ಲೈಫ್ ಸ್ಟೈಲ್
ಶಿಲೀಂಧ್ರ ತಗುಲಿದ ಧಾನ್ಯ ತರಕಾರಿಗಳನ್ನು ಬಳಸುವಾಗ ಎಚ್ಚರ..!
ಬೆಳಿಗ್ಗೆ,ಮಧ್ಯಾಹ್ನ ಸಾಯಂಕಾಲ ಮತ್ತು ರಾತ್ರಿ ಯಾವಾಗಲಾದರೂ, ಊಟವಿರಲಿ-ಉಪಹಾರವಿರಲಿ ಏನನ್ನಾದರೂ ತಿನ್ನುವಾಗ ನನಗೆ ನಂಜಿಕೊಳ್ಳಲು ಈರುಳ್ಳಿ ಬೇಕೇಬೇಕು. ತುತ್ತಿಗೊಮ್ಮೆ ಕಚ್ಚಿ ತಿಂತಾನೇ ಇರುತ್ತೇನೆ.ಅಪ್ಪ-ಅವ್ವನಿಂದ ಬಂದ ಚಾಳಿ ಅದು. ಮೊನ್ನೆ ಖಾನಾವಳಿಯಲ್ಲಿ ಊಟಮಾಡುವಾಗ ಜೊತೆಗೆ ತಂದಿಟ್ಟ ಈರುಳ್ಳಿಯನ್ನು ನೋಡಿ ಎಲ್ಲರಿಗೂ ಕೇಳುವಂತೆ.”ಈರುಳ್ಳಿಗೆ ಶಿಲೀಂಧ್ರ ಹತ್ತಿದೆ.
ಇದನ್ನು ತಿಂದರೆ ಗಿರಾಕಿಯ ಆರೋಗ್ಯದ ಗತಿಯೇನು? ಸ್ವಚ್ಚವಾಗಿ ತೊಳೆದು ಹೆಚ್ಚಿ. ಗಿರಾಕಿಗಳೇ ದೇವರಲ್ಲವೇ ನಿಮಗೆ.ಅವರ ಆರೋಗ್ಯ ನಿಮಗೆ ಇಂಫಾರ್ಟೆಂಟು ಅಲ್ಲವಾ?” ಎಂದು ಉಸಿರು ಬಿಡದೇ ಹೇಳಿಬಿಟ್ಚೆ. ತಕ್ಷಣ ಎಚ್ಚೆತ್ತುಕೊಂಡ ಹುಡುಗನೊಬ್ಬ ಅದನ್ನು ತಗೆದು ಬೇರೆ ತಂದಿಟ್ಟ.ಈರುಳ್ಳಿ ಅಷ್ಟೇ ಅಲ್ಲ ಬೇರೆಬೇರೆ ಹಸಿಯಾಗಿ, ಕುದಿಸದೇ ತಿನ್ನುವ ಅನೇಕ ಧಾನ್ಯ ತರಕಾರಿಗಳಿಗೂ ಶಿಲೀಂಧ್ರ ತಗುಲಿರುತ್ತವೆ. ಅವುಗಳಿಂದ ಏನೇನು ಸಮಸ್ಯೆ ಉಂಟಾಗುತ್ತೋ ಏನೋ? ಎಂದು ಚಿಂತಿಸುತ್ತಿದ್ದಾಗ ಡಾ. ಸಂತೆಕಡೂರು ಪ್ರಸನ್ನ ಸರ್ ಅವರ ವಾಲ್ ಲ್ಲಿ ಈ ಬರಹ ಕಂಡಿತು. ನೀವೂ ಓದಿ ಸಾಧ್ಯವಾದಷ್ಟು Share ಮಾಡಿ. ಎಲ್ಲರೂ ವಿಷವನ್ನೇ ತಿನ್ನುತ್ತಿದ್ದಾರೆ.
ಇಲ್ಲಿರುವ ಈರುಳ್ಳಿಯ ಚಿತ್ರವನ್ನು ಕಳಿಸಿದವರು ಕಥೆಗಾರರಾದ ಕರ್ಕಿ ಕೃಷ್ಣಮೂರ್ತಿಯವರು. ಸು ಕಾದಂಬರಿ ಓದಿ ಮೆಚ್ಚಿಕೊಂಡು ಕೃಷ್ಣಮೂರ್ತಿಯವರು ಇತ್ತೀಚೆಗೆ ಕರೆ ಮಾಡಿದ್ದರು. ನಾವು ಕಾದಂಬರಿಯ ಬಗ್ಗೆ ಚರ್ಚಿಸುವಾಗ ಈ ರೀತಿ ಶಿಲಿಂಧ್ರದಿಂದ ಕೊಳೆತಿರುವ ಈರುಳ್ಳಿಯ ಬಗ್ಗೆ ಮಾತು ಬಂತು. ಇದೆ ವಿಷಯವನ್ನು ಪ್ರೊಫೆಸರ್ ಮಲ್ಲಿಕಾರ್ಜುನ ಹಿರೇಮಠರು ಮತ್ತು ಅಪ್ರತಿಮ ಓದುಗರಾದ ರಾಜು ಹಗ್ಗದ ಅವರು ಕೂಡ ಕೇಳಿದ್ದರು. ಎಲ್ಲರ ಮನೆಯಲ್ಲೂ ಈ ರೀತಿ ಕೊಳೆತಿರುವ ಈರುಳ್ಳಿ ನೋಡಿರುತ್ತೇವೆ. ಉತ್ತರ ಕರ್ನಾಟಕದಲ್ಲಿ ಈರುಳ್ಳಿ ಮತ್ತು ಕಡ್ಲೆಕಾಯಿಯನ್ನು ಹೆಚ್ಚಾಗಿ ಬಳಸುವುದರಿಂದ ಅಲ್ಲಿ ಜನ ಇವುಗಳನ್ನು ಇನ್ನು ಹೆಚ್ಚಾಗಿ ಕಾಣಬಹುದು.
ನಮ್ಮ ಮನೆಗಳಲ್ಲಿ ಈ ರೀತಿ ಕೊಳೆತಿರುವ ಈರುಳ್ಳಿ, ಕಡ್ಲೆಕಾಯಿ, ಜೋಳ ಮತ್ತು ಇನ್ನಿತರೇ ಆಹಾರ ಪದಾರ್ಥಗಳು ಕಂಡಾಗ ಕೆಲವರು ಅದನ್ನು ತೆಗೆದು ಕಸಕ್ಕೆ ಹಾಕುತ್ತಾರೆ. ಇನ್ನು ಕೆಲವರು ತೊಳೆದು ಬಳಸಬಹುದು. ಇನ್ನು ಕೆಲವರು ಏನೂ ಆಗುವುದಿಲ್ಲವೆಂದು ತಿನ್ನಲೂ ಬಹುದು. ಈ ಶಿಲಿಂಧ್ರಗಳು ಸಾಮಾನ್ಯ ಶಿಲಿಂಧ್ರಗಳಲ್ಲ. ಇವುಗಳನ್ನು ಅಪ್ಪಿತಪ್ಪಿಕೂಡ ಬಳಸಲು ಹೋಗಬಾರದು. ಅದರಲ್ಲೂ ಈರುಳ್ಳಿ ಸಿಪ್ಪೆಯ ಮೇಲ್ಪದರದಲ್ಲಿ ಕಪ್ಪಗಿದ್ದರೆ ಅದನ್ನು ತೆಗೆದು ತೊಳೆದು ಬಳಸಬಹುದು.
ಅದು ತೀರಾ ಆಳಕ್ಕೆ ಇಳಿದಿದ್ದರೆ ಅದನ್ನು ಬಿಸಾಕುವುದು ಒಳ್ಳೆಯದು. ಇಲ್ಲದಿದ್ದರೆ ನಮಗೆ ಅದರಲ್ಲಿರುವ ಕ್ಯಾನ್ಸರ್ ಕಾರಕ ರಾಸಾಯನಿಕ ವಸ್ತುವಿನಿಂದ ತೊಂದರೆಯಾಗಬಹುದು. ಅದರಲ್ಲೂ ಕೊಳೆತ ಕಡ್ಲೆಕಾಯಿಯನ್ನು ಜೋಳವನ್ನು ತಿನ್ನಲೂ ಬಾರದು ಅಥವಾ ಎಣ್ಣೆ ತೆಗೆಯಲು ಬಳಸಲೂ ಬಾರದು. ಅದರಿಂದ ಲಿವರ್ ಕ್ಯಾನ್ಸರ್ ಬರಬಹುದು. ಇಲ್ಲಿ ಕೊಳೆತ ಕಾಫಿ ಬೀಜದಿಂದ ಹೇಗೆ ನಮ್ಮ ದೇಹದ ಅಂಗಗಳಿಗೆ ತೊಂದರೆಯಾಗುತ್ತದೆ ಎಂದು ಚಿತ್ರದಲ್ಲಿ ಚೆನ್ನಾಗಿ ವಿವರಿಸಿದ್ದಾರೆ. ಆದ್ದರಿಂದ ನಾವು ತಿನ್ನುವ ಆಹಾರದ ಬಗ್ಗೆಯೂ ತುಂಬಾ ಹುಷಾರಾಗಿರಬೇಕು. ಆಧುನಿಕ ವೈದ್ಯಕೀಯ ಶಾಸ್ತ್ರದ ಪಿತಾಮಹ ಹಿಪೊಕ್ರೇಟಿಸ್ ಹೇಳಿರುವ ಪ್ರಕಾರ ನಮ್ಮ ಆಹಾರವೇ ಔಷದವಾಗಬೇಕು. ಔಷಧವೇ ನಮ್ಮ ಆಹಾರವಾಗಬೇಕು. ಕೊಳೆತ ಆಹಾರಗಳು ನಮ್ಮ ಆರೋಗ್ಯಕ್ಕೆ ಕಂಟಕ ತರಬಹುದು.
-ಪ್ರಸನ್ನ ಸಂತೇಕಡೂರು
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


