ದಿನದ ಸುದ್ದಿ
26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/11/farmers-strike-_-suddidina.jpg&description=26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/11/farmers-strike-_-suddidina.jpg&description=26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?', 'pinterestShare', 'width=750,height=350'); return false;" title="Pin This Post">
- ನಾ ದಿವಾಕರ
ಕೋವಿದ್ 19ರ ಬಿಕ್ಕಟ್ಟಿನಿಂದ ಭಾರತ ಪಾರಾಗುವುದೆಂದು ? ಈ ಪ್ರಶ್ನೆ ಪ್ರತಿಯೊಬ್ಬರ ಮನಸಿನಲ್ಲೂ ಕಾಡುತ್ತಿದೆ. ಕೋವಿದ್ 19 ಭಾರತದ ದುಡಿಯುವ ವರ್ಗಗಳಿಗೆ ಶಾಪವಾಗಿ ಪರಿಣಮಿಸಿದ್ದರೆ ಆಳುವ ವರ್ಗಗಳಿಗೆ ವರದಾನ ಆದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಹಿಂದಿರುಗಲು, ಸಾವಿರಾರು ಕಿಲೋಮೀಟರ್ ನಡೆದು, ಬಿರುಬಿಸಿಲಿನಲ್ಲಿ ನಿತ್ರಾಣರಾಗಿ, ಅಸುನೀಗಿದ ನೂರಾರು ವಲಸೆ ಕಾರ್ಮಿಕರು ಸರ್ಕಾರದ ಗಣನೆಗೇ ಬರಲಿಲ್ಲ ಎನ್ನುವುದನ್ನು ಗಮನಿಸಿದರೆ ನಾವು ಎಂತಹ ಅಮಾನುಷ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ತಿಳಿಯುತ್ತದೆ.
ಹೊರದೇಶಗಳಿಂದ ಬಂದಿರುವ ಲಕ್ಷಾಂತರ ಅಕ್ರಮ(?) ವಲಸೆ ಕಾರ್ಮಿಕರ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ಲಭ್ಯವಿದೆ ಎಂದು ಎಲ್ಲರನ್ನೂ ಹೊರಹಾಕಲು ಸಿದ್ಧತೆ ನಡೆಸಿದ್ದ ಸರ್ಕಾರವೊಂದಕ್ಕೆ, ತನ್ನ ನೆಲದಲ್ಲೇ ವಲಸೆ ಕಾರ್ಮಿಕರು ಎಷ್ಟಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ನಾವು ಇನ್ನೆಂತಹ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ಅರಿವಾಗುತ್ತದೆ.
ದೇಶದ ಸಂಪತ್ತಿನ ಉತ್ಪಾದನೆಗೆ ಅನಿವಾರ್ಯವಾಗಿ ಬೇಕಾಗುವ ಜೀವಗಳು ಬದುಕಿದ್ದಾಗ ಶೋಷಣೆಗೊಳಗಾದರೆ ಅಳಿದ ಮೇಲೆ ಅನಾಥವಾಗುವ ಒಂದು ವಿಕೃತ ಪರಿಸ್ಥಿತಿಯಲ್ಲಿ ಈ ದೇಶದ ಶ್ರಮಜೀವಿಗಳು ತಮ್ಮ ಬೆವರು ಹರಿಸಿ ದುಡಿಯುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಶ್ರಮ ಶಕ್ತಿ ಮತ್ತು ಈ ಶ್ರಮ ಶಕ್ತಿಯ ವಾರಸುದಾರರಾದ ಶ್ರಮಿಕರು ಯಾವುದೇ ಒಂದು ದೇಶದ ತಳಪಾಯ.
ಅರ್ಥಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಮತ್ತು ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸುವ ಹಿತವಲಯದ ಅಧಿಕಾರಶಾಹಿ ವರ್ಗ ದೇಶದ ಜಿಡಿಪಿ , ಅಂದರೆ ನಿವ್ವಳ ದೇಶೀಯ ಉತ್ಪನ್ನದ ಏರಿಳಿತಗಳನ್ನು ಗಮನಿಸುತ್ತಲೇ ಇರುತ್ತಾರೆ.
ಆದರೆ ಈ ಸೂಚ್ಯಂಕದ ಏರಿಳಿತದ ಹಿಂದೆ ಇರುವ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗೆ ಲಕ್ಷಾಂತರ ಕೈಗಳು ದುಡಿದಿರುತ್ತವೆ, ಲಕ್ಷಾಂತರ ಕುಟುಂಬಗಳು ಹಸಿವನ್ನೂ ಲೆಕ್ಕಿಸದೆ ಶ್ರಮ ವಹಿಸಿರುತ್ತವೆ. ಗ್ರಾಮೀಣ ಕೃಷಿ ಮತ್ತು ಕೂಲಿ ಕಾರ್ಮಿಕರಿಂದ ಹಿಡಿದು ದೇಶದ ಬೃಹತ್ ಕೈಗಾರಿಕೆಗಳ ಕಾರ್ಮಿಕರವರೆಗೂ ಶ್ರಮಶಕ್ತಿ ಬಳಕೆಯಾಗಿರುತ್ತದೆ.
ಈ ಶ್ರಮಶಕ್ತಿಯನ್ನು ತನ್ನಿಚ್ಚೆಯಂತೆ, ಅಗ್ಗದ ಕೂಲಿ ನೀಡಿ, ಬಳಸಿಕೊಳ್ಳಲು ಬಂಡವಾಳಿಗರು ಮತ್ತು ಬಂಡವಾಳ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ. ಇಂದು ಈ ಬೃಹತ್ ಸಮುದಾಯ ಅಪಾಯದ ಅಂಚಿನಲ್ಲಿದೆ. ಭಾರತದ ಬಂಡವಾಳ ವ್ಯವಸ್ಥೆ ತನ್ನ ಕ್ರೌರ್ಯದ ಪರಾಕಾಷ್ಠೆ ತಲುಪಿರುವುದನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣದೆ ಹೋದರೆ ಬಹುಶಃ ನಾವು ದೃಷ್ಟಿಹೀನರು ಎಂದೇ ಭಾವಿಸಬೇಕಾಗುತ್ತದೆ. ಭಾರತದ ಶ್ರಮಜೀವಿಗಳು ಕಳೆದ ಮೂರು ದಶಕಗಳಿಂದಲೂ ಕವಲು ಹಾದಿಯಲ್ಲೇ ನಡೆದುಬಂದಿದ್ದಾರೆ. ಇದೀಗ ತಮ್ಮ ಭವಿಷ್ಯದ ಹಾದಿಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ.
ಕೃಷಿ, ಗುಡಿ ಕೈಗಾರಿಕೆಗಳಿಂದ ಹಿಡಿದು ಬ್ಯಾಂಕ್ ಮತ್ತು ವಿಮಾ ಕ್ಷೇತ್ರದವರೆಗಿನ ಸಮಸ್ತ ಕಾರ್ಮಿಕ ವರ್ಗ ಇಂದು-ನಾಳಿನ ಚಿಂತೆಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಆಳುವ ವರ್ಗಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿ ಎನ್ನುವುದು ವಾಸ್ತವ.
ಆದರೆ ಈ ಅಮಾನುಷ ನೀತಿಗಳ ವಿರುದ್ಧ ಒಂದು ಸಮಗ್ರ ಹೋರಾಟ ರೂಪಿಸುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಎದುರಾದಾಗ ಕಾರ್ಮಿಕ ಚಳುವಳಿಯ ಮುಂಚೂಣಿಯಲ್ಲಿರುವ ಎಲ್ಲ ಸುಶಿಕ್ಷಿತರೂ ಮತ್ತೊಂದು ಮಾಸ್ಕ್ ಧರಿಸಬೇಕಾಗುತ್ತದೆ. ಇದು ಕಟು ವಾಸ್ತವ. ಈ ಲೋಪವನ್ನು ಒಪ್ಪಿಕೊಳ್ಳದೆ, ಆತ್ಮರತಿಯಲ್ಲೇ ಬದುಕುವುದಾದರೆ ನಮಗೆ, ಅಂದರೆ ಶ್ರಮಜೀವಿ ವರ್ಗಕ್ಕೆ, ನಾಳಿನ ನಕ್ಷತ್ರಗಳನ್ನೂ ಎಣಿಸಲಾಗುವುದಿಲ್ಲ.
ಏಕೆಂದರೆ ಇಂದು ಕಾರ್ಮಿಕ ವರ್ಗ ಎರಡು ನೆಲೆಯಲ್ಲಿ ಸಂಘರ್ಷ ನಡೆಸಬೇಕಿದೆ. ಮೊದಲನೆಯದು ನೂರಾರು ವರ್ಷಗಳ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದಿರುವ ದುಡಿಮೆಯ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ. ದುಡಿಮೆಯ ಅವಧಿ ವಿಸ್ತರಣೆ, ಮುಷ್ಕರದ ಹಕ್ಕು ನಿರಾಕರಣೆ, ಸಂಘಟನೆಯ ಹಕ್ಕುಗಳ ಮೇಲಿನ ನಿರ್ಬಂಧ, ಕಾರ್ಮಿಕರನ್ನು ತಮ್ಮ ಇಚ್ಚೆಗನುಸಾರ ನೇಮಿಸಿ ವಜಾ ಮಾಡಲು ಮಾಲಿಕರಿಗೆ ನೀಡಿರುವ ಹಕ್ಕುಗಳು ಮತ್ತು ಶಾಸನಗಳ ಮೂಲಕ ಸುಶಿಕ್ಷಿತ ಕಾರ್ಮಿಕ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಯಂತ್ರಣ ಹೀಗೆ ದುಡಿಮೆಗಾರರು ಒಂದು ಶತಮಾನದ ಹಿಂದಿನ ವ್ಯವಸ್ಥೆಗೆ ಜಾರು ಅಪಾಯವನ್ನು ಎದುರಿಸುತ್ತಿದ್ದಾರೆ.
ಎರಡನೆಯದು, ದುಡಿಮೆಯ ಕ್ಷೇತ್ರದ ಹೊರಗೆ ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಿದೆ. 70 ವರ್ಷಗಳ ಅವಧಿಯಲ್ಲಿ ಸಂವಿಧಾನದ ಕರ್ತೃಗಳು ಮತ್ತು ಸ್ವತಂತ್ರ ಭಾರತದ ನಿರ್ಮಾತೃಗಳು ರೂಪಿಸಿ ಪೋಷಿಸಿಕೊಂಡು ಬಂದಿದ್ದ “ ಸ್ವಾವಲಂಬಿ ” ಭಾರತದ ಕನಸನ್ನು ನುಚ್ಚು ನೂರು ಮಾಡಲು ನಾವು “ ಆತ್ಮನಿರ್ಭರ ” ಭಾರತವನ್ನು ನಿರ್ಮಿಸಬೇಕಿದೆ. ನೆಹರೂ ಯುಗದ ಸ್ವಾವಲಂಬನೆಗೂ ಮೋದಿ ಯುಗದ ಆತ್ಮನಿರ್ಭರತೆಗೂ ನಿಘಂಟಿನಲ್ಲಿ ಒಂದೇ ಅರ್ಥ ಕಂಡುಬರುತ್ತದೆ. ಆದರೆ ವಾಸ್ತವ ಭಿನ್ನ. ಸ್ವಾತಂತ್ರ್ಯ ಪೂರ್ವ ದಾರ್ಶನಿಕರು ಕಂಡ ಸ್ವಾವಲಂಬಿ ಭಾರತದಲ್ಲಿ ಈ ದೇಶದ ಸಂಪತ್ತು ಸಮಸ್ತ ಭಾರತೀಯರಿಗೆ ಸೇರಬೇಕು ಎನ್ನುವ ಉದಾತ್ತ ಚಿಂತನೆ ಇತ್ತು. ಇಂದಿನ ಆತ್ಮನಿರ್ಭರತೆ ಈ ಸಂಪತ್ತು ಮತ್ತು ಸಂಪನ್ಮೂಲಗಳನ್ನು ವಸಾಹತುಶಾಹಿಯ ಆಧುನಿಕ ಅವತಾರ ಎನ್ನಬಹುದಾದ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ.
ಬ್ರಿಟೀಷ್ ಸಾಮ್ರಾಜ್ಯ ಭಾರತವನ್ನು ಎರಡು ಶತಮಾನಗಳ ದಾಸ್ಯಕ್ಕೆ ಒಳಪಡಿಸಲು ಕಾರಣ ಇಲ್ಲಿನ ರಾಜ ಮಹಾರಾಜರು, ಮೇಲ್ವರ್ಗದ ಶ್ರೀಮಂತ ವ್ಯಾಪಾರಿಗಳು ಈಸ್ಟ್ ಇಂಡಿಯಾ ಕಂಪನಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದು ಎನ್ನುವುದು ಅಳಿಸಲಾಗದ ಇತಿಹಾಸ. ಈ ದಾಸ್ಯದಿಂದ ವಿಮೋಚನೆ ಹೊಂದಿದ ಭಾರತ ತಾನು ಕಳೆದುಕೊಂಡ ಸಂಪನ್ಮೂಲಗಳನ್ನು ಮತ್ತು ನೈಸರ್ಗಿಕ ಆಸ್ತಿಯನ್ನು ಮರಳಿ ಗಳಿಸಲು ಐದಾರು ದಶಕಗಳೇ ಬೇಕಾದವು ಎನ್ನುವುದು ವಾಸ್ತವ.
ಈ ಮರಳಿ ಪಡೆಯುವ ಪ್ರಕ್ರಿಯೆಯಲ್ಲೇ ದೇಶದ ಕೋಟ್ಯಂತರ ಜನತೆಗೆ ಬದುಕು ಕಟ್ಟಿಕೊಳ್ಳಲು ಸೂರು ಒದಗಿಸಿದ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾಗಿದ್ದು ಸಮಕಾಲೀನ ಇತಿಹಾಸ. ಈಗ ಈ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಕೈಜಾರುತ್ತಿವೆ. ಕರ್ನಾಟಕದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ.
ಸಾರಿಗೆ, ಸಂಪರ್ಕ, ಇಂಧನ, ಹಣಕಾಸು, ಸರಕು ಉತ್ಪಾದನೆ, ಕೃಷಿ ಉತ್ಪಾದನೆ, ಹೈನುಗಾರಿಕೆ ಈ ಎಲ್ಲ ಕ್ಷೇತ್ರಗಳಲ್ಲಿ ದುಡಿದ ಕೋಟ್ಯಂತರ ಜೀವಗಳ ಬೆವರಿನ ಹನಿಗಳನ್ನು ನಾವು ಚಲಿಸುವ ರೈಲುಗಳಲ್ಲಿ, ಸಾರ್ವಜನಿಕ ಉದ್ದಿಮೆಗಳ ಬೃಹತ್ ಕಟ್ಟಡಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕು ಮತ್ತು ವಿಮಾ ವಲಯದ ಫಲಕಗಳಲ್ಲಿ, ದೂರ ಸಂಪರ್ಕದ ತಂತುಗಳಲ್ಲಿ ಕಾಣದೆ ಹೋದರೆ ನಮ್ಮಷ್ಟು ಕೃತಘ್ಞರು ಮತ್ತಾರೂ ಇರಲಾರರು. ಹೌದು ನಾವು ಇದನ್ನು ಮಾನ್ಯ ಮಾಡುತ್ತಿದ್ದೇವೆ.
ಆದರೆ ಈ ಪ್ರತಿಯೊಂದು ಕ್ಷೇತ್ರದ, ವಲಯದ ಉದ್ದಿಮೆಗಳು ಒಂದೊಂದಾಗಿ ನಮ್ಮ ಕೈಜಾರಿ ಮತ್ತದೇ ಉದ್ಯಮಿಗಳ ಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ನಮ್ಮ ಹಿತವಲಯಗಳಲ್ಲಿ ವಿರಮಿಸುತ್ತಿದ್ದೇವೆ. ಇಂದಿನ ಭಾರತದ ಯುವ ಪೀಳಿಗೆಯಲ್ಲಿ ಹರಿಯುತ್ತಿರುವುದೇ ಈ ಸಾರ್ವಜನಿಕ ಉದ್ದಿಮೆಗಳ ಮತ್ತು ಈ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ ಕೋಟ್ಯಂತರ ಕಾರ್ಮಿಕರ ನೆತ್ತರು ಮತ್ತು ಬೆವರು ಎನ್ನುವುದನ್ನು ಡಿಜಿಟಲ್ ಯುಗದ “ ಶತಮಾನದ ಮಕ್ಕಳು ” ಅರ್ಥಮಾಡಿಕೊಳ್ಳಬೇಕಿದೆ. ಅವರಿಗೆ ಅರ್ಥಮಾಡಿಸುವ ಜವಾಬ್ದಾರಿ ಇದರ ಮೂಲ ಫಲಾನುಭವಿಗಳ ಮೇಲಿದೆ.
ದುರಂತ ಎಂದರೆ ಈ ಫಲಾನುಭವಿಗಳು ತಮಗೆ ಅನ್ನ ನೀಡಿದ ನೆಲೆಯನ್ನೇ ಮರೆತು ನವ ಉದಾರವಾದದ ಕರಾಳ ಬಾಹುಗಳಲ್ಲಿ ವಿರಮಿಸುತ್ತಿದ್ದಾರೆ. ಕೋವಿದ್ 19 ಸಂದರ್ಭದ ವಲಸೆ ಕಾರ್ಮಿಕರ ಬವಣೆಯೂ ಹಿತವಲಯದ ಮಧ್ಯಮ ವರ್ಗಗಳ ಕಣ್ತೆರೆಸಿಲ್ಲ ಎನ್ನುವುದು ದುರಂತ.
ಇದು ಒಂದು ಸಹಜ ಪ್ರಕ್ರಿಯೆ ಎನ್ನುವಂತೆ ಆಳುವ ವರ್ಗಗಳ ಎಲ್ಲ ನೀತಿಗಳನ್ನೂ ಅಪ್ಪಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಈ ನಡುವೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು “ ಪ್ರಜ್ಞಾವಂತ ” ನಾಗರಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಕಾರ್ಮಿಕ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಒಂದು ಹೆಜ್ಜೆ ನವಂಬರ್ 26ರ ಸಾರ್ವತ್ರಿಕ ಮುಷ್ಕರ.
ಕಾಕತಾಳಿಯವೇನೋ ಎನ್ನುವಂತೆ ಈ ದಿನ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ. ಮೊದಲನೆಯದು ಇದು ಸಂವಿಧಾನ ದಿನ. ಅಂದರೆ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮೂಲಕ ಸಮ ಸಮಾಜವನ್ನು ಕಟ್ಟುವ ಕನಸು ಸಾಕಾರಗೊಳಿಸಲು ಭಾರತದ ಸಂವಿಧಾನವನ್ನು ಅಂಗೀಕರಿಸಲಾದ ದಿನ.
ಈ ಮೂರು ಸ್ವಾತಂತ್ರ್ಯಗಳಲ್ಲಿ ಒಂದು ಇಲ್ಲದೆ ಹೋದರೂ ನಮ್ಮ ಕನಸು ನನಸಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಈಗ ನಮಗೆ ಇನ್ನೂ ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಏಕೆಂದರೆ ಈ ಮೂರೂ ಸ್ವಾತಂತ್ರ್ಯಗಳ ಪರಿಕಲ್ಪನೆಯನ್ನೇ ಅಳಿಸಹಾಕುವಂತಹ ಕರಾಳ ಶಾಸನಗಳ ಪರ್ವ ನಮ್ಮೆದುರು ಬೃಹತ್ ಬಂಡೆಯಂತೆ ನಿಂತಿದೆ.
ಎರಡನೆಯ ಕಾರಣ ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆ ಉಂಟುಮಾಡುವಂತಹ ಮುಂಬೈ ಭಯೋತ್ಪಾದಕ ದಾಳಿ ನಡೆದದ್ದು ಇದೇ ದಿನ, 2008ರಲ್ಲಿ. ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸ್ವತಃ ನಾವೇ ಅಲಕ್ಷಿಸಿದ್ದರಿಂದಲೇ 26/11 ನಡೆಯಲು ಸಾಧ್ಯವಾಯಿತು ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು.
ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ, ಮತಾಂಧತೆ ಮತ್ತು ಮತೀಯ ಉಗ್ರವಾದದ ಬೆಳವಣಿಗೆಯನ್ನು ನೋಡಿದರೆ ಸಂವಿಧಾನ ಕರ್ತೃಗಳ ಮೂಲ ಆಶಯಗಳನ್ನು ನಾವು ಎಷ್ಟು ವ್ಯವಸ್ಥಿತವಾಗಿ ಮಣ್ಣುಪಾಲು ಮಾಡಿದ್ದೇವೆ ಎನ್ನುವುದನ್ನೂ ಗ್ರಹಿಸಬಹುದು. ನಮ್ಮ “ ಆತ್ಮ ನಿರ್ಭರತೆ ” ವ್ಯಕ್ತವಾಗಬೇಕಿರುವುದು ಇಲ್ಲಿ. ಭಾರತದ ಬಹುಸಂಸ್ಕೃತಿಯ ಚೌಕಟ್ಟಿನಲ್ಲಿ ಶತಮಾನಗಳಿಂದ ಇದ್ದ ಸೌಹಾರ್ದತೆಯನ್ನು ಅಡ್ಡಡ್ಡಲಾಗಿ ಸೀಳುವುದರಲ್ಲಿ ಈ ಸಮಾಜೋ ಸಾಂಸ್ಕೃತಿಕ ರಾಜಕೀಯ ಬೆಳವಣಿಗೆಗಳು ಯಶಸ್ವಿಯಾಗಿವೆ.
ಹಾಗೆಯೇ ಮೇಲ್ನೋಟಕ್ಕೆ ಕಾಣಬಹುದಾಗಿದ್ದ ಸೌಹಾರ್ದತೆಯ ನಡುವೆಯೇ ನಮ್ಮ ನಡುವೆ ಇದ್ದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮೇಲ್ಜಾತಿಯ ಕ್ರೌರ್ಯವನ್ನು ಅಳಿಸಿ ಹಾಕುವ ಬದಲು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದನ್ನೂ ಗಮನಿಸಬೇಕಿದೆ. 21ನೆಯ ಶತಮಾನದ ಮೂರನೆಯ ದಶಕವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲೂ ನಾವು ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿನ ಶವದ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿದರೆ ನಮ್ಮೊಳಗಿನ ಕ್ರೌರ್ಯದ ಫಸಲು ಇನ್ನೂ ಹಸನಾಗಿದೆ ಎನಿಸುವುದಿಲ್ಲವೇ ?
ಅನ್ನ ಬೆಳೆಯುವ ರೈತನ ಆಕ್ರಂದನವನ್ನು ಗ್ರಾಂಥಿಕ ಕ್ರೌರ್ಯದ ಮೂಲಕ (ಕರಾಳಶಾಸನಗಳನ್ನು ಹೀಗೆ ಕರೆಯಬಹುದು) ಎದುರಿಸುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವು ನಾಳಿನ ಯೋಚನೆ ಮಾಡುತ್ತಿದ್ದೇವೆ. ಇಲ್ಲಿಯೇ ನಾವು ಮನುಸ್ಮೃತಿಯ ಮರುಹುಟ್ಟನ್ನು ಗುರುತಿಸಬೇಕಿದೆ. ಮನು ಎಂಬ ಹೆಸರಿನ ಋಷಿ ತನ್ನ ಕಾಲಘಟ್ಟದಲ್ಲಿದ್ದ ಉತ್ಪಾದನಾ ಸಂಬಂಧಗಳಿಗೆ ಅನುಗುಣವಾಗಿ ಸಮಾಜದ ನಿರ್ವಹಣೆಗೆ ಸಂಹಿತೆಗಳನ್ನು ರಚಿಸಿದ್ದ. ಆಧುನಿಕ ಭಾರತಕ್ಕೆ ಇದರ ಅವಶ್ಯಕತೆ ಇಲ್ಲ ಎನ್ನುವ ಕಾರಣಕ್ಕಾಗಿಯೇ ಅಂಬೇಡ್ಕರ್ ಅದನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ್ದರು.
ಇಂದು ಮನುಸ್ಮೃತಿಯ ಅತ್ಯಾಧುನಿಕ ಅವತಾರವನ್ನು ಹಥ್ರಾಸ್ ಘಟನೆಯಲ್ಲಿ, ವಿದ್ಯುನ್ಮಾನ ಸುದ್ದಿಮನೆಗಳಲ್ಲಿ, ಶಾಸಕಾಂಗ ಸಭೆಗಳಲ್ಲಿ, ಸಂಸತ್ ಭವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯ ವ್ಯವಸ್ಥೆಯ ಅಂಗಳದಲ್ಲೂ ಕಾಣುತ್ತಿದ್ದೇವೆ. ಶೋಷಿತ ಸಮುದಾಯಗಳು ಮತ್ತು ಶ್ರಮಜೀವಿ ವರ್ಗಗಳು, ಈ ಎರಡರ ನಡುವೆ ಇರುವ ರೇಖೆ ಬರಿಗಣ್ಣಿಗೆ ಕಾಣಿಸದಷ್ಟು ತೆಳುವಾಗಿದೆ.
26/11ರಂದು ನಡೆದ ದಾಳಿ ದೇಶದ ಜನತೆಯನ್ನು ಕೆಲವು ವರ್ಷಗಳ ಕಾಲ ತಲ್ಲಣಗೊಳಿಸಿತ್ತು. ಆದರೆ ಇಂದು ನವ ಉದಾರವಾದದ ದಾಳಿ ದೇಶದ ಬಹುಸಂಖ್ಯೆಯ ಜನತೆಯನ್ನು ತಲ್ಲಣಗೊಳಿಸುತ್ತಿದೆ. ಈ ಗ್ರಾಂಥಿಕ ದಾಳಿಗೆ ಕೋಟ್ಯಂತರ ಶ್ರಮಜೀವಿಗಳು ತತ್ತರಿಸಿಹೋಗಲಿದ್ದಾರೆ, ಬೀದಿ ಪಾಲಾಗಲಿದ್ದಾರೆ. ನವ ಭಾರತದ ನಿರ್ಮಾಣಕ್ಕೆ ಇದು ಅತ್ಯವಶ್ಯ ಎನ್ನುವುದಾರೆ ಆ ನವಭಾರತದ ನವ ಸ್ವರೂಪವನ್ನು ನಾವು ತಿರಸ್ಕರಿಸಬೇಕಾಗುತ್ತದೆ.
ಕಾರ್ಮಿಕ ಕಾನೂನುಗಳನ್ನು ಸಂಕುಚಿತಗೊಳಿಸುವ ಮೂಲಕ ದುಡಿಮೆಯ ಕೈಗಳನ್ನು ಮತ್ತೊಮ್ಮೆ ಔದ್ಯಮಿಕ ಸಂಕೋಲೆಗಳಲ್ಲಿ ಬಂಧಿಸಲು ಹೊರಟಿರುವ ಭಾರತದ ಆಳುವ ವರ್ಗಗಳು, ಭಾರತದ ಬೆನ್ನೆಲುಬು ಎಂದೇ ಹೇಳಲಾಗುವ ಕೃಷಿ ಕ್ಷೇತ್ರವನ್ನೂ ಉದ್ಯಮಪತಿಗಳಿಗೆ ಪರಭಾರೆ ಮಾಡುವ ಮೂಲಕ ಶೇ 60ರಷ್ಟು ಜನಸಂಖ್ಯೆಯ ಮೇಲೆ ದಾಳಿ ನಡೆಸುತ್ತಿದೆ.
ದೇಶದ ಶೈಕ್ಷಣಿಕ ಸಂಪತ್ತನ್ನೂ ಸಹ ಬಹುತ್ವದ ನೆಲೆಗಳಿಂದ ದೂರ ಮಾಡಿ, ವರ್ಣಾಶ್ರಮ ಧರ್ಮವನ್ನು ಪುನರ್ ಸ್ಥಾಪಿಸಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ಸೂಚನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದಾಗಿದೆ. ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅನುಮೋದನೆಯಾಗಿರುವ ಈ ಕರಾಳ (!) ಶಾಸನಗಳಿಗೂ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸುವ ಯುಎಪಿಎ ಮುಂತಾದ ಕರಾಳ ಶಾಸನಗಳಿಗೆ ವ್ಯತ್ಯಾಸವೇನಾದರೂ ಇದ್ದರೆ ಅದು ಗ್ರಾಂಥಿಕ ಮಾತ್ರ. ಎರಡೂ ಸಹ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಸ್ತ್ರಗಳೇ ಆಗಿವೆ.
ಈ ಎರಡು ಅಸ್ತ್ರಗಳ ವಿರುದ್ಧ ಸ್ವಾವಲಂಬಿ ಭಾರತಕ್ಕೆ ಬದ್ಧರಾಗಿರುವ ಪ್ರತಿಯೊಬ್ಬ ನಾಗರಿಕನೂ ದನಿ ಎತ್ತಬೇಕಿದೆ. ದೇಶದ ಬಹುಸಂಖ್ಯೆಯ ಜನರ ಬದುಕಿಗೆ ಅವಶ್ಯವಾದ ಸ್ವಾವಲಂಬನೆಯನ್ನು ಬಲಿಕೊಟ್ಟು, ಬೆರಳೆಣಿಕೆಯಷ್ಟು ಶ್ರೀಮಂತರ ಸ್ವಾವಲಂಬನೆಗೆ ಅವಕಾಶ ಮಾಡಿಕೊಡುವ “ ಆತ್ಮನಿರ್ಭರ ” ಭಾರತ ಭಾರತವನ್ನು ಮತ್ತೊಂದು ರೀತಿಯ ದಾಸ್ಯಕ್ಕೆ ದೂಡುತ್ತದೆ.
ಭೌಗೋಳಿಕವಾಗಿ ಭಾರತ ಸಂಕೋಲೆಗಳಿಂದ ಮುಕ್ತವಾಗಿಯೇ ಇದ್ದರೂ, ಬೌದ್ಧಿಕವಾಗಿ ಈ ದೇಶದ ಕೋಟ್ಯಂತರ ಶೋಷಿತರು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟಿರುವವರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಿರುವ ದಮನಿತರು ಕಾರ್ಪೋರೇಟ್ ದಾಸ್ಯಕ್ಕೆ ಒಳಗಾಗಲಿದ್ದಾರೆ. ಇದು ನಮ್ಮ ಮುಂದಿರುವ ಅಪಾಯ.
ಒಂದು ಸುಂದರ ಸೌಧ ನಿರ್ಮಾಣವಾಗುತ್ತಿದೆ ಒಂದು ಅಂಗುಲ ಭೂಮಿ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಕಾಲ ಇದಲ್ಲ. ಈ ಸೌಧದ ಅಡಿಪಾಯಕ್ಕೆ ಭೂಮಿ ಕೊಟ್ಟವರ ಎಲುಬುಗಳನ್ನೇ ಅಸ್ತಿಭಾರದಂತೆ ಬಳಸಲಾಗುತ್ತದೆ. ಇದು ನವ ಉದಾರವಾದದ ನೀತಿ. ಮೂರು ದಶಕಗಳ ನವ ಉದಾರವಾದಿ ನೀತಿಯ ಪರಿಣಾಮ ಈಗಾಗಲೇ ನಾವು ನೆಲೆ ಕಳೆದುಕೊಂಡಿದ್ದೇವೆ.
ಈಗ ಸಮಾಜೋ ಸಾಂಸ್ಕೃತಿಕ ನೆಲೆಗಳೂ ಧ್ವಂಸವಾಗುತ್ತಿವೆ. ಮತಾಂಧತೆ, ಜಾತಿ ಪ್ರಜ್ಞೆ ಮತ್ತು ಬಂಡವಾಳದ ಮೈತ್ರಿಯ ಎದುರು ಈ ದೇಶದ ದುಡಿಯುವ ವರ್ಗಗಳು ಹೋರಾಡಬೇಕಿದೆ. ಹಾಗಾಗಿಯೇ ನವಂಬರ್ 26ರ ಸಾರ್ವತ್ರಿಕ ಮುಷ್ಕರ ನಿರ್ಣಾಯಕವಾಗಲಿದೆ.
ಕೊನೆಯ ಹನಿ : ಬ್ರಿಟೀಷರು, ಫ್ರೆಂಚರು, ಡಚ್ಚರು ಮತ್ತು ಪೋರ್ಚುಗೀಸರು ಭಾರತದ ಸಂಪತ್ತನ್ನು ಕೊಳ್ಳೆಹೊಡೆಯಲು ಪ್ರವೇಶಿಸಿದಾಗ ಪ್ರತಿಯೊಂದು ಸಂಸ್ಥಾನದ ರಾಜ/ಸಾಮಂತರೂ ಯೋಚಿಸಿದ್ದು “ ಪಕ್ಕದ ಸಂಸ್ಥಾನ ಅವರ ಪಾಲಾಗಿದೆ ನಾನು ಸುರಕ್ಷಿತ ” ಎಂದು. ನಂತರ ನಡೆದದ್ದು ಇತಿಹಾಸ. ಈಗ ಭಾರತದ ದುಡಿಯುವ ವರ್ಗಗಳಲ್ಲೂ ಇದೇ ರೀತಿಯ “ ನಮ್ಮ ದುಡಿಮೆಯ ವಲಯ/ಕ್ಷೇತ್ರ/ಸಂಸ್ಥೆ ಸುರಕ್ಷಿತವಾಗಿದೆ ” ಎನ್ನುವ ಮನೋಭಾವ ಇದೆ. ಮತ್ತೊಮ್ಮೆ ದಾಸ್ಯಕ್ಕೊಳಗಾಗುವ ಮುನ್ನ,,,,,,,,,ಎಚ್ಚೆತ್ತುಕೊಳ್ಳಲು ನವಂಬರ್ 26ರ ದನಿಗೆ ದನಿಗೂಡಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ
ಸುದ್ದಿದಿನ,ದಾವಣಗೆರೆ:ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬ್ರಾಂಡ್ನ ಸರ್ವೋಚ್ಚ ಸಾಧನೆಯಾಗಿ ಪ್ರಸ್ತುತಪಡಿಸಲಾಯಿತು. ಆದರೆ ಬಿಜೆಪಿ ಒಂದು ಅತ್ಯಂತ ವ್ಯವಸ್ಥಿತ ಮತ್ತು ಚಾಣಾಕ್ಷ ‘ಪಾಲಿಟಿಕಲ್ ಮಾರ್ಕೆಟಿಂಗ್’ ತಂತ್ರವಾಗಿ ಬಳಸಿಕೊಳ್ಳುವುದಕ್ಕೆಯತ್ನಿಸಿ ವಿಫಲವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ಗೃಹ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್ವಿಂಗಡಣೆಗೆ “ಬಲಿಪಶು” ಮಾಡುವುದು ಸರಿಯಲ್ಲ. ೨೦೨೩ರ ಕಾಯಿದೆಯಲ್ಲಿ ಜನಗಣತಿ ನಂತರ ಅನುಷ್ಠಾನ ಎಂದು ತಿಳಿಸಲಾಗಿದೆ. ಆದರೆ ಈಗ ೨೦೧೧ರ ಜನಗಣತಿ ಆಧಾರದಲ್ಲಿ ವೇಗಗೊಳಿಸುವುದು ಏಕೆ? ಜಾತಿ ಜನಗಣತಿಯನ್ನು ಸೇರಿಸದಿದ್ದರೆ ಪುನರ್ವಿಂಗಡಣೆಯು ಸಾಮಾಜಿಕ ನ್ಯಾಯಕ್ಕೆ ಹೊಂದುವುದಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಕುಟುಂಬ ನಿಯಂತ್ರಣದ ಯಶಸ್ಸಿಗೆ ಶಿಕ್ಷೆ ನೀಡುವಂತಾಗಬಾರದು. ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಮಸೂದೆ ಜಾರಿಗಿದ್ದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿತ್ತು. ಬಿಜೆಪಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ ಎಂದರು.
ಮಸೂದೆಯನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡು ಮಹಿಳೆಯರ ಭಾವನೆಗಳೊಂದಿಗೆ ಆಟವಾಡಲು ಹೋಯಿತು. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಅದು ನಡೆಯಲಿಲ್ಲ. ನಮ್ಮ ವಿರೋಧವೇನಿದ್ದರು ಪುನರ್ ವಿಂಗಡಣೆ ಮಸೂದೆ ತಿರಸ್ಕರಿಸಿದೆ ಹೊರತು ಮಹಿಳಾ ಮೀಸಲು ಮಸೂದೆ ಅಲ್ಲ ಎಂದರು.
ಪಂಚ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದರೂ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಚುನಾವಣೆಯ ಸಂದರ್ಭದಲ್ಲಿ ದೇಶ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವಿರೋಧ ಪಕ್ಷಗಳನ್ನು ತೆಗಳಿಕೆ ಮಾಡಿದ್ದು ಸರಿಯಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಮಾಡಿದರು.
ಮಸೂದೆ ಕುರಿತು ಸರ್ವ ಪಕ್ಷಗಳ ಸಭೆ ಕರೆಯುವಂತೆ ಮಾಡಿಕೊಂಡ ಮನವಿ ಉಪೇಕ್ಷೆ ಮಾಡಿತು ಕೇಂದ್ರ ಸರ್ಕಾರ. ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಆತಂಕ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರೆದಿದ್ದರೆ ಅನುಕೂಲ ಆಗುತ್ತಿತ್ತು. ೨೦೨೪ರಲ್ಲಿ ಮಹಿಳಾ ಮೀಸಲು ಜಾರಿಗೆ ತರುವ ಅವಕಾಶ ಇತ್ರು. ಇದನ್ನು ಮಾಡಲು ಮುಂದಾಗಲಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂ ದಲ್ಲಿ ತಮ್ಮ ಅನುಕೂಲ, ರಾಜಕೀಯ ಲಾಭಕ್ಕೆ ಅನುಗುಣವಾಗಿ ಮಾಡಿ ತೋರಿಸಿದ್ದಾರೆ. ಈ ಬಗ್ಗೆ ಹೆಚ್ಚು ಆತಂಕ ಇದೆ. ಆಡಳಿತ ಪಕ್ಷಕ್ಕೆ ಈ ಮಸೂದೆ ಜಾರಿಗೆ ತರುವ ಬದ್ದತೆ ಇದ್ದಿದ್ದರೆ ಸರ್ವ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದರು. ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಯಲ್ಲಿ ಶೇ ೫೦ ಜಾರಿಗೆ ತಂದಿದ್ದೇವೆ ಎಂದರು.
ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಜಾರಿಗೆ ತಂದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಜನಗಣತಿಯಲ್ಲಿ ಜಾತಿ ಗಣತಿ ನಡೆಯುತ್ತಿದೆಯೇ ಎಂಹುದು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ನಡುವೆ ಇರುವ ವ್ಯತ್ಯಾಸ ದೊಡ್ಡದು. ಉತ್ತರ ಭಾರತೀಯ ರಾಜ್ಯಗಳು ಹೆಚ್ಚು ಪ್ರಾಬಲ್ಯ ಸಾಧಿಸಿದರೆ ದಕ್ಷಿಣ ಭಾರತಕ್ಕೆ ತೊಂದರೆ ಆಗುತ್ತದೆ. ಮಸೂದೆ ಮಂಡನೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆಯಾವುದು ಒಳಿತು ಎಂಬುದು ಮಹಿಳೆಯರು ಆಲೋಚನೆ ಮಾಡಲಿ ಎಂದರು.
ಸುದ್ದಿಗೋಷ್ಟಿಯಲ್ಲಿ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾಂಗ್ರೆಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ, ಮುಖಂಡರಾದ ಶಿವಕುಮಾರ್, ಅಯೂಬ್ ಪೈಲ್ವಾನ್, ಎ.ನಾಗರಾಜ್ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ
ಸುದ್ದಿದಿನ,ದಾವಣಗೆರೆ:ಕೆ. ಬೇವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 21 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಸಾಲಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರ ಇವರ ಸಂಯುಕ್ತ ಆಶ್ರಯದಲ್ಲಿ 11 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶಿಬಿರದಲ್ಲಿ ಸತ್ಯನಾರಾಯಣ ಕ್ಯಾಂಪ್ನ ಡಾ. ರಾಮಾಂಜನೇಯ ಸ್ವಾಮಿ ಅವರು ಇದುವರೆಗೆ 110 ಬಾರಿ ರಕ್ತದಾನ ಮಾಡಿರುವುದು ವಿಶೇಷವಾಗಿದ್ದು, ಈ ಬಾರಿ ತಮ್ಮ ಮಗನೊಂದಿಗೆ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ವಿರೂಪಾಕ್ಷಪ್ಪ ಬಿ.ಕೆ. (ವಿ.ಆರ್.ಡಬ್ಲ್ಯೂ) ಎಂಬ ವಿಶೇಷ ಚೇತನರು 5ನೇ ಬಾರಿ ರಕ್ತದಾನ ಮಾಡಿ ಗಮನಾರ್ಹರಾಗಿದ್ದಾರೆ.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ (ಟಿ.ಎಚ್.ಒ) ಉಮಣ್ಣ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲವಾದುದರಿಂದ ರಕ್ತದಾನದ ಮಹತ್ವ ಅತ್ಯಂತ ಮಹತ್ತರವಾಗಿದೆ ಎಂದು ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ. ರೇವತಿ ಎಚ್ ಬುಟ್ಟೆ ಅವರು ಮಾತನಾಡಿ, ಗ್ರಾಮದ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರುವುದು ಸಂತೋಷದ ಸಂಗತಿ. ಅತಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದಾನವು ಅನೇಕ ರೋಗಿಗಳ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. ದಾವಣಗೆರೆ ಕೇಂದ್ರ ರಕ್ತ ನಿಧಿಯ ಡಾ. ಗೀತಾ ಡಿ.ಎಚ್. ಹಾಗೂ ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಉಮೇಶ್ ಎಂ.ಆರ್.ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರಾದ ವಿಶ್ವನಾಥ್ ಡಿ.ಆರ್. (ಉಪನ್ಯಾಸಕರು), ವಿಶ್ವನಾಥ್ ಎ.ಎಸ್., ಬನ್ನಿಕೋಡು ಸುರೇಶ್, ರೇವಣಸಿದ್ದಪ್ಪ, ಕೆ.ಜಿ. ಸಂತೋಷ್, ಜಿ.ಎಂ. ಮುರುಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೆ. ಬೇವಿನಹಳ್ಳಿ ಮತ್ತು ಸಾಲಕಟ್ಟೆ ಗ್ರಾಮಸ್ಥರ ಸಹಕಾರದಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ
ಸುದ್ದಿದಿನ,ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮುಸ್ಲಿಂ ಸಮಾಜದ ನಾಯಕರಾಗಿದ್ದ ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸೈಫುಲ್ಲಾ ಸಾಬ್ (79ವರ್ಷ) ಅವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ಮೃತರ ನಿಧನಕ್ಕೆ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಕರೆಕಟ್ಟೆಜನಾಬ್ ಸೈಯದ್ ಸೈಫುಲ್ಲ ಸಾಬ್ಮಿ ಲ್ಲತ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಸಾಬ್ ಅವರು ಸಿಎಂ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ಆಪ್ತರಾಗಿದ್ದರು.
ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರನ್ನು ಸೇರಿದಂತೆ ಕುಟುಂಬಸ್ಥರು, ಅಪಾರ ಬಂಧುಬಳಗದವರನ್ನು ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸಾಬ್ ಅವರು ಅಗಲಿದ್ದಾರೆ.
2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಈ ಪಕ್ಷದಿಂದ ಸ್ಪರ್ಧಿಸಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪರ ವಿರುದ್ಧ ಸೋತರೂ ಎರಡನೇ ಸ್ಥಾನ ಪಡೆದಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಸಿದ್ದರಾಮಯ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸ್ನಾತಕೋತ್ತರ ವೃತ್ತಿಪರ ಬಿಎಸ್ಸಿ ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದರು. ದಾವಣಗೆರೆಯ ಡಿಆರ್ ಎಂ ಕಾಲೇಜಿನಲ್ಲಿ ಬಿ. ಎಡ್ ವ್ಯಾಸಂಗ ಮಾಡಿದ್ದರು. ಎಂ. ಎಂ. ಬಸಪ್ಪ ಶಿಕ್ಷಣ ಸಂಘದ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ4 days agoದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ
-
ದಿನದ ಸುದ್ದಿ4 days agoಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ
-
ದಿನದ ಸುದ್ದಿ6 days agoದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ
-
ದಿನದ ಸುದ್ದಿ12 hours agoಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

