ಲೈಫ್ ಸ್ಟೈಲ್
ಹಬ್ಬಕ್ಕೆ ಕಳೆ ಕಟ್ಟಿದೆ ಬೆಂಗಳೂರು ಮಾರುಕಟ್ಟೆ | ಹಬ್ಬಕ್ಕೆ ನೀವು ರೆಡಿ ನಾ?
ನಾಳೆ ವರಮಹಾಲಕ್ಷ್ಮಿ ಹಬ್ಬ.ಶ್ರಾವಣ ಮಾಸದ ಶುಕ್ರವಾರದಂದು ಬರುವ ವರ ಮಹಾಲಕ್ಷ್ಮಿದೇವಿಯನ್ನ ಸ್ವಾಗತಿಸೋಕೆ ಇಡೀ ಬೆಂಗಳೂರು ಸಜ್ಜಾಗಿದೆ. ಬೆಂಗಳೂರಿನ ಸಿಟಿ ಮಾರುಕಟ್ಟೆಗೆ ಯಲ್ಲಿ ಯಂತೂ ಹಬ್ಬದ ಕಳೆ ಕಟ್ಟಿದೆ. ಮಲ್ಲಿಗೆ, ಅಜ್ಜಿ, ಗುಲಾಬಿ, ಸೇವಂತಿಗೆ, ಕಮಲದ ಪರಿಮಳ ಮಾರುಕಟ್ಟೆಯ ತುಂಬೆಲ್ಲಾ.. ಬಾಳೆ-ಮಾವು-ಸೇಬು-ಕಿತ್ತಳೆ ಯ ರಾಶಿ ರಾಶಿ. ಎಲ್ಲಿ ನೋಡಿದರೂ ಹೂ-ಹಣ್ಣು , ಬಳೆ-ಬಟ್ಟೆ, ಖರೀದಿ ಯಲ್ಲಿ ಮಗ್ನರಾಗಿದ್ದಾರೆ ಬೆಂಗಳೂರಿಗರು. ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯ ನಡುವೆಯೂ ವರಮಹಾಲಕ್ಷ್ಮಿ ಹಬ್ಬಕ್ಕೆ ತಯಾರಿ ಜೋರಾಗಿಯೇ ಸಾಗಿದೆ.
ದೇವರ ಕಳಸ, ಪೂಜೆ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳುವಲ್ಲಿ ಜನರು ಫುಲ್ ಬುಜಿ. ಮಾಲು-ಮಳಿಗೆಗಳೆಲ್ಲಾ ತುಂಬಿ ತುಳುಕುತ್ತಿದ್ದು ಎಲ್ಲೆಲ್ಲೂ ಹಬ್ಬದ ರಿಯಾಯಿತಿ ವ್ಯಾಪಾರ ವಹಿವಾಟು ಸಾಗಿದೆ.
ಮಳೆಯ ಕಾರಣದಿಂದಾಗಿ ಎಂದಿನಂತೆ ಮಲ್ಲಿಗೆ-ಕನಕಾಂಬರ ದುಬಾರಿ ಎನಿಸಿದರೂ ಐಶ್ವರ್ಯ ರಾಣಿಯ ಸಿಂಗರಿಸುವ ಜನ ದುಬಾರಿ ದರಗಳಲ್ಲೂ ಖರೀದಿ ಮುಂದುವರೆಸಿದ್ದಾರೆ.
ಬೆಂಗಳೂರಿನ ಜಯನಗರ, ಬನಶಂಕರಿ, ಮಾಗಡಿ, ಮಡಿವಾಳ, ಮಾರುಕಟ್ಟೆಗಳು ಸೇರಿದಂತೆ,ಗಾಂಧಿ ಬಜಾರ್, ಮಲ್ಲೇಶ್ವರಂ,ವಿಜಯನಗರದಲ್ಲಿ ಹಬ್ಬದ ಶಾಪಿಂಗ್ ಬಿರುಸಿನಿಂದ ಸಾಗಿದೆ. ಹಬ್ಬವಾದ್ದರಿಂದ ಮಾರುಕಟ್ಟೆಗಳಲ್ಲಿ ಜನಜಂಗುಳಿ ಯೂ ಹೆಚ್ಚಿದ್ದು ಟ್ರಾಫಿಕ್ ಜಾಮ್ ಗಳನ್ನೂ ಎದುರಿಸಬೇಕಾಗುತ್ತದೆ. ಎಚ್ಚರಿಕೆ!
ಎಷ್ಟೇ ದುಬಾರಿ ದರಗಳಾದರೂ, ಟ್ರಾಫಿಕ್ ಜಾಮ್ ಇದ್ದರೂ ಇದೆಲ್ಲವನ್ನೂ ಲೆಕ್ಕಿಸದೆ ಹಬ್ಬದ ಶಾಪಿಂಗ್ ನಲ್ಲಿ ಮಗ್ನರಾಗಿದ್ದಾರೆ ಬೆಂಗಳೂರು ಜನತೆ. ಎಲ್ಲರಿಗೂ ನಾಳಿನ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.
ಲೈಫ್ ಸ್ಟೈಲ್
ನರದೌರ್ಬಲ್ಯ ನಿವಾರಣೆಗೆ ಬೆಳ್ಳುಳ್ಳಿ ಬಳಸಿ

100 ಗ್ರಾಂ ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
- ಸಾರಜನಕ : 3.5 ಗ್ರಾಂ
- ಪಿಷ್ಠ : 28.3 ಗ್ರಾಂ
- ಮೇದಸ್ಸು : 0.5 ಗ್ರಾಂ
- ಸುಣ್ಣ : 28 ಮಿಲಿಗ್ರಾಂ
- ರಂಜಕ : 310 ಮಿಲಿಗ್ರಾಂ
- ಕಬ್ಬಿಣ : 1.8 ಮಿಲಿಗ್ರಾಂ
- ನಿಯಾಸಿನ್ : 0.4 ಮಿಲಿಗ್ರಾಂ
- ಸಿ’ ಜೀವಸತ್ವ : 14 ಮಿಲಿಗ್ರಾಂ
ಬೆಳ್ಳುಳ್ಳಿಯಿಂದ ತಯಾರಿಸಬಹುದಾದ ಅಡುಗೆಗಳು
1. ಬೆಳ್ಳುಳ್ಳಿ ಮೆಣಸಿನಸಾರು
3. ಬೆಳ್ಳುಳ್ಳಿ ಚಟ್ಟಿಪುಡಿ.
2. ಬೆಳ್ಳುಳ್ಳಿ ಬಜ್ಜಿ
ಇದನ್ನೂ ಓದಿ | ಏನಿದು ? ಗಡಿಮಾರಿ..!
ಬೆಳ್ಳುಳ್ಳಿಯಲ್ಲಿರುವ ಔಷಧೀಯ ಗುಣಗಳು
1. ಬೆಳ್ಳುಳ್ಳಿಯನ್ನು ಆಹಾರದ ಜೊತೆ ಸೇವಿಸುವುದರಿಂದ ಹಸಿವು ಹೆಚ್ಚಾಗುತ್ತದೆ ನರದೌರ್ಬಲ್ಯ ನಿವಾರಣೆಯಾಗುತ್ತದೆ.
2. ಶೀತಕಾಲದಲ್ಲಿ ಉಂಟಾಗುವ ಕಿವಿ ನೋವಿಗೆ ಬೆಳ್ಳುಳ್ಳಿ ಹಾಕಿ ಕಾಯಿಸಿದ
3. ಬೆಚ್ಚಗಿನ ಕೊಬ್ಬರಿ ಎಣ್ಣೆಯನ್ನು ಕಿವಿಗೆ ಹಾಕುವುದರಿಂದ ನೋವು ಶಮನವಾಗುತ್ತದೆ. 3. ಸುಟ್ಟ ಬೆಳ್ಳುಳ್ಳಿಯ ಎರಡು ತೊಳೆಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ಜಂತು ಹುಳುಗಳು ಸಾಯುತ್ತವೆ.
4. ಎರಡು ಬೆಳ್ಳುಳ್ಳಿ ತೊಳೆಗಳ ಜೊತೆಗೆ ಐದಾರು ತುಳಸಿ ಎಲೆಗಳನ್ನು ಬೆರೆಸಿ ಅರೆದು ಹಚ್ಚುವುದರಿಂದ ಹುಳುಕಡ್ಡಿ ನಿವಾರಣೆಯಾಗುತ್ತದೆ.
5. ಬೆಳ್ಳುಳ್ಳಿಯೊಡನೆ ಹರಳೆಣ್ಣೆಯನ್ನು ಹಾಕಿ ಕಾಯಿಸಿ ನಂತರ ಆರಿಸಿ ನೋವಿರುವ ಭಾಗಗಳಿಗೆ ಉಜ್ಜುವುದರಿಂದ ಊತ ಮತ್ತು ನೋವು ಕಡಿಮೆಯಾಗುತ್ತದೆ.
6. ಬಾಣಂತಿಯರ ಆಹಾರದ ಜೊತೆ ಬೆಳ್ಳುಳ್ಳಿಯನ್ನು ಬಳಸುವುದರಿಂದ ಶೀತದ ಬಾಧೆ ತಟ್ಟುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಏನಿದು ? ಗಡಿಮಾರಿ..!

- ಡಾ.ಎನ್.ಬಿ.ಶ್ರೀಧರ್,ಶಿವಮೊಗ್ಗ
ಈಗ ಸ್ವಲ್ಪ ದಿನಗಳ ಹಿಂದೆ ಶಿವಮೊಗ್ಗದಿಂದ ಸಾಗರಕ್ಕೆ ಕಾರ್ಯನಿಮಿತ್ತ ಹೋಗುವಾಗ ರಸ್ತೆಯ ಬದಿಯಲ್ಲಿ ಒಂದು ಮರದ ಗಾಡಿ, ಅದಕ್ಕೆ ಎಳೆಯಲು ಎರಡು ಮರದ ರೆಂಬೆಗಳು, ಅದರ ಮೇಲೊಂದು ದೇವರ ದೇವತೆಯ ಮೂರ್ತಿ, ಅದರ ಕೈಲೊಂದು ಖಡ್ಗ, ಹಿಂದುಗಡೆ ಕಸಬರಿಗಳ ಮತ್ತು ಕಸದ ರಾಶಿ ಕಂಡೆ. ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಇರುವ ಜೋಡಿ ಮೂರ್ತಿಗಳೂ ಸಹ ಕಂಡು ಬಂದವು.
ಒಂದಲ್ಲ ಎರಡಲ್ಲ.. ಶಿವಮೊಗ್ಗದಿಂದ ಸಾಗರದವರೆಗಿನ ರಸ್ತೆಯಲ್ಲೆ ಮೂರು ನಾಲ್ಕು ಈ ತರದ ಪ್ರತಿಕೃತಿಗಳು ಕಂಡು ಬರುತ್ತವೆ. ಬಹಳ ವರ್ಷಗಳಿಂದಲೂ ಇದು ಬಹಳ ಸಹಜವಾಗಿ ಕಂಡು ಬರುವ ಈ ದೃಶ್ಯ ಶಿವಮೊಗ್ಗ-ಹೊಸನಗರ, ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿಯೂ ಕಂಡು ಬರುವುದು ಸಾಮಾನ್ಯ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಈ ಆಚರಣೆ ಉತ್ತರ ಕರ್ನಾಟಕದಲ್ಲಿ ಕಾಣಸಿಗದು.
ಏನಿದರ ಅರ್ಥ ? ಅಂತ ನೋಡಲು ಹೋದಾಗ ಇದರ ಹೆಸರು “ಗಡಿಮಾರಿ” ಎಂದು ತಿಳಿದು ಬಂದಿತು. ಊರಲ್ಲಿ ಯಾವುದಾದರೂ ಸೋಂಕು ರೋಗ ಕಂಡು ಬಂದರೆ ಅಥವಾ ಇತರ ದುರ್ಘಟನೆಗಳು ನಡೆದರೆ ಆ ಘಟನೆಗೆ ಕಾರಣವಾದ ದುಷ್ಟ ಶಕ್ತಿಯನ್ನು ಊರ ಗಡಿ ದಾಟಿಸಲು ಈ ಪದ್ಧತಿ ಇದೆ ಎಂದು ಹಲವು ಹಿರಿಯರು ಹೇಳಿದರು.
ಈ ಬಗ್ಗೆ ಸದ್ಯದ ಯುವಕರಿಗೆ ಇರುವ ಮಾಹಿತಿ ಅಷ್ಟಕ್ಕಷ್ಟೇ. ಒಂದು ಊರಿನ ಗಡಿ ದಾಟಿಸುವಾಗ ಆ ಮೂರ್ತಿಯ ಜೊತೆಗೆ ಊರಲ್ಲಿರುವ ಕಸ, ಕಡ್ಡಿ ಇತ್ಯಾದಿಗಳನ್ನು ಹೇರಿಕೊಂಡು ಮತ್ತೊಂದು ಊರಿನ ಗಡಿಯ ಹತ್ತಿರ ಬಂದರೆ ಅವರ ಕೆಲಸ ಮುಗಿದಂತೆ.
ಮರದಿಂದ ತಯಾರಿಸಿದ ಬೊಂಬೆಗೆ ಕೆಂಪು, ಬಿಳಿ ಹಳದಿ ಮತ್ತು ಕಪ್ಪು ಬಣ್ಣ ಬಳಿದು ಅದನ್ನು ಚಿಕ್ಕ ಮರದ ಕೈಗಾಡಿಯಲ್ಲಿ ಕುಳ್ಳಿರಿಸಿ ಬೊಂಬೆಯ ಕುತ್ತಿಗೆಗೆ ಹೂವಿನ ಹಾರ ಹಾಕಿ ಪೂಜೆ ಮಾಡುತ್ತಾರೆ. ನಂತರ ಬೊಂಬೆಗೆ ಊದುಬತ್ತಿ ಇಟ್ಟು, ಆರತಿ ಬೆಳಗಿ ಊರಿನ ಜನರೆಲ್ಲ ಮಾರಿಯನ್ನು ಕೈಗಾಡಿಯ ಮುಖೇನ ದೂಡಿಕೊಂಡು ಬಂದು ತಮ್ಮ ಗ್ರಾಮದ ಗಡಿ ದಾಟಿಸಿ ಬಿಡುವುದು ಸಂಪ್ರದಾಯ.
ಕೆಲವೊಮ್ಮೆ ಮುಂದಿನ ಊರಿಗೆ ಒಯ್ಯದಿದ್ದರೆ, ಇದು ಇಟ್ಟಲ್ಲೇ ಕೊಳೆತು ಅಥವಾ ಗೆದ್ದಲು ಹಿಡಿದು ಮಣ್ಣು ಸೇರಲು ಹಲವಾರು ವರ್ಷಗಳು ಬೇಕಾಗುತ್ತವೆ. ಹೀಗಾಗಿ ಸಾಗರ, ತೀರ್ಥಹಳ್ಳಿಯ ರಸ್ತೆಯ ಇಕ್ಕೆಲಗಳಲ್ಲಿ ಇಂಥ ನೂರಾರು ಬೀದಿ ದೇವರು ಯಾವಾಗಲೂ ಕಂಡುಬರುತ್ತವೆ.
ರಾಜ್ಯದ ನಾನಾ ಭಾಗಗಳಲ್ಲಿ ನಾನಾ ರೀತಿಯ ಆಚರಣೆ, ನಂಬಿಕೆ ಈಗಲೂ ಜೀವಂತ. ಈ ನಂಬಿಕೆ ಅನ್ನುವುದು ಹಾಗೆ. ಅದು ಎಲ್ಲಿ, ಹೇಗೆ ಹುಟ್ಟಿಕೊಳ್ಳುತ್ತದೆಯೋ ಗೊತ್ತಿಲ್ಲ. ಅದು ಸಂಪ್ರದಾಯ ಅಥವಾ ಆಚರಣೆ ರೂಪದಲ್ಲಿ ಅವತರಿಸುತ್ತದೆ. ಇಂಥದ್ದೇ ಭಕ್ತಿಯ ಈ ಗಡಿ ಮಾರಿ ದೇವರು!!
ಈ ಗಡಿಮಾರಿಯ ಉಗಮಕ್ಕೆ ತರಹೆವಾರಿ ಕಥೆಗಳಿದ್ದರೂ ಯಾರೂ ಅಷ್ಟು ನಿಖರವಾದ ಮಾಹಿತಿ ನೀಡಲಿಲ್ಲ. ಸಾಗರ ಮತ್ತು ತೀರ್ಥಹಳ್ಳಿಯ ಹಳೆಯ ತಲೆಮಾರಿನ ರೈತರ ಪ್ರಕಾರ, ಇದು ಊರಿನ ಮಾರಿ ದೇವತೆಯಂತೆ. ಪ್ರತೀ ವರ್ಷ ಮಳೆಗಾಲಕ್ಕೂ ಮುನ್ನ ಹಳ್ಳಿಯ ಜನರು ಖಾಯಿಲೆ, ಕೋಟಲೆ, ಕಷ್ಟ-ನಷ್ಟ, ಬಡತನ, ದಾರಿದ್ರ್ಯಡಕ್ಕೆ ಈಡಾಗುತ್ತಿದ್ದರಂತೆ. ಹಸುಗಳು ಖಾಯಿಲೆ ಬೀಳುತ್ತಿದ್ದವಂತೆ.
ಇದನ್ನೂ ಓದಿ | ದಾವಣಗೆರೆ | ಫೆ.24 ರಂದು ಮಹಾನಗರಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ
ಇದಕ್ಕೆಲ್ಲ ಊರ ಮಾರಿಯ ಮುನಿಸೇ ಕಾರಣ ಎಂದುಕೊಂಡ ಹಳ್ಳಿಗರು ಊರಿನ ಮಾರಿಯನ್ನು ಊರಿನ ಗಡಿ ದಾಟಿಸಿ ಬರಲು ಇಂಥ ಆಚರಣೆಯನ್ನು ಶುರುವಿಟ್ಟುಕೊಂಡರಂತೆ. ಇನ್ನು ಹಲವಾರು ಅಂತೆ ಕಂತೆಗಳ ಬೊಂತೆಯೇ ಈ ನಂಬಿಕೆಯ ಹಿಂದಿವೆ.
ಅವರವರ ನಂಬಿಕೆಯಂತೆ ಪೂಜೆಗೊಂಡ ಈ “ಗಡಿಮಾರಿ” ಯನ್ನು ಊರು ದಾಟಿಸುವ ಪದ್ಧತಿಯೇ ವಿಶಿಷ್ಟ. ವಿವಿಧ ವಾಧ್ಯಗಳು, ಕೆಲವೊಮ್ಮೆ ಡೊಲ್ಲು, ತಮಟೆ ಮೆರವಣಿಗೆಯೊಂದಿಗೆ ಹೊರಟ ಮಂದಿ, ಗಡಿಮಾರಿಯನ್ನು ತಮ್ಮ ಊರಿನ ಗಡಿದಾಟಿಸಿ, ಮುಂದಿನ ಊರಿನ ಗಡಿಗೆ ಸೇರಿಸುತ್ತಾರೆ. ಹೀಗೆ ಗಡಿಮಾರಿ ಸಾಗಿ ಹೋದಂತೆ, ಹಿಂದೆ ದಾರಿಯುದ್ದಕ್ಕೂ, ಹಳೇ ಪೊರಕೆ, ಮೊರ, ಚಾಪೆ, ತಟ್ಟಿ, ಬುಟ್ಟಿ, ಒಡೆದ ಮಡಿಕೆ-ಕುಡಿಕೆ, ಹಳೆಯ ಬಟ್ಟೆಗಳನ್ನು ಎಸೆಯುತ್ತ ಹೋಗುತ್ತಾರೆ.
ಸ್ವಲ್ಪ ದಿನಗಳ ನಂತರ ತಮ್ಮ ಗಡಿಯಲ್ಲಿ ಕುಳಿತ ಈ ಗಡಿಮಾರಿಯನ್ನು ಮತ್ತೊಂದು ಗ್ರಾಮದ ಜನರು ತಮ್ಮ ಊರಿನಲ್ಲಿ ಸಂಗ್ರಹವಾದ ಹಳೆಯ ವಸ್ತುಗಳನ್ನು ಸೇರಿಸಿ ತಮ್ಮ ಊರಿಗೆ ಬಂದ ಗಡಿಮಾರಿಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ತಮ್ಮ ಮುಂದಿನ ಊರಿನ ಎಲ್ಲೆಗೆ ದಾಟಿಸುತ್ತಾರೆ.
ಹೀಗೆ ಎಲ್ಲೆಯಿಂದ ಎಲ್ಲೆಗೆ ಸಂಚಾರಿಸುತ್ತ ಹೋಗುವ ಗಡಿಮಾರಿಯನ್ನು ಕೊನೆಗೆ ಯಾವುದಾದರೊಂದು ನೀರಿರುವ ಜಾಗದಲ್ಲಿ ವಿಸರ್ಜಿಸುತ್ತಾರೆ. ಪ್ರತಿ ಊರಲ್ಲಿ ಕಾಯಿಲೆ ಕಸಾಲೆ ಕಷ್ಟ ಇದ್ದಾಗ ಈ “ಗಡಿಮಾರಿ” ದೇವರನ್ನು ತಯಾರಿಸಿ ಅವರ ಊರಿನ ಗಡಿ ದಾಟಿಸುತ್ತಾರೆ. ಅದಕ್ಕಾಗಿಯೇ ಹಲವಾರು ಗಡಿಮಾರಿಗಳು ನಮಗೆ ರಸ್ತೆಯ ಗುಂಟ ಕಾಣಲು ಸಿಗುವುದು.
ಪ್ರತಿಯೊಂದು ಆಚರಣೆಗೂ ಅದರದೇ ಆದ ಹಿನ್ನೆಲೆ ಇರುತ್ತದೆ. ಗಡಿಮಾರಿಯನ್ನು ಗಡಿಪಾರು ಮಾಡುವ ವಿಶಿಷ್ಟ ಆಚರಣೆಯ ಕಾರಣದಿಂದ, ಗ್ರಾಮವನ್ನು ಶುದ್ಧೀಕರಿಸುವ ಕ್ರಿಯೆ ಮೊದಲಾಗಿ, ಜನರು ತಮ್ಮ ಮನೆಯಲ್ಲಿರುವ ಹಳೆಯ ಸಾಮಾನುಗಳನ್ನು ಹೊರಗೆ ಹಾಕುವುದರಿಂದ, ಊರೆಲ್ಲ ಸ್ವಚ್ಛವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಕಡಿಮೆಯಾಗುವುದೆಂಬುದು ಇದರ ಹಿಂದಿನ ಗೂಢ ಮರ್ಮವಿರಬಹುದೇನೋ..!
ಈಗಲೂ ಅಲ್ಲಿ ಇಲ್ಲಿ ಇಂಥ ಆಚರಣೆಗಳು, ನಂಬಿಕೆಗಳು, ಆರಾಧನೆಗಳು ಇದ್ದರೂ, ಅಂದಿನ ಆರಾಧನಾ ವಿಧಾನಗಳಲ್ಲಿ ಜನಪದರಿಗಿದ್ದ ತನ್ಮಯತೆ, ಸಮರ್ಪಣಾ ಭಾವಗಳನ್ನು ಪ್ರಸ್ತುತ ಕಾಣಲು ಸಾಧ್ಯವಿಲ್ಲ. ಕೆಲವೊಮ್ಮೆ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಸವಾರನ್ನು ಅಡ್ಡಗಟ್ಟಿ ಒತ್ತಾಯದಿಂದ ಹಣ ವಸೂಲಿ ಮಾಡಿ “ಎಣ್ಣೆ” ಹಾಕುವ ವಸೂಲಿ ದಂಧೆಯಾಗಿಯೂ ಗೋಚರಿಸುತ್ತದೆ.
ಇನ್ನು ಕೆಲವು ವರ್ಷ ಕಳೆದರೆ ಈ ಗಡಿಮಾರಿಗಳು ಗಡಿ ದಾಟಿದರೂ ಆಶ್ಚರ್ಯವಿಲ್ಲ! ಈ ಗಡಿಮಾರಿಯನ್ನು ಊರಿಂದ ಹೊರಗಟ್ಟುವ ದಿನ ಊರಿನ ಗಡಿಯಲ್ಲಿ ಕೋಳಿಯನ್ನು ಬಲಿಕೊಡುವ ಸಂಪ್ರದಾಯವೂ ಚಾಲ್ತಿಯಲ್ಲಿದೆ. ಇಲ್ಲಿ ಬಲಿ ನೀಡಿದ ಕೋಳಿಗಳನ್ನು ಹಳ್ಳಿಗರು ತಂತಮ್ಮ ಮನೆಗೆ ಕೊಂಡೊಯ್ದು ಹಬ್ಬದ ಅಡುಗೆ ಮಾಡಿ ಸವಿಯುತ್ತಾರೆ.
ಗಡಿಮಾರಿ ಓಡಿಸುವ ದಿನ ಮನೆಗೆ ನೆಂಟರಿಷ್ಟರು, ಬಂಧು ಬಳಗ ಬರುವ ವಾಡಿಕೆಯೂ ಇಡೀ ಊರಿನಲ್ಲಿ ಇದೊಂಥರಾ ಜಾತ್ರೆಯ ವಾತಾವರಣ ಸಷ್ಟಿಸುತ್ತದೆ. ಇದೊಂದು ಹಳ್ಳಿ ಜನರ ದುಗುಡ ನಿವಾರಣೆಯ ದಾರಿಯಾಗಿದೆ ಎಂದರು ಸಹ ಆಶ್ಚರ್ಯವಿಲ್ಲ..!
ಈ ಗಡಿಮಾರಿ ದೇವರು ಘಟ್ಟದ ಮೇಲಿನವರ ನಂಬಿಕೆಯಾದರೂ ಬೊಂಬೆ ತಯಾರಿಯಲ್ಲಿ ಕಲಾವಿದನ ಕೈಚಳಕ ಗಮನ ಸೆಳೆಯದೇ ಇರದು. ಬೊಂಬೆ ಕೆತ್ತನೆಯಲ್ಲಿ ನೈಪುಣ್ಯ ತೋರಿಸುವ ಕಲಾವಿದ, ಅದರ ಮುಖ, ಹುಬ್ಬು, ಕಣ್ಣು, ತುಟಿ, ಗಾಂಭೀರ್ಯ ಎಲ್ಲವನ್ನೂ ಚಿತ್ರಿಸಿದ ಚಂದಕ್ಕೆ ಬೆರಗಾಗಲೇಬೇಕು. ತಲೆತಲಾಂತರಗಳು ಉರುಳಿದರೂ ಇಂದಿಗೂ ಬೀದಿ ದೇವರು ಅದರದ್ದೇ ಆದ ಗತ್ತು-ಗೈರತ್ತುಗಳಿಂದ ಮಲೆನಾಡಿನ ಜನರ ಆರಾಧ್ಯ ದೇವತೆಯಾಗಿ ಉಳಿದಿದೆ.
ಇತ್ತೀಚೆಗೆ ಈ ಮೂರ್ತಿಗಳನ್ನು ತಯಾರಿಸುವವರು ಸಿಗದೇ, ಪೂರ್ತಿ ಕಸುಬು ಬಾರದವರು ತಯಾರಿಸುವುದರಿಂದ ಇವು ವಿಕಾರವಾಗಿ ಭೂತದಂತೆ ಕಾಣಿಸುವುದೂ ಇದೆ.
ಅದರಲ್ಲೂ ಪಶುಗಳಲ್ಲಿ ಸಾಮಾನ್ಯವಾಗಿ ಬರುವ ಕಾಲುಬಾಯಿ ಜ್ವರವೆಂಬ ವೈರಾಣು ಕಾಯಿಲೆ ಬಂದಾಗ ಈ ರೀತಿ ಗಡಿಮಾರಿಗಳು ಊರಿಂದ ಊರಿನ ಗಡಿಯಲ್ಲಿ ಕಂಡು ಬರುವುದು ಸಾಮಾನ್ಯ.
ಇದೊಂದು ಗ್ರಾಮೀಣ ಜನರ ಮನಸ್ಸಿನ ದುಗುಡ ತುಮುಲವನ್ನು ಹಗುರಗೊಳಿಸಲು ಇರುವ ಸಂಪ್ರದಾಯ ಹಾಗೇ ಇರಲಿ ಎಂದು ಸ್ವೀಕರಿಸಬೇಕೋ ಅಥವಾ ರೋಗಗಳನ್ನು ನಿಯಂತ್ರಿಸಲು ಉತ್ತಮ ಲಸಿಕೆಗಳು, ಉತ್ತಮ ತಂತ್ರಜ್ಞಾನವಿರುವ ಈ ಆಧುನಿಕ ಯುಗದಲ್ಲಿ ಇಂತಹ ಆಚರಣೆ ಎಷ್ಟರ ಮಟ್ಟಿಗೆ ಸರಿ ?! ಇದು ಮೌಢ್ಯವಲ್ಲವೇ? ಎಂಬ ಪ್ರಶ್ನೆಗಳಿಗೆಲ್ಲಾ ಓದುಗರೇ ಉತ್ತರಿಸಬೇಕು.!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಲೈಫ್ ಸ್ಟೈಲ್
ಜಾನುವಾರುಗಳ ಲೋಹ ಕಾಯಿಲೆ

- ಡಾ.ಎನ್.ಬಿ.ಶ್ರೀಧರ, ಶಿವಮೊಗ್ಗ
ಇತ್ತೀಚೆಗೆ ಜಾನುವಾರುಗಳು ಚೂಪಾದ ವಸ್ತುಗಳನ್ನು ನುಂಗಿ ಅವು ಹೃದಯದ ತೊಂದರೆಯುಂಟು ಮಾಡುವ ಕಾಯಿಲೆಯಿಂದ ಮರಣವನ್ನಪ್ಪುವುದು ಜಾಸ್ತಿಯಾಗಿದೆ. ಆಹಾರ ತಿನ್ನುವಾಗ ಮೊಳೆ ಸೂಜಿ, ತಂತಿ ಇತ್ಯಾದಿ ಹೋದರೆ ಅವು ಹೊಟ್ಟೆಯನ್ನು ತೂರಿಕೊಂಡು ಜಾನುವಾರಿನ ಹೃದಯಕ್ಕೆ ಇರಿದು ಅಲ್ಲಿ ನಂಜುಂಟು ಮಾಡಿ ಮರಣದೆಡೆಗೆ ದಬ್ಬುತ್ತವೆ.
ಪ್ರಪಂಚದಾದ್ಯಂತ ಸಹಸ್ರಾರು ಜಾನುವಾರುಗಳಲ್ಲಿ ಮರಣ ತರುವ ಈ ಕಾಯಿಲೆಯನ್ನು“ ಹಾರ್ಡ್ವೇರ್ ರೋಗ” ಅಥವಾ “ಕಬ್ಬಿಣ ರೋಗ” ಎಂದೂ ಕರೆಯುತ್ತಾರೆ. ಅನೇಕ ಸಲ ಮರಣೋತ್ತರ ಪರೀಕ್ಷೆಯಲ್ಲಿ ಮಾತ್ರ ಪತ್ತೆಯಾಗುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರೋಗಲಕ್ಷಣಗಳು ಕಾಣಿಸಿಕೊಳ್ಳದೇ ಇರುವುದರಿಂದ ಪತ್ತೆ ಸಹ ಕಷ್ಟಕರ. ಅಪರೂಪವಾದರೂ ಸಹ ಜಾನುವಾರುಗಳ ಜೀವ ಹಿಂಡುವ ಮನುಷ್ಯರೇ ಕಾರಣವಾಗುವ ಈ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವುದು ಅವಶ್ಯ.
ಕಾರಣ
ಜಾನುವಾರು ಕಟ್ಟಡ ಕಟ್ಟುವ ಸ್ಥಳದಲ್ಲಿ, ತುಕ್ಕು ಹಿಡಿದ ತಂತಿ ಬೇಲಿಯ ಸಮೀಪ ಮೇಯುವಾಗ ತುಂಡಾದ ತಂತಿ ಅಥವಾ ಚೂಪಾದ ಕಬ್ಬಿಣದ ವಸ್ತು ಹೊಟ್ಟೆ ಸೇರಬಹುದು.ಕೆಲವೊಮ್ಮೆ ರಸಮೇವು ತಯಾರಿಸುವಾಗ ಮೇವಿನ ಕಟಾವಣೆ ಸಮಯದಲ್ಲಿ ತುಕ್ಕು ಹಿಡಿದ ಸರಿಗೆ, ತಂತಿ ಇತ್ಯಾದಿಗಳು ಸೇರಿ ಮೇವನ್ನು ಸೇರಿ ಬಿಡಬಹುದು.
ಬಡಪಾಯಿ ಜಾನುವಾರುಗಳು ಅವುಗಳ ಮಾಲಕರು ಸರಿಯಾಗಿ ನೋಡದೇ ಎಚ್ಚರವಿಲ್ಲದೇ ಹಾಕಿದ ಹಿಂಡಿಯನ್ನು ತಿನ್ನುವಾಗ ಅಗಿದು ತಿನ್ನದೇ ನುಂಗುವುದರಿಂದ ಅವುಗಳ ಹೊಟ್ಟೆಗೆ ಚೂಪಾದ ಕಬ್ಬಿಣದ ವಸ್ತು, ಮೊಳೆ, ಸೂಜಿ, ತಂತಿ ಇವು ಹೋಗಿ ದೊಡ್ಡ ಹೊಟ್ಟೆಯಾದ ರುಮೆನ್ ಸೇರಿಬಿಡುತ್ತವೆ. ಕೆಲವೊಮ್ಮೆ ಚೂಪಾದ ಗಾಜಿನ ಚೂರು ಸಹ ಮಾರಕವಾಗಬಲ್ಲದು. ಹಿಂಡಿಯನ್ನು ತಯಾರಿಸುವ ಕಾರ್ಖಾನೆಯ ಯಂತ್ರಗಳ ಸಣ್ಣ ಸಣ್ಣ ತುಂಡುಗಳು ಹಿಂಡಿಯಲ್ಲಿ ಮಿಶ್ರವಾಗಿ ಹೊಟ್ಟೆ ಸೇರಬಹುದು.
ಸಹಜವಾಗಿಯೇ ಲೋಹದ ವಸ್ತುಗಳು ಅವುಗಳ ಭಾರದಿಂದ ರುಮೆನ್ ಅಡಿಗಿರುವ ರೆಟಿಕ್ಯುಲಮ್ ಎಂಬ ಎರಡನೇ ಹೊಟ್ಟೆಗೆ ಹೋಗಿ ಬಿಡುತ್ತವೆ. ಕಾರಣ ಇವು ಮೆಲುಕಾಡಿಸುವಾಗ ಹೊರಗೆ ಬರದೇ ಉದರದೊಳಗೇ ಉಳಿದುಕೊಳ್ಳುತ್ತವೆ. ಇವು ಹೊಟ್ಟೆಯ ಸಂಕುಚನ ವಿಕಸನ ಕ್ರಿಯೆಯಿಂದ ವಫೆಯನ್ನು ಭೇದಿಸಿಕೊಂಡು ಹೃದಯದತ್ತ ನುಗ್ಗುತ್ತವೆ.
ಇದನ್ನೂ ಓದಿ : ವಿರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
ಕೆಲವೊಮ್ಮೆ ದನ ಗರ್ಭ ಧರಿಸಿದ್ದರೆ, ಕರು ಬೆಳೆಯುತ್ತಿದ್ದಂತೆ ಅದರ ಒತ್ತಡವು ಹೊಟ್ಟೆಯ ಮೇಲೆ ಬೀಳುವುದರಿಂದ ಹೃದಯದತ್ತ ಸಾಗುವ ಚೂಪಾದ ವಸ್ತುಗಳ ಚಲನೆ ಜಾಸ್ತಿಯಾಗುತ್ತದೆ. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ ಎಂಬ ಪದರವನ್ನು ಭೇಧಿಸಿದ ಸೂಜಿಗಳು ಹೃದಯದತ್ತ ನುಗ್ಗುವಾಗ ಅವುಗಳ ಜೊತೆಯೇ ಸಾಗುವ ಉದರದ ವಸ್ತುಗಳು ಅಲ್ಲಿ ನಂಜುಂಟು ಮಾಡುತ್ತವೆ.
ನಂಜಿನ ವಿಷ ಹೃದಯ ಪದರದ ಉರಿಯೂತವನ್ನುಂಟು ಮಾಡಿ ಅದರ ದಪ್ಪವನ್ನು ಹೆಚ್ಚಿಸುತ್ತದೆ. ಇದನ್ನು ಪೆರಿಕಾರ್ಡೈಟಿಸ್ ಎನ್ನುತ್ತಾರೆ. ಕೀವು, ಸೂಕ್ಷಾಣುಗಳು, ರಕ್ತ ಇತ್ಯಾದಿಗಳು ಸೇರಿಕೊಂಡು ಹೃದಯ ಕೆಲಸ ಮಾಡುವುದನ್ನು ನಿಧಾನಗೊಳಿಸುತ್ತದೆ. ಕೆಲವೊಮ್ಮೆ ಮೊಳೆಯು ವಫೆಯನ್ನು ಭೇಧಿಸಿದ ಪರಿಣಾಮವಾಗಿ ಎದೆಗೂಡಿನಲ್ಲಿ ಹರ್ನಿಯಾ ಆಗುವ ಸಾಧ್ಯತೆ ಇದೆ.
ಲಕ್ಷಣಗಳು
ಜಾನುವಾರುಗಳಲ್ಲಿ ಮೊದಲಿಗೆ ಹೃದಯದ ಮೇಲಿನ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಅದರ ಬಡಿತ ಜಾಸ್ತಿಯಾಗಬಹುದು. ಹೃದಯವು ಬಡಿದು ಕೊಳ್ಳಲು ಸಾಕಷ್ಟು ಸ್ಥಳವಿಲ್ಲದೇ ಇರುವುದರಿಂದ, ಕ್ರಮೇಣ ಹೃದಯದ ಬಡಿತ ಕಡಿಮೆಯಾಗಬಹುದು. ಹೃದಯಕ್ಕೆ ಮತ್ತು ಹೃದಯವನ್ನು ಸುತ್ತುವರೆದ ಚೀಲಕ್ಕೆ ಆಗುವ ನಿರಂತರ ಘರ್ಷಣೆಯಿಂದ ಹೃದಯದ ಸಾಮರ್ಥ್ಯ ಕಡಿಮೆಯಾಗಬಹುದು.
ಹೃದಯದ ಬಡಿತ ಮತ್ತು ಅದು ರಕ್ತವನ್ನು ಪಂಪು ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತಿದ್ದಂತೆ, ಹೃದಯದ ಒಳಗೆ ಬರುವ ರಕ್ತದ ಪ್ರಮಾಣವೂ ಸಹ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ರಕ್ತ ಸಾರವು ಬಸಿದು ಹೋಗಿ ಎದೆ ಗುಂಡಿಗೆಯ ಮತ್ತು ದವಡೆಗಳ ಕೆಳಗಿ ಬಾವು ಪ್ರಾರಂಭಾವಾಗುತ್ತದೆ.
ಹೃದಯಕ್ಕೆ ರಕ್ತ ಸಾಗಿಸುವ ಅಬಿಧಮನಿಗಳ ಕ್ಷಮತೆ ಕಡಿಮೆಯಾಗಿ ರಕ್ತ ಅವುಗಳಲ್ಲಿ ನಿಂತು ಅವುಗಳು ಕುತ್ತಿಗೆ ಗದ್ದದ ಭಾಗದಲ್ಲಿ ಊದಿಕೊಳ್ಳಬಹುದು. ಜಾನುವಾರು ಬಹಳ ಎಚ್ಚರಿಕೆಯಿಂದ ನಿಧಾನವಾಗಿ ಕಷ್ಟಪಟ್ಟು ಹೆಜ್ಜೆ ಕಿತ್ತಿಡುತ್ತದೆ.
ನಂಜು ಜಾಸ್ತಿ ಆಗುತ್ತಿದ್ದಂತೆ ಕೆಲವೊಮ್ಮೆ ಶರೀರದ ತಾಪಮಾನ ಜಾಸ್ತಿಯಾಗಿ ಜಾನುವಾರು ಮೇವು ತಿನ್ನುವುದನ್ನು ಬಿಡಬಹುದು. ಎದೆಯ ಭಾಗದಲ್ಲಿ ನೋವು ಇರುವುದರಿಂದ ಮುಂದಿನ ಕಾಲುಗಳನ್ನು ಅಗಲ ಮಾಡಿಕೊಂಡು ನಿಲ್ಲಬಹುದು. ಉಸಿರಾಟ ಮಾಡಲು ಕಷ್ಟಪಡಬಹುದು ಅಥವಾ ಉಸಿರಾಟ ಜಾಸ್ತಿಯಾಗಬಹುದು.
ಕೆಲವೊಮ್ಮೆ ಜಾನುವಾರು ನೋವಿನಿಂದ ನರಳಬಹುದು. ಏರು ಮತ್ತು ಇಳಿಜಾರಿನಲ್ಲಿ ಜಾನುವಾರು ನಡೆಯಲು ಕಷ್ಟಪಡಬಹುದು. ಆಗಾಗ ಹೊಟ್ಟೆಯುಬ್ಬರ ಮತ್ತು ತಾನೇ ಕಡಿಮೆಯಾಗುವಿಕೆಯನ್ನೂ ಸಹ ಗಮನಿಸಬಹುದು. ದುಗ್ಧರಸ ಗ್ರಂಥಿಗಳು ಸಹ ಊದಿಕೊಳ್ಳಬಹುದು. ರಕ್ತಹೀನತೆಯೂ ಸಹ ಕಾಣಿಸಿಕೊಳ್ಳಬಹುದು. ಆದರೆ ಈ ಎಲ್ಲಾ ಲಕ್ಷಣಗಳು ಇರಲೇಬೇಕೆಂದೇನೂ ಇಲ್ಲ. ರೋಗ ಕೊನೆಯ ಹಂತದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುವುದೂ ಸಹ ಇದೆ.
ರೋಗ ಪತ್ತೆ ಮಾಡುವಿಕೆ
ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸುವುದರಿಂದ ಮತ್ತು ಜಾನುವಾರಿನ ವೃತ್ತಾಂತದಿ೦ದ ಪತ್ತೆಗೆ ಅನುಕೂಲವಾಗುತ್ತದೆ. ಹೊಟ್ಟೆಯ ಚೀಲದ ಚಲನೆ ಕಡಿಮೆಯಾಗುವುದು ಮತ್ತು ಮೇವು ತಿನ್ನದಿರುವುದು, ಬಿಟ್ಟು ಬಿಟ್ಟು ಬರುವ ಜ್ವರ ಮತ್ತು ಹೊಟ್ಟೆಯುಬ್ಬರ ಸಹ ರೋಗ ಗುರುತಿಸಲು ಸಹಕಾರಿ.
ಎದೆಯ ಗುಂಡಿಗೆಯ ಬಾವು ಮತ್ತು ಗದ್ದದ ಬಾವು ಕೊನೆಯ ಹಂತದಲ್ಲಿ ಕಾಣಿಸಿಕೊಳ್ಳುವುದು ರೋಗ ಪತ್ತೆಗೆ ಸಹಕಾರಿಯಾದರೂ ಸಹ ಆಗ ಚಿಕಿತ್ಸೆಗೆ ಸ್ಪಂಧನೆ ಕಡಿಮೆ.
ತಜ್ಞ ಪಶುವೈದ್ಯರು ಹೃದಯ ಬಡಿತದ ಪರಿಶೀಲನೆ ಮಾಡುವ ಮೂಲಕ ರೋಗ ಪತ್ತೆ ಮಾಡಬಲ್ಲರು. ಲೋಹ ಪತ್ತೆ ಯಂತ್ರದಿಂದಲೂ ಸಹ ಪತ್ತೆಗೆ ಪ್ರಯತ್ನಿಸಬಹುದು.
ಆದರೆ ಇದರಲ್ಲಿ ಚಿಕ್ಕ ಸೂಜಿ ಮತ್ತು ಮೊಳೆಯಿದ್ದಾಗ ಗೊತ್ತಾಗಲಿಕ್ಕಿಲ್ಲ. ಕೆಲವೊಮ್ಮೆ ಎಕ್ಸ್ ರೇ ಅಥವಾ ಅಲ್ಟ್ರಾಸೌಂಡ್ ಸಹ ಉಪಯೋಗಿಸಬೇಕಾಗಬಹುದು. ರಕ್ತದ ಪರೀಕ್ಷೆಯಲ್ಲಿ ಬಿಳಿರಕ್ತದ ಕಣಗಳ ಸಂಖ್ಯೆ ತುಂಬಾ ಜಾಸ್ತಿ ಇರುವುದನ್ನು ಸಹ ರೋಗಪತ್ತೆಗೆ ಬಳಸಬಹುದು.
ಚಿಕಿತ್ಸೆ
ಇದರ ಚಿಕಿತ್ಸೆ ಕಷ್ಟಕರ. ಹೃದಯ ಎಷ್ಟರ ಮಟ್ಟಿಗೆ ತೊಂದರೆಗೊಳಗಾಗಿದೆ ಮತ್ತು ಯಾವಾಗ ರೋಗ ಪತ್ತೆಯಾಗಿದೆ ಎಂಬುದರ ಮೇಲೆ ಗುಣಮುಖವಾಗುವ ಸಾಧ್ಯತೆ ನಿಂತಿದೆ. ತಜ್ಞ ಪಶುವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೃದಯದ ಹತ್ತಿರವಿರುವ ಚೂಪಾದ ವಸ್ತುವನ್ನು ಹೊರತೆಗೆಯಬಲ್ಲರು. ಕೆಲವೊಮ್ಮೆ ಎದೆಗೂಡಿಗೆ ರಬ್ಬರಿನ ಚಿಕ್ಕ ಕೊಳವೆಯನ್ನು ಹಾಕಿ ಮೇಲಿಂದ ಮೇಲೆ ಅಲ್ಲಿ ಶೇಖರವಾಗಿರುವ ಕೀವು ಮತ್ತು ನೀರನ್ನು ತೆಗೆಯುವುದರಿಂದಲೂ ಸಹ ಜಾನುವಾರು ಗುಣವಾಗಬಲ್ಲದು.
ತಡೆಗಟ್ಟುವಿಕೆ
ಈ ಕಾಯಿಲೆ ಬಂದ ಮೇಲೆ ಅನೇಕ ಸಲ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಜಾನುವಾರುಗಳು ಮರಣವನ್ನಪ್ಪುವುದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಚಾರ ಮಾಡುವುದೊಳಿತು. ಪ್ರತಿದಿನ ಹಿಂಡಿ ಹಾಕುವಾಗ ಅದರಲ್ಲಿ ಕೈಯಾಡಿಸಿ, ಮೊಳೆ, ಸೂಜಿ ಅಥವಾ ಚೂಪಾದ ವಸ್ತುಗಳಿವೆಯೇ ಎಂದು ಪರಿಶೀಲಿಸುವುದು ಉತ್ತಮ.
ಜಾನುವಾರು ಕಟ್ಟಡ ಕಟ್ಟುವ ಸ್ಥಳದಲ್ಲಿ, ತುಕ್ಕು ಹಿಡಿದ ತಂತಿ ಬೇಲಿಯ ಸಮೀಪ ಮೇಯದ ಹಾಗೆ ನೋಡಿಕೊಳ್ಳಬೇಕು. ಲೋಹಚುಂಬಕವನ್ನು ಜಾನುವಾರುಗಳಿಗೆ ನುಂಗಿಸುವ೦ತ ಪದ್ದತಿಯಿದೆ. ಕಬ್ಬಿಣದ ವಸ್ತುವಿದ್ದರೆ ಮಾತ್ರ ಅದನ್ನು ತಡೆಹಿಡಿಯುವ ಸಾಧ್ಯತೆ ಇದ್ದು ಸ್ಟೀಲ್ ಮತ್ತಿತರ ಲೋಹಗಳ ವಸ್ತುಗಳಿದ್ದರೆ ಲೋಹ ಚುಂಬಕ ಅಷ್ಟೇನೂ ಪ್ರಯೋಜನವಾಗಲಿಕ್ಕಿಲ್ಲ.
ಇದನ್ನು “ಕೌ ಮ್ಯಾಗ್ನೆಟ್” ಎಂದು ಕರೆಯುತ್ತಿದ್ದು ಇದು ಅಮೆಝಾನ್ ಟೆಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ ಸುಮಾರು ರೂ:500-00. ಜಾನುವಾರಿನ ಹೊಟ್ಟೆಗೆ ಲೋಹದ ಚೂಪಾದ ವಸ್ತುಗಳು ಹೋಗದ ಹಾಗೇ ನೋಡಿಕೊಳ್ಳುವುದು ಬಹಳ ಮುಖ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ಭಾವ ಭೈರಾಗಿ6 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಲೈಫ್ ಸ್ಟೈಲ್5 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ5 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್5 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ಭಾವ ಭೈರಾಗಿ5 days ago
ಕವಿತೆ | ಅವಳು