Connect with us

ಬಹಿರಂಗ

ಯುವ ಪೀಳಿಗೆಯ ದಿಕ್ಕು ತಪ್ಪಿಸುತ್ತಿರುವ ಕೋಮು ಧೃವೀಕರಣ

Published

on

Credit : Illustration by Manisha Yadav | ThePrint

  • ಎರಡು ಮತೀಯ ಶಕ್ತಿಗಳ ಮೇಲಾಟದಲ್ಲಿ ಯುವಪೀಳಿಗೆ ಸಂಯಮ ಕಳೆದುಕೊಳ್ಳುತ್ತ


  • ನಾ ದಿವಾಕರ

ಕೋಮುವಾದಿ ರಾಜಕಾರಣಕ್ಕೆ ಭಾರತದಲ್ಲಿ ಶತಮಾನದ ಇತಿಹಾಸವಿದೆ. ಹಾಗೆಯೇ ರಾಜಕೀಯ ಕೋಮು ಧೃವೀಕರಣಕ್ಕೆ ದಶಕಗಳ ಇತಿಹಾಸವಿದೆ. ಭಾರತದ ಬಹುತ್ವ ಸಂಸ್ಕೃತಿಗೆ ಸವಾಲಾಗಿಯೇ ಪರಿಣಮಿಸಿರುವ ಏಕಸಂಸ್ಕೃತಿಯ ಪ್ರತಿಪಾದಕರು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಸ್ಥಾಪಿಸಲು ಪಣತೊಟ್ಟಿರುವುದರಿಂದ ಅನ್ಯ ಮತೀಯ ಜನಾಂಗಗಳು ಈ ಧೃವೀಕರಣದ ಕೇಂದ್ರ ಬಿಂದು ಆಗಿರುತ್ತವೆ.

ಕಳೆದ ಮೂರು ದಶಕಗಳಲ್ಲಿ ಸಾಂಸ್ಕೃತಿಕ ರಾಜಕಾರಣ ತನ್ನದೇ ಆದ ಸ್ಪಷ್ಟ ರೂಪ ಪಡೆಯುತ್ತಿದ್ದು ಹಿಂದುತ್ವ ರಾಜಕಾರಣದ ಮುನ್ನಡೆಗೆ ಫಲವತ್ತಾದ ಭೂಮಿಕೆಯೂ ಸಿದ್ಧವಾಗುತ್ತಿದೆ. ಈ ನಡುವೆಯೇ ಅಪಾಯಕ್ಕೊಳಗಾಗಿರುವುದು ಈ ದೇಶದ ಬಹುಸಂಸ್ಕೃತಿ ನೆಲೆಗಳು ಮತ್ತು ಈ ಬಹುತ್ವ ನೆಲೆಗಳ ವಾರಸುದಾರರು. ಈಗಾಗಲೇ ಶತಮಾನಗಳ ಜಾತಿ ದೌರ್ಜನ್ಯ ಮತ್ತು ತಾರತಮ್ಯಗಳಿಂದ ಜರ್ಜರಿತವಾಗಿರುವ ಭಾರತೀಯ ಸಮಾಜವನ್ನು ಜನಾಂಗೀಯ ನೆಲೆಯಲ್ಲಿ ಮತ್ತಷ್ಟು ವಿಘಟನೆಗೊಳಪಡಿಸುವ ಪ್ರಯತ್ನಗಳು ನಮ್ಮ ಸುತ್ತಲಿನ ಸಮಾಜವನ್ನು ದ್ವೇಷ, ಆಕ್ರೋಶ, ಅಸೂಯೆ ಮತ್ತು ಶತ್ರುತ್ವದ ಕೂಪವನ್ನಾಗಿ ಮಾಡುತ್ತಿದೆ.

ಕಳೆದ ಹಲವು ದಿನಗಳಿಂದ ಕರ್ನಾಟಕದಲ್ಲಿ, ಮಧ್ಯಪ್ರದೇಶದಲ್ಲಿ, ದೆಹಲಿಯಲ್ಲಿ ಒಡಿಷಾದಲ್ಲಿ ನಡೆಯುತ್ತಿರುವ ಪ್ರಕ್ಷುಬ್ಧತೆ ಭಾರತವನ್ನು ಸಾಮಾಜಿಕ ಅರಾಜಕತೆಯತ್ತ ಕೊಂಡೊಯ್ಯುವಂತಿದೆ. ಕೋಮುವಾದಿ ಶಕ್ತಿಗಳು ತಮ್ಮ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು, ತಾವು ನಂಬುವ ಮತ್ತು ಪೋಷಿಸುವ ಒಂದು ಧಾರ್ಮಿಕ ನಂಬಿಕೆ ಮತ್ತು ಸಾಂಸ್ಥಿಕ ಅಸ್ಮಿತೆಗಳನ್ನು ಸಮರ್ಥಿಸಿಕೊಳ್ಳಲು ಕೋಮುವಾದಿಗಳು ಸದಾ ಮತ್ತೊಂದು ಕೋಮಿನ ವಿರುದ್ಧ ಕತ್ತಿ ಮಸೆಯುತ್ತಲೇ ಇರುತ್ತವೆ.

ಒಂದು ಪ್ರೇಮ ವಿವಾಹ, ಒಂದು ಸಣ್ಣ ಮೆರವಣಿಗೆ, ಒಂದು ಪೂಜೆ ಅಥವಾ ಒಂದು ಪೂಜಾಸ್ಥಳದ ಗೋಡೆಯ ಮೇಲಿನ ಬರಹ ಈ ವಿಚ್ಚಿದ್ರಕಾರಿ ಶಕ್ತಿಗಳಲ್ಲಿರುವ ಕಿಚ್ಚನ್ನು ಹೊತ್ತಿಸಿ ಇಡೀ ಸಮುದಾಯಗಳನ್ನು ಆವರಿಸಿಬಿಡುತ್ತದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ, ವಸತಿಹೀನತೆ, ದುಬಾರಿ ಶಿಕ್ಷಣ, ಅಪೌಷ್ಟಿಕತೆ, ಅನಾರೋಗ್ಯ, ಅಶುಚಿತ್ವ, ಶಿಶುಮರಣ, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ, ಜಾತಿ ದೌರ್ಜನ್ಯ, ಅಸ್ಪೃಶ್ಯತೆ ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡಲು ಸಜ್ಜಾಗಬೇಕಿರುವ ಒಂದು ಇಡೀ ಯುವ ಪೀಳಿಗೆ ಇಂದು ಹಿಜಾಬ್, ಹಲಾಲ್, ಜಟ್ಕಾ, ರಾಮನವಮಿ, ಹನುಮಜಯಂತಿ ಮುಂತಾದ ವಿವಾದಗಳಿಗೆ ಸ್ಪಂದಿಸುತ್ತಾ ತನ್ನೊಳಗಿನ ಅಪಾರ ಶಕ್ತಿಯನ್ನು ವ್ಯರ್ಥ ಮಾಡುತ್ತಿದೆ.

“ ಧಾರ್ಮಿಕ ಭಾವನೆಗಳಿಗೆ ಧಕ್ಕೆ ! ” ಈ ಮೂರು ಪದಗಳು ಭಾರತದ ನೂರಾರು ಯುವ ಜೀವಗಳಿಗೆ ಮಾರಕವಾಗಿ ಪರಿಣಮಿಸಿವೆ. ಯಾವುದೋ ಒಬ್ಬ ತಿಳಿಗೇಡಿಯ ಸಾಮಾಜಿಕ ತಾಣದ ಪೋಸ್ಟ್ ಒಂದು ಇಡೀ ಸಮುದಾಯದೊಳಗಿನ ಕಿಚ್ಚನ್ನು ಭುಗಿಲೇಳಿಸುವ ಮಟ್ಟಕ್ಕೆ ನಮ್ಮ ನಡುವಿನ ಯುವ ಪೀಳಿಗೆ ದುರ್ಬಲವಾಗಿದೆ. ಈ ದೌರ್ಬಲ್ಯವೇ ಹಿಂದೂ ಮತೀಯವಾದಿಗಳಿಗೆ, ಮುಸ್ಲಿಂ ಮತಾಂಧ ಸಂಘಟನೆಗಳಿಗೆ ಬಂಡವಾಳವಾಗುತ್ತದೆ.

ಹಿಂದೂ, ಇಸ್ಲಾಂ ಅಥವಾ ಇತರ ಯಾವುದೇ ಧಾರ್ಮಿಕ ನೆಲೆಗಳಾದರೂ ಒಬ್ಬ ವ್ಯಕ್ತಿಯ ಒಂದು ಕ್ಷುಲ್ಲಕ ಅಭಿವ್ಯಕ್ತಿಯಿಂದ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಷ್ಟು ದುರ್ಬಲವಲ್ಲ ಎನ್ನುವುದನ್ನು ಇತಿಹಾಸ ನಿರೂಪಿಸಿದೆ. ಆದರೆ ಈ ರೀತಿಯ ಕ್ಷುಲ್ಲಕ ಘಟನೆಗಳೇ ಕೋಮು ದಳ್ಳುರಿಯನ್ನು ಹೆಚ್ಚಿಸಿ ನೂರಾರು ಅಮಾಯಕರ ಆಸ್ತಿಪಾಸ್ತಿಗಳ ನಷ್ಟಕ್ಕೆ, ಹತ್ತಾರು ಯುವಕರ ಸಾವಿಗೆ ಕಾರಣವಾಗುತ್ತದೆ ಎನ್ನುವುದನ್ನೂ ಸಮಕಾಲೀನ ಭಾರತೀಯ ಇತಿಹಾಸ ನಿರೂಪಿಸಿದೆ.

ಯಾವುದೇ ಜನಸಮುದಾಯಗಳ ಧಾರ್ಮಿಕ ಅಥವಾ ಸಾಮುದಾಯಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯವನ್ನು ಶಿಕ್ಷೆಗೊಳಪಡಿಸಲು ಒಂದು ಕಾನೂನು ವ್ಯವಸ್ಥೆ ಇದೆ ಎನ್ನುವ ಪರಿಜ್ಞಾನವೇ ಇಲ್ಲದಂತೆ ಕಾನೂನು ಕೈಗೆತ್ತಿಕೊಳ್ಳುವ ಬೃಹತ್ ಕಾವಲುಪಡೆಗಳನ್ನೇ ಮತೀಯ ಶಕ್ತಿಗಳು, ಮತಾಂಧ ಸಂಘಟನೆಗಳು ಸೃಷ್ಟಿಸಿವೆ.

ಈ ಹಾದಿ ತಪ್ಪಿದ ಯುವ ಪೀಳಿಗೆ ಯಾವ ಧರ್ಮವನ್ನು ರಕ್ಷಿಸಲು ಸೆಣಸಾಡುತ್ತಿದೆ ? ಯಾರ ಧರ್ಮದ ಸಂರಕ್ಷಣೆಗಾಗಿ ಹೋರಾಡುತ್ತಿದೆ ? ಬಹುಶಃ ಈ ಪ್ರಶ್ನೆಗೆ ಆ ಯುವಕರ ನಡುವೆಯೇ ಉತ್ತರ ದೊರಕಲಾರದು. ಸಮಾಜದ ತಳಮಟ್ಟದಲ್ಲಿ ತಮ್ಮದೇ ಆದ ನಿತ್ಯ ಬದುಕಿನ ಬವಣೆಯೊಂದಿಗೆ ಜೀವನೋಪಾಯದ ಮಾರ್ಗಗಳ ಶೋಧದಲ್ಲಿರುವ ಜನರನ್ನು ಸಮೂಹ ಸನ್ನಿಗೊಳಪಡಿಸಿ ತಮ್ಮ ಸಾಂಸ್ಥಿಕ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಮತೀಯವಾದಿ ಸಂಘಟನೆಗಳು ಸುಭದ್ರ ಬುನಾದಿಯೊಂದಿಗೆ ನೆಲೆ ಕಂಡುಕೊಂಡಿವೆ.

ಈ ಸಾಂಸ್ಥಿಕ ನೆಲೆಗಳನ್ನು ನಿಯಂತ್ರಿಸುವ ನೈತಿಕ ಹೊಣೆಗಾರಿಕೆ ಸರ್ಕಾರಗಳ ಮೇಲಿರುತ್ತದೆ. ದುರಂತ ಎಂದರೆ ಚುನಾಯಿತ ಸರ್ಕಾರಗಳು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನೂ ಮರೆತು ಮತೀಯ ಪಡೆಗಳನ್ನು ಸಮರ್ಥಿಸುತ್ತಲೋ, ಖಂಡಿಸುತ್ತಲೋ ಕಾಲ ಕಳೆಯುತ್ತವೆ. ಹುಬ್ಬಳ್ಳಿಯ ಘಟನೆಗೆ ಕಾರಣರಾದವರು ಕಲ್ಲು ತೂರಿದ ಅಮಾಯಕ ಹುಡುಗರಷ್ಟೇ ಅಲ್ಲ. ಅಥವಾ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಯುವಕ ಮಾತ್ರ ಅಲ್ಲ. ಈ ಯುವಕರ ಹಿಂದೆ ಒಂದು ಸಾಂಘಿಕ ಶಕ್ತಿ ಇದೆ. ತಮ್ಮ ನಿತ್ಯ ಬದುಕಿನಲ್ಲಿ ಯಾವುದೇ ವ್ಯಕ್ತಿಯೂ ಧಾರ್ಮಿಕ ಭಾವನೆಗಳ ಬಗ್ಗೆ ಚಿಂತಿತನಾಗುವುದಿಲ್ಲ. ಅಥವಾ ಧಾರ್ಮಿಕ ಆಚರಣೆಗಳಲ್ಲಿ ಉಂಟಾಗುವ ವ್ಯತ್ಯಯಗಳು ವ್ಯಕ್ತಿಗತವಾಗಿ ಯಾರನ್ನೂ ಬಾಧಿಸುವುದೂ ಇಲ್ಲ.

ಈ ʼಧಾರ್ಮಿಕ ಭಾವನೆಗಳಿಗೆ ʼ ಒಂದು ಸಾಂಸ್ಥಿಕ ಸ್ವರೂಪ ನೀಡಿ, ಕಾಣದ ಕೈಗಳಿಂದ ನಿಯಂತ್ರಿಸಲ್ಪಡುವ ಈ ಸಾಂಸ್ಥಿಕ ಅಸ್ತಿತ್ವವನ್ನು ಸಂರಕ್ಷಿಸಲು ಸಮಾಜದ ಒಳಗಿನಿಂದಲೇ ಒಂದು ಸಂಘಟನಾತ್ಮಕ ಶಕ್ತಿಯನ್ನು ರೂಪಿಸಿ, ತಮ್ಮ ನಿಯಂತ್ರಣಾಧಿಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಕಾವಲುಪಡೆಗಳನ್ನು ಸೃಷ್ಟಿಸುವ ಒಂದು ವ್ಯವಸ್ಥಿತ ಸಂಚು ಇಲ್ಲಿ ಕಾಣುತ್ತದೆ.

ಜಾತಿ ಮತಗಳ ಅಸ್ಮಿತೆಗಳ ಚೌಕಟ್ಟಿನಲ್ಲಿ ನಿರ್ಬಂಧಿಸಲ್ಪಡುವ ಯುವ ಪೀಳಿಗೆಯ ಮನಸುಗಳನ್ನು ಸಮನ್ವಯದ ಬದುಕಿಗೆ ಹೊಂದಿಕೊಳ್ಳುವಂತೆ ಮಾಡಬೇಕಾದ ಈ ಸಾಂಸ್ಥಿಕ ನೆಲೆಗಳು, ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಇದೇ ಯುವ ಪಡೆಗಳನ್ನು ಹಿಂಸಾತ್ಮಕ ಮಾರ್ಗಗಳಿಗೆ ಪ್ರಚೋದಿಸುತ್ತವೆ. ಹುಬ್ಬಳ್ಳಿಯಲ್ಲಿ ಪ್ರಚೋದನಕಾರಿ ಪೋಸ್ಟ್ ಒಂದನ್ನು ಸಾಮಾಜಿಕ ತಾಣದಲ್ಲಿ ಹರಡುವ ಯುವಕ, ಇದರಿಂದ ಕೆರಳಿ ಸಮಾಜದಲ್ಲಿ ಕ್ಷೋಭೆ ಉಂಟುಮಾಡುವ ಪುಂಡ ಪಡೆಗಳು, ದೆಹಲಿಯ ಜಹಂಗೀರ್ಪುರಿಯಲ್ಲಿ ಹನುಮ ಜಯಂತಿಯ ಮೆರವಣಿಗೆಯ ಮೇಲೆ ಕಲ್ಲೆಸೆಯುವ ಯುವಕರು ಈ ಎಲ್ಲರೂ ಇಂತಹ ಒಂದು ಅಗೋಚರ ಸಾಂಸ್ಥಿಕ ನೆಲೆಗಳಿಂದ ನಿಯಂತ್ರಿಸಲ್ಪಡುತ್ತಾರೆ.

ತಮ್ಮ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ನಿಷ್ಪ್ರಯೋಜಕವಾದ ಚಟುವಟಿಕೆಗಳಿಗೆ ಈ ಯುವಕರು ಬಲಿಯಾಗುತ್ತಾರೆ. ಈ ಒಂದು ಪೀಳಿಗೆಯಲ್ಲಿ ಸೃಷ್ಟಿಸಲಾಗುವ ಭಾವಾವೇಶ, ಉನ್ಮಾದ, ಅಂಧಾಭಿಮಾನ ಮತ್ತು ಹಿಂಸಾತ್ಮಕ ಧೋರಣೆ, ಯಾವುದೋ ಅಗೋಚರ ಶಕ್ತಿಯೊಂದನ್ನು ರಕ್ಷಿಸುತ್ತದೆ. ಈ ಅಗೋಚರ ಶಕ್ತಿಗಳೇ ಸಾಮಾಜಿಕ ಕ್ಷೋಭೆ ಮತ್ತು ಸಾಮುದಾಯಿಕ ವಿಘಟನೆಯ ಫಲಾನುಭವಿಗಳಾಗಿರುತ್ತವೆ.

ಯುವ ಮನಸುಗಳಲ್ಲಿ ಅನ್ಯಮತ ದ್ವೇಷ, ಜಾತಿ ಶ್ರೇಷ್ಠತೆ, ಪುರುಷ ಪ್ರಧಾನ ಅಹಮಿಕೆ, ಸಾಮಾಜಿಕ ಮೇಲರಿಮೆ ಮತ್ತು ಮತಭೇದದ ಬೀಜಗಳನ್ನು ಬಿತ್ತುವ ಮೂಲಕ, ಸಮಾಜದಲ್ಲಿ ಶಾಶ್ವತ ಬಿರುಕುಗಳನ್ನು ಸೃಷ್ಟಿಸುವುದರಲ್ಲಿ ಈ ಫಲಾನುಭವಿ ಸಂಘಟನೆಗಳು, ಸಂಸ್ಥೆಗಳು ಯಶಸ್ವಿಯಾಗುತ್ತವೆ.

ಈ ಸಾಂಸ್ಥಿಕ ನೆಲೆಗಳು ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲಾರಂಭಿಸಿದಾಗ ಇಡೀ ರಾಜಕೀಯ ಕ್ಷೇತ್ರವೇ ಕಲುಷಿತವಾಗಿಬಿಡುತ್ತದೆ. ಭಾರತ ಇಂತಹ ಒಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ನೆರವಾಗಬೇಕಿದ್ದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಇದ್ದಂತಹ ಒಳಬಿರುಕುಗಳನ್ನೇ ಬಳಸಿಕೊಂಡ ಹಿಂದುತ್ವ ರಾಜಕಾರಣ ಭಾರತದ ಯುವ ಪೀಳಿಗೆಯನ್ನು ವಿಭಿನ್ನ ಮಾರ್ಗದಲ್ಲಿ ಕೊಂಡೊಯ್ದಿದೆ.

ಬಹುತ್ವ ಸಂಸ್ಕೃತಿಯನ್ನು ಕಾಪಾಡಬೇಕಿದ್ದ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಮ್ಮೊಳಗಿನ ವಿಘಟನೆಯ ಕಾರಣದಿಂದಾಗಿಯೇ ಇಂದು ಹಿಂದೂ ಮತ್ತು ಮುಸ್ಲಿಂ ಮತೀಯವಾದಕ್ಕೆ ಬಲಿಯಾಗುತ್ತಿವೆ. ಯುವ ಜನಾಂಗದಲ್ಲಿ ಇರುವ ಉತ್ಸಾಹ ಮತ್ತು ಸ್ಪೂರ್ತಿಯನ್ನು ಸಮಾಜಮುಖಿ ಮಾರ್ಗದಲ್ಲಿ ಬಳಸಿಕೊಂಡು ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟಲು ಮುಂದಾಗಬೇಕಾದ ಹೊತ್ತಿನಲ್ಲಿ, ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಈ ಯುವ ಮನಸುಗಳಲ್ಲಿ ಧಾರ್ಮಿಕ ಉನ್ಮಾದವನ್ನು ಹೆಚ್ಚಿಸುವ ಮೂಲಕ ತಮ್ಮ ಸಾಂಸ್ಥಿಕ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ.

ತಾವು ಅನುಸರಿಸುವ, ಅನುಕರಿಸುವ ಮತ್ತು ಆಚರಿಸುವ ಧರ್ಮ ಮತ್ತು ಮತೀಯ ಆಚರಣೆಗಳ ಮೂಲ ಸ್ವರೂಪವನ್ನೂ ಅರಿಯದ ಯುವ ಪೀಳಿಗೆ, ಮತಾಂಧ ನಾಯಕರ ಅಣತಿಯಂತೆ ನಡೆಯುತ್ತಿರುವುದರಿಂದಲೇ ಹುಬ್ಬಳ್ಳಿ, ಜಹಂಗೀರಪುರ ಸಂಭವಿಸುತ್ತದೆ. ಅಥವಾ ಕೇರಳದಲ್ಲಿ ನಡೆಯುತ್ತಿರುವಂತಹ ಹತ್ಯಾಸರಣಿಗೆ ಕಾರಣವಾಗುತ್ತವೆ. ಎಡಪಕ್ಷಗಳು ಅಧಿಕಾರದಲ್ಲಿರುವ ಕೇರಳದಲ್ಲೂ ಸಹ ಎಸ್ಡಿಪಿಐ ಮತ್ತು ಆರೆಸ್ಸೆಸ್ ನಡುವಿನ ಸಂಘರ್ಷದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ.

ಇದನ್ನು ಸಾಂಸ್ಕೃತಿಕ ಸಂಘರ್ಷ ಎನ್ನುವುದಕ್ಕಿಂತಲೂ ಮತಾಂಧ ಸಂಘಟನೆಗಳ ನಡುವಿನ ಅಸ್ತಿತ್ವದ ಸಂಘರ್ಷ ಎಂದು ಪರಿಗಣಿಸಿದರೆ, ಮತಾಂಧತೆಯ ಒಳಸುಳಿಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ತಾವು ಹಿಂಸಾತ್ಮಕ ಮಾರ್ಗವನ್ನು ಅನುಸರಿಸುವುದಿಲ್ಲ ಎಂದು ಶಪಥ ಮಾಡುವ ಮತೀಯ ಸಂಘಟನೆಗಳು ಕೇರಳದಲ್ಲಿ ನಡೆದಂತಹ ಹತ್ಯೆಗಳು ಸಂಭವಿಸಿದಾಗ, ನೇಪಥ್ಯಕ್ಕೆ ಸರಿಯುತ್ತವೆ.

ಹುಬ್ಬಳ್ಳಿಯಂತಹ ಘಟನೆಗಳು ಸಂಭವಿಸಿದಾಗ ಅದನ್ನು ಕಿಡಿಗೇಡಿಗಳ ಕೃತ್ಯ ಎಂದು ಬಣ್ಣಿಸಿ ಸುಮ್ಮನಾಗುತ್ತವೆ. ಸರ್ಕಾರದ ದೃಷ್ಟಿಯಲ್ಲಿ ಇಂತಹ ಘಟನೆಗಳು ಕೇವಲ ಕಾನೂನು ಸುವ್ಯವಸ್ಥೆಯ ಪ್ರಶ್ನೆಯಾಗಿಯೇ ಉಳಿಯುವುದರಿಂದ, ಅಗೋಚರ ಸಾಂಘಿಕ ನೆಲೆಗಳು ತಮ್ಮ ಭದ್ರಕೋಟೆಗಳಲ್ಲಿ ಸುರಕ್ಷಿತವಾಗಿ ಉಳಿಯುವುದು ಸಾಧ್ಯವಾಗುತ್ತದೆ.

ಆಡಳಿತಾರೂಢ ರಾಜಕೀಯ ಪಕ್ಷಗಳಿಗೆ ಸಮಾಜದ ನಾಡಿ ಮಿಡಿತ ಅರ್ಥವಾಗುವಂತಿದ್ದರೆ, ಈ ರೀತಿಯ ಕ್ಷೋಭೆಯ ಮೂಲ ಕಾರಣಗಳನ್ನು ಶೋಧಿಸಿ, ನಿಯಂತ್ರಿಸುವುದು ಕಷ್ಟವಾಗಲಿಕ್ಕಿಲ್ಲ. ದುರಂತ ಎಂದರೆ ಭಾರತದ ಪ್ರಜಾತಂತ್ರ ವ್ಯವಸ್ಥೆ ಇಂದು ಮತೀಯ ರಾಜಕಾರಣದ ನೆಲೆಯಾಗಿದೆ. ಸಂವಿಧಾನವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪ್ರತಿನಿಧಿಸಬೇಕಾದ ಜನಪ್ರತಿನಿಧಿಗಳು ಹಿಂದೂ ಅಥವಾ ಮುಸ್ಲಿಂ ಮತಾಂಧ ಸಂಘಟನೆಗಳ ವಕ್ತಾರರಂತೆ ವರ್ತಿಸುವುದು ಸಾಮಾನ್ಯವಾಗಿಹೋಗಿದೆ.

ತಮ್ಮ ರಾಜಕೀಯ ಭೂಮಿಕೆಯ ವಿಸ್ತರಣೆಗಾಗಿ ಮತೀಯ ನೆಲೆಗಳನ್ನು ಬಳಸಿಕೊಳ್ಳುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ಪಕ್ಷಗಳು ಸಾಮಾಜಿಕ ಸಮನ್ವಯಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯವನ್ನು ಸಾಮುದಾಯಿಕ ಅಸ್ಮಿತೆಗಳಿಗೆ ನೀಡುತ್ತಿರುವುದರಿಂದಲೇ ಓಲೈಕೆ ರಾಜಕಾರಣ, ತುಷ್ಟೀಕರಣ ಮುಂತಾದ ಪದಗಳು ಅರ್ಥಹೀನವಾಗುತ್ತಿವೆ. ಜಾತಿ, ಮತ ಮತ್ತು ಧಾರ್ಮಿಕ ಅಸ್ಮಿತೆಗಳನ್ನು ಅವಲಂಬಿಸದೆ ಹೋದರೆ ಈ ಮೂರೂ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ.

ಅಧಿಕಾರ ರಾಜಕಾರಣಕ್ಕೆ ನೆರವಾಗುವ ಕಾರ್ಪೋರೇಟ್ ಮಾರುಕಟ್ಟೆಯ ಶಕ್ತಿಗಳನ್ನು ಓಲೈಸುತ್ತಲೇ ತಮ್ಮ ಈ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿರುವ ಮೂರೂ ರಾಜಕೀಯ ಪಕ್ಷಗಳು, ಯುವ ಪೀಳಿಗೆಗೆ ಒಂದು ಮೌಲ್ಯಯುತವಾದ ರಾಜಕೀಯ ವಾತಾವರಣವನ್ನು ನಿರ್ಮಿಸಲು ಸಾಧ್ಯವಾಗದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಇಂದು ಯುವ ಪೀಳಿಗೆಯಲ್ಲಿ ಹಲವು ರೀತಿಯ ಕನಸುಗಳಿವೆ. ಈ ಕನಸುಗಳು ರೆಕ್ಕೆ ಪುಕ್ಕವಿಲ್ಲದೆ ಯಾವ ದಿಕ್ಕಿನಲ್ಲಿ ಬೇಕಾದರೂ ಸಂಚರಿಸುತ್ತವೆ. ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಗ್ರಹಿಸುವ ಸಾಮರ್ಥ್ಯವನ್ನೂ ಕಳೆದುಕೊಂಡಿರುವ ಈ ಯುವ ಪೀಳಿಗೆಗೆ ಭಾರತದ ಬಹುಸಾಂಸ್ಕೃತಿಕ ನೆಲೆಗಳಲ್ಲಿ ಮುಕ್ತ ಅವಕಾಶ ನೀಡುವುದು,. ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಉಂಟುಮಾಡುವಂತಹ ಒಂದು ಸೌಹಾರ್ದ ವಾತಾವರಣವನ್ನು ನಿರ್ಮಿಸುವುದು ಸಮಾಜದ ನೈತಿಕ ಜವಾಬ್ದಾರಿಯಾಗಿದೆ.

ಈ ಜವಾಬ್ದಾರಿಯನ್ನು ನಿರ್ವಹಿಸುವ ನೈತಿಕತೆಯನ್ನು, ಮೌಲ್ಯಯುತ ಅರ್ಹತೆಯನ್ನು ಪ್ರಧಾನ ರಾಜಕೀಯ ಪಕ್ಷಗಳು ಕಳೆದುಕೊಂಡಿವೆ. ಮಾರುಕಟ್ಟೆಯ ಪ್ರಲೋಭನೆಗೊಳಗಾಗಿ ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡಿರುವ ಮಾಧ್ಯಮಗಳು ಅಧಿಕಾರ ರಾಜಕಾರಣದ ಬಾಲಂಗೋಚಿಗಳಾಗಿರುವುದರಿಂದ ತಮ್ಮ ಸಾಮಾಜಿಕ ಜವಾಬ್ದಾರಿಯಿಂದ ವಿಮುಖವಾಗಿವೆ.

ಸಮಾಜದಲ್ಲಿ ಸಂಭವಿಸುವ ಕ್ಷೋಭೆಯನ್ನು ಮತ್ತಷ್ಟು ತೀಕ್ಷ್ಣಗೊಳಿಸುವ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸುವ ವಿದ್ಯುನ್ಮಾನ ಸುದ್ದಿಮನೆಗಳು ಮತ್ತು ಅದರ ನಿರೂಪಕರು, ಯಾವುದೋ ಒಂದು ಪಕ್ಷದ ಸೈದ್ಧಾಂತಿಕ ನೆಲೆಗಳಲ್ಲಿ ಅಥವಾ ಮತೀಯ ಸಾಂಸ್ಥಿಕ ನೆಲೆಗಳಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದರಿಂದ, ಯುವ ಪೀಳಿಗೆಯನ್ನು ಸರಿದಾರಿಗೆ ತರುವ ನೈತಿಕತೆಯನ್ನು ಕಳೆದುಕೊಂಡಿವೆ. ಸುದ್ದಿಮನೆಗಳು ನಡೆಸುವ ಚರ್ಚೆಗಳು ಮತ್ತು ಚರ್ಚೆಗೆ ಆಹ್ವಾನಿಸಲಾಗುವ ವ್ಯಕ್ತಿಗಳನ್ನು ಗಮನಿಸಿದಾಗ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಇಡೀ ಮಾಧ್ಯಮ ವಲಯ ನೈತಿಕವಾಗಿ ಅವನತಿ ಹೊಂದಿರುವುದು ಸ್ಪಷ್ಟವಾಗುತ್ತದೆ.

ಇಂತಹ ವಿಷಮ ಸನ್ನಿವೇಶದಲ್ಲಿ ದಿಕ್ಕುತಪ್ಪಿದಂತೆ ಕಾಣುತ್ತಿರುವ ಯುವ ಪೀಳಿಗೆಗೆ ಸರಿದಾರಿಯನ್ನು ತೋರುವುದಾದರೂ ಯಾರು ? ತೋರುವುದಾದರೂ ಹೇಗೆ? ರಾಮಭಕ್ತರ ಮೇಲೆ, ಹನುಮ ಆರಾಧಕರ ಮೇಲೆ ಕಲ್ಲೆಸೆಯುವ ಮುಸ್ಲಿಂ ಯುವಕರು, ಮಸೀದಿಯ ಮೇಲೆ ಕಲ್ಲೆಸೆಯುವ ಹಿಂದೂ ಹುಡುಗರು, ಸಾಮಾಜಿಕ ತಾಣದ ಒಂದು ಸಾಧಾರಣ ಪೋಸ್ಟ್ನಿಂದ ಉನ್ಮಾದಕ್ಕೊಳಗಾಗುವ ಯುವ ಪೀಳಿಗೆ, ಲೇಖನಿ ಕುಂಚ ಹಿಡಿಯುವ ಕೈಗಳಲ್ಲಿ ಲಾಂಗು ಮಚ್ಚು ತಲವಾರು ಪಿಸ್ತೂಲುಗಳನ್ನು ಹಿಡಿಯುವ ಯುವ ಜನಾಂಗ ಇವರಾರೂ ವಸ್ತುಶಃ ದಿಕ್ಕುತಪ್ಪಿದವರಲ್ಲ. ದಿಕ್ಕುಗಾಣದವರು.

ಏಕೆಂದರೆ ಈ ಯುವ ಪೀಳಿಗೆ ಯಾವ ದಿಕ್ಕಿನಲ್ಲಿ ಹೋದರೆ ಒಂದು ಸೌಹಾರ್ದಯುತ ಬದುಕು ಸಾಧ್ಯ ಎಂದು ತೋರಿಸಬೇಕಾದ ಪ್ರಜ್ಞಾವಂತ ಮನಸುಗಳು ಇಂದು ಹಿತವಲಯಗಳಲ್ಲಿ ಅಡಗಿ ಕುಳಿತಿವೆ. ವಾಮ ಮಾರ್ಗಗಳಿಗೆ ಪ್ರಚೋದಿಸುವ ಕಾಣದ ಕೈಗಳು ಈ ಯುವಜನಾಂಗದಲ್ಲಿ ಪ್ರೀತಿ, ವಾತ್ಸಲ್ಯ, ಭ್ರಾತೃತ್ವದ ಬದಲು ದ್ವೇಷ, ಅಸೂಯೆ, ಮತ್ಸರಗಳನ್ನು ಬೆಳೆಸುತ್ತಿವೆ. ಜಾತಿ, ಮತ, ಧಾರ್ಮಿಕ ಉನ್ನಾದಕ್ಕೊಳಗಾಗಿರುವ ಯುವ ಜನಾಂಗ ತನ್ನ ವಿವೇಕ ಮತ್ತು ವಿವೇಚನೆ ಕಳೆದುಕೊಳ್ಳುವುದು ಸ್ವಾಭಾವಿಕ.

ಆಳುವ ವರ್ಗಗಳು ಉದ್ದೇಶಪೂರ್ವಕವಾಗಿಯೇ, ತಮ್ಮ ಸ್ವಾರ್ಥ ಸಾಧನೆಗಾಗಿ ವಿವೇಕರಹಿತವಾಗಿ ವರ್ತಿಸುತ್ತವೆ. ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಸಂಸ್ಥೆಗಳು ವಿವೇಚನೆ ಇಲ್ಲದೆ ಸರ್ಕಾರದ ಆದೇಶಗಳನ್ನು ಪಾಲಿಸುತ್ತವೆ. ಈ ಹೊತ್ತಿನಲ್ಲಿ ಜಾಗೃತವಾಗಬೇಕಾದ್ದು ನಾಗರಿಕ ಪ್ರಜ್ಞೆ . ಸಾಮಾಜಿಕ ಕಾಳಜಿ ಮತ್ತು ಕಳಕಳಿ, ಮಾನವೀಯ ಮೌಲ್ಯಗಳನ್ನು ಜೀವಂತವಾಗಿರಿಸಲು ಶ್ರಮಿಸಬೇಕಾದ್ದು ನಮ್ಮ ಸಮಾಜ. ಈ ಸಮಾಜ ಪ್ರತಿಬಾರಿ ಎಡವಿದಾಗಲೂ ವಿಧ್ವಂಸಕ ಶಕ್ತಿಗಳು, ವಿಭಜಕ ಶಕ್ತಿಗಳು ವಿಜೃಂಭಿಸುತ್ತವೆ. ಇಂತಹ ಒಂದು ಸಂದಿಗ್ಧತೆಗೆ ಕರ್ನಾಟಕ, ಭಾರತ ಸಾಕ್ಷಿಯಾಗುತ್ತಿದೆ.

ಜಹಂಗೀರಪುರದಿಂದ ಹುಬ್ಬಳ್ಳಿಯವರೆಗೆ ಇದು ಢಾಳಾಗಿ ಕಾಣುತ್ತಿದೆ. ಪ್ರಗತಿಪರ ಎಂದು ಬೆನ್ನುತಟ್ಟಿಕೊಳ್ಳುವ ಸಂಘಟನೆಗಳು, ಎಡಪಂಥೀಯ ಚಳುವಳಿಗಳು, ಮಹಿಳಾ ಸಮೂಹಗಳು, ಶೋಷಿತ ತಳಸಮುದಾಯಗಳನ್ನು ಪ್ರತಿನಿಧಿಸುವ ದಲಿತ ಸಂಘಟನೆಗಳು ಈ ನೈತಿಕ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ. ಇಡೀ ಯುವ ಜನಾಂಗ ನಮ್ಮತ್ತ ನೋಡುತ್ತಿದೆ. ನಾವು ಅವರತ್ತ ಹೋಗುತ್ತಿದ್ದೇವೆಯೇ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending