Connect with us

ದಿನದ ಸುದ್ದಿ

ಉರಿ ಚಮ್ಮಾಳಿಗೆ

Published

on

  • ಡಾ.ವಡ್ಡಗೆರೆ ‌ನಾಗರಾಜಯ್ಯ

ವೊತ್ತಿನ ಬೆಳಗು ನನಗಿನ್ನೂ ಹಸಿರಾಗಿ ನೆನಪಿಗಿದೆ. ಪ್ರಾಯಶಃ ಇನ್ನೆಂದಿಗೂ ಮಾಸದ ನೆನಪು ಅದು ; ನನ್ನ ಕರೇಕುಲದ ಮುಂದಿನ ಪೀಳಿಗೆಗಳು ಸೂರ್ಯ ಚಂದ್ರನಿರುವ ತನಕ ಈ ನೆನಪನ್ನು ತಮ್ಮೊಡನೆ ಹೊತ್ತೊಯ್ಯುತ್ತವೆಂಬ ಬಲವಾದ ನಂಬಿಕೆ ನನಗಿದೆ.

ಮಾನವ ನಿರ್ಮಿತ ಯಾವುದೇ ಉಪಾಯಗಳು ನನ್ನ ಕುಲಸ್ತರು ಅನುಭವಿಸಿದ ಸುಖ ದುಃಖ, ನೋವು – ನಲಿವು, ಸಂಕಟ ಹಾಗೂ ಹೋರಾಟಗಳ ನೆನಪಿನ ಬೇರನ್ನು ಕಿತ್ತು ಹಾಕಲು ಸಾಧ್ಯವಿಲ್ಲ ; ಆ ದೇವರಿಂದಲೂ ಕೂಡ! ನಮ್ಮ ನೆನಪಿಗೆ ಅಂತಹ ಅಗಾಧ ಶಕ್ತಿಯಿದೆ. ಅದು ನಿತ್ಯಗಾಮಿನಿ.

ಆ ದಿನ ಬೆಳಗ್ಗೆ ಅನುಭವ ಮಂಟಪದ ದಾರಿಯಲ್ಲಿ ಎದುರಾದ ನಿನ್ನನ್ನು ನೋಡಿದ ನಾನು ‘ಶರಣು ಬಸವಣ್ಣ’ ಎಂದು ನಂಬಿಸಿದ್ದೆ. ಇದಕ್ಕೆ ಪ್ರತಿಯಾಗಿ ನೀನೂ ಸಹ “ಶರಣು ಶರಣು ಹರಳಯ್ಯ” ಎಂದು ವಂದಿಸಿದ್ದೆ. ನೆನಪಿದೆಯಾ ಅಣ್ಣಾ? ನಿನ್ನಿಂದ ಒಂದು ಶರಣರಿಗೆ ಬದಲಾಗಿ ಎರಡು ಸಲ “ಶರಣು ಶರಣು” ಎಂಬ ನುಡಿ ಕೇಳಿದ ನಾನು ಎಷ್ಟೊಂದು ತತ್ತರಿಸಿ ಹೋದೆ.

ನಿನಗೆ ಗೊತ್ತಿರಲಿಕ್ಕಿಲ್ಲ. ನೀನು ನನ್ನ ಅರಿವಿಗೆ ಬಾರದಂತೆ ಸಹಜವಾಗಿ ಒಂದು ಶರಣು ಹೆಚ್ಚುವರಿ ಋಣಭಾರ ನನ್ನ ಮೇಲೆ ಹೇರಿದ್ದೆ. ನೀನೇನೋ ಭಾರ ಇಳಿಸಿಕೊಳ್ಳಲು ಚಡಪಡಿಸಿ ಬೆಂದು ಹೋಗುವಂಥವನು ನಿಜ. ನಿಮ್ಮವರು ಹೊತ್ತ ಭಾರ ಇಳಿಸಲು ಹೋದ ನೀನು ನನ್ನ ಮೇಲೆ ಭಾರ ಹೇರಿದೆಯಲ್ವಾ, ಇದು ನ್ಯಾಯವೇ? ಎಷ್ಟಾದರೂ ನೀನು ಭಾರ ಹೊರಿಸುವ ಕುಲದಿಂದ ಬಂದವನು; ನಾನಾದರೋ ಭಾರ ಹೊರಲೆಂದೇ ಹುಟ್ಟಿದ ನೊಗವೆಳೆವ ಮೂಕತ್ತು ಎಂಬುದು ನನಗೆ ಅರಿವಾಯಿತು.

ನಾನು ಹೊಲೆಯುವ ಮೆಟ್ಟುಗಳ ಮೇಲೆ ಭಾರ ಹಾಕಿ ನಡೆಯುವ ದಾರಿಹೋಕರು ನನ್ನೆದುರಿನಲ್ಲಿದ್ದಾರೆ. ಮೆಟ್ಟು ಹೊಲೆಯುವ ನನಗೆ ಮೆಟ್ಟೆಂದಿಗೂ ಭಾರವಲ್ಲ. ನಡೆಯುವ ದಾರಿಹೋಕರ ದಣಿವನ್ನು ತಾಪವನ್ನು ನನ್ನ ಮೆಟ್ಟು ಕಳೆಯಬಲ್ಲದು. ಕಲ್ಲು ಮುಳ್ಳುಗಳು ನನ್ನ ಮೆಟ್ಟುಗಳಿರುವ ಕಡೆಗೆ ದಾರಿಹೋಕರ ಪಾದಗಳನ್ನು ಚುಚ್ಚಲಾರವು.

ಆ ದಿನ ನೀನು ಶರಣು ಶರರಣಯ್ಯಾ ಎಂದು ಹೇಳಿದ ಬಳಿಕ ಏರುವ ಹೊತ್ತಿನೊಂದಿಗೆ ನೀನು ಹೊರಿಸಿದ ಶರಣೆಂಬ ವಜೆಯೂ ಏರುತ್ತಾ ಹೋಯಿತು.

ಏರುವ ಹೊತ್ತಿನೊಡನೆ ನೀನು ಹೊರಿಸಿದ ಶರಣೆಂಬ ವಜೆ ಹೊತ್ತ ನನ್ನ ಬೆನ್ನ ಬುಡದಿಂದ ಸಣ್ಣಗೆ ಶುರುವಾದ ಚಳುಕು ಇಡೀ ಶರೀರವನ್ನೆಲ್ಲಾ ಬಾಧಿಸತೊಡಗಿತ್ತು. ಅಣ್ಣಾ ನನಗೆ ಗೊತ್ತು. ನೀನು ಬಲಾತ್ಕರಿಸಿಯೇನು ಹೊರಿಸಲಿಲ್ಲ ; ಹಾಗೆ ನೋಡಿದರೆ ನೀನು ನಿನ್ನ ಪೂರ್ವಿಕರಿಗಿಂತಲೂ ಬದಲು ಕರುಣಿ. ಅವರಾದರೂ ನಮ್ಮನ್ನು ಪಶುಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡರು.

ಛೇ! ಕ್ಷಮಿಸು. ನೀನೆಲ್ಲಿ ಅವರಲ್ಲಿ? ಎತ್ತಣಿಂದೆತ್ತ ಸಂಬಂಧ. ಅಂತಹ ಪೂರ್ವಿಕ ಪಳೆಯುಳಿಕೆಗಳನ್ನು ಬಿಸುಡಿ ನಿಮ್ಮ ಹಟ್ಟಿಗೆ ಓಡೋಡಿ ಬಂದ ನೀನು, ‘ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪ ನು ನಮ್ಮ ಡೋಹರ ಕಕ್ಕಯ್ಯ”ನೆಂದು ನಮ್ಮನ್ನೆಲ್ಲಾ ಬಾವುಣಿಕೆಯಿಂದ ತಬ್ಬಿಕೊಂಡು ನಮ್ಮ ಕಲ ಕರೇಕಲದೊಬ್ಬ ಮಗನಾದೆ ; ನೀನೊಂದು ನವಜಾತ ಶಿಶು!

ಇಲ್ಲಿ ನನ್ನ ಹಟ್ಟಿಯಲ್ಲಿ ತುಂಬಿ ಫಲದೂಗುವ ತೆಂಗಿನ ಮರದಂಥ ತಾಯಂದಿರು ತಮ್ಮ ಮಕ್ಕಳಿಗೆ ಹಾಲೂಡುವುದು ಬಲು ಸೋಜಿಗ! ಹಾಲು ಬತ್ತಿದ ಅಜ್ಜಿಯರೂ ತಮ್ಮ ಎದೆಗೆ ಅವುಚಿಕೊಂಡು ಮೊಮ್ಮಕ್ಕಳಿಗೆ ಮೊಲೆಯುಣಿಸುತ್ತಾರೆ : ಅಲ್ಲಿ ಪ್ರೀತಿ ಜಿನುಗುತ್ತದೆ! ಎಲ್ಲ ತಾಯಂದಿರೂ ತಮ್ಮೊಳಗಿನ ಮಾತೃತ್ವವನ್ನು ಹುಟ್ಟಿದ್ದ ಪ್ರತಿ ಮಗುವಿಗೂ ನೇವರಿಸಿ ಉಣ ಬಡಿಸುತ್ತಾರೆ.

ತಮ್ಮ ಕಂದಮ್ಮಗಳಿಗೆ ಎಷ್ಟು ಸಲ ಎದೆ ಹಾಲು ಕುಡಿಸಿದರೂ ತೃಪ್ತಿಯಾಗದ ಸಮಗಾರ ಭೀಮಮ್ಮವರು ನಮ್ಮ ಕರೇಕುಲದ ಹಟ್ಟಿಯಲ್ಲಾಡುವ ಇತರ ಕಂದಮ್ಮಗಳಿಗೂ ಹಾಲು ಕುಡಿಸುವುದುದುಂಟು. ಇಲ್ಲಿ ಹುಟ್ಟುವ ಪ್ರತಿ ಶಿಶುವು ಹಟ್ಟಿಯ ಎಲ್ಲ ತಾಯಂದಿರ ಎದೆ ಹಾಲು ಕುಡಿದು ಬೆಳೆಯುತ್ತದೆ. ಹೇ, ಬಸವಣ್ಣಾ ಇಂತಹ ಭಾಗ್ಯ ನಮ್ಮ ಶಿಶುವಾಗಿ ನೀನು ಕಂಡೆ!

ನನಗೆ ಹಟ್ಟಿ ತುಂಬಾ ತಾಯಂದಿರು. ಹಟ್ಟಿ, ಬಯಲಲ್ಲಿ ಬಟ್ಟ ಬಯಲಲ್ಲಿ ಊರ ಸೆರಗಲ್ಲಿ, ಎಲ್ಲೆಂದರಲ್ಲಿ ಎದೆ ಹಾಲು ಕುಡಿಸಿದ ನನ್ನ ತಾಯಂದಿರು ನನಗೆ ಹೇಳುತ್ತಿದ್ದ ಒಂದು ಮಾತು “ಅನ್ಯರ ಹೊರೆ ನೀನು ಹೊರಬೇಕಲ್ಲದೆ ನಿನ್ನ ಹೊರೆಯನ್ನು ಪರರ ಮೇಲೆ ಹೊರಿಸುವುದು ಸಲ್ಲತಕ್ಕದ್ದಲ್ಲ ಹರಳಯ್ಯಾ” ಎಂಬುದು. ಆ ದಿನ ನಾನು ಹೊರಿಸಿದ ಒಂದು ಶರಣಿನ ಹೆಚ್ಚಿನ ಹೊರೆ ಹೊತ್ತು ನಾನು ಮನೆಗೆ ಬಂದೆ. ಆಗ ಇಳಿ ಹೊತ್ತು; ಧೂಳು ಸಂಜೆ.

ನನ್ನ ನೆಚ್ಚಿನ ಸತಿ ಶಿವಶರಣೆ ಕಲ್ಯಾಣಮ್ಮನ ಕೂಟೆ ಮಾತನಾಡುತ್ತಾ ಹೊರೆ ಇಳಿಸಿಕೊಳ್ಳುವ ಉಪಾಯವನ್ನು ಕೇಳಿದೆ. ಹೊರೆ ಇಳಿಸುವ ಮಾರ್ಗ ಹೆಂಗಸರಿಗೆ ಮಾತ್ರ ಗೊತ್ತೆಂದರೆ ನಿನಗೆ ಆಶ್ಚರ್ಯವಾಗಬಹುದಲ್ಲವೆ ಬಸವಣ್ಣ? ಹೌದು, ನನ್ನ ಹೆಂಡತಿ ಕಾರ್ಯಸಾಧ್ಯವಾದ ಉಪಾಯವನ್ನು ಹೇಳುತ್ತಾಳೆಂಬ ವಿಶ್ವಾಸದಿಂದಲೇ ಕೇಳಿದ್ದೆ.

“ನೋಡು, ಶಿವಶರಣ ಬಸವಣ್ಣನವರ ಶರಣಿನ ತೂಕಕ್ಕೆ ಸಮವಾಗುವಂಥ ಸಂಪತ್ತು ನಮ್ಮತಾವ ಏನು ತಾನೆ ಐತೆ? ಹೂವುನ ಹಾಸ್ಗೆ ಮ್ಯಾಲ ನಡೆದಂಗೆ ಕಾಣೋಂಥ ಪಾದ್ರಾಕ್ಷಿ ಮಾಡ್ಕೊಡನಿ” ಎಂದು ನಮ್ಮ ಕರೇಕುಲದ ಸಮಗಾರರು ಜತನವಾಗಿ ಕಾಪಾಡಿಕೊಂಡು ಬಂದ ಚಮ್ಮಾರಿಕೆಯ ಉಪಾಯವನ್ನು ಅವಳಿಂದ ಕೇಳಿದ ನಾನು, ದೇವಾಂಶಿ ಮಾತುಮನಾದ ನಿನಗೆ ತೀರಾ ವಿಶೇಷವಾದ ಪಾದ್ರಾಕ್ಷಿಯನೇ ಮಾಡೋಡಬೇಕು, ಯಂಗೆ ಮಾಡೋದು? ಯಾವ ತೊಗಲಿನಿಂದ ಮಾಡೋದು? ಎಂಬ ಯೋಚನೆಗಳ ಸುಳಿಗೆ ಬಿದ್ದೆ.

ಆಗ ನನ್ನ ಮುಖದ ನೆರಿಗೆಗಳ ಅಕ್ಷರಗಳನ್ನು ಸಲೀಸಾಗಿ ಓದಿ ಅರ್ಥ ಮಾಡಿಕೊಂಡು,‌ ‘ಗೋವಿನ ತೊಗಲು ಉಪಯೋಗಿಸಿದಂತೆಯೇ ನರ ಮನುಷ್ಯ ತೊಗಲ ಚಮ್ಮಾಳಿಗೆ ಮಾಡಿಕೊಡದ ವಿನಾ ಶರಣಿನ ವಜೆಯನ್ನು ನೀಗಿಕೊಳ್ಳಲಾಗದು’ ಎಂಬ ಸಲಹೆಯನ್ನು ಮುಂದಿಟ್ಟ ಕಲ್ಯಾಣಮ್ಮ, ನಮ್ಮ ಮಕ್ಕಳನ್ನು ಆಡಿಸಿ ನಲಿಸಿ ತೂಗಿ ಮಲಗಿಸಿದ ನಮ್ಮ ಅಂಕಪೀಠದ ತೊಡೆ ತೊಗಲು ಮಾತ್ರ ಈ ಕಾರ್ಯಕ್ಕೆ ಯೋಗ್ಯವೆಂದು ಬಗೆದು ಮೊದಲಿಗೆ ತನ್ನ ಚರ್ಮವನ್ನೇ ನೀಡಲು ದುಡದಿಂದ ಮುಂದಾದಳು. ಈಗ ಯೋಚಿಸು ಬಸವಣ್ಣಾ ನಮ್ಮ ಹೆಣ್ಣಿನ ಮಹಿಮೆ ಎಂಥದ್ದು?

ಮರುದಿನ ಬೆಳಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ, ಮನೆಯನ್ನೆಲ್ಲಾ ಸಾರಿಸಿ, ಗುಡಿಸಿ, ಚುಕ್ಕಿ ರಂಗೋಲಿ ಎಳೆದು ಮೂಡಲ ಮುಖನಾಗಿ ‘ತಿತ್ತಿ’ ಯೊಂದಿಗೆ ಕುಳಿತಿದ್ದ ಕಲ್ಯಾಣಮ್ಮ ಮುಖ ಹೊಂಬಣ್ಣದಲ್ಲಿ ಹೊಳೆವ ಸೂರ್ಯನಂತೆಯೇ ಕಾಂತಿಯಿಂದ ಶೋಭಿಸುತ್ತಿತ್ತು. ಅವಳ ಮುಖದ ಕಾಂತಿಯ ಸುಂಕು ನನ್ನ ಮುಖಕ್ಕೆ ಪರಾಗಸ್ಪರ್ಶಗೊಂಡ ಬಳಿಕವೇ ತಿತ್ತಿಗೆ ಶರಣೆಂದು ಚೂರಿಯನ್ನು ತೆಗೆದುಕೊಂಡು ಕುಲಕಾರ್ಯೇವು ಮಾಡಲು ಕುಳಿತೆ.

ಅಣ್ಣಾ … ಬಸವಣ್ಣ…! ಅಂದು ಬೆಳಗ್ಗೆ ನಮ್ಮ ಗುಡಿಸಲ ನೆತ್ತಿ ಮೇಲೆ ನವಿಲೆರಡು ಆಡುತ್ತಿದ್ದವು. ಸಾವಿರ ಕಣ್ಣು ಅರಳಿಸಿ ಎಳೆ ಬಿಸಿಲಿನಲ್ಲಿ ನರ್ತಿಸುತ್ತಿದ್ದ ಬಂಗಾರದ ನವಿಲುಗಳು! ಬಾಲ್ಯದಲ್ಲಿ ನನ್ನ ಅಮ್ಮ ಹೇಳುತ್ತಿದ್ದಳು, “ಹರಳಯ್ಯಾ, ಈ ಜಗತ್ತು ಹುಟ್ಟಿದ್ದು ನವಿಲು ಮೊಟ್ಟೆಯಿಂದ ಕಣೋ, ಇಲ್ಲದಿದ್ದರೆ ಈ ಸೃಷ್ಟಿ ಇಷ್ಟೊಂದು ಸುಂದರವಾಗಿರಲು ಹೇಗೆ ತಾನೆ ಸಾಧ್ಯವಿತ್ತು?”

ಹೌದು ಬಸವಣ್ಣಾ ನನ್ನ ಅಮ್ಮ ಹೇಳಿದ ಅದೇ ನವಿಲು ನಮ್ಮ ಗುಡಿಸಲು ಮೇಲೇರಿ ಹಾರಿ ಕುಣಿಯುತ್ತಿರುವಾಗ ನಾನು ನನ್ನ ಬಲ ತೊಡೆ ತೊಗಲನ್ನು, ಕಲ್ಯಾಣಮ್ಮ ತನ್ನ ಎಡ ತೊಡೆ ತೊಗಲನ್ನು ಪರಸ್ಪರ ಸುಲಿದು ತೆಗೆಯಲು ದುಡಮಾಡಿ ಕುಳಿತಿದ್ದೆವು; ನವಿಲುಗಳು ಕುಣಿಯುತ್ತಲೇ ಇದ್ದವು ಬಲು ಚೆಂದವಾಗಿ!

ಅಣ್ಣಾ… ನಿಜ ಹೇಳಬೇಕೆಂದರೆ ಗಲ್ಲೇಬಾನಿಯ ದಿವ್ಯೋದಕ ಸ್ಪರ್ಶದಿಂದ ತೋಯ್ದುದಕ್ಕಿಂತಲೂ ಮಿಗಿಲಾಗಿ ನೀನು ನಮ್ಮ ಕುಲಸ್ಥರಿಗೆ ತೋರಿಸಿದ ಕರುಣಾಮೃತದಿಂದಲೇ ನಮ್ಮ ದೇಹಕ್ಕಾವರಿಸಿದ್ದ ಸೂತಕದ ತೊಗಲು ತೊಯ್ದು ಹೋಗಿತ್ತು! ಸೂತಕದ ತೊಗಲನ್ನು ಸುಲಿದು ತೆಗೆಯಲು ನೀನು ಹೊರಿಸಿದ ‘ಶರಣು’ ಒಂದು ನೆಪವಾಗಿತ್ತು.

ಸಾಮು ಹಿಡಿದ ಚೂರಿಯಿಂದ ಬಹಳ ಚಮತ್ಕಾರಿಕವಾಗಿಯೆ ತೊಗಲು ಸುಲಿದೆವು; ನಾವು ಕುಶಲಕರ್ಮಿಗಳು; ತೊಗಲು ಸುಲಿಯುವ ನನಗೆ ದೇಹವೆಂಬುದು ಯಾವತ್ತಿಗೂ ಅಡ್ಡಿಯಾಗದು! ತನ್ನ ತೊಗಲನ್ನು ತಾನು ಸುಲಿದುಕೊಳ್ಳಲಾಗದವನು ಸಮಗಾರನೇ ಅಲ್ಲ! ಹೇ! ಬಸವಣ್ಣಾ ನಿನ್ನನ್ನು ಆವರಿಸಿಕೊಳ್ಳುತ್ತಿದ್ದ ಬ್ರಾಹ್ಮಣ್ಯದ ಸೂತಕದ ತೊಗಲನ್ನು ಹರಿದು ಬಿಸಾಕಿದ ನೀನೊಬ್ಬ ದೊಡ್ಡ ಸಮಗಾರ.

ಅಂತೂ ನಿನಗೆ ಚಮ್ಮಾಳಿಗೆ ಮಾಡಿಕೊಡಲೆಂದು ನಾನು, ನನ್ನ ಪತ್ನಿಯೂ ನಮ್ಮ ತೊಗಲನ್ನು ನಾವೇ ಸುಲಿದು, ಅದರ ಸೆಳ್ಳೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ ಕರೆಹಾಯಿಸಲು ಸಿದ್ಧಗೊಳಿಸಿದೆವು.

ಚರ್ಮ ಹದ ಮಾಡುವ ವಿಧಾನವನ್ನು ಕರೆ ಹಾಯಿಸುವುದು ಎಂದು ಹೇಳುವುದು ವಾಡಿಕೆ. ಬಸವಣ್ಣಾ ಈ ವಿಧಾನವು ನಿನಗೆ ಕೇಳಿಯೋ ನೋಡಿಯೋ ಗೊತ್ತಿರಬಹುದೆಂದು ನಾನು ಊಹಿಸುತ್ತೇನೆ. ಆದರೂ ನಿನಗೆ ಅರ್ಪಿಸಿದ ಚಮಾಳಿಗೆಯನ್ನು ತಯಾರಿಸಿದ ಬಗೆಯನ್ನು ಹೇಳುತ್ತೇನೆ ಕೇಳು.

ಗಲ್ಲೇಬಾನಿಯಲ್ಲಿ ಒಂದು ಗುಲಿಕೆ ತಂಗಡಿ ಗಿಡದ ಚಕ್ಕೆ ಪುಡಿಯೊಂದಿಗೆ ಪಾವು ಗುಲಿಕೆ ಸುಣ್ಣದ ಪುಡಿಯನ್ನು ಕಲೆಸಿದೆ. ನನ್ನ ಕೆಲಸದ ಬಳಿಕ ಕಲ್ಯಾಣಮ್ಮ ಎರಡು ಹರುವಿ ನೀರು ಸುರಿದು ಗಲ್ಲೇಬಾನಿಯಲ್ಲಿ ಎರಡು ಜಾವ ಚರ್ಮವನ್ನು ನೆನೆ ಹಾಕಿದಳು. ಒಂದೊಂದು ಪ್ರಾಣಿಯ ಚರ್ಮವನ್ನೂ ಅದರದೇ ವಿಶಿಷ್ಟ ವಿಧಾನಾನುಸಾರ ಕರೆ ಹಾಯಿಸಬೇಕು.

ತಂಗಡಿ ಚಕ್ಕೆಯ ಪುಡಿ ಮತ್ತು ಸುಣ್ಣದ ನೀರಿನಲ್ಲಿ ಹದಗೊಂಡ ಚರ್ಮವನ್ನು ಶುದ್ಧ ನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು. ಆದರೆ ನಿನಗೆ ಚಮ್ಮಾಳಿಗೆ ತಯಾರಿಸಿ ಕೊಡಲು ನಾವು ಬಹಳ ಜಾಗರೂಕತೆ ವಹಿಸಿದ್ದೆವು. ಸೋಸಿದ ನೀರಿನ ‘ತಿಳಿಗರೆ’ಯಲ್ಲಿ ಹದಗೊಂಡ ಚರ್ಮವನ್ನು ಮತ್ತೊಂದು ಗಲ್ಲೇಬಾನಿಯ ಬೆವರ ಗಂಧೋದಕದಲ್ಲಿ ತೊಳೆದು, ಮುಗಿಲ ಮಿಂಚನೆ ಎರೆದು, ರಾತ್ರಿ ಮಂಜಿನಲಿ ನೆನೆದ ಚರ್ಮವನ್ನು ರಾತ್ರಿಯ‌ ಚಂದ್ರಮನ ಬೆಳ್ಳಿ ಕಿರಣಗಳ ಬಿಸಿಯಲ್ಲಿ ಕಾಯಿಸಿ, ಬೆಳಗಿನ ಪ್ರಥಮ ಉಷಾಕಿರಣದಲ್ಲಿ ಕಾಯ್ದ ಚರ್ಮವನ್ನು ಸಂಜೆಯ ಮಂದ ನಿಷಾಕಿರಣಗಳಿಂದ ತಂಪು ಮಾಡಿ ಅದರೊಳಕ್ಕೆ ಪಾಂಗಿತವಾಗಿ ಅಗ್ನಿ ಪಾದಕವನ್ನು ತಂಪುಗೊಳಿಸಿ ಹೆಪ್ಪಿಡಲಾಯಿತು.

ಅಣ್ಣಾ…. ಬಸವಣ್ಣಾ ಹೀಗೆ ಪಾಕಾದ ಚರ್ಮವನ್ನು ನೆಲದ ಮೇಲೆ ಹರವಿ, ಮೈನಾಗಿರುವುದು ಕಂಡು, ಹರುಷಗೊಂಡು ನಿನ್ನ ಪಾದಗಳ ಅಳತೆಯನ್ನು ಧೇನಿಸತೂಡಗಲು ನಿನ್ನ ಪಾದಗಳೋ
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಕೂಡಲಸಂಗಮ ದೇವಾ”

ನಿನ್ನ ಅನಂತ ಪಾದದ ಅಳತೆ ನನ್ನ ಕಣ್ಣ ಆಯತಕ್ಕೆ ಸಿಕ್ಕದಾಗಿ ಕುಲದ ತಂದೆ ಜಾಂಬವನನ್ನು ಧ್ಯಾನಿಸಲು, ಜಾಂಬವ ತಾತನಾದರೋ ದೇವಿ ಅರುಂಧತಿಯವರಿಗೆ ನಿನ್ನ ಪಾದದಳತೆಯನು. ಕೆಂಡರಿಸುವಂತೆ ತಿಳಿಸಲು, ದೇವಿ ಅರುಂಧತಿಯಾದರೋ ತನ್ನ ಬಸಿರೊಳಗೆ ಹುಟ್ಟಿದ ಮಾದಾರ ಚೆನ್ನಯ್ಯನಿಗೆ ಅನುಜ್ಞೆ ಮಾಡಲು, ಚನ್ನಯ್ಯನು ತನ್ನ ಕರುಳ ಹೊಕ್ಕುಳ ಬಳ್ಳಿ ಕಲ್ಯಾಣಮ್ಮನವರಿಗೆ ನಿನ್ನ ಪಾದದ ಅಳತೆಯ ಸೋಜುಗವ ವಿವರಿಸಿದರು ಹೀಗೆ :-

ಬಸವಣ್ಣನೆಂಬುವನು ನಮ್ಮಕುಲದ ಬಂಗಾರದ ಶಿಶುವಲ್ಲವೋ ಅವನು ಉಸಿರೆಂಬ ಘನವೋ. ಅವನು ಉಸಿರೆಂಬ ಘನವಲ್ಲವೋ ಘನವೆಂಬ ಉಸಿರೊಳಡಗಿದ ಪ್ರಾಣವೋ!”

ಇಂತೀ ನಿನಗೆ ಒಪ್ಪುವ ಪಾದ್ರಾಕ್ಷಿಯ ಅಳತೆಯನ್ನು ಅರಿಯದವಳಾದ ಕಲ್ಯಾಣಮ್ಮನು ಮೂಲದಲ್ಲಿ ಜಲಮಯವಾಗಿದ್ದ ಈ ಸೃಷ್ಟಿಗೆ ತನ್ನ ರಕ್ತವನ್ನೇ ಬಸಿದು ಹೆಪ್ಪಿಟ್ಟು ಭೂಮಿಯನ್ನು ಸೃಷ್ಟಿಸಿದ ಮಾದಿಗರ ಮೊದಲ ಮಗನಾದ ಹೆಪ್ಪುಮುನಿಯನ್ನು ಸಾಕ್ಷಿಯಾಗಿ ಒಡ್ಡಿ, “ಬಸವಣ್ಣನು ನಿಜವಾದ ನಮ್ಮ ಮಾದಾರ ಕುಲದ ಮಗನೇ ಆಗಿದ್ದಲ್ಲಿ ಪುರೋಹಿತರ ಕಣ್ಣ ಎಚ್ಚರಿಕೆಯ ತಪ್ಪಿಸಿ ಓಡಿ ಬಂದು ನನ್ನ ಮಡಿಲಲ್ಲಿ ಮಲಗುವ ಕಂದಮ್ಮನಂತೆ ನನ್ನ ಸೆರಗು ಹಿಡಿದು ‘ಅವ್ವಾ’ ಎಂದು ಚೆಲುನುಡಿಗಳಲ್ಲಿ ಕರೆಯಲಿ” ಎಂದು ಪ್ರೀತಿಯಿಂದ ಕೂಗಿದಾಗ, ಬಿಜ್ಜಳನ ಅಧಿಕಾರದ ಸೆರಗಿನ ಮರೆಯಲ್ಲಿದ್ದ ನೀನು ನಿನ್ನ ಜನ್ಮಧಾರಕ ವೇಷ ಕಳೆದು, ಜಗ್ಗನೆ ಜನಿವಾರ ಹರಿದು, ಬಯಲ ಬೆತ್ತಲೆಯಂತೆ ಹುಟ್ಟುಮಾರ್ಗದಲ್ಲಿ ದಿಬ್ಬ ಹತ್ತಿ ಕಣಿವೆ ಇಳಿದು ಅಗ್ರಹಾರದಿಂದ ಬಲು ದೂರವುಳ್ಳ ಹಟ್ಟಿಯ ಹೊಕ್ಕು ನಮ್ಮ ಮನೆಯಲ್ಲಿ ಕಿಲಗುಡುವ ಕಂದನಾದೆ!

ಆ ಬಳಿಕ… ಚಲುವ ಚಂದಿರನಂಥ ಕಂದಮನಾದ ನಿನ್ನ ಅಂದದ ಆಟಗಳು ಚಂದದ ನೋಟಗಳು ಸಾವಿರ ನಕ್ಷತ್ರಗಳ ಕಣ್ಣು ಬಿಡುವ ನವಿಲು ಕುಣಿತದ ಹೊಳಪನ್ನು ನಮ್ಮ ಗುಡಿಸಲು ತುಂಬಿ, ಕಲ್ಯಾಣಮ್ಮನವರು ತಾಯ ಸೆರಗು ಮರೆಮಾಡಿ ಕಿಲಕಿಲನೆ ನಗುತ್ತಾ ನಿನ್ನ ಪುಟ್ಟ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡರಲ್ಲೋ ಅಣ್ಣಾ!

ಹೀಗೆ ನಿನ್ನ ಪಾದಗಳನ್ನು ಕಣ್ಣೊಳಗೆ ಮುಚ್ಚಿಕೊಂಡ ಸೋಜಿಗವನ್ನು ಕಲ್ಯಾಣಮ್ಮ ಬೀಜದೊಳಗಿರುವ ಮೊಳಕೆಯನ್ನು ಕಾಣಿಸುವಂತೆ ನನಗೆ ಕಂಡರಿಸಿದಾಗ ಅಲ್ಲಿ ನಮ್ಮ ಗುಡಿಸಲೊಳಗೆ ಅಡಿಗಲ್ಲ ಮೇಲೆ ಮುದ್ರೆಯೊತ್ತಿತ್ತು. ನಿನ್ನ ಪಾದಗಳ ಅಳತೆ ನಮ್ಮ ಅಡಿಗಲ್ಲಿನ ಮೇಲೆ ಬಟುವಾದ ಉದ್ದ, ಬಟುವಾದ ಅಗಲ ; ನಿನ್ನ ಪಾದ ಅಷ್ಟೆ!

ಅಣ್ಣಾ, ಮಾದಾರನ ಚಮ್ಮಾರಿಕೆಯ ಅಡಿಗಲ್ಲು ಸಾಮಾನ್ಯವಲ್ಲ ; ಪೂರ್ವದಲ್ಲಿ ಇವಳು ಕಾಳಿಕಾ ಮಾತೆ; ವಿಶ್ವಕರ್ಮನ ತಾಯಿ! ಮಾದಿಗರ ಹೊಸ್ತಿಲಲ್ಲಿ ಅಡಿಗಲ್ಲು ರೂಪಾಗಿ ಕುಂತವಳೆ!

ಇದು ತಾತ ಜಾಂಬವರು ನೀಡಿದ ಕುಲದ ದಾನ. ಕುಶಲ ಕರ್ಮಿಯ ಕಲೆ ಅರಳುವುದು ಇಲ್ಲಿ. ನಿನಗೆ ಮಾಡಿಕೊಟ್ಟ ಚಮ್ಮಾಳಿಗೆ ಕುಶಲತೆಯಲ್ಲಿ ಅರಳಿದ್ದು ಇದೇ ಅಡಿಗಲ್ಲ ಮೇಲೆ. ವಚನ ಕಟ್ಟುವುದು ನಿನಗೆ ಹೇಗೋ ಹಾಗೆ ನಮಗೆ ಚಮ್ಮಾರಿಕೆ ಸೃಷ್ಟಿಶೀಲ ಕ್ರಿಯೆ. ನಿನಗೆ ನಾವು ತಯಾರಿಸಿಕೊಟ್ಟ ಚಮ್ಮಾಳಿಗೆ ನಮ್ಮ ಪಾಲಿಗೊಂದು ಶ್ರೇಷ್ಢ ವಚನ. ಅದಕ್ಕಾಗಿ ನಾನಾಗಲೀ ನನ್ನ ಹೆಂಟತಿಯಾಗಲೀ ಅನ್ಯ ವಚನಗಳನ್ನೇ ಬರೆದಿಲ್ಲ. ನಮ್ಮ ಕಾಯಕದ ಬದುಕೇ ಒಂದು ವಚನ.

(ಚರ್ಮಕ್ಕೆ ಕರೆ ಹಾಯಿಸಿ ಹದಮಾಡುವ ವಿಧಾನವನ್ನು ಕುರಿತು ಮಾಹಿತಿ ನೀಡಿದವರು ನನ್ನ ತಂದೆ ಹನುಮಂತಯ್ಯ ಮತ್ತು ತಾಯಿ ಕದರಮ್ಮ)

(ಡಾ.ವಡ್ಡಗೆರೆ ‌ನಾಗರಾಜಯ್ಯ
8722724174)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!

Published

on

ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.

ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್‌ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.

ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್‌ಗೆ ಪಾತ್ರವಾಯಿತು.

ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.

ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಕವಿತೆ | ಒಂದು ಕಪ್ ಕಾಫಿ

Published

on

  • ಲಕ್ಕೂರು ಆನಂದ್

ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:

ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ

ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…

ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!

ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?

ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending