ಭಾವ ಭೈರಾಗಿ
ಕವಿತೆ : ಪ್ರೇಮ

- 13ನೇ ಶತಮಾನದ ಸೂಫಿ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ಜಗತ್ತಿನ ಅಸಂಖ್ಯ ಕಾವ್ಯಪ್ರೇಮಿಗಳ ನೆಚ್ಚಿನ ಕವಿ. 800 ವರ್ಷಗಳ ದೀರ್ಘ ಕಾಲವನ್ನೂ, ಧರ್ಮ-ಭಾಷೆ-ಸಂಸ್ಕøತಿ-ನಂಬಿಕೆಗಳ ಗಡಿಯನ್ನೂ ದಾಟಿ ಜಗತ್ತಿನ ನೂರಾರು ಭಾಷೆಗೆ ಅನುವಾದಗೊಂಡಿರುವ, ಇನ್ನೂ ಅನುವಾದಗೊಳ್ಳುತ್ತಲೇ ಇರುವ ಕವಿ. ಡಾ. ಎಚ್. ಎಸ್. ಅನುಪಮಾ ಕನ್ನಡಕ್ಕೆ ಅನುವಾದಿಸಿರುವ ಲಡಾಯಿ ಪ್ರಕಾಶನ ಪ್ರಕಟಿಸಿರುವ ‘ಉರಿವ ಕುಡಿಯ ನಟ್ಟ ನಡುವೆ’ ಕೃತಿಯಿಂದ ರೂಮಿಯ ಕವಿತೆ ನಿಮಗಾಗಿ.
ಮೂಲ : ರೂಮಿ
ಅನುವಾದ : ಎಚ್.ಎಸ್.ಅನುಪಮಾ
ಎದೆಯಾಳದ ನೋವು ನೈಜ ಪ್ರೇಮಿಯ ಗುರುತು
ಇನ್ನಾವ ನೋವೂ ಇಲ್ಲ ಎದೆ ನೋವಿಗಿಂತ ಮಿಗಿಲು
ಉಳಿದ ಬೇನೆಗಳಂತಲ್ಲ ಪ್ರೇಮರೋಗವು
ತನ್ನ ಮದ್ದರೆವ ಗುಟ್ಟರಿತ ಅಳತೆಗೋಲು
ಲೋಭಿ ಮನಸು ಪ್ರೇಮದಿಂದ ಪ್ರೇಮಕೆ ಜಿಗಿದೀತು
ನೆನಪಿಡು, ಉದಾತ್ತ ಪ್ರೇಮವೆ ಕೊನೆಗದರ ಸೆಳೆವುದು
ಪ್ರೇಮವನೆಂತಾದರೂ ವಿವರಿಸು, ವ್ಯಾಖ್ಯಾನಿಸು
ಶಬ್ದ ತನ್ನಷ್ಟಕ್ಕೆ ತಾನೇ ಲಜ್ಜೆಗೊಳುವುದು
ನಾಲಿಗೆ ಕೆಲವನಷ್ಟೇ ವ್ಯಾಖ್ಯಾನಿಸಬಲ್ಲದು
ವ್ಯಾಖ್ಯಾನಗಳಿರದ ಪ್ರೇಮ ಸ್ಪಷ್ಟಗೊಳುವುದು
ಲೇಖನಿಗೆ ಬರೆವ ಅವಸರವಿರಬಹುದು
ಪ್ರೇಮಪದ ಬರೆವಾಗ ಮುರಿದು ತುಂಡು
ಶುರುವಾದರೆ ಜಿಜ್ಞಾಸೆ ದಿವ್ಯಪ್ರೇಮದ ಕುರಿತು
ನಿಬ್ಬು ಸೀಳಿ ಕಾಗದ ಹರಿಯತೊಡಗುವುದು
ತರ್ಕ ಸಿಕ್ಕಿಬೀಳುವುದು ಪ್ರೇಮ ವಿವರಿಸುತ್ತ, ಕೆಸರಲಿ ಹೂತ ಕತ್ತೆಯಂತೆ
ಪ್ರೇಮವನೂ ಪ್ರೇಮಿಗಳನೂ ವಿವರಿಸಲು ಶಕ್ತವಾದದ್ದು ಪ್ರೇಮವಷ್ಟೆ
ಸೂರ್ಯನಲ್ಲದೆ ಮತ್ತಾರೂ ಸೂರ್ಯನ ತೋರಿಸಲಾರರು
ಒಂದೊಮ್ಮೆ ತೋರಿಸಿದಲ್ಲಿ ಬೆನ್ನುಹಾಕಿ ನಡೆಯಬಾರದು
ನೆರಳು ಸೂರ್ಯನ ಇರವು ತಿಳಿಸಬಹುದು
ಸೂರ್ಯ ಮಾತ್ರ ಬದುಕಬಾನ ಬೆಳಗಬಲ್ಲನು
ಸಂಜೆಯ ಮಾತುಗಳಂತೆ ನೆರಳು ನಿದ್ರಾಲೋಕಕೆಳಸುತ್ತದೆ
ಸೂರ್ಯ ಹುಟ್ಟುವುದೇ ತಡ, ಚಂದ್ರಬಿಂಬ ಎರಡಾಗುತ್ತದೆ
ಲೋಕದಲಾವುದೂ ಇಲ್ಲ ಸೂರ್ಯನಂಥ ಅದ್ಭುತ
ಆತ್ಮಸೂರ್ಯನಿಗಿಲ್ಲ ಇಂದು ನಾಳೆ, ಉದಯಾಸ್ತಮಾನ
ಮುಗಿಲ ಸೂರ್ಯ ಏಕೈಕ, ಅನನ್ಯ. ಆದರೂ ಸಹ
ಸೃಷ್ಟಿಸಬಹುದು ಅವನಂಥ ಎಷ್ಟೋ ಸೂರ್ಯರನ್ನ
ಆತ್ಮಸೂರ್ಯ ಆಗಸವ ಮೀರಿದವನು
ಮೂರ್ತ ಅಮೂರ್ತಗಳಲಿ ಕಾಣಲಾಗದವನು
ಅವನ ರೂಪ ಗ್ರಹಿಸುವುದು ಹೇಗೆ?
ಅವನಂಥವರ ಊಹಿಸುವುದು ಹೇಗೆ?
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ

- ಅನಿತ ಮಂಜುನಾಥ
ಪ್ರೀತಿ,
ಅಜ್ಞಾತ ಅನೂಹ್ಯ.
ಭಾವಯಾನದ
ಬಾನ ಕೆಳಗೆ.
…….
ಸುರಿಯುವ ಮಳೆಯಲ್ಲಿ
ಕೊಡೆ ಮರೆತೆ,
ಆಗ ನೀ ನೆನಪಾದೆ.
…….
ನನ್ನ
ವಿರಹಗಳಿಗೆ,
ಕಾವ್ಯವೇ ಮದ್ದು ನನಗೆ,
ಮನದೊಳಗೊಂದು
ಸುಖ ಸದ್ದು !
…….
ಮಾತು ವಚನಗಳು,
ಮನ ಕಲಹಗಳಾಗದಿರಲಿ,
ಆಗಲಿ ಬಾಳಿನ ಆಶಾಕಿರಣ.
(ಅನಿತ ಮಂಜುನಾಥ ಅವರ ‘ ಬೆಳಕಿನ ಬೆನ್ನ ಹಿಂದೆ – ಹನಿಗವಿತೆಗಳ ಕವನ ಸಂಕಲನದಿಂದ ಈ ಮೇಲಿನ ಹನಿಗಳನ್ನು ಆಯ್ದುಕೊಳ್ಳಲಾಗಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಯಾವ ಕಾಲದ ಶಾಸ್ತ್ರವೇನು ಹೇಳಿದರೇನು..?

- ಕುವೆಂಪು
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?
ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ?
ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !
ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?
ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮಿಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?
ಅಂತು ಮನು ತಾನು ಹೆಲಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ,
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ,
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ!
ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ;
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ .
ಎದೆಯ ದನಿ ಧರ್ಮನಿಧಿ ! ಕರ್ತವ್ಯವದುವೆ ವಿಧಿ !
ನಂಬದನು; ಅದನುಳಿದು ಋಷಿಯು ಬೇರಿಲ್ಲ!
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;
ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ,
ನಮ್ಮ ಹೃದಯವೆ ನಮೆಗೆ ಶ್ರೀಧರ್ಮಸೂತ್ರ !(ರಾಷ್ಟ್ರಕವಿ ಕುವೆಂಪು ಅವರ ‘ಕೋಗಿಲೆ ಮತ್ತು ಸೋವಿಯಟ್ ರಷ್ಯ’ ಕವನಸಂಕಲನದಿಂದ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಅವಳೀಗ ಕಾಯುವುದಿಲ್ಲ

- ಶಮೀಮ ಕುತ್ತಾರ್, ಮಂಗಳೂರು
ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.
ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.
ಬಲದ ಬಲೆಯಾಗಿ
ಬಗಲಲ್ಲಿ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.
ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.
ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.
ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…
ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..
ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ