Connect with us

ನೆಲದನಿ

ನುಡಿಯ ಒಡಲು – 08 | ನೋಮ್ ಚಾಮ್‍ಸ್ಕಿಯ ಭಾಷಿಕ ಚಿಂತನೆಗಳು

Published

on

  • ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

When we study human language, we are approaching what some might call the “human essence,” the distinctive qualities of mind that are, so far as we know, unique to man. – NOAM CHOMSKY, Language and Mind, 1968

ನುಡಿಯೆಂಬುದು ಮನುಷ್ಯರಲ್ಲಿ ಅಂತಸ್ಥಗೊಂಡಿರುತ್ತದೆ. ಅದೊಂದು ಸಾಮರ್ಥ್ಯ ಎಂಬೆಲ್ಲ ಸಂಗತಿಗಳಿಗೆ ಪೂರಕವಾದ ಕೆಲವು ಸುಳಿವುಗಳು ಫರ್ಡಿನಾಂಡ್ ಡಿ. ಸಸ್ಯೂರ್‍ನ ಚಿಂತನೆಗಳಿಂದ ಸಿಕ್ಕಿವೆ. ಇಂತಹ ಸಾಮರ್ಥ್ಯ ಎಲ್ಲಿ? ಹೇಗೆ? ಮತ್ತು ಯಾವ? ಸ್ವರೂಪದಲ್ಲಿ ಮಾನವರಲ್ಲಿ ಅಂತಸ್ಥವಾಗಿರುತ್ತದೆ ಎಂಬ ತಿಳಿವನ್ನು ಅರಿಯಲು ಈಗ ಚಾಮ್‍ಸ್ಕಿಯ ಚಿಂತನೆಗಳನ್ನು ಚರ್ಚಿಸೋಣ.

ಹೊರನೋಟಕ್ಕೆ ನುಡಿಯ ಸಾಮರ್ಥ್ಯ ದೇಹದ ಬೇರೆ ಬೇರೆ ಅಂಗಾಂಗಳಲ್ಲಿ ನೆಲೆಗೊಂಡಂತೆ ಕಾಣುತ್ತದೆ. ನುಡಿಯ ಆಚರಣೆಯ (ಲಿಂಗ್ವಿಸ್ಟಿಕ್ ಪರ್ಫಾರ್‍ಮನ್ಸ್) ನೆಲೆಯಿಂದ ನೋಡಿದಾಗ, ಈ ಮಾತು ದಿಟವಾಗಿ ಕಾಣುತ್ತದೆ. ಅಂದರೆ ನುಡಿಯ ವಾಸ್ತವದ ಪರಿಚಯ ನಮಗಾಗುವುದೇ ದೇಹದ ಬೇರೆ ಬೇರೆ ಅಂಗಗಳಿಂದ ಮಾತ್ರ.

ಎತ್ತುಗೆಗಾಗಿ ಬಾಯಿ, ತುಟಿ, ಹಲ್ಲು, ಗಂಟಲು, ಕಿರುನಾಲಿಗೆ, ಮೂಗು, ಶ್ವಾಸಕೋಶ, ಎದೆ, ಪಿತ್ತಾಶಯ [ಲೀವರ್] ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು. ದಿಟ, ನುಡಿಯ ಬಳಕೆ ಹಾಗೂ ಉಪಯೋಗ ಸಮುದಾಯಗಳಲ್ಲಿ ನೆಲೆಗೊಳ್ಳುವುದೇ ಇಂತಹ ಅಂಗಗಳನ್ನು ಬಳಸಿಕೊಳ್ಳುವುದರಿಂದ ಮಾತ್ರ ಸಾಧ್ಯ. ಈ ಕಾರಣಗಳಿಂದಲೇ ಇರಬೇಕು ಜನರು ತಮ್ಮ ಸಾಂಸ್ಕೃತಿಕ ಸನ್ನಿವೇಶದಲ್ಲಿ ನುಡಿಗೆ ಬದಲಾಗಿ ನಾಲಿಗೆ, ಬಾಯಿಬಿಡು, ಮಾತುಕೊಡು, ತುಟಿಬಿಚ್ಚು, ಪಿಟಕ್ಕನ್ನು, ಎಂಬೆಲ್ಲ ಪರಿಭಾಷೆಗಳನ್ನು ಬಳಸುತ್ತಾರೆ.

ಈ ಎಲ್ಲ ವಿವರಗಳು ನುಡಿಯೊಂದು ವಾಸ್ತವಗೊಳ್ಳುವ ಬಗೆಗಳು ಯಾವವು ಹಾಗೂ ಯಾವುದೇ ಒಂದು ನುಡಿಸಮುದಾಯ ತನ್ನ ನುಡಿಯನ್ನು ಹೇಗೆಲ್ಲ ಸಾಂಸ್ಕೃತಿಕವಾಗಿ ಕಲ್ಪಿಸಿಕೊಂಡಿರುತ್ತದೆ ಎಂಬ ತಿಳಿವು ಮಾತ್ರ ಈ ಚರ್ಚೆಗಳಿಂದ ತಿಳಿಯುತ್ತದೆ. ಚಾಮ್‍ಸ್ಕಿಗೆ ಈ ಯಾವ ವಿವರಗಳು ಮುಖ್ಯವಲ್ಲ. ಅಂದರೆ ನುಡಿ ಕುರಿತ ಅವನ ತಾತ್ವಿಕ ಚೌಕಟ್ಟುಗಳಿಗೆ ಇಂತಹ ಚರ್ಚೆಗಳಿಂದ ಯಾವ ಪ್ರಯೋಜನವು ಆಗುವುದಿಲ್ಲ.

ಬದಲಾಗಿ ಅರಿವಿನ ನುಡಿಯರಿಮೆ (ಕಾಗ್ನಿಟಿವ್ ಲಿಂಗ್ವಿಸ್ಟಿಕ್ಸ್)ಯ ಕಣ್ನೋಟದಿಂದ ಚಾಮ್‍ಸ್ಕಿಯ ನುಡಿ ಬಗೆಗಿ ಚಿಂತನೆಗಳನ್ನು ತಿಳಿಯುವ ಜರೂರಿದೆ. ನುಡಿಯನ್ನು ಅರಿಯುವ, ನಿರ್ವಚಿಸುವ ಕ್ರಮಗಳು ಮೆದಳು, ಮನಸ್ಸು ಹಾಗೂ ಚಿಂತನೆಯ ಸ್ವರೂಪವನ್ನು ಅರಿಯುವ ಬಗೆಗಳಾಗಿವೆ. ಇಪ್ಪತ್ತನೇ ಶತಮಾನದ ಇಂತಹ ‘ಅರಿವಿನ ಕ್ರಾಂತಿ’ (ಕಾಗ್ನಿಟಿವ್ ರೆವಲ್ಯೂಶನ್)ಗೆ ಚಾಮ್‍ಸ್ಕಿಯ ಈ ಆಲೋಚನಾಕ್ರಮವೇ ಕಾರಣ. ನುಡಿಯರಿಮೆಯ ಓದಿನಲ್ಲಿಯೇ ಇಂತಹವೊಂದು ಆಲೋಚನಾ ಪಲ್ಲಟಕ್ಕೆ ಚಾಮ್‍ಸ್ಕಿ ಕಾರಣವೆಂಬುದು ಗಮನಾರ್ಹ ಸಂಗತಿ.

ಹಾಗಾದರೆ, ಚಾಮ್‍ಸ್ಕಿಗೆ ನುಡಿ ಬಗೆಗಿನ ಚಿಂತನೆಗಳನ್ನು ಬೆಳೆಸಲು ಬೇಕಾಗಿರುವ ಸಂಗತಿಗಳಾವವು? ಇವನು ನುಡಿ ಕುರಿತ ತನ್ನ ಚಿಂತನೆಗಳನ್ನು ಮುಂದೊಡ್ಡಲು ಮೆದಳು, ಮನಸ್ಸು, ಜೈವಿಕ ನೆಲೆಗಳು ಹಾಗೂ ಅವುಗಳಲ್ಲಿ ಅಡಕವಾಗಿರುವ ಸಾಮರ್ಥ್ಯದಂತಹ ಸಂಗತಿಗಳನ್ನು ಬಳಸಿಕೊಳ್ಳುತ್ತಾನೆ.

ಅದಕ್ಕಾಗಿ ಚಾಮ್‍ಸ್ಕಿ “ನುಡಿಯೆಂಬುದು ಕಲಿಯುವುದಲ್ಲ ಬದಲಾಗಿ ಅದನ್ನು ಕಲಿಯುವುದಕ್ಕೆ ಬೇಕಾಗುವ ಸಾಮರ್ಥ್ಯ ಮಾನವರ ಮೆದುಳಿನಲ್ಲಿ ಅಡಕವಾಗಿರುತ್ತದೆ” ಎಂದು ಹೇಳುತ್ತಾನೆ. ಈ ತಿಳಿವನ್ನು ಮೂರು ಬೇರೆ ಬೇರೆ ಬಗೆಯಲ್ಲಿ ವಿಂಗಡಿಸಿ ನೋಡುವುದರಿಂದ ಈ ಚಿಂತನೆಯ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು;

  1. ಸಾಮಥ್ರ್ಯ ಮಾದರಿ (ಕಾಂಪಿಟನ್ಸ್ ಮಾಡಲ್)
  2. ಆಚರಣೆ ಮಾದರಿ (ಪರ್ಫಾರ್‍ಮೆನ್ಸ್ ಮಾಡಲ್)
  3. ನುಡಿ ಗಳಿಕೆಯ ಮಾದರಿ (ಆಕ್ವಿಜೇಶನ್ ಮಾಡಲ್)

ಈ ಮೂರು ನೆಲೆಗಳು ಪರಸ್ಪರ ನಂಟುಳ್ಳವುಗಳಾಗಿವೆ. ಇವುಗಳ ಗುಣವೆಂತಹದು ಎಂಬುದನ್ನು ಬಿಡಿಸಿ ನೋಡಿದರೆ, ಚಾಮ್‍ಸ್ಕಿಯ ನುಡಿ ಬಗೆಗಿನ ತಿಳಿವಳಿಕೆಗಳು ನಮ್ಮರಿವಿಗೆ ಬರುತ್ತವೆ. ಇವುಗಳಲ್ಲಿ ಯಾವುದೇ ಒಂದನ್ನು ಹೊರತುಪಡಿಸಿ, ಚಾಮ್‍ಸ್ಕಿಯ ನುಡಿ ಬಗೆಗಿನ ಚಿಂತನೆಗಳನ್ನು ಅರಿಯುವುದು ಕೊಂಚ ದುಸ್ತರವೇ ಸರಿ.

ನುಡಿಯಿಗರು (ಜನರು) ನುಡಿಯನ್ನು ಹೇಗೆ ಗಳಿಸಿಕೊಳ್ಳುತ್ತಾರೆ. ಹಾಗೇ ಗಳಿಸಿಕೊಳ್ಳಲು ಯಾವ ಬಗೆಯ ಜೈವಿಕ ನೆರವು ಅವರಿಗೆ ಸಿಗುತ್ತದೆ. ಹಾಗೂ ಅದೆಲ್ಲವೂ ಹೇಗೆ ಒಂದು ಮಾನಸಿಕ ಸಾಮರ್ಥ್ಯವಾಗಿ ಅವರಿಗೆ ದಕ್ಕುತ್ತದೆ? ನುಡಿಯಿಗರ ಸೃಜನಶೀಲ ಕಸುವು ಎಂತಹದು? ಹಾಗೂ ಆಡುಗನು ತಾನು ಈ ಹಿಂದೆ ಯಾವತ್ತು ಉತ್ಪಾದಿಸದ ಹೊಸ ಹೊಸ ವಾಕ್ಯಗಳನ್ನು ಹೇಗೆ ಕಟ್ಟುತ್ತಾನೆ.

ಹಾಗೇನೆ ಕೇಳುವ ಯಾವತ್ತು ಈ ಹಿಂದೆ ಕೇಳದೇ ಇರುವ ಆ ಹೊಸ ಹೊಸ ವಾಕ್ಯಗಳನ್ನು ಹೇಗೆ ಅರಿತುಕೊಳ್ಳುತ್ತಾನೆ. ಇಂತಹ ಸೊಲ್ಲುಗಳ ಉತ್ಪಾದನೆ ಹಾಗೂ ಗ್ರಹಿಕೆಗೆ ಯಾವುದೇ ಮಿತಿಯಿರುವುದಿಲ್ಲ. ಅಪರಿಮಿತವಾಗಿ ಈ ಕೆಲಸ ನುಡಿಯಲ್ಲಿ ನಡೆಯುತ್ತದೆ. ಇದರಿಂದ ಮಾನವರಿಗೆ ಅಂತಸ್ಥ ಸಾಮರ್ಥ್ಯವಿದೆ ಎಂದಾಯ್ತು. ಇದನ್ನೇ ಚಾಮ್‍ಸ್ಕಿ ಅನಂತತ್ವ (ಇನ್‍ಫಿನಿಟಿ) ಎಂದು ಹೇಳುತ್ತಾನೆ. ಇಂತಹ ಎಲ್ಲ ನಿಲುವುಗಳನ್ನು ಕುರಿತು ಚರ್ಚಿಸುವುದೇ ಸಾಮರ್ಥ್ಯದ ಮಾದರಿ.

ಸಾಮರ್ಥ್ಯ ಮಾದರಿ

(ಸೊಲ್ಲರಿಮೆ/ವ್ಯಾಕರಣ)

ಉಲಿಗಳು     (ಸೌಂಡ್ಸ್)

ಭಾಷಿಕ ಅರ್ಥ  ‌‌ (ಲಿಂಗ್ವಿಸ್ಟಿಕ್ಸ್ ಮೀನಿಂಗ್)

ಚಿತ್ರ 1.ಅ ಸಾಮರ್ಥ್ಯ ಮಾದರಿ

ನುಡಿಯಿಗರ ಮೆದುಳಿನಲ್ಲಿ ಅಂತಸ್ಥವಾಗಿರುವ ನುಡಿಯ ತಿಳಿವು (ನಾಲೇಜ್ ಆಫ್ ಲಾಂಗ್ವೇಜ್) ಹೇಗೆ ಒಂದು ಉತ್ಪಾದಕ – ರೂಪಾಂತರ ನೆಲೆಯಾಗಿ ಬರ್ಹಿರೂಪವನ್ನು ಪಡೆಯುತ್ತದೆ. ನುಡಿಯ ಸೊಲ್ಲುಗಳನ್ನು ಕಟ್ಟುವ, ಸೊಲ್ಲುಗಳ ನಡುವಣ ನಂಟಸ್ತಿಕೆ ಹಾಗೂ ಭಿನ್ನತೆಗಳನ್ನು ಗುರುತಿಸುವ, ಹಾಗೂ ನುಡಿಯ ಮೂಲ ದತ್ತದಿಂದ (ಪ್ರೈಮರಿ ಲಿಂಗ್ವಿಸ್ಟಿಕ್ಸ್ ಡೇಟ) ಅಂತಸ್ಥ ಸಾಮರ್ಥ್ಯದ ಲಕ್ಷಣಗಳು ಆಚರಣೆಯ ನೆಲೆಯನ್ನು ಹೇಗೆ ಪಡೆಯುತ್ತವೆ.

ಅವುಗಳ ಮೂಲಕ ಆಯಾ ನುಡಿಯ ಅಂತರ್ನಿಹಿತ ನಿಯಮಗಳನ್ನು ಹೇಗೆ ಗುರುತಿಸುತ್ತೇವೆ, ಹಾಗೂ ಒಳಪದರ (ಡೀಪ್ ಸ್ಟ್ರಕ್ಚರ್) ರಚನೆ ಮತ್ತು ಹೊರಪದರ (ಸರ್ಫೇಸ್ ಸ್ಟ್ರಕ್ಚರ್) ರಚನೆಗಳು ಪರಸ್ಪರವಾಗಿ ಹೇಗೆ ವ್ಯವರಿಸುತ್ತವೆ ಎಂಬಿತ್ಯಾದಿ ಸಂಗತಿಗಳನ್ನು ಈ ಆಚರಣೆಯ ಮಾದರಿಯಿಂದ ತಿಳಿಯುತ್ತೇವೆ. ಇನ್ನೊಂದು ಸಂಗತಿಯನ್ನು ಈ ಆಚರಣೆಯ ನೆಲೆಯಿಂದ ಅರಿತುಕೊಳ್ಳಲು ಅನಕೂಲವಾಗುತ್ತದೆ.

ಅದೇನೆಂದರೆ, ಮಾನವರ ವರ್ತನೆ ಮತ್ತು ಇತರ ಪ್ರಾಣಿಗಳ ವರ್ತನೆಗಳ ನಡುವೆ ಯಾವ ಬಗೆಯ ಗುಣಾತ್ಮಕ, ಭಾಷಿಕ, ವೈಚಾರಿಕ ವ್ಯತ್ಯಾಸಗಳಿರುತ್ತವೆ ಎಂಬು ದಿಟ ಸಂಗತಿಗಳನ್ನು ಅರಿಯುಲೂ ಈ ಆಚರಣೆಯ ಮಾದರಿ ನೆರವಾಗುತ್ತದೆ.

ಸಂವಹನ ಆಶಯ    (ಕಮ್ಯುನಿಕೇಟಿವ್ ಇನ್‍ಟೆನ್ಶನ್)

ಉಲಿಗಳು        (ಸೌಂಡ್ಸ್)

ಚಿತ್ರ 1.ಆ ಆಚರಣೆಯ ಮಾದರಿ

ನುಡಿಯನ್ನು ಗಳಿಸುವ, ಆ ಮೂಲಕ ನುಡಿ ಬಗೆಗಿನ ತಿಳಿವು ಸಂಚಯಗೊಳ್ಳುವ, ಹೀಗೆ ಸಂಚಯಗೊಂಡ ತಿಳಿವು ಒಂದು ಅನುಭವವಾಗಿ ರೂಪುಗೊಳ್ಳುವ ನೆಲೆಗಳು ಈ ಗ್ರಹಿಕೆಯ ಮಾದರಿಯಿಂದ ತಿಳಿದುಬರುತ್ತವೆ.

ಹಿಂದೆಂದೂ ಕೇಳಿರದ, ಓದಿರದ ಸೊಲ್ಲುಗಳನ್ನು (ವಾಕ್ಯ) ಕಟ್ಟುವುದಕ್ಕೆ ಹೇಗೆ ಸಾಧ್ಯ? ಯಾವುದೇ ಔಪಚಾರಿಕ ತರಬೇತಿಯಿಲ್ಲದೇನೆ ಮಗುವೊಂದು ಸರಳವಾಗಿ ನುಡಿಯ ಎಲ್ಲ ರಾಚನಿಕ ನೆಲೆಗಳನ್ನು ಹೇಗೆ ಪಡೆದುಕೊಳ್ಳುತ್ತೆ? ಸೊಲ್ಲರಿಮೆಗೆ ಒಪ್ಪಿತವಾಗದ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾನೆಯೇ?) ಸೊಲ್ಲುಗಳಿಗೂ ಹಾಗೂ ಸೊಲ್ಲರಿಮೆಗೆ ಒಪ್ಪಿತವಾಗುವ (ಉದಾ.ಗೆಗಾಗಿ. ಕಮಲ ಇವತ್ತು ಕ್ಲಾಸಿಗೆ ಬಂದಿದ್ದಾಳೆಯೇ) ಸೊಲ್ಲುಗಳಿಗೂ ಇರುವ ಅಂತರವನ್ನು ಹೇಗೆ ಗುರುತಿಸಲಾಗುತ್ತೆ?

ಅತ್ಯಂತ ಕಡಿಮೆ ಹೂಡುವಳಿಗಳ (ಇನ್‍ಪುಟ್ಸ್) ಮೂಲಕ ಅತ್ಯಂತ ಗರಿಷ್ಠಮಟ್ಟದ ತಿಳಿವನ್ನು ನುಡಿಯಿಗರು (ಭಾಷಿಕರು) ಹೇಗೆ ಪಡೆಯುತ್ತಾರೆ? ಈ ಬಗೆಯ ಗ್ರಹಿಕೆಯ ನೆಲೆಯನ್ನು ಚಾಮ್‍ಸ್ಕಿ ಪ್ಲೇಟೋನ ಸಮಸ್ಯೆ ಎಂದು ಹೆಸರಿಸುತ್ತಾನೆ. ಮತ್ತು ಹೆಚ್ಚು ಹೂಡುವಳಿಗಳಿದ್ದು (ಇನ್‍ಪುಟ್ಸ್) ಅತ್ಯಂತ ಕಡಿಮೆ ತಿಳಿವನ್ನು ನುಡಿಯಿಗರು ಪಡೆಯುತ್ತಾರೆ. ಇದನನ್ನು ಚಾಮ್‍ಸ್ಕಿ ಆರ್ವೆಲ್ ಸಮಸ್ಯೆ ಎಂದು ಕರೆಯುತ್ತಾನೆ. ವರ್ತನಾವಾದಿಗಳು ವಾದಿಸುವಂತೆ ನುಡಿ ಕೇವಲ ಕಲಿಕೆಯಿಂದ ಪಡೆಯುವ ಸಾಮರ್ಥ್ಯವಲ್ಲ, ಬದಲಾಗಿ ಅದು ಮನುಷ್ಯರ ಮನಸ್ಸಿಗೆ ಸಂಬಂಧಿಸಿದ ಸಂಗತಿ ಎಂಬ ದಟ ಸಂಗತಿ ಈ ಗ್ರಹಿಕೆಯ ಮಾದರಿಂದ ತಿಳಿಯುತ್ತದೆ.

ನುಡಿ ಅನುಭವ (ಲಾಂಗ್ವೇಜ್ ಎಕ್ಸಪೀರಿಯನ್ಸ್)

ಚಿತ್ರ 1.ಇ. ನುಡಿ ಗಳಿಕೆಯ ಮಾದರಿ

ಚಾಮ್‍ಸ್ಕಿಯ ಎರಡು ಮುಖ್ಯ ಅರಿಮೆಯ ನೆಲೆಗಳನ್ನು ಚರ್ಚಿಸುವುದರ ಮೂಲಕ ಅವರ ನುಡಿ ಬಗೆಗಿನ ತಿಳುವಳಿಕೆಗಳನ್ನು ಇನ್ನಷ್ಟು ಆಳವಾಗಿ ತಿಳಿಯಲು ಸಾಧ್ಯವಿದೆ. ನುಡಿಯೆಂಬುದು ಮನುಷ್ಯರಿಗೆ ಒದಗುವಂತಹದೇ (ಲಾಂಗ್ವೇಜ್, ಇಟ್ ಹ್ಯಾಪನ್ಸ್ ಟು ಹ್ಯೂಮನ್ ಬೀಯಿಂಗ್ಸ್) ಹೊರತು ಕಲಿಯುವಂತಹದಲ್ಲ.

ಕಾರಣ ಮನುಷ್ಯರ ಮೆದುಳಿನಲ್ಲಿ ಜನ್ಮಜಾತವಾಗಿ ನುಡಿ ಸಾಮರ್ಥ್ಯವೊಂದು ನೆಲೆಗೊಂಡಿರುತ್ತದೆ. ಇದನ್ನು ವೈಶ್ವಿಕ ವ್ಯಾಕರಣ (ಯೂನಿವರ್ಸಲ್ ಗ್ರಾಮರ್) ಅಥವಾ (ಯುಜಿ) ಎಂದು ಕರೆಯುತ್ತಾರೆ. ಅಂದರೆ ಲೋಕದಲ್ಲಿರುವ ಯಾವುದೇ ನುಡಿಯನ್ನಾದರೂ ಮನುಷ್ಯರು ಗಳಿಸಿಕೊಳ್ಳಲು ಬೇಕಾಗುವ ಕೆಲವು ನಿಯಮಗಳ ಗುಚ್ಚವೇ ಈ ಯುಜಿಯಲ್ಲಿ ಅಂತಸ್ಥವಾಗಿರುತ್ತವೆ.

ಇದು ಇಂತಹದೇ ನುಡಿಗೆ ಮಾತ್ರ ಅನ್ವಯವಾಗುವಂತಹದು ಎಂದು ಹೇಳುವಂತಿಲ್ಲ. ಲೋಕದಲ್ಲಿರುವ ಎಲ್ಲ ನುಡಿಗಳಿಗೂ ಆನ್ವಯಿಸುವ ಸಾಮನ್ಯ ತತ್ವಗಳು ಈ ಯುಜಿಯಲ್ಲಿ ಅಂತರ್ಗತವಾಗಿರುತ್ತವೆ. ಹಾಗಾಗಿ ನುಡಿ ಅನ್ನುವಂತಹದು ಕಲಿಯುವಂತಹದಲ್ಲ, ಬದಲಾಗಿ ಅದನ್ನು ಪಡೆಯುವುದಕ್ಕೆ ಬೇಕಾದ ಸಾಮರ್ಥ್ಯ ಮನುಷ್ಯರ ಮೆದುಳಿನಲ್ಲಿ ಅಡಕವಾಗಿರುತ್ತದೆ.

ನಿಯಮಗಳು ಮತ್ತು ವಿಕಲ್ಪಗಳು (ಪ್ರಿನ್ಸಿಪಲ್ಸ್ ಆಂಡ್ ಪ್ಯಾರಮಿಟರ್ಸ್) ಎಂಬ ತನ್ನ ಮತ್ತೊಂದು ಪ್ರಭಾವಿ ತಾತ್ವಿಕ ಚೌಕಟ್ಟಿನಿಂದ ಚಾಮ್‍ಸ್ಕಿ ಯುಜಿ ಕುರಿತ ತಿಳಿವಳಿಕೆಗಳನ್ನು ಮತ್ತಷ್ಟು ನಿಚ್ಚಳಗೊಳಿಸುತ್ತಾನೆ. ಈ ಥಿಯರಿಯನ್ನು ಇವನು ಕಳೆದ ಶತಮಾನದ ಎಂಬತ್ತರ ದಶಕದಲ್ಲಿ ರೂಪಿಸಿದ್ದಾನೆ.

ಹಾಗಾದರೆ, ನಿಯಮಗಳು ಮತ್ತು ವಿಕಲ್ಪಗಳು ಎಂಬ ಈ ತಾತ್ವಿಕ ಚೌಕಟ್ಟು ಏನನ್ನು ಹೇಳುತ್ತದೆಂದರೆ, ಲೋಕದಲ್ಲಿರುವ ಎಲ್ಲ ನುಡಿಗಳು ಕೆಲವು ಸಮಾನ ತತ್ವಗಳನ್ನು ಹಂಚಿಕೊಂಡಿರುತ್ತವೆ. ಇದನ್ನು ಚಾಮ್‍ಸ್ಕಿ ಪ್ರಿನ್ಸಿಪಲ್ಸ್‍ಯೆಂದು ಕರೆದನು. ಅಂದರೆ ಕ್ರಿಯಾಪದ, ನಾಮಪದ, ಕಾಲ, ವಿಭಕ್ತಿ, ಪುರುಷ ಹಾಗೂ ವಚನಗಳು ಲೋಕದ ಎಲ್ಲ ನುಡಿಗಳಲ್ಲಿ ಇರುತ್ತವೆ.

ಇವುಗಳನ್ನು ರೂಪಿಸುವ ರಾಚನಿಕ ಮೂಲ ತತ್ವಗಳು ಕೂಡ ಆಯಾ ನುಡಿಗಳಲ್ಲಿ ಇರುತ್ತವೆ. ಇವಗಳು ರಾಚನಿಕವಾಗಿ ಕೆಲವು ಸಮಾನ ತತ್ವಗಳನ್ನೂ ಅನುಸರಿಸುತ್ತವೆ. ಆದರೆ ಲೋಕದಲ್ಲಿರುವ ಈ ನುಡಿಗಳ ರಾಚನಿಕ ನೆಲೆಗಳು ವ್ಯವರಿಸುವ ಕ್ರಮಗಳಲ್ಲಿ ಮಾತ್ರ ಸಮಾನತೆ ಇರುವುದಿಲ್ಲ. ಅವುಗಳ ನಡುವೆ ಕೆಲವು ವ್ಯತ್ಯಾಸಗಳೂ ಇರುತ್ತವೆ. ಈ ವ್ಯತ್ಯಾಸಗಳನ್ನು ಚಾಮ್‍ಸ್ಕಿ ವಿಕಲ್ಪ ಇಲ್ಲವೇ ಪ್ಯಾರಮಿಟರ್ಸ್‍ಯೆಂದು ಕರೆಯುತ್ತಾನೆ.

ವಿಕಲ್ಪಗಳೇ ಬೇರೆ ಬೇರೆ ನುಡಿಗಳ ಸ್ವಾಯತ್ತತೆಗೆ ಕಾರಣವಾಗುತ್ತವೆ ಎಂಬುದು ಗಮನಾರ್ಹ. ಎತ್ತುಗೆಗಾಗಿ, ಇಂಗ್ಲಿಶಿನಲ್ಲಿರುವ ಪ್ರಿಪಸಿಶನ್ ಎಂಬ ರಾಚನಿಕ ವ್ಯವಸ್ಥೆ ಕನ್ನಡದಲ್ಲಿಲ್ಲ. ಹಾಗೂ ಕನ್ನಡದಲ್ಲಿರುವ ಪೋಸ್ಟ್‍ಪೊಸಿಶನ್ (ವಿಭಕ್ತಿ ಪ್ರತ್ಯಯಗಳು) ಎಂಬ ರಾಚನಿಕ ವ್ಯವಸ್ಥೆ ಇಂಗ್ಲಿಶಿನಲ್ಲಿಲ್ಲ. ಇವುಗಳು ವಿಭಕ್ತಿಯನ್ನು ಸೂಚಿಸುವ ಕೆಲಸದಲ್ಲಿ ಪಾಲ್ಗೊಳ್ಳುತ್ತವೆ.

ಅಂದರೆ ಇಂಗ್ಲಿಶಿನಲ್ಲಿ ವಿಭಕ್ತಿ ಸೂಚಿಸುವ ರೂಪಗಳು ನಾಮಪದದ ಮೊದಲು ಬರುತ್ತವೆ, ಆದರೆ ಕನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ನಾಮಪದದ ನಂತರ ಬರುತ್ತವೆ. ಹಾಗೂ ಸಂಸ್ಕೃತದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಕನ್ನಡದ ಸಂಧಿ, ಸಮಾಸ ಹಾಗೂ ವಿಭಕ್ತಿ ರಚನೆಗೂ ಸಾಕಷ್ಟು ಅಂತರಗಳಿವೆ. ಇಂತಹ ಅಂತರಗಳಿಂದಲೇ ಅವುಗಳು ಬೇರೆ ಬೇರೆ ನುಡಿಗಳಾಗಿ ಅಸ್ತಿತ್ವದಲ್ಲಿವೆ.

ಸೊಲ್ಲುಗಳ/ವಾಕ್ಯಗಳ ಕಟ್ಟಿನ ಮಾದರಿಯನ್ನು ಬಿಡಿಸಿ ನೋಡುವುದರ ಮೂಲಕ ಈ ತಿಳಿವನ್ನು ಇನ್ನಷ್ಟೂ ನಿಚ್ಚಳಗೊಳಿಸಬಹುದು. ಲೋಕದ ನುಡಿಗಳ ಸೊಲ್ಲುಗಳನ್ನು ರೂಪಿಸುವ ಕಟ್ಟುಗಳ ನಡುವೆ ಮೂಲತತ್ವಗಳ ಒಂದು ಕ್ರಮವಿರುತ್ತದೆ. ಇದನ್ನು ವಿಷಯ (ಸಬ್ಜೆಕ್ಟ್), ಅನುಭೋಗಿ (ಆಬ್ಜೆಕ್ಟ್) ಹಾಗೂ ಕೆಲಸಪದ (ವರ್ಬ್) ಎಂಬ ನೆಲೆಗಳನ್ನಾಗಿ ಗುರುತಿಸುತ್ತಾರೆ.

ಆದರೆ ಇವುಗಳನ್ನು ಜೋಡಿಸುವ ಕ್ರಮಗಳು ಮಾತ್ರ ಎಲ್ಲ ನುಡಿಗಳಲ್ಲಿ ಒಂದೇ ಬಗೆಯಲ್ಲಿ ಇರುವುದಿಲ್ಲ. ಎತ್ತುಗೆಗಾಗಿ ಇಂಗ್ಲಿಶಿನಲ್ಲಿ ಕೆಲಸಪದಗಳು ಸೊಲ್ಲಿನ ನಡುವೆ ಬರುತ್ತವೆ, ಆದರೆ ಕನ್ನಡದಲ್ಲಿ ಅವು ಕೊನೆಗೆ ಬರುತ್ತವೆ. ಸೊಲ್ಲುಗಳನ್ನು ಕಟ್ಟಲು ವಿಷಯ, ಅನುಭೋಗಿ ಹಾಗೂ ಕೆಲಸಪದಗಳು ಎಲ್ಲ ನುಡಿಗಳಲ್ಲೂ ಇರುತ್ತವೆಯಾದರೂ, ಅವುಗಳನ್ನು ಹೊಂದಿಸುವ ರಾಚನಿಕ ಮೂಲತತ್ವಗಳಲ್ಲಿ ವಿಕಲ್ಪಗಳು ಏರ್ಪಡುತ್ತವೆ. ಒಂದು ನುಡಿ ಇನ್ನೊಂದು ನುಡಿಯಿಂದ ಹೇಗೆ ಬೇರೆಯಾಗಿರುತ್ತದೆ ಎಂಬುದನ್ನು ಇಂತಹ ವಿಕಲ್ಪಗಳೇ ತಿಳಿಸುತ್ತವೆ. ಇವುಗಳನ್ನು ಈ ಕೆಳಗಿನಂತೆ ವಿಂಗಡಿಸಿರುತ್ತಾರೆ;

  1. ವಿಷಯ, ಅನುಭೋಗಿ ಹಾಗೂ ಕೆಲಸಪದ
  2. ವಿಷಯ, ಕೆಲಸಪದ ಹಾಗೂ ಅನುಭೋಗಿ
  3. ಅನುಭೋಗಿ, ಕೆಲಸಪದ ಹಾಗೂ ವಿಷಯ
  4. ಅನುಭೋಗಿ, ವಿಷಯ ಹಾಗೂ ಕೆಲಸಪದ
  5. ಕೆಲಸಪದ, ವಿಷಯ ಹಾಗೂ ಅನುಭೋಗಿ
  6. ಕೆಲಸಪದ, ಅನುಭೋಗಿ ಹಾಗೂ ವಿಷಯ

ಈ ಆರು ಬಗೆಯಲ್ಲಿ ಲೋಕದ ನುಡಿಗಳ ಸೊಲ್ಲುಗಳು ರೂಪುಗೊಳ್ಳತ್ತವೆ. ನುಡಿಗಳ ನಡುವಣ ಮೂಲತತ್ವಗಳಲ್ಲಿ ಉಂಟಾಗುವ ಈ ವಿಕಲ್ಪಗಳು ಅತ್ಯಂತ ಮಹತ್ವದ ಸಂಗತಿಗಳು. ಏಕೆಂದರೆ ಇಂತಹ ವಿಕಲ್ಪಗಳೇ ಆಯಾ ನುಡಿಗಳ ಸ್ವಾಯತ್ತತೆಯನ್ನು ಸಾಬೀತುಪಡಿಸುತ್ತವೆ.

ಚಾಮ್‍ಸ್ಕಿಗೆ ನುಡಿ ಒಂದು ಸಾಮಾಜಿಕ ನಿಯತಿಯಾಗಿರಲ್ಲ (ಫಿನಾಮಿನಾ). ಹೊರತಾಗಿ ಅದು ಯಾವಾಗಲೂ ಮಾನಸಿಕ ನಿಯತಿಯಾಗಿತ್ತು (ಮೆಂಟಲ್ ಫಿನಾಮಿನಾ). ಹಾಗಾಗಿ ನುಡಿ ಬಗೆಗಿನ ತನ್ನ ಚಿಂತನೆಗಳನ್ನು ಮನಸ್ಸು ಮತ್ತು ಆಲೋಚನೆಯ ರಚನೆಗಳನ್ನು ಅರಿಯುವ ಮಾನದಂಡವನ್ನಾಗಿ ಬಳಸಿಕೊಂಡಿದ್ದಾನೆ. ಚಾಮ್‍ಸ್ಕಿಯ ಪ್ರಕಾರ ನುಡಿ ಕೇವಲ ಒಂದು ಸಂವಹನ ಮಾಧ್ಯಮವಲ್ಲ.

ಅದೊಂದು ಸೃಜನಶೀಲ ಹಾಗೂ ವೈಚಾರಿಕ ಕ್ರಿಯೆ. ಅದಕ್ಕಾಗಿ ಬಿ.ಎಫ್.ಸ್ಕಿನ್ನರ್, ಪಿಯಾಜೆ, ವ್ಯಾಗ್‍ಟಸ್ಕಿ, ವ್ಯಾಟ್ಸನ್ ಹಾಗೂ ಕ್ವೈನ್ ಅವರು ಮಂಡಿಸುವ ನುಡಿ ಬಗೆಗಿನ ಚಿಂತನೆಗಳನ್ನು ಚಾಮ್‍ಸ್ಕಿ ಒಪ್ಪುವುದಿಲ್ಲ. ಕಾರಣ ವರ್ತನಾವಾದಿಗಳಿಗೆ ಪ್ರಾಣಿ ಹಾಗೂ ಮನುಷ್ಯರು ತಮ್ಮ ಚಳಕಗಳನ್ನು (ಸ್ಕಿಲ್ಸ್) ಸಾಮನ್ಯ ನಿಯಮ ವಿಧಾನದ ನೆಲೆಯಿಂದಲೇ ಪಡೆಯುತ್ತವೆ ಎಂಬ ನಂಬಿಕೆಯೇ ಚಾಮ್‍ಸ್ಕಿಯ ಈ ನಿರಾಕರಣೆಗೆ ಕಾರಣ.

ಚಾಮ್‍ಸ್ಕಿಗೆ ನುಡಿಯರಿಮೆ ಎನ್ನುವುದೇ ನುಡಿ ಆಚರಣೆ ಹಾಗೂ ನುಡಿ ಸಾಮರ್ಥ್ಯಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದಾಗಿದೆ. ನುಡಿಯರಿಮೆಯ ದಿಟವಾದ ಗುರಿಯೇ ನುಡಿ ಸಾಮರ್ಥ್ಯವನ್ನು ಬಗೆದು/ಬಿಡಿಸಿ ನೋಡುವ ನೆಲೆಯೇ ಹೊರತು ನುಡಿ ಆಚರಣೆಯ ಬಗೆಗಳನ್ನು ವಿವರಿಸುವುದು ಮಾತ್ರವಲ್ಲ. ನುಡಿಯರಿಮೆ ಕಾಗ್ನಿಟಿವ್ ಸೈಕಾಲಜಿಯ ಒಂದು ಟಿಸಿಲುಯೆಂಬುದೇ ಚಾಮ್‍ಸ್ಕಿಯ ನಿಲುವು.

ಮಾನಸಿಕವಾಗಿ ಪ್ರತಿನಿಧಿತ ತಿಳಿವಿನ ಮಾದರಿಗಳನ್ನು ರೂಪಿಸುವ ಕ್ರಮವೇ ಈ ತಿಳಿವಿನ ವಲಯದ ಗುರಿಯಾಗಿದೆ. ಹೌದು, ನುಡಿ ಆಚರಣೆಯ ನೆಲೆಗಳನ್ನೂ ಇದು ಗಮನಿಸುತ್ತದೆ. ಗಮನಿಸಿದರೂ, ಇದೊಂದು ಬೇರೆ ಬಗೆಯ ಅಧ್ಯಯನಾಗಿರುತ್ತದೆ. ಏಕೆಂದರೆ, ಇಂತಹ ಆಚರಣೆಯು ನುಡಿ ಸಾಮರ್ಥ್ಯದ ಹಲವು ಬಗೆಯ ಕ್ರಿಯೆಗಳನ್ನು ಒಳಗೊಂಡಿರುತ್ತದೆ.

ಈ ಕ್ರಿಯೆಗಳು ಆಚರಣೆಯ ರೂಪದಲ್ಲಿದ್ದರೂ, ಅವು ಹೇಗೆ ನುಡಿಯ ಅಂತಸ್ಥ ತಿಳಿವನ್ನು ಅರಿಯಲು ಅನಕೂಲಕಾರಿ ಆಗುತ್ತವೆ ಎಂಬುದನ್ನು ಬಿಡಿಸಿ ನೋಡಬೇಕು. ಇಂತಹ ನಿಲುವುಗಳನ್ನು ಕುರಿತ ವಿಶ್ಲೇಷಣೆ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಕಂಡುಕೊಳ್ಳುವ ನೆಲೆಯಾಗುತ್ತದೆ ಅನ್ನುವುದು ಚಾಮ್‍ಸ್ಕಿಯ ಚಿಂತನೆಯ ಮಹತ್ವವನ್ನು ತಿಳಿಸುತ್ತದೆ.

ಸಾಮಾನ್ಯ ಸೂತ್ರಗಳ ವಿಧಾನದ ಮೂಲಕ ರಾಚನಿಕ ನುಡಿಯರಿಮೆ ಕೆಲವು ಆಯ್ದ ಮಾತಿನ ಮೂಲಕ ಸಿಗುವ ದತ್ತವನ್ನು ಅನುಸರಿಸಿ, ಆಯಾ ನುಡಿಗಳ ರಾಚನಿಕ ಸ್ವರೂಪವನ್ನು ತೀರ್ಮಾನಿಸುತ್ತಿತ್ತು. ಇದು ಕೆವಲ ಆಚರಣೆಯ ನೆಲೆಯನ್ನು ಅರಿಯುವ ಬಗೆಯಾಗಿತ್ತು. ಅಂದರೆ ಹೊರಸ್ತರದ ರಚನೆಯನ್ನು ಮಾತ್ರ ಸೂತ್ರೀಕರಿಸಿ ಆ ಮೂಲಕ ಆಯಾ ನುಡಿಗಳ ಲಕ್ಷಣಗಳನ್ನು ಗುರುತಿಸುತ್ತಿದ್ದರು.

ನುಡಿಯ ರಚನೆಯನ್ನು ವರ್ಗೀಕರಿಸಿ ಅದುವೇ ಆ ನುಡಿಯ ಇಡೀ ಸ್ವರೂಪವೆಂದು ನಂಬಿಸಲಾಗುತ್ತಿತ್ತು. ಈ ವಿಶ್ಲೇಷಣೆಯ ಮೂಲಕ ಒಳಸ್ತರದ ಯಾವ ರಾಚನಿಕ ಸ್ವರೂಪವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಚಾಮ್‍ಸ್ಕಿ ಇಂತಹ ವಿಶ್ಲೇಷಣಾ ಮಾದರಿಗಳಿಗೆ ಪ್ರತಿಯಾಗಿ ನುಡಿಯ ಸಾಮರ್ಥ್ಯವನ್ನು ಅರಿಯುವ ನೆಲೆಯ ನುಡಿಯರಿಮೆಯನ್ನು ಹುಟ್ಟು ಹಾಕಿದನು.

ಏಕೆಂದರೆ ಚಾಮ್‍ಸ್ಕಿಗೆ ನುಡಿಯ ಬಗೆಗೆ ತೀವ್ರ ಕುತೂಹಲ ಉಂಟಾಗುವುದಕ್ಕೆ ಮುಖ್ಯ ಕಾರಣವೇ ನುಡಿಯೆಂಬುದು ಮನಸ್ಸಿನ ಕನ್ನಡಿಯಾಗಿರುವುದು. ಮನಸ್ಸು ಹೇಗೆ ನುಡಿಯನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ಸಂಯೋಜಿಸುತ್ತದೆ ಎನ್ನುವ ಚಿಂತನೆಯೇ ಅವನ ಕುತೂಹಲಕ್ಕೆ ಕಾರಣವಾಗಿತ್ತು. ನುಡಿ ಕುರಿತ ಈ ಬಗೆಯ ಅಧ್ಯಯನಗಳು ಕೇವಲ ನುಡಿ ಸ್ವರೂಪವನ್ನು ಮಾತ್ರ ವಿವರಿಸುತ್ತಿಲ್ಲ.

ಬದಲಾಗಿ ಮನುಷ್ಯರ ಮನಸ್ಸಿನಲ್ಲಿ ಜನ್ಮಜಾತವಾಗಿ ನೆಲೆನಿಂತಿರುವ ನುಡಿಯ ಗುಣಲಕ್ಷಣಗಳೆಂತಹವು ಎಂಬುದನ್ನೂ ಅರಿಯುವುದಾಗಿತ್ತು. ಅಂದರೆ, ಸೊಲ್ಲರಿಮೆ/ವ್ಯಾಕರಣ ಕೇವಲ ನುಡಿ ಆಚರಣೆಯ ದತ್ತವನ್ನು ರುಜುಪಡಿಸುವ ನೆಲೆಮಾತ್ರವಾಗದೇ, ಅಪರಿಮಿತ ಸೊಲ್ಲುಗಳ/ವಾಕ್ಯಗಳ ಉತ್ಪಾದಕತೆಗೆ ಕಾರಣವಾಗಿರುವ ಪರಿಮಿತ ನಿಯಮಗಳ ಉತ್ಪಾದಕ ಸಾಮರ್ಥ್ಯ ನುಡಿಯಿಗರ ಮನಸ್ಸಿನಲ್ಲಿ ಹೇಗೆ ಅಂತಸ್ಥವಾಗಿರುತ್ತವೆ ಎಂಬುದನ್ನು ಅರಿಯುವ ಬಗೆಯಾಗಬೇಕು ಅನ್ನುವುದೇ ಚಾಮ್‍ಸ್ಕಿಯ ನಿಲುವು. ಇವನ ನುಡಿಯರಿಮೆಯ ಗುರಿಗಳನ್ನು ಮೂರು ಬೇರೆ ಬೇರೆ ನೆಲೆಗಳನ್ನಾಗಿ ವಿಂಗಡಿಸಬಹುದು;

  1. ನುಡಿ ರಚನೆಯ ತತ್ವ
  2. ನುಡಿ ಗಳಿಕೆಯ ತತ್ವ
  3. ನುಡಿ ಬಳಕೆಯ ತತ್ವ

ಸೊಲ್ಲರಿಮೆಯೆಂಬುದು ಚಾಮ್‍ಸ್ಕಿಗೆ ನುಡಿಯಿಗರ ಮಾತಿನ ಕಸುವು ಹಾಗೂ ಚಳಕಗಳನ್ನು (ಸ್ಕಿಲ್ಸ್) ಬಿಡಿಸಿ ನೋಡುವ ಮಾದರಿಯಾಗಿದೆ. ಅಂದರೆ ನುಡಿಯಿಗರ ಮನಸ್ಸಿನಲ್ಲಿ ಅಂತಸ್ಥವಾಗಿರುವ ಸಾಮರ್ಥ್ಯವನ್ನು ಅರಿಯುವ ಬಗೆಯೆಂದೇ ಹೇಳಬಹುದು. ನುಡಿಯಿಗರಿಗೆ ನುಡಿಯನ್ನು ಬಳಸಲು, ಮಾತುನಾಡಲು, ನಿರ್ವಚಿಸಲು ಈ ನುಡಿ ಸಾಮರ್ಥ್ಯ ಹೇಗೆ ಒತ್ತಾಸೆಯಾಗಿರುತ್ತದೆ ಎಂಬ ತಿಳಿವು ಇಲ್ಲಿ ಹೊರ ಬೀಳುತ್ತದೆ.

ಒಟ್ಟಾರೆಯಾಗಿ ಚಾಮ್‍ಸ್ಕಿ ಪ್ರಕಾರ ಆಡುಗ –ಕೇಳುಗ ತನ್ನ ನುಡಿ ಬಗೆಗೆ ಹೊಂದಿರುವ ತಿಳಿವನ್ನೇ ನುಡಿ ಸಾಮರ್ಥ್ಯವೆಂದು ಹೇಳಲಾಗುತ್ತದೆ. ನುಡಿ ಬಳಕೆಯ ವಾಸ್ತವ ರೂಪಗಳನ್ನು ಹೊರಡಿಸುವ ಸನ್ನಿವೇಶವನ್ನು ಆಚರಣೆಯೆಂದು ಹೇಳಲಾಗಿದೆ. ಆಚರಣೆ ಯಾವತ್ತೂ ಕೂಡ ಸಾಮರ್ಥ್ಯದ ತದ್ರೂಪಿಯಾಗಿರಲಾದು. ಇದೊಂದು ಅಪೂರ್ಣತೆಯ ಕ್ರಿಯೆಯಾಗಿರುತ್ತದೆ.

ಕೆಲವಾರು ಕುಂದುಗಳಾದರೂ ನುಡಿ ಆಚರಣೆಯ ಸನ್ನಿವೇಶದಲ್ಲಿ ಉಂಟಾಗುತ್ತವೆ. ಉದಾ.ಗೆಗಾಗಿ, ಬಾಯ್ತಪ್ಪಿನ ಮಾತುಗಳು, ಉಲಿಗಳ ಉಚ್ಚಾರಣೆಯಲ್ಲಿ ಉಂಟಾಗುವ ಏರುಪೇರುಗಳು, ಕುಡಿತದ ಪರಿಣಾಮದಿಂದ ಆಗುವ ಏರುಪೇರು, ಆಲಸ್ಯ, ತ್ರಾಸು ಮುಂತಾದವುಗಳನ್ನು ಇಲ್ಲಿ ಹೇಳಬಹುದು. ಚಾಮ್‍ಸ್ಕಿ ಇವುಗಳನ್ನು ‘ಆಚರಣೆಯ ತಪ್ಪು’ [ಪರ್ಫಾರಮೆನ್ಸ್ ಎರರ್ಸ್]ಗಳೆಂದು ಬಣ್ಣಿಸಿದ್ದಾನೆ.

ಸೊಲ್ಲರಿಮೆಯ ಸಾಮರ್ಥ್ಯ (ಗ್ರಾಮ್ಯಾಟಿಕಲ್ ಕಾಂಪಿಟೆನ್ಸ್) ಹಾಗೂ ಬಳಕೆಯ ಸಾಮರ್ಥ್ಯ (ಪ್ರ್ಯಾಗ್‍ಮ್ಯಾಟಿಕ್ ಕಾಂಪಿಟನ್ಸ್) ಎಂದು ಮತ್ತೆರಡು ಬಗೆಯಾಗಿ ಚಾಮ್‍ಸ್ಕಿ ನುಡಿ ಸಾಮರ್ಥ್ಯವನ್ನು ವಿಂಗಡಿಸುತ್ತಾನೆ. ಮೊದಲನೆಯದು ನುಡಿ ರಚನೆಯ ಅಂತರ್ನಿಹಿತ ನಿಯಮಗಳನ್ನು ಕುರಿತು ವ್ಯವಹರಿಸಿದರೆ, ಎರಡನೆಯದು ನುಡಿ ಬಳಕೆಯ ಹೊರಮೈ ರಚನೆಯನ್ನು ಕುರಿತು ವ್ಯವಹರಿಸುತ್ತದೆ.

ನುಡಿ ಬಳಕೆಯ ನೆಲೆಗಳು ಕೇವಲ ನುಡಿಯರಿಮೆಯ ನಿಯಮಗಳಿಗೆ ಮಾತ್ರ ಬದ್ಧವಾಗಿರದೇ, ಅವುಗಳೊಟ್ಟಿಗೆ ನುಡಿಯರಿಮೆಗೆ ಹೊರತಾದ ಸಂಗತಿಗಳು ಸೇರಿರುತ್ತವೆ ಎಂಬುದು ವಿಶೇಷ ಸಂಗತಿ. ಅಂದರೆ, ಸೊಲ್ಲುಗಳನ್ನು ನಿರ್ವಚಿಸುವ ಬಗೆಗಳು ಕೇವಲ ನುಡಿಯರಿಮೆಯ ಸಂಗತಿಗಳು ಮಾತ್ರವಾಗಿರದೇ, ಅವು ಸಾಮಾಜಿಕ ಸಂಗತಿಗಳೊಂದಿಗೂ ತಳಕು ಹಾಕಿಕೊಂಡಿರುತ್ತವೆ.

ಯಾವುದೇ ಬಗೆಯ ಹೊಂದಾಣಿಕೆ ಇಲ್ಲದ, ಕೇವಲ ಆಚರಣೆ ಇಲ್ಲವೇ ಹೊರಗಿನ ವರ್ತನೆಗಳನ್ನೇ ನಂಬಿಕೊಂಡು ನುಡಿ ಕುರಿತ ಚಿಂತನೆಗಳೇ ಮನಶಾಸ್ತ್ರದ ಮುಖ್ಯ ವಾಹಿನಿಯಲ್ಲಿ ನಡೆಯುತ್ತಿದ್ದವು. ಈ ಬಗೆಯ ತಿಳಿವಿನ ಅಧ್ಯಯನಗಳು ಮಾನಸಿಕ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಿರಾಕರಿಸದೆಯೂ, ಅದನ್ನೇ ಆಳವಾಗಿ ಒಪ್ಪಿಕೊಳ್ಳದೆಯೂ ಒಂದು ವಿಸಂಗತ ನೆಲೆಯಿಂದ ನುಡಿ ಬಗೆಗಿನ ಸಂಶೋಧನೆಗಳು ನಡೆಯುತಿದ್ದವು.

ಮಾನಸಿಕ ಸಾಮರ್ಥ್ಯವನ್ನರಿಯುವ ಇರಾದೆಯಿಂದ ಇರುವ/ಇದ್ದಂತಹ ನುಡಿಯರಿಮೆಗೆ ಕೇವಲ ವರ್ತನೆಗಳನ್ನೇ ಅನುಸರಿಸುತ್ತಿದ್ದ ತಿಳಿವಿನ ವಲಯಗಳೊಂದಿಗೆ ಹೊಂದಿಕೊಳ್ಳುವುದು ಹೇಗೆ ಸಾಧ್ಯ. ಅದಕ್ಕಾಗಿಯೇ ಚಾಮ್‍ಸ್ಕಿ ಅರಿವಿನ ಮನಶಾಸ್ತ್ರದ ನೆರವಿನಿಂದ ನುಡಿ ಬಗೆಗಿನ ತಿಳುವಳಿಕೆಯನ್ನು ಕಂಡುಕೊಂಡನು ಎಂದು ಹೇಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ; ಒಂದು ಚಿಂತನೆ

Published

on

  • ಮಹಾಂತೇಶ್.ಬಿ.ನಿಟ್ಟೂರು, ದಾವಣಗೆರೆ

ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜೀವಿತ ಕಾಲ 12 ನೇ ಶತಮಾನದ ಬಸವಾದಿ ಶರಣರ ಕಾಲದಲ್ಲೇ ಇತ್ತು ಎಂಬುದು ಇತಿಹಾಸಕಾರರ ಸಂಶೋಧನೆಯಿಂದ ತಿಳಿದು ಬರುತ್ತದೆ. ಅವರ ಹುಟ್ಟೂರು ಹಾವೇರಿ ಜಿಲ್ಲೆಯ ಆಗಿನ ಶಿವಪುರ, ಈಗಿನ ಚೌಡಯ್ಯದಾನಪುರ. ಅವರ ತಂದೆಯ ಹೆಸರು ಶ್ರೀ ವಿರೂಪಾಕ್ಷ, ತಾಯಿಯ ಹೆಸರು ಪಂಪಾಂಭಿಕೆ, ಹೆಂಡತಿಯ ಹೆಸರು ಸುಲೋಚನಾ ಹಾಗೂ ಮಗನ ಹೆಸರು ಪುರವಂತ.

ಅಂಬಿಗ ವೃತ್ತಿಯ ಚೌಡಯ್ಯನವರು ಅಲ್ಲಮ ಪ್ರಭು ಮತ್ತು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಇದ್ದ ಒಬ್ಬ ಕ್ರಾಂತಿಕಾರಿ, ದಿಟ್ಟ, ನೇರ, ನಿಷ್ಠುರ ನುಡಿಯ ವಚನಕಾರ. ಕಲ್ಯಾಣ ಕ್ರಾಂತಿಯ ನಂತರ ಇವರು ತಮ್ಮ ವಚನಗಳ ಗಂಟನ್ನು ಹೊತ್ತು ಉಳವಿಗೆ ನಂತರ ತಮ್ಮ ಗ್ರಾಮವಾದ ತುಂಗಭದ್ರಾ ನದಿಯ ದಡದ ಮೇಲಿರುವ ಶಿವಪುರಕ್ಕೆ ಬಂದು ದೋಣಿ ನಡೆಸುವ ವೃತ್ತಿಯಲ್ಲಿ ನಿರತರಾಗಿ ವಚನ ರಚನೆ ಮಾಡಿರುವುದು ತಿಳಿದು ಬರುತ್ತದೆ.

ಚೌಡಯ್ಯನವರು ತಮ್ಮ ಜೀವಿತಾವಧಿಯಲ್ಲಿ ಅನೇಕ ಪವಾಡಗಳನ್ನು ಮಾಡಿರುತ್ತಾರೆ. ಗಿಡಮೂಲಿಕೆ ಔಷಧಿಗಳಿಂದ ಕ್ಷಯ ರೋಗ, ಕುಷ್ಠರೋಗ ಗುಣಪಡಿಸುವುದು, ಹಾವು ಕಚ್ಚಿದವರನ್ನು

ಬದುಕಿಸುವುದು ಇತ್ಯಾದಿ..

ಒಮ್ಮೆ ಗುತ್ತಲದ ಅರಸನು ಬೇಟೆಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಆತನ ಸೇನಾಧಿಪತಿಯು ಹಾವು ಕಚ್ಚಿ ಮೃತಪಟ್ಟನು. ಇದರಿಂದಾಗಿ ಅರಸನಿಗೆ ಅತೀವ ದುಃಖವುಂಟಾಗಿ ರೋಧಿಸತೊಡಗಿದನು. ಆಗ ಆತನ ಸೈನಿಕನೊಬ್ಬನು ಶ್ರೀ ಚೌಡಯ್ಯನವರ ಪವಾಡಗಳ ಬಗ್ಗೆ ವಿವರಿಸಿ ಹೇಳಲಾಗಿ, ಅರಸನು ತನ್ನ ಮೃತ ಸೇನಾಧಿಪತಿಯ ಶರೀರವನ್ನು ಚೌಡಯ್ಯನವರಲ್ಲಿಗೆ ತಂದು ಆತನನ್ನು ಬದುಕಿಸುವಂತೆ ಕೇಳಿಕೊಂಡರು, ಆಗ ಚೌಡಯ್ಯನವರು ಸೇನಾಧಿಪತಿಯನ್ನು ಬದುಕಿಸುತ್ತಾರೆ. ಇದರಿಂದ ಸಂತುಷ್ಟನಾದ ಅರಸನು ಶಿವಪುರದ ಸುತ್ತಲಿನ ಪೂರ್ವ – ಪಶ್ಚಿಮಕ್ಕೆ 14 ಮೈಲು ಹಾಗೂ ಉತ್ತರ – ದಕ್ಷಿಣಕ್ಕೆ 7 ಮೈಲು ಸುತ್ತಳತೆಯ ಭೂಮಿಯನ್ನು ಚೌಡಯ್ಯನವರಿಗೆ ದಾನವಾಗಿ ನೀಡಿದನು.

ಆದರೆ ಚೌಡಯ್ಯನರು ವೈರಾಗ್ಯಶಾಲಿಯು, ಲೌಕಿಕದಲ್ಲಿ ನಿರಾಸಕ್ತಿ ಹೊಂದಿದವರು ಆಗಿದ್ದರಿಂದ, ಅರಸನು ಕೊಡಮಾಡಿದ್ದ ಸಂಪೂರ್ಣ ಜಮೀನನ್ನು ತನ್ನ ಗುರುಗಳಾದ ಶ್ರೀ ಶಿವದೇವರಿಗೆ ದಾನವಾಗಿ ನೀಡಿದರು ಎಂಬ ಉಲ್ಲೇಖವಿದೆ. ಅಂದಿನಿಂದ ಶಿವಪುರ ಗ್ರಾಮಕ್ಕೆ ‘ಚೌಡಯ್ಯದಾನಪುರ’ ಎಂದು ಹೆಸರು ಬರುತ್ತದೆ. ಮುಂದೆ ಚೌಡಯ್ಯನರು ಅಲ್ಲಿ ದೇಹ ತ್ಯಾಗ ಮಾಡಿದ್ದರಿಂದ ತುಂಗಭದ್ರಾ ನದಿಯ ದಡದಲ್ಲಿ ಈಗಲೂ ಚೌಡಯ್ಯನವರ ಸಮಾಧಿ ಗದ್ದುಗೆ ಇದೆ.

ಭ್ರಮಾಲೋಕದಲ್ಲಿ ವಿಹರಿಸುತ್ತಾ ಕುಳಿತ, ಆಡಂಬರದಲ್ಲಿ ಅಡ್ಡಾದಿಡ್ಡಿ ಅಡ್ಡಾಡುವ ಮಂದಿಯ ಕಪಾಳಕ್ಕೆ ಹೊಡೆದು ಎಚ್ಚರಿಸುವಂತಿವೆ ಚೌಡಯ್ಯನವರ ವಚನಗಳು. ಧಾರ್ಮಿಕ ಮೂಢನಂಬಿಕೆ ಬಿತ್ತುವವರಿಗೆ, ಸ್ವಾರ್ಥಿಗಳಾಗಿ ಬದುಕುವವರಿಗೆ, ಮುಖವಾಡ ಹಾಕಿ ಮಂಕು ಬೂದಿ ಎರಚುವವರಿಗೆ ಸಿಂಹ ಸ್ವಪ್ನದಂತೆ ಬೆಚ್ಚಿ ಬೀಳಿಸುತ್ತವೆ ನಿಜ ಶರಣ ಅಂಬಿಗರ ಚೌಡಯ್ಯನವರ ವಚನಗಳು. ಇದಕ್ಕೆ ತಾತ್ಪೂರ್ತಿಕವಾಗಿ ಕೆಲವು ವಚನಗಳು ಈ ಕೆಳಗಿನಂತಿವೆ;

“ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು/ನಂಬಿದರೆ ಒಂದೇ ಹುಟ್ಟಲಿ/ಕಡೆಯ ಹಾಯಿಸುವೆನೆಂದಾತನಂಬಿಗರ/ಚೌಡಯ್ಯ ನಿಜಶರಣನು”

ಈ ಮೇಲಿನ ವಚನ ಶ್ರೀ ಅಂಬಿಗರ ಚೌಡಯ್ಯನವರ ಸ್ವಾಭಿಮಾನ, ಧೈರ್ಯ, ನೇರ, ನಿರ್ಭಿಡೆಯ ವ್ಯಕ್ತಿತ್ವದ ಪ್ರತೀಕವಾಗಿದೆ.

ಹನ್ನೆರಡನೇ ಶತಮಾನದ ಸಂದರ್ಭದಲ್ಲಿ ಜಾತಿ ಮತ್ತು ವರ್ಗ ವ್ಯವಸ್ಥೆ ಎಷ್ಟರಮಟ್ಟಿಗಿತ್ತು ಎಂಬುದನ್ನು ಈ ವಚನ ಸೂಚಿಸುತ್ತದೆ. ಅಂತಹ ವಿಚಿತ್ರ, ವಿಕ್ಷಿಪ್ತ ಸನ್ನಿವೇಶದಲ್ಲಿ ಬಸವಾದಿ ಶರಣರು ಜಾತೀಯತೆ, ವರ್ಗ – ವರ್ಣ ವ್ಯವಸ್ಥೆಯ ವಿರುದ್ಧ ಬೃಹತ್ ಚಳುವಳಿಯನ್ನು ಕೈಗೊಂಡಾಗ ಅಂಬಿಗರ ಚೌಡಯ್ಯನವರ ಸತ್ಯನಿಷ್ಠೆ, ಪ್ರಾಮಾಣಿಕತೆಯ ವಚನಗಳು ಪ್ರಖರವಾಗಿ ಕಾಣಿಸುತ್ತವೆ. ಕೆಲವು ಢೋಂಗಿ ಭಕ್ತರಿಗೆ, ಕಪಟ ಸನ್ಯಾಸಿಗಳಿಗೆ ತನ್ನ ಖಾರವಾದ ವಚನಗಳ ಮೂಲಕ ಚುರುಕು ಮುಟ್ಟಿಸುತ್ತಾರೆ.

ಆಡಂಬರ ಮತ್ತು ದುರಾಸೆಯ ಜನರ ಮನಸ್ಥಿತಿ ಕಂಡು ಕೆಂಡಾಮಂಡಲವಾಗಿ ಪ್ರಸ್ತುತ ಪಡಿಸಿದ ಒಂದು ವಚನ ಇಂತಿದೆ;

“ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಕಾಳೋಗರನ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹಾರುವ ಪಕ್ಷಿಯನು/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೆಬ್ಬುಲಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಹೊಯ್ವ ಹೆಮ್ಮಾರಿಯ/ನಿಲ್ಲಿಸ ಬಹುದಯ್ಯ ಒಂದೇ ಮಂತ್ರದಲ್ಲಿ ಬರುವ ಉರಿ ಬಾಣವನು/ಇಂತೆಲ್ಲವನು ಒಂದೇ ಮಂತ್ರದಲ್ಲಿ ನಿಲ್ಲಿಸಬಹುದು;/ಲೋಭವೆಂಬ ಗ್ರಹಣ ಹಿಡಿದವರ ಏತರಿಂದಲೂ/ನಿಲ್ಲಿಸಲಾಗದು/ಈ ಲೋಭಕ್ಕೆ ದಾರಿದ್ರ್ಯವೇ ಔಷಧವು;/ಹೇಳಿದರೆ ಕೇಳರು, ತಾವು ತಿಳಿಯರು/ಶಾಸ್ತ್ರವ ನೋಡರು, ಭಕ್ತಿಯ ಹಿಡಿಯರು/ಇಂತಹ ಗೊಡ್ಡು ಮೂಳ ಹೊಲೆಯರಿಗೆ/ಕರ್ಮವೆಂಬ ಶರದ್ಧಿಯಲ್ಲಿ ಬಿದ್ದು ಹೊರಳಾಡುವುದೇ/ಸತ್ಯವೆಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು”

ಸಂಸಾರದ ಜಂಜಾಟದಲ್ಲಿ ಬಿದ್ದು ಒದ್ದಾಡುತ್ತಾ ಶಿವನನ್ನು ಮರೆತು ಹತ್ತು ಹಲವು ಚಿಂತೆಯಲ್ಲಿ ಮುಳುಗಿರುವ ಶವ ಮುಖದ ಜನರ ಸ್ಥಿತಿ-ಗತಿಯನ್ನು ಅರ್ಥಗರ್ಭಿತವಾಗಿ ಸಾದರಪಡಿಸುವ ಒಂದು ವಚನ ಇಂತಿದೆ;

“ಬಡತನಕೆ ಉಂಬುವ ಚಿಂತೆ/ಉಣಲಾದಡೆ ಉಡುವ ಚಿಂತೆ/ಉಡಲಾದಡೆ ಇಡುವ ಚಿಂತೆ/ಇಡಲಾದಡೆ ಹೆಂಡಿರ ಚಿಂತೆ/ಹೆಂಡಿರಾದರೆ ಮಕ್ಕಳ ಚಿಂತೆ/ಮಕ್ಕಳಾದಡೆ ಬದುಕಿನ ಚಿಂತೆ/ಬದುಕಾದಡೆ ಕೇಡಿನ ಚಿಂತೆ/ಕೇಡಾದಡೆ ಮರಣದ ಚಿಂತೆ/ಇಂತೀ ಹಲವು ಚಿಂತೆಯಲ್ಲಿಪ್ಪವರ ಕಂಡೆನು/ಶಿವನ ಚಿಂತೆಯಲ್ಲಿದ್ದಾತರೊಬ್ಬರನೂ ಕಾಣೆನೆಂದಾತ/ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು!”

ಸಮಯದ ಸದ್ಬಳಕೆ ಮಾಡಿಕೊಂಡು ಕಾಯಕ ಮಾಡುತ್ತಾ ಶಿವಭಕ್ತರಾಗಿ, ಜೀವನ ಪಾವನವಾಗಿಸುವಂತೆ ಕರೆ ನೀಡುವ ಒಂದು ವಚನ ಇಂತಿದೆ;

“ಗಾಳಿ ಬಿಟ್ಟಾಗ ತೂರಿಕೊಳ್ಳಿರಯ್ಯ/ಗಾಳಿ ನಿಮ್ಮ ಅಧೀನವಲ್ಲ ಕಂಡಯ್ಯ/ನಾಳೆ ತೂರಿಹೆನೆಂದಡಿಲ್ಲ ಕಂಡಯ್ಯ/ಶಿವಶರಣೆ ಎಂಬುದೊಂದು ಗಾಳಿ ಬಿಟ್ಟಲ್ಲಿ/ಬೇಗ ತೂರೆಂದನಂಬಿಗರ ಚೌಡಯ್ಯ”

ಕಾವಿ ಬಟ್ಟೆ ತೊಟ್ಟು, ಭಿಕ್ಷೆಗಾಗಿ ಜೋಳಿಗೆ ಹಾಕಿದವರೆಲ್ಲರೂ ಜಂಗಮರು, ಗುರುಗಳಾಗಲಾರರು ಎಂಬುದನ್ನು ವಿಡಂಬಿಸುವ ಒಂದು ವಚನ ಇಂತಿದೆ;

“ಕಂಥೆ ತೊಟ್ಟವ ಗುರುವಲ್ಲ/ಕಾವಿ ಹೊದ್ದವ ಜಂಗಮನಲ್ಲ/ಶೀಲ ಕಟ್ಟಿದವ ಶಿವಭಕ್ತನಲ್ಲ/ನೀರು ತೀರ್ಥವಲ್ಲ/ಕೂಳು ಪ್ರಸಾದವಲ್ಲ/ಹೌದೆಂಬವನ ಬಾಯ ಮೇಲೆ/ಅರ್ಧ ಮಣದ ಪಾದರಕ್ಷೆಯ ತೆಗೆದುಕೊಂಡು/ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ/ಟೊಕ ಟೊಕನೆ ಹೊಡೆ ಎಂದಾತ/ನಮ್ಮ ಅಂಬಿಗರ ಚೌಡಯ್ಯ”

ಹೀಗೆ ಬಸವಾದಿ ಶರಣರ ಸಮಾಜ ಸುಧಾರಣಾ ಚಳವಳಿಯಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಡುಪಾಗಿಟ್ಟ ಶ್ರೀ ಅಂಬಿಗರ ಚೌಡಯ್ಯನವರು ತಮ್ಮ ಬದುಕಿನ ನೀತಿಯಿಂದ, ನಿಷ್ಠೆಯಿಂದ, ತೀಕ್ಷ್ಣ ಖಂಡನೆಯ ಬಂಡಾಯ ವಚನಗಳಿಂದ ಗಮನ ಸೆಳೆದು, ಅವರು ರಚಿಸಿದ ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟಿರುವದು ವಿಶೇಷವಾಗಿದೆ. ಸಮಾಜದ ಕೊಳೆಯನ್ನು ತೊಳೆಯುವ ನಿಟ್ಟಿನಲ್ಲಿ ಅಂಬಿಗರ ಚೌಡಯ್ಯನವರ ವಚನಗಳ ಪ್ರಸ್ತುತತೆ ಎದ್ದು ಕಾಣುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

Published

on

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು ಹಬ್ಬಗಳ ಆಚರಣೆಯಲ್ಲಿಯೂ ಈ ಭಿನ್ನತೆಯನ್ನು ಕಾಣಬಹುದಾಗಿದೆ. ಈಗ ನಡೆಯುತ್ತಿರುವ ದೀಪಾವಳಿ ಹಬ್ಬದ ಆಚರಣೆಯೂ ಇದರಿಂದ ಹೊರತಾಗಿಲ್ಲ. ಇಡೀ ಭಾರತ ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ ಎಂಬುದು ಸಾಮಾನ್ಯವಾದ ಹೇಳಿಕೆಯಾಗಿರುತ್ತದೆ.

ದೀಪಾವಳಿ ಎಂದರೆ ದೀಪವನ್ನು ಬೆಳಗಿಸುವ ಹಬ್ಬ. ಜಗದ ಕತ್ತಲೆಯನ್ನು, ಮನದ ಕತ್ತಲೆಯನ್ನು, ಕಳೆಯುವ ಹಬ್ಬ ಎಂಬುದು ಒಂದು ನಂಬಿಕೆಯಾದರೆ ಬಲಿಚಕ್ರರ‍್ತಿಯನ್ನು ವರ್ಷಕೊಮ್ಮೆ ನೆನಪಿಸಿಕೊಳ್ಳುವುದು, ನರಕಾಸುರನನ್ನು ಶ್ರೀ ಕೃಷ್ಣ ಪರಮಾತ್ಮ ಕೊಂದು ಆತನ ಸೆರೆಯಲ್ಲಿದ್ದ ಅಸಂಖ್ಯಾತ ಮಹಿಳೆಯರಿಗೆ ಬಿಡುಗಡೆ ದೊರಕಿಸಿದ ದಿನವಿದು ಎಂದು ನೆನೆಪಿಸಿಕೊಳ್ಳುವುದು ಹೀಗೆಲ್ಲಾ ಪ್ರಚಲಿತ ಪುರಾಣಮೂಲಗಳಿಂದ ಈ ಹಬ್ಬದ ಆಚರಣೆಯ ಸಾಂಕೇತಿಕತೆಯನ್ನು ಅರ್ಥೈಸಲಾಗುತ್ತದೆ.

ಈ ಎರಡೂ ಘಟನೆಗಳನ್ನು ಕುರಿತು ಬೇರೆ ಬೇರೆ ನೆಲೆಯಿಂದ ಯೋಚಿಸಿದಾಗ ಇದನ್ನು ದೇಶದಾದ್ಯಂತ ಎಲ್ಲರೂ ಸಡಗರಿಸಬೇಕೆ? ಆಳುವವರ ಸಡಗರ ಎಲ್ಲರ ಸಡಗರವಾಗಲೇಬೇಕಾದ ಅನಿವಾರ್ಯವೇ? ಎಂಬ ನೆಲೆಗಳಿಂದ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗುತ್ತದೆ.

ನಿಸರ್ಗಮೂಲ ಸಿದ್ದಾಂತವನ್ನು ಅನ್ವಯಿಸಿಕೊಂಡರೇ ಬಹುಶಃ ಈ ದೀಪಾವಳಿಯ ತಿಂಗಳು, ಅಂದರೇ ಕಾರ್ತಿಕ ಮಾಸದ ಹವಾಮಾನದಲ್ಲಿ ವಿಶೇಷತೆಯಿದೆ. ಕಾರ್-ಅಂದರೇ ಮಳೆ ಸುರಿಯುವುದು. ಕರ‍್ತೀಕ ಅಂದರೇ ಮಳೆಗಾಲದ ಕೊನೆಯ ದಿನಗಳಿವು, ಹಿಂಗಾರಿನ ಕೊನೆಯ ಮಳೆಗಳು ಸುರಿಯುವ ಮತ್ತು ಇದರೊಂದಿಗೆ ಚಳಿಗಾಲವೂ ಆರಂಭವಾಗುವುದರಿಂದ ಮಂಜುಮುಸುಕಿದ ವಾತಾವರಣವೂ ಜೊತೆಗೂಡಿ ಕತ್ತಲೆಯ ಆಧಿಕ್ಯ ಹೆಚ್ಚು. ಬಹುಶಃ ಈ ಕತ್ತಲೆಯನ್ನು ನಿವಾರಿಸಿಕೊಳ್ಳಲು ಮನೆಮನೆಯ ಮುಂದೆ ದೀಪಗಳನ್ನು ಹಚ್ಚಿ ಬೆಳಕನ್ನು ಕಂಡುಕೊಳ್ಳುವ ಉದ್ದೇಶವೂ ಇರಬಹುದೆನ್ನಿಸುತ್ತದೆ. ಒಟ್ಟಾರೆ ನಾಡಿನಾದ್ಯಂತ ಆಚರಿಸಲಾಗುವ ಈ ದೀಪಾವಳಿ ಹಬ್ಬವನ್ನು ಮ್ಯಾಸಮಂಡಲದಲ್ಲಿಯೂ ಆಚರಿಸಲಾಗುತ್ತದೆ.

ಮ್ಯಾಸಬುಡಕಟ್ಟಿನ ದೇವರು ಕಾಣದ ಲೋಕದವರಲ್ಲ. ಪ್ರಕೃತಿಯ ವಿಶಿಷ್ಟತೆಯನ್ನೇ ದೈವ ಎಂದು ಭಾವಿಸಿ ಪೂಜಿಸುವುದು, ಸೃಷ್ಟಿಗೆ ಕಾರಣವಾಗುವ ತಾಯಿಯನ್ನೇ ಮೊದಲ ದೈವ ಎಂದು ಪೂಜಿಸುವುದು, ತಮಗೆ ಬದುಕನ್ನು ಕಟ್ಟಿಕೊಟ್ಟು ತಮ್ಮನ್ನು ಮುನ್ನಡೆಸಿದ ಹಿರಿಯರನ್ನೇ, ನಾಯಕರನ್ನೇ ತಮ್ಮದೇವರು ಎಂದು ಪೂಜಿಸುವುದು, ಮತ್ತು ತಮ್ಮ ಬದುಕಿಗೆ ಆಧಾರವಾಗಿದ್ದ ಪಶುಸಂಪತ್ತನ್ನೇ ತಮ್ಮ ಹಿರಿಯರೊಂದಿಗೆ ಸಮೀಕರಿಸಿ ದೈವಗಳೆಂದು ಭಾವಿಸಿ ಪೂಜಿಸುವುದು ಈ ಬುಡಕಟ್ಟಿನ ವಿಶೇಷತೆ. ತಮ್ಮ ನಾಯಕ ಅಥವಾ ನಾಯಕಿ ಬಳಸುತ್ತಿದ್ದ ವಸ್ತುವನ್ನು ಬಿದಿರಿನ ಬುಟ್ಟಿಯಲ್ಲಿಟ್ಟು, ಕೆಲವು ಕಡೆ ಸಾಲಿಗ್ರಾಮಗಳನ್ನು ಮತ್ತು ನಾಯಕ/ನಾಯಕಿ ಬಳಸುತ್ತಿದ್ದ ಬಿಲ್ಲು, ಬಾಣ/ ಖಡ್ಗವನ್ನೇ ದೇವರೆಂದು ನಂಬಿ ಪೂಜಿಸುವ ಸಮುದಾಯದಲ್ಲಿ ದೀಪಾವಳಿಯನ್ನು ಇವುಗಳಿಗೆ ಪೂಜೆ ಸಲ್ಲಿಸುವ ಮೂಲಕವೇ ಆಚರಿಸಲಾಗುತ್ತದೆ.

ಮ್ಯಾಸಮಂಡಲದ ಎಲ್ಲಾ ಗುಡಿಕಟ್ಟುಗಳಲ್ಲಿಯೂ ಮತ್ತು ಇದಕ್ಕೆ ಸಂಬಂಧಿಸಿದ ಎತ್ತಿನಗೂಡುಗಳಲ್ಲಿ ಈ ಹಬ್ಬದ ಆಚರಣೆ ನಡೆಯುತ್ತದೆ. ದೀಪಾವಳಿ ಅಮಾವಾಸ್ಯೆಕಳೆದು ಪಾಡ್ಯದ ಸೋಮವಾರ ಹೀರೆಹಳ್ಳಿಯ ದಡ್ಡಿಸೂರನಾಯಕನ ಗುಡಿಗೆ ಈತನಿಂದ ಸಂರಕ್ಷಿಸಲ್ಪಟ್ಟ ದನಕರುಗಳ ಪರಂಪರೆಯಿಂದ ಇಂದಿಗೂ ಉಳಿದು ಬಂದಿರುವ ಆಕಳ ಗೂಡಿನಿಂದ (ಗುಡೇಕೋಟಿ ಬಳಿ ಇರುವ} ಕಿಲಾರಿಗಳು ಮೊಸರು,ತುಪ್ಪವನ್ನು ತಂದು ಸೋಮವಾರ ಸಂಜೆ ಗುಡಿಗೆ ಒಪ್ಪಿಸುತ್ತಾರೆ. ತಮ್ಮ ಹೊಲಗಳಲ್ಲಿ ಬೆಳೆದ ಹಸನಾದ ಸಜ್ಜೆಯತೆನೆಗಳನ್ನು ತಂದು ಒಪ್ಪಿಸುವ ವಾಡಿಕೆಯೂ ಇದೆ. ರಾತ್ರಿಯಿಡಿ ಎಲ್ಲರೂ ಸೇರಿ ಗುಡಿಯಲ್ಲಿ ಹುರುಳಿ, ಗುಗ್ಗರಿ ಬೇಯಿಸಿ ಜೋಳ ಅಥವಾ ಸಜ್ಜೆಯ ಅನ್ನ ಮಾಡಿ ಗೂಡಿನಿಂದ ತಂದ ಮೊಸರನ್ನು ಸೇರಿಸಿ ಬೆಳಗಿನಜಾವ ದಡ್ಡಿಸೂರನಾಯಕನಿಗೆ ನೈವೇದ್ಯ ಮಾಡಲಾಗುತ್ತದೆ.

ರಾತ್ರಿಯಿಡೀ ಉರುಮೆ ವಾದ್ಯದ ಸೇವೆ, ನಾಯಕನನ್ನು ಕುರಿತು ಪದ ಹೇಳುವುದು ನಡೆಯುತ್ತದೆ, ಹೀಗೆ ಗುಡಿಯಲ್ಲಿ ನಡೆಯುವ ಪೂಜೆಯೇ ತಮಗೆ ದೀಪಾವಳಿ ಹಬ್ಬದ ಆಚರಣೆಯಾಗಿದ್ದು ಮನೆ ಮನೆಯ ಮುಂದೆ ದೀಪ ಬೆಳಗಿಸುವ, ರಂಗೋಲಿ ಹಾಕುವ, ಪಟಾಕಿ ಸಿಡಿಸುವ ಆಚರಣೆಗಳು ಇಲ್ಲಿ ಇರುವುದಿಲ್ಲ.
ಕಂಪಳ ದೇವರ ಹಟ್ಟಿಯಲ್ಲಿ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಹಬ್ಬದ ಆಚರಣೆ ನಡೆಯುತ್ತದೆ. ಮಾಘ ಮಾಸದಲ್ಲಿ ನಡೆಯುವ ಗುಗ್ಗರಿ ಹಬ್ಬದಲ್ಲಿ ಮಾಡುವಂತೆ ಈ ಸಮಯದಲ್ಲಿಯೂ ಅಮಾವಾಸ್ಯೆ ನಂತರದ ಶುಕ್ರವಾರದಂದು ಪೆಟ್ಟಿ ದೇವರನ್ನು ಗುಡಿಯಿಂದ ತಂದು ಹಟ್ಟಿಯ ಹೊರವಲಯದಲ್ಲಿ ಹೊಸ ಉದಿ/ಪದಿಯನ್ನು ಕಟ್ಟಿ ಇದರಲ್ಲಿ ಕೂರಿಸಿ ಮೂರು ದಿನಗಳ ಹಬ್ಬದ ಆಚರಣೆ ನಡೆಸಲಾಗುತ್ತದೆ.

ತೆಲುಗಿನಲ್ಲಿ ಇದನ್ನು ‘ದುಯಿಲಪಂಡುವ’ ಎಂದು ಕರೆಯಲಾಗುತ್ತದೆ. ಕಂಪಳ ದೇವರ ಪೆಟ್ಟಿಯೊಂದಿಗೆ ಜಗಲೂರು ಪಾಪನಾಯಕನನ್ನು ಸಂಕೇತಿಸುವ ಬಿಲ್ಲು ದೇವರನ್ನೂ ತಂದು ಪೂಜಿಸಲಾಗುತ್ತದೆ. ಆಕಳಗೂಡಿನ ಮೀಸಲು ಮೊಸರು ಮತ್ತು ಬೆಣ್ಣೆಯನ್ನು ಅರ್ಪಿಸುವುದು ಇಲ್ಲಿ ಬಹಳ ವಿಶೇಷವಾದುದು. ಗತಿಸಿದ ಎತ್ತು ಮತ್ತು ಆಕಳಿಂದ ಸಂಗ್ರಹಿಸಿದ ಕೊಂಬನ್ನು ಇಲ್ಲಿ ಬೆಣ್ಣೆಯನ್ನು ಶೇಕರಿಸಲು ಬಳಸಲಾಗುತ್ತದೆ.ಬುಡಕಟ್ಟಿನ ಜನತೆ ತಮಗೆ ಸಿಗುವ ವಸ್ತುಗಳನ್ನೇ ಸಲಕರಣೆಗಳನ್ನಾಗಿ ಬಳಸುವ ವಿಧಾನ ಇಲ್ಲಿ ಗಮನ ಸೆಳೆಯುತ್ತದೆ. ಹೀಗೆ ಸಂಗ್ರಹಿಸಿದ ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಿ ಪದಿಯಲ್ಲಿ ದೀಪವನ್ನು ಉರಿಸಲಾಗುತ್ತದೆ.ಮೊಸರು,ಜೋಳದ/ಸಜ್ಜೆಯ ಅನ್ನ,ಬಾಳೆಹಣ್ಣು,ಬೆಲ್ಲವನ್ನು ಬೆಳಗಿನಜಾವದಲ್ಲಿ ನೈವೇದ್ಯ,ಮಾಡಲಾಗುತ್ತದೆ.

ಇದರೊಂದಿಗೆ ಎತ್ತುಗಳನ್ನೂ ಹರಿಯಿಸುವುದು, ಮಣೇವು, ಉರಿಯುವ ಪಂಜುಗಳನ್ನೇ ನುಂಗುವುದು ಈ ಹಬ್ಬದ ಪ್ರಮುಖ ಆಚರಣೆಗಳಾಗಿವೆ. ನನ್ನಿವಾಳದ ಕಟ್ಟಿಮನೆಗೆ ಸೇರಿದ ಬಂಗಾರುದೇವರ ಹಟ್ಟಿಯಲ್ಲಿ ದೇವರುಗಳನ್ನು ಮತ್ತು ಬೆಳಗಟ್ಟದ ಸೂರೆಯರಗಾಟನಾಯಕನಿಗೆ ಸಂಬಂಧಿಸಿದಂತೆ, ಬೋಸೇದೇವರ ಹಟ್ಟಿಯ ಬೋಸೇರಂಗಯ್ಯನ ಪೆಟ್ಟಿಯನ್ನು, ದೊಣಮಂಡಲಹಟ್ಟಿಯ ಮಂಡಬೊಮ್ಮದೇವರನ್ನು ಹಟ್ಟಿಯಿಂದ ಹೊರಗೆ ತಂದು ಊರ ಹೊರಗೆ ಹೊಸ ಪದಿಯನ್ನು ಕಟ್ಟಿ, ಗೂಡಿನಿಂದ ಎತ್ತುಗಳನ್ನು ಕರೆಸಿ ಗೌರವಿಸಿ ಪೂಜಿಸುವ ಕ್ರಮವಿದೆ.

ಒಟ್ಟಾರೆ ಈಮ್ಯಾಸಮಂಡಲದ ದೀಪಾವಳಿ ಹಬ್ಬಕ್ಕೆ ಆಯಾ ಗುಂಪಿನವರೆಲ್ಲರೂ ಕಾಸು,ಹಾಲು, ಮೊಸರನ್ನು ಅರ್ಪಿಸಿ ಪಾಲ್ಗೊಳ್ಳುವಿಕೆಯೇ ಇಲ್ಲಿ ಸಾಮುದಾಯಿಕತೆಯ ಮಹತ್ವವನ್ನು ಪಡೆಯುತ್ತದೆ. ಈ ದೀಪಾವಳಿ ಹಬ್ಬದ ಆಚರಣೆಯಲ್ಲಿಎಲ್ಲಾ ಪದಿಗಳಲ್ಲಯೂ ದಾಸೋಹ ವಿಶೇಷವಾಗಿ ನಡೆಯುತ್ತದೆ. ಮುಂಗಾರು ಮಳೆ ಸುರಿದು ಸೊಂಪಾಗಿ ಬೆಳೆದ ಹುಲ್ಲನ್ನು ತಿಂದು ಹಸುಗಳು ಸಾಕಷ್ಟು ಹಾಲನ್ನು ಕೊಡುವುದರಿಂದ ಸಮೃದ್ಧವಾದ ಹಾಲು,ಮೊಸರು ಈ ಹಬ್ಬಕ್ಕೆ ಒದಗುತ್ತದೆ.ಇದನ್ನು ಎಡೆ ಮಾಡಿದ ನಂತರ ಎಲ್ಲರಿಗೂ ದಾಸೋಹದಲ್ಲಿ ನೀಡಲಾಗುತ್ತದೆ.

ಈ ಬುಡಕಟ್ಟಿನ ದೀಪಾವಳಿ ಹಬ್ಬದ ಆಚರಣೆಯ ಹಿಂದೆ ನಮ್ಮ ಭಾರತದ ಪೌರಾಣಿಕ ಕಥನಗಳಾವುವು ಕೇಳಿ ಬರುವುದಿಲ್ಲ.ಮನೆ ಮನೆಯ ಮುಂದೆ ದೀಪಗಳನ್ನು ಹಚ್ಚಿ ಸಡಗರಿಸುವುದು ಇಲ್ಲಿಲ್ಲ. ರಂಗೋಲಿ ಹಾಕುವುದಂತೂ ಬುಡಕಟ್ಟಿನ ನಿಶೇಧಗಳಲ್ಲಿ ಒಂದಾಗಿರುವುದರಿಂದ ಆ ಪ್ರಸ್ತಾಪವೇ ಇಲ್ಲಿಲ್ಲ. ಬದಲಾಗಿ ತಮ್ಮ ಮನೆ ದೇವರಾದ ಪೆಟ್ಟಿಗೆ ದೇವರು/ಬಿಲ್ಲು ದೇವರು/ಎತ್ತುಗಳನ್ನು ಗೌರವಿಸಿ ಪೂಜಿಸುವುದು. ಈ ಮೂಲಕವಾಗಿಯೇ ತಮ್ಮ ಮುಂದಿನ ಬದುಕಿಗೆ ಬೇಕಾದ ಬೆಳಕನ್ನು, ಚೈತನ್ಯವನ್ನು ಕೋರುವುದು ಇಲ್ಲಿ ಮುಖ್ಯವಾಗಿರುತ್ತದೆ.

ತಾನು ಬದುಕಿರುವ ಪರಿಸರ, ತಮಗೆ ಬದುಕನ್ನು ಕಟ್ಟಿಕೊಡುವ ಪ್ರಾದೇಶಿಕತೆ ಮತ್ತು ಭೌತಿಕ ಪ್ರಪಂಚ ಮತ್ತು ತನಗೆ ನೈತಿಕ ಬೆಂಬಲವಾಗಿ ನಿಂತ ತನ್ನ ಸಾಂಸ್ಕೃತಿಕ ಜಗತ್ತು ಈ ಎಲ್ಲವುಗಳ ಮೂಲಕ ಒಡಮೂಡುವ ದೇಸಿತನ ಆಯಾ ಬುಡಕಟ್ಟಿನ ಆಚರಣೆಗಳಿಗೆ ಸೈದ್ಧಾಂತಿಕತೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮ್ಯಾಸಬೇಡ ಬುಡಕಟ್ಟಿನ ಈ ದೀಪಾವಳಿ ಆಚರಣೆಯಲ್ಲಿ ಈ ದೇಸಿತನವೇ ಒಡಮೂಡಿರುವುದನ್ನು ಕಾಣಬಹುದಾಗಿದೆ.ಆದಿವಾಸಿಗಳ ಧರ‍್ಮಿಕ ಜಗತ್ತಿನಲ್ಲಿ ಸರ‍್ಪಣಾಭಾವ ಮತ್ತು ಪಾರಂಪರಿಕ ಸಂಬಂಧ ಮುಖ್ಯವಾಗಿರುತ್ತದೆ. ಈ ಆಚರಣೆಗಳನ್ನು ಸಮುದಾಯದ ಸಾಂಸ್ಕೃತಿಕ ಅಸ್ಮಿತೆಗಳು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending