ರಾಜಕೀಯ
ಮೀಡಿಯಾಗಳು ಮೋದಿ ಪರವಾಗಿಲ್ಲ; ಪರವಾಗಿ ಇರಲೇಬೇಕಿದೆ’: ಎಬಿಪಿ ನ್ಯೂಸ್ ವೃತ್ತಾಂತದ ಸುತ್ತ…
ಸುದ್ದಿದಿನ ಡೆಸ್ಕ್ | ಎಬಿಪಿ ನ್ಯೂಸ್ ನೆಟ್ವರ್ಕ್ನ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಆಗಸ್ಟ್ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್ ತೊರೆದಿದ್ದಾರೆ.
ಕೆಲವು ತಿಂಗಳ ಕೆಳಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ‘ದೇಶದ ಮಾಧ್ಯಮ ವಲಯದಲ್ಲಿ ಭಯ ಸೃಷ್ಟಿಯಾಗಿದೆ. ಪತ್ರಕರ್ತರು, ಮಾಧ್ಯಮ ಸಂಸ್ಥೆಗಳು ಒತ್ತಡದಲ್ಲಿವೆ’ ಎಂಬರ್ಥದ ಹೇಳಿಕೆ ನೀಡಿದ್ದರು.
ಈ ಆರೋಪಗಳ ನಡುವೆ ಎಬಿಪಿ ನ್ಯೂಸ್ ನೆಟ್ವರ್ಕ್ನ ಮ್ಯಾನೇಜಿಂಗ್ ಎಡಿಟರ್ ಮಿಲಿಂದ್ ಖಂಡೇಕರ್ ಆಗಸ್ಟ್ 1ರಂದು ರಾಜೀನಾಮೆ ನೀಡಿ ಸಂಸ್ಥೆಯಿಂದ ಹೊರ ನಡೆದಿದ್ದಾರೆ. ಬೆನ್ನಿಗೆ ಹಲವು ಹಿರಿತಲೆಗಳೂ ಚಾನಲ್ ತೊರೆದಿದ್ದಾರೆ. ವಾಹಿನಿಯಲ್ಲಿ ಪ್ರೈಮ್ಟೈಮ್ ಕಾರ್ಯಕ್ರಮ ಮಾಸ್ಟರ್ಸ್ಟ್ರೋಕ್ ನಡೆಸಿಕೊಡುತ್ತಿದ್ದ ಹಿರಿಯ ಪತ್ರಕರ್ತ ಪುನ್ಯ ಪ್ರಸೂನ್ ಬಾಜಪೇಯಿ ಗುರುವಾರ ಚಾನಲ್ ತೊರೆದಿದ್ದರೆ, ಅಭಿಸಾರ್ ಶರ್ಮಾ ರಜೆಯ ಮೇಲೆ ಕಚೇರಿಯಿಂದ ಹೊರ ಹೋಗಿದ್ದಾರೆ.
ಸಾಮಾನ್ಯವಾಗಿ ಪತ್ರಕರ್ತರು ಮಾಧ್ಯಮ ಸಂಸ್ಥೆಯೊಂದನ್ನು ತೊರೆದಾಗ ಮಾಧ್ಯಮ ವಲಯದಿಂದಾಚೆ ಚರ್ಚೆಗಳಾಗುವುದು ಅಪರೂಪ. ಆದರೆ ಬಾಜಪೇಯಿ ಮತ್ತು ಖಂಡೇಕರ್ ನಿರ್ಗಮನ ಪತ್ರಕರ್ತರ ವರ್ತುಲ ದಾಟಿ ಸುದ್ದಿಯಾಗಿದೆ.
ಈ ಕುರಿತು ಟ್ಟೀಟ್ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ‘ಅಧಿಕಾರದಲ್ಲಿರುವವರ ಬಗೆಗಿನ ಸತ್ಯದ ಧ್ವನಿಯನ್ನು ನಿಗ್ರಹಿಸುವ ಯತ್ನ ಇದು’ ಎಂದು ಕಿಡಿಕಾರಿದ್ದಾರೆ. ಇನ್ನೊಂದು ಕಡೆ ಸಂಸತ್ನಲ್ಲಿ ಮಾತನಾಡಿರುವ ಟಿಎಂಸಿ ಸಂಸದ ಡೆರೇಕ್ ಓಬ್ರಿಯಾನ್, ಪತ್ರಕರ್ತರ ಮೇಲೆ ಒತ್ತಡಗಳಿವೆ ಎಂದು ಹೇಳಿದ್ದಾರೆ.
ಆಗಿದ್ದೇನು?
ಅಷ್ಟಕ್ಕೂ ಈ ಪತ್ರಕರ್ತರ ನಿರ್ಗಮನಕ್ಕೆ ಕಾರಣವಾಗಿದ್ದು ಏನು ಎಂದು ಹುಡುಕುತ್ತಾ ಹೊರಟರೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮತ್ತು ಅದರ ಸುತ್ತಾ ನಡೆದ ಘಟನಾವಳಿಗಳು ಕಾಣಿಸಿಕೊಳ್ಳುತ್ತವೆ.
ತಮ್ಮ ಅವಧಿ ಮುಗಿಯುತ್ತಾ ಬಂದಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ವಿವಿಧ ಸಮುದಾಯಗಳ ಜತೆ ಸಂವಾದ ನಡೆಸುತ್ತಿದ್ದಾರೆ. ಹೀಗೆ ಛತ್ತೀಸ್ಗಢದ ಚಂದ್ರಮನಿ ಕೌಶಿಕ್ ಎಂಬ ಮಹಿಳೆ ಜತೆ ಅವರು ಮಾತುಕತೆ ನಡೆಸುತ್ತಿದ್ದಾಗ, ಆಕೆ ‘ನಾನು ಭತ್ತ ಬೆಳೆಯುವ ಬದಲು ಸೀತಾಪಲ ಬೆಳೆಯಲು ಆರಂಭಿಸಿ ದುಪ್ಪಟ್ಟು ಲಾಭ ಗಳಿಸುತ್ತಿದ್ದೇನೆ’ ಎಂದು ಹೇಳಿದ್ದರು.
ಈ ಬಗ್ಗೆ ‘ಮಾಸ್ಟರ್ಸ್ಟ್ರೋಕ್’ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದ ಬಾಜಪೇಯಿ, ಮಹಿಳೆಗೆ ಸುಳ್ಳು ಹೇಳಲು ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದರು. ದೆಹಲಿಯಿಂದ ಕಂಕೇರ್ ಜಿಲ್ಲೆಗೆ ತೆರಳಿದ್ದ ಅಧಿಕಾರಿಯೊಬ್ಬರು ಈ ರೀತಿ ತಪ್ಪು ಮಾಹಿತಿ ಹೇಳುವಂತೆ ಮಹಿಳೆಗೆ ಸೂಚಿಸಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ವಿಡಿಯೋ ಕ್ಲಿಪ್ನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ಟೀಟ್ ಮಾಡುವ ಮೂಲಕ ಇದು ಎಬಿಪಿಯ ಸಾಂಪ್ರದಾಯಿಕ ವೀಕ್ಷಕರನ್ನು ದಾಟಿ ಜನರನ್ನು ತಲುಪಿತ್ತು.
ಮುಗಿಬಿದ್ದ ಬಿಜೆಪಿ
ಇಷ್ಟಾಗಿದ್ದೇ ತಡ ಬಿಜೆಪಿಗರು ಎಬಿಪಿ ನ್ಯೂಸ್ ವಿರುದ್ಧ ಮುಗಿಬಿದ್ದಿದ್ದರು. ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ನರೇಂದ್ರ ಮೋದಿಯನ್ನು ವಿರೋಧಿಸುವ ಅಜೆಂಡಾವನ್ನು ಎಬಿಪಿ ಪತ್ರಕರ್ತರು ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು. ವಾಹಿನಿಯ ವರದಿ ಸುಳ್ಳು ಎಂದು ಅವರು ಕಿಡಿಕಾರಿದರು. ರಕ್ಷಣಾ ಸಚಿವೆ, ಮಾಜಿ ಪತ್ರಕರ್ತೆ ನಿರ್ಮಲಾ ಸೀತರಾಮನ್ ಬಾಯಿಯಿಂದಲೂ ಇದೇ ಮಾತು ಹೊರ ಬಂತು.
ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ ‘ಎಬಿಪಿ ನ್ಯೂಸ್’ ತನ್ನ ವರದಿಗಾರನನ್ನು ಮಹಿಳೆಯಿದ್ದ ಗ್ರಾಮಕ್ಕೆ ಕಳುಹಿಸಿ ವಾಸ್ತವ ವರದಿಯನ್ನು ಬಿತ್ತರಿಸಿತು. ಮತ್ತು ಇದು ನಿಮ್ಮ ‘ಫೇಕ್ ನ್ಯೂಸ್’ ಆರೋಪಕ್ಕೆ ಪ್ರತಿಕ್ರಿಯೆ ಎಂಬುದಾಗಿ ನಿರ್ಮಾಲಾ ಸೀತಾರಾಮನ್ ಮತ್ತು ರಾಜ್ಯವರ್ಧನ್ ಸಿಂಗ್ ರಾಥೋಡ್ರನ್ನು ಟ್ಯಾಗ್ ಮಾಡಿ ಟ್ಟೀಟ್ ಮಾಡಿತು.
ಈ ಬೆಳವಣಿಗೆಯಿಂದ ಉರಿದು ಹೋದ ಬಿಜೆಪಿ ನಾಯಕರು ಚಾನಲ್ಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದರು ಎಂದು ಚಾನಲ್ ಮೂಲಗಳು ಹೇಳಿದ್ದಾಗಿ ‘ಸ್ಕ್ರಾಲ್’ ವರದಿ ಮಾಡಿದೆ.
ಹೀಗೊಂದು ಹೊಸ ಒತ್ತಡ ತಂತ್ರ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ವಾಹಿನಿಗೆ ಹೊಸತೊಂದು ತಲೆನೋವು ಆರಂಭವಾಯಿತು. ‘ಮಾಸ್ಟರ್ಸ್ಟ್ರೋಕ್’ ಕಾರ್ಯಕ್ರಮ ಪ್ರಸಾರವಾಗುತ್ತಿದ್ದ ಪ್ರೈಮ್ಟೈಮ್ ಅವಧಿಯಲ್ಲೇ ವಾಹಿನಿಯ ಸಿಗ್ನಲ್ನಲ್ಲಿ ತೊಂದರೆ ಕಾಣಿಸಿಕೊಳ್ಳಲು ಆರಂಭವಾಯಿತು. ಜುಲೈ 13ರಿಂದ ತಾಂತ್ರಿಕ ಸಮಸ್ಯೆಯೊಂದು ತೆರೆದುಕೊಂಡಿತು.
ಇವೆಲ್ಲಾ ವಾಹಿನಿಯ ಗಮನಕ್ಕೂ ಬಂದಿತ್ತು. ಇದನ್ನು ಉದ್ದೇಶಿಸಿಯೇ ‘ಎಲ್ಲಾ ಅಡ್ಡಿ ಆತಂಕಗಳ ನಡುವೆಯೂ ವಾಹಿನಿ ಸತ್ಯವನ್ನೇ ಹೇಳುತ್ತಾ ಬಂದಿದೆ’ ಎಂದು ಬಾಜಪೇಯಿ ಕಾರವಾಗಿ ಟ್ಟೀಟ್ ಮಾಡಿದ್ದರು. ತಮ್ಮ ಮಾಸ್ಟ್ರರ್ಸ್ಟ್ರೋಕ್ ಪ್ರೋಗ್ರಾಂಗೆ ಆಗುತ್ತಿರುವ ಈ ಸಿಗ್ನಲ್ ಸಮಸ್ಯೆಯಿಂದ ಬೇಸತ್ತಿದ್ದ ಬಾಜಪೇಯಿ, ಹಸಿವಿನಿಂದ ಸಾಯುತ್ತಿರುವರುವವರು, ನಿರುದ್ಯೋಗ, ರೈತರ ಆತ್ಮಹತ್ಯೆ, ಶುದ್ಧಗಾಳಿ, ನೀರು ಇದ್ಯಾವುದರ ಕಡೆಯಗೂ ಗಮನ ನೀಡಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದಾದ ನಂತರ ಅವರು ತಮ್ಮ ಶೋನ ವಿಡಿಯೋಗಳನ್ನು ಅನಿವಾರ್ಯವಾಗಿ ಟ್ಟೀಟ್ ಮಾಡಲು ಆರಂಭಿಸಿದ್ದರು.
ಅಂದ ಹಾಗೆ ಟಿವಿ ವಾಹಿನಿಗಳ ಪ್ರಸಾರಕ್ಕೆ ಬೇಕಾದ ಈ ಸಿಗ್ನಲ್ಗಳು ಕೇಂದ್ರ ಸರಕಾರದ ಸುಪರ್ದಿಯಲ್ಲಿವೆ. ಮತ್ತು ಹೀಗೆ ಇದ್ದಕ್ಕಿದ್ದ ಹಾಗೆ ವಾಹಿನಿಯೊಂದು ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದರ ಹಿಂದೆ ಏನು ನಡೆದಿರಬಹುದು ಎಂದು ಊಹಿಸುವುದು ಕಷ್ಟವೇನಲ್ಲ.
ಈ ಎಲ್ಲಾ ಬೆಳವಣಿಗೆಗಳ ನಂತರ ಬುಧವಾರ ಖಂಡೇಕರ್, ಗುರುವಾರ ಬಾಜೊಪೇಯಿ ರಾಜೀನಾಮೆ ನೀಡಿ ವಾಹಿನಿಯಿಂದ ಹೊರ ನಡೆದಿದ್ದಾರೆ. ಇನ್ನೋರ್ವ ಪತ್ರಕರ್ತ ಅಭಿಸಾರ್ ಶರ್ಮಾ ರಜೆಯ ಮೇಲೆ ತೆರಳಿದ್ದಾರೆ. ಬಹುಶಃ ‘ದೆಹಲಿ ದರ್ಬಾರ್’ನಲ್ಲಿ ಕುಳಿತವರೀಗ ಅಟ್ಟಹಾಸದ ನಗು ಬೀರುತ್ತಿರಬಹುದು. ನೀವು ನಮ್ಮ ಪರವಾಗಿರಿ ಇಲ್ಲವಾದಲ್ಲಿ ವೃತ್ತಿ ತೊರೆಯಲು ಸಿದ್ಧರಾಗಿ ಎಂಬ ಸಂದೇಶವೊಂದು ಮತ್ತೊಮ್ಮೆ ಎದುರಾಗಿದೆ. ಯಾಕೆ ದೇಶದ ಬಹುತೇಕ ಸುದ್ದಿವಾಹಿನಿಗಳು ಕೇಂದ್ರ ಸರಕಾರ ತುತ್ತೂರಿಗಳಾಗಿವೆ ಮತ್ತು ಪತ್ರಕರ್ತರು ಯಾಕೆ ಸ್ವಂತಿಕೆ ಕಳೆದುಕೊಂಡು ಬೆತ್ತಲಾಗಿದ್ದಾರೆ ಎಂಬುದಕ್ಕೆ ಉತ್ತರ ಈ ವೃತ್ತಾಂತದಲ್ಲಿ ಸಿಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
ಸುದ್ದಿದಿನ,ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಜನಪರ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಘೋಷಿಸಿದ್ದು, ಯುವಕರು, ವಿದ್ಯಾರ್ಥಿಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ತ್ವರಿತ ಪರಿಹಾರವೇ ತಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ರಾಜ್ಯದಾದ್ಯಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಉಚಿತ ಬಸ್ ಪಾಸ್ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಜೊತೆಗೆ ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಉದ್ದೇಶದಿಂದ “ಭಾರತ್ ಜೋಡೋ ಯುವ ಸಂಘ”ಗಳ ರಚನೆಗೆ ಸರ್ಕಾರ ಮುಂದಾಗಲಿದೆ ಎಂದು ಹೇಳಿದರು. ಈ ಸಂಘಟನೆಗಳು ಸಾಮಾಜಿಕ ಸೌಹಾರ್ದತೆ ಮತ್ತು ಯುವಜನರ ಸಬಲೀಕರಣಕ್ಕೆ ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದ ಮುಖ್ಯಮಂತ್ರಿ, ವಿಶೇಷವಾಗಿ ಬೆಂಗಳೂರಿನ ಹದಗೆಟ್ಟ ರಸ್ತೆಗಳ ದುರಸ್ತಿ ಮತ್ತು ಡಾಂಬರೀಕರಣ ಕಾರ್ಯಗಳನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಜನರು ಎದುರಿಸುತ್ತಿರುವ ನಾಗರಿಕ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಮನೆ ನಿರ್ಮಾಣ ಹಾಗೂ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಎ-ಖಾತಾ ಮತ್ತು ಬಿ-ಖಾತಾ ಸಮಸ್ಯೆಗಳ ಪರಿಹಾರಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು. ಜನಸಾಮಾನ್ಯರ ಬದುಕಿಗೆ ನೇರವಾಗಿ ಸಂಬಂಧಿಸಿದ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ತಮ್ಮ ಜೀವನದ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡು ಎಲ್ಲ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ರಾಜ್ಯದ ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದ್ದು, ಪಾರದರ್ಶಕ ಮತ್ತು ಉತ್ತರದಾಯಿ ಆಡಳಿತ ನೀಡುವುದು ತಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.
“ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಸರ್ಕಾರವನ್ನು ನೀಡುತ್ತೇವೆ. ಯುವಕರು, ರೈತರು, ಮಹಿಳೆಯರು ಮತ್ತು ಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದುವಾಗಿರುತ್ತದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಆಶ್ರಯ ಯೋಜನೆ – ಆವಧಿ ವಿಸ್ತರಣೆ
-
ದಿನದ ಸುದ್ದಿ5 days agoಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
-
ಅಂಕಣ5 days agoಕವಿತೆ | ದೇವರ ಹೂವು
-
ದಿನದ ಸುದ್ದಿ3 days agoರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು ಕಾರ್ಯಕ್ರಮದಡಿ ಸೌಲಭ್ಯ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago10 ಮುಖ್ಯ ಅಂಶಗಳನ್ನು ಪಾಲಿಸಿ ; ಸಕ್ಕರೆ ಕಾಯಿಲೆಗೆ ಗುಡ್ ಬೈ ಹೇಳಿ..
-
ದಿನದ ಸುದ್ದಿ3 days agoಉಚಿತ ಕೋಳಿ ಸಾಕಾಣಿಕೆ ತರಬೇತಿ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoವಸತಿ ಯೋಜನೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಕೃಷಿ ಪಂಡಿತ ಹಾಗೂ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ: ಅರ್ಜಿ ಆಹ್ವಾನ

