ಲೈಫ್ ಸ್ಟೈಲ್
ಹೊಕ್ಕುಳ ಬಳ್ಳಿಯ ಸುತ್ತ..!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2021/06/bellybutton_suddidina.jpg&description=ಹೊಕ್ಕುಳ ಬಳ್ಳಿಯ ಸುತ್ತ..!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2021/06/bellybutton_suddidina.jpg&description=ಹೊಕ್ಕುಳ ಬಳ್ಳಿಯ ಸುತ್ತ..!', 'pinterestShare', 'width=750,height=350'); return false;" title="Pin This Post">
- ಯಶೋಧ ಪೂಜಾರಿ, ಮುಂಬೈ
ಮನುಷ್ಯನ ದೇಹದಲ್ಲಿಯ ಉಳಿದೆಲ್ಲ ಅಂಗಗಳಿಗಿಂತ ಮೊಟ್ಟ ಮೊದಲಿಗೆ ರಚನೆಯಾಗುವ ಮಹತ್ವದ ಅಂಗ ಅಂದರೆ ಅದು ಹೊಕ್ಕುಳು . ಇದನ್ನು ನಾಭಿ , ಹೊಕ್ಕುಳು, ನಾವೇಲ್ (Naval) ಬೆಲ್ಲಿ ಬಟನ್ (Belly button) ಮತ್ತು ಸಂಸ್ಕೃತದಲ್ಲಿ ನಭಿ ಅನ್ನುತ್ತಾರೆ. ನಾವು ದೇಹದಲ್ಲಿಯ ಉಳಿದ ಭಾಗಗಳಿಗೆ ಗಮನ ಕೊಡುವಂತೆ ಹೊಕ್ಕುಳಕ್ಕೆ ಕೊಡುವುದಿಲ್ಲ. ಕಾರಣ ಆ ಭಾಗಕ್ಕೆ ಯಾವ ರೋಗವು ತಗುಲುವ ಚಿಂತೆ ಇರುವುದಿಲ್ಲವೆಂದು. ಹಾಗಾಗಿ ನಾಭಿಯ ಬಗ್ಗೆ ಸದಾ ದುರ್ಲಕ್ಷ ಮಾಡುವುದು ಸಾಮಾನ್ಯ.
ಶಿಶು ಗರ್ಭದಲ್ಲಿದ್ದಾಗ ಅದು ದೈಹಿಕ ಮತ್ತು ಮಾನಸಿಕ ಬೆಳವಣಿಗಾಗಿ ಹೊಕ್ಕುಳು ಬಳ್ಳಿಯನ್ನೆ ಅವಲಂಬಿತವಾಗಿರುತ್ತದೆ. ಶಿಶುವಿನ ಸಂಪೂರ್ಣ ಶರೀರದ ವಿಕಾಸಗೊಳ್ಳವುದು ಹೊಕ್ಕುಳದ ಸಹಾಯದಿಂದ. ಒಮ್ಮೆ ಶಿಶು ತಾಯಿ ದೇಹದಿಂದ ಬೇರ್ಪಟ್ಟ ನಂತರ ಹೊಕ್ಕುಳ ಬಳ್ಳಿಯ ಕತ್ತರಿಸಿ ಅದಕ್ಕೆ ಯಾವುದೆ ತರಹದ ಇನ್ಫೆಕ್ಷನ್ ಆಗದಂತೆ ಕ್ಲಿಪ್ ಹಾಕಲಾಗುತ್ತದೆ . ಮುಂದೆ ಎರಡು ಮೂರು ವಾರಗಳ ನಂತರ ಈ ಬಳ್ಳಿಯು ಒಣಗಿ ನೈಸರ್ಗಿಕವಾಗಿ ಶಿಶುವಿನ ದೇಹದಿಂದ ಉದುರುವುದು.
ಹಾಗೆ ಹೊರಚಾಚಿದ ಹೊಕ್ಕುಳಿನ ಭಾಗ ತುಸು ಒಣಗಿದ ನಂತರ ನಿಧಾನ ಸುರುಟಿಯಾಗಿ ಒಳ ಸರಿದು ಆದರ ಮೇಲೆ ಚರ್ಮದ ತೆಳು ಪದರು ಹಬ್ಬಿ ಒಳಮುಖವಾಗಿ ಮುಚ್ಚಿಕೊಂಡು ಬಿಡುತ್ತದೆ. ಹೀಗೆ ಸಹಜವಾಗಿ ನಮ್ಮ ದೇಹ ಯಾವ ವೈದ್ಯಕೀಯ ಸಹಾಯವಿರದೆ ತನ್ನನ್ನು ತಾನು ಸರಿ ಪಡಿಸಿಕೊಳ್ಳುವುದು. ಇಲ್ಲಿಗೆ ಹೊಕ್ಕುಳಿನ ಬಾಹ್ಯ ರೂಪದಿಂದ ಚಟುವಟಿಕೆ ಮುಗಿದರು ದೇಹದ ಒಳಗಡೆ ಅದು ಕೊನೆಯ ತನಕ ಸಕ್ರೀಯವಾಗಿರುವ ಅಂಗವಾಗಿದೆ. ಹಾಗಾಗಿ ಅದನ್ನು ಕಡೆಗಣಿಸಲಾಗದು.
ನಿರ್ಜಿವವಾಗಿರುವಂತೆ ಕಾಣುವ ನಾಭಿಯ ಮಹತ್ವವನ್ನು ಸರಿಯಾಗಿ ತಿಳಿದುಕೊಂಡಲ್ಲಿ ದೇಹದಲ್ಲಿನ ಹಲವು ರೋಗಗಳನ್ನು ವೈದ್ಯರ ಬಳಿ ಹೋಗದೆಯೆ ನಿವಾರಿಸಿಕೊಳ್ಳಲು ಸಾಧ್ಯವಿದೆ.
ನಮ್ಮ ದೇಹಕ್ಕೆ ಬರುವ ಹಲವು ಅನಾರೋಗ್ಯಗಳಿಂದ ಗುಣಪಡಿಸಿ ದೇಹದ ಆಂತರಿಕ ಶಕ್ತಿಯನ್ನು ಬಲಪಡಿಸುವ ಮತ್ತು ಸಕ್ರಿಯಗೊಳಿಸುವ ಸರ್ವೋಚ್ಚ ಶಕ್ತಿ ಈ ಹೊಕ್ಕುಳಕ್ಕೆ ಇದೆ. ಹೊಕ್ಕುಳದ ಸುತ್ತಲು ಶರೀರದ ಪ್ರಮುಖ ಅಂಗಗಳು ಇರುವುದು. ಹೊಕ್ಕುಳವು ಸಂಪೂರ್ಣ ದೇಹಕ್ಕೆ ಶಕ್ತಿಯನ್ನು ಹರಿಸುವುದು ಮತ್ತು ಪ್ರಮುಖ ನರಗಳೆಲ್ಲಾ ನಾಭಿಯ ಮೇಲೆ ಇರುವುದಲ್ಲದೆ ನಮ್ಮ ದೇಹದಲ್ಲಿರುವ ಎಪ್ಪತ್ತೆರಡು ಸಾವಿರಗಿಂತಲೂ ಹೆಚ್ಚು ನರನಾಡಿಗಳು ಈ ನಾಭಿಗೆ ಹಾಯ್ದು ಹೋಗುವವು ಹಾಗಾಗಿ ಹೊಕ್ಕಳ ದೇಹಕ್ಕೆ ಹೆದ್ದಾರಿ ಸಂಪರ್ಕವಿದ್ದಂತೆ.
ಭ್ರೂಣವು ಗರ್ಭದಲ್ಲಿದ್ದಾಗ ನೇರವಾಗಿ ತಾಯಿಯ ದೇಹಕ್ಕೆ ಜೊತೆಯಾಗಿರದೆ ಅದು ಜರಾಯು ಎಂಬ ಅಂಗದ ಮೇಲೆ ಅವಲಂಬಿತವಾಗಿರುತ್ತದೆ. ಭ್ರೂಣವನ್ನು ಗರ್ಭಶಯದ ಭಿತ್ತಿಗೆ ಜೋಡಿಸುವ ಜರಾಯು ಎಂಬ ಈ ಅಂಗವು ಚಪ್ಪಟೆಯಾಗಿ ಗೋಲಾಕಾರದ ಕೆಂಪು ಬಣ್ಣದ ಡಿಸ್ಕ್ ನಂತೆ ಇದ್ದು ಸ್ಪೋಂಜಿಯಾಗಿ ಅಂದರೆ ಮೃದುವಾಗಿ ಇರುವುದು.
ಇದು ಗರ್ಭಧಾರಣೆಯ ಸಂದರ್ಭದಲ್ಲಿ ಬೆಳೆದು ಶಿಶುವಿನಂತೆ ಇದು ಕೂಡ ಬೆಳೆಯುತ್ತಾ ಕೊನೆಯವರೆಗೆ ಸುಮಾರು 1 ಪೌಂಡ್ ನಷ್ಟು ದೊಡ್ಡದಾಗುವುದು. ಇದು ಗರ್ಭಶಯ ಮತ್ತು ಭ್ರೂಣದ ನಡುವೆ ಪೊರೆ, ತೆಳು ಪದರದಂತಿರುವುದು. ಜರಾಯುಗೆ ಪ್ಲಾಸೆಂಟಾ (Placenta) ಅನ್ನುತ್ತಾರೆ. ಭ್ರೂಣದ ಹೊಕ್ಕುಳು ಬಳ್ಳಿಯಂತೆ ಜರಾಯುಗೆ ಕೂಡ ಬಳ್ಳಿ ಇರುತ್ತದೆ. ಜರಾಯು ಬಳ್ಳಿಗೆ placental cord ಎನ್ನುತ್ತಾರೆ. ಶಿಶುವಿನ ಹೊಕ್ಕುಳ ಬಳ್ಳಿಯ ಮತ್ತೊಂದು ತುದಿಯು ಜರಾಯು ಬಳ್ಳಿಗೆ ಜೋಡಣೆಯಾಗಿದ್ದು ಶಿಶು ತನಗೆ ಬೆಳೆಯಲು ಬೇಕಾಗಿರುವ ಅವಶ್ಯಕತೆಯನ್ನು ಈ ಜರಾಯು ಮುಖಾಂತರ ಪಡೆಯುವುದು.
ಈ ಜರಾಯು ಮಗು ಮತ್ತು ಗರ್ಭಕೋಶದ ಒಳಗೋಡೆಯ ನಡುವಣ ಮೆತ್ತೆಯಂತಿದ್ದು ಮಗುವಿಗೆ ಪ್ರತಿಜೀವಕಗಳನ್ನು ನೀಡುತ್ತಾ ಸೋಂಕಿನಿಂದ ರಕ್ಷಿಸುತ್ತದೆ. ಇದು ಗರ್ಭಶಯದೊಳಗಿದ್ದು ತಾಯಿಯ ರಕ್ತದಿಂದ ಮಗುವಿಗೆ ಬೇಕಾಗುವ ಪೌಷ್ಟಿಕಾಂಶಗಳ್ಳನ್ನು ಹೀರಿ ಮಗುವಿಗೆ ತಲುಪಿಸುವುದಲ್ಲದೆ ಶಿಶುವಿಗೆ ಬೇಕಾಗಿರುವ ಅನಿಲದ ವಿನಿಮಯವನ್ನು ಮತ್ತು ವ್ಯರ್ಥ ಪದಾರ್ಥಗಳ ವಿಸರ್ಜನೆಯ ಹೊಣೆಯನ್ನು ನಿರ್ವಹಿಸುತ್ತದೆ.
ಜರಾಯು ಸ್ತ್ರೀಯರ ದೇಹದಲ್ಲಿ ಅಂಡಾಣು ಫಲಿತವಾದ ಕ್ಷಣದಿಂದಲೇ ಮೊತ್ತಾ ಮೊದಲಿಗೆ ಬೆಳೆಯುವುದು. ಭ್ರೂಣ ಗರ್ಭಾಶಯದೊಳಗೆ ಬೆಳೆದಂತೆ ಅದು ಬೆಳೆಯುತ್ತಾ ಶಿಶುವಿನ ಸಂಪೂರ್ಣ ಸಂರಕ್ಷಣೆ ಮಾಡುವುದಲ್ಲದೆ ಗರ್ಭಿಣಿಯ ಶರೀರದ ಹಾರ್ಮೋನ್ ಗ್ರಂಥಿ ಯನ್ನು ನಿಯಂತ್ರಿಸುವುದು. ಶಿಶು ತಾಯಿಯ ಗರ್ಭದಿಂದ ಹೊರಬಂದ ಬಳಿಕ ಈ ಜರಾಯು ಕೂಡ ಗರ್ಭಕೋಶದಿಂದ ಹೊರ ಹಾಕಲ್ಪಡುತ್ತದೆ.
ಹೊರಗೆ ಬಂದ ಜರಾಯು ತನ್ನಲ್ಲಿರುವ ಪೌಷ್ಟಿಕಾಂಶಗಳನೆಲ್ಲಾ ಕರುಳು ಬಳ್ಳಿಯ ಮೂಖಾಂತರ ಮಗುವಿಗೆ ವರ್ಗಾವಣೆ ಮಾಡಿ ಕೊನೆಗೆ ನಿಷ್ಫಲವಾಗುತ್ತದೆ. ಹೀಗೆ ಸ್ತ್ರೀಯರ ದೇಹದಲ್ಲಿ ಪ್ರತಿ ಹೆರಿಗೆಯಲ್ಲು ಹೊಸ ಜರಾಯು ತಯಾರಾಗಿ ಹೆರಿಗೆಯ ಸಮಯದಲ್ಲಿ ಕೊನೆಗೆ ಕಸದಂತೆ ಹೊರ ಬರುವುದು. ಇದನ್ನು ಮಾಸುಚೀಲ ಅಥವಾ ಕಸ ಅನ್ನುವ ವಾಡಿಕೆ ಇದೆ.
ತಾಯಿಯ ಗರ್ಭದಿಂದ ಹೊರಕ್ಕೆ ಬರುವ ಶಿಶುವಿನ ನಾಭಿ ಬಳ್ಳಿಯನ್ನು ಜರಾಯು ಬಳ್ಳಿಯಿಂದ ಬೇರ್ಪಡಿಸಿದ ಬಳಿಕ ಶಿಶು ತನ್ನ ಅವಶ್ಯಕತೆಗಳಿಗಾಗಿ ಬಾಹ್ಯ ಸಂಪರ್ಕಗಳಿಗೆ ಹೊಂದಿಕೊಳ್ಳುವುದು. ಅಲ್ಲಿಂದ ನಾಭಿಯ ದ್ವಾರ ಹೊರಗಡೆಯಿಂದ ಮುಚ್ಚಿದರೂ ಒಳಗಡೆಯಿಂದ ನಮ್ಮ ಇಡಿ ದೇಹಕ್ಕೆ ತಾಯಿ ಬೇರಿನ ಪಾತ್ರವಹಿಸುತ್ತದೆ.
ನವಜಾತ ಶಿಶುವಿಗೆ ಎರಡು ಮೂರು ವರ್ಷಗಳ ತನಕ ನಿತ್ಯ ತೈಲದ ಮಸಾಜ್ ಮಾಡಿ ಹೊಕ್ಕಳಕ್ಕೆ ಕೆಲವು ತೊಟ್ಟು ಎಣ್ಣೆ ಹಾಕಿ ಕ್ಷಣಕಾಲ ಬಿಟ್ಟು ಆ ಮೇಲೆ ಮಗುವಿಗೆ ಸ್ನಾನ ಹಾಕಿಸುವ ರೂಡಿ ಈಗಲೂ ನಮ್ಮಲ್ಲಿ ಕಾಣುತ್ತೇವೆ. ಇದರಿಂದಾಗಿ ಶಿಶುವಿನ ದೇಹ ಕೋಮಲವಾಗಿ ಇರುವುದಲ್ಲದೆ ನಾಭಿ ಮೂಲಕ ಹೀರಿಕೊಂಡ ಎಣ್ಣೆ ಇಡಿ ಶರೀರದೊಳಗೆ ತಲುಪಿ ಮಗುವು ಆರೋಗ್ಯಕರವಾಗಿ ಇರುವಂತೆ ಸಹಾಯ ಮಾಡುತ್ತದೆ.
ಅದಲ್ಲದೆ ಶಿಶುವಿಗೆ ಹೊಟ್ಟೆ ಉಬ್ಬರಿಸಿ ನೋವು ಅನುಭವಿಸಿದರೆ, ಮಲವಿಸರ್ಜನೆಗೆ ತೊಂದರೆ ಇದ್ದರೆ ನಮ್ಮ ಹಿರಿಯರು ಹಿಂಗಿನ ನೀರನ್ನು ಹೊಕ್ಕಳಿನ ಸುತ್ತಲೂ ಉಜ್ಜುವುದು ಅಥವಾ ಓಮ ಕಾಳನ್ನು ಉಗುರು ಬೆಚ್ಚಗೆ ಮಾಡಿ ತೆಳು ಬಟ್ಟೆಯಲ್ಲಿ ಕಟ್ಟಿ ನಾಭಿಯ ಸುತ್ತಾ ಮಸಾಜ್ ಮಾಡವುದನ್ನು ನೋಡುತ್ತೇವೆ. ಹೀಗೆ ಮಾಡುವುದರಿಂದ ಶಿಶುವಿನ ಹೊಟ್ಟೆ ನೋವು ಶಮನವಾಗುತ್ತದೆ.
ಹಿಂದಿನಿಂದಲೂ “ಆಯುರ್ವೇದ ” ವೈದ್ಯಕೀಯ ಪದ್ಧತಿ ಮತ್ತು “ಪ್ರಕೃತಿ ಚಿಕಿತ್ಸೆ ” ಪದ್ದತಿ ಎರಡರಲ್ಲೂ ನಾಭಿಗೆ ಎಣ್ಣೆ ಹಾಕಿದಲ್ಲಿ ಹಲವು ಆರೋಗ್ಯ ದೋಷಗಳಿಂದ ಮುಕ್ತರಾಗಬಹುದು ಎಂಬ ನಂಬಿಕೆ ಈಗಲೂ ಇದೆ. ಹೊಕ್ಕುಳಕ್ಕೆ ಎಣ್ಣೆಯನ್ನು ಹಾಕುವುದರಿಂದ ನಮ್ಮ ಚರ್ಮದ ಆರೈಕೆಗೆ , ಕೂದಲಿನ ಆರೈಕೆ ಮತ್ತು ಮುಟ್ಟಿನ ನೋವು, ಕೀಲು ನೋವು ಮತ್ತು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವು ಸಿಗುವುದೆಂದು ಹಿಂದಿನವರ ಹೇಳಿಕೆ. ಹಾಗಾಗಿ ನಾಭಿ ಚಿಕಿತ್ಸೆಯು ಇತ್ತೀಚೆಗೆ ಬಹಳ ವಿಶೇಷತೆಯನ್ನು ಪಡೆದಿದೆ.
ಇಂದಿನ ಆತುರಾತುರವಾದ ಬದುಕಿನಲ್ಲಿ ಎಣ್ಣೆ ಸವರಿ ಕುಳಿತುಕೊಳ್ಳಲು ಯಾರಿಗೆ ತಾನೆ ಸಮಯವಿದೆ ? ಎನ್ನುವ ಯೋಚನೆ ತಕ್ಷಣ ನಮ್ಮಲ್ಲಿ ಬರುವುದು ಸ್ವಾಭಾವಿಕ. ಆದರೆ ಪ್ರಕೃತಿಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥಗಳಿಂದಲೆ ನಾವು ಆರೋಗ್ಯಕರರಾಗಿ ಇರಬಹುದಾದಲ್ಲಿ ಸ್ವಲ್ಪ ಸಮಯ ಸ್ವಂತಕ್ಕಾಗಿ ಬಳಸಿಕೊಂಡಲ್ಲಿ ತಪ್ಪೆನಿದೆ. ಹಾಗಾದರೆ ಬನ್ನಿ
ಹೊಕ್ಕುಳಕ್ಕೆ ತೈಲ ಚಿಕಿತ್ಸೆಯಿಂದ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳುವ ವಿಧಾನ ತಿಳಿಯೋಣ.
ಎಳ್ಳೆಣ್ಣೆ ( Sesame oil)
ಎಣ್ಣೆಯುಕ್ತ ತ್ವಚೆ( oily skin ) ಇಂತಹ ತ್ವಚೆಯವರಿಗೆ ಹದಿ ಹರೆಯದಲ್ಲಿ ಮೊಡವೆಗಳ ತೊಂದರೆ ಅಧಿಕವಾಗಿರುತ್ತದೆ. ಯಾಕೆಂದರೆ ಇಂತಹ ಚರ್ಮ ಮೇದೋಜೀರಕ ಎಂಬ ಗ್ರಂಥಿಯನ್ನು ಅತಿಯಾಗಿ ಸ್ರವಿಸುವುದರಿಂದ ಚರ್ಮವು ನೈಸರ್ಗಿಕವಾಗಿಯೇ ಎಣ್ಣೆಯನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ಉಳ್ಳವರು ತಮ್ಮ ತ್ವಚೆಯ ಬಗ್ಗೆ ಸ್ವಲ್ಪ ಹೆಚ್ಚು ಕಾಳಜಿವಹಿಸಬೇಕು.
ಈ ತ್ವಚೆಯಲ್ಲಿ ಎಣ್ಣೆಯಂಶ ಅತಿಯಾಗಿ ಕಾಣಿಸಿಕೊಳ್ಳುವುದಲ್ಲದೆ ತ್ವಚೆಯು ಸದಾ ಜಿಡ್ಡು ಜಿಡ್ಡಾಗಿದ್ದು ಹೊರಗಿನ ದೂಳು ಪ್ರದೂಷಣಗಳಿಗೆ ಬಹು ಬೇಗ ಪ್ರತಿಕ್ರಿಯಿಸುವುದರಿಂದಾಗಿ ಮುಖದಲ್ಲಿ ಮೊಡವೆ ಮತ್ತು ಬೊಕ್ಕಗಳು ಮೂಡುತ್ತದೆ.
ಇಂತಹ ಎಣ್ಣೆಯುಕ್ತ ತ್ವಚೆಯುಳ್ಳವರು ಸ್ನಾನದ ಬಳಿಕ ಮತ್ತು ಮಲಗುವ ಮುನ್ನ ತಮ್ಮ ನಾಭಿಗೆ ಎಳ್ಳೆಣ್ಣೆಯ ನಾಲ್ಕು ಹನಿಯನ್ನು ಹಾಕಿ ಹತ್ತು ಹದಿನೈದು ನಿಮಿಷ ಬಿಡುವುದರಿಂದ ಮುಖದಲ್ಲಿರುವ ಮೊಡವೆಗಳ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದಾಗಿ ತ್ವಚೆಯು ಅತಿಯಾಗಿ ಎಣ್ಣೆಯಾಂಶ ಬಿಡುಗಡೆ ಮಾಡುವುದನ್ನು ಕ್ರಮೇಣವಾಗಿ ಒಳಗಿನಿಂದಲೇ ನಿಯಂತ್ರಿಸುವುದುರಿಂದಾಗಿ ಕ್ರಮೇಣ ಜಿಡ್ಡಿರದ ಸಾಮಾನ್ಯ ತ್ವಚೆಯಾಗಿ ಮಾರ್ಪಾಡಾಗುತ್ತದೆ.
ಬಾದಾಮಿ ಎಣ್ಣೆ (Almond oil)
ಈ ಎಣ್ಣೆಯು ವಿಟಮಿನ್ ಇ ಅಂದರೆ ನೈಸರ್ಗಿಕವಾಗಿ ಎಣ್ಣೆಯುಕ್ತ ವಾಗಿದೆ. ಒಣ ತ್ವಚೆ ಅಥವಾ ಶುಷ್ಕ ತ್ವಚೆ (dry skin) ತ್ವಚೆಯಲ್ಲಿ ಎಣ್ಣೆಯಂಶ ಕಡಿಮೆ ಇದ್ದು ಸದಾ ಒಣಗಿದಂತಿರುತ್ತದೆ. ಇಂತಹ ಚರ್ಮವು ವಯಸ್ಸಿಗಿಂತಲೂ ಬೇಗನೆ ಸುಕ್ಕು ಗಟ್ಟಿ ಹೊಳಪಿಲ್ಲದೆ ಕಳೆಗುಂದಿದಂತೆ ಕಾಣುತ್ತದೆ. ಒಣ ಚರ್ಮವನ್ನು ಕಾಂತಿಯುತವಾಗಿ ಮತ್ತು ಆಧ್ರ೯ಕವಾಗಿ ಇಡಲು ಹೊಕ್ಕುಳಕ್ಕೆ ಬಾದಾಮಿ ಎಣ್ಣೆ ಬಳಸಬೇಕು.
ಬಾದಾಮಿ ಎಣ್ಣೆಯನ್ನು ನಾಭಿಗೆ ಹಾಕುವುದರಿಂದ ಇದು ದೇಹದ ಸಂಪೂರ್ಣ ತ್ವಚೆಗೆ ಪೋಷಣೆ ಕೊಡುವುದಲ್ಲದೆ ನಿಮ್ಮ ತ್ವಚೆಗೆ ನೈಸರ್ಗಿಕವಾಗಿ ಹೊಳಪು ಕೊಡುತ್ತದೆ. ಇದರಿಂದಾಗಿ ವಯಸ್ಸಿಗೆ ಪೂರ್ವವಾಗಿ ಬರುವ ಮುಪ್ಪಿನ ಲಕ್ಷಣಗಳನ್ನು ತಡೆಯಬಹುದು.
ಸಾಸಿವೆ ಎಣ್ಣೆ (Mustard oil)
ಹೆಚ್ಚಿನವರಲ್ಲಿ ತಮ್ಮ ತ್ವಚೆ complexion ಅಂದರೆ ಬಣ್ಣದ ಬಗ್ಗೆ ಕೀಳರಿಮೆ ಇರುತ್ತೆ . ಅಂತವರು ತ್ವಚೆಯ (complexion lmprove ) ಬಣ್ಣದ ಮಟ್ಟ ತಿಳಿ ಮಾಡಲು ಹೊಕ್ಕುಳಕ್ಕೆ ಸಾಸಿವೆ ಎಣ್ಣೆಯನ್ನು ಉಪಯೋಗಿಸ ತಕ್ಕದ್ದು. ಸಾಸಿವೆ ಎಣ್ಣೆಯಲ್ಲಿ ತ್ವಚೆಯ ತೇಜಸ್ಸನ್ನು ಹೆಚ್ಚಿಸುವ ಗುಣವಿದೆ. ಹಾಗೆಂದು ಇದನ್ನು ಮುಖಕ್ಕೆ ನೇರವಾಗಿ ಹಚ್ಚಿಕೊಂಡರೆ ಮುಖ ಇನ್ನು ಹೆಚ್ಚು ಕಪ್ಪಾಗುವ ಸಂಭವ ಇರುತ್ತದೆ.
ಹಾಗಾಗಿ ನಾಭಿಗೆ ಈ ಎಣ್ಣೆಯನ್ನು ಹಾಕುವುದರಿಂದ ಇದು ದೇಹದ ಒಳಗಿಂದಲೇ ಆರೈಕೆ ಮಾಡುವುದು. ಸಾಸಿವೆ ಎಣ್ಣೆ ದಣಿವು, ಕಳಪೆ ಸ್ಮರಣೆ ಮತ್ತು ಖಿನ್ನತೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಕಣ್ಣಿನ ಸೋಂಕು ಮತ್ತು ಕಣ್ಣಿನ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ತಲೆನೋವು ಮತ್ತು ಮೈಗ್ರೇನ್ ಕಡಿಮೆ ಮಾಡುತ್ತದೆ.
ಸೂರ್ಯಕಾಂತಿ ಎಣ್ಣೆ (sunflower oil)
ಕಾಂತಿಯುತವಾದ ತ್ವಚೆ ಅಂದರೆ glowing skin ತ್ವಚೆಯ ಕಾಮನೆ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಇಂತಹ ತ್ವಚೆಯನ್ನು ಪಡೆಯಲು ಸೂರ್ಯಕಾಂತಿ ಎಣ್ಣೆಯ 2 , 3 ಹನಿಯನ್ನು ಹೊಕ್ಕುಳಿಗೆ ಬಿಡಬೇಕು. ಈ ಎಣ್ಣೆಯು ನಮ್ಮ ತ್ವಚೆಯ ಕಾಂತಿಯನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
ತೆಂಗಿನ ಎಣ್ಣೆ (coconut oil )
ಈ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿರುವುದು. ಇದು ಕೂದಲ ಬೆಳವಣಿಗೆಗೆ ಅತಿ ಮುಖ್ಯ. ಇದರಿಂದ ಚರ್ಮವು ಮೃದುವಾಗಿ ಇರುವುದು. ಮಹಿಳೆಯರಲ್ಲಿ ಸಂತಾನೋತ್ಪತ್ತಿ ವ್ಯವಸ್ಥೆಗೆ ಇದು ಉತ್ತಮವೆಂದು ಹೇಳಲಾಗುತ್ತದೆ. ತಲೆ ಹೊಟ್ಟು ಮತ್ತು ಒಣ ನೆತ್ತಿಯ ತೊಂದರೆ ನಿವಾರಿಸುತ್ತದೆ.
ಬೇವಿನ ಎಣ್ಣೆ (Neem oil)
ಈ ಎಣ್ಣೆಯು ಮುಖದ ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಕಡಿಮೆ ಮಾಡುತ್ತದೆ. ತುರಿಕೆ ಮತ್ತು ದದ್ದುಗಳ ಮೇಲೆ ಪರಿಣಾಮಕಾರಿ.
ಹಸುವಿನ ತುಪ್ಪ ( Cow Ghee )
ಈ ಎಣ್ಣೆಯು ನಯವಾದ ಚರ್ಮಕ್ಕಾಗಿ ಮತ್ತು
ನವಜಾತ ಶಿಶುಗಳ ಮೂಳೆಗಳನ್ನು ಬಲಪಡಿಸಲು ಉಪಯೋಗಕಾರಿ.
ಕ್ಯಾಸ್ಟರ್ ಆಯಿಲ್ (Castor oil)
ಮೊಣಕಾಲು ನೋವು ಮತ್ತು ಇತರ ಕೀಲು ನೋವುಗಳಿಗಾಗಿ,
ಉದ್ದನೆಯ ರೆಪ್ಪೆಗೂದಲಿಗೆ, ಉದ್ದನೆಯ ದಟ್ಟ ಕೂದಲಿಗಾಗಿ,
ಹೆಚ್ಚಿನ ರೀತಿಯ ಹೊಟ್ಟೆಯ ಸಮಸ್ಯೆಗಳ ನಿವಾರಣೆಗೆ ಈ ಎಣ್ಣೆಯು ಉಪಯುಕ್ತ.
ಆಲೀವ್ ಎಣ್ಣೆ ( Olive oil )
ಈ ಎಣ್ಣೆ ಹಾಕುವುದರಿಂದ ಮುಟ್ಟಿನ ನೋವು ಮತ್ತು ಸೆಳೆತಕ್ಕೆ ಸಹಾಯ ಮಾಡುತ್ತದೆ. ಮಕ್ಕಳ ಮೂಳೆ ಮತ್ತು ಸ್ನಾಯುಗಳನ್ನು ಬಲಪಡಿಸುವುದು. ಒಳ್ಳೆಯ ನಿದ್ರೆಗಾಗಿ ಸಹಾಯ ಮಾಡುತ್ತದೆ.
ಹಸಿವಿನ ಕೊರತೆಯ ನಿವಾರಿಸುವುದು. ಮಲಬದ್ಧತೆಗೆ ಪರಿಣಾಮಕಾರಿ.
ಇಲ್ಲಿ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ಹೊಕ್ಕಳಕ್ಕೆ ಉಪಯೋಗಿಸಲು ಅತಿ ಶುದ್ಧವಾದ ನೈಸರ್ಗಿಕವಾದ ಎಣ್ಣೆಯನ್ನೆ ಬಳಸಬೇಕು. ಕಲಬೆರಕೆಯ ಎಣ್ಣೆಯನ್ನು ಬಳಸದಿರಿ. ಎಣ್ಣೆಯ ಮೂಲ ಗುಣ ಸಕ್ರೀಯಗೊಳ್ಳಲು ಬಳಸುವ ಮುನ್ನ ಸ್ವಲ್ಪ ಬಿಸಿ ಮಾಡಿಕೊಂಡು ಬಳಸಬೇಕು.
ಹೀಗೆ ಉಗುರು ಬೆಚ್ಚಗಿನ ಎಣ್ಣೆಯನ್ನು ರಾತ್ರಿಯಲ್ಲಿ ಮಲಗುವ ಮುನ್ನ ಹತ್ತಿಯಲ್ಲಿ ಅದ್ದಿ 2-3 ಹನಿ ಹೊಕಳಕ್ಕೆ ಬಿಡಬೇಕು. 15-20 ನಿಮಿಷದ ಬಳಿಕ ವೃತ್ತಾಕಾರದ ಪ್ರದಕ್ಷಿಣಾಕಾರದ ಚಲನೆಯಲ್ಲಿ ನಾಭಿಯ ಸುತ್ತಾ ಮಸಾಜ್ ಮಾಡಿಕೊಳ್ಳಬೇಕು. ಹಾಗೆಯೇ ನಿತ್ಯ ಸ್ನಾನ ಮಾಡುವಾಗ ಹೊಕ್ಕುಳವನ್ನು ತೊಳೆದು ಶುಚಿಯಾಗಿ ಇಟ್ಟುಕೊಳ್ಳಬೇಕು. ಇಲ್ಲಾವಾದಲ್ಲಿ ಸೊಂಕು ತಗಲುವ ಸಾಧ್ಯತೆ ಇರುತ್ತದೆ. ಹೀಗೆ ಮಾಡಿ ನೋಡಿ ತಮ್ಮ ತ್ವಚೆಯಲ್ಲಿ ಆರೋಗ್ಯದಲ್ಲಿ ಆಗುವ ವ್ಯತ್ಯಾಸವನ್ನು ತಾವಾಗಿಯೇ ಗಮನಿಸಿ ಆನಂದಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
~ಗೋವರ್ಧನ ನವಿಲೇಹಾಳು
ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.
ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.
ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.
ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್ನ ನಷ್ಟ ಅಪಾರ. ಲೆಬನಾನ್ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್ಎಚ್ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.
ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?
ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.
ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.
ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್ನ ಮಕ್ಕಳ ಸಾವುಗಳು, ಇಸ್ರೇಲ್ನ ಗಾಯಗೊಂಡ ಕುಟುಂಬಗಳು, ಗಲ್ಫ್ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
~ಗೋವರ್ಧನ ನವಿಲೇಹಾಳು
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.
ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ; ಎಚ್ಚರಿಕೆಯೂ ಹೌದು.
ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಎಲೆಕ್ಟ್ರಾಲ್ ಬಾಂಡ್ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.
ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.
ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.
ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್ಗಳಾಗಿ ಪರಿವರ್ತಿಸುತ್ತದೆ.
ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.
ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ
ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್ಲೈನ್ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.
ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.
ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.
ಸುದ್ದಿದಿನ | ವಾಟ್ಸಾಪ್ | 9980346243

-
ದಿನದ ಸುದ್ದಿ5 days agoವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
-
ದಿನದ ಸುದ್ದಿ3 days agoಕೆ. ಬೇವಿನಹಳ್ಳಿ, ಸಾಲಕಟ್ಟೆ ಗ್ರಾಮದಲ್ಲಿ ರಕ್ತದಾನ ಶಿಬಿರ
-
ದಿನದ ಸುದ್ದಿ3 days agoದಾವಣಗೆರೆ | ಕಾಂಗ್ರೆಸ್ ನ ಹಿರಿಯ ಮುಖಂಡ ಕೆರೆಕಟ್ಟೆ ಸೈಯದ್ ಸೈಫುಲ್ಲಾ ನಿಧನ
-
ದಿನದ ಸುದ್ದಿ5 days agoದಾವಣಗೆರೆ | ಕೆರೆಗಳ ಸಂರಕ್ಷಣೆ; ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ : ಡಿಸಿ ಗಂಗಾಧರಸ್ವಾಮಿ ಜಿ.ಎಂ
-
ದಿನದ ಸುದ್ದಿ54 minutes agoಮಹಿಳಾ ಮತದಾರರನ್ನು ‘ವೋಟ್ ಬ್ಯಾಂಕ್’ ಆಗಿ ಪರಿವರ್ತಿಸುವ ಬಿಜೆಪಿ ಕುತಂತ್ರ ವಿಫಲವಾಯಿತು : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ

