ಅಂತರಂಗ
ನುಡಿಯ ಒಡಲು -10 | ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ವರ್ತನೆಯಲ್ಲ. ನುಡಿ ಬಗೆಗಿನ ಇಂತಹದೊಂದು ಚಿಂತನೆ ನುಡಿಯರಿಮೆಯ ಚರಿತ್ರೆಯಲ್ಲಿಯೇ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ಇಂತಹ ಕ್ರಾಂತಿಯನ್ನು ಹುಟ್ಟು ಹಾಕಿದವರಲ್ಲಿ ಇಪ್ಪತ್ತನೇ ಶತಮಾನದಲ್ಲಿದ್ದ ಸ್ವಿಸ್ ನುಡಿಯರಿಗ ಫರ್ಡಿನಾಂಡ್ ಡಿ ಸಸ್ಯೂರ್ (26 ನವಂಬರ್1857–22 ಫೆಬ್ರವರಿ1913) ಮತ್ತು ಅದೇ ಇಪ್ಪತ್ತನೇ ಶತಮಾನದ ನಡುಗಾಲದಲ್ಲಿ ಕಾಣಿಸಿಕೊಂಡ ಅಮೇರಿಕದ ಮತ್ತೊಬ್ಬ ನುಡಿಯರಿಗ ನೋಮ್ ಚಾಮ್ಸ್ಕಿ (1907 -).
ಇವರಿಬ್ಬರನ್ನು ಹೊಸಕಾಲದ ನುಡಿಯರಿಮೆಯ ಹರಿಕಾರರೆಂದು ಹೇಳಬಹುದು. ಈ ಮಹಾನ್ ಚಿಂತಕರು ನುಡಿಯೆಂದರೆ ಅದೊಂದು ಅಂತಸ್ಥ ಸಾಮರ್ಥ್ಯವೇ ಹೊರತು ಅನುಕರಣೆಯಿಂದ ಕಲಿಯುವ ಬಗೆಯಲ್ಲ ಎಂಬ ಈ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣವಾಗಿದ್ದಾರೆ.
ಮೇಲ್ನೋಟದಲ್ಲಿ ಇವರು ನುಡಿ ಕುರಿತು ಮಂಡಿಸುವ ತಿಳಿವಳಿಕೆಗಳು ಒಂದೇ ಬಗೆಯಲ್ಲಿ ಕಂಡರೂ, ಅವರಿಬ್ಬರು ಚರ್ಚಿಸುವ ನುಡಿ ಬಗೆಗಿನ ಚಿಂತನೆಗಳಲ್ಲಿ ತಾತ್ವಿಕ ವ್ಯತ್ಯಾಸಗಳಿವೆ. ಆ ತಾತ್ವಿಕ ವ್ಯತ್ಯಾಸಗಳನ್ನು ಗುರುತಿಸುವ ಗೊಡವೆಗೆ ಇಲ್ಲಿ ನಾನು ಹೋಗಲಾರೆ. (ನುಡಿಯ ಒಡಲು -08ರಲ್ಲಿ ಚಾಮ್ಸ್ಕಿಯ ನುಡಿ ಕುರಿತ ಚಿಂತನೆಗಳನ್ನು ಚರ್ಚಿಸಲಾಗಿದೆ) ಬದಲಾಗಿ ಸಸ್ಯೂರ್ ಅವರ ಚಿಂತನೆಗಳ ಸ್ವರೂಪವೆಂತಹದು ಎಂಬುದನ್ನು ಇಲ್ಲಿ ಚರ್ಚಿಸಲು ಯತ್ನಿಸುತ್ತೇನೆ.
ಫರ್ಡಿನಾಂಡ್ ಡಿ. ಸಸ್ಯೂರ್ ನುಡಿ ಹೇಗೆ ಒಂದು ಸಾಮರ್ಥ್ಯ ಎಂಬುದನ್ನು ತಿಳಿಸಲು ಕೆಲವು ಬಹುಮುಖ್ಯ ಅರಿಮೆ ಪದಗಳನ್ನು ಹುಟ್ಟು ಹಾಕಿದ್ದಾನೆ. ಇವನ ಪ್ರಕಾರ “ನುಡಿಯೆಂಬುದು ಸಂಕೇತ (ಚಿಹ್ನೆ)ಗಳ ವ್ಯವಸ್ಥೆ”. ಈ ಸಂಕೇತಗಳ ಸ್ವರೂಪ ಯಾದೃಚ್ಛಿಕವಾಗಿರುತ್ತದೆ (ಆರ್ಬಿಟ್ರರಿ). ಹಾಗೂ ಅವು ಸೂಚಕಗಳಾಗಿ ರೂಪುಗೊಳ್ಳವ ಬಗೆಗಳು ಯಾವಾಗಲೂ ರೇಖಾತ್ಮಕವಾಗಿರುತ್ತವೆ (ಲಿನಿಯರ್ ಆರ್ಡರ್). ಈ ನುಡಿ ಸಂಕೇತಗಳಿಗೆ ಎರಡು ಆಯಾಮಗಳಿರುತ್ತವೆ. ಅವುಗಳನ್ನು ಈ ಕೆಳಗಿನಂತೆ ತೋರಿಸಬಹುದು;
ಧ್ವನಿ ಸಂಕೇತಗಳಿಂದ ರೂಪುಗೊಳ್ಳುವ ಸೂಚಕ ಹಾಗೂ ಸೂಚಿತಗಳ ನಡವಿನ ನಂಟಸ್ತಿಕೆ ಒಂದು ಸಾಮಾಜಿಕ ಒಪ್ಪಂದವಷ್ಟೇ. ಎತ್ತುಗೆಗಾಗಿ ಮರ ಎಂಬ ಧ್ವನಿ ಸಂಕೇತಗಳ ರೂಪಕ್ಕೂ ಹಾಗೂ ಮರ ಎಂಬ ಅರ್ಥದ ನೆಲೆಗೂ ಯಾವುದೇ ಬಗೆಯ ನಂಟಸ್ತಿಕೆ ಇರುವುದಿಲ್ಲ. ಹಾಗಾಗಿ ಒಂದೇ ವಸ್ತು, ವಿಷಯವನ್ನು ಪ್ರತಿನಿಧಿಸುವಾಗಲೂ ಬೇರೆ ಬೇರೆ ನುಡಿ ಸಮುದಾಯಗಳು ತಮ್ಮದೇ ಧ್ವನಿರೂಪಗಳು ಹಾಗೂ ಅವುಗಳು ಸಂಯೋಜನೆಗೊಳ್ಳುವ ಬಗೆಗಳು ಬೇರೆ ಬೇರೆಯಾಗಿರುತ್ತವೆ.
ಕನ್ನಡದಲ್ಲಿ ಹುಡುಗ, ಇಂಗ್ಲಿಶಿನಲ್ಲಿ ಬಾಯ್, ಹಿಂದಿಯಲ್ಲಿ ಲಡಕಾ, ತಮಿಳಿನಲ್ಲಿ ಪೈಯನ್, ತೆಲುಗುನಲ್ಲಿ ಪಿಲ್ಲಡು/ಅಬ್ಬಾಯಿ ಮುಂತಾಗಿ ಹೇಳುತ್ತಾರೆ. ಎಲ್ಲ ನುಡಿಗಳು ಕೂಡ ಇಂತಹ ಸಂಕೇತ ವ್ಯವಸ್ಥೆಯಿಂದ ಕೂಡಿರುತ್ತವೆ. ಆ ಸಂಕೇತಗಳಲ್ಲಿ ಅಡಕವಾಗಿರುವ ಸೂಚಕ ಮತ್ತು ಸೂಚಿತಗಳ ರಾಚನಿಕ ವ್ಯವಸ್ಥೆ ಲಾಂಗ್ ಸ್ವರೂಪದಲ್ಲಿರುತ್ತದೆ.
ಇದೊಂದು ಅಂತಸ್ಥಗೊಂಡ ಸಾಮರ್ಥ್ಯ. ಈ ವಿನ್ಯಾಸವು ಯಾವಾಗಲೂ ಅಮೂರ್ತವಾಗಿರುತ್ತದೆ ಎಂಬುದು ಗಮನಾರ್ಹ. ಈ ಅಮೂರ್ತ ಸಾಮರ್ಥ್ಯವು ಪರೊಲ್ಯೆಂಬ ನುಡಿಯ ಮತ್ತೊಂದು ಸಾಧ್ಯತೆಯಿಂದ ವಾಸ್ತವಗೊಳ್ಳುತ್ತದೆ. ಅಂದರೆ ವ್ಯಕ್ತಿಗತ ಹಾಗೂ ಮಾತಿನ ಬಹಿರ್ರೂಪವನ್ನೇ ಪರೊಲ್ ಎಂದು ಹೇಳಲಾಗುತ್ತದೆ.
ಸಸ್ಯೂರ್ನ ಲಾಂಗ್ ಮತ್ತು ಪರೊಲ್ ಎಂಬ ಈ ಅರಿಮೆ ಪದಗಳನ್ನು ತಿಳಿಯುವುದರ ಮೂಲಕ ನುಡಿ ಹೇಗೆ ಒಂದು ಸಾಮರ್ಥ್ಯವೆಂಬುದನ್ನು ಇನ್ನಷ್ಟೂ ಹೆಚ್ಚು ಸಂಗತಿಗಳ ಮೂಲಕ ಅರಿಯಬಹುದು. ಆ ಎರಡೂ ಅರಿಮೆ ಪದಗಳು ನುಡಿಯ ಎರಡು ಬಹುಮುಖ್ಯ ನೆಲೆಗಳೆಂದು ಈ ಮೇಲೆ ಹೇಳಿದೆ. ಅವುಗಳನ್ನ ಒಂದು ಲಾಂಗ್ ಮತ್ತೊಂದನ್ನು ಪರೊಲ್ ಎಂದು ವಿಂಗಡಿಸಿ ನೋಡಬಹುದು. ಲಾಂಗ್ಯೆಂದರೆ ಅದೊಂದು ಸಾಮರ್ಥ್ಯ.
ನುಡಿಯ ಇಡೀ ವ್ಯವಸ್ಥೆಯನ್ನು ಅರಿಯುವ ಬಗೆಯೂ ಇದಾಗಿರುತ್ತದೆ. ಪರೊಲ್ ಲಾಂಗ್ನಿಂದ ಉತ್ಪಾದನೆಗೊಂಡ ಕ್ರಿಯೆ ಇಲ್ಲವೇ ದಿಟ ಮಾತಿನ ರೂಪವೆಂದು ಹೇಳಲಾಗಿದೆ. ಮಾನವರಲ್ಲಿ ಹಲವಾರು ಸಾಮರ್ಥ್ಯಗಳು ಇರುವ ಹಾಗೆಯೇ ನುಡಿ ಕೂಡ ಒಂದು ಸಾಮರ್ಥ್ಯ. ಈ ಸಾಮರ್ಥ್ಯ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುತ್ತದೆ. ಕನ್ನಡವನ್ನು ಆಡುವರೆಲ್ಲರ ಸಾಮರ್ಥ್ಯ ಬೇರೆ ಬೇರೆಯಲ್ಲ. ಅವರಲ್ಲಿ ಅಂತಸ್ಥವಾಗಿರುವ ನುಡಿ ಸಾಮರ್ಥ್ಯದಲ್ಲಿ ಬಹುತೇಕ ಸಮಾನತೆ ಇರುತ್ತದೆ.
ಲೋಕದ ಬೇರೆ ಬೇರೆ ಸಮುದಾಯಗಳಲ್ಲಿ ಬೇರೆ ಬೇರೆ ನುಡಿ ಸಾಮರ್ಥ್ಯವಿರುತ್ತದೆ ದಿಟ. ಆದರೆ ಅವುಗಳು ಚೈನೀಸ್, ಜಪನೀಸ್, ತಮಿಳು ಹಾಗೂ ಕನ್ನಡ ಎಂದಿದ್ದು ಬೇರೆ ಬೇರೆ ಸಾಮರ್ಥ್ಯವನ್ನು ಹೊಂದಿದ್ದರೂ, ಆ ಎಲ್ಲ ನುಡಿಗಳು ಅಂತಸ್ಥ ನೆಲೆಯಲ್ಲಿ ಸಮಾನವಾದ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ.
ಪರೊಲ್ ಎನ್ನುವುದು ವ್ಯಕ್ತಿಗತ ಅಭಿವ್ಯಕ್ತಿಯ ನುಡಿ ಬಳಕೆಯ ಲೋಕ ಮಾತ್ರವಲ್ಲ. ಅದು ಅಂತಹ ವ್ಯಕ್ತಿಗತ ಅಭಿವ್ಯಕ್ತಿಗೆ ಸಾರ್ವತ್ರಿಕ ನೆಲೆಯೊಂದು ಲಾಂಗ್ನಿಂದ ಹೇಗೆ ದೊರೆಯುತ್ತದೆ ಎಂಬುದು ಅತ್ಯಂತ ಮಹತ್ವದ ಸಂಗತಿಯನ್ನು ಅರಿಯುವ ಬಗೆಯಾಗಿದೆ. ಅಂದರೆ ಪರೊಲ್ನಂತಹ ಪರಿಣಾಮವನ್ನು ಅನುಭವಿಸಲು ಸಾಧ್ಯವಾಗುವುದೇ ನುಡಿಯೊಂದರ ಇಡೀ ರಚನೆ ಹಾಗೂ ಬಳಕೆಯ ನೆಲೆಗಳನ್ನು ಒಳಗೊಂಡಿರುವ ಲಾಂಗ್ನಿಂದ.
ನುಡಿಯ ಮೂರ್ತ ಪರಿಣಾಮಗಳು ಲಾಂಗ್ ಎಂಬ ಅಮೂರ್ತರೂಪದ ನುಡಿ ವ್ಯವಸ್ಥೆಯಿಂದ ಉತ್ಪಾದನೆಗೊಳ್ಳುತ್ತವೆ ಎಂಬುದು ಇದರಿಂದ ನಿಚ್ಚಳವಾಗುತ್ತದೆ. ಹಾಗಾಗಿ ಲಾಂಗ್ ಅನ್ನುವುದು ಸಮುದಾಯದ ನುಡಿಯೊಂದರ ಇಡೀ ಭಾಷಿಕ ವ್ಯವಸ್ಥೆ ಮಾತ್ರವಾಗಿರದೆ, ಅದೊಂದು ಸಾಮರ್ಥ್ಯವಾಗಿ ಮಾನವರಿಗೆ ದತ್ತವಾಗಿದೆ. ಚೆಸ್ ಆಟದ ಹೋಲಿಕೆಯ ಮೂಲಕ ಸಸ್ಯೂರ್ ಲಾಂಗ್-ಪರೊಲ್ ಎಂಬ ಡೈಕಾಟಮಿಯನ್ನು ಇನ್ನಷ್ಟೂ ಸುಳುವಾಗಿ ವಿವರಿಸುವ ಪ್ರಯತ್ನವನ್ನು ಮಾಡುತ್ತಾನೆ.
ಈ ಆಟದಲ್ಲಿ ಪಾಲ್ಗೊಳ್ಳುವ ಈರ್ವ ಆಟಗಾರರಿಗೆ ಚೆಸ್ ಆಟದ ಇಡೀ ವ್ಯವಸ್ಥೆಯು (ಲಾಂಗ್) ತಿಳದಿರಬೇಕು. ಆಟದಲ್ಲಿ ಆಟಗಾರನು ಮಾಡುವ ಪ್ರತೀ ನಿಯಮಗಳ ಆಯ್ಕೆ ಮತ್ತು ಆ ಸನ್ನಿವೇಶದಲ್ಲಿ ಅವನಿಗೆ ಎದುರಾಗುವ ತೊಡರುಗಳು, ಹಾಗೂ ತೋರುದಾರಿಗಳು ಲಾಂಗ್ನಿಂದ ಹೇಗೆ ನಿರ್ಧರಿಸಲ್ಪಟ್ಟಿರುತ್ತವೆ ಎಂಬುದು ಮನವರಿಕೆಯಾಗುತ್ತದೆ. ಈ ಆಟದ ಪ್ರಕ್ರಿಯೆಯಲ್ಲಿ ಆಟಗಾರನು ಆಯ್ಕೆ ಮಾಡಿಕೊಳ್ಳುವ ಬಿಡಿ ಬಿಡಿ ನಿಯಮಗಳ ಸ್ವರೂಪವೇ ಪರೊಲ್.
ಇಂತಹ ನಿಯಮಗಳನ್ನು ಬಳಸಲು ಬೇಕಾಗುವ ಸಾಮರ್ಥ್ಯ ಮತ್ತು ಚೆಸ್ ಆಟದ ಅಮೂರ್ತ ಸ್ವರೂಪದ ತಿಳಿವನ್ನು ಅರಿಯುವ ಬಗೆಯೇ ಲಾಂಗ್ಯೆಂದು ಹೇಳಬಹುದು. ಉಲಿ, ಪದ, ಸೊಲ್ಲುಗಳನ್ನು ಉತ್ಪಾದಿಸುವ ಹಾಗೂ ಅವುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಮಾನವರಲ್ಲಿ ಅಂತಸ್ಥವಾಗಿರುತ್ತದೆ. ಹೀಗೆ ಅಂತಸ್ಥಗೊಂಡ ಸಾಮರ್ಥ್ಯವನ್ನೇ ಲಾಂಗ್ಯೆಂದು ಹೇಳಲಾಗುತ್ತದೆ. ಈ ಅಂತಸ್ಥ ಸಾಮರ್ಥ್ಯದ ಬಹಿರ್ ರೂಪಗಳೇ ಪರೊಲ್ಯೆಂದೂ ಹೇಳಲಾಗಿದೆ.
ನುಡಿಯಿಗರು ಹೇಗೆ ನುಡಿಯ ನಿಯಮಗಳನ್ನು ಅನುಸರಿಸುತ್ತಾರೆ, ಅಂತಹ ಬಗೆಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಸಸ್ಯೂರ್ನ ಈ ರೇಖಾತ್ಮಕ ನಂಟು ಮತ್ತು ಸಹಯೋಗಾತ್ಮಕ ನಂಟು ಎಂಬೀ ಅರಿಮೆ ಪದಗಳಿಂದ ಇನ್ನಷ್ಟೂ ನಿಚ್ಚಳಗೊಳಿಸಬಹುದು. ರಾಚನಿಕ ನಿಲುವುಗಳಲ್ಲಿ ಅಡಕವಾಗಿರುವ ನಿರ್ಬಂಧನೆಗಳು ಹಾಗೂ ಆಯ್ಕೆಯ ಅವಕಾಶಗಳು ಹೇಗಿರುತ್ತವೆ, ಮತ್ತು ಲಾಂಗ್ ಮತ್ತು ಪರೋಲ್ನಿಂದ ಅವುಗಳನ್ನು ಹೇಗೆ ನಿಭಾಯಿಸಿಕೊಳ್ಳುತ್ತೇವೆ ಎಂಬ ತಿಳಿವನ್ನು ಈ ಚಿತ್ರದ ಮೂಲಕ ಅರಿಯಲು ಯತ್ನಿಸೋಣ;
ಸಸ್ಯೂರ್ಗೆ ನುಡಿಯ ಸಂಕೀರ್ಣತೆಯ ಬಗೆಗೆ ಸಾಕಷ್ಟು ಅರಿವಿತ್ತು. ಅದಕ್ಕಾಗಿ ನುಡಿಯಲ್ಲಿ ಇಬ್ಬಗೆಯ ಕ್ರಿಯೆಗಳು ಹೇಗೆ ಒಟ್ಟೊಟ್ಟಿಗೆ ಬೇರೆ ಬೇರೆ ನೆಲೆಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ಜೋಡಿ ಪರಿಕಲ್ಪನೆಗಳ ಮೂಲಕ ತೋರಿಸಲು ಯತ್ನಿಸಿದ್ದಾನೆ. ಎತ್ತುಗೆಗಾಗಿ ಉಚ್ಚಾರಣೆ (ಆರ್ಟಿಕ್ಯೂಲೇಶನ್) ಮತ್ತು ಗ್ರಹಿಕೆ
(ಪರ್ಸೆಪ್ಶನ್), ರೂಪ/ಶಬ್ದ (ಸೌಂಡ್) ಮತ್ತು ಅರ್ಥ (ಮೀನಿಂಗ್), ವ್ಯಕ್ತಿ (ಇಂಡ್ಯ್ಯುಜಲ್) ಮತ್ತು ಸಮಾಜ (ಸೊಸೈಟಿ), ಗತ (ಪಾಸ್ಟ್) ಮತ್ತು ವರ್ತಮಾನ (ಪ್ರಸೆಂಟ್) ಎಂಬೆಲ್ಲ ಅರಿಮೆಯ ಪದಗಳ ಮೂಲಕ ನುಡಿಯ ಸಂಕೀರ್ಣತೆಯನ್ನು ಬಿಡಿಸಿ ನೋಡುವ ನೆಲೆಗಳನ್ನೂ ಅವನು ರೂಪಿಸಿದ್ದಾನೆ.
ನುಡಿಯನ್ನು ಅರಿಯಬೇಕೆಂದರೆ, ಅದರ ರಾಚನಿಕ ನೆಲೆಗಳನ್ನು ಅರಿಯಬೇಕು. ನುಡಿಯರಿಗನಿಗೆ ನುಡಿಯ ರಚನೆಯೇ ಅಧ್ಯಯನದ ಮುಖ್ಯ ವಸ್ತು ಆಗಬೇಕೆಂಬುದು ಕೂಡ ಸಸ್ಯೂರ್ನ ಉದ್ದೇಶವಾಗಿತ್ತು. ಅದಕ್ಕಾಗಿಯೇ ಅವನು ಲಾಂಗ್ ಮತ್ತು ಪರೊಲ್ ಅಂತಹ ಉಭಯ ಅರಿಮೆಯ ಪದಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸಿದ್ದಾನೆ. ಲಾಂಗ್ ಅನ್ನುವುದು ಸಸ್ಯೂರ್ನ ಪ್ರಕಾರ ಒಂದು ಸಮಾಜಿಕ ಉತ್ಪನ್. ಇದೊಂದು ಅಮೂರ್ತ ಸ್ವರೂಪದ ರಾಚನಿಕ ವ್ಯವಸ್ಥೆ.
ನುಡಿ ಸಮುದಾಯದ ಎಲ್ಲ ನುಡಿಯಿಗರ ಮನಸ್ಸಿನಲ್ಲಿ ನುಡಿ (ಲಾಂಗ್) ಸಾಮರ್ಥ್ಯ ನೆಲೆಗೊಂಡಿರುತ್ತದೆ. ಈ ಸಾಮರ್ಥ್ಯದ ದಿಟ ರೂಪವೇ ಪರೊಲ್. ಇದನ್ನು ಸಸ್ಯೂರ್ ಎಕ್ಸ್ಯೂಶನ್ ಆಫ್ ಲಾಂಗ್ಯೆಂದು ಬಣ್ಣಿಸಿದ್ದಾನೆ. ಲಾಂಗ್ ಮತ್ತು ಪರೊಲ್ಗಳ ನಡುವಣ ವೈಶಿಷ್ಟ್ಯವನ್ನು ಗುರುತಿಸುವುದೆಂದರೆ, ಸಾಮಾಜಿಕ ರಚನೆಯಲ್ಲಿ ಅಂತರ್ಗತವಾಗಿರುವ ಭಿನ್ನತೆಗಳನ್ನು ಗುರುತಿಸಿದಂತೆ.
ಅಂದರೆ, ಲಾಂಗ್ ಮತ್ತು ಪರೊಲ್ಗಳನ್ನು ಬೇರ್ಪಡಿಸಿ ನೋಡುವುದೆಂದರೆ, ಯಾವುದು ಸಾಮಾಜಿಕ ಮತ್ತು ಯಾವುದು ವೈಯಕ್ತಿಕ, ಯಾವುದು ಪ್ರಧಾನ ಮತ್ತು ಯಾವುದು ಅಧೀನ ಎಂಬುದನ್ನೂ ಬೇರ್ಪಡಿಸಿ ನೋಡಲು ಸಾಧ್ಯವಾಗುತ್ತದೆ. ಆದರೆ ಸಸ್ಯೂರ್ಗೆ ಇದೆಲ್ಲವೂ ಆಕಸ್ಮಿಕವಾಗಿ ನುಡಿಯಲ್ಲಿ ಅಂತಸ್ಥವಾಗಿರುವ ಹಾಗೆ ಕಂಡಂತಿದೆ.
ಇದುವರಗೆ ಚರ್ಚಿಸಿದ ಸಸ್ಯೂರ್ ನುಡಿ ಬಗೆಗಿನ ಚಿಂತನೆಗಳು ನುಡಿಯೆಂಬುದು ಹೇಗ ಒಂದು ಸಾಮರ್ಥ್ಯವಾಗಿ ನುಡಿಯಿಗರಲ್ಲಿ ಅಂತಸ್ಥವಾಗಿರುತ್ತೆ, ಆ ಮೂಲಕ ಅವರು ನುಡಿಯ ಜೊತೆಗೆ ವ್ಯವಹರಿಸುತ್ತಾರೆ ಎಂಬುದನ್ನು ತಿಳಿದುಕೊಂಡಂತಾಯಿತು. ಈ ವಾದವನ್ನೇ ಬೇರೊಂದು ತಾತ್ವಿಕ ಚೌಕಟ್ಟಿನಿಂದ ಮಂಡಿಸಿದ ನೋಮ್ ಚಾಮ್ಸ್ಕಿಯ ಚಿಂತನೆಗಳೆಂತಹವು ಎಂಬುದನ್ನು ಈಗಾಗಲೇ ಹಿಂದಿನ ಅಂಕಣ 08ರಲ್ಲಿ ಚರ್ಚಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಎಸ್ ಐ ಆರ್ | ರಾಜ್ಯದಲ್ಲೇ ಮಾಯಾಕೊಂಡ ಕ್ಷೇತ್ರಕ್ಕೆ ಪ್ರಥಮ ಸ್ಥಾನ
-
ದಿನದ ಸುದ್ದಿ6 days agoನೀಟ್ ಪ್ರಶ್ನೆಪತ್ರಿಕೆ ಸೋರಿಕೆ; ವಿದ್ಯಾರ್ಥಿಗಳ ಆತ್ಮಹತ್ಯೆ: ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ವಿನಾಯಕ ಬಿ. ಎನ್ ಆಗ್ರಹ
-
ದಿನದ ಸುದ್ದಿ5 days agoಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಬೂಬ್ ಬಾಷಾ ಒತ್ತಾಯ





