ಅಂತರಂಗ
ಭಾರತದ ಸಂವಿಧಾನ : ಪ್ರಜೆಗಳ ಓದು
- ಡಾ. ಬಿ.ಎಂ. ಪುಟ್ಟಯ್ಯ
ಭಾರತದ ಸಂವಿಧಾನವನ್ನು ಯಾಕೆ ಓದಬೇಕು ಮತ್ತು ಅದನ್ನು ಕುರಿತು ಯಾಕೆ ಚರ್ಚೆ ಮಾಡಬೇಕು ಎಂಬುದು ಮೊದಲನೆಯ ಮುಖ್ಯ ಪ್ರಶ್ನೆ. ಅನೇಕರು ಹೇಳುತ್ತಾರೆ: ಇದು ಜನರನ್ನು ಜಾಗೃತಗೊಳಿಸಲು, ಅವರಿಗೆ ಸಂವಿಧಾನದ ಬಗೆಗೆ ಹಾಗೂ ಕಾನೂನುಗಳ ಬಗೆಗೆ ಅರಿವು ಮೂಡಿಸಲು ಎಂದು. ನನಗೆ ಯಾಕೋ ಈ ಉತ್ತರ ತೃಪ್ತಿಕರ ಎನಿಸುತ್ತಿಲ್ಲ.
ಹಾಗಾಗಿ ಈ ಬಗೆಗೆ ನನಗೆ ಏನು ಅನಿಸುತ್ತದೆ ಅಂದರೆ ಸಂವಿಧಾನವನ್ನು ಓದುವುದು ಮತ್ತು ಅದರ ಬಗೆಗೆ ಚರ್ಚೆ ಸಂವಾದ ಮಾಡುವುದು ನಮ್ಮನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಲು ಮತ್ತು ಸ್ವ ವಿಮರ್ಶೆ ಮಾಡಿಕೊಳ್ಳಲು ಓದಬೇಕು ಹಾಗೂ ಮಾತನಾಡಬೇಕು ಅಂತ ನನಗೆ ಅನಿಸಿದೆ.
ಭಾರತದ ಸಂವಿಧಾನದ ರಚನೆಯ ಕಾಲವನ್ನು ಸೂಕ್ಷ್ಮವಾಗಿ ಅವಲೋಕನ ಮಾಡಬೇಕು. ಈ ಅವಲೋಕನವು ಭಾರತದ ಪರಿಸ್ಥಿತಿ ಹಾಗೂ ಜಾಗತಿಕ ಪರಿಸ್ಥಿತಿಗಳನ್ನು ಆಧರಿಸಿರಬೇಕು. ನನ್ನ ಆಲೋಚನೆಯ ಪ್ರಕಾರ ಅದು ರಾಷ್ಟ್ರ ಮಟ್ಟದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ತೀವ್ರವಾದ ಆತಂಕದ ಕಾಲವಾಗಿತ್ತು. ಅದನ್ನು ಅರ್ಥಮಾಡಿಕೊಳ್ಳುತ್ತಲೇ ಅಂತಹ ಆತಂಕಗಳಿಂದ ಮುಕ್ತರಾಗುವುದು ಹೇಗೆ ಎಂಬ ದೊಡ್ಡ ಸವಾಲುಗಳು ಸಂವಿಧಾನದ ರಚನೆಯ ಮುಂದಿದ್ದವು.
ಆಗ ಎರಡನೇ ಪ್ರಪಂಚ ಯುದ್ಧ ಮುಗಿಯುತ್ತಿದ್ದ ಕಾಲ. ಜಾಗತಿಕ ಮಟ್ಟದಲ್ಲಿ ಸಾಮ್ರಾಜ್ಯಶಾಹಿ ತನ್ನ ಸುಲಿಗೆಯ ವಿಧಾನ ಮತ್ತು ತಂತ್ರಗಳನ್ನು ಬದಲಾಯಿಸಿಕೊಳ್ಳಲು ಕುತಂತ್ರ ಹುಡುಕುತ್ತಿದ್ದ ಕಾಲ. ಎರಡನೇ ಪ್ರಪಂಚ ಯುದ್ಧದಲ್ಲಿ ಅಮೇರಿಕ ನೇತೃತ್ವದ ರಾಷ್ಟçಗಳಿಗೆ ಬಂದೊದಗಿದ ಬಿಕ್ಕಟ್ಟುಗಳನ್ನು ಎದುರಿಸುವ ಸಲುವಾಗಿ ತನ್ನ ಸುಲಿಗೆಯ ನೀತಿಗಳನ್ನು ಬದಲಾಯಿಸಿಕೊಂಡಿತು.
ಇದರ ಪರಿಣಾಮದಿಂದಾಗಿ ಪ್ರಪಂಚದ ಬೇರೆ ಬೇರೆ ಭಾಗದಲ್ಲಿ ರಾಷ್ಟ್ರ ವೀಮೋಚನೆಗಾಗಿ ಹೋರಾಟ ಮಾಡುತ್ತಿದ್ದ ರಾಷ್ಟçಗಳಿಗೆ ಅಧಿಕಾರವನ್ನು ಹಸ್ತಾಂತರಿಸುವುದು ಅನಿವಾರ್ಯವಾಯಿತು. ಈ ಉದ್ದೇಶದಿಂದ ಚರ್ಚಿಲ್ ಒಪ್ಪಂದವನ್ನು ರೂಪಿಸಲಾಯಿತು. ಅಂತರರಾಷ್ಟಿçಯ ಮಟ್ಟದಲ್ಲಿ ಇದು ಅತ್ಯಂತ ಗುರುತರವಾದ ಆತಂಕದ ಪರಿಸ್ಥಿತಿಯನ್ನು ನಮಗೆ ಸೂಚಿಸುತ್ತದೆ. ಇನ್ನು ನಿರ್ದಿಷ್ಟವಾಗಿ ಭಾರತದಲ್ಲಿ ಏನಾಗುತ್ತಿತ್ತು ಎಂಬುದರತ್ತ ಗಮನ ಹರಿಸೋಣ.
ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿತ್ತು.
ಆ ಹೋರಾಟ ಹಲವು ರೂಪಗಳಲ್ಲಿ ಕವಲೊಡೆದಿತ್ತು.
ಭಾರತದಲ್ಲಿ ಮುಸ್ಲಿಂ ಲೀಗ್ ಮುಸ್ಲಿಮರ ಬಗೆಗೆ ಕೆಲವು ಹಕ್ಕೊತ್ತಾಯವನ್ನು ಮಂಡಿಸಿತ್ತು. ಹಿಂದೂ ಮಹಾಸಭಾ ಹಿಂದೂ ಸಂಸ್ಕೃತಿಯ ಪುನರುತ್ಥಾನಕ್ಕೆ ಇಳಿದಿತ್ತು. ಕೆಲವು ಪಾಶ್ಚಾತ್ಯರು ಭಾರತದಲ್ಲಿ ಸಾಮಾಜಿಕ ಸುಧಾರಣಾ ಚಳುವಳಿಗಳನ್ನು ಮಾಡುತ್ತಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪಡೆಯಲು ಹೋರಾಟ ಮಾಡುತ್ತಿತ್ತು. ಇದರ ಅಡಿಯಲ್ಲಿ ಭಾರೀ ಭೂಮಾಲೀಕರ ಮತ್ತು ಭಾರೀ ಬಂಡವಾಳಶಾಹಿಗಳ ವರ್ಗಹಿತಾಸಕ್ತಿಗಳು ಮೇಲುಗೈ ಸಾಧಿಸಿದ್ದವು. ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಕೆಳವರ್ಗ, ಕೆಳಜಾತಿ ಮತ್ತು ಮಹಿಳೆಯರ ಸಬಲೀಕರಣ ಮಾಡುವುದು ಹೇಗೆ ಎಂಬ ಆಲೋಚನೆ ಮತ್ತು ಹೋರಾಟಗಳು ನಡೆದಿದ್ದವು.
ಭಾರತದ ಮೂಲೆ ಮೂಲೆಯಲ್ಲಿ ಇದ್ದ ಆದಿವಾಸಿಗಳು, ಅಲೆಮಾರಿಗಳು, ಬುಡಕಟ್ಟು ಜನರು, ಅಸ್ಪೃಶ್ಯರು, ಮಹಿಳೆಯರು ಬಿಟ್ಟಿ ದುಡಿಮೆಗಾರರು ಮತ್ತು ಕಾರ್ಮಿಕರು ಅನ್ನ ವಸತಿಗಾಗಿ ಪರಿತಪಿಸುತ್ತಿದ್ದರು. ಅವರು ಒಂದು ಕಡೆ ಸ್ಥಳೀಯ ಭೂಮಾಲೀಕರ ವಿರುದ್ಧವೂ; ಮತ್ತೊಂದು ಕಡೆ ಬ್ರಿಟೀಶರ ವಿರುದ್ಧವೂ ರಾಜಿರಹಿತವಾದ ಸಮರ ಸಾರಿದ್ದರು. 540ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಇದ್ದ ಸಂಸ್ಥಾನಗಳು ಮತ್ತು ಮಹಾಸಂಸ್ಥಾನಗಳು ಬ್ರಿಟೀಷರ ಪರವಾಗಿ ಇದ್ದುಕೊಂಡು ಸ್ವಾತಂತ್ರö್ಯವನ್ನು ಘೋಷಣೆ ಮಾಡುವ ರೀತಿಯಲ್ಲಿ ಇರಲಿಲ್ಲ. ಅಂದರೆ, ಅತ್ಯಂತ ತೀವ್ರವಾದ ಆತಂಕವು ಇಡೀ ಭಾರತವನ್ನು ಆವರಿಸಿಕೊಂಡಿತ್ತು.
ಭಾರತದೊಳಗಿನ ವರ್ಗ, ಜಾತಿ, ಧರ್ಮ ಸಂಸ್ಕೃತಿ, ಭಾಷೆ, ಲಿಂಗ ಇವುಗಳ ಶ್ರೇಣೀಕೃತ ಅಸಮಾನತೆ ಕುದಿಯುವುದಕ್ಕೆ ಶುರುವಾಗಿತ್ತು. ಬಲಾಢ್ಯರು ಇವುಗಳ ಉಪಯೋಗ ಪಡೆಯಲು ಮುಂದಾಗಿದ್ದರು. ಅಸಹಾಯಕರನ್ನು ಅಂಚಿಗೆ ತಳ್ಳುವ ಸಂಚು ಮುಂದುವರೆದಿತ್ತು. ಹೀಗಾಗಿ ಭಾರತದೊಳಗಿನ ಹಲವು ಆತಂಕಗಳು ತೀವ್ರವಾಗಿದ್ದವು. ಅಂದರೆ ಭಾರತದಲ್ಲಿ ಸಂವಿಧಾನವನ್ನು ರಚನೆ ಮಾಡುವಾಗ ಭಾರತದ ಸಾಮಾಜಿಕ ಪರಿಸ್ಥಿತಿ ಮತ್ತು ಜಾಗತಿಕ ಮಟ್ಟದ ರಾಜಕೀಯ ಪರಿಸ್ಥಿತಿ ತಿಳಿಯಾಗಿ ಇರಲಿಲ್ಲ. ಅವು ಅತ್ಯಂತ ಏರಿಳಿತಗಳಿಂದ ಹಾಗೂ ಆತಂಕಗಳಿಂದ ಕೂಡಿದ್ದವು.
ಪರಿಸ್ಥಿತಿಯು ಸಮಾಧಾನವಾಗಿದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಮತ್ತು ಪರಿಸ್ಥಿತಿಯು ಆತಂಕದ ಸ್ಥಿತಿಯಲ್ಲಿ ಇದ್ದಾಗ ಸಂವಿಧಾನ ರಚನೆ ಮಾಡುವುದಕ್ಕೂ ಬಹಳ ವ್ಯತ್ಯಾಸ ಇರುತ್ತದೆ. ಇದನ್ನು ಬಹಳ ಸ್ಮೂಕ್ಷ್ಮವಾಗಿ ಮತ್ತು ಅಷ್ಟೇ ಗಂಭೀರವಾಗಿ ಪರಿಗಣಿಸಬೇಕು.
ಇಂತಹ ಚಾರಿತ್ರಿಕ ಸಂದರ್ಭದಲ್ಲಿ, ಭಾರತ ದೇಶವು ಆದಿ ಕಾಲದಿಂದ ವಿವಿಧ ರಾಜ್ಯಭಾರಗಳು, ವಿವಿಧ ಆಡಳಿತಗಳು, ವಿವಿಧ ಸಂಸ್ಕೃತಿಗಳು, ವಿವಿಧ ಧರ್ಮಗಳು, ವಿವಿಧ ಪರಂಪರೆಗಳಿಂದ ಸಾಗಿ ಬಂದಿದ್ದ ಅನುಭವ ಮತ್ತು ಅರಿವು ಸಂವಿಧಾನ ರಚನೆಕಾರರ ಮುಂದಿದ್ದವು. ಭಾರತ ರಾಷ್ಟçವನ್ನು ಬ್ರಿಟೀಶರ ಆಳ್ವಿಕೆಯಿಂದ ಮುಕ್ತಗೊಳಿಸಿದ ನಂತರದಲ್ಲಿ, ಮತ್ತೆ ಅಂತಹ ಪರಿಸ್ಥಿತಿಗಳಿಗೆ ಅವಕಾಶ ಕೊಡದಂತೆ ಹೊಸದಾಗಿ ಕಟ್ಟುವುದು ಹೇಗೆ, ತುಳಿಯುವ ಮತ್ತು ತುಳಿತವನ್ನು ಅನುಭವಿಸುತ್ತಿರುವ ಎಲ್ಲ ಪ್ರಜೆಗಳ ಭೌತಿಕ ಪರಿಸ್ಥಿತಿಯನ್ನು ಬದಲಾಯಿಸುವುದು ಹೇಗೆ, ಈ ಎರಡೂ ವರ್ಗಗಳ ಅಂತರಂಗವನ್ನು, ಗುಣಸ್ವಭಾವಗಳನ್ನು ಪರಿವರ್ತನೆ ಮಾಡುವುದು ಹೇಗೆ, ವಿವಿಧ ಸಂಸ್ಕೃತಿಗಳು, ಪರಂಪರೆಗಳು, ಧರ್ಮಗಳು, ಭಾಷೆಗಳು ಇವನ್ನು ಶೋಷಣಾಮುಕ್ತ ಮಾಡುವುದು ಹೇಗೆ ಎಂಬ ಬಹಳ ದೊಡ್ಡ ಸವಾಲುಗಳು ಸಂವಿಧಾನ ರಚನೆಕಾರರ ಮುಂದಿದ್ದವು.
ಆಧುನಿಕ ಕಾಲದಲ್ಲಿ ರಾಷ್ಟ್ರಗಳು ಹಾಗೂ ಅದರ ಪ್ರಜೆಗಳು ಎಂತಹ ಬಿಕ್ಕಟ್ಟುಗಳನ್ನು ಎದುರಿಸಬೇಕಾಗಬಹುದು, ಆಗ ರಾಷ್ಟç ಜೀವನವನ್ನೂ ಹಾಗೂ ಪ್ರಜೆಗಳ ಬದುಕನ್ನೂ ಹೇಗೆ ಸಮತೋಲನದಿಂದ ಪರಿವರ್ತನೆ ಮಾಡಬೇಕಾಗುತ್ತದೆ ಎಂಬಂತಹ ಅತ್ಯಂತ ದೂರಗಾಮಿ ಸವಾಲುಗಳು ಇವರ ಮುಂದೆ ಇದ್ದವು. ಆಸ್ತಿ, ಸಂಪತ್ತು, ಅಧಿಕಾರಗಳ ಖಾಸಗೀ ಒಡೆತನವನ್ನು ಬದಲಾಯಿಸುವುದು ಹೇಗೆ, ಇವುಗಳ ಅಸಮಾನತೆಯ ಹಂಚಿಕೆಯ ಕರಾಣದಿಂದ ಉಂಟಾಗಿರುವ ಆರ್ಥಿಕ-ಸಾಮಾಜಿಕ ಅಸಮಾನತೆಯನ್ನು ಸಮಾನತೆಯ ಸ್ಥಿತಿಗೆ ಪರಿವರ್ತಿಸುವುದು ಹೇಗೆ, ಭಾರತದ ಪರಂಪರೆಯಲ್ಲಿ ಮಹಿಳೆಯರನ್ನು, ಅಸ್ಪೃಶ್ಯರನ್ನು ಹೀನಾಯಾಗಿ ಕಾಣುತ್ತಿರುವ ಭೌತಿಕ ಮತ್ತು ಅಂತರಂಗದ ಪರಿಸ್ಥಿತಿಯನ್ನು ದಲಾಯಿಸುವುದು ಹೇಗೆ, ಎಂಬ ನೂರಾರು ಸವಾಲುಗಳು ಇವರ ಮುಂದೆ ಇದ್ದವು. ಸಂವಿಧಾನದ ರಚನೆಯ ಒಂದೊಂದು ಪದ ಸಂಯೋಜನೆಯಲ್ಲೂ ಇವು ಮತ್ತೆ ಮತ್ತೆ ಇವರನ್ನು ಕಾಡುತ್ತಿದ್ದವು.
1946ಜುಲೈ ತಿಂಗಳಲ್ಲಿ ಚುನಾವಣೆಯ ಮೂಲಕ ಸಂವಿಧಾನ ರಚನೆಯ ಸಮಿತಿಗೆ 296 ಸದಸ್ಯರನ್ನು ನೇಮಕ ಮಾಡಲಾಯಿತು. ಮುಸ್ಲಿಂ ಲೀಗ್ನ ಸದಸ್ಯರು ಸಂವಿಧಾನ ರಚನೆಯ ಸಭೆಗಳಲ್ಲಿ ಭಾಗವಹಿಸಲಿಲ್ಲ. ಉಳಿದ 272ಸದಸ್ಯರು 1946ರ ಡಿಸೆಂಬರ್ 9ರಂದು ಸಂವಿಧಾನ ರಚನೆಯ ಕೆಲಸವನ್ನು ಪ್ರಾರಂಭಿಸಿದರು. ಒಂದು ವರ್ಷ, 2 ತಿಂಗಳ ಅವಧಿಯಲ್ಲಿ ಸಂವಿಧಾನದ ಕರಡನ್ನು ಪೂರ್ಣಗೊಳಿಸಿದರು. 1948ರ ಫೆಬ್ರವರಿ 21ರಂದು ಇದನ್ನು ಪ್ರಜೆಗಳ ಮುಂದೆ ಪ್ರತಿಕ್ರಿಯೆಗೆ ಇಡಲಾಯಿತು. ಪ್ರಜೆಗಳು ಇದಕ್ಕೆ ಒಟ್ಟು 7,635 ತಿದ್ದುಪಡಿಗಳನ್ನು ಸೂಚಿಸಿದರು.
ಈ ತಿದ್ದುಪಡಿಗಳನ್ನು ಪರಿಶೀಲಿಸಿ ಸೂಕ್ತವಾದವುಗಳನ್ನು ಕರಡಿಗೆ ಸೇರಿಸಿ, 1949ನವೆಂಬರ್ 26ರಂದು ಅಂತಿಮ ಕರಡನ್ನು ಭಾರತದ ಪಾರ್ಲಿಮೆಂಟಿನಲ್ಲಿ ಮಂಡಿಸಲಾಯಿತು. ಭಾರತ ಸಂವಿಧಾನದ ಕರಡು ತಯಾರು ಮಾಡಲು ಒಟ್ಟು 2 ವರ್ಷ, 11 ತಿಂಗಳು, 17 ದಿನಗಳ ಕಾಲ ಎಡಬಿಡದೆ ಕೆಲಸ ಮಾಡಲಾಯಿತು.
ಸಂವಿಧಾನದ ಬಗೆಗೆ ಮಾತನಾಡುವುದು, ಚರ್ಚೆ ಮಾಡುವುದು ನನ್ನ ಪ್ರಕಾರ ಎರಡು ರೀತಿಯಲ್ಲಿ ನಡೆಯುತ್ತದೆ. ಒಂದು: ದೇಶವನ್ನು ಆಳ್ವಿಕೆ ಮಾಡಲು ಸಂವಿಧಾನವನ್ನು ಹೇಗೆ ಜಾರಿಗೊಳಿಸಬೇಕು ಎಂಬ ನೆಲೆ. ಎರಡು: ರಾಷ್ಟ್ರವನ್ನು ಕಟ್ಟಲು ಸಂವಿಧಾನದಿಂದ ಹೇಗೆ ಸ್ಫೂರ್ತಿ ಪಡೆಯಬೇಕು ಎಂಬ ನೆಲೆ ಅಥವಾ ಸಂವಿಧಾನದ ಆಶಯವನ್ನು ಅನುಸರಿಸಿ ದೇಶವನ್ನು ಹೇಗೆ ಕಟ್ಟಬೇಕು ಎಂಬ ನೆಲೆ.
ಸಂವಿಧಾನವು ಪ್ರಪಂಚದ ಯಾವ ಯಾವ ಸಂವಿಧಾನಗಳಿಂದ, ಯಾವ ಯಾವ ಅಂಶಗಳನ್ನು ಪಡೆದಿದೆ, ಅದರ ಅಗತ್ಯ ಎಷ್ಟು ಇತ್ತು, ಯಾಕೆ ಇತ್ತು ಎಂಬುದರ ಬಗೆಗೆ ಕೆಲವು ಮಾಹಿತಿಗಳನ್ನು ಆಧರಿಸಿ ಮಾತನಾಡುವ ಒಂದು ಕ್ರಮ ಇದೆ. ಇದರ ಮುಂದುವರೆದ ಭಾಗವಾಗಿ ಸಂವಿಧಾನದಲ್ಲಿ ಅಧ್ಯಾಯಗಳಿವೆ, ಎಷ್ಟು ಭಾಗಗಳಿವೆ, ಎಷ್ಟು ಅನುಚ್ಛೇದಗಳಿವೆ, ಒಂದೊಂದು ಅನುಚ್ಚೇದವು ಏನನ್ನು ಹೇಳುತ್ತದೆ ಎಂದು ಪರಿಚಯಾತ್ಮಕವಾಗಿ ಮಾತನಾಡುವ ಇನ್ನೊಂದು ಕ್ರಮ ಇದೆ.
ಇವತ್ತಿನ ನನ್ನ ಮಾತುಗಳ ಸ್ವರೂಪ ಈ ಎರಡೂ ಅಲ್ಲ. ಈ ಆಯಾಮ ನನಗೆ ಮುಖ್ಯವಲ್ಲ. ಇದಕ್ಕಿಂತ ಮುಖ್ಯವಾದ ಇನ್ನೊಂದು ಆಯಾಮ ನನಗೆ ಅತ್ಯಂತ ಮಹತ್ವದ್ದು. ಅದು ಯಾವುದು ಎಂದರೆ, ಅದನ್ನು ನಾನು ಕನ್ನಡದ ಸ್ಥಳೀಯ ನುಡಿಗಟ್ಟನ್ನು ಬಳಸಿ ಹೇಳುವುದಾದರೆ ಅದನ್ನು ನಾನು ಹದ ಎಂದು ಕರೆಯುತ್ತೇನೆ. ಹದ ಎಂದರೆ ಏನು? ಉದಾಹರಣೆಗೆ, ಟೀ ಮಾಡುವ ಕ್ರಮ ನಮಗೆಲ್ಲ ಪರಿಚಿತ. ಅದಕ್ಕೆ ಬೇಕಾಗುವ ವಸ್ತುಗಳು ಪರಿಚಿತ. ಆದರೆ ಒಬ್ಬರು ಮಾಡುವ ಟೀಯ ರುಚಿ ಮತ್ತೊಬ್ಬರು ಮಾಡಿದಂತೆ ಇರುವುದಿಲ್ಲ.
ಯಾಕೆಂದರೆ ಟೀಯನ್ನು ತಯಾರು ಮಾಡುವ ಕ್ರಮದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಹದವಿರುತ್ತದೆ. ಆ ಹದವನ್ನು ಅವಲಂಬಿಸಿ ಟೀ ರುಚಿ, ಸ್ವಾದ ಬದಲಾಗುತ್ತಾ ಹೋಗುತ್ತದೆ. ಇದು ಯಾಕೆ? ಇದು ನನಗೆ ಮುಖ್ಯವಾದ ಪ್ರಶ್ನೆ. ಇದು ಪಾಕಶಾಸ್ತçದ ಪ್ರಾವೀಣ್ಯತೆಯ ಪ್ರಶ್ನೆಯಲ್ಲ. ಈ ಮಾತನ್ನು ಮತ್ತೆ ನಾನು ವಿವರಿಸಲು ಹೋಗುವುದಿಲ್ಲ.
ಸಂವಿಧಾನವನ್ನು ಒಕ್ಕೊರಲಿನಿಂದ ಕಾನೂನುಗಳ ಗ್ರಂಥ ಎಂದು ಕರೆಯಲಾಗಿದೆ. ಈ ಕಾರಣದಿಂದ ಭಾರತದ ಸಂವಿಧಾನವನ್ನು ರಾಜ್ಯಶಾಸ್ತçದ ಪಂಡಿತರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಸಂಶೋಧಕರು ಓದಬೇಕು ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಜೊತೆಗೆ ಸಂವಿಧಾನವನ್ನು ವಕೀಲರು ಮತ್ತು ನ್ಯಾಯಾಧೀಶರು ಓದಬೇಕು ಹಾಗೂ ಅದನ್ನು ಕೋರ್ಟುಗಳ ವ್ಯಾಜ್ಯಗಳಿಗೆ ಆಧಾರವಾಗಿ ಬಳಸಬೇಕು ಎಂಬ ಬದಲಾಗದ ನಿಯಮವನ್ನು ಸೃಷ್ಟಿಸಲಾಗಿದೆ. ವಸ್ತುಸ್ಥಿತಿಯು ಕೂಡ ಅದೇ ರೀತಿಯಲ್ಲಿ ಮುಂದುವರಿದಿದೆ. ಈ ಕಾರಣದಿಂದ ರಾಜ್ಯಶಾಸ್ತ್ರ ಔಪಚಾರಿಕ ವಲಯದವರು ಹಾಗೂ ನ್ಯಾಯಾಂಗ ವ್ಯವಸ್ಥೆಯ ವೃತ್ತಿಪರ ಕೆಲಸಗಾರರು ಮಾತ್ರ ಸಂವಿಧಾನವನ್ನು ಪರಿಚಯಿಸಿಕೊಂಡಿದ್ದಾರೆ.
ಅಗತ್ಯವಿದ್ದಷ್ಟು ಅದರ ಅನುಚ್ಚೇದಗಳನ್ನು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ಎರಡು ನಿರ್ದಿಷ್ಟ ವಲಯದವರನ್ನು ಬಿಟ್ಟರೆ ಉಳಿದ ವಲಯದವರು ಸಂವಿಧಾನ ಎಂಬ ಪುಸ್ತಕದ ಮುಖ ಪುಟವನ್ನು ಸಹ ನೋಡುವ ಗೋಜಿಗೆ ಹೋದಂತೆ ಕಾಣುವುದಿಲ್ಲ. ಯಾಕೆಂದರೆ ಅವರಿಗೆ ಅದರ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ರೂಪಿಸಲಾಗಿದೆ. ಈ ಮೂಲಕ ಸಂವಿಧಾನವನ್ನು ಓದಬಹುದಾಗಿದ್ದ ದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಹೀಗೆ ಬಂದ್ ಮಾಡಿರುವ ಬಾಗಿಲುಗಳನ್ನು ನಾವು ಇವತ್ತು ತೆರೆಯಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಎನ್.ಆರ್.ಸಿ. ಮತ್ತು ಸಿ.ಎ.ಎ.ಗಳ ಬಗ್ಗೆ ಒಂದು ಮಟ್ಟದ ಚರ್ಚೆಯಾಗುತ್ತಿದೆ.
ಭಾರತದ ಯಾವ ಸಮುದಾಯಗಳು ಇದುವರೆಗೆ ಸಂವಿಧಾನದ ಹೆಸರನ್ನು ಮತ್ತು ಡಾ. ಅಂಬೇಡ್ಕರರ ಹೆಸರನ್ನು ಹೇಳಿರಲಿಲ್ಲವೋ, ಆ ಸಮುದಾಯಗಳ ಕೆಲವು ನಾಯಕರು ಇವತ್ತು ಸಂವಿಧಾನ ಮತ್ತು ಅಂಬೇಡ್ಕರ್ ಎಂಬ ಎರಡು ಪದಗಳನ್ನಾದರೂ ಹೇಳುತ್ತಿದ್ದಾರೆ. ನನ್ನ ದೃಷ್ಟಿಯಲ್ಲಿ ಭಾರತದಲ್ಲಿ ಇದು ಬಹಳ ದೊಡ್ಡ ಬೆಳವಣಿಗೆ.
ಭಾರತದ ಸಂವಿಧಾನವನ್ನು ಕೇವಲ ಕಾನೂನುಗಳ ಗ್ರಂಥವೆಂದು ಪರಿಗಣಿಸಿದಾಗ, ಸಂವಿಧಾನದ ಪ್ರತಿಯೊಂದು ಅನುಚ್ಛೇದದಲ್ಲಿ ಏನು ಇದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಅದನ್ನುIn the Article, by the Aricle, through the Aricle, ಕ್ರಮದಲ್ಲಿ ಓದುವುದು ಮತ್ತು ಚರ್ಚಿಸುವುದು ಮುಖ್ಯವಾಗುತ್ತದೆ. ಈ ಏಕಮಾದರಿಯ ಓದು ನಮ್ಮನ್ನು ಸ್ವಲ್ಪವೂ ಆ ಕಡೆ ಈ ಕಡೆ ನೋಡಲು ಬಿಡುವುದಿಲ್ಲ; ಬಿಟ್ಟಿಲ್ಲ. ಹಾಗಾಗಿ ಕಾನೂನುಗಳಲ್ಲಿ ಏನಿದೆ ಎಂಬುದು ಮುಖ್ಯವಾಗಿ; ಕಾನೂನುಗಳ ಹಿಂದಿರುವ ಒಂದು ಹದ, ಒಂದು ಮಾನವೀಯತೆ ಏನಿದೆ ಅದನ್ನು ಗ್ರಹಿಸಲಾರದಂತೆ ಆಗಿದೆ. ಆದ್ದರಿಂದ ನಾವೀಗ Beyond the Aricle ಎಂಬ ನೆಲೆಯಲ್ಲಿ ಭಾರತದ ಸಂವಿಧಾನವನ್ನು ಗ್ರಹಿಸಬೇಕಾದ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ.
ಅಂದರೆ ಸಂವಿಧಾನವನ್ನು ಕಾನೂನುಗಳ ಒಂದು ಕಟ್ಟು ಎಂದು ಪರಿಭಾವಿಸಿ ಅದನ್ನು ಮಾಹಿತಿ ಪ್ರಧಾನವಾಗಿ ಓದಲಾಗಿದೆ. ಆದರೆ ಭಾರತದ ಸಂವಿಧಾನಕ್ಕೆ ಬಹಳ ದೊಡ್ಡ ಒಂದು ದರ್ಶನ ಇದೆ. ಅದಕ್ಕೆ ಪ್ರಜೆಗಳ ಅಂತರಂಗ ಮತ್ತು ಬಹಿರಂಗವನ್ನು ಶುದ್ಧೀಕರಿಸುವ, ಪವಿತ್ರೀಕರಿಸುವ, ಕಟ್ಟುವ, ಸೃಷ್ಟಿಸುವ, ನಿರ್ಮಿಸುವ ಆ ಮೂಲಕ ಇಡೀ ದೇಶವನ್ನು ಕಟ್ಟುವ, ಹೊಸ ರಾಷ್ಟçವನ್ನು ಸೃಷ್ಟಿಸುವ ಬಹಳ ದೊಡ್ಡ ದರ್ಶನ ಇದೆ. ಈ ದೃಷ್ಟಿಯಲ್ಲಿ ನಾವೀಗ ಭಾರತದ ಸಂವಿಧಾನವನ್ನು ಓದಬೇಕಾಗಿದೆ; ಗ್ರಹಿಸಬೇಕಾಗಿದೆ.
ಇದುವರೆಗೆ ಸಂವಿಧಾನವನ್ನು ಓದಿರುವ ಮತ್ತು ಅದನ್ನು ಬಳಸಿರುವ ಕ್ರಮದ ಬಗೆಗೆ ನನಗೆ ಬಹಳ ದೊಡ್ಡ ತಕರಾರು ಇದೆ. ನನ್ನ ಈ ಮಾತುಗಳಿಗೆ ಒಂದು ಖಚಿತವಾದ ವ್ಯಾಖ್ಯಾನವನ್ನು ಮಾಡುವುದಾದರೆ, ಆಳುವವರು ಸಂವಿಧಾನವನ್ನು ಓದುವ ಬಗೆ ಮತ್ತು ಪ್ರಜೆಗಳು ಸಂವಿಧಾನವನ್ನು ಓದುವ ಬಗೆ ಎಂದು ಎರಡು ನೆಲೆಗಳನ್ನಾಗಿ ನಾನು ವಿಂಗಡಿಸುತ್ತೇನೆ. ಇದನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ ಆಳುವ ವರ್ಗದ ಸಂವಿಧಾನದ ಓದು ಮತ್ತು ಪ್ರಜೆಗಳ ಸಂವಿಧಾನದ ಓದು ಎಂದು ನಾನು ಹೇಳುತ್ತೇನೆ. ಆಳುವವರು ರಾಷ್ಟ್ರವನ್ನು ಆಳುವುದಕ್ಕಾಗಿ; ಪ್ರಜೆಗಳನ್ನು ಆಳುವುದಕ್ಕಾಗಿ ಸಂವಿಧಾನವನ್ನು ಓದುತ್ತಾರೆ; ಗ್ರಹಿಸುತ್ತಾರೆ ಮತ್ತು ಬಳಸುತ್ತಾರೆ.
ಆದರೆ ಆಳುವ ಜನ ಅಲ್ಲದ ನಾವು; ಭಾರತದ ಪ್ರಜೆಗಳಾದ ನಾವು ಹೊಸ ಪ್ರಜೆಗಳನ್ನು ರೂಪಿಸುವುದಕ್ಕಾಗಿ, ನಾವೇ ಹೊಸ ಪ್ರಜೆಗಳಾಗಿ ರೂಪುಗೊಳ್ಳುವುದಕ್ಕಾಗಿ, ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನವನ್ನು ಓದಬೇಕು; ಗ್ರಹಿಸಬೇಕು; ಚರ್ಚೆ ಮಾಡಬೇಕು. “ಸಂವಿಧಾನದ ಓದು’’, “ಸಂವಿಧಾನ ಕುರಿತ ವಿಚಾರ ಸಂಕಿರಣ’’ ಈ ಮುಂತಾದ ಸಂದರ್ಭಗಳಲ್ಲಿ ನಾವು ಮೂಲಭೂತವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ; ದೇಶವನ್ನು ಆಳುವುದಕ್ಕಾಗಿ ಸಂವಿಧಾನದ ಚರ್ಚೆಯೊ ಅಥವಾ ಹೊಸ ರಾಷ್ಟçವನ್ನು ಕಟ್ಟುವುದಕ್ಕಾಗಿ ಸಂವಿಧಾನದ ಚರ್ಚೆಯೊ ಎಂಬ ಮುಖ್ಯ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.
ಸಂವಿಧಾನವನ್ನು ಇದುವರೆಗೆ ಎಲ್ಲಿ ಓದಲಾಗಿದೆ ಮತ್ತು ಹೇಗೆ ಓದಲಾಗಿದೆ ಎಂಬುದು ನಮಗೆಲ್ಲ ಚಿರಪರಿಚಿತ. ನಾನು ಆಗಲೆ ಹೇಳಿದಂತೆ ಕೋರ್ಟುಗಳು ಮತ್ತು ಸಾಂಪ್ರದಾಯಿಕ ರಾಜ್ಯಶಾಸ್ತçದ ಅಧ್ಯಾಪಕರು ಅದರ ಬಳಕೆದಾರರಾಗಿದ್ದಾರೆ. ಅವರೆಲ್ಲರೂ ಅದನ್ನು ಕಾನೂನುಗಳ ಗ್ರಂಥ ಮತ್ತು ಕೇವಲ ಕಾನೂನುಗಳ ಗ್ರಂಥ ಎಂದು ಓದಿದ್ದಾರೆ.
ಇದರ ಪರಿಣಾಮವಾಗಿ ಭಾರತದ ಸಂವಿಧಾನವನ್ನು ಹೀಗೆ ಆಳುವವರ ಕೈಪಿಡಿಯಾಗಿ ಮತ್ತು ಅವರ ಮಾರ್ಗದರ್ಶಿ ಸೂತ್ರವಾಗಿ ಸಂಕುಚಿತಗೊಳಿಸಲಾಗಿದೆ. ಇದು ಸರಿಯಲ್ಲ. ಭಾರತದ ಸಂವಿಧಾನವನ್ನು ಇಡೀ ಭಾರತದ ಅಧೋಲೋಕದ ಪರಿಸ್ಥಿತಿಯು ಬದಲಾಗಿರುವ ಮತ್ತು ಬದಲಾಗುತ್ತಿರುವ ಸಂಕೀರ್ಣವಾದ ಒಡಲಿನಲ್ಲಿ ಇಟ್ಟು ಓದಬೇಕು ಮತ್ತು ಅದರಿಂದ ನಾವು ಕಲಿಯಬೇಕು. ಭಾರತೀಯ ಸಮಾಜವನ್ನು ಪ್ರಭಾವಿಸುತ್ತಿರುವ ಮತ್ತು ನಿಯಂತ್ರಿಸುತ್ತಿರುವ ಧರ್ಮ ಗ್ರಂಥಗಳ ಜೊತೆಗೆ ಭಾರತದ ಸಂವಿಧಾನವನ್ನು ಇಟ್ಟು ಓದಬೇಕು. ಅಂಬೇಡ್ಕರ್ ಅವರು ಬುದ್ಧನನ್ನು ಕಾರ್ಲ್ಮಾರ್ಕ್ಸ್ನ ಜೊತೆಗೆ ಇಟ್ಟು ಓದಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’
- ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ
ಅವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.
ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.
ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.
ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.
ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.
ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.
ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.
ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಹೊಸತನದ ಹೊಸ್ತಿಲಲ್ಲಿ..!
- ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ
ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.
ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.
ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.
ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.
ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.
ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಅಂತರಂಗ
ಕಾಮರೂಪದ ಪ್ರಭಾಕರ
- ಪ್ರೊ.ರಹಮತ್ ತರೀಕೆರೆ
ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.
`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್ಟಾಪಿನಲ್ಲಿ ಬರೆಯುತ್ತ, ವೆಬ್ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.
ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.
ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.
ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.
ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.
ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್ಪೂರ್ಣ ಹರಟೆ.
ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.
ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’
ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.
ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.
ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.
ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.
ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಭಾನುವಾರದಂದು ಕಾರ್ಯನಿರ್ವಹಿಸುವಂತೆ ಬ್ಯಾಂಕ್ಗಳಿಗೆ ಆರ್ ಬಿ ಐ ಸೂಚನೆ
-
ದಿನದ ಸುದ್ದಿ6 days ago
ನಾಯಕನ ಹಟ್ಟಿ | ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ವಿಶೇಷ ಬಸ್ ಸೌಲಭ್ಯ
-
ದಿನದ ಸುದ್ದಿ7 days ago
ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತ ; ಬಿಜೆಪಿ ಅಧಿಕಾರ ದುರುಪಯೋಗ : ಖರ್ಗೆ ಕಿಡಿ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ5 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ5 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು