ದಿನದ ಸುದ್ದಿ
ಮತ್ತಿ ಗ್ರಾಮ ಪಂಚಾಯಿತಿಯಿಂದ ನನಗೆ ನ್ಯಾಯ ಕೊಡಿಸಿ : ಬಿ. ನಾಗರತ್ನಮ್ಮ ಮನವಿ
ನನ್ನ ಹೆಸರು ಬಿ. ನಾಗರತ್ನಮ್ಮ. 76ರ ವಯೋವೃದ್ಧೆಯಾದ ನಾನು ಪ್ರಸ್ತುತ ದಾವಣಗೆರೆ ವಿನೋಬನಗರದ ಬಾಡಿಗೆ ಮನೆ ನಿವಾಸಿ. 2008 ರಲ್ಲಿ ಆಧ್ಯಾತ್ಮ ಮಂದಿರ ನಿರ್ಮಾಣದ ಉದ್ದೇಶದಿಂದ ದಾವಣಗೆರೆ ತಾಲ್ಲೂಕು ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಿಮ್ಮಪ್ಪನ ಕ್ಯಾಂಪ್ ನಲ್ಲಿ ಸರ್ಕಾರಿ ಜಾಗದಲ್ಲಿ ಖಾತಾ ಸಂಖ್ಯೆ 154/1 , 30 x 40 ಅಳತೆಯ ನಿವೇಶನ ಮಂಜೂರು ಮಾಡಿಸಿಕೊಂಡು, ಈವರೆಗೂ ನಿವೇಶನ ಕಂದಾಯ ಪಾವತಿಸುತಿದ್ದೇನೆ.
ಆದರೆ ಆಗಿನ ಗ್ರಾಪಂ ಅಧಿಕಾರಿಗಳು ತೋರಿಸಿದ್ದ ಜಾಗದಲ್ಲಿ ಈಗ ನನ್ನ ಹೆಸರಿಗೆ ಜಾಗವೇ ಇಲ್ಲ. ನನ್ನ ಖಾತಾ ಎಕ್ಸಾಟ್ರಕ್ಷನ್ ನಲ್ಲಿ ನಮೂದಿಸಿರುವ ಚಕ್ಕುಬಂದಿ ಪ್ರಕಾರ ನನಗೆ ತೋರಿಸಿರುವ ಅಳತೆಯ ಜಾಗವೇ ಇಲ್ಲ. ಹಕ್ಕುಪತ್ರವನ್ನು ಸಹ ನೀಡಿಲ್ಲ. 76 ವರ್ಷದ ಇಳಿವಯಸ್ಸಿನ ನಾನು ಈ ಸಂಬಂಧ ಹಲವಾರು ವರ್ಷ ಅಲೆದಾಡಿ ಸಾಕಾಗಿ ಬೇಸತ್ತು ಹೋಗಿದೆ. ಅತ್ತ ಕಂದಾಯದ ಹಣ ಮತ್ತು ಅಧಿಕಾರಿಗಳ ಬಳಿ ಅಡ್ಡಾಡಿದ ಪ್ರಯಾಣದ ವೆಚ್ಚ ಎರಡೂ ಸಹ ನೀರಿನಲ್ಲಿ ಹೋಮ ಆದಂತಾಗಿ ಕಂಗಾಲಾಗಿದ್ದೇನೆ.
ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಹಾಗೂ ಮಾಧ್ಯಮ ಬಂಧುಗಳು ಮತ್ತಿ ಗ್ರಾಪಂನಿಂದ ನನಗೆ ನ್ಯಾಯ ದೊರಕಿಸಿಕೊಡಬೇಕಾಗಿ ಈ ಮೂಲಕ ಕಳಕಳಿಯ ಪ್ರಾರ್ಥನೆ.
ವಿವರ
ನನ್ನ ದೀಕ್ಷಾ ಗುರುಗಳ ಹೆಸರಿನಲ್ಲಿ ” ಪೂಜ್ಯ ಶ್ರೀ ಕೆ. ಎನ್ ಸ್ವಾಮಿ ಅವಧೂತರ ಆಧ್ಯಾತ್ಮ ಮಂದಿರದ ” ಮೂಲಕ 40 ವರ್ಷಗಳಿಂದ ಆಧ್ಯಾತ್ಮ ಸೇವೆಯಲ್ಲಿ ತೊಡಗಿರುವ ನಾನು ಗುರುಗಳಿಂದ ಕಲಿತ ಬ್ರಹ್ಮ ಜ್ಞಾನ, ಕಾಲಜ್ಞಾನ, ಕಾಲನಿರ್ಣಯ, ಸಾಂಖ್ಯಾ ತಾರಕ, ಛಾಯಾಪುರುಷ ಲಕ್ಷಣ ಇತ್ಯಾದಿ ಆಧ್ಯಾತ್ಮ ಬೋಧನೆ ಮೂಲಕ ಆತ್ಮೋನ್ನತಿಯ ಸೇವೆಯಲ್ಲಿ ತೊಡಗಿದ್ದೇನೆ. ಅಲ್ಲದೆ ವಿಷಜಂತು ಕಡಿದವರಿಗೆ ಗಿಡಮೂಲಿಕೆಯ ಔಷಧ ನೀಡಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದವರ ಜೀವ ಉಳಿಸುವ ಕೈಂಕರ್ಯವನ್ನೂ ಹಲವು ವರ್ಷಗಳಿಂದ ಮಾಡುತ್ತಲೇ ಇದ್ದೇನೆ.
ವೃದ್ಧಾಪ್ಯದ ಕಾರಣ ಒಂದು ಕಡೆ ನೆಲೆನಿಂತು ಈ ಸೇವೆಯನ್ನು ಸುಗಮವಾಗಿ ನೆರವೇರಿಸಿಕೊಂಡು ಹೋಗುವ ಸಂಕಲ್ಪದೊಂದಿಗೆ 2008 ರಲ್ಲಿ ಪರಿಚಿತರೊಬ್ಬರ ಸಹಕಾರದೊಂದಿಗೆ ಅರ್ಜಿ ಸಲ್ಲಿಸಿ ಆಗ ಬಿಲ್ ಕಲೆಕ್ಟರ್ ಆಗಿದ್ದ ನಾಗರಾಜ್ ಎಂಬುವರು ತೋರಿಸಿದ ಅನ್ವಯ ಮತ್ತಿಯಿಂದ 2 ಕಿಮೀ ದೂರದಲ್ಲಿರುವ ತಿಮ್ಮಪ್ಪನ ಕ್ಯಾಂಪ್ ನ ಶ್ರೀ ಸಿದ್ಧಾರೂಢ ಆಶ್ರಮದ ಪಕ್ಕ ತಾತ್ಕಾಲಿಕವಾಗಿ ಮುಂಡದ ಕಟ್ಟಿಗೆಯ ನೆರೆಕೆ ಮನೆ ನಿರ್ಮಿಸಿಕೊಂಡು ಒಬ್ಬಂಟಿಯಾಗಿ ಸೇವಾ ಕಾರ್ಯ ಮುಂದುವರಿಸುತಲಿದ್ದೆ .
ಆಗ ಆ ಸ್ಥಳ ನಿರ್ಜನ ಪ್ರದೇಶವಾಗಿತ್ತು. ನಮ್ಮ ಆಶ್ರಮ ಬಿಟ್ಟರೆ ಬೇರಾವ ಮನೆಗಳೂ ಇರಲಿಲ್ಲ. 2013ನೇ ಇಸವಿಯಲ್ಲಿ ಒಮ್ಮೆ ನನಗೆ ಅತೀವ ವಾಂತಿ, ಭೇದಿ, ಜ್ವರ ಉಂಟಾದ ಕಾರಣ ನನ್ನ ಚಿಕ್ಕ ಮಗಳಾದ ಶ್ರೀಮತಿ ಕಲ್ಪನಾ ನನ್ನನ್ನು ದಾವಣಗೆರೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಸುಶ್ರೂಷೆ ಮಾಡಿಸಿದಳು. ವಯಸ್ಸಾದ ನೀನು ಮತ್ತಿ ಕ್ಯಾಂಪ್ ನಲ್ಲಿ ಒಬ್ಬಂಟಿಗಳಾಗಿ ಇರುವುದು ಬೇಡ.
ವಾರಕ್ಕೊಮ್ಮೆ ತಿಮ್ಮಪ್ಪನ ಕ್ಯಾಂಪ್ ಗೆ ಹೋಗಿ ಸೇವಾ ಕಾರ್ಯ ಮುಗಿಸಿ ಬಾ ಎಂದು ಒತ್ತಾಯಿಸಿ ಕೆಲವು ದಿನಗಳ ಕಾಲ ತನ್ನೊಂದಿಗೆಯೇ ಇರಿಸಿಕೊಂಡಳು. ಹಾಗಾಗಿ ಅಂದಿನಿಂದ ನಾನು ವಾರಕ್ಕೆ ಒಂದೆರಡು ಬಾರಿ ಅಲ್ಲಿಗೆ ಹೋಗಿ ಬರತೊಡಗಿದೆ. ಆದರೆ 2014 ರಲ್ಲಿ ಒಂದು ದಿನ ಇದ್ದಕ್ಕಿದ್ದ ಹಾಗೇ ತಿಮ್ಮಪ್ಪನ ಕ್ಯಾಂಪ್ ನ ಸಿದ್ಧಾರೂಢ ಮಠದ ಪಕ್ಕ ಇದ್ದ ನನ್ನ ನೆರಕೆ ಮನೆ ಕಾಣೆಯಾಗಿತ್ತು. ಯಾರು ಕೆಡವಿದ್ದಾರೆಂದು ಪತ್ತೆಯಾಗಲೇ ಇಲ್ಲ. ಈ ವಿಚಾರವನ್ನು ಮತ್ತಿ ಗ್ರಾಮ ಪಂಚಾಯಿತಿಗೆ ತಿಳಿಸಿದರೆ ನಾವೆಲ್ಲಾ ಸರಿಪಡಿಸುತ್ತೇವೆ ಎಂದು ತಿಳಿಸಿದರೆ ಹೊರತು ಸಮಸ್ಯೆ ನಿವಾರಣೆಯಾಗಲಿಲ್ಲ.
ಅಂದಿನಿಂದ ಪ್ರಯತ್ನಿಸುತ್ತಲೇ ಇದ್ದ ನಾನು 2020 ರಲ್ಲಿ ಕಂದಾಯ ಪಾವತಿಸಲು ಮತ್ತಿ ಗ್ರಾಪಂ ಗೆ ತೆರಳಿದ ಸಮಯದಲ್ಲಿ ಇನ್ನು ಮುಂದೆ ಭಕ್ತರ ಸಹಾಯದೊಂದಿಗೆ ನಾನು ತಿಮ್ಮಪ್ಪನ ಕ್ಯಾಂಪ್ ನಲ್ಲಿಯೇ ನೆಲೆಸಿ ಆಧ್ಯಾತ್ಮ ಸೇವೆ ಮಾಡುವುದಾಗಿ ತೀರ್ಮಾನಿಸಿ ” ಈ ಸ್ವತ್ತಿಗೆ ” ಅರ್ಜಿ ಹಾಕುವ ಕುರಿತು ಮಾಹಿತಿ ಕೇಳಿದಾಗ ಸತ್ಯಾಂಶ ಬೆಳಕಿಗೆ ಬಂದಿತು.
ಆಗ ನಾವು ಜಾಗ ಅಳತೆ ಮಾಡಿ ಕೊಡುವಂತೆ ಅರ್ಜಿ ಹಾಕಿದೆವು. ಆದರೆ ನಿಮ್ಮ ಜಾಗ ಎಲ್ಲಿದೆ ನೀವೇ ತೋರಿಸಿ ಎಂದು ಕೇಳುವ ಮತ್ತಿ ಗ್ರಾಪಂ ಅಧಿಕಾರಿಗಳು , ನಾವು ಇಲ್ಲಿ ಮಂಜೂರು ಮಾಡಿರುವ ಎಲ್ಲರಿಗೂ ಹಕ್ಕುಪತ್ರ ನೀಡಿದ್ದೇವೆ. ನಿಮ್ಮ ಹೆಸರಿನಲ್ಲಿ ನಿವೇಶನ ಮಂಜೂರು ಆಗಿದ್ದಲ್ಲಿ ನಿಮಗೂ ಹಿಂದಿನ ಅಧಿಕಾರಿಗಳು ಹಕ್ಕು ಪತ್ರ ನೀಡಿರಬೇಕಲ್ಲವೇ.
ಹಕ್ಕುಪತ್ರ ತೋರಿಸದಿದ್ದರೆ ನಾವು ಎಲ್ಲಿಂದ ತಂದು ಕೊಡಬೇಕು ಎಂದು ನಮ್ಮನ್ನೇ ಅನುಮಾನಿಸುವ ರೀತಿ ಈಗಿನ ಅಧಿಕಾರಿಗಳು ಪ್ರಶ್ನಿಸಿ ವಾಪಸ್ ಕಳುಹಿಸಿದ್ದಾರೆ. ಅದರೆ ನಾನು ಹಲವಾರು ವರ್ಷಗಳಿಂದ ಮತ್ತಿ ಗ್ರಾಪಂ ಅಧಿಕಾರಿಗಳ ಬಳಿ ಹೋಗಿ ಸತತವಾಗಿ ಪ್ರಯತ್ನಿಸಿದರೂ ಅಂದಿನ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಮುಂದೆ ತಳ್ಳುತ್ತಲೇ ಬಂದರು.
ನಮ್ಮ ಹೆಸರಿನಲ್ಲಿ ಜಾಗವೇ ಇಲ್ಲವೆಂದ ಮೇಲೆ ಈವರೆಗೂ ಪ್ರತಿವರ್ಷ ಕಂದಾಯ ಪಾವತಿಸಿಕೊಂಡದ್ದು ಹೇಗೆ ? ವಯೋವೃದ್ಧಳಾದ ನಾನು ಇದಕ್ಕಾಗಿ ಹಲವಾರು ವರ್ಷಗಳಿಂದ ವಿವಿಧ ಕಚೇರಿ ಮತ್ತು ಅಧಿಕಾರಿಗಳ ಬಳಿ ಅಲೆದಾಡಿ ಸೋತು ಹೋಗಿದ್ದೇನೆ. ಅಲ್ಲದೆ ವಿಪರೀತ ಹಣ ಕೂಡ ಖರ್ಚು ಮಾಡಿಕೊಂಡಿದ್ದೇನೆ. ಅಲ್ಲದೆ ನನ್ನ ನಂಬಿಕೆ, ವಿಶ್ವಾಸ, ಆಧ್ಯಾತ್ಮಿಕ ಸೇವೆಯ ಕನಸಿಗೆ ಕೊಡಲಿ ಪೆಟ್ಟು ಬಿದ್ದಿದೆ. ಈ ಮೋಸಕ್ಕೆ ಮನನೊಂದು ಹೈರಾಣಾಗಿದೆ.
ಈಗ ನನಗೆ ನ್ಯಾಯ ಬೇಕು. ಮತ್ತಿ ಗ್ರಾಮ ಪಂಚಾಯಿತಿಯು ಖಾತೆಯಲ್ಲಿ ತೋರಿಸಿರುವ ನಿವೇಶನದ ಹಕ್ಕುಪತ್ರ ನೀಡಬೇಕು. ಅಲ್ಲಿ ನೆಲೆಸಿ ನನ್ನ ಕನಸಿನ ಕೂಸಾದ ನನ್ನ ಗುರುಗಳ ಹೆಸರಿನ ಆಧ್ಯಾತ್ಮ ಮಂದಿರ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು.
ಸನ್ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಮೇಲಧಿಕಾರಿಗಳು ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಹಾಗೂ ಮಾಧ್ಯಮ ಬಂಧುಗಳು ವಯೋವೃದ್ಧಳ ಈ ಸಮಸ್ಯೆ ನಿವಾರಣೆಗೆ ಸಹಕರಿಸಬೇಕಾಗಿ ಕೋರಿಕೆ. ಶೀಘ್ರ ಪರಿಹಾರ ಲಭಿಸದಿದ್ದರೆ ಮತ್ತಿ ಗ್ರಾಮ ಪಂಚಾಯಿತಿ ಮುಂದೆ ಅಮರಣಾಂತ ಧರಣಿ ನಡೆಸಲಾಗುವುದು.
–ಇಂತಿ ತಮ್ಮ ವಿಶ್ವಾಸಿ
ಬಿ. ನಾಗರತ್ನಮ್ಮ
ಮೊ.ನಂ : 9741458905
ಸುದ್ದಿದಿನ.ಕಾಂ | ವಾಟ್ಸಾಪ್ | 9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243