ದಿನದ ಸುದ್ದಿ
ಬಡ್ತಿ ಮೀಸಲು : ‘ಸುಪ್ರೀಂ ’ ತೀರ್ಪು ಇಡೀ ದೇಶಕ್ಕೆ ಮಾದರಿ
“ಬಿ.ಕೆ.ಪವಿತ್ರ ಮತ್ತು ಇತರರು v/s ಭಾರತ ಸರ್ಕಾರ” ಪ್ರಕರಣಕ್ಕೆ ಸಂಬಂಧಿಸಿದಂತೆ 9-2-17ರಂದು ಸುಪ್ರೀಂ ಕೋರ್ಟ್ ನ ಪೀಠವೊಂದು ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿಗಳ ನೌಕರಿ ಬಡ್ತಿ ಮೀಸಲಾತಿ ಕಾಯಿದೆ-2002’ ಅನ್ನು ರದ್ದುಗೊಳಿಸಿ ತೀರ್ಪು ನೀಡಿದ್ದು ಎಲ್ಲರಿಗೂ ತಿಳಿದಿದೆ. ಈ ತೀರ್ಪಿನ ಸಂದರ್ಭದಲ್ಲಿ ಇದನ್ನು ರದ್ದುಗೊಳಿಸಲಿಕ್ಕೆ ನ್ಯಾಯಾಲಯ ನೀಡಿದ್ದ ಕಾರಣ ”ಸದರಿ ವರ್ಗಗಳ(ಎಸ್ಸಿ/ಎಸ್ಟಿ) ಹಿಂದುಳಿದಿರುವಿಕೆ, ಸೇವಾದಕ್ಷತೆ ಮತ್ತು ಸಮರ್ಪಕ ಪ್ರಾತಿನಿಧ್ಯದ ಕೊರತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿಲ್ಲ” ಎಂಬುದಾಗಿತ್ತು. ಈ ನಿಟ್ಟಿನಲ್ಲಿ ಈ ಸಂಬಂಧ ಸಾಕಷ್ಟು ಹೋರಾಟಗಳು ದಲಿತ ನೌಕರರು ಮತ್ತು ಇತರ ಸಂಘಗಳಿಂದ ನಡೆದು ಸರ್ಕಾರ ಕಡೆಗೆ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾರವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಅವರು ನೀಡಿದ ವರದಿ ಆಧಾರದ ಮೇಲೆ ಮಸೂದೆಯೊಂದನ್ನು ಸಿದ್ಧಪಡಿಸಿ, ರಾಜ್ಯಪಾಲರಿಂದ ಅದು ತಿರಸ್ಕರಿಸಲ್ಪಟ್ಟು, ರಾಷ್ಟ್ರಪತಿಗಳ ಅಂಗಳಕ್ಕೆ ಅದು ತಲುಪಿ, ಅಲ್ಲಿಂದ ಅದು ಅಂಗೀಕಾರಗೊಂಡು ಕಾನೂನಾಗಿ ಜಾರಿಯಾಯಿತು.
ದುರಂತವೆಂದರೆ ಈ ನೂತನ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲಾತಿ ವಿರೋಧಿಸುವ ‘ಅಹಿಂಸಾ’ ಸಂಘಟನೆ ಮತ್ತೆ ಸುಪ್ರೀಂ ಕೋರ್ಟಿನ ಮೊರೆ ಹೋಗಿ, ಈ ಸಂಬಂಧ ಅವರು ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯು.ಲಲಿತ್ರವರ ನೇತೃತ್ವದ ಪೀಠದಲ್ಲಿ ವಿಚಾರಣೆಗೊಂಡು ಈಗ ತೀರ್ಪನ್ನು ಕಂಡಿದೆ. ಸಂತಸದ ವಿಚಾರವೆಂದರೆ ನ್ಯಾಯಪೀಠ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಗೆ ಒಪ್ಪಿಗೆಯ ಮುದ್ರೆಯೊತ್ತಿದೆ, ಅದಕ್ಕೊಂದು ನೈತಿಕ ಅರ್ಥವನ್ನು ನೀಡಿದೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಬಡ್ತಿ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ಈ ತೀರ್ಪು ಅಕ್ಷರಶಃ ಸ್ವಾಗತಾರ್ಹ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಈ ತೀರ್ಪು ಮತ್ತೊಮ್ಮೆ ಎತ್ತಿಹಿಡಿದಿದೆ. ಅಲ್ಲದೆ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಭಾರತದ ಸಂವಿಧಾನವನ್ನು, ಅದರ ಮೂಲ ಅಂಶಗಳನ್ನು ನ್ಯಾಯಾಂಗ ರಕ್ಷಿಸುತ್ತದೆ ಎಂಬುದಕ್ಕೆ ಈ ತೀರ್ಪು ಮತ್ತೊಂದು ದಾಖಲೆಯಾಗಿ ಹೊರಬಂದಿದೆ.
ಯಾಕೆಂದರೆ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲೂ ಮೀಸಲಾತಿ, ಅದನ್ನು ಭಾರತದ ಸಂವಿಧಾನ ಅನುಚ್ಛೇದ 16(4)(ಎ) ಬಹಳ ಸ್ಪಷ್ಟವಾಗಿ ದಾಖಲಿಸುತ್ತದೆ. ಆ ಭಾಗವನ್ನು ಇಲ್ಲಿ ಯಥಾವತ್ ಉಲ್ಲೇಖಿಸುವುದಾದರೆ “ಅನುಚ್ಛೇದ 16(4)(ಎ): ಈ ಅನುಚ್ಛೇದದಲ್ಲಿರುವುದು ಯಾವುದೂ ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳವರು ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯವು ಅಭಿಪ್ರಾಯಪಟ್ಟಲ್ಲಿ, ರಾಜ್ಯದ ಅಧೀನದ ಸೇವೆಗಳಲ್ಲಿನ (ಯಾವುದೇ ವರ್ಗದ ಅಥವಾ ವರ್ಗಗಳ ಹುದ್ದೆಗಳಿಗೆ, ತತ್ಪರಿಣಾಮದ ಜ್ಯೇಷ್ಠತೆಯೊಂದಿಗೆ ಬಡ್ತಿ ವಿಷಯದಲ್ಲಿ) ಅಂಥವರಿಗಾಗಿ ಮೀಸಲಾತಿಯ ಯಾವುದೇ ಉಪಬಂಧವನ್ನು ಮಾಡಲು ರಾಜ್ಯಕ್ಕಿರುವ ಅಧಿಕಾರವನ್ನು ಪ್ರತಿಬಂಧಿಸತಕ್ಕದಲ್ಲ”. ಇದರ ಪ್ರಕಾರ ರಾಜ್ಯ ಸರ್ಕಾರ ರೂಪಿಸಿ ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದ ಸದ್ಯ ಸುಪ್ರೀಂ ಅಸ್ತು ಎಂದಿರುವ ರಾಜ್ಯ ಸರ್ಕಾರದ ‘ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿ ಕಾಯಿದೆ-2018’ ಅನ್ನು ಯಾರೂ ಕೂಡ ಪ್ರತಿಬಂಧಿಸಲು ಸಾಧ್ಯವಿಲ್ಲ.
ಹಾಗೆಯೇ ಅನುಚ್ಛೇದ 16ಕ್ಕೆ 2002ರಲ್ಲಿ ಮಾಡಲಾದ 85ನೇ ತಿದ್ದುಪಡಿ ಕೂಡ “ಸದರಿ ನೌಕರ(ಎಸ್ಸಿ/ಎಸ್ಟಿ) ಬಡ್ತಿಗೊಂಡ ನಂತರವೂ ಬಡ್ತಿಗೊಂಡ ತನ್ನ ಸ್ಥಾನದಲ್ಲಿ ತತ್ಪರಿಣಾಮ ಉಂಟಾಗಬಹುದಾದ ಜ್ಯೇಷ್ಠತೆಗೆ ಅರ್ಹನಾಗುತ್ತಾನೆ” ಎಂದು ಸ್ಪಷ್ಟವಾಗಿ ಹೇಳುತ್ತದೆ. ಒಟ್ಟಾರೆ ಸಂವಿಧಾನದ ನಿಲುವುಗಳು ಇಷ್ಟೊಂದು ಸ್ಪಷ್ಟವಾಗಿರುವಾಗ ಮತ್ತು ಸಂಸತ್ತಿನ ತದನಂತರದ ಯಾವುದೇ ತಿದ್ದುಪಡಿಗಳ ಮೂಲಕವೂ ಅದು ರದ್ದುಗೊಂಡಿಲ್ಲದಿರುವಾಗ ಎಸ್ಸಿ/ಎಸ್ಟಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನಿರಾಕರಿಸುವುದು ಯಾರಿಗಾದರೂ ಹೇಗೆ ತಾನೆ ಸಾಧ್ಯ?
ಈ ಸಂದರ್ಭದಲ್ಲಿ ತನ್ನ ಈ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಯು.ಯುಲಲಿತ್ರವರುಗಳ ನೇತೃತ್ವದ ಪೀಠ ಮೀಸಲಾತಿಗೊಂದು ಅಪರೂಪದ ವ್ಯಾಖ್ಯಾನ ನೀಡುತ್ತಾ “ಜನತೆಯು ಯಾವ(ಸಾಮಾಜಿಕ) ಮಟ್ಟದಲ್ಲಿ ಜನಿಸಿದ್ದಾರೆ ಎಂಬುದನ್ನು ಲೆಕ್ಕಕ್ಕೆ ತೆಗೆದುಕೊಂಡು ಪರಿಣಾಮಕಾರಿ ಮತ್ತು ನೈಜಸಮಾನತೆಯ ಆಶಯವನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ಎಸ್ಸಿ/ಎಸ್ಟಿಗಳ ಮೀಸಲಾತಿ” ಎಂದಿದೆ. ಹಾಗೆಯೇ ಅರ್ಜಿದಾರರು ಪ್ರಸ್ತಾಪಿಸಿದ್ದ ನೌಕರರ ದಕ್ಷತೆಗೆ ಸಂಬಂಧಿಸಿದಂತೆ ಹೇಳಿರುವ ನ್ಯಾಯಪೀಠ ಈ ಸಂಬಂಧದ ಸಂವಿಧಾನ ಅನುಚ್ಛೇದ 335ನ್ನು ಪ್ರಸ್ತಾಪಿಸುತ್ತಾ ದಕ್ಷತೆ ಅಳೆಯುವ ಒಂದೇ ಮಾನದಂಡ ಇತರರಂತೆ ಎಸ್ಸಿ/ಎಸ್ಟಿಗಳು ಕೂಡ ಆ ಹುದ್ದೆಯ ಸಂಬಂಧಿತ ಪದವಿ ಮತ್ತು ಪರೀಕ್ಷೆಗಳನ್ನು ಪಾಸುಮಾಡಿರುವುದಾಗಿರುತ್ತದೆ. ಆದ್ದರಿಂದ ಅದನ್ನು(ದಕ್ಷತೆ) ಎಲ್ಲರಿಗೂ ಅನ್ವಯಿಸುವಂತಹ ಒಂದು ತಟಸ್ಥ ಮಾನದಂಡ ಎಂದು ತೆಗೆದುಕೊಳ್ಳಬೇಕೆ ಹೊರತು ಎಸ್ಸಿ/ಎಸ್ಟಿಗಳಿಗೆ ವಿಶೇಷವಾಗಿ ಅಲ್ಲ ಎಂದಿದೆ. ಹಾಗೆಯೇ ಆಡಳಿತದಲ್ಲಿ ‘ದಕ್ಷತೆ’ ಎಂಬ ಪದವನ್ನು ಪ್ರಸ್ತಾಪಿಸುವ ಸಂವಿಧಾನದ ಅದೇ ಅನುಚ್ಛೇದ 335ರ ಮುಂದಿನ ಭಾಗಗಳನ್ನು ಪ್ರಸ್ತಾಪಿಸಿ ನ್ಯಾಯಪೀಠ, ಆ ಮುಂದಿನ ಅಂಶಗಳಾದ “1.ಎಸ್ಸಿ/ಎಸ್ಟಿಗಳಿಗೆ ಅರ್ಹತಾ ಪರೀಕ್ಷೆಗಳಲ್ಲಿ ಅಂಕದಲ್ಲಿ ರಿಯಾಯಿತಿ ನೀಡಬೇಕು. 2.ಮೌಲ್ಯಮಾಪನ ಮಟ್ಟದಲ್ಲೂ ರೀಯಾಯಿತಿ ನೀಡಬೇಕು 3.ಬಡ್ತಿಯಲ್ಲೂ ಮೀಸಲಾತಿ ನೀಡಬೇಕು” ಎಂದಿರುವುದನ್ನು ಒತ್ತಿ ಹೇಳುತ್ತಾ, ಜೊತೆಗೆ ಯಾವುದೇ ಕಾರಣಕ್ಕೂ ಅನುಚ್ಛೇದ 335ರಲ್ಲಿ ಪ್ರಸ್ತಾಪಿಸಿರುವ ‘ದಕ್ಷತೆ’ಯ ಆ ಅಂಶ ಎಸ್ಸಿ/ಎಸ್ಟಿಗಳ ಸದರಿ ರಿಯಾಯಿತಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲೂ ತೊಂದರೆ ನೀಡತಕ್ಕದಲ್ಲ ಎಂದು ಸ್ಪಷ್ಟವಾಗಿ ತನ್ನ ಅಭಿಪ್ರಾಯ ದಾಖಲಿಸಿದೆ. ಆ ಮೂಲಕ ಬಡ್ತಿ ಮೀಸಲಿಗೆ ಸಹಜವಾಗಿ ಅಸ್ತು ಎಂದಿದೆ.
ಈ ಸಂದರ್ಭದಲ್ಲಿ ಸಂವಿಧಾನ ರಚನೆಯ ಸಮಯದಲ್ಲಿ ಅಂದರೆ 1948 ನವೆಂಬರ್ 30ರಂದು ಸಂವಿಧಾನ ಸಭೆಯೊಳಗೆ ಚರ್ಚೆಯಲ್ಲಿ ಪಾಲ್ಗೊಂಡು ಬಾಬಾಸಾಹೇಬ್ ಅಂಬೇಡ್ಕರರು ಹೇಳುವ ಮಾತೊಂದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಅದೆಂದರೆ “ಆಡಳಿತದಲ್ಲಿ ಸಮಾನತೆ ಇರಬೇಕು. ಅದೇ ಸಮಯದಲ್ಲಿ ಆಡಳಿತದಲ್ಲಿ ಇದುವರೆವಿಗೂ ಸೂಕ್ತ ಅವಕಾಶವನ್ನು ಪಡೆಯದ ಕೆಲವು ವರ್ಗಗಳಿಗೆ ಮೀಸಲಾತಿಯೂ ಇರಬೇಕು”(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.13, ಪು.392). ಅಂದಹಾಗೆ ಅಂಬೇಡ್ಕರ್ರವರು ಇಲ್ಲಿ ಹೇಳಿರುವಂತೆ ಉದಾಹರಣೆಗೆ ಎಸ್ಸಿ/ಎಸ್ಟಿಗಳಿಗೆ ಬಡ್ತಿಯಲ್ಲಿ ಮೀಸಲಾತಿಯೇ ಇದ್ದಿರಲಿಲ್ಲ ಎಂದುಕೊಳ್ಳುವುದಾದರೆ ಅಂತಹ ಸಮಯದಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ನೌಕರಿಗಳೊಳಗೆ ಎಸ್ಸಿ/ಎಸ್ಟಿಗಳು ಬರುವುದು ಸಾಧ್ಯವಿತ್ತೇ? ಎಂದು ಕೇಳಬೇಕಾಗುತ್ತದೆ. ಯಾಕೆಂದರೆ ಸರ್ಕಾರಿ ನೌಕರಿ ಹೊರತುಪಡಿಸಿ ಮೀಸಲಾತಿ ಇಲ್ಲದ ಇತರೆ ಕ್ಷೇ ತ್ರಗಳಲ್ಲಿ ಅಂದರೆ ವ್ಯಾಪಾರ- ವ್ಯವಹಾರ, ಕೈಗಾರಿಕೆ, ಕೃಷಿ… ಇಲ್ಲೆಲ್ಲ ಎಸ್ಸಿ/ಎಸ್ಟಿಗಳ ಪಾಲು ಎಷ್ಟಿದೆ ಎಂದು ಯಾರಾದರೂ ಗಮನಿಸಿದರೆ ಖಂಡಿತ ಎಸ್ಸಿ/ಎಸ್ಟಿ ಬಡ್ತಿ ಮೀಸಲಾತಿಯ ಪ್ರಾಮುಖ್ಯತೆ ಏನು ಎಂದು ಅಂತಹವರಿಗೆ ಅರ್ಥ ಆಗಿಯೇ ಆಗುತ್ತದೆ.
ಹ್ಞಾಂ, ಈ ಸಂದರ್ಭದಲ್ಲಿ ಎಸ್ಸಿ/ಎಸ್ಟಿಗಳ ಬಡ್ತಿ ಮೀಸಲು ವಿರೋಧಿಸಿ ಸುಪ್ರಿಂ ಮೆಟ್ಟಿಲೇರಿರುವವರೂ ಗಮನಿಸಬೇಕಾದ ಒಂದು ವಿಷಯವೆಂದರೆ ಅಂಥಹವರು ‘ಇನ್ನೊಬ್ಬರಿಗೇಕೆ ಕೊಟ್ಟಿದ್ದೀರಿ ಎನ್ನುವ ಬದಲು ನಮಗೆ ಏಕೆ ಕೊಟ್ಟಿಲ್ಲ ಎಂದು ಕೇಳುವುದು ಸೂಕ್ತವಾಗುತ್ತದೆ” ಎಂಬುದು. ಏಕೆಂದರೆ ಎಸ್ಸಿ/ಎಸ್ಟಿಗಳಂತೆ ಹಿಂದುಳಿದ ವರ್ಗಗಳಿಗೂ(ಓಬಿಸಿಗಳು) ಮಂಡಲ್ ವರದಿ ಶೇ.27ರಷ್ಟು ಉದ್ಯೋಗ ನೇಮಕಾತಿಯಲ್ಲಿ ಮೀಸಲು ನೀಡುತ್ತದೆ. ಅಂದಹಾಗೆ ಸದರಿ ವರ್ಗಗಳವರು “ನಮಗೆ ನೇಮಕದಲ್ಲಿ ಮೀಸಲು ನೀಡಿರುವಂತೆ ಬಡ್ತಿಯಲ್ಲೂ ನೀಡಿ” ಎಂದು ಸರ್ಕಾರವನ್ನು ಒತ್ತಾಯಿಸಿದರೆ ಸಮಸ್ಯೆಯೇ ಇರುವುದಿಲ್ಲ! ಆದ್ದರಿಂದ ರಾಜ್ಯ ಸರ್ಕಾರದ ಎಸ್ಸಿ/ಎಸ್ಟಿ ನೌಕರರ ಬಡ್ತಿ ಮೀಸಲಾತಿಯ ನೂತನ ಕಾಯಿದೆಯ ಈ ನಿಟ್ಟಿನಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ಈ ತೀರ್ಪು ಅಕ್ಷರಶಃ ಮಾದರಿಯಾದುದು. ಇಡೀ ದೇಶವೇ ಇದನ್ನು ಅನುಕರಿಸುವಂತಹದ್ದು ಎಂದು ನಿಸ್ಸಂಶಯವಾಗಿ ಹೇಳಬಹುದು.
–ರಘೋತ್ತಮ ಹೊ.ಬ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಹುಬ್ಬಳ್ಳಿಯ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರಾದ ರಮೇಶ್ ದೇಸಾಯಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಸರ್ಕಾರದಿಂದ ವಿತರಣೆಯಾದ ಟೂಲ್ಕಿಟ್ಗಳನ್ನು ನಿಯಮಾನುಸಾರ ವಿತರಣೆ ಮಾಡದೆ ವಂಚಿಸಿರುವ ಅಧಿಕೃತ ಮಾಹಿತಿಯ ಆಧಾರದ ಮೇಲೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ, ಮಾಹಿತಿ ಕೋರಲಾಗಿತ್ತು.
ಪ್ರಾಚಾರ್ಯರು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿ ಫಾರ್ ಸಹಿಯೊಂದಿಗೆ ಹಿಂಬರಹ ನೀಡಲಾಗಿರುತ್ತದೆ. ಮಾಹಿತಿ ಅಧಿಕಾರಿ, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರು ನೀಡಿರುವ ಪತ್ರದಲ್ಲಿರುವ ಫಾರ್ ಸಹಿಯೇ ಪ್ರಾಚಾರ್ಯರ ಹೆಸರಿನ ಪತ್ರದಲ್ಲಿ ನಮೂದಾಗಿರುತ್ತದೆ. ಸದರಿ ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಪ್ರಾಚಾರ್ಯರೇ ಆಗಿರುತ್ತಾರೆ.
ಹೀಗಿರುವಾಗ ಪಾಚಾರ್ಯರ ಮುದ್ರೆ ಇರುವಲ್ಲಿ ಫಾರ್ ಎಂಬುದಾಗಿ ನಮೂದಿಸಿ ಸಹಿ ಮಾಡಿ, ಮಾಹಿತಿ ಅಧಿಕಾರಿ ಎಂಬ ಮುದ್ರೆಗೆ ಫಾರ್ ಬಳಸದೆ ಸಹಿ ಮಾಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಜಂಟಿ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಆದರೆ ಜಂಟಿ ನಿರ್ದೇಶಕರು, ಕೌಶಲ್ಯ ಅಭಿವೃದ್ದಿ ಮತ್ತು ಉದ್ಯೋಗ ಇಲಾಖೆ, ಹುಬ್ಬಳ್ಳಿ ಇವರಿಗೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ದೂರು ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು ಕಳೆಯುತ್ತ ಬಂದರೂ ಇಲಾಖಾ ತನಿಖೆ ನಡೆಸದೆ ಕಾಲ ವಿಳಂಬ ಮಾಡುತ್ತಿರುವ ಚಿತ್ರದುರ್ಗ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಗೆ 06 ಅರ್ಜಿ ಸಲ್ಲಿಸಿ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಉಪವಿಭಾಗಗಳಿಗೆ ಬಿಡುಗಡೆಯಾದ 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ ಒಳಪಡಿಸುವಂತೆ ದೂರು ನೀಡಿದ್ದರು.
ಅಧೀಕ್ಷಕರ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರು ಸದರಿ ಪ್ರಕರಣವನ್ನು ಕಾರ್ಯಪಾಲಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಚಿತ್ರದುರ್ಗ ಇವರಿಗೆ ವರ್ಗಾಹಿಸಿದ್ದರು.
ನಿಯಮಾನುಸಾರ ಇಲಾಖೆ ತನಿಖೆ ನಡೆಸದೆ ಕಾಲ ವಿಳಂಬ ಮಾಡುವ ಉದ್ದೇಶದಿಂದ 6 ತಾಲ್ಲೂಕು ಉಪ ವಿಭಾಗಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವಂತೆ ಆದೇಶ ಹೊರಡಿದ್ದು, ಇದರಂತೆ ವಕೀಲ ಡಾ.ಕೆ.ಎ.ಓಬಳಪ್ಪ ಇವರು ಎಲ್ಲಾ ಉಪವಿಭಾಗಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿದಾಗ ದಾಖಲೆಗಳು ಕಛೇರಿಯಲ್ಲಿ ಲಭ್ಯವಿರುವುದಿಲ್ಲ.
ಈ ಬಗ್ಗೆ ಕಾರ್ಯಪಾಲಕ ಅಭಿಯಂತರರಿಗೆ ದೂರು ನೀಡಿದರೂ ನಿರ್ಲಕ್ಷö್ಯ ತೋರಿದ ಕಾರಣ, ಕರ್ತವ್ಯ ಲೋಪದ ಅಡಿಯಲ್ಲಿ ಕಾರ್ಯಪಾಲಕ ಅಭಿಯಂತರರಾದ ಅಮರ್ನಾಥ್ ಜೈನ್ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days agoಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ4 days agoಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್ನಾಥ್ ಜೈನ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

