ದಿನದ ಸುದ್ದಿ
ಅನುಚ್ಛೇದ 370 ರದ್ದು | ಒಂದು ವಿಶ್ಲೇಷಣೆ : ಮಿಸ್ ಮಾಡ್ದೆ ಈ ಲೇಖನ ಓದಿ..!
ಅನುಚ್ಛೇದ 370 ರದ್ದು ಪಡಿಸಿರುವುದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಕೊನೆಯಿಲ್ಲದ್ದು. ನನಗೆ ತಿಳಿದಿರುವಷ್ಟು ಮಟ್ಟಿಗೆ ಅನುಚ್ಛೇದ 370 ಹಾಗೂ 35A ರದ್ದಾದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ಭಾರತದೊಂದಿಗಿರುವ ಸಂವಿಧಾನಾತ್ಮಕ ಸಂಬಂಧ ಕಡಿದು ಹೋಗುವುದಿಲ್ಲ. ಯಾಕೆಂದರೆ ಅನುಚ್ಛೇದ 370 ಬರುವ ಮೊದಲೇ ಜಮ್ಮು-ಕಾಶ್ಮೀರ ಸ್ವತಂತ್ರ ಭಾರತದ ಭಾಗವೆಂದು ಗುರುತಿಸಲ್ಪಟ್ಟಿತ್ತು. ನೆನಪಿರಲಿ ಸ್ವಾತಂತ್ರ್ಯ ನಂತರ ದೇಶದಲ್ಲಿದ್ದ ರಾಜ-ಮಹಾರಾಜರುಗಳ ಸಂಸ್ಥಾನ, ರಾಜ್ಯಗಳೆಲ್ಲಾ ಭಾರತದಲ್ಲಿ ವಿಲೀನವಾದ ಮಾದರಿಯಲ್ಲೇ ಜಮ್ಮು-ಕಾಶ್ಮೀರ ಕೂಡಾ ವಿಲೀನವಾಗಿತ್ತು. ಮೈಸೂರು ಸಂಸ್ಥಾನ, ಮಣಿಪುರ, ತೆಹ್ರಿ ಘರ್ವಾಲ್, ಉದಯಪುರ ಮುಂತಾದ 140 ಸಂಸ್ಥಾನಗಳು ಕೂಡಾ ಭಾರತ ಸ್ವಾತಂತ್ರ್ಯ ಸಿಕ್ಕ ತಕ್ಷಣ ಭಾರತದ ರಾಜ್ಯಗಳಾಗಲಿಲ್ಲ. ಅದಕ್ಕಾಗಿ ಸ್ವತಂತ್ರ ಭಾರತದೊಂದಿಗೆ ಈ ಸಂಸ್ಥಾನಗಳು Instrument of Accession (ವಿಲೀನ ಪತ್ರ)ಗಳಿಗೆ ಸಹಿ ಮಾಡಿ, ಸ್ವತಂತ್ರ ಭಾರತವನ್ನು ಅಧಿಕೃತವಾಗಿ ಸೇರಿದ್ದವು. ಈ ಎಲ್ಲಾ ವಿಲೀನ ಪತ್ರಗಳು ಬಹುಷ ಇವತ್ತೂ ಗೃಹ ಇಲಾಖೆಯ ಕಡತಗಳಲ್ಲಿವೆ.
ದೆಹಲಿಯಲ್ಲಿ ನೆಲೆಸಿರುವ RTI ಕಾರ್ಯಕರ್ತ ಹಾಗೂ ಇತಿಹಾಸ ಸಂಶೋಧಕ ವೆಂಕಟೇಶ ನಾಯಕರು ಇದರ ಬಗ್ಗ್ಗೆ ಕೆಲ ವರುಷಗಳ ಹಿಂದೆ ದೀರ್ಘ ಸಂಶೋಧನೆಯೊಂದನ್ನು ಮಾಡಿ, RTI ಮೂಲಕ ಸ್ವಾತಂತ್ಯ ಸಮಯದಲ್ಲಿ ಸಹಿ ಮಾಡಲಾಗಿದ್ದ ಕೆಲ ವಿಲೀನ ಪತ್ರಗಳ ಪ್ರತಿ ಪಡೆದುಕೊಂಡಿದ್ದರು. ಅವರ ಪ್ರಕಾರ ಜಮ್ಮು-ಕಾಶ್ಮೀರ ಹಾಗೂ ಇತರ 140 ಸಂಸ್ಥಾನಗಳು ಸಹಿ ಮಾಡಿರುವ ವಿಲೀನ ಪತ್ರಗಳಲ್ಲಿ ಹೆಚ್ಚೇನು ವ್ಯತ್ಯಾಸವಿಲ್ಲ. ಈ ಎಲ್ಲಾ ಸಂಸ್ಥಾನಗಳು ಮೊದಲು ಕೇವಲ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ನಿರ್ಧಾರಗಳನ್ನು ದೇಶಕ್ಕೆ ಬಿಟ್ಟುಕೊಟ್ಟು, ಉಳಿದೆಲ್ಲಾ ಅಧಿಕಾರಗಳನ್ನು ತಮ್ಮಲ್ಲೇ ಇಟ್ಟುಕೊಂಡಿದ್ದವು. ವಿಲೀನ ಪತ್ರದೊಟ್ಟಿಗೆ ಹೆಚ್ಚಿನ ಸಂಸ್ಥಾನಗಳು ಭಾರತದೊಂದಿಗೆ ತಾಟಸ್ಥ್ಯ ಒಪ್ಪಂದಗಳನ್ನೂ ಮಾಡಿಕೊಂಡಿದ್ದವು. ಅಂದರೆ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಆರ್ಥಿಕ ಅಧಿಕಾರಗಳ ಹೊರತು ಬೇರೆ ಯಾವುದೇ ವಿಷಯದಲ್ಲಿ ಭಾರತ ಸರ್ಕಾರ ಈ ಸಂಸ್ಥಾನಗಳ ಮೇಲೆ ತನ್ನ ಹಕ್ಕು ಚಲಾಯಿಸುವುದಿಲ್ಲವೆನ್ನೋದು ಈ ತಾಟಸ್ಥ್ಯ ಒಪ್ಪಂದದ ಹೂರಣವಾಗಿತ್ತು. ಹಾಗಾಗಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಈ ಸಂಸ್ಥಾನಗಳಿಗೆ ಪೂರ್ಣ ಸ್ವಾಯತ್ತತೆ ಇತ್ತು, ಬರೀ ಜಮ್ಮು-ಕಾಶ್ಮೀರಕ್ಕೆ ಮಾತ್ರವಲ್ಲ. ಆದರೆ ಮುಂದೆ ಹೆಚ್ಚಿನ ಸಂಸ್ಥಾನಗಳು ತಮ್ಮ ಸ್ವ-ಇಚ್ಛೆಯಿಂದಲೇ ಭಾರತದೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಲೀನವಾಗಲು ಒಪ್ಪಂದಕ್ಕೆ ಸಹಿ ಹಾಕಿ ಸ್ವತಂತ್ರ ಭಾರತದ ಪರಿಪೂರ್ಣ ಭಾಗವಾದರು.
ಆದರೆ ಜಮ್ಮು-ಕಾಶ್ಮೀರದ ಅಂದಿನ ಯುವರಾಜ, ರಾಜ್ಯದ ಮಹಾರಾಜ ಹರಿಸಿಂಗ್ ತನಗೆ ಕೊಟ್ಟ ಅಧಿಕಾರವನ್ನು ಉಪಯೋಗಿಸಿ, ನವೆಂಬರ್ 25, 1949ರಂದು ಒಂದು ಪ್ರಕಟನೆ ಮಾಡಿ, ಶೀಘ್ರದಲ್ಲೇ ಜಾರಿಯಾಗಲಿದ್ದ ಸಂವಿಧಾನ ಎಷ್ಟು ಹಾಗೂ ಯಾವ ಮಟ್ಟಿಗೆ ಜಮ್ಮು-ಕಾಶ್ಮೀರದಲ್ಲಿ ಯುಕ್ತವಾಗಬಹುದೆಂದು ಘೋಷಿಸಿದರು. ಹೀಗಾಗಯೇ ಅನುಚ್ಛೇದ 370 (ಅಂದು ಅನುಚ್ಛೇದ 309) ಜಾರಿಗೆ ಬಂತು. ಇದೆಲ್ಲಾ ಭಾಷಾವಾರು ರಾಜ್ಯಗಳು ಆಗುವ ಮೊದಲು. ಈ ವಿಲೀನ ಪ್ರಕ್ರಿಯೆಯಿಂದಲೇ ಮುಂದೆ ವಿಂಧ್ಯಾ ಪ್ರದೇಶ, ಮತ್ಸ್ಯ ಒಕ್ಕೂಟ, ಪಟಿಯಾಲಾ ಹಾಗೂ ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟ, ತಿರು-ಕೊಚ್ಚಿ (United State of Travancore and Cochin) ಮುಂತಾದ ದೊಡ್ಡ ಒಕ್ಕೂಟಗಳ ಉದಯವಾಗಿತ್ತು. ಭಾಷಾವಾರು ಪ್ರಾಂತ್ಯಗಳ ರಚನೆಯ ಸಂಧರ್ಭದಲ್ಲಿ ಈ ರಾಜ್ಯಗಳ ಒಕ್ಕೂಟಗಳು ರದ್ದಾದವು.
ಹಾಗಾಗಿ ಅನುಚ್ಛೇದ 370 ರದ್ದಾದ ಮಾತ್ರಕ್ಕೆ ಜಮ್ಮು-ಕಾಶ್ಮೀರ ಭಾರತದ ಕೈತಪ್ಪಿ ಹೋಗುವುದಿಲ್ಲ. ಅದು ಇನ್ನೂ ಭಾರತ ಒಕ್ಕೂಟದ ಅವಿಭಾಜ್ಯ ಅಂಗ ಯಾಕೆಂದರೆ ಜಮ್ಮು-ಕಾಶ್ಮೀರಕ್ಕೆ ಭಾರತ ಒಕ್ಕೂಟದೊಂದಿಗೆ ಅಧಿಕೃತ ಸಂಬಂಧ ಬೆಸೆದಿದ್ದು ಅನುಚ್ಛೇದ 370ದಿಂದಾಗಿ ಅಲ್ಲ ಬದಲಾಗಿ 1947ರಲ್ಲಿ ಸಹಿ ಮಾಡಿದ Instrument of Accessionನಿಂದಾಗಿ. ಆದರೆ ಅನುಚ್ಛೇದ 370 ರದ್ದಾಗಿರುವುದರಿಂದ ಬಿಜೆಪಿಯವರು, ಸಂಘ ಪರಿವಾರ ಹೇಳುವಂತೆ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿರುವ ವಿಶೇಷ ಸ್ಥಾನಮಾನ, ಸ್ವಾಯತ್ತತೆ ಸಂಪೂರ್ಣವಾಗಿ ರದ್ದಾಗಿ, ಅದು ಕೂಡಾ ಇತರ ರಾಜ್ಯಗಳಂತೆಯೇ ಆಗುತ್ತದೆಯೆನ್ನುವುದು ಸತ್ಯವಲ್ಲ. ಯಾಕೆಂದರೆ ಅನುಚ್ಛೇದ 370 ರದ್ದಾದರೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಬೆಸೆಯಲು ಉಳಿಯುವ ಏಕೈಕ ಕೊಂಡಿಯೆಂದರೆ 1947ರಲ್ಲಿ ಸಹಿ ಮಾಡಿದ Instrument of Accession. ಈ Instrument of Accession ಪ್ರಕಾರ ಭಾರತ ಸರಕಾರಕ್ಕೆ ಜಮ್ಮು-ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ನೀತಿ ಹಾಗೂ ಹಣಕಾಸಿನ ವಿಷಯಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲಿ ಯಾವುದೇ ಹಕ್ಕಿಲ್ಲ.
ಇತರ ಎಲ್ಲಾ ವಿಷಯಗಳನ್ನೂ ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ಸ್ವಾಯತ್ತತೆ ಇದೆ. ಅಂದರೆ ಕೇವಲ ಅನುಚ್ಛೇದ 370ವನ್ನು ರದ್ದು ಮಾಡಿದರೆ ಜಮ್ಮು-ಕಾಶ್ಮೀರಕ್ಕೆ ಸದ್ಯಕ್ಕಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಸಿಗುತ್ತದೆ. ಇದರ ಪರಿಣಾಮಗಳನ್ನು ಊಹಿಸಲೂ ಅಸಾಧ್ಯ. ಅದರಿಂದಾಗಿಯೇ ಕೇಂದ್ರ ಸರಕಾರ ಕೇವಲ ಅನುಚ್ಛೇದ 370ವನ್ನು ರದ್ದು ಮಾಡುವ ದುಸ್ಸಾಹಸಕ್ಕೆ ಕೈಹಾಕಿಲ್ಲ ಬದಲಾಗಿ ಅನುಚ್ಛೇದ 370ನ್ನು ರದ್ದು ಮಾಡಿ, ಜಮ್ಮು-ಕಾಶ್ಮೀರವನ್ನು ವಿಭಜಿಸಿ ಲಡಾಖ್ ಕೇಂದ್ರಾಡಾಳಿತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಿಂದು ಘೋಷಿಸಿದೆ. ಇದು ರಾಜ್ಯಸಭೆ, ಲೋಕಸಭೆಯಲ್ಲಿ ಪಾಸಾದರೂ ನ್ಯಾಯಾಂಗ ಹಾಗೂ ಸಂವಿಧಾನದ ಪರೀಕ್ಷೆಗೆ ಒಳಪಡುವುದಂತೂ ಗ್ಯಾರಂಟಿ. ಅನುಚ್ಛೇದ 370 ಎಂದರೆ ಬರೀ ಸ್ವಾಯತ್ತತೆ ಮಾತ್ರವಲ್ಲ. ಅದರಲ್ಲಿ ಅನೇಕ ವಿಸ್ತ್ರತವಾದ ವಿಷಯಗಳು ಅಡಕವಾಗಿವೆ ಹಾಗೂ ಈ ಎಲ್ಲಾ ವಿಷಯಗಳ ವಿಸ್ತ್ರತ ಪರೀಕ್ಷೆ ಸಂವಿಧಾನದ ಪೂರ್ಣ ಪೀಠದ ನೆರಳಿನಲ್ಲಿಯೇ ನಡೆಯಬೇಕು.
ಇದು ಇಷ್ಟಾದರೆ, ನಕಲಿ ರಾಷ್ಟ್ರೀಯವಾದಿಗಳಿಗೆ ಆರ್ಟಿಕಲ್ 370 ಎಂದರೆ ಬರೀ ಜಮ್ಮು-ಕಾಶ್ಮೀರಿಗಳನ್ನು ಹೊರತುಪಡಿಸಿ ದೇಶದ ಬೇರೆ ರಾಜ್ಯದ ಯಾರೂ ಅಲ್ಲಿ ಜಮೀನನ್ನು ಕೊಳ್ಳುವಂತಿಲ್ಲ ಎಂಬುವುದಕ್ಕೆ ಸೀಮಿತ. ಹೋಗ್ಲಿ ಬಿಡಿ. ನಮ್ಮಿಂದ ಮೂರು ಸಾವಿರಕ್ಕಿಂತಲೂ ಹೆಚ್ಚು ಕಿಲೋಮೀಟರ್ ದೂರವಿರುವ ರಾಜ್ಯದಲ್ಲಿ ಜಮೀನು ಖರೀದಿಸುವ ತುರ್ತು ಹಾಗೂ ಜರೂರತ್ತು ಯಾರಿಗೆ, ಯಾಕಿದೆ ಅಂತಾ ಇನ್ನೊಂದು ಚರ್ಚೆ. ಅಲ್ಲಿ ಆರ್ಟಿಕಲ್ 370 ಇದ್ದಾಗಲೂ ನಮ್ಮಂಥ ಸಾಮಾನ್ಯ ನಾಗರಿಕರಿಗೆ ಏನೂ ತೊಂದರೆಯಾಗಿದ್ದಿಲ್ಲ, ಈವಾಗ ಅದು ರದ್ದಾದರೂ ದೇಶದ ಸಾಮಾನ್ಯ ನಾಗರಿಕರಿಗೆ ಯಾವುದೇ ಲಾಭನೂ ಇಲ್ಲ. ಹಾಗಾಗಿ ಆರ್ಟಿಕಲ್ 370 ರದ್ದಾದ ಕೂಡಲೇ ಅಲ್ಲಿ ಹೊರ ರಾಜ್ಯದ ಎಷ್ಟು ಮಂದಿ ಹೋಗಿ ಜಮೀನನ್ನು ಕೊಂಡುಕೊಳ್ಳುತ್ತಾರೋ ನೋಡೋಣ.
ಆದರೆ ಇಂಥದೊಂದು ನಿಯಮ ಬರೀ ಜಮ್ಮು-ಕಾಶ್ಮೀರದಲ್ಲಿ ಮಾತ್ರ ಇದೆ ಎಂದು ಭಕ್ತರು ಮಾತ್ರವಲ್ಲ, ತೊಂಬತ್ತು ಪರ್ಸೆಂಟ್ ಭಾರತನೇ ಎಂದುಕೊಂಡಿದೆ. ಯಾಕೆಂದರೆ ಅವರಿಗೆ ಸಂವಿಧಾನದ ಆರ್ಟಿಕಲ್ 371G, 371A ಹಾಗೂ ಇತರ ಅನುಚ್ಛೇದಗಳ ಬಗ್ಗೆ ಬಗ್ಗೆ ಎಳ್ಳಷ್ಟೂ ಪರಿಜ್ಞಾನವಿಲ್ಲವೆನ್ನೋದು ಸಾರ್ವಕಾಲಿಕ ಸತ್ಯ. ಸದ್ಯಕ್ಕೆ ಬಿಜೆಪಿ ಆಡಳಿತವಿರುವ ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಸಿಕ್ಕಿಂ ಮುಂತಾದ ರಾಜ್ಯಗಳಲ್ಲೂ ಹೊರಗಿನವರು ಜಮೀನನ್ನು ಖರೀದಿಸುವಂತಿಲ್ಲ ಅಥವಾ ಅಲ್ಲಿನವರು ಹೊರಗಿನವರಿಗೆ ಜಮೀನನ್ನು ಮಾರುವಂತಿಲ್ಲ. ಮೇಘಾಲಯ, ಮಣಿಪುರಗಳ ಹೆಚ್ಚಿನ ಭೂಪ್ರದೇಶದಲ್ಲೂ ಇಂಥದೊಂದು ಕಾನೂನು ಅನ್ವಯವಾಗುತ್ತೆ. ಆದರೆ ಈ ರಾಜ್ಯಗಳ ಬಗ್ಗೆ ಮಾತಾನಾಡಿದರೆ ಮತಗಳು ಸಿಗೋಲ್ಲ. ಸಿಗಬೇಕಾದರೆ ಜಮ್ಮು-ಕಾಶ್ಮೀರದ ಬಗ್ಗೆ ಮಾತಾನಾಡಬೇಕು ಯಾಕೆಂದರೆ ಅದು ಮುಸ್ಲೀಮರ ರಾಜ್ಯ (ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ). ದೇಶದಲ್ಲಿ ಹಿಂದೂಗಳ ಪರವಾಗಿ ಮಾತಾನಾಡುವುದಕ್ಕಿಂತ, ಮುಸ್ಲೀಮರ ವಿರುದ್ದ ಮಾತಾನಾಡಿದರೆ ಹೆಚ್ಚು ಮತಗಳು ಸಿಗಬಲ್ಲವೆನ್ನೋದು ಕಳೆದ ಮೂರು ದಶಕಗಳಲ್ಲಿ ಈ ದೇಶ ಕಂಡುಕೊಂಡಿರುವ ಸತ್ಯ.
ಹಾಗಾಗಿ ನಾವಿವತ್ತು ಅನುಚ್ಛೇದ 370 ಹಾಗೂ 35A ರದ್ದು ಮಾಡಿರುವ ಬಗ್ಗೆ ಹಾಗೂ ಅದರ ಉದ್ದೇಶಗಳ ಬಗ್ಗೆ ಮಾತಾನಾಡುವುದಕ್ಕಿಂತ ಹೆಚ್ಚಾಗಿ ಮಾತಾನಾಡಬೇಕಾಗಿರುವುದು ಇದನ್ನು ರದ್ದು ಮಾಡಿರುವ ರೀತಿ. ಇದೊಂದು Majoritarian Tyranny (ಬಹುಸಂಖ್ಯಾತ ನಿರಂಕುಶ ಪ್ರಭುತ್ವ) ತನ್ನ ಸುಪರ್ಧಿಯಲ್ಲಿರುವ ಅಗಾಧ Brutal Force ಉಪಯೋಗಿಸಿ ತನಗೆ ಬೇಕಾದುದನ್ನು ಮಾಡಬಲ್ಲದೆನ್ನುವುದಕ್ಕೆ ಕ್ಲಾಸಿಕ್ ಉದಾರಹರಣೆ. ಅನುಚ್ಛೇದ 370 ಹಾಗೂ 35A ರದ್ದು ಮಾಡಬೇಕಿತ್ತೇ? ಅದನ್ನು ಸಾಂವಿಧಾನಿಕ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಈ ಸರಕಾರಕ್ಕೆ ಅನುಚ್ಛೇದ 370 ಹಾಗೂ 35A ರದ್ದು ಮಾಡುವುದಕ್ಕಿಂತ ಹೆಚ್ಚಾಗಿ ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೊಂದು ಎಚ್ಚರಿಕೆ ಕೊಡಬೇಕೆನ್ನುವ ಆಸೆಯಿದ್ದಂತೆ ತೋರುತ್ತಿದೆ. ಅಂದರೆ ಈ ದೇಶದಲ್ಲಿ ನಾವು ಬಹುಸಂಖ್ಯಾತರು, ನಮ್ಮ ಸಂಖ್ಯಾಬಲ ಶಾಸನಸಭೆಗಳಲ್ಲಿ ಇದ್ದರೆ, ಈ ಸಂಖ್ಯಾಬಲವನ್ನು ಉಪಯೋಗಿಸಿ, ನಾವು ಅಲ್ಪಸಂಖ್ಯಾತರಾದ ನಿಮ್ಮ ಸಲಹೆ, ಅನುಮತಿಯಿಲ್ಲದೆ ನಮಗೆ ಬೇಕಾದ ಕಾನೂನುಗಳನ್ನು ತರಬಲ್ಲೆವು ಎಂದು ತೋರಿಸಲೇಬೇಕೆಂದು ಪಣತೊಟ್ಟಂತಿದೆ ಈ ಸರಕಾರ. ಉಗ್ರವಾದ, ಪಾಕೀಸ್ಥಾನ ಮುಂತಾದವುಗಳೆಲ್ಲಾ ಸಬೂಬು ಮಾತ್ರ.
ಈ ಕಾರಣದಿಂದಾಗಿಯೇ ಇವತ್ತು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿದ ರೀತಿ ಪ್ರಶ್ನಾರ್ಹ. ರಾಜ್ಯದ ಮೂವರು ಮುಖ್ಯಮಂತ್ರಿಗಳು ಹಾಗೂ ಇತರ ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಿ, ಮನೆಗೊಬ್ಬ್ರರಂತೆ ಸೈನಿಕರನ್ನು ನೇಮಿಸಿ, ಕರ್ಫ್ಯೂ ಹಾಕಿ, ಮಾಧ್ಯಮ, ಅಂತರ್ಜಾಲ, ಮೊಬೈಲ್ಗಳನ್ನು ನಿಷೇಧಿಸಿ, ತುರ್ತು ಪರಿಸ್ಥಿತಿಯನ್ನು ನಿರ್ಮಿಸಿ, ಲೋಕಸಭೆ, ರಾಜ್ಯಸಭೆಯಲ್ಲಿ ಚರ್ಚೆ ಕೂಡಾ ಮಾಡದೇ, ವಿರೋಧ ಪಕ್ಷಗಳನ್ನು ಗಣನೆಗೆ ತೆಗೆದುಕೊಳ್ಳದೆ ಇಂಥದೊಂದು ನಿರ್ಧಾರ ಕೈಗೊಂಡಿದ್ದಾರೆಂದರೆ ಅದರ ಹಿಂದಿನ ಉದ್ದೇಶಗಳೂ ಅನುಮಾನಸ್ಪದ ಹಾಗೂ ಪ್ರಶ್ನಾರ್ಹವೇ. ಇದನ್ನು ರದ್ದು ಮಾಡಲು ಜಮ್ಮು-ಕಾಶ್ಮೀರದ ವಿಧಾನಸಭೆಯ ಅನುಮತಿ ಕೂಡಾ ಅಗತ್ಯವೆಂದು ಸಂವಿಧಾನವೇ ಹೇಳಿದೆ. ಆದರೆ ರಾಜ್ಯ ಸರ್ಕಾರವನ್ನು ಮೊದಲೇ ಬರ್ಖಾಸ್ತುಗೊಳಿಸಿ, ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತಂದು, ಇವತ್ತು ರಾಜ್ಯಪಾಲರ ಪತ್ರವೇ ವಿಧಾನಸಭೆಯ ಅನುಮತಿಯೆಂದು ಹೇಳಿ, ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವ ನಿರ್ಧಾರ ಎಷ್ಟು ಸರಿ ಹಾಗೂ ಎಷ್ಟು ತಪ್ಪೆಂದು ಮುಂದಿನ ದಿನಗಳಲ್ಲಿ ಈ ದೇಶದ ಸಂವಿಧಾನವೇ ನಿರ್ಧರಿಸಲಿದೆ. ಅನುಚ್ಛೇದ 370 ಹಾಗೂ 35A ಇದ್ದರೆ ಅಥವಾ ರದ್ದಾದರೆ ಅದರ ಹೆಚ್ಚಿನ ಪರಿಣಾಮಗಳನ್ನು ಅನುಭವಿಸುವವರು, ಲಾಭವನ್ನು ಪಡೆಯುವವರು ಇಲ್ಲ ನಷ್ಟ ಅನುಭವಿಸುವವರು ಆ ರಾಜ್ಯದ ಜನರು. ಹಾಗಾಗಿ ಅನುಚ್ಛೇದ 370 ಹಾಗೂ 35A ರದ್ದು ಮಾಡುವ ಮೊದಲು ಅವರ ಜನಮತ ಸಂಗ್ರಹವಾಗಬೇಕಿತ್ತು. ಅದಾಗಲಿಲ್ಲ ಯಾಕೆಂದರೆ ಈ ನಿರ್ಧಾರ ಅಲ್ಲಿನ ಪ್ರಜೆಗಳ ಒಳಿತಿಗಲ್ಲ ಬದಲಾಗಿ ದೆಹಲಿಯಲ್ಲಿ ಸರ್ಕಾರ ನಡೆಸುವವರ ಹಾಗೂ ಅವರ ರಿಮೋಟ್ ಕಂಟ್ರೋಲ್ ಇಟ್ಟುಕೊಂಡಿರುವವರ ಒಳಿತಿಗಾಗಿ. ಇಂಥದೊಂದು Majoritarian Tyranny ಹಾಗೂ Brutal Force ಇಟ್ಟುಕೊಂಡು, ಅಲ್ಲಿನ ಜನರನ್ನು, ನಾಯಕರನ್ನು ಗನ್ಪಾಯಿಂಟ್ನಲ್ಲಿಟ್ಟುಕೊಂಡು ಅನುಚ್ಛೇದ 370 ಹಾಗೂ 35Aನ್ನು ಹಿಂದಿನ ಯಾವುದೇ ಸರ್ಕಾರನೂ ಮಾಡಬಹುದಿತ್ತು. ಅವರು ಮಾಡಲಿಲ್ಲ ಯಾಕೆಂದರೆ ಅದು ಅಸಾಂವಿಧಾನಿ ಅಷ್ಟೇ ಅಲ್ಲ ಪ್ರಜಾಪ್ರಭುತ್ವ ವಿರೋಧಿ ಕೂಡಾ. ಇವತ್ತು ನಾವು ಪ್ರಶ್ನಿಸಬೇಕಾಗಿರುವುದು ಅನುಚ್ಛೇದ 370 ಹಾಗೂ 35Aನ್ನು ರದ್ದು ಮಾಡಿರುವುದಲ್ಲ ಬದಲಾಗಿ ಅದನ್ನು ರದ್ದು ಮಾಡಿದ ಅಸಾಂವಿಧಾನಿಕ, ನಿರಂಕುಶ, ಸರ್ವಾಧಿಕಾರಿ ರೀತಿ.
ಯಾಕೆಂದರೆ ಇವತ್ತು ಜಮ್ಮು-ಕಾಶ್ಮೀರದಲ್ಲಾಗಿರುವುದು ನಾಳೆ ಕರ್ನಾಟಕದಲ್ಲೂ ಆಗಬಹುದು. ಕೇಂದ್ರ ಸರಕಾರ ತನಗೆ ಬೇಕಾದ ಯಾವುದೋ ಒಂದು ನಿರ್ಧಾರವನ್ನು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ರಾಜ್ಯ ಸರಕಾರವನ್ನು ಬರ್ಖಾಸ್ತುಗೊಳಿಸಿ, ತಮ್ಮದೇ ಕೈಗೊಂಬೆಯಾಗಿರುವ ರಾಜ್ಯಪಾಲರ ಅನುಮತಿ ಪಡೆದು, ರಾಷ್ಟ್ರಪತಿಯವರ ಅದೇಶದ ಮೂಲಕ ನಮ್ಮ ಮೇಲೆ ಹೇರಬಹುದು. ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ. ಆದರೆ ಇಂಥ ಪ್ರಶ್ನೆಗಳನ್ನು ಕೇಳುವವರೆಲ್ಲಾ ದೇಶದ್ರೋಹಿಗಳು, ಪಾಕೀಸ್ಥಾನಿಗಳು, ಜಿಹಾದಿಗಳೆಂದು ಮೊದಲೇ ಫರ್ಮಾನು ಹೊರಡಿಸಲಾಗಿರುವುದರಿಂದ, ಪ್ರಶ್ನೆ ಕೇಳುವವರೂ ತಡವರಿಸುವುದಂತೂ ಗ್ಯಾರಂಟಿ.
–Almeida Gladson
(Facebook post)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪ್ರಮುಖ 8 ಕ್ಲಬ್ಗಳ ಮೇಲೆ ದಿಢೀರ್ ದಾಳಿ; ನಿಯಮ ಉಲ್ಲಂಘನೆಗೆ ನೋಟಿಸ್
ಸುದ್ದಿದಿನ,ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್ಗಳಲ್ಲಿಯೂ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ನಗರದ ಪ್ರಮುಖ 8 ಕ್ಲಬ್ಗಳ ಮೇಲೆ ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವೇಳೆ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಆಹಾರ ಸಂಗ್ರಹಣಾ ಸ್ಥಳದಲ್ಲಿ ಅಶುಚಿತ್ವ, ಜಿರಳೆ ಹಾಗೂ ಇತರೆ ಕೀಟಗಳ ಹಾವಳಿ, ಅಸಮರ್ಪಕ ಆಹಾರ ಸಂಗ್ರಹಣೆ ಮತ್ತು ಅವಧಿ ಮೀರಿದ ಪದಾರ್ಥಗಳು ಪತ್ತೆಯಾಗಿವೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ನಿಯಮಗಳು-2011ರ ಅನ್ವಯ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿತ್ತು. ಬೌರಿಂಗ್ ಕ್ಲಬ್, ಸೆಂಚುರಿ ಕ್ಲಬ್, ಕೆಎಸ್ಸಿಎ ಕ್ಲಬ್, ಕ್ಯಾಥೋಲಿಕ್ ಕ್ಲಬ್, ಟೆನ್ನಿಸ್ ಕ್ಲಬ್, ವಿಜಯನಗರ ಕ್ಲಬ್, ಮಹಾಲಕ್ಷ್ಮಿ ಲೇಔಟ್ ಕ್ಲಬ್ ಮತ್ತು ಮಲ್ಲೇಶ್ವರ ಕ್ಲಬ್ಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು.
http://Visit : www.suddidina.com
ಬೇಳೆಕಾಳಿನಲ್ಲಿ ಹುಳು, ದಾಸ್ತಾನು ಕೇಂದ್ರದಲ್ಲಿ ಜಿರಳೆ
ಬೌರಿಂಗ್ ಕ್ಲಬ್ನಲ್ಲಿ ಬೇಳೆಕಾಳುಗಳಲ್ಲಿ ಹುಳುಗಳು ಕಂಡುಬಂದಿದ್ದು, ದಾಸ್ತಾನು ಕೇಂದ್ರದಲ್ಲಿ ಅಶುಚಿತ್ವ ಹಾಗೂ ಜಿರಳೆಗಳಿರುವುದು ಪತ್ತೆಯಾಗಿದೆ. ಸೆಂಚುರಿ ಕ್ಲಬ್ನಲ್ಲಿಯೂ ಕೀಟಗಳ ಹಾವಳಿ ಮತ್ತು ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಎರಡೂ ಕ್ಲಬ್ಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಕೆಎಸ್ಸಿಎ ಕ್ಲಬ್ನಲ್ಲೂ ಹಲವು ಲೋಪ
ಕೆಎಸ್ಸಿಎ ಕ್ಲಬ್ನಲ್ಲಿ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಆಹಾರ ಪೊಟ್ಟಣಗಳ ಲೇಬಲಿಂಗ್ ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಕಂಡುಬಂದಿವೆ. ಅಸಮರ್ಪಕ ಒಳಚರಂಡಿ ವ್ಯವಸ್ಥೆ, ಶೀತಲೀಕರಣ ಘಟಕದಲ್ಲಿನ ಅನೈರ್ಮಲ್ಯ ಹಾಗೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಪ್ರತ್ಯೇಕವಾಗಿ ಸಂಗ್ರಹಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪಾತ್ರೆ ತೊಳೆಯಲು ಬಿಸಿನೀರಿನ ವ್ಯವಸ್ಥೆಯ ಕೊರತೆಯೂ ಕಂಡುಬಂದಿದೆ.
ಅವಧಿ ಮೀರಿದ ಅಣಬೆ ಪತ್ತೆ
ಕ್ಯಾಥೋಲಿಕ್ ಕ್ಲಬ್ನಲ್ಲಿ ಅವಧಿ ಮೀರಿದ 10 ಪ್ಯಾಕೇಟ್ ಅಣಬೆಗಳು ಪತ್ತೆಯಾಗಿವೆ. ಆಹಾರ ಪದಾರ್ಥಗಳ ಮೇಲೆ ಅಗತ್ಯ ಲೇಬಲ್ಗಳಿಲ್ಲದಿರುವುದು ಹಾಗೂ ಸ್ವಚ್ಛತೆಯ ಕೊರತೆಯ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಟೆನ್ನಿಸ್ ಕ್ಲಬ್ನಲ್ಲಿ ಆಹಾರ ನಿರ್ವಹಣಾ ಸಿಬ್ಬಂದಿ ವೈದ್ಯಕೀಯ ಪ್ರಮಾಣಪತ್ರ ಹೊಂದಿರದಿರುವುದು ಕಂಡುಬಂದಿದೆ.
ವಿಜಯನಗರ, ಮಹಾಲಕ್ಷ್ಮಿ ಲೇಔಟ್ ಮತ್ತು ಮಲ್ಲೇಶ್ವರ ಕ್ಲಬ್ಗಳಲ್ಲಿಯೂ ಆಹಾರ ಪದಾರ್ಥಗಳ ಅವಧಿ ಕುರಿತ ಲೇಬಲಿಂಗ್ ಕೊರತೆ ಹಾಗೂ ಸ್ವಚ್ಛತೆ-ನೈರ್ಮಲ್ಯದ ಸಮಸ್ಯೆಗಳು ಪತ್ತೆಯಾಗಿವೆ.
ಹೋಟೆಲ್ಗಳಿಗೂ ಕಟ್ಟುನಿಟ್ಟಿನ ಸೂಚನೆ
ಕ್ಲಬ್ಗಳ ಜೊತೆಗೆ ಹೋಟೆಲ್ಗಳು ಹಾಗೂ ಇತರೆ ಆಹಾರ ಉದ್ಯಮಗಳಲ್ಲಿನ ಲೋಪಗಳ ಬಗ್ಗೆಯೂ ಇಲಾಖೆ ಗಮನಹರಿಸಿದೆ. ಮುಂದಿನ 15 ದಿನಗಳಲ್ಲಿ ಹೋಟೆಲ್ ಅಸೋಸಿಯೇಷನ್, ರೆಸ್ಟೋರೆಂಟ್ ಅಸೋಸಿಯೇಷನ್ ಮತ್ತು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಡುಗೆಮನೆ ನಿರ್ವಹಣೆ, ಆಹಾರ ತಯಾರಿ ಮತ್ತು ನೈರ್ಮಲ್ಯ ಕುರಿತು ಮಾರ್ಗಸೂಚಿ ಹಾಗೂ ತರಬೇತಿ ನೀಡುವ ಚಿಂತನೆಯೂ ಇದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ದಿನದ ಸುದ್ದಿ
ಸೆ.2ರ ಹುಟ್ಟುಹಬ್ಬ ಆಚರಿಸದಿರಲು ಕಿಚ್ಚನ ನಿರ್ಧಾರ: “ನಿಮ್ಮ ಪ್ರೀತಿಯೇ ನನಗೆ ದೊಡ್ಡ ಮೈಲಿಗಲ್ಲು
ಸುದ್ದಿದಿನ,ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಆದರೆ ಈ ಬಾರಿ ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ. ವೈಯಕ್ತಿಕ ಹಾಗೂ ಬಲವಾದ ಕೆಲವು ಕಾರಣಗಳಿಂದ ಈ ವರ್ಷದ ಜನ್ಮದಿನದ ಸಂಭ್ರಮದಿಂದ ದೂರ ಉಳಿಯುತ್ತಿರುವುದಾಗಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಪತ್ರದ ಮೂಲಕ ತಿಳಿಸಿದ್ದಾರೆ.
ಹುಟ್ಟುಹಬ್ಬದಂದು ಮನೆಯ ಬಳಿ ಅಭಿಮಾನಿಗಳನ್ನು ಭೇಟಿಯಾಗಲು ತಾವು ಲಭ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಿಚ್ಚ, ಯಾವುದೇ ರೀತಿಯ ಗದ್ದಲ ಅಥವಾ ಸತ್ಕಾರಕ್ಕೆ ಮುಂದಾಗದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು ಮನೆ ಮುಂದೆ ಸೇರುವ ಸಂದರ್ಭದಲ್ಲೇ, ಈ ಬಾರಿ ಸುದೀಪ್ ಅವರ ಮನವಿ ವಿಶೇಷ ಗಮನ ಸೆಳೆದಿದೆ.
ಉಡುಗೊರೆ ಬೇಡ, ಸಮಾಜಕ್ಕೆ ಸಹಾಯ ಮಾಡಿ
ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ನೀಡಲು ಉದ್ದೇಶಿಸಿರುವ ಉಡುಗೊರೆಗಳ ಬದಲಾಗಿ ಆ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುವಂತೆ ಸುದೀಪ್ ಕರೆ ನೀಡಿದ್ದಾರೆ. ತಮ್ಮ ಹೆಸರಿನಲ್ಲಿ ನಡೆಯುವ ಸಂಭ್ರಮಕ್ಕಿಂತ ಸಮಾಜಕ್ಕೆ ನೆರವಾಗುವ ಕೆಲಸವೇ ತಮಗೆ ನಿಜವಾದ ಸಂತೋಷ ನೀಡುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಅಭಿಮಾನಿಗಳು ತಮ್ಮ ತಮ್ಮ ಊರು, ಪ್ರದೇಶಗಳಲ್ಲಿ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸುವುದೇ ತಮಗೆ ದೊರೆಯುವ ಅತ್ಯುತ್ತಮ ಆಶೀರ್ವಾದ ಎಂದು ಕಿಚ್ಚ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳ ಪ್ರೀತಿಗೆ ಹೊಸ ಅರ್ಥ ನೀಡುವ ಪ್ರಯತ್ನ ಮಾಡಿದ್ದಾರೆ.
30 ವರ್ಷಗಳ ಸಿನಿ ಪಯಣದ ನೆನಪು
ಕನ್ನಡ ಚಿತ್ರರಂಗಕ್ಕೆ ಸುದೀಪ್ ಬರೋಬ್ಬರಿ ಮೂರು ದಶಕಗಳನ್ನು ಅರ್ಪಿಸಿದ್ದಾರೆ. ಸಿನಿಮಾ ತಮ್ಮ ಪರಮ ಕಾಯಕವಾಗಿದ್ದು, ಕೆಲವೊಮ್ಮೆ ಸಿನಿಮಾಗಳು ತಡವಾಗಬಹುದು; ಅದಕ್ಕೂ ಕಾರಣಗಳಿರುತ್ತವೆ ಎಂದು ಅವರು ಹೇಳಿದ್ದಾರೆ. ಈ ಮಾತುಗಳ ಮೂಲಕ ತಮ್ಮ ವೃತ್ತಿಜೀವನದ ಮುಂದಿನ ಹೆಜ್ಜೆಗಳ ಬಗ್ಗೆ ಕುತೂಹಲ ಮೂಡಿಸಿದ್ದಾರೆ.
“ಸಿಂಹ ಸುಮ್ಮನೆ ಕುಳಿತಿದೆ ಎಂದರೆ ಸುಸ್ತಾಗಿದೆ ಅಂತಲ್ಲ, ಮುಂದಿನ ಬೇಟೆಗೆ ರೆಡಿ ಆಗ್ತಿದೆ” ಎಂಬ ಖಡಕ್ ಡೈಲಾಗ್ ಮೂಲಕ ಮುಂದಿನ ಸಿನಿಮಾ ಅಥವಾ ಹೊಸ ಯೋಜನೆಗೆ ಸುದೀಪ್ ಸುಳಿವು ನೀಡಿದ್ದಾರೆ. ಹೀಗಾಗಿ ಅವರ ಪತ್ರ ಕೇವಲ ಹುಟ್ಟುಹಬ್ಬದ ಮನವಿಯಾಗದೆ, ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯನ್ನೂ ಹುಟ್ಟುಹಾಕಿದೆ.
https://x.com/KicchaSudeep/status/2092857077706506638
“ಕನ್ನಡ ನನ್ನ ಸತ್ಯ.. ಕನ್ನಡದಿಂದ ನಾನು ನಿತ್ಯ”
ತಮ್ಮ ಮಾತೃಭಾಷೆ ಕನ್ನಡದ ಮೇಲಿನ ಪ್ರೀತಿಯನ್ನೂ ಸುದೀಪ್ ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ಎಲ್ಲೇ ಹೋದರೂ ಕನ್ನಡಿಗರನ್ನು ರಂಜಿಸುವ ವಿಷಯದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ ಎಂದು ಹೇಳಿರುವ ಅವರು, ಕಳೆದ 30 ವರ್ಷಗಳಿಂದ ಅಭಿಮಾನಿಗಳಿಂದ ದೊರೆತ ಪ್ರೀತಿ, ಹಾರೈಕೆ, ಚಪ್ಪಾಳೆ ಮತ್ತು ಶಿಳ್ಳೆಗಳೇ ತಮ್ಮ ದೊಡ್ಡ ಬಲ ಎಂದು ಸ್ಮರಿಸಿದ್ದಾರೆ.
“ನಮ್ಮನ್ನು ಮತ್ತು ನಿಮ್ಮನ್ನು ಎಂದಾದರೂ ಬೇರ್ಪಡಿಸಲು ಸಾಧ್ಯವೇ?” ಎಂದು ಪ್ರಶ್ನಿಸುವ ಮೂಲಕ ಅಭಿಮಾನಿಗಳೊಂದಿಗಿನ ತಮ್ಮ ಭಾವನಾತ್ಮಕ ಬಂಧವನ್ನು ತೆರೆದಿಟ್ಟಿದ್ದಾರೆ. ಕೊನೆಯಲ್ಲಿ “Luv u all always…” ಎಂದು ಹೇಳುವ ಮೂಲಕ ಕಿಚ್ಚ ತಮ್ಮ ಅಭಿಮಾನಿಗಳ ಮೇಲಿನ ಅಪಾರ ಪ್ರೀತಿಯನ್ನು ಮತ್ತೊಮ್ಮೆ ಸಾರಿದ್ದಾರೆ.

ದಿನದ ಸುದ್ದಿ
ಬಿಡುಗಡೆ ಬೆನ್ನಲ್ಲೇ ನಿರ್ದೇಶಕಿಯ ಹಳೆಯ ಮಾತಿಗೆ ಹೊಸ ವಿವಾದ: ‘ಟಾಕ್ಸಿಕ್’ ಸುತ್ತ ಟ್ರೋಲ್ಗಳ ಸದ್ದು
ಸುದ್ದಿದಿನ,ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಹಳೆಯ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ನಿರ್ದೇಶಕಿಯ ಸಿನಿಮಾ ಮಾಡುವ ವಿಧಾನಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ.
ವೈರಲ್ ವಿಡಿಯೋದಲ್ಲಿ ಗೀತು ಮೋಹನ್ದಾಸ್ ಅವರು, ತಾವು ಬರೆಯುವುದು, ಚಿತ್ರೀಕರಿಸುವುದು ಹಾಗೂ ಎಡಿಟ್ ಮಾಡುವ ಪ್ರಕ್ರಿಯೆಯಲ್ಲಿ ಸಿನಿಮಾ ನಿಧಾನವಾಗಿ ರೂಪುಗೊಳ್ಳುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ತಾವು ಸ್ಕ್ರಿಪ್ಟ್ಗೆ ಕಟ್ಟುನಿಟ್ಟಾಗಿ ಅಂಟಿಕೊಂಡು ಕೆಲಸ ಮಾಡುವುದಿಲ್ಲ ಎಂಬ ಅವರ ಹೇಳಿಕೆಯೇ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
http://Visit : www.suddidina.com
‘ಸ್ಕ್ರಿಪ್ಟ್ನಂತೆ ಸಿನಿಮಾ ಸಿಗುವುದಿಲ್ಲ’ ಎಂದಿದ್ದ ನಿರ್ದೇಶಕಿ
ನಿರ್ಮಾಪಕರನ್ನು ಭೇಟಿಯಾಗುವಾಗಲೇ ತಮ್ಮ ಕೆಲಸದ ಶೈಲಿಯನ್ನು ಸ್ಪಷ್ಟಪಡಿಸುವುದಾಗಿ ಗೀತು ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಸ್ಕ್ರಿಪ್ಟ್ನಲ್ಲಿ ಓದುವ ಕಥೆಯಂತೆಯೇ ಅಂತಿಮ ಸಿನಿಮಾ ಇರಬೇಕೆಂದಿಲ್ಲ ಎಂಬ ಸಂದೇಶವನ್ನು ಅವರು ನೀಡಿದ್ದರು.
ಸಾಮಾನ್ಯವಾಗಿ ದೊಡ್ಡ ಬಜೆಟ್ನ ಸಿನಿಮಾಗಳಲ್ಲಿ ಕಥೆ, ಚಿತ್ರಕಥೆ ಮತ್ತು ಚಿತ್ರೀಕರಣದ ಯೋಜನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಹೀಗಾಗಿ ಗೀತು ಅವರ ಈ ಹಳೆಯ ಹೇಳಿಕೆಯನ್ನು ಕೆಲವರು ಪ್ರಶ್ನಿಸುತ್ತಿದ್ದರೆ, ಮತ್ತೊಂದೆಡೆ ನಿರ್ದೇಶಕರ ಸೃಜನಶೀಲ ಪ್ರಕ್ರಿಯೆ ಒಂದೇ ರೀತಿಯಾಗಿರಬೇಕೆಂದಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
https://x.com/alpasankhyata/status/2092620787698094334
‘ಟಾಕ್ಸಿಕ್’ ಮೇಲೆ ಪರಿಣಾಮ ಬೀರಿದ ಹಳೆಯ ಹೇಳಿಕೆ?
‘ಟಾಕ್ಸಿಕ್’ ಬಿಡುಗಡೆ ಬಳಿಕ ಸಿನಿಮಾದ ಕಥೆ, ನಿರೂಪಣೆ, ಆಕ್ಷನ್ ಹಾಗೂ ಪಾತ್ರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಇದೇ ಸಮಯದಲ್ಲಿ ಹಳೆಯ ವಿಡಿಯೋ ವೈರಲ್ ಆಗಿರುವುದರಿಂದ, ಸಿನಿಮಾದಲ್ಲಿನ ಕೆಲವು ಅಂಶಗಳನ್ನು ಈ ಹೇಳಿಕೆಯೊಂದಿಗೆ ಹೋಲಿಸಿ ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಚಿತ್ರವು ಸ್ವಾತಂತ್ರ್ಯಪೂರ್ವದ ಗೋವಾ ಹಿನ್ನೆಲೆಯಲ್ಲಿನ ಅಪರಾಧ ಜಗತ್ತು ಮತ್ತು ಅಂಡರ್ವರ್ಲ್ಡ್ ಕಥೆಯನ್ನು ಒಳಗೊಂಡಿದೆ. ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವಿದೆ.
ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಆರಂಭ
ಭಾರೀ ನಿರೀಕ್ಷೆಯೊಂದಿಗೆ ಬಿಡುಗಡೆಯಾದ ‘ಟಾಕ್ಸಿಕ್’ ಮೊದಲ ದಿನವೇ ₹100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಆರಂಭ ಪಡೆದಿರುವುದನ್ನು ಸೂಚಿಸುತ್ತವೆ. ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಮಾತ್ರ ಮಿಶ್ರವಾಗಿದೆ.
ಸದ್ಯ ಗೀತು ಮೋಹನ್ದಾಸ್ ಅವರ ಹಳೆಯ ಹೇಳಿಕೆ ಮತ್ತು ‘ಟಾಕ್ಸಿಕ್’ ಚಿತ್ರದ ಕುರಿತು ನಡೆಯುತ್ತಿರುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ. ವೈರಲ್ ವಿಡಿಯೋ ಚಿತ್ರದ ಸೃಜನಶೀಲ ವಿಧಾನಕ್ಕೆ ಸಂಬಂಧಿಸಿದ ಹಳೆಯ ಅಭಿಪ್ರಾಯವಾಗಿದ್ದು, ಅದನ್ನು ಇಂದಿನ ಚಿತ್ರದ ಫಲಿತಾಂಶದೊಂದಿಗೆ ಹೇಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

-
ಅಂತರಂಗ4 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ6 days agoವಿಶ್ವ ವೆಂಕಟೇಶ್ವರ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ: ವಿಠಲ ರುಕ್ಮಿಣಿ ಮಠದ ವಿರುದ್ಧ ಗಂಭೀರ ಆರೋಪ
-
ದಿನದ ಸುದ್ದಿ1 day agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ2 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ2 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ2 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ2 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ
-
ದಿನದ ಸುದ್ದಿ2 days agoತುಂಗಭದ್ರಾದಲ್ಲಿ ನೀರಿನ ಹರಿವು ಕುಸಿತ: ಹರಿಹರದ 24×7 ‘ಜಲಸಿರಿ’ಗೆ ಬ್ರೇಕ್, ನೀರು ಪೂರೈಕೆ ಸಮಯ ಕಡಿತ


