ದಿನದ ಸುದ್ದಿ
ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಂರ ಕಡೆಗಣನೆ, ಆಸ್ತಿ ಹಕ್ಕು ಕಸಿದುಕೊಳ್ಳುವ ಅಸ್ತ್ರ: ಸೈಯದ್ ಖಾಲಿದ್ ಅಹ್ಮದ್

ಸುದ್ದಿದಿನ,ದಾವಣಗೆರೆ: ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿರುವ ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ಈ ಮೂಲಕ ಮುಸ್ಲಿಮರನ್ನು ಕಡೆಗಣಿಸುವ, ವೈಯಕ್ತಿಕ ಕಾನೂನುಗಳು ಮತ್ತು ಆಸ್ತಿ ಕಸಿದುಕೊಳ್ಳುವ ಗುರಿಯನ್ನು ಹೊಂದಿರುವ ಅಸ್ತ್ರವಾಗಿದೆ ಎಂದು ಅಖಿಲ ಭಾರತ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅಲ್ಪಸಂಖ್ಯಾತ ಸಮುದಾಯದವರ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶದಿಂದಲೇ ವಕ್ಫ್ ತಿದ್ದುಪಡಿ ಕಾನೂನು ಜಾರಿಗೊಳಿಸಲಾಗಿದೆ. ಇದರ ವಿರುದ್ಧ ಸಂಘಟಿತ ಹೋರಾಟ ರೂಪಿಸಬೇಕಾಗಿದೆ. ಒಂದು ಧರ್ಮದವರನ್ನು ಗುರಿಯಾಗಿಸಿ ನಡೆಸಿರುವ ವ್ಯವಸ್ಥಿತ ದಾಳಿ ಎಂದು ಪ್ರತಿಕ್ರಿಯಿಸಿದ್ದಾರೆ.
ಆರ್ಎಸ್ಎಸ್, ಬಿಜೆಪಿ ಮತ್ತು ಮಿತ್ರಪಕ್ಷಗಳಿಂದ ಸಂವಿಧಾನದ ಮೇಲಿನ ಈ ದಾಳಿಯು ಇಂದು ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಆದರೆ ಭವಿಷ್ಯದಲ್ಲಿ ಇತರ ಸಮುದಾಯಗಳನ್ನು ಗುರಿಯಾಗಿರಿಕೊಳ್ಳಲು ಒಂದು ಪೂರ್ವನಿದರ್ಶನ ಎಂದರೆ ತಪ್ಪಾಗಲಾರದು ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ವಕ್ಫ್ ತಿದ್ದುಪಡಿ ಮಸೂದೆಯನ್ನು ಬಲವಾಗಿ ವಿರೋಧಿಸುತ್ತದೆ. ಏಕೆಂದರೆ ಇದು ಭಾರತದ ಕಲ್ಪನೆಯ ಮೇಲೆಯೇ ನಡೆದ ದಾಳಿ ಆಗಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ವಿಧಿ 25 ಅನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯದ ಹಕ್ಕುಗಳಿಗೆ ಧಕ್ಕೆ ತರುವ ಕರಾಳವಾದಂಥ ಕಾನೂನು ಇದಾಗಿದೆ. ಈ ಮಸೂದೆ ವಿರುದ್ಧ ಹೋರಾಡಲು ಎಲ್ಲರ ಸಹಕಾರ ಅಗತ್ಯ ಇದೆ. ಮುಸ್ಲಿಂ ಸಮುದಾಯದ ಆಸ್ತಿಗಳನ್ನು ಕಬಳಿಸಲು ಕೇಂದ್ರ ಸರ್ಕಾರವು ನಡೆಸಿರುವ ಹುನ್ನಾರ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿಯುಸಿ : ಸೈನ್ಸ್ ಅಕಾಡೆಮಿ ಪದವಿಪೂರ್ವ ಕಾಲೇಜಿಗೆ ಶೇ.93.52 ರಷ್ಟು ಫಲಿತಾಂಶ

ಸುದ್ದಿದಿನ,ದಾವಣಗೆರೆ: 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು, ದಾವಣಗೆರೆಯ ವಿದ್ಯಾರ್ಥಿಗಳು ಅತ್ಯತ್ತಮವಾದ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
ಕು.ಸುಷ್ಮಿತಾ ಕೆ.ಎಂ. ಒಟ್ಟಾರೆ 600 ಅಂಕಗಳಿಗೆ 574 ಅಂಕಗಳನ್ನು ಗಳಿಸಿ, 95.7% ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕು. ಆದ್ಯ ಎನ್. ಎಂ (569/600) 94.8%, ಫಲಿತಾಂಶದೊAದಿಗೆ ದ್ವಿತೀಯ ಸ್ಥಾನವನ್ನೂ, ಕು. ಮಧುಮಿತಾ ಎಂ. (568/600) 94.7% ತೃತೀಯ ಸ್ಥಾನವನ್ನೂ ಕು.ಡಿ.ಇ. ಸಂಜನಾ (567/600) 94.5%, ಹಾಗೂ ಕು.ಎಸ್.ಎ ರಾಹುಲ್ (566/600) 94.3% ಫಲಿತಾಂಶ ಪಡೆದು ಕ್ರಮವಾಗಿ ಕಾಲೇಜಿಗೆ ನಾಲ್ಕು ಹಾಗೂ ಐದನೇ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.
ಒಟ್ಟು ಕನ್ನಡ ಭಾಷಾ ವಿಷಯದಲ್ಲಿ 3 ವಿದ್ಯಾರ್ಥಿಗಳು, ಗಣಿತದಲ್ಲಿ 2 ವಿದ್ಯಾರ್ಥಿಗಳು, ಜೀವಶಾಸ್ತçದಲ್ಲಿ 1 ವಿದ್ಯಾರ್ಥಿ 100/100 ಅಂಕಗಳನ್ನು ಗಳಿಸಿರುತ್ತಾರೆ. ಒಟ್ಟಾರೆ 47 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ವಿದ್ಯಾರ್ಥಿಗಳು 149 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಒಟ್ಟಾರೆ ಕಾಲೇಜಿಗೆ 93.52 % ಫಲಿತಾಂಶ ಬಂದಿದ್ದು, ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
19 ವರ್ಷಗಳ ನಂತರ ಹಳೇ ಕುಂದುವಾಡದಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ : ಜಗಮಗಿಸುತ್ತಿದೆ ಗ್ರಾಮ

ಸುದ್ದಿದಿನ,ದಾವಣಗೆರೆ: ಬೇಸಿಗೆ ಬಂತೆಂದರೆ ಸಾಕು ಜಾತ್ರಾ ಮಹೋತ್ಸವಗಳ ಸಂಭ್ರಮ ಪ್ರಾರಂಭವಾಗುತ್ತದೆ. ಆಯಾ ಗ್ರಾಮದ, ಗ್ರಾಮದೇವತೆಗಳ ಆರಾಧನೆಯನ್ನು ಜಾತ್ರಾ ಮೂಲಕ ವೈಭವದಿಂದ ಆಚರಿಸುವ ಪರಿ ಎಲ್ಲೆಡೆ ನಡೆಯುತ್ತದೆ.
ಅದೇ ರೀತಿ ದಾವಣಗೆರೆಯ ಹಳೇಕುಂದುವಾಡದಲ್ಲಿ ಗ್ರಾಮದೇವತೆ ಆದಿಪರಾಶಕ್ತಿಯಾದ ಶ್ರೀ ಮಾರಿಕಾಂಬಾ ಜಾತ್ರೆಯು ಏಪ್ರಿಲ್ 1 ರಂದು ಘಟಸ್ಥಾಪನೆ ಮಾಡುವುದರೊಂದಿಗೆ ಆರಂಭವಾಗಿದೆ. ಕಳೆದ 2007 ರಲ್ಲಿ ನಡೆದ ದೇವಿಯ ಜಾತ್ರೆ, 19 ವರ್ಷಗಳ ನಂತರ ಈ ಬಾರಿ ನಡೆಸುತ್ತಿರುವುದು ವಿಶೇಷವಾಗಿದೆ. ಪ್ರತಿ ದಿನ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತಿದ್ದು, ಭಕ್ತರು ದೇವಿಯನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 12 ರವರೆಗೂ ಜರುಗಲಿದೆ ಎಂದು ಮಾರಿಕಾಂಬ ಜಾತ್ರಾ ಸಮಿತಿ ತಿಳಿಸಿದೆ.
19 ವರ್ಷಗಳ ನಂತರ ನಡೆಯುತ್ತಿರುವ ಮಾರಿಕಾಂಬಾ ಜಾತ್ರೆಗೆ ಹಳೇ ಕುಂದುವಾಡ ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಗ್ರಾಮಸ್ಥರಲ್ಲಿ ಹುರುಪು ದುಪ್ಪಟ್ಟಾಗಿದೆ. ಊರಿನ ರಸ್ತೆಗಳು, ಮನೆ ಮನೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಮಾರಿಕಾಂಬಾ ದೇವಸ್ಥಾನದ ದ್ವಾರ ಬಾಗಿಲ ಅಲಂಕಾರಗೊಂಡು, ಎಲ್ಲರನ್ನು ಆಕರ್ಷಿಸುತ್ತಿದೆ. ಐದು ಮಂಟಪಗಳು ವೈಭವಯುತವಾಗಿ ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಊರಿನ ಮುಖ್ಯ ರಸ್ತೆಗಳು ಜಗಮಗಿಸುತ್ತಿವೆ, ರಸ್ತೆಯ ತುಂಬೆಲ್ಲಾ ಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ.
ಜಾತ್ರೆಯ ಹಿನ್ನಲೆ ಕುರಿ ಕಾಳಗ ಆಯೋಜಿಸಲಾಗಿತ್ತು. ಊರ ತುಂಬೆಲ್ಲಾ ನೆಂಟರು-ಇಷ್ಟರು ಬಂದಿಳಿದಿದ್ದು, ಸಸ್ಯಹಾರಿಗಳಿಗೆ ಮೃಷ್ಟಾನ್ನ ಭೋಜನಕ್ಕೆ ತಯಾರಿ ನಡೆದಿದ್ದರೆ, ಬಾಡೂಟಕ್ಕೆ ಸಾವಿರಾರು ಕುರಿಗಳನ್ನು ಖರೀದಿ ಮಾಡಲಾಗಿದೆ. ಊರಿಗೆ ಊರೇ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದೆ.
ಏ.8 ಮಂಗಳವಾರ ರಾತ್ರಿ ಚೌತಮನೆಯಿಂದ ಅಮ್ಮನ ದೇವಸ್ಥಾಕ್ಕೆ “ದೊಡ್ಡ ಎಡೆ” ಒಯ್ಯುವುದು ವಿಶೇಷ. ನಂತರ ಶ್ರೀ ಮಾರಿಕಂಬ “ರಥೋತ್ಸವವು” ಬಹು ವೈಭವದಿಂದ ಸಾಗಿ ಆಮ್ಮನ ಕಟ್ಟೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಬೆಳಗಿನಜಾವ ಶ್ರೀ ದೇವಿಯ ಘಟ ಪೂಜೆ, ಮಹಾ ಪೂಜೆ ಹಾಗೂ ಗ್ರಾಮ ಪ್ರದಕ್ಷಿಣೆ, ಕಾರ್ಯಕ್ರಮಗಳು ಮಹಾಮಂಗಳಾರತಿಯೊಂದಿಗೆ ನಡೆಯುವುದು ವಾಡಿಕೆಯಾಗಿದೆ.
ಜಾತ್ರಾ ಪ್ರಯುಕ್ತ ಬುಧವಾರ ಶ್ರೀ ದೇವಿಗೆ ಗ್ರಾಮದ ಭಕ್ತರಿಂದ ಉಡಿ ತುಂಬಿಸುವುದು ಹಾಗೂ ಭಕ್ತರ ವಿವಿಧ ಸೇವಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1 ರಿಂದ 6 ಘಂಟೆಯವರೆಗೆ ಪರಂಪರಾಗತ “ಹಾಸ್ಯಗಾರರಿಂದ” ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.
ಏ. 10 ಗುರುವಾರ ಶ್ರೀದೇವಿಗೆ ಪೂಜೆ, ಮಹಾಮಂಗಳಾರತಿ, ಭಕ್ತರ ಸೇವಾ ಕಾರ್ಯಗಳು, ಮನೋರಂಜನೆ ಕಾರ್ಯಕ್ರಮ, ನಂತರ ಮಧ್ಯಾಹ್ನ 3 ರಿಂದ 6 ಘಂಟೆಯವರೆಗೆ “ಪೋತರಾಜ” ನಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ. ನಂತರ “ರಸಮಂಜರಿ” ಕಾರ್ಯಕ್ರಮಗಳು ಜರುಗಲಿದೆ.
ಏ.11 ರಂದು ಶ್ರೀ ದೇವಿಗೆ ಪೂಜೆ, ಮಹಾಮಂಗಳಾರತಿ, ಮನೋರಂಜನೆ ಕಾರ್ಯಕ್ರಮ ನಡೆದು, ಸಾಯಂಕಾಲ `ಹುಲುಸು’ ಹೊಡೆಯಲಾಗುವುದು. ಏ.12 ರಂದು ಶ್ರೀ ದೇವಿಯ ‘ಮೋಚು” ವ ಕಾರ್ಯಕ್ರಮದೊಂದಿಗೆ (ಬಳೆ ತೆಗೆಯುವುದು) ಶ್ರೀ ಮಾರಿಕಾಂಬದೇವಿ ಜಾತ್ರೆಯ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಶ್ರೀ ಮಾರಿಕಾಂಬದೇವಿ ಜಾತ್ರಾ ಉತ್ಸವ ಸಮಿತಿಯ ಸದಸ್ಯರು ಹಾಗೂ ಹಳೇಕುಂದುವಾಡ ಗ್ರಾಮಸ್ಥರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿ ಯು ಫಲಿತಾಂಶ | ವಿದ್ಯಾರ್ಥಿಗಳಿಗೆ ಹಾರೈಸಿದ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ

ಸುದ್ದಿದಿನ,ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಾಕರಾದ ಎಲ್ಲಾ ವಿದ್ಯಾರ್ಥಿಗಳಿಗೆ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆ ಶೇ (73%) ರಾಜ್ಯಕ್ಕೆ 22ನೇ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಕಾರದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ದಾವಣಗೆರೆ ವಿ.ವಿ 12ನೇ ಘಟಿಕೋತ್ಸವ | ವಿಶ್ವವಿದ್ಯಾಲಯಗಳಲ್ಲಿ 2500 ಹುದ್ದೆಗಳು ಖಾಲಿ ಇವೆ : ಸಚಿವ ಡಾ.ಎಂ.ಸಿ. ಸುಧಾಕರ್
-
ದಿನದ ಸುದ್ದಿ5 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ5 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ4 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ5 days ago
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ4 days ago
ಸಾಮಾಜಿಕ ಸುಧಾರಣೆಗೆ ಡಾ. ಬಾಬು ಜಗಜೀವನ್ರಾಂ ಕೊಡುಗೆ ಅಪಾರ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ಅಂಕಣ2 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು