ದಿನದ ಸುದ್ದಿ
ಸ್ತ್ರೀಬಂಜೆತನಕ್ಕೆ ಕಾರಣಗಳು ಮತ್ತು ಲಕ್ಷಣಗಳು
ಒಂದು ವರ್ಷಕ್ಕೂ ಹೆಚ್ಚು ಕಾಲ ಆಗಾಗ್ಗೆ ಪ್ರಯತ್ನಿಸಿದರೂ ಗರ್ಭಿಣಿಯಾಗಲು ಸಾಧ್ಯವಾಗದಿರುವುದು ಬಂಜೆತನ ಎಂದು ವ್ಯಾಖ್ಯಾನಿಸಲಾಗಿದೆ. ಪುರುಷ /ಮಹಿಳೆಯರಿಗೆ ಬಂಜೆತದ ಸಮಸ್ಯೆ ಕಾಡಬಹುದು. ಕೆಲವು ಸಂದರ್ಭಗಳಲ್ಲಿ ಬಂಜೆತನವನ್ನು ಸ್ವಯಂ ಕಂಡುಹಿಡಿಯಬಹುದು. ದಂಪತಿಗಳಿಗೆ ಕಾರಣ ತಿಳಿದಿಲ್ಲದಿದ್ದರೆ, ವೈದ್ಯರು ಅನೇಕ ಪರೀಕ್ಷೆಗಳನ್ನು ಮಾಡಿ, ಬಂಜೆತನಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ಸಹಾಯ ಮಾಡ ಬಹುದು.
ಬಂಜೆತನದ ಕಾರಣಗಳು:
ಮಹಿಳೆಯರಲ್ಲಿ ಬಂಜೆತನವು ಹೆಚ್ಚಾಗಿ ಅಂಡೋತ್ಪತ್ತಿ ಅಸ್ವಸ್ಥತೆಗಳಿಂದ ಉಂಟಾಗುತ್ತದೆ:
• ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS)
• ಪ್ರೈಮರಿ ಓವರಿಯನ್ ಇನ್ಸುಫಿಸೈನ್ಸಿ (POI)
• ಹೈಪರ್ಪ್ರೊಲ್ಯಾಕ್ಟಿನೆಮಿಯಾ
ಸ್ತ್ರೀ ಬಂಜೆತನವು ಗರ್ಭಾಶಯದ ಅಥವಾ ಗರ್ಭಕಂಠದ ಅಸಹಜತೆಗಳು, ಫಾಲೋಪಿಯನ್ ಟ್ಯೂಬ್ ಹಾನಿ, ಗರ್ಭಾಶಯದ ಫೈಬ್ರಾಯ್ಡ್ಗಳು, ಎಂಡೊಮೆಟ್ರಿಯೊಸಿಸ್, ತೀವ್ರ ಮಾನಸಿಕ ಯಾತನೆ ಇತ್ಯಾದಿಗಳಿಂದ ಕೂಡ ಉಂಟಾಗಬಹುದು.
ರೋಗಲಕ್ಷಣಗಳು:ಬಂಜೆತನದ ಮುಖ್ಯ ಲಕ್ಷಣವೆಂದರೆ ಗರ್ಭಿಣಿಯಾಗಲು ಅಸಮರ್ಥತೆ. ದೀರ್ಘಾವಧಿಯ ಮುಟ್ಟು (35 ದಿನಗಳು ಅಥವಾ ಹೆಚ್ಚು), ತುಂಬಾ ಕಡಿಮೆ ಅವಧಿಗೆ ಮುಟ್ಟಾ ಗುವುದು (21 ದಿನಗಳಿಗಿಂತ ಕಡಿಮೆ), ಅನಿಯಮಿತ ಮುಟ್ಟು ಅಥವಾ ಮುಟ್ಟಾಗದಿರುವುದು – ಇದಲ್ಲ ನೀವು ಅಂಡೋತ್ಪತ್ತಿ ಮಾಡುತ್ತಿಲ್ಲ ಎಂದು ಅರ್ಥೈಸಬಹುದು.
ಪರೀಕ್ಷೆಗಳು:ಮಹಿಳೆಯರ ಫಲವತ್ತತೆ ಆರೋಗ್ಯಕರ ಮೊಟ್ಟೆಗಳನ್ನು ಬಿಡುಗಡೆ ಮಾಡುವ ಅಂಡಾಶಯವನ್ನು ಅವಲಂಬಿಸಿರುತ್ತದೆ. ಸಂತಾನೋತ್ಪತ್ತಿ ಪ್ರದೇಶವು ಮೊಟ್ಟೆಯನ್ನು ಫಾಲೋಪಿಯನ್ ಟ್ಯೂಬ್ಗಳಿಗೆ ಹಾದುಹೋಗಲು ಅನುಮತಿಸಬೇಕು ಮತ್ತು ಫಲೀಕರಣಕ್ಕಾಗಿ ವೀರ್ಯದೊಂದಿಗೆ ಸೇರಿಕೊಳ್ಳಬೇಕು. ಫಲವತ್ತಾದ ಮೊಟ್ಟೆಯು ಗರ್ಭಾಶಯಕ್ಕೆ ಹೋಗಬೇಕು ಮತ್ತು ಒಳಪದರದಲ್ಲಿ ಸೇರ ಬೇಕು. ಸ್ತ್ರೀ ಬಂಜೆತನದ ಪರೀಕ್ಷೆಗಳು ಈ ಪ್ರಕ್ರಿಯೆಗಳಲ್ಲಿ ಯಾವುದಾದರೂ ದುರ್ಬಲಗೊಂಡಿವೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತವೆ.
ಅಂಡೋತ್ಪತ್ತಿ ಪರೀಕ್ಷೆ: ಹಾರ್ಮೋನ್ ಮಟ್ಟವನ್ನು ಅಳೆಯಲು ರಕ್ತ ಪರೀಕ್ಷೆಯನ್ನು ಮಾಡಲಾಗುತ್ತದೆ. ನೀವು ಅಂಡೋತ್ಪತ್ತಿ ಮಾಡುತ್ತಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
ಹಿಸ್ಟರೊಸಾಲ್ಪಿಂಗೋಗ್ರಫಿ: ಇದು ಗರ್ಭಾಶಯ ಮತ್ತು ಫಾಲೋಪಿಯನ್ ಟ್ಯೂಬ್ಗಳ ಸ್ಥಿತಿಯನ್ನು ಪರೀಕ್ಷಿಸುತ್ತದೆ ಮತ್ತು ಅಡೆತಡೆಗಳು ಅಥವಾ ಇತರೆ ಸಮಸ್ಯೆಗಳನ್ನು ಸಹ ಪರೀಕ್ಷೆ ಮಾಡುತ್ತದೆ. ಎಕ್ಸ್-ರೇ ಕಾಂಟ್ರಾಸ್ಟ್ ಅನ್ನು ಗರ್ಭಾಶಯಕ್ಕೆ ಚುಚ್ಚಲಾಗುತ್ತದೆ, ನಂತರ ಕುಹರವು ಸಾಮಾನ್ಯವಾಗಿದೆಯೇ ಎಂದು ನಿರ್ಧರಿಸಲು ಮತ್ತು ಫಾಲೋಪಿಯನ್ ಟ್ಯೂಬ್ಗಳಿಂದ ದ್ರವವು ಹೊರಬರುತ್ತಿದೆಯೇ ಎಂದು ನೋಡಲು ಎಕ್ಸ್-ರೇ ತೆಗೆದುಕೊಳ್ಳಲಾಗುತ್ತದೆ.
ಓವರಿಯನ್ ರಿಸರ್ವೆ ಟೆಸ್ಟಿಂಗ್: ಈ ಪರೀಕ್ಷೆಯು ಅಂಡೋತ್ಪತ್ತಿಗೆ ಲಭ್ಯವಿರುವ ಮೊಟ್ಟೆಗಳ ಪ್ರಮಾಣವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ಋತುಚಕ್ರದ ಆರಂಭದಲ್ಲಿ ಹಾರ್ಮೋನ್ ಪರೀಕ್ಷೆಯೊಂದಿಗೆ ಪ್ರಾರಂಭವಾಗುತ್ತದೆ.
ಇತರ ಹಾರ್ಮೋನ್ ಪರೀಕ್ಷೆಗಳು: ಇತರ ಹಾರ್ಮೋನ್ ಪರೀಕ್ಷೆಗಳು ಅಂಡೋತ್ಪತ್ತಿ ಹಾರ್ಮೋನುಗಳ ಮಟ್ಟವನ್ನು ಹಾಗೆಯೇ ಪಿಟ್ಯುಟರಿ ಹಾರ್ಮೋನುಗಳನು (ಸಂತಾನೋತ್ಪತ್ತಿ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ) ಪರಿಶೀಲಿಸಲು ಮಾಡಲಾಗುತ್ತದೆ.
ಇಮೇಜಿಂಗ್ ಪರೀಕ್ಷೆಗಳು: ಶ್ರೇಣಿಯ ಅಲ್ಟ್ರಾಸೌಂಡ್ ಗರ್ಭಾಶಯದ ಅಥವಾ ಅಂಡಾಶಯದ ರೋಗವನ್ನು ಹುಡುಕುತ್ತದೆ. ಕೆಲವೊಮ್ಮೆ ಸೋನೊಹಿಸ್ಟರೊಗ್ರಾಮ್ ಅನ್ನು (ಸಲೈನ್ ಇನ್ಫ್ಯೂಷನ್ ಸೋನೋಗ್ರಾಮ್ ಎಂದೂ ಕರೆಯುತ್ತಾರೆ) ಗರ್ಭಾಶಯದ ಒಳಗಿನ ವಿವರಗಳನ್ನು ನೋಡಲು ಬಳಸಲಾಗುತ್ತದೆ, ಏಕೆಂದರೆ ಇದು ಸಾಮಾನ್ಯ ಅಲ್ಟ್ರಾಸೌಂಡ್ ನಲ್ಲಿ ಕಾಣುವುದಿಲ್ಲ.ಪರಿಸ್ಥಿತಿಗೆ ಅನುಗುಣವಾಗಿ, ಅಪರೂಪದ ಪರೀಕ್ಷೆಯು ಸಹ ಒಳಗೊಂಡಿರಬಹುದು.
ಹಿಸ್ಟರೊಸ್ಕೋಪಿ: ರೋಗಲಕ್ಷಣಗಳನ್ನು ಅವಲಂಬಿಸಿ, ವೈದ್ಯರು ಗರ್ಭಾಶಯದ ರೋಗವನ್ನು ಪರೀಕ್ಷಿಸಲು ಹಿಸ್ಟರೊಸ್ಕೋಪಿಗೆ ಹೇಳಬಹುದು. ಕಾರ್ಯವಿಧಾನದ ಸಮಯದಲ್ಲಿ, ಯಾವುದೇ ಸಂಭಾವ್ಯ ಅಸಹಜತೆಗಳನ್ನು ಪರೀಕ್ಷಿಸಲು ವೈದ್ಯರು ಗರ್ಭಕಂಠದ ಮೂಲಕ ತೆಳುವಾದ ಸಾಧನವನ್ನು ಗರ್ಭಾಶಯದೊಳಗೆ ಸೇರಿಸುತ್ತಾರೆ.
ಲ್ಯಾಪರೊಸ್ಕೋಪಿ: ಈ ಶಸ್ತ್ರಚಿಕಿತ್ಸೆಯಲ್ಲಿ ಹೊಕ್ಕುಳದ ಕೆಳಗೆ ಸಣ್ಣ ಛೇದನವನ್ನು ಮಾಡಿ, ತೆಳುವಾದ ಸಾಧನವನ್ನು ಸೇರಿಸಿ, ಫಾಲೋಪಿಯನ್ ಟ್ಯೂಬ್ಗಳು, ಅಂಡಾಶಯಗಳು ಮತ್ತು ಗರ್ಭಾಶಯವನ್ನು ಪರೀಕ್ಷಿಸುತ್ತರೆ. ಲ್ಯಾಪರೊಸ್ಕೋಪಿಯಿಂದ ಎಂಡೊಮೆಟ್ರಿಯೊಸಿಸ್, ಗಾಯ, ತಡೆ ಅಥವಾ ಫಾಲೋಪಿಯನ್ ಟ್ಯೂಬ್ಗಳ ಇತರ ಸಮಸ್ಯೆಗಳನ್ನು ಕಂಡುಹಿಡಿಯಬಹುದು. ಅಲ್ಲದೆ ಅಂಡಾಶಯ ಮತ್ತು ಗರ್ಭಾಶಯದ ಸಮಸ್ಯೆಗಳಿದ್ದರು ಕಂಡುಹಿಡಿಯಬಹುದು.
ಮನೆಮದ್ದುಗಳು
1. ಒಮೆಗಾ-3 ಕೊಬ್ಬಿನಾಮ್ಲಗಳು ಮಹಿಳೆಯರಲ್ಲಿ ಉತ್ತಮ ಅಂಡೋತ್ಪತ್ತಿ ಮತ್ತು ಪುರುಷರಲ್ಲಿ ಉತ್ತಮ ವೀರ್ಯದ ಆರೋಗ್ಯಕ್ಕೆ ಬಹಳ ಅವಶ್ಯಕವಾಗಿದೆ. ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ತಯಾರಿಸಲು ಸಾಧ್ಯವಿಲ್ಲ ಆದ್ದರಿಂದ ಅವುಗಳನ್ನು ಆಹಾರದ ಮೂಲಕ ಪಡೆಯಬೇಕು. ವಾಲ್ ನಟ್, ಅಗಸೆ ಬೀಜಗಳು, ಸಮುದ್ರ ಮೀನು, ಗಸಗಸೆ ಬೀಜಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲ ಸಮೃದ್ಧವಾಗಿದೆ. ಮಗುವಿಗೆ ಜನ್ಮ ನೀಡಲು ಬಯಸುವ ಮಹಿಳೆಯರಿಗೆ ಬಹಳ ಒಳ್ಳೆಯದು.
2. ಬಂಜೆತನದ ಪ್ರಮುಖ ಕಾರಣಗಳಲ್ಲಿ ಒಂದಾದ PCOS ಅನ್ನು ದಾಲ್ಚಿನ್ನಿ ಸೇವನೆಯಿಂದ ಸ್ವಲ್ಪ ಮಟ್ಟಿಗೆ ಸರಿಪಡಿಸಬಹುದು. ಇದು ಋತುಚಕ್ರವನ್ನು ಸುಧಾರಿಸುವ ಮೂಲಕ ಅಂಡಾಶಯದ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ದಾಲ್ಚಿನ್ನಿ ಸ್ತ್ರೀ ಬಂಜೆತನಕ್ಕೆ ಕಾರಣವಾಗುವ – ಅನಿಯಮಿತ ಮುಟ್ಟು, ಗರ್ಭಾಶಯದಲ್ಲಿನ ಫೈಬ್ರಾಯ್ಡ್ಗಳು ಅಥವಾ ಎಂಡೊಮೆಟ್ರಿಯೊಸಿಸ್ ಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಚಹಾವನ್ನು ಸೇವಿಸಿ.
3. ಫೋಲಿಕ್ ಆಮ್ಲ ಸಮೃದ್ಧವಾಗಿರುವ ಆಹಾರವು ಅಂಡೋತ್ಪತ್ತಿಗೆ ಸಹಾಯ ಮಾಡುತ್ತದೆ. ಹಸಿರು ಎಲೆಗಳ ತರಕಾರಿಗಳು, ಸೂರ್ಯಕಾಂತಿ ಬೀಜಗಳು, ತಾಜಾ ಹಣ್ಣುಗಳು, ಬೀನ್ಸ್, ಬ್ರೊಕೊಲಿ ಇತ್ಯಾದಿಗಳಲ್ಲಿ ಫೋಲಿಕ್ ಆಮ್ಲ ಸಮೃದ್ಧವಾಗಿದೆ.
ಉತ್ತಮ ಫಲಿತಾಂಶಕ್ಕಾಗಿ ಈ ಜೀವನಶೈಲಿ ಬದಲಾವಣೆಗಳನ್ನು ಮಾಡಿ:
• ಧ್ಯಾನವು ಒತ್ತಡದಿಂದ ಹೊರಬರಲು ಸಹಾಯ ಮಾಡುತ್ತದೆ.
• ಜಂಕ್ ಮತ್ತು ಕೊಬ್ಬಿನ ಆಹಾರವನ್ನು ಸೇವಿಸಬೇಡಿ.
• ಉತ್ತಮ ಮತ್ತು ಸಾಕಷ್ಟು ನಿದ್ರೆ ಪಡೆಯಲು ಪ್ರಯತ್ನಿಸಿ.
• ನಿಯಮಿತವಾಗಿ ವ್ಯಾಯಾಮ ಮಾಡಿ.
• ಸಂತೋಷವಾಗಿರಿ.
• ನಿಮ್ಮ ಸಂಗಾತಿಯೊಂದಿಗೆ ಯಾವಾಗಲೂ ಒಳ್ಳೆಯ ಸಮಯವನ್ನು ಕಳೆಯಲು ಪ್ರಯತ್ನಿಸಿ.
(ಬರಹ :ಡಾ. ರಮೇಶ್ ಬಿ.
ಆಲ್ಟಿಯಸ್ ಹಾಸ್ಪಿಟಲ್,# 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ
ಪಾಲಿಟೆಕ್ನಿಕ್ ಎದುರು, ಬೆಂಗಳೂರು 560010
080-23151873, Ph 9900031842, 9844291777 – ಈ ಲೇಖನವು ಮಹಿಳೆಯರ ಬಂಜೆತನವನ್ನು ಕೇಂದ್ರೀಕರಿಸಿದೆ.)
ಸುದ್ದಿದಿನ.ಕಾಂ|ವಾಟ್ಸಾಪ್|9980346343

ದಿನದ ಸುದ್ದಿ
ಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ
ಸುದ್ದಿದಿನ,ದಾವಣಗೆರೆ: ದೇಶದ ಪ್ರಮುಖ ಆರೋಗ್ಯ ವಿಮೆ ಸಂಸ್ಥೆಗಳಲ್ಲಿ ಒಂದಾಗಿರುವ ಸ್ಟಾರ್ ಹೆಲ್ತ್ ಅಂಡ್ ಅಲೈಡ್ ಇನ್ಶುರನ್ಸ್ ಕಂಪನಿ ಲಿಮಿಟೆಡ್, ಕರ್ನಾಟಕದಲ್ಲಿ ಮಳೆಗಾಲದಲ್ಲಿ ಜನರನ್ನು ಕಾಡುವ ವಿವಿಧ ಬಗೆಯ ಕಾಯಿಲೆಗಳ ಚಿಕಿತ್ಸಾ ಸೌಲಭ್ಯವನ್ನು ವಿಸ್ತರಿಸಿದೆ.
ಈ ಉಪಕ್ರಮದ ಮೂಲಕ, ಪಾಲಿಸಿದಾರರಿಗೆ ‘ಟಾಕ್ ಟು ಸ್ಟಾರ್’ ಸೇವೆ ಹಾಗೂ ಮನೆ ಬಾಗಿಲಿನ ಆರೋಗ್ಯ ಸೇವೆ ಕಲ್ಪಿಸಿಕೊಡಲಾಗುತ್ತಿದೆ. ಇದರ ನೆರವಿನಿಂದ ಆರಂಭಿಕ ಹಂತದಲ್ಲೇ ಅಗತ್ಯ ವೈದ್ಯಕೀಯ ಸಲಹೆ ಮತ್ತು ಪರೀಕ್ಷೆಗಳ ನೆರವು ಒದಗಿಸಲಾಗುತ್ತಿದೆ. ಜೊತೆಗೆ, ಸಾರ್ವಜನಿಕರು ಸ್ಟಾರ್ ಹೆಲ್ತ್ ಕಸ್ಟಮರ್ ಆ್ಯಪ್ ಮೂಲಕ 24*7 ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಸ್ಟಾರ್ ಹೆಲ್ತ್ ಇನ್ಶುರನ್ಸ್ ಕರ್ನಾಟಕ ವಹಿವಾಟು ವಿಭಾಗದ ಮುಖ್ಯಸ್ಥ ಆದಿತ್ಯ ಓಂಪ್ರಕಾಶ್ ಬಿಯಾನಿ ಹೇಳಿದ್ದಾರೆ.
ಪಾಲಿಸಿದಾರರಿಗೆ ಅನಿಯಮಿತ ಟೆಲಿ ಸಮಾಲೋಚನೆಯಡಿ ಪಾಲಿಸಿ ಅವಧಿಯಲ್ಲಿ ಎಷ್ಟೇ ಬಾರಿ ಬೇಕಾದರೂ ದೂರವಾಣಿ ಅಥವಾ ಆನ್ಲೈನ್ ಮೂಲಕ ವೈದ್ಯರ ಸಲಹೆ ಪಡೆಯಬಹುದು. ಜ್ವರ ಅಥವಾ ಸೋಂಕಿನ ಆರಂಭಿಕ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯಕೀಯ ಸಲಹೆ ಪಡೆಯಲು ಇದು ನೆರವಾಗುತ್ತದೆ. ಸಾರ್ವಜನಿಕರಿಗೆ ಉಚಿತ ವರ್ಚುವಲ್ ವೈದ್ಯರ ಸಮಾಲೋಚನೆಯೂ ಇರುತ್ತದೆ.
ಅಂತೆಯೇ ಪಾಲಿಸಿದಾರರು ‘ಟಾಕ್ ಟು ಸ್ಟಾರ್’ ಸೇವೆಯಡಿ 7200 222 333 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು. ನಗದುರಹಿತ ಮನೆ ಬಾಗಿಲಿನ ಆರೋಗ್ಯ ಸೇವೆಯಡಿ ಅರ್ಹ ಪಾಲಿಸಿದಾರರಿಗೆ ಸ್ಟಾರ್ ಹೆಲ್ತ್ ಕ್ಯಾಷ್ಲೆಸ್- ಸೌಲಭ್ಯದ ಮೂಲಕ ಮನೆ ಬಾಗಿಲಿಗೇ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ವೈದ್ಯರ ಸಲಹೆಯಂತೆ ನಸಿರ್ಂಗ್ ಸೇವೆ, ರಕ್ತ ಪರೀಕ್ಷೆ, ಆರೋಗ್ಯ ಮೇಲ್ವಿಚಾರಣೆ, ಐವಿ ಫ್ಲೂಯಿಡ್ಸ್ ಹಾಗೂ ಚುಚ್ಚುಮದ್ದು ಸೇರಿದಂತೆ ಅಗತ್ಯ ಚಿಕಿತ್ಸೆಗಳನ್ನು ಮನೆಯಲ್ಲೇ ನೀಡಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಶೇ. 56 ರಷ್ಟು ಗಣತಿ ನಮೂನೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಐ.ಆರ್.ಕುರಿತು ಮಾಹಿತಿ ನೀಡಲು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ಬಿಎಲ್ಒಗಳು ಮತಗಟ್ಟೆ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಅರ್ಜಿಗಳನ್ನು ವಿತರಿಸಿ, ಸ್ವೀಕರಿಸುತ್ತಿದ್ದಾರೆ. ಶೇ. 91 ರಷ್ಟು ಜನರಿಗೆ ಫಾರಂ ಭರ್ತಿ ಮಾಡಲು ತಿಳಿಯದ ಕಾರಣ ಬಿಎಲ್ಒಗಳೇ ಸಾರ್ವಜನಿಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕರ ಅನುಕೂಲಕ್ಕಾಗಿ ದಾವಣಗೆರೆ ನಗರದಲ್ಲಿ 45 ಕೇಂದ್ರಗಳು ಸೇರಿದಂತೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಯಾವುದೇ ಅನುಮಾನಗಳಿದ್ದಲ್ಲಿ ಸಾರ್ವಜನಿಕರು ಬಿಎಲ್ಒಗಳನ್ನು ಅಥವಾ ಚುನಾವಣಾ ವೆಬ್ಸೈಟ್ನಲ್ಲಿ ಲಭ್ಯವಿರುವ ನೋಡಲ್ ಅಧಿಕಾರಿಗಳು ಮತ್ತು ಸೂಪರ್ವೈಸರ್ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸಾರ್ವಜನಿಕರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸುತ್ತಿಲ್ಲ. ಆಗಸ್ಟ್ 7 ರ ನಂತರ ಯಾರು ಯಾವ ದಾಖಲೆಗಳನ್ನು ನೀಡಬೇಕು ಎಂಬುದನ್ನು ಸ್ಪಷ್ಟಪಡಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ವಿವಿಧ ತಾಂತ್ರಿಕ ಹಾಗೂ ನೈಜ ಕಾರಣಗಳಿಂದಾಗಿ ಒಟ್ಟು 17,499 ಮತದಾರರ ಗಣತಿ ನಮೂನೆಗಳು ವಾಪಸ್ ಬಂದಿಲ್ಲ. ಇದರಲ್ಲಿ ಪ್ರಮುಖವಾಗಿ 7,487 ಮರಣ ಪ್ರಕರಣಗಳು , 263 ವಿಳಾಸ ಪತ್ತೆಯಾಗದವರು , 6,677 ಶಾಶ್ವತವಾಗಿ ಸ್ಥಳಾಂತರಗೊಂಡವರು , 2,994 ದ್ವಿಪ್ರತಿ ದಾಖಲಾತಿ (Double Entry) ಹಾಗೂ 78 ಇತರೆ ಕಾರಣ ಎಂದು ತಿಳಿಸಿದರು.
1,200 ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಗುರುತಿಸಿ, ಅಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮತದಾರರ ಪರಿಷ್ಕರಣೆಯ ಕಾರ್ಯವಿಧಾನದ ಕುರಿತು ವಿವಿಧ ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆ ಯಲ್ಲಿ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಮತಗಟ್ಟೆಗಳನ್ನು ಸ್ಥಾಪಿಸುವ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಜುಲೈ 29ರ ವರೆಗೆ ಮಾತ್ರ ಕಾಲಾವಕಾಶ ಇರುವುದರಿಂದ ಬಿಎಲ್ಒಗಳು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಅವರೊಂದಿಗೆ ಶಾಂತಿಯುತವಾಗಿ ವರ್ತಿಸಿ, ಸೂಕ್ತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ದ್ವಿಪ್ರತಿ (Double Entry) ಸೇರಿದಂತೆ ಯಾವುದೇ ತಪ್ಪು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ನೀಡಿದಲ್ಲಿ, ಅಂತವರ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ.ಮಹಾಂತೇಶ್ ಚುನಾವಣಾ ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆ ನಡೆಸುವಂತೆ ದೂರು ನೀಡಿ 5 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಯುಕ್ತಾಗೆ ದೂರು ಸಲ್ಲಿಸಿದ್ದಾರೆ.
ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆ.ಆರ್.ಐ.ಡಿ.ಎಲ್) ವಿಭಾಗ-2 ರ ವ್ಯಾಪ್ತಿಗೆ ಒಳಪಡುವ ಮಾಯಕೊಂಡ, ಹೊನ್ನಾಳಿ, ಚನ್ನಗಿರಿ ಉಪ ವಿಭಾಗಗಳು ಹಾಗೂ ವಿಭಾಗ-2ರ ಕಛೇರಿಯ ವ್ಯಾಪ್ತಿಗೆ 2023-24 ರಿಂದ 2025-26ನೇ ಸಾಲಿನ ಅವಧಿಯಲ್ಲಿ ಬಿಡುಗಡೆಯಾಗಿರುವ ಸ್ಥಳೀಯ ಶಾಸಕರ ಅನುದಾನದಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಹಣವನ್ನು ಇಲಾಖೆಯ ವಾಹನಗಳ ಇಂಧನ ವೆಚ್ಚಕ್ಕೆಂದು ನಿಯಮಬಾಹಿರವಾಗಿ ದುರ್ಬಳಕೆ ಮಾಡಿಕೊಂಡಿರುವುದು ಮಾತ್ರವಲ್ಲದೆ, ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆಸದೆ ನಕಲಿ ಕಡತ ಸೃಷ್ಟಿಸಿ ಸ್ಥಳೀಯ ಶಾಸಕರ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ವಿಷಯವು ಅಧಿಕೃತ ಮೂಲಗಳಿಂದ ತಿಳಿದು ಬಂದ ಕಾರಣ ಮಾಹಿತಿಹಕ್ಕು ಅಡಿಯಲ್ಲಿ ಹಲವಾರು ಭಾರಿ ಅರ್ಜಿ ಸಲ್ಲಿಸಿ, ಮಾಹಿತಿ ಕೋರಿದಾಗಲೂ ನಿಯಮಬಾಹಿರವಾಗಿ ಹಿಂಬರಹ ನೀಡುತ್ತ ಬಂದಿರುತ್ತಾರೆ.
ಆದ ಕಾರಣ ದಾವಣಗೆರೆ ಜಿಲ್ಲಾ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ, ವಿಭಾಗ-2ರ ವ್ಯಾಪ್ತಿಗೆ 2023-24 ರಿಂದ 2025-26 ರವರೆಗೆ ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿ ಬಿಡುಗಡೆಯಾದ ಅನುದಾನಗಳ ಖರ್ಚು-ವೆಚ್ಚವನ್ನು ಇಲಾಖಾ ತನಿಖೆಗೆ ಒಳಪಡಿಸಿ, ಕೈಗೊಂಡ ಕ್ರಮದ ವರದಿಯನ್ನು ನೀಡುವಂತೆ ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಐ.ಡಿ.ಎಲ್, ಬೆಂಗಳೂರು ಇವರಿಗೆ ದಿನಾಂಕ: 06-02-2026 ರಂದು ದೂರು ನೀಡಲಾಗಿತ್ತು. ಆದರೆ ದೂರು ನೀಡಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದ ಕಾರಣ ದಿನಾಂಕ: 21-04-2026 ರಂದು ಜ್ಞಾಪನ ನೀಡಲಾಗಿತ್ತು. ಆದರೆ ಜ್ಞಾಪನ ನೀಡಿ 2 ತಿಂಗಳು ಕಳೆದರೂ ಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ಗೌಡ ಎಂ.ಬಿ ಇವರು ಇದುವರೆಗೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ ಕಾರಣ ನಿರ್ಲಕ್ಷö್ಯ ತೋರಿದ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ಗೌಡ ಎಂ.ಬಿ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತ ಕಾಯ್ದೆಯ ಅನುಸಾರ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ಸಲ್ಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


