ದಿನದ ಸುದ್ದಿ
ಕೊರೊನ ಮೂರನೇ ಅಲೆ ಸಂಭವ ಮುನ್ನೆಚ್ಚರಿಕೆ ಅಗತ್ಯ : ಡಿಸಿ ಮಹಾಂತೇಶ್ ಬೀಳಗಿ
ಸುದ್ದಿದಿನ,ದಾವಣಗೆರೆ: ಪಕ್ಕದ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಅತೀ ಹೆಚ್ಚು ಕೊರೊನ ಪ್ರಕರಣಗಳು ದಾಖಲಾಗುತ್ತಿದ್ದು, ಈ ರಾಜ್ಯಗಳೊಂದಿಗೆ ನಮ್ಮ ರಾಜ್ಯ ಗಡಿ ಹಂಚಿಕೊಂಡಿರುವುದರಿಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇದು ಮೂರನೇ ಅಲೆಯ ಮುನ್ಸೂಚನೆಯಾಗಿದ್ದು ಎಚ್ಚರದಿಂದಿರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಕೋವಿಡ್-19 ಎರಡನೇ ಅಲೆಯ ಸಂಪೂರ್ಣ ನಿಯಂತ್ರಣ ಹಾಗೂ ಮೂರನೇ ಅಲೆಯನ್ನು ತಡೆಗಟ್ಟುವ ಸಲುವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗೆಗೆ ಶನಿವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಈಗಾಗಲೇ ಹೋಮ್ ಐಸೋಲೆಷನ್ ಸಂಪೂರ್ಣವಾಗಿ ನಿಲ್ಲಿಸಿದ್ದು ವರದಿಯಾಗುವ ಪ್ರಕರಣಗಳನ್ನು ತಾಲ್ಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ವಿರೋಧ ವ್ಯಕ್ತಪಡಿಸುತ್ತಾರೆ. ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಕೋವಿಡ್ ಕೇರ್ ಸೆಂಟರ್ ತೆಗೆದು ಅವರುಗಳನ್ನು ಈ ಸೆಂಟರ್ಗಳಲ್ಲಿ ಉಪಚರಿಸಲಾಗುವುದು ಎಂದರು.
ಕೋವಿಡ್-19 ನಿಯಂತ್ರಿಸುವಲ್ಲಿ ಜಿಲ್ಲಾಡಳಿತದೊಂದಿಗೆ ವೈದ್ಯಕೀಯ ಕಾಲೇಜುಗಳು, ಖಾಸಗಿ ಆಸ್ಪತ್ರೆಗಳು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಭಾವ್ಯ ಮೂರನೇ ಅಲೆ ಎದುರಾದಲ್ಲಿ ಅದನ್ನು ತಡೆಗಟ್ಟಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಕೋವಿಡ್ ಕರ್ತವ್ಯದ ವೈದ್ಯರು ಸಿಬ್ಬಂದಿಗೆ ತರಬೇತಿ ನೀಡಿ ಆತ್ಮಸ್ಥೈರ್ಯ ಮತ್ತಷ್ಟು ಹೆಚ್ಚಿಸಬೇಕು. ಜಿಲ್ಲಾಡಳಿತ, ಇಲಾಖೆಗಳ ಸಮನ್ವಯತೆಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮಕ್ಕಳಿಗೆ ಬರಬಹುದಾದ ಸೋಂಕನ್ನು ತಡೆಗಟ್ಟಲು ಸಜ್ಜಾಗಬೇಕು ಹಾಗೂ ಬೇಕಾದ ಎಲ್ಲಾ ವೈದ್ಯಕೀಯ ಸಲಕರಣೆಗಳನ್ನು ಮುಂಜಾಗ್ರತವಾಗಿ ಸಿದ್ಧಮಾಡಿಟ್ಟುಕೊಳ್ಳಬೇಕು ಎಂದರು.
ಇದನ್ನೂ ಓದಿ | ದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ.ಸಾಹೀರಾಬಾನು ಫಾರೂಕಿ
ಜಿಲ್ಲೆಯಲ್ಲಿ ಕೋವಿಡ್ 3ನೇ ಅಲೆ ಬರದಂತೆ ತಡೆಗಟ್ಟಬೇಕಾದ ಜವಾಬ್ದಾರಿ ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳದ್ದಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ದಂಡ ವಿಧಿಸದಿರುವ ಕಾರಣ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರವಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು, ಧಾರ್ಮಿಕ ಸ್ಥಳಗಳಲ್ಲಿ ದರ್ಶನದ ಜೊತೆಗೆ ಸೇವೆ ಸಲ್ಲಿಸುವುದು ಹೀಗೆ ಬೇಜವ್ದಾರಿಯಿಂದ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದರಿಂದ 3ನೇ ಅಲೆಯ ಅಪಾಯವನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದವರಿಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಿ, ದಂಡ ವಿಧಿಸಬೇಕು ಎಂದು ತಿಳಿಸಿದರು.
ಮೊದಲನೇ ಅಲೆಯಲ್ಲಿ 1800 ಮಕ್ಕಳ ಪ್ರಕರಣಗಳು, 2ನೇ ಹಂತದಲ್ಲಿ 2,600 ಪ್ರಕರಣಗಳು ವರದಿಯಾಗಿದ್ದು, 3ನೇ ಅಲೆಯಲ್ಲಿ 4 ಸಾವಿರ ಮಕ್ಕಳ ಕೋವಿಡ್ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಿದ್ದು, ಈ ಪೈಕಿ 200 ಮಕ್ಕಳು ಆಸ್ಪತ್ರೆಗೆ ದಾಖಲಾಗಬಹುದು ಹಾಗೂ 40 ಮಕ್ಕಳು ಐಸಿಯುನಲ್ಲಿ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಐಸಿಯುನಲ್ಲಿ ದಾಖಲಾಗುವ ಮಕ್ಕಳಿಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ 30 ಕ್ಕಿಂತ ಹೆಚ್ಚು ಬೆಡ್ಗಳು, 36 ಐಸಿಯು ಪೆಡಿಯಾಟ್ರಿಕ್ ಬೆಡ್ಗಳಿವೆ. ಅಗತ್ಯವಿರುವ ವೆಂಟಿಲೇಟರ್ಸ್, ಐಸಿಯು ಬೆಡ್ಸ್, ಮಲ್ಟಿಪ್ಯಾರಾ ಮಾನಿಟರ್ ಮತ್ತು ಇನ್ನುಳಿದವುಗಳನ್ನು ತರಿಸಲು ಈಗಾಗಲೇ ಏಜೆನ್ಸಿ ಗುರುತಿಸಿದ್ದು 10 ದಿನದೊಳಗಾಗಿ ತರಿಸಲಾಗುವುದು ಎಂದರು.
ನಗರ ಪ್ರದೇಶದಲ್ಲಿ ನಡೆಯುವ ಸಂತೆ ಜಾತ್ರೆಗಳಲ್ಲಿ ಬಿಗಿ ಕ್ರಮ ಅನುಸರಿಸಿ ಕೋವಿಡ್ ನಿಯಮಾ ಪಾಲಿಸಲು ತಿಳಿಸಬೇಕು. ಒಂದು ವೇಳೆ ವಿರೋಧಿಸಿದರೆ ಪೊಲೀಸರ ಸಹಾಯದಿಂದ ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು. ನಿನ್ನೆ ಜಿಲ್ಲೆಯಲ್ಲಿ ಕೇವಲ 4 ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದರಿಂದ ಕೋವಿಡ್ ಇಲ್ಲವೆಂದು ಮೈಮರೆಯುವುದು ಬೇಡ. ಒಮ್ಮೆಲೆ ಹೆಚ್ಚು ಪ್ರಕರಣಗಳು ಬಂದಿರುವ ಉದಾಹರಣೆಗಳು ನಮ್ಮ ಮುಂದಿದೆ ಎಂದರು.
ದುರ್ಬಲ ವರ್ಗದ 17 ಸಾವಿರ ಅಪೌಷ್ಠಿಕ ಮಕ್ಕಳಪಟ್ಟಿ ನಮ್ಮಲ್ಲಿದ್ದು ಇವರಲ್ಲಿ 10 ಸಾವಿರ ಮಕ್ಕಳ ಪೋಷಕರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಉಳಿದ 7 ಸಾವಿರ ಮಕ್ಕಳ ಪೋಷಕರಿಗೂ 15 ದಿನದೊಳಗಾಗಿ ಆದ್ಯತೆಯ ಮೇಲೆ ಲಸಿಕೆ ನೀಡಲು ಕ್ರಮ ವಹಿಸಲು ಸೂಚಿಸಿದರು. ಕೈಗಾರಿಕ ವಲಯಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಹಾಗೂ ಅಂತರಾಜ್ಯದಿಂದ ಬರುವ ಲಾರಿ ಚಾಲಕ ಹಾಗೂ ನಿರ್ವಾಹಕರಿಗೆ ಅಗತ್ಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕು ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಮಾತನಾಡಿ, ರಾಜ್ಯದಲ್ಲಿ 3ನೇ ಅಲೆಯ ಮುನ್ಸೂಚನೆ ಕಂಡು ಬಂದಿದ್ದು ಮಕ್ಕಳ ಮೇಲೆ ತೀವ್ರವಾಗಿ ಪರಿಣಾಮ ಬೀರಲಿದೆ. ಇದಕ್ಕಾಗಿ ಪೋಷಕರು ಮಕ್ಕಳನ್ನು ಬಹಳ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕಾಗಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಗೆ ಸೋಂಕು ಹಾಗೂ ಲಸಿಕೆಯ ಬಗ್ಗೆ ಜಾಗೃತಿ ನೀಡಿ ಲಸಿಕೆ ಪಡೆಯಲು ಮನವೊಲಿಸಬೇಕು ಎಂದರು.
ಪ್ರತಿಯೊಂದು ತಾಲ್ಲೂಕು, ಗ್ರಾಮದ ವ್ಯಾಪ್ತಿಯ ಅಂಗನವಾಡಿಗೆ ಬರುವ ಪ್ರತಿಯೊಂದು ಮಗುವಿಗೂ ಹಾಗೂ ಮಕ್ಕಳ ಪೋಷಕರಿಗೂ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಬೇಕು. ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯವನ್ನು ಪಡೆದುಕೊಂಡು ಮನೆ-ಮನೆಗೆ ಭೇಟಿ ನೀಡಿ ಪರೀಕ್ಷೆ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ನಡೆಯುವ ಸಭೆ ಸಮಾರಂಭ, ಮದುವೆ ಕಾರ್ಯಗಳಲ್ಲಿ ಸರ್ಕಾರದ ಆದೇಶದಂತೆ 100 ಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡಿರುವುದು ಕಂಡು ಬಂದಲ್ಲಿ ಕೂಡಲೆ ದಂಡ ವಿಧಿಸಿ ಪ್ರಕರಣ ದಾಖಲಿಸಿಬೇಕು. ಹಾಗೂ ಮದುವೆ ಕಾರ್ಯಕ್ರಮದಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು ಸಂಬಂಧಿಸಿದ ಅಧಿಕಾರಿಗಳು ವೀಕ್ಷಿಸಿ ನಿಗದಿಗಿಂತ ಹೆಚ್ಚು ಜನ ಸೇರಿದಲ್ಲಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಸಾರ್ವಜನಿಕ ಸ್ಥಳಗಳಾದ ದಿನಸಿ ಅಂಗಡಿ, ಹಾಲಿನ ಡೈರಿ, ಮಾರುಕಟ್ಟೆ, ಹಾಗೂ ದೇವಸ್ಥಾನಗಳಲ್ಲಿ ಜನರು ಗುಂಪಿನಲ್ಲಿ ಸೇರುತ್ತಿದ್ದು, ಅದರಲ್ಲೂ ಶ್ರಾವಣ ಮಾಸದಲ್ಲಿ ಜನರು ದೇವಸ್ಥಾನಗಳಿಗೆ ಹೋಗುವುದು ಹೆಚ್ಚು. ಜನರು ಆದಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದರೆ ಸೋಂಕನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಜನರು ಬೇಜವಾಬ್ದಾರಿಯಾಗಿ ವರ್ತಿಸಬಾರದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, 3ನೇ ಅಲೆ ಬಂದೆ ಬರುತ್ತದೆ ಎಂಬುದು ಖಾತರಿಯಾಗಿದ್ದು, ಮಕ್ಕಳಿಗೆ ಬಂದರೆ ಪೋಷಕರು ಬಹಳಷ್ಟು ಆತಂಕಕ್ಕೊಳಗಾಗುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಅವರಲ್ಲಿ ಸೋಂಕು ತಗುಲಿದರೆ ಅದರೊಂದಿಗೆ ಹೋರಾಡುವಷ್ಟು ಶಕ್ತಿ ಅವರಲ್ಲಿ ಇರುವುದಿಲ್ಲ, ಇದರಿಂದಾಗಿ ಪೋಷಕರು ಬಹಳಷ್ಟು ಭಯಭೀತರಾಗುತ್ತಾರೆ. ಆದ್ದರಿಂದ ಆದಷ್ಟು ಜನರಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮಹಾನಗರಪಾಲಿಕೆಯ ಗಾಡಿಗಳಲ್ಲಿ ಹಾಗೂ ಪೊಲೀಸ್ ಗಸ್ತು ವಾಹನಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಧ್ವನಿ ವರ್ಧಕಗಳ ಮೂಲಕ ಅರಿವು ಮೂಡಿಸಬೇಕು ಎಂದರು.
ಈ ಬಗೆಗೆ ಅರಿವು ಮೂಡಿಸಿದ ನಂತರವೂ ಜನರು ಕ್ರಮಗಳನ್ನು ಉಲ್ಲಂಘಿಸಿದರೆ ಅವರಿಗೆ ದಂಡ ವಿಧಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಹಾಗೂ ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು-ಗುಂಪಿನಲ್ಲಿ ಜನರು ಸೇರಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿ ಬಳಸಬೇಕು ಎಂದ ಅವರು, ಹೆಚ್ಚು ಜನಜಂಗುಳಿ ಸೇರುವ ಮಾಹಿತಿಯನ್ನು ಮೊದಲೇ ಪಡೆದು ಆ ಸ್ಥಳಗಳಲ್ಲಿ ಕೋವಿಡ್ ನಿಯಮಗಳು ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದರು.
ಕೋವಿಡ್ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಬಡ್ತಿಯೊಂದಿಗೆ ವರ್ಗಾವಣೆ ಹೊಂದಿರುವ ಪ್ರಮೋದ್ ನಾಯಕ್ ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಿಹೆಚ್ಓ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ಆರ್ಸಿಹೆಚ್ ಡಾ.ಮೀನಾಕ್ಷಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
- ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಉಳಿದ ಸೇವೆಗಳಿಗೆ ಅನುಮತಿಯಿಲ್ಲದಿದ್ದರು ಹೆಚ್ಚು ಜನ ಸೇರುವ ವರದಿಯಿದ್ದು, ಸಂಬಂಧಿಸಿದ ಪೂಜಾ ಸ್ಥಳಗಳ ಮುಖ್ಯಸ್ಥರು ಜನಜಂಗುಳಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಎರಡು ಮೂರು ದಿನಗಳ ಗಡುವು ನೀಡಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಿಸಲು ಆದೇಶ ಮಾಡಲಾಗುತ್ತದೆ.
| ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
- ಈಗಾಗಲೇ ಉತ್ತಮ ಮಳೆಯಾಗುತ್ತಿದ್ದು, ಮಳೆಯ ನಂತರ ಚಿಕನ್ಗುನ್ಯ, ಡೆಂಗ್ಯುನಂತಹ ಸಾಂಕ್ರಾಮಿಕ ರೋಗಗಳು ಹರಡುವ ಹಿನ್ನೆಲೆಯಲ್ಲಿ ನೀರು ನಿಲ್ಲುವ ಸ್ಥಳಗಳ ಸ್ವಚ್ಚತೆ, ಡಿಡಿಟಿ ಸಿಂಪರಣೆ ಮಾಡಲು ಸ್ಥಳೀಯ ಆಡಳಿತಗಳು ಗಮನಹರಿಸಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು.
| ಸಿಇಓ ವಿಜಯ ಮಹಾಂತೇಶ ದಾನಮ್ಮನವರ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಹೊಳಲ್ಕೆರೆ | ಸ್ಪೀಚ್ ಸಂಸ್ಥೆ ಸಂಸ್ಥಾಪಕ ಹೆಚ್.ರಾಮಚಂದ್ರಪ್ಪ ನಿಧನ ; ಇಂದು ಅಂತ್ಯಕ್ರಿಯೆ
ಸುದ್ದಿದಿನ,ಚಿತ್ರದುರ್ಗ:ಜಿಲ್ಲೆಯ ಬ್ಯಾಂಕ್ ಕಾಲೋನಿಯ ಸ್ಪೀಚ್ ಸಂಸ್ಥೆಯ ಸಂಸ್ಥಾಪಕರು ಹಾಗೂ ಎರಡು ಅವಧಿಗೆ ಹೊಳಲ್ಕೆರೆ ತಾಲ್ಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಹೆಚ್.ರಾಮಚಂದ್ರಪ್ಪ (59 ವರ್ಷ) ಶನಿವಾರ ಬೆಳಗ್ಗೆ 10:35 ಕ್ಕೆ ಅನಾರೋಗ್ಯದಿಂದ ನಿಧನರಾದರು.
ಮೃತರು ಪತ್ನಿ, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯನ್ನು ಹೊಳಲ್ಕೆರೆ ಸಮೀಪದ ನೆಹರು ಕಾಲೋನಿಯ ಜಮೀನಿನಲ್ಲಿ ಇಂದು (ಭಾನುವಾರ, ಜೂನ್ 07 ರಂದು ಮಧ್ಯಾಹ್ನ 2 ಗಂಟೆಗೆ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸಂಪರ್ಕ ಮೊಬೈಲ್ ಸಂಖ್ಯೆ : 9740114246
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಶ್ರಯ ಯೋಜನೆ – ಆವಧಿ ವಿಸ್ತರಣೆ
ಸುದ್ದಿದಿನ,ದಾವಣಗೆರೆ : 2025-26 ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ (ನಗರ) 2.0 ಯೋಜನೆಯಡಿ ನಿವೇಶನ ಮತ್ತು ವಸತಿ ರಹಿತ ಫಲಾನುಭವಿಗಳ ಅರ್ಜಿಗಳನ್ನು ಸಲ್ಲಿಸಲು ಜೂನ್ 30 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ದಾವಣಗೆರೆ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿನ ಅರ್ಹ ನಿವೇಶನ ಹಾಗೂ ವಸತಿ ರಹಿತ ಅಂಗವಿಕಲರು, ಹಿರಿಯ ನಾಗರಿಕರು, ಒಂಟಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರು, ತೃತೀಯ ಲಿಂಗಿಗಳು, ಸ್ವಚ್ಛತಾ ಕಾರ್ಮಿಕರು, PM SVanidhi (ಪಿ ಎಂ -ಸ್ವ ನಿಧಿ )ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಿಗಳು ಮತ್ತು ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆಯಡಿ ಗುರುತಿಸಿದ ಕುಶಲ ಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ವಲಸೆ ಬಂದ ಕುಟುಂಬದವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು http://pmayurban.gov.in ಆನ್ಲೈನ್ ವೆಬ್ ಸೈಟ್ ನಲ್ಲಿ ಸಲ್ಲಿಸಬಹುದು ಅಥವಾ ಖುದ್ದಾಗಿ ಮಹಾನಗರ ಪಾಲಿಕೆಯ ಆಶ್ರಯ ಶಾಖೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬಹುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಮಹಾಂತೇಶ್ ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗರಿಕೆ ಹುಲ್ಲಿನ ಜ್ಯೂಸ್ನಲ್ಲಿದೆ ರಕ್ತದ ಕ್ಯಾನ್ಸರ್ ಗುಣಪಡಿಸುವ ಶಕ್ತಿ
ಗಿರೀಶ್ ಮುತ್ತು
ಗರಿಕೆ ಹುಲ್ಲಿನ ರಸದ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಸಿನೊಡಾನ್ ಡ್ಯಾಕ್ಟಿಲಾನ್ ಪ್ರೊಟೀನ್ ಎಂಬ ಅಂಶವಿದ್ದು, ಇದು ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. ಇದು ಜ್ವರದಂತಹ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ. ಹಾಗಾಗೊ ವಾರಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಗರಿಕೆ ಹುಲ್ಲಿನ ರಸ ಅಥವಾ ಕಷಾಯದ ಸೇವನೆ ಮಾಡಬೇಕು
ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವಾರು ರೀತಿಯ ವ್ಯಾಯಾಮ ಮತ್ತು ಡಯಟ್ ಮಾಡುತ್ತೇವೆ. ಈ ಮಳೆಗಾಲದಲ್ಲಿ ಅನೇಕ ಜನರು ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಹಲವು ಬಗೆಯ ಜ್ಯೂಸ್ ಕುಡಿಯುತ್ತಾರೆ. ಹಣ್ಣು, ತರಕಾರಿ ರಸ ಕುಡಿದು ಆರೋಗ್ಯವಾಗಿರಲು ಪ್ರಯತ್ನಿಸುತ್ತಾರೆ. ಆದರೆ ಈ ಒಂದು ಜ್ಯೂಸ್ ಅನ್ನು ನೀವು ಕುಡಿದರೆ ನಿಮ್ಮತ್ತ ಕಾಯಿಲೆಗಳು ಸುಳಿಯುವುದೇ ಇಲ್ಲ. ಅದುವೇ ಗರಿಕೆ ಹುಲ್ಲುನ ಜ್ಯೂಸ್.
ಹೌದು… ಆಯುರ್ವೇದ ವೈದ್ಯರು ಈ ಮೂಲಿಕೆಯು ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ. ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕ್ಯಾನ್ಸರ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಲ್ಲದೆ ಈ ಹುಲ್ಲಿನ ರಸವನ್ನು ಕುಡಿಯುವುದರಿಂದ ರಕ್ತದಲ್ಲಿರುವ ಕ್ಯಾನ್ಸರ್ ಕೋಶಗಳು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತ ಶುದ್ಧವಾಗಿರುತ್ತದೆ.
ಈ ಗರಿಕೆ ಹುಲ್ಲಿನಲ್ಲಿ ವಿಟಮಿನ್ ಎ, ಕೆ, ಸಿ ಮತ್ತು ವಿಟಮಿನ್ ಇ ಗಳು ಸಮೃದ್ಧವಾಗಿದೆ. ಇದು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದೊತ್ತಡ, ರಕ್ತಹೀನತೆ ಮತ್ತು ರಕ್ತ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುತ್ತದೆ. ಹಾಗಾದರೆ ಗರಿಕೆ ಹುಲ್ಲಿನ ಜ್ಯೂಸ್ನ ಇತರ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಗರಿಕೆ ರಸದ ಪ್ರಯೋಜನಗಳು
1. ಈ ಗರಿಕೆ ಹುಲ್ಲಿನ ಜ್ಯೂಸ್ ಎಲ್ಲಿಯೂ ಸಿಗುವುದಿಲ್ಲ. ಕೆಲವೆಡೆ ಮಾತ್ರ ಸಿಗುತ್ತದೆ. ಬೇರು ಮತ್ತು ಎಲೆಗಳು ಸೇರಿದಂತೆ ಗರಿಕೆ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿದೆ. ಇದು ಕೆಲವು ಹಾನಿಕಾರಕ ವ್ಯಾಕ್ಸಿನಿಯಾ ವೈರಸ್ ಎಂಬ ಸೂಕ್ಷ್ಮಜೀವಿಯನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ಈ ಜ್ಯೂಸ್ ಕುಡಿಯುವವರೂ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುತ್ತಾರೆ.
2. ಮೂತ್ರಕೋಶದ ಕಲ್ಲುಗಳು, ದೇಹದ ಊತ, ಮಕ್ಕಳಲ್ಲಿ ದೀರ್ಘಕಾಲದ ನೆಗಡಿ, ಮೂಗು ಸೋರುವಿಕೆ, ನೆಗಡಿ, ಅತಿಸಾರ, ಕಣ್ಣಿನ ದೋಷಗಳು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ಈ ರಸ ತುಂಬಾ ಒಳ್ಳೆಯದು.
3. ಅಲ್ಲದೆ ತೂಕ ನಷ್ಟ, ಕೊಲೆಸ್ಟ್ರಾಲ್ ಕಡಿತ, ನರರೋಗ, ರಕ್ತದ ಕ್ಯಾನ್ಸರ್ ಚಿಕಿತ್ಸೆ, ಕೆಮ್ಮು, ಹೊಟ್ಟೆ ನೋವು, ರಕ್ತಹೀನತೆ, ಸಂಧಿವಾತ, ಹೃದಯ ಅಸ್ವಸ್ಥತೆ, ಚರ್ಮ ರೋಗಗಳು ಇತ್ಯಾದಿಗಳಿಗೆ ಅತ್ಯುತ್ತಮ ಔಷಧವಾಗಿ ಕಾರ್ಯನಿರ್ವಹಿಸುತ್ತದೆ
4. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಮತ್ತು ರಕ್ತದಿಂದ ವಿಷವನ್ನು ತೆಗೆದುಹಾಕುವಲ್ಲಿ ಗರಿಕೆ ರಸವು ಪರಿಣಾಮಕಾರಿಯಾಗಿದೆ.
5. ಗರಿಕೆ ಹುಲ್ಲಿನ ರಸ ಮತ್ತು ಕೊಬ್ಬರಿ ಎಣ್ಣೆಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕುದಿಸಬೇಕು.. ನಂತರ ಚರ್ಮರೋಗಗಳಾದ ರಿಂಗ್ವರ್ಮ್ ಮತ್ತು ಒಣ ಚರ್ಮವನ್ನು ತ್ವರಿತವಾಗಿ ಗುಣ ಪಡಿಸುತ್ತದೆ.
6. ಗರಿಕೆ ಹುಲ್ಲು ಬೇಕಾದಷ್ಟು ಸಂಗ್ರಹಿಸಿ, ಸ್ವಲ್ಪ ಅರಿಶಿನವನ್ನು ಸೇರಿಸಿ ಪೇಸ್ಟ್ ಮಾಡಿ ದೇಹಕ್ಕೆ ಉಜ್ಜಿಕೊಂಡರೆ, ಒಂದು ಗಂಟೆ ಬಿಟ್ಟು ನಂತರ ಸ್ನಾನ ಮಾಡಿ. ಇದರಿಂದ ದೇಹದ ತುರಿಕೆ ನಿವಾರಣೆಯಾಗುತ್ತದೆ.
ಗರಿಕೆ ಹುಲ್ಲಿನ ರಸ ತಯಾರಿಸುವುದು ಹೇಗೆ?
*ತಾಜಾ ಗರಿಕೆ ಹುಲ್ಲು ಒಂದು ಹಿಡಿಯಷ್ಟು ತೆಗೆದುಕೊಂಡು ಸ್ವಚ್ಚವಾಗಿ ತೊಳೆದುಕೊಳ್ಳಿ.
* ಬಳಿಕ ಇದನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
* ಬಳಿಕ ಇದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು.
* ಚೆನ್ನಾಗಿ ಪೇಸ್ಟ್ ಆದ ಬಳಿಕ ಇದನ್ನು ಸೋಸಿಕೊಳ್ಳಬೇಕು.
* ಬಳಿಕ ಇದನ್ನು ಕುಡಿಯಬೇಕು. ಆದರೆ ಇದು ತಕ್ಷಣದ ಮನೆಮದ್ದಾಗಿದೆ. ಆದರೆ ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಇದು ಕೊನೆಯ ಮದ್ದು ಅಲ್ಲ. ಹೀಗಾಗಿ ಯಾವುದೇ ಆರೋಗ್ಯ ಸಮಸ್ಯೆಗಳು ಉಂಟಾದಾಗ ಮೊದಲು ವೈದ್ಯರನ್ನು ಸಂಪರ್ಕಿಸುವುದು ತುಂಬಾ ಅವಶ್ಯಕ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoದಾವಣಗೆರೆಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲ ಎಲ್.ಎಚ್.ಅರುಣಕುಮಾರ್ ಮನವಿ
-
ದಿನದ ಸುದ್ದಿ4 days agoಮೊದಲ ಸಂಪುಟ ಸಭೆಯಲ್ಲೇ ಮಹತ್ವದ 5 ಘೋಷಣೆ ಮಾಡಿದ ಸಿಎಂ ಡಿಕೆಶಿ
-
ಅಂಕಣ3 days agoಕೆಪಿಸಿಸಿಯ ನೂತನ ಸಾರಥಿ ಬಿ.ಕೆ. ಹರಿಪ್ರಸಾದ್ ರಾಜಕೀಯ ಪಯಣ
-
ದಿನದ ಸುದ್ದಿ6 days agoದಾವಣಗೆರೆ ವಿಶ್ವವಿದ್ಯಾಲಯ | ಜೂನ್ 2 ರಿಂದ 4 ರವರೆಗೆ ‘ಭಾಷಾಂತರ ಕೌಶಲ್ಯ ತರಬೇತಿ ಶಿಬಿರ’
-
ದಿನದ ಸುದ್ದಿ3 days agoಬಡವರ ಕಲ್ಯಾಣವೇ ನಮ್ಮ ಆಡಳಿತದ ಕೇಂದ್ರಬಿಂದು : ಸಿಎಂ ಡಿಕೆಶಿ
-
ದಿನದ ಸುದ್ದಿ3 days agoಬಿ.ಕೆ. ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕ
-
ದಿನದ ಸುದ್ದಿ4 days agoಧನ್ಯವಾದಗಳು ಕರ್ನಾಟಕ : ಸಿಎಂ ಡಿಕೆ ಶಿವಕುಮಾರ್
-
ದಿನದ ಸುದ್ದಿ5 days agoಕುಂಬಳಕಾಯಿ ಬೀಜದಲ್ಲಿ ‘ ಜೀವ ಸಂಜೀವಿನಿ’ : ಮಿಸ್ ಮಾಡ್ದೆ ಓದಿ ; ಆರೋಗ್ಯದ ಗುಟ್ಟು ತಿಳಿಯಿರಿ

