Connect with us

ನೆಲದನಿ

ಅಯೋಧ್ಯೆ ತೀರ್ಪು : ಗೆದ್ದಿದ್ದು ಧರ್ಮವಲ್ಲ, ಸೋತಿದ್ದು ಅನ್ಯಾಯವಲ್ಲ..!

Published

on

  • ಡಾ.ಕೆ.ಎ.ಓಬಳೇಶ್

    ಭಾರತದ ನೆಲದಲ್ಲಿ ಸನಾತನವಾದಿಗಳ ಅಸಮಾನತೆಯ ಸಿದ್ಧಾಂತಕ್ಕೆ ಧಕ್ಕೆಯಾದಾಗಲೆಲ್ಲ ತನ್ನ ಅಸ್ತಿತ್ವದ ಉಳಿವಿಗಾಗಿ ಒಂದಿಲ್ಲೊಂದು ತಂತ್ರಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇಂತಹ ತಂತ್ರಗಾರಿಯನ್ನು ಹುಡುಕುತ್ತ ಹೋದರೆ ಪುರಾಣಗಳ ಕಾಲದಿಂದಲೇ ಇದರ ಕುರುಹುಗಳು ದೊರೆಯುತ್ತವೆ. ಇದಕ್ಕೆ ಪೂಕರವಾಗಿ ನಿರ್ಮಾಣವಾಗಿದ್ದೆ ಬಾಬರಿ ಮಸಿದಿಯ ದ್ವಂಸ ಪ್ರಕರಣ. ಈ ಬಾಬರಿ ಮಸಿದಿ ಪ್ರಕರಣ ಇವರಿಗೆ ಒಂದು ನೆಪ ಮಾತ್ರ. ವಾಸ್ತವವಾಗಿ ಇವರಿಗೆ ರಾಮನ ಮೇಲೆ ಎಳ್ಳಷ್ಟು ಕಾಳಜಿ ಇಲ್ಲ.

ಆದರೆ ಇವರಿಗೆ ಬೇಕಾಗಿರುವುದು ಅಸಮಾನತೆಯ ವರ್ಣಾಶ್ರಮದ ಬೇರುಗಳು. ಸನಾತನವಾದದ ಈ ಅಸಮಾನತೆಯ ಬೇರುಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸುವವರೆಗೂ ಭದ್ರವಾಗಿದ್ದವು. ಈ ನಡುವೆ ಬುದ್ಧನ ಕಾಲದಿಂದಲೂ ಈ ವರ್ಣಾಶ್ರಮದ ಬೇರುಗಳಿಗೆ ಧಕ್ಕೆಯಾದಗಲೆಲ್ಲ ಏನೆಲ್ಲಾ ತಂತ್ರಗಳನ್ನು ಮಾಡಿ, ಬಣ್ಣ ಬದಲಾಯಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂಬುದಕ್ಕೆ ಚರಿತ್ರೆಯಲ್ಲಿ ಸಾಕಷ್ಟು ನಿದರ್ಶನಗಳು ಕಂಡುಬರುತ್ತವೆ.

ಆದರೆ ಅದನ್ನು ಇಲ್ಲಿ ಚರ್ಚಿಸುವುದಕ್ಕೆ ಅವಕಾಶವಿಲ್ಲ. ಆದರೆ ಭಾರತದ ನೆಲದಲ್ಲಿ ವೈದಿಕತೆಯ ವಿರುದ್ಧ ಸಮರ ಸಾರಿದ ಎಲ್ಲ ಅವೈದಿಕ ಶ್ರಮಣಧಾರೆಗಳನ್ನು ಸನಾತನವಾದಿಗಳುವೈದಿಕೀಕರಣಗೊಳಿಸಿರುವುದು ಮಾತ್ರ ಸತ್ಯ. ಇದಕ್ಕೆ ನಿದರ್ಶನವಾಗಿ ಸಮಾನತೆಯ ಜೀವಪರ ಮೌಲ್ಯಗಳನ್ನು ಎತ್ತಿಹಿಡಿದ ಬುದ್ಧ, ಬಸವಣ್ಣನಂತಹ ದಾರ್ಶನಿಕರು ಇಂದು ದೇವರಾಗಿ ಪೂಜೆಗೊಳ್ಳುತ್ತಿದ್ದಾರೆ. ಆದರೆ ಈ ಎಲ್ಲಾ ದಾರ್ಶನಿಕರ ಜೀವಪರ ನಿಲುವುಗಳನ್ನು ತಿಂದು ಜೀರ್ಣಿಸಿಕೊಂಡಿದ್ದ ಸನಾತನವಾದಿಗಳಿಗೆ ನುಂಗಲಾರದ ತುತ್ತಾಗಿದ್ದು ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಅತ್ಯಮೂಲ್ಯವಾದ ಸಂವಿಧಾನ.

ಭಾರತವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಿಕೊಂಡು ಮತ್ತೇ ಮನುವಾದಿ ಭಾರತವನ್ನು ನಿರ್ಮಿಸಬೇಕು ಎಂಬುದು ಸನಾತನವಾದಿಗಳ ಆಶಯವಾಗಿತ್ತು. ಆದರೆ ಬಾಬಾಸಾಹೇಬ ಕನಸ್ಸಿನ ಪ್ರಬುದ್ಧ ಭಾರತವು ಮನುವಾದಿಗಳಿಗೆ ಸಹಿಸದ ತುತ್ತಾಗಿತ್ತು. ಅಷ್ಟೇ ಅಲ್ಲದೇ ಶತ ಶತಮಾನಗಳಿಂದ ಕಾಪಾಡಿಕೊಂಡು ಬಂದಿದ್ದ ತಮ್ಮ ಅಸಮಾನತೆಯ ಗೊಡ್ಡು ಸಂಪ್ರದಾಯಗಳಿಗೆ ಬಾಬಾಸಾಹೇಬರು ತಿಲಾಂಜಲಿಯನ್ನು ಇಟ್ಟು ಸಮಾನತೆ ನಾಡಿಗಾಗಿ ಶ್ರಮಿಸಿದರು.

ಸಂವಿಧಾನದ ಜಾರಿಯಿಂದ ತಮಗೆ ಅಸ್ತಿತ್ವವಿಲ್ಲವೆಂದು ತಿಳಿದ ಮನುವಾದಿಗಳು ಕೋಮುವಾದವನ್ನು ಹುಟ್ಟಿಹಾಕುವ ಮೂಲಕ ಸಾಮಾನ್ಯ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾದರು. ಹಿಂದೂ-ಮುಸಲ್ಮಾನ್-ಕ್ರೈಸ್ತರಲ್ಲಿ ವಿಷಬೀಜ ಬಿತ್ತುವ ತಂತ್ರಗಳಿಗೆ ಮುಂದಾದರು. ಇಂತಹ ಸಂದರ್ಭದಲ್ಲಿ ಇವರಿಗೆ ಸಿಕ್ಕಿದ್ದೆ ಬಾಬರಿ ಮಸಿದಿ. ತಮ್ಮದಲ್ಲದ ಜಾಗದಲ್ಲಿ ರಾತ್ರೋರಾತ್ರಿ ರಾಮನ ವಿಗ್ರಹ ಸ್ಥಾಪನೆ ಮಾಡಿದ ಸನಾತನವಾದಿಗಳು ಒಂದಿಲ್ಲ ಒಂದು ರೀತಿಯಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಲೆ ಬಂದರು.

ಕೊನೆಗೆ ರಾಮ ಇದೇ ಜಾಗದಲ್ಲಿ ಜನ್ಮತಳೆದಿದ್ದ, ಈ ಹಿಂದೆ ಇಲ್ಲಿ ರಾಮ ಮಂದಿರವಿತ್ತು. ಬಾಬರ್ ಅದನ್ನು ದ್ವಂಸ ಮಾಡಿ ಮಸಿದಿ ನಿರ್ಮಾಣ ಮಾಡಿದ್ದಾನೆ ಎಂಬ ಕಟ್ಟುಕಥೆಗಳು ನಿರ್ಮಾಣವಾದವು. ನಂತರ ಕೋಮುವಾದಿಗಳ ತಂತ್ರಕ್ಕೆ ಬಲಿಯಾಗಿ ಮಸಿದಿಯು ನೆಲಸಮವಾಯಿತು. ಅಂದಿನಿಂದ ಇಂದಿನವರೆಗೂ ಒಂದಿಲ್ಲ ಒಂದು ರೀತಿಯಲ್ಲಿ ಕೋಮುಗಲಭೆಗಳು ನಡೆಯುತ್ತಲೆ ಇದ್ದವು. ಕೋರ್ಟಿನಲ್ಲಿ ಯಾರ ಪರವಾಗಿಯೂ ಯಾರ ವಿರುದ್ಧವಾಗಿಯೂ ತೀರ್ಪು ನೀಡಲಾಗದ ನ್ಯಾಯಾಲಯವು ಈ ಪ್ರಕರಣವನ್ನು ಮುಂದೂಡುತ್ತಲೆ ಬರಲಾಗಿತ್ತು. ನ್ಯಾಯಾಲಯವು ಹೀಗೆ ಸಮಯವನ್ನು ಮುಂದೂಡುವುದಕ್ಕೆ ಕಾರಣವು ಇತ್ತು.

ಸನಾತನವಾದಿಗಳು ಹುಸಿ ದೇಶಭಕ್ತಿ ಹಾಗೂ ದೇಶಪ್ರೇಮದ ಅಡಿಯಲ್ಲಿ ಸೃಷ್ಟಿಸಿದ ಈ ಪ್ರಕರಣವನ್ನೇ ತನ್ನ ಬಂಡವಾಳ ಮಾಡಿಕೊಂಡ ಸಂಘಪರಿವಾರದ ರಾಜಕೀಯ ಮುಖವಾದ ಬಿ.ಜೆ.ಪಿ ಸರ್ಕಾರವು ತನ್ನ ರಾಜಕೀಯ ವೈಭೋಗಕ್ಕೆ ಈ ಪ್ರಕರಣವನ್ನು ಬಳಸಿಕೊಂಡಿತು. ಈ ಪ್ರಕರಣವನ್ನು ಬಿ.ಜೆಪಿ ಸರ್ಕಾರವು ಎಷ್ಟರ ಮಟ್ಟಿಗೆ ಬಳಸಿಕೊಂಡಿತು ಎಂದರೆ ದೇಶದ ಆರ್ಥಿಕತೆ ಬೆತ್ತಲಾಗಿ, ನಿರುದ್ಯೋಗ ಗಗನ ಮುಟ್ಟಿದರೂ, ಜಿ.ಎಸ್ಟಿಯಂತಹ ತೆರಿಗೆಗಳು ಸಾಮಾನ್ಯ ಜನರು ತಿನ್ನುವ ಅನ್ನವನ್ನು ಕಸಿದುಕೊಂಡರು ಜನರು ಮಾತ್ರ ಮೋದಿಗೆ ಜೈಕಾರ ಹಾಕುವುದು ತಪ್ಪಲಿಲ್ಲ.

ಇದಕ್ಕೆ ಕಾರಣ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಮ ಮಂದಿರವನ್ನು ಕಟ್ಟುತ್ತದೆ ಎಂಬ ಆಶಾ ಭಾವನೆಯಾಗಿತ್ತು. ಆದರೆ ಮೋದಿ ಸರ್ಕಾರ ಇದನ್ನೇ ಬಂಡವಾಳ ಮಾಡಿಕೊಂಡು ಎರಡನೇ ಭಾರಿ ಅಧಿಕಾರ ಹಿಡಿಯುವ ಸಂದರ್ಭಕ್ಕಾಗಲೇ ಭಾರತೀಯರನ್ನು ಬೆತ್ತಲೆಗೊಳಿಸಿಯಾಗಿತ್ತು. ಈ ಸಂದರ್ಭದಲ್ಲಿ ಜನರು ತಮ್ಮ ಸರ್ಕಾರವನ್ನು ವಿರೋಧಿಸದಂತೆ ಬಾಯಿ ಮುಚ್ಚಿಸುವ ತಂತ್ರವಾಗಿ ಅಯೋಧ್ಯ ತೀರ್ಪು ಹಿಂದುಗಳ ಪರವಾಗಿ ಬರುವಂತೆ ನೋಡಿಕೊಂಡರು.

ಆದರೆ ಸರ್ವೋಚ್ಚ ನ್ಯಾಯಾಲಯ ನೀಡಿದೆ ಎನ್ನುವ ಕಾರಣಕ್ಕಾಗಿ ಎಲ್ಲರೂ ಈ ತೀರ್ಪಿಗೆ ತಲೆಭಾಗಿದರೇ ಹೊರತು, ಇದಕ್ಕೆ ಬಹುತೇಕ ಬುದ್ಧಿಜೀವಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಹಲವಾರು ನಿವೃತ್ತ ನ್ಯಾಯಾಧೀಶರು ಕೂಡ ಈ ತೀರ್ಪಿನ ಬಗ್ಗೆ ಸಂವಿಧಾನಿಕ ಚೌಕಟ್ಟಿನಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಮುಖ ಕಾರಣವೆಂದರೆ ಧರ್ಮದ ಹೆಸರಿನ ಮೇಲೆ ಹೊರಬಂದ ತೀರ್ಪಿನಲ್ಲಿ ನಿಜವಾದ ಧರ್ಮ ಸೋತಿತ್ತು. ಅಧರ್ಮ ತಲೆ ಎತ್ತಿ ನಿಂತಿತ್ತು.

ಚರಿತ್ರೆಯ ಪುಟಗಳಲ್ಲಿ ಒಬ್ಬ ರಾಜ ತನ್ನ ಧರ್ಮದ ಸಂಕೇತವಾಗಿ ನಿರ್ಮಾಣ ಮಾಡಿದ ಧಾರ್ಮಿಕ ಕೇಂದ್ರವು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇದನ್ನು ಕೆಡವಿರುವುದು ಅಕ್ಷಮ್ಯ ಅಪರಾಧ ಎನ್ನುವುದು ಕೂಡ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಹೀಗಿದ್ದರೂ ತನ್ನ ತೀರ್ಪಿನಲ್ಲಿ ಮಸಿದಿಯನ್ನು ಕೆಡವಿದ್ದು ಅಪರಾಧ ಎಂದು ಬಿಂಬಿಸಿದರೂ ಕೂಡ, ತೀರ್ಪು ಬಂದಿದ್ದು ಕಟ್ಟು ಕಥೆಯನ್ನು ಕಟ್ಟಿದವರ ಪರವಾಗಿಯೇ.

ನ್ಯಾಯಲಯ ನೀಡಿದ ಈ ತೀರ್ಪು ನಿಜವಾದ ನ್ಯಾಯಧರ್ಮಕ್ಕೆ ಮಾಡಿದ ಅಪಚಾರದಂತಿದೆ.ಅಯೋಧ್ಯೆಯಲ್ಲಿ ಮಸಿದೆ ಇತ್ತು ಎಂಬುದು ನಮ್ಮ ಕಣ್ಣ ಮುಂದಿನ ಸತ್ಯ. ಆದರೆ ಅಲ್ಲಿ ರಾಮಜನ್ಮ ತಳೆದಿದ್ದ ಎಂಬುದು ಕೇವಲ ಕಟ್ಟು ಕಥೆಯಾಗಿದೆ. ನ್ಯಾಯಾಲಯಕ್ಕೆ ಕಟ್ಟುಕಥೆಗಳು ಸಾಕ್ಷ್ಯಗಳಾಗಲು ಸಾಧ್ಯವೇ ಇಲ್ಲ. ಆದರೆ ರಾಜಕೀಯ ಪ್ರೇರಿತವಾದ ಕಾರಣದಿಂದಾಗಿ ಚರಿತ್ರೆಯ ಕುರುಹುಗಳನ್ನು ಕಡೆಗಣಿಸಿ, ದಂತಕಥೆಗೆ ನ್ಯಾಯ ಕಲ್ಪಿಸಿದ್ದು ಮಾತ್ರ ಅನ್ಯಾಯಕ್ಕೆ ಸಿಕ್ಕ ಜಯ ಎಂಬುದರಲ್ಲಿ ಎರಡು ಮಾತಿಲ್ಲ.

ಹಿಂದೂಗಳ ಪರವಾದ ತೀರ್ಪು ಬಂದಾಯ್ತು ನಿಜ. ಆದರೆ ಹಿಂದೂಧರ್ಮದಲ್ಲಿ ಮನೆ ಮಾಡಿಕೊಂಡಿದ್ದ ಎಲ್ಲಾ ಅನಿಷ್ಟಗಳು ರಾಮಮಂದಿರ ನಿರ್ಮಾಣದಿಂದ ದೂರವಾಗುತ್ತವೆ ಎಂದು ಆಶಾಭಾವನೆಯನ್ನು ತಳೆಯೊಣವೇ ಹಾಗಾದರೆ..! ಇಲ್ಲ, ನಿಜವಾದ ಸಮಸ್ಯೆಗಳು ಎದುರಾಗುವುದೇ ಇಲ್ಲಿ.

ಹಿಂದುತ್ವವನ್ನು ಕಾಪಾಡುತ್ತೇವೆ ಎಂದು ಹೇಳುತ್ತಲೇ ರಾಜಕಿಯ ಚುಕ್ಕಾಣಿ ಹಿಡಿದಿರುವ ಪಕ್ಷವು ದೇಶವನ್ನೇ ದಿವಾಳಿತನಕ್ಕೆ ತಳ್ಳುತ್ತಿದೆ.ದೀನ ದಲಿತರು ಧರ್ಮದ ಹೆಸರಿನಲ್ಲಿ ಬಲಿ ಪಶುಗಳಾಗುತ್ತಿದ್ದಾರೆ. ದೀನ ದಲಿತರ ಹೆಣ್ಣುಮಕ್ಕಳಿಗೆ ಅಭದ್ರತೆ ಎದ್ದು ಕಾಡುತ್ತಿದೆ. ನಿರುದ್ಯೋಗ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಇದಕ್ಕೆ ಕಾಶ್ಮೀರವೇ ಜ್ವಲಂತ ಸಾಕ್ಷಿಯಾಗಿದೆ.

ಇಷ್ಟೆಲ್ಲ ಸಂಕಷ್ಟದ ನಡುವೆಯೂ ಮೋದಿಯ ಜೈಕಾರ ಜ್ವಾಲೆ ಮಾತ್ರ ಮುಗಿಲು ಮುಟ್ಟುತ್ತಿದೆ. ಆ ಜ್ವಾಲೆ ಮುಂದೆ ಕೂಗುವವರು ಹಿಂದೆ ತಮ್ಮನ್ನು ಸುಡುತ್ತದೆ ಎಂಬ ಅರಿವಿಲ್ಲದೆ ನಿಂತಿದ್ದಾರೆ. ಮುಂದೊಂದು ದಿನ ಈ ಪರಿಸ್ಥಿತಿಯು ಸಾಮಾನ್ಯ ಜನರನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ, ಸರ್ವರು ಸಮಾನರೆಂದು ಸಾರಿದ ಭಾರತದ ಸಂವಿಧಾನದ ಆಶಯಗಳನ್ನು ಒಂದೊಂದಾಗಿಯೇ ಸಡಿಲಗೊಳಿಸುವ ಕಾರ್ಯವಂತೂ ನಿಧಾನವಾಗಿ ಸಾಗುತ್ತಲೆ ಇದೆ.

ಇದಕ್ಕೆ ದಮನಿತ ಸಮುದಾಯದ ಪ್ರಬಲರೂ ಬೆಂಬಲವಾಗಿ ನಿಂತಿರುವುದು ಮತ್ತೊಂದು ದುರಂತವಾಗಿದೆ. ಈ ಎಲ್ಲರದ ನಡುವೆ ಧರ್ಮ ಸೋತು, ಅಧರ್ಮ ತಾಂಡವವಾಡುತ್ತಿದೆ. ಮುಂದೊಂದು ಇಂತಹ ಅಪಾಯಕಾರಿ ತೀರ್ಪು ಭಾರತೀಯರೆಲ್ಲರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವನ್ನೇ ಬಲಿ ತೆಗೆದುಕೊಳ್ಳುವ ಸಂದರ್ಭ ನಮ್ಮ ಮುಂದಿದೆ. ಇದಕ್ಕೆ ನಿದರ್ಶನವಾಗಿ ಅಯೋಧ್ಯೆ ತೀರ್ಪು ನಮ್ಮ ಮುಂದಿದೆ.

ಯಾರು ಕಂಡಿರದ, ನೋಡಿರದ ಕಾಲದಲ್ಲಿ ರಾಮ ಜನಿಸಿದ ಎಂಬ ಕಟ್ಟುಕಥೆಗೆ ಮಹತ್ವ ನೀಡಿ, ನಮ್ಮ ಕಣ್ಣ ಮುಂದೆ ನಡೆದ ಮಸಿದಿಯನ್ನು ಮುಚ್ಚಿ ಹಾಕಲಾಯಿತು. ಮುಂದೊಂದು ದಿನ ಇದೇ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಬಾಬಾಸಾಹೇನ್ ಅಂಬೇಡ್ಕರ್ ಅವರು ಮನುವಾದವನ್ನು ತುಳಿದು ಸಂವಿಧಾನ ರಚಿಸಿದ್ದಾರೆ.

ಇದರಿಂದ ಹಿಂದುಗಳಿಗೆ ಮತ್ತು ಹಿಂದುತ್ವದ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ ನಮಗೆ ಸಂವಿಧಾನ ಬೇಡ ಮನುವಾದ ಬೇಕು ಎಂಬ ವಾದವು ನ್ಯಾಯಾಲಯದ ಮೆಟ್ಟಲೇರಿದರೂ ಆಶ್ಚರ್ಯಪಡಬೇಕಿಲ್ಲ. ಆಗ ದೇಶದ ಚುಕ್ಕಾಣಿಯು ಇಂತಹ ಕೋಮುವಾದಗಳ ಕೈಯಲ್ಲಿದ್ದರೆ ನ್ಯಾಯಾಲಯದ ತೀರ್ಪು ಯಾವುದರ ಪರವಾಗಿ ಬರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಲೇಖಕಿ ಬಾನು ಮುಸ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ; ಗಣ್ಯರ ಅಭಿನಂದನೆ

Published

on

ಸುದ್ದಿದಿನಡೆಸ್ಕ್:ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.

ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.

ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ.

ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ ‘ಎದೆಯ ಹಣತೆ’ಯನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ

ಹಾಗೇ ನಾಡಿನ ಸಾಹಿತ್ಯ ಪ್ರೇಮಿಗಳು, ಹೋರಾಟಗಾರರು ಸೇರಿದಂತೆ ಕನ್ನಡಿಗರು ಸಂಭ್ರಮಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ

Published

on

ಸುದ್ದಿದಿನ,ಚನ್ನಗಿರಿ:ಪಟ್ಟಣದ ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ (ಮಾರ್ಚ್-22) ‘ಜಾನಪದ ಉತ್ಸವ – 2025″ ಅದ್ದೂರಿಯಾಗಿ ನಡೆಯಿತು.

ಜಾನಪದ ತಜ್ಞ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ, ಅವರು ಉತ್ಸವಕ್ಕೆ ಚಾಲನೆ ನೀಡಿದರು.

ಎತ್ತಿನ ಬಂಡಿಯಲ್ಲಿ ಅಧ್ಯಾಪಕರು, ಅತಿಥಿಗಳ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ನೀರು ತುಂಬಿದ ಪೂರ್ಣ ಕುಂಭಗಳನ್ನು ಹೊತ್ತು ಅತಿಥಿಗಳನ್ನು ಸ್ವಾಗತಿಸಿದರು.

ಅಂದು ಕಾಲೇಜಿನಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ವರ್ಷದಲ್ಲಿ ಬರುವ ಯುಗಾದಿ, ಸಂಕ್ರಾಂತಿ, ಶಿವರಾತ್ರಿ, ಕ್ರಿಸ್ ಮಸ್, ರಂಜಾನ್, ದಸರಾ, ಭೂಮಿ ಹುಣ್ಣಿಮೆ, ರಾಶಿ ಪೂಜೆ ಸೇರಿದಂತೆ, ಬಳೆಗಾರ, ಕಣಿಹೇಳುವ, ಚೌಕಾಬಾರಾ, ಗುರುಕುಲ, ಆಯುರ್ವೇದ, ಗೋ ಪೂಜೆ ಎಲ್ಲವೂ ಜಾನಪದ ಸಂಸ್ಕೃತಿಯನ್ನು ಪುನರ್ ನಿರ್ಮಾಣಮಾಡಿದ್ದವು.

ಉತ್ಸವದಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು, ಪಂಚೆ, ಅಂಗಿ, ಕುರ್ತಾ, ಲಂಗಾದಾವಣಿ, ಸೀರೆ ಉಟ್ಟು ,ಬುರ್ಕಾ, ತೊಟ್ಟು ಸಡಗರ ಸಂಭ್ರಮದಿಂದ ಕುಣಿದಾಡಿದರು.

ರಾಮನವಮಿಯ ಬೆಲ್ಲದ ಪಾನಕ – ಕೋಸಂಬರಿ, ಕ್ರಿಸ್ಮಸ್ ನ ಕೇಕ್, ರಂಜಾನ್ ಹಬ್ಬದ ಇಪ್ತಾರ್ ಕೂಟದ ಫಲಾಹಾರ, ಗಣಪತಿ ಹಬ್ಬದ ಕಡುಬು, ಯುಗಾದಿಯ ಹೋಳಿಗೆ, ಭೂಮಿ‌ಪೂಜೆಯ ಪಾಯಸ ಹೀಗೆ ವಿವಿಧ ಬಗೆಯ ತಿಂಡಿತಿನಿಸುಗಳು 30 ಜಿಲ್ಲೆಗಳ ವಿಶೇಷ ಖಾಧ್ಯಗಳು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದವು.

ವಸ್ತು ಪ್ರದರ್ಶನ

ಸುಮಾರು ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಬೀಸು ಕಲ್ಲು, ಒನಕೆ, ಸೌದೆ ಒಲೆ, ಕೊಡಲಿ, ಮಚ್ಚು, ಬರ್ಜಿ, ಚನ್ನೆಮಣೆ, ಕೀಲುಗೊಂಬೆ, ಪಾರಂಪರಿಕ ಔಷಧಿ, ಕುಡುಗೋಲು, ಬಂಡಿ,ನಾಣ್ಯಗಳು,ಸೇರು, ಒಳಕಲ್ಲು, ಶಹನಾಯಿ,ಮಜ್ಜಿಗೆಯ ಕಡೆಗೋಲು, ತಾಳ, ಹಾರ್ಮೊನಿಯಂ, ಗಂಡುಕೊಡಲಿ,ಶಾವಿಗೆ ಒತ್ತು,ಹುತ್ತದ ಮಾದರಿ,ವಿಭಿನ್ನ ಬಗೆಯ ರಂಗವಲ್ಲಿ, ವಿವಿಧ ಧಾನ್ಯದ ರಾಶಿ,ಕಳಸ, ದಸರಾ ಗೊಂಬೆಗಳು, ನವರಾತ್ರಿಯ ಮಾತೃದೇವತೆ, ಕುರಾನ್ ಪ್ರತಿ, ಜಾನಮಾಜ್,ಕ್ರಿಸ್ತನ ಜನನದ ಗೋದರಿ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಮಾದರಿ ಚಿತ್ರಗಳು ವಸ್ತುಪ್ರದರ್ಶನದಲ್ಲಿದ್ದವು.

ದೇಸೀ ಆಟಗಳು

ದೇಸೀ ಆಟಗಳಾದ ಹಗ್ಗ ಜಗ್ಗಾಟ, ಲಗೋರಿ, ಬುಗುರಿ, ಕುಂಟೋಬಿಲ್ಲೆ ಹಾಗೂ ಜನಪದ ನೃತ್ಯ-ಹಾಡು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಂತಸದಿಂದ ಭಾಗವಹಿಸಿದರು.

ಉತ್ಸವದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಜಿ.ಅಮೃತೇಶ್ವರ ಅವರು ವಹಿಸಿಕೊಂಡಿದ್ದರು. ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಪಕ ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಷ್ಮುಖಪ್ಪ ಕೆ.ಹೆಚ್, ಐಕ್ಯುಎಸಿ ಸಂಚಾಲಕ ಪ್ರೊ.ವಿಜಯ್ ಕುಮಾರ್, ಉತ್ಸವದ ಕ್ರೀಡೆಗಳ ಆಯೋಜಕ ಹಾಗೂ ದೈಹಿಕ ನಿರ್ದೇಶಕರಾದ ಕಲ್ಲೇಶಪ್ಪ ಎಸ್.ಜಿ ಹಾಗೂ ಕಾಲೇಜಿನ ಎಲ್ಲಾ ಅಧ್ಯಾಪಕರು ಹಾಗೂ ಬೋಧಕೇತರ ಸಿಬಂದಿಗಳು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.

ಜಾನಪದ ಕಲೆ, ಸಂಸ್ಕೃತಿಯು ಹಿಂದಿನಿಂದಲೂ ಮನುಷ್ಯ ಜೀವನದೊಂದಿಗೆ ಸಂಬಂಧ ಹೊಂದಿದ್ದು ಇಂದಿನ ಪೀಳಿಗೆಯ ಮಕ್ಕಳು ಜಾನಪದ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಜನಪದ ಪರಂಪರೆಯ ಪ್ರತೀಕವಾಗಿ ‘ಜನಪದ ಉತ್ಸವ – 2025’ ನಮ್ಮ‌ಸಂಸ್ಕೃತಿ ನಮ್ಮ ಹೆಮ್ಮೆ ಹೆಚ್ಚು ಅರ್ಥ ಪೂರ್ಣವಾಗಿ ಮೂಡಿ ಬಂದಿದೆ.
| ಜಾನಪದ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ

ನಮ್ಮ ದೇಶಿ ಸಂಸ್ಕೃತಿಯನ್ನು ಸಂರಕ್ಷಿಸಿ, ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ತಲೆಮಾರುಗಳಿಂದ ಹೊಂದಿರುವ, ಆಯಾ ಪ್ರಾದೇಶಿಕ ಗ್ರಾಮೀಣ ವ್ಯಾಪ್ತಿಯಲ್ಲಿ ಆಚರಣೆಯಲ್ಲಿರುವ ಈ ಮೌಖಿಕ ಪರಂಪರೆಯ ಜಾನಪದ ಸಂಸ್ಕೃತಿಯ ಸೊಗಡುಗಳು ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವ ಒಂದು ಅತ್ಯುತ್ತಮ ಪ್ರಯತ್ನ ‘ಜಾನಪದ ‌ಉತ್ಸವ’-2025.
| ಡಾ.ಬಿ‌.ಜಿ.ಅಮೃತೇಶ್ವರ, ಪ್ರಾಂಶುಪಾಲರು

ಜನಪದರ ಬದುಕು, ಆಧುನಿಕ ಜಾಗತೀಕರಣದ ಕಾಲದಲ್ಲಿ ಹೆಚ್ಚು ಪ್ರಸ್ತುತವಾಗುತ್ತಿದೆ ಅದರ ಸದಾಶಯವನ್ನು ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಎಲ್ಲಾ ಅಧ್ಯಾಪಕರ ಸಹಾಯದಿಂದ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ಅವರಿಗೆ ಅಭಿನಂದನೆಗಳು.
| ಷಣ್ಮುಖಪ್ಪ ಕೆ ಎಚ್ ,ಕಾರ್ಯಕ್ರಮದ ನಿರ್ದೇಶಕರು, ಸಂಚಾಲಕರು,ಸಾಂಸ್ಕೃತಿಕ ವೇದಿಕೆ

Continue Reading

ಅಂತರಂಗ

ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

Published

on

  • ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ

ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು

ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.

ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.

ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.

ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ

ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.

ಮಹಿಳಾ ದಿನಾಚರಣೆಯ ಇತಿಹಾಸ

ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:

1. 1908 – ಮಹಿಳಾ ಹಕ್ಕುಗಳ ಹೋರಾಟ:

ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.

2. 1909 – ಮೊದಲ ಮಹಿಳಾ ದಿನಾಚರಣೆ:

ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.

3. 1910 – ಅಂತಾರಾಷ್ಟ್ರೀಯ ಹೋರಾಟ:

ಡೆನ್ಮಾರ್ಕ್‌ನ ಕೊಪನ್‌ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.

4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:

ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.

5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:

1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.

6. 1975 – ವಿಶ್ವ ಮಹಿಳಾ ವರ್ಷ:

UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು

7. 2011 – 100ನೇ ವಾರ್ಷಿಕೋತ್ಸವ:

2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.

ಮಹಿಳಾ ದಿನಾಚರಣೆಯ ಉದ್ದೇಶ

ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.

ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ

ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್‌ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.

ಮಹಿಳೆಯರು ಬದುಕಿನ ಉತ್ಸಾಹ

ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.

ಸಾಧನೆಗಳ ಬೆಳಕು

1. ಶಿಕ್ಷಣ ಮತ್ತು ಸಶಕ್ತೀಕರಣ:

ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.

2. ಉದ್ಯೋಗ ಹಾಗೂ ಉದ್ಯಮಶೀಲತೆ:

ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.

3. ಕ್ರೀಡೆ ಮತ್ತು ಸಾಹಸ:

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.

4. ಸಮಾಜಸೇವೆ ಮತ್ತು ಪ್ರಭಾವ:

ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.

ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ

ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.

ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್

ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.

“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending