Connect with us

ಲೈಫ್ ಸ್ಟೈಲ್

‘ಕೊರೊನ’ ಇದು ಪ್ರಕೃತಿ ಸೃಷ್ಟಿಸೋ ಅವತಾರ..! HANDS UP  ಮಾನವನೇ..!

Published

on

“ಮಾನವ ಸಂಕುಲದ ನಾಗಲೋಟಕ್ಕೊಂದು ಮಾರಕ ತಡೆ” “LOCK DOWN : ಇದೊಂದು ಆತ್ಮ ವಿಮರ್ಶೆಯ ಸಮಯ.”

  • ಡಾ. ಬಿನಯ್ ಕುಮಾರ್ ಸಿಂಗ್ , ಸನ್‍ಶೈನ್ ಪುರಂತರ ಆಸ್ಪತ್ರೆ, ದಾವಣಗೆರೆ 

ಸಂಖ್ಯಾತ ಜೀವರಾಶಿಗಳ ನೆಲೆಯಾಗಿರುವ ಪ್ರಕೃತಿ ಮತ್ತು ಭೂಮಿಯ ಮೇಲೆ ತನ್ನನ್ನು ತಾನು ಪರಮಶಕ್ತನೆಂದು ಬಿಂಬಿಸಿಕೊಂಡಿರುವ ಅತ್ಯಂತ ನೀಚ ಬುದ್ದಿಯ ಜೀವಿಯಾದ ಮನುಷ್ಯ ಇವುಗಳ ಮಧ್ಯೆ ಯುದ್ದ ಸಾರಿದಂತಿದೆ.ಇದು ಒಂದು ರೀತಿಯ ಮೂರನೇ ಮಹಾಯುದ್ದವನ್ನು ಸಾರಿದಂತಿದೆ. ಇಲ್ಲಿ ಭೂಮಿಯ ಮೇಲಿನ ಅತ್ಯಂತ ಸೂಕ್ಷ್ಮ ಜೀವಿಯಾದ ವೈರಾಣು ತಮ್ಮ ಉಳಿವಿಗೋಸ್ಕರ ತಮ್ಮ ಸ್ಥಾನವನ್ನು ಆಕ್ರಮಿಸುತ್ತಿರುವ ಮಾನವನ ವಿರುದ್ದ ತಿರುಗಿ ಬಿದ್ದಂತಿದೆ.

ಸಂಶೋಧನೆಗಳು ಧೃಡಪಡಿಸಿರುವ ಪ್ರಕಾರ ಸಕಲ ಜೀವರಾಶಿಗಳಿಗೆ ಜೀವಿಸಲು ಯೋಗ್ಯವಾದ ಸ್ಥಳ ಭೂಮಿ ಮಾತ್ರ. ಭೂಮಿಯ ಮೇಲೆ ಜೀವಿಸಲು ಒಂದು ಸಾಮಾನ್ಯ ನಿಯಮವಿದ್ದು,ಅದೇನೆಂದರೆ ಎಲ್ಲಾ ಜೀವರಾಶಿಗಳು ಪರಸ್ಪರ ಗೌರವಿಸುವುದು, ಎಲ್ಲರುಗಳ ಸ್ವಂತಂತ್ರವನ್ನು ಕಾಪಾಡುವುದು ಮತ್ತು ಪರಿಸರವನ್ನು ರಕ್ಷಿಸುವುದು ಈ ನಿಯಮಗಳಿಗೆ ಚ್ಯುತಿ ಬಂದಾಗ ಈ ತರಹದ ಸ್ವಯಂಕೃತ ವಿಪತ್ತುಗಳಿಗೆ (MANMADE DISASTER) ಎಡೆ ಮಾಡಿಕೊಡುತ್ತದೆ. ಇಂದಿನ ಈ ಸನ್ನಿವೇಶಕ್ಕೆ ಇದೇ ಮೂಲಭೂತವಾದ ಕಾರಣವಾಗಿದೆ.

ಕೇವಲ ಕಳೆದ ನೂರು ವರ್ಷಗಳಲ್ಲಿ ಮಾನವ ತನ್ನ ಆಸೆ ಮತ್ತು ಲಾಭಕ್ಕೋಸ್ಕರ ಪರಿಸರ ಮತ್ತು ಜೀವರಾಶಿಗಳ ಮೇಲೆ ಅಟ್ಟಹಾಸ ಮೆರೆದಿದ್ದಾನೆ. ಪ್ರಕೃತಿಯ ಆಗಿಂದಾಗ್ಗೆ ಅತಿವೃಷ್ಠಿಯಿಂದಲೋ, ಅನಾವೃಷ್ಠಿಯಿಂದಲೋ, ಬಿರುಗಾಳಿಗಳಿಂದಲೋ ತನ್ನ ಮೇಲೆ ಮಾನವ ನೀಡುತ್ತಿರುವ ದೌರ್ಜನ್ಯದ ವಿರುದ್ದ ಸೂಚನೆ ಸಂಕೇತಗಳನ್ನು ನೀಡುತ್ತಿದ್ದರೂ ತಾತ್ಸಾರ ಮಾಡುವ ಮನುಷ್ಯ ತನ್ನ ನೀಚ ಕೃತ್ಯದಿಂದಾಗಿ ಭೂ ತಾಯಿಯನ್ನು ವಿನಾಶಗೊಳಿಸುವುದರಲ್ಲಿ ತೊಡಗಿದ್ದಾನೆ.

ಮಹಾಭಾರತದಲ್ಲಿ ಉಲ್ಲೇಖಿಸಿದಂತೆ, “ಅಭ್ಯುತ್ಥಾನಂ ಅಧರ್ಮಸ್ಯ,ಸಂಭವಾಮಿ ಯುಗೇ ಯುಗೇ..”  ಮಾನವನ ಪಾಪ ಕರ್ಮಗಳು ಪರಿಸರ ಮತ್ತು ಜೀವರಾಶಿಗಳ ಮೇಲೆ ಎಲ್ಲಾ ಎಲ್ಲೆಯನ್ನು (ಮಿತಿಗಳನ್ನು) ದಾಟಿವೆ. (ಈ)ಇಂತಹ ಸನ್ನಿವೇಶದಲ್ಲಿ ಮನುಷ್ಯನ ಕಣ್ಣಿಗೆ ಕಾಣದ ಒಂದು ವೈರಾಣು ತಿರುಗಿಬಿದ್ದಿದೆ. ಕೇವಲ ಒಂದೇ ಒಂದು ವೈರಾಣು ಇಡೀ ಮಾನವ ಸಂಕುಲವನ್ನೇ ಮಂಡಿಯೂರಿ ಪರಿತಪಿಸುವಂತೆ ಮಾಡಿದೆ. ಎಲ್ಲವನ್ನೂ ತಾನು ಜಯಿಸಬಹುದೆಂಬ ದುರಹಂಕಾರದಲ್ಲಿ ಮೆರೆಯುತ್ತಿರುವ ಮಾನವನಿಗೆ, ಆ ಭಗಂವಂತ ತನ್ನ ಜೀವರಾಶಿಗಳಲ್ಲೇ ಇರುವ ಅತ್ಯಂತ ಸೂಕ್ಷ್ಮ ಜೀವಿಯಿಂದ, ಮಾನವನನ್ನು ಸಂಹರಿಸುವುದು ಎಷ್ಟು ಸುಲಭವೆಂದು ತೋರಿಸುತ್ತಿರುವಂತಿದೆ. ಹೀಗಿರುವಾಗ ಮಾನವ ತನ್ನನ್ನು ತಾನು ಜಗತ್ತಿನ ಪ್ರಭುವೆಂದು ಭಾವಿಸುವುದರಲ್ಲಿ ಅರ್ಥವಿದೆಯೇ?

ಈ ಸಂಧರ್ಭದಲ್ಲಿ ” ಪ್ರಕೃತಿಯು ಎಲ್ಲವನ್ನು ಸಮತೋಲನಗೊಳಿಸುತ್ತದೆ ” ಎಂಬ ಮಾತು ಎಷ್ಟು ಅರ್ಥಗರ್ಭಿತವಾಗಿದೆ ಮತ್ತು ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅದು ನಿಜವೆನ್ನಿಸುತ್ತದೆ. ಅತ್ಯಂತ ಶಕ್ತಿಶಾಲಿಯಾದ ಮಾನವ ಸಂಕುಲ ತನ್ನನ್ನು ಸಂರಕ್ಷಿಸಿಕೊಳ್ಳಲು ಪಂಜರದಲ್ಲಿ (ಮನೆಗಳಲ್ಲಿ–HOME QUARANTINE) ಬಂಧಿಯಾಗಿದ್ದಾನೆ. ಆದರೆ ಉಳಿದ ಎಲ್ಲಾ ಜೀವರಾಶಿಗಳು ತಮ್ಮ ಜೀವನವನ್ನು ಪರಿಸರದಲ್ಲಿ ಯಾವ ಅಡೆತಡೆಗಳಿಲ್ಲದೆ ಆನಂದದಿಂದ ಅನುಭವಿಸುತ್ತಿವೆ. ಸೂರ್ಯನ ಸುತ್ತಲಿರುವ ಪ್ರಭೆಯಂತೆ ಗೋಚರಿಸುತ್ತಿರುವ ಕಾಂತಿಯು (CORONA) ಈ ಅವಕಾಶವು ಮಾನವನು ಪರಿಸರದ ಮೇಲೆ ಮಾಡಿರುವ ದೌರ್ಜನ್ಯಗಳನ್ನು ಆತ್ಮಾವಲೋಕನ ಮಾಡುವ ಸಮಯ ಇದಾಗಲಿ.

ನಾವೀಗ ವೈರಾಣುಗಳ ಪ್ರಪಂಚದ ಬಗ್ಗೆ ಅವಲೋಕಿಸೋಣ 

  • ವೈರಾಣುಗಳು ಕೇವಲ ರಾಸಾಯನಿಕ ಸೂಕ್ಷ್ಮತೆಗಳು (Chemical Living Beings) ಇವುಗಳನ್ನು ಜೀವಕೋಶಗಳೆಂದು ಕರೆಯಲಾಗುವುದಿಲ್ಲ. ಏಕೆಂದರೆ ಜೀವಕೋಶಗಳಲ್ಲಿ ಕಂಡುಬರುವ ವಿವಿಧ ಭಾಗಗಳು ಇರುವುದಿಲ್ಲ. ಒಂದು ವೈರಾಣುವಿನಲ್ಲಿ ಕೇವಲ ಜೀನೋಮ್ (Genome) ಮತ್ತು ಅದರ ಮೇಲ್ಮೈಯಲ್ಲಿ ಪ್ರೋಟೀನ್‍ನ ಕವಚವಿರುತ್ತದೆ. ವೈರಾಣುಗಳಲ್ಲಿ ತಾವು ಸ್ವತಂತ್ರವಾಗಿ ಬೆಳೆದು ದ್ವಿಗುಣವಾಗುವ ಸಾಮಾಥ್ರ್ಯವಿರುವುದಿಲ್ಲ. ಇವುಗಳು ತಮ್ಮ ಬೆಳೆವಣಿಗೆಗೆ ಆಶ್ರಯದಾತನ (ಮನುಷ್ಯನ) ಜೀವಕೋಶಗಳ ಮೇಲೆ ಅವಲಂಭಿತವಾಗಿರುತ್ತದೆ. ಮಾನವ ಸೃಷ್ಟಿಯಾದ ಕಾಲದಿಂದಲೂ ಈ ವೈರಾಣುಗಳೂ ಭೂಮಿಯ ಮೇಲಿವೆ. ಅವುಗಳ ಸಹಜವಾದ ಆಶ್ರಯ ತಾಣಗಳು ಯಾವುವೆಂದರೆ ಮಾನವ, ಸಸ್ತನಿಗಳು(mammals) ಮತ್ತು ಪಕ್ಷಿಗಳು(birds).  ಭೂಮಿಯ ಮೇಲೆ ಅನೇಕ ವಿಧದ ವೈರಾಣುಗಳಿದ್ದು, ಅದರಲ್ಲಿ ಬಹಳಷ್ಟು ವೈರಾಣುಗಳು ರೋಗಕಾರಕಗಳಲ್ಲ.
  • ಕೊರೊನ ವೈರಸ್ RNA ಗುಂಪಿನ ವೈರಾಣುವಾಗಿದ್ದು ಇದರ ಮೇಲ್ಮೈಯಲ್ಲಿ ಚೆಂಡು ಹೂವಿನ ಆಕಾರದ ಬಹು ಪ್ರಕ್ಷೇಪಗಳ ಹಂಚನ್ನು ಹೊಂದಿದ್ದು, ಸೌರ ಕೊರೊನವನ್ನು ಹೋಲುತ್ತದೆ ಆದ್ದರಿಂದ ಈ ವೈರಾಣು ಸೃಷ್ಠಿಸುವ ವಿಶೇಷ ನೋಟಕ್ಕೆ ಕೊರೊನ ವೈರಸ್ ಎಂದು ಹೆಸರಿಸಲ್ಪಟ್ಟಿದೆ. ಇದರ ಗಾತ್ರ ಕೇವಲ 100nM ( 10-9 ).  
  • ಈ corona ವೈರಾಣುಗಳು ಮನುಷ್ಯರು, ಪಕ್ಷಿಗಳು, ಪ್ರಾಣಿಗಳು, ಕೀಟಗಳು ಮತ್ತು ಜಲಚರಗಳಲ್ಲಿ ಸಹಜವಾಗಿ ಬದುಕಿರುತ್ತವೆ. ಮಾನವರಲ್ಲಿ ಸಾಮಾನ್ಯ ನೆಗಡಿ(common cold) ಕಾಯಿಲೆಯನ್ನು ಭರಿಸುವ ಪ್ರಮುಖ ವೈರಾಣುಗಳಲ್ಲಿ ಎರಡನೆಯದಾಗಿದೆ. (Rhino virus ಗಳು ಮೊದಲನೆಯದಾಗಿದೆ).
  • ಈ ಕೋರೊನ ವೈರಸ್ ನಮಗೆ ಹೊಸದೇನಲ್ಲ, ಈ ಹಿಂದೆಯೇ 2002ರಲ್ಲಿ SARS ಎಂಬ ಸಾಂಕ್ರಮಿಕ ರೋಗವನ್ನು ಮತ್ತು 2012ರಲ್ಲಿ MERS ಎಂಬ ಸಾಂಕ್ರಮಿಕ ರೋಗವನ್ನು ಕೊರೊನ ವೈರಸ್‍ನ ತಳಿಗಳು ಹರಡಿ ಹೆಸರುವಾಸಿಯಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.        ಈ ಹಿಂದೆ SARS ಎಂಬ ಸಾಂಕ್ರಮಿಕವು 30 ರಾಷ್ಟ್ರಗಳಲ್ಲಿ ಹರಡಿತ್ತು ಮತ್ತು ಅದರ ನಿಯಂತ್ರಣವನ್ನು ಪಡೆಯಲು ಸುಮಾರು 15-18 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು ಮತ್ತು ಅದೇ ತರಹ MERS ಸಾಂಕ್ರಾಮಿಕ ರೋಗವು 7 ದೇಶಗಳಲ್ಲಿ ಹರಡಿ ಅದನ್ನು ನಿಯಂತ್ರಿಸಲು ಸುಮಾರು 12 ತಿಂಗಳುಗಳ ಕಾಲ ಸೆಣಸಾಡಬೇಕಾಯಿತು.

ಇಷ್ಟೆಲ್ಲಾ ತಿಳಿದ ಮೇಲೆ ಕಾಡುವ ಯಕ್ಷ ಪ್ರಶ್ನೆ ಏನೆಂದರೆ ಹೀಗಿರುವ  corona virus ಇಷ್ಟೊಂದು ಮಾರಾಣಾಂತಿಕ ಏಕೆ? [covid-19= COrona VIrus  Disease-2019]

  • ಈ ವೈರಾಣುವಿನ ಮುಖ್ಯ ಲಕ್ಷಣವೇನೆಂದರೆ ಅವುಗಳು ಪದೇ ಪದೇ ಅನುವಂಶಿಕ ಬದಲಾವಣೆಯನ್ನು ಹೊಂದುವುದು (Genetic Modification) ಈ ಪ್ರಕ್ರಿಯೆಯಲ್ಲಿ ಒಂದೇ ಕುಲಕ್ಕೆ ಸೇರಿದ ಎರಡು ತಳಿಗಳ ವೈರಾಣುಗಳು ಒಂದೇ ಜೀವಕೋಶದಲ್ಲಿ ಪ್ರವೇಶಿಸಿದಾಗ ಅವೆರಡರ ಮದ್ಯೆದಲ್ಲಿ genomeನ ಒಂದು ಭಾಗವು ವಿನಿಮಯವಾಗಿ (RECOMBINATION)  ಮೂರನೇಯ ತಳಿಯು ಸೃಷ್ಠಿಯಾಗುತ್ತದೆ. ಹೀಗೆ ಸೃಷ್ಠಿಯಾದ  ಹೈಬ್ರೀಡ್ ತಳಿಯು ತನ್ನ ಮಾತೃ ವೈಶಿಷ್ಠ್ಯಗಳ ಜೊತೆಗೆ ಹೊಸದಾದ ಗುಣಗಳನ್ನು ಹೊಂದಿರುತ್ತದೆ. ಈ ಹೊಸ ಗುಣಗಳೇ ಇದನ್ನು ಮತ್ತಷ್ಟು ಆಕ್ರಮಣಕಾರಿಯಾಗಿ ಸೃಷ್ಠಿಸುತ್ತದೆ.
  • ಒಂದು ಶಂಕೆಯ ಪ್ರಕಾರ covid-19 ಎಂಬ ವೈರಾಣು ಹಾವು ಮತ್ತು ಬಾವಲಿಗಳಲ್ಲಿ ಕಂಡುಬರುವ corona ವೈರಾಣುಗಳ ಹೈಬ್ರೀಡ್ ತಳಿಯಾಗಿರಬಹುದು ಆದ್ದರಿಂದ ಈ ವೈರಾಣುವು ಅಷ್ಟೊಂದು ಮಾರಕವಾಗಿದೆ. ಒಂದು ಗಮನಿಸಬೇಕಾದ ಅಂಶವೆಂದರೆ ಇಂತಹ ವೈರಾಣು ಮನುಷ್ಯನಲ್ಲಿ ಕಾಣಬೇಕಾದರೆ, ಮಾನವರು ವೈರಾಣುಗಳ  ನಿಕಟ ಸಂಪರ್ಕದಲ್ಲಿರಬೇಕಾಗುತ್ತದೆ. ಇಂತಹ ಸನ್ನಿವೇಶ ಕೇವಲ ಚೈನಾ (china) ದೇಶದಲ್ಲಿ ಸಹಜವಾಗಿ ಕಾಣಬಹುದಾಗಿದೆ. ಏಕೆಂದರೆ ಇಲ್ಲಿಯ ಜನರು ಮೇಲೆ ತಿಳಿಸಿದ ಹಾವು & ಬಾವಲಿಗಳ ನಿಕಟ ಸಂಪರ್ಕದಲ್ಲಿ ಬರುವುದಲ್ಲದೇ ಅವುಗಳನ್ನು ಭಕ್ಷಿಸುತ್ತಾರೆ ಆದ್ದರಿಂದ ಈ ಹೈಬ್ರೀಡ್ ವೈರಾಣು (covid-19) ಮಾನವನಲ್ಲಿ ಸುಲಭವಾಗಿ ಪ್ರವೇಶಿಸಿರಬಹುದಾಗಿದೆ. ಆದ್ದರಿಂದಲೇ ಚೈನಾ ದೇಶದ WUHAN ಪ್ರಾಂತ್ಯವು (covid-19)ಉತ್ಪತ್ತಿ ತಾಣವಾಗಿದ್ದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಿದೆ.
  • covid-19 ವೈರಾಣು ಮೂಗು, ಬಾಯಿ, ಕಣ್ಣಿನ ಮುಖಾಂತರ ಮನುಷ್ಯನಲ್ಲಿ ಪ್ರವೇಶಿಸುತ್ತದೆ. ಈ ವೈರಾಣು Upper Respiratory Tract ನಲ್ಲಿ ದ್ವಿಗುಣಗೊಳ್ಳುವ (replication) ಪ್ರಕ್ರಿಯೆಯನ್ನು ಆಂರಭಿಸುತ್ತದೆ. ಸೊಂಕು ತಗುಲಿದ ಸುಮಾರು5 ರಿಂದ 10 ದಿನಗಳ ಕಾಲದವರೆಗೆ ಈ ದ್ವಿಗುಣಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದೇ ಸಮಯದಲ್ಲಿ ಈ ವೈರಾಣುವಿನ ವಿಶಿಷ್ಠ ಲಕ್ಷಣವಾದ ಶ್ವಾಸಕೋಶದ ALVEOLI ಗಳವರೆಗೂ ತಲುಪಿ ಅಲ್ಲಿಯೂ replication process (ಪ್ರಕ್ರಿಯೆ) ಯನ್ನು ಮುಂದುವರೆಸುತ್ತದೆ. ಈ ವೈರಾಣುಗಳು ನಮ್ಮ ದೇಹದಲ್ಲಿ ಬೆಳೆಯುವಾಗ ಅದರ ಸುತ್ತಮುತ್ತಲಿನ ಜೀವಕೋಶಗಳನ್ನು ನಾಶ ಪಡಿಸುತ್ತದೆ. ಈ ಪ್ರಕ್ರಿಯೆಯು ಗಂಟಲು ಮತ್ತು ಶ್ವಾಸನಾಳದಲ್ಲಿ ನಡೆಯುವುದರಿಂದ ಅನಿಯಮಿತವಾದ ಒಣ ಕೆಮ್ಮು ಬರುತ್ತದೆ. ಈ ವೈರಾಣುವಿನಹಾವಳಿಯೂ ಶ್ವಾಸಕೋಶಗಳಲ್ಲು ನಡೆಯುವುದರಿಂದ ಆಮ್ಲಜನಕ ವಿನಿಮಯ ಪ್ರಕ್ರಿಯೆಯಲ್ಲಿ ಭಾದಿಸುತ್ತದೆ ಮತ್ತು ALVEOLI ಗಳನ್ನು ನಷ್ಟಪಡಿಸಿ ಕೀವುಂಟು ಮಾಡಿ  VIRAL-PNEMONIA ವನ್ನು ಉಂಟು ಮಾಡುತ್ತದೆ ಆದ್ದರಿಂದಲೇ covid-19  ಪೀಡಿತ ಜನರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದರಿಂದ ನಮ್ಮ ದೇಹದ ಅಂಗಾಂಗಳಲ್ಲಿ ಆಮ್ಲಜನಕದ ಕೊರತೆಯಾಗಿ, ಬಹು ಅಂಗಾಂಗಳ ವೈಪಲ್ಯಕ್ಕೆ ಎಡೆ ಮಾಡಿಕೊಡುತ್ತದೆ, ಆದ್ದರಿಂದಲೇ ಈ covid-19 ಸೊಂಕು ಇಷ್ಟೊಂದು ಮಾರಾಣಾಂತಿಕ.

ಈ ಕೊವಿಡ್-19 ಸೊಂಕಿನ ಲಕ್ಷಣಗಳು

  1. ಇದರ ಪ್ರಾರಂಭಿಕ ಲಕ್ಷಣಗಳು ತನ್ನ ಮೂಲ ವೈರಾಣುವಿನಂತೆಯೇ ಸಾಮಾನ್ಯ ನೆಗಡಿ/ಸೀನು/ಜ್ವರ/ಮೈ ಕೈ ನೋವು ಕ್ರಮೇಣವಾಗಿ ಒಣಕೆಮ್ಮು/ ಅತಿಯಾದ ಜ್ವರ ಶುರುವಾಗಿ ತದನಂತರ ಉಸಿರಾಟದಲ್ಲಿ ತೊಂದರೆ ಕಂಡುಬರುತ್ತದೆ.
  2. ವೈರಸ್‍ನ ಸೊಂಕು ತಗುಲಿ ಅದರ ಲಕ್ಷಣಗಳು ಗೋಚರಿಸುವ ಸಮಯವಾದ 5 ರಿಂದ 10 ದಿನಗಳಲ್ಲಿ ಈ ವೈರಾಣುಗಳು Upper Respiratory Tract ನಲ್ಲಿ ಅಸಂಖ್ಯಾತವಾಗಿ ನೆಲೆಯೂರಿರುತ್ತದೆ. ನಾವು ಸೀನುವಾಗ, ಕೆಮ್ಮುವಾಗ, ಉಗುಳುವಾಗ, ಮಾತಾನಾಡುವಾಗ ಈ ವೈರಾಣುಗಳು ಗಾಳಿಯಲ್ಲಿ ಹೊರಬರುತ್ತವೆ. ಒಂದು ಹನಿಯಷ್ಟು ಬಾಯಿ-ಮೂಗಿನಿಂದ ಬರುವ ದ್ರಾವರಸದಲ್ಲಿ ಲಕ್ಷಾಂತರ ವೈರಾಣುಗಳಿರುತ್ತವೆ.  ಆದ್ದರಿಂದ ಈ ಸೊಂಕು ಹತ್ತಿರದ ಸಂಪರ್ಕದಲ್ಲಿ ಬರುವವರಿಗೆಲ್ಲಾ ಸಹಜ ಮತ್ತು ಸುಲಭವಾಗಿ ತಗಲುತ್ತದೆ. ಈ ಸಮಯದಲ್ಲಿ ರೋಗಿಯಲ್ಲಿ ಕಾಯಿಲೆಯ ಲಕ್ಷಣಗಳು ಕಾಣದೆ ಇರುವುದರಿಂದ ಇಬ್ಬರ ಗಮನಕ್ಕೂ ಬಾರದೆ ಸೊಂಕು ಹರಡುವ ಪ್ರಕ್ರಿಯೆ ಶುರುವಾಗಿರುತ್ತದೆ. ನಾವು ಮಾತಾನಾಡುವಾಗ ಬಾಯಿಂದ (Droplet) ಬರುವ ದ್ರಾವಣ ಸುಮಾರು 1 ರಿಂದ 1ಳಿ ಅಡಿಯವರೆಗೂ ಪಸರಿಸುತ್ತದೆ. ಅದೇ ತರಹ ಸೀನುವಾಗ ಮತ್ತು ಕೆಮ್ಮುವಾಗ ಬಾಯಿಯಿಂದ ಬರುವ ದ್ರಾವರಸ ಸುಮಾರು 1 ಮೀಟರ್ ವರೆಗು ಚಲಿಸುತ್ತದೆ. ಇದರಿಂದ ತಿಳಿಯುವುದೇನೆಂದರೇ ಸಾಮಾಜಿಕ ಅಂತರವನ್ನು (SOCIAL DISTANCING)ಕನಿಷ್ಟ 1 ಮೀಟರ್ ಪಾಲಿಸಿದರೆ, ಒಬ್ಬರಿಂದೊಬ್ಬರಿಗೆ ವೈರಾಣು ಹರಡುವುದನ್ನು ಸರಳವಾಗಿ ಮತ್ತು ಸಹಜವಾಗಿ ತಡೆಯಬಹುದು.
  3. ಸುಮಾರು 60 ರಿಂದ 70% ಜನರಲ್ಲಿ ಈ ಸೊಂಕು ಸಾಮಾನ್ಯ ವೈರಲ್ ಜ್ವರದಂತೆ ವರ್ತಿಸುತ್ತದೆ. ಇಂತಹ ಜನರಲ್ಲಿ ರೋಗ ನಿರೋಧಕ ಶಕ್ತಿ ಬಹಳ ಚೆನ್ನಾಗಿರುತ್ತದೆ.
  4. ಸುಮಾರು 10 ರಿಂದ 25% ಜನರಲ್ಲಿ, ಈ ಸೊಂಕು ಹೆಚ್ಚು ತೊಂದರೆ ನೀಡುತ್ತದೆ. ಅವರಲ್ಲಿ ಹೆಚ್ಚಿನ ಜ್ವರ, ನಿರಂತರ ಒಣಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಬಹುದು. ಈ ತರಹದ ಸೊಂಕು ಎಲ್ಲಾ ವಯೋಮಾನದವರಿಗೂ ಬರಬಹುದು ಮತ್ತು ಇವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೂ, ಇದರ ಜೊತೆಗೆ ಸುಸಜ್ಜಿತವಾದ ಔಷಧೋಪಚಾರದಿಂದ ಇವರನ್ನು ಸೊಂಕಿನಿಂದ ಮುಕ್ತಗೊಳಿಸಬಹುದು.
  5. ಸುಮಾರು 5 ರಿಂದ 15% ಜನರಲ್ಲಿ ಈ ಸೊಂಕು ತೀವ್ರವಾಗುವ ಸಂಭವವಿರುತ್ತದೆ. ಅದರಲ್ಲಿ 2 ರಿಂದ 5% ಜನರು ಮರಣವನ್ನು ಹೊಂದಬಹುದು ಅವರುಗಳಲ್ಲಿ ಪ್ರಮುಖವಾಗಿ ಗಂಭೀರ ಖಾಯಿಲೆಗಳ ಹಿನ್ನಲೆ ಇರುತ್ತದೆ.

ಉದಾಹರಣೆಗೆ

  1. ಸಕ್ಕರೆ ಖಾಯಿಲೆ
  2. ಕಿಡ್ನಿ ಸಮಸ್ಯೆ (Chronic kidney Dieseas)
  3. ಶ್ವಾಸಕೋಶದ ತೊಂದರೆಗಳು
  4. ಕೀಮೋ ಥೆರೆಫಿ ರೋಗಿಗಳು (Chemotherapy)
  5. Steroid ಬಳಸುವವರು
  6. Bone marrow ತೊಂದರೆ ಇರುವವರು
  7. ಮಧ್ಯಪಾನ ಮತ್ತು ಧೂಮಪಾನಿಗಳು
  8. 8.8 ವರ್ಷದ ಕೆಳಗಿನ ಮಕ್ಕಳು
  9. 9.60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು
  10. ಗರ್ಭಿಣಿಯರು
  11. ರೋಗ ನಿರೋಧಕ ಶಕ್ತಿ ಕಡಿಮೆಯಿರುವ (ಯಾವುದೇ ಕಾರಣದಿಂದ)

ವೈರಾಣುವಿನ ಸೊಂಕನ್ನು ತಡೆಯಲು ನಮ್ಮ ದೇಹದಲ್ಲಿನ ರಕ್ಷಣಾ ವ್ಯವಸ್ಥೆಗಳು ಮಾನವನ ಶರೀರವು ಎರಡು ರೀತಿಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.

  1. ಸಹಜ ರಕ್ಷಣೆ (Innate immunity) -ಜನ್ಮ ತಳಿ ಬಂದಿರುವುದು
  2. ಅರ್ಜಿಸಿದ ರಕ್ಷಣೆ (acquired immunity)
  3. ಅರ್ಜಿಸಿದ ರಕ್ಷಣೆ – ಲಸಿಕಾ ವಿದಾನದಿಂದ

ಒಂದು ವೈರಾಣು ದೇಹದಲ್ಲಿ ಪ್ರವೇಶಿಸುತ್ತಿದ್ದ ಹಾಗೆಯೇ ಅದನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು lymphocytes ಮತ್ತು microphages ಗಳಿಂದ ಶುರುವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ವೈರಾಣುವು ಬಹಳ ಪ್ರಭಲವಾಗಿದ್ದಲ್ಲಿ, ಖಾಯಿಲೆ ಪ್ರಕ್ರಿಯೆಯು ಮುಂದುವರೆಯುತ್ತದೆ. ಇಲ್ಲವಾದಲ್ಲಿ ಈ ಪ್ರಕ್ರಿಯೆಯು ಇಲ್ಲಿಗೆ ನಿಲ್ಲುತ್ತದೆ.ಇದೇ ಸಮಯದಲ್ಲಿ ನಮ್ಮ ದೇಹದಲ್ಲಿರುವ IgA antibodyಗಳು ಮತ್ತು INTERFERONS ಗಳು ಸಹ ತಕ್ಷಣ ರಕ್ಷಣೆಗೆ ಬಂದು ವೈರಸ್‍ನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತದೆ.

ಮೇಲೆ ತಿಳಿಸಿದ ಎರಡೂ ವಿಧಾನಗಳು ಯಶಸ್ವಿಯಾಗದಿದ್ದಾಗ ನಮ್ಮ B-LYMPHOCYTES (Plasma Cells)  ಗಳು ಸಕ್ರಿಯವಾಗಿ ವೈರಾಣುವಿನ ವಿರುದ್ದ ನಿರ್ದಿಷ್ಟವಾದ ಚಿ antibody ಗಳನ್ನು ಉತ್ಪನ್ನ ಮಾಡುತ್ತದೆ. ಅದರಂತೆಯೇ T-Lymphocytes ಗಳು ವೈರಸ್‍ಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯದಲ್ಲಿ ತೊಡಗುತ್ತದೆ. ಈ ಎರಡು ಕ್ರಿಯೆಗಳು ರೋಗ ಲಕ್ಷಣ ಶುರುವಾದ 48 ರಿಂದ 72 ತಾಸುಗಳ ನಂತರ ಶುರುವಾಗುತ್ತದೆ. ಸುಮಾರು 2 ರಿಂದ 3 ವಾರಗಳ ಕಾಲ ಮುಂದುವರೆದು ಮೈಯಲ್ಲಿ ಒಂದು ವೈರಾಣು ಇರದ ಹಾಗೆ ನೋಡಿಕೊಳ್ಳುತ್ತವೆ. ಈ ಎರಡೇ ವಿಧಾನದಿಂದ ಮೈಯಲ್ಲಿ ಬರುವ ರೋಗನಿರೋಧಕ ಶಕ್ತಿಯು ಆ ವೈರಾಣುವಿನ ವಿರುದ್ದ ಜೀವನ ಪೂರ್ತಿ ಉಳಿಯುತ್ತದೆ. ಮತ್ತೊಮ್ಮೆ ಇದೇ ವೈರಾಣು ದೇಹದಲ್ಲಿ ಸೊಂಕು ಬರದ ಹಾಗೆ ನೋಡಿಕೊಳ್ಳುತ್ತದೆ (ಈ ಮೇಲೆ ತಿಳಿಸಿದ ಪ್ರಕ್ರಿಯೆಯನ್ನೆ ನಾವು ಲಸಿಕಾ ವಿಧಾನದಿಂದ ಬಳಸಿ,  ದೀರ್ಘಕಾಲದ ರೋಗ ನಿರೋಧಕ ಶಕ್ತಿ ಬರುವ ಹಾಗೆ ಮಾಡಲಾಗುತ್ತದೆ Vaccination/ Immunization process) ನಮ್ಮ ದೇಹದ ರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬ ವ್ಯಕ್ತಿಯ ಅನುವಂಶಿಕತೆ, ವಯಸ್ಸು, ಊಟೋಪಚಾರ ಮತ್ತು ಆರೋಗ್ಯ ಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ.

ಈ ವೈರಾಣುವನ್ನು ತಡೆಗಟ್ಟುವ ಬಗೆ

  1. ನಮ್ಮ ದೇಹದ ರೋಗ ನಿರೋಧಕ ಶಕ್ತಿ
  2. ಸದ್ಯದಲ್ಲಿ ಯಾವುದೇ ಪರಿಣಾಮಕಾರಿ ಔಷಧಿಗಳಿಲ್ಲ. ಹಾಗೆಂದು ನಿರಾಶೆಗೊಳ್ಳುವುದು ಬೇಕಿಲ್ಲ. ಈ ಮೊದಲು ಸಂಶೋಧನೆಗೊಂಡಿರುವ ಕೆಲವೊಂದು anti-viral medicine ಗಳನ್ನು ವಿವಿಧ ಸಂಯೋಜನೆಯಲ್ಲಿ ಬಳಸಿ ಸಕಾರಾತ್ಮಕವಾದ ಫಲಿತಾಂಶವನ್ನು ಪಡೆದ ನಿದರ್ಶನಗಳಿವೆ.
  3. ಇವೆಲ್ಲದಕ್ಕಿಂತ ಪರಿಣಾಮಕಾರಿ ಮತ್ತು ಸರಳವಾದ ವಿಧಾನವೆಂದರೆ
  4. A. ಖಾಯಿಲೆ ಇರುವವರನ್ನು ಪ್ರತ್ಯೇಕಿಸುವುದು. (isolation)
  5. ಖಾಯಿಲೆ ಇದ್ದವರ ನಿಕಟ ಸಂಪರ್ಕದಲ್ಲಿದ್ದವರನ್ನು ಬೇರ್ಪಡಿಸುವುದು. (Home Quarantine)
  6. C. ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು (Social Distancing) ಕಡ್ಡಾಯವಾಗಿ ಪಾಲಿಸುವುದು.

ಮೇಲೆ ತಿಳಿಸಿದ ವಿಚಾರದ ಸಾರಾಂಶವೇನೆಂದರೆ ನಮ್ಮ ಶತ್ರುವಾದ ವೈರಸ್‍ನಿಂದ ದೂರವಿರುವುದು ಅಥವಾ ತಪ್ಪಿಸಿಕೊಂಡು ಓಡುವುದು. ಇದು ಕೇಳಲಿಕ್ಕೆ ಎಷ್ಟು ಹಾಸ್ಯಸ್ಪದವಲ್ಲವೇ??? ಜಗತ್ತಿನ ಅತ್ಯಂತ ಬಲಿಷ್ಠ ಮತ್ತು ಬುದ್ದಿಶಾಲಿ ಜೀವಿ ಒಂದು ಸೂಕ್ಷ್ಮಾಣುವಿನಿಂದ ತಪ್ಪಿಸಿಕೊಂಡು ಓಡುವುದು. ಆದರೆ ಈ ಸೊಂಕನ್ನು ಮತ್ತು ಸಾಂಕ್ರಮಿಕವನ್ನು ಯಶಸ್ವಿಯಾಗಿ ತಡೆಯಬೇಕೆಂದರೆ ಮೇಲೆ ತಿಳಿಸಿರುವ ವಿಧಾನವೇ ಅತ್ಯಂತ ಸರಳ ಮತ್ತು ಸೂಕ್ತ.

covid-19 ವೈರಸ್ ಮೇಲೆ ಬಾಹ್ಯ ವಸ್ತುಗಳ ಪ್ರಭಾವವೇನು?

  1. >540c ಕ್ಕಿಂತ ಹೆಚ್ಚಿನ ತಾಪಮಾನದಲ್ಲಿ ವೈರಾಣು ಸಾಯುತ್ತದೆ.
  2. ರಾಸಾಯನಿಕ ದ್ರವಗಳಾದ ÁzÀ FORMALDEHYDE, GLUTARALDEHYDE, SODIUM HYPOCHLORIDE (BLEECHING POWDER), BETA PROPIO-LACTONE ಈ ದ್ರವಗಳ ಸಿಂಪಡನೆಯಿಂದ ವೈರಾಣುವನ್ನು ಕೆಲವು ನಿಮಿಷಗಳಲ್ಲೆ ನಿಷ್ಕ್ರಿಯೆಗೊಳಿಸಬಹುದು. ಮೇಲೆ ತಿಳಿಸಿದ ಉಳಿದ ರಾಸಾಯನಿಕ ದ್ರವಗಳನ್ನು ಸಮುದಾಯ ಸ್ವಚ್ಛತೆಗೆ ಬಳಸಬೇಕು. ಈ ದ್ರವ ರಾಸಾಯನಿಕಗಳ ಸಂಪರ್ಕವನ್ನು ನಮ್ಮ ಚರ್ಮಕ್ಕೆ ದುಷ್ಪರಿಣಾಮ ಮಾಡುವುದರಿಂದ ಎಚ್ಚರಿಕೆ ವಹಿಸುವುದು ಸೂಕ್ತ.
  3. >70% alcohol ಇರುವ ದ್ರಾವಣಗಳಿಂದ ಕೆಲವು ಸೆಕೆಂಡ್‍ಗಳಲ್ಲಿಯೇ ವೈರಸ್ ನಿಷ್ಕ್ರಿಯಗೊಳ್ಳುತ್ತದೆ. ನಾವು ಬಳಸುವ ಹ್ಯಾಂಡ್ ಸ್ಯಾನಿಟೈಜರ್‍ಗಳಲ್ಲಿ ಚಿಟಛಿohoಟ ನ ಪ್ರತಿಶತ >70% ಇರುತ್ತದೆ. ಆದ್ದರಿಂದ ಅದು ಬಹು ಉಪಯೋಗಿಯಾಗಿರುತ್ತದೆ.
  4. ನಿರ್ಜೀವ ವಸ್ತುಗಳ ಮೇಲೆ ಹತ್ತಿರುವ ವೈರಾಣು 15-20ನಿಮಿಷದವರೆಗೆ ಮಾತ್ರ ಬದುಕಿರುತ್ತದೆ.

 ಈ ರೋಗ ಹರಡುವ ಹಂತಗಳು

stage I:-ಸೊಂಕಿರುವ ದೇಶದಿಂದ, ಸೊಂಕಿರುವ ವ್ಯಕ್ತಿ ಸ್ವದೇಶಕ್ಕೆ ಆಗಮಿಸಿರುವುದು. (ನಮ್ಮ ದೇಶದಲ್ಲಿ ಸೊಂಕು ಪ್ರಾರಂಭ) (Primary/ Index Case)

stage II:- ಸೊಂಕಿತರ ನಿಕಟ ಸಂಪರ್ಕದಲ್ಲಿರುವವರಲ್ಲಿ ಸೊಂಕು ಕಾಣಿಸಿಕೊಳ್ಳುವುದು.

stage III:- ವಿದೇಶದಿಂದ ಬಂದಿರದೇ, ಮತ್ತು ಬಂದಿರುವವರ ನಿಕಟ ಸಂಪರ್ಕದಲ್ಲಿರದ, ವ್ಯಕ್ತಿಗಳಲ್ಲಿ ಕಂಡುಬರುವ ಸೊಂಕು (Community Spread)

stage IV:- ದೇಶದ ವಿವಿಧ ಭಾಗಗಳಲ್ಲಿ ಸೋಂಕು ಹರಡುವುದು. (ex:- ನಿಜಾಮುದ್ದೀನ್ ಪ್ರಕರಣ)

ಈಗ ಲಭ್ಯವಿರುವ ಮಾಹಿತಿಯ ಪ್ರಕಾರ ದೇಶದ ಬಹಳಷ್ಟು ಭಾಗಗಳು ಎರಡನೇ ಹಂತದಲ್ಲಿದ್ದು, ಕೆಲವೊಂದು ಭಾಗಗಳು 3ನೇ ಹಂತ ಪ್ರವೇಶಿಸುತ್ತಿದೆ.

ದೇಶವನ್ನು Lock-down ಮಾಡುವುದು ಹೇಗೆ ಸಹಕಾರಿ?

ಈ ವೈರಾಣುವು ತಾನಾಗಿಯೇ ಚಲನಶೀಲವಲ್ಲ. ಈ ವೈರಾಣುವನ್ನು ಸೊಂಕಿತ ವ್ಯಕ್ತಿಯೇ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತೆಗೆದುಕೊಂಡು ಹೋಗಬಹುದು. ಮತ್ತು ಸೊಂಕಿತ ವ್ಯಕ್ತಿಯಿಂದಲೇ ಮತ್ತೊಂದು ನಿಕಟ ಸಂಪರ್ಕದಲ್ಲಿ ಬಂದ ವ್ಯಕ್ತಿಗೆ ಹರಡಬೇಕು. Lock-down ಮತ್ತು Social-distancing ನ ಮರ್ಮ ಮೇಲಿನ ವಿಚಾರದಲ್ಲಿ ಅಡಗಿದೆ.

covid-19  ಭಾರತದಲ್ಲಿ ಏನಿದರ ಪಾಡು?

ಈಗಾಗಲೇ ಅತಿಯಾಗಿ ಸೋಂಕು ಪೀಡಿತರಾಗಿರುವ ಪಾಶ್ಚಿಮಾತ್ಯ ದೇಶಗಳನ್ನು ಗಮನಿಸಿವಿಶ್ಲೇಶಿಸುವುದಾದರೆ ಕೆಲವೊಂದು ದಿಗ್ಬ್ರಮೆಗೊಳಿಸುವ ವಿಚಾರಗಳು ಹೊರಹೊಮ್ಮುತ್ತದೆ.

1) ಈ ವೈರಾಣುವಿನ ಸೊಂಕು ತಾಗಿಸುವ ಕ್ಷಮತೆ(Infectivity) ತುಂಬಾ ಹೆಚ್ಚಾಗಿದೆ. ಅಂದರೆ ಕ್ಷಣ ಮಾತ್ರದಲ್ಲಿ ದೊಡ್ಡ ಸಮುದಾಯವನ್ನೇ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮಥ್ರ್ಯವಿದೆ

2) ವೃದ್ಧರಲ್ಲಿ ಮತ್ತು ದೀರ್ಘಸ್ವರೂಪದ ಖಾಯಿಲೆಗಳ ಹಿನ್ನೆಲೆಯವರಿಗೆ ಮಾರಣಂತಿಕವಾಗಿದೆ. (Virulence)

3) ಕನಿಷ್ಠ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದ ಮತ್ತು ಸ್ವಯಂ ಪ್ರತ್ಯೇಕಿಸಿಕೊಳ್ಳದವರು (Self  Quarantine) ಸೊಂಕಿಗೆ ಗುರಿಯಾಗಿದ್ದಾರೆ.

4) ಅತ್ಯಂತ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಹೊಂದಿದ್ದರೂ, ಸೊಂಕಿತರ ಸಂಖ್ಯೆ ಕ್ಷಿಪ್ರಗತಿಯಲ್ಲಿ ಮಿತಿಮೀರುವ ಪರಿಸ್ಥಿತಿಯಿಂದ, ಒಂದು ಒಳ್ಳೆಯ ಆರೋಗ್ಯ/ಆಸ್ಪತ್ರೆಯ ವ್ಯವಸ್ಥೆಯನ್ನು ಸಹ ವಿಫಲಗೊಳಿಸಿ, ನರಳುವ-ಸಾಯುವ ರೋಗಿಗಳನ್ನು ಮೂಕ ಪ್ರೇಕ್ಷಕರಾಗಿ ನೋಡುವಂತೆ ಮಾಡುತ್ತದೆ.

5) ಸರ್ಕಾರಗಳು ನೀಡಿದ ಮಾರ್ಗಸೂಚಿಗಳನ್ನು ಪಾಲಿಸದೇ ತಮ್ಮನ್ನು ತಾವು ಶಿಸ್ತುಬದ್ಧಗೊಳಿಸದೇ ಇರುವುದರಿಂದ, ಅವರಲ್ಲಿ (ಪಾಶ್ಚಿಮಾತ್ಯ ದೇಶಗಳು) ಸೋಂಕಿತರ ಸಂಖ್ಯೆಯು ಕೈ ಮೀರಿ ಹೋಗಿರುವುದನ್ನು ಕಾಣಬಹುದಾಗಿದೆ.

ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಬಹಳ ಪೂರಕ ವಾತವರಣವಿದೆ. ನಮ್ಮ ಜನರು ವಿದೇಶಿಗರು ಮಾಡಿದ ತಪ್ಪುಗಳನ್ನು ಪುನಾರವರ್ತಿಸಬಾರದಷ್ಟೇ.

ಮುಂದುವರೆದ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶವು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿದ್ದು, ನಮ್ಮಲ್ಲಿ ಆರೋಗ್ಯ ಸೇವೆಯು ಅಷ್ಟಕ್ಕಷ್ಟೆ ಮತ್ತು ನಮ್ಮ ಜೀವನಶೈಲಿಯೂ ಅತ್ಯಂತ ಉತ್ಕøಷ್ಟವಾಗಿಲ್ಲದಿರುವುದರಿಂದ, ನಾವು ಚಿಕ್ಕ ವಯಸ್ಸಿನಿಂದಲೇ ಬಹಳಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ಸಾಮ್ಯವಾದ ಸೋಂಕುಗಳಿಗೆ ತುತ್ತಾಗಿರುತ್ತೇವೆ. ಇದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಆರ್ಜಿಸಿದ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಇದು ಇಂತಹ ಸನ್ನಿವೇಶಗಳಲ್ಲಿ ಬಹಳಷ್ಟು ಸಹಾಯಕಾರಿ. ನಮ್ಮ ದೇಶದಲ್ಲಿ ಯುವ ಪೀಳಿಗೆಯ ಜನಸಂಖ್ಯೆ ಯಥೇಚ್ಛವಾಗಿರುವುದರಿಂದ, ಈ covid-19 ವೈರಸ್‍ನ ಪ್ರಭಾವ ಮತ್ತು ಹಾವಳಿಯನ್ನು ತಡೆಗಟ್ಟುವಲ್ಲಿ ಅನೂಕೂಲಕರವಾದ ವಾತಾವರಣವಿದೆ.

ನಮ್ಮ ದೇಶದಲ್ಲಿ ಒಟ್ಟಾರೆ ಸುಮಾರು 10ಲಕ್ಷ ಜನರನ್ನು ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಮತ್ತು ಸುಮಾರು 12 ಸಾವಿರ ಜನರಿಗೆ ತೀವ್ರಾ ನಿಗಾ ಘಟಕದಲ್ಲಿಟ್ಟು ventilator ನಲ್ಲಿ ಇರಿಸಿ, ಚಿಕಿತ್ಸೆ ಮಾಡುವ ಸಾಮಾಥ್ರ್ಯವಿದೆ.

ಹೀಗೊಂದು ಪರಿಸ್ಥಿತಿಯನ್ನು ಅವಲೋಕಿಸೋಣ

ನಮ್ಮ ದೇಶದ ಜನಸಂಖ್ಯೆ ಸುಮಾರು130 ಕೋಟಿ, ಅದರಲ್ಲಿ ಕೇವಲ 15% ಜನರಿಗೆ ಸೊಂಕು ತಗುಲಿದರೆ 2 ಕೋಟಿ ಜನ ಆಸ್ಪತ್ರೆ ಕಡೆ ಮುಖ ಮಾಡಿ, ಅದರಲ್ಲಿ ಕೇವಲ 15% ಜನರಿಗೆ ಅಂದರೆ 30 ಲಕ್ಷ ಜನರಿಗೆ ಒಳರೋಗಿಯಾಗಿ ಚಿಕಿತ್ಸೆ ಕೊಡುವುದು ಮತ್ತು ಅದರಲ್ಲಿ ಕೇವಲ 15% ಜನರಿಗೆ ಅಂದರೆ 45 ಸಾವಿರ ರೋಗಿಗಳಿಗೆ ತೀವ್ರಾ ನಿಗಾ ಘಟಕದ ಅವಶ್ಯಕತೆ ಬಂದಲ್ಲಿ ನಮ್ಮಲ್ಲಿ ಅವರಿಗೆ ಚಿಕಿತ್ಸೆ ಕೊಡುವ ಶಕ್ತಿ ಇದೆಯೇ?? ಇದು ಸಾದ್ಯವೇ??

ಇದು ನಮ್ಮ ಕನಸಿನಲ್ಲಿ ಊಹಿಸಿದರೂ ಸಾದ್ಯವಾಗದ ಕಟು ಸತ್ಯ, ಆದ್ದರಿಂದ ಆ ದುಸ್ಥಿತಿಗೆ ತಲುಪದ ಹಾಗೆ ಮಾಡಬೇಕೆಂದರೆ ಇದುವರೆಗೂ ನಮ್ಮ ಸರ್ಕಾರವು ಸೂಚಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವ ಸಂಕಲ್ಪದಿಂದ ಸಮರೋಪಾದಿಯಲ್ಲಿ ಕಾರ್ಯೊನ್ಮುಖರಾಗೋಣ ಮತ್ತು ದೇಶವನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಮ್ಮದೊಂದು ಅಳಿಲು ಸೇವೆಯನ್ನು ಮಾಡಿ ದೇಶದ ಋಣ ತೀರಿಸೋಣ.

ಅನುಸರಿಸಬೇಕಾದ ಮುಂಜಾಗ್ರತೆಗಳು

  1. ಮನೆಯಲ್ಲಿ ಯಾವುದೇ ಸೋಂಕಿಲ್ಲದವರು ಪಾಲಿಸಬೇಕಾದ ನಿಯಮಗಳು.
  2. A. Lock down ಪಾಲಿಸಿ
  3. ಪದೇ ಪದೇ ಹ್ಯಾಂಡ್‍ವಾಷ್ ಮಾಡುವುದು ಮತ್ತು ಸ್ಯಾನಿಟೈಜರ್ ಗಳನ್ನು ಬಳಸುವ ಅವಶ್ಯಕತೆ ಇಲ್ಲ.
  4. C. ಮನೆಯಲ್ಲಿ AC ಇದ್ದರೆ 270C ಗಿಂತ ಅಧಿಕ ತಾಪಮಾನದಲ್ಲಿ ಇಡುವುದು.
  5. D. ಪ್ರೋಟೀನ್‍ಗಳು ಮತ್ತು vit-c (ಹುಳಿ ಇರುವ ಹಣ್ಣುಗಳು) ಮತ್ತು vit-a (ಕೆಂಪು ಬಣ್ಣದ ತರಕಾರಿಗಳು) ಯಥೇಚ್ಛವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯು ಉತ್ತಮವಾಗಿರುತ್ತದೆ.
  6. ಶ್ವಾಸಕೋಶದ ಸಾಮಾಥ್ರ್ಯವನ್ನು ಬಲಗೊಳಿಸಲು ಯೋಗ ಮತ್ತು ಪ್ರಾಣಯಾಮ ಕ್ರಿಯೆಗಳನ್ನು ಮಾಡುವುದು.
  7. ಮನೆಯಲ್ಲಿ ಯಾರಾದರೂ ಸೋಂಕಿತರ ಸಂಪರ್ಕಕ್ಕೆ ಬಂದು ಸ್ವಯಂ ಪ್ರತ್ಯೇಕಿಸಲ್ಪಟ್ಟಾಗ (Home Quarantine)
  8. A. ಮೇಲೆ ತಿಳಿಸಿದ ಎಲ್ಲಾ ನಿಯಮಗಳನ್ನು ಪಾಲಿಸುವುದು.
  9. Quarantine ನಲ್ಲಿರೋ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿಡುವುದು.
  10. C. ಅವರ ನಿಕಟ ಸಂಪರ್ಕದಲ್ಲಿ ಮನೆಯ ಯಾವ ಸದಸ್ಯರು ಬರದಂತೆ ನೋಡಿಕೊಳ್ಳುವುದು.
  11. D. Quarantine ನಲ್ಲಿರೋ ವ್ಯಕ್ತಿ ಮತ್ತು ಅವರ ಸೇವೆಯಲ್ಲಿರುವವರು ನಿಯಮಿತವಾಗಿ ಕೈ ಗಳನ್ನು ತೊಳೆಯುವುದು ಮತ್ತು ಆಗಾಗ ಸ್ಯಾನಿಟೈಜರ್ ಬಳಸುವುದು.
  12. Quarantine ನಲ್ಲಿರೋ ವ್ಯಕ್ತಿಯ ಬಟ್ಟೆಗಳು ಮತ್ತು ಹೊದಿಕೆಗಳನ್ನು ಅವರ ಕೊಠಡಿಯಲ್ಲೆ ಒಂದು ಬಕೇಟ್ ಕುದಿಯುವ ನೀರಿನಲ್ಲಿ 20 ನಿಮಿಷಗಳ ಕಾಲ ಇಡುವುದು.

ಜಿ. Quarantine e ನಲ್ಲಿರೋ ವ್ಯಕ್ತಿ ಬಳಸುವ ದಿನನಿತ್ಯದ ಎಲ್ಲಾ ಸಾಮಾನುಗಳನ್ನು (ತಟ್ಟೆ, ಲೋಟ, ಮೋಬೈಲ್ ಇತ್ಯಾದಿ) ಇತರರು ಮುಟ್ಟದಂತೆ ಕ್ರಮ ತೆಗೆದುಕೊಳ್ಳುವುದು.

  1. ಕೆಮ್ಮುವಾಗ ಅಥವಾ ಸೀನುವಾಗ ಭುಜ ಮತ್ತು ಮೊಣಕೈನಿಂದ ಬಾಯಿಯನ್ನು ಮುಚ್ಚಿಕೊಳ್ಳುವುದು.
  2. ರೋಗದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ತಕ್ಷಣ ನಿರ್ದಿಷ್ಟವಾದ ಆಸ್ಪತ್ರೆಯ ವೈದ್ಯರ ತಪಾಸಣೆಗೆ ಒಳಪಡುವುದು.
  3. ಸುಮಾರು 14 ದಿನಗಳ Quarantine ಅವಧಿಯ ನಂತರ ಯಾವುದೇ ಲಕ್ಷಣಗಳು ಕಂಡುಬರದೆ ಇದ್ದಲ್ಲಿ, ಸಾಮಾನ್ಯವಾಗಿ ಮನೆಯವರೊಂದಿಗೆ ಬೆರೆಯಬಹುದು.

III. ಈ ಸಾಂಕ್ರಮಿಕವನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿರುವ ಕಾರ್ಯ ಪಡೆಯವರು.

  1. ಕಡ್ಡಾಯವಾಗಿ ಓ-95 ಮಾಸ್ಕ್‍ಗಳನ್ನು ಬಳಸುವುದು
  2. ಸಾಮಾಜಿಕ ಅಂತರ  ಕಾಯ್ದುಕೊಳ್ಳುವುದ
  3. ಯಾವುದೇ ಸೋಂಕಿತ ವ್ಯಕ್ತಿಯನ್ನು ಮುಟ್ಟಬೇಕಾದ ಪರಿಸ್ಥಿತಿಯಲ್ಲಿ Hand Glove ಮತ್ತು Transperent Face Shield ಬಳಸುವುದು.
  4. ಮನೆಗೆ ಹಿಂದುರುಗಿದಾಗ ಧರಿಸಿದ ಬಟ್ಟೆಗಳನ್ನು ಹೊರಗಡೆಯೇ ಕುದಿಯುವ ನೀರಿನಲ್ಲಿ ಹಾಕುವುದು ಮತ್ತು ಸ್ನಾನ ಮಾಡುವುದು.
  5. ಮನೆಯಲ್ಲಿ ಯಾವುದೇ ವಸ್ತುವನ್ನು ಮುಟ್ಟುವ ಮುಂಚೆ ಹ್ಯಾಂಡ್ ಸ್ಯಾನಿಟೈಜರ್ ಬಳಸುವುದು.

STAY HOME | STAY SAFE |SAVE NATION|ಮನೆಯಲ್ಲೇ ಇರಿ |            ಸುರಕ್ಷಿತವಾಗಿರಿ | ದೇಶವನ್ನು ರಕ್ಷಿಸಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

Trending