Connect with us

ರಾಜಕೀಯ

ರಕ್ಷಣಾ ಅಗತ್ಯಗಳನ್ನು ಪೂರೈಸಲು ರಕ್ಷಣಾ ಇಲಾಖೆಯ ಭೂಮಿಗಳ ಮೆಗಾ ಸೇಲ್..!

Published

on

 

  • ಅರ್ಜುನ್ ಬಿ.
    ಕನ್ನಡಕ್ಕೆ: ಕೆ.ಎಂ.ನಾಗರಾಜ್

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ. ಫಲಿತಾಂಶವೆಂದರೆ, ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಆರು ವರ್ಷಗಳ ಹಿಂದೆ ಭಾರತದ ಜನತೆಗೆ ಕಾಣಿಸಿದ್ದ ಅವರ ಆಳ್ವಿಕೆಯಲ್ಲಿ ಈಗ ದೇಶ ತನ್ನ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ತನ್ನ ಖರ್ಚು ವೆಚ್ಚಗಳಿಗೆ ತನ್ನ ಆಸ್ತಿಗಳನ್ನು ಮಾರಿಕೊಂಡು ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

___________________________________________

ರು ವರ್ಷಗಳ ಹಿಂದೆ, ಪ್ರಧಾನ ಮಂತ್ರಿ ಮೋದಿಯವರು ಭಾರತವನ್ನು ಒಂದು ಮಹಾನ್ ಶಕ್ತಿಶಾಲಿ ದೇಶವನ್ನಾಗಿ ಮಾರ್ಪಡಿಸುವ ಕನಸನ್ನು ಭಾರತದ ಜನತೆಗೆ ಕಾಣಿಸಿದ್ದರು. ಭಾರತದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಹಾರಿಸುವುದಾಗಿ ಅವರು 2014ರಲ್ಲಿ ಘೋಷಿಸಿದ್ದರು. ದೇಶದ ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಜಾಗತಿಕ ವ್ಯವಹಾರ-ವಿದ್ಯಮಾನಗಳಲ್ಲೂ ಭಾರತವು ಪ್ರಧಾನ ಭೂಮಿಕೆ ನಿರ್ವಹಿಸುತ್ತದೆ ಎಂದು ಮೋದಿ ಭಾವಿಸಿದ್ದರು. ಎರಡನೆಯ ಅವಧಿಗೆ ಅಧಿಕಾರಕ್ಕೆ ಬಂದ ನಂತರವಂತೂ ಮೋದಿಯವರ ವರ್ಚಸ್ಸಿನಿಂದ ಭಾರತದ ಮತದಾರರು ಮಾತ್ರವಲ್ಲ ಅಂತಾರಾಷ್ಟ್ರೀಯ ಸಮುದಾಯವೇ ನಿಬ್ಬೆರಗಾಗಿದೆ ಎಂದೇ ಮೋದಿ ಭಕ್ತರು ಭಾವಿಸಿದ್ದಾರೆ. ಹಾಗಾಗಿ, ಕಾಶ್ಮೀರದ ವಿಶೇಷ ಸ್ಥಾನ-ಮಾನ ಕಲ್ಪಿಸುವ 370ನೇ ವಿಧಿಯನ್ನು ಸರಿಯಾದ ಸಮಯದಲ್ಲಿ ಮೋದಿ ರದ್ದುಗೊಳಿಸಿದ್ದಾರೆ, ಏಕೆಂದರೆ, ಭಾರತದ ಪರವಾಗಿ ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಅವರು ಪ್ರಭಾವಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಆರ್‌ಎಸ್‌
ಸ್‌ನ ಸಹಚರರು ನಂಬಿದ್ದಾರೆ.

ದೇಶದ ಜನಸಂಖ್ಯೆಯ ಬೃಹತ್ ಗಾತ್ರ, ಅದರ ಭೌಗೋಳಿಕ ನೆಲೆ ಮತ್ತು ಅದರ ಆರ್ಥಿಕ ವಹಿವಾಟುಗಳ ಸ್ವರೂಪ ಮತ್ತು ಗಾತ್ರಗಳಿಂದಾಗಿ, ಜಾಗತಿಕ ವಾಣಿಜ್ಯ-ವ್ಯವಹಾರ ವಹಿವಾಟುಗಳಲ್ಲಿ ಭಾರತವು ಸ್ವಾಭಾವಿಕವಾಗಿಯೇ ಒಂದು ಪ್ರಮುಖ ಜಾಗತಿಕ ಪೈಪೋಟಿದಾರ ಎಂಬುದು ಭಾರತದ ಬಲಪಂಥದ ನಂಬಿಕೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಂಜಾತರನ್ನು ಸಂಮೋಹಗೊಳಿಸುವ ಯಶಸ್ವಿ ಕಲೆಯೇ ದೇಶದ ಶಕ್ತಿ-ಸಾಮರ್ಥ್ಯವೆಂಬ ಗುಂಗಿನಲ್ಲಿರುವ ಮೋದಿಯವರು ಅಮೇರಿಕಾದ ಅಧ್ಯಕ್ಷರನ್ನೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸಬಹುದು ಎಂದು ಭಾವಿಸಿದ್ದಾರೆ.

ಇಂತಹ ದೊಡ್ಡಸ್ತಿಕೆಯ ಭ್ರಮೆಗಳ ಪ್ರಚಾರದ ಮೂಲಕ ವಾಸ್ತವವನ್ನು ಮುಚ್ಚಿಡಲಾಗದು. ಕಟು ವಾಸ್ತವ ಏನೆಂದರೆ, ಕೈಗಾರಿಕೆಗಳ ಅಶಕ್ತ ತಳಹದಿ, ಉನ್ನತವಲ್ಲದ ಮಟ್ಟದ ತಂತ್ರಜ್ಞಾನ, ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಸಂಖ್ಯೆಯ ಜ್ಞಾನ ಬೋಧನೆಯ ಉತ್ಕೃಷ್ಟ ಕೇಂದ್ರಗಳನ್ನು ಹೊಂದಿರುವ ಭಾರತವು ಜಾಗತಿಕ ಗಣ್ಯರನ್ನು ಪ್ರಭಾವಿಸಲಾಗುವುದಿಲ್ಲ.

ಆದಾಗ್ಯೂ, ಮೋದಿ ಸರ್ಕಾರ ಮತ್ತು ಅವರ ಬೆಂಬಲಿಗರು ವಾಸ್ತವ ಜಗತ್ತಿನಿಂದ ದೂರ ಸರಿದು ತಮ್ಮ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಲೇ ಇದ್ದಾರೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದರು: ಭಾರತದಲ್ಲಿ ಉದ್ಯಮ ಸ್ಥಾಪಿಸಲು ಇದು ಅತ್ಯತ್ತಮ ಸಮಯ. ಅನೇಕ ಸಂಗತಿಗಳಲ್ಲಿ ಏರಿಕೆ-ಇಳಿಕೆಗಳಾಗುತ್ತಿವೆ. ದೇಶದಲ್ಲಿ ವ್ಯವಹಾರ ನಡೆಸುವುದು ಸುಗಮವಾಗಿದೆ. ಬದುಕು ಸುಗಮವಾಗಿದೆ. ವಿದೇಶಿ ನೇರ ಹೂಡಿಕೆ, ಮೈದುಂಬಿದ ಅರಣ್ಯಗಳು, ಪೇಟೆಂಟ್ಸ್ (ಸ್ವಾಮ್ಯ), ಉತ್ಪಾದಕತೆ ಮತ್ತು ಮೂಲಸೌಕರ್ಯಗಳು ಹೆಚ್ಚುತ್ತಿವೆ. ಅದೇ ಸಮಯದಲ್ಲಿ ತೆರಿಗೆಗಳು, ತೆರಿಗೆ ದರಗಳು, ಕಛೇರಿಗಳಲ್ಲಿ ವಿಧಾನ-ವಿಳಂಬಗಳು, ಲಂಚಗುಳಿತನಗಳು ಮತ್ತು ಚಮಚಾಗಿರಿ ಇಳಿಯುತ್ತಿವೆ.

ಆದರೆ, ಅಹಿತವಾದ ವಾಸ್ತವ ಏನೆಂದರೆ, ಭಾರತವು ಈಗ ಆರ್ಥಿಕ ಮಂದಗತಿಯಲ್ಲಿ ಒದ್ದಾಡುತ್ತಿದೆ. ನೆರೆಯ ಬಾಂಗ್ಲಾದೇಶವು, ಭಾರತಕ್ಕಿಂತಲೂ ವೇಗವಾಗಿ, 8.1% ಆರ್ಥಿಕ ಬೆಳವಣಿಗೆ ಸಾಧಿಸುತ್ತಿದೆ. ನೇಪಾಳವೂ ಸಹ 2019ರಲ್ಲಿ ಭಾರತಕ್ಕಿಂತಲೂ ವೇಗವಾಗಿ ಬೆಳೆಯುತ್ತದೆ ಎಂದು ಅಂದಾಜು ಮಾಡಲಾಗಿದೆ. ವಿಶ್ವ ಬ್ಯಾಂಕಿನ ಪ್ರಕಾರ, ಆರ್ಥಿಕ ರಂಗದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಸೂಚಿಗಳಲ್ಲೂ ಬಾಂಗ್ಲಾದೇಶವು ಭಾರತಕ್ಕಿಂತ ಮುಂದಿದೆ. ಬಾಂಗ್ಲಾದೇಶದ ಸರಾಸರಿ ಮಾನವ ಜೀವಿತಾವಧಿ 72 ವರ್ಷಗಳಿದ್ದರೆ, ಭಾರತದಲ್ಲಿ ಅದು 69.1 ವರ್ಷಗಳು. ಬಾಂಗ್ಲಾದೇಶದ ಶಿಶು ಮರಣ ಸಂಖ್ಯೆ 25.1 ಇದ್ದರೆ, ಭಾರತದಲ್ಲಿ ಅದು 31.5 ಇದೆ.

ಕೇಂದ್ರ ಸರ್ಕಾರದ ಹಣಕಾಸಿನ ಪರಿಸ್ಥಿತಿ ಅದೆಷ್ಟು ಹದಗೆಟ್ಟಿದೆ ಎಂದರೆ, ಅದು ತನ್ನ ಮಾಮೂಲಿ ಖರ್ಚು-ವೆಚ್ಚಗಳಿಗೂ ಹಣ ಹೊಂದಿಸಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ತನ್ನ ಉದ್ದಿಮೆಗಳನ್ನೇ ಮಾರುತ್ತಿದೆ. ಈ ಬಗ್ಗೆ ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಹೀಗೆ ಟ್ವೀಟ್ ಮಾಡಿದ್ದರು: ಮೋದಿ ಸರ್ಕಾರ ಪಾಪರಾಗಿದೆಯೇ? ತನ್ನ ದುಂದುಗಾರಿಕೆಯ ಖರ್ಚುಗಳಿಗೆ ಮತ್ತು ಕಟ್ಟು ಕತೆ ಹಾಗೂ ಅಸತ್ಯಗಳಿಂದ ಕೂಡಿದ ಪ್ರಚಾರಗಳಿಗೆ ಹಣ ಹೊಂದಿಸಿಕೊಳ್ಳಲು ಜನತೆಗೆ ಸೇರಿದ ಸಂಪತ್ತನ್ನು ಮಾರುವುದೇ?

ಕೇಂದ್ರ ಸರ್ಕಾರದ ಆದಾಯವು ಕಳೆದ ಎರಡು ವರ್ಷಗಳಿಂದಲೂ ಸತತವಾಗಿ ಇಳಿಯುತ್ತಿದೆ. ಹಾಗಾಗಿ, ಅದರ ವಿತ್ತೀಯ ಕೊರತೆ ಹೆಚ್ಚುತ್ತಿದೆ. ಈ ಕೊರತೆಯನ್ನು ಸರಿದೂಗಿಸಿಕೊಳ್ಳುವ ಸಲುವಾಗಿಯೇ, ರಿಸರ್ವ್ ಬ್ಯಾಂಕ್ ಹೊಂದಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಗಳನ್ನು ಇತ್ತೀಚೆಗಷ್ಟೇ ಕಸಿದುಕೊಂಡಿತ್ತು. ಆದಾಗ್ಯೂ, ಕೇಂದ್ರ ಸರ್ಕಾರವು ರಿಸರ್ವ್ ಬ್ಯಾಂಕ್ ಮೀಸಲು ಇಟ್ಟುಕೊಂಡಿರುವ ಚಿನ್ನವನ್ನೂ ಸಹ ಹರಾಜು ಹಾಕುವ ಸನ್ನಾಹದಲ್ಲಿದೆ ಎಂಬ ವರದಿ ಪ್ರಕಟವಾಗಿದೆ.

ಅಷ್ಟಾಗಿಯೂ, ಖಜಾನೆಯಲ್ಲಿ ಸಾಕಷ್ಟು ಹಣವಿಲ್ಲದಿರುವ ಪರಿಸ್ಥಿತಿಯಲ್ಲಿ, ಆದಾಯದ ಕೊರತೆಯನ್ನು ಸರಿದೂಗಿಸಿಕೊಳ್ಳಲು ಸರ್ಕಾರವು ಜನತೆಗೆ ಸೇರಿದ ಸಾರ್ವಜನಿಕ ಉದ್ದಿಮೆಗಳ ಸ್ವತ್ತುಗಳನ್ನು ಮಾರುತ್ತಿದೆ.
ಮಹಾರತ್ನ ಕಂಪೆನಿ ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಮತ್ತು ಇಲ್ಲಿಯವರೆಗೆ 17,246 ಕೋಟಿ ರೂಗಳ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 53.29% ಷೇರುಗಳನ್ನು; ಹಿಂದಿನ ವರ್ಷದಲ್ಲಿ 171% ಲಾಭಾಂಶ ಕೊಟ್ಟಿರುವ ಮತ್ತು ನವರತ್ನ ಕಂಪೆನಿಗಳಲ್ಲಿ ಒಂದಾದ ಕಂಟೈನರ್ ಕಾರ್ಪೊರೇಷನ್ನಿನ 63.75%; ಷಿಪ್ಪಿಂಗ್ ಕಾರ್ಪೊರೇಷನ್ನಿನ 63.75%; ತೆಹ್ರಿ ಹೈಡ್ರೊ ಡೆವೆಲ್ಪಮೆಂಟ್ ಕಾರ್ಪೊರೇಷನ್ನಿನ 75%; ನಾರ್ತ್ ಈಸ್ಟ್ ಇಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ನಿನ 100% ಷೇರುಗಳನ್ನು ಮಾರುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟವು ಕೈಗೊಂಡಿದೆ. ಮಾರಾಟದ ಪಟ್ಟಿಯಲ್ಲಿ, ಹಿಂದಿನ ವರ್ಷ ಒಂದರಲ್ಲೇ 7,218 ಕೋಟಿ ರೂ ಗಳ ಲಾಭ ಗಳಿಸಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ 100% ಷೇರುಗಳ ಮಾರಾಟವನ್ನು ಕೊನೆ ಗಳಿಗೆಯಲ್ಲಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಸರ್ಕಾರದ ಆರ್ಥಿಕ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದರೆ, ಕಾಯಂ ಸೇನೆಯನ್ನು ಪರಿಣಾಮಕಾರಿಯಾಗಿ ನಿಯುಕ್ತಿಗೊಳಿಸಲು ಮತ್ತು ಅದನ್ನು ನವೀನವಾಗಿ ಸಜ್ಜುಗೊಳಿಸಲು ಸಾಕಾಗುವಷ್ಟು ಹಣ ಸರ್ಕಾರದ ಬಳಿ ಇಲ್ಲ. ವಿತ್ತೀಯ ಮುಂಜಾಗರೂಕತೆಯ ಹೆಸರಿನಲ್ಲಿ, ಮಾಜಿ ಯೋಧರಿಗೆ ಸಲ್ಲಬೇಕಿದ್ದ ಮತ್ತು ವಾಗ್ದಾನ ಮಾಡಿದ್ದ ಒಂದು ಶ್ರೇಣಿ-ಒಂದು ನಿವೃತ್ತಿ ವೇತನವನ್ನು ನಿರಾಕರಿಸಲಾಗಿದೆ.

ಇದು ಒಂದು ಸ್ವಯಂ ನಿರ್ಮಿತ ಸಮಸ್ಯೆ. ಮೂಗು ಹೊರಲಾರದಷ್ಟು ದೊಡ್ಡದಾದ ಮೂಗುತಿ ಎನ್ನುವ ರೀತಿಯ ವಿದೇಶ ನೀತಿಯ ಅನುಸರಣೆ ಮತ್ತು ಚಾಣಕ್ಯತೆ ಮತ್ತು ಮಹತ್ವಾಕಾಂಕ್ಷೆಗಳಿಂದ ಕೂಡಿದ ಮನೋಭಾವದ ಕಾರಣಗಳಿಂದಾಗಿ ಈ ಸಮಸ್ಯೆ ಉದ್ಭವವಾಗಿದೆ. ಶಕ್ತಿಶಾಲಿ ದೇಶಗಳ ಮಿಲಿಟರಿ ಮೈತ್ರಿ ಕೂಟಗಳಿಗೆ ಸೇರಿಕೊಳ್ಳುವ ನೀತಿಗೆ ಬಲು ದುಬಾರಿ ಬೆಲೆಯನ್ನೇ ತೆರಬೇಕಾಗುತ್ತದೆ. ಮಿಲಿಟರಿ ಮೈತ್ರಿ ಕೂಟದ ಪಾಲುದಾರ ದೇಶಗಳು ಹೊಂದಿರುವ ಅತ್ಯಾಧುನಿಕ ಶಸ್ತ್ರ ಸಜ್ಜಿತ ಯುದ್ಧ ವಿಮಾನ, ಜಲಾಂತರ್ಗಾಮಿ ನೌಕೆ ಮತ್ತು ಟ್ಯಾಂಕರ್ ಇತ್ಯಾದಿಗಳಿಗೆ ಹೊಂದಿಕೊಳ್ಳುವ ಮಾದರಿಯ ಉಪಕರಣಗಳನ್ನೇ ಭಾರತ ಕೊಳ್ಳಬೇಕಾಗುತ್ತದೆ. ಅವುಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ದಂಡಿಯಾಗಿ ಹಣ ಖರ್ಚುಮಾಡಬೇಕಾಗುತ್ತದೆ.

ಇಂತಹ ಖರ್ಚುಗಳಿಂದಾಗಿ ಉಂಟಾಗಿರುವ ಆರ್ಥಿಕ ಒತ್ತಡವನ್ನು ನಿಭಾಯಿಸುವ ಸಲುವಾಗಿ, ಅಂದರೆ, ದೇಶದ ರಕ್ಷಣೆ ಮತ್ತು ಆಂತರಿಕ ಭದ್ರತೆಯ ವೆಚ್ಚಗಳಿಗೆ ಖಜಾನೆಯ ಹೊರಗಿನ ಮೂಲಗಳಿಂದ ಹಣ ಹೊಂದಿಸಿಕೊಳ್ಳುವ ಉದ್ದೇಶದಿಂದ, ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯನ್ನು ತಿದ್ದುಪಡಿ ಮಾಡಲು ಸರ್ಕಾರವು ಹವಣಿಸುತ್ತಿದೆ. ಇಂತಹ ಒಂದು ಪ್ರಸ್ತಾಪದ ಸಮರ್ಥನೆಯಾಗಿ ಸರ್ಕಾರ ಕೊಡುವ ಕಾರಣವೆಂದರೆ, ಖರ್ಚುಗಳ ಬಗ್ಗೆ ರಕ್ಷಣಾ ಮಂತ್ರಾಲಯದ ಮುನ್ನಂದಾಜಿಗೂ ಮತ್ತು ವಿತ್ತ ಮಂತ್ರಾಲಯವು ಹಂಚುವ ಹಣದಲ್ಲಿ ಸತತವಾಗಿ ಶೇ.೨೫ರಷ್ಟು ಕೊರತೆಯಾಗುತ್ತಿದೆ.

ಹದಿನೈದನೆಯ ಹಣಕಾಸು ಆಯೋಗದ ಪರಾಮರ್ಶೆಯ ವಿಷಯ ವ್ಯಾಪ್ತಿಯ ತಿದ್ದುಪಡಿಯ ಮೂಲಕ ರಕ್ಷಣಾ ಇಲಾಖೆಯ ಭೂಮಿಯನ್ನು ಹರಾಜಿಗಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಈಗಾಗಲೇ ಭೂಮಿಯ ಹರಾಜಿನ ವಾಸನೆ ಹಿಡಿದಿರುವ ಭೂಗಳ್ಳರು ಮತ್ತು ಖಾಸಗಿ ವಲಯದ ರಣ ಹದ್ದುಗಳು ಅದನ್ನು ಕಬಳಿಸಲು ಹೊಂಚುಹಾಕುತ್ತಾ ಕುಳಿತಿವೆ. ರಕ್ಷಣಾ ಇಲಾಖೆಯು ಹೊಂದಿರುವ 17.5 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ, ಎಲ್ಲೆಲ್ಲಿ ಎಷ್ಟೆಷ್ಟು ಭೂಮಿ ಒತ್ತುವರಿಯಾಗಿದೆ ಮತ್ತು ನಾಗರಿಕ ಉದ್ದೇಶಗಳಿಗಾಗಿ ಅಗತ್ಯವಿರುವ ಸೇನೆಯ ಭೂಮಿ ಎಷ್ಟು ಎಂಬುದರ ಬೇಡಿಕೆಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ.

ತಹ ಹರಾಜಿನ ಮೂಲಕ ರಕ್ಷಣಾ ಮಂತ್ರಾಲಯವು ಕನಿಷ್ಠ 25,000 ಕೋಟಿ ರೂಗಳನ್ನು ಪಡೆಯಬಹುದು ಎಂಬುದು ತಜ್ಞರ ಅಂದಾಜು. ಈ ಹಣವನ್ನು ಮೂಲ ಧನವಾಗಿ ಇಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನು ಸೇನೆಯ ವಿಶೇಷ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬುದು ತಜ್ಞರ ಸಲಹೆ.

ಈ ಸಂಬಂಧವಾಗಿ ಸಾರ್ವಜನಿಕ ಅಭಿಪ್ರಾಯ gಪಿಸುವ ಉದ್ದೇಶದಿಂದ ಪತ್ರಿಕೆಗಳಲ್ಲಿ ಲೇಖನಗಳು ಪ್ರಕಟವಾಗುವಂತೆ ನೋಡಿಕೊಳ್ಳುವ ಕೆಲಸ ರಭಸದಿಂದ ನಡೆಯುತ್ತಿದೆ. ಸಾರ್ವಜನಿಕರಲ್ಲಿ ಅನುಕಂಪ ಹುಟ್ಟಿಸುವ ಉದ್ದೇಶದಿಂದ ದೇಶದ ಉದ್ದಗಲಕ್ಕೂ ಈಗಾಗಲೇ 9600 ಎಕರೆಗೂ ಮೇಲ್ಪಟ್ಟ ಭೂಮಿಯ ಒತ್ತುವರಿಯಾಗಿದೆ. ಈ ಸಂಬಂಧವಾಗಿ, ಹಲವಾರು ರಾಜ್ಯಗಳು ಮತ್ತು ನಗರ ಸಭೆಗಳ ವಿರುದ್ಧ ರಕ್ಷಣಾ ಮಂತ್ರಾಲಯ ದಾವೆ ಹೂಡಿದೆ ಎಂಬ ಕತೆಗಳನ್ನು ಹೆಣೆಯಲಾಗುತ್ತಿದೆ.

ಈ ಎಲ್ಲ ವಿದ್ಯಮಾನಗಳು ಸೂಚಿಸುವ ಸಾರಾಂಶ ಏನೆಂದರೆ, ದೇಶದ ಚರಿತ್ರೆಯಲ್ಲಿ, ರಕ್ಷಣಾ ಮಂತ್ರಾಲಯವು ಸೇನೆಯ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಸೇನೆಯ ಆಸ್ತಿ ಮಾರಾಟದಿಂದ ಬರುವ ಬಡ್ಡಿಯನ್ನು ಅವಲಂಬಿಸಿ ಕಾಲ ಸಾಗಿಸುವ ಹಂತವನ್ನು ನಾವೀಗ ತಲುಪಿದ್ದೇವೆ.

ಮಹಾನ್ ದೇಶಗಳು ತಮ್ಮ ಸೇನೆಯ ಖರ್ಚು ವೆಚ್ಚಗಳಿಗೆ ಕಂಡ ಕಂಡ ಸಂದಿ ಮೂಲೆಗಳನ್ನೂ ತಡಕಾಡಿ ತಮ್ಮ ಖಜಾನೆ ತುಂಬಿಸಿಕೊಳ್ಳುವುದಿಲ್ಲ. ಒಂದು ಹುರುಪಿನ ಕಾಯಂ ಸೇನೆಯನ್ನು ಪೋಷಿಸಿ ಅದನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೆಣಗಾಡುವ ಯಾವುದೇ ದೇಶದ ಖಜಾನೆಯು ತನ್ನ ಸರ್ಕಾರಕ್ಕೆ ನೆಲದ ಮೇಲೆ ನಿಲ್ಲುವಂತೆ ಮತ್ತು ಅದರ ಮಹತ್ವಾಕಾಂಕ್ಷೆಯನ್ನು ತಾನು ಹೊರುವಷ್ಟು ಮಟ್ಟಕ್ಕೆ ಇಳಿಸಿಕೊಳ್ಳುವಂತೆ ಹೇಳಬೇಕು.

ನಮ್ಮ ಕೊರತೆಗಳನ್ನು ಲೆಕ್ಕಿಸದೆ ಹಿಂದೂ ಮಹಾಸಾಗರದಲ್ಲಿ ನಾವು ಚೀನಾದೊಂದಿಗೆ ಪೈಪೋಟಿಗೆ ಇಳಿಯಲಾಗದು. ಅಪಾರ ಖರ್ಚು ವೆಚ್ಚಗಳು ತಗಲುವಂತಹ ಇಂದ್ರಜಾಲಗಳೋ ಎಂಬಂತಹ ಮಿಲಿಟರಿ ರಕ್ಷಣಾ ದೃಶ್ಯಾವಳಿಗಳನ್ನು ಆಗು ಮಾಡಿಕೊಳ್ಳಲಾಗದು. ನಮ್ಮ ವಿದೇಶ ನೀತಿಯನ್ನು ಮಾರ್ಪಡಿಸಿದ ನಂತರ, ನಮ್ಮ ರಾಜತಾಂತ್ರಿಕತೆ ಯಶಸ್ವಿಯಾಗುತ್ತದೆಂದು ಊಹಿಸಿಕೊಳ್ಳಲಾಗದು.

ಮೋದಿಯವರ ವಿದೇಶ ನೀತಿಯು ಸುಕ್ಕುಗಟ್ಟಿದೆ ಮತ್ತು ಅತಿ ಆಡಂಬರದಿಂದ ಕೂಡಿದೆ. ಅದು ಸೌಮ್ಯವಾಗಿರಬೇಕು ಮತ್ತು ತಾಳ್ಮೆಯಿಂದ ಕೂಡಿರಬೇಕು. ಬೇರೆ ಬೇರೆ ದೇಶಗಳಲ್ಲಿ ಅದ್ದೂರಿಯ ಸಭೆ ಸಮಾರಂಭಗಳನ್ನು ಏರ್ಪಡಿಸಲು ಮೋದಿ ಸರ್ಕಾರವು ಸಾವಿರಾರು ಕೋಟಿ ರೂ ಗಳನ್ನು ಖರ್ಚುಮಾಡುತ್ತಿದೆ. ಇವೆಲ್ಲ ಹಿಂದೆಂದೂ ಆಚರಿಸದ, ಕಂಡರಿಯದ ಕೇಳರಿಯದ ಕ್ರಮಗಳು. ಮೂರು ಟ್ರಿಲಿಯನ್ ಗಾತ್ರದ ಒಂದು ಅರ್ಥವ್ಯವಸ್ಥೆಯು ತನ್ನ ಇತಿ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನು ಕಲಿಯಬೇಕು. ಅಂಧ ಶ್ರದ್ಧೆ ಮತ್ತು ನಂಬಿಕೆಗಳಷ್ಟೇ ಒಂದು ಪರಿಪಕ್ವ ಕಾರ್ಯನೀತಿಗೆ ಆಧಾರವಾಗಲಾರವು. ಮೋದಿಯವರ ವಿದೇಶ ನೀತಿಯ ಸಮಸ್ಯೆಯೆಂದರೆ, ಅದು, ದೇಶೀಯವಾಗಿ ಕಡಿಮೆ ಸಾಮರ್ಥ್ಯದ ಆಯುಧ ಮತ್ತು ಮದ್ದುಗುಂಡುಗಳನ್ನು ತಯಾರಿಸುವ ಮದ್ಯಮ ಬಲದ ದೇಶವೊಂದಕ್ಕೆ ಹೊರಲಾರದಷ್ಟು ಭವ್ಯ ಪ್ರಮಾಣದ್ದು.

ಬಲಪಂಥದ ಸಮಸ್ಯೆಯೆಂದರೆ, ಅದು ಬಲ ಪ್ರಯೋಗ ಮಾಡುವ ಇಚ್ಛಾಶಕ್ತಿಯನ್ನು ರಾಷ್ಟ್ರ ಗೌರವದೊಂದಿಗೆ ತಳುಕುಹಾಕುತ್ತದೆ. ದೇಶದ ಸಾರ್ವಭೌಮತೆಯ ಹಿರಿಮೆಯು ಅದು ಹೊಂದಿರುವ ಮಿಲಿಟರಿ ಶಕ್ತಿ ಮತ್ತು ಅದರ ಬಲ ಪ್ರದರ್ಶನಗಳಿಗೆ ನೇರವಾಗಿ ಅನುಗುಣವಾಗಿರುತ್ತದೆ ಎಂದು ಬಲಪಂಥ ಭಾವಿಸುತ್ತದೆ. ಆದರೆ, ಇದೇನೂ ಸಾರ್ವತ್ರಿಕವಾಗಿ ಅನ್ವಯವಾಗುವ ನಿಯಮವಲ್ಲ ಎಂಬುದು ಅದರ ಜಾಣ ಮರೆವು.

ತನ್ನ ಶಸ್ತ್ರಾಸ್ತ್ರಗಳ ಅಗತ್ಯವನ್ನು ಮತ್ತು ಸಂಪರ್ಕ-ಸಾಧನಗಳನ್ನು ಹೊರ ದೇಶಗಳಿಂದ ಪೂರೈಸಿಕೊಳ್ಳುವ ಮಧ್ಯಮ ಬಲದ ದೇಶ ತಾನೊಂದು ಗಟ್ಟಿ ಶಕ್ತಿಯೆಂದು ತೋರಿಸುವ ಅದರ ಆಕಾಂಕ್ಷೆ ಹೆಚ್ಚಿದಷ್ಟು ಅದರ ಸಾರ್ವಭೌಮತ್ವ ಕುಗ್ಗುತ್ತದೆ. ರಾಷ್ಟ್ರ ಹಿತವನ್ನು ಕಾಪಾಡುವ ಪ್ರಯತ್ನಗಳು ಅವಾಸ್ತವಿಕವಾಗಿದ್ದರೆ, ದೇಶವು ಹೆಚ್ಚು ಪರಾಧೀನವೂ ಮತ್ತೂ ಬೇಧ್ಯವೂ ಆಗುತ್ತದೆ.

ತಾನೊಬ್ಬ ಜನ ಬೆಂಬಲದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಜಾಗತಿಕ ಬಲಪಂಥದ ಅಗ್ರಮಾನ್ಯ ನಾಯಕ ಎಂದು ಮೋದಿಯವರು ಭಾವಿಸಿರಬಹುದು. ಆದರೆ, ಅವರು ತಾನು ಸಾಮ್ರಾಜ್ಯಶಾಹಿಯ ಸುಳಿಯಲ್ಲಿ ಸಿಕ್ಕಿಕೊಂಡಿದ್ದೇನೆ ಮತ್ತು ವಿಶ್ವದಲ್ಲಿ ಅಮೇರಿಕಾದ ಯಜಮಾನಿಕೆಯನ್ನು ಬಲಪಡಿಸುವುದೇ ತನಗಿರುವ ಏಕೈಕ ಆಯ್ಕೆ ಎಂಬುದನ್ನು ಅರ್ಥಮಾಡಿಕೊಂಡಿಲ್ಲ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಫೆ.14 ರಂದು ಸಂತ ಸೇವಾಲಾಲ್‌ರವರ 287ನೇ ಜಯಂತಿ ಕಾರ್ಯಕ್ರಮ

Published

on

ಸುದ್ದಿದಿನ,ದಾವಣಗೆರೆ:ಸಂತ ಸೇವಾಲಾಲ್‌ರವರ 287ನೇ ಜಯಂತ್ಸೋವ ಕಾರ್ಯಕ್ರಮವು ಫೆ. 14 ರಂದು ಮಧ್ಯಾಹ್ನ 2 ಗಂಟೆಗೆ ನ್ಯಾಮತಿ ತಾಲ್ಲೂಕಿನ ಭಾಯಾಗಡ್-ಸೂರಗೊಂಡನಕೊಪ್ಪದಲ್ಲಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ದಿ ಮತ್ತು ನಿರ್ವಾಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಭಾಯ್‌ಗಡ್, ಸೂರಗೊಂಡನಕೊಪ್ಪ ಇವರ ಸಹಯೋಗದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸುವರು.ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಸಂತಸೇವಾಲಾಲ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಸಮಾಜ ಕಲ್ಯಾಣ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ ಇವರು ವಲಸೆ ಮಕ್ಕಳ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ಉದ್ಘಾಟಿಸುವರು.

ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ ಘನ ಉಪಸ್ಥಿತರಾಗಿರುವರು.

ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ್, ಗೃಹಮಂತ್ರಿಗಳಾದ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ, ಮತ್ತು ಛಲವಾದಿ ನಾರಾಯಣಸ್ವಾಮಿ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವೆಂಕಟೇಶ್ ನಾಯ್ಕ.ಟಿ, ವಿಧಾನಸಭೆಯ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ, ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲ ಸಂರಕ್ಷಣಾ ಸಚಿವರಾದ ಸಂಜಯ್ ಡಿ.ರಾಥೋಡ್, ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಲೋಕೋಪಯೋಗಿ, ಕೈಗಾರಿಕೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಇಂದ್ರನಿಲ್ ಮನೋಹರ್ ನಾಯ್ಕ್, ತೆಲಂಗಾಣ ರಾಜ್ಯದ ಮಹಬೂಬಬಾದ್ ಕ್ಷೇತ್ರದ ಸಂಸದರಾದ ಬಲರಾಮ ನಾಯ್ಕ, ಭಾಗವಹಿಸುವರು.

ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರುಗಳಾದ ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಬಸವರಾಜು ವಿ.ಶಿವಗಂಗಾ, ಬಿ.ಪಿ ಹರೀಶ್, ಜೆ.ಡಿ.ಎಸ್ ಶಾಸಕಾಂಗ ಪಕ್ಷದ ಉಪನಾಯಕರು ಹಾಗೂ ಶಾಸಕರಾದ ಶಾರದಾ ಪೂರ್ಯಾನಾಯ್ಕ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಿ.ಹೆಚ್ ಮರಿಯೋಜಿರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರಾದ ವಡ್ನಾಳ್ ಜಗದೀಶ್, ಬಯಲುಸೀಮೆ ಪ್ರದ್ರೇಶಾಭಿವೃದ್ದಿ ಮಂಡಳಿಯ ಹೆಚ್.ಬಿ.ಮಂಜಪ್ಪ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎನ್. ಜಯದೇವನಾಯ್ಕ್, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕೆ.ಅಬ್ದುಲ್ ಜಬ್ಬಾರ್, ಡಿ.ಟಿ.ಶ್ರೀನಿವಾಸ್, ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಾ.ಧನಂಜಯ್ ಸರ್ಜಿ, ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಕಾಂತಾನಾಯಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶಾಮನೂರು.ಟಿ.ಬಸವರಾಜ್,ಲೋಕಸೇವಾ ಆಯೋಗದ ಸದಸ್ಯರಾದ ಭೋಜ್ಯಾನಾಯ್ಕ, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಅಧ್ಯಕ್ಷರಾದ ಬಾಬು ಹೊನ್ನನಾಯಕ್, ಬಂಜಾರ ಸಂಸ್ಕೃತಿ ಹಾಗೂ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ. ಮೋತಿಲಾಲ್ ಚವ್ಹಾಣ್, ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ ಚವ್ಹಾಣ್, ಡಾ.ಅವಿನಾಶ್ ಜಾಧವ್, ನೇಮಿರಾಜ್ ನಾಯ್ಕ್, ಕೃಷ್ಣನಾಯ್ಕ, ಡಾ.ಚಂದ್ರ ಲಮಾಣಿ, ಭಾಯ್‌ಗಡ್ ಉನ್ನತಮಟ್ಟದ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಪಿ.ಟಿ ಪರಮೇಶ್ವರ್‌ನಾಯ್ಕ್.

ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಶಮ್ಲಾ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ರಾಕೇಶ್ ಕುಮಾರ್.ಕೆ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್.ಹೆಚ್ ತೆಕ್ಕಣ್ಣನವರ್, ಸಮಾಜ ಕಲ್ಯಾಣ ಇಲಾಖೆಯ ನೋಡೆಲ್ ಎಜೆನ್ಸಿ ಸಲಹೆಗಾರರಾದ ಡಾ.ಇ ವೆಂಕಯ್ಯ, ಕ.ತಾ.ಅ.ನಿ.ನಿ ವ್ಯವಸ್ಥಾಪಕ ನಿರ್ದೇಶಕರಾದ ಎನ್.ರಾಜು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ(ರಿ) ಪ್ರಧಾನ ಧರ್ಮದರ್ಶಿ ಬಿ. ಹೀರಾನಾಯ್ಕ, ಮಹಾಮಠ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಹನುಮಂತನಾಯ್ಕ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಅರುಣ್ ಕುಮಾರ್ ಭಾಗವಹಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕನಗೊಂಡನಹಳ್ಳಿಯಲ್ಲಿ ಸ್ವಚ್ಛ ಸಂಕೀರ್ಣ, ಕೂಸಿನ ಮನೆ ಉದ್ಘಾಟನೆ: ಸುಸ್ಥಿರ ಗ್ರಾಮಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ಕಸ ವಿಲೇವಾರಿ ಘಟಕಗಳನ್ನು ಗ್ರಾಮಸ್ಥರೇ ಜವಾಬ್ದಾರಿಯಿಂದ ನಿರ್ವಹಿಸುವ ಮೂಲಕ ಗ್ರಾಮಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಬೇಕು ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಶುಕ್ರವಾರದಂದು ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸ್ವಚ್ಛ ಸಂಕೀರ್ಣ ಘಟಕ, ಕೂಸಿನ ಮನೆ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಿರ್ಮಿಸಲಾಗಿರುವ 39 ಕಸ ವಿಲೇವಾರಿ ಘಟಕಗಳ ಪೈಕಿ, ಕನಗೊಂಡನಹಳ್ಳಿಯಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಾಗಿದೆ. ಇದರ ನಿರ್ವಹಣೆಗಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಸಾರ್ವಜನಿಕರು ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರೇ ಘಟಕಗಳನ್ನು ನಿರ್ವಹಿಸಿದರೆ ಗ್ರಾಮದ ಆರ್ಥಿಕತೆಗೆ ಬಲ ಬರುತ್ತದೆ. ಇದರ ಜೊತೆಗೆ ಚರಂಡಿ ಸ್ವಚ್ಛತೆಯಲ್ಲೂ ಗ್ರಾಮಸ್ಥರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ತಕ್ಷಣವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತರ ಉದ್ಘಾಟನೆಗಳು

ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂಸದರು ಹೊಸಕೊಳೇನಹಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ‘ಕೂಸಿನ ಮನೆ’ ಮತ್ತು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ತದನಂತರ ಹಳೆಕೊಳೇನಹಳ್ಳಿಯಲ್ಲಿ ಮೂರು ಹೊಸ ಶಾಲಾ ಕೊಠಡಿಗಳು ಹಾಗೂ ಅಡುಗೆ ಕೊಠಡಿಯನ್ನು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿತ್ತೆ ಮಾಧವ ವಿಠಲರಾವ್, ತಾಲ್ಲೂಕು ಪಂಚಾಯಿತಿ ಇಓ ರಾಮ್ ಭೋವಿ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ

Published

on

ಸುದ್ದಿದಿನ,ದಾವಣಗೆರೆ:ವಿವಿಧ ಇಲಾಖೆ, ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಜ.25 ರಂದು ನಡೆಸಲಾಗುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಸುಗುಮವಾಗಿ ಪರೀಕ್ಷೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಪ್ರಾಂಶುಪಾಲರು, ಮೇಲ್ವಿಚಾರಕರು, ವೀಕ್ಷಕರೊಂದಿಗೆ ಚರ್ಚಿಸಲು ಆಯೋಜಿಸಿದ್ದ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು .ಮತ್ತು ಪರೀಕ್ಷಾ ವೇಳೆಯಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಎಲ್ಲಾ ಕೇಂದ್ರಗಳಿಗೆ ನಿಯೋಜಿಸಿರುವ ಅಧಿಕಾರಿಗಳು ಪರೀಕ್ಷೆಗೆ 45 ನಿಮಿಷ ಮುಂಚಿತವಾಗಿ ಬಂದು ಪರೀಕ್ಷಾ ಕೊಠಡಿಯಲ್ಲಿ ವರದಿ ಸಿದ್ದಪಡಿಸಿಕೊಳ್ಳಬೇಕು. ಹಾಗೂ ಪರೀಕ್ಷೆ ನಡೆಯುವ ಕೊಠಡಿಯ ಒಳಗೆ ವಾಚ್, ಕ್ಯಾಲುಕಿಲೇಟರ್, ಬ್ಲೂಟೂತ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ್ಲ. ಪರೀಕ್ಷೆ ಮುಗಿದ ನಂತರ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಪ್‍ಡೇಟ್ ಮಾಡಿಸಬೇಕು. ಕೊಠಡಿಯಲ್ಲಿ ವಿದ್ಯುತ್ ದೀಪಗಳ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಮಾಡಿಸಬೇಕು ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿವಿಲೋ ದೊರೆಸ್ವಾಮಿ ಮಾತನಾಡಿ, ಜ.25 ರಂದು ನಡೆಯುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಯು ನಗರದ 18 ಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಎಲ್ಲಾ ಕೇಂದ್ರಗಳಿಗೂ ಮೇಲ್ವಿಚಾರಕರು, ಮತ್ತು ವೀಕ್ಷಕರನ್ನು ನೇಮಿಸಲಾಗಿದೆ.
ಬೆಳಿಗ್ಗೆ 10.30 ರಿಂದ 12.30 ರವರೆಗೆ ಪತ್ರಿಕೆ-1 ಮತ್ತು ಮಧ್ಯಾಹ್ನ 2.30 ರಿಂದ 4.30 ರವೆರೆಗೆ ಪತ್ರಿಕೆ-2 ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಲ್ಲ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರನ್ನೆ ಸಂಪರ್ಕಿಸಿ, ಪ್ರತಿ 24 ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕರಂತೆ ಅವಶ್ಯವಿರುವಷ್ಟು ಕೊಠಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರಗಳನ್ನು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮೂಲಕ ಪಡೆಯುವ ವ್ಯವಸ್ಥೆ ಹಾಗೂ ಪರೀಕ್ಷಾ ಕೇಂದ್ರಗಳ ಎಲ್ಲಾ ಕೊಠಡಿಗಳಿಗೆ ಜಾಮರ್ (Jamar) ವ್ಯವಸ್ಥೆ ಮಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನೀಡಲಾಗಿದ್ದು, ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳನ್ನು ತಪಾಸಣೆ ಮಾಡಲು ಪ್ರತಿ ಕೇಂದ್ರಕ್ಕೆ ಅಗತ್ಯವಿರುವಷ್ಟು ಹೋಮ್‍ಗಾರ್ಡ್‍ಗಳನ್ನು ನಿಯೋಜಿಸಬೇಕು. ತಪಾಸಣೆ ಮಾಡುವ ಸಿಬ್ಬಂದಿಗಳಿಗೆ ಸಹಾಯವಾಗುವಂತೆ ಪ್ರತಿ ಕೇಂದ್ರಕ್ಕೆ ಎರಡು ಹ್ಯಾಂಡ್ ಮೆಟಲ್ ಡಿಟೆಕ್ಟರ್‍ಗಳನ್ನು ಒದಗಿಸಲಾಗುವುದು.

ಕಾಲೇಜಿನ ಪ್ರಾಂಶುಪಾಲರನ್ನು ಆಯಾ ಕಾಲೇಜಿಗೆ ಮೇಲ್ವಿಚಾರಕರನ್ನಾಗಿ ನೇಮಿಸಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಾಣುವಂತೆ ಪರೀಕ್ಷಾ ವೇಳಾಪಟ್ಟಿಯನ್ನು ಅಲ್ಲಲ್ಲಿ ಅಳವಡಿಸಿರಬೇಕು. ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯವಾಗಿ ಗಡಿಯಾರಗಳನ್ನು ಅಳವಡಿಸಬೇಕು. ಪರೀಕ್ಷೆಯಲ್ಲಿ ಅವ್ಯವಹಾರವನ್ನು ತಡೆಯುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಮತ್ತು ಸಮೀಪವಿರುವ ಜೆರಾಕ್ಸ್ ಅಂಗಡಿಗಳನ್ನು ಪೊಲೀಸರ ಸಹಾಯದಿಂದ ಮುಚ್ಚಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ 18 ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು ಹಾಗೂ ಪರೀಕ್ಷಾ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending