Connect with us

ಲೈಫ್ ಸ್ಟೈಲ್

ನಾಡಿಗೆ ಬಂದ ಕಾಡುಕೋಣ..!

Published

on

ಸಾಂದರ್ಭಿಕ ಚಿತ್ರ
  • ಪಶುವೈದ್ಯರುಗಳ ಪೇಷಂಟುಗಳು ಬರೀ ದನ, ಎಮ್ಮೆ, ಕೋಳಿ,ಕುರಿ, ಆಡು, ನಾಯಿ, ಬೆಕ್ಕು, ಕೋಳಿ, ಹಂದಿ ಇತ್ಯಾದಿಗಳಿಗೆ ಸೀಮಿತವಾಗಿರದೆ ಮೊಲ, ಇಲಿ, ಕೋತಿ, ಆಮೆ, ಹುಲಿ, ಸಿಂಹ, ಒಂಟೆ, ಆನೆ, ಚಿರತೆ, ಹಾವು , ನರಿ, ಜಿಂಕೆ, ಕಡಿವೆ ಇತ್ಯಾದಿ ತರಹೇವಾರಿ ವನ್ಯಜೀವಿಗಳ ಚಿಕಿತ್ಸೆ ಮತ್ತು ಜೀವನ ಕ್ರಮದ ಬಗ್ಗೆಯೂ ತಿಳಿದುಕೋಂಡಿರಬೇಕಾಗುತ್ತದೆ. ಕೆಲವೊಮ್ಮೆ ಈ ಪ್ರಾಣಿಗಳನ್ನು ಚಿಕಿತ್ಸೆ ಮಾಡುವಾಗ ಸಾಕಷ್ಟು ಅಪಾಯವೂ ಕಾದಿರುತ್ತದೆ. ಗಾಯಗೊಂಡ ಕಾಡುಕೋಣವೊಂದರ ಚಿಕಿತ್ಸೆಯ ರೋಚಕ ಅನುಭವ.

ಡಾ. ಎನ್.ಬಿ.ಶ್ರೀಧರ

ನಿವಾರವೊಂದರ ಮಧ್ಯಾಹ್ನ 11 ಘಂಟೆಯಿರಬಹುದು. ಆ ದಿನ ತಾಳಗುಪ್ಪದಲ್ಲಿ ಸಂತೆ. ಆಸ್ಪತ್ರೆಯಲ್ಲಿ ಗಿಜಿಗುಟ್ಟುವಷ್ಟು ಜನ ಮತ್ತು ತರಹೆವಾರಿ ಕೇಸುಗಳು. ಹುಳವಾಗಿ ಗಬ್ಬು ನಾರುವ ಗಾಯದಿಂದ ಹಿಡಿದು ಸಂತಾನಹರಣ ಚಿಕಿತ್ಸೆಗೆಂದು ಕಾಯುತ್ತಿರುವ ಪಕ್ಕದ ತಾಲೂಕು ಸೊರಬದ ಶ್ವಾನಗಳ ಸವಾರಿ ಕ್ಯೂನಲ್ಲಿತ್ತು. ಒಳರೋಗಿಗಳಾಗಿ ಮಾಡಿಕೊಂಡ ಕೆಲವು “ಪೇಷಂಟು”ಗಳ ಚಿಕಿತ್ಸೆಯೂ ಕಾದಿತ್ತು. ನಾನೇ ಪ್ರಯೋಗಕ್ಕೆಂದು ತಂದು ಸಂಶಯಿತ ವಿಷಗಿಡಗಳನ್ನು ತಿನ್ನಿಸುಸುತ್ತಿರುವ ಕರುಗಳ ಗುಂಪಿತ್ತು. ಮನೆಗೆ ಚಿಕಿತ್ಸೆಗೆ ಕರೆದಿರುವ “ಟೂರಿಂಗ್ ಪೇಷಂಟು”ಗಳ ಪಟ್ಟಿಯೂ ಸಹ ಬೆಳೆಯುತ್ತಿತ್ತು.

ಅಷ್ಟರಲ್ಲೇ ನನ್ನ ಶಿಷ್ಯ “ಸಾರ್..ಡಿ ಎಪ್ ಓ ಅವರು ಲೈನಿನಲ್ಲಿದ್ದಾರೆ. ಗರಂ ಆಗಿದಾರೆ.. ನಿಮ್ಮ ಜೊತೆ ಮಾತಾಡಬೇಕಂತೆ “ ಎಂದ. ಯಾವುದೋ ಕಾಡು ಕೋಣವೋ ಅಥವಾ ಹುಲಿ ಸಿಂಹ, ಜಿಂಕೆ ಇತ್ಯಾದಿ ವನ್ಯೃಗಗಳು ಕಾಡಿನಲ್ಲಿ ಸತ್ತಿರಬೇಕು. ಮರಣೋತ್ತರ ಪರೀಕ್ಷೆ ಮಾಡಲು ಕರೆಯುತ್ತಿದ್ದಾರೆ. ಈ ದಿನ ಹಳ್ಳ ಹಿಡಿಯಿತು. ದೇಶದ ಆರ್ಥಿಕತೆಗೆ ನಮ್ಮ ಹಸು ಎಮ್ಮೆಗಳಂತೆ ಒಂದಿನಿತೂ ಕೊಡುಗೆ ನೀಡದ, ಕರದಾತರು ಕಷ್ಟಪಟ್ಟು ನೀಡಿದ ಹಣವನ್ನು ಜೀವವೈವಿಧ್ಯದ ಸಂರಕ್ಷಣೆಯ ಹೆಸರಿನಲ್ಲಿ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ಗುಂಪೊಂದರ ಪುನರ್ವಸತಿಯಾಗಿ ಕೇಂದ್ರವಾಗಿ ಮಾರ್ಪಟ್ಟ ಇಲಾಖೆಯೆಂದು ನನ್ನ ಮಿತ್ರ ಹೇಳುವ ಅರಣ್ಯ ಇಲಾಖೆಯ ಯಾವುದೋ ಕಾಡು ಪ್ರಾಣಿ ಸತ್ತರೆ ಎಲ್ಲ ಕೆಲಸ ಬದಿಗೊತ್ತಿ ಅದರ ಕೊಳೆತು ಹೋದ ಶವಪರೀಕ್ಷೆಗೆ ಇಲ್ಲಿಂದ ಹೋಗಬೇಕಾದ ಅನಿವಾರ್ಯತೆಯನ್ನು ಶಪಿಸುತ್ತಾ ಫೋನು ಎತ್ತಿದೆ. ಆಕಡೆಯಿಂದ “ ಡಾಕ್ಟ್ರೇನ್ರಿ.. ಎಷ್ಟೊತ್ರಿ ಬರೋದು? ನಾನು ಸಾಗರ ಡಿಎಪ್ಪೋ ಕಣ್ರೀ… ತುಮರಿ ಹತ್ರ ಕಾಡುಕೋಣ ಅಡಿಕೆ ತೋಟದಲ್ಲಿ ಮನೆ ಮಾಡಿ ಬಿಟ್ಟಿದೆ.. ಅದ್ಕೆ ಒಂದಿಷ್ಟು ಚಿಕಿತ್ಸೆ ಆಗ್ಬೇಕಿತ್ತು.. ತುಮರಿಗೆ ಬೇಗ ಬಂದ್ಬಿಡಿ.. ಈ ಪೇಪರ್ರಿನವರು ತಲೆ ತಿಂತಾ ಇದ್ದಾರೆ” ಎಂದು ಅವರ ಅಧಿಕಾರಿ ಗತ್ತಿನಲ್ಲೇ ಗಾರ್ಡು ಫಾರೆಸ್ಟರುಗಳಿಗೆ ನೀಡುವಂತೆ ಆದೇಶ ನೀಡಿದರು.

ಇದೊಳ್ಳೆ ಕಥೆಯಾಯ್ತಲ್ಲ !! ದನದ ಚಿಕಿತ್ಸೆ ಬಿಟ್ಟು ಈ ಕಾಡುಕೋಣದ ಚಿಕಿತ್ಸೆಗೆ ಹೋಗ್ಬೇಕಲ್ಲ ? ಎಲ್ಲೋದ್ರು ಈ ಕಾಡುಪ್ರಾಣಿ ಡಾಕ್ಟರುಗಳು? ಎಂದು ಪರಿಚಿತರಾದ ಅರಣ್ಯ ಇಲಾಖೆಯ ಸ್ನೇಹಿತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನಾಯಿಸಿದೆ. ಅದರ ಪ್ರವರ ತಿಳಿಯಿತು.

“ಅಡಿಕೆ ತೋಟದಲ್ಲಿ ಮನೆ ಮಾಡಿದ ಕಾಡುಕೋಣ” “ಕಾಡಿನಿಂದ ನಾಡು ಸೇರಿದ ಕಾಡುಕೋಣ” ಇತ್ಯಾದಿ ಶಿರ್ಷಿಕೆಯ ಸುದ್ಧಿಗಳು ದಿನಪತ್ರಿಕೆಗಳಲ್ಲಿ ಬರತೊಡಗಿದ ಮೇಲೆಯೇ ನಮಗೆ ಗೊತ್ತಾಗಿದ್ದು ಕಾಡುಕೋಣವೊಂದು ತುಮರಿ ಭಾಗದ ಹೆಗಡೆಯೊಬ್ಬರ ತೋಟ ಸೇರಿ ಅಲ್ಲಿಯೇ ಠಿಕಾಣಿ ಹೂಡಿದೆ ಎಂದು. ಸಾಮಾನ್ಯವಾಗಿ ನಮ್ಮ ಜಾನುವಾರುಗಳ ಜಂಜಾಟದಲ್ಲಿಯೇ ಮುಳುಗಿಹೋಗುವ ನಾವು ಆಗೆಲ್ಲ ಕಾಡುಪ್ರಾಣಿಗಳ ಚಿಕಿತ್ಸೆಗೆ ಹೋಗುವುದು ಕಡಿಮೆಯಾಗಿತ್ತು. ಅದಕ್ಕೆಂದೇ ಶಿವಮೊಗ್ಗದಲ್ಲಿ ಅರಣ್ಯ ಇಲಾಖೆಯಲ್ಲಿರುವ ಇರುವ “ಆನೆ ಡಾಕ್ಟರು” ಹುಲಿ ಸಿಂಹ” ಡಾಕ್ಟರುಗಳಾದ ವನ್ಯಜೀವಿ ಪಶುವೈದ್ಯರು ಬಂದು ಏನೇನು ಬೇಕೋ ಅದೆಲ್ಲಾ ಕ್ರಮ ತೆಗೆದುಕೊಳ್ಳುತ್ತಿದ್ದರು.

ಅದರೆ ಆಗ ವನ್ಯಜೀವಿ ತಜ್ಞ ಪಶುವೈದ್ಯರು ದೂರದೂರಿನಲ್ಲಿ ಪುಂಡ ಕಾಡಾನೆಗಳು ಊರು ನುಗ್ಗಿ ದಾಂಧಲೆ ಎಬ್ಬಿಸಿದ್ದರಿಂದ ಅವುಗಳ ತರಲೆ ನಿಲ್ಲಿಸಿ ಖೆಡ್ಡಾಕ್ಕೆ ಕೆಡವಲು ನಾಡಾನೆಗಳನ್ನು ತೆಗೆದುಕೊಂಡು ಹೋಗಿ ಕೊಡಗಿನ ಹತ್ತಿರ ಯಾವುದೇ ಹಳ್ಳಿಯಲ್ಲಿ ಕಳೆದು ೧೫ ದಿನಗಳಿಂದ ಬೀಡು ಬಿಟ್ಟಿದ್ದು ಅವರು ಬಂದು ಈ ಕಾಡು ಪ್ರಾಣಿಯ ಚಿಕಿತ್ಸೆ ಮಾಡುವವರೆಗೆ ದಿನನಿತ್ಯ ಕಾಟಕೊಡುವ ದಿನಪತ್ರಿಕೆಗಳಿಂದ ಬಚಾವಾಗಲು ಡಿಎಪ್ಪೋ ನನಗೆ ಫೋನಾಯಿಸಿದ್ದಾರೆಂದೂ, ಸಾಗರ ಪಶುವೈದ್ಯ ಆಸ್ಪತ್ರೆಯ ಪಶುವೈದ್ಯರೆಲ್ಲ ತುಮರಿ ಏರಿಯಾವು ನನ್ನ ವ್ಯಾಪ್ತಿಯಲ್ಲಿ ಬರುವುದರಿಂದ ನನಗೆ ತಿಳಿಸಲು ಸೂಚಿಸಿದ್ದಾರೆಂದೂ ತಿಳಿಯಿತು.

ಸರಿ ನಮ್ಮಾಸ್ಪತ್ರೆಯಿಂದ ಯಾವ ರೂಟಿನಲ್ಲೇ ಹೋದರು 60-70 ಕಿಲೋಮೀಟರು ಇರುವ ತುಮರಿಗೆ ಹೋಗಲು ಎಲ್ಲಾ ಚಿಕಿತ್ಸಾ ಪರಿಕರಗಳನ್ನು ಸಿದ್ಧ ಮಾಡಿಕೊಳ್ಳಲು ನನ್ನ ಶಿಷ್ಯನಿಗೆ ತಿಳಿಸಿದೆ. ಕಾಡು ಪ್ರಾಣಿಗಳಿಗೆ ಅರಿವಳಿಕೆ ನೀಡುವ ಡಾರ್ಟ್ ಗನ್ನು ಇಲ್ಲವೆಂದೂ, ಕಾಡೆಮ್ಮೆ (ಕಾಡು ಕೋಣ?), ಮೈಮೇಲೆ ಬಂದರೆ ಕಷ್ಟವಿದೆಯೆಂದೂ ಯಾವುದಕ್ಕೂ ಮನೆಗೆ ಹೋಗಿ ತಿಳಿಸಿ ಬರುವೆನೆಂದೂ ನನ್ನ ಶಿಷ್ಯ ಮನೆಗೆ ಹೊರಟ.

ತುಮರಿ, ಬ್ಯಾಕೋಡು, ಕಾರ್ಗಲ್ಲು, ಶಿರವಂತೆ, ಅರಳಗೋಡು, ಕೊಂಜವಳ್ಳಿ, ಸೈದೂರು ಇತ್ಯಾದಿ ಈಗ ಆಸ್ಪತ್ರೆಯಾಗಿರುವ ಸುಮಾರು 90ಕಿಲೋಮೀಟರ್ ವ್ಯಾಪ್ತಿಯ ವಿಸ್ತಾರ ಪ್ರದೇಶಗಳಿಗೆ ಏಕೈಕ ತಜ್ಞ ಪಶುವೈದ್ಯನಾದ ನಾನು ಈ ಭಾಗದಲ್ಲಿ ಯಾವುದೇ ನಾಡು ಅಥವಾ ಕಾಡು ಪ್ರಾಣಿಗಳಿಗೆ ತೊಂದರೆಯಾದರೂ ಮರಣೋತ್ತರ ಪರೀಕ್ಷೆ ಅಥವಾ ಚಿಕಿತ್ಸೆ ನೀಡುವ ಮಹತ್ತರ ಜವಾಬ್ದಾರಿ ಹೊತ್ತು ಕೊಂಡಿದ್ದೆ.

ಎಂದಿನಂತೆ ನನ್ನ ಸುಜ಼ುಕಿ ಸವಾರಿ ನನ್ನ ಶಿಷ್ಯನ ಜೊತೆ ತುಮರಿ ಕಡೆ ಹೊರಟಿತು. ಸಾಗರ ಸೇರಿ ಸಾಗರದಿಂದ ಹೊಳೆಬಾಗಿಲಿನ ಬಾರ್ಜು ದಾಟಿ ಇನ್ನೂ 25 ಕಿಮಿ ಅಂಕು ಡೊಂಕಾದ ರಸ್ತೆಗಳಲ್ಲಿ ಸಾಗಿ ಕಾಡುಕೋಣದ ವಿಷಯ ಕೇಳುತ್ತಾ ಸಾಗಿದೆವು. ಗಮನದ ಹಳ್ಳಿ ತಲುಪಿ ಅಲ್ಲಿ ಹೆಗ್ಡೇರ ತೋಟದಲ್ಲಿ ಗಮಯದ ಜಾಡು ಹಿಡಿದು ಸಾಗಿದೆವು. ಬೈಕಿನಲ್ಲಿ ಸಾಗಿ ಸಾಗಿ ಬೇಸರ ಎಷ್ಟೊತ್ತಿಗಪ್ಪಾ ಈ ಊರು ಬರುತ್ತೆ ಎನ್ನುವಷ್ಟರಲ್ಲಿ ಗಮಯದ ಉಗಮ ಸ್ಥಾನ ಬಂತು.

ಗಮಯದ ಸುತ್ತ ಜನವೋ ಜನ. ಕೆಲವು ಅರಣ್ಯ ಇಲಾಖೆ ಸಿಬ್ಬಂದಿ ಜಮೆಯಾಗಿ ಅವರ ಅಮೂಲ್ಯ ವಸ್ತುವಿನ ರಕ್ಷಣೆ ಮಾಡುತ್ತಿದ್ದರು. ಒಂದೆರಡು ಪೋಲೀಸ್ ಸಿಬ್ಬಂದಿಯೂ ಸಹ ಜನರ ಬೀಡು ಕಡಿಮೆ ಮಾಡಲು ಹರ ಸಾಹಸ ಪಡುತ್ತಿದ್ದರು. ಹೋಯ್.. ಹೋಯ್… ಡಾಕ್ಟ್ರು ಬಂದ್ರು .. ದಾರಿ ಬಿಡಿ” ಎನ್ನುವ ಆಜ್ಞೆ ಪೋಲೀಸರಿಂದ ಬಂದು ಎಲ್ಲಾ ಜನರಿಂದ ನಾನೇ ಫ಼ೋಕಸ್ಸಾದೆ. ಕಾಡು ಕೋಣವನ್ನು ಸುಮಾರು ೧೫ ಅಡಿ ದೂರದಿಂದ ನೋಡಿದೆ. ಬಿಳಿಯ ಪಟ್ಟಿಯ ಕುತ್ತಿಗೆ, ಕಟ್ಟು ಮಸ್ತಾದ ದೇಹ, ರಾಜಗಾಂಭೀರ್ಯದಲ್ಲಿ ಇರಬೇಕಾದ ಕಾಡುಕೋಣ ಲಾಚಾರ್ ಎದ್ದು ಬಡ್ಕಾಟೆ ಹೆಣದಂತೆ ಹಿಂಡಿ ನೀಡದೇ ಇರುವ ಏಳಲು ಸಾಧ್ಯವಾಗದ ಮುದಿ ಎಮ್ಮೆಯಾಗಿ ಹೋಗಿತ್ತು. ಆದರೂ ಅದರ ಸ್ಥಿತಿ ಗಮನಿಸಲು ಸ್ವಲ್ಪ ಹತ್ತಿರ ಹೋದರೆ ಬುಸ್ ಎಂದು ಶಬ್ಧ ಮಾಡುತ್ತಾ ಏರಿ ಬಂತು.

ಸರಿಯಾಗಿ ಗಮನಿಸಿದಾಗ ಮುಂದಿನ ಬಲಗಾಲಿನ ಮೇಲ್ಬಾಗ ಉಬ್ಬಿದಂತೆ ಕಂಡು ಬಂತು. ಇದರ ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಹೋಗುವುದು ಗ್ಯಾರಂಟಿ ಅನ್ನಿಸಿತು. ಅರಣ್ಯ ಇಲಾಖೆಯವರಿಗೆ “ ಈ ಕೋಣನ್ನ ಹೇಗಾದ್ರೂ ಹಿಡಿದು ಕೊಟ್ರೆ, ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡಿ ಏನಾದರೂ ಮಾಡಬಹುದು. ನಮ್ಮ ಹತ್ತಿರ ಅರಿವಳಿಕೆಯನ್ನು ದೂರದಿಂದಲೇ ನೀಡುವ “ಡಾರ್ಟ್ ಗನ್” ಇರದೇ ಇರುವುದರಿಂದ ಯಾವುದೇ ಕ್ಷಣದಲ್ಲಿ ಕಾಡು ಕೋಣ ನುಗ್ಗಿದರೆನಾಮಾವಶೇಷವಾಗುವ ಸಾಧ್ಯತೆ ಇತ್ತು. ಅದು ಕೃಷವಾಗಿರುವುದನ್ನು ಗಮನಿಸಿದರೆ ಅದಕ್ಕೆ ಗಂಭೀರವಾದ ಕಾಯಿಲೆ ಇರುವುದು ಗ್ಯಾರಂಟಿಯಾಗಿತ್ತು. ಚಿಕಿತ್ಸೆ ಮಾಡದೇ ಇದ್ದರೆ ಸತ್ತು ಯಮಪುರಿ ಸೇರಿ ಖಾಯಂ ಆಗಿ ಯಮನ ವಾಹನ ಆಗುವ ಸಾಧ್ಯತೆ ಇತ್ತು.

ನನ್ನ ಶಿಷ್ಯ ಖಾಯಂ ಎಮ್ಮೆಗಳನ್ನು ಕೆಡಗಿ ಅಭ್ಯಾಸ ಇದ್ದಾತ. ಆತ “ ಸಾರ್.. ಒಂದು ಕೈ ನೋಡಿಯೇ ಬಿಡ್ಲಾ ಸಾರ್.. ಕಾಡುಕೋಣ ಹ್ಯಾಂಗಿದ್ರೂ ಬಡಕಲಾಗಿದೆ. ನಮ್ಮ ಎಮ್ಮೆಗಳಷ್ಟೇ ತಾಕತ್ತು ಇರ್ಬಹುದು, ಹಗ್ಗ ಹಾಕಿ ಕೆಡವಿ ಬಿಡ್ತೀನಿ “ ಎಂದು ಹುಂಬ ಧೈರ್ಯ ತೋರಿದ. ನಾನು ಮಾತ್ರ ಈ ರಿಸ್ಕ್ ತೆಗೆದುಕೊಳ್ಳಲು ಸುತರಾಂ ಸಿದ್ದವಿರಲಿಲ್ಲ. ಎಲ್ಲಾದರೂ ನಮ್ಮ ಅಂದಾಜು ತಪ್ಪಿ ಈ ಕಾಡುಕೋಣ ನುಗ್ಗಿ ಯಾರನ್ನಾದರೂ ಕೆಡಗಿ ಕೊಂದರೆ ಯಾರು ಜವಾಬ್ದಾರರರು? ಎಂದು “ ಈ ಕಾಡು ಪ್ರಾಣಿ ಸಹವಾಸ ಸಾಕಪ್ಪಾ.. ಅದರ ಡಾಕ್ಟರುಗಳು ಬಂದು ಏನಾದರೂ ಮಾಡ್ಲಿ. ನಮ್ಮಿಂದ ದನ ಆರಾಮವಾದ್ರೆ ಸಾಕು” ಎಂದು ರಾಗ ಎಳೆದೆ. ಆದರೂ ವೃತ್ತಿಯ ತುಡಿತ ಇದೆಯಲ್ಲ.. ಏನಾದರೂ ಮಾಡಲೇ ಬೇಕು. ಸುತ್ತ ಮುತ್ತ ಸೇರಿದ ಜನ ಎಲ್ಲಾ ತರಹೇವಾರಿ ಕಾಮೆಂಟು ಪಾಸು ಮಾಡಲಿಕ್ಕೆ ಪ್ರಾರಂಭಿಸಿದರು.

ಅವರೊಲ್ಲಬ್ಬ “ಇವರು ದನಕ್ಕೆ ಮಾತ್ರ ಡಾಕ್ಟರು. ಎಮ್ಮೆ ಮುಕಳಿ ಒಳಗೆ ಕೈ ಹಾಕಿ ಇನ್ಸೆಮಿನೇಷನ್ ಮಾಡೋದು ಮಾತ್ರ ಇವರಿಗೆ ಕಲ್ಸಿರ್ತಾರೆ. ಈ ಕಾಡುಕೋಣದ ಟ್ರೀಟ್ಮೆಂಟಿಗೆಲ್ಲಾ ಮೈಸೂರಿನಿಂದ ಎಕ್ಸ್ಪರ್ಟ್ಸ್ ಬರ್ಬೇಕು. ಸುಮ್ನೇ ಟೈಮ್ ಪಾಸಿಗೆ ಬಂದಿದ್ದಾರೆ. ಅದ್ರ ಜೊತೆ ಈ ಫ಼ಾರೆಸ್ಟ್ ಖಾತೆ ಜನಾ ಬೇರೆ ದಂಡ” ಎಂದು ನನ್ನ ವೃತ್ತಿಯ ಘನತೆಯನ್ನು ಮೂರುಕಾಸಿಗಿಳಿಸಿ ನಿವಾಳಿಸಿ ಬಿಸಾಡಿದ ಹಾಗೂ ಫ಼ಾರೆಸ್ಟು ಇಲಾಖೆಯವರು ಕಳ್ಳ ನಾಟಾ ಮಾಡುತ್ತಿದ್ದ ಕೆಲ ಹಳ್ಳಿಯ ಜನರನ್ನು ಕುಂಡೆಯ ಮೇಲೆ ಹಾಕಿ ಕಟಕಟೆ ಒಳಗೆ ಹಾಕಿದ ಹಳೆ ಸೇಡು ತೀರಿಸಿಕೊಂಡ. ಹಳ್ಳಿಯಲ್ಲಿ ರಾತ್ರಿ ,10 ಘಂಟೆಗೆ ಕರು ಅಡ್ಡ ಸಿಕ್ಕಿಹಾಕಿಕೊಂಡಾಗ ಎಣ್ಣೆಯ ಮತ್ತನ್ನು ಏರಿಸಿಕೊಂಡವರಿಂದ ಈ ತರಹದ ಮಾತು ಕೇಳಿ ಅಭ್ಯಾಸವಾಗಿ ಹೋದ ನಾನು ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಆದರೆ ನನ್ನ ಶಿಷ್ಯನಿಗೆ ಮಾತ್ರ ನಖಶಿಖಾಂತ ಕೋಪ ಬಂದಿತ್ತು.

ಆತ “ಸಾರ್. ಏನೂ ತೊಂದರೆ ಇಲ್ಲದಂತೆ ಅದನ್ನು ಕೆಡಗಿ ಕೊಡ್ತೀನಿ ಸಾರ್. ಇಂಜೆಕ್ಷನ್ ಹಾಕಿ ಅನೇಸ್ಠೇಸಿಯಾ ಕೊಟ್ಟು ಕೆಲಸ ಮಾಡಿ.. ಫ಼ಾರೆಸ್ಟ್ ಡಿಪಾರ್ಟ್ಮೇಂಟಿನವರೂ ಸಹಾಯ ಮಾಡ್ತಾರೆ” ಅಂದ. ಅಷ್ಟು ಹೊತ್ತು ನಮ್ಮ ಪರಿಪಾಟಲು ನೋಡಿ ಮಜಾ ತಗಳ್ತಿದ್ದ ಅರಣ್ಯ ಇಲಾಖೆಯ ಗಾರ್ಡು ಫ಼ಾರೆಸ್ಟರುಗಳೂ ಜನರ ಮಾತಿನಿಂದ ರೇಗಿ ಏನಾದರೂ ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಾಗಿತ್ತು, ಅವರು ನಾಟಾ ಸಾಗಿಸಲು ಕಳ್ಳ ಸಾಗಣೆಗೆ ಉಪಯೋಗಿಸುತ್ತಿದ್ದ ಸೀಜ಼್ ಮಾಡಿದ ದಪ್ಪನೇ ಹಗ್ಗ ತಂದರು.

ಅದನ್ನು ಎಂಟತ್ತು ಅಡಿಕೆ ಮರದ ಸುತ್ತ ಕಟ್ಟಿ ಕಾಡು ಕೋಣ ಹಗ್ಗದ ಕೋಟೆ ಒಳಗೆ ಭದ್ರವಾಗುವಂತೆ ದಿಗ್ಭಂಧನ ಹಾಕಿದರು. ಕಾಡುಕೋಣ ಇರುವ ಜಾಗದ ಸುತ್ತ ಗೂಟದ ಬೇಲಿ ರೆಡಿಯಾಗಿ ಅಕ್ಷರಷ: ಕೊರೋನಾ ಪೀಡಿತರನ್ನು ಕ್ವಾರಂಟೈನಿನೊಳಗೆ ಹಾಕಿದ ಹಾಗೇ ಲಾಕ್ ಮಾಡಿದರು. ಆದರೆ ಕೋಣಕ್ಕೆ ಅನೇಶ್ಥೆಸಿಯಾ ಇಂಜೆಕ್ಷನ್ ಚುಚ್ಚಬೇಕಲ್ಲ. “ಯಾರಾದ್ರೂ ಬಂದು ಇದನ್ನು ಮಾಂಸದಲ್ಲಿ ತೂರಿಸ್ರೋ” ಎಂದು ಸಿರಿಂಜಿನಲ್ಲಿ ತಕ್ಕ ಪ್ರಮಾಣದ ಅನೇಸ್ಥೆಸಿಯಾ ಚುಚ್ಚುಮದ್ದು ಲೋಡ್ ಮಾಡಿ ನೀಡಲು ಹೋದೆ. ಯಾರೂ ಮುಂದೆ ಬರಲಿಲ್ಲ.

ಒಂದು ಉಪಾಯ ಹೊಳೆಯಿತು. ನಾವು ನಿರ್ಮಿಸಿದ ಕೋಟೆಯೊಳಗೆ ಒಂದಿಷ್ಟು ಮುರುಗಲು ಮತ್ತು ಕೋಕೋ ಗಿಡಗಳಿದ್ದವು. ಅವುಗಳ ಮೇಲೆ ಹತ್ತಿ ಕುಳಿತರೆ ಮತ್ತು ಕಾಡುಕೋಣವನ್ನು ಅಲ್ಲಿಗೆ ನಿಧಾನವಾಗಿ ಚಲನೆಯಾಗುವಂತೆ ನೋಡಿಕೊಂಡರೆ ಅದಕ್ಕೆ ಕಚಕ್ ಎಂದು ಇಂಜೆಕ್ಷನ್ ಚುಚ್ಚಿಬಿಡುವ ಎಂದುಕೊಂಡೆ. ಆದರೆ ಇಲ್ಲಿ ತುಂಬಾ ರಿಸ್ಕ್ ಇತ್ತು. ಆದರೆ ಮೊದಲೇ ಗಾಯಾಳು ಕೋಣ, ಖಂಡಿತಾ ರೋಷ ಭರಿತವಾಗಿರುತ್ತದೆ. ಏನಾದರೂ ಹೆಚ್ಚುಕಮ್ಮಿ ಆಗಿ ಆಯ ತಪ್ಪಿದರೆ ಅದರ ಮೇಲೆಯೇ ಬೀಳುವ ಸಾಧ್ಯತೆ ಇತ್ತು. ಬಿದ್ದರೆ ತುಳಿದು ಖಂಡಿತಾ ತುಳಿದು ಯಮಪುರಿಗೆ ಕಳಿಸುತ್ತಿತ್ತು.

ಯಾರಿಗಾದರೂ ಮರ ಹತ್ತಿ ಅದು ಕೆಳಗೆ ಬಂದೊಡೆ ಇಂಜೆಕ್ಷನ್ ಚುಚ್ಚಿ ಎಮ್ದರೆ ಎಲ್ಲರೂ ಹೆದರು ಪುಕ್ಕಲರೆ. ಮತ್ತೆ ಕೆಲವರು ಹೊಟ್ಟೆ ಹೊತ್ತ ದಡೂತಿಗಳು. ಅಲ್ಲಿ ಇರುವವರಲ್ಲಿ ನಾನೇ ತೆಳ್ಳಗಿರುವವ. ಏನಾದರಾಗಲಿ ಎಂದು ಅನಸ್ಥೆಸಿಯಾವನ್ನು ತುಂಬಿಸಿದ ಸಿರಿಂಜ್ ಕೈಲಿ ಹಿಡಿದು ಅದು ನೇರವಾಗಿ ಕೆಳಗೆ ಬರಬಹುದಾದ ಕೋಕೋ ಗಿಡದ ಮೇಲೆ ಏರಿದೆ. ಕಾಡುಕೋಣವನ್ನು ಮರದ ಕೆಳಗೆ ಬಂದು ನಿಲ್ಲುವಂತೆ ಬೆದರಿಸಲು ಸೂಚಿಸಿದೆ.

ಹಲವು ರೌಂಡ್ ಕಾರ್ಯಾಚರಣೆಯ ನಂತರ ಯಾವುದೋ ಗಳಿಗೆಯಲ್ಲಿ ಕಾಡು ಕೋಣ ನಾನು ಮೇಲೆ ಇದ್ದ ಕೊಂಬೆಯ ಕೆಳಗೆ ಬಂದು ನಿಂತಿತು. ಇದೇ ಅವಕಾಶವೆಂದು ಅದರ ಹಿಂಬಾಗದ ಪ್ರಷ್ಠದ ಮೇಲೆ ಸೂಜಿಯ ಸಮೇತ ಸಿರಿಂಜ್ ಚುಚ್ಚಿ ಸರಕ್ಕನೇ ಔಷಧಿ ಸೇರಿಸಿದೆ. ಆಯ ತಪ್ಪಿ ಕೆಳಗೆ ಬಿದ್ದ ಹೊಡೆತಕ್ಕೆ ಕಾಡುಕೋಣದ ಎದುರು ಅಂಗಾತ ಬಿದ್ದೆ. ಇನ್ನೇನು ಕಾಡುಕೋಣ ನನ್ನನ್ನು ತಿವಿಯಬೇಕು.. ನೋಡ್ತೀನಿ .. ಏನೂ ಶಬ್ಧ ಇಲ್ಲ.

ನಾನು ಕೊಟ್ಟ ಅರಿವಳಿಕೆಯ ಪ್ರಭಾವದಿಂದ ಕಾಡುಕೋಣ ಧರಾಶಾಯಿಯಾಗಿತ್ತು.
ಕೂಡಲೇ ನನ್ನ ಶಿಷ್ಯ ಮತ್ತು ಅರಣ್ಯ ಇಲಾಖೆಯವರು ಕಾಡುಕೋಣವನ್ನು ನಾಡುಕೋಣ ಕಟ್ಟಿದಂತೆ ಹಗ್ಗದಿಂದ ಏಳದಂತೆ ಕ್ಷಣಮಾತ್ರದಲ್ಲಿ ಬಂಧಿಸಿದರು. ಕಾಡುಕೋಣದ ಮುಂಗಾಲಿನ ಮೇಲ್ಬಾಗದಲ್ಲಿ ಕೀವಿನಿಂದ ಕೂಡಿದ ಗಡ್ಡೆಯಿತ್ತು. ಸಾವಧಾನವಾಗಿ ಅದನ್ನು ಓಪನ್ ಮಾಡಿದಾಗ ಟಕ್ ಎಂದು ಅದರೊಳಗಿದ್ದ ಬುಲೆಟ್ ಹೊರಬಂತು. ಯಾರೋ ದುರುಳರು ಮಾಂಸದಾಸೆಗೆ ಕಾಡುಕೋಣಕ್ಕೆ ಗುಂಡು ಹೊಡೆದಾಗ ಅದು ಮಾಂಸದಲ್ಲಿ ಕಚ್ಚಿಕೊಂಡು ಅಲ್ಲಿ ಕೀವುಂಟುಮಾಡಿದೆ ಎಂದು ತಿಳಿಯಿತು.

ಕೀವು ಬಸಿದು ಹೋಗುವ ಹಾಗೇ ಮಾಡಿ ಅದರೊಳಗೆ ಟಿಂಚರ್ ಆಯೋಡಿನ್ ಯುಕ್ತ ಭಟ್ಟೆಯನ್ನಿರಿಸಿ ಸುತ್ತಲೂ ಮುಲಾಮು ಹಚ್ಚಿದೆ. ಅವಶ್ಯಕ ನಂಜುನಿವಾರಕಗಳು, ನೋವು ನಿವಾರಕಗಳು ಹಾಗೂ ಜೀವನಿರೋಧಕದ ಚುಚ್ಚುಮದ್ದು ನೀಡಿದೆ. ಕಾಡುಕೋಣ ಬಹಳ ಬಡಕಲುಗೊಂಡಿತ್ತು. ಬಹುಶ: ಕೀವಿನ ನೋವಿನ ಬಾಧೆಯಿಂದ ಇರಬಹುದೇನೋ? ಕಾಡು ಕೋಣ ನಾಡಿಗೆ ಆಶ್ರಯಕ್ಕೆ ಬಂದಿದೆ.ತೋಟದಲ್ಲಿ ಸುಲಭವಾಗಿ ಸಿಗುವ ಹಲಸಿನ ಹಣ್ಣು ಇತ್ಯಾದಿ ತಿಂದು ಸೆಟ್ಲ್ ಆಗಿದೆ ಎಂದು ಗೊತ್ತಾಯ್ತು. ಎಲ್ಲ ಕೆಲಸ ಮುಗಿಸಿ, ಅದರ ತಿಲಕಾಷ್ಠ ಮಹಿಷ ಬಂಧನ ಬಿಡಿಸಿ ದೂರ ಬಂದೆವು. ಕೋಟೆಯಂತೆ ಮಾಡಿದ ಹಗ್ಗದ ಬಿಗಿತವನ್ನೂ ಸಡಿಲ ಗೊಳಿಸಿದೆವು. ಸುಮಾರು ಮುಕ್ಕಾಲು ಘಂಟೆಗೆ ಕಾಡುಕೋಣಕ್ಕೆ ಪ್ರಜ್ಞೆ ಬಂತು. ಓಲಾಡುತ್ತಾ ಏಳಲು ಪ್ರಯತ್ನಿಸಿತು. ಸ್ವಲ್ಪ ಹೊತ್ತಿಗೆ ಎದ್ದು ನಿಂಟು ಮೈಕೊಡವಿಕೊಂಡಿತು. ದುಡುಕ್ಕನೆ ಪಕ್ಕಳದ ಹಳ್ಳದ ಮೇಲೆ ಏರಿ ನಿಂತಿತು. ನಮ್ಮೆಡೆ ಒಂತರಾ ಕೃತಜ್ಞತೆಯ ನೋಟ ಬೀರಿ ಕಾಡಿನಲ್ಲಿ ಜಿಗಿದು ಮಾಯವಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು

Published

on

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು.

ಜಿಎಂ ವಿಶ್ವವಿದ್ಯಾಲಯದ ಎಲ್ಲಾ ವಿಭಾಗಗಳಲ್ಲೂ ಇರುವ ರಂಗಾಸಕ್ತ,ಅಭಿನಯ ಪ್ರಿಯ ವಿದ್ಯಾರ್ಥಿಗಳ ಅಭಿನಯ ಕಲೆಯನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಮಹತ್ತರ ಉದ್ದೇಶ ರಂಗೋತ್ಸವದಾಗಿದ್ದು, ಮೂರು ಹಂತಗಳಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು.

ಪ್ರಥಮ ಹಂತ ಆಡಿಷನ್ (ಆಯ್ಕೆ) ಗುಂಪುಗಳ ರಚನೆ ,ಎರಡನೇ ಹಂತ ಪೌರಾಣಿಕ ಸುತ್ತು ಈ ಹಂತದಲ್ಲಿ ಎಲಿಮಿನೇಷನ್ ಪ್ರಕ್ರಿಯೆ ಇದ್ದು ಕಡಿಮೆ ಅಂಕಗಳಿಸಿದವರನ್ನು ಗುಂಪಿನಿಂದ ಹೊರಗುಳಿಸಲಾಯಿತು. ಮೂರನೇ ಹಂತ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆ ಆಗಿದ್ದು ಈ ಸುತ್ತಿಗೆ ಬಂದ ನಾಲ್ಕು ತಂಡಗಳಿಗೆ ‘ಸಾಮಾಜಿಕ ಜಾಗೃತಿ ‘ಎಂಬ ವಿಷಯ ನೀಡಲಾಗಿದ್ದು, ಲೈಂಗಿಕ ದೌರ್ಜನ್ಯ ರೈತರ ಬವಣೆ, ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳು, ಡ್ರಗ್ಸ್ ಹಾವಳಿ ಈ ವಿಷಯಗಳನ್ನು ಕೇಂದ್ರೀಕರಿಸಿ ನಾಲ್ಕು ತಂಡಗಳು ಮನೋಜ್ಞವಾಗಿ ಅಭಿನಯಿಸಿದವು.

ತೀರ್ಪುಗಾರರಾಗಿ ಪ್ರೊ. ಗಣೇಶ್ ಜಿ ತಿಲ್ವೆ, ಪ್ರೊ. ದೀಪಿಕಾ ವಿ.ಬಿ, ಪ್ರೊ. ರಾಜೇಶ್ವರಿ ವೈ.ಎಂ ಮೂರು ಹಂತಗಳಲ್ಲೂ ತೀರ್ಪನ್ನು ನೀಡಿದರು. ಶೇಕಡ 70 ತೀರ್ಪುಗಾರರ ತೀರ್ಪು, ಶೇಕಡ 30 ಪ್ರೇಕ್ಷಕರ ಆನ್ಲೈನ್ ವೋಟಿಂಗ್ ಮೂಲಕ ಅಂತಿಮ ತೀರ್ಪನ್ನು ಪ್ರಕಟಿಸಲಾಯಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಜಿಎಂ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಸುನಿಲ್ ಕುಮಾರ್ ಬಿ.ಎಸ್, ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ಉಪನಿರ್ದೇಶಕರಾದ ಡಾ. ಸಂತೋಷ್ ಕುಮಾರ್ ಎಂ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಾ ಬಿ.ಎಸ್ ಉಪಸ್ಥಿತರಿದ್ದು, ರಂಗೋತ್ಸವ-2025ರ ವಿನ್ನರ್ಸ್ ಟ್ರೋಫಿಯನ್ನು ಹಾಗೂ 10000 ನಗದು ಬಹುಮಾನವನ್ನು ಲಿಖಿತ ಮತ್ತು ತಂಡದವರಿಗೆ ಹಾಗೂ ಗೌತಮ್ ಮತ್ತು ತಂಡದವರಿಗೆ ರನ್ನರ್ಸ್ ಟ್ರೋಫಿ ಮತ್ತು 7500 ನಗದು ಬಹುಮಾನವನ್ನು ನೀಡಿದರು.

ಸಾಹಿತ್ಯ, ನಿರ್ದೇಶನ, ರಂಗಸಜ್ಜಿಕೆ ಎಲ್ಲವನ್ನು ಆಯಾ ತಂಡದ ವಿದ್ಯಾರ್ಥಿಗಳೇ ನಿರ್ವಹಿಸಿಕೊಂಡದ್ದು ವಿಶೇಷವಾಗಿತ್ತು. ಪ್ರಸ್ತುತ ಧಾವಂತದ ದಿನಮಾನಗಳಲ್ಲೂ ವಿದ್ಯಾರ್ಥಿಗಳಲ್ಲಿ ಹುದುಗಿರುವ ಈ ರಂಗ ಪ್ರೇಮ, ನಟನಾ ಚತುರತೆ ಪ್ರೇಕ್ಷಕರನ್ನು ಬೆರಗುಗೊಳಿಸಿತು.

ಕಾರ್ಯಕ್ರಮದ ಮೂರು ಹಂತಗಳಲ್ಲೂ ನಿಶಾ ನಿತ್ಯಾ ಕೆ, ಸಾಕಿದ್ ಬಿ.ಆರ್ ರವರು ಮನೋಜ್ಞವಾಗಿ ನಿರೂಪಿಸಿದರು ಹಾಗೂ ವಿದ್ಯಾರ್ಥಿ ವ್ಯವಹಾರಗಳ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿಯಾದ ಸಚಿನ್ ರವರು ಹಾಗೂ ಎಲ್ಲಾ ವಿಭಾಗಗಳ ಸಾಂಸ್ಕೃತಿಕ ವಿದ್ಯಾರ್ಥಿ ಪ್ರತಿನಿಧಿಗಳು ಕಾರ್ಯಕ್ರಮದ ಎಲ್ಲಾ ಹಂತಗಳು ಸುಸೂತ್ರವಾಗಿ ನೆರವೇರಲು ಸಹಕರಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕತೆ | ಮಾಯಮ್ಮ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ‍್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್‌ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.

ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.

ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ‍್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.

ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ‍್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ‍್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ‍್ಮ ತೆಗೆದು ರ‍್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ‍್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ‍್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ‍್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ‍್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.

ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ‍್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ‍್ವತಿಯೇ ಗರ‍್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ‍್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ‍್ಯವು ಜರುಗಿಸಬೇಕು ಎಂದನು. ರ‍್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ‍್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.

ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್‌ ಸೇನ್‌ ಬಾವ್‌ ಸೇನ್‌ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.

ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ‍್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ‍್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ‍್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್‌ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ‍್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ‍್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ‍್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ‍್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ‍್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕತೆ | ಚಿಗುರು ಹುಣ್ಣಿಮೆ

Published

on

~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್‌,ಕನ್ನಡಕ್ಕೆ: ಡಾ. ಶಿವಕುಮಾರ್‌ ಕಂಪ್ಲಿ

ಮಳೆಯ ಹನಿಗಳು ಸುರಿಯುತ್ತಲೇ ಇವೆ. ಅರ್ಧ ಕಾಡಿನಲ್ಲೇ ಇರುವ ಈ ನಟ್ಟ ನಡು ಮಧ್ಯಾನ್ಹದಲ್ಲಿ ಹನಿಗಳೇನೋಪಾ. ಎಲ್ಯಾನ ತಟುಗು ನಿಂದ್ರಬೇಕೆಂತಾ… ಸುತ್ತಲೂ ನೋಡಿದೆ. ಕಲ್ಲುಗುಡ್ಡದ ವಿನಾ ಮತ್ತೇನೂ ಕಾಣುತಿಲ್ಲ. ಹಂಗೇ…ಸರ ಸರನೇ ಏರಿ ಗುಡ್ಡದ ಮ್ಯಾಗಳಿಂದ ಕೆಳಾಕ ನೋಡಿದೆ. ನೆಲಕೆ ಅರಿಷಿಣವನ್ನೇ ಚಲ್ಲಿದಂತಿದೆ!

ಚಂಡು ಹೂಗಳ ಹಳದಿ ಬಣ್ಣವು ಹಸುರ ನಡುವೆ ಗೊಂಚಲು ಗೊಂಚಲಾಗಿ ಹರಡಿಕೊಂಡಿದೆ. ನೆಲದ ತುಂಬೆಲ್ಲಾ ಆ ಹೂಗಳ ಪರಿಮಳವೇ… ಸಣ್ಣಗೆ ಹರವಿಕೊಂಡಿದೆ.

ಚಂಡು ಹೂಗಳ ಮೇಲೆ ಮಳೆ ಹನಿಗಳು ಸುರಿಯುತಿದ್ದರೆ ನನ್ನನ್ನು ಹಳೆಯ ಹಳ್ಳಿಯ ಹಾಡುಗಳೆಲ್ಲಾ ಜಲ ಜಲನೇ…ನೀರ ಹರಿವುಗಳಂತೆಯೇ ಕವಿಯುತಿದ್ದವು.

ಗುಡ್ಡದ ಮೇಲಿಂದ ತಣ್ಣಗೆ ಬೀಸೋ… ಗಾಳಿಗೆ ಅಲ್ಲಾಡುತ್ತಾ… ಅಲ್ಲಾಡುತ್ತಾ ಚಂಡು ಹೂವುಗಳು ಮಣ್ಣು ಕಾಣುತ್ತಿವೆ. ಗಿಡಗಳಿಂದ ಕವುಚಿ ಬಿದ್ದು ತೇಲುತಿದ್ದ ಆ… ಹೂ ದಳಗಳು ಮಳೆಯೊಳಗೆ ಹೊರಟ ಪುಟಾಣಿ ದೋಣಿಗಳಂತೆ ಕಣಿವೆಯ ಬಳಿಗೆ ಓಡುತಿದ್ದವು.

“ಈ ಸಲ ಹೂ ಬೆಳೆಯೂ… ಕಡಿಮೆ ಆಗಿದೆ. ಮಳೆ ಗೂಡಾನೂ… ಕಡಿಮೆಯೇ.” ಎಂದುಕೊಂಡು ಗುಡ್ಡ ಇಳಿಯುತ್ತಾ ದೂರಕೆ ನೋಡಿದೆ.

“ ಓ…ಬರ್ತಾ ಅದಾಳಲ್ಲಪ್ಪೋ.. ಹುಡುಗಿ ಶಾಮಲ!”

“ತೋಟದಲ್ಲಿ ಕೊಯ್ದ ಚೆಂಡು ಹೂಗಳ ಪುಟ್ಟಿಯನ್ನು ಶಾಮಲಾಳು ತನ್ನ ನೆತ್ತಿಯ ಮೇಲಿಟ್ಟುಕೊಂಡು ಮಾಲಿಕ ತೋರಿಸಿದ ಜಾಗಕ್ಕೆ ನಡೆಯುತಿದ್ದರೆ… ಆಹಾ… ಆಕೆಯ ನಡಿಗೆಯ ಕಡೆಗೇನೇ…ಹಂಗಾ… ನೋಡಬೇಕೆನಿಸುತ್ತದೆ”

ಆದರೂ ನಮ್ಮ ಅಪ್ಪನಿಗೆ ತಿಳೀದಂತೆಯೇ ಏನಾರ ಮಾಡಬೇಕು.

ತಿಳಿದರೆ ಇನ್ನೇನಕ್ಕಾತಿ!

ಮನಿಯಿಂದ ಹೊರ ದಬ್ಬದೇ ಸುಮ್ಮಕಿರತಾನೇನು?

ಮೊನ್ನೆ ಪೀರಮ್ಮವ್ವನ ಕೂಡ ಆಕಿಯನ್ನು ಕರಕೊಂಡು ಬಾ ಅಂತ ಹೇಳಿಕಳಿಸಿದರೆ ʼ ನಾನು ಅಂತವಳಲ್ಲಪ್ಪೋ… ಅಂತೇಳು ʼ ಎಂದು ಹೇಳಿಕಳಿಸಿದಳಂತೆ.

ಇನ್ನ ಮಾಡೋದೇನೈತಿ?

ಆಕಿಯ ರೂಪವೇ… ನನ್ನನ್ನ ಅದುಮಿ ಅದುಮಿ ಕೊಲ್ಲುತ್ತಿರುವಾಗ ನನ್ನ ಗಂಡುತನವಾದರೂ ಸುಮ್ಮಕಾ ನಿದ್ದಿ ಮಾಡೀತಾ? ಆಕಿನ್ನ ಪಡಕೊ ತನಕ ಆಕಿಯ ರೂಪವೇ ….ಗುರ್ತಿಗೆ ಬಂದು..ಬಂದೂ… ಸಾಯಿಬಡಿತಿರತೈತಿ….

ಮಳೆಹನಿಗಳಲ್ಲಿ ಉಸುರುಗಟ್ಟುವಂತೆ ಮೈಯೆಲ್ಲಾ ಹೂ ಗಂಧದ ಪರಿಮಳವ ತುಂಬಿಕೊಂಡು. ಆ… ತೊಯ್ದ ಬಟ್ಟೆಗಳಲ್ಲಿ ಬಳುಕುತ್ತಾ… ಮೈದೋರುತ್ತಾ…..ಬರುತಿದ್ದರೆ ಆಕಿನಾ..ಮುಟ್ಟದೇ… ಹೆಂಗಿರಲಿ?

ಅವಳ ಮೈ ನನ್ನ ಉಸಿರುಗಟ್ಟಿಸಿದೆ.

ಆಕಿಯ ಹಿಂದೆ ಆ ಕೂಲಿಯ ಹೆಂಗಸರು ಇರದೇ ಇದ್ದರೆ ಆ ಸುದ್ಧಿಯೇ… ಬೇರೆ ಇತ್ತು.

ಅವನೌನ್ ತಪ್ಪಿಸಿಕೊಂಡಳು!

ಅಲ್ಲಾ…

ʼನನ್ನ ನೋಡಿಯೂ ನೋಡದಂಗ ಹೊಕ್ಕಾಳಲ್ಲ…!ʼ

ನಾನೂ…

ಅವಳು ಹ್ವಾದ ಕಡೆಗೇ ತಿಕ್ಕಲೆದ್ದು ನೋಡುತಿರುವೆ.

***

ರಾತ್ರಿ ಮಲಗಿದೆನಾದರೂ ನಿದ್ದಿ ಬರಲಿಲ್ಲ.

ಆಕಿಯ ಆಲೋಚನೆಯೊಳಗೇ ಮುಣುಗಿದ್ದಾಗ ನನ್ನ ಪಕ್ಕಕ್ಕೆ ಬಂದು ಕುಂತ ಸಾಂಬಶಿವ.

ಆ ಮಾತು, ಈ ಮಾತೂ ಮಾತಾಡಿದಮೇಲೆ… ಸಣ್ಣಗೆ ಗುಡಿಸಲುಗಳ ಕಡಿಗೆ ಇರುವ ಶ್ಯಾಮಲ ಸುದ್ದಿಯನ್ನು ತೆಗೆದಿಟ್ಟೆ.

ಸಾಂಬ ಬಿದ್ದು ಬಿದ್ದು ನಗತೊಡಗಿದ.

“ ಹಂಗ್ಯಾಕ್‌ ನಗತೀಯಾ… ನಿನ್ನಾಪ್ನಿ!

ಏನಾನ ಇದ್ದರ ವದರಿ ಬಿಸಾಕು.

ಸುಮಕಾ… ಆ ಪಾಟಿ ನಕ್ಕರೆ ನಾ ನೇನ್‌ ಅನಕಾಬೇಕಲೇ…ಬೆಪ್ಪಗಾ” ಅಂತ ಮುಖ ಗಂಟಾಕಿಕೊಂಡೆ.

ಸಾಂಬ ನನ್ನ ಮಾತನ್ನ ಲೆಕ್ಕಕ್ಕೂ.. ತಗಳದಲೇ.. ನಗುತ್ತಲೇ ಇದ್ದ.

ಸಾಂಬಶಿವ ನಮ್ಮ ಮನಿಮಗ.

ನನಗಿಂತಲೂ ಎರಡು ಮೂರು ವರ್ಷ ದೊಡ್ಡಾನು.

ಇಬ್ಬರೂ ಒಂದೇ ಕುಲದವರು.

ನಾ ಸಣ್ಣವನಿದ್ದಾಗ…..

ನಮ್ಮಪ್ಪರು ಗವಿ ಸಿದ್ದೇಶ್ವರನ ಜಾತ್ರೆಗೆ ಹೋಗಿ ಬರುವಾಗ ಹುಲಿಗೆಮ್ಮನ ಗುಡಿಯ ಛತ್ರದೊಳಗ ಈ…  ಸಾಂಬ ಕಂಡನಂತೆ. “ ಯಾರೂ ದಿಕ್ಕಿಲ್ಲಯ್ಯಾ.. ನಾನೂ ನಿಮ್ಮ ಎತ್ತಿನ ಬಂಡಿ ಜೊತಿಗೇ ಬರ್ತೀನಯ್ಯ…” ಎಂದು ಬೆನ್ನು ಬಿದ್ದನಂತೆ.ಆಗ ಕರಕ ಬಂದು ಬೆಳಸಿದರು. ಆ ಕೆಲಸ ಈ ಕೆಲಸ ಮಾಡಿಸುತ್ತಾ ಸಾಕಿದರು. ಮನುಸಾ ಒಳ್ಳೆಯವನೇ. ಬಲು ಸೌಮ್ಯ. ನಮ್ಮ ಊರಿನೊಳಗಾ ನನಗೆ ಅಗ್ದೀ…ಇಷ್ಟದವ ಕೂಡಾ. ಹೊಲದ ಕಡೆಯೇ ಇದ್ದು ಹೊಲ ಕಾಯುತ್ತಾನೆ. ಬೆಳೆಗೆ ನೀರುಣಿಸುತ್ತಾನೆ. ಯಾವ ಕೆಲಸ ಹಿಡದ್ರೂ… ಅದು ಆಗುವ ತನಕ ಬಿಡಲಾರ.

ಊರೊಳಗ ಎಲ್ಲರೂ ʼ ತಿಕ್ಕ ಸಾಂಬ” ಅಂತಾರೆ. ಯಾರು ಏನಂದ್ರೂ… ಯಾವುದನ್ನೂ ಮನಸಿಗೆ ತಗಳ್ಳಲಾರ.

ಸಾಂಬನ ಕಥೆ ಸಾಂಬನದೇ.ಆತನ್ನ ಕೆಲಸ ಏನೋ.. ಆಟೇ…!

ಸಾಂಬ ಇನ್ನಾ… ನಗುತ್ತಲೇ ಇದ್ದಾನೆ.

ನನಗೆ  ಉರಿಯಿತು.

“ ಥೂ… ನಿನ್ನವೌನ್‌ ನಿಲಸಾ!” ಗದರಿದೆ.

“ ಇರ್ಲಿ ಹೋಗ್‌ ಸಾಮೀ…. ನಿನ್ ಯವಾರ ನನಗೇ ತಿಳೀದೇನು? ಆ ಯವ್ವನ ಸುದ್ದೀ… ತಗದೀ ಅಂದ್ರ ಆ ಗದ್ದಲೇನು ನನಗೆ ಗೊತ್ತಾಗದಾ” ತರಿ…ನಾ..ನಾ…ನಾ.. ಕಣ್ಣೆಗರಿಸುತ್ತಾ ಸ್ವರವೆತ್ತಿದನು ಸಾಂಬ.

“ ಹೌದು.. ಬಿಡಾ ಆಕಿಗೂ ನನಗೂ ದೊಡ್ಡ ರಂಪಾಟ ಐತಿ ” ಅಂದೆ ವ್ಯಂಗ್ಯವಾಗಿ.

“ ಓ…ರಂಪಾಟದ ತನಕಾ ಹೋಗೇತಿ ಅಂದಮ್ಯಾಕ ಕತಿ ದೊಡ್ಡದಾ ಐತಿ ಅನ್ನು, ಇಲ್ನೋಡು ಯಣ್ಣಾ…. ಚೊಲೋತನಂಗ ಸರಿಮಾಡ್ಕಾ!” ಬೀಡಿಗೆ ಬೆಂಕಿ ಇಡುತ್ತಾ ಹೇಳಿದ.

“ ಸರಿ ಮಾಡ್ಕಂಬಾಕ ಹೋಗಲಿಲ್ಲ ಆಂದ್ರ, ನೀ.. ಹೇಳಿ ಸರಿ ಮಾಡಸೋ ಸೂರ” ಎಂದೆ.

ತತ್ತರಗೊಂಡ ಸಾಂಬ “ ಸ್ವಾಮೀ ನಮಪ್ಪಾ… ಏನೋ ಕಣದ ಹತ್ರ, ಹೊಲದ ಹತ್ರ, ಸಿವನೇ ದೇವ್ರೇ ಅಂತಾ, ಬಡವ ನೀ ಮಡಿಗದಂಗಿರು ಅಂದುಕಂಡು, ನಾ…ದುಡಕಂಡಿರೋನು. ನನ್ನನ್ಯಾಕಪೋ ಇರಕಸ್ತೀಯ, ನೋಡಪ್ಪಾ…ನಿನಗ ಸಿಟ್ಟಿದ್ದರ ನಾಕು ಹೊಡದು ಹೊಂಟು ಬಿಡು.ಇಗಾ…ಇಲ್ನೋಡು… ಒಂದು ದೊಡ್ಡ ನಮುಸ್ಕಾರನಪ್ಪೋ” ಎಂದ.

“ ಅಲ್ಲಲೇ ಸಾಂಬಾ ನನಗೇನೋ ಆಕಿದಾ… ಚಿಂತಿ ಹಿಡದು ಬುಟ್ಟಾತಿ. ಆಕಿ ಮನಸು ನೋಡಾನಾ ಅಂದ್ರ …ಎಂಗೈತೋ ಏನೋ ನಾ ಕಾಣೆ!” ಎಂದು ನಿಟ್ಟುಸಿರಿಟ್ಟು ಹೊರಳಿಕೊಂಡೆ.

***

ಬೆಳಕಾಯಿತು.

ಯಾವದೋ ಹಾಡು ಕಿವಿಗೆ ಬಡೀತಿತ್ತು.

“ ರಕ್ಕಸ ನಾಶಕನಿಗೆ ಶರಣೆನ್ನಿರೋ…

ಯದುಕುಲ ನಂದನನಿಗೆ ಶರಣೆನ್ನಿರೋ…

ಬೆಟ್ಟವಾ ಹಿಡಿದೆತ್ತಿ ಭಕುತರ ಭಗುತಾರಾ ಉಳಿಸೀದ…

ಗೋವರ್ಧನ ಸಾಮಿಗೆ ಶರಣು…ಶರಣೆನ್ನಿರೋ..”

ಆ… ದನಿಯನ್ನ, ಎಲ್ಲೋ… ಚಲೋತನಾಗಿ, ಕೇಳಿದಂಗೇ…ಕಾಣುತೈತಿ! ಮನಿ  ಮಾಡಿಯಿಂದ ಇಳಿದು ಕಿಟಕಿ ಹತ್ರ ಬಂದು ಬಗ್ಗಿ ಕೆಳಗೆ ನೋಡಿದೆ. ಹೆಂಸರೆಲ್ಲಾ… ಮಣ್ಣಿನ ಮಡಕೆಗಳಿಟ್ಟುಕೊಂಡು ಸುತ್ತಲೂ ಕುಂತು ಹಾಡುತಿದ್ದಾರೆ. ಹೌದು ಇವರೆಲ್ಲಾ ಚಿಗುರು ಹುಣ್ಣಿಮೆಗಾಗಿ ಮನೆ ಮನೆಗೆ ಬಂದು ಬೀಜಗಳನ್ನು ಎತ್ತಲು ಬಂದವರು.

ಚಿಗುರ ಹುಣ್ಣಿಮಿಯ ಹಾಡೆಂದರೆ ನನಗೆ ಸಣ್ಣವನಿದ್ದಾಗಿನಿಂದಲೂ ಬೊಲು ಖುಷಿ.

ಚಿಗುರ ಹುಣ್ಣಿಮೆಯು ಒಂದು ಸೊಗಸಾದ ಪ್ರಕೃತಿ ಹಬ್ಬ. ಅದು ವಿಶಿಷ್ಟವಾದ ಅಪ್ಪಟ ಮಹಿಳೆಯರ ಹಬ್ಬ.ರಾಯಲ ಸೀಮೆಯ ವೈಭೋಗದ ಹಬ್ಬ.ಕೃಷಿ ಪರವಾದ ಸಂಪ್ರದಾಯವನ್ನು ಸೂಸುವ ಈ ಸಾಂಸ್ಕೃತಿಕ ಹಬ್ಬವು ಪಾರಂಪರಿಕ ಬೀಜಗಳನ್ನು ತಲೆ ತಲೆಮಾರುಗಳಿಂದ ರಕ್ಷಿಸುವ ಮನೆಗೂ ಲೋಕಕ್ಕೂ ಹಂಚುವ ಪೂರ್ವಿಕರ ಪ್ರೀತಿಯ ಹಬ್ಬ.

ಇಲ್ಲಿ ಹುಣ್ಣಿಮೆಗೂ ಮೊದಲು ಮಹಿಳೆಯರು ಮನೆ ಮನೆ ಸುತ್ತಿ ಹನ್ನೆರಡು ಬೀಜಗಳನ್ನು ಸಂಗ್ರಹಿಸುತ್ತಾರೆ. ಹಸುವಿನ ಸಗಣಿ,ಗೋಮೂತ್ರ,ಮಡಕೆಗಳಲ್ಲಿ ಕೆಂಪು ಮಣ್ಣು ,ಕಪ್ಪು ಮಣ್ಣು, ಉಸುಗು ಬೆರಸಿ ಬೀಜಗಳನ್ನು ಬೆಳೆಸುತ್ತಾರೆ.

ಹುಣ್ಣಿಮೆ ಪೂಜೆಯ ದಿನ ಗೊರಚಿಯನ್ನ ಮಾಡಿ  ಗುಲಗಂಜಿಗಳ ಕಣ್ಣನ್ನು ಇಟ್ಟು, ಕಣಗಿಲೆ ಹೂ , ಗರುಕೆ, ಹರಿಷಿಣ ಕುಂಕುಮದೊಂದಿಗೆ ಪೂಜೆಗಳನ್ನು ಮಾಡಿ, ಈ ಮೊದಲು ಮಡಿಕೆಗಳಲ್ಲಿ ಬೆಳೆದ ಬೀಜದ ಸಸಿಗಳನ್ನು ತಲೆಮೇಲೆ ಹೊತ್ತುಕೊಂಡು ಅದ್ದೂರಿಯ ಮೆರವಣಿಗೆಯಲ್ಲಿ ಹತ್ತಿರದ ಕೆರೆ ಅಥವಾ ದೇವಾಲಯಗಳ ನೀರಿನ ಬಾವಿಗಳ ಬಳಿ ಇಟ್ಟು ಪೂಜಿಸುತ್ತಾರೆ.

ಇದು ಮಳೆಯ ಮತ್ತು ಫಲವಂತಿಕೆಗಾಗಿ ದೇವತೆಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ. ದುಡಿವ ಭಕ್ತರು ತಮ್ಮ ಭಕಿಯನ್ನು ಪ್ರಕೃತಿಗೆ ಸಮರ್ಪಿಸುವ ಒಂದು ವಿಧಿ ವಿಧಾನ.

ನಾನು ಚಿಕ್ಕಂದಿನಲ್ಲಿ ಬೀಜಗಳ ಎತ್ತಲು ಮನೆ ಮನೆ ತಿರುಗೋ ಹೆಣ್ಣು ಹುಡುಗಿಯರ ಹಿಂದೆಯೇ ತಿರುಗುತಿದ್ದೆ. ನಮ್ಮಮ್ಮ ಬೈತಿದ್ದಳು.

“ ನೀನೇನರಾ… ಹುಡುಗಿಯಾನಾ? ಹಂಗ ಬರತೀ…” ಅಂದು ಸುತ್ತ ಮುತಲವರೆಲ್ಲಾ ನಗಚಾಟಿಕಿ ಮಾಡ್ತಿದ್ರು.

ಈ…. ನೆನಪಿನ ಅಲೆಯೊಳಗ ನಾನು ಮುಳುಗಿರುವಾಗ ದೂರದಿಂದ ಇನ್ನೊಂದು ಹಾಡು ಕೇಳಿಸಿತು…

“ ಪಾಪ ನಿಧಿ ಶಿಶುಪಾಲನು ಬೈಯ್ಯಲು

ಕೋಪ ಕೆರಳಿ ಹತಗೈದ ಮುರಾರಿಗೆ ಶರಣೆನ್ನಿರೋ..

ಹಿಡಿ ಹಿಡಿದು ಸೀಳುವ ಜರಾಸಂಧನ ಮುಗಿಸಿದ

ಲೋಕ ಪಾಲಕ ಗೋಪಾಲನಿಗೆ ಶರಣೆನ್ನಿರೋ”

ಹೌದು ಈ ದನಿ ಆಕಿಯದೇ.. ಹಾಡುವ ಚಿಕ್ಕ ದೊಡ್ಡ ಹೆಣ್ಣು ಮಕ್ಕಳ ಆ… ಗುಂಪಿನಲ್ಲಿ ಈ… ಹುಡುಗಿಯೂ ಇದ್ದಾಳ.

ಚಕ ಚಕನೇ ಮೆಟ್ಟಿಲುಗಳ ಇಳಿಯಬೇಕು ಅನಿಸುತ್ತಿದೆ.

ಆಕಿಯ ಸುದ್ಧಿ ಏನೋ… ನೋಡಬೇಕು.

ಆದರೂ… ಅದು ಆಗದ ಕೆಲಸವೇ….

ನಮ್ಮಪ್ಪ ಅಲ್ಲಿಯೇ ನೋಡಾಕತ್ಯಾನ!

ನಮಮ್ಮ ಮರದೊಳಗೆ ಜೋಳ ತಂದು ಅವರ ಪುಟ್ಟಿಗೆ ಸುರುವಿದಳು. ನಮ್ಮಪ್ಪಪ ಚಂಡು ಹೂವು, ಮಲ್ಲಿಗೆ ಹೂಗಳನ್ನು ತಂದುಕೊಟ್ಟ. ಆ… ಹೆಣ್ಣುಮಕ್ಕಳೆಲ್ಲಾ ಅವುಗಳನ್ನು ತಲಾಕೊಬ್ಬರು ಹಂಚಿಕೊಂಡು ತಮ್ಮ ತಮ್ಮ ಪುಟ್ಟಿಗಳಲ್ಲಿ ಇಟ್ಟುಕೊಂಡರು.

***

ಈಕೆ ಕೊಯ್ದು ತಂದ ದುಂಡು ಚಂಡುಹೂನಂತಹ ಸಂಜೆ ಸೂರ್ಯನ ಹಾಗೆಯೇ ಕುಳಿತಿದ್ದಳು.

ಆಕೆಯ ಬಣ್ಣಕೆ ಚಂಡುಹೂ ಬೆಳಗು ಪಸಂದಾಗಿ ಹೋಲುವಂತಿದೆ.

ಹಂಗೇ… ನೋಡುತ್ತಾ ಹ್ವಾದೆ.

ಅಷ್ಟರೊಳಗೆ ನಮ್ಮ ಸಾಂಬನೂ ಕೂಡ ಚಿಟ್ಟೆಯ ಹಾಗೆ ಅವರೊಳಗೆ ಸೇರಿ ಬೀಜಗಳನ್ನು ಮಣ್ಣ ಮಡಕೆಗಳಿಗೆ  ಹಾಕುತ್ತಾ ತಟ್ಟುತ್ತಾ….ಕುಳಿತ. ಇವನೊಬ್ಬ ಹುಚ್ಚರಾಯ ಅಂದುಕೊಂಡೆ.

ಅವರ ಜೊತೆಗೆ ಹಕ್ಕಿಗೆ ಹಕ್ಕಿಗಳು ಕಲೆತು ಕೊರಳೆತ್ತುವಂತೆಯೇ…..ಸಾಂಬನೂ ಸ್ವರವೆತ್ತಿದನು.

“ಗೋಪಿಕೆಯರ ರಾಜನಿಗೆ ಶರಣೆನ್ನಿರೋ…

ಗೋಪಾಲ ಬಾಲನಿಗೆ ಶರಣೆನ್ನಿರೋ…

ರಾಸಲೀಲೆಗಳ ಕಲಿಸಿದ ರಮಣಿ ರಾಧೆಗೆ ಶರಣೆನ್ನಿರೋ..

ಮುರಳಿಗಾನದ ಮಹಾ ಮಹಿಮನಿಗೆ ಶರಣೆನ್ನಿರೋ”

ಸಾಂಬನ ಹಾಡು ಕೇಳಿ ನನಗೆ ನಗು ತಡೆಯಲಾಗಲಿಲ್ಲ. ಹೆಣ್ಣುಮಕ್ಕಳು ಕೂಡಾ ಅವನ ಜೊತೆಗೂಡಿ ಜಿಂಕೆಗಳಂತೆ ಹೆಜ್ಜೆ ಹಾಕುತಿದ್ದಾರೆ. ನಮ್ಮಪ್ಪ ನಾಲ್ಕು ರೂಪಾಯಿಗಳನ್ನು ತೆಗೆದು ನಗು ನಗುತ್ತಲೇ ಸಾಂಬನ ಕೈಗಳಿಗಿಟ್ಟ.

***

ಸಂಜೆಯಲ್ಲಿ ಸಣ್ಣಕ ಚಾವಡಿ ತಾವಿಂದಾ ಕುರುಬರು, ಬ್ಯಾಡರ ಓಣಿ ದಾಟಿಕೋಂತಾ…ನಾನು ಸುಡಗಾಡ ಬೇಲಿ ದಾರಿ ಹಿಡಿಯೋದೇ ಗುಡಿಸಲ ಹತ್ರಕ್ಕ. ನಾಳೆ ಮುಂಜಾನಿ ಗುಡಾ ಹಂಗಾ ಹೊಂಟು ಅವರನ್ನ ಕೂಲಿ ಕೆಲಸಕ್ಕೆ ಬರ್ರೆಂದು ಕರೀಬೇಕಂತ ಅದೀನಿ. ಅಂದುಕೊಂಡಗಾ.. ಕೆಲಸ ಆತ ಅಂದ್ರ ಆ ಗುಡಿಸಲ ಹತ್ರನಾ.. ಆ ನೆರಕಿಯೊಳಗಾ… ಆಕಿ ಜೊತಿ ಕಲತು ಒಂದು ಗಿಲ್ಲಿನ.. ಗಿಲ್ಲಿಕೊಂಡು ಬರಬೇಕಂತನಾ ಐತಿ.

ಪೀರಮ್ಮವ್ವಗ ಕಡ್ಡಿಪುಡಿ ಕಟ್ಟಿಸಿಕೊಂಡೆ. ಆಯವ್ವನಿಗೆ ಅದಂದ್ರ ಅದೇಟು ಆಸಿನೋ. ಯವಾಗನಾ ನೋಡು ಎಲಿ ಅಡಕಿ ಜೊತಿಗೆ ಸುರಿವಿಕೊಂಡು  ಸ್ವಾಟಿತುಂಬಾ ತುಂಬಿಕೊಂಡು ನಮಲುತಾನಾ ಇರ್ತಾಳ. ಇಕೀನಾ ಹೆಂಗಾನಾ… ಮಾಡಿ ಆ ಹುಡುಗಿತಾಗ ಮಾತಾಡಿ ಬಾ ಅಂತ ಕಳಿಸಿದ್ರಾ…. ಆ ಹುಡುಗಿ ಒಪ್ಪಿಕ್ಯಂತಾಳೋ ಇಲ್ಲೋ…

ಮತ್ತೇ… ನನ್ನ ಚಿಂತಿ ನನಗಾ…

ನಾನು ಗುಡಿಸಲ ಹತ್ರಕ್ಕ ಹೆಜ್ಜಿ ಇಟ್ನೋ ಇಲ್ಲೋ ಅಲ್ಲಿರೋ ನಾಯಿಗುಳು ಬೊವ್…ಅಂತಾನಾ ಮುಗಿಬಿದ್ವು. ದಿಗಿಲು. ಓಡಿ ಹ್ವಾದರಾ… ಬೆನ್ನ ಹತ್ತುತಾವು. ಹೆಂಗ ಮಾಡೋದಪ್ಪಾ…ಅಂತಾ… ಅಡ್ಡಬಿದ್ದು ಸಂದಿ ತೂರಿ ತಡಿಕೆಗಳನ್ನ ದಬ್ಬಲು ಹೋಗಿ ನೀರ ತೊಟ್ಟಿಯೊಳಗೆ ದುಬುಕ್ಕನೇ ಬಿದ್ದೆ!

ತೊಟ್ಟಿಯ ಮುಂದೆ ನಿಂತ ನಾಯಿಗಳು ಬೋ….ವ್… ಎಂದು ವೊದರಾಟ ಏರಿಸಿದವು..

ತಟುಗಾ… ಎದ್ದು ಹಂಗಾ..ಅಣುಕಿ ನೋಡಿದೆ.

ಎದುರಲ್ಲೆ… ಈಕಿ!

ಈಕೀನಾ… ಶ್ಯಾಮಲ.

ತೊಟ್ಟಿಯೊಳಗ ಬಿದ್ದ ನನ್ನ ನೋಡಿ ಬಿದ್ದು ಬಿದ್ದೂ ನಗುತಿದ್ದಾಳೆ!

“ಛೇ” ಹೋಗಿ ಹೋಗಿ ಈಕಿ ಕಣ್ಣಮುಂದೇ ಬಿದ್ನಲ್ಲೋ ಥತ್…ಇವನೌವ್ನ್     ಹಡಿಬಿಟ್ಟಿ ಹೊಲಸು ನಾಯಿಗಳ್ನಾಢ…ಛಾ…” ಬೈಕೊಂಡೆ.

“ ಮೆಲ್ಲಕ ಏಳ್ರೀ ಸಾಮಿ.” ಎಬ್ಬಿಸಲು ಬಂದಳು ಆ ಹುಡುಗಿ. ನಾನೇ ರೋಷದಿಂದ ಗಡಬಡಿಸಿ ಮ್ಯಾಕ ಎದ್ದೆ.

ಅಲ್ಲಿಗೇ ಪೀರಮ್ಮವ್ವ ಗೂಡಾನು ಬಂದಳು.

“ ಏನ್‌ ಸಾಮಿ… ಹೇಳಿ ಕಳಿಸಿದ್ದರೆ ನಾವೇನು ಬರತ್ತಿರಲಿಲ್ಲವೇ…” ಅಂದಳು.

ತಂದಿದ್ದ ಆ ಚೀಟಿಯ ಕಡ್ಡಿಪುಡಿಯನ್ನು ಆಕಿ ಕೈಗೆ ಕೊಡತ್ತಾ “ಅಯ್ಯಾ…ತಟುಗು ನೋಡಿಕ್ಯಂಡು ಹೋಗಾನಾ ಅಂತನಾ ಬಂದನೇಳಬೇ… ಈ ಹಡಬೀ… ನಾಯಿಗಳ ಕಡೀಂದನಾ..ಕಡಕಂಡು ಬಿದ್ದೆ” ಎಂದೆ.

“ ಯಪ್ಪಾ…ಬಂಗಾರದಂತಾ.. ಬಟ್ಟಿಗಳೆಲ್ಲಾ ತೊಯ್ದು ಹೋಗ್ವಾವಲ್ಲೋ ಸಾಮಿ. ತರಾಪ್ಪೋ… ಬಿಸಿಲಿಗೆ ಹಾಕಿ ಅರಿಸಿಕೊಡುತೀನಿ” ಅಂತ ಇಸಗೊಂಡಳು.

ನಾ..ಆ ಹುಡುಗಿಯ ಕಡಿಗೇ ಕಣ್ಣ ಬಡಿಯದಂತೆ ನೋಡಿದೆ.

ಆಕಿ ಹಂಗಾ… ತಲೆಬಗ್ಗಿಸಿಕೊಂಡು ಗಡಿಸಲೊಳಗೆ ಹ್ವಾದಳು.

ಮತ್ತೆ ಸ್ವಲ್ಪೊತ್ತು ಬಿಟ್ಟು ಹೊರಾಗ ಬಂದು ಗಂಗವ್ವನ ಗುಡಿ ಹತ್ರ ಕಾರ್ತೀಕದ ದೀಪ ಹಚ್ಚೋದೈತಿ ಅಂತ ಸರಸರನೆ ಹ್ವಾದಳು.

ನಾ… ಆಕೆಯ ನಡಿಗೆಯ ಗತ್ತನ್ನು ನೋಡುತ್ತುಲೇ ಇದ್ದೆ.

“ ದೀಪಾರತಿ ಯದಕ್ಕವೋ…?”ಪೀರಮ್ಮವ್ವನನ್ನು ಕೇಳಿದೆ.

“ ಗಂಗಮ್ಮ ತಾಯಿಗೆ ಸಾಮಿ. ಆಕಿ ತಣ್ಣಗಿರಬೇಕಲ್ಲ. ಅಲ್ಲೇ ಅಜ್ಜಯ್ಯ ಅದಾನ. ಕೋಲಾಟ, ಭಜನೆ, ತತ್ವಪದ ಎಲ್ಲನೂ ಕಲಿಸುತಾನ. ಪರುವಿಗೆ ನಾವೆಲ್ಲ ಅಲ್ಲಿಗೇ ಹೊಕ್ಕಿವಿ. ಹಟ್ಟಿಯೊಳಗ ಚಿಕ್ಕರು,ದೊಡ್ಡರೂ ಎಲ್ಲಾ… ಅಲ್ಲಿಗೇ ಬರತಾರ. ಬಲು ಚಂದಾಗೈತೆ ಹೊಸ ಮೂರ್ತಿ” ಹೇಳಿದುಳು.

ಮಾತುಗಳ ನಡುವ ನೇತು ಹಾಕಿದ್ದ ಹಲಗಿ ಜಾರಿ ಗುಡಿಸಲ  ಮೂಲೆಗೆ ತಾಗಿದ ಹಂಚಿನ ಮೇಲಿಂದ ನೆಲಕ್ಕ ಜಿಗಿದು ಬಿತ್ತು.

“  ಇದುನ್ನ ಯಾರು ಬಡಿತಾರ ಬೇ…?” ಕೇಳಿದೆ.

“ ನನ್ನ ಮಗ. ಕೊಂಡಯ್ಯ ಹೊಡಿತಾನ ಬಿಡಪ್ಪೋ….” ಗೊಣಗುತ್ತಾ ಅದನ್ನು ಎತ್ತಿಕೊಳ್ಳುತ್ತಾ ಹೇಳಿದಳು. ಹಲಿಗೆಯ ನಾದವೆಂದರೆ ನನಗಿಷ್ಟ ಕಣವ್ವ. ಚಿಗುರು ಹುಣ್ಣಿಮೆಯ ಮೆರವಣಿಗೆಯೊಳಗ ನಾನ್ಯಾವಾಗಲೂ ನೋಡೋದು ಅದ್ನೇ. ಬೆಂಕಿಗೆ ಹಲಗಿ ಕಾಸಿ ಭುಜಕ್ಕೆ ಹಾಕ್ಕೊಂಡು ಗಣಿಗೋಲುಗಳಿಂದ ಸುಮ್ಕಕಾ…ಹೊಡದರೆ ಅದು ಎಬಿಸೋ ನಾದಕ್ಕೆ ಯಾದು ಸಮ ಹೇಳು? ಕಿವಿಗೆ ಆನಂದವೇ ಬುಡು. ರೋಷ, ಆವೇಶಕ್ಕೆ,ಕುಣಿತಕ್ಕೆ ತಕ್ಕನಾದ ನಾದ ಅದು.

ಪೀರಮ್ಮವ್ವನ ಜೊತಿಗೆ ಮಾತಾಡುತ್ತಿರುವಾಗಲೇ ಗಂಗಮ್ಮನ ಗುಡಿ ಒಳಗಿನ ಸದ್ದು ಶುರುವಾಯಿತು. ಆ ಹುಡುಗಿಯ ದನಿ ಕೇಳುತಿದೆ.

“ಹರಿಕೆಯ ಕಟ್ಟಿಕೊಳ್ಳುತೇವೆ ಗಂಗಮ್ಮಾ ತಾಯಿ.

ಬೆಳ್ಳಿ ಮುಖವಾಡ ಮಾಡಿ ನೀಡುತ್ತೇವೆ ಗಂಗಮ್ಮಾ ತಾಯಿ”

ಬೆಳ್ಳಿ ಮೀಸೆಗಳ ಮಾಡಿಸಿಕೊಡುತೇವೆ ಗಂಗಮ್ಮಾ ತಾಯೀ

ಚಂದಾಗಿ ನಮ್ಮನ್ನು ನೋಡು ಗಂಗಮ್ಮಾ ತಾಯಿ..”

ನಾ ಬಂದ ಕೆಲಸ ಇನ್ನ ಕಲಸವಾಗದ ಕೆಲಸ ಅಂತಾ ಅರ್ಥವಾಯಿತು. ನಾ… ಅಲ್ಲಿಂದ ಹೊಂಟೆ. ತಾಯಿ ತನ್ನ ಮಗ ಕೊಂಡಯ್ಯನನ್ನು ಕರಕೊಂಡು ಹೊಂಟಳು. ದೂರದ ಗುಡಿಯಾಗ ಆಕಿಯ ಹಾಡು ಕೇಳುತ್ತಲೇ ಇತ್ತು.

“ ಮತ್ತೆ ತಪ್ಪಿಸಿಕೊಂಡಳು ಇವಳವೌನ್” ಅಂದುಕೊಂಡೆ.

***

ಮನೆಗೆ ಬಂದು ಮಲಗಿದಾಗಲೇ ಆ ಹುಡುಗಿ ನೆನಪಾಗಿದ್ದು. ಅಲ್ಲ….ನೆನಪಲ್ಲ…ನನ್ನ  ನಿದ್ದಿಯ ಗಳಲ ತುಳಿಯುತಿದ್ದಾಳೆ. ಅಂದಕಂಡು ಮನಶ್ಯಾಂತಿಗಾಗಿ ಸಾಂಬನ ಹತ್ತಿರಕ್ಕ ಹ್ವಾದೆ.

“ ಏನ್‌ ಸಾಮಿ.. ಇಟು ರಾತ್ರಿಯೊಳಗಾ… ಬಂದಿರಿ” ಅನ್ನುತ್ತಲೇ ಹಾಸಿಗೆಯಿಂದ ಎದ್ದು ಕುಳಿತ.

“ ಮನಿ ಹತ್ರ ನಿದ್ದಿ ಹತ್ವದೇ..ಬಂದೆ ಬಿಡಾ.. ಆದ್ರೇ… ಆ ನಗೆಚಾಟಿಕೆಯ ಮಾತುಗಳ, ಯಾದೋ ಒಂದು ಕತೆ ಹೇಳೋ…ಪಾ…” ಅಂದೆ ಹಾಸಿಗೆ ಮೇಲೆ ಉರುಳುತ್ತಾ.

ನಿದ್ದೆ ಬರದಾಗಲೆಲ್ಲಾ ಸಾಂಬನ ಹತ್ತರಕ್ಕೆ ಬಂದು ಯಾವುದೋ ಒಂದು ಕತೆ ಕೇಳುತ್ತಾ ನಿದ್ದೆ ಹೋಗೋದು ನನಗ ಹಳೇ  ಚಾಳಿ.

ಸಾಂಬ ಕತೆ ಹೇಳಾಕ ಶುರು ಮಾಡಿದ.

ಹಂಗಾನಂಗಾ…. ಒಂದು ಚೋಳರ  ರಾಜ್ಯ. ಆ ರಾಜ್ಯದ ರಾಜನಿಗೆ ಒಂದು ಸಮಸ್ಯೆ ಬಂದಿತು. ಊರೊಳಗೆ ಬೇವಿನ ಮರ, ಅರಳೀ ಮರ ಕೂಡಿ ಹೆಣಕೊಂಡಿದ್ದವು ಆ…ಮರಗಳ ಹತ್ತಿರ ನಡುರಾತ್ರಿಯಲ್ಲಿ ಯಾವುದೋ ಹೆಣ್ಣು ದೆವ್ವ ಬಂದು ಕುಳಿತು ಬೋರೆಂದು ಅಳುತ್ತಾ ಇರುತ್ತದೆಂದು ಜನ ಬಂದು ಹೇಳಿದರು. ರಾಜನಿಗೆ ಆಶ್ಚರ್ಯವಾಯಿತು. ರಾಜ ಆ… ಹೆಣ್ಣು ದೆವ್ವ ಯಾರೋ, ಅದಕ್ಕೆ ಬಂದ ಕಷ್ಟವೇನೋ ತಿಳಿದುಕೊಳ್ಳಬೇಕು ಎಂದುಕೊಂಡನು.

ಒಂದು ರಾತ್ರಿ ಒಂಟಿಯಾಗಿ ಕುದುರೆಯ ಮೇಲೇರಿ ಆ ಹಾಳು ಬಿದ್ದ ಹಳೆ ಬಾವಿಯ ಮರದ ಕೆಳಗೆ ಬಂದನು. ಸ್ವಲ್ಪ ದೂರವಿರುವಾಗಲೇ ರಾಜನಿಗೆ ಹೆಣ್ಣು ದೆವ್ವದ ಅಳು ಕೇಳಿಸಿತು. ಊರು ಜನ ಹೇಳುವುದು ನಿಜವೇ ಅಂದು ಕೊಂಡು… ಕುದುರೆಯನ್ನು ಅದರ ಮುಂದಕ್ಕೆ ಓಡಿಸಿದನು. ಸಣ್ಣಗೆ ರಾಜನ ಮನವೂ ಕೂಡಾ ಹೆದರಿತು. ಕಾಲುಗಳು ನಡುಗಿದವು. ಆದರೂ  ದೆವ್ವದ ಕಥೆ ಏನೋ  ಎಂದು ನೋಡಬೇಕೆನಿಸಿತು.

ಕುದುರೆ ಓಡತೊಡಗಿತು. ಹೆಣ್ಣು ದೆವ್ವದ ಹತ್ತಿರ ಬಂದು ನಿಂತಿತು. ಉದ್ದನೆಯ ಕಪ್ಪು ಕೂದಲುಗಳನ್ನು ತಲೆತುಂಬಾ ಹರಡಿಕೊಂಡು ಅಳುತ್ತಿರುವ ಹೆಣ್ಣು ದೆವ್ವ ತಲೆಯೆತ್ತಿ ಓಮ್ಮೆಲೇ…..ರಾಜನ ಕಡೆ ನೋಡಿತು!

ರಾಜನಿಗೆ ಅದನ್ನು ನೋಡುವ ಧೈರ್ಯವೆಲ್ಲಿಯದು? ತಲೆ ಬಗ್ಗಿಸಿಕೊಂಡೇ.. ಕೇಳಿದನು.

“ ಹೆಣ್ಣು ದೆವ್ವವೇ… ಏನು ನಿನ್ನ ಸಮಸ್ಯೆ ? ನನ್ನ ರಾಜ್ಯಕ್ಕೆ ಏಕೆ ಬಂದೆ!”

ಹೆಣ್ಣು ದೆವ್ವ ದುಃಖದಿಂದಲೇ ಬಾಯಿ ಬಿಟ್ಟಿತು.

“ ರಾಜನೇ… ತಲೆ ತಲಾಂತರಗಳಿಂದ ನಮ್ಮ ಹೆಣ್ಣುಜಾತಿ ಗಂಡಸರ ಕೈಯೊಳಗೆ ಸಿಕ್ಕು ಮೋಸಹೋಗುತ್ತಿದೆ. ಆದರೂ ನಮ್ಮ ಕಣ್ಣೀರನ್ನ ಯಾರೂ ಅಳಸಲಾಗಲಿಲ್ಲ. ನಮ್ಮ ಕಷ್ಟಗಳು ತೀರಲಿಲ್ಲ” ಎಂದು ಬೋರೆಂದು ಮತ್ತೆ ಅಳತೊಡಗಿತು.

ಆ ಕೆಲಸಕ್ಕೆ ಬಾರದ ರಾಜನಿಗೆ “ದೆವ್ವವಾದರೂ ಹೆಣ್ಣೇ ಅಲ್ಲವೇ?” ಎಂದು ತಿನ್ನೋ ಅನ್ನವ ಹಾಳುಮಾಡೋ…ಬುದ್ಧಿ ಹುಟ್ಟಿತು.

ರಾಜ ಸ್ವಲ್ಪ ಧೈರ್ಯದಿಂದಲೇ “ ನಿನ್ನ ದುಃಖವನ್ನು ನೋಡಲಾಗದು ಬಿಡು. ಆದರೆ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ” ಎಂದನು.

“ ಇದೇ ಮಾತ ಇಂದಿಗೂ ಕಳಿಂಗ ರಾಜ್ಯದ ಕಡೆಯಿಂದ ಚೋಳ ರಾಜ್ಯದ ತನಕ ಇರುವ ರಾಜರೆಲ್ಲರೂ ಹೇಳಿದರು.  ನನ್ನ ಪಾಡಿಗೆ ನಾನು ಅಳುತ್ತಲೇ ಇರಬೇಕೆಂದರೂ ತಮ್ಮ ಹಾಳು ಬುದ್ಧಿಯಿಂದಲೇ ಅಳು ಆರದಂತೆಯೇ ನೋಡುತಿದ್ದಾರೆಂದು ದೆವ್ವ ವಾಗಿದ್ದರೂ ಈ ಹೆಣ್ಣು ಜನ್ಮವಾಗಿ ಇರಬಾರದೆಂದು ಅದು ಅಳುತ್ತಾ…” ಮಾಯವಾಗಿಹೋಯಿತಂತೆ.

ಸಾಂಬಶಿವಾ ಕಥೆ ಮುಗಿಸಿ ನಗತೊಡಗಿದನು. ಅವನ ನಗು ನೋಡಿ ನನಗೂ ನಗುಬಂದಿತು.

“ ಈ ಕಥೆ ನನ್ನ ಮೇಲೆಯೇ… ಹೇಳಿಯಲ್ಲವೇ ಸಾಂಬ” ಅವನನ್ನು ಕೇಳಿದೆ.

“ ಕುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಿದ್ನಂತೆ ಹಂಗಾತು ನೋಡಪ್ಪ ನೀನು ಕೇಳೋದು.” ಎಂದನು ಸಾಂಬ.

ನಗುತ್ತಲೇ ನಿದ್ದೆಯೊಳಗೆ ಜಾರಿಹೋದೆನು.

ಮುಂಜಾನೆಯೇ ಅಪ್ಪ ಕರೆಯಾಕ ಹತ್ಯಾರೆಂದು ಹೊಂಟೆ.

ದೊಡ್ಡ ಶರಣಪ್ಪ ಬಂದಿದ್ದಾನೆ.

“ ಆ ಭೂಮಿಗಳ ಪಟ್ಟ ಕಾಗದಗಳನ್ನು ಸ್ವಲ್ಪ ನೋಡು ಎಂದು ಹೇಳಿದ” ಅಪ್ಪ.

ಮಾಡಿಮೇಲೇರಿ ಬೀರುವಿನೊಳಗೆ ಹುಡುಕಿ ಬಟ್ಟೆ ಚೀಲದಲ್ಲಿ ಇಟ್ಟಿದ್ದ ಕಾಗದಗಳ ಕಟ್ಟುಗಳನ್ನು ತಗೊಂಬಂದು ಕೂತೆ. ಒತ್ತೆ ಇಟ್ಟ ಭೂಮಿಗಳು, ಮಾರಿದ ಭೂಮಿಗಳು, ಛತ್ರದ ಹತ್ತಿರದ ಬೀಳು ಭೂಮಿಗಳು ಎಲ್ಲವುಗಳ ಬಗ್ಗೆ ಮಾತಾಡತೊಡಗಿದೆವು.

“ ಕಲ್ಲು ಗುಡ್ಡದ ಕಡೆಯ ಚಂಡು ಹೂ  ತೋಟ ಮಾರೆಂದು “ ಮಾತುಗಳ ಮದ್ಯೆ ಕೇಳಿದ ದೊಡ್ಡ ಶರಣ.

“ ನಿನಗೆ ಎಲ್ಲಿ ಬೇಕಂತಿಯೋ ಅದನ್ನ ತಗ ಹೋಗಾ…” ಎಂದನು ಅಪ್ಪ.

ನಾನೇನೂ ಮಾತಾಡಲಿಲ್ಲ.

“ ಏನ್‌ ತಮ್ಮ …ಸುಮ್ಮಕದೀಯಾ” ಎಂದ ಶರಣಪ್ಪ.

ಅಪ್ಪ ನನ್ನ ಕಡೆ ನೋಡಿದ.

ನಾ ತಲೆಬಾಗಿಸಿಕೊಂಡೆ.

ಇಷ್ಟರೊಳಗೆ ಓಡು ಓಡುತ್ತಲೇ ತೋಟದ ಮನಿಕಡಿಗೆ ಓಬಳೇಸು ಓಡಿ ಬಂದ.

“ ಏನಾ ಏನ್‌ ಸುದ್ದಿ? ಹಿಂಗ್‌ ಓಡಿಬರಕತ್ತಿಯಲ್ಲ.” ಕೇಳಿದ ಆತುರವಾಗಿ.

“ ಅಣಾ! ತ್ವಾಟದ ಹತ್ರ ನಮ್ಮ ಸಾಂಬುನ್ನ ಕರಿ ನಾಗರಾವು ಕಡುದು ಬುಟ್ಟತಿ” ತತ್ತರ ಬಿತ್ತರ ಮಾಡುತ್ತಾ ಹೇಳಿದನವ.

“ ಅಯ್ಯಯ್ಯೋ….ಈಗ ಎಂಗೈತೋ…” ಗಬಕ್ಕನೇ ಎದ್ದು ಕೇಳಿದೆ.

ಓಬಳೇಶ “ ಇನ್ನೆಂಗೈತನ್ನಾ. ಅವನು ಅಲ್ಲೇ ವಿಲವಿಲ ವದ್ದಾಡಿ ಬಿಳಿ ಬುರುಗು ತಂದುಕಂಡು ಹ್ವಾಗಿ ಬಿಟ್ಟಾನೋ” ಅಂದು ಅಳತೊಡಗಿದ.

ಎಲ್ಲರೂ ತೋಟದ ಕಡಿಗೆ ಓಡಿದಿವಿ.

ಆ.. ತೋಟದೊಳಗೆ ಕೆಲಸ ಮಾಡೋರೆಲ್ಲರೂ ಬಂದು ಗುಂಪುಗೂಡಿದ್ದರು.         ಏನೇನೋ ಮಾತಾಡಿಕೊಳ್ಳುತಿದ್ದರು.

ಅಳುತಿದ್ದರು.

ಮುತ್ತಿಕೊಂಡರು.

ಸಾಂಬ ಚೆಂಡು ಹೂ ಗಿಡಗಳ ನಡುವೆಯೇ ಶವವಾಗಿಬಿಟ್ಟಿದ್ದನು. ಶರೀರವೆಲ್ಲಾ ಕರ್ರಗಾಗಿತ್ತು. ಬಾಯೊಳಗಿನ ನೊರೆ ಇನ್ನೂ ಹಸಿಯಾಗಿತ್ತು.

ನನಗೆ ಅಳು ತಡೆಯಲಾಗಲೇ ಇಲ್ಲ.

ನಮಮ್ಮ ಕಣ್ಣು ಸುತ್ತಿ ಬಂದು ಬಿದ್ದುಹೋದಳು.

ಜನರ ಕಡಿಗೆ ನೋಡಿದೆ.

ಪೀರಮ್ಮವ್ವ, ಶ್ಯಾಮಲ ಇನ್ನಾ ಗುಡಿಸಲ ಕೂಲಿಗಳೆಲ್ಲರೂ ಅಳುತಿದ್ದಾರೆ.

ಶರಣಪ್ಪ “ ಎಲ್ಲಾರೂ ಯಾವಾಗೋ ಒಂದು ಸಲ ಹ್ವಾಗಾರೇ ಅಲ್ಲವಾ. ತಟಗು ಹಿಂದೂ ಮುಂದೂ ಅಟೇಯಾ” ವೇದಾಂತ ಹೇಳಿದನು.

ಅಪ್ಪ “ ಮುಂದೇನು ಮಾಡಬೇಕೋ ನೋಡ್ರೀ. ಆ ಕಾರ್ಯಗಳನ್ನು ಎಲ್ಲಾ ಘನವಾಗಿ ಮಾಡಿ. ಇಲ್ಲೇ ಗುಣಿ ತೆಗೆದು ಊತು. ಸಮಾಧಿ ಕಟ್ಟರಿ.” ಎಂದು ಹೇಳಿದನು.

ಕೆಲಸದವರು ರಂಗದೊಳಕ್ಕೆ ಇಳಿದರು.

ನನಗೇನೋ ಅಳುವಿನ ಜೊತಿಗೆ ನೋವು ಬಾಧಿಸುತಿತ್ತು.

ನೋಡಲಾಗದೇ ಹೋದೆ.

ಹಂಗೇ ಅಲ್ಲಿಂದ ಬಂದುಬಿಟ್ಟೆ.

***

ದಿನಗಳು ಕಳೆಯುತ್ತಲೇ ಇವೆ….

ಸಾಂಬನಿಲ್ಲದ ನೋವು ಹಾಗೇ ಇದೆ.

ರಾತ್ರಿಗಳು ನಿದ್ದೆ ಕೂಡಾ ಬಾರದಾದವು. ನನ್ನೊಳಗೆ ನಾನೇ ಕನವರಿಸುತ್ತಿರುವೆ.

ಆ ಚಂಡು ಹೂವಿನ ತೋಟಕ್ಕೂ ಕೂಡಾ ಸರಿಗೆ ಹೋಗಲಾಗಲಿಲ್ಲ. ತೋಟ ಕಾಯುತ್ತಿರುವ ಓಬಳೇಸಿಯೇ.. ಎಲ್ಲಾ ನೋಡಿಕೊಳ್ಳುತಿದ್ದಾನೆ.

ಶರಣನಿಗೆ ಆ ಜಾಗದ ಮೇಲೆ ಕಣ್ಣು ಬಿದ್ದಿದೆ.

ದಿನವೂ ನಮ್ಮ ಮನೆಯ ಕಡೆ ತಿರುಗುತಾ ಇದ್ದಾನೆಂದು ತಿಳಿದಿದೆ.

ಅಮ್ಮನಿಗೆ  “ಆ ಚೆಂಡು ಹೂತೋಟದ ಜಾಗವನ್ನು ಶರಣನಿಗೆ ಮಾರಿದರೆ ನಂದೇನೂ ತಕರಾರಿಲ್ಲ” ಅಂತಾ ಅಪ್ಪನಿಗೆ ಹೇಳೆಂದು ಹೇಳಾನ.

ಅಮ್ಮ ಸುಮ್ಮಗದಾಳ.

“ಮಾರೋದು ನಿನಿಗಿಷ್ಟ ಇಲ್ಲೇನವ್ವಾ?” ಅಂತ ಕೇಳಿದೆ.

“ ಆ ತೋಟ ಅಂದ್ರೆನೇ ನನಗಿಷ್ಟ ಕಣ್‌ ಮಗನೇ. ಅದನ್ನ ಮಾರಬ್ಯಾಡರಪ್ಪಾ…..” ಅಂತ ಕಣ್ಣೀರಿಟ್ಟಳು.

ತಿರಗದಿನ ನಾನೇ ಶರಣಪ್ಪನ ಕಂಡು “ ಆ ತೋಟವನ್ನ ಮಾರೋ ಮಾತೇ ಇಲ್ಲಪ್ಪೋ” ಅಂತ ಕಡ್ಡಿ ಮುರದಂಗ ಹೇಳಿ ಬಂದು ಬಿಟ್ಟೆ.

ಮಧ್ಯಾನ್ಹ ಕಣದ ಕೆಲಸಕ್ಕೆ ಪೀರಮ್ಮವ್ವ ಬಂದಳು. ಈ ತಿಂಗಳ ಒಳಗೇ ʼಚಿಗುರು ಹುಣ್ಣಿಮೆʼ ಹಬ್ಬವೆಂದು ಹೇಳಿದಳು. ಅರ್ಧ ಚೀಲ ಅಕ್ಕಿ, ಹಸಿ ಶೇಂಗಾವನ್ನು ತಗಂಡೋಗು ಎಂದು ನೀಡಿದೆ. ಅಷ್ಟು ದೂರ ಹೋಗಿ ಮತ್ತೆ ಹಿಂದಕ್ಕೆ ಬಂದಳು. ಹಬ್ಬಕ್ಕೆ ನನ್ನನ್ನೂ ಕೂಡಾ ಬಾ ಎಂದು ಹೇಳಿದಳು.

“ ಎದಕ್ಕ ಹೇಳವ್ವೋ..” ಅಂತ ಅಂದೆ.

“ ಹಂಗಂದ್ರ ಎಂಗಯ್ಯೋ. ಮದುವೆಗೆ ಬಂದ ಹುಡುಗ. ಚಿಗುರು ಹುಣ್ಣಿಮಿಯೆಲ್ಲಾ ನಿಮ್ಮದೇ ಅಲ್ಲವಾ. ಶಾಮಲಾ ಕೂಡಾ ಇರ್ತಾಳೆ. ಗಂಗಮ್ಮ ದೇವರ ಮೆರವಣಿಗೆ ಬಲು ಬೇಷಿ ನಡಿತಾತಿ. ಮರೀದಂಗ ಬಾರಯ್ಯೋ” ಅಂತ ಹೇಳಿ ಮಾಯವಾಗಿ ಹೋದಳು.

ಪೀರಮ್ಮವ್ವ ʼಶಾಮಲಾʼ ಅನ್ನೋ ಹೆಸರಿನ ನೆನಪು ಹೇಳೋಸರಿಗೆ ಮತ್ತೆ ಒಡಲೊಳಗೆ ನಿದ್ದೆಹೋಗಿದ್ದ ನರಗಳೆಲ್ಲಾ ಒಂದು ಸಾರ್ತಿ ಜುಮುಕ್ಕು ಅಂದವು.

ಸ್ವಲ್ಪ ಕತ್ತಲಾದಮೇಲೆ ಹೊರಟೆ ʼಅದು ರಾತರಿ ಮಾಡೋ ಹಬ್ಬವಾದ್ದರಿಂದ ಆಕಿ ಸಿಕ್ಕರೂ ಸಿಗುತ್ತಾಳೆ.ʼ ಅನಿಸುತ್ತದೆ.

ಗುಡಿಸಲ ದಾರಿಯ ಕಡೆ ಸಣ್ಣಗೆ ಹೆಜ್ಜೆ ಹಾಕತಿದ್ದೆ.

ಶಾಮಲಳ ಚಲುವು ನೆನಪಾದಂಗೆಲ್ಲಾ… ಹೆಜ್ಜೆಗಳು ಇನ್ನೂ ಜೋರಾಗಿ ಬೀಸತೊಡಗಿದವು.

ಬೆಳುದಿಂಗಳು ಮಲ್ಲಿಗೆ ಹೂಗಳ ಕಂಪನ್ನು ಸೂಸುತ್ತಿದೆ.

ಗಂಗಮ್ಮನ ಗುಡಿಯ ಬಳಿ ದೊಡ್ಡದಾಗಿ ಹಲಗೆಗಳು ಮೊರೆಯುತ್ತಿವೆ.

ಭಜನೇ ಪದಗಳ ಗುರುಸಾಮಿಯ ಏರು ದನಿ ಕೇಳುತ್ತಿದೆ.

ಕಾಲುದಾರಿ ಗುಂಟಾ ಹೆಜ್ಜೆಗಳು ಸರಿದಂಗೆಲ್ಲಾ….

ಯಂಗಾನ ಆಗಲಿ, ಈ… ಸಾರಿ ಆಕಿಯನ್ನ ಅನುಭವಿಸಲೇ ಬೇಕೆಂಬ ಮತ್ತು ಮುರಿದೆದ್ದು ನಡಿಗೆ ವೇಗವನ್ನು ಹೆಚ್ಚಿಸಿದೆ.

ಗುರುಸಾಮಿಯ ದನಿ  “  ಕನ್ನೆ ಹುಡುಗಿಯರೆಲ್ಲಾ ಬಲು ಚಂದವಾಗಿ ಈ ಚಿಗುರು ಹುಣ್ಣಿಮೆಯ ದಿನ ನವಧಾನ್ಯಗಳ ಮೊಳಕೆ ಸಸಿಗಳನ್ನು ಹೊತ್ತಿದ್ದಾರೆ. ತುಂಬಾ ಚನ್ನಾಗಿದೆ. ನೀವು ಪಟ್ಟ ಶ್ರಮವೆಲ್ಲಾ ತಿಳಿದಿದೆ. ನಿಮಗೆ ಒಳ್ಳೆಯ ಗಂಡಂದಿರು ಸಿಗಲಿ ಎಂದು ಆ ಗಂಗಮ್ಮ ತಾಯಿಯ ಸಾಕ್ಷಿಯಾಗಿ ಕೋರಿಕೊಳ್ಳುತ್ತೇನೆ. ನಾನ ಕೊಟ್ಟ ಅಕ್ಕಿಯೊಳಗೆ ಬೆಲ್ಲ, ಕರಿ ಎಳ್ಳು ಕಲೆಸಿದ ಪ್ರಸಾದ ತೆಗೆದುಕೊಳ್ಳಿ. ನಿಮಗಿಷ್ಟವಾದವರಿಗೆ ನೀಡಿರಿ. ಇಲ್ಲಿ ಮಣ್ಣ ಹಣತೆಯೊಳಗೆ ಬೆಳಗೋ ದೀಪಗಳನ್ನು ನಿಮಗಿಷ್ಟವಾದವರಿಗೆ ನೀಡಿ ಆ ಗುಡ್ಡದ ಕೆರಿಯೊಳಗೆ ಬಿಟ್ಟುಬಿಡಿ. ನಿಮ್ಮ ಕೋರಿಕೆ ತೀರುತ್ತದೆ.” ಎಂದದ್ದು ಇನ್ನೂ….ಗಟ್ಟಿಯಾಗಿ ಕೇಳಿಸುತ್ತಿದೆ.

ಭಜನೆ ಪದವು ಮತ್ತೆ ಶುರುವಾಯಿತು. ಗುರುಸಾಮಿ ಹಾಡು ಆರಂಭಿಸಿದನು.

“ ರಾವಣಾ ನಿನ್ನ ಉರುಮೆಯನ್ನು ಸಾಕುಮಾಡಯ್ಯ

ಅಗ್ನಿಯಂತಹ ಸೀತೆಯ ಮೇಲೆ ಮನಸು ನಿನಗೆ ಯಾಕಯ್ಯಾ

ತದ್ದಿಂಕಿ ತಾಂತೈ… ತದ್ದಿನಕ ತಾಂತೈ…”

ಇನ್ನು ಇದೇ ಸರಿಯಾದ ಸಮಯ.

ಅಕೆಯು ಕೂಡಾ ದೀಪ ತೆಗೆದುಕೊಂಡು ಕೆರೆಯ ಕಡೆಗೆ ಹೋಗುತ್ತಿರುತ್ತಾಳೆ. ಆ ಗುಡ್ಡದ ದಾರಿ ಮಧ್ಯೆ ಕಾವಲು ಕಾದು ಮರಗಳ ಕಡೆಗೆ ಎತ್ತಿಕೊಂಡೊಯ್ದರೆ ಆ ಹುಡುಗಿ ಇನ್ನೇನು ಮಾಡ್ತದೆ?

ಅಡ್ಡದಾರಿಯ ಗುಂಟಾ ಜೋರಾಗಿ ನಡೆಯತೊಡಗಿದೆ.

ಬೆಳದಿಂಗಳು ಮಳೆಯಂತೆ ಸುರಿಯುತ್ತಿದೆ.

ಏನಾನ ಆಗಲಿ ಈ ಸಲ ಆ ಹುಡುಗಿಯ ಅಂದವನ್ನ ಅನುಭವಿಸಲೇ ಬೇಕು.

ಮನಸು ಉಕ್ಕಿಹರಿಯುತ್ತಿದೆ.

ಹುಣಿಸಿ ಮರದ ಕಡೆಯಿಂದ ಅಡ್ಡ ತೂರಿ ಕೆರೆಯ ಕಡೆಗೇ ಕಣ್ಣು ನೆಟ್ಟು ಕಾವಲು ಕಾಯತೊಡಗಿದೆ.

ದೂರದಲ್ಲಿ …..

ಹುಡುಗಿಯರು ಕೈಗಳಲ್ಲಿ ದೀಪಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ.

ಆ… ಹುಡುಗಿಯೂ ಕೂಡಾ …

ಇವಳವ್ವನ್… ದಾರಿಮೇಲೆ ಈ ದಿನ….! ಅಂದುಕೊಂಡೆ.

ಆಕೆ ಬರತಾ ಅದಾಳ.

ಹತ್ತರಾ… ಇನ್ನಾ ಹತ್ತರಾ…

ದೀಪದ ಬೆಳಕಿನೊಳಗೆ ಆಕೆಯ ಅಂದ ಇನ್ನೂ ಚಲುವಾಗಿ ಉಕ್ಕಿಹರಿಯುತ್ತಿದೆ.

ಹತ್ತರಕ್ಕೆ ಬರಕತ್ಯಾಳ…

ಬರ್ತಾ ಅದಾಳ…

ಕೆರಿ   ಇನ್ನೇನು ತಲುಪಿದಳು ಎಂಬುವುದರೊಳಗೇ ಆಕಿಯ ದಾರಿ ಬದಲಾಯಿತು!

ಆ ಪಕ್ಕದ ಬಾರಿ ಹಣ್ಣಿನ ಪೊದೆಯ ಹತ್ತಿರದ ಗುಡ್ಡದ ಹಾದಿ.

ಆ… ದಾರಿ ಹಿಡಿದಳು!

ನಡಿಗೆ ಜೋರಾಯಿತು.

ಕೈಯೊಳಗಿನ ದೀಪ ಆರಿಹೋಗದಂತಾ ಅವಳು  ನಡಿಗೆಯನ್ನ ಇನ್ನಾ ಜೋರು ಮಾಡಿದಳು.

ಒಂಟಿಯಾಗಿ ಹೋಗುತಿದ್ದಾಳೆ.

ನನಗೇನೂ ಅರ್ಥವಾಗುತ್ತಿಲ್ಲ.

ಆಕೆಯ ಜೊತೆಗೆ ಬಂದ ಹುಡುಗಿಯರೆಲ್ಲಾ ಕೆರೆಯೊಳಗೆ ದೀಪಗಳನ್ನು ಬಿಡುತಿದ್ದಾರೆ.

ನಾನು ಹುಣಿಸೇ ಮರದ ಪೊದೆಯೊಳಗಿಂದ ಮೇಲೆ ಎದ್ದು ಆ ಹುಡುಗಿ ಹೋಗುತ್ತಿರುವ ದಾರಿಯ ಕಡೆಗೆ ಹೊರಟೆ.

ಆಕೆ ಕಲ್ಲು, ಮುಳ್ಳು , ಹಳ್ಳ ಏನನ್ನೂ ನೋಡದಂತೆ ಹೋಗುತಿದ್ದಾಳೆ.

ನಾನೂ ಆಕೆಯ ಹಿಂದೆಯೇ ಹೋಗತೊಡಗಿದೆ.

ಆ ಹುಡುಗಿ ಕಲ್ಲಿನ ಗುಡ್ಡ ಏರಿದಳು.

ನನ್ನ ತಲೆ ಗಿಮಗುಟ್ಟಿ ದಿಕ್ಕು ತಿಳಿಯದಂಗಾತು.

ಆ ಹುಡಗಿಯನ್ನ ಹಿಡಿದು ಅನುಭವಿಸಬೇಕೂ ಅನ್ನೋ ಉರುಕಾಟ ಉರಿಯ ಹಾಗೆ ಏಳತಾ ಇದೆ.

ಗುಂಡಿಗೆ ಕುಣಿದಾಡುತ್ತಿದೆ.

ಆ ಹುಡುಗಿ “ ಬೀಸುವ ಗಾಳಿಯೊಳಗೂ ಕೈಗಳೊಳಗಿನ ದೀಪ ಆರಿಹೋಗದಂತೆ ಏರುತಾನೇ ಅದಾಳ”.

ನನಗೇನೋ ಎಲ್ಲಿಲ್ಲದ ಭಯ ಹಿಡಕೊಂಡಿತು.

ಆದರೂ…. ಏರುತೊಡಗಿದೆ.

ಕಾಲಿಗೆ ನೆಗ್ಗಲಿ ಮುಳ್ಳು ಚುಚ್ಚಿತು.

ಪಕ್ಕದ ಬಂಡೆಯ ಮೇಲೆ ಕುಂತು ಕಿತ್ತೆ. ಮುಳ್ಳಿನ ಜೊತಿಗೆ ರೈತವೂ ಕೂಡಾ ಹೊರಕ್ಕೆ ನುಗ್ಗಿತು!

ಅಷ್ಟೊತ್ತಿಗೇ ಆ ಹುಡುಗಿ ಕಲ್ಲುಗುಡ್ಡವನ್ನ ಇಳಿದಳು.

ಪಕ್ಕದಲ್ಲೇ ಇರೋ ಕಾಡಿನ ಕಡಿಗೆ ಹೊಂಟಳು.

ನಾನೂ ಕುಂಟುತ್ತಾ ಕುಂಟುತ್ತಾ ಇಳಿಯ ಹತ್ತಿದೆ.

ಹುಡುಗಿಯ ಚಂಡು ಹೂಗಳ ವಾಸನಿ ನನ್ನನ್ನು ಸುತ್ತಿಕೊಂಡಿತು.

ಆ ಹುಡುಗಿ ಹೋಗುತಾ…ಹೋಗುತಾ… ನಿಂತುಬುಟ್ಟಳು!

ಎದೆ ಒಡೆದವಳಂತೆ ಅಳತೊಡಗಿದಳು.

ಕೈಯೊಳಗಿನ ದೀಪವನ್ನು ಕೆಳಗೆ ಇಟ್ಟಳು.

ಸಮಾಧಿ!

ನಮ್ಮ ಸಾಂಬನ ಸಮಾಧಿ!

ನನಗೆ ಕಾಲೂ ಕೈಯಿ ಆಡದಾಯಿತು.

ಶಿಲೆಯಂಗೆ ಅಲ್ಲೇ ನಿಂತುಬಿಟ್ಟೆ.

ಆ ಹುಡುಗಿ ಅಳುತ್ತಲೇ ಇದ್ದಳು.

ಕೈಗಳಲ್ಲಿರುವ ಬಳೆಗಳ ಹೊಡೆದುಕೊಂಡಳು.

ಹಣೆಯ ಕುಂಕುಮ ಅಳಿಸಿಕೊಂಡಳು.

ಬಿದ್ದು ಬಿದ್ದು ಅಳತೊಡಗಿದಳು.

ಪೈಟದ ಚುಂಗಿನಿಂದ  ಬೆಲ್ಲದ ಉಂಡೆಯನ್ನು ತೆಗೆದು ತನ್ನ ಇಷ್ಟದವರಿಗೆ ತಿನಿಸುವಂತೆಯೇ…. ಸಮಾಧಿಗೆ ಎಡೆ ಹಿಡಿದಳು!

ನಾನು ನಿಂತಿರುವ ಜಾಗದಲ್ಲೇ ಕುಸಿದು ಕುಂತೆ.

ಮತ್ತೆ ಮಳೆಹನಿಗಳು ಸುರುವಾದವು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು....

ದಿನದ ಸುದ್ದಿ1 day ago

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ...

ದಿನದ ಸುದ್ದಿ3 days ago

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ...

ದಿನದ ಸುದ್ದಿ4 days ago

ದಾವಣಗೆರೆ | ಜಿಲ್ಲಾ ಪಂಚಾಯಿತಿ ಸಿ.ಇ.ಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:2023-24ನೇ ಸಾಲಿನಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ಬರುವ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಗೆ ಒಳಪಡಿಸುವಂತೆ ಕೋರಿ ಅರ್ಜಿ ಸಲ್ಲಿಸಿ 5 ತಿಂಗಳು...

ದಿನದ ಸುದ್ದಿ5 days ago

ಜಿಎಂ ವಿಶ್ವವಿದ್ಯಾಲಯ ರಂಗೋತ್ಸವ -2025 | ವಿದ್ಯಾರ್ಥಿಗಳ ಪ್ರತಿಭೆ ಅನಾವರಣ : ಸ್ಪರ್ಧೆಯಲ್ಲಿ ರಂಗ ಪ್ರೇಮ, ನಟನಾ ಚತುರತೆ ಬೆರಗು

ಸುದ್ದಿದಿನ,ದಾವಣಗೆರೆ:ನಗರದ ಜಿಎಂ ವಿಶ್ವವಿದ್ಯಾನಿಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ 1.12 2025 ರಂದು ರಂಗೋತ್ಸವ -2025 ರ ಅಂತಿಮ ಸುತ್ತು ಗ್ರ್ಯಾಂಡ್ ಫಿನಾಲೆಯನ್ನು ಏರ್ಪಡಿಸಲಾಗಿತ್ತು. ಜಿಎಂ ವಿಶ್ವವಿದ್ಯಾಲಯದ ಎಲ್ಲಾ...

ದಿನದ ಸುದ್ದಿ5 days ago

ಉಳಿಕೆ ಸರ್ಕಾರಿ ನಿವೇಶನ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ: ಡಿಸಿ ಜಿ.ಎಂ.ಗಂಗಾಧರಸ್ವಾಮಿ

ಸುದ್ದಿದಿನ,ದಾವಣಗೆರೆ: ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಅವುಗಳನ್ನು ಕೂಡಲೇ ಸರ್ಕಾರಿ ಕಚೇರಿಗಳ ಉಪಯೋಗಕ್ಕೆ ನೀಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಸೂಚಿಸಿದರು. ಮಂಗಳವಾರ(ಡಿ.2) ರಂದು ಜಿಲ್ಲಾಧಿಕಾರಿಗಳ ಕಚೇರಿ...

ದಿನದ ಸುದ್ದಿ5 days ago

ದುಡಿಯುವ ವರ್ಗಕ್ಕೆ ಸ್ಥಳದಲ್ಲೇ ಉಚಿತ ಚಿಕಿತ್ಸೆ : ಶಾಸಕ ಕೆ.ಎಸ್.ಬಸವಂತಪ್ಪ ‘ಸಂಚಾರಿ ಆರೋಗ್ಯ ಘಟಕ’ಕ್ಕೆ ಚಾಲನೆ

ಸುದ್ದಿದಿನ,ದಾವಣಗೆರೆ:ಕಾರ್ಮಿಕರಿಗೆ ತ್ವರಿತವಾಗಿ, ಕೆಲಸದ ಸ್ಥಳಗಳಲ್ಲೇ ವೈದ್ಯಕೀಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ‘ಸಂಚಾರಿ ಆರೋಗ್ಯ ಘಟಕ’ (ಮೊಬೈಲ್ ಮೆಡಿಕಲ್ ಯುನಿಟ್) ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕರು ಇದರ...

ದಿನದ ಸುದ್ದಿ5 days ago

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಪ್ರಸಕ್ತ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಧರ್ತಿ ಅಭಾ ಜನ ಜಾತಿಯ ಗ್ರಾಮ ಉತ್ಕರ್ಷ ಅಭಿಯಾನದಡಿ ಮೀನುಮಾರಾಟಗಾರರಿಂದ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ1 week ago

ಎಂನರೇಗಾ ಯೋಜನೆ : ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಹರಿಹರ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಇಚ್ಛಿಸುವ ರೈತರಿಂದ...

ದಿನದ ಸುದ್ದಿ2 weeks ago

ಅಡ್ಡ ಬಂದ ನಾಯಿ ಉಳಿಸಲು ಹೋಗಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ನಿಧನ

ಸುದ್ದಿದಿನಡೆಸ್ಕ್:ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂಬಂಧಿಕರ ಮದುವೆಗೆಂದು ವಿಜಯಪುರಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ...

Trending