Connect with us

ಲೈಫ್ ಸ್ಟೈಲ್

ಹಲ್ಲುಗಳನ್ನು ಕಪ್ಪುಗೊಳಿಸುವ ಹಲ್ಲಿಟ್ಟು ಗಿಲಾವು ಎಂಬ ಸಾಂಪ್ರದಾಯಿಕ ಕಲೆ..!

Published

on

 

“Some pains are physical,
And some are mental,
But the one that is both Is dental.”

-Ogden Nash.

“ಕೆಲವು ನೋವುಗಳು ದೈಹಿಕ. ಹಾಗೂ ಕೆಲವು ಮಾನಸಿಕ. ಎರಡೂ ಆಗಿರುವ ನೋವೇ ದಾಂತಿಕ!”

– ಆಗ್ಡನ್ ನ್ಯಾಶ್

ದೈಹಿಕವಾಗಿಯೂ ಮಾನಸಿಕವಾಗಿಯೂ ಬಾಧಿಸುವ ದಂತ ನೋವಿಗೆ ನಮ್ಮ ಪೂರ್ವಿಕರು ಅನೇಕ ರೀತಿಯ ಪರಿಹಾರೋಪಾಯಗಳನ್ನು ಕಂಡುಕೊಂಡಿದ್ದರು. ಅಂತಹ ಉಪಾಯಗಳಲ್ಲಿ ಹಲ್ಲಿಟ್ಟು ಎಂಬ ಪುಡಿಯಿಂದ ಹಲ್ಲುಗಳಿಗೆ ಕಪ್ಪು ಗಿಲಾವು ಮಾಡಿಕೊಳ್ಳುವ ಕಲೆಯೂ ಒಂದು. ನನ್ನ ಅಪ್ಪನ ಚಿಕ್ಕಮ್ಮನ ಹೆಸರು ಬುಡ್ಡಕದರಮ್ಮಜ್ಜಿ. ಸುಮಾರು ನಾಲ್ಕೂವರೆ ಅಡಿಗಳಷ್ಟು ಎತ್ತರದ ಮಟ್ಟಸವಾದ ಆಳ್ತನದ ಅವಳು ಕೆಂಪನೆ ಮೈಬಣ್ಣದ ಚೆಲುವೆ. ನಮ್ಮ ಪಕ್ಕದ ಮನೆಯಲ್ಲಿ ತುಂಬು ಸಂಸಾರವಂದಿಗಳಾಗಿ ವಾಸವಿದ್ದಳು. ನನ್ನ ಬಾಲ್ಯದ ದಿನಗಳಲ್ಲಿ ಅವಳು ನಮ್ಮ ಮನೆಗೆ ಬಂದಾಗಲೆಲ್ಲಾ ಕೆಂಪು ವಸಡಿಗೆ ಸಾಲಾಗಿ ಜೋಡಿಸಿದ ಕಪ್ಪು ಮುತ್ತಿನ ಮಣಿಗಳಂತಹ ಅವಳ ಹಲ್ಲುಗಳನ್ನು ತದೇಕ ಚಿತ್ತನಾಗಿ ನೋಡುತ್ತಿದ್ದೆ. “ಏನ್ಮಾಡ್ತಾ ಇದ್ದೀಯೇ…ಗ್ಗೇ.. ಕದರಿ… ಒಂದು ತಾಳೆ ಇಳೆದೆಲೆ ಕೊಡೆ” ಎಂದು ಬುಡ್ಡಕದರಮ್ಮಜ್ಜಿ ನನ್ನ ಅಮ್ಮನನ್ನು ಮಾತಾಡಿಸಿಕೊಂಡು ನಮ್ಮ ಪಕ್ಕದ ಮನೆಯಿಂದ ಗೋಡೆ ತಡವಿಕೊಂಡು ನಮ್ಮ ಮನೆಗೆ ಬರುತ್ತಿದ್ದಳು. ಕೇವಲ ಗೋಟಡಿಕೆ ಚೂರುಗಳನ್ನು ಬಾಯೊಳಗೆ ಅತ್ತಲಿತ್ತ ನಾಗೆಯಿಂದ ಹೊರಳಾಡಿಸುತ್ತಾ ಯಾವುದೋ ಗಂಧರ್ವ ಲೋಕದಿಂದ ಇಳಿದು ಬಂದ ಕನ್ಯೆಯಂತೆ ತರಕು ವಿಳೆದೆಲೆಗಾಗಿ ಬರುತ್ತಿದ್ದಳು. ಕಟವಾಯಿಯಲ್ಲಿ ಸೋರುತ್ತಿದ್ದ ತೊಂಬುಲವನ್ನು ಸೊರ್ರನೆ ಒಳಗೆಳೆದುಕೊಂಡು ಬಾಯಲ್ಲಿ ತೊಂಬುಲ ತುಂಬಿಕೊಂಡೇ ಮಾತಾಡುತ್ತಿದ್ದ ಅವಳ ಮಾತನ್ನು ಆಲಿಸುವುದೊಂದು ಚೆಂದವಾಗಿತ್ತು. ಬಾಯೊಳಗಿನ ತೊಂಬುಲವನ್ನು ಆಚೆಗೆ ಉಗುಳಿ ಬಂದು, ಗಳಾಗಂಟೆ ಬಿಟ್ಟುಕೊಂಡು ನಿಂತುಕೊಂಡಿದ್ದ ನನ್ನ ಕಡೆಗೆ ನೋಡಿ ಕರ್ರಗೆ ನಗುತ್ತಾ, ನನ್ನ ಕೆನ್ನೆ ಸವರಿ ನೆಟಿಗಿಕೊಂಡು, ನನ್ನ ಬುಲಕಾಯಿ ಹಿಡಿದು ಸವರಿ ತನ್ನ ಬೆರಳುಗಳಿಗೆ ತಾನೇ ಮುತ್ತು ಕೊಟ್ಟುಕೊಳ್ಳುತ್ತಿದ್ದಳು.

ನನ್ನ ಅಮ್ಮನ ಹಲ್ಲುಗಳು ಬೆಳ್ಳಗಿದ್ದರೆ ಬುಡ್ಡಕದರಮ್ಮಜ್ಜಿಯ ಹಲ್ಲುಗಳು ಮಾತ್ರ ಕರ್ರಗಿದ್ದವು. ದಿನವೆಲ್ಲಾ ಎಲೆಅಡಕೆ ನಮುಲಿ ನಮುಲಿ ಹಲ್ಲುಗಳು ಹೀಗೆ ಕರ್ರಗಾಗಿರಬಹುದೆಂದೂ, ಮುಂದೊಂದು ದಿನ ನನ್ನ ಅಮ್ಮನು ಮುದುಕಿಯಾಗುವ ಹೊತ್ತಿಗೆ ಅವಳ ಹಲ್ಲುಗಳೂ ಬುಡ್ಡಕದರಮ್ಮಜ್ಜಿಯ ಹಲ್ಲುಗಳಂತೆ ಕರ್ರಗಾಗಬಹುದೆಂದು ನಾನು ಯೋಚಿಸುತ್ತಿದ್ದೆ. ಆದರೆ ನಂತರದ ದಿನಗಳಲ್ಲಿ ಕರಿಹಲ್ಲುಗಳ ಹಿಂದಿನ ಸೀಕ್ರೆಟ್ ಏನೆಂಬುದನ್ನು ನಾನು ಕಂಡುಕೊಂಡೆ. ನಮ್ಮೂರಿನ ಹತ್ತಿರದ ಯಾದಗೆರೆ ಗ್ರಾಮದ ಅಲೆಮಾರಿ ಕೊರಮ ಸಮುದಾಯದ ಹೆಂಗಸರಿಂದ ನಮ್ಮೂರಿನ ಕೆಲವು ಮಧ್ಯ ವಯಸ್ಕ ಹೆಂಗಸರು ಹಲ್ಲಿಟ್ಟು ಎಂಬ ಗಿಡಮೂಲಿಕೆಯ ಪುಡಿಯನ್ನು ತಮ್ಮ ಹಲ್ಲುಗಳಿಗೆ ತಿಕ್ಕಿಸಿಕೊಂಡು ಬಾಯೊಳಗಿದ್ದ ಎಲ್ಲಾ ಹಲ್ಲುಗಳನ್ನು ಕರ್ರಗೆ ಹೊಳೆಯುವಂತೆ ಗಿಲಾವು ಮಾಡಿಕೊಳ್ಳುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಬಿತ್ತು. ಬುಡ್ಡಕದರಮ್ಮಜ್ಜಿಯೂ ಕೂಡಾ ಬಲು ಹಿಂದೆ ಇದೇ ಅಲೆಮಾರಿಗಳಿಂದ ತನ್ನ ಹಲ್ಲುಗಳಿಗೆ ಹಲ್ಲಿಟ್ಟು ಹಾಕಿಸಿ ಗಿಲಾವು ಮಾಡಿಸಿಕೊಂಡಿದ್ದಳು.

ನನ್ನ ಅಪ್ಪನ ಅಕ್ಕ ಅಂದರೆ ನನ್ನ ಸೋದರತ್ತೆಯ ಬೆಲ್ಲದಹಳ್ಳಿ ಎಂಬ ಊರಿನಲ್ಲಿಯೂ ಎಲ್ಲಕ್ಕ ಎಂಬ ಕೆಂಪನೆ ಅಜ್ಜಿಯೊಬ್ಬಳು ತನ್ನ ಹಲ್ಲುಗಳನ್ನು ಹಲ್ಲಿಟ್ಟಿನಿಂದ ತಿಕ್ಕಿಕೊಂಡು ಹೊಳೆಯುವ ಕರಿ ಇದ್ದಿಲಿನಂತೆ ಮೆರಗು ಮಾಡಿಕೊಂಡಿದ್ದಳು. ಎಲ್ಲಕ್ಕಜ್ಜಿಯು ವಾರಕ್ಕೊಮ್ಮೆ ಹಲ್ಲಿಟ್ಟಿನ ಪುಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುತ್ತಿದ್ದಳು. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಿದ್ದ ಆ ಬೆನ್ನು ಬಾಗಿದ ಅಜ್ಜಿಯ ಬಳಿ ನಾನೊಂದು ದಿನ ಅದೂ ಇದೂ ಮಾತಾಡುತ್ತಾ ಹಲ್ಲಿಟ್ಟು ಹಾಕಿಸಿಕೊಳ್ಳುವ ಉದ್ದೇಶ ಕುರಿತು ಕೇಳಿದೆ. “ನಾವು ಸದಾ ಕಾಲ ಬದುಕಿನ ಮ್ಯಾಲಿರೋರು…. ಕೆಲಸ ಮಾಡುವಾಗ ಆಸರಿಕೆ ಬ್ಯಾಸರಿಕೆ ಕಳೆಯೋದಕ್ಕೆ ಎಲೆಅಡಕೆ ಹಾಕ್ತೀವಿ… ಸದಾ ಎಲೆಅಡಕೆ ಹಾಕಿ ಹಲ್ಲುಜ್ಕಂಡ್ ಬೆಳ್ಳಗೆ ಮಾಡ್ಕಂಡ್ ಕೂತ್ಕಮಾಕೆ ಸಾಧ್ಯನಾ ನಮಗೆ? ಒಂದೊಂದ್ ಸಲಿ ಬದುಕಿನ ಯಾಳ್ಯದಾಗೆ ನಮ್ಮ ತಿಕ ಕೆರ್ಕಳಕೂ ಸಡುವಿರಾದಿಲ್ಲ. ಅದುಕ್ಕೆ ಇಂಗೆ ಹಲ್ಲಿಟ್ಟು ಹಾಕಸ್ಕಮ್ತೀವಿ” ಅಂದಳು.

ಈಗಿನ ನಾವು ಬಿಳಿಕೂದಲಿಗೆ ಕಪ್ಪು ಡೈ ಹಾಕುವ ರೀತಿಯಲ್ಲಿಯೇ ಆಗಿನ ಕೆಲವು ಮುದುಕ ಮುದುಕಿಯರು ಹಲ್ಲಿಟ್ಟಿನಿಂದ ಹಲ್ಲುಜ್ಜುವುದನ್ನು ನಾನು ನೋಡಿದ್ದೆ. ಈಗಲೂ ನನ್ನ ನೆನಪಿನಿಂದ ಆ ದೃಶ್ಯಗಳು ಮಾಸಿಲ್ಲ. ಆಗಿನ ದಿನಗಳಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದು ಮುಖ ತೊಳೆಯುವಾಗ ಮನೆಗಳ ಮಣ್ಣೆಂಟೆಯ ಗೋಡೆಗೆ ನೀರು ಚಿಮುಕಿಸಿ ಬೆರಳಿನಿಂದ ಮಣ್ಣನ್ನು ನಾದಿಕೊಂಡು ಹಲ್ಲುಜ್ಜುವುದು ಅಥವಾ ತೆಂಗಿನ ಕುರಂಬಳೆಯ ಇದ್ದಿಲನ್ನು ಕರಕರನೆ ಜಗಿದು ಬೆರಳಿನಿಂದ ಹಲ್ಲುಜ್ಜುವುದು ಸಾಮಾನ್ಯ ದೃಶ್ಯಗಳಾಗಿದ್ದವು. ಬೇವಿನ ಕಡ್ಡಿಯಿಂದ, ನಂಜನಗೂಡು ಹಲ್ಲುಪುಡಿ ಅಥವಾ ಚಂಪಕಾ ದಂತಚೂರ್ಣದಿಂದ ಹಲ್ಲುಜ್ಜುವುದನ್ನು ಮೇಲ್ವರ್ಗದ ಕಲಿತ ಜನರಲ್ಲಿ ಮಾತ್ರ ನೋಡಬಹುದಾಗಿತ್ತು. ಈಗಿನಂತೆ ಆಗಿನ ಕಾಲದಲ್ಲಿ ದುಬಾರಿ ಬೆಲೆಯ ತರಹೇವಾರಿ ಟೂತ್ ಪೇಸ್ಟು ಬ್ರಶ್ ಗಳು ಹಾಗೂ ದಂತ ಚಿಕಿತ್ಸಾಲಯಗಳು ಮಾರುಕಟ್ಟೆ ಪ್ರವೇಶಿಸಿರಲಿಲ್ಲ. ಆಗಿನ ಜನ ಹಲ್ಲುಗಳ ಬಗ್ಗೆಯಾಗಲೀ ತಲೆಕೂದಲಿನ ಬಗ್ಗೆಯಾಗಲೀ ಅತಿಯಾದ ಎಚ್ಚರಿಕೆ ಮತ್ತು ಆಸಕ್ತಿ ತೋರಿಸುವಂತೆ ಕಾಣಿಸದಿದ್ದರೂ ಅವರು ಮುಪ್ಪಾನು ಮುಪ್ಪಾಗಿ ಸಾಯುವ ದಿನಗಳವರೆಗೂ ತಲೆಕೂದಲು ಕಡುಕಪ್ಪಗೆ ಮತ್ತು ಹಲ್ಲುಗಳು ಸುಭದ್ರವಾಗಿರುವುದನ್ನು ನಾವು ಕಾಣುತ್ತಿದ್ದೆವು.

ಮುದುಕರಿಗಿಂತಲೂ ಹೆಚ್ಚಾಗಿ ಮುದುಕಿಯರು ಮಾತ್ರ ಹಲ್ಲಿಟ್ಟು ತಿಕ್ಕಿಕೊಂಡು ಹಲ್ಲುಗಳನ್ನು ಕರ್ರಗೆ ಮೆರಗುಗೊಳಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಆಗಿನ ಅಜ್ಜಿಯರಿಗೆ ಹಲ್ಲುಗಳನ್ನು ಕಪ್ಪುಗೊಳಿಸಿಕೊಳ್ಳುವುದು ಬಹುಶಃ ಫ್ಯಾಷನ್ ಆಗಿರಲಿಲ್ಲ. ವಯೋವೃದ್ಧರಾಗುವತನಕ ಎಲೆಅಡಕೆ ಜಗಿಯಲು ಎಮಕೆ- ಕಾಳುಕಡ್ಡಿ ಮುಂತಾದ ಗಟ್ಟಿ ಪದಾರ್ಥಗಳನ್ನು ಜಗಿಯಲು ಅನುಕೂಲವಾಗುವಂತೆ ಹಲ್ಲುಗಳನ್ನು ಸುಭದ್ರಪಡಿಸಿಕೊಳ್ಳುವುದೇ ಅವರಿಗಿದ್ದ ಮುಖ್ಯ ಉದ್ದೇಶವೆನ್ನಿಸುತ್ತದೆ. ಹಲ್ಲಿಟ್ಟು ಹಾಕಿಸಿಕೊಂಡವರಿಗೆ ಎಂದಿಗೂ ಹುಳುಕುಹಲ್ಲು, ಹಲ್ಲು ಕುಳಿ ಬೀಳುವುದು, ಹಲ್ಲುಗಳ ನಡುವೆ ಸದುವುಗಳಾಗುವುದು ಮುಂತಾದ ಸಮಸ್ಯೆ ಎದುರಾಗುತ್ತಿರಲಿಲ್ಲ. ಫ್ಲೋರೈಡ್ ಯುಕ್ತ ಉಪ್ಪುನೀರು ಸೇವನೆಯ ಪರಿಣಾಮದಿಂದ ಹಲ್ಲುಗಳು ಹಳದಿಗಟ್ಟುವ ಸಮಸ್ಯೆಯೂ ಕಾಣಿಸುತ್ತಿರಲಿಲ್ಲ.

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಇಂತಹ ಕಪ್ಪು ಹಲ್ಲುಗಳ ಮುದುಕಿಯರು ವಿರಳವಾಗಿ ಕಾಣಸಿಗುತ್ತಾರೆ. ಕೆಲವು ಜನ ತಮ್ಮ ನೆನಪಿಗಾಗಿ ಹಚ್ಚೆ ಹಾಕಿಸುವುದು ಮತ್ತು ಹಲ್ಲಿಗೆ ಹಲ್ಲಿಟ್ಟು ಹಾಕಿಸುವುದು ರೂಢಿಗತ ವಿದ್ಯಮಾನವಾಗಿತ್ತು. “ಸತ್ತಾಗ ನಮ್ಮ ಜೊತೆಗೆ ಯಾರೂ ಬರಲ್ಲ… ಬರೋದೊಂದೇ ಹಚ್ಚೆ ಹಲ್ಲಿಟ್ಟು” ಎಂಬ ಲೋಕರೂಢಿಯ ಮಾತು ಜನಜನಿತವಾಗಿತ್ತು. ಇವತ್ತಿನ ಹೊಸ ತಲೆಮಾರಿನ ಜನರಿಗೆ ಹಲ್ಲಿಟ್ಟು ಅಂದ್ರೆ ಗೊತ್ತೇ ಇಲ್ಲ. ಹಲ್ಲಿಟ್ಟು ಕಣ್ಮರೆಯಾಗಿ ರಾಕ್ಷಸ ಸ್ವರೂಪಿಯಾದ ಟ್ಯಾಟೂ ಸಂಸ್ಕೃತಿ ಎಲ್ಲೆಲ್ಲೂ ರಾರಾಜಿಸುತ್ತಿದೆ. ಕವಿಗಳು ಹೆಣ್ಣಿನ ಚಿತ್ತಾಕರ್ಷಕ ಹಲ್ಲುಗಳನ್ನು ದಾಳಿಂಬೆ ಬೀಜಗಳಿಗೆ ಹೋಲಿಸಿದ್ದಾರೆ. ಕೆಂಪು ದಾಳಿಂಬೆ ಬೀಜಗಳನ್ನು ಮತ್ತು ಬಿಳಿಯ ಹಲ್ಲುಗಳನ್ನು ಹೇಗೆ ಒಂದನ್ನೊಂದು ಹೋಲಿಸಿದರೋ ಕಾಣೆ. ಹಲ್ಲಿಟ್ಟು ಹಾಕಿಸಿಕೊಂಡು ಕರ್ರಗೆ ಗಿಲಾವು ಮಾಡಿಕೊಂಡ ಹಲ್ಲುಗಳಂತೂ ಸೀತಾಫಲ ಅಥವಾ ಕಲ್ಲಂಗಡಿ ಹಣ್ಣಿನ ಬೀಜಗಳಂತೆ ಕರ್ರಗೆ ಕಾಣಿಸುತ್ತವೆ.

ಹಿಂದೆ ಪರಕೀಯರು ಮತ್ತು ಕುಲೀನ ರಾಜಮಹಾರಾಜರು ಆಳ್ವಿಕೆ ಮಾಡುತ್ತಿದ್ದ ಕಾಲದಲ್ಲಿ ತಳಸ್ತರ ಸಾಮಾಜಿಕ ವಲಯಗಳ ಹೆಣ್ಣಿನ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ತಡೆಗಟ್ಟಲು ಹಲ್ಲಿಟ್ಟಿನ ಗಿಲಾವು ಮಾಡಿಸಿಕೊಳ್ಳುವ ಉಪಾಯವನ್ನು ಮಹಿಳೆಯರು ಕಂಡುಕೊಂಡಿದ್ದರೆಂಬ ಅಭಿಪ್ರಾಯ ಚಾಲ್ತಿಯಲ್ಲಿದೆ. ಈ ಅಭಿಪ್ರಾಯವನ್ನು ಅಷ್ಟಾಗಿ ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಹಲ್ಲಿಟ್ಟು ಹಾಕಿಕೊಳ್ಳುವುದು ವಿಶ್ವಾದ್ಯಂತ ರೂಢಿಯಲ್ಲಿದ್ದ ಪದ್ದತಿಯಾಗಿತ್ತು. ಕೆಲವು ಆದಿವಾಸಿಗಳು ಮತ್ತು ದುಡಿಯುವ ವರ್ಗಗಳ ಮಹಿಳೆಯರಲ್ಲಿ ಈ ಪದ್ದತಿ ಹೆಚ್ಚು ಚಾಲ್ತಿಯಲ್ಲಿತ್ತು. ಹಲ್ಲಿಟ್ಟನ್ನು ಹಾಕಿಸಿಕೊಂಡು ಹಲ್ಲು ಸವಕಳಿ, ಹುಳುಕಲ್ಲು, ದಂತಕುಳಿ, ಸದುವಲ್ಲು, ವಸಡು ಬಾಧೆ, ಹಲ್ಲು ಕೀಸುಗಟ್ಟುವಿಕೆ ಆಗದಂತೆ ಶಾಶ್ವತವಾಗಿ ದಂತ ರಕ್ಷಣೆ ಮಾಡಿಕೊಳ್ಳುವ ಹಾಗೂ ಮಿರುಗುವ ಕಡುಕಪ್ಪು ದಂತಕಾಂತಿಯನ್ನು ಹೊಂದುವ ಸಾಂಪ್ರದಾಯಿಕತೆ ಮತ್ತು ವೈಜ್ಞಾನಿಕತೆಗಳೇ ಹಲ್ಲಿಟ್ಟು ಹಾಕಿಸಿಕೊಳ್ಳುವುದರ ಹಿಂದಿನ ಅಸಲಿ ಕಾರಣವಿರಬೇಕು ಅನ್ನಿಸುತ್ತಿದೆ. ಹಲ್ಲಿಟ್ಟು ಬಳಸಿ ತೊಳೆದ ಬಾಯಿಯು ಸ್ವಚ್ಛವಾಗಿಯೂ ತಾಜಾತನದಿಂದಲೂ ಇರುವುದರಿಂದ ದುರ್ವಾಸನೆಯಿಂದ ಮುಕ್ತವಾಗಿ ಒಳ್ಳೆಯ ಪರಿಮಳ ತುಂಬಿಕೊಳ್ಳುತ್ತದೆಂಬುದು ಹಲ್ಲಿಟ್ಟು ಹಾಕಿಸಿಕೊಂಡವರ ಅನುಭವದ ಮಾತು. ಹಲ್ಲಿಟ್ಟಿನ ಅತಿಯಾದ ಬಳಕೆಯು ಆರೋಗ್ಯದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆಂದು ಹೇಳುತ್ತಾರೆ.

ಈಗಿನ ಆಧುನಿಕ ತರುಣಿಯರಿಗೆ ಬಣ್ಣಗುರುಡುತನ ಜಾಸ್ತಿ. ಸಹಜ ರೂಪವತಿಯರೂ ಕೂಡ ತಮ್ಮ ತುಟಿಗಳಿಗೆ ಬಣ್ಣ ಹಚ್ಚಿಕೊಳ್ಳದೆ ಮನೆಯಿಂದಾಚೆಗೆ ಹೋಗಲು ನಿರಾಕರಿಸುತ್ತಾರೆ. ಅವರಿಗೆ ಬಿಳಿ ಹಲ್ಲುಗಳ ಮೇಲೆಯೇ ಹೆಚ್ಚು ವ್ಯಾಮೋಹ. ಹಲ್ಲಿಟ್ಟಾಕಿ ಹಲ್ಲು ಕಪ್ಪಾಗಿಸಿಕೊಳ್ಳಲು ಇವರು ಒಪ್ಪುವುದಿಲ್ಲ. ಹಲ್ಲು ಮತ್ತು ವಸಡಿನ ಆರೋಗ್ಯಕ್ಕಿಂತಲೂ ಹಲ್ಲು ಬೆಳ್ಳಗಿರೋದು ಮುಖ್ಯ. ಆದುದರಿಂದಲೇ ಈಗಿನವರು ಹಲ್ಲುಗಳು ಥಳಥಳಿಸುವಂತೆ ಬ್ಲೀಚ್ ಮಾಡಿಸಿಕೊಳ್ಳುತ್ತಾರೆ. ಇಂತಹ ಸೌಂದರ್ಯ ವ್ಯಸನದಿಂದ ಸನ್ಯಾಸಿಗಳೂ ಕೂಡಾ ಮುಕ್ತರಾಗಿಲ್ಲವೆಂಬುದಕ್ಕೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರಾವಧೂತ ಮಠದ ಶ್ರೀ ನಂಜಾವಧೂತ ಸ್ವಾಮೀಜಿಯು ತನ್ನ ಹಲ್ಲುಗಳಿಗೆ ಬ್ಲೀಚ್ ಮಾಡಿಸಿಕೊಂಡಿದ್ದಾರೆ. ಆಗಿಂದಾಗ್ಗೆ ಪುರುಷರ ಪಾರ್ಲರ್ ಗೆ ಹೋಗುವ ಪಾರ್ಲರ್ ಸ್ವಾಮೀಜಿಯಾಗಿ ಹೆಸರುವಾಸಿಯಾಗಿದ್ದಾರೆ. ಕೆಲವರಂತೂ ತಮ್ಮ ಹಲ್ಲುಗಳಿಗೆ ಗೋಲ್ಡನ್ ಓವರ್ ಕೋಟ್ ಮಾಡಿಸಿಕೊಂಡಿದ್ದಾರೆ. ಅದು ಅವರವರ ವಯಕ್ತಿಕ ಅಭಿರುಚಿಯೂ ಸ್ವಾತಂತ್ರ್ಯವೂ ಆಗಿರುತ್ತದೆ.

ಹಲ್ಲಿಟ್ಟನ್ನು ದಾಲ್ಚುಣ್ಣ- ಕಾಚು – ಹಸಿರೆಲೆಗಳ ರಸ- ಗಿಡಮೂಲಿಕೆಯ ಪುಡಿಗಳಿಂದ ತಯಾರಿಸುತ್ತಾರೆಂದು ನನ್ನ ಅಪ್ಪ ಹೇಳುತ್ತಿದ್ದದ್ದು ನನಗಿಂದಿಗೂ ನೆನಪಿಗಿದೆ. ನೈಸರ್ಗಿಕ ಸಸ್ಯ ಮೂಲಿಕಾಂಶಗಳಿಂದ ತಯಾರಿಸಲಾದ ಹಲ್ಲಿಟ್ಟು ಹಲ್ಲುಗಳಿಗೆ ಸುರಕ್ಷಿತವೂ ಉಪಯುಕ್ತವೂ ಆಗಿದೆ. ಅದು ಹಲ್ಲುಗಳನ್ನು ಆಳವಾಗಿ ಕಪ್ಪುಗೊಳಿಸುವುದು ಮಾತ್ರವಲ್ಲದೆ ಹಲ್ಲುಗಳ ಕಲೆಗಳು ಮತ್ತೆ ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ. ಹಲ್ಲು ಕಪ್ಪು ಮಾಡುವಿಕೆಯು ಧೂಮಪಾನ ಮತ್ತು ಚಹಾ ಅಥವಾ ಕಾಫಿಯನ್ನು ಕುಡಿಯುವುದರಿಂದ ಉಂಟಾದ ಕಲೆಗಳನ್ನು ಕಾಣದ ರೀತಿಯಲ್ಲಿ ಮರೆಮಾಚುತ್ತದೆ, ಹಳದಿ ಹಲ್ಲುಗಳನ್ನು ಹಲ್ಲಿಟ್ಟು ಸಂಪೂರ್ಣವಾಗಿ ಕಪ್ಪುಗೊಳಿಸುತ್ತದೆ. ಈ ಪುಡಿಯು ಕಪ್ಪು ಬಣ್ಣದ ಪರಿಣಾಮವನ್ನು ವ್ಯಕ್ತಿಯ ಜೀವಿತಾಂತ್ಯದವರೆಗೂ ಕಾಪಾಡಿಕೊಳ್ಳುವಂತಹ ಉತ್ತಮ ಗುಣಮಟ್ಟವನ್ನು ಹೊಂದಿದ್ದು ಸರಳ ದೇಶಿ ತಂತ್ರಜ್ಞಾನದಿಂದ ರೂಪಿಸಲಾಗಿರುತ್ತದೆ. ಅದು ಯಾವುದೇ ಹೊಸ ಬಣ್ಣದ ವರ್ಣದ್ರವ್ಯವನ್ನು ಹಲ್ಲುಗಳಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ.

ಹಲ್ಲುಗಳನ್ನು ಕಪ್ಪಾಗಿಸಿಕೊಳ್ಳುವುದು ಚೀನಾ, ಪೆಸಿಫಿಕ್ ದ್ವೀಪಗಳು ಮತ್ತು ಆಗ್ನೇಯ ಏಷ್ಯಾದ ಜನರಲ್ಲಿ ಇಂದಿಗೂ ವಿರಳವಾಗಿ ರೂಢಿಗಿದೆ. ದಕ್ಷಿಣ ಚೀನಾದಲ್ಲಿ ಮತ್ತು ಜಪಾನ್ ದೇಶದಲ್ಲಿ ಹಲ್ಲು ಕಪ್ಪಾಗಿಸಿಕೊಳ್ಳುವ ಸಂಪ್ರದಾಯಬದ್ಧ ಆಚರಣೆಗಳಿವೆ. ಹಲ್ಲು ಗಿಲಾವು ಮಾಡಿಕೊಳ್ಳುವುದನ್ನು ಪ್ರಬುದ್ಧತೆ, ಸೌಂದರ್ಯ ವರ್ಧನೆ ಮತ್ತು ನಾಗರಿಕತೆಯ ಸಂಕೇತವೆಂದು ನಂಬಲಾಗಿದೆ. ಕಪ್ಪಾದ ಹಲ್ಲುಗಳು ಮನುಷ್ಯರನ್ನು ಪ್ರಾಣಿಗಳಿಂದ ಪ್ರತ್ಯೇಕಿಸುತ್ತವೆಂಬುದು ಮತ್ತೊಂದು ಸಾಮಾನ್ಯ ನಂಬಿಕೆ. ಇದು ಮುಖ್ಯವಾಗಿ ವಯಸ್ಸಾದ ಮಹಿಳೆಯರಲ್ಲಿ ಪ್ರಚಲಿತದಲ್ಲಿದೆ. 1938 ರಲ್ಲಿ ನಡೆದ ಫ್ರೆಂಚ್ ಸಮೀಕ್ಷೆಯೊಂದರ ಪ್ರಕಾರ ವಿಯೆಟ್ನಾಂ ದೇಶದ 80% ಗ್ರಾಮಾಂತರ ಜನಪದರು ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದಾರೆ. ವಿಯೆಟ್ನಾಂ ಮತ್ತು ಇತರ ಆಗ್ನೇಯ ಏಷ್ಯಾದ ಮಧ್ಯಕಾಲೀನ ರಾಜರು ಸಹ ಹಲ್ಲುಗಳನ್ನು ಕಪ್ಪಾಗಿಸಿಕೊಂಡಿದ್ದರು. ವಸಾಹತುಶಾಹಿ ಯುಗದಲ್ಲಿ ಪಾಶ್ಚಾತ್ಯ ಸೌಂದರ್ಯದ ಮಾನದಂಡಗಳು ಪರಿಚಯವಾದ ನಂತರದ ಕಾಲದಲ್ಲಿ ಹಲ್ಲಿಟ್ಟು ಗಿಲಾವು ಸಂಸ್ಕೃತಿಯು ಕಣ್ಮರೆಯಾಗುತ್ತಾ ಬಂತು.

ದಕ್ಷಿಣ ಭಾರತದಲ್ಲಿ ಹಲ್ಲುಗಳನ್ನು ಕಪ್ಪಾಗಿಸುವಿಕೆಯು ಲೈಂಗಿಕ ಪರಿಪಕ್ವತೆಗೆ ಸಂಬಂಧಿಸಿದ ಜೀವನ ಚಕ್ರ ಘಟನೆಯಾಗಿ ಮತ್ತು ಲೈಂಗಿಕ ಪ್ರಚೋದಕವಾಗಿ ದೇವದಾಸಿ ಮಹಿಳೆಯರಲ್ಲಿ ಹೆಚ್ಚಾಗಿ ಅಭ್ಯಾಸಕ್ಕೆ ಬಂದಂತಿದೆ. ತಾಂಬೂಲ ಸೇವನೆ ಮತ್ತು ಹಲ್ಲಿಟ್ಟು ಮೆರುಗು ಆರೋಗ್ಯಕರವಾದ ಹಲ್ಲುಗಳನ್ನು ಕಾಪಾಡಿಕೊಳ್ಳುವುದರ ಜೊತೆಗೆ ಲೈಂಗಿಕ ಆಕರ್ಷಣೆಯನ್ನು ಹೆಚ್ಚಿಸಲು ಸಹಕಾರಿ ಎಂದು ನಂಬಲಾಗಿದೆ. ಏಷ್ಯಾದ ಇತಿಹಾಸದುದ್ದಕ್ಕೂ ಹಲ್ಲು ಕಪ್ಪಾಗಿಸುವ ಸಾಂಪ್ರದಾಯಿಕ ಜನಪದ ಸಂಸ್ಕೃತಿಯು ಸಾಕಷ್ಟು ಜನಪ್ರಿಯವಾಗಿದೆ.

ಫೋಟೋ : ಅಂತರ್ಜಾಲ
ವಿಡಿಯೋ ನೆರವು : ಅಂಬಿಕಾ ವಾಸುದೇವ್
ಪ್ರಸ್ತುತ ಪೋಸ್ಟ್ ನ ವಿಡಿಯೋ ವಕ್ತೃ : ಸಾವಂತಮ್ಮ (ಸು.70), ಹೆರಗು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು, ಹಾಸನ ಜಿಲ್ಲೆ.

ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಲೈಫ್ ಸ್ಟೈಲ್

ನೀಲಿ ಪರ್ವತಗಳ ನಾಡಿನಲ್ಲಿ ಕೀಚಕರ ಹಾವಳಿ

Published

on

Unidentified miscreants torch two houses belonging to a particular community to retaliate the killing of nine civilians by Kukis in Manipur. (Photo: PTI)
  • ಡಾ. ಸಿದ್ದಯ್ಯ ರೆಡ್ಡಿಹಳ್ಳಿ

ಗತ್ತಿನ ಪ್ರತಿ ಜನಾಂಗವು ತನ್ನ ಪೂರ್ವಜರ ಪ್ರತಿಭೆ ಹಾಗೂ ಹಿರಿಮೆಯನ್ನು ಹೇಳಿಕೊಳ್ಳಲು ಕಾತರಿಸುತ್ತದೆ. ಅದರಂತೆಯೇ ನಮ್ಮ ಭರತ ಖಂಡದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ವಾಸಿಸುವ ಮಣಿಪುರಿ ಜನರು ಕ್ರಿಸ್ತಪೂರ್ವದಲ್ಲಿಯೇ ಅತ್ಯಾಧುನಿಕ ಸಾಮ್ರಾಜ್ಯವನ್ನು ಕಟ್ಟಿದ್ದರಂತೆ ಎಂದು ಹೇಳಿಕೊಳ್ಳುತ್ತಾರೆ.

ನಿಜ ಮಣಿಪುರಿಗಳು ಬೆಟ್ಟಗಳ ನಡುವೆ ಬೆಚ್ಚನೆಯ ಜೀವನವನ್ನು ಸಾಗಿಸಿದವರು. ಆದರೆ ಅಲ್ಲಿ ಕೊಳ್ಳಿ ಇಡುವ ಕೆಲಸಗಳು ಬಹಳ ಹಿಂದಿನಿಂದಲೇ ಪ್ರಾರಂಭವಾಗಿರುವುದು ತಿಳಿದುಬರುತ್ತದೆ. ವಾಸ್ತವದಲ್ಲಿ ಹಲವು ಬುಡಕಟ್ಟುಗಳ ಸಂಮಿಶ್ರಣವೇ ಮಣಿಪುರವಾಗಿದೆ. ಆದರೆ ಮಣಿಪುರಿಗಳು ಮಾತ್ರ ಈ ನೆಲದ ಮೂಲ ನಿವಾಸಿಗಳು, ಅವರಿಗೆ ಮಾತ್ರ ಸಕಲ ಸೌಕರ್ಯಗಳು ಸಿಗಬೇಕು, ಉಳಿದವರು ರಾಜ್ಯ ಬಿಡಬೇಕು ಎಂದು ಉಯಿಲ್ಲೆಬ್ಬಿಸುತ್ತಿರುವವರು ಯಾರು? ಪ್ರತಿಯೊಂದು ಬುಡಕಟ್ಟು ಜನಾಂಗಕ್ಕೆ ಇರುವಂತೆ ಹೇರಳವಾದ ಜಾನಪದ ಕಥೆ, ಪುರಾಣ ಮತ್ತು ದಂತಕಥೆಗಳ ಸಂಪತ್ತು ಇಲ್ಲಿನ ಬುಡಕಟ್ಟು ಜನಾಂಗಗಳಿಗೂ ಇದೆ.

ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ವಾಸಿಸುತ್ತಿದ್ದ ಜನರನ್ನು ಮಿತೇಯಿ ಅಥವಾ ಮೈತೇಯಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಮಣಿಪುರವು ಬಾಂಗ್ಲಾದ ಗುಡ್ಡುಗಾಡು ಜಿಲ್ಲೆಗಳಲ್ಲಿ ಒಂದಾಗಿತ್ತು. ಭಾರತ ಸ್ವಾತಂತ್ರ್ಯಗೊಂಡು ಎರಡು ವರ್ಷ ಎರಡು ತಿಂಗಳು ಕಳೆದ ನಂತರ ಅಂದರೆ ಅಕ್ಟೋಬರ್ 15, 1949ರಂದು ಭಾರತದೊಂದಿಗೆ ಏಕೀಕೃತವಾಯಿತು.

ಮಣಿಪುರದಲ್ಲಿ ಅಂತರ-ಜನಾಂಗೀಯ ಹಿಂಸಾಚಾರವು ಇದೇ ಮೊದಲೇನಲ್ಲ, ಇದಕ್ಕೆ ಸುದೀರ್ಘವಾದ ಇತಿಹಾಸವಿದೆ. ಮಣಿಪುರಿಗಳ ಅತಿರೇಕ ಎಲ್ಲಿಯವರೆಗೆ ಹೋಗಿತ್ತು ಎಂದರೆ 1964ರಲ್ಲಿ ಭಾರತದಿಂದ ಬಿಡುಗಡೆ ಹೊಂದಿ, ಹೊಸ ದೇಶವನ್ನು ಸೃಷ್ಟಿಸಿಕೊಳ್ಳಬೇಕು ಎಂದು ದಂಗೆಯನ್ನು ಎಬ್ಬಿಸಲಾಗಿತ್ತು. ಇದರಲ್ಲಿ ಹಲವಾರು ಗುಂಪುಗಳು ಕೂಡಿಕೊಂಡಿದ್ದವು. ಅವರಿಗೆ ಅವರದೇ ಆದ ಗುರಿಗಳು ಇದ್ದುದರಿಂದ ಈ ದಂಗೆ ವಿಫಲವಾಯಿತು.

ಚೀನಾ ದೇಶದ ಕುಮ್ಮಕ್ಕಿನಿಂದಾಗಿ ‘ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್’ ಮತ್ತು ‘ಪೀಪಲ್ಸ್ ಲಿಬರೇಶನ್ ಆರ್ಮಿಗಳು’ ಹುಟ್ಟಿಕೊಂಡವು. ಇವರು ಶಸ್ತ್ರಾಸ್ತ್ರ ತರಬೇತಿಯನ್ನು ಹೊಂದಿ, ಬ್ಯಾಂಕ್ ದರೋಡೆಗಳನ್ನು ಮಾಡುವುದು, ಪೊಲೀಸ್ ಅಧಿಕಾರಿಗಳ ಮೇಲೆ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡುವುದು ಇಂತಹ ಕೃತ್ಯಗಳನ್ನು ಮಾಡತೊಡಗಿದರು. 1980 ರಿಂದ 2004ರವರೆಗೂ ಭಾರತ ಸರ್ಕಾರ ಮಣಿಪುರವನ್ನು ಪ್ರಕ್ಷÄಬ್ದ ಪ್ರದೇಶ ಎಂದು ಉಲ್ಲೇಖಿಸಿತ್ತು.

ಈ ಸಂದರ್ಭದಲ್ಲಿ ‘ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ’ಯನ್ನು ಜಾರಿಗೆ ತರಲಾಯಿತು. ಈ ಕಾಯಿದೆಯ ಪ್ರಕಾರ ಖಾಸಗಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಟ್ಟವರ್ತನೆಗಳನ್ನು ಮಾಡುತ್ತಿದ್ದರೆ, ಯಾವುದೇ ವಾರಂಟ್‌ಗಳಿಲ್ಲದೆ ಬಂಧಿಸಬಹುದಾಗಿತ್ತು. ಕಾನೂನುಗಳನ್ನು ಉಲ್ಲಂಘಿಸುವ, ಶಸ್ತ್ರಾಸ್ತ್ರಗಳನ್ನು ಹೊಂದಿರುವವರನ್ನು ಅಥವಾ ದೊಡ್ಡ ದೊಡ್ಡ ಗುಂಪುಗಳಲ್ಲಿ ಸೇರಿದ್ದವರನ್ನು ಗುಂಡಿಕ್ಕಿ ಕೊಲ್ಲುವ ಅವಕಾಶವನ್ನು ಮಿಲಿಟರಿಗೆ ಕೊಡಲಾಗಿತ್ತು. ಮಿಲಿಟರಿಯ ಪರವಾಗಿರುವ ಈ ಕಾನೂನು ಅನಿಯಂತ್ರಿತ ಹತ್ಯೆಗಳು, ಚಿತ್ರಹಿಂಸೆ, ಕ್ರೂರ ಅಮಾನವೀಯತೆ, ಅಪಹರಣದಂತಹ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಯಿತು.

ಈ ಮಾನವ ವಿರೋದಿ ಮಿಲಿಟರಿ ಕಾನೂನಿನ ವಿರುದ್ಧ ಹಲವಾರು ಪ್ರತಿಭಟನೆಗಳು, ಹೋರಾಟಗಳು ಜರುಗಿದವು. ಇರೋಮ್ ಶರ್ಮಿಳಾ ಚಾನು ಎಂಬ ದಿಟ್ಟ ಮಹಿಳೆ ದೀರ್ಘಾವಧಿಯ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದಳು. ಆದರೂ 2004ರಲ್ಲಿ ಸ್ಥಳೀಯ ಮಹಿಳೆಯರ ಮೇಲೆ ಹಿಂಸಾತ್ಮಕ ದಾಳಿಯನ್ನು ನಡೆಸಲಾಯಿತು. ಇದಕ್ಕೆ ಪ್ರತಿರೋಧವಾಗಿ ಪ್ರತಿಭಟನೆಗಳು ತೀವ್ರಮಟ್ಟಕ್ಕೆ ತಲುಪಿದಾಗ ಸರ್ಕಾರವು ಮಣಿಪುರದಲ್ಲಿದ್ದ ಗೊಂದಲದ ಸ್ಥಿತಿಯನ್ನು ತೆಗೆದುಹಾಕಿತು.

ಮಣಿಪುರವು ನೀಲಿ ಪರ್ವತಗಳಿಂದ ಸುತ್ತುವರೆದಿರುವ ನಾಡಾಗಿದೆ. ಈ ಪರ್ವತ ಶ್ರೇಣಿಗಳು ತಣ್ಣನೆಯ ಗಾಳಿಯನ್ನು ಮಣಿಪುರಿಗಳಿಗೆ ತಲುಪದಂತೆ ತಡೆಯುತ್ತವೆ. ಆದರೆ ಮಣಿಪುರಿಗಳಲ್ಲಿಯೇ ಹೊತ್ತಿಕೊಂಡಿರುವ ಬೆಂಕಿಯನ್ನು ನಂದಿಸಲು ಅವುಗಳಿಗೆ ಸಾಧ್ಯವೇ!? ಅವುಗಳು ಚಂಡಮಾರುತದ ಬಿರುಗಾಳಿಗಳನ್ನು ತಡೆಯಬಹುದು, ಆದರೆ ಅವರಲ್ಲಿರುವ ಮೌಢ್ಯವನ್ನು ತೊಡೆದುಹಾಕಲು ಸಾಧ್ಯವೇ?!
ಮಣಿಪುರ ರಾಜ್ಯವು ಉತ್ತರಕ್ಕೆ ನಾಗಾಲ್ಯಾಂಡ್, ದಕ್ಷಿಣಕ್ಕೆ ಮಿಜೋರಾಂ, ಪಶ್ಚಿಮಕ್ಕೆ ಅಸ್ಸಾಂ ಮತ್ತು ಪೂರ್ವಕ್ಕೆ ಮಯನ್ಮಾರ್ ದೇಶದ ಗಡಿಯನ್ನು ಹೊಂದಿದೆ.

ಮಣಿಪುರದಲ್ಲಿ ಮಳೆಗೆ, ನೀರಿಗೆ ಕೊರತೆಯಿಲ್ಲ. ಇದರ ಪಶ್ಚಿಮಕ್ಕೆ ಬರಾಕ್ ನದಿಯ ಜಲಾನಯನ ಪ್ರದೇಶ, ಪೂರ್ವದಲ್ಲಿ ಯು ನದಿಯ ಜಲಾನಯನ ಪ್ರದೇಶ, ಉತ್ತರದಲ್ಲಿ ಲಾನ್ಯೆ ನದಿಯ ಜಲಾನಯನ ಪ್ರದೇಶ, ಮಧ್ಯದಲ್ಲಿ ಮಣಿಪುರ ನದಿಯ ಜಲಾನಯನ ಪ್ರದೇಶವನ್ನು ಹೊಂದಿ ಸಮೃದ್ಧವಾಗಿರುವಂತೆ, ಅಲ್ಲಿನ ಮಹಿಳೆಯರು ಧಾರಾಕಾರವಾಗಿ ಕಣ್ಣೀರನ್ನು ಸುರಿಸುತ್ತಿದ್ದಾರೆ. ಇಲ್ಲಿನ ಮಹಿಳೆಯರ ಕಣ್ಣೀರಿಗೆ ಮೊದಲನ್ನು ಗುರುತಿಸುವುದಕ್ಕೆ, ಕೊನೆಯನ್ನು ಗ್ರಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.

ಮಣಿಪುರದ ಅತಿದೊಡ್ಡ ನದಿ ಬರಾಕ್. ಇದು ಇರಾಂಗ್, ಮಕು ಮತ್ತು ತುವೈ ಉಪನದಿಗಳನ್ನು ಹೊಂದಿ ಅಸ್ಸಾಂ ರಾಜ್ಯವನ್ನು ಪ್ರವೇಶಿಸುತ್ತದೆ. ಮಣಿಪುರ ನದಿಯ ಜಲಾನಯನ ಪ್ರದೇಶವು ಮಣಿಪುರ, ಇಂಫಾಲ್, ಇರಿಲ್, ನಂಬುಲ್, ಸೆಕ್ಮೆಂ, ಚಕ್ಪಿ, ತೌಬಲ್ ಮತ್ತು ಖುಗಾ ಎಂಬಂತಹ ಎಂಟು ನದಿಗಳನ್ನು ಹೊಂದಿದೆ. ಈ ಎಲ್ಲಾ ನದಿಗಳು ಸುತ್ತಮುತ್ತಲಿನ ಬೆಟ್ಟಗಳಿಂದಲೇ ಹುಟ್ಟಿಕೊಂಡಿವೆ. ಈ ನದಿಗಳ ಒಳಹರಿವಿನ ಮರ್ಮ ನಮ್ಮ ರಾಜಕಾರಣಿಗಳ ಮರ್ಮದಂತೆ ಯಾರಿಗೂ ತಿಳಿಯದಂತಹ ಕಗ್ಗಂಟಾಗಿದೆ. ನದಿಯು ತಣ್ಣಗಿದ್ದು, ಒಂದೇ ಭಾರಿ ಬೋರ್ಗರೆದು ತಣ್ಣಗಾಗುವಂತೆ ನಮ್ಮ ಪ್ರಧಾನಮಂತ್ರಿಗಳು ಮೂರು ತಿಂಗಳ ಕಾಲ ದಿವ್ಯ ಮೌನವಾಗಿದ್ದು, ಜನರ ನಿತ್ಯ ಜೀವನವು ಅಲ್ಲೋಲ-ಕಲ್ಲೋಲ ಆದಮೇಲೆ ತಣ್ಣಗೆ ಮಾತನಾಡಿದ್ದಾರೆ.

ಆದರೆ ಅಲ್ಲಿಗೆ ಹೋಗುವ ಧೈರ್ಯವನ್ನು ಮಾಡಿಲ್ಲ. ಚುನಾವಣೆ ಇದ್ದರೆ ಹತ್ತು-ಹದಿನೈದು ಬಾರಿ ರೋಡ್-ಶೋ ಮಾಡುವ ಇವರು ಕಷ್ಟದ ಕಾಲದಲ್ಲಿ ಆ ಕಡೆ ತಿರುಗಿಯು ನೋಡದೇ ಇರುವುದು ಭಾರತೀಯರು ಪಶ್ಚಾತ್ತಾಪಪಡುವಂತೆ ಮಾಡಿದೆ.
ಮಣಿಪುರವನ್ನು ಭೌತಿಕ ಲಕ್ಷಣಗಳಲ್ಲಿ ವಿಭಿನ್ನವಾಗಿರುವ ಎರಡು ವಿಭಿನ್ನ ಭೌತಿಕ ಪ್ರದೇಶಗಳಾಗಿ ನಿರೂಪಿಸಬಹುದು. ಒಂದು ಒರಟಾದ ಬೆಟ್ಟಗಳು, ಕಿರಿದಾದ ಕಣಿವೆಗಳ ಹೊರ ಪ್ರದೇಶ ಮತ್ತೊಂದು ಸಮತಟ್ಟಾದ ಬಯಲಿನ ಒಳ ಪ್ರದೇಶ. ಇಲ್ಲಿನ ಕಣಿವೆ ಪ್ರದೇಶವು ಸಮತಟ್ಟಾದ ಮೇಲ್ಮೈ ಮೇಲೆ ಏರುತ್ತಿರುವ ಬೆಟ್ಟಗಳು ಮತ್ತು ದಿಬ್ಬಗಳಿಂದ ಕೂಡಿದೆ.

ಇಲ್ಲಿನ ಲೋಕ್ಟಾಕ್ ಸರೋವರವು ಕೇಂದ್ರ ಬಯಲಿನಿಂದ ನಾಗಾಲ್ಯಾಂಡ್‌ನ ಗಡಿಯವರೆಗೂ ತನ್ನ ವಿಸ್ತಾರವನ್ನು ಹರಡಿಕೊಂಡಿದೆ. ಇಲ್ಲಿನ ಮಣ್ಣಿನ ಹೊದಿಕೆಗೂ ಗಂಡು-ಹೆಣ್ಣಿನ ಸಂಬಂಧಕ್ಕೂ ನಿಕಟವಾದ ಹೋಲಿಕೆ ಇರುವಂತೆ ಕಂಡುಬರುತ್ತದೆ. ಬೆಟ್ಟದ ಪ್ರದೇಶದಲ್ಲಿ ಕೆಂಪು ಫೆರುಜಿನಸ್ ಮಣ್ಣು ಮತ್ತು ಕಣಿವೆಯಲ್ಲಿ ಮೆಕ್ಕಲು ಮಣ್ಣು ಇದೆ. ಕಣಿವೆಯ ಮಣ್ಣು ಇಲ್ಲಿನ ಗಂಡಿನ ರೀತಿಯಲ್ಲಿ ಕಠಿಣವಾಗಿದ್ದರೆ, ಕಡಿದಾದ ಇಳಿಜಾರುಗಳಲ್ಲಿರುವ ಮಣ್ಣು ಹೆಣ್ಣಿನಂತೆ ಹೆಚ್ಚಿನ ಸವೆತಕ್ಕೆ ಒಳಗಾಗಿದೆ, ಒಳಗಾಗುತ್ತಿದೆ. ಇದರ ಪರಿಣಾಮವಾಗಿ ಬಂಜರು ಬಂಡೆಗಳ ಇಳಿಜಾರುಗಳು ಸೃಷ್ಟಿಯಾಗುವಂತೆ ಅಲ್ಲಿನ ಪುರುಷರ ಮನಸ್ಸುಗಳು ಬಂಡೆಯಂತೆ ಆಗುತ್ತಿರುವುದು ಖೇದಕರವಾದ ಸಂಗತಿಯಾಗಿದೆ.

ಬೆಟ್ಟದ ತಪ್ಪಲಿನಲ್ಲಿ ರತ್ನಗಂಬಳಿಯನ್ನು ಹಾಸಿಹೊದಿಸಿರುವಂತೆ ಕಾಣುವ ಫ್ಲೋರಾ ಹೂವುಗಳು ಅಲ್ಲಿನ ಬುಡಕಟ್ಟು ಮಹಿಳೆಯರ ಸೌಂದರ್ಯವನ್ನು ಬಿತ್ತರಿಸಿದರೆ, ಬೆಟ್ಟಗಳು ಪುರುಷಾಂಕಾರದಂತೆ ಕಾಣುತ್ತವೆ. ಇಲ್ಲಿ ಏನಿಲ್ಲ ಹೇಳಿ, ನೈಸರ್ಗಿಕವಾದ ಸಸ್ಯವರ್ಗವಿದೆ. ನಾಲ್ಕು ರೀತಿಯ ವಿಶಾಲವಾಗಿ ಹರಡಿರುವ ಉಷ್ಣವಲಯದ ಅರೆ-ನಿತ್ಯಹರಿದ್ವರ್ಣ, ಒಣ ಸಮಶೀತೋಷ್ಣ ಅರಣ್ಯ, ಉಪ-ಉಷ್ಣವಲಯದ ಪೈನ್ ಕಾಡುಗಳು ಮತ್ತು ಉಷ್ಣವಲಯದ ತೇವಾಂಶವುಳ್ಳ ಅರಣ್ಯಗಳಿವೆ. ತೇಗ, ಪೈನ್, ಓಕ್, ಯುನಿಂಗ್ದೌ, ಲಿಹಾವೊ, ಬಿದಿರಿನ ಮರಗಳಿವೆ. ತಮ್ಮ ಕಷ್ಟಗಳ ನಡುವೆಯೂ ರಬ್ಬರ್, ಟೀ, ಕಾಫಿ, ಕಿತ್ತಳೆ, ಏಲಕ್ಕಿ ಬೆಳೆಯುತ್ತಾರೆ. ಆದರೆ ಅವರು ಹೆಚ್ಚು ಬೆಳೆಯುವ ಮತ್ತು ಇಷ್ಟಪಡುವ ಅಕ್ಕಿಯಂತೆ ಅಲ್ಲಿನ ಪುರುಷರ ಮನಸ್ಸುಗಳು ಬೇಗನೇ ಹಾಳಾಗುತ್ತಿರುವುದು ಜಾತಿ, ಧರ್ಮಗಳೆಂಬ ಕೀಟಗಳಿಂದ ಎಂಬುದನ್ನು ಅವರು ತಿಳಿಯದಿರುವುದು ದುರದೃಷ್ಟಕರ.

ಮಣಿಪುರ ಮತ್ತು ನಾಗಾಲ್ಯಾಂಡ್‌ಗಳ ಗಡಿಗಳ ನಡುವೆ ಇರುವ ಝುಕೊ ಎಂಬ ಕಣಿವೆಯು ಸಮಶೀತೋಷ್ಣ ಹವಾಮಾನವನ್ನು ಹೊಂದಿರುವಂತೆ, ಅಲ್ಲಿನ ಜನರಿಗೆ ಸಮಚಿತ್ತತೆಯನ್ನು ನೀಡಿದ್ದರೆ ಚೆನ್ನಾಗಿರುತ್ತಿತ್ತು. ಭಾರತದ ಈಶಾನ್ಯ ಮೂಲೆಯು ಸಾಮಾನ್ಯವಾಗಿ ಸೌಹಾರ್ದಯುತವಾದ ಹವಾಮಾನವನ್ನು ಹೊಂದಿದೆ. ಆದರೆ ಅಲ್ಲಿನ ಜನರು ಸೌಹಾರ್ದಯುತವಾದ ಮನೋಭಾವನೆಯನ್ನು ಹೊಂದಿಲ್ಲ. ಅಲ್ಲಿನ ವಾತಾವರಣದಂತೆ ಚಳಿಗಾಲದಲ್ಲಿ ಚಳಿ ಹೆಚ್ಚಾಗಿರುವಂತೆ, ಬೇಸಿಗೆಯಲ್ಲಿ ಬಿಸಿಲು ಗರಿಷ್ಠ ಮಟ್ಟಕ್ಕೆ ಹೋಗುವಂತೆ ಅಲ್ಲಿನ ಜನರು ಆವೇಶಕ್ಕೊಳಗಾಗುತ್ತಾರೆ.
ಇಂಫಾಲದ ಮೈತೇಯಿ ಜನರು ವಾರ್ಷಿಕ ಸರಾಸರಿ 933 ಮಿಲಿಮೀಟರ್ ಮಳೆಯನ್ನು ಪಡೆಯುತ್ತಾರೆ. ಆದರೂ ಕೂಡ ತಮ್ಮದೇ ನೆಲದಲ್ಲಿರುವ ಕುಕಿ ಜನಾಂಗದ ಮಹಿಳೆಯರು ಕಣ್ಣೀರು ಸುರಿಸುವಂತೆ ನಡೆದುಕೊಳ್ಳುತ್ತಾರೆ.

ನೈರುತ್ಯ ಮಾನ್ಸೂನ್ ಮಾರುತಗಳು ಬಂಗಾಳಕೊಲ್ಲಿಯಿAದ ತೇವಾಂಶವನ್ನು ಎತ್ತಿಕೊಂಡು ಪೂರ್ವ ಹಿಮಾಲಯ ಶ್ರೇಣಿಗಳ ಕಡೆಗೆ ಹೋಗುವಾಗ ಈ ಪ್ರದೇಶದಲ್ಲಿ ಮಳೆಯಾಗುವಂತೆ ಪ್ರಕೃತಿಯೇ ನೋಡಿಕೊಂಡರೂ ಮಹಿಳೆಯರ ಕಣ್ಣೀರು ಮಾತ್ರ ಧಾರಾಕಾರವಾಗಿ ಹರಿಯುವಂತೆ ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ನೋಡಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಮಣಿಪುರದಲ್ಲಿ ಹವಾಮಾನದಲ್ಲಿ ಬದಲಾವಣೆ ಹೆಚ್ಚಾಗುತ್ತಿದೆ. ಉದಾಹರಣೆಗೆ ಮಳೆ ಮತ್ತು ತಾಪಮಾನದಲ್ಲಿ ತೀವ್ರ ಬದಲಾವಣೆಗಳು ಹೆಚ್ಚಾಗುತ್ತಿವೆ. ಆದರೆ ಅಲ್ಲಿನ ಜನಾಂಗಗಳ ನಡುವಿನ ಬಾಂಧವ್ಯದ ಬದ್ಧತೆಗಳು ಏರುಪೇರಾಗುತ್ತಿರುವುದು ಸಾಕಷ್ಟು ಹಿಂದಿನಿAದಲೇ ನಡೆಯುತ್ತಿರುವುದು ಮನುಷ್ಯ ಸಂಬಂಧಗಳ ನಡುವೆ ಬಿರುಕು ಮೂಡಿರುವುದರ ದ್ಯೋತಕವಾಗಿದೆ. ಕಣಿವೆ ಅಥವಾ ಬಯಲು ಪ್ರದೇಶಗಳಲ್ಲಿ ಮೈತೇಯಿ ಮಾತನಾಡುವ ಅಂದರೆ ಮಣಿಪುರಿ ಭಾಷಿಕರು ನೆಲೆಸಿದ್ದಾರೆ. ಬೆಟ್ಟಗಳಲ್ಲಿ ನಾಗಾಗಳು, ಕುಕಿಗಳು ಮೊದಲಾದ ಸಣ್ಣ ಬುಡಕಟ್ಟು ಜನರು ವಾಸಿಸುತ್ತಿದ್ದಾರೆ. ಇವರು ಬೆಟ್ಟಗಳ ಮೇಲ್ಮೈ ಮಣ್ಣಿನಂತೆ ಮೈತೇಯಿ ಜನರ ಹಾವಳಿಗೆ ಕೊಚ್ಚಿ ಹೋಗುತ್ತಿದ್ದಾರೆ. ಅಲ್ಲಿ ಮೈತೇಯಿ ಭಾಷೆಯು ಮಣಿಪುರಿ ಭಾಷೆಗೆ ಸಮಾನಾರ್ಥಕವಾಗಿ ಬಳಕೆಯಾಗುತ್ತಿರುವುದರಿಂದ ಇಲ್ಲಿನ ಬಹುಪಾಲು ಜನಸಂಖ್ಯೆ ಮೈತೇಯಿಯರೇ ಎಂದು ಕರೆಸಿಕೊಂಡಿದ್ದಾರೆ.

ಇವರು ಮಣಿಪುರದ ಮುಖ್ಯ ಜನಾಂಗ ಎಂಬುದೇನೋ ಸರಿ. ಆದರೆ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗಗಳನ್ನು ಹಲವಾರು ಬುಡಕಟ್ಟು ಜನಾಂಗಗಳಾಗಿ ವಿಂಗಡಿಸಲಾಗಿದೆ. ಇವರೆಲ್ಲರೂ ಒಗ್ಗಟ್ಟಾಗಿದ್ದರೆ ನಮ್ಮ ಬೇಳೆ ಬೇಯ್ಯುವುದಿಲ್ಲ ಎಂಬ ಸಾಂಸ್ಕೃತಿಕ ರಾಜಕಾರಣವು ವ್ಯವಸ್ಥಿತವಾಗಿ ಬಹಳ ಹಿಂದಿನಿAದಲೇ ಇವರನ್ನು ಹೊಡೆದು ಹೊಡೆದು ಹಾಳುತ್ತಿದೆ.
ಮಣಿಪುರದಲ್ಲಿ ಮೇ 4ರಂದು ಜರುಗಿದ ಇಬ್ಬರು ಮಹಿಳೆಯರ ಸಾಮೂಹಿಕ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯು ಜುಲೈ 20ರಂದು ಹೊರ ಜಗತ್ತಿಗೆ ತಿಳಿಯಿತು. ಈ ಘಟನೆಯು ಪ್ರಪಂಚದ ಜನರನ್ನು ತಲ್ಲಣಗೊಳಿಸಿತು.

ಇಡೀ ಜಗತ್ತೇ ಈ ಕೃತ್ಯವನ್ನು ವಿರೋಧಿಸಿದರೂ ಕೂಡ, ಒಟ್ಟು ದೇಶವನ್ನೇ ತನ್ನ ಕುಟುಂಬ ಎಂದು ಕರೆದುಕೊಳ್ಳುವ ನಮ್ಮ ಪ್ರಧಾನಿಗಳು ಬೆಂಕಿ ಹೊತ್ತಿಕೊಂಡ ಮೂರು ತಿಂಗಳು ದಿವ್ಯ ಮೌನದಿಂದ ಇದ್ದರು ಎಂಬುದನ್ನು ಜಗತ್ತು ಮರೆಯುತ್ತದೆಯೇ? 140 ಕೋಟಿ ಜನರು ನನ್ನ ಕುಟುಂಬಸ್ಥರೇ ಎಂದು ಹೇಳಿಕೊಳ್ಳುವ ಪ್ರಧಾನಿಗಳು ಅದರಲ್ಲಿ ಮಹಿಳೆಯರೂ ಇದ್ದಾರೆ ಎಂಬುದನ್ನು ಮರೆತಿದ್ದಾರೆಯೇ!? ಒಟ್ಟಾರೆ ನಮ್ಮ ಪ್ರಧಾನಿಗಳ ಮೌನ, ಮೈತೇಯಿ ಮತಾಂಧರ ಆರ್ಭಟ ಕುಕಿ ಜನಾಂಗದ ಮಹಿಳೆಯರ ಬದುಕನ್ನು ಮೂರಾಬಟ್ಟೆ ಮಾಡಿರುವುದಂತೂ ಖಚಿತ.

(ಡಾ. ಸಿದ್ದಯ್ಯ ರೆಡ್ಡಿಹಳ್ಳಿ, 9449899520)

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಮದ್ರಾಸ್ ಐ ವೈರಾಣುವಿಗೆ ಭಯ ಪಡಬೇಕಾಗಿಲ್ಲ : ಡಾ. ನಾಗರಾಜ

Published

on

ಸುದ್ದಿದಿನ,ದಾವಣಗೆರೆ : ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮದ್ರಾಸ್ ಐ ವೈರಾಣು ಅತೀ ವೇಗವಾಗಿ ಹರಡುತ್ತಿದ್ದು ಇದಕ್ಕೆ ಭಯ ಪಡಬೇಕಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ ತಿಳಿಸಿದ್ದಾರೆ.

ಮದ್ರಾಸ್ ಐ ಈ ಬಾರಿ ಮಳೆಗಾಲದಲ್ಲಿ ಆರಂಭವಾಗಿದ್ದು ರಾಜ್ಯದ ಜನರಕಣ್ಣು ಕೆಂಪಾಗಿಸುತ್ತಿದೆ, ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಹಾಸ್ಟಲ್ ವಿದ್ಯಾರ್ಥಿಗಳಲ್ಲಿ “ಮದ್ರಾಸ್ ಐ” ವೇಗಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ, ಕಂಜಕ್ವಿಟಿಸ್ ಎಂದು ಕರೆಯಲಾಗುವ ಮದ್ರಾಸ್ ಐ ಅಥವಾ ಕಣ್ಣು ವೈರಾಣುಗಳಿಂದ ಹರಡುವ ಕಣ್ಣಿನ ಸಮಸ್ಯೆ ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿಕಣ್ಣಿ ಮೇಲೆ ಪರಿಣಾಮಉಂಟು ಮಾಡುತ್ತವೆ, ರಾಜ್ಯದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ಬಿಸಿಲು ಇಲ್ಲದಂತಾಗಿದೆ ಇದರ ಪರಿಣಾಮತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.

ರೋಗದ ಲಕ್ಷಣಗಳು

ಕಸ ಬಿದ್ದದಂತೆಆಗುವ ರೀತಿಯಾಗಿಕಣ್ಣುಚುಚ್ಚುವುದು, ಬೆಳಗ್ಗೆ ಎದ್ದಾಗ ಹೆಚ್ಚು ಪಿಸುರು (ಪಿಚ್ಚು) ಬರುತ್ತದೆ, ಕಣ್ಣುಗಳು ಕೆಂಪಾಗಿ, ಕಿರಿಕಿರಿ ಹೆಚ್ಚುವುದು, ಕಣ್ಣಲ್ಲಿ ನೀರು ಬರುವುದು, ರೆಪ್ಪೆ ಕಣ್ಣು ದಪ್ಪ ಆಗುವುದು ಕಂಡು ಬರುತ್ತದೆ.

ಮುಂಜಾಗೃತಾ ಕ್ರಮಗಳು

ಸಮಸ್ಯೆ ಇರುವವರು ಕೆಲದಿನ ಪ್ರತ್ಯೇಕ ವಾಸ ಮಾಡಿ, ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಕಣ್ಣಿಗೆಔಷಧ ಹಾಕಿಸಿಕೊಳ್ಳಬೇಡಿ, ದಿನಕ್ಕೆ 8-10 ಬಾರಿ ಸ್ಯಾನಿಟೈಸರ್, ಸೋಪು ಬಳಸಿ ಕೈ ತೊಳೆದುಕೊಳ್ಳಿ, ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು, ವೈದ್ಯರ ತಪಾಸಣೆ ಮಾಡಿಸದೇ, ಔಷಧಿ ಅಂಗಡಿಗಳಲ್ಲಿ ಸಿಗುವ ಡ್ರಾಪ್ಸ್‍ಗಳನ್ನು ಬಳಸಬಾರದು, ಕಣ್ಣು ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು.

ಪರಿಹಾರ

ಸಮಸ್ಯೆ ಉಳ್ಳವರು ಇತರರಿಂದದೂರಇರಬೇಕು, ವೈದ್ಯರ ಬಳಿ ತೋರಿಸಿ, ಐ ಡ್ರಾಪ್ಸ್ ಮಾತ್ರ ಹಾಕಬೇಕು, ಸಮಸ್ಯೆ ಕಡಿಮೆ ಆಗುವವರೆಗೆ ಗಾಳಿಗೆ ಹೋಗಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಟಿ.ವಿ,ಮೊಬೈಲ್, ಕಂಪ್ಯೂಟರ್‍ಗಳನ್ನು ನೋಡುವುದನ್ನ ಕಡಿಮೆ ಮಾಡಿ ಕಣ್ಣಿಗೆ ವಿಶ್ರಾಂತಿಕೊಡಬೇಕು.

ರೋಗದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸಮೀಪದ ನಗರ, ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯಆರೋಗ್ಯ ಕೇಂದ್ರಗಳು, ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಆಸ್ಪತ್ರೆಗೆ ಭೇಟಿ, ವೈದ್ಯರ ಹತ್ತಿರತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯುವುದು ಸೂಕ್ತ. ವೈರಾಣುವಿನ ಸಮಸ್ಯೆ ಆಗಿರುವ ಕಾರಣ ನಿರ್ದಿಷ್ಟ ಚಿಕಿತ್ಸೆ ಇಲ್ಲ ಮುನ್ನೆಚ್ಚರಿಕೆಯೇ ಮದ್ದಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಲೈಫ್ ಸ್ಟೈಲ್

ಕಾಯಕಯೋಗಿ ನುಲಿಯ ಚಂದಯ್ಯನವರ ಸ್ಮರಣೋತ್ಸವ

Published

on

ಕಾಯಕಯೋಗಿ ನುಲಿಯ ಚಂದಯ್ಯ
  • ಡಾ.ಗೀತಾಬಸವರಾಜು,ಉಪನ್ಯಾಸಕರು,ಎ.ವಿ.ಕೆ.ಕಾಲೇಜು, ದಾವಣಗೆರೆ

(ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿ ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಜೂನ್ 29 ರಂದು ನಡೆಯಲಿದೆ ತನ್ನಿಮಿತ್ತ ಈ ಲೇಖನ)

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ತವರೂರು. ಇಲ್ಲಿ ವಿವಿಧ ಧರ್ಮ , ಜಾತಿಯವರು ನೆಲೆಸಿದ್ದು, ಅನೇಕತೆಯಲ್ಲಿ ಏಕತೆಯನ್ನು ರೂಢಿಸಿಕೊಂಡು ಪ್ರೀತಿ, ದಯೆ, ಕರುಣೆ, ಸಹನೆ, ನಂಬಿಕೆ, ಭಾವೈಕ್ಯತೆ ಮುಂತಾದ ಮಾನವೀಯ ಸಂಬಂಧಗಳೊಂದಿಗೆ ಬದುಕುತ್ತಿದ್ದಾರೆ.

ಬಲ್ಲವನೆ ಬಲ್ಲ ಬೆಲ್ಲದ ಸವಿಯ ಎಂಬ ನುಡಿಯಂತೆ 12 ನೇ ಶತಮಾನ ಸರ್ವರಿಗೂ ಸಿಹಿಯನ್ನು ಉಣಬಡಿಸಿದ ಕಾಲ. ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿದವರು ವಚನಕಾರರು. ವಿಶ್ವಗುರು ಬಸವೇಶ್ವರರ ಅನುಭವ ಮಂಟಪದ ಅನೇಕ ಕಾಯಕ ಮಣಿಗಳಲ್ಲಿ ಚಂದಯ್ಯನವರ ಹೆಸರು ಸ್ಮರಣೀಯ.

ಆರ್.ನುಲೇನೂರು ವಚನಕಾರ ನುಲಿಯ ಚಂದಯ್ಯ ಲಿಂಗೈಕ್ಯರಾದ ಪುಣ್ಯಭೂಮಿ. ಶಿವಶರಣ ಚಂದಯ್ಯನವರು ಇಲ್ಲಿ ನೆಲೆಸಿದ್ದರಿಂದ ಮತ್ತು ಹಗ್ಗ ನುಲಿಯುವ (ಹೊಸೆಯುವ) ಕಾಯಕ ಮಾಡುತ್ತಿದ್ದುದರಿಂದ ನುಲಿಯಯ್ಯನೂರು, ನುಲಿಯನೂರು, ನುಲೇನೂರು ಎಂಬ ಹೆಸರು ಬಂದಿದೆ. ರಾಮಗಿರಿ ಸಮೀಪವಿರುವುದರಿಂದ ಆರ್ ನುಲೇನೂರು ಎಂದು ಕರೆಯಲಾಗುತ್ತದೆ. ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡು ಸಮಾಜಕ್ಕೆ ಕರ್ತವ್ಯ ಪ್ರಜ್ಞೆ ಸಾರಿದ ಚಂದಯ್ಯನವರು ಕಾಯಕ ದಾಸೋಹದ ಮೂಲಕ ಮನುಕುಲಕ್ಕೆ ಬೆಳಕು ನೀಡಿದ ಮಹಾ ಶಿವಶರಣ.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುರುಹು ಹರಿವುದು
ಜಂಗಮವಾದರೂ ಕಾಯಕದಿಂದಲೇ ತನ್ನ ವೇಷದ ಪಾಶ ಹರಿವುದು

ಗುರುವಾದರೂ ಚರಸೇವೆಯ ಮಾಡಬೇಕು
ಲಿಂಗವಾದರೂ ಚರಸೇವೆಯ ಮಾಡಬೇಕು
ಜಂಗಮವಾದರೂ ಚರಸೇವೆಯ ಮಾಡಬೇಕು
ಇದು ಚಂದೇಶ್ವರ ಲಿಂಗದರಿವು ಕೇಳಾ ಪ್ರಭುವೇ”

ನುಲಿಯ ಚಂದಯ್ಯನವರ ಇದೊಂದು ವಚನ ಕಾಯಕದ ಮಹತ್ವವನ್ನು ತಿಳಿಸುತ್ತದೆ.

ವಿಜಯಪುರ ಜಿಲ್ಲೆಯ ಶಿವಣಗಿ ಎಂಬ ಗ್ರಾಮದಲ್ಲಿ ಜನಿಸಿದ ಚಂದಯ್ಯನವರು ಹೊಡಕೆ ಹುಲ್ಲನ್ನು ತಂದು ಹಗ್ಗ ಹೊಸೆಯುವ ಕಾಯಕವನ್ನು ನಡೆಸಿ ಅದರಿಂದ ಬಂದ ಹಣವನ್ನು ಗುರು – ಲಿಂಗ – ಜಂಗಮಕ್ಕೆ ಅರ್ಪಿಸುತ್ತಿದ್ದರು. ಕಾಯಕ ಭಾವ ಶುದ್ಧವಾಗಿರಬೇಕು. ಜಂಗಮ ದಾಸೋಹವು ನಿಜವಾದ ಶಿವಪೂಜೆ ಎನ್ನುವುದು ಅವರ ನಿಲುವಾಗಿತ್ತು.

ನುಲಿಯ ಚಂದಯ್ಯನವರ ಗದ್ದುಗೆ ಚಿತ್ರ

ಕಲ್ಯಾಣದಲ್ಲಿ ಕ್ರಾಂತಿಯಾದಾಗ ನುಲಿಯ ಚಂದಯ್ಯನವರು ಉಳವಿ, ಶಿವಮೊಗ್ಗ, ಎಣ್ಣೆಹೊಳೆ, ನಂದಿಗ್ರಾಮ, ಶಾಂತಿಸಾಗರ, ಬೆಂಕಿಕೆರೆ ಮೂಲಕ ದುಮ್ಮಿಗೆ ಬಂದು ನೆಲೆಸುತ್ತಾರೆ. ಅಲ್ಲಿನ ಪಾಳೆಗಾರ ದುಮ್ಮಣ್ಣನಾಯಕನ ಪರಿಚಯವಾಗುತ್ತದೆ. ನಾಯಕನ ರಾಣಿ ಪದ್ಮಾವತಿ ಚಂದಯ್ಯನ ವಿಚಾರಧಾರೆಗಳಿಗೆ ಮನ:ಪರಿವರ್ತಿತಳಾಗಿ ಲಿಂಗವಂತ ಧರ್ಮದ ದೀಕ್ಷೆಯನ್ನು ಪಡೆದು ಅರಮನೆಯಲ್ಲಿ ಆಶ್ರಯವನ್ನು ನೀಡುತ್ತಾಳೆ.

ಅರಮನೆಯ ವಾತಾವರಣ ಶರಣ ಸಂಸ್ಕೃತಿಗೆ ಹೊಂದಿಕೆಯಾಗದ ಕಾರಣ ಪದ್ಮಾವತಿಯು ತನ್ನ ತವರೂರಾದ ಆರ್.ನುಲೇನೂರಿಗೆ(ಪದ್ಮಾವತಿ ಪಟ್ಟಣ)ಆಹ್ವಾನಿಸುತ್ತಾಳೆ. ನಂತರ ಅಲ್ಲೊಂದು ಶಿಲಾಮಂಟಪ ನಿರ್ಮಿಸಿ ನಿತ್ಯಕಾಯಕ ದಾಸೋಹಕ್ಕೆ ಹಾಗೂ ಅನುಭಾವ ಗೋಷ್ಠಿ ನಡೆಸಲು ಅವಕಾಶ ಕಲ್ಪಿಸುತ್ತಾಳೆ. ಚಂದಯ್ಯನವರು ಬದುಕಿನ ಕೊನೆಯವರೆಗೆ ಇದೇ ಗ್ರಾಮದಲ್ಲಿ ನೆಲೆಸಿದ್ದು ತಮ್ಮ ಇಷ್ಟಲಿಂಗ ಚಂದೇಶ್ವರ ಲಿಂಗದಲ್ಲಿ ಒಂದಾದರು ಎಂದು ಪ್ರತೀತಿ ಇದೆ.

ಚಂದಯ್ಯನವರ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ. ಒಮ್ಮೆ ಹೊಡಕೆ ಹುಲ್ಲು ಕೊಯ್ಯುವಾಗ ಚಂದಯ್ಯನವರ ಕೊರಳಲ್ಲಿದ್ದ ಇಷ್ಟಲಿಂಗವು ಜಾರಿ ನೀರಲ್ಲಿ ಬಿದ್ದಿತು. ಲಿಂಗವನ್ನು ಲೆಕ್ಕಿಸದೆ ಅವರು ಹಾಗೆ ಹೊರಟುಬಿಟ್ಟರು. ಲಿಂಗವು ತನ್ನನ್ನು ಸ್ವೀಕರಿಸಬೇಕೆಂದು ಅಂಗಲಾಚಿ ಕೇಳಿಕೊಂಡರೂ ಅದನ್ನು ಗಮನಿಸದೆ, ನನಗೆ ನಿನಗಿಂತ ಜಂಗಮಾರಾಧನೆ ಮುಖ್ಯ ಎಂದು ಹೇಳಿ ಕಾಯಕದಲ್ಲಿ ನಿರತರಾದರು. ಕೊನೆಗೆ ಮಡಿವಾಳ ಮಾಚಯ್ಯನವರ ಸಂಧಾನದಿಂದ ಲಿಂಗವನ್ನು ಸ್ವೀಕರಿಸಿದರು. ಇವರ ಕಾಯಕ ಪ್ರಜ್ಞೆ ಎಷ್ಟಿತ್ತು ಎಂಬುದಕ್ಕೆ ಈ ಘಟನೆ ನಿದರ್ಶನ.

ಒಮ್ಮೆ ಕೆರೆಯ ನೀರನ್ನು ಬಳಸುವ ವಿಷಯದಲ್ಲಿ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಚಂದಯ್ಯ ಕೆರೆಯ ದಡದ ಬಳಿ ಬೆತ್ತದಿಂದ ನೆಲ ಮುಟ್ಟಿದಾಗ ಬಾವಿ ಸೃಷ್ಠಿಯಾಗಿ ನೀರು ಉಕ್ಕಿತು. ಇದೇ ಬಾವಿಯ ನೀರನ್ನು ಪೂಜಾಕಾರ್ಯಗಳಿಗೆ ಬಳಸುತ್ತಿದ್ದರು. ಇಂದಿಗೂ ಕೆರೆಯ ಪಕ್ಕದಲ್ಲಿ ಈ ಬಾವಿಯಿದ್ದು ಚಂದಯ್ಯನ ಬಾವಿ ಎಂದೇ ಪ್ರಸಿದ್ದಿಯಾಗಿದೆ.

ಕಾಯಕವು ಅಂತರಂಗ ಬಹಿರಂಗ ಶುದ್ಧಿಗೆ ಸೋಪಾನ. ಕಾಯಕವು ನಮ್ಮ ನಿತ್ಯಬದುಕಿನಲ್ಲಿ ನಿತ್ಯ ಕಾಯದ ಮೂಲಕವಾಗಿ ನಡೆಯುವ ಧ್ಯಾನ. ಶರಣರ ಕಾಯಕದಲ್ಲಿ ಕೇವಲ ಧನಕ್ಕೆ ಪ್ರಾಶಸ್ತ್ಯವಿರದೆ ಅದರ ಸತ್ಪಾತ್ರತೆಗೆ ಪ್ರಾಶಸ್ತ್ಯವಿತ್ತು. ಕಾಯಕದ ಉದ್ದೇಶ ಗುರು-ಲಿಂಗ-ಜಂಗಮ ದಾಸೋಹಕ್ಕೆ ಆದರೆ ತ್ರಿವಿಧ ದಾಸೋಹಕ್ಕೆ ನೈವೇದ್ಯವಾಗಬಲ್ಲ ದ್ರವ್ಯ ಪದಾರ್ಥ ‘ಸತ್ಯ ಶುದ್ಧ ಕಾಯಕದ ‘ ಪ್ರತಿನಿತ್ಯದ ದ್ರವ್ಯವೇ ಆಗಿರಬೇಕು ಎಂಬ ನಿಲುವು ಚಂದಯ್ಯನವರದು. ಸತ್ಯ ಶುದ್ಧ ಕಾಯಕದಲ್ಲಿ ನಿರತರಾಗಿ ಸಾರ್ಥಕ ಬದುಕನ್ನು ನಡೆಸಿದ ಕಾಯಕಯೋಗಿ ಚಂದಯ್ಯನವರು ಲಿಂಗೈಕ್ಯರಾದ ಸ್ಥಳವನ್ನು 1956ರಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ವತಿಯಿಂದ 38 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸಲಾಗಿದೆ.

ಜೂನ್ 29 ರಂದು ಪೂಜ್ಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕಾಯಕಯೋಗಿ ಶರಣ ನುಲಿಯ ಚಂದಯ್ಯನವರ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾಜದಲ್ಲಿದ್ದ ಅಂಧಕಾರ, ಮೂಢನಂಬಿಕೆ ಜಾತಿ ಬೇಧ ದೂರಮಾಡಿ ಸದ್ಬುದ್ಧಿ, ಸದಾಚಾರ, ಸಹಬಾಳ್ವೆ ಮುಂತಾದ ಮಾನವೀಯ ಗುಣಗಳನ್ನು ಬಿತ್ತಿ ಸಮಸಮಾಜ ನಿರ್ಮಿಸಿದ ಶರಣರ ದೃಷ್ಟಿಕೋನದಂತೆ ತಾಲೂಕು ಸಾಧು ವೀರಶೈವ ಸಂಘ(ರಿ) ಶ್ರೀ ತರಳಬಾಳು ನೌಕರರ ಕ್ಷೇಮಾಭಿವೃದ್ಧಿ ಸಂಘ(ರಿ) ಹೊಳಲ್ಕೆರೆ.

ಸಮಸ್ತ ಗ್ರಾಮಸ್ಥರು ಆರ್.ನುಲೇನೂರು ಇವರ ಸಂಯುಕ್ತಾಶ್ರಯದಲ್ಲಿ ವರ್ಗ, ಲಿಂಗಬೇಧವಿಲ್ಲದೆ ಚಂದಯ್ಯನವರ ಸ್ಮರಣೋತ್ಸವ ಮತ್ತು ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮೂಲಕ ಕಾಯಕ ಯೋಗಿಗೆ ಗೌರವ ಸಲ್ಲಿಸಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ1 day ago

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ....

ದಿನದ ಸುದ್ದಿ2 days ago

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ...

ದಿನದ ಸುದ್ದಿ4 days ago

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

ಪುರಂದರ್ ಲೋಕಿಕೆರೆ ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ...

ದಿನದ ಸುದ್ದಿ4 days ago

ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ

ಸುದ್ದಿದಿನ, ಚನ್ನಗಿರಿ : ಪಟ್ಟಣದ ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ತಮ್ಮ ಸೇವಾ ಖಾಯಂಯಾತಿ ಆಗಿ ಸರ್ಕಾರಕ್ಕೆ ಒತ್ತಾಯಿಸಿ ಶುಕ್ರವಾರ...

ದಿನದ ಸುದ್ದಿ6 days ago

ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ

ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿ ಪ್ರೇಮ್ ಕುಮಾರ್ ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ಸರ್ಕಾರಿ ಪ್ರಥಮ...

ದಿನದ ಸುದ್ದಿ1 week ago

‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರದ ಟಿಕೆಟ್‍ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್‍ ಶೆಟ್ಟಿ ಮತ್ತು ರುಕ್ಷಿಣಿ ವಸಂತ್‍ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್‍ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ...

ದಿನದ ಸುದ್ದಿ1 week ago

‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ‌ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್‍ ಅಂಬರೀಶ್‍ ಅಭಿನಯಿಸಿರುವ ‘ಬ್ಯಾಡ್‍ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ...

ದಿನದ ಸುದ್ದಿ1 week ago

ಕವಿತೆ | ಮಣ್ಣ ಮಕ್ಕಳು

ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ...

ದಿನದ ಸುದ್ದಿ1 week ago

10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್‍ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್‌ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ...

ದಿನದ ಸುದ್ದಿ1 week ago

ಮ್ಯಾಸ ನಾಯಕ ಬುಡಕಟ್ಟನಲ್ಲಿ ದೀಪಾವಳಿ ಹಬ್ಬದ ಆಚರಣೆ

ಭಾರತ ತನ್ನ ಭೌಗೋಳಿಕ ಸ್ವರೂಪದಲ್ಲಿ ವೈವಿಧ್ಯತೆಯನ್ನು ಹೊಂದಿರುವಂತೆ ಅನೇಕ ಬಗೆಯ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊಂದಿದೆ. ದೇಶದ ಪ್ರತಿಯೊಂದು ಸಮುದಾಯವು ಬದುಕಿನ ಕ್ರಮದಲ್ಲಿ ತನ್ನದೇ ಆದ ವೈವಿಧ್ಯತೆಯನ್ನು ಹೊಂದಿದ್ದು...

Trending