Connect with us

ಬಹಿರಂಗ

ಜಾತ್ರೆ-ಸಂತೆಯ ಬಯಲಲಿ ಮತಾಂಧತೆಯ ಕರಾಳ ನೆರಳು

Published

on

ಸಾಂದರ್ಭಿಕ ಚಿತ್ರ

ಮಂದಿರ ಮಸೀದಿ ಶಾಲೆಗಳನ್ನು ದಾಟಿ ಮತಾಂಧತೆ ಜನದಟ್ಟಣೆಯ ಸಂತೆಕಟ್ಟೆಗೆ ಬಂದು ನಿಂತಿದೆ

  • ನಾ ದಿವಾಕರ

ಕೋಮುವಾದದ ಕ್ಯಾನ್ವಾಸ್ ದೊಡ್ಡದು. ಈ ಜನವಿರೋಧಿ ಮನಸ್ಥಿತಿಯನ್ನು ಸಮಾಜದ ಅಂತರಂಗದಲ್ಲೇ ಸೃಷ್ಟಿಸುವ ಮತೀಯವಾದ ಮತ್ತು ಮತಾಂಧತೆಯ ಬೇರುಗಳು ಆಳಕ್ಕಿಳಿದಷ್ಟೂ ಮನುಜ ಸಮಾಜವನ್ನು ದ್ವೇಷದ ಬೃಹತ್ ವೃಕ್ಷಗಳು ಆವರಿಸುತ್ತಲೇ ಹೋಗುತ್ತವೆ.

ಜನಸಾಮಾನ್ಯರ ನಿತ್ಯ ಜೀವನದಲ್ಲಿ ಕನಿಷ್ಠ ಮಟ್ಟದ ಗಮನ ಸೆಳೆಯಬೇಕಾದ ಜಾತಿ, ಮತ, ಧರ್ಮದ ಆಚರಣೆಗಳು, ಸಮಾಜ ನಿರ್ಮಾಣದ ಮುಖ್ಯ ಭೂಮಿಕೆಯಾಗಿ ಪರಿವರ್ತನೆಯಾದಾಗ ಈ ಅಸ್ಮಿತೆಗಳ ಬೇರುಗಳು ಜನರ ಮನಸ್ಥಿತಿಯನ್ನೂ ಸಂಕುಚಿತಗೊಳಿಸುತ್ತಲೇ ಹೋಗುತ್ತದೆ. ಹೀಗೆ ಸಂಕುಚಿತಗೊಂಡ ಮನಸುಗಳೇ ಮತೀಯ ಶಕ್ತಿಗಳು ಬಿತ್ತುವ ದ್ವೇಷದ ಬೀಜಗಳಿಗೆ ಫಲವತ್ತಾದ ಭೂಮಿಕೆಯಾಗುತ್ತವೆ.

ತಮ್ಮ ಬದುಕು, ಬವಣೆ, ಸಂಕಷ್ಟಗಳೆಲ್ಲಕ್ಕೂ ಇಡೀ ಸಮಾಜವನ್ನು ನಿಯಂತ್ರಿಸುವ ಒಂದು ಕ್ರೂರ ಅರ್ಥವ್ಯವಸ್ಥೆ ಮತ್ತು ಈ ಕ್ರೌರ್ಯವನ್ನು ಸಮರ್ಥಿಸಿಕೊಂಡೇ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವಂತಹ ಮತ ಧರ್ಮಗಳ ಸಾಂಸ್ಥಿಕ ನೆಲೆಗಳು ಮೂಲ ಕಾರಣ ಎಂಬ ಸುಡುವಾಸ್ತವವನ್ನು ಜನರು ಅರ್ಥಮಾಡಿಕೊಳ್ಳದ ಹೊರತು ಈ ದ್ವೇಷ ಬೀಜಗಳಿಂದ

ಮೊಳಕೆಯೊಡೆಯುವ ಸಸಿಗಳನ್ನು ಕಿತ್ತೊಗೆಯಲಾಗುವುದಿಲ್ಲ. ಭಾರತದಲ್ಲಿ ಕೋಮುವಾದ ಮತ್ತು ಮತೀಯ ದ್ವೇಷದ ಬೀಜಗಳಿಗೆ ಶತಮಾನದಷ್ಟು ಇತಿಹಾಸವಿದೆ. ಹಿಂದೂ-ಮುಸ್ಲಿಂ ಸಮೀಕರಣವನ್ನು ಬದಿಗಿಟ್ಟು ನೋಡಿದಾಗಲೂ, ಈ ದೇಶದ ಇತಿಹಾಸದಲ್ಲಿ ಒಂದು ಇಡೀ ಜನಾಂಗ. ಅಸ್ಪೃತೆಯಂತಹ ಹೀನ ಆಚರಣೆಯಿಂದ ಇಂದಿಗೂ ಅಗೋಚರವಾಗಿ ಬಹಿಷ್ಕೃತವಾಗಿಯೇ ಬದುಕುತ್ತಿದೆ.

ಜನಸಮುದಾಯಗಳ ಮೇಲೆ ತನ್ನದೇ ಆದ ವಾರಸುದಾರಿಕೆ ಮತ್ತು ಹಕ್ಕೊತ್ತಾಯಗಳನ್ನು ಹೇರುತ್ತಾ, ಉತ್ತರದಾಯಿತ್ವ ಇಲ್ಲದ ಒಂದು ಶೋಷಕ ವ್ಯವಸ್ಥೆಯನ್ನು ಹೇರುವ ಮೂಲಕ ಭಾರತದ ವೈದಿಕಶಾಹಿ ಪರಂಪರೆಯು ಜಾತಿ ವ್ಯವಸ್ಥೆಯಂತಹ ಒಂದು ಕ್ರೂರ ಪೆಡಂಭೂತವನ್ನು ಸೃಷ್ಟಿಸಿದೆ.

ಮನುಷ್ಯನ ಹುಟ್ಟಿನ ಮೂಲದಿಂದಲೇ ಸೃಷ್ಟಿಸಲಾಗುವ ಕಂದರಗಳು ಅಂತಿಮ ಪಯಣದವರೆಗೂ ಮುಂದುವರೆಯುವಂತಹ ಒಂದು ವಿಕೃತ ವ್ಯವಸ್ಥೆಗೆ ಭಾರತೀಯರಾದ ನಾವು ಒಗ್ಗಿಹೋಗಿದ್ದೇವೆ. ತಮ್ಮ ಪಯಣ ಮುಗಿಸಿ ಇಹಲೋಕ ತ್ಯಜಿಸಿದ ನಂತರವೂ ತುಳಿತಕ್ಕೊಳಗಾದ, ಬಹಿಷ್ಕೃತ ಸಮುದಾಯದ ಜೀವಗಳು ಪತ್ಯೇಕತೆಯ ಶಿಕ್ಷೆಯನ್ನು ಅನುಭವಿಸಬೇಕಾದ ಒಂದು ದುರಂತ ಸನ್ನಿವೇಶವನ್ನು ಇಂದಿಗೂ ಭಾರತ ಎದುರಿಸುತ್ತಿದೆ.

ಸಾಮಾಜಿಕ ಬದುಕಿನ ಮತ್ತು ಸಾಂಸ್ಕೃತಿಕ ಹೆಜ್ಜೆಗಳ ಪ್ರತಿ ಹಂತದಲ್ಲೂ ಅನ್ಯರನ್ನು ಸೃಷ್ಟಿಸುತ್ತಾ ‘ ನಮ್ಮವರೆಂಬ ’ ಭದ್ರಕೋಟೆಗಳನ್ನು ನಿರ್ಮಿಸುವ ಒಂದು ಕ್ರೂರ ಜಾತಿ ವ್ಯವಸ್ಥೆ ಅತಿಮಾನುಷ ಶಕ್ತಿಗಳನ್ನು ಆರಾಧಿಸುತ್ತಲೇ ಸಮಾಜದ ಗರ್ಭದಲ್ಲಿ ಅಮಾನುಷತೆಯ ಬೀಜಗಳನ್ನು ಬಿತ್ತುತ್ತಾ ಬಂದಿದೆ.

ಈ ಭದ್ರಕೋಟೆಗಳೊಳಗೆ ತಮ್ಮದೇ ಆದ ಹಿತವಲಯವನ್ನು ಸೃಷ್ಟಿಸಿಕೊಳ್ಳುವ ಪ್ರತಿಯೊಂದು ಜಾತಿ ಸಮುದಾಯವೂ ಅನ್ಯ ಜಾತಿಯನ್ನು ಕೀಳೆಂದು ಭಾವಿಸುತ್ತಾ ಶೋಷಣೆಗೊಳಪಡಿಸುವುದು ಇಲ್ಲಿನ ಜಾತಿ ವ್ಯವಸ್ಥೆಯ ವೈಶಿಷ್ಟ್ಯ. ಭಾರತೀಯ ಸಮಾಜದಲ್ಲಿ ಶತಮಾನಗಳಿಂದ ತಮ್ಮ ಅಸ್ತಿತ್ವ ಕಂಡುಕೊಂಡಿರುವ ಜನಸಮುದಾಯಗಳು ತಮ್ಮ ಮತಶ್ರದ್ಧೆ ಮತ್ತು ಧಾರ್ಮಿಕ ಆಚರಣೆಗಳ ಕಾರಣಕ್ಕಾಗಿಯೇ ಈ ‘ ಅನ್ಯವರ್ಗ’ಕ್ಕೆ ಸೇರಿಬಿಡುತ್ತವೆ.

ಜಾತಿ ವ್ಯವಸ್ಥೆಯ ದೌರ್ಜನ್ಯಗಳಿಗೆ, ಅಸ್ಪೃಶ್ಯತೆಯಂತಹ ಅಮಾನುಷ ಹೀನ ಪದ್ಧತಿಗೆ ಕುರುಡಾಗಿರುವ ಸಮಾಜದಲ್ಲಿ ಈ ‘ ಅನ್ಯವರ್ಗ’ವನ್ನು ಸೃಷ್ಟಿಸುವುದು ಬಹಳ ಸುಲಭ ಎನ್ನುವುದನ್ನು ಈ ದೇಶದ ಸಾಂಸ್ಕೃತಿಕ ರಾಷ್ಟ್ರೀಯತೆಯ ರಾಜಕಾರಣ ನಿರೂಪಿಸಿದೆ.

ಇಡೀ ಸಮಾಜವನ್ನು ತನ್ನ ಬೌದ್ಧಿಕ ಆಧಿಪತ್ಯಕ್ಕೊಳಪಡಿಸುವ ಮೂಲಕ ಸಾಂಸ್ಕೃತಿಕ ನೆಲೆಯಲ್ಲಿ, ಸಾಮಾಜಿಕಾರ್ಥಿಕ ನೆಲೆಯಲ್ಲಿ ಪಾರಮ್ಯ ಸಾಧಿಸಲೆತ್ನಿಸುವ ಬಹುಸಂಖ್ಯಾವಾದದ ರಾಜಕೀಯ ಶಕ್ತಿಗಳು ಇಂದು ಈ ದೇಶದ ದಲಿತರನ್ನೂ, ಅಲ್ಪಸಂಖ್ಯಾತರನ್ನೂ, ಮಹಿಳೆಯರನ್ನೂ ಮತ್ತು ಅವಕಾಶವಂಚಿತ ಜನಸಮುದಾಯಗಳನ್ನೂ ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿಸುವ ಪ್ರಯತ್ನ ಮಾಡುತ್ತಿವೆ.

ಈ ರಾಜಕೀಯ ಶಕ್ತಿಗಳನ್ನು ಹಿಂದುತ್ವ ರಾಜಕಾರಣ ಪ್ರಧಾನವಾಗಿ ಪ್ರತಿನಿಧಿಸುತ್ತದೆ. ಆದರೆ ಹಿಂದುತ್ವವನ್ನು ತಾತ್ವಿಕವಾಗಿ ಒಪ್ಪದ ರಾಜಕೀಯ ಶಕ್ತಿಗಳೂ ಸಹ ತಮ್ಮ ಸ್ಪಷ್ಟ ಧೋರಣೆಯನ್ನು ವ್ಯಕ್ತಪಡಿಸದೆ ಇರುವುದು ವಾಸ್ತವ.

ಈ ದ್ವೇಷ ರಾಜಕಾರಣದ ಒಂದು ಆಯಾಮವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೇ ಮಾರಕವಾಗುವಂತಹ ಹಿಜಾಬ್ ವಿವಾದದಲ್ಲಿ ಕಂಡಿದ್ದೇವೆ. ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕು ಮತ್ತು ಆದ್ಯತೆ, ಈ ಮೂರು ವಿಚಾರಗಳಲ್ಲಿ ಶಿಕ್ಷಣದ ಹಕ್ಕುಗಳಿಗಿಂತಲೂ ಧಾರ್ಮಿಕ ಸ್ವಾತಂತ್ರ್ಯವೇ ಪ್ರಧಾನವಾಗುವಂತಹ ಒಂದು ಭಾವನಾತ್ಮಕ ಸನ್ನಿವೇಶವನ್ನು ಸೃಷ್ಟಿಸಲಾಗಿದೆ.

ಶಾಲಾ ವ್ಯಾಸಂಗ ಮಾಡುವ ಎಳೆ ವಯಸ್ಸಿನ ಹೆಣ್ಣು ಮಕ್ಕಳು ಇಂದು ಮತೀಯವಾದದ ರಾಜಕೀಯ ಮೇಲಾಟಗಳಿಗೆ ಬಲಿಯಾಗುತ್ತಿರುವುದನ್ನು ಕಂಡೂ ಕಾಣದಂತಿದ್ದೇವೆ. ಸಮಾಜದಲ್ಲಿ ಢಾಳಾಗಿ ಕಾಣುತ್ತಿರುವ ಈ ಅಸೂಕ್ಷ್ಮತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ಧ್ವನಿಗಳು ಸದ್ದು ಮಾಡಬೇಕಿದೆ. ಆದರೆ ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳೇ ಪ್ರಧಾನವಾಗಿ ಸದ್ದುಮಾಡುತ್ತಿದೆ.

ಈ ಸಂದರ್ಭದಲ್ಲೇ ಕೆಲವು ಹಿಂದೂ ಮೂಲಭೂತವಾದಿ ಸಂಘಟನೆಗಳು ಮುಸ್ಲಿಂ ಸಮುದಾಯದ ಆರ್ಥಿಕ ಬೆನ್ನೆಲುಬನ್ನು ಮುರಿಯುವ ಪ್ರಯತ್ನದಲ್ಲಿ ತೊಡಗಿವೆ. ಶಾಲಾವಲಯದಲ್ಲಿ ಸೌಹಾರ್ದ ವಾತಾವರಣವನ್ನು ಕಲುಷಿತಗೊಳಿಸಿ, ಮತಾಂಧತೆಯ ಮಾಲಿನ್ಯ ಹರಡಿದ ನಂತರ ಈಗ ಮತಾಂಧರ ದೃಷ್ಟಿ ಈ ದೇಶದ ಬಹುತ್ವ ಸಂಸ್ಕೃತಿಯ ಮೂಲ ಸೆಲೆ ಎಂದೇ ಹೇಳಬಹುದಾದ ಜಾತ್ರೆಗಳ ಮೇಲೆ ಬಿದ್ದಿದೆ.

ಭಾರತದಲ್ಲಿ ಜಾತ್ರೆಗಳಿಗೆ ಒಂದು ವಿಶಿಷ್ಟ ಸ್ಥಾನ ಇದೆ. ವೈದಿಕಶಾಹಿಯಿಂದ ಮುಕ್ತವಾದ ಶೂದ್ರ ಸಮುದಾಯದ ದೇವಾನುದೇವತೆಗಳೇ ಪ್ರಧಾನವಾಗಿರುವ ಸಾವಿರಾರು ಜಾತ್ರೆ, ರಥೋತ್ಸವಗಳು ಭಾರತದಲ್ಲಿ ನಡೆಯುತ್ತಲೇ ಇರುತ್ತವೆ. ಜನಪದ ಸಂಸ್ಕೃತಿಯಿಂದ ಉಗಮಿಸಿರುವ ನೂರಾರು ದೇವತೆಗಳು ಜನಸಾಮಾನ್ಯರ, ವಿಶೇಷವಾಗಿ ದುಡಿಯುವ ಜನತೆಯ ಸಾಂತ್ವನದ ನೆಲೆಗಳಾಗಿ ಕಂಡುಬರುತ್ತವೆ.

ತಮ್ಮ ಬದುಕಿನ ಸಂಕಷ್ಟಗಳಿಗೆ ಸಾಂತ್ವನ ಹೇಳುವ ಸಾಂಸ್ಕೃತಿಕ ನೆಲೆಗಳಾಗಿ ಈ ದೈವಗಳನ್ನು ಕಾಣುವ ಪರಿಶಿಷ್ಟ ಸಮುದಾಯಗಳು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ತಮ್ಮ ಸಾಮಾಜಿಕ-ಸಾಂಸ್ಕೃತಿಕ ಸೌಹಾರ್ದತೆಯನ್ನೂ ಸಾರುತ್ತಾ ಬಂದಿವೆ.

ಭಾರತದ ಬಹುತ್ವ ಸಂಸ್ಕೃತಿಯನ್ನು ಮತ್ತಾವ ಕ್ಷೇತ್ರದಲ್ಲಿ ಕಾಣಲಾಗದಿದ್ದರೂ, ಈ ಜಾತ್ರೆಗಳಲ್ಲಿ ಕಾಣಬಹುದು. ಜಾತಿ, ಮತ, ಧರ್ಮ, ಪಂಥ ಮತ್ತು ಭಾಷಿಕ ಅಸ್ಮಿತೆಗಳನ್ನೂ ಮರೆತು, ಸಾಮಾಜಿಕ ಅಂತಸ್ತು ಮತ್ತು ಸ್ಥಾನಮಾನಗಳನ್ನೂ ಬದಿಗೊತ್ತಿ, ಇಡೀ ಗ್ರಾಮ ಸಮುದಾಯ ಒಂದಾಗಿ ಆಚರಿಸುವ ಈ ಜಾತ್ರೆಗಳಲ್ಲಿ ಈ ದೇಶದ ಅಲ್ಪಸಂಖ್ಯಾತರೂ ಅವಿಭಾಜ್ಯ ಅಂಗವಾಗಿಯೇ ನಡೆದುಬಂದಿದ್ದಾರೆ.

ಪುರಿ ಜಗನ್ನಾಥ ದೇವಾಲಯದಿಂದ ಮೈಸೂರಿನ ಚಾಮುಂಡೇಶ್ವರಿಯವರಿಗೆ, ಕೋಲಾರದ ಕೋಲಾರಮ್ಮನಿಂದ ಕೊಲ್ಲೂರು ಮೂಕಾಂಬಿಕೆಯವರೆಗೆ ಈ ಶ್ರದ್ಧೆ ಮತ್ತು ನಂಬಿಕೆಗಳು ಸಾಮುದಾಯಿಕ, ಧಾರ್ಮಿಕ ಅಸ್ಮಿತೆಗಳ ಚೌಕಟ್ಟುಗಳನ್ನು ಭೇದಿಸಿ ಸೌಹಾರ್ದತೆಯ ದ್ಯೋತಕವಾಗಿ ಬೆಳೆದುಬಂದಿವೆ.

ಭಾರತದ ಉದ್ದಗಲಕ್ಕೂ ಕಂಡುಬರುವ ಸ್ಥಳೀಯ ನಂಬಿಕೆಗಳನ್ನಾಧರಿಸಿದ ಆಚರಣೆಗಳು ಜಾತ್ರೆಗಳ ರೂಪದಲ್ಲಿ, ಉತ್ಸವ, ರಥೋತ್ಸವದ ರೂಪದಲ್ಲಿ ಮತ್ತು ಸಾಮೂಹಿಕ ಹಬ್ಬಗಳ ರೂಪದಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡಿವೆ. ವೈದಿಕ ಪರಂಪರೆಯ ಶ್ರೇಷ್ಠತೆಯ ಅಹಮಿಕೆ, ತಾರತಮ್ಯದ ಆಚರಣೆಗಳು ಮತ್ತು ಪಾರಮ್ಯದ ಹಂಗಿಲ್ಲದೆ ಬೆಳೆದುಬಂದಿರುವ ಈ ಜನಪದೀಯ ಸಾಂಸ್ಕೃತಿಕ ನೆಲೆಗಳು ಆಧುನಿಕ ಕಾಲಘಟ್ಟದಲ್ಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿವೆ.

ಸ್ಥಳೀಯ ಗ್ರಾಮ ದೇವತೆಗಳು, ಜನಪದೀಯ ಸಾಂಸ್ಕೃತಿಕ ವ್ಯಕ್ತಿ ಮತ್ತು ಘಟನೆಗಳು ಇಂತಹ ಜಾತ್ರೆಗಳಿಗೆ ಒಂದು ಸಾಂಸ್ಕೃತಿಕ ಸಮನ್ವಯದ ಬುನಾದಿಯನ್ನು ಒದಗಿಸುತ್ತಲೇ ಬಂದಿವೆ. ಭಾರತದ ಉಳಿದೆಲ್ಲಾ ಬೌದ್ಧಿಕ ವಲಯದಲ್ಲಿ ಆದಂತೆಯೇ ಈ ಜನಪದೀಯ ನೆಲೆಗಳಲ್ಲೂ ವೈದಿಕ ಪರಂಪರೆಯೇ ಆವರಿಸಿ, ಆಕ್ರಮಿಸುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದರ ಮೂಲ ಕಾರಣಗಳನ್ನು ಶೋಧಿಸಬೇಕಿದೆ.

ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಸಾಂಸ್ಕೃತಿಕ ಸಮನ್ವಯದ ನೆಲೆಗಳಲ್ಲೂ ಜಾತಿ, ಮತ, ಪಂಥೀಯ ಗೋಡೆಗಳನ್ನು ನಿರ್ಮಿಸುವ ಪ್ರಯತ್ನವನ್ನು ಕೆಲವು ಮತಾಂಧ ಸಂಘಟನೆಗಳು ಮಾಡುತ್ತಿರುವುದು ಚಿಂತೆಗೀಡುಮಾಡುವ ವಿಚಾರವಾಗಿದೆ. ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯ ಮೂಲ ಸೆಲೆಯಂತೆ ಕಾಣುವ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿರುವ ಜಾತ್ರೆಗಳು ಮತ್ತು ಸಂತೆಮಾಳಗಳು ಇಂದಿಗೂ ಸಹ ಜನಸಮುದಾಯಗಳ ನಡುವೆ ಇರಬಹುದಾದ ತಾರತಮ್ಯದ ಗೋಡೆಗಳನ್ನು ಕೆಡವುತ್ತಾ ಒಂದು ಸೌಹಾರ್ದಯುತ ಸಮಾಜವನ್ನು ಕಟ್ಟುವುದರಲ್ಲಿ ನಿರತವಾಗಿವೆ.

ಈ ಮಾರುಕಟ್ಟೆ ತಾಣಗಳು ಶ್ರೀಮಂತಿಕೆಯಲ್ಲಿ ಮೆರೆಯುವ ಬಂಡವಳಿಗ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಬದಲಾಗಿ ತಮ್ಮ ನಿತ್ಯ ಬದುಕಿನ ಜೀವನೋಪಾಯದ ಮಾರ್ಗಗಳನ್ನು ಕಲ್ಪಿಸಿಕೊಳ್ಳುವ ತಾಣಗಳಾಗಿರುತ್ತವೆ. ಈ ಜಾತ್ರೆಗಳಲ್ಲಿ, ಸಂತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ಯಾವುದೇ ಸಮುದಾಯದ ವ್ಯಕ್ತಿಗಾದರೂ ಅದು ಜೀವನೋಪಾಯದ ಮಾರ್ಗವಾಗಿರುತ್ತದೆಯೇ ಹೊರತು, ಬಂಡವಾಳಶೇಖರಣೆ ಅಥವಾ ಲಾಭ ಗಳಿಕೆಯ ದಂಧೆ ಆಗಿರುವುದಿಲ್ಲ. ಹಾಗಾಗಿಯೇ ಮಾರುಕಟ್ಟೆಯ ಸಹಜ ಪೈಪೋಟಿಯ ನಡುವೆಯೇ ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ನಡೆಸುವವರ ನಡುವೆ ಒಂದು ಸಮನ್ವಯದ, ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿರುತ್ತದೆ.

ಇಂತಹ ಒಂದು ಸಾಂಸ್ಕೃತಿಕ ಸಮನ್ವಯದ ವಾತಾವರಣವನ್ನು ಕಲುಷಿತಗೊಳಿಸಲು, ಮತಾಂಧತೆಯ ವಿಷಾನಿಲವನ್ನು ಹರಡುತ್ತಿರುವುದು ದುರಂತ. ಮೂಲತಃ ಶೂದ್ರಾದಿ ದೇವಾನುದೇವತೆಗಳು ಮತ್ತು ಜನಪದೀಯ ನಂಬಿಕೆಗಳನ್ನಾಧರಿಸಿದ ಈ ಜಾತ್ರೆಗಳಲ್ಲಿ ತನ್ನ ಬೇರುಗಳನ್ನು ಹರಡಲು ಯತ್ನಿಸುತ್ತಿರುವ ವೈದಿಕಶಾಹಿ ಪರಂಪರೆ ಅಲ್ಲಿ ತನ್ನದೇ ಆದ ಮಡಿವಂತಿಕೆ, ಪ್ರತ್ಯೇಕತೆ, ಶ್ರೇಷ್ಠತೆಯ ವ್ಯಸನಗಳನ್ನು ಪಸರಿಸಲು ಪ್ರಯತ್ನಿಸುತ್ತಿದೆ.

ಇದರ ಒಂದು ಭಾಗವಾಗಿಯೇ ಕೆಲವು ಹಿಂದೂ ಸಂಘಟನೆಗಳು, ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸುತ್ತಿವೆ. ಮತೀಯ ಆಲೋಚನೆ ಮತ್ತು ಮತಾಂಧತೆಯಿಂದ ಮುಕ್ತವಾಗಿರುವ ಒಂದು ಸಮನ್ವಯದ ನೆಲದಲ್ಲಿ ಮತಾಂಧತೆಯ ವಿಷಬೀಜಗಳನ್ನು ಬಿತ್ತುವ ಮೂಲಕ, ಜನಸಮುದಾಯಗಳ ನಡುವೆ ತಾರತಮ್ಯದ, ಪ್ರತ್ಯೇಕತೆಯ ಗೋಡೆಗಳನ್ನು ನಿರ್ಮಿಸುವ ಇಂತಹ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ವಿರೋಧಿಸಲೇಬೇಕಿದೆ.

ದೇಶ ಸ್ವತಂತ್ರವಾಗಿ ಏಳು ದಶಕಗಳು ಕಳೆದರೂ ಇಂದಿಗೂ ದೇವಾಲಯದ ಆವರಣಗಳಲ್ಲಿ ಸಹಪಂಕ್ತಿ ಭೋಜನವನ್ನು ಕಾಣಲಾಗದ ದುರಂತ ಸನ್ನಿವೇಶವನ್ನು ನಾವು ನೋಡುತ್ತಿದ್ದೇವೆ. ದೇವಸ್ಥಾನಗಳಲ್ಲಿ, ಪೂಜಾ ಸ್ಥಳಗಳಲ್ಲಿ ಅಸ್ಪೃಶ್ಯತೆಯ ಆಚರಣೆಯೂ ಇಂದಿಗೂ ಜಾರಿಯಲ್ಲಿದೆ. ಅನ್ನ ಉಣ್ಣುವ ಜಾಗದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟುವುದರಲ್ಲಿ ನಿಷ್ಣಾತವಾಗಿರುವ ಶಕ್ತಿಗಳೇ ಇಂದು ಅನ್ನ ಸಂಪಾದಿಸುವ ಜಾಗಗಳಲ್ಲೂ ಬೇಲಿಗಳನ್ನು ನಿರ್ಮಿಸಲು ಮುಂದಾಗುತ್ತಿವೆ. ಜಾತ್ರೆಗಳಲ್ಲಿ ಮುಸಲ್ಮಾನರ ಅಂಗಡಿ ಮುಗ್ಗಟ್ಟುಗಳನ್ನು ನಿಷೇಧಿಸುವ ಆಗ್ರಹದ ಹಿಂದೆ, ಸಮನ್ವಯ ಸಂಸ್ಕೃತಿಯನ್ನು ಭಂಗಗೊಳಿಸುವ, ಸಾಂಸ್ಕೃತಿಕ ಸೌಹಾರ್ದತೆಯನ್ನು ಕದಡುವ ಕುತಂತ್ರ ಇರುವುದನ್ನು ಗಮನಿಸಬೇಕಿದೆ.

ಈ ಸಮನ್ವಯ ಸಂಸ್ಕೃತಿಯನ್ನು ಹಿಂದೂಗಳ ಜಾತ್ರೆಗಳಲ್ಲಿ ಕಾಣುವಂತೆಯೇ, ಕ್ರೈಸ್ತರ ಹಲವು ಹಬ್ಬ, ಉತ್ಸವಗಳಲ್ಲಿ, ಮುಸಲ್ಮಾನರ ಉರುಸ್, ಮೊಹರಂ ಮುಂತಾದ ಹಬ್ಬಗಳ ಸಂದರ್ಭದಲ್ಲಿ ಕಾಣುತ್ತಲೇ ಬಂದಿದ್ದೇವೆ. ಜನಸಾಮಾನ್ಯರ ಬದುಕಿನ ಒಂದು ಭಾಗವಾಗಿಯೇ ಬೆಳೆದುಬಂದಿರುವ ಸ್ಥಳೀಯ ಮಾರುಕಟ್ಟೆಗಳು ಸದಾ ಸಮನ್ವಯತೆಯೊಂದಿಗೇ ನಡೆದುಬಂದಿವೆ. ಮದುವೆ, ಮುಂಜಿ, ನಾಮಕರಣ, ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ಸಣ್ಣ ವ್ಯಾಪಾರದ ವಲಯ ಎಲ್ಲ ಮತ ಧರ್ಮಗಳನ್ನೂ ಪ್ರತಿನಿಧಿಸುತ್ತಲೇ ಬಂದಿದೆ. ಹೂ ಮಾರುವವರಿಂದ ಹಿಡಿದು, ಪೂಜಾ ಸಾಮಗ್ರಿಯನ್ನು ಮಾರುವವರವರೆಗೆ, ಧಾರ್ಮಿಕ ಆಚರಣೆಗಳ ಉಪಕರಣಗಳನ್ನು ಒದಗಿಸುವವರೆಗೆ, ಈ ಸಾಂಸ್ಕೃತಿಕ ಸಮನ್ವಯವನ್ನು ವ್ಯಾಪಾರಿ ವಲಯ ಕಾಪಾಡಿಕೊಂಡುಬಂದಿದೆ.

ಈ ಸಮನ್ವಯದ ನಡುವೆಯೇ ತಲೆದೋರುವ ಅಸ್ಪೃಶ್ಯತೆಯಂತಹ ಹೀನ ಆಚರಣೆಗಳನ್ನು ನಮ್ಮ ಸಮಾಜ ನಿರ್ಲಕ್ಷಿಸುತ್ತಾ ಬಂದಿರುವುದನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ದೇವಸ್ಥಾನಗಳಲ್ಲಿ ಸಹಪಂಕ್ತಿ ಭೋಜನವನ್ನು ನಿರಾಕರಿಸುವ, ಮಡೆ ಸ್ನಾನದಂತಹ ಸಾಂಸ್ಕೃತಿಕ ದೌರ್ಜನ್ಯವನ್ನು ಪ್ರೋತ್ಸಾಹಿಸುವ ಒಂದು ಕ್ರೂರ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ತಾರತಮ್ಯದ ನೆಲೆಗಳು ಇಂದು ವಿಸ್ತೃತ ನೆಲೆಯಲ್ಲಿ ಅನಾವರಣಗೊಳ್ಳುತ್ತಿವೆ. ಈ ತಾರತಮ್ಯದ ನೆಲೆಗಳನ್ನು ಮತಾಂಧ ಶಕ್ತಿಗಳು ಆಕ್ರಮಿಸಿಕೊಂಡಷ್ಟೂ ಸಾಮಾಜಿಕ ಸೌಹಾರ್ದತೆ ನಾಶವಾಗುತ್ತಲೇ ಹೋಗುತ್ತದೆ. ಹಿಂದುತ್ವ ರಾಜಕಾರಣದ ಏಕಮುಖಿ ಸಂಸ್ಕೃತಿಯನ್ನು ಹೇರುವ ಹುನ್ನಾರಗಳಿಗೆ ಪೂರಕವಾಗಿಯೇ ಈ ಆಕ್ರಮಣಗಳೂ ನಡೆಯುತ್ತಿರುವುದು ಸ್ಪಷ್ಟ.

ಮಾರುಕಟ್ಟೆ ಆರ್ಥಿಕತೆಯ ದೃಷ್ಟಿಯಿಂದಲೂ ಮುಸಲ್ಮಾನರ ವ್ಯಾಪಾರ ನಿಷೇಧಿಸುವ ಪ್ರಯತ್ನಗಳು ಹಲವು ಪಲ್ಲಟಗಳಿಗೆ ಕಾರಣವಾಗುತ್ತವೆ. ಮುಸಲ್ಮಾನರ ಅಂಗಡಿಯಲ್ಲಿ ಬಿಕರಿಯಾಗುವ, ವಿನಿಮಯವಾಗುವ ಪದಾರ್ಥಗಳ ಹಿಂದೆ ಹಲವು ಹಿಂದೂ, ಕ್ರೈಸ್ತ ಸಮುದಾಯಗಳ ಶ್ರಮವೂ ಇರುತ್ತದೆ. ಬಿಕರಿಯಾಗುವ ಪದಾರ್ಥಗಳು ಮೂಲತಃ ಮಾನವ ಶ್ರಮದಿಂದ ಉತ್ಪಾದಿತವಾಗಿರುತ್ತವೆ. ಈ ಉತ್ಪಾದನೆಯ ಪ್ರಕ್ರಿಯೆಯಲ್ಲಿನ ಶ್ರಮವನ್ನು ಜಾತಿ, ಮತ, ಧರ್ಮದ ನೆಲೆಯಲ್ಲಿ ವಿಂಗಡಿಸಲು ಸಾಧ್ಯವಾಗುವುದೂ ಇಲ್ಲ.

ಆದರೆ ಒಂದು ನಿರ್ದಿಷ್ಟ ಮತದ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದರಿಂದ, ಉತ್ಪಾದನಾ ವಲಯದ ಸರಾಗ ವಹಿವಾಟುಗಳೂ ಪ್ರಕ್ಷುಬ್ಧವಾಗುತ್ತವೆ ಎಂಬ ವಾಸ್ತವವನ್ನು ನಾವು ಗ್ರಹಿಸಬೇಕಿದೆ. ರೇಷ್ಮೆ ಗೂಡು ತಯಾರಿಸುವವರು ಹಿಂದೂ ಆಗಿದ್ದರೆ, ನೂಲು ತೆಗೆಯುವವರು ಮುಸ್ಲಿಂ ಆಗಿರುತ್ತಾನೆ. ಸೀರೆ ನೇಯುವವನು ನೇಕಾರನಾಗಿರುತ್ತಾನೆ ಅದನ್ನ ಒಬ್ಬ ಮಾರ್ವಾಡಿಯೋ, ವೈಶ್ಯನೋ, ಮುಸಲ್ಮಾನನೋ ಮಾರಾಟ ಮಾಡುತ್ತಾನೆ. ಈ ಶ್ರಮಶಕ್ತಿಯ ವಾಹಿನಿಯೇ ಸಮಾಜದಲ್ಲಿ ಸಮನ್ವಯತೆ, ಸೌಹಾರ್ದತೆಯನ್ನು ಸಂರಕ್ಷಿಸಲು ಸಾಧ್ಯ.

ತಮ್ಮ ಶ್ರಮಶಕ್ತಿಯ ಮೂಲಕ ಸಮಾಜದ ವಿಭಿನ್ನ ಸಮುದಾಯಗಳನ್ನು ಬೆಸೆಯುವ ದುಡಿಯುವ ವರ್ಗಗಳಲ್ಲಿ ಜಾತಿ, ಮತ, ಧರ್ಮ ಅಥವಾ ಪಂಥೀಯ ಪ್ರಜ್ಞೆಯನ್ನು ಬೆಳೆಸುವುದರ ಬದಲು, ವರ್ಗಪ್ರಜ್ಞೆಯನ್ನು ಬೆಳೆಸಲು ಯತ್ನಿಸಿದ್ದರೆ ಬಹುಶಃ ಭಾರತ ಈ ದುಸ್ಥಿತಿಗೆ ತಲುಪುತ್ತಿರಲಿಲ್ಲ. ಈಗಲೂ ಕಾಲ ಮಿಂಚಿಲ್ಲ.

ತಮ್ಮ ಸಾಂಸ್ಕೃತಿಕ ಬೇರುಗಳನ್ನು ಅರಿತು, ತಮ್ಮ ಶ್ರಮಾಧಾರಿತ ಬದುಕಿನ ಮಾರ್ಗಗಳನ್ನು ಹಸನುಗೊಳಿಸುತ್ತಾ, ಜಾತಿ, ಮತ, ಧರ್ಮಗಳ ವಿಷಬೀಜಗಳನ್ನು ಕಿತ್ತೊಗೆದು ಬಹುತ್ವ ಭಾರತದ ಸಮನ್ವಯ ಸಂಸ್ಕೃತಿಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಈ ದೇಶದ ದುಡಿಯುವ ವರ್ಗಗಳ ಮೇಲಿದೆ.

ಜಾತಿ-ವರ್ಗ ತಾರತಮ್ಯಗಳಿಂದ ಹೊರತಾದ, ದೌರ್ಜನ್ಯಗಳಿಂದ ಮುಕ್ತವಾದ, ಅಸ್ಪೃಶ್ಯತೆ ಮತ್ತು ಪ್ರತ್ಯೇಕತೆಯಂತಹ ಹೀನ ಆಚರಣೆಗಳಿಂದಮುಕ್ತವಾದ,ಮತೀಯತೆ-ಮತಾಂಧತೆಯಂತಹ ವಿಷವಲಯದಿಂದ ಮುಕ್ತವಾದ, ಒಂದು ಮಾನವೀಯ ವಾತಾವರಣವನ್ನು ಸೃಷ್ಟಿಸುವ ಮೂಲಕ, ಇಂದು ಬಿತ್ತಲಾಗುತ್ತಿರುವ ಮತಾಂಧತೆಯ ವಿಷಬೀಜಗಳನ್ನು ನಿರ್ವೀರ್ಯಗೊಳಿಸಲು ಮುನ್ನಡೆಯಬೇಕಿದೆ. ಆಗಲೇ ಕರ್ನಾಟಕ ಅಥವಾ ಭಾರತ “ ಸರ್ವ ಜನಾಂಗದ ಶಾಂತಿಯ ತೋಟ” ಆಗಲು ಸಾಧ್ಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರೇಣುಕಾಸ್ವಾಮಿ ಕೊಲೆ ಮತ್ತು ಗಂಡುಹೆಣ್ಣಿನ ನಡುವಿನ ಸಂಬಂಧ

Published

on

  • ರಾಜೇಂದ್ರ ಬುರಡಿಕಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸನ್ನು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುವ ಅನೇಕ ಸ್ನೇಹಿತರು ಈ ಕೇಸಿನಲ್ಲಿ ಮೊದಲನೆಯ ಮತ್ತು ಎರಡನೆಯ ಆರೋಪಿಗಳೆಂದು ಹೆಸರಿಸಲ್ಪಟ್ಟ ದರ್ಶನ್ ಮತ್ತು ಪವಿತ್ರ ಗೌಡ ಅವರ ನಡುವಿನ ಸಂಬಂಧದ ಬಗ್ಗೆ ಅನಗತ್ಯವಾಗಿ ಚರ್ಚಿಸಿ ಪವಿತ್ರಗೌಡ ಅವರನ್ನು ‘ಇಟ್ಟುಕೊಂಡವಳು’ ಇತ್ಯದಿ ಪದಬಳಸಿ ಹಿಯ್ಯಾಳಿಸಿದ್ದಾರೆ.

ಒಂದು ಟಿವಿ ಚಾನೆಲ್ ನವರು ಅವರನ್ನು ‘ಸೆಕೆಂಡ್ ಹ್ಯಾಂಡ್ ಸುಂದರಿ’ ಎಂದೂ ಕರೆದದ್ದು ವರದಿಯಾಗಿದೆ. ಇದನ್ನು ಮಾಡುವ ಹಕ್ಕು ಯಾರಿಗೂ ಇಲ್ಲ. ನಮ್ಮ ವಿರೋಧ ಇರಬೇಕಾದದ್ದು ಅವರು ರೂಪಿಸಿದ್ದಾರೆ ಎನ್ನಲಾದ ಕೊಲೆಯ ಕೇಸಿನ ಬಗ್ಗೆಯೇ ಹೊರತು ಅವರಿಬ್ಬರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ.

ಗಂಡು ಹೆಣ್ಣಿನ ನಡುವಿನ ಸಂಬಂಧ ಎಂಬುದು ಅತ್ಯಂತ ಸಹಜವಾದದ್ದು. ಯಾರಿಗೆ ಯಾರ ಮೇಲೆ ಯಾವಾಗ ಆಕರ್ಷಣೆ ಉಂಟಾಗಿ ಸಂಬಂಧಗಳು ಬೆಸೆದುಕೊಳ್ಳುತ್ತವೆ ಎಂಬುದನ್ನು ಹೇಳಲಾಗದು. ಇದಕ್ಕೆ ‘ನೈತಿಕ’ ‘ಅನೈತಿಕ’ ಎಂಬ ಹಣೆಪಟ್ಟಿ ಹಚ್ಚಿ ಗೌರವಿಸುವ ಅಥವಾ ಅವಹೇಳನ ಮಾಡುವ ಕ್ರಮ ಸರಿಯಾದದ್ದಲ್ಲ. ಪ್ರತಿಯೊಬ್ಬರಿಗೂ ಆಯ್ಕೆಗಳಿರುತ್ತವೆ. ತಮಗೆ ಬೇಕಾದ ಗಂಡನ್ನು ಅಥವಾ ಹೆಣ್ಣನ್ನು ಆಯ್ದುಕೊಳ್ಳುವ ಅವರೊಡನೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವಿದೆ. ಎಲ್ಲರಿಗೂ ಇದೆ. ಅದನ್ನು ಪ್ರಶ್ನಿಸುವ ಹಕ್ಕು ಇತರರಿಗೆ ಇಲ್ಲ. ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧವು ದೇಶದ ಕಾನೂನಿನ ಪ್ರಕಾರವೂ ಅಪರಾಧವಲ್ಲ.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಶಿವರಾಮ ಕಾರಂತರು ತಮ್ಮ ಅನೇಕ ಕಾದಂಬರಿಗಳ ಮೂಲಕ ಇದಕ್ಕೆ ಸಂಬಂಧಿಸಿದಂತೆ ಒಂದು ತಾತ್ವಿಕತೆಯನ್ನು ನಮಗೆ ರೂಪಿಸಿಕೊಡುತ್ತಾರೆ. ಅದೆಂದರೆ ‘ಲೈಂಗಿಕ ಸುಖ ಎನ್ನುವುದು ಮನುಷ್ಯನ ಬದುಕು ಮನುಷ್ಯನಿಗೆ ನೀಡುವ ಅತ್ಯಂತ ಸುಖದ ಸಂಗತಿಗಳಲ್ಲಿ ಒಂದು. ಅದರಿಂದ ಯಾರೂ ವಂಚಿತರಾಗಬಾರದು. ಪರಸ್ಪರ ಒಪ್ಪಿಕೊಂಡ ಗಂಡು ಹೆಣ್ಣುಗಳ ನಡುವಿನ ಲೈಂಗಿಕ ಸಂಬಂಧದಲ್ಲಿ ಒಂದು ಚೆಲುವು ಇರುತ್ತದೆ. ಇಂತಹ ಒಂದು ಒಳ್ಳೆಯ ಸಂಬಂಧಕ್ಕೆ ಮದುವೆ ಎಂಬುದು ಒಂದು ‘ಪೂರ್ವಾಗತ್ಯ’ವಾಗಬೇಕಿಲ್ಲ. ಗಂಡುಹೆಣ್ಣಿನ ನಡುವಿನ ಒಂದು ಒಳ್ಳೆಯ ಸಂಬಂಧವು ವಿವಾಹದ ಒಳಗೂ ಇರಬಹುದು; ಹೊರಗೂ ಇರಬಹುದು. ಅದೇ ರೀತಿ ಒಂದು ಕೆಟ್ಟ ಸಂಬಂಧವು ವಿವಾಹದ ಒಳಗೂ ಇರಬಹುದು ಹೊರಗೂ ಇರಬಹುದು. ವಿವಾಹದ ಚೌಕಟ್ಟಿನ ಒಳಗಿನ ಒಂದು ಕೆಟ್ಟ ಸಂಬಂಧಕ್ಕಿಂತ ವಿವಾಹದ ಚೌಕಟ್ಟಿನ ಹೊರಗಿನ ಒಳ್ಳೆಯ ಸಂಬಂಧ ಬೆಲೆಯುಳ್ಳದ್ದು.

ಹೀಗಾಗಿ ಯಾರೊಡನೆ ಎಂತಹ ಸಂಬಂಧ ಇಟ್ಟುಕೊಳ್ಳಬೇಕು ಎಂಬುದು ಅವರವರ ವೈಯಕ್ತಿಕ ವಿಚಾರ. ಅದರಲ್ಲಿ ಇತರರು ತಲೆಹಾಕುವುದು ಅವಿವೇಕತನ. ‘ಮದುವೆ ಎಂಬುದು ಏಳೇಳು ಜನ್ಮಗಳ ಸಂಬಂಧ’ ಏನೇ ಆದರೂ ಅದರ ಗೆರೆದಾಟಿ ಬೇರೆಯವರೊಡನೆ ಲೈಂಗಿಕ ಸಂಬಂಧ ಇಟ್ಟುಕೊಳ್ಳಬಾರದು’ ಎನ್ನುವವರು ಹಾಗೆಯೇ ಇರಬಹುದು. ಅದಕ್ಕೂ ಅವರಿಗೆ ಸ್ವಾತಂತ್ರ್ಯವಿದೆ. ಆದರೆ ಮದುವೆಯ ಚೌಕಟ್ಟಿನ ಹೊರಗಿನ ಸಂಬಂಧಗಳನ್ನು ಟೀಕಿಸುವ ಸ್ವಾತಂತ್ರ್ಯ ಹಕ್ಕು ಅವರಿಗಿಲ್ಲ. ಈ ವಿಷಯದಲ್ಲಿ ನಮ್ಮ ಆಲೋಚನಾ ಕ್ರಮ ಸಾಕಷ್ಟು ಬದಲಾಗಬೇಕಿದೆ. ಒಂದು ಗಂಡು ಮತ್ತು ಒಂದು ಹೆಣ್ಣಿನ ನಡುವಿನ ಸಂಬಂಧ ಎಂಥದ್ದೇ ಇರಲಿ ಅದು ಅವರಿಬ್ಬರಿಗೂ ಸಂತೋಷವನ್ನು ಕೊಡುತ್ತಿದ್ದರೆ ಅದನ್ನು ಕಂಡು ನಾವು ಸಂತೋಷ ಪಡಬೇಕೆ ಹೊರತು ಹೊಟ್ಟೆಕಿಚ್ಚು ಪಡಬಾರದು. ಅದನ್ನು ಗೌರವಿಸುವುದನ್ನು ನಾವು ಮೊದಲು ಕಲಿಯಬೇಕು. ಈ ಹಿನ್ನಲೆಯಲ್ಲಿ ನಮ್ಮ ವಿರೋಧವಿರಬೇಕಾದದ್ದು ಅವರಿಬ್ಬರು ಸೇರಿ ವ್ಯಕ್ತಿಯೊಬ್ಬರ ಕೊಲೆಮಾಡಿದ್ದಾರೆ ಎನ್ನಲಾದ ವಿಚಾರಕ್ಕೆ ಹೊರತು ಅವರ ನಡುವಿನ ವೈಯಕ್ತಿಕ ಸಂಬಂಧದ ಬಗ್ಗೆ ಅಲ್ಲ. ಇಂತದ್ದೇ ವಿಚಾರವನ್ನು ಬೇರೆ ರೀತಿಯಲ್ಲಿ ಹೇಳಿರುವ ಸುಹಾಸಿನಿ ಶ್ರೀ Suhasini Shree ಅವರ ಒಂದು ಪೋಸ್ಟನ್ನೂ ಆಸಕ್ತಿ ಇರುವವರು ಗಮನಿಸಬಹುದು.(ರಾಬು (23-06-2024)
(ರಾಜೇಂದ್ರ ಬುರಡಿಕಟ್ಟಿ ಅವರ ಫೇಸ್ ಬುಕ್ ಬರೆಹ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇವರೇ ನೋಡಿ ಟ್ವೀಟ್ಟರ್, ಪೇಸ್ಬುಕ್ ಮೀಮ್ಸ್ ಸ್ಟಾರ್ ಕ್ಸೇವಿಯರ್ ಉರ್ಫ್ ಓಂಪ್ರಕಾಶ್

Published

on

  • ~ ಸಿದ್ದು ಸತ್ಯಣ್ಣನವರ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದವರಿಗೆ ನೋಡಿದ ಕೂಡಲೇ ನಗು ಉಕ್ಕಿಸಿ, ಉಲ್ಲಸಿತಗೊಳಿಸುವ ಕ್ಸೇವಿಯರ್ ಮೀಮ್ಸ್ ಗಳ ಪರಿಚಯ ಇದ್ದೇ ಇರುತ್ತದೆ. ಕ್ಸೇವಿಯರ್ ಎಂದರೆ ಯಾರು? ಎಂದು ಹೆಸರೇಳಿದರೆ ಗೊತ್ತಾಗದಿರುವವರು ಅವರ ಫೋಟೊ ನೋಡಿದರೆ ಕೂಡಲೇ ಮುಖದ ಮೇಲೆ ನಗು ಮೂಡಿರುತ್ತದೆ.

ತುಂಟ ಕಾಮೆಂಟ್ ಹಾಗೂ ಹಾಸ್ಯದ ತಿರುಳುಗಳ ಪೋಸ್ಟ್ ಮೂಲಕ ಗಮನ ಸೆಳೆಯುವ‌ ಕ್ಸೇವಿಯರ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಸ್ಯಪ್ರಜ್ಞೆಯಿಂದ ಸಾಕಷ್ಟು ಪ್ರಸಿದ್ಧ. ಕ್ಸೇವಿಯರ್ ಹೆಸರಿನಿಂದ ಜನಪ್ರಿಯರಾದ ಇವರ ನಿಜವಾದ ಹೆಸರು ಓಂಪ್ರಕಾಶ್. ಅಸಂಖ್ಯ ಟ್ವೀಟರ್, ಫೇಸ್ಬುಕ್ ಪ್ರೋಫೈಲ್ ಗಳಲ್ಲಿ ಓಂಪ್ರಕಾಶ್ ಅವರ ಫೋಟೊ ಕ್ಸೇವಿಯರ್ ಎಂದೇ ಹಂಚಲ್ಪಟ್ಟಿದೆ.

ಮೀಮ್ಸ್ ಸ್ಟಾರ್ ಎಂದೇ ಪ್ರಖ್ಯಾತರಾಗಿರುವ ಇವರು ಮಧ್ಯವಯಸ್ಕ ಭಾರತೀಯರು ಹೆಚ್ಚಾಗಿ ಇಷ್ಟಪಡುವ ದಪ್ಪಮೀಸೆಯ ಫೋಟೊ ಹೊಂದಿರುವ ಪ್ರೋಫೈಲ್ ಮೂಲಕ ಟ್ವೀಟ್ಟರ್ ಮತ್ತು ಫೇಸ್ಬುಕ್ಕಿನ ಸಾಕಷ್ಟು ಟ್ರೋಲ್, ಮೀಮ್ ಪೇಜುಗಳಲ್ಲಿ ಕಾಣಸಿಗುತ್ತಾರೆ. ಕ್ಸೇವಿಯರ್ ಅಂಕಲ್, ಕ್ಸೇವಿಯರ್ ಮೀಮ್ಸ್, ಕ್ಸೇವಿಯರ್ ಪಾಂಡಾ, ಕ್ಸೇವಿಯರ್ ಮಿಮ್ ಬಾಯ್ ಹೀಗೆ ಇವರ ಹೆಸರಿನ ಮೂಲಕ ಸಾವಿರಾರು ಮೀಮ್ಸ್ ಮೇಕಿಂಗ್ ಪ್ರೋಫೈಲ್ ಗಳು ಲಕ್ಷಾಂತರ ಹಿಂಬಾಲಕರನ್ನು ಹೊಂದಿವೆ. ಮೀಮ್ಸ್ ಗಾಗಿಯೇ ವಿನ್ಯಾಸಗೊಳಿಸಲಾಗಿರುವ, ವಿದೇಶಗಳಲ್ಲೂ ಕೋಟ್ಯಂತರ ಜನರು ಹಿಂಬಾಲಿಸುವ 9gag ಎಂಬ ವೆಬ್ಸೈಟಿನಲ್ಲಿ ಇವರ ಸಾಕಷ್ಟು ಮೀಮ್ಸ್ ಗಳು ಜನಪ್ರಿಯವಾಗಿವೆ. ಫೇಸ್ಬುಕ್, ಟ್ವಿಟ್ಟರ್ ಬಳಸುವವರಿಗೆ ಕ್ಸೇವಿಯರ್ ಹಾಸ್ಯಪ್ರಜ್ಞೆ ಎಂಥದ್ದು ಎಂಬುದನ್ನ ಕೇಳಿದರೆ ನಗುವೇ ಅವರ ಉತ್ತರವಾಗಿರುತ್ತದೆ ಎಂಬುದಕ್ಕೆ ಸಹ ಚೆಂದದ ಮೀಮ್ ಒಂದಿದೆ.

ಕಾನ್ಪುರ ಐಐಟಿ ಸಿಬ್ಬಂದಿಯಾದ ಓಂಪ್ರಕಾಶ್ ಅವರು ಅಲ್ಲಿನ ಭೌತಶಾಸ್ತ್ರ ವಿಭಾಗದ ತಾಂತ್ರಿಕ ಮೇಲ್ವಿಚಾರಕ ಹುದ್ದೆಯಲ್ಲಿದ್ದಾರೆ. ಕ್ಸೇವಿಯರ್ ಎಂದು ಅವರು ಪ್ರಸಿದ್ಧರಾಗಲು ಕಾರಣ ಅವರ ಅಪರಿಮಿತ ಹಾಸ್ಯಪ್ರಜ್ಞೆಯ ‘ಪಕಾಲು ಪಾಪಿಟೋ’ ಎಂಬ ಕಾಲ್ಪನಿಕ ಗುಮಾಸ್ತನ ಪಾತ್ರವನ್ನು ಸೃಷ್ಟಿಸಿದ್ದಕ್ಕಾಗಿ. ಆ ಗುಮಾಸ್ತನ ಮೊದಲ ಟ್ವೀಟ್ ಟ್ವೀಟ್ಟರಿನಲ್ಲಿ ಹೆಚ್ಚುಕಡಿಮೆ 18 ಸಾವಿರ ರೀಟ್ವೀಟ್ ಆಗಿತ್ತು.

ಟ್ವೀಟ್ಟರ್ ನಿಯಮಗಳ ತಾಂತ್ರಿಕ ಕಾರಣಗಳಿಂದ ಸುಮಾರು ಲಕ್ಷ ಹಿಂಬಾಲಕರಿದ್ದ ಈ ಅಕೌಂಟ್ ಸ್ಥಗಿತಗೊಂಡಿತು. ನಂತರ ಕಾಮಿಕ್ ಮೀಮ್ ಗಳಿಂದ ಆರಂಭದಲ್ಲಿ ಪ್ರಸಿದ್ಧರಾಗಿದ್ದ ಓಂಪ್ರಕಾಶ್ ಅವರು ಕೊನೆಗೆ ಕ್ಸೇವಿಯರ್ ಹೆಸರಿನ ಮೂಲಕ ಮೀಮ್ ಪ್ರಿಯರಿಗೆ ಮನೆಮಾತಾದರು. ಓಂಪ್ರಕಾಶ್ ಅವರು ಫೇಸ್ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಕ್ರಮವಾಗಿ 1.4 ಮಿಲಿಯನ್ ಹಾಗೂ 3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ‘ಪಕಾಲು ಪಾಪಿಟೋ’ ಅಕೌಂಟ್ ತಾಂತ್ರಿಕವಾಗಿ ಸ್ಥಗಿತಗೊಂಡ ಕಾರಣ ಕ್ಸೇವಿಯರ್ ಎಂಬ ಹೆಸರಿನ ತಮಾಷೆಯ ಮೀಮ್ಸ್ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟ್ಟರ್ ಎಲ್ಲ ಕಡೆಗಳಲ್ಲಿ ಕಾಣಿಸುತ್ತಾರೆ. ( ಸಿದ್ದು ಸತ್ಯಣ್ಣನವರ್ ಅವರ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending