ರಾಜಕೀಯ
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್

- ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಕಳೆದ ವರ್ಷ ಕರ್ನಾಟಕದಲ್ಲಿ ಆದ ಮುಖಭಂಗದಿಂದಲೂ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಬುದ್ಧಿ ಕಲಿಯಲಿಲ್ಲ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಈ ಕೊಬ್ಬಿನ ಫಲಿತಾಂಶ ದೇಶದ ಮುಂದಿದೆ. ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ಬಗ್ಗೆ ಭಾರತದ ಜನತೆಯ ಕಣ್ಣು ತೆರೆಸಬೇಕು.
–ಪ್ರಕಾಶ ಕಾರಟ್
ಫಡ್ನವೀಸ್ ಸರಕಾರದ ಮೂರು ದಿನದ ಕೌತುಕ ಈಗ ಮಾಯವಾಗಿರುವುದರಿಂದ ಈ ಇಡೀ ಹೊಲಸು ಪ್ರಕರಣದಿಂದ ಏನೇನೆಲ್ಲ ಪಾಟಗಳನ್ನು ಕಲಿಯಬಹುದು ಎಂದು ಹಿಂದಿರುಗಿ ನೋಡಬಹುದಾಗಿದೆ.
ನವಂಬರ್ 23ರ ರಾತ್ರಿ ಮತ್ತು 24ರ ಮುಂಜಾನೆ ನಡೆದದ್ದು ಸಂವಿಧಾನ ಮತ್ತು ಪ್ರಜಾಪ್ರಬುತ್ವ ನೀತಿಗಳ ಮೇಲೆ ಒಂದು ನಾಚಿಕೆಗೆಟ್ಟ ಪ್ರಹಾರ. ಮನಸ್ಸನ್ನು ಘಾಸಿಗೊಳಿಸುವ ಸಂಗತಿಯೆಂದರೆ ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ರಾಷ್ಟ್ರಪತಿಗಳು. ಇವರೆಲ್ಲರೂ ಸಂವಿಧಾನಿಕ ವಿಧಿವಿಧಾನಗಳನ್ನು ಅನುಸರಿಸುವ ಬದಲು ಬಿಜೆಪಿಯ ಆಣತಿಯಂತೆ ಮತ್ತು ಆಳುವ ಪಕ್ಷದ ಹಿತ ಸಾಧಿಸಲು ಕೆಲಸ ಮಾಡಿದರು.
ದೇವೇಂದ್ರ ಫಡ್ನವೀಸರಿಗೆ, ಎನ್ಸಿಪಿ ಶಾಸಕಾಂಗ ಪಕ್ಷದ ಮುಖಂಡರಾದ ಅಜಿತ್ ಪವಾರ್ ಕೊಟ್ಟ ಒಂದು ಬೋಗಸ್ ಪತ್ರದ ಆಧಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಸ್ವೀಕಾರ ಮಾಡಿಸಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ತನ್ನ ಪಕ್ಷದ ಆಶಯವನ್ನು ಈಡೇರಿಸಲು ತನ್ನ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡರು. ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಮಧ್ಯರಾತ್ರಿಯಲ್ಲಿ ಅವರು ಶಿಫಾರಸು ಮಾಡಿದ ರೀತಿ ಇದನ್ನು ಮತ್ತಷ್ಟು ಗಹನಗೊಳಿಸಿತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂಜಾನೆ 5.47ಕ್ಕೆ ಸಂಪುಟ ಮಂಜೂರಾತಿ ಇಲ್ಲದೆ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯಲು ಒಪ್ಪಿಗೆಯನ್ನು ಪಡೆದರು. ಇದಕ್ಕಾಗಿ ಅವರು ಭಾರತ ಸರಕಾರ (ವ್ಯವಹಾರ ನಡಾವಳಿ) ನಿಯಮಗಳಲ್ಲಿ, ತುರ್ತು ಸಂದರ್ಭಗಳಲ್ಲಿ ಬಳಸಲೆಂದು ಇರುವ ಅವಕಾಶವನ್ನು ಬಳಸಿಕೊಂಡರು. ಪ್ರಧಾನ ಮಂತ್ರಿಗಳು ಈ ಮಧ್ಯರಾತ್ರಿಯ ರಾಜಕೀಯ ಕ್ಷಿಪ್ರಕ್ರಾಂತಿಯನ್ನು ನಡೆಸಲು ಈ ನಿಯಮವನ್ನು ಬಳಸಲೂ ಹೇಸಲಿಲ್ಲ.
ಅಂತಿಮವಾಗಿ, ಭಾರತದ ರಾಷ್ಟ್ರಪತಿಗಳು ವಿಧಿ ವಿಧಾನಗಳನ್ನು ಸರಿಯಾಗಿ ಅನುಸರಿಸಲಾಗಿದೆಯೇ ಎಂದು ಸ್ವತಃ ಖಾತ್ರಿಪಡಿಸಿಕೊಳ್ಳದೆಯೇ ರಾಷ್ಟ್ರಪತಿ ಆಳ್ವಿಕೆಯನ್ನು ತೆಗೆಯುವ ಆದೇಶಕ್ಕೆ ಸಹಿ ಹಾಕಿದರು.
ಇವನ್ನೆಲ್ಲ ಮಾಡಿದ್ದು ಸ್ಪಷ್ಟ ಬಹುಮತ ಪಡೆದಿರುವ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರುವ ಅವಕಾಶವನ್ನು ಮೊದಲೇ ಮೊಟಕುಗೊಳಿಸುವುದಕ್ಕಾಗಿ.
ಆದರೆ ಇದೆಲ್ಲ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಎಷ್ಟರ ಮಟ್ಟಿನ ಪ್ರಹಾರ ಮಾಡಲಾಗಿದೆ ಎಂಬುದನ್ನು ವಿವರಿಸುವುದಿಲ್ಲ. ಈ ಪ್ರಜಾಪ್ರಭುತ್ವ-ವಿರೋಧಿ ಯೋಜನೆಯನ್ನು ದಕ್ಕಿಸಿಕೊಳ್ಳಬಹುದು ಎಂಬ ಆತ್ಮವಿಶ್ವಾಸ ಬಿಜೆಪಿಗೆ ಬಂದದ್ದಾದರೂ ಹೇಗೆ? ಅದು ದುರಹಂಕಾರದ ಆತ್ಮವಿಶ್ವಾಸ. ಏಕೆಂದರೆ ತನ್ನ ಹಣಬಲವನ್ನು ಮುಂದಿಟ್ಟುಕೊಂಡು ಮತ್ತು ಭ್ರಷ್ಟಾಚಾರದ ಹೂಟವನ್ನು ಬಳಸಿ ಸಾಕಷ್ಟು ಸಂಖ್ಯೆಯಲ್ಲಿ ಪಕ್ಷಾಂತರ ಮಾಡಿಸಬಹುದೆಂಬ ಪೂರ್ಣ ವಿಶ್ವಾಸ ಅದಕ್ಕೆ ಇತ್ತು.
ಈ ಮಹಾರಾಷ್ಟ್ರ ಪ್ರಕರಣ ಬಿಜೆಪಿ ರಾಜಕೀಯ ವಿಧೇಯತೆಗಳನ್ನು ಚಿತಾಯಿಸಲು ಭಾರೀ ಕುಳಗಳಿಂದ ಪಡೆದ ಹಣವನ್ನು ಮತ್ತು ಪ್ರಭುತ್ವದ ಸಂಸ್ಥೆಗಳ ಮೂಲಕ ಭೀತಿ ಹುಟ್ಟಿಸುವುದನ್ನು ಎಷ್ಟರ ಮಟ್ಟಿಗೆ ಬಳಸುತ್ತದೆ ಎಂಬುದನ್ನು ಪ್ರಕಟಪಡಿಸಿದೆ. ಅಜಿತ್ ಪವಾರ್ ಪಕ್ಷಾಂತರ ಇದಕ್ಕೆ ಕಣ್ಣುಕುಕ್ಕುವಂತಹ ರುಜುವಾತು. ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾ ಸ್ವೀಕಾರದ 48ಗಂಟೆಗಳ ನಂತರ ಅವರ ವಿರುದ್ಧ ಇದ್ದ ನೀರಾವರಿ ಹಗರಣದ ಒಂಭತ್ತು ಪ್ರಕರಣಗಳಲ್ಲಿ ಆರೋಪಗಳನ್ನು ಭ್ರಷ್ಟಾಚಾರ ನಿಗ್ರಹ ಕಚೇರಿ (ಎಸಿಬಿ) ಕೈಬಿಟ್ಟಿತು. ಈ ಹಿಂದೆ ಒಬ್ಬ ಪ್ರತಿಪಕ್ಷದ ಶಾಸಕನಾಗಿ ದೇವೇಂದ್ರ ಫಡ್ನವೀಸ್ ಈ 70,000 ರೂ.ಗಳ ಹಗರಣದಲ್ಲಿ ಪವಾರ್ ಕೇಂದ್ರವ್ಯಕ್ತಿ ಎಂದು ಆಪಾದಿಸಿದ್ದರು. ಬಿಜೆಪಿ ಪಕ್ಷಾಂತರ ಮಾಡುವ ಪ್ರತಿಯೊಬ್ಬ ಎನ್ಸಿಪಿ ಶಾಸಕರಿಗೆ ಅಪಾರ ಮೊತ್ತ ತೆರಲು ಸಿದ್ಧವಾಗಿತ್ತು ಎಂದು ವರದಿಯಾಗಿದೆ.
ಬಿಜೆಪಿ ಕಳೆದ ವರ್ಷ ಕರ್ನಾಟಕದಲ್ಲಿ ಇಂತಹುದೇ ಒಂದು ಹಿನ್ನಡೆಯನ್ನು ಅನುಭವಿಸಿತ್ತು. ರಾಜ್ಯಪಾಲರು ಯೆಡಿಯೂರಪ್ಪನವರನ್ನು ಮುಖ್ಯಮಂತ್ರಿಯಾಗಿ ಪ್ರತಿಜ್ಞೆ ಬೋಧಿಸುವಂತೆ ಅದು ಮಾಡಿತ್ತು. ಆದರೆ ಅವರು 24ಗಂಟೆಗಳೊಳಗೆ ಸದನದಲ್ಲಿ ಬಲಪರೀಕ್ಷೆ ನಡೆಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶ ನೀಡಿದಾಗ ರಾಜೀನಾಮೆ ನೀಡಬೇಕಾಯಿತು.
ಆದರೆ ಬಿಜೆಪಿಯಾಗಲೀ, ಅದರ ಅಧ್ಯಕ್ಷ ಅಮಿತ್ ಷಾರಾಗಲೀ ಇದರಿಂದ ಬುದ್ಧಿ ಕಲಿಯಲಿಲ್ಲ ಎಂಬುದು ಸ್ವಯಂವೇದ್ಯ. ಇನ್ನಷ್ಟು ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದು ಗೃಹಮಂತ್ರಿಯಾದದ್ದು ಈ ಚಾಣಕ್ಯ ಇನ್ನಷ್ಟು ಭಂಡತನದಿಂದ ಹೊಲಸು ಉಪಾಯಗಳನ್ನು ಮಾಡಲು ಧೈರ್ಯ ತುಂಬಿತಷ್ಟೇ. ಆದರೆ ಈ ಕೊಬ್ಬಿನ ಫಲಿತಾಂಶ-ಒಂದು ಅವಮಾನಕಾರೀ ಪರಾಭವ.
ಮರುದಿನವೇ ಸದನದಲ್ಲಿ ಬಲಪರೀಕ್ಷೆ ನಡೆಯಬೇಕು ಎಂಬ ಸುಪ್ರಿಂ ಕೋರ್ಟಿನ ಆದೇಶ ಅಸಂವಿಧಾನಿಕ ಮತ್ತು ಅಪ್ರಾತಿನಿಧಿಕ ಸರಕಾರದ ಗುಳ್ಳೆಯನ್ನು ಚುಚ್ಚಿತು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಹಿತದೃಷ್ಟಿಯಿಂದ ನ್ಯಾಯಾಲಯ ಈ ಇಡೀ ಪ್ರಕರಣವನ್ನು ಪರೀಕ್ಷಿಸಬೇಕು ಮತ್ತು ಇದಕ್ಕೆ ಹೊಣೆಗಾರರಾದ ಅಪರಾಧಿಗಳನ್ನು ಬೊಟ್ಟುಮಾಡಿ ತೋರಬೇಕು.
ಭಾರತದ ಜನತೆಗೆ ಮಹಾರಾಷ್ಟ್ರದ ಕುತಂತ್ರಗಳು ಬಿಜೆಪಿಯ ಮತ್ತು ಅದಕ್ಕೆ ನೇತೃತ್ವ ನೀಡಿರುವ ಆರೆಸ್ಸೆಸ್ ಮುಖಂಡರುಗಳ ಪ್ರಜಾಪ್ರಭುತ್ವ-ವಿರೋಧಿ ಮತ್ತು ಸರ್ವಾಧಿಕಾರಶಾಹೀ ಚಾರಿತ್ರ್ಯದ ನಿಜಸ್ವರೂಪ ಕಣ್ಣು ತೆರೆಸಬೇಕು.
ಉದ್ಧವ್ ಥಾಕ್ರೆ ನೇತೃತ್ವದ ಹೊಸ ಸರಕಾರ ಈ ಮೂರು ಪಕ್ಷಗಳ ಮೈತ್ರಿಕೂಟ ನಿರ್ಧರಿಸಿರುವ ಕನಿಷ್ಟ ಸಾಮಾನ್ಯ ಕಾರ್ಯಕ್ರಮದ ಪ್ರಕಾರ ಕೆಲಸ ಮಾಡಬೆಕು. ಮಹಾರಾಷ್ಟ್ರದ ಜನತೆ ಈ ಸರಕಾರದಿಂದ ಅದನ್ನು ನಿರೀಕ್ಷಿಸುತ್ತಾರೆ. ಈ ಸರಕಾರದ ಅಂಗಪಕ್ಷಗಳು ಸೈದ್ಧಾಂತಿಕವಾಗಿ ವಿರುದ್ಧವಾದ ಕಣ್ಣೋಟಗಳನ್ನು ಹೊಂದಿರುವುದರಿಂದ ಇದು ಮತ್ತಷ್ಟು ಮಹತ್ವದ್ದಾಗುತ್ತದೆ.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕರ್ನಾಟಕದ 5 ಸೇರಿದಂತೆ ದೇಶದ 103 ಅಭಿವೃದ್ಧಿಪಡಿಸಿದ ರೈಲ್ವೆ ನಿಲ್ದಾಣಗಳ ಲೋಕಾರ್ಪಣೆ

ಸುದ್ದಿದಿನಡೆಸ್ಕ್:ದೇಶಾದ್ಯಂತ ರೈಲು ನಿಲ್ದಾಣಗಳ ಅಭಿವೃದ್ಧಿ ತ್ವರಿತವಾಗಿ ಪೂರ್ಣಗೊಳ್ಳುತ್ತಿದೆ. ಸದ್ಯ ಕಾಮಗಾರಿ ಪೂರ್ಣಗೊಂಡ ಕರ್ನಾಟಕದ 5 ರೈಲ್ವೆ ನಿಲ್ದಾಣಗಳು ಸೇರಿದಂತೆ ದೇಶದ 103 ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುವಲ್ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ.
18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 86 ಜಿಲ್ಲೆಗಳಲ್ಲಿ ಈ ರೈಲ್ವೈ ನಿಲ್ದಾಣಗಳನ್ನು ಒಂದು ಸಾವಿರದ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ರಾಜಸ್ಥಾನದ ಬಿಕೇನರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅವರು ಅಭಿವೃದ್ಧಿಪಡಿಸಿದ ನೂತನ ರೈಲ್ವೈ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು 26ಸಾವಿರ ಕೋಟಿ ರೂಪಾಯಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ನೈರುತ್ವ ರೈಲ್ವೆ ವಿಭಾಗದ ಧಾರವಾಡ, ಗದಗ, ಬಾಗಲಕೋಟೆ, ಗೋಕಾಕ ಮತ್ತು ಮುನಿರಾಬಾದ್ ಸೇರಿದಂತೆ ವಿವಿಧ ರೈಲ್ವೆ ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆಯಡಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ಸಮಯದ ಉಳಿತಾಯದ ಜೊತೆಗೆ ಪರಿಸರ ಸ್ನೇಹಿ ವಾತಾವರಣದ ಮೂಲಕ ಪ್ರಯಾಣಿಕರಿಗೆ ರೈಲು ನಿಲ್ದಾಣಗಳಲ್ಲಿ ಅತ್ಯಾಧುನಿಕ ಸೌಲಭ್ಯ ಲಭ್ಯವಾಗಲಿದೆ. ಪ್ರಯಾಣಿಕರ ಸುಗಮ ಸಂಚಾರಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಈ ಅಮೃತ ಭಾರತ ರೈಲ್ವೆ ಯೋಜನೆಯಡಿ ದೇಶವ್ಯಾಪಿ ರೈಲು ನಿಲ್ದಾಣಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ. ಅಮೃತ ಭಾರತ ರೈಲ್ವೆ ಯೋಜನೆಯಡಿ ಬಾಗಲಕೋಟೆ ರೈಲ್ವೆ ನಿಲ್ದಾಣವನ್ನು ಸುಮಾರು 16 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕವಾಗಿ ನವೀಕರಿಸಲಾಗಿದೆ. ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ತಂಗುದಾಣ, ಶೌಚಾಲಯ ಹಾಗೂ ನೂತನ ಪ್ಲಾಟ್ ಫಾರ್ಮ್ ಮತ್ತು ಎಸ್ಕಲೇಟರ್ ನಿರ್ಮಾಣ ಸೇರಿದಂತೆ ಶುದ್ಧ ಕುಡಿಯುವ ನೀರು ವ್ಯವಸ್ಥೆ ಜೊತೆಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ.
ಬಾಗಲೋಕೋಟೆ ವಿದ್ಯಾರ್ಥಿ ಭೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರ ರೈಲ್ವೆ ನಿಲ್ದಾಣಗಳನ್ನು ಪುನರಾಭಿವೃದ್ಧಿಗೊಳಿಸುವ ಮೂಲಕ ಜನರಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತಿದೆ, ನವೀಕರಣಗೊಂಡ ನಿಲ್ದಾಣ ಪ್ರಯಾಣಿಕ ಸ್ನೇಹಿಯಾಗಿರುವುದು ಸಂತಸದ ಸಂಗತಿ ಎಂದರು.
ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎ.ಎ ದಂಡಿಯಾ ಮಾತನಾಡಿ, ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ನಿಲ್ದಾಣವನ್ನು ಕೇಂದ್ರ ಸರ್ಕಾರ ನವೀನ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ರೈಲ್ವೆ ವಾಣಿಜ್ಯ ನಿರೀಕ್ಷಕ ಚಂದ್ರಶೇಖರ್ ಮಾತನಾಡಿ, ಅಮೃತ ಭಾರತ ರೈಲ್ವೆ ಯೋಜನೆಯಡಿ ಹೈಟೆಕ್ ಮಾದರಿಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ, ಆಧುನಿಕ ಸೌಲಭ್ಯಗಳೊಂದಿಗೆ ಸೋಲಾರ್ ವಿದ್ಯುತ್ ಘಟಕಗಳನ್ನು ಸಹ ನಿರ್ಮಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಸ್ಥಳೀಯ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಸಹ ನಿರ್ಮಿಸಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಹುಬ್ಬಳಿ-ಧಾರವಾಡ ರೈಲ್ವೆ ನಿಲ್ದಾಣವನ್ನು ಆಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನವೀಕರಿಸಿ, ಸುಮಾರು ೧೭ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ದರ್ಜೆರಿಸಲಾಗಿದೆ. ನೈರುತ್ಯ ರೈಲ್ವೆ ವಿಭಾಗದ ಐದು ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಪುನಾರಾಭಿವೃದ್ಧಿಗೊಳಿಸಲಾಗಿದೆ.
ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ ಸಿಂಗ ಬ್ಯಾಳಿ ಮಾತನಾಡಿ, ಹೈಟೆಕ್ ರೂಪದಲ್ಲಿ ರೈಲ್ವೆ ನಿಲ್ದಾಣವನ್ನು ನವೀಕರಿಸಲಾಗಿರುವುದು ಸಂತಸದ ಸಂಗತಿಯಾಗಿದ್ದು, ಶುದ್ಧ ಕುಡಿಯುವ ನೀರು, ಸುಸಜ್ಜಿತ ತಂಗುದಾಣದೊಂದಿಗೆ, ಎಕ್ಸಲೇಟರ್ ವ್ಯವಸ್ಥೆಯನ್ನು ನಿರ್ಮಿಸಲಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ದಿನದ ಸುದ್ದಿ
ಬಾಕಿ ಕಾಮಗಾರಿ ಬೇಗ ಪೂರ್ಣಗೊಳಿಸಿ ; ಕಿರಿದಾದ ರಸ್ತೆ ವಿಸ್ತರಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ವಿವಿದೆಡೆ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಹಲವೆಡೆ ಕಿರಿದಾದ ರಸ್ತೆ ಹಾಗೂ ಅಂಡರ್ ಪಾಸ್, ಸೇವಾ ರಸ್ತೆ ಸ್ಥಾಪಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಸದರಾದ ಡಾ;ಪ್ರಭಾ ಮಲ್ಲಿಕಾರ್ಜುನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ಎಸ್.ಎಸ್.ಹೈಟೆಕ್ ಮುಖ್ಯ ಆಸ್ಪತ್ರೆಯ ಮುಖ್ಯ ದ್ವಾರ ರಾಷ್ಟ್ರೀಯ ಹೆದ್ದಾರಿ-48ರ, ಚೈನೇಜ್ ಅಂಡರ್ ಪಾಸ್ ಬಳಿ ಭಾರಿ ವಾಹನ, ನಗರ ಸಾರಿಗೆ, ಲಾರಿ, ಬಸ್ ವಾಹನಗಳು ಸಂಚರಿಸುತ್ತಿವೆ. ಇಲ್ಲಿನ ಕೆಳ ಸೇತುವೆ ತುಂಬಾ ಕಿರಿದಾಗಿದ್ದು, ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಕುರಿತು ಮಾಹಿತಿ ಪಡೆದ ಸಂಸದೆ ಶೀಘ್ರದಲ್ಲಿಯೇ ಇದನ್ನು ಪರಿಶೀಲಿಸಿ ಸಮಗ್ರ ಮಾಹಿತಿ ಒದಗಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಷ್ಟೇ ಅಲ್ಲದೇ ಕೆಲವು ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ಗಳಲ್ಲಿ ಸೂಕ್ತವಾದ ಬೆಳಕಿನ ವ್ಯವಸ್ಥೆ ಇಲ್ಲಾ. ಸಂಜೆ ಹಾಗೂ ರಾತ್ರಿಯ ಸಮಯದಲ್ಲಿ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಸಂಚರಿಸುತ್ತಿರುತ್ತಾರೆ. ಅವರುಗಳಿಗೆ ತೊಂದರೆಯಾಗದಂತೆ ಅಗತ್ಯವಿರವ ಕಡೆ ಕ್ಯಾರೇಜ್-ವೇ ಹೆಚ್ಚಿಸುವುದರ ಜೊತೆಗೆ ಬೆಳಕಿನ ವಿದ್ಯುತ್ದೀಪದ ವ್ಯವಸ್ಥೆ ಮಾಡಬೇಕು. ಇದರಿಂದ ಕಳ್ಳತನ, ಅಪಘಾತ ಸೇರಿದಂತೆ ಇನ್ನಿತರೆ ಅಹಿತಕರ ಘಟನೆಗಳು ಜರುಗುವ ಸಂಭವ ಕಡಿಮೆಯಾಗುತ್ತದೆ ಎಂದ ಅವರು, ಮಳೆಗಾಲ ಆರಂಭವಾಗಿದೆ, ಹಲವೆಡೆ ನೀರು ನಿಲ್ಲುವ ಕುರಿತು ವರದಿ, ಆರೋಪ ಕೇಳಿ ಬರುತ್ತಿವೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ ಸರಿಪಡಿಸಬೇಕು ಎಂದರು.
ಹರಿಹರ ತಾಲ್ಲೂಕಿನ ಹರಗನಹಳ್ಳಿ ಹಾಗೂ ಆನಗೋಡು, ಹೆಬ್ಬಾಳು ಬಳಿ ಏಕಾ-ಏಕಿ ತಿರುವು ಪಡೆದುಕೊಳ್ಳುವ ವಾಹನಗಳಿಗೆ ಡಾಬಾ ಹೋಟೆಲ್, ಪೆಟ್ರೋಲ್ ಬಂಕ್, ಇನ್ನಿತರೆ ಅಂಗಡಿ ಮುಂಗಟ್ಟುಗಳು ಅವೈಜ್ಞಾನಿಕ ಮತ್ತು ಅನಧಿಕೃತವಾಗಿ ನಿರ್ಮಿಸಿರುವುದರಿಂದ ಅಪಘಾತ ಹೆಚ್ಚಾಗುತ್ತಿವೆ. ಅಲ್ಲಿನ ಅನಧಿಕೃತ, ಮತ್ತು ನಿಯಮಬಾಹಿರವಾಗಿ ಇರುವವರ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಟೋಲ್ಗಳಲ್ಲಿ ಎನ್ಪಿಆರ್ ನಂಬರ್ ಪ್ಲೇಟ್ ನೊಂದಣಿ ಮಾಡಿಕೊಳ್ಳುವ ಉತ್ತಮ ಗುಣಮಟ್ಟದ ಸಿಸಿಟಿವಿ ಮತ್ತು ಬೆಳಕಿನ ವಿದ್ಯುದೀಪಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ನಿರ್ದೇಶಿಸಿದರು. ಇದಕ್ಕೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿ 70 ಕಿ.ಮೀ ವ್ಯಾಪ್ತಿಗೆ 2 ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ರೀತಿಯ ಅಪಘಾತಗಳು ಸಂಭವಿಸಿದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಸ್ಪಂದಿಸಬೇಕು. ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1033 ಸಂಖ್ಯೆ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ. ಆದ್ದರಿಂದ ಸಹಾಯವಾಣಿ ಸಂಖ್ಯೆಯನ್ನು ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಲು ಸಹಾಯವಾಗುವಂತೆ ಕ್ರಮವಹಿಸಬೇಕು. ಕೆಲವು ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿ ಇದ್ದಾಗ ಅಪಘಾತಗಳು ಸಂಭವಿಸಿದಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತುರ್ತು ಗಮನಹರಿಸಿ ಸರಿಯಾದ ಸಂದರ್ಭದಲ್ಲಿ ಅಂಬುಲೆನ್ಸ್, ರಕ್ಷಣೆ ಮಾಡುವ ಮೂಲಕ ಸ್ಪಂದಿಸಲು ತಿಳಿಸಿದರು.
ಅದೇ ರೀತಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕುಂದವಾಡ ರಸ್ತೆಯಲ್ಲಿ ಸೇವಾ ರಸ್ತೆ ನಿರ್ಮಿಸಿಲ್ಲ. ಸೂಕ್ತ ಚರಂಡಿ ವ್ಯವಸ್ತೆ ಕಲ್ಪಿಸದ ಕಾರಣ ಮಳೆ ನೀರು ಸಂಪೂರ್ಣ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಇಂತಹ ಅವೈಜ್ಞಾನಿಕವಾದ ಕಾಮಗಾರಿ ನಿರ್ಮಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ರಸ್ತೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸಾರ್ವಜನಿಕರಿಗೆ, ಸವಾರರಿಗೆ ತೊಡಕುಂಟಾಗಿರುವ ಕುರಿತು ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ತ್ವರಿತವಾಗಿ ತೆರವು ಮಾಡಿಸಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು.
ಹೂವಿನ ಗೂಡಂಗಡಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸೂಚನೆ: ನಗರದ ಪಿ.ಬಿ ರಸ್ತೆಯ ದೇವರಾಜ ಅರಸು ವೃತ್ತದ ಬಳಿ ಇರುವ ಬಿಎಸ್ಎನ್ಎಲ್ ಕಚೇರಿಯ ಮುಂಭಾಗ ಸುಮಾರು 15-15 ಹೂವಿನ ಗೂಡಂಗಿಡಿಗಳಿದ್ದು, ಅವರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನ ಸಂಚಾರಕ್ಕೆ ಅಡ್ಡಿಪಡಿಸದಂತೆ ತಾತ್ಕಾಲಿಕವಾಗಿ ಸೂಕ್ತ ಕ್ರಮವಹಿಸಬೇಕು. ತದನಂತರದ ದಿನಗಳಲ್ಲಿ ಒಂದೆಡೆ ಶಾಶ್ವತ ಸ್ಥಳ ಗುರುತಿಸಿ ಸ್ಥಳಾಂತರಿಸುವ ಕಾರ್ಯ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ನರೇಂದ್ರಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಎಂ ಸಂತೋಷ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ವಿಭಾಗೀಯ ನಿಯಂತ್ರಣಾಧಿಕಾರಿ ಫಕ್ರುದ್ದೀನ್, ಡಿಹೆಚ್ಓ ಡಾ.ಷಣ್ಮುಖಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಂದಿನ 3 ವರ್ಷಗಳಲ್ಲಿ ಉಳಿದ ಎಲ್ಲಾ ಭರವಸೆಗಳ ಈಡೇರಿಕೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹೊಸಪೇಟೆ:ಚುನಾವಣೆ ವೇಳೆ ಜನರಿಗೆ ನೀಡಿದ ಭರವಸೆಗಳಲ್ಲಿ 142 ಭರವಸೆಗಳನ್ನು ಎರಡು ವರ್ಷದಲ್ಲಿ ಪೂರೈಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಕಂದಾಯ ಇಲಾಖೆ ಹೊಸಪೇಟೆಯಲ್ಲಿ ಆಯೋಜಿಸಿದ್ದ “ಸಮರ್ಪಣೆ ಸಂಕಲ್ಪ” ಸಮಾವೇಶದಲ್ಲಿ 1 ಲಕ್ಷದ 11 ಸಾವಿರದ 111 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಿ ಮಾತನಾಡಿದ ಅವರು, ಮುಂದಿನ ಮೂರು ವರ್ಷಗಳಲ್ಲಿ ಉಳಿದ ಭರವಸೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ರಾಜ್ಯದ ಪಾಲನ್ನು ಪೂರ್ತಿ ನೀಡಿದ್ದು, ಕೇಂದ್ರ ಸರ್ಕಾರ ತಮ್ನ ಪಾಲನ್ನು ಕೊಡದೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಸರ್ಕಾರ ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಒಂದು ಲಕ್ಷದ 111 ಜನರಿಗೆ ಹಕ್ಕು ಪತ್ರಗಳ ವಿತರಣೆ ಮಾಡಲಾಯಿತು.
ನಂತರ ಸರ್ಕಾರದ ಎಲ್ಲ ಇಲಾಖೆಗಳ ಸಾಧನೆಯ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರ ಪುತ್ತಳಿಯನ್ನು ಅನಾವರಣಗೊಳಿಸಿದರು.

-
ದಿನದ ಸುದ್ದಿ6 days ago
ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ3 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ6 days ago
ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ
-
ಅಂಕಣ4 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ7 days ago
ಚನ್ನಗಿರಿ | ರೈತರಿಗೆ, ವ್ಯಾಪಾರಿಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳ ಬಾಡಿಗೆ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ3 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ