Connect with us

ಸಿನಿ ಸುದ್ದಿ

ಮಲಯಾಳಿ ಮನಸ್ಸುಗಳಲ್ಲಿ ಪ್ರೀತಿ-ಪ್ರೇಮದ ಕಿಡಿ ಹೊತ್ತಿಸಿದ ‘ಮೊಯ್ದಿನ್’..!

Published

on

  • ಶಫಿಕ್ ಅಬ್ಬಾಸ್

1960-70ರ ದಶಕದಲ್ಲಿ ಕೇರಳದ ಕಲ್ಲಿಕೋಟೆ ಜಿಲ್ಲೆಯ ಮುಕ್ಕಂ ಎಂಬ ಊರಿನಲ್ಲಿ ತುಂಬಾ ಆತ್ಮೀಯವಾಗಿದ್ದ ಎರಡು ಕುಟುಂಬದ ಕುಡಿಗಳು ಧರ್ಮವನ್ನೇ ಮೀರಿ ಪ್ರೀತಿಸಿದ್ದರು. ಸಂಪ್ರದಾಯಸ್ಥ ಹಿಂದೂ ಕುಟುಂಬದ ಕಾಂಚನಮಾಲಾ ಹಾಗೂ ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಬಿ.ಪಿ ಮೊಯ್ದಿನ್ ಪ್ರೀತಿಗೆ ಧರ್ಮ ಅಡ್ಡಿಯಾಗಿದ್ದರಲ್ಲಿ ಅಚ್ಚರಿ ಏನೂ ಇಲ್ಲ. ಅಲ್ಲಾಹ್ ಏಸು ಈಶ್ವರನ ಮೇಲಾಣೆ; ಅದು ಲವ್ ಜಿಹಾದ್ ಅಲ್ಲ, ಶುದ್ಧ ಪ್ರೀತಿ. ಪರಸ್ಪರ ಪ್ರೀತಿಯೇ ಅವರ ಜೀವನ ಆಗಿತ್ತು. ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ಇಬ್ಬರದ್ದು ರೆಬೆಲ್ ಪರ್ಸನಾಲಿಟಿ..

ಪ್ರೀತಿಸುವುದೇ ಅಪರಾಧವಾಗಿದ್ದ ಆ ಕಾಲದಲ್ಲಿ ‘ಹಿಂದೂ-ಮುಸ್ಲಿಂ’ ಪ್ರೀತಿಯನ್ನು ಯಾರಾದರೂ ಒಪ್ಪಿಯಾರೇ? ಕಾಲೇಜು ಕಲೀತಿದ್ದ ಕಾಂಚನಮಾಲಾಗೆ ಗೃಹಬಂಧನದ ಶಿಕ್ಷೆ.. ತನ್ನ ಆಪ್ತ ಮಿತ್ರನ ಮಗಳನ್ನೇ ಪ್ರೀತಿಸಿದ ಕಾರಣಕ್ಕೆ ಮೊಯ್ದಿನ್ ನ ಮುಂಗೋಪಿ ಅಪ್ಪ ತನ್ನ ಕರುಳ ಕುಡಿಯನ್ನೇ ಗುಂಡಿಕ್ಕಿ ಕೊಲ್ಲಲು ಪ್ರಯತ್ನ ಮಾಡಿದ್ದ.

ಮತ್ತೊಮ್ಮೆ 22 ಬಾರಿ ಇರಿದು ಸೀದಾ ಪೊಲೀಸ್ ಠಾಣೆಗೆ ಹೋದ ಮೊಯ್ದಿನ್ ಅಪ್ಪ, ‘ಮಗನನ್ನು ನಾನೇ ಕೊಂದೆ’ ಅಂತ ಶರಣಾಗಿದ್ದ. ಮೊಯ್ದಿನ್ ಪವಾಡದ ರೀತಿ ಬದುಕುಳಿದಿದ್ದ. “ನನಗ್ಯಾರು ಇರಿದಿಲ್ಲ, ನಾನೇ ಬಿದ್ದು ಗಾಯಗೊಂಡೆ” ಎಂದು ಕೋರ್ಟ್ ಕಟಕಟೆಯಲ್ಲಿ ಸುಳ್ಳು ಹೇಳಿ ಶಿಕ್ಷೆಯಿಂದ ಅಪ್ಪನನ್ನು ಪಾರು ಮಾಡಿದ್ದ. ‘ನನ್ನನ್ನು ಕೊಂದರೂ ನಮ್ಮ ಪ್ರೀತಿ ಸಾಯಲ್ಲ’ ಎಂದು ಹಠ ಹಿಡಿದಿದ್ದ ಮೊಯ್ದಿನ್ ಕೊನೆಗೆ ಹುಟ್ಟಿದ ಮನೆಯಿಂದಲೇ ಹೊರದಬ್ಬಲ್ಪಟ್ಟಿದ್ದ.

ಉಲ್ಲಾಟಿಲ್ ಉನ್ನಿ ಮೊಯ್ದಿನ್ ಸಾಹೇಬರ ಮಗ ಮೊಯ್ದಿನ್ ಹಾಗೂ ಕೊಟ್ಟಂಗಲ್ ಅಚ್ಯುತನ್ ಅವರ ಮಗಳು ಕಾಂಚನಮಾಲಾ ಮಧ್ಯೆ ಪ್ರೀತಿಗೆ ಕಿಚ್ಚು ಹಚ್ಚಿದ್ದು ಮುಕ್ಕಂನಲ್ಲಿ ಹರಿಯುವ ಇರುವಂಜಿ ನದಿ. ಈ ನದಿ ದಂಡೆಯಲ್ಲಿ ಪ್ರೇಮ ಹಕ್ಕಿಗಳು ಬರೋಬ್ಬರಿ ಹತ್ತು ವರ್ಷಗಳ ಬಳಿಕ ಮುಖಾಮುಖಿಯಾದಾಗ ಕಣ್ಣುಗಳೇ ಮಾತಾಡಿ ನಿಟ್ಟುಸಿರು ಬಿಟ್ಟಿದ್ದವು.

‘ಇರುವಂಜಿಪುಝ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಹಾಗೆ ನಾವು ಒಂದು ದಿನ ಜೊತೆಯಾಗಿ ಬಾಳೋದು ಸತ್ಯ’ ಎಂದು ಮೊಯ್ದಿನ್ ಮಾತು ಕೊಟ್ಟಿದ್ದ. ಕಾಂಚನಾಳ ಈ ಸುದೀರ್ಘ ಗೃಹ ಬಂಧನದ ಸಮಯದಲ್ಲಿ ಇಬ್ಬರ ಮಧ್ಯೆ ಪತ್ರ ವ್ಯವಹಾರ ಮಾತ್ರ ನಡೀತಿತ್ತು. ಯಾರಿಗೂ ಗೊತ್ತಾಗಬಾರದೆಂಬ ಕಾರಣಕ್ಕೆ ತನ್ನ ಪ್ರೇಮ ಪತ್ರಕ್ಕೆ ಹೊಸ ಲಿಪಿ ಕಂಡುಹಿಡಿದಿದ್ದಳು ಕಾಂಚನ. ಈ ಜಗತ್ತಿನಲ್ಲಿ ಮೊಯ್ದಿನ್ ಮತ್ತು ಕಾಂಚನಾಳಿಗೆ ಮಾತ್ರ ಓದೋಕೆ ಬರೆಯೋಕೆ ಸಾಧ್ಯವಿರುವ ಲಿಪಿ ಅದು.

ಇರುವಂಜಿ ನದಿ ಹರಿದು ಸಮುದ್ರ ಸೇರಲು ಒಂದಷ್ಟು ದಿನಗಳಾಗುತ್ತೆ ಅಂತ ನಂಬಿಕೊಂಡಿದ್ದ ಈ ಜೋಡಿ ಕಾಯುವಿಕೆಯನ್ನೂ ಪ್ರೀತಿಸಿದ್ದರು. ಪ್ರೀತಿಗೆ ಮನೆಯವರು ಒಪ್ಪುತ್ತಿಲ್ಲ ಎಂಬ ಸಿಟ್ಟಲ್ಲಿ ಈಗಿನ ಜಮಾನದವರಂತೆ ಓಡಿಹೋಗಲಿಲ್ಲ. ಎರಡು ದಶಕಗಳ ಕಾಲ ಮನೆಯವರ ಒಪ್ಪಿಗೆಗಾಗಿ ಕಾದು ಕುಳಿತರು.

ಆದರೆ ಹೆತ್ತವರ ಮನಸು ಬದಲಾಗಲಿಲ್ಲ. ‘ಹುಡುಗಿ ಇಸ್ಲಾಮಿಗೆ ಮತಾಂತರವಾದರೆ ಓಕೆ’ ಎಂಬ ಅಂತಿಮ ಆಯ್ಕೆಯ ಸಂದೇಶ ಅಪ್ಪನ ಕಡೆಯಿಂದ ಬಂದಾಗ “ಆಕೆ ಮತಾಂತರವಾದ ಕ್ಷಣವೇ ನನ್ನ ಪ್ರೀತಿ ಅಂತ್ಯಗೊಳ್ಳುತ್ತೆ” ಎಂಬ ಉದಾತ್ತ ಧರ್ಮ ಸಹಿಷ್ಣುತೆಯ ಸಂದೇಶ ಮೊಯ್ದಿನ್ ಕಡೆಯಿಂದ ರವಾನೆಯಾಗಿತ್ತು.

ಅಪ್ಪ ಕಟ್ಟಾ ಕಾಂಗ್ರೆಸ್ಸಿಗನಾದರೂ ಮಗ ಮೊಯ್ದಿನ್ ಪಕ್ಕಾ ಸೋಷಿಯಲಿಸ್ಟ್. ಪ್ರಜಾ ಸೋಷಿಯಲಿಸ್ಟ್ ಪಕ್ಷಕ್ಕೆ ಕಾಂಗ್ರೆಸ್ ಪಕ್ಷದ ಮೂಗು ಮುಟ್ಟೋಕೂ ಸಾಧ್ಯವಿಲ್ಲ ಎಂದು ಅಪ್ಪ‌ ಮೂದಲಿಸಿದಾಗ ಮುಕ್ಕಂನಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಸಂಘಟಿಸಿ ಕಾಂಗ್ರೆಸಿಗರೇ ಮೂಗು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದು ಮೊಯ್ದಿನ್ ಹೆಗ್ಗಳಿಕೆ. ಪಂಚಾಯತ್ ಚುನಾವಣೆಯಲ್ಲಿ ಗೆದ್ದು ಮೊಯ್ದಿನ್ ಜನಪ್ರತಿನಿಧಿಯೂ ಆಗಿದ್ದ.

ಮುಕ್ಕಂ ಮಣ್ಣಿನ ಅಪತ್ಬಾಂದವನಾಗಿದ್ದ ಮೊಯ್ದಿನ್ ಬಹುಮುಖ ಪ್ರತಿಭೆ. ಪತ್ರಕರ್ತ, ಛಾಯಗ್ರಾಹಕ, ಲೇಖಕ, ಪ್ರಕಾಶಕ, ನಿರ್ದೇಶಕ, ನಿರ್ಮಾಪಕ, ಜನನಾಯಕ.. ಉತ್ತಮ ಫುಟ್ಬಾಲ್ ಆಟಗಾರ, ನುರಿತ ಈಜುಗಾರ, ಆಟಗಾರ-ಓಟಗಾರ, ಖಡಕ್ ಹೋರಾಟಗಾರ. ಮುಕ್ಕಂನ ಸಮಸ್ಯೆಗೆ ಪರಿಹಾರ ಬೇಕಾದರೆ ಅಲ್ಲಿ ಮೊಯ್ದಿನ್ ಇರಲೇಬೇಕಿತ್ತು. “ಕೇರಳದ ಹುಡುಗಿಯರು ಪ್ರೀತಿ ಮಾಡಿ ಓಡಿಹೋಗಲು ಕಾರಣಾಗಿರುವ ನಟ”, ಕೇರಳಿಯರ ನೆಚ್ಚಿನ ಸಿನಿಮಾ ಹೀರೋ ಪೃಥ್ವಿರಾಜ್ ಗೂ ಈ ಮೊಯ್ದಿನೇ ರಿಯಲ್ ಹೀರೋ.

60 ದಶಕದ ಪ್ರೀತಿ 80ರ ದಶಕವನ್ನು ದಾಟಿತ್ತು. ದಿನಗಳು ಊರುಳುತ್ತಾನೇ ಇತ್ತು. ಗೃಹಬಂಧನದಲ್ಲಿದ್ದ ಕಾಂಚನ,, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮೊಯ್ದಿನ್.. ಇಬ್ಬರ ವಯಸ್ಸು 40ರ ಗಡಿ ದಾಟಿತ್ತು. ಆದರೆ ಪರಸ್ಪರ ಪ್ರೀತಿ ಚೂರು ಕಡಿಮೆಯಾಗಿರಲಿಲ್ಲ. ದೂರದಲ್ಲೇ ಇದ್ದು ಗಾಢವಾಗಿ ಪ್ರೀತಿಸುತ್ತಲೇ ಇದ್ದರು.

1982ರ ಮಳೆಗಾಲದ ಸಮಯ. ಆ ದಿನ ಮುಕ್ಕಂನಲ್ಲಿ ಮಳೆಯ ಆರ್ಭಟ ಜೋರಿತ್ತು. ಇರುವಂಜಿ ನದಿಯ ನೀರಿನ ಮಟ್ಟ ಕೂಡ ಏರಿತ್ತು. 10 ಜನರ ಕೆಪಾಸಿಟಿ ಇರುವ ದೋಣಿಯಲ್ಲಿ 30 ಮಂದಿ ತೂರಿಕೊಂಡಿದ್ದರು. ಮುಂದಾಗುವ ಅನಾಹುತದ ಸುಳಿವು ಯಾರಿಗೂ ಇರಲಿಲ್ಲ. ನದಿದಂಡೆಯಿಂದ ಹತ್ತಿಪ್ಪತ್ತು ಮೀಟರ್ ದೂರ ಸಾಗುತ್ತಿದ್ದಂತೆ ದೋಣಿ ಮಗುಚಿ ಬಿತ್ತು. ಮುಕ್ಕಂ‌ನ ಆಪತ್ಬಾಂದವ ಮೊಯ್ದಿನ್ ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಮುಳುಗುತ್ತಿದ್ದವರ ರಕ್ಷಣೆಗೆ ಧುಮುಕಿದ್ದ. ಆಳಕ್ಕೆ ಹೋಗಿ ಒಬ್ಬರನ್ನೇ ತಂದು ದಡ ಮುಟ್ಟಿಸುತ್ತಿದ್ದ. “ನನ್ನ ಬಗ್ಗೆ ಚಿಂತೆ ಬಿಡಿ, ಬೇರೆಯವರನ್ನು ನೋಡಿ” ಎಂದು ಹೇಳಿ ಕೊನೆಯದಾಗಿ ಆಳಕ್ಕೆ ಹೋದ ಮೊಯ್ದಿನ್ ಮರಳಿ ಬರಲೇ ಇಲ್ಲ.

ಆಳದಲ್ಲಿದ್ದ ನೀರಿನ ಸುಳಿ ಮೊಯ್ದಿನ್ ನ ಬಲಿ ಪಡೆದಿತ್ತು. ಸಮಾಜಕ್ಕಾಗಿ ತನ್ನ ಜೀವನ ಮುಡುಪಾಗಿಟ್ಟಿದ್ದ ಮೊಯ್ದಿನ್ ಬೇರೆಯವರ ಜೀವ ಉಳಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ್ದ. ಮೂರು ದಿನಗಳ ಬಳಿಕ ಶವ ಮೇಲೆ ಬಂದಾಗಲೂ ಮುಕ್ಕಂನ ಕಣ್ಣೀರು ಕೊನೆಯಾಗಿರಲಿಲ್ಲ. ಮಳೆಯ ರೂಪದಲ್ಲಿ ಕಣ್ಣೀರು ಸುರಿಸುತ್ತ ಆ ವಿಧಿ ಕೂಡ ಪಶ್ಚತಾಪ ಪಟ್ಟಿತ್ತು. ಆ ಕಾಲದಲ್ಲಿ ಮುಕ್ಕಂನ ಮಣ್ಣಿನಲ್ಲಿ ನಿಂತು ಇಂದಿರಾ ಗಾಂಧಿಯ ನೀತಿಗಳ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ಮೊಯ್ದಿನ್ ಗೆ 1983ರಲ್ಲಿ ಇಂದಿರಾ ಗಾಂಧಿಯ ಸರ್ಕಾರವೇ ಮರಣೋತ್ತರ ಜೀವನ್ ರಕ್ಷಾ ಪದಕ ನೀಡಿ ಗೌರವಿಸಿತ್ತು.

ಪ್ರಿಯಕರನ ಸಾವಿನ ಸುದ್ದಿ ಕೇಳಿ ಕುಸಿದು ಹೋಗಿದ್ದ ಕಾಂಚನಾಳಿಗೆ, ಮೊಯ್ದಿನ್ ಮುಖ ನೋಡಬೇಕೆಂಬ ಕೊನೆ ಆಸೆಯೂ ಈಡೇರಲಿಲ್ಲ. ಮೊಯ್ದಿನ್ ಸಮಾಧಿಯಾಗುವುದರ ಜೊತೆಯಲ್ಲೇ ಅಪ್ಪಟ ಪ್ರೀತಿಯೊಂದಕ್ಕೆ ಗೋರಿ ಕಟ್ಟಲಾಯಿತು. ಮೊಯ್ದಿನ್ ಇಲ್ಲದ ಜಗತ್ತಿನಲ್ಲಿ ಬದುಕಬೇಕೆಂಬ ಯಾವ ಆಸೆಯೂ ಕಾಂಚನಾಳಿಗೆ ಇರಲಿಲ್ಲ. ಐದು ಬಾರಿ ಆತ್ಮಹತ್ಯೆಗೆ ಯತ್ನಿಸಿದಾಗಲೂ ಮನೆಯವರು ತಡೆಯಾದರು.

ಆರನೇ ಪ್ರಯತ್ನದಲ್ಲಿ ಆಸ್ಪತ್ರೆ ಸೇರಿ ಕಣ್ಣುಬಿಟ್ಟಾಗ ಕಾಂಚನಾಳ ಮುಂದೆ ಮೊಯ್ದಿನ್ ತಾಯಿ ನಿಂತಿದ್ದರು. ಮೊಯ್ದಿನ್-ಕಾಂಚನ ಮದುವೆಯಾಗದಿದ್ದರೂ ಹಿಂದೂ ಹುಡುಗಿಯನ್ನು ವಿಧವಾ ಸೊಸೆಯಾಗಿ ಸ್ವೀಕರಿಸಿದಳು ಮೊಯ್ದಿನ್ ಉಮ್ಮ. ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿದ ಕಾಂಚನ, ಮೃತ ಪ್ರಿಯಕರನ ಮನೆ ಸೇರಿಕೊಂಡಳು. ಹಿಂದೂವಾಗಿದ್ದುಕೊಂಡೇ ಮುಸ್ಲಿಂ ಮನೆಯಲ್ಲಿ ಹೊಸ ಜೀವನ ಶುರು ಮಾಡಿದಳು.

79 ವರ್ಷ ವಯಸ್ಸಿನ ಕಾಂಚನ ಅಮ್ಮ, ಮೊಯ್ದಿನ್ ಎಂಬ ಅಮರ ಪ್ರೇಮಿಯ ನೆನಪಲ್ಲಿ ಈಗಲೂ ಅದೇ ಮನೆಯಲ್ಲಿದ್ದಾರೆ. ಮುಕ್ಕಂನ ಮಳೆಯಲಿ ನಡೆಯುತ್ತ, ಇರುವಂಜಿ ನದಿ ದಂಡೆಯಲ್ಲಿ ವಿಹರಿಸುತ್ತ, ಖಬರಸ್ಥಾನದಲ್ಲಿ ಮೊಯ್ದಿನ್ ಸಮಾಧಿ ಸಂದರ್ಶನ ಮಾಡುತ್ತ ತಮ್ಮ ಪ್ರೀತಿಯನ್ನು ಜೀವಂತವಾಗಿಟ್ಟಿದ್ದಾರೆ ದೇವರ ನಾಡಿನ ಬ್ಯಾಚುಲರ್ ವಿಧವೆ ಕಾಂಚನಮಾಲಾ.

ಇವತ್ತು ಜುಲೈ 15.. ಸರಿಯಾಗಿ 37 ವರ್ಷಗಳ ಹಿಂದೆ ಇದೇ ದಿನದಂದು ಇರುವಂಜಿ ನದಿ ಮೊಯ್ದಿನ್ ಎಂಬ ಮಹಾತ್ಮನನ್ನು ಬಲಿ ಪಡೆದಿತ್ತು. ಮೊಯ್ದಿನ್ ಈ ಜಗತ್ತಿನಲ್ಲಿ ಇಲ್ಲದಿದ್ದರೂ ಆತನ ಪ್ರೀತಿ ಇವತ್ತಿಗೂ ಅಮರ. ಮೊಯ್ದಿನ್ ಹುಟ್ಟಿ ಬೆಳೆದಿದ್ದ ಮನೆ ಈಗ ಮೊಯ್ದಿನ್ ಸೇವಾ ಮಂದಿರವಾಗಿ ಬದಲಾಗಿದೆ. ತನ್ನ ಮನೆಯನ್ನು ಮೊಯ್ದಿನ್ ತಾಯಿ ‘ವಿಧವಾ ಸೊಸೆಗೆ’ ಕೊಟ್ಟು ನಿರ್ಗಮಿಸಿದ್ದರು. ಹಿರಿಯ ಜೀವ ಕಾಂಚನಮಾಲಾ ಸೇವಾ ಮಂದಿರದ ಮೂಲಕ ಮೊಯ್ದಿನ್ ಅರ್ಧದಲ್ಲಿ ಬಿಟ್ಟುಹೋಗಿದ್ದ ಕನಸುಗಳನ್ನು ಪೂರ್ತಿ ಮಾಡುತ್ತಿದ್ದಾರೆ.

“ಜಲಂ ಕೊಂಡು ಮುರಿವೇಟಲ್” (ನೀರಿನಿಂದ ಆಗಿರುವ ಗಾಯ) ಹೆಸರಿನ ಡಾಕ್ಯುಮೆಂಟರಿ ಮೂಲಕ ಈ ಅಮರ ಪ್ರೇಮ ಕತೆಯನ್ನು 2006ರಲ್ಲಿ ಜಗತ್ತಿಗೆ ತಿಳಿಸಿದ ಕೇರಳದ ಪತ್ರಕರ್ತ ವಿಮಲ್, 2015ರಲ್ಲಿ ಇದೇ ರಿಯಲ್ ಸ್ಟೋರಿಯನ್ನು “ಎನ್ನುಂ ನಿಂಡೆ ಮೊಯ್ದಿನ್“( ಎಂದಿಗೂ ನಿನ್ನ ಮೊಯ್ದಿನ್) ಹೆಸರಿನ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ತಂದಿದ್ದರು. ಪೃಥ್ವಿರಾಜ್ ಮತ್ತು ಪಾರ್ವತಿ ಮೆನನ್ ನಟನೆಯ ಈ ಚಿತ್ರ ಮಾಲಿವುಡ್ ಬಾಕ್ಸ್ ಆಫೀಸಿನಲ್ಲಿ ಅಬ್ಬರ ಮಾಡಿತ್ತು. ಈ ಸಿನಿಮಾದ ‘ಮುಕ್ಕತ್ತೆ ಪೆಣ್ಣೆ’ ಹಾಡು ಪ್ರೇಮಿಗಳ ಪಾಲಿಗೆ ಪವಿತ್ರ ಗೀತೆ..

ಅಮರ ಪ್ರೇಮ ಅಂದರೆ ರೋಮಿಯೋ-ಜೂಲಿಯೆಟ್,, ಲೈಲಾ- ಮಜ್ನು, ಸಲೀಂ-ಅನಾರ್ಕಲಿ ಅಂತ ಜಗತ್ತು ನೆನಪು ಮಾಡಬಹುದು. ಆದ್ರೆ ಕೇರಳಕ್ಕೆ ಮಾತ್ರ ಮೊಯ್ದಿನ್- ಕಾಂಚನ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

Published

on

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ‌ಪ್ರಮುಖ ಸುದ್ದಿಗಳು

1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.

4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.

5. ಕತಾರ್‌ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

Published

on

~ಡಾ. ಪುಷ್ಪಲತ ಸಿ ಭದ್ರಾವತಿ

ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು

ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.

ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.

ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.

ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.

ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

Published

on

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.

ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.

ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್​ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending