ಅಂತರಂಗ
ಯಜ್ಞದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು..!
- ಡಾ.ಬಿ.ಆರ್.ಅಂಬೇಡ್ಕರ್
ಆರ್ಯಧರ್ಮವು ಯಜದಿಂದ ಕೂಡಿದ ಧರ್ಮವಾಗಿತ್ತು, ಯಜ್ಞವು ದೇವತ್ವವನ್ನು ಹೊಂದುವ ಅಂದರೆ ದೇವಗಣದಲ್ಲಿ ಪ್ರವೇಶ ಪಡೆಯುವ ಒಂದು ಸಾಧನವಾಗಿತ್ತು.
ಅಷ್ಟೇ ಅಲ್ಲ, ಅದು ದೇವತೆಗಳನ್ನು ನಿಯಂತ್ರಿಸುವ ಸಾಧನವೂ ಆಗಿತ್ತು. ಸಂಪ್ರದಾಯದಂತೆ ಯಜ್ಞಗಳ ಸಂಖ್ಯೆ ಇಪ್ಪತ್ತೊಂದು, ಅವುಗಳನ್ನು ಏಳರ ಮೂರು ಗುಂಪುಗಳನ್ನಾಗಿ ವಿಭಾಗಿಸಲಾಗಿತ್ತು. ಮೊದಲನೆಯ ಗುಂಪಿನಲ್ಲಿ ಬೆಣ್ಣೆ, ಹಾಲು, ಧಾನ್ಯ ಮೊದಲಾದವುಗಳ ಯಜ್ಞಗಳು ಸೇರಿದ್ದವು. ಎರಡನೆಯ ಗುಂಪಿನಲ್ಲಿ ಸೋಮ ಯಾಗಗಳು ಸೇರಿದ್ದವು.
ಮತ್ತು ಪಶು ಯಾಗಗಳು ಮೂರನೆಯ ಗುಂಪಿಗೆ ಸೇರಿದ್ದವು. ಯಜ್ಞಗಳು ಅಲ್ಪಕಾಲವಿರಬಹುದು ಅಥವಾ ಒಂದು ವರ್ಷ ಅಥವಾ ಅದಕ್ಕೂ ಹೆಚ್ಚು ದೀರ್ಘ ಅವಧಿಯ ಯಜ್ಞವಾಗಬಹುದು. ಈ ಎರಡನೆ ಜಾತಿಯ ಯಜ್ಞವನ್ನು ‘ಸತ್ರ’ವೆಂದು ಕರೆಯುತ್ತಿದ್ದರು. ಯಜ್ಞದ ಪರವಾಗಿ ಹೀಗೆ ವಾದಮಾಡಲಾಗುತ್ತದೆ: ಯಜ್ಞ ಮಾಡುವವನು ಶಾಶ್ವತ ಪುಣ್ಯವನ್ನು ಪಡೆಯುತ್ತಾನೆ.
ಕೇವಲ ಯಜ್ಞ ಮಾಡುವ ಯಜಮಾನನ ಆತ್ಮವೊಂದೇ ಅಲ್ಲ, ಅವನ ಪಿತೃಗಳೂ ಸಹ ಯಜ್ಞದಿಂದ ಲಾಭ ಪಡೆಯುತ್ತಾರೆ. ಅವನು ತಾನು ಅರ್ಪಿಸುವ ಆಹುತಿಗಳಿಂದ ಪಿತೃಗಳಿಗೆ ಸಂತೋಷವನ್ನು ಕೊಡುತ್ತಾನೆ. ಅಷ್ಟೇ ಅಲ್ಲ, ಅವರ ಸ್ಥಾನವನ್ನು ಹೆಚ್ಚಿಸುತ್ತಾನೆ ಮತ್ತು ಉನ್ನತ ಲೋಕದ ವಾಸಿಯಾಗಲು (ಅವರನ್ನು) ಮೇಲೆ ಕಳುಹಿಸುತ್ತಾನೆ.
ಯಜ್ಜವು ಕೇವಲ: ಪಾರಲೌಕಿಕ ಸುಖವನ್ನು ಸಂಪಾದಿಸುವ ಸಾಧನವೊಂದೇ ಆಗಿರಲಿಲ್ಲ. ಮಹಾಯಜ್ಞಗಳಲ್ಲಿ ಹಲವು ಈ ಜಗತ್ತಿನ ಒಳ್ಳೆಯ ವಸ್ತುಗಳನ್ನು ಸಂಪಾದಿಸುವುದಕ್ಕೆಂದೇ ಇದ್ದುವು. ಲಾಭಾಕಾಂಕ್ಷೆಯಿಲ್ಲದೇ ನಿರುದ್ದಿಶ್ಯವಾಗಿ ಯಜ್ಞ ಮಾಡುವುದು ಆರ್ಯರಿಗೇ ಅರಿಯದ ವಿಷಯವಾಗಿತ್ತು. ವೈದಿಕ ಕಾಲದ ಭಾರತದಲ್ಲಿ ಕೃತಜ್ಞತಾರ್ಪಣೆಯೂ ಇರಲಿಲ್ಲ.
ಸಾಮಾನ್ಯವಾಗಿ ಯಾವ ದೇವತೆಯನ್ನು ಕುರಿತು ಯಜ್ಞ ಮಾಡಲಾಗುತ್ತಿತ್ತೋ, ಆ ದೇವತೆಯು (ತನಗೆ ಅರ್ಪಿಸಿದ ಆಹುತಿಗಳಿಗೆ ಪ್ರತಿಯಾಗಿ ಕೊಡುವ ಉಡುಗೊರೆಯೇ ಯಜ್ಞದಿಂದಾಗುವ ಲಾಭ, ಯಜ್ಞವು ಈ ಮಾತುಗಳಿಂದ ಪ್ರಾರಂಭವಾಗುತ್ತಿತ್ತು. ಅವನು ದೇವನಿಗೆ ಈ ಮಾತುಗಳಿಂದ ಯಜ್ಞವನ್ನು ಅರ್ಪಿಸುತ್ತಾನೆ. “ನೀನು ನನಗೆ ಕೊಡು, ನಾನು ನಿನಗೆ ಕೊಡುವೆನು, ನೀನು ನನಗೆ ಅನುಗ್ರಹಿಸು, ನಾನು ನಿನಗೆ ಅರ್ಪಿಸುವನು.”
ಯಜ್ಞ ಸಮಾರಂಭವು ಭಯಭಕ್ತಿಯನ್ನು ಹುಟ್ಟಿಸುವಂತೆ ಇರುತ್ತಿತ್ತು, ಆಡುವ ಪ್ರತಿಯೊಂದು ಶಬ್ದವೂ ಪರಿಣಾಮಕಾರಿಯಾಗಿರುತ್ತಿತ್ತು ಮತ್ತು ಶಬ್ದ ಉಚ್ಚಾರ ಅಥವಾ ಸ್ವರವೂ ಸಹ ಮಹತ್ವಪೂರ್ಣವಾಗಿರುತ್ತಿತ್ತು. ಅಲ್ಲದೆ ಸಮಾರಂಭದ ಬಹುಭಾಗ ಕೈಚಳಕದಿಂದ ಕೂಡಿದ್ದಿತು ಮತ್ತು ತೋರುವಷ್ಟು ಮಹತ್ವವುಳ್ಳದ್ದಾಗಿಲ್ಲವೆಂದು ಪುರೋಹಿತರೆಲ್ಲರೂ ತಿಳಿದಿದ್ದರು ಎಂಬ ಸೂಚನೆಗಳು (ಅಲ್ಲಲ್ಲಿ) ಕಂಡುಬರುತ್ತವೆ.
ಯಜ್ಞವೆಂದರೆ ಪುರೋಹಿತರಿಗೆ ದಕ್ಷಿಣೆಯೆಂದರ್ಥ, ದಕ್ಷಿಣೆಯ ಬಗೆಗೆ ನಿಯಮಗಳು ಸ್ಪಷ್ಟವಾಗಿದ್ದವು. ಮತ್ತು ಅವುಗಳನ್ನು ಪ್ರತಿಪಾದಿಸುವವರಿಗೆ ಯಾವುದೇ ಸಂಕೋಚವಿರಲಿಲ್ಲ, ಪುರೋಹಿತರು ದಕ್ಷಿಣೆಗಾಗಿಯೇ ಯಜ್ಞವನ್ನು ಮಾಡುತ್ತಿದ್ದರು. ಅಲ್ಲಿ ಬೆಲೆಯುಳ್ಳ ಬಟ್ಟೆಗಳು, ಗೋವುಗಳು, ಕುದುರೆ ಅಥವಾ ಬಂಗಾರ ಹೀಗೆ ಯಾವುದನ್ನು ಯಾವಾಗ ಕೊಡಬೇಕೆಂಬುದನ್ನೂ ಲಕ್ಷಪೂರ್ವಕವಾಗಿ ಹೇಳಿದ್ದಾರೆ.
ಪುರೋಹಿತರು ಬಹುಸಂಕೀರ್ಣವಾದ ವಿಧಾನಗಳನ್ನು ಏರ್ಪಾಡು ಮಾಡಿಕೊಂಡಿದ್ದರು ಮತ್ತು ಪ್ರತಿಯೊಂದು ಸಂದರ್ಭದಲ್ಲಿಯೂ ದಕ್ಷಿಣೆಯನ್ನು ಕೇಳುತ್ತಿದ್ದರು. ಯಾವನ ಲಾಭಕ್ಕಾಗಿ ಯಜ್ಞವನ್ನು ಮಾಡುತ್ತಾನೋ ಅವನೊಬ್ಬನೇ ಯಜ್ಞದ ಎಲ್ಲ ಖರ್ಚನ್ನೂ ವಹಿಸಬೇಕೆಂದ ಮೇಲೆ ಖರ್ಚು ಅತಿಯಾಗುವುದು ಸಹಜ. ಒಂದು ಕಡೆ, ಯಜ್ಞದ ದಕ್ಷಿಣೆಯು ಒಂದು ಸಾವಿರ ಆಕಳುಗಳಷ್ಟು ಎಂದು ಹೇಳಿದೆ.
ಅಂದಮೇಲೆ ಯಜ್ಞ ಎಷ್ಟು ದುಬಾರಿಯಾಗಿತ್ತೆಂಬುದನ್ನು ತಿಳಿಯಬಹುದು. ಈ ಲೋಭಕ್ಕಾಗಿ ಸಾವಿರ ಆಕಳುಗಳನ್ನು ಕೊಟ್ಟವನು ಸರ್ಗದಲ್ಲಿ ಎಲ್ಲವನ್ನು ಪಡೆಯುತ್ತಾನೆಂದು ಪುರೋಹಿತನು ಘೋಷಿಸುವಂತೆ ಆಯಿತು. ಈ ವಿಷಯದಲ್ಲಿ ಪುರೋಹಿತನು ಒಳ್ಳೆಯ ದೃಷ್ಟಾಂತಗಳನ್ನು ಕೊಡಬಹುದಿತ್ತು. ಸ್ವರ್ಗದಲ್ಲಿಯ ದೇವತೆಗಳು ತಮ್ಮ ಜೊತೆಯ ದೇವತೆಗಳಿಗೆ ಸಹಾಯ ಮಾಡಿದಾಗ ಪ್ರತಿಫಲವನ್ನು ಕೇಳುವ ಹಕ್ಕು ಇದ್ದೇ ಇರುತ್ತದೆ.
ಪಶು ಯಜ್ಞವು ಮುಖ್ಯ ಯಜ್ಞವಾಗಿತ್ತು. ಅದು ಬಹಳ ವೆಚ್ಚ ಮತ್ತು ಅನಾಗರಿಕವೂ ಆಗಿತ್ತು. ಆರ್ಯರ ಧರ್ಮದಲ್ಲಿ ಐದು ತೆರನಾದ ಪಶುಗಳನ್ನು ಯಜ್ಞಕ್ಕೆ ಯೋಗ್ಯವೆಂದು ಹೇಳಲಾಗಿದೆ. ಯಜ್ಞಕ್ಕೆ ಯೋಗ್ಯವಾದ ಪಶುಗಳ ಪಟ್ಟಿಯಲ್ಲಿ ಮನುಷ್ಯನು ಮೊದಲಿಗನು, ಮನುಷ್ಯ ಯಜ್ಞವು ಅತ್ಯಂತ ದುಬಾರಿಯಾಗಿತ್ತು. ಮನುಷ್ಯ ಯಜ್ಞದ ನಿಯಮಗಳ ಪ್ರಕಾರ ಕೊಲ್ಲಲ್ಪಡುವ ವ್ಯಕ್ತಿಯು ಮರೋಹಿತ (ವರ್ಗದವ)ನೂ ಆಗಿರಬಾರದು, ದಾಸನೂ ಆಗಿರಬಾರದು.
ಅವನು ಕ್ಷತ್ರಿಯ ಅಥವಾ ವೈಶ್ಯನಿರಬೇಕು. ಆ ಕಾಲದ ಸಾಮಾನ್ಯ ಮೌಲ್ಯದ ಪ್ರಕಾರ ಯಜ್ಞ ಪಶುವಾದ ಮನುಷ್ಯನನ್ನು ಕೊಳ್ಳಬೇಕಾದರೆ ಅವನ ಬೆಲೆ ಒಂದು ಸಾವಿರ ಆಕಳು, ಮನುಷ್ಯ ಯಜ್ಞವು ಬಹುವೆಚ್ಚದ್ದೂ ಮತ್ತು ಅನಾಗರಿಕವೂ ಆಗಿತ್ತಲ್ಲದೆ ಅದು ಓಕರಿಕ ಬರುವಂತಹದೂ ಆಗಿದ್ದಿರಬೇಕು. ಏಕೆಂದರೆ ಯಜ್ಞ ಮಾಡುವವರು ಯಜ್ಞ ಪಶುವಾದ ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಅವನನ್ನು ತಿನ್ನಬೇಕಾಗಿತ್ತು. ಮನುಷ್ಯನ ಅನಂತರದ ಸ್ಥಾನ ಕುದುರೆಯದು.
ಅದೂ ಸಹ ಬಹಳ ವೆಚ್ಚದ ಯಜ್ಞವಾಗಿತ್ತು. ಏಕೆಂದರೆ ಕುದುರೆಯು ಆರ್ಯರಿಗೆ ಭಾರತವನ್ನು ಜಯಿಸುವಲ್ಲಿ ಅಪರೂಪದ ಹಾಗೂ ಅವಶ್ಯಕವಾದ ಪಾಣಿಯಾಗಿತ್ತು. ಇಂತಹ ಸೈನಿಕ ಮಹತ್ವದ ಮತ್ತು ಸಮರ್ಥವಾದ ಪ್ರಾಣಿಯನ್ನು ಯಜ್ಞ ಪಶುವನ್ನಾಗಿ ಸಂಹರಿಸಿ ಆಹುತಿಗಳನ್ನು ಅರ್ಪಿಸುವುದು ಆರ್ಯರಿಗೆ ಸುಲಭವಾಗಿರಲಿಲ್ಲ. ಅಶ್ವಮೇಧ (ಕುದುರೆಯ ಯಜ್ಜುವು ಓಕರಿಕೆ ಬರುವಂತಹುದೂ ಆಗಿರಬೇಕು, ಏಕೆಂದರೆ ಅದರ ವಿಧಿಗಳಲ್ಲಿ ಒಂದರ ಪ್ರಕಾರ ಕುದುರೆಯನ್ನು ಕೊಲ್ಲುವುದಕ್ಕಿಂತ ಮೊದಲು ಯಜ್ಞಮಾಡುವವನ ಹೆಂಡತಿಯ ಜೊತೆ ಕುದುರೆಯು ಸಂಭೋಗ ಮಾಡಬೇಕಾಗಿತ್ತು.
ಜನರು ಕೃಷಿಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿದ್ದ ದನಗಳನ್ನೇ ಹೆಚ್ಚಾಗಿ ಯಜ್ಞಗಳಲ್ಲಿ ಬಲಿಕೊಡುತ್ತಿದ್ದರು. ಸಾಮಾನ್ಯವಾಗಿ ಅವು ಆಕಳುಗಳು ಮತ್ತು ಎತ್ತುಗಳಾಗಿದ್ದವು. ಯಜ್ಞಗಳ ವೆಚ್ಚ ಅತಿಯಾಗಿತ್ತು. ಆದುದರಿಂದ ಅವುಗಳಿಗೆ ಬೇಕಾದ ದುಬಾರಿ ಖರ್ಚಿನ ವಿಚಾರ
ಮಾಡಿದರೆ ಅವು ಕಣ್ಮರೆಯಾಗಬೇಕಾಗಿತ್ತು. ಆದರೆ ಅವು ಹಾಗೆ ಕಣ್ಮರೆಯಾಗಲಿಲ್ಲ. ಕಾರಣವಿಷ್ಟೇ, ಯಜ್ಞ ನಿಂತುಹೋದರೆ ಮರೋಹಿತರ ದಕ್ಷಿಣೆಯೂ ಇಲ್ಲದಂತೆ ಆಗುತ್ತಿತ್ತು. ಯಜ್ಜಗಳನ್ನು ಮಾಡದಿದ್ದರೆ ದಕ್ಷಿಣೆಯಿಲ್ಲ. (ದಕ್ಷಿಣೆಯಿಲ್ಲದಿದ್ದರೆ) ಬ್ರಾಹ್ಮಣರು ಉಪವಾಸ ಸಾಯಬೇಕಾಗುತ್ತಿತ್ತು. ಆದ್ದರಿಂದ ಬ್ರಾಹ್ಮಣರು ಅತಿವೆಚ್ಚದ ಯಜ್ಞ ಪಶುಗಳಿಗೆ ಬದಲಿ ವಸ್ತುಗಳನ್ನು ಕಂಡುಹಿಡಿದರು.
ಮನುಷ್ಯ ಯಜ್ಞದಲ್ಲಿ ಬ್ರಾಹ್ಮಣರು ಜೀವಂತ ಮನುಷ್ಯನಿಗೆ ಬದಲಾಗಿ ಹುಲ್ಲಿನ, ಲೋಹದ ಅಥವಾ ಮಣ್ಣಿನ ಮನುಷ್ಯನನ್ನು ಅರ್ಪಿಸಲು ಅನುಮತಿ ನೀಡಿದರು. ಆದರೆ ಅವರು ನರ ಯಜ್ಞವನ್ನು ಸಂಪೂರ್ಣವಾಗಿ ತ್ಯಜಿಸಲಿಲ್ಲ. ಹಾಗೆ ಮಾಡಿದರೆ ಆ ಯಜ್ಞವೇ ನಿಂತು ಹೋಗಬಹುದು ಮತ್ತು ತಮಗೆ ದಕ್ಷಿಣೆ ಸಿಗುವುದಿಲ್ಲವೆಂಬ ಹೆದರಿಕೆ ಅವರಿಗೆ ಇರಬೇಕು. ಮನುಷ್ಯ ಯಜ್ಞವು ಅಪರೂಪವಾಗುತ್ತ ಬಂದಂತೆ, ಅದಕ್ಕೆ ಬದಲಾಗಿ ಪಶು ಯಜ್ಞವು ಹೆಚ್ಚಾಗಿ ರೂಢಿಯಲ್ಲಿ ಬಂದಿತು, ಪಶು ಯಜ್ಞವು ಸಹ ಲೌಕಿಕರಿಗೆ ಖರ್ಚಿನ ಸಮಸ್ಯೆಯಾಗಿತ್ತು.
ಇಲ್ಲಿಯೂ ಯಜ್ಞವು ಸಂಪೂರ್ಣ ಕಣ್ಮರೆಯಾಗಬಾರದೆಂದು, ಮನುಷ್ಯ ಮತ್ತು ಕುದುರೆಗಳ ಬದಲಿಗೆ ದನಗಳನ್ನು ಅನುಮತಿಸಿದಂತೆ, ದನಗಳ ಬದಲಿಗೆ ಇನ್ನೂ ಚಿಕ್ಕ ಪ್ರಾಣಿಗಳನ್ನು ಬಲಿಕೊಡಲು ಬ್ರಾಹ್ಮಣರು ಅನುಮತಿಸಿದರು. ಇವೆಲ್ಲವೂ ಯಜ್ಞದ ಆಚರಣೆಯನ್ನು ಉಳಿಸಿಕೊಳ್ಳುವುದಕ್ಕಾಗಿತ್ತು. ಹೀಗೆ ಮಾಡುವುದರಿಂದ ಬ್ರಾಹ್ಮಣರ ಉಪಜೀವನಕ್ಕೆ ಬೇಕಾದ ದಕ್ಷಿಣೆಗೆ ಸಂಚಕಾರ ಬರಲಿಲ್ಲ. ಯಜ್ಞಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಬ್ರಾಹ್ಮಣರ ಹಟ ಎಷ್ಟಿತ್ತೆಂದರೆ ಕೇವಲ ಅನ್ನವನ್ನು ಬಲಿಯಾಗಿ ಅರ್ಪಿಸುವುದರಿಂದಲೂ ಅವರು ತೃಪ್ತರಾದರು.
ಆದರೆ, ಆರ್ಯರ ಯಜಗಳ ಬದಲಿ ವ್ಯವಸ್ಥೆಯಿಂದ ಅದರ ಭೀಕರತೆ ಕಡಿಮೆಯಾಯಿತೆಂದು ಭಾವಿಸಬಾರದು. ಬದಲಿ ವ್ಯವಸ್ಥೆಯೆಂದರೆ, ಅತಿ ಖರ್ಚಿನ ಮತ್ತು ಬಹಳ ಭೀಕರವಾದ ಯಜ್ಞಗಳನ್ನು ಪೂರ್ಣವಾಗಿ ತ್ಯಜಿಸಿ ಕಡಿಮೆ ಖರ್ಚಿನ ಹಾಗೂ ಸೌಮ್ಯವಾದ ಯಜ್ಞಗಳನ್ನು ಮಾಡುವುದಾಗಿರಲಿಲ್ಲ. ಯಜ್ಞಮಾಡುವವನು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಆಹುತಿಗಳನ್ನು ಅರ್ಪಿಸಬೇಕೆನ್ನುವುದೇ ಆದರ ಅರ್ಥ, ಅವನು ಬಡವನಾಗಿದ್ದರೆ ಅನ್ನವನ್ನು ಆಹುತಿಯಾಗಿ ಅರ್ಪಿಸಬಹುದು. ಸುಸ್ಥಿತಿಯಲ್ಲಿದ್ದರೆ ಒಂದು ಆಡನ್ನು ಬಲಿ ಕೊಡಬಹುದು.
ಅವನು ಶ್ರೀಮಂತನಿದ್ದರೆ ಮನುಷ್ಯ ಅಥವಾ ಕುದುರೆ ಅಥವಾ ಆಕಳು ಅಥವಾ ಎತ್ತು ಬಲಿ ಪಶು ಆಗಬಹುದು. ಬದಲಿ ವ್ಯವಸ್ಥೆಯ ಪರಿಣಾಮವೆಂದರೆ, ಯಜ್ಞವನ್ನು ಎಲ್ಲರ ಸಾಮರ್ಥ್ಯಕ್ಕೆ ಒಳಪಡಿಸಿದಂತಾಯ್ತು ಮತ್ತು ಒಟ್ಟಿನಲ್ಲಿ ಬ್ರಾಹ್ಮಣರು ಹೆಚ್ಚು ಲಾಭ ಪಡೆಯುವಂತಾಯಿತು. ಆದರಿಂದ ಪಶುಯಜ್ಞವನ್ನು ನಿಲ್ಲಿಸಲಾಗಿಲ್ಲ. ಬದಲಾಗಿ ಸಾವಿರಾರು ಪಶುಗಳನ್ನು ಬಲಿಕೊಡುವುದು ನಡೆದೇ ಇತ್ತು.
ಯಜ್ಞಗಳಲ್ಲಿ ಆಗಾಗ್ಗೆ ದನಗಳ ಕಗ್ಗೋಲೆ ನಡೆಯುತ್ತಿತ್ತು. ಅಲ್ಲಿ ಬ್ರಾಹ್ಮಣರು ಕಟುಕರಾಗಿದ್ದರು. ಬೌದ್ಧ ಸಾಹಿತ್ಯದಲ್ಲಿ ಬರುವ ಯಜ್ಞದ ಉಲ್ಲೇಖಗಳನ್ನು ನೋಡಿದಾಗ ಈ ಮುಗ್ಧಪಶುಗಳ ಕಗ್ಗೋಲೆಯ ವ್ಯಾಪಕತೆಯ ಕಲ್ಪನೆ ಬರುತ್ತದೆ. ‘ಸುತ್ತನಿಪಾತ’ದಲ್ಲಿ ಕೋಸಲದ ರಾಜ, ಪಸನದಿ ಮಾಡಬೇಕಾದ ಯಜ್ಞದ ವರ್ಣನೆಯಿದೆ. ಅಲ್ಲಿ ಹೀಗೆ ಹೇಳಿದೆ: ಯಜ್ಞದಲ್ಲಿ ಕೊಲ್ಲುವುದಕ್ಕಾಗಿ ಐದು ನೂರು ಎತ್ತುಗಳು, ಐದು ನೂರು ಕುರಿಗಳನ್ನು ಕಂಬಗಳಿಗೆ ಕಟ್ಟಿದ್ದರು ಮತ್ತು ಪುರೋಹಿತರು ಹೇಳಿದ ಕೆಲಸಗಳನ್ನು ಮಾಡುವುದಕ್ಕಾಗಿ ನಿಯಮಿಸಲ್ಪಟ್ಟಿದ್ದ ರಾಜನ ಸೇವಕರು ಅಶ್ರುಪೂರ್ಣ ಕಣ್ಣುಳ್ಳವರಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದರು.
ಯಜ್ಞವು ಕಗ್ಗೋಲೆಯನ್ನು ಒಳಗೊಂಡಿತ್ತಷ್ಟೇ ಅಲ್ಲ. ಅದೊಂದು ಸ್ವಚ್ಛಾ ವಿಹಾರೋತ್ಸವವಾಗಿತ್ತು. ಸುಟ್ಟ ಮಾಂಸವಲ್ಲದೆ ಮದ್ಯವೂ ಅಲ್ಲಿರುತ್ತಿತ್ತು. ಬ್ರಾಹ್ಮಣರು ಸೋಮ ಮತ್ತು ಸುರಾಪಾನ ಮಾಡುತ್ತಿದ್ದರು. ಪ್ರತಿಯೊಂದು ಯಜ್ಞ ಮುಗಿದ ನಂತರ ಜೂಜಾಟವಾಡುತ್ತಿದ್ದರು ಮತ್ತು ಇನ್ನೂ ಅಸಾಧಾರಣವಾದ ಒಂದು ಮಾತೆಂದರೆ ಅದರ ಜೊತೆಯಲ್ಲಿಯೇ ಬಯಲಿನಲ್ಲಿ ಮೈಥುನ ನಡೆಯುತ್ತಿತ್ತು. ಯಜ್ಞವೆಂದರೆ ವ್ಯಭಿಚಾರವಾಗಿತ್ತು ಮತ್ತು ಅದರಲ್ಲಿ ಧರ್ಮವೆಂಬುದೇನೂ ಉಳಿದಿರಲಿಲ್ಲ. ಆರ್ಯರ ಧರ್ಮವು ಕೇವಲ ಆಚರಣೆಗಳ ಸರಮಾಲೆಯಾಗಿತ್ತು. ಈ ಆಚರಣೆಗಳ ಹಿಂದೆ
ಒಳ್ಳೆಯ ಮತ್ತು ನೈತಿಕ ಜೀವನಕ್ಕಾಗಿ ಹಂಬಲವಿರಲಿಲ್ಲ. ಸಚ್ಚಾರಿತ್ರಕ್ಕಾಗಿ ಪಿಪಾಸೆಯಿರಲಿಲ್ಲ. ಅವರ ಧರ್ಮದಲ್ಲಿ ಅಧ್ಯಾತ್ಮದ ಯಾವ ತಳಹದಿಯೂ ಇರಲಿಲ್ಲವೆಂಬ ಬಗ್ಗೆ ‘ಋಗೈದ’ದ ಸೂಕ್ತಗಳು ಒಳ್ಳೆಯ ಸಾಕ್ಷ್ಯವನ್ನೊದಗಿಸುತ್ತವೆ. ಸೂಕ್ತಗಳೆಂದರೆ ಆರ್ಯರು ತಮ್ಮ ದೇವತೆಗಳನ್ನು ಉದ್ದೇಶಿಸಿ ಮಾಡಿದ ಪ್ರಾರ್ಥನೆಗಳು. ಈ ಪ್ರಾರ್ಥನೆಗಳಲ್ಲಿ ಅವರು ಏನನ್ನು ಬೇಡುತ್ತಾರೆ? ಆಮಿಷಗಳಿಂದ ತಮ್ಮನ್ನು ದೂರ ಇಡಬೇಕೆಂದು ಬೇಡುತ್ತಾರೆಯೆ? ಬಹಳ ಸೂಕ್ತಗಳು ಇಂದ್ರನ ಸ್ತುತಿ ಪರವಾಗಿದೆ.
ಆರ್ಯರ ಶತ್ರುಗಳನ್ನು ನಾಶ ಮಾಡಿದ್ದಕ್ಕಾಗಿ ಅವನನ್ನು ಅವು ಸ್ತುತಿಸುತ್ತವೆ. ಕೃಷ್ಣನೆಂಬ ಅಸುರನ ಗರ್ಭಿಣಿಯರಾದ ಎಲ್ಲ ಹೆಂಡಂದಿರನ್ನು ಕೊಂದದ್ದಕ್ಕಾಗಿ ಅವನನ್ನು ಸ್ತುತಿಸುತ್ತವೆ. ಲಕ್ಷಗಟ್ಟಲೆ ಅಸುರರನ್ನು ಸಂಹಾರ ಮಾಡಿದ್ದಕ್ಕಾಗಿ ಅವನನ್ನು ಸುತ್ತಿಸುತ್ತವೆ. ಅನಾರ್ಯರ ಆಹಾರ ಧಾನ್ಯಗಳೆಲ್ಲ ತಮಗೆ ದೊರೆಯಬೇಕು ಮತ್ತು ಅನಾರ್ಯರ ಧನ ಸಂಪತ್ತೆಲ್ಲ ತಮಗೇ ಸಿಗಬೇಕು ಎಂಬ ಆಸೆಯಿಂದ ಅನಾರ್ಯರನ್ನು ಇನ್ನೂ ಹೆಚ್ಚಾಗಿ ನಾಶಪಡಿಸು ಎಂದು ಆರ್ಯರು ಇಂದ್ರನನ್ನು ಪ್ರಾರ್ಥಿಸುತ್ತಾರೆ. ಆಧ್ಯಾತ್ಮಿಕವಾಗಿರುವುದನ್ನು ಮತ್ತು ಉದಾತ್ತವಾಗಿರುವುದನ್ನು ಬಿಟ್ಟು ‘ಋಗ್ವದ’ದ ಸೂತ್ರಗಳು ಕೆಟ್ಟ ವಿಚಾರಗಳು ಮತ್ತು ಕೆಟ್ಟ ಉದ್ದೇಶಗಳಿಂದ ತುಂಬಿವೆ. ನೈತಿಕ ಜೀವನವೆಂದು ಯಾವುದನ್ನು ಕರೆಯಬಹುದೋ ಅದರ ಬಗೆಗೆ ಆರ್ಯರ ಧರ್ಮವು ಯಾವ ಕಾಲಕ್ಕೂ ಕಾಳಜಿ ಹೊಂದಿರಲಿಲ್ಲ.
-ಮಾಹಿತಿ ಮೂಲ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸುಪ್ರಸಿದ್ಧ ಗ್ರಂಥ “ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ”.
ಸಂಪುಟ-3. ಪುಟ ಸಂಖ್ಯೆ- 190,191,192,193.
(ಪೋಸ್ಟ್ ಸೆಲೆ: Vikas R Mourya ಫೇಸ್ಬುಕ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days agoಚನ್ನಗಿರಿ | ಲವ್ ಮ್ಯಾರೇಜ್ ; ಪೊಲೀಸ್ ಠಾಣೆ ಆವರಣದಲ್ಲೇ ಯುವಕನಿಗೆ ಚಾಕು ಇರಿತ
-
ದಿನದ ಸುದ್ದಿ3 days agoದಾವಣಗೆರೆ | ತಾಪಂ ಅನುದಾನ ದುರುಪಯೋಗ: ಮೂವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆ ಚುರುಕು
-
ದಿನದ ಸುದ್ದಿ4 days ago
ಮತದಾರರ ಪಟ್ಟಿ ಪರಿಷ್ಕರಣೆ | ಪ್ರತಿಯೊಬ್ಬರ ಮನೆಬಾಗಿಲಿಗೆ ತಲುಪಲಿವೆ ಫಾರಂಗಳು ; ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ
-
ದಿನದ ಸುದ್ದಿ1 day agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ


