ಸಿನಿ ಸುದ್ದಿ
ಈ ಶತಮಾನದ ಮಾದರಿ ಹೆಣ್ಣು..!
ಟಿವಿ9 ನ ‘ಮಾರುವೇಷ’ ಸರಣಿಯಲ್ಲಿ ಈಗಷ್ಟೇ ಒಂದು ಒಳ್ಳೆಯ ಕಾರ್ಯ ಕ್ರಮ ನೋಡಿದೆ…
ಅದು ,ಒಂದು ಕಾಲದಲ್ಲಿ ಅತ್ಯುತ್ತಮ ನಟಿಯಾಗಿ 125ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿ,ಇದ್ದಕ್ಕಿದ್ದಂತೇ 1986ರಲ್ಲೇ ಬಣ್ಣದ ಬದುಕಿಗೆ ವಿದಾಯ ಹೇಳಿ,ನಿಜ ಬದುಕಿನಲ್ಲಿ ಸಾಮಾಜಿಕ ಕಳಕಳಿಯಿಂದ ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಸಂಪಾದಿಸಿದ್ದೆಲ್ಲವನ್ನೂ ಬಡವರ ಕಣ್ಣೀರೊರೆಸಲು ವಿನಿಯೋಗಿಸುತ್ತಿರುವ ಶ್ರೇಷ್ಠ ನಟಿ,ಅಭಿನೇತ್ರಿ ಆರತಿಯವರ ಸಾರ್ಥಕ ಬದುಕಿನ ಕತೆ..!!
ನಾಯಕಿ ನಟಿಯಾಗಿ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ, ಸಿನಿಮಾದ ಆಕರ್ಷಕ ಬಣ್ಣದ ಲೋಕಕ್ಕೆ ವಿದಾಯ ಹೇಳುವುದು ಸುಲಭದ ಮಾತಲ್ಲ.ಪ್ರೀತಿಸಿ ಕೈ ಹಿಡಿದ ಪುಟ್ಟಣ್ಣ ಕಣಗಾಲರೂ ದೂರವಾಗಿದ್ದರು.ಮಗಳು ಯಶಸ್ವಿನಿಯನ್ನು ಆಯಾಳ ಕೈಗೊಪ್ಪಿಸಿ ದಿನಗಟ್ಟಲೆ ಶೂಟಿಂಗಿಗೆ ತೆರಳಬೇಕಾದ ಅನಿವಾರ್ಯತೆ. ಆದರೆ ಅದೊಂದು ದಿನ ತಡ ರಾತ್ರಿ ಶೂಟಿಂಗ್ ಮುಗಿಸಿ ಬಂದಾಗ, ಮಗಳ ಒಂಟಿತನದ ಆಕ್ರಂದನ ಅದೆಷ್ಟು ತೀವ್ರವಾಗಿ ಆ ತಾಯಿಯ ಕರುಳನ್ನು ಇರಿಯಿತೆಂದರೆ,ಆ ಕ್ಷಣದಲ್ಲಿ ಮಗಳ ತಲೆ ಮೇಲೆ ಕೈಯಿಟ್ಟು ಇನ್ನೆಂದೂ ಬಣ್ಣ ಹಚ್ಚುವುದಿಲ್ಲವೆಂದು ಪ್ರಮಾಣ ಮಾಡಿದರು..!!
ಪಡೆದಿದ್ದ ಎಲ್ಲ ಅಡ್ವಾನ್ಸ್ ಹಣವನ್ನೂ ನಿರ್ಮಾಪಕರಿಗೆ ಹಿಂತಿರುಗಿಸಿದರು..!!
ಬಣ್ಣದ ಬದುಕಿಂದ ದೂರವಾಗಿ ಸರಳ ಬದುಕನ್ನಪ್ಪಿಕೊಂಡು ಅಜ್ಞಾತವಾಗಿರಬಯಸಿದ ಆರತಿ ಸುಮ್ಮನೇ ಕೂರಲಿಲ್ಲ..ತಾನು ದುಡಿದ ಅಷ್ಟೂ ಹಣವನ್ನು ಸಮಾಜ ಸೇವೆಗೆ ವಿನಿಯೋಗಿಸಿದರು.
ಅದೇ ಸಮಯದಲ್ಲಿ ಪರಿಚಯವಾದ ಸೇವಾ ಮನೋಭಾವದ ಹಾರ್ಡ್ ವೇರ್ ಇಂಜಿನಿಯರ್ ಚಂದ್ರಶೇಖರ ದೇಸಾಯಿ ಗೌಡರ ರನ್ನು ಮದುವೆಯಾಗಿ ಅಮೇರಿಕಾದಲ್ಲಿದ್ದುಕೊಂಡೇ ತನ್ನ ಸಾಮಾಜಿಕ ಸೇವಾ ಕ್ಷೇತ್ರದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು..!!
ಬೆಂಗಳೂರಿನಲ್ಲಿದ್ದ ತನ್ನ ಪ್ರೀತಿಯ ಬಂಗಲೆ “ಬೆಳ್ಳಿತೆರೆ”ಯನ್ನೂ ಮಾರಿ ಬಂದ 15 ಕೋಟಿ ರೂಪಾಯಿ ಅಷ್ಟನ್ನೂ ಸಮಾಜ ಸೇವೆಗೆ ವಿನಿಯೋಗಿಸಿದರು. ಆರತಿಯವರಿಗೆ ಸಮಾಜಸೇವೆಗೆ ಪ್ರೇರಣೆ ನೀಡಿದ್ದು ಚಾಮರಾಜನಗರದಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪನವರ ಮಗ ಜಿ.ಎಸ್.ಜಯದೇವ ನಡೆಸುತ್ತಿರುವ ‘ದೀನಬಂಧು’ ಮಕ್ಕಳ ಮನೆ. ಆ ಅನಾಥಾಶ್ರಮಕ್ಕೆ ವಿಶಾಲ ಹಾಸ್ಟೆಲ್ ಕಟ್ಟಡ ಕಟ್ಟಿಸಿ ಕೊಟ್ಟಿದ್ದಲ್ಲದೆ, ಎರಡು ಕೋಟಿ ರೂ.ಠೇವಣಿಯಿರಿಸಿ ಅದರ ಬಡ್ಡಿಯನ್ನು ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ವಿನಿಯೋಗಿಸುತ್ತಿದ್ದಾರೆ. ನಲುವತ್ತು ಶಾಲೆಗಳನ್ನು ದತ್ತು ಪಡೆದು ಅಷ್ಟೂ ಶಾಲೆಗಳ ಬಡ ಮಕ್ಕಳ ಖರ್ಚುವೆಚ್ಚ ಭರಿಸುತ್ತಿದ್ದಾರೆ..!!
ಆರತಿ-ಚಂದ್ರಶೇಖರ ದಂಪತಿಗಳ ಸೇವಾ ಕಾರ್ಯ ಇಷ್ಟಕ್ಕೇ ನಿಲ್ಲುವುದಿಲ್ಲ.ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಆ ಹಳ್ಳಿಗೆ ಶೌಚಾಲಯ,ಆಸ್ಪತ್ರೆ,ಶಾಲೆ ಹೆಣ್ಣು ಮಕ್ಕಳಿಗೆ ಸ್ವಉದ್ಯೋಗ ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ..!!
ಚಿತ್ರರಂಗದಲ್ಲಿದ್ದಾಗಿನ ಅವರ ಸಹಜ ವೈವಾಹಿಕ, ಪ್ರೇಮ ಕತೆಗಳು ಏನಾದರೂ ಇರಲಿ.ನನಗೆ ಅಚ್ಚರಿಯೆನಿಸುವುದು ಅದಲ್ಲ..
ಇಷ್ಟೆಲ್ಲ ಕೋಟಿಗಟ್ಟಲೆ ಮೊತ್ತವನ್ನು ನಿಸ್ವಾರ್ಥ ಭಾವದಿಂದ ಸಾಮಾಜಿಕ ಸೇವೆಗಾಗಿ ವಿನಿಯೋಗಿಸುತ್ತಿದ್ದರೂ, ಯಾರ ಕಣ್ಣಿಗೂ ಬೀಳದೇ,ಸಾರ್ವಜನಿಕರು,ಪತ್ರಿಕೆಯವರು,ಕೊನೆಗೆ ತನ್ನನ್ನು ಬೆಳೆಸಿದ ಚಿತ್ರಂಗದವರಿಂದಲೂ ದೂರವಾಗಿ ಅಜ್ಞಾತರಾಗಿಯೇ ಉಳಿಯಬೇಕೆನ್ನುವ ಅವರ ದಿವ್ಯ ನಿರ್ಲಿಪ್ತ ಮನೋಭಾವ..!!
ಬಹುಶಃ ‘ದೀನಬಂಧು’ಮನೆಯ ಜಯದೇವರಲ್ಲದಿದ್ದರೆ ಆರತಿಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲವೇನೋ.ಹತ್ತು ವರ್ಷಗಳ ಹಿಂದೆ ನಾನು ಚಾಮರಾಜನಗರದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕನಾಗಿದ್ದಾಗ ಜಯದೇವ್ ಅವರ ದೀನಬಂಧು ಮಕ್ಕಳ ಮನೆಯ ಜೊತೆ ನಿಕಟವಾಗಿದ್ದೆ. ಆಗ ಒಮ್ಮೆ ಜಯದೇವ್ ಅವರು ಆರತಿಯವರ ಸೇವಾ ಕಾರ್ಯದ ಬಗ್ಗೆ ಹೇಳಿದ್ದರು. ಮುಂದಿನ ಸಲ ಆರತಿಯವರು ಬಂದಾಗ ನಾನು ಭೇಟಿ ಮಾಡಬಹುದಾ ಅಂತ ಕೇಳಿದಾಗ ಆರತಿಯವರು ಯಾರನ್ನೂ ಭೇಟಿಯಾಗಲು ಇಷ್ಟ ಪಡುವುದಿಲ್ಲ ಎಂದರು..!! ಆದರೆ ಆಗಲೂ ನನಗೆ ಆರತಿಯವರ ವೈಯಕ್ತಿಕ ಬದುಕಿನ ಬಗೆಗಾಗಲಿ, ಸೇವಾಗಾತ್ರ ಇಷ್ಟೊಂದು ದೊಡ್ಡದಿದೆಯೆಂದಾಗಲಿ ಗೊತ್ತಿರಲಿಲ್ಲ..
ಟಿವಿ9 ಹೇಳಿದಂತೆ, ಕೆಲವು ವರ್ಷಗಳ ಹಿಂದೆ ಎಸ್.ಜಿ.ತುಂಗರೇಣುಕ ಅನ್ನುವ ಹಿರಿಯ ಪತ್ರಕರ್ತೆಯಿಂದಾಗಿ ಆರತಿಯವರ ಕುರಿತು ಮಾಹಿತಿ ದೊರೆಯುವಂತಾಯಿತು. ರೇಣುಕ ಅವರಿಗೂ ಆರತಿಯವರ ಭೇಟಿ ಅಷ್ಟು ಸುಲಭದಲ್ಲಿ ಸಿಗಲಿಲ್ಲ. ಜಯದೇವರ ಮೂಲಕ ಭೇಟಿಗೆ ಪ್ರಯತ್ನಿಸಿದರೂ ಆರತಿಯವರು ಭೇಟಿ ನಿರಾಕರಿಸಿದರು.ಕೊನೆಗೂ ಜಯದೇವರ ಒತ್ತಾಯಕ್ಕೆ ಮಣಿದು ಭೇಟಿಗೆ ಅವಕಾಶ ದೊರೆಯಿತು..!! ಬಹುಶಃ ಆ ಭೇಟಿಯಿಂದಾಗಿ ಆರತಿಯವರ ಅತ್ಯಂತ ಸರಳಬದುಕಿನ, ಆದರೆ ಸಮಾಜ ಸೇವೆಯ ಶ್ರೀಮಂತಿಕೆಯ ವಿವರಗಳು ಲಭ್ಯವಾದವು..!! ಆ ನಂತರವೂ ಅವರು ಯಾರಿಗೂ ಸಂದರ್ಶನ ಭೇಟಿಗೆ ಅವಕಾಶ ನೀಡಲಿಲ್ಲ..
ಇವತ್ತು ಕೋಟಿಗಟ್ಟಲೆ ದಾನ ಮಾಡುವ ಅನೇಕ ಸಂಸ್ಥೆಗಳು,ಶ್ರೀಮಂತ ವ್ಯಕ್ತಿಗಳು ಚಿತ್ರರಂಗದ ವರು ನೂರಾರು ಮಂದಿ ಇರಬಹುದು.ಆದರೆ ಎಲ್ಲ ಬಗೆಯ ಪ್ರಚಾರದಿಂದಲೂ ದೂರವಿದ್ದು, ತಾನು ಸಮಾಜದಿಂದ ಪಡೆದದ್ದೆಲ್ಲವನ್ನೂ ಮತ್ತೆ ಸಮಾಜಕ್ಕೆ ಮರಳಿಸುವ ಸರಳ,ನಿಸ್ರೃಹ ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡಿಪಾಗಿಸಿಕೊಂಡ ಆರತಿಯವರಂತಹ ವ್ಯಕ್ತಿಗಳು ಹೆಚ್ಚು ಮಂದಿ ಸಿಗುವುದಿಲ್ಲ..!! ಚಂದ್ರಶೇಖರರ ಹೆಸರಾದರೂ ಅವರ ಟ್ರಸ್ಟಿನಲ್ಲಿದೆ. ಆರತಿಯವರ ಹೆಸರು ಎಲ್ಲೂ ಕಾಣಿಸುವುದಿಲ್ಲ..!!
ನಿಜಕ್ಕೂ ಆರತಿಯವರು- ” ಈ ಶತಮಾನದ ಮಾದರಿ ಹೆಣ್ಣು..!!”
ಹ್ಯಾಟ್ಸಾಫ್ ಆರತಿಯವರೇ..
(ಲೇಖನ ಕೃಪೆ : ವಾಟ್ಸಾಪ್)
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ
ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.
ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.
ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.
ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
JOB NEWS | ಡಿ.ಇಡಿ ಮತ್ತು ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
-
ಅಂತರಂಗ7 days ago
ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
-
ದಿನದ ಸುದ್ದಿ6 days ago
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
-
ದಿನದ ಸುದ್ದಿ7 days ago
ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
-
ದಿನದ ಸುದ್ದಿ7 days ago
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
-
ದಿನದ ಸುದ್ದಿ6 days ago
ಭಾರೀ ಮಳೆ ; ಡ್ಯಾಂಗಳಿಗೆ ಹರಿದು ಬಂದ ನೀರೆಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ
-
ಅಂತರಂಗ5 days ago
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ