ದಿನದ ಸುದ್ದಿ
26ರ ಕಾರ್ಮಿಕರ ಮುಷ್ಕರ ಏಕೆ ನಿರ್ಣಾಯಕ..?
- ನಾ ದಿವಾಕರ
ಕೋವಿದ್ 19ರ ಬಿಕ್ಕಟ್ಟಿನಿಂದ ಭಾರತ ಪಾರಾಗುವುದೆಂದು ? ಈ ಪ್ರಶ್ನೆ ಪ್ರತಿಯೊಬ್ಬರ ಮನಸಿನಲ್ಲೂ ಕಾಡುತ್ತಿದೆ. ಕೋವಿದ್ 19 ಭಾರತದ ದುಡಿಯುವ ವರ್ಗಗಳಿಗೆ ಶಾಪವಾಗಿ ಪರಿಣಮಿಸಿದ್ದರೆ ಆಳುವ ವರ್ಗಗಳಿಗೆ ವರದಾನ ಆದಂತಿದೆ. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಹಿಂದಿರುಗಲು, ಸಾವಿರಾರು ಕಿಲೋಮೀಟರ್ ನಡೆದು, ಬಿರುಬಿಸಿಲಿನಲ್ಲಿ ನಿತ್ರಾಣರಾಗಿ, ಅಸುನೀಗಿದ ನೂರಾರು ವಲಸೆ ಕಾರ್ಮಿಕರು ಸರ್ಕಾರದ ಗಣನೆಗೇ ಬರಲಿಲ್ಲ ಎನ್ನುವುದನ್ನು ಗಮನಿಸಿದರೆ ನಾವು ಎಂತಹ ಅಮಾನುಷ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ತಿಳಿಯುತ್ತದೆ.
ಹೊರದೇಶಗಳಿಂದ ಬಂದಿರುವ ಲಕ್ಷಾಂತರ ಅಕ್ರಮ(?) ವಲಸೆ ಕಾರ್ಮಿಕರ ಬಗ್ಗೆ ಕರಾರುವಾಕ್ಕಾಗಿ ಮಾಹಿತಿ ಲಭ್ಯವಿದೆ ಎಂದು ಎಲ್ಲರನ್ನೂ ಹೊರಹಾಕಲು ಸಿದ್ಧತೆ ನಡೆಸಿದ್ದ ಸರ್ಕಾರವೊಂದಕ್ಕೆ, ತನ್ನ ನೆಲದಲ್ಲೇ ವಲಸೆ ಕಾರ್ಮಿಕರು ಎಷ್ಟಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ ಎಂದರೆ ನಾವು ಇನ್ನೆಂತಹ ನಿಷ್ಕ್ರಿಯ ಆಡಳಿತ ವ್ಯವಸ್ಥೆಯಲ್ಲಿದ್ದೇವೆ ಎಂದು ಅರಿವಾಗುತ್ತದೆ.
ದೇಶದ ಸಂಪತ್ತಿನ ಉತ್ಪಾದನೆಗೆ ಅನಿವಾರ್ಯವಾಗಿ ಬೇಕಾಗುವ ಜೀವಗಳು ಬದುಕಿದ್ದಾಗ ಶೋಷಣೆಗೊಳಗಾದರೆ ಅಳಿದ ಮೇಲೆ ಅನಾಥವಾಗುವ ಒಂದು ವಿಕೃತ ಪರಿಸ್ಥಿತಿಯಲ್ಲಿ ಈ ದೇಶದ ಶ್ರಮಜೀವಿಗಳು ತಮ್ಮ ಬೆವರು ಹರಿಸಿ ದುಡಿಯುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಶ್ರಮ ಶಕ್ತಿ ಮತ್ತು ಈ ಶ್ರಮ ಶಕ್ತಿಯ ವಾರಸುದಾರರಾದ ಶ್ರಮಿಕರು ಯಾವುದೇ ಒಂದು ದೇಶದ ತಳಪಾಯ.
ಅರ್ಥಶಾಸ್ತ್ರಜ್ಞರು, ಮಾರುಕಟ್ಟೆ ತಜ್ಞರು ಮತ್ತು ತಮ್ಮ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಅಭಿವೃದ್ಧಿಯ ನೀಲನಕ್ಷೆಯನ್ನು ಸಿದ್ಧಪಡಿಸುವ ಹಿತವಲಯದ ಅಧಿಕಾರಶಾಹಿ ವರ್ಗ ದೇಶದ ಜಿಡಿಪಿ , ಅಂದರೆ ನಿವ್ವಳ ದೇಶೀಯ ಉತ್ಪನ್ನದ ಏರಿಳಿತಗಳನ್ನು ಗಮನಿಸುತ್ತಲೇ ಇರುತ್ತಾರೆ.
ಆದರೆ ಈ ಸೂಚ್ಯಂಕದ ಏರಿಳಿತದ ಹಿಂದೆ ಇರುವ ಉತ್ಪನ್ನಗಳ ಉತ್ಪಾದನಾ ಪ್ರಕ್ರಿಯೆಗೆ ಲಕ್ಷಾಂತರ ಕೈಗಳು ದುಡಿದಿರುತ್ತವೆ, ಲಕ್ಷಾಂತರ ಕುಟುಂಬಗಳು ಹಸಿವನ್ನೂ ಲೆಕ್ಕಿಸದೆ ಶ್ರಮ ವಹಿಸಿರುತ್ತವೆ. ಗ್ರಾಮೀಣ ಕೃಷಿ ಮತ್ತು ಕೂಲಿ ಕಾರ್ಮಿಕರಿಂದ ಹಿಡಿದು ದೇಶದ ಬೃಹತ್ ಕೈಗಾರಿಕೆಗಳ ಕಾರ್ಮಿಕರವರೆಗೂ ಶ್ರಮಶಕ್ತಿ ಬಳಕೆಯಾಗಿರುತ್ತದೆ.
ಈ ಶ್ರಮಶಕ್ತಿಯನ್ನು ತನ್ನಿಚ್ಚೆಯಂತೆ, ಅಗ್ಗದ ಕೂಲಿ ನೀಡಿ, ಬಳಸಿಕೊಳ್ಳಲು ಬಂಡವಾಳಿಗರು ಮತ್ತು ಬಂಡವಾಳ ವ್ಯವಸ್ಥೆ ಸದಾ ಸಿದ್ಧವಾಗಿರುತ್ತದೆ. ಇಂದು ಈ ಬೃಹತ್ ಸಮುದಾಯ ಅಪಾಯದ ಅಂಚಿನಲ್ಲಿದೆ. ಭಾರತದ ಬಂಡವಾಳ ವ್ಯವಸ್ಥೆ ತನ್ನ ಕ್ರೌರ್ಯದ ಪರಾಕಾಷ್ಠೆ ತಲುಪಿರುವುದನ್ನು ವಲಸೆ ಕಾರ್ಮಿಕರ ಬವಣೆಯಲ್ಲಿ ಕಾಣದೆ ಹೋದರೆ ಬಹುಶಃ ನಾವು ದೃಷ್ಟಿಹೀನರು ಎಂದೇ ಭಾವಿಸಬೇಕಾಗುತ್ತದೆ. ಭಾರತದ ಶ್ರಮಜೀವಿಗಳು ಕಳೆದ ಮೂರು ದಶಕಗಳಿಂದಲೂ ಕವಲು ಹಾದಿಯಲ್ಲೇ ನಡೆದುಬಂದಿದ್ದಾರೆ. ಇದೀಗ ತಮ್ಮ ಭವಿಷ್ಯದ ಹಾದಿಯನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ.
ಕೃಷಿ, ಗುಡಿ ಕೈಗಾರಿಕೆಗಳಿಂದ ಹಿಡಿದು ಬ್ಯಾಂಕ್ ಮತ್ತು ವಿಮಾ ಕ್ಷೇತ್ರದವರೆಗಿನ ಸಮಸ್ತ ಕಾರ್ಮಿಕ ವರ್ಗ ಇಂದು-ನಾಳಿನ ಚಿಂತೆಯಲ್ಲಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಆಳುವ ವರ್ಗಗಳು ಅನುಸರಿಸುತ್ತಿರುವ ನವ ಉದಾರವಾದಿ ಆರ್ಥಿಕ ನೀತಿ ಎನ್ನುವುದು ವಾಸ್ತವ.
ಆದರೆ ಈ ಅಮಾನುಷ ನೀತಿಗಳ ವಿರುದ್ಧ ಒಂದು ಸಮಗ್ರ ಹೋರಾಟ ರೂಪಿಸುವಲ್ಲಿ ನಾವು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಎದುರಾದಾಗ ಕಾರ್ಮಿಕ ಚಳುವಳಿಯ ಮುಂಚೂಣಿಯಲ್ಲಿರುವ ಎಲ್ಲ ಸುಶಿಕ್ಷಿತರೂ ಮತ್ತೊಂದು ಮಾಸ್ಕ್ ಧರಿಸಬೇಕಾಗುತ್ತದೆ. ಇದು ಕಟು ವಾಸ್ತವ. ಈ ಲೋಪವನ್ನು ಒಪ್ಪಿಕೊಳ್ಳದೆ, ಆತ್ಮರತಿಯಲ್ಲೇ ಬದುಕುವುದಾದರೆ ನಮಗೆ, ಅಂದರೆ ಶ್ರಮಜೀವಿ ವರ್ಗಕ್ಕೆ, ನಾಳಿನ ನಕ್ಷತ್ರಗಳನ್ನೂ ಎಣಿಸಲಾಗುವುದಿಲ್ಲ.
ಏಕೆಂದರೆ ಇಂದು ಕಾರ್ಮಿಕ ವರ್ಗ ಎರಡು ನೆಲೆಯಲ್ಲಿ ಸಂಘರ್ಷ ನಡೆಸಬೇಕಿದೆ. ಮೊದಲನೆಯದು ನೂರಾರು ವರ್ಷಗಳ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ಪಡೆದಿರುವ ದುಡಿಮೆಯ ಹಕ್ಕುಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಆತಂಕ. ದುಡಿಮೆಯ ಅವಧಿ ವಿಸ್ತರಣೆ, ಮುಷ್ಕರದ ಹಕ್ಕು ನಿರಾಕರಣೆ, ಸಂಘಟನೆಯ ಹಕ್ಕುಗಳ ಮೇಲಿನ ನಿರ್ಬಂಧ, ಕಾರ್ಮಿಕರನ್ನು ತಮ್ಮ ಇಚ್ಚೆಗನುಸಾರ ನೇಮಿಸಿ ವಜಾ ಮಾಡಲು ಮಾಲಿಕರಿಗೆ ನೀಡಿರುವ ಹಕ್ಕುಗಳು ಮತ್ತು ಶಾಸನಗಳ ಮೂಲಕ ಸುಶಿಕ್ಷಿತ ಕಾರ್ಮಿಕ ವರ್ಗದ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಯಂತ್ರಣ ಹೀಗೆ ದುಡಿಮೆಗಾರರು ಒಂದು ಶತಮಾನದ ಹಿಂದಿನ ವ್ಯವಸ್ಥೆಗೆ ಜಾರು ಅಪಾಯವನ್ನು ಎದುರಿಸುತ್ತಿದ್ದಾರೆ.
ಎರಡನೆಯದು, ದುಡಿಮೆಯ ಕ್ಷೇತ್ರದ ಹೊರಗೆ ಇನ್ನೂ ಹೆಚ್ಚಿನ ಅಪಾಯಗಳನ್ನು ಎದುರಿಸಬೇಕಿದೆ. 70 ವರ್ಷಗಳ ಅವಧಿಯಲ್ಲಿ ಸಂವಿಧಾನದ ಕರ್ತೃಗಳು ಮತ್ತು ಸ್ವತಂತ್ರ ಭಾರತದ ನಿರ್ಮಾತೃಗಳು ರೂಪಿಸಿ ಪೋಷಿಸಿಕೊಂಡು ಬಂದಿದ್ದ “ ಸ್ವಾವಲಂಬಿ ” ಭಾರತದ ಕನಸನ್ನು ನುಚ್ಚು ನೂರು ಮಾಡಲು ನಾವು “ ಆತ್ಮನಿರ್ಭರ ” ಭಾರತವನ್ನು ನಿರ್ಮಿಸಬೇಕಿದೆ. ನೆಹರೂ ಯುಗದ ಸ್ವಾವಲಂಬನೆಗೂ ಮೋದಿ ಯುಗದ ಆತ್ಮನಿರ್ಭರತೆಗೂ ನಿಘಂಟಿನಲ್ಲಿ ಒಂದೇ ಅರ್ಥ ಕಂಡುಬರುತ್ತದೆ. ಆದರೆ ವಾಸ್ತವ ಭಿನ್ನ. ಸ್ವಾತಂತ್ರ್ಯ ಪೂರ್ವ ದಾರ್ಶನಿಕರು ಕಂಡ ಸ್ವಾವಲಂಬಿ ಭಾರತದಲ್ಲಿ ಈ ದೇಶದ ಸಂಪತ್ತು ಸಮಸ್ತ ಭಾರತೀಯರಿಗೆ ಸೇರಬೇಕು ಎನ್ನುವ ಉದಾತ್ತ ಚಿಂತನೆ ಇತ್ತು. ಇಂದಿನ ಆತ್ಮನಿರ್ಭರತೆ ಈ ಸಂಪತ್ತು ಮತ್ತು ಸಂಪನ್ಮೂಲಗಳನ್ನು ವಸಾಹತುಶಾಹಿಯ ಆಧುನಿಕ ಅವತಾರ ಎನ್ನಬಹುದಾದ ಕಾರ್ಪೋರೇಟ್ ಔದ್ಯಮಿಕ ವಲಯಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ.
ಬ್ರಿಟೀಷ್ ಸಾಮ್ರಾಜ್ಯ ಭಾರತವನ್ನು ಎರಡು ಶತಮಾನಗಳ ದಾಸ್ಯಕ್ಕೆ ಒಳಪಡಿಸಲು ಕಾರಣ ಇಲ್ಲಿನ ರಾಜ ಮಹಾರಾಜರು, ಮೇಲ್ವರ್ಗದ ಶ್ರೀಮಂತ ವ್ಯಾಪಾರಿಗಳು ಈಸ್ಟ್ ಇಂಡಿಯಾ ಕಂಪನಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದು ಎನ್ನುವುದು ಅಳಿಸಲಾಗದ ಇತಿಹಾಸ. ಈ ದಾಸ್ಯದಿಂದ ವಿಮೋಚನೆ ಹೊಂದಿದ ಭಾರತ ತಾನು ಕಳೆದುಕೊಂಡ ಸಂಪನ್ಮೂಲಗಳನ್ನು ಮತ್ತು ನೈಸರ್ಗಿಕ ಆಸ್ತಿಯನ್ನು ಮರಳಿ ಗಳಿಸಲು ಐದಾರು ದಶಕಗಳೇ ಬೇಕಾದವು ಎನ್ನುವುದು ವಾಸ್ತವ.
ಈ ಮರಳಿ ಪಡೆಯುವ ಪ್ರಕ್ರಿಯೆಯಲ್ಲೇ ದೇಶದ ಕೋಟ್ಯಂತರ ಜನತೆಗೆ ಬದುಕು ಕಟ್ಟಿಕೊಳ್ಳಲು ಸೂರು ಒದಗಿಸಿದ ಸಾರ್ವಜನಿಕ ಉದ್ದಿಮೆಗಳು ಸ್ಥಾಪನೆಯಾಗಿದ್ದು ಸಮಕಾಲೀನ ಇತಿಹಾಸ. ಈಗ ಈ ಸಾರ್ವಜನಿಕ ಉದ್ದಿಮೆಗಳು ಒಂದೊಂದಾಗಿ ಕೈಜಾರುತ್ತಿವೆ. ಕರ್ನಾಟಕದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳು ಮತ್ತು ಬ್ಯಾಂಕುಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವುದನ್ನು ಗಮನಿಸುತ್ತಲೇ ಇದ್ದೇವೆ.
ಸಾರಿಗೆ, ಸಂಪರ್ಕ, ಇಂಧನ, ಹಣಕಾಸು, ಸರಕು ಉತ್ಪಾದನೆ, ಕೃಷಿ ಉತ್ಪಾದನೆ, ಹೈನುಗಾರಿಕೆ ಈ ಎಲ್ಲ ಕ್ಷೇತ್ರಗಳಲ್ಲಿ ದುಡಿದ ಕೋಟ್ಯಂತರ ಜೀವಗಳ ಬೆವರಿನ ಹನಿಗಳನ್ನು ನಾವು ಚಲಿಸುವ ರೈಲುಗಳಲ್ಲಿ, ಸಾರ್ವಜನಿಕ ಉದ್ದಿಮೆಗಳ ಬೃಹತ್ ಕಟ್ಟಡಗಳಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಬ್ಯಾಂಕು ಮತ್ತು ವಿಮಾ ವಲಯದ ಫಲಕಗಳಲ್ಲಿ, ದೂರ ಸಂಪರ್ಕದ ತಂತುಗಳಲ್ಲಿ ಕಾಣದೆ ಹೋದರೆ ನಮ್ಮಷ್ಟು ಕೃತಘ್ಞರು ಮತ್ತಾರೂ ಇರಲಾರರು. ಹೌದು ನಾವು ಇದನ್ನು ಮಾನ್ಯ ಮಾಡುತ್ತಿದ್ದೇವೆ.
ಆದರೆ ಈ ಪ್ರತಿಯೊಂದು ಕ್ಷೇತ್ರದ, ವಲಯದ ಉದ್ದಿಮೆಗಳು ಒಂದೊಂದಾಗಿ ನಮ್ಮ ಕೈಜಾರಿ ಮತ್ತದೇ ಉದ್ಯಮಿಗಳ ಪಾಲಾಗುತ್ತಿರುವುದನ್ನು ಕಂಡೂ ಕಾಣದಂತೆ ನಮ್ಮ ಹಿತವಲಯಗಳಲ್ಲಿ ವಿರಮಿಸುತ್ತಿದ್ದೇವೆ. ಇಂದಿನ ಭಾರತದ ಯುವ ಪೀಳಿಗೆಯಲ್ಲಿ ಹರಿಯುತ್ತಿರುವುದೇ ಈ ಸಾರ್ವಜನಿಕ ಉದ್ದಿಮೆಗಳ ಮತ್ತು ಈ ಉದ್ದಿಮೆಗಳನ್ನು ಕಟ್ಟಿ ಬೆಳೆಸಿದ ಕೋಟ್ಯಂತರ ಕಾರ್ಮಿಕರ ನೆತ್ತರು ಮತ್ತು ಬೆವರು ಎನ್ನುವುದನ್ನು ಡಿಜಿಟಲ್ ಯುಗದ “ ಶತಮಾನದ ಮಕ್ಕಳು ” ಅರ್ಥಮಾಡಿಕೊಳ್ಳಬೇಕಿದೆ. ಅವರಿಗೆ ಅರ್ಥಮಾಡಿಸುವ ಜವಾಬ್ದಾರಿ ಇದರ ಮೂಲ ಫಲಾನುಭವಿಗಳ ಮೇಲಿದೆ.
ದುರಂತ ಎಂದರೆ ಈ ಫಲಾನುಭವಿಗಳು ತಮಗೆ ಅನ್ನ ನೀಡಿದ ನೆಲೆಯನ್ನೇ ಮರೆತು ನವ ಉದಾರವಾದದ ಕರಾಳ ಬಾಹುಗಳಲ್ಲಿ ವಿರಮಿಸುತ್ತಿದ್ದಾರೆ. ಕೋವಿದ್ 19 ಸಂದರ್ಭದ ವಲಸೆ ಕಾರ್ಮಿಕರ ಬವಣೆಯೂ ಹಿತವಲಯದ ಮಧ್ಯಮ ವರ್ಗಗಳ ಕಣ್ತೆರೆಸಿಲ್ಲ ಎನ್ನುವುದು ದುರಂತ.
ಇದು ಒಂದು ಸಹಜ ಪ್ರಕ್ರಿಯೆ ಎನ್ನುವಂತೆ ಆಳುವ ವರ್ಗಗಳ ಎಲ್ಲ ನೀತಿಗಳನ್ನೂ ಅಪ್ಪಿಕೊಳ್ಳಲು ಸಿದ್ದರಾಗುತ್ತಿದ್ದಾರೆ. ಈ ನಡುವೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಮತ್ತು “ ಪ್ರಜ್ಞಾವಂತ ” ನಾಗರಿಕರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಕಾರ್ಮಿಕ ನೀತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದರ ಒಂದು ಹೆಜ್ಜೆ ನವಂಬರ್ 26ರ ಸಾರ್ವತ್ರಿಕ ಮುಷ್ಕರ.
ಕಾಕತಾಳಿಯವೇನೋ ಎನ್ನುವಂತೆ ಈ ದಿನ ಎರಡು ಕಾರಣಗಳಿಗಾಗಿ ಮಹತ್ವ ಪಡೆಯುತ್ತದೆ. ಮೊದಲನೆಯದು ಇದು ಸಂವಿಧಾನ ದಿನ. ಅಂದರೆ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮೂಲಕ ಸಮ ಸಮಾಜವನ್ನು ಕಟ್ಟುವ ಕನಸು ಸಾಕಾರಗೊಳಿಸಲು ಭಾರತದ ಸಂವಿಧಾನವನ್ನು ಅಂಗೀಕರಿಸಲಾದ ದಿನ.
ಈ ಮೂರು ಸ್ವಾತಂತ್ರ್ಯಗಳಲ್ಲಿ ಒಂದು ಇಲ್ಲದೆ ಹೋದರೂ ನಮ್ಮ ಕನಸು ನನಸಾಗುವುದಿಲ್ಲ ಎಂಬ ಅಂಬೇಡ್ಕರ್ ಅವರ ಮಾತುಗಳು ಈಗ ನಮಗೆ ಇನ್ನೂ ಹೆಚ್ಚು ಪ್ರಸ್ತುತ ಎನಿಸಬೇಕಲ್ಲವೇ ? ಏಕೆಂದರೆ ಈ ಮೂರೂ ಸ್ವಾತಂತ್ರ್ಯಗಳ ಪರಿಕಲ್ಪನೆಯನ್ನೇ ಅಳಿಸಹಾಕುವಂತಹ ಕರಾಳ ಶಾಸನಗಳ ಪರ್ವ ನಮ್ಮೆದುರು ಬೃಹತ್ ಬಂಡೆಯಂತೆ ನಿಂತಿದೆ.
ಎರಡನೆಯ ಕಾರಣ ಭಾರತದ ಅಖಂಡತೆ ಮತ್ತು ಏಕತೆಗೆ ಧಕ್ಕೆ ಉಂಟುಮಾಡುವಂತಹ ಮುಂಬೈ ಭಯೋತ್ಪಾದಕ ದಾಳಿ ನಡೆದದ್ದು ಇದೇ ದಿನ, 2008ರಲ್ಲಿ. ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸ್ವತಃ ನಾವೇ ಅಲಕ್ಷಿಸಿದ್ದರಿಂದಲೇ 26/11 ನಡೆಯಲು ಸಾಧ್ಯವಾಯಿತು ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕು.
ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ, ಮತಾಂಧತೆ ಮತ್ತು ಮತೀಯ ಉಗ್ರವಾದದ ಬೆಳವಣಿಗೆಯನ್ನು ನೋಡಿದರೆ ಸಂವಿಧಾನ ಕರ್ತೃಗಳ ಮೂಲ ಆಶಯಗಳನ್ನು ನಾವು ಎಷ್ಟು ವ್ಯವಸ್ಥಿತವಾಗಿ ಮಣ್ಣುಪಾಲು ಮಾಡಿದ್ದೇವೆ ಎನ್ನುವುದನ್ನೂ ಗ್ರಹಿಸಬಹುದು. ನಮ್ಮ “ ಆತ್ಮ ನಿರ್ಭರತೆ ” ವ್ಯಕ್ತವಾಗಬೇಕಿರುವುದು ಇಲ್ಲಿ. ಭಾರತದ ಬಹುಸಂಸ್ಕೃತಿಯ ಚೌಕಟ್ಟಿನಲ್ಲಿ ಶತಮಾನಗಳಿಂದ ಇದ್ದ ಸೌಹಾರ್ದತೆಯನ್ನು ಅಡ್ಡಡ್ಡಲಾಗಿ ಸೀಳುವುದರಲ್ಲಿ ಈ ಸಮಾಜೋ ಸಾಂಸ್ಕೃತಿಕ ರಾಜಕೀಯ ಬೆಳವಣಿಗೆಗಳು ಯಶಸ್ವಿಯಾಗಿವೆ.
ಹಾಗೆಯೇ ಮೇಲ್ನೋಟಕ್ಕೆ ಕಾಣಬಹುದಾಗಿದ್ದ ಸೌಹಾರ್ದತೆಯ ನಡುವೆಯೇ ನಮ್ಮ ನಡುವೆ ಇದ್ದ ಜಾತಿ ಶ್ರೇಷ್ಠತೆಯ ವ್ಯಸನ ಮತ್ತು ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮೇಲ್ಜಾತಿಯ ಕ್ರೌರ್ಯವನ್ನು ಅಳಿಸಿ ಹಾಕುವ ಬದಲು ಮತ್ತಷ್ಟು ಗಟ್ಟಿಗೊಳಿಸುತ್ತಿರುವುದನ್ನೂ ಗಮನಿಸಬೇಕಿದೆ. 21ನೆಯ ಶತಮಾನದ ಮೂರನೆಯ ದಶಕವನ್ನು ಪ್ರವೇಶಿಸುತ್ತಿರುವ ಸಂದರ್ಭದಲ್ಲೂ ನಾವು ಅತ್ಯಾಚಾರಕ್ಕೊಳಗಾದ ಹೆಣ್ಣುಮಗುವಿನ ಶವದ ಮೇಲೆ ದೌರ್ಜನ್ಯ ಎಸಗುತ್ತಿರುವುದನ್ನು ನೋಡಿದರೆ ನಮ್ಮೊಳಗಿನ ಕ್ರೌರ್ಯದ ಫಸಲು ಇನ್ನೂ ಹಸನಾಗಿದೆ ಎನಿಸುವುದಿಲ್ಲವೇ ?
ಅನ್ನ ಬೆಳೆಯುವ ರೈತನ ಆಕ್ರಂದನವನ್ನು ಗ್ರಾಂಥಿಕ ಕ್ರೌರ್ಯದ ಮೂಲಕ (ಕರಾಳಶಾಸನಗಳನ್ನು ಹೀಗೆ ಕರೆಯಬಹುದು) ಎದುರಿಸುವ ಒಂದು ವಿಕೃತ ವ್ಯವಸ್ಥೆಯಲ್ಲಿ ನಾವು ನಾಳಿನ ಯೋಚನೆ ಮಾಡುತ್ತಿದ್ದೇವೆ. ಇಲ್ಲಿಯೇ ನಾವು ಮನುಸ್ಮೃತಿಯ ಮರುಹುಟ್ಟನ್ನು ಗುರುತಿಸಬೇಕಿದೆ. ಮನು ಎಂಬ ಹೆಸರಿನ ಋಷಿ ತನ್ನ ಕಾಲಘಟ್ಟದಲ್ಲಿದ್ದ ಉತ್ಪಾದನಾ ಸಂಬಂಧಗಳಿಗೆ ಅನುಗುಣವಾಗಿ ಸಮಾಜದ ನಿರ್ವಹಣೆಗೆ ಸಂಹಿತೆಗಳನ್ನು ರಚಿಸಿದ್ದ. ಆಧುನಿಕ ಭಾರತಕ್ಕೆ ಇದರ ಅವಶ್ಯಕತೆ ಇಲ್ಲ ಎನ್ನುವ ಕಾರಣಕ್ಕಾಗಿಯೇ ಅಂಬೇಡ್ಕರ್ ಅದನ್ನು ಸಾಂಕೇತಿಕವಾಗಿ ಸುಟ್ಟುಹಾಕಿದ್ದರು.
ಇಂದು ಮನುಸ್ಮೃತಿಯ ಅತ್ಯಾಧುನಿಕ ಅವತಾರವನ್ನು ಹಥ್ರಾಸ್ ಘಟನೆಯಲ್ಲಿ, ವಿದ್ಯುನ್ಮಾನ ಸುದ್ದಿಮನೆಗಳಲ್ಲಿ, ಶಾಸಕಾಂಗ ಸಭೆಗಳಲ್ಲಿ, ಸಂಸತ್ ಭವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮತ್ತು ಕೆಲವು ಸಂದರ್ಭಗಳಲ್ಲಿ ನ್ಯಾಯ ವ್ಯವಸ್ಥೆಯ ಅಂಗಳದಲ್ಲೂ ಕಾಣುತ್ತಿದ್ದೇವೆ. ಶೋಷಿತ ಸಮುದಾಯಗಳು ಮತ್ತು ಶ್ರಮಜೀವಿ ವರ್ಗಗಳು, ಈ ಎರಡರ ನಡುವೆ ಇರುವ ರೇಖೆ ಬರಿಗಣ್ಣಿಗೆ ಕಾಣಿಸದಷ್ಟು ತೆಳುವಾಗಿದೆ.
26/11ರಂದು ನಡೆದ ದಾಳಿ ದೇಶದ ಜನತೆಯನ್ನು ಕೆಲವು ವರ್ಷಗಳ ಕಾಲ ತಲ್ಲಣಗೊಳಿಸಿತ್ತು. ಆದರೆ ಇಂದು ನವ ಉದಾರವಾದದ ದಾಳಿ ದೇಶದ ಬಹುಸಂಖ್ಯೆಯ ಜನತೆಯನ್ನು ತಲ್ಲಣಗೊಳಿಸುತ್ತಿದೆ. ಈ ಗ್ರಾಂಥಿಕ ದಾಳಿಗೆ ಕೋಟ್ಯಂತರ ಶ್ರಮಜೀವಿಗಳು ತತ್ತರಿಸಿಹೋಗಲಿದ್ದಾರೆ, ಬೀದಿ ಪಾಲಾಗಲಿದ್ದಾರೆ. ನವ ಭಾರತದ ನಿರ್ಮಾಣಕ್ಕೆ ಇದು ಅತ್ಯವಶ್ಯ ಎನ್ನುವುದಾರೆ ಆ ನವಭಾರತದ ನವ ಸ್ವರೂಪವನ್ನು ನಾವು ತಿರಸ್ಕರಿಸಬೇಕಾಗುತ್ತದೆ.
ಕಾರ್ಮಿಕ ಕಾನೂನುಗಳನ್ನು ಸಂಕುಚಿತಗೊಳಿಸುವ ಮೂಲಕ ದುಡಿಮೆಯ ಕೈಗಳನ್ನು ಮತ್ತೊಮ್ಮೆ ಔದ್ಯಮಿಕ ಸಂಕೋಲೆಗಳಲ್ಲಿ ಬಂಧಿಸಲು ಹೊರಟಿರುವ ಭಾರತದ ಆಳುವ ವರ್ಗಗಳು, ಭಾರತದ ಬೆನ್ನೆಲುಬು ಎಂದೇ ಹೇಳಲಾಗುವ ಕೃಷಿ ಕ್ಷೇತ್ರವನ್ನೂ ಉದ್ಯಮಪತಿಗಳಿಗೆ ಪರಭಾರೆ ಮಾಡುವ ಮೂಲಕ ಶೇ 60ರಷ್ಟು ಜನಸಂಖ್ಯೆಯ ಮೇಲೆ ದಾಳಿ ನಡೆಸುತ್ತಿದೆ.
ದೇಶದ ಶೈಕ್ಷಣಿಕ ಸಂಪತ್ತನ್ನೂ ಸಹ ಬಹುತ್ವದ ನೆಲೆಗಳಿಂದ ದೂರ ಮಾಡಿ, ವರ್ಣಾಶ್ರಮ ಧರ್ಮವನ್ನು ಪುನರ್ ಸ್ಥಾಪಿಸಿ, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೋರೇಟ್ ಉದ್ಯಮಿಗಳಿಗೆ ವಹಿಸುವ ಸೂಚನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಾಣಬಹುದಾಗಿದೆ. ಸಂಸತ್ತಿನಲ್ಲಿ ಚರ್ಚೆಯಿಲ್ಲದೆ ಅನುಮೋದನೆಯಾಗಿರುವ ಈ ಕರಾಳ (!) ಶಾಸನಗಳಿಗೂ, ಎಲ್ಲ ರಾಜಕೀಯ ಪಕ್ಷಗಳೂ ಅನುಮೋದಿಸುವ ಯುಎಪಿಎ ಮುಂತಾದ ಕರಾಳ ಶಾಸನಗಳಿಗೆ ವ್ಯತ್ಯಾಸವೇನಾದರೂ ಇದ್ದರೆ ಅದು ಗ್ರಾಂಥಿಕ ಮಾತ್ರ. ಎರಡೂ ಸಹ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಅಸ್ತ್ರಗಳೇ ಆಗಿವೆ.
ಈ ಎರಡು ಅಸ್ತ್ರಗಳ ವಿರುದ್ಧ ಸ್ವಾವಲಂಬಿ ಭಾರತಕ್ಕೆ ಬದ್ಧರಾಗಿರುವ ಪ್ರತಿಯೊಬ್ಬ ನಾಗರಿಕನೂ ದನಿ ಎತ್ತಬೇಕಿದೆ. ದೇಶದ ಬಹುಸಂಖ್ಯೆಯ ಜನರ ಬದುಕಿಗೆ ಅವಶ್ಯವಾದ ಸ್ವಾವಲಂಬನೆಯನ್ನು ಬಲಿಕೊಟ್ಟು, ಬೆರಳೆಣಿಕೆಯಷ್ಟು ಶ್ರೀಮಂತರ ಸ್ವಾವಲಂಬನೆಗೆ ಅವಕಾಶ ಮಾಡಿಕೊಡುವ “ ಆತ್ಮನಿರ್ಭರ ” ಭಾರತ ಭಾರತವನ್ನು ಮತ್ತೊಂದು ರೀತಿಯ ದಾಸ್ಯಕ್ಕೆ ದೂಡುತ್ತದೆ.
ಭೌಗೋಳಿಕವಾಗಿ ಭಾರತ ಸಂಕೋಲೆಗಳಿಂದ ಮುಕ್ತವಾಗಿಯೇ ಇದ್ದರೂ, ಬೌದ್ಧಿಕವಾಗಿ ಈ ದೇಶದ ಕೋಟ್ಯಂತರ ಶೋಷಿತರು, ಅವಕಾಶವಂಚಿತರು, ಅಂಚಿಗೆ ತಳ್ಳಲ್ಪಟ್ಟಿರುವವರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇಂದಿಗೂ ಹೋರಾಡುತ್ತಿರುವ ದಮನಿತರು ಕಾರ್ಪೋರೇಟ್ ದಾಸ್ಯಕ್ಕೆ ಒಳಗಾಗಲಿದ್ದಾರೆ. ಇದು ನಮ್ಮ ಮುಂದಿರುವ ಅಪಾಯ.
ಒಂದು ಸುಂದರ ಸೌಧ ನಿರ್ಮಾಣವಾಗುತ್ತಿದೆ ಒಂದು ಅಂಗುಲ ಭೂಮಿ ಕೊಟ್ಟರೆ ತಪ್ಪೇನಿಲ್ಲ ಎಂದು ಹೇಳುವ ಕಾಲ ಇದಲ್ಲ. ಈ ಸೌಧದ ಅಡಿಪಾಯಕ್ಕೆ ಭೂಮಿ ಕೊಟ್ಟವರ ಎಲುಬುಗಳನ್ನೇ ಅಸ್ತಿಭಾರದಂತೆ ಬಳಸಲಾಗುತ್ತದೆ. ಇದು ನವ ಉದಾರವಾದದ ನೀತಿ. ಮೂರು ದಶಕಗಳ ನವ ಉದಾರವಾದಿ ನೀತಿಯ ಪರಿಣಾಮ ಈಗಾಗಲೇ ನಾವು ನೆಲೆ ಕಳೆದುಕೊಂಡಿದ್ದೇವೆ.
ಈಗ ಸಮಾಜೋ ಸಾಂಸ್ಕೃತಿಕ ನೆಲೆಗಳೂ ಧ್ವಂಸವಾಗುತ್ತಿವೆ. ಮತಾಂಧತೆ, ಜಾತಿ ಪ್ರಜ್ಞೆ ಮತ್ತು ಬಂಡವಾಳದ ಮೈತ್ರಿಯ ಎದುರು ಈ ದೇಶದ ದುಡಿಯುವ ವರ್ಗಗಳು ಹೋರಾಡಬೇಕಿದೆ. ಹಾಗಾಗಿಯೇ ನವಂಬರ್ 26ರ ಸಾರ್ವತ್ರಿಕ ಮುಷ್ಕರ ನಿರ್ಣಾಯಕವಾಗಲಿದೆ.
ಕೊನೆಯ ಹನಿ : ಬ್ರಿಟೀಷರು, ಫ್ರೆಂಚರು, ಡಚ್ಚರು ಮತ್ತು ಪೋರ್ಚುಗೀಸರು ಭಾರತದ ಸಂಪತ್ತನ್ನು ಕೊಳ್ಳೆಹೊಡೆಯಲು ಪ್ರವೇಶಿಸಿದಾಗ ಪ್ರತಿಯೊಂದು ಸಂಸ್ಥಾನದ ರಾಜ/ಸಾಮಂತರೂ ಯೋಚಿಸಿದ್ದು “ ಪಕ್ಕದ ಸಂಸ್ಥಾನ ಅವರ ಪಾಲಾಗಿದೆ ನಾನು ಸುರಕ್ಷಿತ ” ಎಂದು. ನಂತರ ನಡೆದದ್ದು ಇತಿಹಾಸ. ಈಗ ಭಾರತದ ದುಡಿಯುವ ವರ್ಗಗಳಲ್ಲೂ ಇದೇ ರೀತಿಯ “ ನಮ್ಮ ದುಡಿಮೆಯ ವಲಯ/ಕ್ಷೇತ್ರ/ಸಂಸ್ಥೆ ಸುರಕ್ಷಿತವಾಗಿದೆ ” ಎನ್ನುವ ಮನೋಭಾವ ಇದೆ. ಮತ್ತೊಮ್ಮೆ ದಾಸ್ಯಕ್ಕೊಳಗಾಗುವ ಮುನ್ನ,,,,,,,,,ಎಚ್ಚೆತ್ತುಕೊಳ್ಳಲು ನವಂಬರ್ 26ರ ದನಿಗೆ ದನಿಗೂಡಿಸೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರಿರುವ ಪ್ರತಿ ಕಾರ್ಡಿಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಪ್ರತಿ ಕಾರ್ಡಿಗೆ 50 ಕೆ.ಜಿ ಅಕ್ಕಿ, 6 ಸದಸ್ಯರಿರುವ ಪ್ರತಿ ಕಾರ್ಡಿಗೆ 60 ಕೆ.ಜಿ ಅಕ್ಕಿ, 7 ಸದಸ್ಯರಿರುವ ಪ್ರತಿ ಕಾರ್ಡಿಗೆ 70 ಕೆ.ಜಿ ಅಕ್ಕಿ, 8 ಸದಸ್ಯರಿರುವ ಪ್ರತಿ ಕಾರ್ಡಿಗೆ 80 ಕೆ.ಜಿ ಅಕ್ಕಿ, 9 ಸದಸ್ಯರಿರುವ ಪ್ರತಿ ಕಾರ್ಡಿಗೆ 90 ಕೆ.ಜಿ, 10 ಸದಸ್ಯರಿರುವ ಪ್ರತಿ ಕಾರ್ಡಿಗೆ 100 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ
ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು ಒದಗಿಸುವುದು ಅಷ್ಟೇ ಸಾಕಾಗುವುದಿಲ್ಲ. ಜನರಿಗೆ ಸರಿಯಾದ ಪ್ರಮಾಣದ, ಗುಣಮಟ್ಟದ, ಸುರಕ್ಷಿತ ಮತ್ತು ಪೌಷ್ಟಿಕ ಆಹಾರವನ್ನು ಸಮುದಾಯದ ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಆಹಾರವನ್ನು ಒದಗಿಸಿದಾಗ ಮಾತ್ರ ಆಹಾರ ಭದ್ರತೆಯನ್ನು ಕೊಟ್ಟಿದ್ದೇವೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದು ಆಹಾರ ಭದ್ರತಾ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಅವರು ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿ ನಮ್ಮ ರಾಜ್ಯ ಆಹಾರ ಆಯೋಗಕ್ಕೆ ಇದೆ. ಈ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಬೇಕಾದರೆ, ಇಲ್ಲಿ ಹಾಜರಿರುವ ಎಲ್ಲಾ ಇಲಾಖೆಗಳು ಸಮನ್ವಯ ಮತ್ತು ಸಹಕಾರದ ಮನೋಭಾವದಿಂದ ಕಾರ್ಯನಿರ್ವಹಿಸಬೇಕು. ವಿವಿಧ ಇಲಾಖೆಗಳ ನಡುವೆ ಈ ರೀತಿಯ ಸಮನ್ವಯವನ್ನು ಸಾಧಿಸಲು ಆಹಾರ ಭದ್ರತಾ ಕಾಯ್ದೆಯ ಜಾರಿಯಲ್ಲಿ ಕುಂದುಕೊರತೆ ನಿವಾರಣಾ ಅಧಿಕಾರಿಗಳಾದ ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಅವರ ಕಚೇರಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.
ಸುರಕ್ಷಿತ ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ ಸೇವೆಗಳ ಲಭ್ಯತೆ, ಗುಣಮಟ್ಟದ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳು ಪ್ರಮುಖವಾದಂತಹ ವಿಷಯಗಳು. ಇದರ ಜೊತೆಗೆ ಸಾಮಾಜಿಕ, ದೈಹಿಕ ಹಾಗೂ ಆರ್ಥಿಕ ದುರ್ಬಲತೆಗಳ ಬಗ್ಗೆ ಸ್ಪಷ್ಟವಾದ ಗಮನಹರಿಸುವುದು ಅತ್ಯಂತ ಅವಶ್ಯಕ. ಲಿಂಗ, ಜಾತಿ, ವರ್ಗ, ಉದ್ಯೋಗದ ಆಧಾರದ ಅಸಮಾನತೆಗಳು ಮತ್ತು ಬಡತನ ಈ ಸವಾಲುಗಳನ್ನು ಯಾವಾಗಲೂ ನಮ್ಮ ದೇಶವನ್ನ, ರಾಜ್ಯದಲ್ಲಿ ಇರುವಂತಹ ಸಮಸ್ಯೆಗಳು. ಆದ್ದರಿಂದ ರಾಜ್ಯದಲ್ಲಿ ಆಹಾರ ಅಭಾವ ಮತ್ತು ಅಪೌಷ್ಟಿಕತೆಯನ್ನು ನಿರ್ಮೂಲನೆಗೊಳಿಸಬೇಕಾದರೆ ನಾವು, ನೀವೆಲ್ಲರೂ ಒಟ್ಟಾಗಿ ಸೇರಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಮತ್ತೊಂದು ಪ್ರಮುಖ ಅಂಶವೆಂದರೆ ಜೀವನ ಚಕ್ರ ದೃಷ್ಟಿಕೋನ. ಗರ್ಭಧಾರಣೆಯಿಂದ ಆರಂಭಿಸಿ ಜನನ, ಬಾಲ್ಯ, ಯೌವ್ವನ, ಪ್ರೌಢಾವಸ್ಥೆ ಹಾಗೂ ವೃದ್ಧಾಪ್ಯದವರೆಗೆ ಮಾನವನ ಜೀವನದ ಎಲ್ಲಾ ಹಂತಗಳ ಅಗತ್ಯಗಳನ್ನು ಈ ಕಾಯ್ದೆ ಗಮನದಲ್ಲಿಟ್ಟುಕೊಂಡಿದೆ. ಒಂದು ಹಕ್ಕು ಆಧಾರಿತ ಕಾನೂನು. ಅಂದರೆ ಐ.ಸಿ.ಡಿ.ಎಸ್ (ICDS), ಅಂಗನವಾಡಿ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಟಿ.ಪಿ.ಡಿ.ಎಸ್ (TPDS) ಮತ್ತು ಮಾತೃತ್ವದ ಹಕ್ಕುಗಳು. ಈ ನಾಲ್ಕು ಯೋಜನೆಗಳ ಮೂಲಕ ದೊರೆಯುವ ಸೇವೆಗಳು ಈಗ ಕಾನೂನಾತ್ಮಕವಾಗಿ ಬೇಡಿಕೆ ಇಡಬಹುದಾದ ಹಕ್ಕುಗಳಾಗಿವೆ. ಆದ್ದರಿಂದ ಅನುಷ್ಠಾನದಲ್ಲಿ ಜನರನ್ನು ಕೇಂದ್ರಬಿಂದುವಾಗಿ ಇಟ್ಟುಕೊಂಡು ವ್ಯವಸ್ಥೆಯನ್ನು ಜವಾಬ್ದಾರಿಯುತ, ಪಾರದರ್ಶಕ ಹಾಗೂ ಸಮಾನತೆಯ ತತ್ವದ ಮೇಲೆ ಕಾರ್ಯ ನಿರ್ವಹಿಸಬೇಕು, ಅನ್ನೋದು ನನ್ನ ನಂಬಿಕೆ ಎಂದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಆಹಾರ ಸುರಕ್ಷತೆ ಹಾಗೂ ಅದರೊಂದಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಅಪಾರ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂದು ಭಾವಿಸಿದ್ದೇನೆ. ಎಲ್ಲರೂ ಒಟ್ಟಾಗಿ ಬದ್ಧತೆಯಿಂದ ಹಕ್ಕು ಆಧಾರಿತ ದೃಷ್ಟಿಕೋನದೊಂದಿಗೆ ಈ ಕಾಯ್ದೆಯನ್ನು ಅದರ ನಿಜವಾದ ಅರ್ಥದಲ್ಲಿ ಜಾರಿಗೆ ತಂದರೆ ಆಹಾರದ ಹಕ್ಕನ್ನು ಸಹಕಾರಗೊಳಿಸುವಲ್ಲಿ ಕರ್ನಾಟಕ ಮುಂಚೂಣಿ ರಾಜ್ಯವಾಗುವುದು. ಭಾರತದಲ್ಲಿ ಆಹಾರ ಭದ್ರತೆ, ಅದು ಹಕ್ಕು ಎಂಬ ತತ್ವದ ಮೇಲೆ ಆಧಾರಿತವಾಗಿದೆ. ಈ ಹಕ್ಕಿಗೆ ಕಾನೂನಾತ್ಮಕ ಬಲ ನೀಡಿದ ಮಹತ್ವದ ಕಾಯ್ದೆ ಈ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ,
ಕೇಂದ್ರ ಅಥವಾ ರಾಜ್ಯ ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯತಿ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸರಿಯಾಗಿ ಜಾರಿಗೆ ಬರಬೇಕು. ಅದಕ್ಕೆ ಅಧಿಕಾರಿಗಳು ಆಹಾರದ ಹಕ್ಕುಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಅವರ ಸಮಸ್ಯೆಗಳನ್ನ ಕೇಳಬೇಕು. ದೂರುಗಳಿದ್ದರೆ ಅದನ್ನ ಸರಿಮಾಡಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಮಾತನಾಡಿ ತೂಕದಲ್ಲಿನ ಮೋಸವನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ತರಲು, ಅಂಗಡಿಗಳಲ್ಲಿ ‘ಜಿಯೋ ಫೆನ್ಸಿಂಗ್’ (Geo-fencing) ತಂತ್ರಜ್ಞಾನವನ್ನು ಅಳವಡಿಸುವುದು ಅವಶ್ಯಕ, ಇದು ಅಂಗಡಿಯ 10 ಮೀಟರ್ ಒಳಗೆ ಮಾತ್ರ ವ್ಯವಹಾರ ನಡೆಯುವಂತೆ ಮಾಡುತ್ತದೆ, ಈವರೆಗೆ ತೂಕದಲ್ಲಿ ವ್ಯತ್ಯಾಸ ಮತ್ತು ಇತರ ಅಕ್ರಮಗಳಿಗಾಗಿ ಸುಮಾರು 23 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳ ತಂಡೊಂದಿಗೆ ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಬಡ ಜನರಿಗೆ ಸಿಗಬೇಕಾದ ಪಡಿತರ ಸರಿಯಾದ ತೂಕದಲ್ಲಿ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಸಭೆಗೆ ತಿಳಿಸಿದರು.
ಆಹಾರ ಭದ್ರತಾ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ , ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣ, ಕೆ.ಎಸ್. ವಿಜಯಲಕ್ಷ್ಮಿ, ರೋಹಿಣಿ ಪ್ರಿಯಾ, ಸದಸ್ಯ ಕಾರ್ಯದರ್ಶಿ ಮತ್ತು ಅಪರ ನಿರ್ದೇಶಕರಾದ ಸುಜಾತಾ ಹೊಸಮನಿ , ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243


