ರಾಜಕೀಯ
ಮೀಡಿಯಾಗಳು ಮೋದಿ ಪರವಾಗಿಲ್ಲ; ಪರವಾಗಿ ಇರಲೇಬೇಕಿದೆ’: ಎಬಿಪಿ ನ್ಯೂಸ್ ವೃತ್ತಾಂತದ ಸುತ್ತ…
ಸುದ್ದಿದಿನ ಡೆಸ್ಕ್ | ಎಬಿಪಿ ನ್ಯೂಸ್ ನೆಟ್ವರ್ಕ್ನ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಆಗಸ್ಟ್ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್ ತೊರೆದಿದ್ದಾರೆ.
ಕೆಲವು ತಿಂಗಳ ಕೆಳಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ‘ದೇಶದ ಮಾಧ್ಯಮ ವಲಯದಲ್ಲಿ ಭಯ ಸೃಷ್ಟಿಯಾಗಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಒತ್ತಡದಲ್ಲಿವೆ’ ಎಂಬರ್ಥದ ಹೇಳಿಕೆ ನೀಡಿದ್ದರು.
ಈ ಆರೋಪಗಳ ನಡುವೆ ಎಬಿಪಿ ನ್ಯೂಸ್ ನೆಟ್ವರ್ಕ್ನ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಆಗಸ್ಟ್ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್ ತೊರೆದಿದ್ದಾರೆ. ವಾಹಿನಿಯಲ್ಲಿ ಪ್ರೈಮ್ಟೈಮ್ ಕಾರ್ಯಕ್ರಮ ಮಾಸ್ಟರ್ಸ್ಟ್ರೋಕ್ ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಪುನ್ಯ ಪ್ರಸೂನ್ ಬಾಜಪೇಯಿ ಗುರುವಾರ ಚಾನಲ್ ತೊರೆದಿದ್ದರೆ, ಅಭಿಸಾರ್ ಶರ್ಮಾ ರಜೆಯ ಮೇಲೆ ಕಚೇರಿಯಿಂದ ಹೊರ ಹೋಗಿದ್ದಾರೆ.
ಸಾಮಾನ್ಯವಾಗಿ ಪತ್ರಕರ್ತರು ಮಾಧ್ಯಮ ಸಂಸ್ಥೆಯೊಂದನ್ನು ತೊರೆದಾಗ ಮಾಧ್ಯಮ ವಲಯದಿಂದಾಚೆ ಚರ್ಚೆಗಳಾಗುವುದು ಅಪರೂಪ. ಆದರೆ ಬಾಜಪೇಯಿ ಮತ್ತು ಖಂಡೇಕರ್ ನಿರ್ಗಮನ ಪತ್ರಕರ್ತರ ವರ್ತುಲ ದಾಟಿ ಸುದ್ದಿಯಾಗಿದೆ.
ಈ ಕುರಿತು ಟ್ಟೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ‘ಅಧಿಕಾರದಲ್ಲಿರುವವರ ಬಗೆಗಿನ ಸತ್ಯದ ಧ್ವನಿಯನ್ನು ನಿಗ್ರಹಿಸುವ ಯತ್ನ ಇದು’ ಎಂದು ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಸಂಸತ್ನಲ್ಲಿ ಮಾತನಾಡಿರುವ ಟಿಎಂಸಿ ಸಂಸದ ಡೆರೇಕ್ ಓಬ್ರಿಯಾನ್, ಪತ್ರಕರ್ತರ ಮೇಲೆ ಒತ್ತಡಗಳಿವೆ ಎಂದು ಹೇಳಿದ್ದಾರೆ.
ಆಗಿದ್ದೇನು?
ಅಷ್ಟಕ್ಕೂ ಈ ಪತ್ರಕರ್ತರ ನಿರ್ಗಮನಕ್ಕೆ ಕಾರಣವಾಗಿದ್ದು ಏನು ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮತ್ತು ಅದರ ಸುತ್ತಾ ನಡೆದ ಘಟನಾವಳಿಗಳು ಕಾಣಿಸಿಕೊಳ್ಳುತ್ತವೆ.
ತಮ್ಮ ಅವಧಿ ಮುಗಿಯುತ್ತಾ ಬಂದಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಸಮುದಾಯಗಳ ಜತೆ ಸಂವಾದ ನಡೆಸುತ್ತಿದ್ದಾರೆ. ಹೀಗೆ ಛತ್ತೀಸ್ಗಢದ ಚಂದ್ರಮನಿ ಕೌಶಿಕ್ ಎಂಬ ಮಹಿಳೆ ಜತೆ ಅವರು ಮಾತುಕತೆ ನಡೆಸುತ್ತಿದ್ದಾಗ, ಆಕೆ ‘ನಾನು ಭತ್ತ ಬೆಳೆಯುವ ಬದಲು ಸೀತಾಪಲ ಬೆಳೆಯಲು ಆರಂಭಿಸಿ ದುಪ್ಪಟ್ಟು ಲಾಭ ಗಳಿಸುತ್ತಿದ್ದೇನೆ’ ಎಂದು ಹೇಳಿದ್ದರು.
ಈ ಬಗ್ಗೆ ‘ಮಾಸ್ಟರ್ಸ್ಟ್ರೋಕ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ಬಾಜಪೇಯಿ, ಮಹಿಳೆಗೆ ಸುಳ್ಳು ಹೇಳಲು ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದರು. ದೆಹಲಿಯಿಂದ ಕಂಕೇರ್ ಜಿಲ್ಲೆಗೆ ತೆರಳಿದ್ದ ಅಧಿಕಾರಿಯೊಬ್ಬರು ಈ ರೀತಿ ತಪ್ಪು ಮಾಹಿತಿ ಹೇಳುವಂತೆ ಮಹಿಳೆಗೆ ಸೂಚಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವಿಡಿಯೋ ಕ್ಲಿಪ್ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಟೀಟ್ ಮಾಡುವ ಮೂಲಕ ಇದು ಎಬಿಪಿಯ ಸಾಂಪ್ರದಾಯಿಕ ವೀಕ್ಷಕರನ್ನು ದಾಟಿ ಜನರನ್ನು ತಲುಪಿತ್ತು.
ಮುಗಿಬಿದ್ದ ಬಿಜೆಪಿ
ಇಷ್ಟಾಗಿದ್ದೇ ತಡ ಬಿಜೆಪಿಗರು ಎಬಿಪಿ ನ್ಯೂಸ್ ವಿರುದ್ಧ ಮುಗಿಬಿದ್ದಿದ್ದರು. ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ನರೇಂದ್ರ ಮೋದಿಯನ್ನು ವಿರೋಧಿಸುವ ಅಜೆಂಡಾವನ್ನು ಎಬಿಪಿ ಪತ್ರಕರ್ತರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ವಾಹಿನಿಯ ವರದಿ ಸುಳ್ಳು ಎಂದು ಅವರು ಕಿಡಿಕಾರಿದರು. ರಕ್ಷಣಾ ಸಚಿವೆ, ಮಾಜಿ ಪತ್ರಕರ್ತೆ ನಿರ್ಮಲಾ ಸೀತರಾಮನ್ ಬಾಯಿಯಿಂದಲೂ ಇದೇ ಮಾತು ಹೊರ ಬಂತು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ ‘ಎಬಿಪಿ ನ್ಯೂಸ್’ ತನ್ನ ವರದಿಗಾರನನ್ನು ಮಹಿಳೆಯಿದ್ದ ಗ್ರಾಮಕ್ಕೆ ಕಳುಹಿಸಿ ವಾಸ್ತವ ವರದಿಯನ್ನು ಬಿತ್ತರಿಸಿತು. ಮತ್ತು ಇದು ನಿಮ್ಮ ‘ಫೇಕ್ ನ್ಯೂಸ್’ ಆರೋಪಕ್ಕೆ ಪ್ರತಿಕ್ರಿಯೆ ಎಂಬುದಾಗಿ ನಿರ್ಮಾಲಾ ಸೀತಾರಾಮನ್ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ರನ್ನು ಟ್ಯಾಗ್ ಮಾಡಿ ಟ್ಟೀಟ್ ಮಾಡಿತು.
ಈ ಬೆಳವಣಿಗೆಯಿಂದ ಉರಿದು ಹೋದ ಬಿಜೆಪಿ ನಾಯಕರು ಚಾನಲ್ಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು ಎಂದು ಚಾನಲ್ ಮೂಲಗಳು ಹೇಳಿದ್ದಾಗಿ ‘ಸ್ಕ್ರಾಲ್’ ವರದಿ ಮಾಡಿದೆ.
ಹೀಗೊಂದು ಹೊಸ ಒತ್ತಡ ತಂತ್ರ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಾಹಿನಿಗೆ ಹೊಸತೊಂದು ತಲೆನೋವು ಆರಂಭವಾಯಿತು. ‘ಮಾಸ್ಟರ್ಸ್ಟ್ರೋಕ್’ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ಪ್ರೈಮ್ಟೈಮ್ ಅವಧಿಯಲ್ಲೇ ವಾಹಿನಿಯ ಸಿಗ್ನಲ್ನಲ್ಲಿ ತೊಂದರೆ ಕಾಣಿಸಿಕೊಳ್ಳಲು ಆರಂಭವಾಯಿತು. ಜುಲೈ 13ರಿಂದ ತಾಂತ್ರಿಕ ಸಮಸ್ಯೆಯೊಂದು ತೆರೆದುಕೊಂಡಿತು.
ಇವೆಲ್ಲಾ ವಾಹಿನಿಯ ಗಮನಕ್ಕೂ ಬಂದಿತ್ತು. ಇದನ್ನು ಉದ್ದೇಶಿಸಿಯೇ ‘ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ವಾಹಿನಿ ಸತ್ಯವನ್ನೇ ಹೇಳುತ್ತಾ ಬಂದಿದೆ’ ಎಂದು ಬಾಜಪೇಯಿ ಕಾರವಾಗಿ ಟ್ಟೀಟ್ ಮಾಡಿದ್ದರು. ತಮ್ಮ ಮಾಸ್ಟ್ರರ್ಸ್ಟ್ರೋಕ್ ಪ್ರೋಗ್ರಾಂಗೆ ಆಗುತ್ತಿರುವ ಈ ಸಿಗ್ನಲ್ ಸಮಸ್ಯೆಯಿಂದ ಬೇಸತ್ತಿದ್ದ ಬಾಜಪೇಯಿ, ಹಸಿವಿನಿಂದ ಸಾಯುತ್ತಿರುವರುವವರು, ನಿರುದ್ಯೋಗ, ರೈತರ ಆತ್ಮಹತ್ಯೆ, ಶುದ್ಧಗಾಳಿ, ನೀರು ಇದ್ಯಾವುದರ ಕಡೆಯಗೂ ಗಮನ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಾದ ನಂತರ ಅವರು ತಮ್ಮ ಶೋನ ವಿಡಿಯೋಗಳನ್ನು ಅನಿವಾರ್ಯವಾಗಿ ಟ್ಟೀಟ್ ಮಾಡಲು ಆರಂಭಿಸಿದ್ದರು.
ಅಂದ ಹಾಗೆ ಟಿವಿ ವಾಹಿನಿಗಳ ಪ್ರಸಾರಕ್ಕೆ ಬೇಕಾದ ಈ ಸಿಗ್ನಲ್ಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿವೆ. ಮತ್ತು ಹೀಗೆ ಇದ್ದಕ್ಕಿದ್ದ ಹಾಗೆ ವಾಹಿನಿಯೊಂದು ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದರ ಹಿಂದೆ ಏನು ನಡೆದಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.
ಈ ಎಲ್ಲಾ ಬೆಳವಣಿಗೆಗಳ ನಂತರ ಬುಧವಾರ ಖಂಡೇಕರ್, ಗುರುವಾರ ಬಾಜೊಪೇಯಿ ರಾಜೀನಾಮೆ ನೀಡಿ ವಾಹಿನಿಯಿಂದ ಹೊರ ನಡೆದಿದ್ದಾರೆ. ಇನ್ನೋರ್ವ ಪತ್ರಕರ್ತ ಅಭಿಸಾರ್ ಶರ್ಮಾ ರಜೆಯ ಮೇಲೆ ತೆರಳಿದ್ದಾರೆ. ಬಹುಶಃ ‘ದೆಹಲಿ ದರ್ಬಾರ್’ನಲ್ಲಿ ಕುಳಿತವರೀಗ ಅಟ್ಟಹಾಸದ ನಗು ಬೀರುತ್ತಿರಬಹುದು. ನೀವು ನಮ್ಮ ಪರವಾಗಿರಿ ಇಲ್ಲವಾದಲ್ಲಿ ವೃತ್ತಿ ತೊರೆಯಲು ಸಿದ್ಧರಾಗಿ ಎಂಬ ಸಂದೇಶವೊಂದು ಮತ್ತೊಮ್ಮೆ ಎದುರಾಗಿದೆ. ಯಾಕೆ ದೇಶದ ಬಹುತೇಕ ಸುದ್ದಿವಾಹಿನಿಗಳು ಕೇಂದ್ರ ಸರಕಾರ ತುತ್ತೂರಿಗಳಾಗಿವೆ ಮತ್ತು ಪತ್ರಕರ್ತರು ಯಾಕೆ ಸ್ವಂತಿಕೆ ಕಳೆದುಕೊಂಡು ಬೆತ್ತಲಾಗಿದ್ದಾರೆ ಎಂಬುದಕ್ಕೆ ಉತ್ತರ ಈ ವೃತ್ತಾಂತದಲ್ಲಿ ಸಿಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್, ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳೇಶ್ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ದಾವಣಗೆರೆ ಇಲ್ಲಿಗೆ 2023-24ನೇ ಸಾಲಿನಲ್ಲಿ ಉಂಟಾದ ಮಳೆಯ ಅಭಾವ ಮತ್ತು ಬರದ ಕಾರಣದಿಂದ ಕೋಟ್ಯಾಂತರ ರೂಪಾಯಿಗಳನ್ನು ಕುಡಿಯುವ ನೀರಿಗಾಗಿ ಸರ್ಕಾರ ಬಿಡುಗಡೆ ಮಾಡಿರುತ್ತದೆ. ಆದರೆ ಕೆಲವು ಅಧಿಕಾರಿಗಳು ತುರ್ತು ಕುಡಿಯುವ ನೀರಿನ ಅನುದಾನವನ್ನು ದುರುಪಯೋಗಪಡಿಸಿಕೊಂಡ ಮಾಹಿತಿ ತಿಳಿದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಉಪ ವಿಭಾಗ, ಚನ್ನಗಿರಿ ಇವರಿಂದ ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಪಡೆಯಲಾಗಿದೆ.
ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಸಾಕಷ್ಟು ಅವ್ಯವಹಾರ ನಡೆದಿರುವುದು ಕಂಡುಬಂದ ಕಾರಣ ಸೂಕ್ತ ದಾಖಲೆಗಳೊಂದಿಗೆ ದಿನಾಂಕ: 05-07-2025 ರಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ದಾವಣಗೆರೆ ಇವರಿಗೆ ದೂರು ನೀಡಿ, ತನಿಖೆಗೆ ಒಳಪಡಿಸುವಂತೆ ಕೋರಿದ್ದರು. ದೂರು ನೀಡಿ 3 ತಿಂಗಳು ಕಳೆದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ತನಿಖೆಯನ್ನು ಕೈಗೊಂಡ ಬಗ್ಗೆ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ದಿನಾಂಕ: 29-10-2025 ರಂದು ಜ್ಞಾಪನವನ್ನು ಸಹ ನೀಡಲಾಗಿತ್ತು.
ಆದರೆ ನಾವು ಜ್ಞಾಪನ ನೀಡಿ ಒಂದು ತಿಂಗಳು ಕಳೆದರೂ ಯಾವುದೇ ತನಿಖೆ ನಡೆಸದೆ ನಿರ್ಲಕ್ಷ್ಯ ತೋರಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಗಿತ್ತೆ ಮಾಧವ್ ವಿಠ್ಠಲ್ ರಾವ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳೇಶ್ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು.
ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊರತೆಯಾಗಬಾರದು. 100 ವಿದ್ಯಾರ್ಥಿಗಳು ವಾಸಿಸುವ ಕಟ್ಟಡಕ್ಕೆ ಬದಲಾಗಿ 400 ವಿದ್ಯಾರ್ಥಿಗಳು ವಾಸ ಮಾಡುವ ಕಟ್ಟಡವನ್ನು ನಿರ್ಮಿಸಬೇಕು ಎಂದರು. ಖಬರಸ್ಥಾನಕ್ಕೆ ಮತ್ತು ಸ್ಮಶಾನಕ್ಕೆ ಜಾಗದ ಅವಶ್ಯಕತೆ ಇದ್ದರೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಅಂಗನವಾಡಿ ಕೇಂದ್ರಗಳನ್ನು ಅಲ್ಪಸಂಖ್ಯಾತರ ಸಮುದಾಯದ ಜನರು ಅಧಿಕವಾಗಿ ವಾಸಿಸುತ್ತಿರುವ ತಾಲ್ಲೂಕುಗಳು ಮತ್ತು ಗ್ರಾಮಗಳಲ್ಲಿ ತೆರೆಯುವುದು, ಇದರಿಂದಾಗಿ ಯೋಜನೆಯ ಪ್ರಯೋಜನೆಗಳು ಅವರುಗಳಿಗೆ ನೇರವಾಗಿ ಸಿಗುತ್ತವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆ, ಕಾಲೇಜು ಹಾಗೂ ಅಂಗನವಾಡಿಗಳಿಗೆ ವಕ್ಫ್ ಬೋರ್ಡ್ ಅಥವಾ ಯಾವುದೇ ಇಲಾಖೆಯ ಅಧೀನದಲ್ಲಿನ ನಿವೇಶನವಿದ್ದರೂ ಗುರುತಿಸಿ ಶಾಲೆ, ಕಾಲೇಜುಗಳ ಕಟ್ಟಡ ನಿರ್ಮಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಸಮುದಾಯಗಳಿಗೆ ಇಲಾಖೆಗಳಲ್ಲಿನ ಯೋಜನೆಗಳನ್ನು ಸಮರ್ಪಕವಾಗಿ ಒದಗಿಸುವ ಮೂಲಕ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು.
ವಿವಿಧ ಇಲಾಖೆಯ ಅನುಪಾಲನಾ ವರದಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಭಕ್ತಮಾರ್ಕಡೇಶ್ವರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು.
ಸಮಾಜದ ಧಾರ್ಮಿಕ ಮುಖಂಡರು ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ವಸತಿ ಶಾಲೆಗೆ ಸೇರಿಸುವಂತಾಗಲು ಪ್ರೇರೇಪಿಸಬೇಕು. ವಸತಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದರ ಜೊತೆಗೆ ಅಗತ್ಯ ಸೌಲಭ್ಯ ಇರುವ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಮತ ಹೊಸಗೌಡ್ರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ, ಡಿಡಿಪಿಐ ಕೊಟ್ರೇಶ್, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
ಸುದ್ದಿದಿನ,ದಾವಣಗೆರೆ:ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಆನಗೋಡು ಗ್ರಾಮದಲ್ಲಿ ಮಂಗಳವಾರ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ‘ಸಂಚಾರಿ ಆರೋಗ್ಯ ಘಟಕ’ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೇ ಹೋಗಿ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ವಾಹನಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ ಎಂದರು.
ಕಾರ್ಮಿಕರಿಗೆ ಆರೋಗ್ಯದಲ್ಲಿ ಸಮಸ್ಯೆ ಎದುರಾದಲ್ಲಿ ಅವರಿದ್ದಲ್ಲಿಗೆ ವೈದ್ಯರ ಸಮೇತ ಈ ಯುನಿಟ್ ತೆರಳಿ ಉಚಿತ ಚಿಕಿತ್ಸೆ, ಔಷಧ ಕೂಡ ಕೊಡಲಾಗುತ್ತದೆ. ಕಾರ್ಮಿಕರ ಕಾರ್ಡ್ ಪಡೆದಿರುವ ಕಾರ್ಮಿಕರಿಗೆ ಮೊದಲ ಆದ್ಯತೆ ಇದೆ. ಪ್ರತಿಯೊಬ್ಬ ಕಾರ್ಮಿಕರು ಆನ್ಲೈನ್ ಮೂಲಕ ಅರ್ಜಿ ಹಾಕಿ ಕಾರ್ಡ್ ಪಡೆದುಕೊಳ್ಳಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಿ ಕಾರ್ಡ್ ಮಾಡಿಸುವ ಕೆಲಸ ಮಾಡಬೇಕೆಂದು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕಾರ್ಮಿಕರು ಆರೋಗ್ಯದ ಮೇಲೆ ಗಮನ ಕೊಡದೆ ಸದಾ ಕೆಲಸದಲ್ಲಿ ಕಾಲ ಕಳೆಯುತ್ತಾರೆ. ಶ್ರಮಿಕರ ಆರೋಗ್ಯ ಕಾಪಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಚಿಕಿತ್ಸೆಗಾಗಿ ಅಧಿಕ ಹಣ ಭರಿಸದಿರುವ, ವೈದ್ಯರ ಬಳಿ ತೆರಳದ ಅದೆಷ್ಟೋ ಕಾರ್ಮಿಕರಿದ್ದು, ಅಂತಹ ಶ್ರಮಿಕರಿಗೆ ಉಚಿತ ಚಿಕಿತ್ಸೆ, ಉಚಿತ ಔಷದ ಸಿಗಲೆಂದು ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಅಧಿಕಾರಿಗಳು ಈ ಯೋಜನೆಯನ್ನು ಕಾರ್ಮಿಕರಿಗೆ ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಕೆಲಸದ ಸುರಕ್ಷತೆ ವಸ್ತç ಹಾಗೂ ಸಾಮಗ್ರಿಗಳನ್ನು ವಿತರಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಆರ್.ಅರವಿಂದ್, ಸಂಚಾರಿ ಕ್ಲಿನಿಕ್ನ ಜಿಲ್ಲಾ ಮಡಿಕಲ್ ಅಧಿಕಾರಿ ಡಾ.ಕೆ.ಎನ್.ಕಸ್ತೂರಿ, ಕಾರ್ಮಿಕ ಅಧಿಕಾರಿ ರಾಜಶೇಖರ್ ಹಿರೇಮಠ್, ಮುಮ್ತಾಜ್ ಬೇಗಂ, ರಾಜಪ್ಪ, ಪಿಡಿಒ ಸುಮಲತಾ, ಮುಖಂಡರಾದ ಕರಿಬಸಪ್ಪ, ಪ್ರಕಾಶ್, ಬಸಣ್ಣ, ರವಿ, ಜಾಕೀರ್, ರಾಜಣ್ಣ, ಹಾಗೂ ಕಾರ್ಮಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
“ಸಂಚಾರಿ ಆರೋಗ್ಯ ಘಟಕವು ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಹೋಗಲಿದ್ದು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಒತ್ತು ನೀಡಬೇಕು”.
|ಕೆ.ಎಸ್.ಬಸವಂತಪ್ಪ, ಶಾಸಕರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ1 day agoದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ
-
ದಿನದ ಸುದ್ದಿ2 days agoಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು
-
ದಿನದ ಸುದ್ದಿ2 days agoಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ
-
ದಿನದ ಸುದ್ದಿ2 days agoಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ7 hours agoದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

