ದಿನದ ಸುದ್ದಿ
ಬದಲಾದ ಸನ್ನಿವೇಶದಲ್ಲಿ ಹೀಗಿರಲಿ ಶಿಕ್ಷಣ ಪದ್ಧತಿ; ಮಗುವಿನ ಜೀವ ಮತ್ತು ಜೀವನ ಎರಡಕ್ಕೂ ಸಿಗಲಿ ಸಮಾನ ಆದ್ಯತೆ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/04/corona_virus_suddidina_Media.jpg&description=ಬದಲಾದ ಸನ್ನಿವೇಶದಲ್ಲಿ ಹೀಗಿರಲಿ ಶಿಕ್ಷಣ ಪದ್ಧತಿ; ಮಗುವಿನ ಜೀವ ಮತ್ತು ಜೀವನ ಎರಡಕ್ಕೂ ಸಿಗಲಿ ಸಮಾನ ಆದ್ಯತೆ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/04/corona_virus_suddidina_Media.jpg&description=ಬದಲಾದ ಸನ್ನಿವೇಶದಲ್ಲಿ ಹೀಗಿರಲಿ ಶಿಕ್ಷಣ ಪದ್ಧತಿ; ಮಗುವಿನ ಜೀವ ಮತ್ತು ಜೀವನ ಎರಡಕ್ಕೂ ಸಿಗಲಿ ಸಮಾನ ಆದ್ಯತೆ', 'pinterestShare', 'width=750,height=350'); return false;" title="Pin This Post">
- ವಿ.ಕೆ.ಕುಮಾರಸ್ವಾಮಿ, ಶಿಕ್ಷಕರು, ರಾಮನಗರ
ಇಡೀ ಭೂ ಖಂಡಕ್ಕೆ ವಕ್ಕರಿಸಿರುವ ಕೊರೋನಾ ವಿಷ ಪೀಡೆಯ ಹಾವಳಿಯಿಂದ ಇಂದು ಎಲ್ಲವೂ ಅಯೋಮಯವಾಗಿದೆ. ಈ ವಿಷವರ್ತುಲದಲ್ಲೇ ಬದುಕು ಸವೆಸುವುದು ಸರ್ವರಿಗೂ ಅನಿವಾರ್ಯವಾಗಿದೆ. ಬಹುಕಾಲದಿಂದ ಅಸ್ತಿತ್ವದಲ್ಲಿದ್ದ ನಮ್ಮ ಧೀಮಂತ ಶಿಕ್ಷಣ ವ್ಯವಸ್ಥೆಯೂ ಸಹ ಇದರಿಂದ ಹೊರತಾಗಿಲ್ಲ. ಪ್ರಸ್ತುತ ಸಂದಿಗ್ಧ ಸಂದರ್ಭದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ನೇರವಾಗಿ ಚಾಲನೆ ಕೊಡುವ ಬಗ್ಗೆ ಎಲ್ಲರಲ್ಲೂ ಜಿಜ್ಞಾಸೆ ಇದೆ.
ಹೇಗೋ ಶಾಲೆಗಳು ಪುನರಾರಂಭವಾದರೂ, ಈ ಮೊದಲಿನಂತೆ ಶಿಕ್ಷಣದ ರಥವನ್ನ ಎಳೆಯುವುದು ಪ್ರಾಯಾಸದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಹಾಗೂ ಸಂಬಂಧಿಸಿದ ರಾಜ್ಯ ಸರಕಾರಗಳು ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿರುವುದು ಒಂದಷ್ಟು ವಿಶ್ವಾಸ ಮೂಡಿಸಿದ್ದರೂ, ಅವುಗಳ ಜಾರಿ ಮತ್ತು ಪಾಲನೆ ಅಷ್ಟು ಸರಾಗದ ಕೆಲಸವಲ್ಲ. ಶಾಲೆಗಳು ಆರಂಭವಾದ ನಂತರ ಸರಕಾರದ ಮಾರ್ಗಸೂಚಿಗಳ ಜೊತೆಗೆ, ಕೈಗೊಳ್ಳಬಹುದಾದ ಇನ್ನಿತರ ಉಪಕ್ರಮಗಳನ್ನು ಕುರಿತು ಒಂದು ಅವಲೋಕನ ಇಲ್ಲಿದೆ.
ಹಿರಿದಾಗಬೇಕಿದೆ ಪೋಷಕರ ಪಾತ್ರ
ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು ಎಂಬ ನಾಣ್ಣುಡಿಯಂತೆ ಬದಲಾದ ಶೈಕ್ಷಣಿಕ ದಿನಗಳಲ್ಲಿ ಪೋಷಕರು ಸಹ ಶಿಕ್ಷಣ ವ್ಯವಸ್ಥೆಯ ಒಂದು ಭಾಗವಾಗಿ ಹೊರಳಬೇಕಿದೆ. ಈ ಮೊದಲು ಶಿಕ್ಷಕ-ಪಠ್ಯವಸ್ತು–ವಿದ್ಯಾರ್ಥಿ ಕೇಂದ್ರಿತವಾಗಿದ್ದ ತ್ರಿಸೂತ್ರದ ಶಿಕ್ಷಣ ವ್ಯವಸ್ಥೆ ಇಂದು ಪೋಷಕರನ್ನೂ ಒಳಗೊಂಡು ಚತುರ್ ಸೂತ್ರವಾಗಬೇಕಿದೆ. ಶಾಲಾವಧಿಯನ್ನು ಕಡಿತಗೊಳಿಸುವ ಬಗ್ಗೆ ಈಗಾಗಲೇ ಉನ್ನತ ಮಟ್ಟದ ಚಿಂತನೆ ನಡೆಯುತ್ತಿರುವುದರಿಂದ, ಇನ್ನು ಮುಂದೆ ಮಗುವಿಗೆ ಮನೆಯಲ್ಲೂ ಸಹ ಕಲಿಕೆಯಾಗಬೇಕಿದೆ.
ವಿಶೇಷವಾಗಿ ತಾಯಂದಿರು ಸ್ವತಃ ಶಿಕ್ಷಕರಾಗಿ ಬದಲಾಗಬೇಕಿದೆ. ಪ್ರಬುದ್ಧ ಪೌರರ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಹಿರಿದಾಗಿದ್ದು, ಈ ನಿಟ್ಟಿನಲ್ಲಿ ನಾವಿಡುವ ಪ್ರತೀ ಹೆಜ್ಜೆಯೂ ಭವಿಷ್ಯದಲ್ಲಿ ಶಿಕ್ಷಣದ ಸ್ಥಿತಿಸ್ಥಾಪಕತ್ವದ ಮುನ್ನುಡಿಯಾಗುತ್ತದೆ. ಇತಿಹಾಸದಲ್ಲಿ ಶಿವಾಜಿ ಮಹಾರಾಜರ ತಾಯಿ ಜೀಜಾಬಾಯಿಯನ್ನು ಮೊದಲುಗೊಂಡು, ಅನೇಕ ತಾಯಂದಿರು ತಮ್ಮ ಕಂದಮ್ಮಗಳ ಭವಿಷ್ಯಕ್ಕೆ ಅಡಿಪಾಯವಾದದ್ದನ್ನು ಸ್ಮರಿಸಿಕೊಳ್ಳುತ್ತಾ, ಅದೇ ಹಾದಿಯಲ್ಲಿ ಸಾಗಬೇಕಿದೆ.
‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ಮಕ್ಕಳು ಮನೆಯಲ್ಲಿ ಮೊಂಡು ಬೀಳುವುದು ಸಹಜವೇ. ಆದರೆ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇಬೇಕಿದೆ. ಪೋಷಕರೂ ಸಹ ಶೈಕ್ಷಣಿಕ ಚಟುವಟಿಕೆಗಳಿಗೆ ಸಮಾನ ಸಹಭಾಗಿತ್ವ ತೋರಬೇಕಿದೆ. ಇಂತಹ ಚತುರ್ ಸೂತ್ರದ ಪಾಲನೆಗೆ ಕ್ರಮೇಣವಾಗಿ ಎಲ್ಲರೂ ಒಗ್ಗಿಕೊಳ್ಳಬೇಕಿದೆ.
ಶಾಲೆಗಳ ಆರಂಭದ ನಂತರವಂತೂ ಮಗುವಿನ ಆರೋಗ್ಯ ರಕ್ಷಣೆಯ ವಿಚಾರ ಅತ್ಯಂತ ಗಂಭೀರವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಗುವಿನ ಭವಿಷ್ಯ ಡೋಲಾಯಮಾನವಾಗದಂತೆ ರಕ್ಷಿಸುವ ಹೊಣೆ ಎಲ್ಲರದ್ದೂ ಆಗಿದೆ. ಮನೆಯಲ್ಲಿ ಅವರಿಗೆ ಸ್ವಚ್ಛವಾದ ಆಹಾರ ಪೂರೈಕೆ, ಪ್ರತಿನಿತ್ಯ ಸ್ನಾನ, ಶಾಲೆಯಲ್ಲಿ ಅವರು ಅನುಸರಿಸಬೇಕಾದ ಕ್ರಮಗಳು, ಅವರ ಓದು ಬರಹದ ಮೇಲೆ ಪೂರ್ಣ ನಿಗಾ ಇಡುವುದು ಇವೆಲ್ಲವೂ ಸಹ ಮಗುವಿನ ಬೆಳವಣಿಗೆಗೆ ಮಹತ್ವದ ಆಧಾರ ಸ್ಥಂಭಗಳಾಗಲಿವೆ. ಶಾಲೆಗೂ ಸಹ ಮನೆಯಿಂದಲೇ ಆಹಾರ ಮತ್ತು ಬಿಸಿ ನೀರಿನ ಪೂರೈಕೆ ಮಾಡುವುದು ಸಮಂಜಸ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಿಗೆ ಹೊರಗಿನ ತಿಂಡಿ-ತಿನಿಸುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಿದೆ.
ಶಿಕ್ಷಣ ಸಂಸ್ಥೆಗಳಿಗೆ ಸವಾಲು
ವರ್ಷವಿಡೀ ಪಠ್ಯವಸ್ತುವನ್ನು ಬೋಧಿಸಿ, ಅದನ್ನು ಮಗುವಿಗೆ ಮನದಟ್ಟು ಮಾಡಿಸಿ, ಮಧ್ಯದಲ್ಲಿ ಕೆಲವು ಪಠ್ಯೇತರ ಚಟುವಟಿಕೆಗಳನ್ನು ನಡೆಸಿ, ಕೊನೆಗೆ ಮಕ್ಕಳನ್ನು ಪರೀಕ್ಷೆಗೆ ಒರೆ ಹಚ್ಚುವುದು ನಮ್ಮ ಈ ಮೊದಲಿನ ಶಿಕ್ಷಣ ವ್ಯವಸ್ಥೆಯ ಸಮಗ್ರ ಭಾಗವಾಗಿತ್ತು. ಇಂದಿನ ಬದಲಾದ ಸನ್ನಿವೇಶದಲ್ಲಿ, ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಮಗುವನ್ನು ಕಾಣದ ಕ್ರಿಮಿಯ ದಾಳಿಯಿಂದ ಪಹರೆ ಮಾಡಬೇಕಾದ ದೊಡ್ಡಮಟ್ಟದ ಜವಾಬ್ದಾರಿ ಶಾಲೆಗಳ ಮೇಲಿದೆ.
ಕೊರೋನಾ ಪೂರ್ವ ಕಾಲದಲ್ಲಿದ್ದಂತೆ, ಕೊರೋನೋತ್ತರ ಕಾಲದಲ್ಲೂ ಮಗುವಿನ ಸಮಗ್ರ ವಿಕಾಸಕ್ಕೆ ಅಗತ್ಯವಾದ ಕ್ರಮಗಳ ಅನುಷ್ಠಾನ ಇಂದು ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಿದೆ. ಮಕ್ಕಳ ಸರ್ವಾಂಗೀಣ ಪ್ರಗತಿಯು ಶಿಕ್ಷಣದ ಮೂಲಭೂತ ಗುರಿಯಾಗಿದ್ದು, ಪಾಠಪ್ರವಚನಗಳ ಜೊತೆಗೆ ಮಗುವಿಗೆ ಆರೋಗ್ಯ ಶಿಕ್ಷಣ, ನೈತಿಕ ಮೌಲ್ಯಗಳ ವೃದ್ಧಿ, ದೈಹಿಕ ಬಲವರ್ಧನೆಯಂತಹ ಕಾರ್ಯಕ್ರಮಗಳಿಗೆ ಮತ್ತಷ್ಟು ಸಮಾನ ಪ್ರಾಶಸ್ತ್ಯದ ಅಗತ್ಯವಿದೆ.
ಹಿರಿಯರೊಬ್ಬರು ಸಮಾರಂಭದಲ್ಲಿ ಹೇಳಿದ ಮಾತೊಂದು ನೆನಪಿಗೆ ಬರುತ್ತಿದೆ “ಇಂದಿನ ಶಿಕ್ಷಣ ಪದ್ಧತಿ ಮಗವಿಗೆ ಭವಿಷ್ಯದಲ್ಲಿ ಹೇಗೆ ಹಣ ಸಂಪಾದಿಸಬೇಕು ಎನ್ನುವುದನ್ನಷ್ಟೇ ಕಲಿಸುತ್ತಿದೆ” ಎಂದು. ಇಂತಹ ಅಪವಾದಗಳಿಂದ ಮುಕ್ತವಾಗುವುದರ ಜೊತೆಗೆ, ‘ಶಿಕ್ಷಣವೇ ಜೀವನ’ ಎಂಬ ಶಿಕ್ಷಣ ತಜ್ಞರ ಅಭಿಮತಕ್ಕೆ ಮರುಜೀವ ದೊರಕಬೇಕಿದೆ. ಇಂತಹ ಹಲವು ತಂತ್ರಗಾರಿಕೆಗಳನ್ನು ನಾವಿಂದು ರೂಪಿಸಿಕೊಂಡು ಮುಂದಡಿ ಇಡಬೇಕಿದೆ.
ಉದಾರೀಕರಣ, ಜಾಗತೀಕರಣ, ಔದ್ಯೋಗೀಕರಣದ ವ್ಯವಸ್ಥೆಗಳಿಗೆ ಮಕ್ಕಳನ್ನು ಈಗಲೇ ಸಜ್ಜುಗೊಳಿಸುವ ಪ್ರಯತ್ನದ ಮುನ್ನ, ಮಕ್ಕಳನ್ನ ಮಕ್ಕಳಾಗಿಯೇ ನೋಡಬೇಕಿದೆ. ಸ್ಫರ್ಧೆಗಿಂತ ಸಾಮರಸ್ಯದ ಶಿಕ್ಷಣಕ್ಕೆ ಮಾನ್ಯತೆ ಸಿಗಬೇಕಿದೆ. ಇಲ್ಲವಾದಲ್ಲಿ ಎಲ್ಲವೂ ನಗಣ್ಯವಾಗಿ, ನೀರಿನ ಮೇಲೆ ಹೋಮ ಮಾಡಿದಂತಾಗುತ್ತದೆ. ಸುದೀರ್ಘ ಚರ್ಚಾ ರೀತಿಯ ಬೋಧನಾ ವಿಧಾನವೂ ಸಹ ಮುಂಬರುವ ದಿನಗಳಲ್ಲಿ ತೊಡಕಾಗಬಹುದು. ಹಾಗೆಯೇ ಇದೆಲ್ಲದಕ್ಕೂ ಸಮಯದ ಅಭಾವವೂ ಆಗುತ್ತದೆ.
ಆದ್ದರಿಂದ ಇಂದು ಮಗುವಿನ ಸರ್ವಾಂಗೀಣ ಅಭ್ಯುದಯಕ್ಕೆ ಕಾರಣವಾಗುವ ಕೇಂದ್ರೀಕೃತ ನೂತನ ಬೋಧನಾ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕಿದೆ. ಪ್ರಯೋಗಾತ್ಮಕ ಹಾಗೂ ಚಟುವಟಿಕಾತ್ಮಕ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಿದೆ. ಕೋವಿಡ್ನ ಆತಂಕದ ನಡುವೆಯೇ ಇವೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಅತಿ ದೊಡ್ಡ ಹೊಣೆಗಾರಿಕೆ ಇಂದು ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲೆ ಬಿದ್ದಿದೆ.
ಸಾಮಾಜಿಕ ಅಂತರ ಕಷ್ಟಸಾಧ್ಯ
ಹಿರಿಯರಲ್ಲೇ ಕ್ಷೀಣಿಸುತ್ತಿರುವ ಸಾಮಾಜಿಕ ಅಂತರವನ್ನು ಮಕ್ಕಳಲ್ಲಿ ಮೈಗೂಡಿಸುವುದು ದೊಡ್ಡ ಸಾಹಸವೇ ಸರಿ. ತುಂಟಾಟದ ವಯೋಮಾನದ ಮಕ್ಕಳಿಗೆ ನಾವು ಯಾವುದನ್ನು ಮಾಡಬೇಡಿ ಎನ್ನುತ್ತೇವೋ ಅದನ್ನೇ ಮಾಡುವುದು ಹೆಚ್ಚು. ಪ್ರತಿನಿತ್ಯ ಗೆಳೆಯರ ಒಡನಾಟ, ವಾಟರ್ ಬಾಟಲ್, ಆಹಾರ, ತಿಂಡಿ-ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವಿಕೆ, ಕೈ ತೊಳೆಯುವ ಜಾಗದಲ್ಲಿ ಗುಂಪುಗೂಡುವಿಕೆ, ಶಾಲಾ ವಾಹನಗಳಲ್ಲಿ ಸೀಟಿಗಾಗಿ ನಡೆಯುವ ಕಿತಾಪತಿಗಳು, ತರಗತಿಯಲ್ಲಿ ನಡೆಯುವ ಕೀಟಲೆಗಳು, ಪ್ರಾರ್ಥನೆ, ಆಟದ ಸಮಯದಲ್ಲಾಗುವ ಪೈಪೋಟಿಯುತ ವಾತಾವರಣ ಇವುಗಳ ಮಧ್ಯೆ ಅಂತರ ಮರೀಚೀಕೆಯಾಗಬಹುದು.
ಈ ನಿಟ್ಟಿನಲ್ಲಿ ಅತೀ ಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇವೆಲ್ಲದರ ನಡುವೆ ಮಕ್ಕಳನ್ನು ತಹಬಂದಿಗೆ ತಂದು, ಅವರ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ಕೊಟ್ಟು, ನಂತರ ಬಾಕಿ ಕಾರ್ಯಕ್ರಮಗಳತ್ತ ಗಮನ ಹರಿಹಸಬೇಕಿದೆ. ಅಲ್ಲದೇ ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಮಗುವಿನ ಮನಸ್ಸಿನ ಮೇಲೆ ಕೊಂಚವೂ ನಕಾರತ್ಮಕ ಪರಿಣಾಮ ಬೀರದಂತೆ ಎಚ್ಚರಿಕೆವಹಿಸಬೇಕಿದೆ. ಹೀಗೆ ಎಲ್ಲವೂ ಅತ್ಯಂತ ಸವಾಲೇ ಸರಿ.
ಇದಲ್ಲದೆ ನಮ್ಮ ದಿನನಿತ್ಯದ ಕರ್ತವ್ಯಗಳಂತಾಗಿರುವ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆ, ಸಾಬೂನಿನಲ್ಲಿ ಆಗಾಗ್ಗೆ ಕೈ ತೊಳೆಯುವುದು, ವಯಕ್ತಿಕ ಸ್ವಚ್ಛತೆ, ಅಂಗಾಂಗಳನ್ನು ಮುಟ್ಟದಿರುವಿಕೆ ಇತ್ಯಾದಿ ಕ್ರಮಗಳನ್ನು ಅಲಕ್ಷಿಸದೆ ಅನುಸರಿಸಬೇಕಿದೆ. ಪೆನ್ನು, ಪುಸ್ತಕ, ಪೆನ್ಸಿಲ್, ಇತ್ಯಾದಿ ವಸ್ತುಗಳನ್ನು ಕೆಲವು ತುಂಟ ಮಕ್ಕಳು ಕದಿಯುತ್ತಿದ್ದ ಬಗ್ಗೆ ಬರುತ್ತಿದ್ದ ದೂರುಗಳು ಮುಂದೆ ಸ್ಯಾನಿಟೈಸರ್, ಮಾಸ್ಕ್, ಸಾಬೂನುಗಳತ್ತ ತಿರುಗುವುದಂತಾದರೆ ಅದು ಮುಂಬರುವ ವಾಸ್ತವದ ನಗೆಹನಿಯೇ ಸರಿ..!
ಒಟ್ಟಾರೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಿಂದ ನಾವು ಹಿಂದಿನ ಗುರುಕುಲ ಪದ್ಧತಿಯ ಶಿಕ್ಷಣದ ಕೆಲ ಭಾಗಗಳತ್ತ ಒಳನೋಟ ಬೀರಬೇಕಿದೆ. ಇವೆಲ್ಲವೂ ಶಾಶ್ವತವಾಗಿ ನಡೆಯುತ್ತದೋ ಇಲ್ಲವೋ ಎಂಬ ಅಪನಂಬಿಕೆಯ ನಡುವೆ ಸದ್ಯಕ್ಕಂತೂ ಯಾವುದನ್ನೂ ತಾತ್ಸಾರ ಮನೋಭಾವದಿಂದ ನೋಡುವುದು ಬೇಡವಷ್ಟೆ. ಈ ಮಧ್ಯೆ ವಿಷಕಾರಿ ಕೊರೋನಾ ಮಹಾಮಾರಿಯ ಬಗ್ಗೆ ಪ್ರತಿನಿತ್ಯ ಮಕ್ಕಳಿಗೆ 10 – 15 ನಿಮಿಷಗಳ ಕಾಲ ತಿಳಿ ಹೇಳುವ ಕೆಲಸವೂ ಇಂದು ಜರುಗಬೇಕಿದೆ.
ಶಾಲೆಯಲ್ಲೇ ಶುರುವಾಗಲಿ ಕೊರೋನಾ ವಿರುದ್ಧದ ಹೋರಾಟ
ಮಗುವಿನ ವರ್ತನೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಶಿಕ್ಷಣದ ಧ್ಯೇಯೋದ್ದೇಶಗಳಲ್ಲೊಂದು. ಕುಟುಂಬದ ಜೊತೆಗೆ ಮಗುವನ್ನು ಸಾಮಾಜೀಕರಣಗೊಳಿಸುವ ಮಹತ್ತರ ಹೊಣೆ ಶಾಲೆಗಳ ಮೇಲೂ ಸಹ ಇದೆ. ಇಂತಹ ಪ್ರಗತಿಯ ಹಾದಿಯ ನಡುವೆ ನಾವಿಂದು ‘ಸದೃಢ ದೇಹದಲ್ಲಿ ಸದೃಢ ಮನಸ್ಸು’ ಎಂಬ ವಿವೇಕವಾಣಿಯನ್ನು ನೆನೆಯಬೇಕಿದೆ.
ಇಡೀ ಜಗತ್ತನ್ನೇ ನಿತ್ರಾಣಗೊಳಿಸುತ್ತಿರುವ ಕೊರೋನಾ ವಿಷಪೀಡಿಗೆ ಲಸಿಕೆ ಸಿಕ್ಕರೂ, ಶೀಘ್ರವಾಗಿ ಅದು ನಮ್ಮನ್ನು ಬಿಟ್ಟು ಹೋಗದು ಎಂಬ ಕೂಗು ಪ್ರತಿಧ್ವನಿಸುತ್ತಲೇ ಇದೆ. ಇಂತಹ ವಿಷ ಪೀಡೆಯ ವಿರುದ್ಧ ಹೋರಾಡಲು ಅಗತ್ಯವಾದ ಶಕ್ತಿ, ಸಾಮಥ್ರ್ಯಗಳನ್ನು ಪಡೆಯುವಂತಹ, ದೇಹವನ್ನು ಗಟ್ಟಿಗೊಳಿಸುವಂತಹ ಕ್ರಿಯೆಗಳಿಗೆ ಶಾಲೆಗಳಿಂದ ಚಾಲನೆ ಸಿಗಬೇಕಿದೆ. ಪಠ್ಯದೊಂದಿಗೆ ಯೋಗ, ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಆಡುವ ಆಟಗಳಿಗೆ ಇಂದು ಮನ್ನಣೆ ದೊರಕಬೇಕಿದೆ.
ತನ್ಮೂಲಕ ದೇಹ ಗಟ್ಟಿಗೊಳ್ಳುವುದರ ಜೊತೆಗೆ, ಮಗುವಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಾಧ್ಯ. ಆದರೆ ಇವೆಲ್ಲವುಗಳನ್ನು ಅತೀ ಸೂಕ್ಷ್ಮ ಹಾಗೂ ಜಾಗರೂಕವಾಗಿ ನಿರ್ವಹಿಸಬೇಕಷ್ಟೆ. ಇವುಗಳಂತೆ ಚಿತ್ರಕಲೆ, ಸಂಗೀತ, ತೋಟಗಾರಿಕೆ, ಕರಕುಶಲ ಕಲೆ, ನಾಟಕ, ಪ್ರಬಂಧ, ಪ್ರಯೋಗ, ನೃತ್ಯ, ಇವುಗಳ ಮೂಲಕವೂ ಮೂಲಭೂತ ಶಿಕ್ಷಣ ನೀಡುವಂಹ ವ್ಯವಸ್ಥೆಯನ್ನು ಸಜ್ಜುಗೊಳಿಸಬೇಕಿದೆ. ಇಂತಹ ಕ್ರಮಗಳಿಂದ ಸಾಮಾಜಿಕ ಅಂತರ ಪಾಲನೆಯೂ ಸರಳವಾಗುತ್ತದೆ.
ಪೂರ್ವ ತಯಾರಿ ಅಗತ್ಯ
ಸರಕಾರದ ಮಾರ್ಗಸೂಚಿಗಳ ಪಾಲನೆಯಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ಶಾಲೆಗಳ ಪಾತ್ರ ನಿರ್ಣಾಯಕವಾಗಲಿದೆ. ಮಕ್ಕಳಂತೆಯೇ ಶಾಲಾ ಸಿಬ್ಬಂದಿಯ ಸುರಕ್ಷತೆ, ಪ್ರತಿನಿತ್ಯ ಕೊಠಡಿಗಳ ಸ್ವಚ್ಛತೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆಗಳ ಲಕ್ಷಣಗಳಿದ್ದರೂ ವಿಶೇಷ ಚಿಕಿತ್ಸಾ ಆರೈಕಾ ಕೊಠಡಿಗಳ ನಿರ್ಮಾಣ, ಸಾಧ್ಯವಾದರೆ ಬಿಸಿ ನೀರಿನ ಪೂರೈಕೆ, ಇಂತಹ ಹಲವು ಸೌಕರ್ಯಗಳತ್ತ ಗಮನ ಹರಿಸಬೇಕಿದೆ.
ಇವೆಲ್ಲಕ್ಕೂ ಪೂರ್ವ ತಯಾರಿ ಅತ್ಯಗತ್ಯ. ಏಕೆಂದರೆ ಕೊರೋನಾ ಸಾವಿನೋಟದಾಟದ ನಡುವೆ ನಾವು ನಿರ್ಮಾಣ ಮಾಡಹೊರಟಿರುವುದು ಭವಿಷ್ಯದ ಪೌರರನ್ನು. ಇದರಲ್ಲಿ ಒಂದು ತಪ್ಪು ಹೆಜ್ಜೆ ಇಟ್ಟರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೊಂಚವೂ ನಿರ್ಲಕ್ಷ್ಯ ಸಲ್ಲದು. ಮಗುವಿನ ಜೀವ, ಹಾಗೂ ಜೀವನ ನಮ್ಮೆಲ್ಲರ ಸಮಾನ ಆದ್ಯತೆಯಾಗಬೇಕಿದೆ. ಇಷ್ಟೆಲ್ಲದರ ನಡುವೆ ಮಗುವಿನ ಮೇಲೆ ಮಾನಸಿಕ ಒತ್ತಡ ಬೀಳದಂತೆ ಕ್ರಮ ವಹಿಸಬೇಕಿದೆ.
ಶಿಕ್ಷಣ, ಆರೋಗ್ಯ, ಜೀವ, ಜೀವನ, ಮಾನಸಿಕ ವಿಕಾಸ, ದೈಹಿಕ ಬೆಳವಣಿಗೆ, ಒತ್ತಡ ರಹಿತ ಬದುಕು, ಸಹಕಾರ, ಸಹಬಾಳ್ವೆ, ನಿರಾತಂಕ ಹೀಗೆ ಹತ್ತು ಹಲವು ವಿಚಾರಗಳನ್ನು ಇಂದು ಮಗುವಿನ ಮನಸ್ಸಿನಲ್ಲಿ ರಿಜಿಸ್ಟರ್ ಮಾಡುವ ಕೆಲಸ ಶಾಲೆ ಮತ್ತು ಮನೆಗಳಿಂದ ಆಗಬೇಕಿದೆ.
ಬದಲಾಗಬೇಕಿದೆ ಪರೀಕ್ಷಾ ಪದ್ಧತಿ
ಪ್ರಸ್ತುತ ಪರೀಕ್ಷಾ ಪದ್ಧತಿಯು ಅತ್ಯಂತ ಸಮಗ್ರವಾಗಿದ್ದು, ಮುಂದೆ ಶಾಲಾವಧಿಯು ಕಡಿತಗೊಂಡರೆ ಇದೇ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದು ಕಠಿಣವಾಗಬಹುದು. ಸೀಮಿತ ಅವಧಿಗೆ ಪೂರಕವಾಗುವಂತಹ ಪರೀಕ್ಷಾ ಪದ್ಧತಿಯನ್ನು ಇಂದು ನಿರ್ಮಿಸಬೇಕಿದೆ. ಬರವಣಿಗೆಯನ್ನೂ ಒಳಗೊಂಡಂತೆ ಒಂದಷ್ಟು ಪ್ರಾಯೋಗಿಕ ಮತ್ತು ಚಟುವಟಿಕೆ ಆಧಾರಿತ ಪರೀಕ್ಷೆಗೆ ಆದ್ಯತೆ ನೀಡಬೇಕಿದೆ. ಅಲ್ಲದೇ ಈ ರೀತಿಯ ಪರೀಕ್ಷೆಗಳು ಒತ್ತಡರಹಿತವಾಗಿಯೂ ಇರುವುದರ ಜೊತೆಗೆ ಮಕ್ಕಳ ಔದ್ಯೋಗಿಕ ಭವಿಷ್ಯಕ್ಕೂ ಸಹಕಾರಿಯಾಗಿರಬೇಕಾಗುತ್ತದೆ.
ಪರ್ಯಾಯವಾಗುವುದೇ ಆನ್ಲೈನ್ ಕ್ಲಾಸ್..?
ಇಡೀ ವಿಶ್ವವೇ ಸ್ತಬ್ಧವಾಗಿದ್ದರೂ, ಶಿಕ್ಷಣದ ಚಟುವಟಿಕೆಗಳು ಮೊಟಕುಗೊಳ್ಳಬಾರದೆಂದು ಬಹುತೇಕ ಶಿಕ್ಷಣ ಸಂಸ್ಥೆಗಳು ಇಂದು ಆನ್ಲೈನ್ ಶಿಕ್ಷಣದತ್ತ ಮುಖ ಮಾಡಿರುವುದು ನಮ್ಮ ಮುಂದಿರುವ ಸತ್ಯ. ಆದರೆ ತೀರಾ ಸಣ್ಣ ವಯೋಮಾನದ ಮಕ್ಕಳನ್ನು ಮಾತ್ರ ಇದರಿಂದ ಹೊರತಾಗಿಸಬೇಕಷ್ಟೆ.
ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ, ನೇರ ಶಿಕ್ಷಣ ಪದ್ಧತಿ ಬೀರುವಷ್ಟು ಪರಿಣಾಮ ಇದರಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಶಿಕ್ಷಣವೆಂದರೆ ಮಗು ಮತ್ತು ಶಿಕ್ಷಕನ ನಡುವಿನ ದ್ವಿ ಕೇಂದ್ರಿತ ವ್ಯವಸ್ಥೆ ಹಾಗೂ ಚಟುವಟಿಕೆ ಆಧಾರಿತವಾಗಿರಬೇಕು. ಆನ್ಲೈನ್ ತರಗತಿಗಳು ಶಿಕ್ಷಣದ ಏಕಮುಖ ಸಂಚಾರವಾಗಿದೆ. ಒಂದಷ್ಟು ಕಾಲಮಿತಿಯೊಳಗೆ ಇಂತಹ ಹೊಸತನಗಳಿಗೆ ನಾವಿಂದು ಬಲವಂತವಾಗಿ ತೊಡಗಿಸಿಕೊಂಡಿದ್ದೇವಷ್ಟೆ.
ಆದರೆ ಎಂದಿಗೂ ಇದು ಶಾಶ್ವತವಾದ ಪರ್ಯಾಯ ವ್ಯವಸ್ಥೆಯಾಗಲಾರದು. ಶಿಕ್ಷಕರೂ ಸಹ ‘ವರ್ಕ್ ಫ್ರಮ್ ಹೋಮ್’ ಮಾಡಿಯಾರು ಎಂಬುದು ತರ್ಕಕ್ಕೆ ನಿಲುಕದ್ದು. ಒಂದು ವೇಳೆ ಸರಕಾರವೇ ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡಿದರೂ, ಅದು ಸಮಗ್ರ ಹಿಂದೂಸ್ಥಾನದ ಮೂಲೆ ಮೂಲೆಗೂ ತಲುಪುವ ವ್ಯವಸ್ಥೆಯನ್ನು ಅಣಿಗೊಳಿಸಬೇಕಿದೆ.
ಭಾರತ ಹಳ್ಳಿಗಳ ದೇಶವಾಗಿರುವುದರಿಂದ ಎಲ್ಲೆಡೆಯೂ ಸಮರ್ಪಕವಾದ ಡಿಜಿಟಲ್ ಸಂಪರ್ಕವನ್ನು ನಿರೀಕ್ಷಿಸುವುದು ಅಸಾಧ್ಯವಾಗಿದೆ. ಹೀಗಾಗಿ ಸರಕಾರಕ್ಕೂ ಇದು ಸವಾಲಾಗಿಯೇ ಪರಿಣಮಿಸುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಡಿಜಿಟಲ್ ಸಾಧನಗಳು ಮಕ್ಕಳ ಆರೋಗ್ಯಕ್ಕೆ ಬಹುತೇಕ ಹಾನಿಕಾರಕ ಎಂಬ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ.
ಇದರಿಂದ ಅವಕಾಶ ವಂಚಿತ ಅನೇಕ ಮಕ್ಕಳಲ್ಲಿ ಕೀಳರಿಮೆ ಉಂಟಾಗಿ ಅವರು ಮಾನಸಿಕವಾಗಿ ಕುಗ್ಗಬಹುದು. ಈಗಾಗಲೇ ಆನ್ಲೈನ್ ತರಗತಿಗೆ ಹಾಜರಾಗದೆ, ಭಯಗೊಂಡು ಆತ್ಮಹತ್ಯೆ ಹಾದಿ ಹಿಡಿಯುತ್ತಿರುವ ಮಕ್ಕಳ ನಡೆ ಗಾಬರಿ ಹುಟ್ಟಿಸುತ್ತಿದೆ.
(ವಿ.ಕೆ.ಕುಮಾರಸ್ವಾಮಿ
ಬರಹಗಾರ ಶಿಕ್ಷಕರು
ವಿರುಪಾಪುರ, ಸುಗ್ಗನಹಳ್ಳಿ ಅಂಚೆ,
ತಿಪ್ಪಸಂದ್ರ ಹೋಬಳಿ, ಮಾಗಡಿ ತಾಲ್ಲೂಕು,
ರಾಮನಗರ ಜಿಲ್ಲೆ – 561101
ಮೊ: 9113906120, 9740840678 (ವಾಟ್ಸಪ್)
ಇ ಮೇಲ್ : kumarvirupapura@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಯೋವೃದ್ಧರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಅಧ್ಯಯನ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ವಯೋವೃದ್ಧರ ಕುರಿತು ಬುಧವಾರ ಸಾಮಾಜಿಕ ಸಮೀಕ್ಷೆ ನಡೆಸಿದರು.
ನಗರದ ತರಳಬಾಳು ಬಡಾವಣೆಯ ಆಯೂಷ್ ಚಾರಿಟೇಬಲ್ ಟ್ರಸ್ಟ್ ನ ಆರೈಕೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದರು. ಸಂದರ್ಶನದ ವೇಳೆ ವೃದ್ಧರ ಸಮಸ್ಯೆಗಳನ್ನು ಆಲಿಸಿದ ಕೆಲ ವಿದ್ಯಾರ್ಥಿಗಳು ಭಾವುಕರಾದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಾಪಕರುಗಳಾದ ಡಾ. ಶಿವಣ್ಣ ಹೆಚ್. ಎಸ್, ಡಾ. ಸುರೇಶ್ ಹೆಚ್. ಎನ್, ಡಾ. ಮಾದನಾಯ್ಕ ಹೆಚ್ ಇವರು ಮಾರ್ಗದರ್ಶನ ನೀಡಿದ್ದು, ಪ್ರಾಂಶುಪಾಲರಾದ ಬಸವರಾಜ್ ಬಿ ತಹಸೀಲ್ದಾರ್ ಮತ್ತು ಆಶ್ರಮದ ಅರ್ಜುನ್, ವಿರೇಶ್ ಅವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಬುನಾದಿ: ಗಂಗಾಧರಸ್ವಾಮಿ ಜಿ.ಎಂ
ಸುದ್ದಿದಿನ,ದಾವಣಗೆರೆ:ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿರುವ ಮಹಾನ್ ಶಕ್ತಿ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ಅಭಿಪ್ರಾಯಪಟ್ಟರು.
ಅವರು ಇಂದು (ಎ.14) ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮಹಾನಗರ ಪಾಲಿಕೆ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಪಾಟಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
3000 ವರ್ಷಗಳ ಇತಿಹಾಸವಿರುವ ನಮ್ಮ ಸಮಾಜದಲ್ಲಿ, ಬ್ರಿಟಿಷರ ಆಳ್ವಿಕೆಯ ನಂತರವೂ ದೇಶದ ಸಮಗ್ರ ಜನತೆಗೆ ಸಮಾನತೆಯನ್ನು ಕಲಿಸಿಕೊಟ್ಟವರು ಬಾಬಾಸಾಹೇಬ್ ಅಂಬೇಡ್ಕರ್. ಮನುಷ್ಯನಿಗೆ ಮೆದುಳು ಮತ್ತು ಆತ್ಮ ಎಷ್ಟು ಮುಖ್ಯವೋ, ದೇಶಕ್ಕೆ ಸಂವಿಧಾನವು ಅಷ್ಟೇ ಮುಖ್ಯ. ವಿಶೇಷವಾಗಿ 32ನೇ ವಿಧಿಯು ಸಂವಿಧಾನದ ಆತ್ಮವಿದ್ದಂತೆ ,ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದಿದ್ದು, ಅವರ ಬೌದ್ಧಿಕ ಸಾಮರ್ಥ್ಯವೇ ಇಂದಿನ ಸಂವಿಧಾನಕ್ಕೆ ಬಲ ತುಂಬಿದೆ ಎಂದು ಅವರು ವಿವರಿಸಿದರು.
ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಕ್ಕಷ್ಟೇ ಶಿಕ್ಷಣ ಪಡೆಯಬಾರದು. ಬದಲಾಗಿ, ಸ್ವತಂತ್ರ ಆಲೋಚನೆ ಮತ್ತು ಸಮಾಜದ ಹಕ್ಕುಗಳನ್ನು ಕಾಪಾಡಿಕೊಳ್ಳುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಅಂಬೇಡ್ಕರ್ ಮತ್ತು ಅಬ್ದುಲ್ ಕಲಾಂ ಅವರಂತಹ ಮಹನೀಯರು ನಮಗೆ ಪ್ರೇರಣೆಯಾಗಬೇಕು. ಬದ್ಧತೆ ಮತ್ತು ಪ್ರಯತ್ನವಿದ್ದರೆ ಯಾರೂ ಏನನ್ನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ನಾವೆಲ್ಲರು ಸಂವಿಧಾನವನ್ನು ಕಡ್ಡಾಯವಾಗಿ ಓದಿ ತಿಳಿದುಕೊಳ್ಳಬೇಕು, ಕನಿಷ್ಠ 12 ರಿಂದ 18 ರವರೆಗಿನ ಪರಿಚ್ಛೇದಗಳನ್ನು ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಹಿಂದೆ ವಚನಕಾರರು ರಚಿಸಿದ ವಚನೆಗಳೆ ಸಂವಿಧಾನದ ಆಶಯಗಳು ಆಗಿವೆ, ವಿದೇಶಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಇಲ್ಲ, ಆದರೆ ಭಾರತದಲ್ಲಿ ಸ್ವಾತಂತ್ರ್ಯ ನಂತರ ಮಹಿಳೆಯರಿಗೆ ಸಮಾನತೆಯನ್ನು ಕಲ್ಪಿಸಲಾಗಿದೆ, ಜಿಲ್ಲೆಯ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ವೈಚಾರಿಕ ಜಾಗೃತಿ ಮೂಡಿಸಲು ಅಂಬೇಡ್ಕರ್, ಬಸವಣ್ಣ ಮತ್ತು ಗಾಂಧೀಜಿಯವರ ತತ್ವಗಳ ಬಗ್ಗೆ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಅವರು “ಶಿಕ್ಷಣವು ಸಮಾಜದ ಪ್ರಗತಿಗೆ ಪ್ರಮುಖ ಅಸ್ತ್ರ”. ಕಡು ಬಡತನ ಮತ್ತು ಸಾಮಾಜಿಕ ಅಸಮಾನತೆಯ ನಡುವೆಯೂ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ಬದಲಾವಣೆ ತಂದರು. ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾದ ಭಾರತದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಶ್ರಮವನ್ನು ನಾವು ಮರೆಯುವಂತಿಲ್ಲ, ಸಂವಿಧಾನವು ಕೇವಲ ಕಾನೂನಿನ ದಾಖಲೆಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಬದುಕಿನ ಸ್ಫೂರ್ತಿ ಎಂದರು.
ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಲು ಬಾಬಾಸಾಹೇಬರು ಪಟ್ಟ ಶ್ರಮ ಹಾಗೂ ಅವರು ಬರೆದ ‘ಜಾತಿ ವಿನಾಶ’ ಕೃತಿಯ ಮಹತ್ವದ ಬಗ್ಗೆ ತಿಳಿಸಿದರು. ಹುಲಿ ಹಾಲಿನ್ನು ಕುಡಿದವನು ಎಷ್ಟು ಬಲಶಾಲಿಯಾಗಿರುತ್ತೇನೋ ಶಿಕ್ಷಣ ಪಡೆದವನು ಅಷ್ಟೇ ಬಲಶಾಲಿಯಾಗುತ್ತಾನೆ. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಒತ್ತು ನೀಡಿ, ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವಂತೆ ಕರೆ ನೀಡಿದರು.
ಚುನಾವಣೆ ನೀತಿ ಸಂಹಿಗೆ ಜಾರಿಯಲ್ಲಿರುವ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು, ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ಬೋದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳ್ಳಿರಥಕ್ಕೆ ಚಾಲನೆ ನೀಡಿದರು. ಬೆಳ್ಳಿ ರಥವು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿವೃತ್ತ ಜಯದೇವ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೇಖರ್ ಹೆಚ್.ಟಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತೆ ಮತ್ತು ಉಪಕಾರ್ಯದರ್ಶಿ ಮಮತ ಗೌಡರ್, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ6 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ6 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ5 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
-
ದಿನದ ಸುದ್ದಿ3 days agoಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
-
ದಿನದ ಸುದ್ದಿ3 days agoನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ3 days agoಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ

