ದಿನದ ಸುದ್ದಿ
ಮಹಾ ನವಮಿ ; ‘ಶರಣರ ಹುತಾತ್ಮ ದಿನ..!’
- ಡಾ.ವಡ್ಡಗೆರೆ ನಾಗರಾಜಯ್ಯ
ಶರಣ ಬಸವಣ್ಣ ಜಾತಿವಿನಾಶ ಚಳವಳಿ ರೂಪಿಸಿದ ಮಹಾ ಬಂಡಾಯಗಾರ. ಸಮಗಾರ ಹರಳಯ್ಯ ಮತ್ತು ಬಸವಣ್ಣನವರ ಬಾಂಧವ್ಯ ಅತ್ಯಂತ ನಿಕಟವಾಗಿತ್ತು. ಇವರಿಬ್ಬರ ಬಾಂಧವ್ಯ ಎಷ್ಟೊಂದು ನಿಕಟವಾಗಿತ್ತೆಂದರೆ ಬಸವಣ್ಣನು ಸಮಗಾರ ಹರಳಯ್ಯನ ಮಗನಾದ ಶೀಲವಂತನಿಗೂ ಮತ್ತು ಬ್ರಾಹ್ಮಣ ಮಂತ್ರಿ ಮಧುವರಸನ ಮಗಳಾದ ಲಾವಣ್ಯವತಿಗೂ ಅಂತರ್ಜಾತಿ ವಿವಾಹ ನಡೆಸುವ, ಆ ಮೂಲಕ ಜಾತಿ ವಿನಾಶ ಮಾಡುವ ಕ್ರಾಂತಿಕಾರಿ ಹಂತ ತಲುಪಿತ್ತು.
ಮಾದಿಗ ಮತ್ತು ಬ್ರಾಹ್ಮಣರ ನಡುವೆ ಅಂತರ್ಜಾತಿ ವಿವಾಹ ನಡೆದುಹೋಯಿತು. ಬಸವಣ್ಣನ ಕ್ರಾಂತಿಕಾರಿ ನಡಿಗೆಯನ್ನು ನೋಡಿದ ಸಂಪ್ರದಾಯವಾದಿ ಪುರೋಹಿತಶಾಹಿಗಳು ಸಹಿಸದಾದರು. ಜಾತಿ ಜಾತಿಗಳ ನಡುವೆ ಮೇಲು-ಕೀಳಿನ ಜಾತಿ ವಿಧ್ವೇಷದ ಕಿಚ್ಚು ಹಚ್ಚಿದರು. ‘ಸಮಾಜಬಾಹಿರವೂ, ನೀತಿಬಾಹಿರವೂ, ಧರ್ಮಬಾಹಿರವೂ ಆದ ಕೆಲಸಗಳಲ್ಲಿ ತೊಡಗಿರುವ ಶರಣರನ್ನು ಕೊಚ್ಚಿಕೊಲ್ಲದ ಹೊರತು ಸನಾತನ ಧಾರ್ಮಿಕ ವ್ಯವಸ್ಥೆಗೆ ಉಳಿಗಾಲವಿಲ್ಲ’ ಎಂದು ರೊಚ್ಚಿಗೆದ್ದ ಪಟ್ಟಭದ್ರ ಜನ ಸಾವಿರಾರು ಶರಣರ ತಲೆಗಳನ್ನು ಕಡಿದು ಚೆಂಡಾಡಿದರು.
ಸಾವಿರಾರು ಶರಣರನ್ನು ಆನೆಗಳ ಕಾಲುಗಳಿಗೆ ಸರಪಳಿ ಬಿಗಿದು ಎಳೆಯಿಸಿ ಕೊಲ್ಲುವ ‘ಎಳೆಹೂಟೆ’ ಶಿಕ್ಷೆ ನೀಡಿ ಕೊಂದುಹಾಕಿದರು. ಪ್ರಭುತ್ವ ವಿರೋಧಿಯೆಂದು ಭಾವಿಸಲಾದ ಸಾವಿರಾರು ಅಮೂಲ್ಯ ವಚನ ಕಟ್ಟುಗಳನ್ನು ಬಿಡದೆ ಹುಡುಕಿಸಿ ಬೆಂಕಿಗೆಸೆದು ಸುಡಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು.
ಈ ಘಟನೆ ನಡೆದದ್ದು ಮಹಾನವಮಿಯ ದಿವಸ. ಇಂತಹ ಕರಾಳ ನವಮಿಯ ದಿನ ಶರಣರು, ತಮಗೊದಗಿದ ಮರಣಕ್ಕೆ ಅಂಜದೆ ‘ಮರಣವೇ ಮಹಾನವಮಿ’ ಎಂದು ದೇಹತ್ಯಾಗ ಮಾಡಿದರು. ಲಭ್ಯವಿರುವ ಉಲ್ಲೇಖಿತ ದಾಖಲೆಗಳ ಪ್ರಕಾರ ಲಕ್ಷದ ಮೇಲೆ ತೊಂಭತ್ತಾರು ಸಾವಿರ ವಚನಕಾರರು ಹನ್ನೆರಡನೇ ಶತಮಾನದಲ್ಲಿದ್ದರು.
ಸಾವಿರ ಸಾವಿರ ಸಂಖ್ಯೆಯ ಶರಣರ ದೇಹಗಳು ಛಿದ್ರಛಿದ್ರವಾಗುತ್ತಿರುವ, ವಚನ ಕಟ್ಟುಗಳು ಉರಿದು ಬೂದಿಯಾಗಿಹೋಗುವ ಇಂತಹ ಸಾಮಾಜಿಕ ಸಂಕ್ಷೋಭಿತ ಪರಿಸ್ಥಿತಿಗೆ ಸಿಲುಕಿದ ಅನೇಕ ವಚನಕಾರರು, ಕೆಲವಾದರೂ ಅಮೂಲ್ಯ ವಚನಕಟ್ಟುಗಳನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಜೀವರಕ್ಷಿಸಿಕೊಳ್ಳಲು, ಆ ಮೂಲಕ ವಚನ ಚಳವಳಿಯ ಆಶಯಗಳನ್ನು ಜೀವಂತವಾಗಿರಿಸಲು ಕಲ್ಯಾಣ ತೊರೆದು ದಿಕ್ಕಾಪಾಲಾಗಿ ಓಡಿಹೋದರು. ಇದೆಲ್ಲವೂ ನಡೆದದ್ದು ಮಹಾನವಮಿಯ ದಿವಸ. ಇಂತಹ ಮಹಾನವಮಿ ದಿವಸವನ್ನು ನಾವು ನಾಡಹಬ್ಬವನ್ನಾಗಿ ಆಚರಿಸಲು ಸಾಧ್ಯವೇ?!
ಜಾತಿವಿನಾಶ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಹುದೊಡ್ಡ ಆಶಯ ಮತ್ತು ಗುರಿ. ಇದು ಮೂಲದಲ್ಲಿ ಬುದ್ಧಗುರು ಮತ್ತು ಬಸವಣ್ಣನವರ ಆಶಯ ಮತ್ತು ಗುರಿಯೂ ಆಗಿತ್ತು ಎಂಬುದನ್ನು ನಾವು ಮರೆಯದಿರೋಣ. ಸಾವಿರಾರು ಜನರ ಹತ್ಯೆಗೆ ಕಾರಣವಾದ ‘ಕಲ್ಯಾಣ ಕ್ರಾಂತಿ’ ಎಂಬುದು ಎರಡು ರಾಜ್ಯಗಳ ನಡುವೆ ರಾಜ್ಯ ವಿಸ್ತರಣೆ ಮತ್ತು ಅಧಿಕಾರಕ್ಕಾಗಿ ನಡೆದ ಯುದ್ಧವಲ್ಲ. ರಾಜ್ಯಕ್ಕಾಗಿ ಅಥವಾ ಆಸ್ತಿಪಾಸ್ತಿಗಳ ಪಾಲುಪಾರಿಕತ್ತಿಗಾಗಿ ಅಣ್ಣತಮ್ಮಂದಿರ ನಡುವೆ ನಡೆದ ಸೋದರ ವ್ಯಾಜ್ಯವೂ ಅಥವಾ ದಾಯಾದಿ ಕಲಹವೂ ಅಲ್ಲ.
ಇದು ಮಹಾಭಾರತ ಕಥೆಯಲ್ಲ.ಕೋಮುದೊಂಬಿಯೂ (Communal riot) ಅಲ್ಲ. ಮತೀಯ ಧ್ವೇಷದ ಸ್ಫೋಟವೂ ಅಲ್ಲ. ಒಬ್ಬನ ಹೆಂಡತಿಯನ್ನು ಮತ್ತೊಬ್ಬನು ಹೊತ್ತೊಯ್ದುದಕ್ಕೆ ನಡೆದ ಯುದ್ಧವೂ ಇದಲ್ಲ.
ಇದು ರಾಮಾಯಣ ಕಥೆಯಲ್ಲ. ಬದಲಾಗಿ ‘ಕಲ್ಯಾಣ ಕ್ರಾಂತಿ’ ಎಂಬುದು ವರ್ಣಸಂಕರ ಆಗದಂತೆ, ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು, ಜಾತಿ ಪದ್ಧತಿಯನ್ನು ಪೋಷಿಸಲು ವೈದಿಕಶಾಹಿ ಬ್ರಾಹ್ಮಣರು ನಡೆಸಿದ ಸಂಚಿನ ಪ್ರತಿಫಲ. ಬ್ರಾಹ್ಮಣರ ಆಜ್ಞಾನುಪಾಲಕನಾದ ಅಲ್ಲಿನ ಒಬ್ಬ ರಾಜ ತನ್ನದೇ ಪ್ರಜೆಗಳ ವಿರುದ್ಧ ತನ್ನ ಸೇನೆಯನ್ನೇ ಬಿಟ್ಟು ತನ್ನ ಪ್ರಜೆಗಳನ್ನೇ ಕೊಲ್ಲಿಸಿದ ವಾಸ್ತವ ಗತ ಚರಿತ್ರೆ.
ಸರ್ಕಾರದ ಯಂತ್ರಾಂಗವೇ ಪ್ರಜೆಗಳನ್ನು ಕೊಂದು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಸೃಷ್ಟಿಸಿದ್ದರ ವಿರುದ್ಧ ಕೃದ್ಧರಾದ ಜನಸಾಮಾನ್ಯರು ರಾಜನ ರುಂಡ ಕಡಿದರು. ಜಾತ್ಯತೀತ ಕಲ್ಯಾಣ ರಾಜ್ಯವನ್ನು ರೂಪಿಸಬೇಕೆಂದು ಹೋರಾಟ ಮಾಡುತ್ತಿದ್ದ ಬಸವಣ್ಣನ ಕಣ್ಣೆದುರಿನಲ್ಲಿಯೇ ಈ ಕರಾಳ ಘಟನೆಗಳು ನಡೆದುಹೋದವು. ಇಂತಹ ಘಟನಾವಳಿಗಳಿಂದ ಬ್ರಮನಿರಸನಗೊಂಡ ಬಸವಣ್ಣ ಆತ್ಮಹತ್ಯೆ ಮಾಡಿಕೊಂಡ ಅಥವಾ ಬಸವಣ್ಣನನ್ನು ಆ ರಾಜನ ಸೇನೆ ಕೂಡಲ ಸಂಗಮದವರೆಗೂ ಬೆನ್ನಟ್ಟಿಹೋಗಿ ಕೊಂದು ಹಾಕಿತು. ಇದನ್ನು ಬಸವಣ್ಣ ಕೂಡಲಸಂಗಮದೇವನಲ್ಲಿ ಐಕ್ಯನಾದನೆಂದು ಚರಿತ್ರೆ ತಿಳಿಸುತ್ತದೆ.
ಬಸವಣ್ಣ ಮತ್ತಿತರ ಶರಣರ ಹತ್ಯೆಯ ನಂತರ ಅಕ್ಕನಾಗಮ್ಮ ಮತ್ತು ಚೆನ್ನಬಸವಣ್ಣ ಈಗಿನ ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದುರ್ಗಮವಾದ ಜೋಯಿಡಾ ತಾಲ್ಲೂಕಿನ ಉಳುವಿಗೆ ಬಂದು ಜೀವ ಉಳಿಸಿಕೊಳ್ಳುತ್ತಾರೆ. ಅಲ್ಲಿ ಚೆನ್ನಬಸವಣ್ಣನ ದೇಹ ಜರ್ಜರಿತವಾಗಿ ಅವನು ಚಿಕ್ಕ ವಯಸ್ಸಿನಲ್ಲಿಯೇ ದೇಹ ವಿಸರ್ಜಿಸುತ್ತಾನೆ. ಅಕ್ಕನಾಗಮ್ಮ ಉಳುವಿ ತೊರೆದು ಕಾಡು ಕಣಿವೆ ಇಳಿದು ಗಾವುದ ಗಾವುದ ನಡೆದು ತರೀಕೆರೆಗೆ ಬಂದು, ತರೀಕೆರೆ ಹತ್ತಿರ ದೇಹತ್ಯಾಗ ಮಾಡುತ್ತಾಳೆ.
ಕಲ್ಯಾಣದಿಂದ ಉಳುವಿಗೆ ಧಾವಿಸಿ ಬರುವಾಗ ಶರಣರ ಹಿಂದೆಯೇ ಬಿಜ್ಜಳನ ದಂಡು ಬೆನ್ನಾಡಿ ಹೋದದ್ದರಿಂದ ಈತನಕದ ದಾರಿಯನ್ನು ‘ದಂಡಿನ ದಾರಿ’ ಎಂದು ಕರೆಯುತ್ತಾರೆಂದು ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು ಐತಿಹಾಸಿಕ ಸಾಕ್ಷ್ಯ ಒದಗಿಸಿದ್ದಾರೆ. ಒಂದು ಗುಂಪು ಸೊನ್ನಲಿಗೆ ಸಿದ್ಧರಾಮನೊಂದಿಗೆ ಮಹಾರಾಷ್ಟ್ರದ ಸೊಲ್ಲಾಪೂರದ ಕಡೆಗೂ, ಇನ್ನೊಂದು ಗುಂಪು ಶ್ರೀಶೈಲಕ್ಕೂ, ಅರುಹಂತಪುರ- ಗೋಸಲ – ಗುಮ್ಮಳಾಪುರಕ್ಕೂ, ಎಡೆಯೂರು-ಸಿದ್ಧಗಂಗೆ-ಸಿದ್ಧರಬೆಟ್ಟಗಳಿಗೂ ಶರಣರು ಹೋದರೆಂದು ನಂಬಲಾಗುತ್ತದೆ.
ಹೀಗೆ ಕಲ್ಯಾಣದ ಶರಣರು ನಡೆದುಹೋದ ದಾರಿ ಇರುವ ಕಡೆಗಳಲ್ಲೆಲ್ಲಾ ಲಿಂಗಾಯತರ ಪ್ರಾಬಲ್ಯವಿರುವುದನ್ನು ನೋಡಬಹುದು. ಕಲ್ಯಾಣ ಕ್ರಾಂತಿಯ ಮೇರು ಶರಣರಾದ ಮಾದಾರ ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿಗಳು ದಕ್ಷಿಣದ ತುದಿಯ ಚಾಮರಾಜನಗರದ ಅರುಹಂತಪುರಕ್ಕೆ ಬಂದರೆಂದು ನಂಬಲಾಗುತ್ತದೆ.
ಅಂತರ್ಜಾತಿ ಮದುವೆಗಳು ನಡೆಯದಂತೆ ತಡೆಯಲು ಮತ್ತು ಜಾತಿ ಪದ್ಧತಿಯನ್ನು ಪೋಷಿಸಲು ಯುವಜೋಡಿಯಾದ ಶೀಲವಂತ ಮತ್ತು ಲಾವಣ್ಯವತಿಯರನ್ನು ಹನ್ನೆರಡನೇ ಶತಮಾನದಲ್ಲಿ ಹತ್ಯೆ ಮಾಡಿದಂತೆ, ಪ್ರಜಾಪ್ರಭುತ್ವ ವ್ಯವಸ್ಥೆಯ ಇವತ್ತಿನ ದಿನಗಳಲ್ಲಿಯೂ ಯಥಾಸ್ಥಿತಿ ಜಾತಿವಾದಿಗಳು ಅಂತರ್ಜಾತಿ ಮದುವೆಗಳನ್ನು ವಿರೋಧಿಸುವುದು ಈ ಜಾತಿಗ್ರಸ್ತ ಸಮಾಜದಲ್ಲಿ ಮಾಮೂಲು ವಿದ್ಯಮಾನವಾಗಿದೆ. ನಾಗರಿಕ ಸಮಾಜದ ನಾವು ಮನುಧರ್ಮಶಾಸ್ತ್ರ ಪ್ರಣೀತ ಜಾತಿಕಟ್ಟುಗಳನ್ನು ಪಾಲಿಸುವ ಕಡೆಗೆ ಚರಿತ್ರೆಯ ಹಿಂದಕ್ಕೆ ಚಲಿಸಬಾರದು. ಹಾಗೆ ಹಿಂದಕ್ಕೆ ಚಲಿಸುವ ಮತಾಂಧ ಮನಸ್ಸುಗಳ ವರ್ತನೆಯಿಂದಾಗಿಯೇ ‘ಮರ್ಯಾದಾ ಹತ್ಯೆ’ ಹೆಸರಿನಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ.
ಶರಣರು ‘ಮರಣವೇ ಮಹಾನವಮಿ’ ಎಂದು ಇದೇ ಮಹಾನವಮಿಯ ದಿವಸ ಆತ್ಮಾರ್ಪಣೆ ಮಾಡಿಕೊಂಡಿದ್ದಾರೆ. ಇಂತಹ ಮಹಾನವಮಿ – ದಸರಾ ಆಚರಣೆ ನಮಗೆ ಬೇಕೆ? ಸನಾತನ ಧರ್ಮವು ವಿಧಿಸಿರುವ ಜಾತಿ ಪದ್ದತಿಯನ್ನು ನಾಶಮಾಡಬೇಕೆಂಬುದು ಬುದ್ಧಗುರು – ಬಸವಣ್ಣ – ಅಂಬೇಡ್ಕರ್ – ಕುವೆಂಪು ಅವರ ಆಶಯ ಮತ್ತು ಗುರಿಗಳಾಗಿದ್ದವು ಎಂಬುದನ್ನು ಮಹಾನವಮಿಯ ಈ ದಿವಸ ನಾವು ಮರೆಯದಿರೋಣ. ಅವರ ಆಶಯಗಳಿಗೆ ಜೀವವಿದೆ. ಮಹಾ ನವಮಿ : ಶರಣರ ಹುತಾತ್ಮ ದಿನ!
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನೂತನ ಸಂಸದರನ್ನು ಸ್ವಾಗತಿಸಲು ಲೋಕಸಭಾ ಕಾರ್ಯಾಲಯ ಸಜ್ಜು ; ಸಂಸದರಿಗೆ ಇಷ್ಟೆಲ್ಲಾ ಸವಲತ್ತುಗಳು..!
ಸುದ್ದಿದಿನ ಡೆಸ್ಕ್ : ಲೋಕಸಭೆಯ ಅಂತಿಮ ಚರಣದ ಮತದಾನ ದಿನ ಹಾಗೂ ನಂತರ ಚುನಾವಣಾ ಫಲಿತಾಂಶವು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಂಸದರನ್ನು ಬರ ಮಾಡಿಕೊಳ್ಳಲು ಲೋಕಸಭಾ ಕಾರ್ಯಾಲಯ ವ್ಯಾಪಕ ವ್ಯವಸ್ಥೆಯಿಂದ ಸಜ್ಜುಗೊಳ್ಳುತ್ತಿದೆ. ಇದಕ್ಕಾಗಿ ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ.
ಚುನಾಯಿತ ಅಭ್ಯರ್ಥಿಗಳ ಬಗ್ಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುತ್ತಿದ್ದಂತೆಯೇ ನೂತನ ಅಭ್ಯರ್ಥಿಗಳ ಆಗಮನ ಪ್ರಕ್ರಿಯೆ ಆರಂಭವಾಗುತ್ತದೆ. ಅವರ ಪ್ರಯಾಣಕ್ಕೆ ಮುನ್ನವೇ ಲೋಕಸಭೆ ಕಾರ್ಯಾಲಯದ ನೋಡಲ್ ಅಧಿಕಾರಿಗಳು ಅವರನ್ನು ಸಂಪರ್ಕಿಸುತ್ತಾರೆ. ಐಜಿಐ ವಿಮಾನ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ವಿವಿಧ ಟರ್ಮಿನಲ್ಗಳಲ್ಲಿ ವಿಶೇಷ ಸ್ವಾಗತ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಸಂಸದರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ನಿಗದಿತ ಕೇಂದ್ರಗಳಲ್ಲಿ ಬರ ಮಾಡಿಕೊಳ್ಳಲಾಗುತ್ತದೆ.
ಸಂಸತ್ತಿನ ಅನೆಕ್ಸೆ ವಿಸ್ತೃತ ಕಟ್ಟಡದ ಸ್ವಾಗತ ಕೇಂದ್ರಕ್ಕೆ ಆಗಮಿಸಿದ ನಂತರ ಅವರಿಗೆ ದೂರವಾಣಿ ಸಂಪರ್ಕ, ಹೊಸಬ್ಯಾಂಕ್ ಖಾತೆ, ಸಂಸತ್ ಕಟ್ಟಡಕ್ಕೆ ಪ್ರವೇಶ ಪಡೆಯಲು ಸ್ಮಾರ್ಟ್ ಆಕ್ಸೆಸ್ ಕಾರ್ಡ್, ಅವರ ವಾಹನಗಳಿಗಾಗಿ ಫಾಸ್ಟ್ ಟ್ಯಾಗ್ ಸ್ಟಿಕರ್ ಮತ್ತು ರಾಜತಾಂತ್ರಿಕ ಪಾಸ್ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಲಾಗುತ್ತದೆ. ರಾಜ್ಯ ಸರ್ಕಾರಿ ಅತಿಥಿ ಭವನ ಹಾಗೂ ಪಶ್ಚಿಮ ನ್ಯಾಯಾಲಯ ಹಾಸ್ಟೇಲ್ ಸಂಕೀರ್ಣದಲ್ಲಿ ಅವರಿಗೆ ತಂಗಲು ಅವಕಾಶ ಕಲ್ಪಿಸಲಾಗುತ್ತದೆ. ಹೊಸ ಸದಸ್ಯರಿಗೆ ಸಂವಿಧಾನದ ಪ್ರತಿ ನೀತಿ ಮತ್ತು ಕಲಾಪ, ಪ್ರಕ್ರಿಯೆ, ನಿಯಮಾವಳಿ ಕೈಪಿಡಿಗಳನ್ನು ಅನುಸರಿಸಲು ನೀಡಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಫ್ರಾನ್ಸ್ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇಬ್ಬರು ನರ್ಸ್ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್ಗೆ ಪಾತ್ರವಾಯಿತು.
ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.
ಎಫ್ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕವಿತೆ | ಒಂದು ಕಪ್ ಕಾಫಿ
- ಲಕ್ಕೂರು ಆನಂದ್
ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:
ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ
ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…
ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!
ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?
ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್ಗಳು
ಈ ಕಾಫಿ ಕಪ್ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಕವಿ ಆನಂದ ಲಕ್ಕೂರು ನಿಧನ ; ಉದಯ ಇಟಗಿ ನುಡಿನಮನ
-
ಕ್ರೀಡೆ7 days ago
ಬೆಳಗಿನ ಸುದ್ದಿ ಮುಖ್ಯಾಂಶಗಳು
-
ದಿನದ ಸುದ್ದಿ6 days ago
ಇರಾನ್ ಅಧ್ಯಕ್ಷ ಹೆಲಿಕಾಪ್ಟರ್ ದುರಂತದಲ್ಲಿ ಸಾವು | ಅಘಾತಕಾರಿ ಸುದ್ದಿ ಕೇಳಿ ದುಃಖವಾಗಿದೆ : ಪ್ರಧಾನಿ ಮೋದಿ
-
ದಿನದ ಸುದ್ದಿ6 days ago
ರಾಜ್ಯ ಸರ್ಕಾರಕ್ಕೆ ಒಂದು ವರ್ಷದ ಸಂಭ್ರಮ | ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ5 days ago
ಆರು ಮತ್ತು ಏಳನೇ ಹಂತದ ಲೋಕಸಭಾ ಚುನಾವಣೆಗೆ ರಾಜಕೀಯ ನಾಯಕರಿಂದ ಬಿರುಸಿನ ಪ್ರಚಾರ
-
ದಿನದ ಸುದ್ದಿ5 days ago
5ನೇ ಹಂತದ ಲೋಕಸಭೆ ಚುನಾವಣೆ; ಶೇಕಡ 60.09ರಷ್ಟು ಮತದಾನ
-
ದಿನದ ಸುದ್ದಿ3 days ago
ಪ್ರಜ್ವಲ್ ಪೋಲಿಸರಿಗೆ ಶರಣಾಗಿ ವಿಚಾರಣೆ ಎದುರಿಸಬೇಕು : ಮೊಮ್ಮಗನಿಗೆ ಮಾಜಿ ಪ್ರಧಾನಿ ದೇವೇಗೌಡ ಎಚ್ಚರಿಕೆ
-
ದಿನದ ಸುದ್ದಿ6 days ago
ದಾವಣಗೆರೆ | ಒಂದೇ ಕುಟುಂಬದ ಮೂವರು ನಾಪತ್ತೆ