ಅಂತರಂಗ
ರಾಜ್ಯದ ಗಡಿಯಿಂದ ದೇಶದ ಗಡಿಗೆ ಪ್ರವಾಸದ ಕ್ಷಣಗಳು..!
- ಕೆ.ಶ್ರೀಧರ್ (ಕೆ.ಸಿರಿ), ಯುವ ಸಾಹಿತಿ
ಗಡಿ ಪ್ರದೇಶಗಳೆ ಹಾಗೆ ವಿವಿಧ ರೀತಿಯ ವೈಶಿಷ್ಟ್ಯ ಹಾಗೂ ಪ್ರಪಂಚದ ಮೂಲೆಯಲ್ಲಾಗುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುವ ಸ್ಪಂದನಾಶೀಲತೆಯನ್ನು ಗಡಿರೇಖೆಯಲ್ಲಿರುವ ಜಿಲ್ಲೆಗಳಾಗಲಿ,ರಾಜ್ಯಗಳಾಗಲಿ ಅಥವಾ ದೇಶದ ಗಡಿಯಲ್ಲಾಗಲಿ ಹೊಂದಿರುತ್ತವೆ ಗಡಿರೇಖೆಯಲ್ಲಿನ ಚಟುವಟಿಕೆಗಳು, ಸಂಪ್ರದಾಯಗಳು, ಜನಜೀವನ ಪದ್ದತಿಗಳುಆಡಳಿತಾತ್ಮಕ ವಿಚಾರಗಳು ವಿಭಿನ್ನವಾಗಿರುತ್ತವೆ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಮರಾಜನಗರ ಹಚ್ಚ ಹಸಿರುಳ್ಳ ಬೆಟ್ಟ ಗುಡ್ಡಗಳು, ನದ-ನದಿಗಳನ್ನೊಳಗೊಂಡಿರುವ ಒಂದು ಪ್ರವಾಸಿಗರನ್ನು ಸೆಳೆಯುವ ಭೂ ಲೋಕದ ಸ್ವರ್ಗ ಎಂದರೆ ಬಹುಶಃ ತಪ್ಪಾಗಲಾರದು. ಇಂತಹ ಗಡಿಜಿಲ್ಲೆಯಿಂದ ಕನ್ಯಾಕುಮಾರಿ ಪ್ರಸಿದ್ದ ಪ್ರವಾಸಿ ತಾಣಕ್ಕೆ ಹೋಗಬೇಕೆಂದು ಗೆಳೆಯರೆಲ್ಲರೂ ನಿರ್ಧರಿಸಿ ದಿನಾಂಕ 30/04/2022 ರ ಸಂಜೆ ಹೊತ್ತಿಗೆ ವಾಹನವೇರಿ ಕನ್ಯಾಕುಮಾರಿಯ ಕಡೆಗೆ ಹೊರಟೆವು.
ಲಗೇಜುಗಳು, ಶೂಗಳು, ಚಾರ್ಜರ್, ಪವರ್ ಬ್ಯಾಂಕ್ ಎಲ್ಲವೂ ತುಂಬಿಕೊಂಡು ಪುಣಜನೂರು ಚೆಕ್ ಪೋಸ್ಟ್ ದಾಟಿ ಹೊರಟೆವು ಆರಂಭದಲ್ಲಿಯೇ ದಾರಿಯಲ್ಲಿ ನಮಗೆ ಆನೆಗಳ ದಂಡು ಕಂಡು ಸಂತೋಷವಾಯಿತು ಆನೆ ಅಂದ್ರೆ ಎಂತಾ ಆನೆಗಳಿಂತೀರಾ ದೊಡ್ಡ ದೊಡ್ಡ ಕಾಡಾನೆಗಳು ರೋಡಿನ ಪಕ್ಕದ ಹುಲ್ಲುಗಾವಲಿನಲ್ಲಿ ಬೆಟ್ಟದಂತೆ ನಿಂತು ಸೊಂಡಿಲಾಡಿಸುತ್ತಿದ್ದವು.
ಹಾಗೆಯೇ ವಾಹನದಲ್ಲಿ ಪ್ರಯಾಣಿಸುತ್ತಾ ಸಿನೆಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಹಾಡುಗಳನ್ನು ಹಾಡುತ್ತಾ ನಾನ ತರಹದ ಚೇಷ್ಟೆಗಳೊಂದಿಗೆ ನಮ್ಮ ಪ್ರಯಾಣ ಸಾಗಿ ಬಣ್ಣಾರಿಯ ಬಣ್ಣಾರಮ್ಮನ ದರ್ಶನ ಪಡೆದು ಡಾಬಾವೊಂದರಲ್ಲಿ ಊಟ ಸೇವಿಸಿ ಮುಂದೆ ಸಾಗಿದೆವು ಊಟದ ನಂತರ ಎಲ್ಲರೂ ಮೊಬೈಲ್ ಎಂಬ ಮಾಯಲೋಕದಲ್ಲಿ ಮುಳುಗಿ ಮಗ್ನರಾದೆವು ಮಧ್ಯದಲ್ಲಿ ಒಬ್ಬ ಗೆಳೆಯ ಬಸಣ್ಣಿ ಬಾ….ಬಸಣ್ಣಿ..ಬಾ ಎಂಬ ಹಾಡು ಪ್ಲೇ ಆಗಿದ್ದೆ ತಡ ಕುಳಿತಿರುವ ಹಾಸನದಿಂದ ಎದ್ದು ಬಂದು ಕುಣಿಯಲಾರಂಭಿಸಿ ಉಳಿದವರು ಕುಣಿಯಲಾರಂಭಿಸಿದೆವುಕುಣಿಯಲಾರಂಭಿಸಿದೆವು.
ಬೆವರು ಹರಿದು ದಮ್ಮತ್ತಿದಾಗ ರಾತ್ರಿಯ ಆ ಕಿಟಕಿಯ ಗಾಳಿಗೆ ತಲೆಗಳು ತೂಗಿ ಕುಳಿತಲ್ಲಿಯೇ ಎಲ್ಲರೂ ನಿದ್ರೆಗೆ ಜಾರಿದೆವು ನಿದ್ದೆ ಯಾವಾಗ ಬಂತೋ ಕಾಣೆ ಬೆಳಿಗ್ಗೆ 6.18 ಕ್ಕೆ ಕಣ್ಣು ತೆರೆದು ನೋಡಿದರೆ ಯಾವುದೋ ನಮ್ಮದಲ್ಲದ ಊರಿಗೆ ಬಂದಂತೆನಿಸಿತು, ತಮಿಳು ಭಾಷೆಯ ಗಂಧವೆ ತಿಳಿಯದ ನಮಗೆ ದಿಕ್ಕುತಪ್ಪಿ ಬಂದಂತಾಯಿತು ” ವಾಂಗ್ ತಂಬಿ ನಲ್ಲ ರೂಂ ಇರುಕಾ ಕುಲೀರಂತ ನೀರ್, ವೆನ್ನೀರ್ ಅಂಕು ಉಲ್ಲತ್, ಆಯಿರಮ್ ವಾಟಕೈಕ್ಕು ವಾಕನತ್ತೈ ನಿರುತ್ತುವತ್ತಮ್” ಎಂದು ಯಾರೋ ಒಬ್ಬ ಕೊಂಗರ ನಾಡಿನವನು ನಮ್ಮನ್ನು ಕರೆದಾಗ ನಮ್ಮ ವಾಹನ ಆಗಾಗಲೇ ಸಮುದ್ರದ ತೀರದ ಹತ್ತಿರವಿರುವ ಶ್ರೀ ರಾಮೇಶ್ವರ ದೇವಾಲಯದ ಬಳಿ ನಿಂತಿತ್ತು ಕುತೂಹಲದಿಂದ ನಮಗೆ ಬರುವ ಹರಕು ಮುರುಕು ತಮಿಳಿನಲ್ಲ “ಇಂಕ ಸಮುದ್ರಕ್ ಪೇರು ಸೊಲ್ಲು” ಎಂದಾಗ “ಅಗ್ನಿತೀರ್ಥಂ” ಎಂದು ಟೀ ಬೋಂಡಾ ಬೇಯಿಸುತ್ತಲೇ ಒಬ್ಬ ವ್ಯಾಪಾರಿ ತಿಳಿಸಿದ ಗಾಡಿ ಹೊರಟು ದಾರಿ ಕಾಣದೆ ಟ್ರಾಫಿಕಿನಲ್ಲಿ ನಿಂತಾಗ ನಮ್ಮ ಹುಡುಗರು ಸಮುದ್ರ ದಡ ನೋಡಿ ಸುಮ್ಮನೆ ಬಿಡುವರೆ ಆಗಲೇ ಅನ್ವೇಷಕರಂತೆ ಗೂಗಲ್ ಮ್ಯಾಪ್ ಹುಡುಕಿ ಭಾರತದ ಕೆಳಭಾಗದ ಶ್ರೀಲಂಕಾದ ಗಡಿಯಲ್ಲಿದ್ದೇವೆಂದರಿತು ಗೂಗಲ್ ಮ್ಯಾಪ್ ನ್ನು ಸ್ಕ್ರೀನ್ ಶಾಟ್ ತೆಗೆದು ವಾಟ್ ಆಫ್ ಸ್ಟೇಟಸ್ ಹಾಕಿದ್ದೇ ಹಾಕಿದ್ದು ಇನ್ನು ಹಲವು ಪೋಟೋ ಪ್ರೇಮಿಗಳು ಹಾಳು ಮುಖದಲ್ಲಿಯೇ ಸಮುದ್ರ ತೀರದಲ್ಲಿ ನಿಂತು ಆ ಬೋಟ್ ಗಳು ಕಾಣುವಂತೆ ಪೋಟೋ ತೆಗೆಸಿಕೊಂಡು ವಾಟ್ಸ್ ಆಫ್ ಸ್ಟೇಟಸ್ಸಿನಲ್ಲಿ ಹಂಚಿಕೊಂಡು ಸಂಭ್ರಮಿಸಿದರು ಅಂತೂ ಇಂತೂ ರಾಮೇಶ್ವರಂ ನ ಬಾಡಿಗೆ ರೂಂ ಗೆ ಹೋಗಿ ಬೇಗ ಬೇಗನೆ ಜಳಕ ಮಾಡಿ ಎಷ್ಟು ಸಾಧ್ಯವೋ ಅಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕವರ್ ಮಾಡುವ ಆಸೆಯಿಂದ ಹೋದರೆ ಕೆಲವರು ಜಳಕ ಮಾಡಿ ರೆಡಿಯಾದರೆ ಇನ್ನು ಕೆಲವರು ಮಲಗಿ ಮೊಬೈಲ್ನಲ್ಲಿ ಹರಟುತ್ತಾ ಕುಳಿತು ನೀ ಬಾ…ನಾ …ಬಾ ನಿನ್ನಿಂದ ಲೇಟು….ನಿನ್ನಿಂದಾ ಲೇಟು ಎಂದು ವಾದಿಸುತ್ತಾ ಅಲ್ಲಿಯೇ ಪುಟ್ ಪಾತ್ ಮೇಲಿರುವ ಹೋಟೆಲ್ಲೊಂದರಲ್ಲಿ ಇಡ್ಲಿ ಸವಿದೆವು ಇಲ್ಲಿಯೂ ಕೂಡ ಅರೆ ಬರೆ ತಮಿಳು ಕಲಿತ ನನ್ನ ದೋಸ್ತ್ ರಾಕೇಶ್ ನಮ್ಮ ಮೇಸ್ತ್ರೀಯಂತೆ ‘ಇಡ್ಲಿ ಕೊಡಂಗ, ತಣ್ಣೀ ಕೊಡಂಗ’ ಎಂದು ಹಾವ ಭಾವ ಮಾಡಿ ಬಲು ಜೋಕಾಗಿ ತಿಣುಕಾಡಿ ಹೇಳಹತ್ತಿದ ನಾವು ಕೂಡಾ ಭಾಷೆ ಬಾರದೆ ಇತ್ತ ಸುಮ್ಮನೆ ಇರದೆ ತೆಲುಗು ಕನ್ನಡ ತಮಿಳು ಸೇರಿಸಿ “ರಂಡು ಇಡ್ಲಿ ಕೊಡಿ ” ಎಂದು ಕೇಳಿ ಮುಖ ಮುಖ ನೋಡಿಕೊಂಡು ನಕ್ಕು ತಿಂದು ಧನುಷ್ ಕೋಡಿ ಮತ್ತು ಆರ್ಚಲ್ ಮುನಾಯ್ ನೋಡಬೇಕು ಬಿಸಿಲು ನೆತ್ತಿಗೇರುವ ಹೊತ್ತಿಗಾಗಲೇ ಎಂದು ಅವಸರವಸರವಾಗಿ ಹೊರಟೆವು ಸಮುದ್ರ ತೀರದ ತಾಪ ಯಪ್ಪಾ ! ಹೇಳತೀರದು.
ಧಗೆಗೆ ಮೈಯಲ್ಲಿ ಹರಿಯುವ ಬೆವರಿಗೆ ಎಷ್ಟು ಸ್ನಾನ ಮಾಡಿದರೂ ವ್ಯರ್ಥ ಆ ಧಗೆಗೆ ಮುಖಗಳುರಿದು ನಿದ್ದೆಗೆಟ್ಟ ನಮ್ಮ ಮುಖಗಳು ಇನ್ನಷ್ಟು ಕಳೆಗುಂದಿದವು….. ಹಾಗೆಯೇ ಕಿಟಕಿಯಲ್ಲಿ ಕಣ್ಣಾಡಿಸಿ ನೋಡಿದರೆ ಆಕಾಶ ಯಾವುದೋ ಸಮುದ್ರ ಯಾವುದೋ ಒಂದು ಕಾಣೆ ಎಲ್ಲವೂ ಕರತಲಾಮಲಕ ಧೊಪ್ಪೆಂದು ಫೀನಿಕ್ಸ್ ನಂತೆ ಬರುವ ಆ ರಕ್ಕಸ ಅಲೆಗಳ ಕಂಡು ನಾವು ವಿಚಲಿತರಾದೆವು ಹೋ……. ಎಂದು ಕೂಗಿ ವಾವ್ಹ್ ಎಂದು ಅರಚಿ ಅಲೆಗಳನ್ನು ನೋಡಿ ಸಮುದ್ರದಲ್ಲಿ ಒತ್ತಡ ಎಷ್ಟಿರಬೇಕೆಂದು ಚರ್ಚಿಸಿ ತಮ ತಮಗೆ ತಿಳಿದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಆರ್ಚಲ್ ಮುನಾಯ್ ಪ್ರಸಿದ್ದ ಸ್ಥಳಕ್ಕೆ ಬಂದೆವು ಅದು ಮೂರು ಸಮುದ್ರಗಳು ಸಂಗಮವಾಗುವ ಜಾಗ , ಸ್ವರ್ಗದ ಗಡಿಯೆಂದರೂ ತಪ್ಪಾಗಲಾರದೂ ಆ ಸಮುದ್ರದ ಅಲೆಗಳ ನರ್ತನ ಕಂಡು ಕ್ಲಿಚಕ್… ಕ್ಲಿಚಕ್… ಎಂದು
ಪೋಟೋ ತೆಗಿಸಿಕೊಂಡು ಹುಚ್ಚೆದ್ದು ಕುಣಿದು ಲೋಕವನ್ನೆ ಮರೆತು ಸಂಭ್ರಮಿಸಿ ಮುಂದೆ ಧನುಷ್ ಕೋಡಿ ಎಂಬ ಬೇಚಿರಾಕ್ ಗ್ರಾಮಕ್ಕೆ ಬಂದೆವು ಧನುಷ್ ಕೋಡಿ ಶ್ರೀ ರಾಮನು ಬಾಣ ಬಿಟ್ಟ ಊರು 1964 ರಲ್ಲಿ ಸೈಕ್ಲೋನ್ ಬಂದು ಇಡೀ ಗ್ರಾಮಕ್ಕೆ ಗ್ರಾಮವೇ ಕೊಚ್ಚಿಕೊಂಡು ನೀರುಪಾಲಾಗಿದೆ ಅಲ್ಲಿ ಇಂದಿಗೂ ಪಾಳು ಮನೆಗಳು ರೈಲ್ವೇ ಜಂಕ್ಷನ್ ಇದ್ದು ಅಲ್ಲಿ ರಾಮಸೇತುವೆಗೆ ಬಳಸಿದ ‘ನೀರಿನಲ್ಲಿ ತೇಲುವ ಕಲ್ಲು’ ನೋಡಿ ಖುಷಿಪಟ್ಟೆವು ಮುಂದೆ ಸಾಗಿ ರಾವಣನು ತನ್ನ ಸಹೋದರನಿಗೆ ಪಟ್ಟಾಭಿಷೇಕ ಮಾಡಿದ ಸ್ಥಳವನ್ನು ನೋಡಿ ಕೈ ಮುಗಿದು, ಎಳನೀರು, ಐಸ್ ಕ್ರೀಂ ತಿಂದು ರಾಮೇಶ್ವರಂ ಕಡೆಗೆ ಹೊರಟು ಸೀದಾ ರಾಮೇಶ್ವರ ದೇವಾಲಯಕ್ಕೆ ಹೊರಟೆವು ಅಬ್ಬಾಬ್ಬ ! ಅದೆಂತ ಅದ್ದೂರಿ ದೇವಾಲಯ ಆ ಕಂಬಗಳು ಆ ಹಜಾರಗಳು, ಆ ಮಂಟಪಗಳು, ಆ ಮೇಲ್ಚಾವಣಿಗಳು, ಆ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು, ಆ 21 ಕೊಳದ ನೀರಿನಲ್ಲಿ ಸ್ನಾನ ಮಾಡಲು ನಿಂತ ಜನರು ಕಲೆ ಮತ್ತು ವಾಸ್ತುಶಿಲ್ಪ ನೋಡಿ ಯಾವ ಶತಮಾನದ ದೇವಾಲಯಗಳೆಂದು ನೋಡಿದರೆ 7-8 ನೇ ಶತಮಾನದ ಭವ್ಯವಾದ ರಾಮೇಶ್ವರ ದೇವಾಲಯದ ಶಿಲ್ಪಿಗಳಿಗೆ ನನ್ನ ಧೀರ್ಘದಂಡ ನಮಸ್ಕಾರಗಳು.
ದರ್ಶನ ಮುಗಿಸಿಕೊಂಡು ಮಜ್ಜಿಗೆ ಕುಡಿದು ಜನನ-ಮರಣ ನಾಗೇಂದ್ರನ ಕಪಿಚೇಷ್ಟೇ ಗೂಗಲ್ ಮ್ಯಾಪ್ ರೂಟ್ ಹಿಡಿದು ದಾರಿ ಸಿಗದೆ ಹೆಣಗಾಡಿ ನಾಗನಿಗೆ ಬೈದಾಡಿ ಬಸವಳಿದು ರೂಂ ತಲುಪಿದ್ದಾಯ್ತು ಪುನ: ನೇರ ಕನ್ಯಾಕುಮಾರಿಗೆ ಹೋಗಲು ನಿರ್ಧರಿಸಿ ಕೆಲಹೊತ್ತು ವಿಶ್ರಮಿಸಿ ಹೋಗೋಣವೆಂದು ವಾಗ್ವಾದ ನಡೆಸಿ ಯಾರ ಮಾತಿಗೂ ಒಲಿಯದ ನಮ್ಮ ಹುಡುಗರು ಧಗೆಯ ಏಟಿಗೆ ಒಲಿದು ಗಂಟುಮೂಟೆ ಕಟ್ಟಿಕೊಂಡು ಕನ್ಯಾಕುಮಾರಿಯ ಹಾದಿ ಹಿಡಿದೆವು.
ಉಫ್ss…ಧಗೆಯ ಛಡಿ ಏಟಿಗೆ ಹಸಿದ ಹೊಟ್ಟೆಗೆ ಊಟ ಮಾಡಲು ನಿರ್ಧರಿಸಿ ಯಾವುದಾದರೂ ಚೀಫ್ ಅಂಡ್ ಬೆಸ್ಟ್ ಹೋಟೆಲ್ ಹತ್ತಿರ ವಾಹನ ನಿಲ್ಲಿಸಲು ಹೇಳಿದೆವು ಸಮುದ್ರದ ಮಧ್ಯೆ ಮೇಲ್ಸುತೆವೆಯ ಹತ್ತಿ ಮಾವಿನ ಹಣ್ಣು, ಪೈನಾಪಲ್ ಸವಿಯುತ್ತಾ ಸಮುದ್ರದ ವಿಹಂಗಮ ನೋಟ ನೋಡಿ ಕಣ್ತುಂಬಿಕೊಂಡು ಮುಂದೆ ಸಾಗಿ ಒಂದೆರೆಡು ಹೋಟೆಲ್ಲುಗಳ ನೋಡಿ ಕೊನೆಗೆ ಒಂದು ಪುಟ್ಟ ಗುಡಿಸಲಿನ ಹೋಟೆಲ್ ಹತ್ತಿರ ಊಟಕ್ಕೆ ಹೋದಾಗ ಅಲ್ಲಿ ಅನ್ನ ಮೀನುಳಿ ಮತ್ತು ಫಿಶ್ ಫ್ರೈ ಮಾತ್ರವೇ ಇದ್ದುದಾಗಿ ಹೇಳಿದರು ನಾವು ಅಲ್ಲಿಯೇ ಊಟ ಮಾಡಲು ಕುಳಿತೆವು ಊಟ, ಅಂದ್ರೆ ಅದು ಕಣ್ರೀ ಆ ಹೋಟೆಲ್ಲಿನ ಬೀಟ್ ರೋಟ್ ಪಲ್ಯಾ, ಅಲಸಂದೆ ಪಲ್ಯಾ, ಆಮ್ಲೇಟ್, ಆ ಮೀನಿನ ಫ್ರೈ ಅಬ್ಬಾ ನಾಲಿಗೆ ಮೇಲೆ ಆ ರುಚಿ ಇನ್ನೂ ಹಾಗೆಯೇ ಇದೆ ಸಮುದ್ರದ ಮೀನಲ್ವಾ ಹೊಳೆಯ ಮೀನು ತಿಂದ ನಮಗೆ ಸಮುದ್ರದ ಮೀನು ಬಲು ರುಚಿ ಕೊಡ್ತು ಈ ಬರಗೆಟ್ಟ ನಾಲಿಗೆಗೆ ಪ್ರಯಾಣ ಹಾಗೆಯೇ ಸಾಗಿತು.
ಒಂದೆರಡು ಕಡೆ ಟೀ ಕುಡಿದು ಹೊರಟು ಸೀದಾ ಬಾಲಮುರುಗನ್ ದೇವಾಲಯಕ್ಕೆ ಹೊರಟೆವು ಬೀಚ್ನಲ್ಲಿ ಕೆಲವರು ಈಜಿ ಕೆಲವರು ದರ್ಶನ ಪಡೆದು ಸಂಭ್ರಮಿಸಿ ಮುಂದೆ ಡಾಬ ಒಂದರಲ್ಲಿ ಊಟ ಮುಗಿಸಿ ವಾಹನದಲ್ಲಿ ಸಿನೆಮಾ ಹಾಡುಗಳ ಮಧ್ಯೆ ಪ್ರಯಾಣ ಸಾಗಿ ರಾತ್ರಿ 12 ಗಂಟೆಯ ಮೇಲೆ ಕನ್ಯಾಕುಮಾರಿ ತಲುಪಿ ವಾಗ್ ಯುದ್ಧಕ್ಕಿಳಿದು ಎರಡು ರೂಂ ಮಾಡಿ ಬೆಳಗ್ಗೆ ಕನ್ಯಾಕುಮಾರಿಯ ಪ್ರಸಿದ್ಧ ಸೂರ್ಯೋದಯ ಆಗುವ ದೃಶ್ಯವನ್ನು ನೋಡಬೇಕೆಂದು ಚರ್ಚಿಸಿ ಮೊಬೈಲ್ ಚಾರ್ಜ್ ಗೆ ಹಾಕಿ, ಹಸಿ ಬಟ್ಟೆಗಳ ಒಣಗಾಕಿ ಮಲಗಿ ಅಲಾರಾಂ ಸದ್ದಿಗೆ ನೀ ಏಳು, ನಾ ಏಳು ಎಂದು ಕೊನೆಗೆ ಒಂದ್ಮೂರ್ನಾಲ್ಕು ಜನ ಮಾತ್ರವೇ ಕನ್ಯಾಕುಮಾರಿಯ ಕವಿ ತಿರುವಳ್ಳೂರು ಪ್ರತಿಮೆ ಮತ್ತು ಸ್ವಾಮಿ ವಿವೇಕಾನಂದ ರಾಕ್ ಗಾರ್ಡನ್ ಹತ್ತಿರದ ಕಡಲ ತೀರಕ್ಕೆ ಹೊರಟೆವು ” ಸ್ವರ್ಗ ಮೇಲೆಲ್ಲೂ ಇಲ್ಲ ಕನ್ಯಾಕುಮಾರಿಯಲ್ಲೆ ಇದೆ ಅಂತ ನನಗನಿಸ್ತು ಏನ್ರೀ ಆ ಸಮುದ್ರದ ಅಲೆಗಳ ಶಬ್ಧ ಅಬ್ಬಾ…..! ಏನ್ರೀ ಸೂರ್ಯೋದಯಕ್ಕೂ ಮುನ್ನ ಸಮುದ್ರದಾಸಿಗೆಯ ಮೇಲೆ ಬೀಳೋ ಹೊಂಬಣ್ಣ, ಕೆಂಬಣ್ಣ ಮತ್ತು ಮೀನುಗಾರಾರು ಸಮುದ್ರದ ಸಣ್ಣ ಹಡಗಿನಲ್ಲಿ ಬಲೆಯನಾಕುವ ದೃಶ್ಯ ಎಲ್ಲವೂ ಸ್ವರ್ಗಸದೃಶ್ಯವೇ ಸರಿ” ಅಂತೂ ಇಂತೂ ಸಮುದ್ರದಿಂದಲೇ ಸೂರ್ಯ ಹುಟ್ಟೋದೇನೋ ಅನಿಸ್ತು ಆ ಸೂರ್ಯೋದಯ ಆ ಚೆಲುವನ್ನು ವರ್ಣಿಸೋಕೆ ನನ್ನ ಹತ್ತಿರ ಪದಗಳೇ ಇಲ್ಲ ಆ ಸಮುದ್ರದಲೆಯ ನರ್ತನದ ಮುಂದೆ ನನ್ನ ಶಬ್ದ ಕೋಶವೇ ಸೋತು ಹೋಗಿದೆ.
ಸೂರ್ಯನನ್ನು ಕೈಯಲ್ಲಿ ಸೆರೆಹಿಡಿಯುವುದು, ವಿಡಿಯೋ ಮಾಡಿಕೊಳ್ಳುವುದು ಬೆಳ್ಳಂಬೆಳಗ್ಗೆ ಇಂದ್ರಲೋಕಕ್ಕೆ ಹೋಗಿ ಬಂದಂಗಾಯ್ತು ನನಗೆ ಇದನ್ನ ನೋಡಿದ ನಾವೇ ಧನ್ಯರು ಅಲ್ಲಿಯವರೆಗೆ ಬಂದು ಸೂರ್ಯೋದಯ ನೋಡದೆ ಕುಂಭಕರ್ಣನಂತೆ ನಿದ್ರಿಸಿದ ನಮ್ಮ ಹುಡುಗರೆ ನತದೃಷ್ಟರು. ಅಂತೂ ಇಂತೂ ಸೂರ್ಯೋದಯ ನೋಡಿ ಬೋಟ್ನಲ್ಲಿ ಸ್ವಾಮಿ ವಿವೇಕಾನಂದ ರಾಕ್ ಪ್ರತಿಮೆ ಹತ್ತಿರ ಹೋಗಬೇಕು ಅಂತ ಕ್ಯೂನಲ್ಲಿ ಮಧ್ಯ ಹೋಗಿ ಸೇರಿಕೊಂಡಾಗ ನಮ್ಮ ಹಿಂದೆ ಇದ್ದ ಕೆಲವರು ತಿಳಿಯದ ತಮಿಳು ಭಾಷೆಯಲ್ಲಿ ಶಪಿಸಿ ಪೋಲಿಸರಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಅವರು ಬೈಯ್ಯೋದೆಲ್ಲ ನಮಗೆ “ಹಳೆಗನ್ನಡದ ಪದ್ಯದ” ತರ ಕೇಳಿಸ್ತು ಅಂತೂ ಇಂತೂ ಬೋಟ್ನಲ್ಲಿ ಪ್ರತಿಮೆ ಹತ್ತಿರ ಹೋಗಿ ಸಮುದ್ರದ ಮಧ್ಯೆ ನಿಂತು ಕುಣಿದು ಕುಪ್ಪಳಿಸಿ, ಕಣ್ಣಿಗೆ ಎಟಕುವಷ್ಟು ಸಮುದ್ರ ನೋಡಿ ವಾಪಾಸ್ ರೂಂಗೆ ಬಂದು ಮಧುರೈಗೆ ಊಟ ಮುಗಿಸಿಕೊಂಡು ಹೊರಟೆವು ಮಧ್ಯೆ ಒಂದು ಬೀಚ್ನಲ್ಲಿ ಸಂಜೆ ಈಜಾಡಿ ಸಮುದ್ರದ ದಡದಲ್ಲಿ ಕಬ್ಬಡಿ ಆಟ ಆಡಿ ಮತ್ತೆ ಪ್ರಯಾಣ ಸಾಗಿತು.
ನನ್ನ ಮಧುರೈ ‘ದೇವಾಲಯಗಳ ನಾಡು’ ಸಾಹಿತ್ಯಿಕ ಪುಷ್ಪಮಯ & ಧಾರ್ಮಿಕ ಉತ್ಸಾಹಕ್ಕೆ ಮಧುರೈ ಹೆಸರುವಾಸಿ ‘ಮತಿರೈ’, ‘ಕೂಡಲ್’ & ‘ಆಲವ್ಯಡಿನರು’ ಮಧುರೈನ ಮೂಲ ಹೆಸರು ಮಧುರೈ ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿ ಗ್ರೀಕ್, ರೋಮನ್, ಅರೇಬಿಕ್ ವಿದೇಶಿ ವ್ಯಾಪಾರಿಗಳು ಮಧುರೈಗೆ ಭೇಟಿ ನೀಡಿದ್ದಾರೆ. ‘ದೇವಾಲಯಗಳ ನಗರ’, ‘ಹಬ್ಬಗಳ ನಗರ’ ಅದೆಂತಹ ವೈಭವ ರೀ ಆ ದೇವಾಲಯದ್ದು. ಮಧುರೈ ಭಾರತೀಯ ಉಪಖಂಡದ ಪ್ರಾಚೀನ & ವೈಭವದ ನಗರಗಳಲ್ಲಿ ಒಂದು ಇದು ಭಾರತೀಯ ಪರ್ಯಾಯ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಬ್ಬಾ ರಾತ್ರಿ ಹೊತ್ತಿಗೆ ಮಧುರೈಗೆ ಬಂದು ವಸತಿ ಮಾಡಿ ಬೆಳಗ್ಗೆ ಎದ್ದು ಮಧುರೈ “ಅರಳ್ಮಿಗು ಮೀನಾಕ್ಷಿ ಸುಂದರೇಶ್ವರ” ದೇವಾಲಯದ ಗೋಪುರ ಕೋಟೆ ವಿನ್ಯಾಸದ ಆ ಶೈಲಿ ನೋಡಿ ನಾವು ಅಕ್ಷರಶಃ ದಂಗಾಗಿ ಹೋದ್ವಿ. ಬಾದಾಮಿ ಐಹೊಳೆ ಪಟ್ಟದಕಲ್ಲು ಹಿಂದೂ ಶಿಲ್ಪಕಲೆಯ ಸಂಪ್ರದಾಯದ ತೊಟ್ಟಿಲುಗಳು. ಆದರೆ ಮೀನಾಕ್ಷಿ ದೇವಾಲಯವನ್ನು ಸೂಕ್ಷ್ಮರೂಪ ಅಥವಾ ಬ್ರಹ್ಮಾಂಡ ಮಾದರಿಯ ಸ್ಥೂಲಕಾಯ ಎಂದು ಕಲ್ಪಿಸಲಾಗಿದೆ . ತಮಿಳರಿಗೆ ‘ಸಂಗಂ’ ಶಿಲ್ಪಕಲೆ ಚೆನ್ನಾಗಿ ಪರಿಚಿತವಿತ್ತು ಮಧುರೈ ದೇವಾಲಯ ಯಾವ ಒಬ್ಬರ ಆಳ್ವಿಕೆಯಲ್ಲಿ ಪೂರ್ಣಗೊಂಡ ದೇವಾಲಯವಲ್ಲ ಆರಂಭದಲ್ಲಿ ಪಲ್ಲವರು,ಪಾಂಡ್ಯರು, ಚೋಳರು, ಗಂಗರು, ಹಾಗೂ ವಿಜಯನಗರ ಸಾಮ್ರಾಜ್ಯದ ಮಧುರೈನ ನಾಯಕರ ಕೊಡುಗೆ ಅಪಾರ ದೆಹಲಿಯ ಸುಲ್ತಾನರು, ಮುಸ್ಲಿಂ ಆಡಳಿತಗಾರರು, ಆಳ್ವಿಕೆ ನಡೆಸಿದರು ಆದ್ದರಿಂದ ಮಧುರೈಯನ್ನ ಜಾತ್ಯತೀತ ವಾಸ್ತುಶಿಲ್ಪ & ಶಿಲ್ಪಕಲೆ ಅಲಂಕಾರಗಳ ಆಕರ್ಷಣೆ & ವಿವಿಧ ಧರ್ಮಗಳು & ಸಾಮಾಜಿಕ ವ್ಯವಸ್ಥೆಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದುಕಿದ ನಾಡೆಂದು ಪ್ರಸಿದ್ದಿ ಹಿಂದೂ ಪ್ರತಿಮಾಶಾಸ್ತ್ರ ಮತ್ತು ಧರ್ಮಶಾಸ್ತ್ರ, ಪಂಚಾಯತನ & ಶರ್ಮತಾ ಪರಿಕಲ್ಪನೆಗಳ ಚಿತ್ರಣ ದೈವತ್ವಗಳ ಚಿತ್ರಣ,ವಿಶ್ಣುವಿನ ಹತ್ತು ಅವತಾರಗಳು ವೈಷ್ಣವ ಧರ್ಮದ ಒಲವು, ಕೃಷ್ಣ, ರಾಮಾಯಣ, ಮಹಾಭಾರತ, ಬೇಟೆಯ ದೃಶ್ಯಗಳು, ನೃತ್ಯಗಳು, ಕೋಲಾಟ, ಜಾನಾನದ ಕಲೆಗಳ ಸಾಮಾಜಿಕ ಚಟುವಟಿಕೆಗಳ ಚಿತ್ರಣ, ರತಿ&ಮನ್ಮಥನ ಪ್ರತಿಮೆಗಳು ಕಾಮಾಯಣದ ಆಧಾರ, ಆಡಳಿತಾಧಿಕಾರಿಗಳು ಮತ್ತು ಅಧಿಕಾರಿಗಳ ಭಾವಚಿತ್ರ & 2000 ವರ್ಷಗಳ ಬ್ರಾಹ್ಮಿ & ತಮಿಳು ಶಾಸನಗಳನ್ನು ಹೊಂದಿದೆ.
ಮೀನಾಕ್ಷಿ ಕಾಂಚನಮಾಲ, ನೆಲಮಾಳಿಗೆ, ಮಧುರೈ ಮಂಟಪ, ಆನಂದ ನಂದಿ, ಅಗ್ನಿ ವೀರಭದ್ರ, ಅಘೋರ ವೀರಭದ್ರ, ನವಗ್ರಹಮಂಟಪ, 49 ಕವಿಗಳ ಶಿಲ್ಪ, ಕದಂಬ ವೃಕ್ಷಗಳು , ನಾಗರಮಂಟಪ, ಸಂಗೀತ ವಾದ್ಯಗಳು, ಅಷ್ಟಶಕ್ತಿ ಮಂಟಪ, ವೇದಮರಬಡ್ಡೆ, ನೃತ್ಯ ಗಣಪತಿ & ಸುಬ್ರಮಣ್ಯ, ಎರಡು ಗೋಲ್ಡನ್ ಟವರ್ 12 ಗೋಪುರಗಳು, ರೋಸ್ ಪೀಟರ್ ಎಂಬ ಆಂಗ್ಲ ಜಿಲ್ಲಾಧಿಕಾರಿ ಮೀನಾಕ್ಷಿ ದೇವಿಯ ಪವಾಡದಿಂದ ಜೀವ ಉಳಿದುದಕ್ಕಾಗಿ ಬಂಗಾರದ & ಅಮೂಲ್ಯವಾದ ಕಲ್ಲುಗಳಿಂದ ಹೊದಿಸಿದ ಸ್ಟಿರಫ್ ಅನ್ನು ಮಾಡಿಸಿದನೆಂಬ ಐತಿಹ್ಯವಿದೆ 45 ಎಕರೆಯಲ್ಲಿರುವ ದೇವಾಲಯವನ್ನು ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ಒಮ್ಮೆ ದಾಳಿ ಅಪಾರ ಪ್ರಮಾಣದ ಸಂಪತ್ತನ್ನು ಲೂಟಿ ಮಾಡಿದ್ದನು ಮತ್ತು ದೇವಾಲಯದ ಒಳಗಡೆ ಇರುವ ಒಂದು ಕೊಳದಲ್ಲಿ ಬಂಗಾರದ ತಾವರೆಗಳು ಅರಳುತ್ತಿದ್ದವು ಆ ಕಾಲದಲ್ಲಿ ಕವಿಗಳು ಬರೆದ ಪುಸ್ತಕಳು ಗಟ್ಟಿಯಾಗಿದ್ದರೆ ನೀರಿನಲ್ಲಿ ತೇಲುತ್ತಿದ್ದವು ಜೊಳ್ಳಾಗಿದ್ದರೆ ನೀರಿನಲ್ಲಿ ಮುಳುಗುತ್ತಿದ್ದವು ಈ ರೀತಿಯಾಗಿ ಪುಸ್ತಕಗಳ ಸತ್ವವನ್ನು ತಿಳಿಯಲು ಈ ಕೊಳವನ್ನು ಬಳಸಲಾಗುತ್ತಿತ್ತು ಎಂಬ ಐತಿಹ್ಯವಿದೆ. ಮಧುರೈ ನಗರವು ದೇವಾಲಯದ ತಾವರೆಯ ಎಲೆಗಳಂತೆ ಚಾಚಿಕೊಂಡು ಬೆಳೆದಿದೆ.
ಮಧುರೈನ ಮೀನಾಕ್ಷಿ ದೇವಾಲಯ ನೋಡಿಕೊಂಡು ಪಳನಿ ಬೆಟ್ಟಕ್ಕೆ ಹೋಗಿ ಪಳನಿ ಸುಬ್ರಮ್ಯ ಸ್ವಾಮಿಯ ದರ್ಶನವನ್ನು ಮೆಟ್ಟಿಲು ಏರಿ ಹತ್ತಿ ದರ್ಶನ ಪಡೆದು ಪುನಃ ಚಾಮರಾಜನಗರಕ್ಕೆ ಹೊರಟೆವು ಇಂತಹ ಸಮುದ್ರಗಳೊಂದಿಗೆ ಮಾತು, ದೇಗುಲಗಳ ದರ್ಶನ, ಸಂಭ್ರಮದೊಂದಿಗೆ ಪ್ರಯಾಣ ಜೀವನವೆಂಬ ಪುಸ್ತಕರ ಒಂದೊಳ್ಳೆ ಪುಟವಾಗಿದೆ.
(ಕೆ.ಶ್ರೀಧರ್ (ಕೆ.ಸಿರಿ)
ಯುವ ಸಾಹಿತಿ
636229492)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243




