ದಿನದ ಸುದ್ದಿ
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಎತ್ತ ಸಾಗಿದೆ..? ಪೌರತ್ವ ನಿರ್ಧಾರದಲ್ಲಿ ಕೋಮುವಾದಿ ಹುನ್ನಾರ..!
- ಸವಿದೇಶಿಯರನ್ನು ಹೊರತುಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಅಸ್ಸಾಮ್ನ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿಯಾದುದು. ಅಲ್ಲದೆ ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಸ್ಸಾಮ್ನಲ್ಲಿ ನಾಗರಿಕ ಗಣತಿ ನಡೆಸುವ ರಾಷ್ಟ್ರೀಯ ಪೌರತ್ವ ದಾಖಲೆ (ಎನ್ಆರ್ಸಿ)ಯ ಪ್ರಕ್ರಿಯೆ ಸುಪ್ರೀಂ ಕೋರ್ಟ್ನ ಆದೇಶದ ಅನ್ವಯ ಜುಲೈ 31ರಂದು ಅಂತಿಮ ಪಟ್ಟಿಯ ಪ್ರಕಟಣೆಯೊಂದಿಗೆ ಪೂರ್ಣಗೊಳ್ಳುವ ಹಂತ ತಲುಪಬೇಕಾಗಿದೆ. ಈ ಪ್ರಕ್ರಿಯೆಯನ್ನು ನಡೆಸಿದ ರೀತಿ ಅನೇಕ ಅನುಮಾನಗಳಿಗೆ ಎಡೆಮಾಡಿದೆ; ದಾಖಲೆಯಲ್ಲಿ ನೈಜ ಭಾರತೀಯ ನಾಗರಿಕರನ್ನು ಸೇರಿಸುವ ವಿಚಾರದಲ್ಲಿ ಭಾರೀ ಪ್ರಮಾಣದ ಲೋಪದೊಷಗಳು ಕಂಡುಬಂದಿವೆ.
2018ರ ಜುಲೈ 30ರಂದು ಪ್ರಕಟವಾದ ಎನ್ಆರ್ಸಿ ಕರಡು ಪಟ್ಟಿಯಲ್ಲಿ 3.29 ಕೋಟಿ ಅರ್ಜಿದಾರರ ಪೈಕಿ 40.7 ಲಕ್ಷ ಜನರನ್ನು ಕೈಬಿಡಲಾಗಿತ್ತು. ನಿಯಮದ ಪ್ರಕಾರ, ಪಟ್ಟಿಯಿಂದ ಬಿಡಲಾದವರು ತಮ್ಮ ಸೇರ್ಪಡೆಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ ಸೇರ್ಪಡೆಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲೂ ಅವಕಾಶವಿದೆ.
ಈ ಪ್ರಕ್ರಿಯೆಯ ನಂತರ, ಪಟ್ಟಿಯನ್ನು ಅಂತಿಮಗೊಳಿಸಿ 2019ರ ಜುಲೈ 31ರಂದು ಪ್ರಕಟಿಸಲು ಕ್ರಮಕೈಗೊಳ್ಳಲಾಗಿತ್ತು. ಆದರೆ, ಈ ವರ್ಷ ಜೂನ್ ೨೬ರಂದು ಅನರ್ಹರು ಎಂದು ಹೇಳಿ ಅಧಿಕಾರಿಗಳು ಮತ್ತೆ 1,02,462 ಹೆಸರುಗಳನ್ನು ಕರಡು ಎನ್ಆರ್ಸಿ ಪಟ್ಟಿಯಿಂದ ಕೈಬಿಟ್ಟಿದ್ದರು. ಪ್ರಸ್ತುತ ಹೊರತುಪಡಿಸುವಿಕೆಯು ಡಿ, ಅಂದರೆ ಮತದಾರರ ಪಟ್ಟಿಯ ಅನುಮಾನಾಸ್ಪದ (ಡೌಟ್ಫುಲ್) ವಿಭಾಗದಲ್ಲಿ ಸೇರಿದವರನ್ನೂ ಒಳಗೊಂಡಿದೆ ಅಥವಾ ವಿದೇಶಿಯರೆಂದು ಅನುಮಾನಕ್ಕೊಳಗಾಗಿದ್ದು ವಿದೇಶಿಯರ ನ್ಯಾಯಮಂಡಳಿಯ ಮುಂದೆ ವಿಚಾರಣೆ ಎದುರಿಸುತ್ತಿರುವವರನ್ನೂ ಒಳಗೊಂಡಿದೆ ಎಂದು ತಿಳಿಸಲಾಗಿದೆ. ಈ ಹೆಚ್ಚುವರಿ ಹೊರತುಪಡಿಸುವಿಕೆಯೇ ಇನ್ನಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಯಾಕೆಂದರೆ ಡಿ ವಿಭಾಗದಲ್ಲಿರುವ ಎಲ್ಲ ವ್ಯಕ್ತಿಗಳನ್ನು ಹೊರತು ಪಡಿಸಲಾಗಿದೆ ಎಂದು ಕರಡು ಎನ್ಆರ್ಸಿ ವೇಳೆಯೇ ಘೋಷಿಸಲಾಗಿತ್ತು.
ಪ್ರಕ್ರಿಯೆಯು ದೋಷಪೂರಿತವಾಗಿದೆ ಹಾಗೂ ಅನೇಕ ತಪ್ಪುಗಳೂ ನಡೆದಿವೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಕಟವಾದ ಅನೇಕ ವರದಿಗಳು ಎತ್ತಿತೋರಿಸಿವೆ. ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿ ಆನಂತರ ಗಡಿ ಪೊಲೀಸ್ ಪಡೆಯನ್ನು ಸಹಾಯಕ ಸಬ್ ಇನ್ಸ್ಪೆಕ್ಟರ್ ಆಗಿ ಸೇರಿದ ನಾನ್-ಕಮಿಷನ್ಡ್ ಆಫೀಸರ್ ಮಹಮದ್ ಸನಾವುಲ್ಲಾ ಪ್ರಕರಣ ಒಂದು ಉದಾಹರಣೆಯಾಗಿದೆ. ಅವರ ಹೆಸರು ಡಿ ಪಟ್ಟಿಯಲ್ಲಿತ್ತು ಹಾಗೂ ಅವರನ್ನು ವಿದೇಶೀಯ ಎಂದು ವಿದೇಶಿಗರ ನ್ಯಾಯಮಂಡಳಿ (ಫಾರಿನರ್ಸ್ ಟ್ರಿಬ್ಯುನಲ್) ಘೋಷಿಸಿತು. ಸನಾವುಲ್ಲಾ ಅಸ್ಸಾಮ್ನಲ್ಲಿ ಹುಟ್ಟಿದವರಾದರೂ ಮತ್ತು ಹುಟ್ಟಿದ ಊರಿನಲ್ಲಿ ಕುಟುಂಬದ ಬೇರುಗಳು ಆಳವಾಗಿದ್ದರೂ ಈ ರೀತಿ ಮಾಡಲಾಯಿತು. ಅವರನ್ನು ಪ್ರತಿಬಂಧನ ಶಿಬಿರಕ್ಕೆ ಕಳಿಸಲಾಯಿತು. ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ ನಂತರವಷ್ಟೇ ಹತ್ತು ದಿನಗಳ ನಂತರ ಅವರು ಹೊರಬರುವುದು ಸಾಧ್ಯವಾಯಿತು.
ಸುನಿರ್ಮಲ್ ಬಾಗ್ಚಿ ಅವರದ್ದು ಇನ್ನೊಂದು ಪ್ರಕರಣ. 2018ರ ಜುಲೈನಲ್ಲಿ ಪ್ರಕಟಿಸಲಾದ ಕರಡು ಪಟ್ಟಿಯಲ್ಲಿ ಅವರ ಹೆಸರಿತ್ತು. ಆದರೆ ಈ ವರ್ಷ ಜೂನ್ನಲ್ಲಿ ಪ್ರಕಟಿಸಲಾದ ಹೆಚ್ಚುವರಿ ಹೊರತುಪಡಿಸುವಿಕೆ ಪಟ್ಟಿಯಲ್ಲಿ ಅವರ ಹೆಸರನ್ನು ಕರಡು ಪಟ್ಟಿಯಿಂದ ಹೊಡೆದುಹಾಕಲಾಗಿದೆ. ಆತ ಒಬ್ಬ ವಿದೇಶಿ ಎಂದು ಘೋಷಿಸಲಾಗಿದೆ ಎನ್ನುವುದು ಇದಕ್ಕೆ ನೀಡಲಾದ ಕಾರಣವಾಗಿದೆ. ಬಾಗ್ಚಿ ಅವರು ಸಿಲ್ಚಾರ್ ಪಟ್ಟಣದಲ್ಲಿ 1943 ಸೆಪ್ಟೆಂಬರ್ 23ರಂದು ಜನಿಸಿದವರು. ಹಾಗಿರುವಾಗ ಅವರು ಒಬ್ಬ ವಿದೇಶೀಯ ಆಗಲು ಹೇಗೆ ಸಾಧ್ಯ ಎನ್ನುವುದಕ್ಕೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಆದರೆ ಇದೊಂದು ಕ್ಲರಿಕಲ್ ದೋಷದ ಪರಿಣಾಮ ಎಂದು ಎನ್ಆರ್ಸಿ ಅಧಿಕಾರಿಗಳು ಈಗ ಹೇಳುತ್ತಿದ್ದಾರೆ.
ಚಿರಾಂಗ್ ಜಿಲ್ಲೆಯ ಒಬ್ಬ ಬಡ ವಿಧವೆ ಮಧುಬಾಲಾ ಅವರನ್ನು ಬಂಧಿಸಿರುವುದು ಒಂದು ಕಳವಳಕಾರಿ ಸಂಗತಿಯಾಗಿದೆ. ಫಾರಿನರ್ಸ್ ಟ್ರಿಬ್ಯುನಲ್ ಅವರನ್ನು ವಿದೇಶಿ ಎಂದು ಘೋಷಿಸಿದ ಹಿನ್ನೆಲೆಯಲ್ಲಿ ಮಧುಬಾಲಾರನ್ನು ಮೂರು ವರ್ಷಗಳಿಂದ ಪ್ರತಿಬಂಧನದಲ್ಲಿಡಲಾಗಿತ್ತು. ಮಧುಬಾಲಾ ಎಂಬ ಹೆಸರಿನ ಮತ್ತೊಬ್ಬ ಮಹಿಳೆಯ ವಿಚಾರದಲ್ಲಿ ತಪ್ಪಾಗಿ ತಿಳಿದು ಈ ಮಧುಬಾಲಾರನ್ನು ಹಿಡಿದಿಡಲಾಗಿತ್ತು ಎನ್ನುವುದು ಇತ್ತೀಚೆಗೆ ತಿಳಿದು ಅವರ್ನು ಬಿಡುಗಡೆ ಮಾಡಲಾಯಿತು. ಆದರೆ, ಅಕ್ರಮವಾಗಿ ಅವರನ್ನು ಬಂಧಿಸಿಟ್ಟಿದ್ದಕ್ಕೆ ಪರಿಹಾರ ನೀಡಲಾಗುವುದೇ ಎಂಬ ಬಗ್ಗೆ ಎಂದು ಚಕಾರವನ್ನೇ ಎತ್ತಿಲ್ಲ.
ಮಗನನ್ನು ಪಟ್ಟಿಯಲ್ಲಿ ಸೇರಿಸಿ ತಂದೆಯನ್ನು ಕೈಬಿಟ್ಟ ಅಥವಾ ಒಡಹುಟ್ಟಿದವರಲ್ಲಿ ಒಬ್ಬರನ್ನು ಸೇರಿಸಿ ಇನ್ನೊಬ್ಬರನ್ನು ಬಿಟ್ಟ ಈ ರೀತಿಯ ಅನೇಕಾನೇಕ ಪ್ರಕರಣಗಳು ಇಲ್ಲಿವೆ.
ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರಿಂದ ಮುಕ್ತಿ ಪಡೆಯಬೇಕು ಎಂದು ಕೇಂದ್ರದ ಬಿಜೆಪಿ ಸರಕಾರ ಸದಾ ಜಪಿಸುತ್ತಲೇ ಇದೆ. ಈಗ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಷಾ ಚುನಾವಣೆ ಪ್ರಚಾರದ ವೇಳೆ ಇವರನ್ನು ಗೆದ್ದಲು ಎಂದು ಕರೆದಿದ್ದರು. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಗಡಿಗೆ ಹೊಂದಿರುವ ರಾಜ್ಯಗಳಿಗೆ ಎನ್ಆರ್ಸಿ ವಿಸ್ತರಿಸಲು ಮೋದಿ ಸರಕಾರ ಕಟಿಬದ್ಧವಾಗಿದೆ. ಮುಸ್ಲಿಂ ಮೂಲದ ನಾಗರಿಕರನ್ನು ಗುರಿಯಾಗಿಸಲಾಗುವುದು ಎಂಬ ಭೀತಿ ಕಾಡತೊಡಗಿದೆ.
ಇದೇ ಹೊತ್ತಿಗೆ ಬಾಂಗ್ಲಾದೇಶದಿಂದ ಬಂದ ಹಿಂದೂ ವಲಸಿಗರಿಗೆ ಪೌರತ್ವ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಪೌರತ್ವ ನೀಡಲಾಗುವುದು ಎಂದು ಬಿಜೆಪಿ ಆಶ್ವಾಸನೆ ನೀಡುತ್ತಿದೆ. ಎನ್ಆರ್ಸಿಯಿಂದ ಕೈಬಿಟ್ಟ ಹಿಂದೂ ನಿರಾಶ್ರಿತರಿಗೆ ಪೌರತ್ವ ನೀಡಲಿಕ್ಕಾಗಿ ಸರಕಾರ ಒಂದು ಮಸೂದೆ ತರಲಿದೆ ಎಂದು ಗೃಹ ಸಚಿವ ಅಮಿತ್ ಷಾ ಜುಲೈ ಒಂದರಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ವಿದೇಶಿಯರನ್ನು ಹೊರತು ಪಡಿಸಿ ಎಲ್ಲಾ ಭಾರತೀಯರನ್ನು ಸೇರಿಸಿ ಕೊಳ್ಳುವ ಉದ್ದೇಶ ಹೊಂದಿದ್ದ ಎನ್ಆರ್ಸಿ ಪ್ರಕ್ರಿಯೆಯನ್ನು ಈಗ ಬಿಜೆಪಿಯ ಕೋಮುವಾದಿ ಹಾಗೂ ಸಂಕುಚಿತ ಉದ್ದೇಶಕ್ಕೆ ಅಪಹರಿಸುವ ಅಪಾಯವಿದೆ.
ಅಸ್ಸಾಮ್ನಲ್ಲಿ ಎನ್ಆರ್ಸಿ ಪ್ರಕ್ರಿಯೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದು ಅವುಗಳಿಗೆ ಪರಿಹಾರ ಸಿಗಬೇಕಾಗಿದೆ. ಎನ್ಆರ್ಸಿಯ ಅಂತಿಮ ಪಟ್ಟಿಯ ಪ್ರಕಟಣೆಯ ನಂತರ, ಅನ್ಯಾಯವಾಗಿ ಅಥವಾ ತಪ್ಪಾಗಿ ಕೈಬಿಡಲಾದವರಿಗೆ-ಅದು ಅಧಿಕಾರಿಗಳ ತಪ್ಪಿನಿಂದಲೇ ಆಗಿರಲಿ, ಕೋಮುವಾದಿ ಪಕ್ಷಪಾತದಿಂದಲೇ ಆಗಿರಲಿ- ನ್ಯಾಯ ಒದಗಿಸಲು ಒಂದು ಶೀಘ್ರ ಕಾನೂನು ಪ್ರಕ್ರಿಯೆ ಆರಂಭವಾಗಬೇಕು. ಪೌರತ್ವ ದಾಖಲೆಯಿಂದ ಕೈಬಿಡಲಾದ ಮಿಲಿಯಗಟ್ಟಲೆ ಜನರಿಗೆ ಏನು ಆಗಬಹುದು?. ಪೌರರಲ್ಲದ ಅವರ ಸ್ಥಾನಮಾನ ಹಾಗೂ ಹಕ್ಕುಗಳು ಏನು?. ವಿದೇಶಿಗರ ನ್ಯಾಯಮಂಡಳಿಯಿಂದ ವಿದೇಶಿಯರು ಎಂದು ಘೋಷಿತರಾದವರನ್ನು ಬಾಂಗ್ಲಾದೇಶಕ್ಕೆ ಕಳಿಸಲು ಸಾಧ್ಯವಿಲ್ಲ ಎನ್ನುವುದು ಆಗಲೇ ಸ್ಪಷ್ಟವಾಗಿರುವಾಗ- ಅವರನ್ನು ಸ್ವೀಕರಿಸಲು ಬಾಂಗ್ಲಾದೇಶ ನಿರಾಕರಿಸಿದೆ- ಅವರನ್ನು ಬಂಧನ ಕೇಂದ್ರಗಳಲ್ಲಿ ಅನಿರ್ದಿಷ್ಟ ಕಾಲ ಕೊಳೆ ಹಾಕಲಾಗುವುದೇ?.
ಎನ್ಆರ್ಸಿ ಪ್ರಕ್ರಿಯೆಯನ್ನು ಆರಂಭಿಸಿ ಅದರ ಮೇಲುಸ್ತುವಾರಿ ನೋಡಿಕೊಂಡ ಸುಪ್ರೀಂ ಕೋರ್ಟ್ ಈ ವಿಷಯಗಳಿಗೆ ಪ್ರತಿಕ್ರಿಯಿಸದೆ ನುಣುಚಿಕೊಳ್ಳಲಾಗದು. ಭಾರತೀಯ ನಾಗರಿಕತ್ವ ಮತ್ತು ನಾಗರಿಕರ ಹಕ್ಕುಗಳ ಮೂಲಭೂತ ವಿಚಾರಗಳು ಇಲ್ಲಿ ಅಡಕವಾಗಿವೆ. ಎನ್ಆರ್ಸಿಯ ದೋಷಪೂರಿತ ಅನುಷ್ಠಾನದಿಂದ ಉದ್ಭವಿಸುವ ಅವಾಂತರಗಳನ್ನು ಪರಿಹರಿಸಲು ವಿಫಲವಾದರೆ ಅದು ಪೌರರ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಮನಾಗುತ್ತದೆ. ಇದರಿಂದ ಭಾರತ ಒಂದು ಪ್ರಜಾಪ್ರಭುತ್ವ ಮತ್ತು ಕಾನೂನು ಪಾಲಿಸುವ ಸಮಾಜ ಎಂಬ ಘನತೆಗೆ ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ ಕಳಂಕ ಬರುತ್ತದೆ.
ಅಂತಿಮ ಪಟ್ಟಿ ಪ್ರಕಟಣೆಯ ಜುಲೈ 31ರ ಗಡುವು ಸಮೀಪಿಸುತ್ತಿರುವಾಗ ಇಂಥ ಸನ್ನಿವೇಶ ಇರುವ ಹೊತ್ತಿನಲ್ಲೇ ಕೇಂದ್ರ ಸರಕಾರ ಮತ್ತು ಅಸ್ಸಾಂ ರಾಜ್ಯ ಸರಕಾರ ಹಠಾತ್ತನೆ ಒಂದು ಹೊಸ ಬೇಡಿಕೆಯೊಂದಿಗೆ ಸುಪ್ರೀಂ ಕೋರ್ಟ್ನ ಮೊರೆ ಹೋಗಿದೆ. ಅಂತಿಮ ಪಟ್ಟಿ ಪ್ರಕಟಣೆಯ ಗಡುವನ್ನು ಜುಲೈ 31ರಿಂದ ಬೇರೊಂದು ದಿನಾಂಕ್ಕೆ ಮುಂದೂಡಬೇಕೆನ್ನುವುದೇ ಆ ಬೇಡಿಕೆಯಾಗಿದೆ. ಈ ನಡುವೆ, 2018ರ ಜುಲೈ 30ರಂದು ಪ್ರಕಟಿಸಲಾದ ಎನ್ಆರ್ಸಿ ಕರಡಿನಲ್ಲಿರುವ ಹೆಸರುಗಳ ಸ್ಯಾಂಪಲ್ ಪುನರ್-ದೃಢೀಕರಣ ಆಗಬೇಕೆಂಬುದು ಅವುಗಳ ಬೇಡಿಕೆ. ಬಾಂಗ್ಲಾದೇಶದ ಗಡಿಗೆ ಹೊಂದಿರುವ ಜಿಲ್ಲೆಗಳ ಶೇಕಡಾ ೨೦ರಷ್ಟು ಹಸರುಗಳ ಮರು-ದೃಢೀಕರಣ ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇಕಡಾ ೧೦ ಮರು-ದೃಢೀಕರಣ ಆಗಬೇಕು ಎಂದು ಅವು ಹೇಳಿವೆ.
ದುರುದ್ದೇಶಪೂರಿತವಾದ ಈ ಮನವಿಯು ಈಗಾಗಲೇ ಪದೇ ಪದೇ ವಿಚಾರಣೆಗಳು ಮತ್ತು ದಾಖಲೆಪತ್ರಗಳ ಸಲ್ಲಿಕೆಗಳಿಂದ ಹೈರಾಣವಾಗಿರುವ ಲಕ್ಷಾಂತರ ನಾಗರಿಕರಿಗೆ ಮತ್ತಷ್ಟು ಕಿರುಕುಳ ಮುಂದುವರಿಸಲು ಕಾರಣವಾಗುತ್ತದೆ.
ಈ ಕ್ರಮವನ್ನು ದೃಢವಾಗಿ ವಿರೋಧಿಸಬೇಕು. ಪೌರತ್ವ ಕಾನೂನಿಗೆ ತಿದ್ದುಪಡಿ ತರು ವರೆಗೆ ಅಥವಾ ಬಾಂಗ್ಲಾದೇಶದ ಹಿಂದೂ ವಲಸಿಗರಿಗೆ ನಾಗರಿಕತ್ವ ನೀಡುವವರೆಗೆ ಎನ್ಆರ್ಸಿಯನ್ನು ಅಂತಿಮಗೊಳಿಸುವುದನ್ನು ವಿಳಂಬ ಮಾಡುವುದು ಮೋದಿ ಸರಕಾರ ಉದ್ದೇಶ ಎಂದು ನಂಬಲು ಬೇಕಷ್ಟು ಕಾರಣಗಳಿವೆ. ಕೋಮುವಾದದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕ್ರಮ ಅಸಂವಿಧಾನಿಕವಾದುದು ಹಾಗೂ ವಿಭಜನಕಾರಿ ಯಾದುದು.
–ಪ್ರಕಾಶ್ ಕಾರಟ್
ಅನು: ವಿಶ್ವ
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!
ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯ ಅಂತ್ಯಸಂಸ್ಕಾರವನ್ನು ಆಕೆಯ ಇಚ್ಛೆಯಂತೆ ಯುವಕನ ಸಮಾಧಿಯ ಪಕ್ಕದಲ್ಲೇ ನೆರವೇರಿಸಲಾಗಿದೆ.
ನಡೆದಿದ್ದೇನು?
ಕಿದೂರು ಕುಂಟಂಗೇರಡ್ಕದ ಪ್ರಫುಲ್ಲ (26) ಮತ್ತು ತಮಿಳುನಾಡು ನಿವಾಸಿಯಾದ ಬ್ಯಾಂಕ್ ನೌಕರ ಮಣಿ ಎಂಬವರಿಗೆ ನಾಲ್ಕು ತಿಂಗಳ ಹಿಂದೆ ಅದ್ಧೂರಿಯಾಗಿ ಮದುವೆ ನಿಶ್ಚಿತಾರ್ಥ ನಡೆದಿತ್ತು. ಇನ್ನೇನು ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ, ಒಂದು ತಿಂಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು.
ಡೆತ್ ನೋಟ್ನಲ್ಲಿತ್ತು ಕೊನೆಯ ಆಸೆ
ತನ್ನ ಭಾವಿ ಪತಿಯ ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಪ್ರಫುಲ್ಲ, ಕಳೆದ ಭಾನುವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಆಕೆ ಬರೆದಿದ್ದ ಡೆತ್ ನೋಟ್ ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ. “ನನ್ನ ಮೃತದೇಹವನ್ನು ಮಣಿಯ ಸಮಾಧಿಯ ಸಮೀಪದಲ್ಲೇ ಅಂತ್ಯಸಂಸ್ಕಾರ ಮಾಡಬೇಕು” ಎಂದು ಆಕೆ ತನ್ನ ಕೊನೆಯ ಆಸೆಯನ್ನು ಬರೆದಿಟ್ಟಿದ್ದರು.
ತಮಿಳುನಾಡಿನಲ್ಲಿ ಅಂತ್ಯಕ್ರಿಯೆ
ಯುವತಿಯ ಆಸೆಯಂತೆ ಉಭಯ ಕುಟುಂಬದವರು ಮಾತುಕತೆ ನಡೆಸಿದರು. ಅದರಂತೆ ನಿನ್ನೆ ಕಾಸರಗೋಡಿನಿಂದ ಪ್ರಫುಲ್ಲರ ಮೃತದೇಹವನ್ನು ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ವಳ್ಳಿಯೂರು ಎಂಬಲ್ಲಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಪ್ರೇಮಿಗಳಿಬ್ಬರನ್ನು ಸಾವಿನಲ್ಲೂ ಒಂದಾಗಿಸಲಾಯಿತು.
ಅಂತ್ಯಸಂಸ್ಕಾರದ ವೇಳೆ ಎರಡೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಮರುಗುವ ಪ್ರೇಮಕಥೆಗೆ ಕಂಬನಿಯ ವಿದಾಯ ಹೇಳಿದರು. ಈ ವಿಡಿಯೋ ಮತ್ತು ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಯ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್; ಪ್ರವೇಶಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 2026 ರ ಜುಲೈ 01ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 23 ವರ್ಷ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 25 ವರ್ಷ ಮೀರಿರಬಾರದು. ಒಟ್ಟು 39 ಅಭ್ಯರ್ಥಿಗಳನ್ನು (ಪುರುಷ ಮತ್ತು ಮಹಿಳಾ) ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿಯೊಬ್ಬ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ. 2,500/- ಗಳ ಶಿಷ್ಯವೇತನ ನೀಡಲಾಗುವುದು., ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವಾಗಿ ಅಭ್ಯಸಿಸಿ ಉತ್ತೀರ್ಣರಾಗಿರಬೇಕು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಡಿಪ್ಲೋಮಾ ಕೋರ್ಸ್ಗೆ ನೇರ ಪ್ರವೇಶಕ್ಕೆ https://khtigadag.ac.in/
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಳಿಗಾಗಿ ಉಪ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕಾಲೇಜು ರಸ್ತೆ, ನಿಟ್ಟುವಳ್ಳಿ, ದಾವಣಗೆರೆ ಅಥವಾ ದೂರವಾಣಿ ಸಂಖ್ಯೆ: 08192-262362 ಸಂಪರ್ಕಿಸುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿನದ ಸುದ್ದಿ
ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದಾವಣಗೆರೆಯ ಭೂಮಿಕಾ ನಗರದ ನಿವಾಸಿಯಾಗಿರುವ 52 ವರ್ಷದ ಸರ್ಕಾರಿ ಕಾಲೇಜಿನ ಉಪನ್ಯಾಸಕ ಹಣ ಕಳೆದುಕೊಂಡಿದ್ದಾರೆ.
ಉಪನ್ಯಾಸಕರು ಮೊದಲಿಗೆ ಟೆಲಿಗ್ರಾಂ ಮೂಲಕ ಲಿಂಕ್ ಕ್ಲಿಕ್ ಮಾಡಿದ್ದಾರೆ. ಅಲ್ಲಿ ವಂಚಕರು ಹೇಳಿದಂತೆ ಹಲವು ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋಗಿದ್ದು, ಹಂತಹಂತವಾಗಿ ಹಣ ಕಳೆದುಕೊಂಡಿದ್ದಾರೆ.
ಲಾಭದ ನಿರೀಕ್ಷೆಯಲ್ಲಿದ್ದ ಉಪನ್ಯಾಸಕರಿಗೆ ಲಾಭ ಹೋಗಲಿ, ಅಸಲೂ ಬಾರದ ಕಾರಣ ಅನುಮಾನಗೊಂಡು ತಾನು ಹಣ ಕಳೆದುಕೊಂಡಿರುವುದು ದೃಢಪಟ್ಟಿದೆ. ನಂತರ ಸೈಬರ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬೆಂಕಿ ರಹಿತ ಕುಕಿಂಗ್ ಕಾರ್ಯಕ್ರಮ
-
ದಿನದ ಸುದ್ದಿ5 days agoಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣಕ್ಕೆ ಉಚಿತ ಅವಕಾಶ : ಕೂಡಲೇ ಆಧಾರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ
-
ದಿನದ ಸುದ್ದಿ2 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ದಿನದ ಸುದ್ದಿ6 days agoಸಂಶೋಧಕರಿಂದ ಪಶ್ಚಿಮ ಘಟ್ಟಗಳಲ್ಲಿ ಮೂರು ಅಣಬೆಯ ಹೊಸ ಶಿಲೀಂಧ್ರ ಜಾತಿಗಳ ಪತ್ತೆ
-
ಕ್ರೀಡೆ5 days agoಹಿರಿಯ ಕ್ರಿಕೆಟ್ ಪಟು ಎನ್ಆರ್ಎಚ್ ರಮೇಶ್ ನಿಧನ
-
ಅಂಕಣ1 day agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ24 hours agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

