Connect with us

ದಿನದ ಸುದ್ದಿ

ಖ್ಯಾತ ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ನಿಧನ ; ಒಡನಾಡಿಗಳ ನುಡಿ ನಮನ

Published

on

ಸುದ್ದಿದಿನ ಡೆಸ್ಕ್ : ಖ್ಯಾತ ಸಮಾಜವಾದಿ ಚಿಂತಕ, ಬರಹಗಾರ , ವಿಮರ್ಶಕ, “ಗಾಂಧಿ ಕಥನ” ದ ಕರ್ತೃ ಡಿ.ಎಸ್.ನಾಗಭೂಷಣ (70) ಅವರು ಶಿವಮೊಗ್ಗದಲ್ಲಿ ರಾತ್ರಿ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಇಂದು, ಮೇ 19 ರ ಸಂಜೆ 5 ಗಂಟೆಗೆ ಶಿವಮೊಗ್ಗದ ವಿದ್ಯಾನಗರದ ರೋಟರಿ ಚಿತಾಗಾರದಲ್ಲಿ ನಡೆಯಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಿ.ಎಸ್.ನಾಗಭೂಷಣ ಅವರ ಒಡನಾಡಿಗಳಾದ, ಶ್ರೀಪಾದ್ ಯ, ದಿನೇಶ್ ಅಮೀನ್ ಮಟ್ಟು, ರಾಘವೇಂದ್ರ, ಸಾಗರ ಸೇರಿದಂತೆ ಹಲವು ನುಡಿ ನಮನ ಸಲ್ಲಿಸಿದ್ದಾರೆ.


  • ಶ್ರೀಪಾದ್ ಭಟ್, ಚಿಂತಕರು

ಡಿ. ಎಸ್. ನಾಗಭೂಷಣ ನಿಧನರಾಗಿದ್ದಾರೆ. ಕಳೆದ ಕೆಲ ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಡಿ. ಎಸ್. ಎನ್ ಜೊತೆಗೆ ಚರ್ಚೆ, ಸಂವಾದ ಜಗಳ ಸಾಮಾನ್ಯ ಸಂಗತಿಯಾಗಿತ್ತು. ಅವರು ಸಿಕ್ಕಾಗಲೆಲ್ಲ ಸಣ್ಣ ಮಟ್ಟದ ವಾದ ಮಾಡದೇ ಹೋದರೆ ನನಗೆ ಭಣ ಭಣ ಎನಿಸುತ್ತಿತ್ತು. ಆದರೆ ಅವರನ್ನು ಭೇಟಿಯಾಗಿ ಅನೇಕ ವರ್ಷಗಳಾಗಿದ್ದವು.

ಎಪ್ಪತ್ತರ ದಶಕದ ನಮ್ಮ ಬಾಲ್ಯದ ದಿನಗಳಲ್ಲಿ
ಆಕಾಶವಾಣಿಯಲ್ಲಿದ್ದ ಡಿ. ಎಸ್. ಎನ್ ಓದುತ್ತಿದ್ದ ಪ್ರದೇಶ ಸಮಾಚಾರ ಜನಪ್ರಿಯವಾಗಿತ್ತು. ಹಾಗೆಯೇ ಲೋಹಿಯಾ, ಕುವೆಂಪು, ಜಿಎಸ್ ಎಸ್, ಗಾಂಧಿ ಕುರಿತ ಅವರ ಆಳವಾದ ಓದು, ಗ್ರಹಿಕೆ ಮತ್ತು ವಿಚಾರ ಮಂಡನೆ ಬೆರಗುಗೊಳಿಸುತ್ತಿತ್ತು. ಪ್ರತಿಭಾವಂತ ಲೇಖಕ. ವಸ್ತುನಿಷ್ಠವಾಗಿ ಬರೆಯುವುದು ಹೇಗೆ ಎಂಬುದಕ್ಕೆ ಉತ್ತಮ ಉದಾಹರಣೆ ಡಿ. ಎಸ್. ಎನ್
he is one of the best reader.

1990ರಲ್ಲಿ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ನೆಪದಲ್ಲಿ ಲೇಖಕರಿಗೆ ತುಮಕೂರಿನಲ್ಲಿ ಒಂದು ಅಭಿನಂದನೆ, ಚರ್ಚೆ ಗೋಷ್ಠಿಯಿತ್ತು. ನಾನು ಮೊದಲ ಬಾರಿಗೆ ಡಿ. ಎಸ್. ಎನ್ ರನ್ನು ಮಾತನಾಡಿಸಿದ್ದು ಅಲ್ಲಿ. ಆ ಸಮಾರಂಭಕ್ಕೆ ಬರಲು ಒಪ್ಪಿಕೊಂಡು ನಂತರ ಕೈ ಕೊಟ್ಟ ಲಂಕೇಶ್ ರನ್ನು ಶರ್ಟಿನ ತೋಳು ಮೇಲೇರಿಸಿಕೊಳ್ಳುತ್ತಾ ಟೀಕಿಸುತ್ತಿದ್ದ ಆ ದೃಶ್ಯ ನಿನ್ನೆ, ಮೊನ್ನೆ ನಡೆದಂತಿದೆ.

ಆದರೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಂದರ್ಭದಲ್ಲಿ ಚಂಡಿ ಹಿಡಿದು ಹಠದಿಂದ ವರ್ತಿಸುವ ಅವರ ಇನ್ನೊಂದು ಮುಖ ಅನೇಕ ಸಂದರ್ಭಗಳಲ್ಲಿ ಎದುರುಗಿರುವವರನ್ನು ಪರಚುತ್ತಿತ್ತು, ಗಾಯಗೊಳಿಸುತ್ತಿತ್ತು.
ತನ್ನದೇ ಸತ್ಯ ಎಂಬ ಧೋರಣೆ ಜಗಳಗಳಿಗೆ ಕಾರಣವಾಗಿದ್ದು ಲೆಕ್ಕವೇ ಇಲ್ಲ.

ನಾವು ಸ್ನೇಹಿತರು ‘ಇದೊಂದು ವಿಷಯದಲ್ಲಿ ಡಿ.ಎಸ್.ಎನ್ ಪ್ರಬುದ್ದರಾಗಿದ್ದರೆ ಎಷ್ಟು ಚಂದ’ ಎಂದು ಬೇಸರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆದರೆ ಬದುಕು ಹಾಗೆಲ್ಲಾ ಚೆಂದವಾಗಿ ಇರಲು ಬಿಡುವುದಿಲ್ಲ. ಡಿ. ಎಸ್. ಎನ್ ರವರಿಗೆ ಈ ಫೋಟೋ ತೋರಿಸಿ ಹೀಗೆ ಇರಬೇಕಿತ್ತು ಸರ್ ನೀವು ಎಂದು ಎಷ್ಟೋ ಬಾರಿ ಹೇಳಬೇಕೆಂದುಕೊಂಡಿದ್ದೆ. ಹೇಳಲಿಲ್ಲ. ತಮ್ಮ ಬದುಕಿನ ಪಯಣ ಮುಗಿಸಿ ಎದ್ದು ನಡೆದ ಡಿ. ಎಸ್. ಎನ್ ಗೆ ನಮನಗಳು.


  • ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು

ನೇರ, ನಿಷ್ಠುರ , ಪ್ರಾಮಾಣಿಕ, ಜಾತ್ಯತೀತ, ಸಿದ್ದಾಂತ ಬದ್ದ…ಎಂಬೀತ್ಯಾದಿ ವಿಶೇಷಣಗಳನ್ನು ಅಳುಕಿಲ್ಲದೆ ಬಳಸಲು ಸಾಧ್ಯವಿರುವ ನಮ್ಮ ನಡುವಿನ ಒಂದು ಕೈಬೆರಳೆಣಿಕೆಯ ವ್ಯಕ್ತಿಗಳಲ್ಲಿ ಡಿ.ಎಸ್.ನಾಗಭೂಷಣ್ ಒಬ್ಬರಾಗಿದ್ದರು.

ತರಗತಿಗಳಲ್ಲಿ ಎಂದೂ ಪಾಠ ಮಾಡದೆ ಇದ್ದರೂ ನನ್ನಂತಹ ಸಾವಿರಾರು ಕಿರಿಯರಿಗೆ ಅವರು ಬದುಕಿನ ಶಾಲೆಯ ಮೇಷ್ಟ್ರು ಆಗಿದ್ದರು. ಅವರ ಪ್ರತಿಯೊಂದು ಜಗಳ,‌ ಮುನಿಸುಗಳಲ್ಲಿ ಕಲಿಯುವ ಪಾಠ ಇತ್ತು.

ಹೆಚ್ಚು ಪರಿಚಯವೇ ಇಲ್ಲದ ದಿನಗಳಲ್ಲಿ ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ದೆಹಲಿಯಲ್ಲಿದ್ದಾಗ ನನಗೆ ಪೋನ್ ಮಾಡಿ ಅವರ‌ ಪುಸ್ತಕಕ್ಕೆ ಬೆನ್ನುಡಿ ಬರೆಸಿದ್ದರು. ಅವರ ಕೋರಿಕೆಯನ್ನು ಕೇಳಿದಾಗಲೇ ಆಘಾತಕ್ಕೀಡಾಗಿದ್ದ ನಾನು ಒಲ್ಲೆ‌ ಎಂದಾಗ ಗದರಿಸಿ ಬರೆಸಿದ್ದರು.

ಅದರ ನಂತರ ನಿರಂತರವಾಗಿ ನನ್ನ ಮತ್ತು ಅವರ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಲೇ ಇತ್ತು. ಇದೇ ವೇಳೆ ಅವರ ‘ಆದೇಶ’ಗಳನ್ನು ಗಳನ್ನು ನಾನು ವಿಧೇಯನಾಗಿ ಪಾಲಿಸುತ್ತಲೇ ಹೋಗುತ್ತಿದ್ದೆ.

ದೆಹಲಿಯಿಂದ ಬಂದ ನಂತರ ಬಹುಷ: ನಾನು ಭಾಗವಹಿಸಿದ್ದ ಮೊದಲ ಕಾರ್ಯಕ್ರಮ ಅವರೇ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ಸಮಾಜವಾದಿ ಶಿಬಿರ ಆಗಿತ್ತು.

ಹೊಸಮನುಷ್ಯ ಪತ್ರಿಕೆಗೆ ಮೂರೋ ನಾಲ್ಕೋ ದೀರ್ಘ ಲೇಖನಗಳನ್ನು ಬರೆಸಿದ್ದರು. ಅವರೇ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆಸಿ‌ ಮಾತನಾಡಿಸುತ್ತಿದ್ದರು. ಅವುಗಳೆಲ್ಲ ಅವರು ನೀಡುತ್ತಿದ್ದ ‘ಆದೇಶ’ಗಳೇ ಆಗಿರುತ್ತಿದ್ದವು. ವಿಧೇಯ ಶಿಷ್ಯನ ರೀತಿ ನಾನು ತಲೆಯಾಡಿಸುತ್ತಿದ್ದೆ. ನನ್ನೊಳಗೆ ಅವರ ಬಗ್ಗೆ ಇದ್ದ ಗೌರವ ಇದಕ್ಕೆ ಕಾರಣ.

ಅಪ್ಪಟ ಲೋಹಿಯಾವಾದಿಯಾಗಿದ್ದ ಡಿಎಸ್ ಎನ್ ಕೇವಲ ಭಾಷಣ ಮಾಡಿಲ್ಲ, ಬರೆದು ಸಾಲು ಸಾಲು ಪುಸ್ತಕಗಳನ್ನು ಪ್ರಕಟಿಸಿದ್ದರು.‌ ಅವೆಲ್ಲವೂ ಲೋಹಿಯಾವಾದ ಪಾಠಕ್ಕೆ ಪಠ್ಯಗಳಂತಿವೆ.

ಲೋಹಿಯಾ ಅವರಂತೆ ಕೊನೆಯ ವರೆಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅಂತರ ಇಟ್ಟುಕೊಂಡೇ ಬದುಕಿದರು. ಇದೇ ಕಾರಣದಿಂದಾಗಿ ಇತ್ತೀಚಿನ ವರೆಗೆ ಬಿಜೆಪಿಯನ್ನು ವಿರೋಧಿಸಬೇಕಾಗಿರುವಷ್ಟು ವಿರೋಧಿಸುತ್ತಿರಲಿಲ್ಲ.

ನಾನು ಮುಖ್ಯಮಂತ್ರಿ ಕಚೇರಿ ಸೇರಿದ ನಂತರ ಉದ್ದೇಶಪೂರ್ವಕವಾಗಿ ನನ್ನೊಡನೆ ಕಾಂಗ್ರೆಸ್ ಬಗ್ಗೆ ಕಟುವಾಗಿ ಮಾತನಾಡುತ್ತಿದ್ದರು. ನಾನು ಅಷ್ಟೇ ಕಟುವಾಗಿ ಬಿಜೆಪಿ, ಆರ್ ಎಸ್ ಎಸ್ ಗಳನ್ನು ಟೀಕಿಸುತ್ತಿದ್ದೆ. ನಮ್ಮ ನಡುವಿನ ಬಹುತೇಕ ಕೋಳಿಜಗಳಗಳಿಗೆ ಇದೇ ಕಾರಣವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ವಿಷಯದ ಚರ್ಚೆಗಳನ್ನು ನಡೆಸುತ್ತಿರಲಿಲ್ಲ.

ಹಣಕಾಸಿನ ವ್ಯವಹಾರದಲ್ಲಿ ಅವರಷ್ಟು ಪ್ರಾಮಾಣಿಕ, ನಿಷ್ಠುರರ ವ್ಯಕ್ತಿಗಳನ್ನೇ ನಾನು ಕಂಡಿಲ್ಲ, ಬಹುಷ: ಕಾಣಲು ಸಾಧ್ಯವೇ ಇಲ್ಲವೇನೋ? ಹೊಸ‌ಮನುಷ್ಯ ವಿಶೇಷಾಂಕಕ್ಕೆ ಲೇಖನಗಳನ್ನು ಬರೆದಾಗ ತಪ್ಪದೆ ಸಂಭಾವನೆ ಕೊಡುತ್ತಿದ್ದರು. ವಿಶೇಷಾಂಕಕ್ಕೆ ಜಾಹೀರಾತಿನಿಂದ ಬಂದಿರುವ ಹಣ ಮತ್ತು ಖರ್ಚಾಗಿರುವ ಹಣವನ್ನು ಲೆಕ್ಕ‌‌ಮಾಡಿ ಲೇಖಕರಿಗೆ ಹಂಚುತ್ತಿದ್ದರು.

‘ಸಾರ್, ಪತ್ರಿಕೆ ನಡೆಸುವುದು ಕಷ್ಟ ಇದೆ, ಉಳಿದ ಹಣ ಇಟ್ಕೊಳ್ಳಿ’ ಎಂದರೆ ಒಪ್ಪುತ್ತಿರಲಿಲ್ಲ. ಕೊನೆಗೆ ಪುಸ್ತಕ ಕಳಿಸಿ ಎಂದು ಹೇಳಿದಾಗ‌ ಲೆಕ್ಕಹಾಕಿ ಅಷ್ಟೇ ಬೆಲೆಯ ಪುಸ್ತಕ ಕಳಿಸಿದ್ದರು. ಇಂತಹ ನಿಷ್ಠುರ ಪ್ರಾಮಾಣಿಕತೆಯನ್ನು ಸಣ್ಣ ಪತ್ರಿಕೆಗಳು ಬಿಡಿ ದೊಡ್ಡ ಪತ್ರಿಕೆಗಳಿಂದಲೂ ನಿರೀಕ್ಷಿಸಲು ಸಾಧ್ಯ ಇಲ್ಲ.

ನಾಗಭೂಷಣ್ ಅವರಿಂದ ಕಲಿಯಬೇಕಾದ ಹಲವಾರು ಪಾಠಗಳಿವೆ, ಅವುಗಳಲ್ಲಿ ಎಂದೂ ಬತ್ತಿಹೋಗದ ಹಾಗೆ ಕಾಪಿಟ್ಟುಕೊಂಡ ಬಂದಿದ್ದ ಅವರ ಜೀವನೋತ್ಸಾಹವೂ ಒಂದು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೂ ಅದೆಂದೂ ಅವರ ಓದು-ಬರವಣಿಗೆಗಳಿಗೆ ಅಡ್ಡಿಯಾಗಿರಲಿಲ್ಲ.

ನಾಗಭೂಷಣ್ ಅವರ ಬದುಕಿನ ಯಶಸ್ಸಿನಲ್ಲಿ
ಈ ಕಪ್ಪು ಹುಡುಗನ ಪ್ರೀತಿಗೆ ಬಿದ್ದು ಕೊನೆಯ ವರೆಗೂ ಅದನ್ನು ನಿಭಾಯಿಸಿದ ಸವಿತಾ ನಾಗಭೂಷಣ್ ಪಾತ್ರ ದೊಡ್ಡದು. ಗಂಡನ‌ ಆರೈಕೆಗಾಗಿ ಸ್ವಯಂನಿವೃತ್ತಿ ಪಡೆದು ತಾಯಿಯಂತೆ ಸಲಹಿದ್ದಾರೆ. ಒಂದು ರೀತಿಯಲ್ಲಿ ಇಬ್ಬರೂ ಪರಸ್ಪರರಿಗೆ ಮಕ್ಕಳಂತಿದ್ದರು. ಅನಿವಾರ್ಯವಾದ ಅಗಲಿಕೆಯ ದಿನಗಳಲ್ಲಿ ಹೇಗೆ ಬದುಕಬೇಕೆಂಬುದನ್ನು ನಾಗಭೂಷಣ್ ಖಂಡಿತ ಹೇಳಿಕೊಟ್ಟು ಹೋಗಿರುತ್ತಾರೆ, ಹಾಗೆಯೇ ಅವರು ಬದುಕಲಿ, ನಾಗಭೂಷಣ್ ಅವರನ್ನು ಪ್ರೀತಿಸುವವರೆಲ್ಲರೂ ಸವಿತಾ ಅವರ ಜೊತೆಯಲ್ಲಿಯೂ ಇರುತ್ತಾರೆ.

ನಾಲ್ಕು ದಿಕ್ಕುಗಳಿಂದಲೂ ನಿರಾಶೆ ,ಹತಾಶೆ, ಸೋಲುಗಳ ಕಾರ್ಮೋಡ ಆವರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲರೂ ಡಿಎಸ್ ಎನ್ ಅವರ ನಿಷ್ಠುರತೆ, ಪ್ರಾಮಾಣಿಕತೆ, ಬದ್ಧತೆಯ ಜೊತೆಗೆ ಒಂದೆರಡು ಬೊಗಸೆ ಅವರಲ್ಲಿದ್ದ ಜೀವನೋತ್ಸಾಹವನ್ನು ಪಡೆದುಕೊಳ್ಳಲು ಸಾಧ್ಯವಾದರೆ ನಮ್ಮ ಬದುಕು ಅರ್ಥಪೂರ್ಣವಾದೀತು,‌ ಅವರ ಹಾಗೆ.

ಪ್ರೀತಿಯ ಮೇಸ್ಟ್ರೇ, ನಿಮ್ಮೆಲ್ಲ ಪ್ರೀತಿ,‌ ಜಗಳ, ಕಾಳಜಿ, ನಂಬಿಕೆಗಳನ್ನು ಸದಾ ನೆನಪಲ್ಲಿಟ್ಟುಕೊಳ್ಳುವೆ. ಬದುಕು ಹೇಗಿರಬೇಕೆನ್ನುವುದನ್ನು ಬದುಕಿ ತೋರಿಸಿದ್ದೀರಿ.

ನಿಮಗೆ ಗೌರವಾದರದ ವಿದಾಯ…


  • ಎಂ ರಾಘವೇಂದ್ರ, ಪತ್ರಕರ್ತರು, ಸಾಗರ

ಬಿಟ್ಟು ಹೋಗಿರುವ ಆಸ್ತಿ ಕರಗುವುದಿಲ್ಲ…
( ಈ ಕ್ಷಣಕ್ಕೆ ಸಿಕ್ಕಿರುವವು ಇವು ಇನ್ನೂ ಸುಮಾರಿವೆ. )
ಹಿರಿಯ ಲೇಖಕರು,ಸಮಾಜವಾದಿ ಚಿಂತಕ ಡಿ.ಎಸ್.ನಾಗಭೂಷಣ ಅವರು ನಮ್ಮನ್ನು ಅಗಲಿದ್ದಾರೆ.ಅವರ ಗಾಂಧಿ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭ್ಯವಾಗಿದೆ.ನೇರ ನಡೆ,ನುಡಿ,ನಿಷ್ಠುರ ವ್ಯಕ್ತಿ ತ್ವದ ಡಿಎಸ್ ಎನ್ ಸಾರ್ವಜನಿಕ ಬದುಕಿನಲ್ಲಿ ತೋರಬೇಕಾದ ಬದ್ದತೆ,ಪ್ರಾಮಾಣಿಕತೆಗೆ ಮಾದರಿಯಾಗಿದ್ದರು.

ಸಾಹಿತ್ಯ, ಸಂಸ್ಕೃತಿ,ಕಲೆ,ರಾಜಕೀಯದ ಕುರಿತು ಅಪಾರವಾದ ತಿಳವಳಿಕೆ,ಪಾಂಡಿತ್ಯ ಹೊಂದಿದ್ದ ನಾಗಭೂಷಣ್ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ರೀತಿ ವಿಶಿಷ್ಟವಾಗಿತ್ತು.
ಲೋಹಿಯಾರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಅವರು ಈಚೀನ ವರ್ಷಗಳಲ್ಲಿ ಗಾಂಧೀವಾದದ ಕಡೆ ಹೆಚ್ಚು ಒಲವು ತೋರಿದ್ದರು.ಜಾಗತೀಕರಣ ತಂದಿರುವ ವಿಸ್ಮೃತಿಗಳನ್ನು ಎದುರಿಸಲು ಗಾಂಧೀ ಪ್ರತಿಪಾದಿಸಿದ ಸರಳ,ಸಭ್ಯ ,ಕಡಿಮೆ ಅವಶ್ಯಕತೆಗಳ ಬದುಕು ನಮ್ಮದಾಗಬೇಕು ಎಂದು ಬಯಸಿದ್ದರು.

ಪ್ರತಿವರ್ಷ ಅಕ್ಟೋಬರ್ ನಲ್ಲಿ ಲೋಹಿಯಾ ಪ್ರತಿಷ್ಠಾನದ ಮೂಲಕ ಕುಪ್ಪಳ್ಳಿಯಲ್ಲಿ ಅವರು ಆಯೋಜಿಸುತ್ತಿದ್ದ ಸಮಾಜವಾದಿ ಅಧ್ಯಯನ ಶಿಬಿರದ ಮೂಲಕ ಯುವಜನರಲ್ಲಿ ಗಾಂಧಿ,ಲೋಹಿಯಾ.ಅಂಬೇಡ್ಕರ್, ಜೆ.ಪಿ.ಚಿಂತನೆಯನ್ನು ತಲುಪಿಸಲು ಉತ್ಸುಕರಾಗಿದ್ದರು.ಮೇಲ್ನೋಟಕ್ಕೆ ಒರಟು ಸ್ವಭಾವದವರಂತೆ ಕಾಣುತ್ತಿದ್ದ ಡಿಎಸ್ ಎನ್ ಆಳದಲ್ಲಿ ಮಾನವೀಯ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಬಲಪಂಥೀಯ ರಾಜಕಾರಣದ ದೋಷಗಳನ್ನು ಗುರುತಿಸಿ ಟೀಕಿಸುವಷ್ಟೆ ಪ್ರಖರತೆಯನ್ನು ಕಾಂಗ್ರೆಸ್ ನ ಓಲೈಕೆ ರಾಜಕಾರಣದ ಕುರಿತೂ ತೋರುತ್ತಿದ್ದರು.
ನಾಗಭೂಷಣ್ ರ ಎಲ್ಲ ಸಮಾಜಮುಖಿ ಕೆಲಸಗಳ ಹಿಂದೆ ಗಟ್ಟಿಯಾಗಿ ನಿಂತವರು ಅವರ ಪತ್ನಿ ಕವಯತ್ರಿ ಸವಿತಾ ನಾಗಭೂಷಣ. ಈ ಹೊತ್ತಿನಲ್ಲಿ ನಾವು ಸವಿತಾ ಅವರ ಜೊತೆ ನಿಲ್ಲಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

Published

on

ಸುದ್ದಿದಿನ,ದಾವಣಗೆರೆ:ಬಿಜೆಪಿ ಮಹಿಳಾ ಮತದಾರರನ್ನು ಒಂದು ಪ್ರಬಲ ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವಲ್ಲಿ ಪ್ರಯತ್ನಿಸಿತ್ತು. ‘ನಾರಿ ಶಕ್ತಿ’ ಎಂಬ ಬ್ರಾಂಡ್ ಅಡಿಯಲ್ಲಿ ಮಹಿಳೆಯರನ್ನು ನೇರವಾಗಿ ತಲುಪುವ ತಂತ್ರವನ್ನು ಬಿಜೆಪಿ ರೂಪಿಸಿತ್ತು. ಮಹಿಳಾ ಮೀಸಲಾತಿ ಮಸೂದೆಯನ್ನು ಈ ಬ್ರಾಂಡ್‌ನ ಸರ್ವೋಚ್ಚ ಸಾಧನೆಯಾಗಿ ಪ್ರಸ್ತುತಪಡಿಸಲಾಯಿತು. ಆದರೆ ಬಿಜೆಪಿ ಒಂದು ಅತ್ಯಂತ ವ್ಯವಸ್ಥಿತ ಮತ್ತು ಚಾಣಾಕ್ಷ ‘ಪಾಲಿಟಿಕಲ್ ಮಾರ್ಕೆಟಿಂಗ್’ ತಂತ್ರವಾಗಿ ಬಳಸಿಕೊಳ್ಳುವುದಕ್ಕೆಯತ್ನಿಸಿ ವಿಫಲವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.

ಗೃಹ ಕಚೇರಿಯಲ್ಲಿ ಇಂದು ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಪುನರ್‌ವಿಂಗಡಣೆಗೆ “ಬಲಿಪಶು” ಮಾಡುವುದು ಸರಿಯಲ್ಲ. ೨೦೨೩ರ ಕಾಯಿದೆಯಲ್ಲಿ ಜನಗಣತಿ ನಂತರ ಅನುಷ್ಠಾನ ಎಂದು ತಿಳಿಸಲಾಗಿದೆ. ಆದರೆ ಈಗ ೨೦೧೧ರ ಜನಗಣತಿ ಆಧಾರದಲ್ಲಿ ವೇಗಗೊಳಿಸುವುದು ಏಕೆ? ಜಾತಿ ಜನಗಣತಿಯನ್ನು ಸೇರಿಸದಿದ್ದರೆ ಪುನರ್‌ವಿಂಗಡಣೆಯು ಸಾಮಾಜಿಕ ನ್ಯಾಯಕ್ಕೆ ಹೊಂದುವುದಿಲ್ಲ. ದಕ್ಷಿಣ ರಾಜ್ಯಗಳಲ್ಲಿ ಕುಟುಂಬ ನಿಯಂತ್ರಣದ ಯಶಸ್ಸಿಗೆ ಶಿಕ್ಷೆ ನೀಡುವಂತಾಗಬಾರದು. ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಮಸೂದೆ ಜಾರಿಗಿದ್ದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗುತ್ತಿತ್ತು. ಬಿಜೆಪಿ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ ಎಂದರು.

ಮಸೂದೆಯನ್ನು ವೋಟ್ ಬ್ಯಾಂಕ್ ಆಗಿ ಬಳಕೆ ಮಾಡಿಕೊಂಡು ಮಹಿಳೆಯರ ಭಾವನೆಗಳೊಂದಿಗೆ ಆಟವಾಡಲು ಹೋಯಿತು. ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ಮಾಡಿತು. ಆದರೆ ಅದು ನಡೆಯಲಿಲ್ಲ. ನಮ್ಮ ವಿರೋಧವೇನಿದ್ದರು ಪುನರ್ ವಿಂಗಡಣೆ ಮಸೂದೆ ತಿರಸ್ಕರಿಸಿದೆ ಹೊರತು ಮಹಿಳಾ ಮೀಸಲು ಮಸೂದೆ ಅಲ್ಲ ಎಂದರು.

ಪಂಚ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಿದ್ದರೂ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾತನಾಡಿದ್ದು ಚುನಾವಣಾ ಆಯೋಗ ನಿರ್ಧಾರ ತೆಗೆದುಕೊಳ್ಳಬೇಕು. ಅವರು ಚುನಾವಣೆಯ ಸಂದರ್ಭದಲ್ಲಿ ದೇಶ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ವಿರೋಧ ಪಕ್ಷಗಳನ್ನು ತೆಗಳಿಕೆ ಮಾಡಿದ್ದು ಸರಿಯಲ್ಲ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಮಾಡಿದರು.

ಮಸೂದೆ ಕುರಿತು ಸರ್ವ ಪಕ್ಷಗಳ ಸಭೆ ಕರೆಯುವಂತೆ ಮಾಡಿಕೊಂಡ ಮನವಿ ಉಪೇಕ್ಷೆ ಮಾಡಿತು ಕೇಂದ್ರ ಸರ್ಕಾರ. ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ ಆತಂಕ ಇದೆ. ಎಲ್ಲರ ಒಪ್ಪಿಗೆ ಪಡೆದು ಮುಂದುವರೆದಿದ್ದರೆ ಅನುಕೂಲ ಆಗುತ್ತಿತ್ತು. ೨೦೨೪ರಲ್ಲಿ ಮಹಿಳಾ ಮೀಸಲು ಜಾರಿಗೆ ತರುವ ಅವಕಾಶ ಇತ್ರು. ಇದನ್ನು ಮಾಡಲು ಮುಂದಾಗಲಿಲ್ಲ. ಕ್ಷೇತ್ರ ಪುನರ್ ವಿಂಗಡಣೆ ಜಮ್ಮು ಮತ್ತು ಕಾಶ್ಮೀರ ಹಾಗೂ ಅಸ್ಸಾಂ ದಲ್ಲಿ ತಮ್ಮ ಅನುಕೂಲ, ರಾಜಕೀಯ ಲಾಭಕ್ಕೆ ಅನುಗುಣವಾಗಿ ಮಾಡಿ ತೋರಿಸಿದ್ದಾರೆ. ಈ ಬಗ್ಗೆ ಹೆಚ್ಚು ಆತಂಕ ಇದೆ. ಆಡಳಿತ ಪಕ್ಷಕ್ಕೆ ಈ ಮಸೂದೆ ಜಾರಿಗೆ ತರುವ ಬದ್ದತೆ ಇದ್ದಿದ್ದರೆ ಸರ್ವ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದರು. ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಯಲ್ಲಿ ಶೇ ೫೦ ಜಾರಿಗೆ ತಂದಿದ್ದೇವೆ ಎಂದರು.

ಜನಸಂಖ್ಯೆ ನಿಯಂತ್ರಣ ಮಾಡಿದ್ದು ದಕ್ಷಣ ಭಾರತ. ಇದರ ಆಧಾರದ ಮೇರೆಗೆ ಜಾರಿಗೆ ತಂದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯ ಆಗಲಿದೆ. ಜನಗಣತಿಯಲ್ಲಿ ಜಾತಿ ಗಣತಿ ನಡೆಯುತ್ತಿದೆಯೇ ಎಂಹುದು ಇನ್ನೂ ಸ್ಪಷ್ಟವಾಗಿ ಹೇಳಿಲ್ಲ. ಉತ್ತರ ಪ್ರದೇಶ ಹಾಗೂ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ನಡುವೆ ಇರುವ ವ್ಯತ್ಯಾಸ ದೊಡ್ಡದು. ಉತ್ತರ ಭಾರತೀಯ ರಾಜ್ಯಗಳು ಹೆಚ್ಚು ಪ್ರಾಬಲ್ಯ ಸಾಧಿಸಿದರೆ ದಕ್ಷಿಣ ಭಾರತಕ್ಕೆ ತೊಂದರೆ ಆಗುತ್ತದೆ. ಮಸೂದೆ ಮಂಡನೆಗೆ ಇನ್ನೂ ಎರಡು ವರ್ಷಗಳ ಕಾಲಾವಕಾಶ ಇದೆಯಾವುದು ಒಳಿತು ಎಂಬುದು ಮಹಿಳೆಯರು ಆಲೋಚನೆ ಮಾಡಲಿ ಎಂದರು.

ಸುದ್ದಿಗೋಷ್ಟಿಯಲ್ಲಿ ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಕಾಂಗ್ರೆಸ್ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ, ಮುಖಂಡರಾದ ಶಿವಕುಮಾರ್, ಅಯೂಬ್ ಪೈಲ್ವಾನ್, ಎ.ನಾಗರಾಜ್ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ

Published

on

ಸುದ್ದಿದಿನ,ದಾವಣಗೆರೆ:ಕೆ. ಬೇವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 21 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಇದೇ ವೇಳೆ ಸಾಲಕಟ್ಟೆ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹರಿಹರ ಇವರ ಸಂಯುಕ್ತ ಆಶ್ರಯದಲ್ಲಿ 11 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ಶಿಬಿರದಲ್ಲಿ ಸತ್ಯನಾರಾಯಣ ಕ್ಯಾಂಪ್‌ನ ಡಾ. ರಾಮಾಂಜನೇಯ ಸ್ವಾಮಿ ಅವರು ಇದುವರೆಗೆ 110 ಬಾರಿ ರಕ್ತದಾನ ಮಾಡಿರುವುದು ವಿಶೇಷವಾಗಿದ್ದು, ಈ ಬಾರಿ ತಮ್ಮ ಮಗನೊಂದಿಗೆ ರಕ್ತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ಅಲ್ಲದೆ ವಿರೂಪಾಕ್ಷಪ್ಪ ಬಿ.ಕೆ. (ವಿ.ಆರ್.ಡಬ್ಲ್ಯೂ) ಎಂಬ ವಿಶೇಷ ಚೇತನರು 5ನೇ ಬಾರಿ ರಕ್ತದಾನ ಮಾಡಿ ಗಮನಾರ್ಹರಾಗಿದ್ದಾರೆ.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ (ಟಿ.ಎಚ್.ಒ) ಉಮಣ್ಣ ಅವರು ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲವಾದುದರಿಂದ ರಕ್ತದಾನದ ಮಹತ್ವ ಅತ್ಯಂತ ಮಹತ್ತರವಾಗಿದೆ ಎಂದು ತಿಳಿಸಿದರು.

ವೈದ್ಯಾಧಿಕಾರಿಗಳಾದ ಡಾ. ರೇವತಿ ಎಚ್ ಬುಟ್ಟೆ ಅವರು ಮಾತನಾಡಿ, ಗ್ರಾಮದ ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿರುವುದು ಸಂತೋಷದ ಸಂಗತಿ. ಅತಿ ತುರ್ತು ಪರಿಸ್ಥಿತಿಗಳಲ್ಲಿ ರಕ್ತದಾನವು ಅನೇಕ ರೋಗಿಗಳ ಜೀವ ಉಳಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು. ದಾವಣಗೆರೆ ಕೇಂದ್ರ ರಕ್ತ ನಿಧಿಯ ಡಾ. ಗೀತಾ ಡಿ.ಎಚ್. ಹಾಗೂ ಸಿಬ್ಬಂದಿಗಳು ರಕ್ತವನ್ನು ಸಂಗ್ರಹಿಸಿದರು.

ಈ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕರಾದ ಉಮೇಶ್ ಎಂ.ಆರ್.ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರಾದ ವಿಶ್ವನಾಥ್ ಡಿ.ಆರ್. (ಉಪನ್ಯಾಸಕರು), ವಿಶ್ವನಾಥ್ ಎ.ಎಸ್., ಬನ್ನಿಕೋಡು ಸುರೇಶ್, ರೇವಣಸಿದ್ದಪ್ಪ, ಕೆ.ಜಿ. ಸಂತೋಷ್, ಜಿ.ಎಂ. ಮುರುಗೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಕೆ. ಬೇವಿನಹಳ್ಳಿ ಮತ್ತು ಸಾಲಕಟ್ಟೆ ಗ್ರಾಮಸ್ಥರ ಸಹಕಾರದಿಂದ ರಕ್ತದಾನ ಶಿಬಿರ ಯಶಸ್ವಿಯಾಗಿ ನೆರವೇರಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ

Published

on

ಸುದ್ದಿದಿನ,ದಾವಣಗೆರೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಮುಸ್ಲಿಂ ಸಮಾಜದ ನಾಯಕರಾಗಿದ್ದ ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸೈಫುಲ್ಲಾ ಸಾಬ್ (79ವರ್ಷ) ಅವರು ಇಂದು ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ದಾವಣಗೆರೆಯ ನಂಜಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರು . ಮೃತರ ನಿಧನಕ್ಕೆ ಮುಸ್ಲಿಂ ಸಮುದಾಯದ ಮುಖಂಡರು, ವಿವಿಧ ಪಕ್ಷಗಳ ನಾಯಕರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಕರೆಕಟ್ಟೆಜನಾಬ್ ಸೈಯದ್ ಸೈಫುಲ್ಲ ಸಾಬ್ಮಿ ಲ್ಲತ್ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರೂ ಆಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದ ಸೈಯದ್ ಸೈಫುಲ್ಲಾ ಸಾಬ್ ಅವರು ಸಿಎಂ ಸಿದ್ದರಾಮಯ್ಯ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರ ಆಪ್ತರಾಗಿದ್ದರು.

ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರನ್ನು ಸೇರಿದಂತೆ ಕುಟುಂಬಸ್ಥರು, ಅಪಾರ ಬಂಧುಬಳಗದವರನ್ನು ಸೈಯದ್ ಕೆರೆಕಟ್ಟೆ ಸೈಫುಲ್ಲಾ ಸಾಬ್ ಅವರು ಅಗಲಿದ್ದಾರೆ.

2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರಿ ಈ ಪಕ್ಷದಿಂದ ಸ್ಪರ್ಧಿಸಿ 26 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಮನೂರು ಶಿವಶಂಕರಪ್ಪರ ವಿರುದ್ಧ ಸೋತರೂ ಎರಡನೇ ಸ್ಥಾನ ಪಡೆದಿದ್ದರು. ಆಗ ಬಿಜೆಪಿ ಮೂರನೇ ಸ್ಥಾನಕ್ಕೆ ಹೋಗಿತ್ತು. ಮತ್ತೆ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಸಿದ್ದರಾಮಯ್ಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರು ಸ್ನಾತಕೋತ್ತರ ವೃತ್ತಿಪರ ಬಿಎಸ್ಸಿ ಅನ್ನು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದಿದ್ದರು. ದಾವಣಗೆರೆಯ ಡಿಆರ್ ಎಂ ಕಾಲೇಜಿನಲ್ಲಿ ಬಿ. ಎಡ್ ವ್ಯಾಸಂಗ ಮಾಡಿದ್ದರು. ಎಂ. ಎಂ. ಬಸಪ್ಪ ಶಿಕ್ಷಣ ಸಂಘದ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending