ಣಯದ ರೂಪದಲ್ಲಿ ಮುಂದಿಟ್ಟಿತು.
ಉದ್ಘಾಟನೆಯ ದಿನದಂದು ಸಾಹಿತಿ ಡಾ.ಚಂದ್ರಶೇಖರ ಪಾಟೀಲ್ ಅವರು ತಮ್ಮ ಎಂದಿನ ವ್ಯಂಗ್ಯದ ಧಾಟಿಯಲ್ಲಿ ಆಂಗ್ಲಮಾಧ್ಯಮ ಶಾಲೆಗಳ ಪರವಾದ ಪ್ರಸ್ತಾಪವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇಂಗ್ಲಿಷ್ ಪರವಾದ ನಿರ್ಧಾರಗಳನ್ನು ಅನುಷ್ಠಾನಗೊಳಿಸುವ ಉತ್ಸಾಹವು ಕನ್ನಡದ ಮೇಲೆ ಬಹುದೊಡ್ಡ ಪ್ರಹಾರದ ಮುನ್ಸೂಚನೆ ಎಂಬರ್ಥದ ವಿಶ್ಲೇಷಣೆಯನ್ನು ನೀಡಿದ್ದರು. ಆದರೆ, ಅವರ ಮಾತುಗಳಲ್ಲಿನ ತಾರ್ಕಿಕತೆಯು ಹಿನ್ನೆಲೆಗೆ ಸರಿದು ವ್ಯಕ್ತಿಗತ ದೃಷ್ಟಿಕೋನಗಳು ಆದ್ಯತೆ ಪಡೆದು ಚರ್ಚೆಗೊಳಪಟ್ಟವು.
ಭಾಷೆಯ ಬಗ್ಗೆ ಚರ್ಚಿಸುವಾಗಲೆಲ್ಲಾ ವ್ಯಕ್ತಿಗತ ಬದ್ಧತೆಯ ಪ್ರಶ್ನೆಗಳು ನುಸುಳಿಕೊಂಡು ಸಂವಾದದ ಸಾಧ್ಯತೆಯನ್ನು ಮೊಟಕುಗೊಳಿಸುತ್ತವೆ. ನಿಮ್ಮ ಮಕ್ಕಳು, ಮೊಮ್ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿ ಉಳಿದವರ ಮಕ್ಕಳು ಕನ್ನಡವನ್ನು ಕಲಿಯಬೇಕು ಎಂಬ ವಾದವನ್ನು ಮಂಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ಚಿಂತಕರು, ಬುದ್ಧಿಜೀವಿಗಳ ಜಾಯಮಾನವೇ ಹಾಗೆ ಎಂಬ ಉಡಾಫೆ ದೃಷ್ಟಿಕೋನದಲ್ಲಿ ಮಾತೃಭಾಷೆಯಲ್ಲಿನ ಪ್ರಾಥಮಿಕ ಶಿಕ್ಷಣದ ವ್ಯಾಪಕ ಪ್ರಯೋಜನಗಳ ಸಾಧ್ಯತೆಯನ್ನು ಅವಸರವಸರದಲ್ಲಿ ಅಲ್ಲಗಳೆಯಲಾಗುತ್ತದೆ.
ಗಟ್ಟಿತನದ ಅಡಿಪಾಯ
ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ವ್ಯಕ್ತಿತ್ವವೊಂದು ಗಟ್ಟಿತನದ ಬೌದ್ಧಿಕ ಅಡಿಪಾಯ ರೂಪಿಸಿಕೊಳ್ಳುವ ಕ್ರಮ ಎಂದೇ ಪರಿಭಾವಿಸಿಕೊಳ್ಳಬೇಕು. ಪ್ರಾಥಮಿಕ ಸರ್ಕಾರಿ ಶಾಲೆಗಳನ್ನು ಈ ನೆಲೆಯಲ್ಲಿಯೇ ಬಲಪಡಿಸಬೇಕು. ಇಂಗ್ಲಿಷ್, ಹಿಂದಿ ಸೇರಿದಂತೆ ಇತರೆ ಭಾಷೆಗಳನ್ನು ಗ್ರಹಿಸಿಕೊಳ್ಳುವ ಶೈಕ್ಷಣಿಕ ಮಾದರಿಗಳನ್ನು ರೂಪಿಸಬೇಕು. ಅದಕ್ಕಾಗಿ ಶಿಕ್ಷಕ ಸಮುದಾಯವನ್ನು ಸಿದ್ಧಗೊಳಿಸಬೇಕು. ನೇಮಕಾತಿಯ ನಂತರ ಆಯಾ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಆದ್ಯತೆ ಪಡೆಯುವ ಭಾಷಾ ಶಿಕ್ಷಣದ ಹೊಸ ಆಯಾಮಗಳನ್ನು ಪರಿಚಯಿಸಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಮೇಲೆ ಹಿಡಿತ ಸಾಧಿಸುವ ಸರಳ ಕ್ರಮಗಳ ಕಲಿಕೆಯ ಕಡೆಗೆ ಗಮನವೀಯುವ ಸಮಗ್ರ ನೀತಿಯನ್ನು ವಿನ್ಯಾಸಗೊಳಿಸಿ ಜಾರಿಗೆ ತರುವ ಬದ್ಧತೆಯನ್ನು ಸರ್ಕಾರದ ಶೈಕ್ಷಣಿಕ ಸಚಿವಾಲಯ ತೋರ್ಪಡಿಸಬೇಕು.
ಬದ್ಧತೆಯ ಕೊರತೆ
ಇಂಥ ಬದ್ಧತೆಯ ಕೊರತೆಯ ಕಾರಣಕ್ಕಾಗಿಯೇ ಪ್ರಾಥಮಿಕ ಹಂತದಿಂದಲೇ ಸರ್ಕಾರಿ ಶಾಲೆಯ ಮಕ್ಕಳು ಭಾಷೆಗೆ ಸಂಬಂಧಿಸಿದಂತೆ ಹಲವಾರು ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂಗ್ಲಿಷ್ ಕಲಿಯಲೇಬೇಕು, ಕಲಿಯದಿದ್ದರೆ, ಆ ವಿಷಯದಲ್ಲಿ ಅನುತ್ತೀರ್ಣರಾದರೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬ ಸಾಮಾಜಿಕ ಅಂಜಿಕೆಯು ಅವರೊಳಗೆ ಕೀಳರಿಮೆಯನ್ನು ಮೂಡಿಸುತ್ತದೆ. ಕಾನ್ವೆಂಟ್ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ಉದಾಹರಿಸಿ ಅವರೊಂದಿಗೆ ಹೋಲಿಸಿ ‘ಅವರ ಮುಂದೆ ನೀವೇನೂ ಅಲ್ಲ’ ಎಂಬ ತಿವಿತದೊಂದಿಗಿನ ಸಂಬಂಧಿಕರು ಮತ್ತು ಹಿರಿಯರ ಮಾತುಗಳು ಅವರೊಳಗಿನ ಸಕಾರಾತ್ಮಕ ದೃಷ್ಟಿಕೋನಗಳನ್ನೇ ಕೊಂದುಬಿಡುತ್ತವೆ.
ಇಂಗ್ಲಿಷ್ ಭಾಷೆಯ ವ್ಯಾಮೋಹದ ಗುಂಗಿನಲ್ಲಿ ಕನ್ನಡವನ್ನು ತುಚ್ಛವಾಗಿ ನೋಡುವ ಈ ಮನುಷ್ಯಮಿತಿಯು ಕೌಟುಂಬಿಕ ಆದ್ಯತೆಯನ್ನು ಪಡೆಯಬಾರದು. ಅಷ್ಟೇ ಅಲ್ಲ, ಆ ಆದ್ಯತೆಯು ಸರ್ಕಾರಿ ವಲಯದ ಪ್ರಾಶಸ್ತ್ಯವನ್ನೂ ಪಡೆಯಬಾರದು. ಹಾಗಾದರೆ, ಒಂದು ಪೀಳಿಗೆಯ ಭಾಷಿಕ ಸಾಮಥ್ರ್ಯ ಮತ್ತು ವೈಚಾರಿಕ ವಿವೇಚನೆಯ ಬೆಳವಣಿಗೆಯ ತೀವ್ರತೆಗೆ ಕುಂದುಂಟಾಗುತ್ತದೆ.
ಕನ್ನಡ ಶೈಕ್ಷಣಿಕ ಸಂಸ್ಕಾರದ ಶ್ರೇಷ್ಠತೆ
ಪ್ರಾಥಮಿಕ ಶಾಲಾಹಂತದ ಮಕ್ಕಳಿಗೆ ಕನ್ನಡದಿಂದಲೇ ಶಿಕ್ಷಣದ ಸಂಸ್ಕಾರ ಪ್ರಾಪ್ತವಾಗಬೇಕು ಎಂಬ ಪ್ರತಿಪಾದನೆಯು ಕೇವಲ ಭಾವುಕ ಲೇಪವನ್ನಷ್ಟೇ ಹೊಂದಿಲ್ಲ. ಅದು ಮಕ್ಕಳ ಕಲಿಕೆಯ ಸಾಮಥ್ರ್ಯಕ್ಕೆ ಬೇಕಾದ ಆಶಾವಾದವನ್ನು ನೆಲೆಗೊಳಿಸುವ ವೈಜ್ಞಾನಿಕ ಮಾರ್ಗೋಪಾಯದ ಆಧಾರವನ್ನೂ ಹೊಂದಿರುವುದನ್ನು ಗಮನಿಸಲೇಬೇಕು.
ಮಗುವೊಂದು ಮತ್ತೊಂದು ಭಾಷೆಯೊಂದಿಗೆ ಸಂಪರ್ಕ ಸಾಧಿಸುವುದಕ್ಕೆ ಮುನ್ನ ತಾನಿರುವ ಕೌಟುಂಬಿಕ ಪರಿಸರದ ಭಾಷಿಕ ಸಂವಹನದ ಕ್ರಮಗಳ ಅರಿವು ಹೊಂದಿರಬೇಕಾಗುತ್ತದೆ. ನೇರವಾಗಿ ಅದು ಬೇರೊಂದು ಭಾಷೆಯ ಸಂಪರ್ಕ ಸಾಧಿಸಲು ಸಾಧ್ಯವಾಗುವುದಿಲ್ಲ. ಉದಾಹರಣೆ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳನ್ನು ಕನ್ನಡದ ಪರಿಸರದಲ್ಲಿ ಬೆಳೆದ ಮಕ್ಕಳು ಕನ್ನಡದ ಮೂಲಕವೇ ಕಂಡುಕೊಳ್ಳಬೇಕಾಗುತ್ತದೆ. ನೇರವಾಗಿ ಇಂಗ್ಲಿಷ್ ಪದಗಳನ್ನು ಹೇಳಿ ಅದೇ ಭಾಷೆಯ ವಾಕ್ಯಗಳನ್ನು ಉಲ್ಲೇಖಿಸಿ ಆ ಭಾಷೆಯನ್ನು ಕಲಿಸಲಾಗದು. ಮಾತೃಭಾಷೆಯ ನೆರವಿನೊಂದಿಗೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ವ್ಯಾಕರಣ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ಗೊತ್ತುಮಾಡಿಕೊಂಡರೆ ಮಕ್ಕಳೊಳಗೆ ಭಾಷಿಕ ಪ್ರಬುದ್ಧತೆ ಭಿನ್ನವಾಗಿ ನೆಲೆಯೂರುತ್ತದೆ. ಮಾತೃಭಾಷೆಯಲ್ಲಿ ಮಾತನಾಡುವ, ಮಾತನಾಡಿದ್ದನ್ನು ಸ್ಪಷ್ಟವಾಗಿ ಗ್ರಹಿಸುವ, ಗ್ರಹಿಸಿಕೊಂಡಿದ್ದನ್ನು ವಿವೇಚಿಸಿ ಅಭಿವ್ಯಕ್ತಿಸುವ ಕ್ರಮಗಳೊಂದಿಗೆ ಗುರುತಿಸಿಕೊಳ್ಳಲು ಅನುವಾಗುತ್ತದೆ. ಇದು ಪರಭಾಷೆಗಳ ಕಲಿಕೆಯಲ್ಲಿ ಗಮನಾರ್ಹ ಪಾತ್ರವಹಿಸುತ್ತದೆ.
ಭಾಷಾ ಸಂಕೀರ್ಣತೆಯ ಸವಾಲು
ಈ ಸೂಕ್ಷ್ಮವನ್ನು ಅರಿಯದೇ ಇದ್ದರೆ ಹೊಸ ಪೀಳಿಗೆಯ ಮಕ್ಕಳು ಭಾಷಾ ಸಂಕೀರ್ಣತೆಯನ್ನು ಎದುರಿಸುತ್ತಾರೆ. ಮುಂದಾಗುವ ಅಪಾಯವನ್ನು ಈಗಲೇ ಗ್ರಹಿಸಿರುವ ಕಾರಣಕ್ಕಾಗಿಯೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವು ಉಳಿದೆಲ್ಲ ಪ್ರಚಲಿತ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ ಭಾಷಿಕ ಸಮಸ್ಯೆಯನ್ನಷ್ಟೇ ಕಾಡಿಸಿಕೊಂಡು ಮಹತ್ವದ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದೆ. ಸಾವಿರ ಆಂಗ್ಲಮಾಧ್ಯಮ ಶಾಲೆಗಳನ್ನು ಆರಂಭಿಸುವ ಯೋಚನೆಯನ್ನು ಅನುಷ್ಠಾನಗೊಳಿಸಬಾರದು ಎಂಬ ಸಮ್ಮೇಳನದ ಆಗ್ರಹ, ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವಂತೆ ಮುಂದಿಟ್ಟಿರುವ ಅದರ ಸಲಹಾತ್ಮಕ ನಿರ್ಣಯ ಮಹತ್ವಪೂರ್ಣ. ಆ ಮೂಲಕ ಸಮ್ಮೇಳನವು ಭಾಷೆಯ ಉಳಿವಿನ ಕುರಿತಾದ ತನ್ನ ಕಾಳಜಿ ಮತ್ತು ಬದ್ಧತೆಯನ್ನು ಸಾಬೀತುಪಡಿಸಿದೆ.
ಇಡೀ ಜಗತ್ತು ವಾಣಿಜ್ಯಿಕ ಲಾಭದ ಗುಂಗಿನೊಂದಿಗಿದ್ದಾಗ ಭಾಷೆ, ಸಂಸ್ಕøತಿ ಉಳಿವಿನ ಪ್ರಶ್ನೆಗಳು ಹಿನ್ನೆಲೆಗೆ ಸರಿಯುತ್ತವೆ. ಹಾಗೆ ಹಿನ್ನೆಲೆಗೆ ಸರಿಸುವ ಉದ್ದೇಶಪೂರ್ವಕ ಹುನ್ನಾರಗಳು ನಡೆದುಬಿಡುತ್ತವೆ. ವಾಣಿಜ್ಯಿಕ ಹಿತಾಸಕ್ತಿ ಮತ್ತು ಸಂಕುಚಿತ ರಾಜಕಾರಣದ ವಿಕಾರಗಳ ವಿಜೃಂಭಣೆಯ ಕಾರಣಕ್ಕಾಗಿಯೇ ಕನ್ನಡವು ಆಡಳಿತಾತ್ಮಕ ಆದ್ಯತೆಯ ಆವರಣದಿಂದ ಕ್ರಮೇಣ ಮರೆಯಾಗುವ ಮುನ್ಸೂಚನೆಗಳು ದೊರಕುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಸಮ್ಮೇಳನದ ಭಾಷಿಕ ನಿರ್ಣಯಗಳನ್ನು ಸಕಾಲಿಕ ಎಂದೇ ಪರಿಗಣಿಸಬೇಕಾಗುತ್ತದೆ.
ಮಾತೃಭಾಷೆಯೊಂದಿಗಿನ ಕಲಿಕಾನಂಟು
ಕಲಿಕೆಯು ಅತ್ಯಂತ ಸಹಜ ಪ್ರಕ್ರಿಯೆ. ಮಗುವಿನ ಬೆಳವಣಿಗೆಯ ವೇಳೆ ಕ್ರಮಾನಗುತವಾಗಿ ಆಂತರ್ಯದಲ್ಲಿ ಅಂತಸ್ಥಗೊಳ್ಳುವ ಪರಿಕಲ್ಪನೆ. ಇದನ್ನು ಒಳಗೊಳ್ಳುವ ಹಂಬಲದೊಂದಿಗೆ ಹೆಜ್ಜೆಯಿರಿಸುವ ಮಗು ಹಂತಹಂತವಾಗಿ ಪ್ರಬುದ್ಧತೆಯ ಹಾದಿಯನ್ನು ಕ್ರಮಿಸಲು ಸಾಧ್ಯವಾಗುತ್ತದೆ. ಈ ಹಾದಿಯಲ್ಲಿ ಮಾತೃಭಾಷೆಯದ್ದು ಅತ್ಯಂತ ಪ್ರಭಾವೀ ಪಾತ್ರ. ಆದರೆ, ಇದನ್ನು ನಿರ್ಲಕ್ಷಿಸಿ ಬೇರೊಂದು ಭಾಷೆಯನ್ನು ಮಕ್ಕಳ ಮನೋಲೋಕದಲ್ಲಿ ಒತ್ತಾಯಪೂರ್ವಕವಾಗಿ ಸೇರ್ಪಡೆಗೊಳಿಸುವ ಪ್ರಯತ್ನವು ಆಘಾತಕಾರಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಸಮಗ್ರ ತಿಳುವಳಿಕೆಯನ್ನು ದಾಟಿಸುವುದಕ್ಕೆ ದಾರಿಮಾಡಿಕೊಡುವ ಕಲಿಕೆಯು ಭಾಷೆಯ ಪ್ರಸ್ತುತಿಯ ನೆರವಿನೊಂದಿಗೇ ಏರ್ಪಡಬೇಕಾಗುತ್ತದೆ.
ಮಗು ತನ್ನದಲ್ಲದ ಬೇರೊಂದು ಭಾಷೆಗೆ ಆರಂಭದಲ್ಲಿಯೇ ಒಗ್ಗಿಕೊಳ್ಳುವುದಿಲ್ಲ. ಅಪರಿಚಿತರನ್ನು ಕಂಡಾಕ್ಷಣ ಆತಂಕಗೊಳ್ಳುವ ಮನಸ್ಥಿತಿಯೇ ಬೇರೊಂದು ಭಾಷೆಯ ಅಭಿವ್ಯಕ್ತಿ ಎದುರುಗೊಂಡಾಗ ಪುನರಾವರ್ತಿತವಾಗುತ್ತದೆ. ಆಗ ಭಯ, ಆತಂಕ, ಅರ್ಥಕ್ಕೆಟುಕ್ಕುತ್ತಿಲ್ಲ ಎಂಬ ಕೊರಗುಗಳೆಲ್ಲವೂ ಒಟ್ಟಿಗೇ ದಾಳಿಗೈದು ಉದ್ದೇಶಿತ ಕಲಿಕೆ ಸಾಧ್ಯವಾಗುವುದೇ ಇಲ್ಲ. ಈ ಸೂಕ್ಷ್ಮತೆ ಅರಿತುಕೊಳ್ಳಲು ಭಾರೀ ಸಂಶೋಧನೆಯನ್ನೇನೋ ಕೈಗೊಳ್ಳಬೇಕಿಲ್ಲ. ಇಂಗ್ಲಿಷ್ನಿಂದಲೇ ಮಗುವಿನ ಕಲಿಕೆ ಆರಂಭವಾಗಬೇಕು ಎಂದು ವಾದಿಸುವ ಕನ್ನಡಿಗರು ತಮ್ಮ ತಮ್ಮ ಪ್ರಾಥಮಿಕ ಶಾಲಾ ದಿನಗಳನ್ನು ನೆನಪಿಸಿಕೊಂಡರೆ ಈ ಸೂಕ್ಷ್ಮ ಗಮನಕ್ಕೆ ಬರುತ್ತದೆ.
ಅಪಾಯದ ಮುನ್ಸೂಚನೆ
ಇಂಥ ಯಾವ ಸೂಕ್ಷ್ಮತೆಗಳನ್ನು ಪರಿಗಣಿಸದೇ ಪ್ರತಿಷ್ಠೆಯನ್ನಷ್ಟೇ ಕಾಡಿಸಿಕೊಂಡು ಮಕ್ಕಳ ಉದ್ಧಾರಕ್ಕೆ ಇಂಗ್ಲಿಷ್ ಮೂಲಕವೇ ಕಲಿಕೆಯ ಯಾನ ಶುರುವಾಗಬೇಕು ಎಂದು ಪ್ರತಿಪಾದಿಸುವುದು ತಾರ್ಕಿಕವೆನ್ನಿಸಿಕೊಳ್ಳುವುದಿಲ್ಲ. ಸಾಹಿತ್ಯ ಸಮ್ಮೇಳನಗಳಂಥ ವೇದಿಕೆಯ ಮೂಲಕ ಹೊರಹೊಮ್ಮುವ ಅಮೂಲ್ಯ ಚಿಂತನೆಗಳನ್ನು ಪರಿಗಣಿಸುವ ಆಡಳಿತಾತ್ಮಕ ಬದ್ಧತೆಯ ಕೊರತೆ ಎದ್ದುಕಾಣುತ್ತಿರುವಾಗ ಇಂಥ ವಿತಂಡವಾದಿ ದೃಷ್ಟಿಕೋನಗಳು ಕನ್ನಡದ ಮಕ್ಕಳ ಕಲಿಕಾ ಸಾಮಥ್ರ್ಯವನ್ನು ಮೊಟಕುಗೊಳಿಸುತ್ತವೆ. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ನಾಡಿನ ಕುರಿತಾದ ಹೆಮ್ಮೆಯ ಭಾವ ಮೂಡಿಸುವಂಥ ಗೀತೆಗಳನ್ನು ಶಿಕ್ಷಕರು ರಾಜ್ಯೋತ್ಸವದ ಸಂದರ್ಭದಲ್ಲಿ ಪರಿಚಯಿಸುತ್ತಿದ್ದರು.
ಕನ್ನಡದ ಕಲಿಕೆಯ ಜೊತೆಜೊತೆಗೇ ಇಂಥ ಪರಿಚಯಾತ್ಮಕ ಪ್ರಯತ್ನಗಳು ನಾಡಿನ ಕುರಿತಾದ ಹೆಮ್ಮೆಯನ್ನೂ ಹೆಚ್ಚಿಸುತ್ತಿದ್ದವು. ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕವಿತೆಯು ನಾಡಗೀತೆಯ ಆಡಳಿತಾತ್ಮಕ ಮನ್ನಣೆ ಪಡೆದು ಕಡ್ಡಾಯ ನಿಯಮಾವಳಿಯ ವ್ಯಾಪ್ತಿಗೆ ಬರುವುದಕ್ಕಿಂತ ಮುಂಚೆಯೇ ಕರ್ನಾಟಕದ ಶಾಲೆಗಳಲ್ಲಿ ಕನ್ನಡದ ವೈವಿಧ್ಯಮಯ ಜಗತ್ತು ಅದರ ಭಾಷಿಕ ಸೊಗಡಿನೊಂದಿಗೇ ಪರಿಚಿತವಾಗುತ್ತಿತ್ತು. ಈಗ ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಇಂಗ್ಲಿಷ್ ಮಾಧ್ಯಮದ ಆವರಣದ ಕೂಪಕ್ಕೆ ಮಕ್ಕಳನ್ನು ತಳ್ಳುವ ಪ್ರಯೋಗಾರ್ಥ ಪ್ರಯತ್ನದ ಹೆಜ್ಜೆಗಳು ಅಂಥ ವಾತಾವರಣವನ್ನು ಇಲ್ಲವಾಗಿಸುವ ಆತಂಕವನ್ನು ಮೂಡಿಸಿವೆ. ಮಕ್ಕಳ ಭಾಷಿಕ ಸಾಮಥ್ರ್ಯಕ್ಕೆ ಕೊಡಲಿಪೆಟ್ಟು ನೀಡುವ ಸುಳಿವು ನೀಡಿವೆ.
ಕಂಬಾರರ ಮೌಲಿಕ ಚಿಂತನೆ
ಸಮ್ಮೇಳನದ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಅವರ ನುಡಿಗಳಲ್ಲಿಯೇ ಆಡಳಿತವು ಕನ್ನಡ ಭಾಷೆಯ ಕುರಿತು ಯಾವ ನಿಲುವುಗಳನ್ನು ತಳೆಯಬೇಕು ಎಂಬ ಸ್ಪಷ್ಟ ಮಾರ್ಗದರ್ಶನವಿದೆ.“ಮಾತೃಭಾಷೆಯು ಬದುಕನ್ನು ಅಥಪೂರ್ಣಗೊಳಿಸುತ್ತದೆ. ಸಾಂಸ್ಕøತಿಕ ನಂಬಿಕೆ ಮತ್ತು ಮೌಲ್ಯಗಳು ಮಾತೃಭಾಷೆಯೊಂದಿಗೆ ತಳುಕುಹಾಕಿಕೊಂಡಿರುತ್ತವೆ. ಕನ್ನಡವನ್ನು ಸರಿಯಾಗಿ ಕಲಿಯುವುದರಿಂದ ಇಂಗ್ಲಿಷ್ ಸೇರಿದಂತೆ ಉಳಿದ ಭಾಷೆಗಳನ್ನು ಕಲಿಯುವುದಕ್ಕೂ ಸಹಾಯಕವಾಗುತ್ತದೆ” ಎಂಬ ಅವರ ನಿಲುವುಗಳು ಕೇವಲ ತಾತ್ವಿಕ ಚೌಕಟ್ಟನ್ನಷ್ಟೇ ಹೊಂದಿಲ್ಲ. ಸಮಸ್ತ ಕನ್ನಡಿಗರ ಅನುಭವಕ್ಕೆ ಬಂದ ಮೌಲಿಕ ಅಂಶಗಳನ್ನಾಗಿಯೂ ನಾವು ಅವುಗಳನ್ನು ಗ್ರಹಿಸಬೇಕು.
ಈ ರೀತಿಯಾಗಿ ಗ್ರಹಿಸುವ ಸಂಯಮ ಆಡಳಿತಾತ್ಮಕ ವಲಯದಿಂದ ವ್ಯಕ್ತವಾದರೆ ಕನ್ನಡ ಭಾಷೆಯು ಭವಿಷ್ಯದಲ್ಲಿ ಆತಂಕ ಎದುರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಾಣಿಜ್ಯಿಕ ಹಿತಾಸಕ್ತಿಯ ಪ್ರಲೋಭನೆಗೆ ಒಳಗಾಗಿ ಭಾಷೆಗೆ ಸಂಬಂಧಿಸಿದಂತೆ ಅತಾರ್ಕಿಕವಾದ, ಪ್ರಾಯೋಗಿಕವಲ್ಲದ ತೀರ್ಮಾನಗಳು ಪ್ರಕಟವಾಗುವುದಿಲ್ಲ.
ಇಂಗ್ಲಿಷ್ ಗುಂಗಿನ ಕೃತಕತೆ
ಇಂಗ್ಲಿಷ್ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಭಾಷೆಯಾಗಿ ನಮ್ಮೊಳಗೆ ಬೆರೆತುಹೋಗಬೇಕಿಲ್ಲ. ಆ ಭಾಷೆಯನ್ನು ಬಲವಂತವಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳೊಳಗೆ ಬೆರೆಸುವ ಪ್ರಯತ್ನವು ಅವರ ಬೆಳವಣಿಗೆಯ ಸಹಜತೆಗೆ ಕಡಿವಾಣ ಬಿಗಿಯುತ್ತದೆ. ಆ ಸಹಜತೆಯ ಜಾಗವನ್ನು ಕೃತಕತೆ ಆವರಿಸಿಕೊಂಡುಬಿಡುತ್ತದೆ.
ಇಂಗ್ಲಿಷ್ ಗುಂಗಿನ ಕೃತಕ ಚೌಕಟ್ಟಿನೊಳಗೆ ಬಂಧಿಯಾಗಿ ಕನ್ನಡದ ಬಗ್ಗೆ ಕೀಳರಿಮೆ ರೂಪುಗೊಳ್ಳುತ್ತದೆ. ಇಂಗ್ಲಿಷ್ ಶ್ರೇಷ್ಠ ಎಂಬ ತಪ್ಪುಕಲ್ಪನೆಯನ್ನೇ ಮಕ್ಕಳು ಪರಮ ಆದರ್ಶವನ್ನಾಗಿ ಸ್ವೀಕರಿಸುತ್ತಾರೆ. ಹಾಗಾದಾಗ ಮಾತೃಭಾಷೆ, ಅದರೊಂದಿಗಿನ ಕರಳುಬಳ್ಳಿಯ ಸಂಬಂಧ, ಸಂಸ್ಕøತಿಯ ವೈವಿಧ್ಯಮಯ ಸ್ವರೂಪ ಅವರಿಂದ ಕ್ರಮೇಣ ದೂರವಾಗುತ್ತಾ ಹೋಗುತ್ತದೆ. ಅವರನ್ನು ಹೀಗೆ ಉದ್ದೇಶಪೂರ್ವಕವಾಗಿ ಕನ್ನಡದ್ದೇ ಪರಂಪರೆಯ ಬೇರುಗಳಿಂದ ಬೇರ್ಪಡಿಸುವಂಥ ಹೆಜ್ಜೆಗಳು ಭಾಷಿಕ ಸಂದಿಗ್ಧತೆಯನ್ನೇ ಸೃಷ್ಟಿಸುತ್ತವೆ.
ಕರುಳುಬಳ್ಳಿಯ ಸಂಬಂಧ
ಮಕ್ಕಳು ಕನ್ನಡದೊಂದಿಗಿನ ಕರುಳುಬಳ್ಳಿಯ ಸಂಬಂಧ ಕಡಿದುಕೊಂಡರೆ ಏನಾಗುತ್ತದೆ? ಬೆಳೆದು ದೊಡ್ಡವರಾದಾಗ ಕನ್ನಡದ ಭಾಷಿಕ ಸೊಗಡನ್ನೇ ವ್ಯಂಗ್ಯಕ್ಕೀಡುಮಾಡುತ್ತಾರೆ. ಕನ್ನಡದ ಉಳಿವಿನ ಕುರಿತು ಜನಪ್ರಿಯ ಶೈಲಿಯಲ್ಲಿ ಸಿನಿಮಾ ಹೀರೋಗಳು ಹೇಳುವ ಡೈಲಾಗ್ಗಳನ್ನಷ್ಟೇ ಕೇಳಿ ಚಪ್ಪಾಳೆ ಹೊಡೆದು ಆ ಕ್ಷಣಕ್ಕೇ ಮರೆತುಬಿಡುವ ಮನಃಸ್ಥಿತಿಗೆ ಪಕ್ಕಾಗಿಬಿಡುತ್ತಾರೆ. ಇಂಗ್ಲಿಷ್ ಮಾತನಾಡಿದರಷ್ಟೇ ಮರ್ಯಾದೆ ಎಂದುಕೊಂಡು ಪ್ರತಿಷ್ಠೆ ಮೆರೆಯುವ ಕೃತಕತೆಯನ್ನೇ ಗುಣಸ್ವಭಾವವನ್ನಾಗಿಸಿಕೊಳ್ಳುತ್ತಾರೆ.
ಕನ್ನಡದಲ್ಲೇ ಲಭ್ಯವಾಗುವ ಅದೆಷ್ಟೋ ಜ್ಞಾನ ಮಾದರಿಗಳ ಸಂಪರ್ಕದಿಂದ ದೂರವೇ ಉಳಿದುಬಿಡುತ್ತಾರೆ. ಎಲ್ಲದಕ್ಕೂ ಇಂಗ್ಲಿಷ್ನ್ನೇ ನೆಚ್ಚಿಕೊಂಡು ಅದರ ಮೂಲಕ ಹರಿದುಬರುವ ಮಾಹಿತಿಗಳನ್ನು ಮೇಲ್ನೋಟಕ್ಕಷ್ಟೇ ಗ್ರಹಿಸುವ ಅವಸರದ ಮಾದರಿಯನ್ನೇ ಅನುಸರಿಸುತ್ತಾರೆ. ವಿವಿಧ ಭಾಷೆಗಳಲ್ಲಿ ಲಭ್ಯವಾಗುವ ಮಾಹಿತಿಗಳನ್ನುಜ್ಞಾನಸಂಪನ್ಮೂಲವಾಗಿಸಿಕೊಳ್ಳುವ ಸಂಯಮ ರೂಢಿಸಿದ ಕನ್ನಡ ಓದಿನ ಸೊಗಡು ಸವಿಯುವ ಅಪೂರ್ವ ಅವಕಾಶದಿಂದ ಅವರು ವಂಚಿತರಾಗುತ್ತಾರೆ.ಮುಂದೆ ಎದುರಾಗಲಿರುವ ಅಂಥದ್ದೊಂದು ಸನ್ನಿವೇಶದಿಂದ ಕನ್ನಡದ ಮಕ್ಕಳನ್ನು ಪಾರುಮಾಡಬೇಕಿದೆ. ಸಮ್ಮೇಳನದ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಕನ್ನಡಕ್ಕಿರುವ ಉಜ್ವಲ ಭವಿಷ್ಯವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಭಾಷೆಗೆ ಸಂಬಂಧಿಸಿದಂತೆ ಕವಲು ಹಾದಿ ತುಳಿಯುವ ರಾಜಕಾರಣದ ಸಂಕುಚಿತ ವ್ಯಾಕರಣವನ್ನುಭಗ್ನಗೊಳಿಸಬೇಕಿದೆ.
-ಡಾ.ಎನ್.ಕೆ.ಪದ್ಮನಾಭ

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ


