Connect with us

ರಾಜಕೀಯ

ಬಲಪಂಥದತ್ತ ಜಾಗತಿಕ ಪಲ್ಲಟದ ಈ ಸಮಯ

Published

on

  • ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಬಲಪಂಥದ ಬೆಳವಣಿಗೆಗೆ ಅದು ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು. ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ-ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಸ್ಪಷ್ಟ.

ಮೋದಿಯವರ ಪುನರಾಯ್ಕೆಯು, ಜಗತ್ತು ಬಲ ಪಂಥಾಭಿಮುಖವಾಗಿ ಸರಿಯುತ್ತಿರುವ ವಿದ್ಯಮಾನದ ಒಂದು ಭಾಗವಾಗಿದೆ ಎಂಬ ಆಯಾಮವನ್ನು ನಾವು ಗಮನಿಸುವುದೇ ಇಲ್ಲ. ಹಾಗಾಗಿ, ಮೋದಿಯವರ ಪುನರಾಯ್ಕೆಯ ಬಗ್ಗೆ ನಾವು ಚರ್ಚಿಸುವಾಗ, ಇಡೀ ಜಗತ್ತೇ ಬಲಕ್ಕೆ ವಾಲುತ್ತಿದೆ ಎಂಬ ಅಂಶದ ಪ್ರಸ್ತಾಪ ನಮ್ಮ ಚರ್ಚೆಯಲ್ಲಿ ಬಹುತೇಕ ಇರುವುದಿಲ್ಲ. ಇಸ್ರೇಲ್‌ನಲ್ಲಿ ನೆತನ್ಯಾಹು ಪುನರಾಯ್ಕೆಗೊಂಡಿದ್ದಾರೆ. ಟರ್ಕಿಯಲ್ಲಿ ಎರ್ಡೊಗಾನ್ ಪ್ರಚಂಡ ಬಹುಮತದಿಂದ ಪುನರಾಯ್ಕೆಯಾಗಿದ್ದಾರೆ. ಚುನಾವಣೆಗೆ ಮುನ್ನ ಈ ಪಕ್ಷವು ಪುನರಾಯ್ಕೆ ಆಗುವುದೇ ಇಲ್ಲ ಎನ್ನುವ ಭವಿಷ್ಯ ನುಡಿಯನ್ನು ಸುಳ್ಳಾಗಿಸಿ, ಆಸ್ಟ್ರೇಲಿಯಾದಲ್ಲಿ ಕನ್ಸರ್ವೇಟಿವ್ ಪಕ್ಷವು ಅಧಿಕಾರಕ್ಕೆ ಮರಳಿದೆ.

ಎಡ ಪಂಥವು ಹಲವು ಹತ್ತು ದೇಶಗಳಲ್ಲಿ ಮರು ಹುಟ್ಟು ಪಡೆಯುವಂತಹ ಸ್ಪೂರ್ತಿ ತುಂಬುವ ಭರವಸೆ ಇತರರಲ್ಲಿ ಮೂಡಲು ಕಾರಣವಾಗಿದ್ದ ಎಡ ಪಕ್ಷಗಳು ಇತ್ತೀಚಿನವರೆಗೆ ಅಧಿಕಾರದಲ್ಲಿದ್ದ ಲ್ಯಾಟಿನ್ ಅಮೇರಿಕಾದಲ್ಲಿ, ಒಂದರ ನಂತರ ಮತ್ತೊಂದು ದೇಶದಲ್ಲಿ ಬಲ ಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಇಂತಹ ಬದಲಾವಣೆಗಳ ಪೈಕಿ, ಅತ್ಯಂತ ಮಹತ್ವದ್ದು ಮತ್ತು ಅದೇ ಸಮಯದಲ್ಲಿ ಕುಖ್ಯಾತ ಎನ್ನಬಹುದಾದ ಬದಲಾವಣೆ ಬ್ರೆಜಿಲ್‌ನಲ್ಲಿ ಆಗಿದೆ.

ಅಲ್ಲಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೇರ್ ಬೊಲ್ಸೊಮಾರೊ ಕೆಲ ವರ್ಷಗಳ ಹಿಂದೆ ಬ್ರೆಜಿಲ್‌ನಲ್ಲಿ ಅಧಿಕಾರದಲ್ಲಿದ್ದ ಮಿಲಿಟರಿ ಆಡಳಿತವನ್ನು ಹಾಡಿ ಹೊಗಳಿರುವುದೇ ಅಲ್ಲದೆ, ಮಿಲಿಟರಿಯು ಇನ್ನೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದರೆ ಒಳ್ಳೆಯದಿತ್ತು ಎಂದು ಹೇಳಿರುವುದು ದಾಖಲಾಗಿದೆ. ಈ ಎಲ್ಲವಕ್ಕೂ ಕಳಶವಿಟ್ಟಂತೆ, ಕಳೆದ ಭಾನುವಾರ ಯೂರೋಪಿಯನ್ ಒಕ್ಕೂಟದ 28ಸದಸ್ಯ ದೇಶಗಳಲ್ಲಿ ಯೂರೊ ಪಾರ್ಲಿಮೆಂಟಿಗೆ ನಡೆದ ಚುನಾವಣೆಗಳ ಫಲಿತಾಂಶವು ಯೂರೋಪಿನಲ್ಲಿ ಗಮನಾರ್ಹ ಸಂಖ್ಯೆಯ ಜನತೆಯ ಒಲವು ಬಲ ಪಂಥದತ್ತ ಸರಿಯುತ್ತಿರುವ ಅಂಶವನ್ನು ಸಾರುತ್ತದೆ.

ಫ್ರಾನ್ಸ್‌ನಲ್ಲಿ ಮುಂಬರುವ ಮಹಾ ಚುನಾವಣೆಯಲ್ಲಿ ಮರೀನ್ ಲೇ ಪೆನ್ ಅವರ ಉಗ್ರ ಬಲಪಂಥೀಯ ಪಕ್ಷವು, ಹಾಲಿ ಅಧ್ಯಕ್ಷ ಎಮ್ಯಾನ್ಯುಅಲ್ ಮೆಕ್ರಾನ್ ಅವರ ನಡು ಪಂಥೀಯ ಪಕ್ಷಗಳ ಮೈತ್ರಿಕೂಟವನ್ನು ಹಿಂದಿಕ್ಕಿ, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದೆಂದು ಈಗ ತೋರುತ್ತದೆ. ಇಟಲಿಯ ಉಪ ಪ್ರಧಾನ ಮಂತ್ರಿ ಮಾತ್ತಿಯೊ ಸಲ್ವಿನಿ ಅವರ ಉಗ್ರ ಬಲಪಂಥೀಯ ಪಕ್ಷವು ಇಟಲಿಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವುದಷ್ಟೇ ಅಲ್ಲದೆ, ಯೂರೊ ಪಾರ್ಲಿಮೆಂಟಿನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮರ್ಕೆಲ್ ಅವರ ಪಕ್ಷವನ್ನು ಹಿಂದಿಕ್ಕಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಮರ್ಕೆಲ್ ಅವರ ಪಕ್ಷವು ಐದು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ 9% ಕಡಿಮೆ ಮತಗಳಿಸಿದೆ. ಅಷ್ಟೇ ಅಲ್ಲ, ಜರ್ಮನಿಯ ಆಲ್ಟರ್‌ನೆಟೀವ್ ಫಾರ್ ಜರ್ಮನಿ ಎಂಬ ಉಗ್ರ ಬಲಪಂಥೀಯ ಪಕ್ಷವು 10.೫% ಮತ ಹೆಚ್ಚಿಸಿಕೊಂಡಿದೆ. ಹಂಗೆರಿಯಲ್ಲಿ, ಅಧ್ಯಕ್ಷ ವಿಕ್ಟರ್ ಒರ್ಬಾನ್ ಅವರ ಬಲಪಂಥೀಯ ಪಕ್ಷವು ಮತ್ತೊಮ್ಮೆ ಪುನರಾಯ್ಕೆಗೊಳ್ಳುವ ಹಾದಿಯಲ್ಲಿದೆ.

ಮೋದಿಯವರ ಗೆಲುವು ದೇಶದಲ್ಲಿ ಜರುಗಿದ ಅನೇಕ ಬೆಳವಣಿಗೆಗಳಿಗೆ ಸಲ್ಲುತ್ತದೆ ಎಂಬುದು ಸ್ಪಷ್ಟವಿದ್ದರೂ ಸಹ, ಇಡೀ ವಿಶ್ವವೇ ಬಲ ಪಂಥಾಭಿಮುಖವಾಗಿ ದಾಪುಗಾಲು ಹಾಕುತ್ತಿರುವ ಈ ಸನ್ನಿವೇಶವನ್ನು ಮರೆಯಬಾರದು. ಬಲ ಪಂಥದ ಕಡೆಗೆ ಕೊಂಡೊಯ್ಯುವ ಉದ್ದೇಶಪೂರ್ವಕ ಪ್ರಯತ್ನಗಳು ಚಾಲನೆಯಲ್ಲಿರುವ ಈ ಸಂದರ್ಭದಲ್ಲಿ, ಇದು ಹೀಗೆಯೇ ಆಗುತ್ತಿರುವುದು ಏಕೆ? ಎಂಬ ಪ್ರಶ್ನೆಯನ್ನು ನಾವು ಕೇಳಬೇಕಾಗುತ್ತದೆ. ಉದಾರ ಮನೋಭಾವದ ಬೂರ್ಜ್ವಾ ವಿಶ್ಲೇಷಕರು, ಈ ಎಲ್ಲ ದೇಶಗಳ ಪಕ್ಷಗಳು ಮತ್ತು ಚಳವಳಿಗಳ ನಡುವೆ ಗೋಚರಿಸುವ ಒಂದು ಸಮಾನ ಅಂಶವನ್ನು ಕಾಣುವುದರ ಬದಲಾಗಿ, ಈ ವಾಸ್ತವದ ಚಿತ್ರವನ್ನು ತುಂಡರಿಸಿ ವಿಶ್ಲೇಷಿಸುವ ಪ್ರವೃತ್ತಿ ಬೆಳಸಿಕೊಂಡಿದ್ದಾರೆ: ಅವರು ಯೂರೋಪ್ ದೇಶದ ರಾಜಕೀಯ ಪಕ್ಷಗಳನ್ನು ಯೂರೋಪಿಯನ್ ಒಕ್ಕೂಟ ಪರ ಮತ್ತು ಯೂರೋಪಿಯನ್ ಒಕ್ಕೂಟ ವಿರೋಧಿ, ಅಥವಾ, ವಲಸೆ-ಪರ ಅಥವಾ ವಲಸೆ-ವಿರೋಧಿ ಎಂದೇ ವಿಭಜಿಸುತ್ತಾರೆ.

ಅದೇ ರೀತಿಯಲ್ಲಿ, ಬೂರ್ಜ್ವಾ ವಿಶ್ಲೇಷಕರು ಮೋದಿಯವರ ಗೆಲುವನ್ನು ಹಿಂದುತ್ವದೊಂದಿಗೆ ತಳುಕು ಹಾಕಿಕೊಂಡಿರುವ ಒಂದು ವಿದ್ಯಮಾನವಾಗಿ ನೋಡುತ್ತಾರೆಯೇ ಹೊರತು, ಯೂರೋಪಿನಲ್ಲಿ ಆಗುತ್ತಿರುವ ವಿದ್ಯಮಾನಕ್ಕೂ ಮತ್ತು ಭಾರತದ ಈ ವಿದ್ಯಮಾನಕ್ಕೂ ಒಂದಕ್ಕೊಂದು ಸಂಬಂಧವೇ ಇಲ್ಲ ಎಂಬಂತೆಯೇ ನೋಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಬಲಗೊಳ್ಳುತ್ತಿರುವ ಪುನರಾಯ್ಕೆಯನ್ನೂ ಸಹ ಈ ಬೆಳವಣಿಗೆಗಳಿಂದ ಪ್ರತ್ಯೇಕಿಸಿಯೇ ಕಾಣುತ್ತಾರೆ. ಆದರೆ, ಈ ರೀತಿ ಪ್ರತ್ಯೇಕಿಸಿ ನೋಡುವುದು ಮಾರ್ಕ್ಸ್‌ವಾದಿ ವಿಶ್ಲೇಷಣೆಗೆ ಸಲ್ಲುವಂತದ್ದಲ್ಲ. ಮಾರ್ಕ್ಸ್‌ವಾದಿ ವಿಶ್ಲೇಷಣೆ ಘಟನೆಗಳನ್ನು ಸಮಗ್ರವಾಗಿ ನೋಡುತ್ತದೆ, ಅನಾವರಣಗೊಳ್ಳುತ್ತಿರುವ ಘಟನಾವಳಿಗಳ ನಡುವೆ ಇರುವ ಸಮಾನ ರೂಪ, ಕ್ರಮ ಅಥವಾ ಏರ್ಪಾಡು ಮತ್ತು ಅದರ ವರ್ಗ ವಿನ್ಯಾಸವನ್ನು ಗುರುತಿಸುತ್ತದೆ. ಅಂತಾದರೆ, ಜಗತ್ತಿನಾದ್ಯಂತ ಬಲ ಪಂಥದತ್ತ ಸರಿಯುತ್ತಿರುವುದರ ಬಗ್ಗೆ ಮಾರ್ಕ್ಸ್‌ವಾದಿಗಳು ಏನು ಹೇಳಬಹುದು?

ಇದು ಸ್ಪಷ್ಟವಾಗಿ 2008ರಲ್ಲಿ ಆರಂಭವಾಗಿ ಇನ್ನೂ ಜಾಗತಿಕ ಅರ್ಥವ್ಯವಸ್ಥೆಯನ್ನು ಬಿಗಿದುಕೊಂಡಿರುವ ಆರ್ಥಿಕ ಬಿಕ್ಕಟ್ಟನ್ನು ವ್ಯಕ್ತಪಡಿಸುತ್ತದೆ. ಈ ಬಿಕ್ಕಟ್ಟಿನಿಂದ ಸ್ವಲ್ಪ ಚೇತರಿಕೆಯ ಲಕ್ಷಣಗಳು ಆಗೊಮ್ಮೆ ಈಗೊಮ್ಮೆ ಪ್ರಕಟಗೊಂಡಿವೆ. ಆದರೆ, ಚೇತರಿಕೆಯ ಲಕ್ಷಣಗಳು ಕಾಣಿಸಿಕೊಂಡ ಸ್ವಲ್ಪವೇ ಸಮಯದಲ್ಲಿ ಜಾಗತಿಕ ಅರ್ಥವ್ಯವಸ್ಥೆಯು ಮತ್ತೊಮ್ಮೆ ಬಿಕ್ಕಟ್ಟಿನಲ್ಲಿ ಮುಳುಗುತ್ತಿತ್ತು. ಒಂದು ಪುಟಿಯುವ ರಬ್ಬರ್ ಚೆಂಡಿನ ಉಪಮಾನವು ಜಾಗತಿಕ ಅರ್ಥವ್ಯವಸ್ಥೆಯ ಈ ಪರಿಸ್ಥಿತಿಗೆ ಸೊಗಸಾಗಿ ಹೋಲುತ್ತದೆ: ಚೆಂಡು ನೆಲದಿಂದ ಪುಟಿದ ಕೂಡಲೇ ಚೇತರಿಕೆಯ ಉತ್ಸಾಹ ಏರುತ್ತಿತ್ತು; ಪುಟಿದ ಚೆಂಡು ಮತ್ತೆ ನೆಲಕ್ಕೆ ಬಿದ್ದ ಕೂಡಲೇ ಆ ಉತ್ಸಾಹ ಇಳಿಯುತ್ತಿತ್ತು.

ಇಂತಹ ವಾದದ ಬಗ್ಗೆ ತಕರಾರು ಎತ್ತಬಹುದು. ಈ ತಕರಾರಿನ ಸಮರ್ಥನೆಯಾಗಿ ಅಮೇರಿಕಾದಲ್ಲಿ ನಿರುದ್ಯೋಗದ ದರವು ಹಿಂದಿನ ದಶಕಗಳಿಗಿಂತಲೂ ಕೆಳ ಮಟ್ಟಕ್ಕೆ ಈಗ ಇಳಿದಿದೆ ಎಂದು ಹೇಳಬಹುದು. ಆದರೆ, ಉದ್ಯೋಗದಲ್ಲಿ ಭಾಗವಹಿಸುವಿಕೆಯ ದರವು 2008ರಲ್ಲಿ ಇದ್ದದ್ದಕ್ಕಿಂತಲೂ ಕೆಳಗಿದೆ. ಉದ್ಯೋಗ ಭಾಗವಹಿಸುವಿಕೆಯ ದರವು ಈಗಲೂ 2008ರಲ್ಲಿ ಇದ್ದಷ್ಟೇ ಇದೆ ಎಂದು ಊಹಿಸಿಕೊಂಡರೆ, ಅಮೇರಿಕಾದ ಇಂದಿನ ನಿರುದ್ಯೋಗದ ದರ 8% ಆಗುತ್ತದೆ, ಅಧಿಕೃತ ಅಂಕಿಗಳು ಹೇಳುವ ಹಾಗೆ 4% ಅಲ್ಲ.

ಜಾಗತಿಕ ಅರ್ಥವ್ಯವಸ್ಥೆಯು ಬಿಕ್ಕಟ್ಟಿಗೆ ಒಳಗಾಗಿರುವ ಪರಿಸ್ಥಿತಿಯಲ್ಲಿ ಮತ್ತು ಅದರ ಪರಿಣಾಮವಾಗಿ ನಿರುದ್ಯೋಗವು ಉಲ್ಬಣಗೊಂಡ ಪರಿಸ್ಥಿತಿಯಲ್ಲಿ ಜಗತ್ತಿನಾದ್ಯಂತ ಬಲ ಪಂಥದತ್ತ ಪಲ್ಲಟ ಕಾಣುತ್ತಿದೆ. ಅರ್ಥವ್ಯವಸ್ಥೆಯ ಬಿಕ್ಕಟ್ಟು ಮತ್ತು ನಿರುದ್ಯೋಗದ ಪ್ರಶ್ನೆ ಬಂದಾಗ, ಉದಾರವಾದೀ ಬೂರ್ಜ್ವಾ ಪಕ್ಷಗಳು ಸಾಮಾನ್ಯವಾಗಿ ನಿರಾಕರಣೆಯ ಧೋರಣೆ ತಳೆಯುತ್ತವೆ. ನಿರುದ್ಯೋಗ ಉಂಟಾಗುವುದಕ್ಕೆ ವ್ಯವಸ್ಥೆ ಕಾರಣವಲ್ಲ; ವಲಸಿಗರೇ ಕಾರಣ; ಆದುದರಿಂದ ವಲಸೆಯನ್ನು ತಡೆಯಬೇಕು ಎಂದು ಪ್ರತಿಪಾದಿಸುವ ಬಲ ಪಂಥವು, ಕೊನೆಯ ಪಕ್ಷ, ನಿರುದ್ಯೋಗವು ಉಂಟುಮಾಡುವ ಯಾತನೆಯನ್ನು ಗುರುತಿಸುತ್ತದೆ.

ಯೂರೋಪಿಯನ್ ಒಕ್ಕೂಟ ವ್ಯವಸ್ಥೆಯಲ್ಲಿ, ಅದರ ದುಡಿಮೆಗಾರರು ಒಕ್ಕೂಟದ 28 ಸದಸ್ಯ ದೇಶಗಳಲ್ಲಿ ಯಾವುದೇ ದೇಶಕ್ಕೆ ವಲಸೆ ಹೋಗುವ ಅವಕಾಶವು ಮುಕ್ತವಾಗಿರುವುದರಿಂದ, ಕೆಲವು ಬಲ ಪಂಥೀಯ ಪಕ್ಷಗಳು ಯೂರೋಪಿಯನ್ ಒಕ್ಕೂಟದ ವಿರೋಧಿಗಳೂ ಆಗಿದ್ದಾರೆ. ಆಡಳಿತದಲ್ಲಿರುವ ಮತ್ತು ಅವರಿಗೆ ವಿರೋಧವಿರುವ ಉದಾರವಾದೀ ಬೂರ್ಜ್ವಾ ಪಕ್ಷಗಳು ಬಿಕ್ಕಟ್ಟು ಇದೆಯೆನ್ನುವುದನ್ನೇ ಒಪ್ಪಿಕೊಳ್ಳದ ಪರಿಸ್ಥಿತಿಯಲ್ಲಿ ಮತ್ತು ಎಡ ಪಂಥವು ಈ ಬಿಕ್ಕಟ್ಟಿನಿಂದ ಹೊರಬರುವ ಒಂದು ಪರ್ಯಾಯ ಅಜೆಂಡಾವನ್ನು ಜನತೆಯ ಮುಂದಿಡುವಲ್ಲಿ ನಿಧಾನವಾಗಿರುವ ಪರಿಸ್ಥಿತಿಯಲ್ಲಿ, ಇಂತಹ ಪರಿಸ್ಥಿತಿ ನಿರ್ಮಾಣವಾಗುವುದನ್ನೇ ಕಾಯುತ್ತಿದ್ದ ಬಲ ಪಂಥವು ಕಿಂದರಿಜೋಗಿಯಂತೆ ರಂಗ ಪ್ರವೇಶಿಸಿ ನಿರುದ್ಯೋಗ ಪರಿಹರಿಸುವ ಕಿಂದರಿ ಬಾರಿಸಿತು. ಒಂದು ವಲಸೆ-ವಿರೋಧಿ ಅಜೆಂಡಾವನ್ನು ಜನತೆಯ ಮುಂದಿಡುವ ಮೂಲಕ ಬಲ ಪಂಥವು ತನ್ನ ಚಟುವಟಿಕೆಗಳಿಗೆ ಚಾಲನೆ ಕೊಟ್ಟಿದೆ. ಹೀಗೆ ಜಗತ್ತಿನ ಉದ್ದಗಲದಲ್ಲೂ ಅದರ ಬೆಳವಣಿಗೆಗೆ ಅದು ಬಿಕ್ಕಟ್ಟು ಮತ್ತು ನಿರುದ್ಯೋಗವನ್ನು ಗಮನಕ್ಕೆ ತಗೊಂಡಿರುವುದು ಮತ್ತು ಅಧಿಕಾರಸ್ಥರ ಪರವಾದ ರಾಜಕೀಯ ಪಕ್ಷಗಳು ಗಮನಕ್ಕೆ ತಗೊಂಡಿರದಿರುವುದೇ ಕಾರಣ ಎನ್ನಬಹುದು.

ಹಾಗಾದರೆ, ಭಾರತದಲ್ಲಿನ ಕತೆ ಈ ವಿವರಣೆಯ ಚೌಕಟ್ಟಿಗೆ ಹೊಂದಿಕೊಳ್ಳುತ್ತದೆಯೇ? ಭಾರತದಲ್ಲಿಯೂ ಸಹ ಅಭಿವೃದ್ಧಿ ಅಜೆಂಡಾದ ಮೂಲಕವೇ 2014ರಲ್ಲಿ ಮೋದಿ ಅಧಿಕಾರ ಹಿಡಿದದ್ದು. ಅದಕ್ಕೂ ಮುನ್ನವೇ ಯುಪಿಎ-2 (2009-14) ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಇಳಿಮುಖವಾಗಿತ್ತು. ಹಾಗಾಗಿ, ಪ್ರತಿಯೊಬ್ಬರ ಅದೃಷ್ಟ ಖುಲಾಯಿಸುವ ನವ ಉದಾರವಾದದ ಭರವಸೆ ಮಬ್ಬಾಗಲಾರಂಭಿಸಿತ್ತು. ಜನತೆಗೆ ಕೊಟ್ಟಿದ್ದ ಅಭಿವೃದ್ಧಿ ಅಥವಾ ವಿಕಾಸ ಭರವಸೆಯನ್ನು ಈಡೇರಿಸಲು ಮೋದಿ ಸರ್ಕಾರವು ಅಧಿಕಾರದ ಅವಧಿಯಲ್ಲಿ(2014-19) ಅಕ್ಷರಷಃ ಏನನ್ನೂ ಮಾಡಲಿಲ್ಲ.

ಆ ಕಾರಣದಿಂದಾಗಿಯೇ ಈಗ ತಾನೇ ಮುಗಿದ ಚುನಾವಣೆಯಲ್ಲಿ ಅಭಿವೃದ್ಧಿ ಅಥವಾ ವಿಕಾಸದ ಬಗ್ಗೆ ಮೋದಿಯವರು ಒಂದೇ ಒಂದು ಶಬ್ದವನ್ನೂ ಉಚ್ಛರಿಸಲಿಲ್ಲ. ಆದರೆ, ಭಯೋತ್ಪಾದನೆ ವಿರುದ್ಧ ಹೋರಾಡುವೆ, ರಾಷ್ಟ್ರವನ್ನು ರಕ್ಷಿಸುವೆ, ಪಾಕೀಸ್ತಾನಕ್ಕೆ ಪಾಠ ಕಲಿಸುವೆ ಮತ್ತು ಹಿಂದುತ್ವ ಪ್ರತಿಷ್ಠಾಪನೆಯಂತಹ ಮಾತುಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಮೋದಿ ಬದಲಿಸಿದರು. ಈ ತಂತ್ರಗಾರಿಕೆಯ ಮಾತುಗಳ ಮೂಲಕ, ಅಧಿಕಾರದ ಅವಧಿಯಲ್ಲಿ ಅಭಿವೃದ್ಧಿ ಸಾಧಿಸಲು ತಮ್ಮ ಸರ್ಕಾರ ಮಾಡಿದ್ದೇನು ಎಂಬುದರ ಕುರಿತು ಎದುರಾಗುವ ಇರುಸು ಮುರುಸಿನ ಪ್ರಶ್ನೆಗಳನ್ನು ನಿರಾಯಾಸವಾಗಿ ತಪ್ಪಿಸಿಕೊಂಡರು. ಅದರಿಂದ ಅವರಿಗೆ ಭರ್ಜರಿ ಅನುಕೂಲವೇ ಆಯ್ತು.

ನವ ಉದಾರವಾದವನ್ನು ಪ್ರತಿನಿಧಿಸುವ ಕಾಂಗ್ರೆಸ್‌ನಂತಹ ಒಂದು ಪಕ್ಷದಿಂದ ಬಿಜೆಪಿಯಂತಹ ಒಂದು ಬಲ ಪಂಥೀಯ ಪಕ್ಷದತ್ತ ಪಲ್ಲಟವು ಸಾಧ್ಯವಾಗಿರುವುದು ನವ ಉದಾರವಾದದ ಬಿಕ್ಕಟ್ಟಿನಿಂದಾಗಿಯೇ ಎಂಬ ಸಂಗತಿಯಂತೂ ಉಳಿದೇ ಉಳಿಯುತ್ತದೆ. ನವ ಉದಾರವಾದವು ಅಭಿವೃದ್ಧಿ ತರುತ್ತದೆ ಎಂಬುದಾಗಿ ಸೋಗುಹಾಕುವುದು ಕಾಗ್ರೆಸ್ ಪಕ್ಷಕ್ಕೆ ಇನ್ನೆಷ್ಟೂ ಸಾಧ್ಯವಿರಲಿಲ್ಲ. ಬಿಜೆಪಿಯಂತೂ ಅಭಿವೃದ್ಧಿಯ ಬಗ್ಗೆ ಮಾತಾಡಲೇ ಇಲ್ಲ. ಆದರೆ, ಕಥನ-ಪ್ರವಚನದ ದಿಕ್ಕನ್ನೇ ಬದಲಿಸಿತು. ಅದು ಕಾರ್ಪೊರೇಟ್-ಹಣಕಾಸು ಕುಳಗಳಿಗೆ ಹಿಡಿಸಿತು ಕೂಡ (ಅದೆಷ್ಟು ಅಂದರೆ, ಬಿಜೆಪಿ ಗೆಲ್ಲುತ್ತದೆಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದ ಕೂಡಲೇ ಷೇರು ಪೇಟೆ ಸೂಚ್ಯಂಕ ಸರ್ರನೆ ಏರಿತು).

ಬದಲಾದ ಇಂತಹ ಸಂವಾದ-ಕಥನಗಳ ಪ್ರಭಾವ ತಾತ್ಕಾಲಿಕ. ನವ ಉದಾರವಾದವು ಸಿಕ್ಕಿಹಾಕಿಕೊಂಡಿರುವ ಬಿಕ್ಕಟ್ಟಿನಿಂದ ಹೊರಬರುವುದು ಹೇಗೆ ಎಂಬುದರ ಬಗ್ಗೆ ಯಾವ ಸುಳಿವೂ ಕಾಂಗ್ರೆಸ್‌ಗೂ ಇಲ್ಲ, ಬಿಜೆಪಿಗೂ ಇಲ್ಲ. ಆದ್ದರಿಂದ, ಕೋಟ್ಯಂತರ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಒದಗಿಸಲಾರರು. ಹಾಗೆ ಹೇಳುವುದಾದರೆ, ಕಾಂಗ್ರೆಸ್ ಪಕ್ಷದ ಕೆಲವರಿಗೆ ನವ ಉದಾರವಾದದ ಹಾದಿಯಲ್ಲಿ ಮುಂದೆ ಹೋಗುವುದು ಅದೆಷ್ಟು ಕಷ್ಟ ಎಂಬುದರ ಅರಿವಿತ್ತು. ಹಾಗಾಗಿಯೇ, ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಐದು ಕೋಟಿ ಕಡು ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ ಹಣ ವರ್ಗಾಯಿಸುವ ನ್ಯಾಯ ಯೋಜನೆಯ ಘೋಷಣೆ ಕೊಟ್ಟಿತ್ತು. ಮಾಮೂಲು ಪರಿಸ್ಥಿತಿಯಲ್ಲಿ ಸಾಕಷ್ಟು ಉತ್ಸಾಹ ತುಂಬುವ ಸಾಧ್ಯತೆ ಹೊಂದಿದ್ದ ಮತ್ತು ಪಕ್ಷದ ಪಾಲಿಗೆ ಅಧಿಕಾರ ತಂದುಕೊಡುವಂತಹ ಒಂದು ಯೋಜನೆಯೇ ಠುಸ್ ಪಟಾಕಿಯಂತಾಯಿತು. ಏಕೆಂದರೆ, ಅದಕ್ಕೆ ಬೇಕಾಗುವ ಹಣ ಯಾವ ಮೂಲದಿಂದ ಬರುತ್ತದೆ ಎಂಬುದನ್ನು ಕಾಂಗ್ರೆಸ್ ಪಕ್ಷವು ಹೇಳದೇ ಇದ್ದುದರಿಂದ ಅದು ಜನರ ವಿಶ್ವಾಸ ಗಳಿಸಲಿಲ್ಲ. ಇದೊಂದು ಚುನಾವಣಾ ಭರವಸೆ, ಚುನಾವಣೆಯ ಮರು ದಿನವೇ ಅದನ್ನು ಮುರಿಯಲಾಗುತ್ತದೆ ಎಂದೇ ಜನ ಸಹಜವಾಗಿ ಭಾವಿಸಿದರು.

ಅರ್ಥವ್ಯವಸ್ಥೆಯನ್ನು ಮುನ್ನೆಡೆಸುವುದು ಹೇಗೆ ಎಂಬುದರ ಬಗ್ಗೆ ಮಧ್ಯಮಾರ್ಗಿ, ಉದಾರವಾದೀ ಬೂರ್ಜ್ವಾ ಪಕ್ಷವಾದ ಕಾಂಗ್ರೆಸ್‌ಗೆ ಒಂದು ಸ್ಪಷ್ಟ ಕಲ್ಪನೆಯೇ ಇಲ್ಲ. ಆ ಪಕ್ಷಕ್ಕೆ ಸರಿಸಮನಾಗಿ ಬಿಜೆಪಿಗೂ ಅದರ ಬಗ್ಗೆ ಯಾವುದೇ ಸುಳಿವೂ ಇಲ್ಲ. ಬಿಜೆಪಿಯ ಅತಿರೇಕದ ರಾಷ್ಟ್ರವಾದವು ಬಹಳ ಬೇಗನೇ ತೆಳುವಾಗುತ್ತದೆ. ಹಸಿವು ಮತ್ತು ನಿರುದ್ಯೋಗದಿಂದ ನರಳುತ್ತಿರುವ ಜನತೆಯನ್ನು ಗಾಳಕ್ಕೆ ಸಿಕ್ಕಿಸಿದ ಹುಳ ತಿನ್ನುವ ಮೀನುಗಳೆಂದು ಭಾವಿಸಿ, ಅವರಿಗೆ ದಿನನಿತ್ಯವೂ ಪಾಕೀಸ್ತಾನ-ವಿರೋಧೀ ಮತ್ತು ಮುಸ್ಲಿಂ-ವಿರೋಧೀ ಮಾತುಗಳನ್ನೇ ಉಣಬಡಿಸುವ ಆಟ ಬಹಳ ಕಾಲ ನಡೆಯುವುದಿಲ್ಲ. ಅಲ್ಲದೆ, ಆರ್ಥಿಕ ಪರಿಸ್ಥಿತಿ ನಿಂತಲ್ಲೇ ನಿಶ್ಚಲವಾಗಿ ಉಳಿಯುವುದಿಲ್ಲ.

ಮೋದಿ ಸರ್ಕಾರವು ಆರ್ಥಿಕ ವಲಯದತ್ತ ತಲೆ ಹಾಕಿ ಮಲಗದೇ ಇದ್ದರೂ ಸಹ, ಅರ್ಥವ್ಯವಸ್ಥೆಯು ಮೋದಿಯವರನ್ನು ಅವರಷ್ಟಕ್ಕೆ ಅವರು ಇರಲು ಬಿಡುವುದಿಲ್ಲ, ಬೆನ್ನು ಹತ್ತಿದ ಬೇತಾಳನಂತೆ ಕಾಡುತ್ತದೆ. ಕಾಲಕ್ರಮೇಣ, ಆರ್ಥಿಕ ಚಟುವಟಿಕೆಗಳ ಹಿಂಜರಿತ ಮತ್ತು ವಿದೇಶ ವ್ಯಾಪಾರದ ಬಾಕಿ ಚುಕ್ತಾ ಮಾಡುವುದೇ ಒಂದು ಸಮಸ್ಯೆಯಾದಾಗ, ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುತ್ತದೆ. ಆಗ, ಉತ್ತರ ಕೊಡಲು ಮೋದಿ ಸರ್ಕಾರದ ಬಳಿ ಹೇಳಿಕೊಳ್ಳುವ ಸಮರ್ಥನೆಗಳಿರುವುದಿಲ್ಲ. ಮತ್ತು, ಬಿಕ್ಕಟ್ಟಿನಿಂದ ಅರ್ಥವ್ಯವಸ್ಥೆಯನ್ನು ಪಾರುಮಾಡುವುದು ಆ ವೇಳೆಗಾಗಲೇ ಇನ್ನೂ ಹೆಚ್ಚು ಕಷ್ಟಕರವಾಗುತ್ತದೆ.

ಜನತೆಯ ದಿನನಿತ್ಯದ ಬದುಕಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನವ ಉದಾರವಾದದ ಎರಡೂ ಪಡೆಗಳು (ಕಾಂಗ್ರೆಸ್ ಮತ್ತು ಬಿಜೆಪಿ) ಅಸಮರ್ಥವಾಗಿವೆ. ಈ ಪರಿಸ್ಥಿತಿಯಲ್ಲಿ, ಅರ್ಥವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಹೊರ ಬರುವ ಮಾರ್ಗದರ್ಶನವನ್ನು ಎಡ ಪಂಥ ಮಾತ್ರ ಒದಗಿಸಬಲ್ಲದು. ಎಡ ಪಂಥದ ಈ ಮಾರ್ಗವು ನಮ್ಮನ್ನು ಬಂಡವಾಳಶಾಹಿಯಿಂದ ಆಚೆಗೆ ಕೊಂಡೊಯ್ಯಬಲ್ಲದು. ನವ ಉದಾರ ಬಂಡವಾಳಶಾಹಿ ದಿಗಂತದಿಂದ ಆಚೆಗಿನ ಕಣ್ಣೋಟ ಹೊಂದಿರುವುದು ಎಡ ಪಂಥ ಮಾತ್ರ. ಆದ್ದರಿಂದ, ಎಡ ಪರ್ಯಾಯ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೇ ಸಲ್ಲುತ್ತದೆ.

ಸಂಕ್ಷಿಪ್ತವಾಗಿ, ನಾವೀಗ ಒಂದು ಚಾರಿತ್ರಿಕ ಪರ್ವಕಾಲವನ್ನು ನೋಡುತ್ತಿದ್ದೇವೆ. ಈ ಸನ್ನಿವೇಶದಲ್ಲಿ, ಬಲಪಂಥವು ಒಂದು ಹುಸಿ ಅಥವಾ ವಿಭಜನಕಾರೀ ಅಜೆಂಡಾದ ಸುತ್ತ ಜನರನ್ನು ಅಲ್ಪ ಕಾಲದಲ್ಲೇ ಅಣಿನೆರೆಸುವಲ್ಲಿ ಎಷ್ಡೇ ಯಶಸ್ವಿಯಾಗಿದ್ದರೂ ಸಹ, ನಿರುದ್ಯೋಗ ಮತ್ತು ಹತಾಶೆಯ ಪರಿಸ್ಥಿತಿಗೆ ಒಳಗಾಗಿರುವ ಆ ಜನರನ್ನು ಆ ಪರಿಸ್ಥಿತಿಯಿಂದ ಹೊರತರುವ ಮಾರ್ಗ ತೋರಲು ಬಲ ಪಂಥವು ಮೂಲಭೂತವಾಗಿ ಅಸಮರ್ಥವಾಗಿದೆ.

ಒಂದು ರಾಷ್ಟ್ರದ ಚರಿತ್ರೆಯಲ್ಲಿ, ಅಸ್ತಿತ್ವದಲ್ಲಿರುವ ವ್ಯವಸ್ಥೆಯು ಸ್ಥಿರವಾಗಿ ಮತ್ತು ದೀರ್ಘವಾಗಿ ಬಾಳುವ ಸಾಮರ್ಥ್ಯವುಳ್ಳದ್ದೆಂದು ತೋರುವ ಕ್ಷಣಗಳಿರುತ್ತವೆ. ಆದರೆ, ಇವೆಲ್ಲವೂ ಕ್ಷಿಪ್ರವಾಗಿ ಬದಲಾಗುತ್ತವೆ, ಹಿಂದಿನಂತೆಯೆ ಸಾಗುವುದು ಇನ್ನು ಸಾಧ್ಯವಿಲ್ಲವೆಂಬ ಪರಿಸ್ಥಿತಿಯಲ್ಲಿ ಹೊಸ ಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅಂತಹ ಒಂದು ಕ್ಷಣ ಬಂಡವಾಳಶಾಹಿಗೆ ಈಗ ಬಂದಿದೆ, ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲೆಡೆಯಲ್ಲೂ. ಭಾರತದಲ್ಲಿ ಮತ್ತು ಬೇರೆ ಹಲವು ದೇಶಗಳಲ್ಲಿ ಬಲಪಂಥವು ಎಷ್ಡೇ ಚುನಾವಣಾ ಯಶಸ್ಸು ಗಳಿಸಿದರೂ, ಅದು ಈ ಮೂಲಭೂತ ಅಂಶವನ್ನು ಮಾರ್ಪಡಿಸಲಾರದು.

ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್

ಕೃಪೆ : ಜನಶಕ್ತಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

Published

on

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು

ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.

ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್‌ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.

ಯುವಕರು ಸ್ಕೂಲ್, ಕಾಲೇಜ್‌ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್‌ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.

ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.

ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.

ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್‌ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.

ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಅಲ್ಲದೆ, ಮೃತಪಟ್ಟ ರೈತರ ಹೆಸರಿರುವ ಪಹಣಿಗಳನ್ನು ವಾರಸುದಾರರ ಹೆಸರಿಗೆ ಸುಮಾರು 24000 ಪೌತಿ ಖಾತೆಗಳನ್ನು ಬದಲಾಯಿಸಲಾಗಿದ್ದು, ಪೌತಿ ಆಂದೋಲನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಜಮೀನು ಮಂಜೂರು ಆಗಿ ಪೋಡಿ ಆಗದೇ ಪ್ರತ್ಯೇಕ ಪಹಣಿ ಬರದೇ ಇರುವುದರಿಂದ ಅಂತಹವುಗಳನ್ನು ಗೈರು ವಿಲೇ ಕಡತವನ್ನು ಮಾಡಲಾಗಿದ್ದು, ಸುಮಾರು 4000 ಜನರಿಗೆ ಈ ಗೈರು ವಿಲೇ ಕಡತವನ್ನು ನೀಡಲಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯೂ 3ನೇ ಸ್ಥಾನವನ್ನು ಹೊಂದಲಾಗಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.

ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 week ago

ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್...

ದಿನದ ಸುದ್ದಿ2 weeks ago

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ(ಫೆ.23) ರಂದು ನಗರದ...

ದಿನದ ಸುದ್ದಿ2 weeks ago

ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ

ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ,...

ದಿನದ ಸುದ್ದಿ3 weeks ago

ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ

ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು...

ದಿನದ ಸುದ್ದಿ3 weeks ago

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ...

ದಿನದ ಸುದ್ದಿ3 weeks ago

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ...

ದಿನದ ಸುದ್ದಿ3 weeks ago

ಏ.1 ರಿಂದ 2026ರ ಡಿಜಿಟಲ್ ಜನಗಣತಿ

ಸುದ್ದಿದಿನ,ದಾವಣಗೆರೆ :2026ರ ಜನಗಣತಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ದೃಢೀಕರಣ...

ದಿನದ ಸುದ್ದಿ3 weeks ago

ದುರ್ಗಾಂಬಿಕ ಜಾತ್ರೆ ; ಫ್ಲೆಕ್ಸ್ ಹಾವಳಿ ವಿರುದ್ಧ ಕಠಿಣ ಕ್ರಮ

ಸುದ್ದಿದಿನ,ದಾವಣಗೆರೆ:ದುರ್ಗಾಂಬಿಕಾ ಜಾತ್ರೆಯ ಸಂದರ್ಭದಲ್ಲಿ ನಗರದ ಪರಿಸರ ಮಾಲಿನ್ಯಕ್ಕೆ ಧಕ್ಕೆ ತರುವಂತೆ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ‘ಡಿ ಫಿಗರ್‌ಮೆಂಟ್ ಆಕ್ಟ್’ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂದು...

ದಿನದ ಸುದ್ದಿ3 weeks ago

ಎಸ್.ಎಸ್.ಎಲ್.ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ ಮುಂಬರುವ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಸುಸೂತ್ರವಾಗಿ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ನಿವಾರಿಸಿ ಫಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ...

ದಿನದ ಸುದ್ದಿ3 weeks ago

ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ – ಪ್ರಾಣಿಬಲಿ ಮತ್ತು ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ

ಸುದ್ದಿದಿನ,ದಾವಣಗೆರೆ:ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ. 22 ರಿಂದ 25 ರವರೆಗೆ 3 ದಿನಗಳ ಕಾಲ ನಡೆಯಲಿದ್ದು, ಭಕ್ತಿಪೂರಕವಾಗಿ ವಿಜೃಂಭಣೆಯಿಂದ ನಡೆಯಲು ಕ್ರಮವಹಿಸಲಾಗಿದೆ, ಜಾತ್ರೆ ಸಮಯದಲ್ಲಿ...

Trending