ಲೈಫ್ ಸ್ಟೈಲ್
‘ಕೊರೋನ ವೈರಸ್’ ಬಗ್ಗೆ ನೀವಿಷ್ಟು ತಿಳಿಯಲೇ ಬೇಕು ; ಮಿಸ್ ಮಾಡ್ದೆ ಈ ಲೇಖನ ಓದಿ..!
- ಡಾ. ಸಂತೋಷ್. ಕೆ. ಬಿ.
ಎಲ್ಲರ ಬಾಯಲ್ಲೂ ಕೊರೋನಾದೇ ಸುದ್ದಿ. 2019ರ ವಿದಾಯದಲ್ಲಿ ಚೀನಾ ದೇಶವನ್ನು ಮಾತ್ರವೇ ಕಾಡಿದ ಕೊರೋನ, ಇದೀಗ ಭಾರತವನ್ನೂ ಹಬ್ಬಿದೆ. ಅದರಲ್ಲೂ ನಮ್ಮ ಸುತ್ತಮುತ್ತಲಿನವರಲ್ಲಿಯೇ ಎನಾದರೂ ಕೊರೋನ ಇದ್ದರೆ ಎಂಬ ಭಯ ಎಲ್ಲರಲ್ಲೂ ಮನೆ ಮಾಡಿದೆ. ಕಾರಣ ಅದರ ಅಸಾಮಾನ್ಯ ಸಾಂಕ್ರಾಮಿಕ ಗುಣ.
ಕೊರೋನ ವೈರಸ್ ಡಿಸೀಸ್ 2019, ಕೋವಿಡ್-19, ನೋವೆಲ್ ಕೊರೋನ ವೈರಸ್,
SARS CoV-2 ಎಂದೆಲ್ಲಾ ಕರೆಯಲ್ಪಡುವ ಈ ಸಾಂಕ್ರಾಮಿಕ ಖಾಯಿಲೆ, 2019ರ ಅಂತ್ಯ ಮತ್ತು 2020ರ ಆರಂಭದಲ್ಲಿ ದೇಶ – ವಿದೇಶಗಳಲ್ಲಿ ಹರಡಿಕೊಂಡಿರುವ ಒಂದು ವೈರಸ್ ಸೋಂಕು. ಚೀನಾ ದೇಶದಲ್ಲಿ ಒಂದು ಸಣ್ಣ ಅವಧಿಯಲ್ಲಿ ಸಾಕಷ್ಟು ಜನರಿಗೆ ಹಬ್ಬಿದ ನಂತರ ಚೀನಾ ದೇಶವು ವಿಶ್ವ ಆರೋಗ್ಯ ಸಂಸ್ಥೆಗೆ ನೋಟಿಫಿಕೇಶನ್ ಸಲ್ಲಿಸಿತು.
ನಂತರ, ಅಮೇರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಅದೇ ವೈರಸ್ ಸೋಂಕು ತಗುಲಿದ್ದನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಕೊರೋನ ವೈರಸ್ ಡಿಸೀಸ್ 2019 ನ್ನು ಒಂದು ಪ್ಯಾಂಡೆಮಿಕ್ ಖಾಯಿಲೆ ಅಂದರೆ, ದೇಶದಾದ್ಯಂತ ಅಥವಾ ವಿಶ್ವದಾದ್ಯಂತ ಹರಡಬಹುದಾದ ಸೋಂಕು ಎಂದು ಘೋಷಿಸಿತು. ಇದೊಂದು ಅತ್ಯಂತ ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ಸೋಂಕಾಗಿದೆ.
ವೈರಸ್ ಹರಡಬಹುದಾದ ಜಾಗಗಳು
- ಸಾರ್ವಜನಿಕ ಪ್ರಯಾಣ, ಸಾಮಾಜಿಕ ಕಾರ್ಯಕ್ರಮಗಳು, ಜನಸಂದಣಿಯಿಂದ ಕೂಡಿರುವ ಪ್ರದೇಶಗಳು.
ಯಾರಲ್ಲಿ ಕಂಡುಬರಬಹುದು?
- ಇತ್ತೀಚಿನ ಯಾವುದಾದರೂ ಕೊರೋನ ಹರಡಿರುವ ಪ್ರದೇಶಕ್ಕೆ ಕಳೆದ 14 ದಿನಗಳಲ್ಲಿ ಪ್ರಯಾಣ ಬೆಳೆಸಿದವರು.
- ಕೊರೋನ ಎಂದು ಖಾತ್ರಿಯಾದ ಅಥವಾ ಸಂಶಯಾಸ್ಪದ ಯಾವುದೇ ವ್ಯಕ್ತಿಯ ಜೊತೆ ಕಳೆದ 14 ದಿನಗಳಲ್ಲಿ ಸಂಪರ್ಕ ಹೊಂದಿದವರು.
- ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರು.
ಸೋಂಕಿನ ಲಕ್ಷಣಗಳು
- ಜ್ವರ(83%), ಕೆಮ್ಮು(82%), ಉಸಿರಾಟದ ತೊಂದರೆ (31%), ಗಂಟಲು ಕಡಿತ(5%), ಶೀತ(4%), ಭೇದಿ(2%)
ಇವೆಲ್ಲವೂ ಸಾಮಾನ್ಯವಾಗಿ ಕಂಡುಬರುವ ಗುಣಲಕ್ಷಣಗಳೇ ಆದರೂ ಇವುಗಳೊಂದಿಗೆ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದವರು ಅಥವಾ ಕೊರೋನ ಶಂಕಿತ ವ್ಯಕ್ತಿಯೊಂದಿಗಿನ ಸಂಪರ್ಕ ಇದ್ದಲ್ಲಿ ಕೊರೋನ ಇರುವ ಸಾಧ್ಯತೆಗಳು ಹೆಚ್ಚು ಎಂದು ಪರಿಗಣಿಸಬಹುದು.ಸೋಂಕಿನ ಲಕ್ಷಣಗಳು ಕಂಡುಬರಲು ವೈರಸ್ ದೇಹದೊಳಗೆ ಸೇರಿ ಸುಮಾರು14 ದಿನಗಳವರೆಗೂ ಸಮಯ ಬೇಕಾಗಬಹುದು. - ಅತೀ ಚಿಕ್ಕ ವಯಸ್ಸಿನವರಲ್ಲಿ, ವಯಸ್ಸಾದವರಲ್ಲಿ, ಮೊದಲೇ ಮಧುಮೇಹ ಅಥವಾ ಶ್ವಾಸಕೋಶದ ತೊಂದರೆ ಅಥವಾ ಹೃದಯ ಸಂಬಂಧಿತ ರೋಗ ಉಳ್ಳವರಲ್ಲಿ ಈ ಸೋಂಕು ಅತೀ ತೀವ್ರವಾಗಿ ಕಾಣಿಸಿಕೊಳ್ಳಬಹುದು.
ಸೋಂಕು ನಿರ್ಣಯ
- ರಕ್ತಪರೀಕ್ಷೆ : ಬಿಳಿ ರಕ್ತಕಣಗಳು ಕಡಿಮೆಯಾಗುವುದು, ಮೂತ್ರಪಿಂಡ ಹಾಗೂ ಲಿವರ್ ನ ಕಾರ್ಯಕ್ಷಮತೆ ಕಡಿಮೆಯಿರುವ ಅಂಶಗಳು ಮತ್ತು ರಕ್ತದಲ್ಲಿ ಸೋಂಕಿನ ಮೂಲ ಮತ್ತು ಪ್ರಮಾಣವನ್ನು ತಿಳಿಯಲು ಬೇಕಾದ ಸಿ.ಆರ್.ಪಿ., ಪ್ರೊಕ್ಯಾಲ್ಸಿಟೊನಿನ್, ಎಲ್.ಡಿ.ಎಚ್ ಗಳಂತಹ ಪರೀಕ್ಷೆಗಳು.
- ಎಕ್ಸ್ರೇ: ಸೋಂಕಿನ ಪ್ರಭಾವದಿಂದ ಹಾನಿಗೊಳಗಾದ ಶ್ವಾಸಕೋಶಗಳ ಅಂಗಾಂಶಗಳನ್ನು ಕಾಣಬಹುದು.
- ಶ್ವಾಸಕೋಶಗಳ ಪರಿಸ್ಥಿತಿಯನ್ನು ತಿಳಿಯಲು ಕೆಲವೊಮ್ಮೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಅಂದರೆ ಸಿ.ಟಿ.ಸ್ಕ್ಯಾನ್ ಕೂಡ ಅವಶ್ಯಕವಾಗಬಹುದು.
- ಇದೆಲ್ಲವೂ ಕೇವಲ ಸೋಂಕಿನ ಪ್ರಭಾವದಿಂದ ದೇಹದಲ್ಲಿ ಉಂಟಾಗುವ ವ್ಯತ್ಯಾಸಗಳನ್ನು ತಿಳಿಯುವ ಪರೀಕ್ಷೆಗಳು ಮಾತ್ರ. ಆದರೆ, ಸೋಂಕನ್ನು ನಿರ್ಣಾಯಕ ತಿಳಿದುಕೊಳ್ಳಬೇಕೆಂದರೆ ಕೊರೋನ ವೈರಸ್ನ ಪಿ. ಸಿ. ಆರ್. ಎಂಬ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಕೆಲವೇ ಪ್ರಯೋಗಾಲಯಗಳಲ್ಲಿ ಮಾಡಲಾಗುತ್ತಿದೆ.
ಚಿಕಿತ್ಸೆ
- ಕೊರೋನ ಎಂದು ಶಂಕಿತ ಅಥವಾ ಸೋಂಕಿತನೆಂದು ತಿಳಿದ ಕೂಡಲೇ ಚಿಕಿತ್ಸೆಯ ಮೊಟ್ಟಮೊದಲನೇ ಹೆಜ್ಜೆ ಆ ವ್ಯಕ್ತಿಯನ್ನು ಪ್ರತ್ಯೇಕಿಸುವುದು. ಮತ್ತು ಇದೊಂದು ಸಾಂಕ್ರಾಮಿಕ ಸೋಂಕಾಗಿರುವುದರಿಂದ ವೈದ್ಯರು ನೀಡುವ ಚಿಕಿತ್ಸೆ ಅಥವಾ ಪರೀಕ್ಷೆಗಳಿಗೆ ಸಹಕರಿಸುವುದು.
- ಕೊರೋನ ವೈರಸ್ನ ಪಿ. ಸಿ. ಆರ್. ಪರೀಕ್ಷೆಗಾಗಿ ಮೂಗು, ಗಂಟಲು ಅಥವಾ ಶ್ವಾಸಕೋಶದ ಮಾದರಿಯನ್ನು ಪಿ.ಸಿ.ಆರ್. ವ್ಯವಸ್ಥಿತ ಪ್ರಯೋಗಾಲಯಕ್ಕೆ ಕಳುಹಿಸಬೇಕಾಗುತ್ತದೆ. ಇದರ ಫಲಿತಾಂಶಕ್ಕಾಗಿ ಕೆಲವು ದಿನಗಳವರಗೆ ಕಾಯಬೇಕಾಗಬಹುದು.
- ರೋಗಿಯ ಪರಿಸ್ಥತಿಗೆ ತಕ್ಕ ಹಾಗೆ ಆಮ್ಲಜನಕದ ಜೊತೆಗೆ ಇನ್ನೂ ಉಸಿರಾಟದ ತೊಂದರೆಯನ್ನು ನೀಗಿಸಲು ಉಸಿರಾಟದ ಯಂತ್ರಗಳ ಚಿಕಿತ್ಸೆಯೂ ಬೇಕಾಗಬಹುದು. ಆಗ ರೋಗಿ ಪರಿಸ್ಥಿತಿ ಗಂಭೀರವಾಗಿರುತ್ತದೆ.
- ವೈರಸ್ ಅನ್ನು ಹೋಗಲಾಡಿಸುವ ಪ್ರಯತ್ನದ ಸಲುವಾಗಿ ವಿವಿಧ ಆಂಟಿವೈರಲ್ ಚಿಕಿತ್ಸೆಯೂ ಬೇಕಾಗಬಹುದು. ಆದರೆ ಕೋರೋನ ವೈರಸ್ ಬಾರದಂತೆ ತಡೆಯುವುದಕ್ಕೆ ಅಥವಾ ಚಿಕಿತ್ಸೆಗೆ ಬೇಕಾದ ಅಧಿಕೃತ ಯಾವುದೇ ಆಂಟಿವೈರಲ್ ಧಾತುವನ್ನು ಈವರೆಗೂ ಸಂಶೋಧಿಸಲಾಗಿಲ್ಲ ಮತ್ತು ಸಂಶೋಧನೆ ಇನ್ನೂ ಪ್ರಗತಿಯಲ್ಲಿದೆ.
ಮುಂಜಗ್ರತಾ ಕ್ರಮಗಳು
- ಈ ಮೇಲೆ ತಿಳಿಸಿರುವ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯುವುದು. ಕೆಮ್ಮುವ, ಸೀನುವ, ಅಥವಾ ಮಾತನಾಡುವ ವೇಳೆ ವೈಜ್ಞಾನಿಕವಾಗಿ ಕನಿಷ್ಟ 0.5ರಿಂದ 2 ಮೀಟರ್ನಷ್ಟು ಅಂತರ ಕಾಪಾಡಿಕೊಳ್ಳುವುದು. ಮತ್ತು ಇನ್ನೊಬ್ಬರಿಗೆ ಹರಡದಂತೆ ಕ್ರಮ ವಹಿಸುವುದು. ಮೂಗು, ಬಾಯಿಗಳನ್ನು ಕರ್ಚಿಫ್, ಮಾಸ್ಕ್ ಗಳಿಂದ ಮುಚ್ಚಿಕೊಳ್ಳುವುದು. ಮತ್ತು ಮನೆಯಿಂದ ಹೊರಗೆ ಬಾರದಂತೆ ಮನೆಯೊಳಗೇ ಸ್ವ ಇಚ್ಚೆಯಿಂದ ಪ್ರತ್ಯೇಕ (Home Quarantine)ವಾಗುವುದು.
- ಕೈಗಳನ್ನು ಸರಿಯಾಗಿ ಸಾಬೂನು, ಇನ್ನಿತರ ಅದಕ್ಕೆಂದೇ ತಯಾರಿಸಿರುವ ಸಲ್ಯೂಷನ್ ಗಳಿಂದ ತೊಳೆದುಕೊಳ್ಳುವುದು.
- ಈ ಮಧ್ಯದಲ್ಲಿ ಯಾವುದಾದರೂ ಊರಿಗೆ ಪ್ರಯಾಣ ಬೆಳೆಸಿದ್ದರೆ ಶಂಕಿತ ಅಥವಾ ಸೋಂಕಿತನೆಂದು ತಿಳಿದ ವ್ಯಕ್ತಿಯೊಂದಿಗಿನ ಸಂಪರ್ಕವಿದ್ದರೆ ವೈದ್ಯರಿಗೆ ಅಥವಾ ಆರೋಗ್ಯ ಇಲಾಖೆಯ ಯಾವುದೇ ಅಧಿಕಾರಿಗೆ ಮೊದಲೇ ತಿಳಿಸುವುದು.
- ಮದುವೆಗಳು, ಸಾಮಾಜಿಕ ಕಾರ್ಯಕ್ರಮಗಳು, ದೂರದೂರಿಗೆ ಪ್ರಯಾಣಗಳಿಗೆ ಆದಷ್ಟು ಕಡಿವಾಣ ಹಾಕುವುದು.
(ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಡಾ. ಸಂತೋಷ್ ಅವರ ಈ ಇಮೇಲ್ ಗೆ ಕಳಿಸಿ. santhosh.achar15892@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ23 hours agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ19 hours agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ2 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ2 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್


