ಭಾವ ಭೈರಾಗಿ
ಪತ್ನಿಗೆ ಮೆಚ್ಚುಗೆಯ ಮಾತು ಹೇಳೋ ದಿನ
(ಸೆಪ್ಟಂಬರ್ 15 ವಿಶ್ವ ಹೆಂಡತಿಯರ ಹೊಗಳುವ ದಿನ ; ಅದರ ಪ್ರಯುಕ್ತ ಈ ಲೇಖನ)
ನನ್ನ ಹೃದಯದ ಪಟ್ಟದರಸಿಗೆ,
ನನಗಿನ್ನೂ ನೆನಪಿದೆ ನಿನ್ನನ್ನು ನೋಡಲು ಮೊದಲ ಬಾರಿ ನಿಮ್ಮ ಮನೆಗೆ ಬಂದಾಗ ನಿನ್ನ ಮುಖದಲ್ಲಿ ನಗುವೇ ಇರಲಿಲ್ಲ. ಏನೋ ಕಾಟಾಚಾರಕ್ಕೆ ನಾಲ್ಕೈದು ಟೀ ತುಂಬಿದ ಟ್ರೇಯನ್ನು ಹಿಡಿದು ನೀ ಬಂದೆ. ಸಾಮಾನ್ಯವಾಗಿ ಹೆಣ್ಣು ತಲೆ ತಗ್ಗಿಸಿ ಬರುವುದು ರೂಢಿ. ಆದರೆ ನೀನು ಸದೃಢವಾಗಿಯೇ ಬಂದು ನೀಡಿದೆ. ಸಂಪ್ರದಾಯದಂತೆ ನಾನು ನಿನ್ನ ಒಮ್ಮೆ ನೋಡಿದೆ, ನೀನೂ ನನ್ನ ನೋಡಿದೆ. ನನಗೇನೋ ನೀನು ಇಷ್ಟವಾಗಿ ಹೋಗಿದ್ದೆ. ಆದರೆ ನಿನ್ನ ನೋಟದ ಮಜಲಿನಲ್ಲೇ ತಿಳಿದು ಹೋಗಿತ್ತು, ನನ್ನ ಬಗ್ಗೆ ನಿರೀಕ್ಷೆಯ ಭಾವ ಇರಲಿಲ್ಲವೆಂದು. ಆದರೆ ಆದದ್ದೇ ಬೇರೆ. ನಿನ್ನ ಕಡೆಯಿಂದ ಒಪ್ಪಿಗೆ ಸಿಕ್ಕಿಬಿಟ್ಟಿತ್ತು. ನಮ್ಮ ಮದುವೆ ಆಗುವಾಗ ಕೋಟಿ ದೇವರಲ್ಲಿ ಪ್ರಾರ್ಥಿಸಿದ್ದೆ ನಮ್ಮಿಬ್ಬರ ಜೀವನ ಸುಖಮಯವಾಗಿರಲೆಂದು. ದೇವರು ನಮ್ಮಾಣತಿಯಂತೆ ಆಶೀರ್ವದಿಸಿದ್ದಾರೆ.
ಈ ಏಳು ವರ್ಷಗಳ ದಾಂಪತ್ಯದಲ್ಲಿ ನನ್ನ ಇಷ್ಟಕಷ್ಟಗಳಿಗಿಂತ ನಿನ್ನ ಅಭಿಲಾಷೆಯಂತೆಯೇ ನಾನು ಬುದುಕಿದ್ದು ಹೆಚ್ಚು. ಬುದ್ದಿವಂತರು ಹೇಳುತ್ತಾರೆ, ಹೆತ್ತವಳು ಮೊದಲ ತಾಯಿಯಾದರೆ, ಮದುವೆಯಾದವಳು ಎರಡನೆ ತಾಯಿಯಂತೆ. ಹೌದು ಮಗುವಾಗಿದ್ದಾಗಿನಿಂದ ನನ್ನ ಇಷ್ಟಕಷ್ಟ, ಸಿಹಿಕಹಿ, ನೋವು ನಲಿವು ಎಲ್ಲವನ್ನು ಹೆತ್ತವಳೇ ನೋಡಿಕೊಂಡಿದ್ದಳು. ಮದುವೆಯಾದ ಮೇಲೆ ಆ ಸ್ಥಾನವನ್ನು ತುಂಬಿ ಅಷ್ಟೇ ಭಾವನಾತ್ಮಕ ರಕ್ಷಣೆ ಮತ್ತು ಆರೈಕೆಯನ್ನು ಮಡದಿಯಾದ ನಿನ್ನಿಂದ ಕಾಣುತ್ತಿರುವೆ. ಯಾವ ಬಟ್ಟೆ ತೊಡಬೇಕು, ಯಾವ ಊಟ ಮಾಡಬೇಕು ಎಲ್ಲವನ್ನು ನೀನೇ ನಿರ್ಧರಿಸುವೆ. ಹಾಗೆಂದ ಮಾತ್ರಕ್ಕೆ ನನಗೆ ಸ್ವಂತ ಬುದ್ಧಿ ಇಲ್ಲವೆಂದಲ್ಲ. ಬದಲಾಗಿ ನಿನಗೆ ನನ್ನ ಮೇಲಿರುವ ಅಗಾಧವಾದ ಪ್ರೀತಿಯನ್ನ ತೋರಿಸುತ್ತದೆ. ಹೆಂಡತಿಯ ಆಸೆಯಂತೆ ನಡೆಯುವ ಭಾಗ್ಯ ಎಷ್ಟು ಜನರಿಗೆ ಸಿಗುತ್ತದೆ.
ಹೆಂಡತಿಯಾದ ಮಾತ್ರಕ್ಕೆ ಸಂಬಂಧಗಳ ಬಿಡಿಸುವವಳು ಎಂಬ ಅಪವಾದದ ಹಣೆಪಟ್ಟಿ ಕೇಳಿರುವೆ. ಆದರೆ ನಿನ್ನ ವಿಷಯದಲ್ಲಿ ಅದು ನಿರರ್ಥಕ. ನಾನು, ನನ್ನದು, ನನ್ನಿಂದ ಎನ್ನುವಂತಿದ್ದವನು ನೀನು ಜೊತೆಯಾದಾಗಿಂದ ಅದು ನಾವು, ನಮ್ಮದು ಮತ್ತು ನಮ್ಮಿಂದ ಆಗಿದೆ. ಹೆಂಡತಿಯಾದವಳು ಗಂಡನ ಯಶಸ್ಸಿನ ಬಗ್ಗೆ ಸದಾ ಯೋಚಿಸುತ್ತಾಳೆ. ಅಂತೆಯೇ ನೀನೂ ಕೂಡ ಇದಕ್ಕೆ ಹೊರತಾಗಿಲ್ಲ. ನನ್ನ ಪ್ರತಿ ಹೆಜ್ಜೆಗೆ ಪ್ರತಿಹೆಜ್ಜೆಯಾಗಿ ಮುನ್ನಡೆಸುತ್ತಿರುವೆ. ನೀನು ನನ್ನ ಜೊತೆಗಿದ್ದರೆ ಸಾಕು ಸಾವಿರ ತಡೆಗಳನ್ಬು ಹಿಮ್ಮಟ್ಟಿ ಬರುವೆನೆಂಬ ಧೈರ್ಯ ನನಗೆ. ನಿನ್ನ ಕೈಯ್ಯಾರೆ ಮಾಡುವ ಟೀ ಯನ್ನು ಎಷ್ಟು ಬಾರಿ ಸವಿದರೂ ಸಾಕೆನಿಸುವುದಿಲ್ಲ. ಆ ಸ್ವಾದ, ಆ ಪರಿಮಳ, ಅದರಲ್ಲಿನ ಸಿಹಿ ಪ್ರತಿ ಗುಟುಕಿನಲ್ಲೂ ನಿನ್ನೆಸರ ಹೇಳುವಂತೆ ಮಾಡುತ್ತದೆ. ಅದನ್ನರಿತೇ ಅಲ್ಲವೇ ನಿನಗಾಗಿಯೇ ಒಂದು ಹನಿಗವನವನ್ನು ಬರೆದದ್ದು.
ಮಡದಿ,
ನಿನ್ನ ಮನಸ್ಸಿನಲ್ಲಿ ಸಿಹಿ ಜಾಸ್ತಿ
ನೀ ಕೊಡುವ ಟೀಯಲ್ಲೂ ಸಿಹಿ ಜಾಸ್ತಿ
ನಿನ್ಮ ಮನಸ್ಸು ಸಿಹಿಯಾಗಿದ್ದರೆ
ನನ್ನ ಬಾಳು ಅರಳುತ್ತದೆ
ನೀ ಕೊಡುವ ಟೀ ಸಿಹಿಯಾಗಿದ್ದರೆ
ನನ್ನ ಆರೋಗ್ಯ ಮುದುಡುತ್ತದೆ
ನನ್ನಿಚ್ಛೆಯನ್ನರಿತು ನಾ ಹೇಳುವ ಮೊದಲೇ ನನ್ನಿಷ್ಟದ ಪುಳಿಯೊಗರೆ ಮಾಡಿದಾಗಲಂತೂ ನಿನ್ನ ಹೊಗಳಲು ಪದಗಳೇ ಸಾಕಾಗುವುದಿಲ್ಲ. ಊಟದ ವಿಷಯದಲ್ಲಿ ಒಮ್ಮೆಯೂ ಅತೃಪ್ತವೆನಿಸಿದ ಭಾವ ಒಮ್ಮೆಯೂ ನನ್ನ ಮನಸ್ಸಲ್ಲಿ ಮೂಡಲೇ ಇಲ್ಲ. ನಳಪಾಕ, ಭೀಮಪಾಕ ಎನ್ನುವುದು ಎಷ್ಟು ಸತ್ಯವೋ, ಯಶೋಧ ಪಾಕವೆಂದು ಮತ್ತೊಂದು ನಾಮಧೇಯ ಸೇರಿಸಿದರೆ ತಪ್ಪಿಲ್ಲವೆನಿಸುತ್ತದೆ.ನಿನ್ನ ಕೈರುಚಿಯ ಸವಿದು ಸವಿದು ಹೋಟೆಲ್ಲಿನ ರುಚಿಯೇ ಮರೆತು ಹೋಗಿದೆ.
‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ, ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ’. ಈ ಹಾಡು ನಮಗೆ ಎಷ್ಟು ಹತ್ತಿರವಾಗಿದೆಯಲ್ಲವೇ…?. ಹೆಂಡತಿಯನ್ನು ಹೆಚ್ಚಾಗಿ ಪ್ರೀತಿಸುವವರೇ ನಮ್ಮಂಥವರಿಗಾಗಿಯೇ ಬರೆದಂತಿದೆ ಈ ಸಾಲುಗಳು. ಕವಲೊಡೆದ ದಾರಿಯಂತಿದ್ದ ನನ್ನ ಬದುಕನ್ನು ಎಳೆದು ಒಂದು ಮುಖ್ಯ ದಾರಿಗೆ ತಂದು ನಿಲ್ಲಿಸಿ ನನ್ನ ಬಾಳಿಗೆ ಹೊಸ ಭಾಷ್ಯವನ್ನು ಬರೆದವಳು ನೀನು. ಒಡಹುಟ್ಟಿದವರನ್ನು ಬಿಟ್ಟು ಅಪರಿಚಿತನಾದ ನನ್ನನ್ನು ಅದ್ಹೇಗೆ ನಂಬಿ ಬಂದುಬಿಟ್ಟೆ. ನಿನ್ನ ಛಲ ಮತ್ತು ನಂಬಿಕೆಯೇ ನಾನು ನಿನಗೆ ಸೋಲುವಂತೆ ಮಾಡಿರುವುದು. ಇಂದು ಸಮಾಜದಲ್ಲಿ ನನ್ನನ್ನು ಒಬ್ಬ ಸುಸಂಸ್ಕೃತ ವ್ಯಕ್ತಿಯನ್ನಾಗಿ ಮಾಡಿದವಳು ನೀನು.ನನ್ನ ಗೌರವವನ್ನು ಎತ್ತರಕ್ಕೆ ಏರಿಸಿ ಬೇರೆಯವರ ಸಮದಲ್ಲಿ ಎದೆಯುಬ್ಬಿಸಿ ನಿಲ್ಲುವಂತೆ ಮಾಡುದವಳು ನೀನು.
ಕಾರ್ಯೇಶು ದಾಸಿ
ಕರುಣೇಶು ಮಂತ್ರಿ
ಭೂಜ್ಯೇಶು ಮಾತಾ
ಸಮಯಾ ಧರಿತ್ರಿ
ಶಹನೇಶು ರಂಭಾ..
ಈ ಮೇಲಿನ ಸಾಲುಗಳೇ ಹೇಳುತ್ತವೆ ಹೆಂಡತಿಯಾದವಳು ಮದುವೆಯಾದ ಮನೆಗೆ ಮಗಳಾಗಿ, ಸೊಸೆಯಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಮೊಮ್ಮಗಳಾಗಿ ಎಲ್ಲಕ್ಕೂ ಮಿಗಿಲು ತಮ್ಮ ಕರುಳ ಬಳ್ಳಿಗಳಿಗೆ ತಾಯಿಯಾಗಿ ಸೇವೆಗೈತುತ್ತಾಳೆ. ಅದಕ್ಕಾಗಿಯಲ್ಲವೇ ನನಗೆ ನಿನ್ನ ಮೇಲಿರುವ ಪ್ರೇಮದ ಉತ್ಕಟೆಯನ್ನು ಹೀಗೆ ಕವನ ರೂಪದಲ್ಲಿ ಬರೆದದ್ದು…….
ಮಡದಿ
ನಿನ್ನೊಂದಿಗಿನ ಜೀವನ
ಬೇಸರ ತಂದಿಲ್ಲಾ ಎಂದೂ
ಮೆಚ್ಚುಗೆಯಾಗಿದೆ ನನಗೆ
ನೀ ನನ್ನ ಮೆಚ್ಚಿದೆ ಎಂದು
ಬೇಡುವೆನು ಸೇರಿಸಿದ ದೇವರ
ದೂರ ಮಾಡದಿರು ಎಂದು
ನಿನ್ನ ಋಣದ ಭಾರ ಹೆಚ್ಚಾಗಿದೆ
ಈ ಜನ್ಮಕ್ಕೆ ಇದು ಸಾಕೆನಿಸಿದೆ
ಯಾತನೆ ಎಷ್ಟಿದ್ದರೂ ಸರಿಯೇ
ಕರಗುವೆನು ನಿನ್ನ ನಗುವಿಗೊಮ್ಮೆ
ದುಃಖ ಅನುಭವಿಸಲು ಭಯವಿಲ್ಲ
ನೀ ಜೊತೆಯಿರಲು ಮರೆವುದೆಲ್ಲ
ನೀ ಕೇಳುವ ಮುಗ್ಧತೆಯ ಪ್ರಶ್ನೆಗೆ
ಉತ್ತರ ನೀಡಲು ಉತ್ಸುಕ ನನಗೆ
ಹೀಗೆ ಇರಬೇಕು ಎಂದವನಲ್ಲ
ಹೀಗೂ ಇರಬಹುದು ಎಂದೆಯಲ್ಲ
ನಿನ್ನ ಪಡೆದದ್ದು ಒಂದು ಸಾಹಸ
ನೀ ನನ್ನ ಬದಲಿಸಿದ್ದು ಇತಿಹಾಸ
ನಮ್ಮಿಬ್ಬರಲ್ಲಿ ವೈಮನಸ್ಸು ಒಮ್ಮೆಯೂ ಬಂದಿಲ್ಲವೆಂದಲ್ಲ. ಸಂಸಾರವೆಂದ ಮೇಲೆ ಸರಸ-ವಿರಸ, ಕೋಪ-ನಗು, ಹುಸಿನಗು-ಹುಸಿಮೌನ ಎಲ್ಲಾ ನವರಸಗಳು ಇರಲೇಬೇಕು. ನಮ್ಮಲ್ಲೂ ಇರದೆ ಇರಲಾರದು. ಆದರೆ ನಾವೆಂದೂ ಅತಿರೇಕಕ್ಕೆ ಹೋದವರಲ್ಲ. ಸೋಲುವುದಿದ್ದರೆ ಸೋತು ನಿನ್ನ ಮನಸ್ಸನ್ಬು ಸಂತೊಇಷಗೊಳಿಸುವಯದೇ ನನ್ನ ಕಾಯಕವಾಗಿದೆ. ನಾನು ಹೆಚ್ಚು ನೀನು ಕಡಿಮೆ ಎಂದು ಎಂದೂ ಬೀಗಿದವರಲ್ಲ. ಗಂಡು ಹೆಣ್ಣು ಸಮಾನವೆಂದೇ ಬದುಕುತ್ತಿರುವವರು. ನೀರು ಮತ್ತು ಹಾಲಿನ ಮಿಶ್ರಣದಲ್ಲಿ ಹಂಸ ಹೇಗೆ ಹಾಲನ್ನೇ ಬೇರ್ಪಡಿಸಿ ಕುಡಿಯುತ್ತದೆಯೋ ಹಾಗೆ ನಮ್ಮಲ್ಲಿ ಎಷ್ಟೇ ಮನಸ್ತಾಪಗಳಿದ್ದರೂ ಹಂಸದ ನ್ಯಾಯದಂತೆ ಒಳ್ಳೆಯದನ್ನೇ ಆಯ್ದುಕೊಂಡು ಸಂತೋಷದಿಂದಿರುತ್ತೇವೆ. ನೆನಪಿರಬಹುದು ಸಂಪೂರ್ಣ ಅರ್ಥ ಮಾಡಿಕೊಂಡ ಮೇಲೆ ನಿನ್ನ ಬಗ್ಗೆ ಒಂದು ಕವನವನ್ನು ಬರೆದಿದ್ದೆ. ಅದರಲ್ಲಿ ನಿನ್ನ ಕೋಪ, ತಾಪ, ಕರುಣೆ,ನುಡಿ ನಡೆ ಎಲ್ಲದರ ಬಗ್ಗೆಯೂ ಇತ್ತು. ಈ ಕೆಳಗಿನಂತೆ..
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಬಾಳ ಮುದ್ದು ಸಂಗಾತಿ
ಇನ್ನೂ ಅರ್ಥವಾಗದವಳು
ಮಾತಲ್ಲೆ ಚಾಟಿ ಬೀಸುವವಳು
ತಾಯಿಯ ವಾತ್ಸಲ್ಯದವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಜೀವನದ ಗೆಳತಿ
ಮೋಡವಿದ್ದರೂ ಮಳೆಯಾಗದವಳು
ನೇರ ನಡೆಯವಳು
ಕಷ್ಟಕ್ಕೆ ಕರಗುವವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಮನದ ಒಡತಿ
ನಿಷ್ಠೂರ ನುಡಿಯವಳು
ಪ್ರೇಮದ ಸಾಗರದವಳು
ಮೋಹದ ಸೆಲೆಯವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ಎಲ್ಲರಂತಲ್ಲ ನನ್ನ ಹೆಂಡತಿ
ನನ್ನ ಪಯಣದ ಜೊತೆಗಾತಿ
ಮೀನಿನ ಚುರುಕಿನವಳು
ನನ್ನ ನೋವಿಗೆ ನಲುಗುವವಳು
ನಲಿವಿಗೆ ಸ್ಪಂದಿಸುವವಳು
ಅದಕ್ಕೆ ಅವಳೆಂದರೆ ಬಲು ಪ್ರೀತಿ ನನಗೆ
ನಮ್ಮಿಬ್ಬರಲ್ಲಿ ಎಲ್ಲವೂ ಇತ್ತು. ಆದರೆ, ಮನುಷ್ಯ ಪರಿಪೂರ್ಣನಾಗಲು ಮುಖ್ಯವಾದ ಅಂಶವೇ ನಮ್ಮ ಬಾಳಿನಲ್ಲಿರಲಿಲ್ಲ. ಇಬ್ಬರು ಮೂವರಾಗಿದ್ದೆವು. ಆ ದೇವರಿಗೆ ಸಹಿಸಲಾಗಲಿಲ್ಲ ಎನಿಸುತ್ತದೆ. ಆ ನಮ್ಮ ಎಳೆಕಂದಮ್ಮನನ್ನು ಬೇಗನೆ ಕರೆದುಕೊಂಡು ಬಿಟ್ಟಿದ್ದ. ಸತತ ಆರು ವರ್ಷಗಳ ಫಲದಿಂದ ಮುದ್ದಾದ ಒಂದು ದೇವತೆಯನ್ನು ನನ್ನ ಮಡಿಲಲ್ಲಿರಿಸಿ ನನ್ನನ್ನು ಅಪ್ಪ ಎಂಬ ಉನ್ನತ ಸ್ಥಾನದಲ್ಲಿ ಕೂರಿಸಿರುವೆ. ಈ ವಿಷಯದಲ್ಲಿ ನಾನು ನಿನಗೆ ಧನ್ಯವಾದಗಳನ್ನು ಹೇಳಲೇಬೇಕು. ಈ ಸಮಯದಲ್ಲಿ ಒಂದು ಪ್ರತಿಜ್ಞೆ ಮಾಡುವೆ. ನನ್ನ ಕೊನೆಯುಸಿರು ಇರುವ ತನಕ ನಿನ್ನನ್ನು ನಮ್ಮ ಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತೇನೆಂದು ಹೇಳುತ್ತಾ…ಈ ನನ್ನ ಪ್ರೀತಿ ತುಂಬಿದ ಪದಗುಚ್ಚಗಳನ್ನು ಮುಗಿಸುತ್ತಿದ್ದೇನೆ.
ಇತಿ ನಿನ್ನ ಯಶೋಧರಸ
ಮಹದೇವ್ ಬಿಳುಗಲಿ
9611339024

ಅಂಕಣ
ಕವಿತೆ | ಅಲರ್ಟ್..!

- ಸುನೀತ ಕುಶಾಲನಗರ
ನದಿಯ ನೇವರಿಸಿದ ಗಾಳಿ
ಮುದಗೊಳಿಸಿ ಸರಿಯಿತು.
ಜಡಿ ಮಳೆ ಧೋ ಎಂದು
ಸಕಾಲಿಕವಾಗಿ ಸುರಿದು
ಹೊಸ ಹುಟ್ಟು.
ಆದರೇನು?
ಹಿಂಗಾರು, ಮುಂಗಾರು
ಆಗೊಮ್ಮೆ ಈಗೊಮ್ಮೆ
ಪದೇ ಪದೇ ಅದೇ ರಾಗ .
ಸುರಿದು ತುಂತುರು
ಕಾಣಿಸಿ ನಿಂತಿತೆನ್ನುವಾಗ
ಮತ್ತೆ ನಿಲ್ಲದ ಹಠ.
ಮಳೆಗೆ ಈಗ ಮುಟ್ಟು
ನಿಲ್ಲುವ ಸಮಯವೋ?
ಗುಡುಗು,ಮಿಂಚಿನಿಂದ
ಮುಟ್ಟಿನಲ್ಲಿ ಏರುಪೇರೋ ?
ಒಟ್ಟಿನಲ್ಲಿ
ನದಿಯ ಸೋಕಿದ ಗಾಳಿ
ಸಮುದ್ರದೊಳಗೆ ವಿಲೀನ.
ಅಕಾಲಿಕ ಮಳೆ…
ಇಳೆಗೆ ಸೊಂಟ ಬೇನೆ
ನದಿಯ ತಾಕಿದ ಬೆಳದಿಂಗಳು
ಕಿವಿಯಲ್ಲಿ ಉಸುರಿತು
ಹರಿಯುತ್ತಿರುವ ನದಿಯು
ಬೀಸುವ ಗಾಳಿಯು
ತಲೆಯೆತ್ತಿ ನಿಂತ ಬೆಟ್ಟವೂ
ಸ್ಥಾನ ಬದಲಿಸಲು
ಹೊತ್ತು ಬೇಕೆ?
ನಿಲ್ಲದ ಮಳೆಯ ಮುಟ್ಟಿಗೆ
ಸಲ್ಲುವ ಘೋಷಣೆ
ಹೈ ಅಲರ್ಟ್!
ಬದುಕಿನ ಧ್ಯಾನ
ಯೆಲ್ಲೋ, ಆರೆಂಜ್, ರೆಡ್
ಬಣ್ಣಗಳ ಅಲರ್ಟ್ ನಲ್ಲೇ
ಕಳೆದು ಹೋಗುತ್ತಿದೆ.
ಕಾಮನ ಬಿಲ್ಲ ತೋರಿಸಿ
ಸರಿದು ಬಿಡು ಮಳೆಯೇ
ಇಳೆಯ ಉಸಿರು
ಹಸಿರಾಗಲಿ. (ಕವಯಿತ್ರಿ: ಸುನೀತ ಕುಶಾಲನಗರ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಮ್ಮ ಪೂರ್ವಿಕ ಶಿವನೂ ; ಅವರ ಡುಬಾಕು ಸನಾತನವೂ..

- ಹರ್ಷಕುಮಾರ್ ಕುಗ್ವೆ
ಲಿಂಗವು ದೇವರಲ್ಲ ಶಿವನು ದೇವರಲ್ಲ
ಶಕ್ತಿಯೂ ದೇವರಲ್ಲ. ಮನುಷ್ಯನ ಕಲ್ಪನೆಯ ಆಳವನ್ನು ಮೀರಿದ ಯಾವ ದೇವರೂ ಇಲ್ಲ. ಅಸಲಿಗೆ ಇಡೀ ಜಗತ್ತನ್ನು ನಡೆಸುವ ದೇವರೆಂಬುದೇ ಇಲ್ಲ.
ಶಿವನು ನಮ್ಮ ಪೂರ್ವಿಕ, ಗೌರಿ ಅತವಾ ಶಕ್ತಿ ನಮ್ಮ ಪೂರ್ವಿಕಳು. ಗಂಗೆ ನಮ್ಮ ಬದುಕು. ಶಿವನ ಕೊರಳಿನ ನಾಗ ನಮ್ಮ ಕುಲ. ಲಿಂಗ ಫಲವಂತಿಕೆಯ ಸಂಕೇತವೂ ಹೌದು, ಶಿವ ಶಕ್ತಿಯರ ಸಮಾಗಮದ ಸಂಕೇತವೂ ಹೌದು. ನಮ್ಮ ಜನರಿಗೆ ಸಂಕೇತಗಳು ಶಕ್ತಿಯಾಗಿದ್ದವು, ಪ್ರೇರಣೆಯಾಗಿದ್ದವು. ಡೊಳ್ಳು ಹೊಡೆದು ಕೇಕೆ ಹಾಕಿದಾಗ ಮಳೆ ಬಂದರೆ, ನಮ್ಮ ಡೊಳ್ಳಿನ ಸದ್ದಿನ ಶಕ್ತಿಯಿಂದಲೇ, ನಮ್ಮ ಕೇಕೆಯಿಂದಲೇ ಮಳೆ ಬಂತು ಎಂದು ನಂಬಿದರು. ಇದನ್ನು primitive magic ಪರಿಕಲ್ಪನೆ ಎನ್ನಲಾಗಿದೆ. ನಮ್ಮ ಬಳ್ಳಾರಿಯ ಸಂಗನಕಲ್ಲಿನಲ್ಲಿ 3000 ವರ್ಷಗಳ ಹಿಂದೆ ಕಲ್ಲು ಬಂಡೆಗಳ ಮೇಲೆ ಕೆತ್ತಿದ ಹೋರಿ ಮತ್ತು ಉದ್ದ ಕೊಂಬಿನ ಕೆತ್ತನೆಗಳು ಸಹ ಇಂತಹ ಒಂದು ಆದಿಮ ಮಾಂತ್ರಿಕ ಶಕ್ತಿಯ ಆಚರಣೆಯಾಗಿದೆ.
ನಂಬಿಕೆಗಳನ್ನು ಸಂಸ್ಕೃತಿಯಾಗಿ, ಪರಂಪರೆಯಾಗಿ ಗ್ರಹಿಸಬೇಕೇ ಹೊರತು ದೇವರಾಗಿ ಅಲ್ಲ. ದೇವ ಎಂಬ ಕಲ್ಪನೆಯೇ ದ್ರಾವಿಡರಲ್ಲಿ ಇರಲಿಲ್ಲ. 50 ಸಾವಿರ ವರ್ಷಗಳಿಂದ ಬಂದ ಲಿಂಗ- ಯೋನಿ ಪೂಜೆ, ಗೌರಿ ಪೂಜೆ, 9,000 ವರ್ಷಗಳಿಂದ ಬಂದ ಬೂಮ್ತಾಯಿ ಪೂಜೆ, ಅರಳಿ ಮರದ ಪೂಜೆ, ಐದು ಸಾವಿರ ವರ್ಷಗಳಿಂದ ಬಂದ ಶಿವನ ಪೂಜೆ, ಗಣಪತಿ ಪೂಜೆ, ನಾಗನ ಪೂಜೆ, 4000 ವರ್ಷಗಳಿಂದ ಬಂದ ಗತಿಸಿದ ಹಿರೀಕರ ಪೂಜೆ, ಇದರ ಮುಂದುವರಿಕೆಯಾಗಿಯೇ 2600 ವರ್ಷಗಳ ಹಿಂದೆ ಬುದ್ದ ಗುರುವು ತೀರಿದ ಬಳಿಕ ಅವನ ಅಸ್ತಿಯನ್ನು ಇಟ್ಟ ಸ್ತೂಪಗಳನ್ನು ಪೂಜಿಸಿದೆವು, ದೂಪ ಹಾಕಿದೆವು... ಇದುವೇ ಈ ನೆಲದ ಪೂಜನ ಸಂಸ್ಕತಿಯಾಗಿತ್ತು.
‘ದೇವ’ ಮತ್ತು ಅಸುರ ಇಬ್ಬರೂ ಬಂದಿದ್ದು ಮಧ್ಯ ಏಷ್ಯಾದಿಂದ ಹೊರಟಿದ್ದ ಆರ್ಯರಿಂದಲೇ. ಅವರಿಗೆ ಪೂಜೆ ಗೊತ್ತಿರಲಿಲ್ಲ. ಯಜ್ಞ ಗೊತ್ತಿತ್ತು, ಹೋಮ ಗೊತ್ತಿತ್ತು. ‘ದೇವ’ ಅತವಾ “ದ-ಏವ” ಕೂಡಾ ಮೂಲದಲ್ಲಿ ಆರ್ಯರ ಪೂರ್ವಿಕ ಕುಲ ನಾಯಕರೇ ಆಗಿದ್ದಾರು... ಹೀಗಾಗಿಯೇ ಆರ್ಯ ವೈದಿಕರ ದೇವ ಎಂದರೆ ಅವರ ದಾಯಾದಿಗಳಾಗಿದ್ದ ಪಾರ್ಸಿಯನ್ (ಜೊರಾಸ್ಟ್ರಿಯನ್) ಆರ್ಯ ಅವೆಸ್ತನ್ನರಿಗೆ ಕೆಡುಕಿನ ಸಂಕೇತವಾಗಿತ್ತು. ಹಾಗೇ ಆರ್ಯ ವೈದಿಕರು ಕೆಡುಕು ಎಂದ ಅಸುರ (ಅಹುರ) ಆರ್ಯ ಅವೆಸ್ತನ್ನರ ಪಾಲಿಗೆ “ನಾಯಕ”ನಾಗಿದ್ದ. ಅವರನ್ನು ಅಹುರ ಮಜ್ದಾ ಎಂದು ಕರೆದು ಆರಾದಿಸಿದರು.
ಭಾರತಕ್ಕೆ ಪ್ರವೇಶಿಸಿದ ಬಳಿಕ ಆರ್ಯ ವೈದಿಕರಿಗೆ ಈ ನೆಲದ ಮೊದಲ ನಿವಾಸಿಗಳ ಮೇಲೆ ಯಜಮಾನಿಕೆ ಸ್ತಾಪಿಸಬೇಕಿತ್ತು. ಅದಕ್ಕಾಗಿ ನಮ್ಮಿಂದ ಪೂಜೆಗೊಳ್ಳುತ್ತಿದ್ದ ಪೂರ್ವಿಕರನ್ನು ತಮ್ಮ “ದೇವರು” ಮಾಡಿದರು. ಆ ದೇವರ ಪೂಜೆಗೆ ಅವರೇ ನಿಂತರು. ತಮ್ಮ ಜುಟ್ಟು ಬಿಟ್ಟುಕೊಂಡು ನಮ್ಮ ಜುಟ್ಟು ಹಿಡಿದರು. ನಾವು ಪೂರ್ವಿಕರನ್ನು ಬಿಟ್ಟು ಕೊಟ್ಟು, ಅವರ ಕೈಯಲ್ಲಿ ದೇವರುಗಳ ಪೂಜೆ ನಡೆಯುವಾಗ ನಮ್ಮ ಪೂರ್ವಿಕರಿಗೆ ಗೊತ್ತೇ ಇರದಿದ್ದ ವೇದ ಮಂತ್ರಗಳನ್ನ ಕೇಳಿ ಪುನೀತರಾದೆವು. ಈ ಮಂತ್ರ ಭಾಷೆಯೇ ದೇವರಿಗೆ ಅರ್ಥವಾಗುವುದು ಎಂದು ಪುಂಗಿದ್ದಕ್ಕೆ ತಲೆಯಾಡಿಸಿ ಕೈಮುಗಿದು ಗರ್ಭಗುಡಿಯ ಹೊರಗೆ ಸಾಲಿನಲ್ಲಿ ನಿಂತೆವು. ಮುಂದಿನ 2000 ವರ್ಷಗಳ ಕಾಲ ಗುಲಾಮರಾದೆವು. ಪುರಾಣಗಳನ್ನು ಕೇಳಿದೆವು, ನಂಬಿದೆವು ಮತಿಗೆಟ್ಟೆವು, ಗತಿಗೆಟ್ಟೆವು.
ಇನ್ನೂ ಉಳಿದಿರುವುದೇನು?
ನಾವು ಶಿವನ ವಕ್ಕಲು, ಗೌರಿ- ಗಂಗೆಯರ ಒಕ್ಕಲು. ಅವರು ಇಂದ್ರ ಅಗ್ನಿಯರ ವಕ್ಕಲಾಗಿದ್ದವರು ತಮ್ಮ ದೇವರಿಗೆ ಕಿಮ್ಮತ್ತಿಲ್ಲ ಎಂದರಿತು ಅವರನ್ನೇ ಬಿಟ್ಟರು. ಈಗ ಹೇಳುತ್ತಾರೆ ನಾವೇ ಸನಾತನರು ಎಂದು! ಅವರ ಡುಬಾಕು ಸನಾತನದಲ್ಲಿ ನಮ್ಮತನ ಕಳೆದುಕೊಂಡ “ಶೂದ್ರ ಮುಂಡೇಮಕ್ಕಳಾಗಿ”, ಅವರಿಗಾಗಿ ಬಾಳು ಬದುಕು ಹಾಳುಮಾಡಿಕೊಂಡು, ಅವರ ಹೋಮ ಹವನ ಮಾಡಿಸಿ, ನಮ್ಮ ಉಳಿಕೆ ಕಾಸು ಕಳೆದುಕೊಂಡು, ಗೌರವ ಗನತೆ ಕಳೆದುಕೊಳ್ಳುವುದೇ ಇವತ್ತಿನ ಸನಾತನ!
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಕ್ಯೂ-ಸ್ಪೈಡರ್ಸ್ ವತಿಯಿಂದ ಉಚಿತ ಉದ್ಯೋಗದರಿತ ಕೌಶಲ್ಯ ತರಬೇತಿ ಆಯ್ಕೆ ಪ್ರಕ್ರಿಯೆ
-
ದಿನದ ಸುದ್ದಿ7 days ago
ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಆರಂಭಿಸಿ : ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯ
-
ದಿನದ ಸುದ್ದಿ6 days ago
ಅಮಾನವೀಯ ಕೃತ್ಯ | ಹೆಣ್ಣು ಮಗು ಮಾರಾಟ ಮಾಡಿದ ಪೋಷಕರು
-
ಅಂಕಣ6 days ago
ಸಿದ್ಧಾಂತ ಮತ್ತು ಪತ್ರಿಕೋದ್ಯಮ
-
ದಿನದ ಸುದ್ದಿ6 days ago
ದಾವಣಗೆರೆ | ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭ, 81 ಕೇಂದ್ರಗಳಲ್ಲಿ 22579 ವಿದ್ಯಾರ್ಥಿಗಳು
-
ದಿನದ ಸುದ್ದಿ6 days ago
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್
-
ಅಂಕಣ3 days ago
ಕವಿತೆ | ಅಲರ್ಟ್..!
-
ದಿನದ ಸುದ್ದಿ1 day ago
ಜಯಲಕ್ಷ್ಮಿ ಕಾರಂತ್ ಅವರಿಗೆ ‘ಯಕ್ಷ ಧ್ರುವ’ ರಾಜ್ಯ ಪ್ರಶಸ್ತಿ ಪ್ರದಾನ